ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

ಹೇ ಸರಯು ನಾನು ರಾಮ
ಸರ್ವತನದಲಿ ಮೆರೆದಂತ
ಅಯೋಧ್ಯಾಧಿಪತಿ
ಈಗ ಸೀತೆಯಿಲ್ಲದ ಪತಿ

ಹೆ ಸರಯು ಸೆಳದುಕೊ ನನ್ನನ್ನು
ಒಡಲಾಳದೊಳಗೆ ಆಳಕೆ
ಆಳದಾಳದ ಆಳಕೆ
ಸೃಷ್ಠಿಯ ದೃಶ್ಯವೂ ಕಾಣದಂತೆ

ಪರಿತಪಿಸುತಿಹೆನು ಅವಳಿಲ್ಲದ ಕ್ಷಣಕೆ
ಒಡನಾಡಿಯ ಅಗಲಿಕೆಗೆ
ಕಂಡೂ ಉಳಿಸಿಕೊಳ್ಳದ ಕ್ಷಣಕೆ
ಒಳಒಳಗೆ ನಾ ಕುಸಿಯುತಿಹೆನು

ಅಪಾರ ಪ್ರೀತಿಯ ಮಡದಿಯ
ನಂಬಿಕೆ ಹುಸಿಗೊಳಿಸಿದವನು
ಎಲ್ಲ ಅರಿತ ಸುಗುಣನಾದರೂ
ಅರಿಯದಾದೆ ಏನನ್ನೂ

ನೋಡುತ್ತ ನಿಂತೆ ಮೌನದಲಿ
ಭೂಮಿಯಲಿ ಸೀತೆ ಇಳಿಯುವದನು
ತಪ್ಪಿಸದಂತಾಗಿತ್ತೆ ಮನ ಕಠಿಣ
ಕಳೆದುಕೊಂಡುಬಿಟ್ಟೆ ಅವಳನ್ನ

ಏನಿದೆ ನನಗೆ ಈಗ ಇಲ್ಲಿ
ಅವಳೇ ಇಲ್ಲಾ ಬಳಿಯಲಿ
ಜೀವಕ್ಕೆ ಜೀವವಾದವಳು
ಈಗ ಬರಿ ಉಸಿರಿದೆ ಜೀವವಿಲ್ಲಾ

ಅಪಾರ ನಂಬಿಕೆಯ ಆಗರಕ್ಕೆ
ಧಕ್ಕೆ ಬಂದಿತೆಂದು
ಇಳಿದುಬಿಟ್ಟಳು ಭುವಿಯೊಳಗೆ
ನನ್ನ ಸಣ್ಣವ ಮಾಡುತ

ಪ್ರಜೆಯೊಬ್ಬನ ಮಾತಿಗೆ ಬೆಲೆಕೊಟ್ಟು
ಸಾವಿರಾರು ಪ್ರಜೆಗಳ ಬಿಟ್ಟು
ರಾಜನೀತಿಯ ಅಳುಕಿಗೆ
ಮಡದಿಯನ್ನೆ ಬಲಿ ಕೊಟ್ಟೆ

ಏನಿದೆ ಈಗ ನನಗಿಲ್ಲಿ
ದೈವ ಶಕ್ತಿಯಿಂದ ಗೆಲ್ಲಿಸಿದ್ದರೂ
ಮನುಷತ್ವದಲಿ ಸೋತೆ
ಬರುವಳೇ ಮತ್ತೆ ಸೀತೆ

ಹೇ ಸರಯೂ ಎಲ್ಲ ಇದ್ದರೂ ಇಲ್ಲದವ ನಾ
ಅವಳಿಲ್ಲದೆ ಹೇಗಿರಲಿ ಸೆಳೆದುಕೊ ನನ್ನನ್ನೂ
ನಿನ್ನೊಡಲದಾಳದಾಳದ ಆಳಕೆ
ಸೃಷ್ಠಿಯಿಂದ ದೂರಕೆ ಎಲ್ಲರಿಂದ ದೂರಕೆ


4 thoughts on “ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ

    1. ಅಗ್ನಪರೀಕ್ಷೆಗೊಳಪಟ್ಟ ಸೀತಾಮಾತೆ ಶ್ರೀರಾಮನಿಗೂ ಒಂಟಿತನದ ಭಾವದಲ್ಲಿ ಬೇಯುವಂತೆ ಮಾಡಿರುವದು ಕವನದಲ್ಲಿ ಸ್ಪಷ್ಟವಾಗಿದೆ

  1. Beautiful.

    Throuout the Ramayana Lord Rama is shown as though man who rarely shows out emotions.

    Nice to see Rama’s emotions coming out in the form of a poem

Leave a Reply

Back To Top