ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ ‘ಚೆದುರಿದಚಿತ್ರಗಳು’

ಯಾರೂ ಹಾಡದ ಸಾಲುಗಳ
ಎದೆಗೂಡಿಗೆ ತಗುಲಿದ
ಮಿಂಚುಹುಳ…..ಕವಿತೆ
**
ಎಲ್ಲೋ ದೂರದಿ
ಯಾವುದೋ ಕೊಳದಿ ಯಾರೋ
ಎಸೆದ ಕಲ್ಲು ಬಿಕ್ಕಳಿಸುತಿದೆ
**
ಮೌನವಾಗಿ ಮಲಗಿದ ರಸ್ತೆಯ ಎದೆಯ
ಮೇಲೆ ಎಷ್ಟೊಂದು ಚಕ್ರಗಳ ಗುರುತು;
ಸತ್ತ ಸಾಲುಗಳೆಲ್ಲಾ ಮೈಲಿಗಲ್ಲುಗಳಾಗಿ ನಿಂತು
ಕವಿತೆಯ ಕಾಯುತಿದೆ!
**
ಕಂಡೂ ಕಾಣದಂತೆ ಒಳ ಸರಿಸಿದ
ಬ್ರಾ ಪಟ್ಟಿಯ ಆ ಬೆರಳು
ಮತ್ತೆ ನೆಲ ನೋಡುತಿದೆ ಮೊಗ್ಗಿನ
ಕವಿತೆಗೆ ಬೆಳಕಿಲ್ಲ!
**
ಮಸಣದ ಮೌನಕೂ ನಾಚಿಕೆ
ಹಾಡಿನ ಕೊನೆಯ ಸಾಲು ಮುಗಿಸುವ ತವಕ
ಹೆಜ್ಜೆ ಎಷ್ಟೇ ಹಗುರಿಟ್ಟರೂ ನಗಾರಿ
ಸದ್ದು ಗುಂಡಿಗೆಯಲಿ….ಕವಿತೆಗಾಗಿ!
**
ಹೂ ಅರಳಲು ನೀನೇ ಬೇಕೆಂದೇನಿಲ್ಲ
ನಿನ್ನ ನಿರ್ಗಮನದ ಸಣ್ಣ ಹೊಳಹು
ಕೊಟ್ಟರೂ ಮೊಗ್ಗು
ಗರ್ಭಪಾತದತ್ತ ನೋಟ!


Leave a Reply

Back To Top