ಲೀಲಾಕುಮಾರಿ ತೊಡಿಕಾನ ಕವಿತೆ-ಜ್ವಾಲೆ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಜ್ವಾಲೆ

ಜಗ ಉರಿಯುತ್ತಿದೆ ಧಗ್ಗನೆ
ಹಿಂಸಾ ಜ್ವಾಲೆಗೆ ಆಹುತಿಯಾಗಿ..
ಅದೋ..ಅಲ್ಲಿ ವಿಲಿವಿಲಿ ಒದ್ದಾಡುತ್ತಿದೆ
ಗಾಂಧಿ ಆತ್ಮ..ಸಮಾಧಿಯೊಳಗೆ!

ಇಗೋ ಇಲ್ಲಿ ಬಿಕ್ಕಳಿಸುವ ಸದ್ದು;
ಹರಿಶ್ಚಂದ್ರನದೇ ಸಮಾಧಿಯದು
ಸುಳ್ಳಿನಿಂದಲೇ ನೇಯ್ದ ಬಲೆಯೊಳಗೆ
ವಿಶ್ವಾಮಿತ್ರ ನಕ್ಷತ್ರಿಕನನ್ನೂ ಸಿಲುಕಿಸುವ
ಚಾತುರ್ಯಕ್ಕೆ ಬೆರಗಾಗಿ!

ಶೋಷಣೆಯ ತುಳಿತಕ್ಕೆ
ಹೂಳು ಒಳಗೆ ಹೂತು ಹೋಗುವವರ
ಒಳಗೆಳೆದುಕೊಂಡು ರಕ್ಷಿಸಲು
ಅಂಬೇಡ್ಕರ್ ಸಮಾಧಿ ಬಿರುಕು ಬಿಟ್ಟಿದೆ!

ರಕ್ಕಸರ ಅಬ್ಬರದ ಅಲೆಗಳ ಸೆಳೆತಕ್ಕೆ
ಕೊಚ್ಚಿ ಹೋಗುತ್ತಿದ್ದಾರೆ
ಬುದ್ಧ ಬಸವ ಅಸ್ತಿತ್ವ ಕಳೆದುಕೊಂಡು!
ಸಂತ ಶರಣರ ಪಾವನ ಹಾದಿ
ಕೆಸರು ತುಂಬಿ ಹೊಲಸಾಗಿದೆ

ಶ್! ಬುವಿಯನು ಅಗೆವ ಮನುಜ
ತುಸುವೇ ಎಚ್ಚರವಹಿಸು
ಹುತಾತ್ಮರ ಸಮಾಧಿ ಅಲುಗಾಡದಂತೆ!
ಅಯ್ಯೋ ಕಾಪಾಡಿ ಕಾಪಾಡಿ
ಮಹಾತ್ಮರ ಆತ್ಮಗಳನ್ನಾದರೂ
ದೇಶ ತೊರೆಯದಂತೆ!


ಲೀಲಾಕುಮಾರಿ ತೊಡಿಕಾನ

ಉಪನ್ಯಾಸಕಿ,ಸುಳ್ಯ

Leave a Reply

Back To Top