ಕಾವ್ಯಸಂಗಾತಿ
ಮಹಾಂತೇಶ್.ಬಿ.ನಿಟ್ಟೂರು
“ಯುದ್ಧ ಅಂದ್ರೆ ಸುಮ್ನೆ ಏನು?”


ಪ್ರತಿಷ್ಠೆಗಾಗಿ ಪಣ
ಬಲಾಬಲಕ್ಕಾಗಿ ಬಣ;
ಹೊಡೆದಾಡಿ ಬಡಿದಾಡಿ
ಒಂದಿವಸ ರಣಾಂಗಣದಲ್ಲಿ
ಹೆಂಗೆಂಗೋ ಬಿದ್ದ ಹೆಣ
ಗೆಲ್ಲಲೇಬೇಕು ಎಂದವನಿಗೆ ಸೋಲು
ಸೋತು ಸುಣ್ಣವಾಗಿ ನೆಲಕ್ಕೆ
ಬೀಳುವಾಗ ಅದೃಷ್ಟವಶಾತ್ ಗೆಲುವು;
ಇವೆರಡೂ ನಾಣ್ಯದ ಎರಡು ಮುಖಗಳು
ಕಂಡೂ ಕಾಣದಂತೆ ಕಳಚಿ
ಬೀಳುತ್ತಿವೆ ಮುಖವಾಡಗಳು
ಇತಿಹಾಸದ ಹಾಸುಗಲ್ಲಿನ ಮೇಲೆ
ಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ
ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟು
ಮದ್ದು ಗುಂಡು ಬಾಂಬುಗಳ
ಸುಧಾರಿತ ಹೊಸ ತಳಿಗಳು;
ವಿಜ್ಞಾನದ ಬಳುವಳಿಗಳು
ಆರಂಭದ ಹೊರತು ಅಂತ್ಯ
ಅರಿಯದು ಯುದ್ಧೋನ್ಮಾದ
ಸೂರ್ಯೋದಯ, ಚಂದ್ರೋದಯಕ್ಕೆ
ಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್
ಕಟ್ಟಡಗಳು ಇಂದು ನೆಲಸಮ
ಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ
ಸರ್ವನಾಶದ ಕಿಚ್ಚು ಹೊತ್ತಿ
ನರಕದ ಹೆಬ್ಬಾಗಿಲು ತೆರೆಯುತ್ತಿರುವಾಗ
ನಾಳೆ ಮತ್ತೇನೋ…ಮತ್ತಿನ್ನೇನೋ…
ಯುದ್ಧ ಅಂದ್ರೆ ಸುಮ್ನೆ ಏನು!?
ಮಹಾಂತೇಶ್.ಬಿ.ನಿಟ್ಟೂರು,



