ಡಾ. ನಾಗರತ್ನ ಅಶೋಕ ಭಾವಿಕಟ್ಟೆ ಕವಿತೆ-ಲತಾಲಾಪ

ಕಾವ್ಯ ಸಂಗಾತಿ

ಲತಾಲಾಪ

ಡಾ. ನಾಗರತ್ನ ಅಶೋಕ ಭಾವಿಕಟ್ಟೆ

ನಳನಳಿಸುವ ಲತೆಯಾದೆ
ಶ್ರೀಗಂಧದ ಮರಕೆ
ತಬ್ಬುತಲಿ ಹಬ್ಬಿರುವೆ
ಚಂದನದ ಗಿಡಕೆ

ಹಸಿರೆಲೆಗಳ ತಂಪಿಯುವೆ
ಘವಘವಸುವ ನಿನಗೆ
ಆಸ್ವಾದಿಸುವೆ ಪರಿಮಳವ
ಸದ್ದಿಲ್ಲದ ಸನಿಹಕೆ

ಬಿರುಗಾಳಿಗೆ ಜಾರುತಿಹೆ
ಆಸರೆಯು ನೀನಾದೆ
ನಿನ್ನ ಸುತ್ತಲೂ ಸುತ್ತಿರುವೆ
ಜೀವಸೆಲೆ ನೀ ನನಗೆ

ಬಿಗಿಯಾಗಿ ತಬ್ಬಿರುವೆ
ನೀ ಸಹಿಸುತಲೇ ಇರುವೆ
ಉಸಿರು ಗಟ್ಟಿದರು ಸಹಿಸಿ
ಭರವಸೆಯ ಕೊಡುತಿರುವೆ

ನೆಲಕಚ್ಚುವ ಮೃದು ಬಳ್ಳಿಗೆ
ಆಗಸವಾ ತೋರಿಸುವೆ
ಮುದುಡುತಲಿ ಬೀಳುವದ ತಡೆದು
ಎದೆ ಸೆಟೆಸಿ ನಿಲ್ಲಿಸಿರುವೆ

ಪ್ರತಿ ಚಿಗುರಿಗು ಕೈ ಚಾಚುತ
ಮೇಲೆಳೆಯುತಲಿರುವೆ
ಹೂ ಜೊತೆಗಿನ ನಾರಾಗಿಸಿ
ಸಾರ್ಥಕಗೊಳಿಸಿರುವೆ


Leave a Reply

Back To Top