ಹೊಯಿದವರೆನ್ನ ಹೊರೆದವರೆಂಬೆ

ಲೇಖನ

ಹೊಯಿದವರೆನ್ನ ಹೊರೆದವರೆಂಬೆ

ಡಾ.ಶಶಿಕಾಂತ ಪಟ್ಟಣ

Painter of Basavanna picture angry at govt for non-recognition- The New  Indian Express

ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ,

ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ,

ಜರಿದವರೆನ್ನ ಜನ್ಮಬಂಧುಗಳೆಂಬೆ,

ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ

ಕೂಡಲಸಂಗಮದೇವಾ.   – ಬಸವಣ್ಣ

ಬಸವಣ್ಣ  ಜಗತ್ತಿನ ಒಬ್ಬ ಶ್ರೇಷ್ಠ ಸಮಾಜವಾದಿ ಹಾಗೂ ದಾರ್ಶನಿಕ ,ತನ್ನನ್ನು ತಾನು ಸಮಾಜಕ್ಕೆ ಜಂಗಮಕ್ಕೆ ತೊಡಗಿಸಿಕೊಂಡವರು ಇನ್ನೊಬ್ಬರಿಲ್ಲ . ಸಮಾಜದಲ್ಲಿ ದುಡಿಯುವಾಗ ಅನೇಕ ನೋವು ಸಂಕಟ ಕಷ್ಟಗಳು ಬರುವುದು ಸಹಜ .ಸತ್ಯ ನಿಷ್ಟುರತೆ ಯಾವಾಗಲೂ ಒಂಟಿಯಾಗಿರುತ್ತದೆ. ಸುಳ್ಳು ವಂಚನೆ ವೈಭವಕ್ಕೆ ಪಾತ್ರವಾಗುತ್ತದೆ.

ಸಾಮಾಜಿಕ ಕಾರ್ಯದಲ್ಲಿ ತೊಡಗಿದಾಗ ತಮ್ಮನ್ನು ಬಡೆದವರನ್ನು ಹೊಯ್ದವರನ್ನು  ಹೊರಗಿನವರು ಎಂದೆನ್ನುವದಿಲ್ಲ ತಮ್ಮನ್ನು ತಿದ್ದಲು ಹೊಯ್ದಿರಬೇಕು ಎಂದೆನ್ನುತ್ತಾರೆ ಬಸವಣ್ಣ .

ಬಯ್ದವರು ತಮ್ಮ ಬಂಧುಗಳೆಂಬೆ ಎಂದೆನ್ನುತ್ತಾರೆ ಬಸವಣ್ಣ . ಬುದ್ಧಿ ಮಾತನ್ನು ಹೇಳಲು ನೆರೆ ಹೊರೆಯವರು ಹೀಗೆ ಬಯ್ಯುವುದು ಸಹಜ ಹೀಗಾಗಿ ಸಮಾಧಾನದಿಂದ ಅವರ ಟೀಕೆ ಬೈಗುಳಗಳನ್ನು ಸ್ವೀಕರಿಸುವ ಬಸವಣ್ಣ  ಅವರನ್ನು ತನ್ನ ಬಂಧುಗಳೆಂದು ನಿರ್ಣಯಿಸುತ್ತಾನೆ .

ನಿಂದಿಸಿದವರು ತನ್ನ ಹೆತ್ತ ತಂದೆ ತಾಯಿಗಳು ಎಂದು ಭಾವಿಸುವದಾಗಿ ಹೇಳುವ ಬಸವಣ್ಣನವರು ನಿಂದಿಸುವ ಮನಗಳ ವಿರೋಧಕ್ಕೆ ಹೋಗದೆ ಅವರನ್ನು ಅಪ್ಪಿಕೊಂಡು ಸಮಾಜ ಮುಖಿ ಸೇವೆಗೆ ತರುವ ಪ್ರಾಮಾಣಿಕ ಪ್ರಯತ್ನ ಬಸವಣ್ಣನವರದ್ದು.ನಿಂದಿಸಿದವರನ್ನೇ ತಂದೆ ತಾಯಿ ಎಂದಾಗ ಎಂತಹ ಕಲ್ಲು ಮನಸ್ಸು ಪರಿವರ್ತನೆಗೊಳ್ಳದೆ ಇರದು.

ಆಳಿಗೊಂಡವರೆನ್ನ ಆಳ್ದವರೆಂಬೆ,-ಆಡಿಕೊಳ್ಳುವ ಜನರ ಕಟು ಬಿರುಸಿನ ಮಾತುಗಳನ್ನು ಆಡುವವರು ತಮ್ಮ ಆಪ್ತ ಬಂಧುಗಳೆಂದು ಬಸವಣ್ಣ ಹೇಳುತ್ತಾರೆ.

ಜರಿದವರೆನ್ನ ಜನ್ಮಬಂಧುಗಳೆಂಬೆ- ತಮ್ಮ ಕಾರ್ಯದಲ್ಲಿ ಜರಿದವರು ಎದುರು ಹಳಿದವರು ತಮ್ಮ ಜನ್ಮ ಬಂಧುಗಳೆಂಬೆ ಎಂದಿದ್ದಾರೆ.

ಆದರೆ ಬಸವಣ್ಣ ತಮ್ಮನ್ನು ಹೊಗಳಿದವರನ್ನು ಬಂಗಾರದ ಶೂಲಕ್ಕೆ ಹಾಕಿ ಕೊಲ್ಲುವವರು ಎಂದಿದ್ದಾರೆ.

ಹೊಗಳಿಕೆಗೆ ವ್ಯಕ್ತಿ ತನ್ನ ಕ್ರಿಯಾಶೀಲತೆ ಕಳೆದುಕೊಳ್ಳುತ್ತಾನೆ ಅತಿಯಾದ ಹೊಗಳಿಕೆ ಮನುಷ್ಯನ ವ್ಯಕ್ತಿತ್ವವನ್ನು ಕುಬ್ಜವನ್ನಾಗಿ ಮಾಡುತ್ತದೆ

ಸಾಮಾಜಿಕ ಸಂಘರ್ಷದಲ್ಲಿ ಬಸವಣ್ಣ ಇಂತಹ ಅನೇಕ ಅವಮಾನ ಆತಂಕಗಳನ್ನು ಎದುರಿಸಿ ಕಾಲ ಕ್ರಮೇಣ  ಪ್ರೀತಿಗೆ ಹೊಗಳಿಕೆಗೆ ಪಾತ್ರರಾಗಿರಬಹುದು .

ಅದೇ ಕಾರಣಕ್ಕೆ ತಮ್ಮನ್ನು ಹೊಯ್ದವರು ಬಯ್ದವರು ಜರಿದವರು ಆಳ್ದಕೊಂಡವರು ನಿಂದಿಸಿದವರು ತಮ್ಮ ಬಂಧು ಬಳಗವೆಂದೆನ್ನುತ್ತ ಶ್ರೇಣೀಕೃತವಾದ ಸಮಾಜದಲ್ಲಿ ವರ್ಗ ವರ್ಣ ಆಶ್ರಮ ರಹಿತ ಲಿಂಗ ಭೇದ ರಹಿತ ಅತ್ಯಂತ ಸುಂದರ ಮುಕ್ತ ಸಮಾಜವನ್ನು ಬಸವಣ್ಣ ಮತ್ತು ಶರಣರು ಕಟ್ಟಿದರು.ಆದರೆ ಹೊಗಳಿ ತಮ್ಮ ಕಾರ್ಯ ಸಾಧನೆ ಮಾಡುವ ಕಾರ್ಯ ಸಾಧಕರು ಅವಕಾಶವಾದಿಗಳು ತಮ್ಮನ್ನು ಹೊನ್ನಶೂಲಕ್ಕೆ ಇಕ್ಕುವರು ಎಂದಿದ್ದಾರೆ ಬಸವಣ್ಣನವರು.

ತಮ್ಮ ಬದುಕಿನ ಅನುಭವದ ನೆಲೆಗೆ ಸಿಲುಕಿದಾಗ ಹೃದಯಪೂರ್ವಕವಾಗಿ ಬಂದ ಅನುಭಾವದ ನುಡಿಗಳೇ ವಚನಗಳು.

ಸಮಾಜದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಬಂದಾಗ ಜಂಗಮ ಸಮಾಜವನ್ನು ದೋಷಿಸದೆ ಪ್ರೀತಿಯಿಂದ ಸ್ವೀಕರಿಸುವ ವ್ಯವದಾನವನ್ನು ನಾವು ಇಂತಹ ವಚನದಿಂದ ಕಲಿಯಬೇಕು.

————————————–

One thought on “ಹೊಯಿದವರೆನ್ನ ಹೊರೆದವರೆಂಬೆ

Leave a Reply

Back To Top