ಅಕ್ಕಮಹಾದೇವಿ ಜಯಂತಿ ವಿಶೇಷ

ಸುಧಾ ಪಾಟೀಲ್

ಶರಣರ ದೃಷ್ಟಿಯಲ್ಲಿ ಅಕ್ಕಮಹಾದೇವಿ

ಅಕ್ಕಮಹಾದೇವಿ ಸಮರ್ಪಣ ಭಾವದ ಸಂಪತ್ತು ; ಸನ್ಯಾಸ ಯೋಗದ ಸತ್ವ ; ಅನುಭಾವದ ಅಭಿವ್ಯಕ್ತಿ ; ಮರ್ತ್ಯಕ್ಕೆ ಬಂದು ಕಾಲ – ಕರ್ಮ – ಮಾಯೆಗಳನ್ನು ಗೆದ್ದು ಹೊಸ ವಿಕ್ರಮ ಸ್ಥಾಪಿಸಿದ ವೀರ ವಿರಾಗಿಣಿ.

ಹನ್ನೆರಡನೆಯ ಶತಮಾನದ ಈ ಕವಿಕೋಗಿಲೆ ಯುಗ ಯುಗಾ0ತರಗಳ ಅನುಭವ ಸಂಪತ್ತಿನ ಧರ್ಮದರ್ಶಿ. ಅಂತಹ ಪುಣ್ಯ ಮೂರ್ತಿಯ ಜೀವನ ಪರಿಚಯ ನಮ್ಮ ಬದುಕಿಗೆ ಒಂದು ಸ್ಫೂರ್ತಿ !

ಕನ್ನಡದ ಮಹಾಕವಿ ಚಾಮರಸ….

ಗೋಮುಖ ವ್ಯಾಘ್ರ0ಗಳ0ದದಲಿ
ಕಾಮ ಮೊದಲಾದ ಖಳ ವಿಷಯ
ಸ್ತೋಮವನ್ನು ಮುರಿದಿಕ್ಕಿ ಮುಂಬರಿದಂತರಂಗದಲಿ |
ಆ ಮಹಾಶಿವಲಿಂಗ ಶಿವೈಕ್ಯ ಪದವನ್ನು
ನೇಮಿಸಿದ ಮಹಾದೇವಿಯಕ್ಕಗೆ ಶರಣು ಶರಣಾರ್ಥಿ ||
ಎಂದಿದ್ದಾನೆ.

ಕನ್ನಡದ ಸಾಹಿತ್ಯಕ್ಕೆ ಅಮೂಲ್ಯ ನುಡಿಗಟ್ಟುಗಳನ್ನು ನೀಡಿರುವ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನದ ಲಿಂಗೈಕ್ಯ ಸ್ವಾಮೀಜಿಯವರಾದ ಡಾ || ಜ. ಚ . ನಿ ಅವರು ಅಕ್ಕಮಹಾದೇವಿಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ
ಶಿವಯೋಗ ಮಂದಿರದಲ್ಲಿದ್ದಾಗ ಚಂದ್ರಶೇಖರ ದೇವರಾಗಿ ಅಕ್ಕನ ಕುರಿತು ಕಿರುಕೃತಿಯನ್ನು ಬರೆದಿದ್ದ ಜ . ಚ. ನಿ ಯವರು ಉದ್ದಕ್ಕೂ ಅಕ್ಕನ ಕುರಿತು ಹಲವು ಅಮೂಲ್ಯ ಲೇಖನಗಳನ್ನು , ಪುಸ್ತಕಗಳನ್ನು ಬರೆದಿದ್ದಾರೆ. ಅವರ ಲೇಖನಿಯ ಒಂದು ಹನಿ ಇಲ್ಲಿದೆ.

ಮಹಾದೇವಿ ಮರ್ತ್ಯರ ಜೊತೆಗಿದ್ದು ಅಮರ್ತ್ಯಳಾದವಳು. ಅವಳು ಈ ಲೋಕದ ಆಟದಲ್ಲಿ ತೊಡಗಲಿಲ್ಲ. ಈ ನೋಟ ಅವಳಿಗೆ ಹಿಡಿಸಲಿಲ್ಲ. ಈ ಊಟಕ್ಕೆ ಅವಳ ನಾಲಿಗೆ ಎಳಸಲಿಲ್ಲ. ಅವಳು ಲೋಹದ ಮುಸುಕನ್ನು ತೆರೆಯಬಂದವಳು. ಮಹಿಳಾ ಲೋಕದ ಉದ್ದಾರಕ್ಕಾಗಿ ಉದಯಿಸಿದವಳು. ಪ್ರಭು ದರ್ಶನಕ್ಕಾಗಿ, ಪ್ರಭುವಿನ ಅನುಗ್ರಹಕ್ಕಾಗಿ ಆಗಮಿಸಿದವಳು. ಆ ಮಹಾಪ್ರಭುವಿನ ಮಹಾಪ್ರಕಾಶ ಪ್ರಭಾತದಲ್ಲಿ ಜಾಗೃತಳಾಗಿ ಜೀವಿಸಬಂದವಳು.

ಮಾದೇವಿಗೆ ಈ ಲೋಕ ಹೊಸದಲ್ಲ. ಈ ಲೋಕದ ಆಗುಹೋಗುಗಳು , ಸುಖ -ಸೌಲಭ್ಯಗಳು ಹೆಚ್ಚಿನವಲ್ಲ. ಆಕೆ ದೇಶದ ಕಾಲಾತೀತವಾದ ಚಿತ್ಕಳಾ ದೀಪ್ತಿ ; ಚಿರಂತನ ಶಕ್ತಿ. ಈ ಲೌಕಿಕಾ ನುಭವಕ್ಕೆ ಒಂದು ಹೊಸ ಮೆರುಗನ್ನು, ದಿವ್ಯರೂಪವನ್ನು ಕೊಡುವ ಶಕ್ತಿ ಅವಳಲ್ಲಿತ್ತು.

ಅಕ್ಕ ಈ ಲೋಕಕ್ಕೆ ಒಂದು ಹೊಚ್ಚ ಹೊಸ ಬೆಳಕನ್ನು ತಂದಳು, ತಂದು ತುಂಬಿದಳು. ತುದಿ ಮೊದಲಿಲ್ಲದೆ ತೊಳಗಿದಳು . ಕನ್ನಡ ನಾಡನ್ನು ಕೈಲಾಸವಾಗಿರಿಸಲು ಅವತರಿಸಿದಳು. ಅವಳು ಸತ್ಯಕ್ಕೂ ಸಚ್ಚಿತ್ಕಳಾ ಸ್ವರೂಪಿಣಿ ; ಭವ್ಯ ಭಾಮಿನಿ.

ಹೀಗೆ ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಶರಣರೂ ಸಹ ತಮ್ಮ ವಚನಗಳ ಮೂಲಕ ಅಕ್ಕಮಹಾದೇವಿಯನ್ನು ಹಾಡಿ ಹೊಗಳಿದ್ದಾರೆ.

ಅಲ್ಲಮಪ್ರಭುಗಳು ಕಂಡ ಮಹಾದೇವಿಯಕ್ಕ

ಅಂಗೈಯ ಲಿಂಗದಲ್ಲಿ ಕಂಗಳ ನೋಟವೆ
ಸ್ವಯವಾದ ಇರವ ನೋಡಾ
ತನ್ನ ಸ್ವಾನುಭವದ ಉದಯದಿಂದ
ತನ್ನ ತಾನರಿದ ನಿಜಶಕ್ತಿ ನೋಡಾ!
ಭಿನ್ನವಿಲ್ಲದರಿವು ಮನ್ನಣೆಯ ಮಮಕಾರವ
ಮೀರಿದ ಭಾವ ತನ್ನಿಂದ ತಾನಾದಳು!
ನಮ್ಮ ಗುಹೇಶ್ವರ ಲಿಂಗದಲ್ಲಿ

ಮಹಾದೇವಿಯಕ್ಕನ ನಿಲುವಿಂಗೆ
ನಮೋ ನಮೋ ಎನುತಿರ್ದೆನು

ತನುಗುಣ ನಾಸ್ತಿಯಾಗಿ ಲಿಂಗಸಂಗಿಯಾದಳು
ಮನಗುಣ ನಾಸ್ತಿಯಾಗಿ ಅರಿವು ಸಂಗಿಯಾದಳು
ಭಾವಗುಣ ನಾಸ್ತಿಯಾಗಿ ಮಹಾಪ್ರಭೆ ತಾನಾದಳು
ತಾನಿದಿರೆಂಬೆರಡವಳಿದು
ನಮ್ಮ ಗುಹೇಶ್ವರ ಲಿಂಗದಲ್ಲಿ
ಸ್ವಯಂ ಲಿಂಗವಾದ ಮಹಾದೇವಿಯಕ್ಕನ

ನಿಲವಿಂಗೆ ಶರಣೆನುರ್ತಿದೆನು

ಆದಿಶಕ್ತಿ ಅನಾದಿಶಕ್ತಿ ಎಂಬರು
ಆದಿಶಕ್ತಿ ಎಂದರೆ ಕುರುಹಿಂಗೆ ಬಂದಿತ್ತು
ಅನಾದಿ ಶಕ್ತಿ ಎಂದರೆ ನಾಮಕ್ಕೆ ಬಂದಿತ್ತು
ಆದಿಯಲ್ಲ , ಅನಾದಿಯಲ್ಲ
ನಾಮವಿಲ್ಲದ ಸೀಮೆಯಿಲ್ಲದೆ
ನಿಜಭಕ್ತಿಯೇ ನಿಜಶಕ್ತಿಯಾಗಿತ್ತು ನೋಡಾ
ಅಂತರಂಗದ ಪ್ರಭೆ ಬಹಿರಂಗವೆಲ್ಲ ತಾನೆಯಾಗಿ
ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ
ಮಹಾದೇವಿಯಕ್ಕನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು.

ಬಸವಣ್ಣನ ನೋಟದಲ್ಲಿ ಮಹಾದೇವಿಯಕ್ಕ

ಕಾಯದ ಲಜ್ಜೆಯ ಕಲ್ಪಿತವ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನನೆಹ ಸುಟ್ಟು
ಭಾವದ ಕೂಟ ಬತ್ತಲೆಯೆ0ದರಿದು
ತವಕ ಸ್ನೇಹ ವ್ಯವಹಾರಕ್ಕೆ ಹೋಗದು
ಕೂಡಲ ಸಂಗಮ ದೇವಯ್ಯ
ಎನ್ನ ಹೆತ್ತ ತಾಯಿ ಮಹಾದೇವಿಯಕ್ಕನ
ನಿಲವ ನೋಡಾ ಪ್ರಭುವೇ

ರೂಪಿಲ್ಲದವಂಗೆ ಒಲಿದವರಿಂಗೆ
ತನುವಿನ ಹಂಗುಂಟೆ !
ಮನವಿಲ್ಲದವಂಗೆ ಮೆಚ್ಚಿದವರಿಂಗೆ
ಅಭಿಮಾನದ ಹಂಗುಂಟೆ !
ದಿಗಂಬರ0ಗೆ ಒಲಿದವರಿಂಗೆ
ಕೌಪಿನದ ಹಂಗುಂಟೆ !
ಕೂಡಲ ಸಂಗಮ ದೇವಯ್ಯ
ಮಹಾದೇವಿಯಕ್ಕನೆಂಬ ಭಕ್ತಗೆ
ಯಾವ ಹೊರೆಯೂ ಇಲ್ಲ.

ಚೆನ್ನಬಸವಣ್ಣ ಕಂಡ ಮಹಾದೇವಿಯಕ್ಕ

ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ!
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ !
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಐದು ವಚನ !
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಕಾಣಾ!

ಅಜಕಲ್ಪ ಕೋಟಿ ವರ್ಷದವರೆಲ್ಲರೂ ಹಿರಿಯರೆ ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ ?
ನಡು ಮುರಿದು ಗುಡುಗೂರಿ ತಲೆ ನಡುಗಿದವರೆಲ್ಲ ಹಿರಿಯರೆ ?
ನರೆತರೆ ಹೆಚ್ಚಿ ಮತಿಗೆಟ್ಟು
ಒಂದನಾಡನೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲ ಹಿರಿಯರೆ ?

ಅನುವನರಿದು ಘನವ ಬೆರೆಸಿ ಹಿರಿದು ಕಿರಿದೆ0ಬ
ಬೇಧವ ಮರೆದು, ಕೂಡಲ ಚೆನ್ನಸಂಗಯ್ಯನಲ್ಲಿ
ಬರೆಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕ0ಗಾಯಿತ್ತು
ಕೇಳಾ ಪ್ರಭುವೇ !

ಮಡಿವಾಳ ಮಾಚಿದೇವರು ಕಂಡ ಮಹಾದೇವಿಯಕ್ಕ

ಕಾಮಿಯಾಗಿ ನಿ:ಕಾಮಿಯಾದಳು
ಸೀಮೆಯಲ್ಲಿರ್ದು ನಿ:ಸ್ಸೀಮೆಯಾದಳು
ಭವಿಯ ಸಂಗವ ತೊರೆದು
ಭವಬಾಧೆಯ ಹರಿದಳು
ಬಸವಣ್ಣ ಗತಿಯೆಂದು ಬರಲು
ನಾನು ಮಡಿಯ ಹಾಸಿ ನಡೆಸಿದೆನು
ನಡೆವುದಕ್ಕೆ ಹಾಸಿದ ಮಡಿಯ
ಸರ್ವಾ0ಗಕ್ಕೆ ಹೊದ್ದಳು
ಆ ಮಡಿಯ ಬೆಳಗಿನ ಬೆಳಗಿನೊಳಗೆ
ನಿರ್ವಯಲಾದಳು!
ಕಲಿದೇವ , ಮಹಾದೇವಿಯಕ್ಕನ ನಿಲವ
ಬಸವಣ್ಣನ ಕೃಪೆಯಿಂದ ಅರಿದೆನಯ್ಯ ಪ್ರಭುವೆ.

ಕಂಗಳ ನೋಟ ಕರಸ್ಥಲದಲ್ಲಿ
ಪ್ರಾಣನ ಕೂಟ ಅಂತರಂಗದ ಅರಿವಿನಲ್ಲಿ
ಅಂಗವಿಕಾರ ನಿರ್ವಿಕಾರವಾಯಿತ್ತು
ಕರಣರ ಸಂಗಸುಖ ನಿಸ್ಸಂಗವಾಯಿತ್ತು
ಹೆಂಗೂಸೆ0ಬ ಭಾವ

ಬಯಲ ಬೆರೆಸಿತ್ತು
ಕಲಿದೇವರ ದೇವ ನಿಮ್ಮನೊಲಿಸಿ
ಒಚ್ಚತವಾದ ಮಹಾದೇವಿಯಕ್ಕನ ಪಾದವ ನೆನೆದು
ನಾನು ಬದುಕಿದೆನು

ಸಿದ್ಧರಾಮಯ್ಯ ಕಂಡ ಮಹಾದೇವಿಯಕ್ಕ

ಅಹುದಹುದು ಮತ್ತೇನು ?
ಮರಹಿಂಗೆ ಹಿರಿದು ಕಿರುದುಂಟಲ್ಲದೆ
ಅರಿವಿ0ಗೆ ಹಿರಿದು ಕಿರಿದುಂಟೆ ಹೇಳಯ್ಯ ?
ಸಾವುಳ್ಳವಂಗೆ ಭಯ ಉಂಟಲ್ಲದೆ
ಅಜಾತ0ಗೆ ಭಯ ಉಂಟೆ ಹೇಳಯ್ಯ ?
ಕಪಿಲಸಿದ್ಧಮಲ್ಲಿನಾಥನಲ್ಲಿ
ಮಹಾದೇವಿಯಕ್ಕನ ನಿಲುವಿ0ಗೆ
ಶರಣೆ0ದು ಶುದ್ಧನಾದೆನು ಕಾಣಾ.

ಕಡೆಯಲ್ಲಿ ಡಾ || ಜ. ಚ. ನಿ ಅವರ ಮಾತಿನಲ್ಲೇ ಹೇಳುವುದಾದರೆ ” ಅಕ್ಕನದು ಲಿಂಗ ನಿರ್ಯಾಣ,
ನಿಜದ ನಿರ್ವಾಣ , ದಿವ್ಯ ಮೌನ ನಿರ್ವಾಣ , ಅವಿರಳ ಪರಮಾನುಭಾವ ಸಮರಸ ನಿರ್ಯಾಣ ! “


ಸುಧಾ ಪಾಟೀಲ್

One thought on “

  1. ಲೇಖನ ಬಹಳ ಚೆನ್ನಾಗಿ ಬಂದಿದೆ ಅಭಿನಂದನೆಗಳು

Leave a Reply

Back To Top