ಶಿವಪ್ರಸಾದ್ ಕೊಕ್ಕಡ ಕವಿತೆ-ಎನ್ನ ಮನದನ್ನೆ

ಕಾವ್ಯ ಸಂಗಾತಿ

ಶಿವಪ್ರಸಾದ್ ಕೊಕ್ಕಡ

ಎನ್ನ ಮನದನ್ನೆ

ಮಲ್ಲಿಕಾ ಲತೆಗಳ ಬಳಿಯಿಂದ
ಹಚ್ಚ ಹಸುರಿನ ಸಿರಿಯಿಂದ
ಬಂದಳಾ ಸುಕೋಮಲೆ ಲಲಿತೆ
ನೋಡುತಲೆ ಒಲವಾಗಿ ನನ್ನೇ ನಾ ಮರೆತೆ॥

ಲಂಗದಾವಣಿಯವಳ ಕುಡಿನೋಟಕೆ ಸೊತೆನು
ಮನದ ಮಿಡಿತದ ತವಕ ಹೇಳದಾದೆನು
ಕಣ್ಣಂಚಿನ ಮಿಂಚು ಸನಿಹಕೆ ಬಂದು
ಎನ್ನೆದೆಯ ಸ್ಪರ್ಶಿಸಿತು ಪ್ರೀತಿಸು ಎಂದು॥

ಎನ್ನ ಅರಸಿ ಆಗುವೆಯಾ ಓ ಹೊನ್ನರಸಿ
ಬಾಳೋಣ ಜೊತೆ ಜೊತೆಯಲಿ ಭಾವಬೆರೆಸಿ
ಸಾಂಪ್ರದಾಯಿಕ ಉಡುಗೆ ಸಮನಾಯ್ತು ಇಬ್ಬರಿಗೆ
ಸಾಕ್ಷಿಯಾಗಿದೆ ನಮ್ಮಿಬ್ಬರ ಮನಸ್ಥಿತಿಗೆ ॥

ಕೇಸರಿ ಬಿಳಿ ಹಸಿರು ನೀಲಿ ಬಣ್ಣಗಳು
ಸತ್ಯ ಶಾಂತಿ ತ್ಯಾಗ ಶೌರ್ಯದ ಸಂಕೇತಗಳು
ನಮ್ಮ ಜೀವನದಿ ಇರಲಿ ಈ ಮೌಲ್ಯಗಳು
ನಿನ್ನ ನೆನೆಯುತಿದೆ ನನ್ನೆದೆ ಬಡಿತದ ಪ್ರತೀ ಶಬ್ದಗಳು॥


Leave a Reply

Back To Top