ಅಂಬೇಡ್ಕರ್ ನೆನಪಲ್ಲಿ

ಕಾವ್ಯ ಸಂಗಾತಿ

ಅಂಬೇಡ್ಕರ್ ನೆನಪಲ್ಲಿ

ಶ್ರೀನಿವಾಸ ಜಾಲವಾದಿ

ಬಾಬಾನೂ ನೀನೇ ಬಲಭೀಮನೂ ನೀನೇ
ಕಸದಾಗ ಕುಂತವರ ಬಾಳ ಪ್ರಭೆಯೂ ನೀನೇ!

ತುಳಿಸಿಕೊಂಡವರ ಬಾಳಿಗೆ ಬಂದ ಬೆಳಕು ನೀನು
ಸರ್ವಾಧಿಕಾರಿಗಳ ಅಟ್ಟಹಾಸಕೆ ದುಃಸ್ವಪ್ನ ನೀನು
ಅಂಗೈಯಲ್ಲೇ ಅರಮನೆ ತೋರಿಸಿ ಮರಳು
ಮಾಡಿದವರ ಮೆಟ್ಟಿನಿಂತ ಸಂವಿಧಾನ ಶಿಲ್ಪಿ ನೀನು!

ಕತ್ತಲೆ ರಾಜ್ಯದೀ ಆಳಿದವರದೇ ಆಟವಾದಾಗ
ಅಸ್ಪೃಶ್ಯತೆಯ ಪಟ್ಟ ನೀಡಿ ಬುಗುರಿ ಆಡಿಸಿದವರ
ಸೊಕ್ಕು ಅಡಗಿಸಿದವರ ದಲಿತ ಸರ‍್ಯ ನೀನು
ಅಮಾಯಕರ ಹೃದಯ ಕಮಲದ ದುಂಬಿ ನೀನು!

ಕೆಂಡ ಕಾರುವ ಧರ್ಮಾಂಧ ವಿಷ ಜಂತುಗಳ
ಮಧ್ಯೆ ಅರಳಿದ ಚೆಂಗುಲಾಬಿ ನೀನು
ಶತಮಾನಗಳ ಕಾವು ಇನ್ನೂ ಆರೇ ಇಲ್ಲ
ಸ್ಪೃಶ್ಯತೆಯ ಪರಮ ಸುಖ ನೀನು ಅನುಭವಿಸಲೇ ಇಲ್ಲ!

ಕಗ್ಗತ್ತಲೆಯ ಖಂಡದಲ್ಲಿ ಕಣ್‌ಕಟ್ಟಿಬಿಟ್ಟ ಜನಕೆ
ದಿವ್ಯದೃಷ್ಟಿಯ ನೀಡಲು ಬಂದ ಹರಿಕಾರನು ನೀನು!
ಭವ್ಯಭಾರತದ ಕನಸು ನನಸಾದೀತು ನಿನ್ನ
ಸಂವಿಧಾನವೇ ನಮಗೆ ಪರಮ ಗಂಗೋತ್ರಿ!


One thought on “ಅಂಬೇಡ್ಕರ್ ನೆನಪಲ್ಲಿ

Leave a Reply

Back To Top