ಕಸ್ತೂರಿ ಡಿ ಪತ್ತಾರ ಅವರ ಗಜಲ್

ಚೈತ್ರ ಬಂದು ಚೈತನ್ಯ ತುಂಬಿದಹಾಗಾಗಿದೆ ನೀ ಬಂದಮೇಲೆ
ಒಣಗಿದ ಮರ ಹಸಿರಸೀರೆ ಉಟ್ಟಹಾಗಾಗಿದೆ ನೀ ಬಂದಮೇಲೆ.

ಸುಡುಬಿಸಿಲು ನಡುಹಗಲು ತಳಮಳಿಸಿ ಬಾಯಾರಿ ಬೆಂದಿದಿದೆ
ಸೊಗಸುಗಾರ ನೀ ತಂಗಾಳಿಬೀಸಿದಾಗಾಗಿದೆ ನೀ ಬಂದಮೇಲೆ

ನೀ ಕಾಣದೆ ಬೇಸರ ಬೇಗುದಿ ನಿರುತ್ಸಾಹ ತುಂಬಿದ‌ ಈ ಮನಕೆ
ಮುಂಗಾರು ಹನಿಗೆ ಕುಣಿವ ನವಿಲಂತಾಗಿದೆ ನೀ ಬಂದಮೇಲೆ

ಶಿಶಿರದಲಿ ಕೊರಗುತ ಮರುಗುತ ಮೂಕವಾಗಿ ಕರಾಳ ದಿನಕಳೆದೆ
ವಸಂತನ ಲೀಲೆಗೆ ಕೋಗಿಲೆಗೆ ಸ್ವರಬಂದಂತಾಗಿದೆ ನೀ ಬಂದಮೇಲೆ

ಶ್ರಾವಣದಿ ನದನದಿಗಳು ದುಮ್ಮುಕ್ಕುವ ಹಾಗೆ ನಿನ್ನ ಸವಿ ನೆನಪುಗಳು
“ಕಸ್ತೂರಿ”ಬಾವಪಯಣಕೆ ರಾಯಭಾರಿಯಾದಂತಾಗಿದೆ ನೀ ಬಂದಮೇಲೆ


Leave a Reply

Back To Top