ಸುವಿಧಾ ಹಡಿನಬಾಳ ಕವಿತೆ- ಓ ಚೈತ್ರವೇ!

ಓ ಚೈತ್ರವೆ ನಿನ್ನಾಗಮನದ
ಮುನ್ಸೂಚನೆಯೆ ಮಹದಾನಂದ!

ಜೀವ ಸಂಕುಲಗಳಿಗೆ ಸೊಬಗಿನ
ಸುಗ್ಗಿಕಾಲ ಪ್ರಕೃತಿಯಲಿ ರಮ್ಯ
ಪರ್ವಕಾಲ ಮಾಮರಕೂ ಕೋಗಿಲೆಗೂ
ನಂಟು ಬೆಸೆವ ಬೆಸುಗೆ ಕಾಲ

ಬಿರುಬಿಸಿಲಿನ ಸುಡುಬಿಸಿಲಲೂ
ಕುಕಿಲಿಡುವ ಹಕ್ಕಿ ಗಿಳಿವಿಂಡುಗಳ
ಚಿಲಿಪಿಲಿ ಕೂಜನ ಕರ್ಣಾನಂದ ಅರಳಿ ನಿಂತ ತರು ಲತೆ ಸುಮಗಳು

ವಿಶಾಲ ಬುವಿಗೆ ಹೊದಿಕೆಯಂತಿಹ
ಸ್ವಚ್ಛಂದ ಆಕಾಶ ಚದುರಿದ ಚಿತ್ತಾರ
ದಂತೆ ತೇಲುವ ಅರಳೆಯ ಮೋಡ
ಸಾಗರದ ನಡುವೆ ಸಾಗುವ ನಾವೆಗಿಂತ ಚೆಂದ!

ಋತುವು ರಾಜ ವಸಂತನ ಜೊತೆಗೂಡಿ
ಬರುವ ನಿನ್ನ ಸೊಬಗು ಕವಿಗಳಲಿ
ಕವಿತೆ ಹುಟ್ಟುವ ಕವಿ ಸಮಯ
ನಿನ್ನಿಂದಲೇ ಜಗವೆಲ್ಲ ಆನಂದಮಯ

ಬಾಂಧವ್ಯ ವೃದ್ಧಿಸುವ ಓ ಚೈತ್ರವೆ
ನಿನ್ನಿಂದ ಆನಂದ ನಿನ್ನಿಂದ ಸಮೃದ್ಧಿ
ನೀನೆಂದರೆ ಕೊರಡು ಚಿಗುರುವ ಹುರುಪು
ನಿನ್ನಿಂದಲೇ ಶಮನಗೊಳಲಿ ಜಗದ ಸಂಘರ್ಷ…

ಓ ಚೈತ್ರವೆ ನಿನ್ನಾಗಮನದ
ಮುನ್ಸೂಚನೆಯೆ ಮನಕಾನಂದ


2 thoughts on “ಸುವಿಧಾ ಹಡಿನಬಾಳ ಕವಿತೆ- ಓ ಚೈತ್ರವೇ!

Leave a Reply

Back To Top