ನರಸಿಂಗರಾವ ಹೇಮನೂರ-ಮೊಂಡ ಧೈರ್ಯವ ತೋರಿರಿ

ಕಾವ್ಯ ಸಂಗಾತಿ

ಮೊಂಡ ಧೈರ್ಯವ ತೋರಿರಿ

ನರಸಿಂಗರಾವ ಹೇಮನೂರ

ಏಳಿರೇಳಿರಿ ಎದ್ದು ನಿಲ್ಲಿರಿ
ಮೊಂಡ ಧೈರ್ಯವ ತೋರಿರಿ
ಭ್ರಷ್ಟ ಭಂಡರ ಭಾರಿ ಹಗರಣಗಳನು
ಬಯಲಿಗೆ ಎಳೆಯಿರಿ

ಸಾಕು ಮೈದಿದ್ದಿನ್ನು ಮೈವರ
ಮೈಯ್ಯ ಸೊಕ್ಕನು ಮುರಿಯಿರಿ
ಎಷ್ಟು ತಿಂದರು ಇನ್ನು ಬೇಡುವ
ಹೊಟ್ಟೆಬಾಕರ ತುಳಿಯಿರಿ

ಬಡವ ಬಲ್ಲಿದರೆಲ್ಲರನು
ಸದೆಬಡಿವ ನೀಚರ ಸುಲಿಯಿರಿ
ದುಡಿಯದೆ ದುಡಿವವರ ಗಳಿಕೆಗೆ
ಕೈ ಚಾಚುವವರನು ಜರೆಯಿರಿ

ಎಲ್ಲದಕು ಎಲ್ಲೆಡೆಯು ಕಾಡುವ
ಕಳ್ಳರನ್ನು ಕಾಡಿರಿ
ಲಂಚವಿಲ್ಲದೆ ಕೆಲಸ ಮಾಡದ
ವಂಚಕರಿಗೆ ಬಲೆ ಬೀಸಿರಿ

ಭ್ರಷ್ಟರೆಲ್ಲಿಯೇ ಇರಲಿ
ಯಾವುದೆ ಕಾರ್ಯತಂತ್ರವ ಮಾಡಲಿ
ಜನರು ಕೆಲಸಕೆ ಮುನ್ನ
ಲಂಚ ಕೊಡದಿರಲೆಚ್ಚರಿಸಿರಿ.


Leave a Reply

Back To Top