ಸುಜಾತಾ ಪಾಟೀಲ ಸಂಖ ಕವಿತೆ-ತುಂಬಿ ಬಂದಿದೆ ವೇಳೆ

ಬುದ್ಧ ಬಸವ ಗಾಂಧಿ ಅಂಬೇಡ್ಕರರ
ಬಯಲ ನೆಲೆಯಲಿ.
ಪ್ರಜೆಗಳಿಂದ ಪ್ರಜೆಗಳಿಗಾಗಿ
ಪ್ರಜಾಪ್ರಭುತ್ವದ ಸಂಭ್ರಮದಲಿ.
ಭುವಿಯ ಭವ್ಯ ಸತ್ಯ ಶಾಂತಿ
ಸಮತೆಯ ನಿಸರ್ಗದತ್ತ ನೆಲೆಯಲಿ.
ಜೀವಿಗಳ ಸಹಜೀವನ ಭರತ ರಾಜಕೀಯ ಸಾಗಿಬರಲಿ.

ಯುಗ ಯುಗಗಳು ಕಳೆದರೂ
ಸತ್ಯ ತತ್ವದ ಸಂವಿಧಾನ ಮತ್ತೆ
ಮತ್ತೆ ಮರಳಿ ಬರುತಿರಲಿ.
ಶರಣರ ಅರಿವಿನ ಹರಿವು
ನಮ್ಮ ಬದುಕಿನ ಬೆಳಕಾಗಿರಲಿ.
ತುಂಬಿ ಬಂದಿದೆ ವೇಳೆ
ಸುಮ್ಮನಿರದೆ ಶೋಷಣೆಯ
ಸಹನೆ ಸಿಡಿದೆಳಲಿ.
ಬ್ರಷ್ಟ ದುಷ್ಟರ ಅನ್ಯಾಯ ಅಕ್ರಮ
ಅಟ್ಟಹಾಸ ಅತ್ಯಾಚಾರ ಕೊನೆಗಾಣಲಿ.

ಪ್ರಕೃತಿಯ ಸಹಜ ಸುಂದರ
ಸಜ್ಜನಿಕೆಯ ಪಥದಲಿ.
ಪ್ರೀತಿ ಪ್ರೇಮ ಮಮತೆ ಸೌಹಾರ್ದತೆ
ನಿತ್ಯ ಬದುಕಿಗೆ ಜೊತೆಯಾಗಲಿ.
ಸಕಲರ ಒಳಿತು ಬಯಸುವ
ಹಸಿರು ತೊರಣ ಹಂದರವಾಗಲಿ.
ತುಂಬಿ ಬಂದಿದೆ ವೇಳೆ
ಅನಾದಿ ಅವಿನಾಶಿಯ ಅರಿವಿರಲಿ.

ಹೊಸ ಚಿಗುರಗಳಲಿ ಹೊಸತನದ
ವೈಚಾರಿಕ ಪ್ರಜ್ಞೆ ಮೂಡಲಿ.
ವಚನ ಸಾಹಿತ್ಯದ ಮೌಲ್ಯ ತತ್ವಗಳು
ಜೀವ ಚೈತನ್ಯದ ಚಿಲುಮೆಯಾಗಿ ಚಿಮ್ಮುತಿರಲಿ.
ನಡೆ ನುಡಿ, ಆಚಾರ ವಿಚಾರ
ಒಂದಾಗಿ ಹಾಲು ಸಕ್ಕರೆಯಾಗಲಿ.
ಶರಣರ ವೈಚಾರಿಕ ವಚನಗಳು
ಮೌಢ್ಯಗಳ ನಂಬುಗೆ ಬುಡಸಮೇತ ತೊಲಗಿಸಲಿ.

ಅರಿವು ಆಚಾರಗಳ ಚಿಂತನ ಮಂಥನ ಬಿತ್ತುತಲಿ
ಮನೆಗಳು ಮಹಾಮನೆಗಳಾಗಲಿ.
ಅರಿವಿನ ಆಳದ ಸಹ್ರದಯಗಳಲ್ಲಿ
ದಿವ್ಯ ತೇಜಸ್ಸು ತುಂಬಿ ಹರಿಯಲಿ.
ಕೂಡಿ ಬಂದಿದೆ ಕಾಲ
ತುಂಬಿ ಬಂದಿದೆ ವೇಳೆ
ಶರಣ ತತ್ವಕ್ಕೆ ಮತ ನೀಡಲಿ.
ಬುದ್ಧ ಬಸವ ಗಾಂಧಿ ಅಂಬೇಡ್ಕರ್
ಹೆಜ್ಜೆ ಗುರುತಿನಲ್ಲಿ
ಸತ್ಯದ ಸಂಭ್ರಮ ನೆಲೆಗೊಳ್ಳಲಿ.


Leave a Reply

Back To Top