ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ನೆನಪುಗಳು

ಅರುಣಾ ನರೇಂದ್ರ

ಮುಸ್ಸಂಜೆ ಮಬ್ಬುಗತ್ತಲಲಿ
ಕಡಲ ತಡಿಯಲಿ ಮೂಡಿದ
ಹೆಜ್ಜೆಗಳು ಸಾವಿರಾರು

ಭೋಗ೯ರೆದು ಅಪ್ಪಳಿಸುವ
ಅಲೆಯ ರಭಸಕ್ಕೆ
ಅಳಿಸಿ ಹೋದ ಗುರುತುಗಳು
ಒಂಟಿತನದ ಭಾವ

ಎದೆಯ ಏರಿಳಿತ
ಕಡಲ ಅಲೆಗಿಂತಲೂ ಘೋರ
ಕೂಗಿ ಕರೆದ ಧ್ವನಿ
ಕಡಲ ಮೊರೆತದಲಿ ಕ್ಷೀಣ

ಮೆತ್ತಿಕೊಂಡ ಮಳಲ
ಕಣ ಕಣಗಳನು
ಝಾಡಿಸಿ ಕೊಡವಿ
ಮೇಲೆದ್ದು ಹೋಗಿ
ನೀರಲ್ಲಿ ಕಾಲಾಡಿಸಿದೆ
ಭಾವ ಬರಿದಾಗಿತ್ತು

ಮೆತ್ತನೆಯ ಪಾದಕ್ಕೆ
ಮೆತ್ತಿ ಮುತ್ತಿಕ್ಕಿ ಖುಷಿಪಡುವ
ಮಳಲು ತಾಳಲಾರದ ಹಿಂಸೆ

ಹೇಗೆ ಹೆಜ್ಜೆ ಇಡುವುದು
ಮತ್ತೆ ಮತ್ತೆ ತೊಳೆದುಕೊಳ್ಳುವುದೇ ಆಯಿತು

ನಾ ಸೋತು ಹೋದೆ
ಆ ನಿನ್ನ ನೆನಪುಗಳು
ವಿಜಯದ ನಗೆ ನಗುತ್ತಲೇ
ಎದೆಗೆ ಇರಿಯುತ್ತವೆ


 ಅರುಣಾ ನರೇಂದ್ರ

Leave a Reply

Back To Top