ಡಾ.ವೈ.ಎಂ.ಯಾಕೊಳ್ಳಿ-ಟಂಕಾ ದಶಕ


ಶಾಲೆಯ‌ಮುಂದೆ
ನಿಂದ ಮಕ್ಕಳ ದಂಡು
ನಕ್ಷತ್ರಗಳು
ಇಳಿದಂತೆ ಧರೆಗೆ
ಬಾನು ಬರಿದಾಗಿದೆ

ಹೆಸರೊಂದನು
ಕೊಡದಿರು ಹೊಳಗೆ
ಹರಿಯುತಿರೆ
ಮನದ ಮಲಿನತೆ
ಕಳೆಯುತಿರೆ ಸದಾ

ಸಂತಸವದು
ಎದೆಯೊಳಿರಬೇಕು
ಬಡತನವ
ಕಾಣಿಸದೆ ಹೊರಗೆ
ತುಂಬಿರಲಿ ಒಳಗೆ

ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು
ಬೆನ್ನು ಹಿಂದೆ ಇರೋದೆ

ಕುಡಿದಮಲು
ಇಳಿಯದ ಹೊರತು
ಅರಿವಾಗದು
ಇಳಿದ ಮೇಲೆ ಎಲ್ಲ
ಹೊರಟು ಹೋಗುವದು

ಸರಕಾರವ
ನಂಬಿದ ರೈತ ಕಾದ
ಪರಿಹಾರಕೆ
ಬಂದಿತು ಸಹಕಾರ
ರೈತ ಹೋದ ಕಾಲಕೆ


ಸಾಲವ ಮಾಡಿ
ಮಗನ ಕಲಿಸಿದ
ಎತ್ತರಕೇರಿದ
ಸುತ ಆಗಸಕೇರಿ
ಅಪ್ಪ ಈಗ ಅನಾಥ


ಸತ್ತವರನು
ಬೇಗ ಮರೆವ ನಾವು
ನೆನೆಯಬೇಕು
ನಮ್ಮ ಪಾಳಿ ಬಂದಾಗ
ಜಗ ಕಾಣೋದೆ ಹಾಗೆ


ಮಾಡಿದ‌ಪಾಪ
ಬೆನ್ನು ಹತ್ತೊ ಬೇತಾಳ
ಬಿಡಲಾರದು
ಸರಳಕೆ ನಮ್ಮನು
ತೆರಬೇಕು ತಗಾದೆ

೧೦
ಅಪ್ಪ ಬೆಳೆದ
ಮರ ನೀಡಿತು ಹಣ್ಣು
ಮಗನಕಾಲ
ಕಡಿದ ಗಿಡವು ತಾ
ಆಯತೀಗದು ಮಣ್ಣು


Leave a Reply

Back To Top