ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆಯು ಬರಲಿಲ್ಲ ಸೆಕೆಯಲ್ಲಿ ಬೆಂದು ನೊಂದು
ಇಳೆಯು ಬಿರಿದಾಗ ತಣ್ಣೀರು ಹುಡುಕಿ ಸೋಲು
ಕಳೆಯೆ ಕಾಲವ ಬಹಳಷ್ಟು ಕಷ್ಟ ನಷ್ಟ
ಸುಳಿವ ಗಾಳಿಯು ಬೆಂಕಿಯ ಹಾಗೆ ಸ್ಪಷ್ಟ

ಬಳಲಿ ಬೆಂಡಾಗಿ ತೊಂದರೆ ಬೆಟ್ಟ ದಷ್ಟು
ತೊಳೆಯಲಾಗದು ತನುವಿನ ಕೊಳಕ ಬಿಟ್ಟು
ಹಳಿವುದೇತಕೆ ದೇವರ ನಮ್ಮ ಕರ್ಮ
ಕೊಳಕು ಮನದಲಿ ಮರಗಳ ಕಡಿದ ಮರ್ಮ

ತೊಗಲೇ ಸಾಕೀಗ ಬಟ್ಟೆಯೇ ಬೇಡವಾಗಿ
ರಗಳೆ ನೀಡುವ ರಣರಣ ಬಿಸಿಲು
ಮೊಗದಿ ಧಾರಾಳ ಹರಿಯುವ ಜಲದಧಾರೆ
ಜಗದಗಲದಲ್ಲಿ ನೀರಿನ ಪಸೆಯೇ ನ್ಯೂನ

ಮೇಲೆ ಬಾನಗಲ ಕಾಣದ ಕರಿಯ ಮೋಡ
ನಾಳೆ ಬದುಕುವ ಸಂಗತಿ ತಿಳಿಯದಾಗಿ
ಕಾಲ ಕೆಟ್ಟಿತೋ ಗೊತ್ತಿಲ್ಲ ಕೆಡಲು ನಾವು
ಗೋಲ ಭೂಮಿಯ ರೂಪವೇ ನಿತ್ಯ ಸತ್ಯ

ಮನವ ಸೆಳೆದಾಕೆ ಬಳಿಯಲ್ಲಿ ಇದ್ದರೇಂತೆ
ತನುವು ಬೆಂದಿರೆ ಮತ್ತೆಲ್ಲಿ ಕಾವು ದೂರ
ಹನಿಯ ತೊಟ್ಟಿನ ಮಹಿಮೆಯೋ ಬಹಳವಿರಲು
ತಾನವಿಲ್ಲದೆ ಕಡಿದಿಹ ವೀಣೆ ತಂತಿ

ಕಾದು ಬಸವಳಿಯುತ್ತಿರುವುದೇ ಪರಿಪಾಠ
ಬಾಡಿ ಹೋದ ಬದನೆಕಾಯಿಯಂತಾ ನೋಟ
ಮೋದದಾಶಯ ಬೇಡವೇಯೆನ್ನ ಬೇಡ
ಸೀದು ಹೋದರೂ ಇಂದು ನಾಳೆ ಚಿಗುರದೇನು?


About The Author

Leave a Reply

You cannot copy content of this page

Scroll to Top