ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು

Gate closed by old chain with lock

ಹೌದು ಕಾಯಬೇಕು
ಬೇಲಿ ಚೌಕಟ್ಟುಗಳ
ನಡುವೆ ನೆಟ್ಟ
ಮಾವಿನ ಮರವ
ಕಾಯಿ ಹಣ್ಣಾಗುವ ಹೊತ್ತಿಗೆ
ದಾರಿಹೋಕರ ಪಾಲಾಗದಂತೆ

ಕಾಯಬೇಕು ಪೈರು
ಕಳ್ಳ ಬೇಲಿ ನಡುವೆ
ನಸುಳಿ ಬರದಂತೆ
ಬಿಡಾಡಿ ದನಗಳ
ದನ ಕಾಯುವ ಹುಡುಗರ
ತುಡುಗುತನವನ್ನು

ಕಾಯಬೇಕು
ಕಡಲ ತಡಿಯ
ತಡೆಗೋಡೆಯನ್ನು
ತೆರೆ ಅಪ್ಪಳಿಸಿ
ಕೊಚ್ಚಿಕೊಂಡು ಹೋಗದಿರಲಿ
ಇಲ್ಲದವರ ಗುಡಿಸಲುಗಳನ್ನ

ಕಾಯಬೇಕು
ಗಡಿಗಳ
ನುಸುಳದಿರಲಿ
ವೈರಿ ಪಡೆ
ಗಡಿಯಬುಡದ
ಸುರಂಗದಲ್ಲಿ

ಹೌದು ಕಾಯಬೇಕು
ಕಟ್ಟಿಕೊಂಡವನ ನಡತೆಯನ್ನು
ದಾರಿ ತಪ್ಪದಂತೆ
ಹುಟ್ಟಿದ್ದೊಂದು
ಹಾಳಾಗದಂತೆ
ಕುಲಗೆಡಿಸಿ ಹೋಗದಂತೆ

ಹೌದು ಕಾಯಬೇಕು
ಮನೆಯೊಡೆಯನ ತಿಜೋರಿಯನ್ನು
ತಿಜೋರಿಯಲ್ಲಿ ಬಚ್ಚಿಟ್ಟ
ಮುಖವಾಡವನ್ನು
ಮುಖವಾಡದ ಹಿಂದಿರುವ
ಅರ್ಧ ಸತ್ಯವನ್ನು

Leave a Reply

Back To Top