ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭…….. ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ ಸಹಾಯಕ ಅಧಿಕಾರಿಯಾಗಿ ಹೋಗಿದ್ದು. ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್ ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್ ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು. ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು. ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್
ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್ ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಡುವಿನ ಸೌಜನ್ಯ ತುಂಬಿದ ಸ್ನೇಹ” ಒಂದು ನೆನಪು, ಗೊರೂರು ವಸಂತಿ ಮೂರ್ತಿ (ಕೆನಡಾ) ಅವರಿಂದ
ಹಿರಿಯರ ಸಂಗಾತಿ ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರುರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್ ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಡುವಿನ ಸೌಜನ್ಯ ತುಂಬಿದ ಸ್ನೇಹ” ಒಂದು ನೆನಪು, ಈ ದಿನ ಶ್ರೀ ನಿಸ್ಸಾರ್ ಅಹ್ಮದ್ ಅವರ ಜನ್ಮದಿನೋತ್ಸವ. ಅವರು 1936 ಫೆಬ್ರವರಿ 5 ನೆಯ ತಾರೀಕು ಜನಿಸಿದರು. ಕರ್ನಾಟಕದಲ್ಲಿ ಅವರ ಹೆಸರನ್ನು ಕೇಳದವರು ಯಾರಿದ್ದಾರೆ? ಅವರು ನನ್ನ ತಂದೆ Dr. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸ್ನೇಹಿತರು . ಆ ಸ್ನೇಹ, ಸೌಜನ್ಯದಿಂದ ತುಂಬಿದ ಸ್ನೇಹ. ಒಮ್ಮೆ ನಿಸ್ಸಾರ್ ಅಹ್ಮದ್ ಅವರು ನಮ್ಮ ಬೆಂಗಳೂರಿನ ರಾಜಾಜಿನಗರದ ಮನೆಗೆ ಬೆಂಗಳೂರು ಆಕಾಶವಾಣಿಯ ಪರವಾಗಿ ಬಂದು ನಮ್ಮ ತಂದೆಯವರ ಸಂದರ್ಶನವನ್ನು ಧ್ವನಿಮುದ್ರಣ ಮೂಲಕ ಮಾಡಿದರು. ಈ ಸಂದರ್ಶನ ಇಂದಿಗೂ ಯು ಟ್ಯೂಬ್ನಲ್ಲಿ ದೊರೆಯುತ್ತದೆ. ಕನ್ನಡ ಸಾಹಿತ್ಯದ ದಿಗ್ಗಜರು ಕುಳಿತು ಮಾತನಾಡಿರುವ ಅಪೂರ್ವ ಸಂದರ್ಭ. ಈ ಸಂದರ್ಶನವನ್ನು ನೋಡಿದವರಿಗೆ ಅವರಿಬ್ಬರಲ್ಲಿರುವ ಪರಸ್ಪರ ಗೌರವ ತಾನೇತಾನಾಗಿ ವ್ಯಕ್ತ ವಾಗುತ್ತದೆ. ಆ ಸಂದರ್ಶನದ ಲಿಂಕ್ ಇಲ್ಲಿದೆ. ಒತ್ತಿ ಕೇಳಬಹುದು. https://youtu.be/KYBBBtwaJ7Q?si=UJ3FFcw4dsoSlNsy. ಶ್ರೀ ನಿಸ್ಸಾರ್ ಅವರ ಉತ್ತಮ ಸಾಹಿತ್ಯ. ಕವನಗಳಿಗೆ ಅನೇಕ ಬಿರುದು, ಪ್ರಶಂಸೆ ಹಾಗೂ ಬಹುಮಾನಗಳು ಸಂದಿವೆ. ಅವರ ನಿತ್ಯೋತ್ಸವದ ಧ್ವನಿಮುದ್ರಣವಂತೂ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದೆ. ಅವರು ನಿಧನರಾದುದು 2020 May 3 ನೆಯ ತಾರೀಕು. ಆದಿನ ಅನೇಕ ಲೇಖಕರು, ಅಭಿಮಾನಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಆದ ತುಂಬಲಾರದ ನಷ್ಟವನ್ನು ಕುರಿತು ಬರೆದರು. ಆ ಸಮಯದಲ್ಲಿ ಕನ್ನಡ ಓದಲು ಮತ್ತು ಬರೆಯಲು ತಿಳಿಯದ ನನ್ನ ಕೆಲವು ಸ್ನೇಹಿತರಿಗಾಗಿ ನಾನು ನಿಸ್ಸಾರ್ ಅಹ್ಮದ್ ಅವರ ಒಂದು ಖ್ಯಾತ ಪದ್ಯವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದೆ. ಅ ಪದ್ಯದ ಹೆಸರು: ನಿಮ್ಮೊಡನಿದ್ದರೂ ನಿಮ್ಮಂತಾಗದೇ ಕನ್ನಡ ಮೂಲ:ನಿಮ್ಮೊಡನಿದ್ದೂ ನಿಮ್ಮಂತಾಗದೆಸಾಹಿತ್ಯ : ಪ್ರೊ. ಕೆ ಎಸ್ ನಿಸಾರ್ ಅಹಮದ್. ನಿಮ್ಮೊಡನಿದ್ದೊ ನಿಮ್ಮಂತಾಗದೆಜಗ್ಗಿದ ಕಡೆ ಬಾಗದೆನಾನು ನಾನೇ ಆಗಿ ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿತಲೆಯೆತ್ತುವುದಿದೆ ನೋಡಿಅದು ಬಲುಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದನಿಮ್ಮ ಕುಡಿತ ಕುಣಿತ ಕೂಟಗಳುಕೆಣಕಿ ಎಸೆದಿದ್ದರೂಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತಸಂಯಮವನ್ನೇ ಪೋಷಿಸಿ ಸಾಕುತ್ತರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿಅದು ಬಲು ಕಷ್ಟದ ಕೆಲಸ. ಒಳಗೊಳಗೆ ಬೇರುಕೊಯ್ದುಲೋಕದೆದುರಲ್ಲಿ ನೀರು ಹೊಯ್ದುನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂಗೊತ್ತಿಲ್ಲದಂತೆ ನಟಿಸಿಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿಬಾಳ ತಳ್ಳುವುದಿದೆ ನೋಡಿಅದು ಬಲು ಕಷ್ಟದ ಕೆಲಸ. ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕುಸಂಶಯದ ಪಂಜವೆತ್ತಿನನ್ನ ನಂಬಿಕೆ ನೀಯತ್ತು ಹಕ್ಕುಕೊನೆಗೆ ಸಾಚಾತನವನ್ನು ಪರಚಿ, ಒತ್ತಿನೋವಿಗೆ ಕಣ್ಣು ತುಂಬಿದ್ದರೂ, ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನುಹುಸಿನಗುತ್ತ ಎದುರಿಸುವುದಿದೆಯಲ್ಲಅದು ಬಲು ಕಷ್ಟದ ಕೆಲಸ My translation:Nimmodaniddu NimmanthagadeByNissar Ahmed Even while being with youNot being able to become like you,Not leaning towards any pull and being myselfWhile all of me and my whole existence are rooted in this landYet I am shirking like a foreignerTrying to lift my head you seeIt is a very difficult task!! In your circle of intoxication, drunkenness, dancing partiesEven while being provokedKeeping the five senses under the leashNot sliding down, maintaining disciplineAnd walking a fine lineWhile participating in the show you seeIt is a very difficult task While having chopped my roots insideAnd pouring water for the purpose of showAlthough I know of your hypocrisyBut having to pretend like I do not know thisWithout a single sign of objectionDrinking coffee with youReading the newspaper and making small talkLiving the entire life like this you seeIs a very difficult talk ಈ ಪದ್ಯದಲ್ಲಿ.ನಿಸ್ಸಾರ್ ಅಹ್ಮದ್ ಅವರು ತಮ್ಮ ಹೃದಯದ ಅಂತರಾಳದಲ್ಲಿ ಇರುವ ಒಂದು ನೋವನ್ನು ನಮಗೆ ಒಂದು ಸಣ್ಣ ಕಿಂಡಿಯ ಮೂಲಕ ಬೆಳಕು ಬಿಟ್ಟು ತೋರಿಸಿದ್ದಾರೆ. ಈ ಪದ್ಯ ಪ್ರತಿ ದಿನವೂ, ಪ್ರತಿ ಕ್ಷಣವೂ ಅವರ ಮನಸ್ಸಿನಲ್ಲಿ ನಡೆಯುತ್ತಿರುವ ತುಮುಲ ಯುದ್ಧದ ಪರಿಚಯವನ್ನು ನಮಗೆ ಮಾಡಿಸುತ್ತದೆ. ಶ್ರೀ ನಿಸ್ಸಾರ್ ಅಹ್ಮದ್ ಅವರ ಸಾಹಿತ್ಯ ಸಾಧನೆ ಕನ್ನಡ ಭಾಷೆಯಲ್ಲಿ ಅದ್ವಿತೀಯ. ಅವರಿಗೆ ಹೃತ್ಪೂರ್ವಕ ನಮನಗಳು. ಲೇಖಕಿ: ಗೊರೂರು ವಸಂತಿ ಮೂರ್ತಿ (ಕೆನಡಾ)ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ”ಸಂಗಾತಿ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಸಂಗಾತಿ” ಸಂಗಾತಿ ನಿನ್ನ ನಗುವೇ ನನ್ನ ಬೆಳಗಿನಸೂರ್ಯನುನಿನ್ನ ಮಾತುಗಳೆ ನನ್ನ ಹೃದಯಕೆ ನುಡಿಸಿದಂತೆಸಪ್ತ ಸ್ವರಗಳನು ಆ ನಿನ್ನ ಕಣ್ಣುಗಳಲ್ಲಿ ಅಡಗಿರುವ ಲೆಕ್ಕಕೆಸಿಗದ ಕನಸುಗಳುಕತ್ತಲೆಯೆ ಕವಿದಿಹ ನನ್ನ ಬದುಕಿಗೆ ದಾರಿದೀಪವಾಗಿವೆ ನೀನು ಜೊತೆಯಾದ ಪ್ರತಿ ಕ್ಷಣವೂಕಾಲವೂ ಮೌನವಾಗಿ ನಿಂತಿದೆನಿನ್ನ ಸ್ಪರ್ಶದ ಹಿತದಲ್ಲಿ ಎಲ್ಲ ನೋವುಗಳುಕರಗಿ ಹೋಗಿವೆ ಈ ಜನ್ಮವಷ್ಟೇ ಅಲ್ಲ ಎಲ್ಲಾ ಜನ್ಮಗಳಲ್ಲೂನೀನೆ ಸಂಗಾತಿಯಾಗಿರುನನ್ನ ಪ್ರೀತಿಗೆ ಉಸಿರಾಗಿರು ಆ ಪ್ರೀತಿಯಹೆಸರೆ ನೀನಾಗಿರು ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ”ಸಂಗಾತಿ” Read Post »
ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್
ಅನುವಾದ ಸಂಗಾತಿ ಗಾಳಿಗಾಗಿ ಹೋರಾಟ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್ ಗಾಳಿಗೆ ಗಾಳಾಡುವ ಜಾಗವೇ ಇಲ್ಲವಂತೆಒಂದು ಸುಳಿಗಾಳಿ ಸುದ್ದಿ ತಂದುಕೊಟ್ಟಿತು—ಉಸಿರಾಟವೇ ಸಿಗದಂತೆ ಎದೆಗೆ ಅಪ್ಪಳಿಸಿಸ್ಕೂಲಿನಲ್ಲಿ ಇರುವ ಮೊಮ್ಮಗಳು ನೆನಪಾಯಿತು—ಅವಳಿಗೆ ಹೇಳಬೇಕುಅನ್ನದ ಡಬ್ಬಿಯ ಜೊತೆಗೆಒಂದು ಆಕ್ಸಿಜನ್ ಡಬ್ಬಿಯನ್ನೂ ಹಾಕಿಕೊಡಲು,ಒಂದು ಮಾಸ್ಕ್ ಕೊಂಡು ಕೊಡಲು.ರಾಜಧಾನಿ ನಗರಸಂಸತ್ತಿನ ಮುಂದೆ ಮೊಣಕಾಲೂರಿದೆ ಎನ್ನುವವಾರ್ತೆಯನ್ನು ಹೊತ್ತು ತಂದ ಪತ್ರಿಕೆನಮ್ಮ ಮನೆಯ ಗೇಟಿನ ಬಳಿಹಾವಿನಂತೆ ಸರಿದು ಕಾಣಿಸಿತು—ಸಂಸತ್ತನ್ನೇ ತಮ್ಮ ಸುರಕ್ಷತೆಗೆಅಂತರಿಕ್ಷದಲ್ಲಿ ಕಟ್ಟಿಕೊಳ್ಳಲುಎಂಜಿನಿಯರ್ಗಳು, ವಿಜ್ಞಾನಿಗಳ ಜೊತೆಸಭೆಯಲ್ಲಿ ಆಡಳಿತಗಾರರುಬ್ಯುಸಿ ಯಾಗಿದ್ದಾರೆ ಅಂತೆ—ತಮ್ಮ ಬ್ಯಾಂಕ್ ಖಾತೆಗಳಲ್ಲಿಮೊಟ್ಟೆಗಳನ್ನು ಉಳಿಸಿಕೊಂಡುಕಾರ್ಪೊರೇಟ್ ಅನಾಕೊಂಡಾಗಳುನಿದ್ರೆಗೆ ಜಾರಿರುವ ದೃಶ್ಯಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಂತೆಮತ್ತೊಂದು ಸುದ್ದಿ.ಐದು ವರ್ಷಕ್ಕೊಮ್ಮೆಸಾರ್ವತ್ರಿಕ ಶವಪರೀಕ್ಷೆಗಳು—ಜೀವಂತ–ನಿರ್ಜೀವದೇಹಗಳ ಜಾತ್ರೆಪರಿಸರದ ಪಾಡೆಯ ಮೇಲೆಪ್ರಜಾಸತ್ತಾತ್ಮಕ ಮೆರವಣಿಗೆಹಳದಿ ಬಳಿದಿದ್ದ ಕೊರಡಗಳಿಂದಮಹಾ ನಾಯಕರ ಪ್ರದರ್ಶನ—ಅಧಿನಾಯಕನನಾನ್–ಬೈಯಾಲಾಜಿಕಲ್ ಅಹಂಕಾರಕ್ಕೆಸಾಷ್ಟಾಂಗ ವಂದನೆ ಸಲ್ಲಿಸುವಶಲ್ಯಾವಶೇಷವಾದ ಸ್ವಾತಂತ್ರ್ಯ.ನಗರಗಳಿಂದ ಮನುಷ್ಯರಂತೆಮನುಷ್ಯರಿಂದ ನಗರಗಳಂತೆಯಾರು ಮೊದಲು ಓಡಬೇಕು ಅನ್ನೋದು ತಿಳಿಯದೆಒಂದು ಸಂಧಿಗ್ಧ ಕ್ಷಣದಲ್ಲಿನಲಿದು ಹೋಗುತ್ತಿರುವ ಕಾಲಕ್ಕೆಮತ್ತೊಂದು ಅಕಾಲದ ಗರ್ಭಧಾರಣೆದೇಶವಿಡೀಮಾಲಿನ್ಯದ ಪ್ರಸವ ವಾಸನೆ!ಅಪ್ಪಂದಿರೇ!ನೀವು ಮಕ್ಕಳಿಗಾಗಿ ಆಸ್ತಿಗಳನ್ನು ಸೇರಿಸುತ್ತೀರಾ—ಸರಿ, ಆದರೆ ಸ್ವಲ್ಪ ಆಕ್ಸಿಜನ್ ಕೂಡ ಸಂಗ್ರಹಿಸಿ.ಇನ್ನು ನಿಮ್ಮ ಆತುರಗಳನ್ನು ಬದಿಗಿಟ್ಟುಗಾಳಿಗಾಗಿ ಹೋರಾಟಗಳನ್ನು ಆರಂಭಿಸಿ! ಮಂಜಿನ ಮುಖವಾಡ …ಬೆಳದಿಂಗಳ ನಗು…ಗಾಳಿಯಲ್ಲಿ ಕಾವಲು ಕಾಸುತ್ತಿರುವಮೃತ್ಯುವನ್ನುಗುರುತಿಸಲಾಗುವುದೇ ಇಲ್ಲ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್
ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »
“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ
ಪುಸ್ತಕಸಂಗಾತಿ ಕೆ ಎನ್ ಚಿದಾನಂದ “ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ ಸರಿ. ”ದೇಶ ಸುತ್ತು ಕೋಶ ಓದು” ಎಂಬ ಜನಜನಿತವಾದ ಗಾದೆ ಮಾತು ಕೇವಲ ಜ್ಞಾನಾರ್ಜನೆಯ ಮಾರ್ಗವಲ್ಲ; ಅದು ಮನುಷ್ಯನ ಅಸ್ತಿತ್ವದ ವಿಸ್ತರಣೆಯ ಸಂಕೇತವೂ ಹೌದು. ಇಡೀ ಪ್ರಪಂಚವನ್ನು ಒಂದು ಮಹತ್ತರವಾದ ಗ್ರಂಥವೆಂದು ಭಾವಿಸುವುವಾದರೆ, ಪ್ರೇಕ್ಷಣೀಯ ಸ್ಥಳಗಳು ಆ ಗ್ರಂಥದ ಒಂದೊಂದು ಅಮೂಲ್ಯವಾದ ಅಧ್ಯಾಯಗಳು ಎನ್ನಬಹುದು. ನಾಗರಿಕತೆಯ ಆರಂಭದಿಂದ ಇಂದಿನ ಆಧುನಿಕ ಯುಗದವರೆಗೆ, ಮನುಷ್ಯ ಹೊಸತನ್ನು ಹುಡುಕುತ್ತಾ, ಪ್ರಕೃತಿಯ ಸೊಬಗನ್ನು ಆರಾಧಿಸುತ್ತಾ ಮತ್ತು ಪೂರ್ವಜರು ಬಿಟ್ಟು ಹೋದ ಸ್ಮಾರಕಗಳ ಮೌನ ಸಂಭಾಷಣೆಯನ್ನು ಆಲಿಸುತ್ತಾ ಸಾಗಿದ್ದಾನೆ. ಪ್ರವಾಸವೆಂಬುದು ಹೊಸ ಚೇತನವನ್ನು ತುಂಬುವ ಪಯಣವಾಗಿದೆ. ಪ್ರವಾಸವೆಂದರೆ ಕೇವಲ ಒಂದು ಭೌಗೋಳಿಕ ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಚಲಿಸುವುದಲ್ಲ. ಅದು ನಮ್ಮೊಳಗಿನ ಸಂಕುಚಿತ ಭಾವನೆಗಳನ್ನು ಕಿತ್ತೆಸೆದು, ವಿಶಾಲವಾದ ವಿಶ್ವದೊಂದಿಗೆ ಮೇಳೈಸುವ ಪ್ರಕ್ರಿಯೆಯಾಗಿದೆ. ಒಂದು ಕಲ್ಲಿನ ಕೆತ್ತನೆಯಲ್ಲಿ ಅಡಗಿರುವ ಶಿಲ್ಪಿಯ ಶ್ರಮ, ಗೋಪುರದ ಭವ್ಯತೆ ಅಥವಾ ಪ್ರಕೃತಿಯ ಮಡಿಲಲ್ಲಿ ಹರಿಯುವ ಜಲಪಾತದ ನಿನಾದ ಇವೆಲ್ಲವೂ ನಮಗೆ ಬದುಕಿನ ಅರ್ಥವನ್ನು ಹೊಸದಾಗಿ ಕಲಿಸಿಕೊಡುತ್ತವೆ. ನನ್ನ ಹಿತೈಷಿ ಸ್ನೇಹಿತರಾದ ಗೊರೂರು ಅನಂತರಾಜು ಅವರು ಹೆಸರೇ ಹೇಳುವಂತೆ ಗೊರೂರಿನವರು. ಇವರ ಬರಹದ ಹವ್ಯಾಸ ನಿಲ್ಲದ ಪಯಣವಾಗಿದೆ. ತನಗೆ ಗೊತ್ತಿರುವ ವಿಷಯದೊಂದಿಗೆ ಮತ್ತಷ್ಟು ಅಧ್ಯಯನ, ವಿಷಯ ಸಂಗ್ರಹದ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು ಅವೆಲ್ಲವನ್ನು ಒಟ್ಟಾಗಿಸಿ ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು. ಗೊರೂರು ಅನಂತರಾಜುರವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸುಮ್ಮನಾಗಲಿಲ್ಲ : ಬದಲಾಗಿ ಆ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಿ ಓದುಗ ಬಳಗಕ್ಕೆ ಉಣಬಡಿಸಿದ್ದಾರೆ. ಎಡತೊರೆ ಎನಿಸಿದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಅರ್ಕೇಶ್ವರ ದೇವಾಲಯ ಕುರಿತ ಮಾಹಿತಿ ನೀಡಿದ್ದಾರೆ. ಮೂಗೂರಿನ ತ್ರಿಪುರ ಸುಂದರಿ ದೇವಾಲಯದ ಕುರಿತ ಮಾಹಿತಿ ವಿಚಾರ ಪೂರ್ಣವಾಗಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನದ ಬಗೆಗೆ ನೀಡಿರುವ ಮಾಹಿತಿ, ಅಲಮೇಲಮ್ಮನ ವಿಚಾರ, ಕಾವೇರಿ ತಟದಲ್ಲಿನ ಮರಳರಾಶಿ, ಗಂಗ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವರು. ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದೇವಾಲಯದ ಕುರಿತು ನೀಡಿರುವ ಮಾಹಿತಿ ಓದುಗರಿಗೆ ಅತ್ಯುಪಯುಕ್ತವಾಗಿದೆ. ಬೆಲಗೂರಿನ ಹಾಲು ರಾಮೇಶ್ವರ ದೇವಾಲಯದ ಐತಿಹ್ಯವನ್ನು ತಿಳಿಯುುತ್ತಾ ಓದು ಮುಂದುವರಿದಾಗ ಅನಂತರಾಜುರವರ ಹುಟ್ಟೂರಾದ ಗೊರೂರಿನ ತ್ರಿಕೂಟಲಿಂಗೇಶ್ವರ ದೇವಾಲಯ ಮಾಹಿತಿ ದೊರಕುತ್ತದೆ. ಪ್ರವಾಸಿ ತಾಣಗಳ ಕುರಿತು ತಿಳಿಯುವ ನಮ್ಮ ಓದುವ ಪಯಣ, ಗೊರೂರಿನ ರಥಚಕ್ರಗಳ ಕುರಿತಂತೆ ತಿಳಿಸುತ್ತದೆ. ಚುಂಚನಕಟ್ಟೆಯ ಕೋದಂಡರಾಮನ ದೇವಾಲಯದ ವಿಚಾರವನ್ನು ಲೇಖಕರಾದ ಗೊರೂರು ಅನಂತರಾಜು ರವರು ತುಂಬಾ ಚೆನ್ನಾಗಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಈ ಪ್ರವಾಸ ಕಥನ ಕೇವಲ ಕರ್ನಾಟಕದ ಸ್ಥಳಗಳನ್ನು ಮಾತ್ರವಲ್ಲದೇ ತಮಿಳುನಾಡಿನ ಕುಂಭಕೋಣಂನ ನವಗ್ರಹ ದೇವಾಲಯಗಳವರೆಗೂ ಕರೆದೊಯ್ಯುತ್ತದೆ. ಒಟ್ಟಿನಲ್ಲಿ ಈ ಕೃತಿಯ ಆಶಯವೇನೆಂದರೆ, ಈ ಕೃತಿಯು ಕೇವಲ ಪ್ರವಾಸಿ ತಾಣಗಳ ಪಟ್ಟಿಯಲ್ಲ; ಇದು ಇತಿಹಾಸ ಮತ್ತು ವರ್ತಮಾನದ ನಡುವಿನ ಸೇತುವೆ. ನಮ್ಮ ನಾಡಿನ ಅಪ್ರತಿಮ ವಾಸ್ತುಶಿಲ್ಪ, ಪ್ರಕೃತಿಯ ಅಚ್ಚರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ಓದುಗರಿಗೆ ಮನದಟ್ಟು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಕಥೆಯಿದೆ, ತನ್ನದೇ ಆದ ನೋವು-ನಲಿವುಗಳಿವೆ. ಆ ಸ್ಥಳಗಳ ಮೌನದಲ್ಲಿ ಅಡಗಿರುವ ಇತಿಹಾಸದ ಚೀತ್ಕಾರವನ್ನು ಅಥವಾ ಶಾಂತಿಯನ್ನು ಗುರುತಿಸುವ ದೃಷ್ಟಿಕೋನವನ್ನು ಈ ಬರಹಗಳು ನೀಡುತ್ತವೆ. ಪ್ರವಾಸೀ ತಾಣಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ.ಒಂದು ಪ್ರೇಕ್ಷಣೀಯ ಸ್ಥಳವು ಒಂದು ಜನಾಂಗದ ಸಂಸ್ಕೃತಿ ಮತ್ತು ಕಲಾಪ್ರೌಢಿಮೆಯ ಕೈಗನ್ನಡಿಯಾಗಿರುತ್ತದೆ. ಹಳೇಬೀಡು-ಬೇಲೂರಿನ ಶಿಲ್ಪಕಲೆಗಳು ಕೇವಲ ಕಲ್ಲುಗಳಲ್ಲ, ಅವು ಅಂದಿನ ಕಾಲದ ಜನರ ಸೌಂದರ್ಯ ಪ್ರಜ್ಞೆಯ ಸಾಕಾರ ರೂಪಗಳು. ಹಾಗೆಯೇ, ಪಶ್ಚಿಮ ಘಟ್ಟಗಳ ಹಸಿರು ಕೇವಲ ಅರಣ್ಯವಲ್ಲ, ಅದು ನಮ್ಮ ಜೀವಸಂಕುಲದ ಅಸ್ತಿತ್ವದ ಮೂಲ. ಇವುಗಳನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿಗೆಯು ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಓದುಗನಲ್ಲೂ ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ.ಪ್ರವಾಸವು ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ಜಗತ್ತು ಎಷ್ಟು ವಿಶಾಲವಾಗಿದೆ ಮತ್ತು ಅದರ ಮುಂದೆ ತಾನು ಎಷ್ಟು ಸಣ್ಣವನು ಎಂಬ ಸತ್ಯದ ದರ್ಶನ ಪ್ರವಾಸಿಗನಿಗಾಗುತ್ತದೆ. ಈ ಕೃತಿಯ ಪುಟಗಳನ್ನು ತಿರುವಿದಾಗ ಓದುಗರು ಕೇವಲ ಮಾಹಿತಿಯನ್ನು ಪಡೆಯದೆ, ಆಯಾ ಸ್ಥಳಗಳ ಅನುಭೂತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ಆಗ ಮಾತ್ರ ಗೊರೂರು ಅನಂತರಾಜುರವರು ಹೊರತರುತ್ತಿರುವ ಈ ಕೃತಿಯ ಉದ್ದೇಶ ಸಾಧಿತವಾದಂತೆ. ಕಾಲದ ಪ್ರವಾಹದಲ್ಲಿ ಅಳಿಯದೆ ಉಳಿದಿರುವ ಈ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳತ್ತ ಒಂದು ಅರ್ಥಪೂರ್ಣ ಪಯಣ ಬೆಳೆಸಲು ಈ ಕೃತಿ ನಿಮಗೆ ಪ್ರೇರಣೆಯಾಗಲಿ. ಕೆ. ಎನ್. ಚಿದಾನಂದಸಹ ಶಿಕ್ಷಕರುಜಿ. ಜಿ. ಜೆ. ಸಿ., ಪ್ರಧಾನ ಪ್ರೌಢಶಾಲಾ ವಿಭಾಗಆರ್. ಸಿ. ರಸ್ತೆ, ಹಾಸನ -573201
“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ Read Post »
ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ”
ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರಕೃತಿ ಚಮತ್ಕಾರ” ಕತ್ತಲನು ಓಡಿಸಿ…ಮುಂಜಾನೆಯ ತೇರಲಿ,ಸೂರ್ಯ ಏರಿ ಬಂದ ಬಾನಲಿ,ಬೆಳಕು ಬೀರುತ್ತ ಕಿರು ನಗೆಯಲಿ,! ಭುವಿಯ ಬೆಳಕಾಗಿಸಿ…ಖುಷಿ ತಂದಿತು ಜನಮನದಲಿ,ಸಂತಸ ಎಲ್ಲೆಡೆಯು ಸಂಭ್ರಮದಲಿ,ಚಿಲಿಪಿಲಿ ಹಕ್ಕಿಗಳು ಹಾಡ ಇಂಪಿನಲಿ,! ತಂಪು ಶೀತಲ ಗಾಳಿಗೆ…ಮೈ ಪುಳಕಿತಗೊಂಡ ತನುಮನಬೀಸಿದ ತಂಗಾಳಿಗೆ ರೋಮಾಂಚನಮರ ಗಿಡಗಳ ಸ್ವಾಗತದ ನಿತ್ಯ ನರ್ತನ,! ಮತ್ತೆ ಕತ್ತಲಾಗಿಸಿ…ಸೂರ್ಯ ಪಶ್ಚಿಮಕ್ಕೆ ಜಾರಿದ,ಕೆಂಪು ಬಾನಲಿ ಬೆಂಕಿಯ ಚೆಂಡಾದ,ರಸಿಕರ ಕಣ್ಗಳ ಆನಂದಿಸಿ ಮರೆಯಾದ,! ಕರಿ ಬಾನಿನುದ್ದಕ್ಕೂ….ಮಿನುಗು ತಾರೆಗಳ ಆಲಂಕಾರ,ಬೆಳದಿಂಗಳ ಚಂದ್ರನ ಪೂರ್ಣ ಆಕಾರಪ್ರಕೃತಿ ಮಡಿಲಿಗೆ ಬೆಳಕು ಮತ್ತೆ ಚಮತ್ಕಾರ.! ಹಮೀದ್ ಹಸನ್ ಮಾಡೂರು.
ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ” Read Post »
ಧಾರಾವಾಹಿ ಸಂಗಾತಿ ಕಂತು-ಐದು ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಜಯದೇವಿ ತಾಯಿಯವರ ಜೀವನ ವೃತ್ತಾಂತಭಾಗ- 5 ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ ಬ್ರಿಟಿಷರ ಭಿಡೆ ಹಿಡಿಯದೆ ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು. ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ. ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು. ಸೊಸೆಯನ್ನು ಹುಡುಕಾಡಿ ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.ಇಂಥ ನಾಜೂಕಾಗಿರುವಳು ಎಲ್ಲವನ್ನು ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು. ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ …. ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ. ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ ಕರೆದುಕೊಂಡು ಹೋಗುತ್ತಿದ್ದರು.ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು . ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು. ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!! ಆದರೆ ಮಧ್ಯರಾತ್ರಿಯಲಿ ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ… ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ ಅನ್ನುವ ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು. ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು… *ನಿನ್ನ ಭಜಿಸಲೆಂದು ಉಲಿಯುವೆ ಜಯಗೀತ ಒಂದೊಂದು, ನನ್ನ ಜೀಯಾನಿನ್ನ ಬರುವಿಕೆಯ ಬಯಕೆ-ನೆನೆ ನೆನೆದು ಅಳಹೋಗಿಹಾಡು ಬಿಡುವೆ !!*(ಜಯಗೀತ ಕವನ ಸಂಕಲ) ಒಂದು ಕಡೆ ಬರುತ್ತಾರೆ ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿಕಾಳ ಬಂದರು ಹೆದರೇನು -ಸಿದ್ದರಾಮದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!! “ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ… ಎನ್ನ ಮಾನ ಅಪಮಾನ ನಿನ್ನದಯ್ಯಾ ಎನ್ನುತ್ತಿದ್ದೆಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು ಗಟ್ಟಿಕೊಳ್ಳಲಾರಂಬಿಸಿತ್ತು. ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!…ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ….ಅಂತ ಅನೇಕ ಸಲ ಹೇಳುತ್ತಿದ್ದರು. ತಾಯಿಯ ತವರಿನಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು.. ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ ಹಿಂಸೆ ಕೊಟ್ಟಂತಾಗುವುದು .ಅವಳು ನಿಭಾಯಿಸಲಾರದಂತ ಜವಾಬ್ದಾರಿ ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು. ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!! “ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು . “ಸಿರಿತನದ ಕುವರಿ ! ಸಿರಿವಂತರ ಸತಿಯಾದೆಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆಸಿರಿತನ ದೊರೆತನ ಹಿರಿತನ ಎನ್ನವಾರಿಸದೆಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!” “ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ ಅಂತಾನೆ ಕಷ್ಟಗಳ ಕೊಡಿ ಹರಿಸಿದ ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ . ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ . ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು. ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯುಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು. ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ. ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು ಮಹಾನ ಶರಣೆಯಾದವರು. ಎಲ್ಲ ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,… ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು ಅನ್ನುವದ ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….ಅಲ್ಲವೇ…..! (ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು). ಸುಪ್ರೀಂ ಕೋರ್ಟಿನ ನ್ಯಾಯವಾದಿಗಳುತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ವೃತ್ತಿ:ವಿಜಯಪುರದ ಆಲ್ ಇಂಡಿಯಾ
ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು
ಸಿನಿಮಾ ಸಂಗಾತಿ ಪ್ರಶಾಂತ್ ಬೆಳತೂರು ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊಂದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸುರೇಶ್ ರಾಜಕುಮಾರಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಇದೇ ಮೊದಲ ಬಾರಿಗೆ ಸಿರೈ ಎಂಬ ತಮ್ಮ ಚೊಚ್ಚಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕೆಂಬ ಇಂಗಿತ ಅದು ಬಿಡುಗಡೆಯಾದ ದಿನಗಳಿಂದಲೂ ಇತ್ತು. ಹಾಗಾಗಿ ಈ ಸಿರೈ ಚಿತ್ರದ ಕುರಿತು ಯಾರಾದರೂ ವಿಮರ್ಶೆ ಬರೆಯುತ್ತಾರೋ ಅಥವಾ ಕನಿಷ್ಠ ಮುಖಪುಟದಲ್ಲಿ ಇದರ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಬಹುದೇನೊ ಎಂದು ಆಗಾಗ್ಗೆ ನನ್ನ ಬಿಡುವಿನ ವೇಳೆಯಲ್ಲಿ ಮುಖಪುಟವನ್ನು ಗಮನಿಸುತ್ತಿದ್ದೆ. ಯಾಕೋ ಏನೋ ಈ ಬಾರಿ ಹೆಚ್ಚಿನ ಬರಹಗಳು ದುನಿಯಾ ವಿಜಿ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಕುರಿತೇ ಇದ್ದವು. ಅದನ್ನು ನಾನಿನ್ನೂ ನೋಡದೆ ಇರುವುದರಿಂದ ಅದರ ಕುರಿತು ಈಗ ಮಾತಾಡುವುದು ಥರವಲ್ಲ.ಆದರೆ ಸಿರೈ ಚಿತ್ರದ ಕುರಿತು ಒಂದೆರಡು ಸಣ್ಣ ಟಿಪ್ಪಣಿಗಳಿನ್ನಷ್ಟೇ ಗಮನಿಸಿದ್ದ ನಾನು ಚಿತ್ರದ ಪೋಸ್ಟರ್ ನಲ್ಲಿ ವಿಕ್ರಮ್ ಪ್ರಭುವಿನೊಂದಿಗೆ ಹರೆಯದ ಹೊಸ್ತಿಲಿನ ಮುಗ್ಧ ಮುಖವನ್ನು ಹೊತ್ತಂತೆ ಕಾಣುತ್ತಿದ್ದ ತಮಿಳಿನ ಹೊಸ ಮುಖಗಳಾದ ಎಲ್. ಕೆ ಅಕ್ಷಯ್ ಕುಮಾರ್ ಮತ್ತು ಅನಿಷ್ಮಾ ಅವರನ್ನು ಕಂಡ ಮೇಲೆ ಒಂದು ಭಾನುವಾರ ಇದನ್ನು ಬಿಡುವು ಮಾಡಿಕೊಂಡು ನೋಡಲೆಬೇಕೆಂಬ ಹಟಕ್ಕೆ ಬಿದ್ದು ಸಿನಿಮಾ ನೋಡಿದೆ.ಹೆಚ್ಚಿನ ನಿರೀಕ್ಷೆಯೇನೋ ಇತ್ತು ಆದರೆ ಮಂದಗತಿಯಲ್ಲಿ ಸಾಗುವ ಈ ಸಿನಿಮಾ ಹೆಚ್ಚಿನ ಕುತೂಹಲವನ್ನೇನೂ ಉಂಟು ಮಾಡುವುದಿಲ್ಲ.ಆದರೆ ಸಂಯಮದಿಂದ ತನ್ನೊಳಗನ್ನು ನೋಡಿಸಿಕೊಂಡು ಹೋಗುತ್ತದೆ. 2003 ರಲ್ಲಿ ವೆಲ್ಲೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಳ್ಳುವ ವಿಕ್ರಮ್ ಪ್ರಭುವಿನ ಮೂಲಕ ಕತೆಗೆ ಆರಂಭವನ್ನು ಒದಗಿಸುವ ನಿರ್ದೇಶಕ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ಪೇದೆಗಳನ್ನು ಹೈರಾಣಾಗಿಸುವ ನಿಯಮಗಳು, ಮೇಲಾಧಿಕಾರಿಗಳ ಅಧಿಕಾರದ ಗರ್ವಕ್ಕೆ ಸಹಜವಾಗಿ ತುತ್ತಾಗಿ ಬಿಡುವ ಕೆಳಹಂತದ ಉದ್ಯೋಗಿಗಳಾದ ಪೇದೆಗಳ ತಾಕಲಾಟವನ್ನು ತಣ್ಣಗೆ ತೋರಿಸುತ್ತಲೇ ಇಲ್ಲಿನ ಪೊಲೀಸ್ ಇಲಾಖೆಯನ್ನು ಪರಿಚಯಿಸುವ ನಿರ್ದೇಶಕ ಜೈಲಿನಿಂದ ಕೋರ್ಟಿಗೆ ವಿಚಾರಣೆಗೆ ತೆರಳುವ ವೇಳೆ ದುಷ್ಟ ಅಪರಾಧಿಯೊಬ್ಬ ತನ್ನ ಬೆಂಗಾವಲಿಗಿರುವ ಪೊಲೀಸ್ ಪಡೆಯ ಪೇದೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ಆ ಬೆಂಗಾವಲು ಪಡೆಯಲ್ಲಿದ್ದ ಧೈರ್ಯವಂತ ಅನುಭವಿ ಪೇದೆ ಕಥಿರವನ್ನಿಂದ ಶೂಟೌಟ್ಗೆ ಒಳಪಟ್ಟು ಹತ್ಯೇಗೀಡಾಗುತ್ತಾನೆ. ಆ ಮೂಲಕ ಕಥಿರವನ್ ಹಿನ್ನೆಲೆ, ಪೊಲೀಸ್ ವೃತ್ತಿಯಲ್ಲಿ ಆತನಿಗಿರುವ ನಿಷ್ಠೆ, ಬದ್ದತೆಗಳನ್ನು ಪರಿಚಯಿಸುತ್ತಾ, ಆರ್ ಐ ವಿಚಾರಣೆಯಲ್ಲಿ ಶೂಟೌಟ್ಗೆ ಸಂಬಂಧಪಟ್ಟಂತೆ ಅದನ್ನು ಸಮರ್ಥಿಸಿಕೊಳ್ಳುವ ಕಥಿರವನ್ ಸಂಭಾಷಣೆಗಳು ತುಂಬಾ ಗಟ್ಟಿಯಾಗಿ ಮೂಡಿವೆ.ಸಾಂಸರಿಕವಾಗಿ ಕಥಿರವನ್ ಮತ್ತು ಅವನ ಪತ್ನಿ ಮೇರಿ ಇಬ್ಬರು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಂದು ಸಾಮಾನ್ಯ ಕುಟುಂಬ ಎಂಬುದನ್ನು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದೆ ಅರ್ಥೈಸಿ ಬಿಡುವ ನಿರ್ದೇಶಕ ಕಥಿರವನ್ ಪಾತ್ರದ ಮೂಲಕ ನಮ್ಮನ್ನು ಸಜ್ಜಾಗಿಸುವುದು ತಾನು ಹೇಳಲೊರಡುವ ಮುಖ್ಯ ಕತೆಯ ಎಳೆಗೆ.ವೆಲ್ಲೂರು ಜೈಲಿನಿಂದ ಸಿವಾಗಂಗೈ ಕೋರ್ಟಿಗೆ ವಿಚಾರಣೆಗೆಂದು ವಿಶೇಷ ಬೆಂಗಾವಲು ಪಡೆಗೆ ಮುಖ್ಯ ಪೇದೆಯಾಗಿ ಮೂವರು ತಂಡದೊಂದಿಗೆ ತೆರಳುವ ಕಥಿರವನ್ ವಿಚಾರಣಾ ಖೈದಿಯಾದ ಅಬ್ದುಲ್ ರೌಫ್ನನ್ನು ಬಸ್ಸಿನಲ್ಲಿ ಜೊತೆಗೆ ಕರೆದೊಯ್ಯುವಾಗ ಕಥಾನಾಯಕನ ಬದುಕಿನ ಹಿಂದಿನ ಚಿತ್ರಣ ಅವನ ಕಂಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಿವಾಗಂಗೈನಾ ಹಳ್ಳಿಯೊಂದರಲ್ಲಿ ಕೇರಳದಿಂದ ಬಂದ ಅಬ್ದುಲ್ ಖಾಸಿಂ ಎಂಬ ಒಂದು ಬಡ ಮುಸ್ಲಿಂ ಕುಟುಂಬ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೀರೆ ವ್ಯಾಪಾರ ಮಾಡುತ್ತಾ ಒಂದಷ್ಟು ಮೊತ್ತವನ್ನು ಒಟ್ಟುಗೂಡಿಸಿ ಹಳ್ಳಿಯೊಂದರಲ್ಲಿ ಅಂಗೈ ಅಗಲದ ಜಾಗ ಖರೀದಿಸಿ ಒಂದು ಸಾಧಾರಣ ಮನೆ ಕಟ್ಟಿಕೊಳ್ಳುವ ಮೂಲಕ ಆ ಹಳ್ಳಿಯಲ್ಲಿ ನೆಲೆಯೂರುತ್ತದೆ.ಮುಂದೆ ಅಲ್ಲಿ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ತೆರೆದು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಖಾಸಿಂ ಮರಣವನ್ನು ಹೊಂದುತ್ತಾನೆ. ಆ ನಂತರ ಅದೇ ಹಳ್ಳಿಯಲ್ಲಿ ಬದುಕು ದೂಡುವ ಆತನ ಮಗ ಅಬ್ದುಲ್ ರೌಫ್ ಮತ್ತು ಆತನ ಪತ್ನಿಗೆ ಈ ಅಂಗಡಿಯೇ ಜೀವನಾಧಾರವಾಗಿರುತ್ತದೆ.ಜೊತೆಗೆ ಅಬ್ದುಲ್ ರೌಫ್ ತೊಂಬತ್ತರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳು ಆಗಷ್ಟೇ ಕಣ್ಣು ಬಿಡುತ್ತಿದ್ದ ಕಾಲಮಾನದಲ್ಲಿ ಸಾಮಾನ್ಯವಾಗಿ ಊರಿನ ಹಬ್ಬಹರಿದಿನಗಳಲ್ಲಿ, ಸಾವು -ನೋವುಗಳಲ್ಲಿ ಟಿವಿಗಳ ಮೂಲಕ ಚಲನಚಿತ್ರಗಳನ್ನು ಬಿಡುವುದೆಂದರೆ ಎಲ್ಲರಿಗೂ ಆಗ ಅದೊಂದು ಸಂಭ್ರಮದ ದಿನಗಳಾಗಿತ್ತು.ಹಿರಿಯರು, ವಯಸ್ಸಾದವರು ಭಕ್ತಿಪ್ರಧಾನ, ಸಾಂಸಾರಿಕ ಅರ್ಥಪೂರ್ಣ ಚಿತ್ರಗಳನ್ನು ನೋಡಲು ಬಯಸಿದರೆ ಅಂದಿನ ಯುವವರ್ಗ ಸಾಮಾನ್ಯವಾಗಿ ಪ್ರೀತಿ ಪ್ರೇಮದಂತಹ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿತ್ತು. ಅಬ್ದುಲ್ ರೌಫ್ ತನ್ನ ಹಳ್ಳಿಯಲ್ಲಿ ಅಂಗಡಿಯ ಜೊತೆ ಜೊತೆಗೆ ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ಚಲನಚಿತ್ರಗಳನ್ನು ಬಿಡುವ ಕಾಯಕವನ್ನು ಮಾಡಿಕೊಂಡಿದ್ದು, ತನ್ನ ಎಕ್ಸೆಲ್ ಬೈಕಿನಲ್ಲಿ ಟಿವಿಯನ್ನು, ವಿಡಿಯೋ ಕ್ಯಾಸೆಟ್ಗಳನ್ನು ಊರಿಂದ ಊರಿಗೆ ಹೊತ್ತು ಹೋಗುತ್ತಿದ್ದ. ಇವಿಷ್ಟು ಅಬ್ದುಲ್ ನ ವೃತ್ತಿ ಬದುಕು. ಇಂತಹ ಅಬ್ದುಲ್ ಗೆ ಅದೇ ಹಳ್ಳಿಯ ಕಲೈರಸಿಯ ಮೇಲೆ ಬಾಲ್ಯದಿಂದಲೂ ಒಲವಿರುತ್ತದೆ.ಕಲೈರಸಿಗೂ ಕೂಡ ಅಬ್ದುಲ್ ನ ಮೇಲೆ ಅಷ್ಟೇ ಒಲವು. ಇದು ಅವರ ಹರೆಯ ಕಾಲದಲ್ಲಿ ಮತ್ತಷ್ಟು ಗರಿಗೆದರಿ ತೀರಾ ಹತ್ತಿರಕ್ಕೆ ಕರೆತರುತ್ತದೆ.ಆದರೆ ಆ ಹಳ್ಳಿಯಲ್ಲಿ ಅಬ್ದುಲ್ನದು ಏಕೈಕ ಮುಸ್ಲಿಂ ಕುಟುಂಬ ಮತ್ತು ಕಲೈರಸಿ ಸಾಮಾನ್ಯ ತಳಹಂತದ ಜಾತಿಗೆ ಸೇರಿದವಳಾದರೂ ಆ ಹಳ್ಳಿಯಲ್ಲಿ ಅವಳದು ಸಂಖ್ಯಾತ್ಮಕ ಪ್ರಾಬಲ್ಯವನ್ನು ಹೊಂದಿರುವ ಜಾತಿಯಾಗಿದ್ದ ಕಾರಣ ಇವರಿಬ್ಬರ ಪ್ರೇಮ ಈ ಸಮಾಜಕ್ಕೆ ತಿಳಿಯುತ್ತಿದ್ದಂತೆ ಅದು ತಿಕ್ಕಾಟಕ್ಕೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ ಎಂಬ ಅರಿವು ಆರಂಭದಲ್ಲಿ ಇವರಿಗೆ ಮನವರಿಕೆಯಾದರೂ ಅವರ ಪ್ರೇಮ ಮಾತ್ರ ಮುಂದುವರೆಯುತ್ತದೆ. ಕಲೈರಸಿಯ ಅಕ್ಕ ತನ್ನ ಸೋದರಮಾವನನ್ನೇ ಮದುವೆಯಾದರೂ ಅವನ ದುಶ್ಚಟಗಳಿಂದ ಅತಿರೇಕದ ವರ್ತನೆಗಳಿಂದ ಸಾಂಸಾರಿಕ ಬದುಕಿನಲ್ಲಿ ಇನ್ನಿಲ್ಲದಂತೆ ನರಳುತ್ತಿರುತ್ತಾಳೆ. ಹೀಗಿರುವಾಗ ಕಲೈರಸಿಯ ಅಕ್ಕನ ಗಂಡನಾದ ಪಾಂಡಿ ತನ್ನ ಗೆಳೆಯರೊಂದಿಗೆ ಮಧ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ ಟಿವಿಯೊಂದಿಗೆ ವಿಡಿಯೋ ಕ್ಯಾಸೆಟ್ಗಳನ್ನು ಹೊತ್ತೊಯ್ದ ಅಬ್ದುಲ್ ನನ್ನು ನೀಲಿಚಿತ್ರವೊಂದರ ಕ್ಯಾಸೆಟ್ ಹಾಕುವಂತೆ ಒತ್ತಾಯಪಡಿಸುತ್ತಾನೆ. ಆದರೆ ಅಂತಹ ಯಾವುದೇ ನೀಲಿಚಿತ್ರಗಳ ಕ್ಯಾಸೆಟ್ ತನ್ನ ಬಳಿ ಇಲ್ಲವೆಂದು ಹೇಳುವ ಅಬ್ದುಲ್ ಅದನ್ನು ನಿರಾಕರಿಸುತ್ತಾ ತಾವು ಮಾಲೀಕರೊಂದಿಗೆ ಮಾತಾಡಿಕೊಳ್ಳಿ ಎಂದು ಹೊರಟುಬಿಡುತ್ತಾನೆ. ಇದು ತಮ್ಮ ಮಾತುಗಳಿಗೆ ಸೊಪ್ಪು ಹಾಕದೆ ಸೊಕ್ಕು ತೋರಿಸುತ್ತಿದ್ದಾನೆ ಈ ಸಾಬಿ ನನ್ಮಗ ಎಂದು ಬಗೆಯುವ ಪಾಂಡಿ ಅವನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ.ಆದರೆ ಅದು ಅಲ್ಲಿದ್ದ ಅವನ ಗೆಳೆಯರುಗಳಿಂದ ಅತಿರೇಕಕ್ಕೆ ತಿರುಗದೆ ಶಾಂತವಾಗುತ್ತದೆ.ಅಬ್ದುಲ್ ಹೀಗೆ ತನ್ನದಲ್ಲದ ತಪ್ಪಿನ ವಿಷಯಕ್ಕೆ ತನ್ನ ಮಾವನಿಂದ ಏಟು ತಿಂದ ವಿಚಾರ ಕಲೈರಸಿಗೆ ತಿಳಿಯುತ್ತದೆ. ಇದರಿಂದ ಉರಿದು ಬೀಳುವ ಕಲೈರಸಿಯು ಅಬ್ದುಲ್ ನ ಶಾಂತ ಸ್ವಭಾವವನ್ನು ಕೆಣಕಿ ಮಾತಾಡುತ್ತಾಳೆ. ಊರಿನ ಪುಂಡ ಪೋಕರಿ ನಾಯಿಗಳು ಹೊಡೆದರೆ ಅವರಿಗೆ ತಿರುಗಿಸಿ ಹೊಡೆಯುವ ತಾಕತ್ತಿಲ್ವೇನೋ ನಿನಗೆ ಎಂದು ಜರಿಯುತ್ತಾ ಅವನಿಗೆ ಧೈರ್ಯ ತುಂಬುವವಳು ಇದೇ ಕಲೈರಸಿ. ಹೀಗೆ ಆ ರಾತ್ರಿ ಅವರು ಪರಸ್ಪರ ಮನೆಯಿಂದ ಹೊರಗೆ ಮಾತುಕತೆಯಲ್ಲಿ ತೊಡಗಿದ್ದಾಗ ಕಲೈರಸಿಯ ಮನೆಯಲ್ಲಿ ಜಗಳದ ಸದ್ದು ಕೇಳಿಸುತ್ತದೆ. ಪ್ರತಿನಿತ್ಯ ಕುಡಿದು ಬರುವ ತನ್ನ ಸೋದರಮಾವ ಪಾಂಡಿ ತನ್ನ ಹೆಂಡತಿಯಾದ ಕಲೈರಸಿಯ ಅಕ್ಕನೊಂದಿಗೆ ಮಾತಿಗಿಳಿದಿರುತ್ತಾನೆ. ಉಳಿದರ್ಧ ಭೂಮಿಯನ್ನು ಮಾರಿ ಮಕ್ಕಳಾಗದಿರುವ ತನ್ನ ಹೆಂಡತಿಗೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ ಎನ್ನುವ ಅವನ ಮಾತುಗಳಿಂದ ಆರಂಭವಾಗುವ ಅವರ ಸಂಭಾಷಣೆ ತುಂಬಾ ಸತ್ವಪೂರ್ಣವಾಗಿದೆ. ಮಕ್ಕಳಾಗದಿರಲು ಕೇವಲ ಹೆಣ್ಣನ್ನೇ ಕಾರಣವೆಂದು ನೋಡುವ ಈ ಪುರುಷ ಸಮಾಜ, ಮಕ್ಕಾಳಾಗದಿರಲು ಪುರುಷನ ದೌರ್ಬಲ್ಯಗಳು ಕಾರಣವಾಗುತ್ತವೆ ಎಂಬ ಸತ್ಯವನ್ನು ಮರೆಮಾಚಿ ಸದಾ ಹೆಣ್ಣಿನತ್ತಲೇ ವಕ್ರದೃಷ್ಟಿ ಬೀರುವ ಪುರುಷ ಪ್ರಾಧಾನ್ಯತೆಗೆ ಚಾಟಿ ಬೀಸುತ್ತದೆ. ಪ್ರತಿನಿತ್ಯ ಪುಂಡಪೋಕರಿಗಳೊಂದಿಗೆ ಎಗ್ಗಿಲ್ಲದೆ ಕುಡಿದು, ಒಂದಷ್ಟು ಪೋಲಿ ಚಿತ್ರಗಳನ್ನು ನೋಡಿ ರಾತ್ರಿ ಮನೆಗೆ ಬಂದು ಎರಡು ನಿಮಿಷ ಕೋಳಿ ಕುಕ್ಕುವ ಹಾಗೆ ಕುಕ್ಕಿ ಬಿಟ್ಟರೆ ಮಕ್ಕಾಳಗಲ್ಲ ಮಾರಾಯ ಎಂಬ ತನ್ನ ಹೆಂಡತಿಯ ಮೂದಲಿಕೆಯ ಮಾತುಗಳಿಂದ ರೊಚ್ಚಿಗೇಳುವ ಪಾಂಡಿ ತನ್ನ ಪುರುಷತ್ವವನ್ನು ಅನುಮಾನಿಸಿದಳೆಂಬ ಕಾರಣಕ್ಕೆ ಅವಳನ್ನು ಕೊಂದು ಹಾಕಿಬಿಡುವಷ್ಟು ಕೋಪದಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ಇದರಿಂದ ಅವರ ಕೂಗಾಟಗಳು ಹೆಚ್ಚಿದ್ದರಿಂದ ಕಲೈರಸಿ ಅಬ್ದುಲ್ ನನ್ನು ಹಿತ್ತಾಲಾಚೆಯಲ್ಲಿಯೇ ನಿಲ್ಲಿಸಿ ಮನೆಯೊಳಗೆ ಓಡಿ ಬರುತ್ತಾಳೆ ಜಗಳ ವಿಕೋಪಕ್ಕೆ ತಿರುಗುತ್ತದೆ. ಹೊಡೆದಾಟ ತೀವ್ರವಾಗುತ್ತಿದ್ದಂತೆ ಮನಸ್ಸು ತಾಳಲಾರದೆ ಅಬ್ದುಲ್ ಕಲೈರಸಿಯ ಮನೆಯೊಳಗೆ ಕಾಲಿರಿಸುತ್ತಾನೆ.ಅವರ ಜಗಳವನ್ನು ಬಿಡಿಸುವ ವೇಳೆ ಭರದಲ್ಲಿ ಪಾಂಡಿಯನ್ನು ಅಚಾನಾಕ್ಕಾಗಿ ಕೆಳಗೆ ನೂಕುತ್ತಾನೆ. ಕುಡಿದ ಮತ್ತಿನಲ್ಲಿದ್ದ ಪಾಂಡಿಗೆ ಇದು ಈ ಸಾಬಿಯ ಅತಿರೇಕದ ವರ್ತನೆ ಎನಿಸುತ್ತದೆ. ಯಾರ ಮನೆಗೆ ಯಾರ ಅನುಮತಿಯಿಲ್ಲದೆ ಏಕಾಏಕಿ ಹೀಗೆ ಒಳಗೆ ಬಂದ ಎಂದು ಅವನ ಮೇಲೆ ಎರಗುತ್ತಾನೆ. ಈ ಪೆರುಮಾಳ್ ಮನೆಯಲ್ಲಿನ ಹೊಡೆದಾಟದ ತೀವ್ರತೆಯ ವಿಚಾರ ಚಿಲ್ಲರೆ ಅಂಗಡಿಯಲ್ಲಿ ಕೂತ ಮಾಯಮ್ಮನನ್ನು ಮುಟ್ಟುತ್ತದೆ. ಅವಳು ಆತಂಕದಲ್ಲಿ ಧಾವಿಸಿ ಬರುವಾಗ ದಾರಿಯಲ್ಲಿ ಸಿಗುವ ಮಗ ಅಬ್ದುಲ್ ನ ನೋಡಿ ಅವನ ತಲೆಯಿಂದ ಸೋರುತ್ತಿದ್ದ ರಕ್ತದಿಂದ ಕೆಂಡಾಮಂಡಲವಾಗುವ ಅವಳ ತಾಯಿ ಹೃದಯ ಸುಮ್ಮನಾಗದೆ ಮಗ ಬೇಡವೆಂದರೂ ಅವನ ಕೈ ಹಿಡಿದೆಳೆದು ಪೆರುಮಾಳ್ ಮನೆಯ ಮುಂದೆ ಜಗಳಕ್ಕೆ ಬೀಳುತ್ತಾಳೆ. ಮಾಯಮ್ಮ ತನ್ನ ಮಗನಿಗೆ ಈ ಪರಿ ಹೊಡೆಯಲು ಕಾರಣವೇನು? ತನ್ನ ಮಗನಿನ್ನು ಚಿಕ್ಕವನು. ನಿನ್ನ ಅಳಿಯ ಕುಡಿದಿದ್ದಾನೆ ಎಂದು ಯಾರಿಗೆ ಏನು ಬೇಕಾದರೂ ಮಾಡಬಹುದೇ? ಕುಡಿದಿದ್ದಾನೆ ಎಂದು ಹೆಂಡತಿಗೂ ಮತ್ತೆ ತಾಯಿಗೂ ವ್ಯತ್ಯಾಸ ತಿಳಿಯುವುದಿಲ್ಲವೇ ? ಎಂಬ ಮರ್ಮಾಘಾತುಕ ಮಾತುಗಳನ್ನಾಡುತ್ತಾಳೆ. ಕೈಲಾಗದವನು ಎಂದು ಜರೆಯುತ್ತಾಳೆ ಇದು ಪಾಂಡಿಯ ಗಂಡಸುತನವನ್ನು ಕೆಣಕಿ ಅಬ್ದುಲ್ ನ ತಾಯಿಗೆ ತನ್ನ ಪುರುಷ ಸೂಚ್ಯವಾದ ಮರ್ಮಾಂಗವನ್ನು ಎತ್ತಿ ತೋರಿಸುವ ಉದ್ದಟತನದ ಕೀಳುಮಟ್ಟದ ವರ್ತನೆಗೆ ಇಳಿಯುವುದರಿಂದ ಸಹಜವಾಗಿ ಅಬ್ದುಲ್ ಉದ್ರಿಕ್ತನಾಗಿ ಪಾಂಡಿಯ ಮೇಲೆ ಎರಗುತ್ತಾನೆ. ಈ ಗಲಾಟೆಯಿಂದ ಯಾರಿಗೂ ಅಂತಹ ಅಪಾಯಗಳಾಗದೆ ಇದ್ದರೂ ಆ ರಾತ್ರಿ ಅಬ್ದುಲ್ ನಿಗೆ ತನ್ನ ಮತ್ತು ಕಲೈರಸಿಯ ಪ್ರೇಮ ಮುಂದೆ ತಂದೊಡ್ಡಬಹುದಾದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಆದರೆ ಆ ದಿನ ಅಪರಾತ್ರಿ ದಿಢೀರೆಂದು ಅನಿರೀಕ್ಷಿತವಾಗಿ ಅಬ್ದುಲ್ ನ ಮನೆಗೆ ಕದ್ದು ಭೇಟಿ ನೀಡುವ ಕಲೈರಸಿ ತನ್ನೊಳಗಿರುವ ನೈಜ ಪ್ರೇಮವನ್ನು ಅಬ್ದುಲ್ ನಿಗೆ ಅರ್ಥ ಮಾಡಿಸಲು ಸಫಲಳಾಗುತ್ತಾಳೆ. ತಮ್ಮ ಪ್ರೇಮಕ್ಕೆ ಈ ಸಮಾಜದಲ್ಲಿ ಅಡ್ಡಿ ಆತಂಕಗಳು ತುಂಬಿರುವುದರಿಂದ ಅದನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ಆಲೋಚಿಸಲೊರಡುವ ಅಬ್ದುಲ್ ಈ ಹಳ್ಳಿಯಲ್ಲಿ ತಾನು ತನ್ನ ತಾಯಿ ಕ್ಷೇಮದಿಂದ ಬದುಕಾಬೇಕಾದರೆ ನಿನ್ನ ಪ್ರೇಮವನ್ನು ಮರೆತು ಮುಂದುವರೆಯುವುದು ಅನಿವಾರ್ಯ ಎನ್ನುವ ಹಂತಕ್ಕೆ ಬಂದಾಗ, ತಮ್ಮೊಳಗಿನ ಪ್ರೇಮವನ್ನು ಮತ್ತೆ ಬಡಿದೆಬ್ಬಿಸುವ ಕಲೈರಸಿ ಈ ಜನ ಹೆಚ್ಚೆಂದರೆ ನಮ್ಮನ್ನು ಕೊಲ್ಲಬಹುದು ನಾನು ಅದಕ್ಕೂ ತಯಾರಾಗಿಯೇ ಇರುವೆನು ಎನ್ನುವ ಮೂಲಕ ತನ್ನ ಪ್ರೇಮದ ಗಟ್ಟಿತನವನ್ನು ಸಾರುತ್ತಾಳೆ. ನಿನಗೆ ಭಯವಿದ್ದರೆ ಹೇಳು ಈ ಹಳ್ಳಿಯನ್ನು ತೊರೆದು ಎಲ್ಲಾದಾರೂ ದೂರ ಬದುಕೋಣವೆನ್ನುವ ಕಲೈರಸಿಯ ಮಾತುಗಳು ಅಬ್ದುಲ್ ನನ್ನು ಮತ್ತೆ ಚಿಂತನೆಗೆ ಹಚ್ಚುತ್ತವೆ. ಇವಿಷ್ಟು ಅಬ್ದುಲ್ ನ ಪೂರ್ವಕತೆಯೆಂದು ಅವನೀಗ ಜೈಲಿನಲ್ಲಿ ಐದು ವರ್ಷಗಳನ್ನು ಕಳೆದಿದ್ದು ಇದೀಗ ಕೊಲೆ ಆರೋಪದಲ್ಲಿ ವಿಚಾರಣೆಗೆಂದು ಬೆಂಗಾವಲು ಪಡೆಯೊಂದಿಗೆ ವೆಲ್ಲೂರಿನಿಂದ ದೂರದ ಸಿವಾಗಂಗೈ ಕೋರ್ಟಿಗೆ ತೆರಳುತ್ತಿದ್ದಾನೆಂದು ಅರ್ಥ ಮಾಡಿಸುತ್ತದೆಯಾದರೂ ಒಂದು ಸಣ್ಣ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ.ಹೀಗೆ ಬೆಂಗಾವಲು ಪೊಲೀಸ್ ಪಡೆ ಅಬ್ದುಲ್ ನನ್ನು ಕರೆದೊಯ್ಯುವಾಗ ವಿಲ್ಲುಪುರಂ ಎಂಬ ಸ್ಥಳದಲ್ಲಿ ರಾತ್ರಿ ಊಟಕ್ಕೆ ಬಸ್ಸಿನಿಂದಿಳಿದು ಹೋಟೆಲ್ನಲ್ಲಿ ಊಟ ಮಾಡಿ ವಾಪಾಸ್ಸಾಗುವ ವೇಳೆ ಕಥಿರವನ್
ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು Read Post »
ರತ್ನ ಜಹಗೀರದಾರ್ ಕವಿತೆ “ಸಮ್ಮತ”
ಕಾವ್ಯ ಸಂಗಾತಿ ರತ್ನ ಜಹಗೀರದಾರ್ “ಸಮ್ಮತ” ಮುಗಿಲ ಮಾಳಿಗೆಗೆ ನಕ್ಷತ್ರಗಳೇ ಮಾಲಿಕೆಗಳುಕಡಲ ಸೆಳೆತಕೆ ಅಬ್ಬರಿಸುವ ಅಲೆಗಳುಸವಿಜೇನು ಸುರಿದಂತೆ ನೀನಾಡುವ ಮಾತುಗಳುಹೃದಯ ಮೀಟಿದೆ ವೈನಿಕನಂತೆ ಒಲವಿನೊಳು ಮನದಲಿ ಹಚ್ಚಿದನು ಪ್ರೀತಿಯೆಂಬ ದೀಪವನುಅದ್ಯಾವಾಗಲೋ ಕದ್ದುಬಿಟ್ಟ ನನ್ನಯ ಹೃದಯವನುನಗುವಿನಲೆ ಸೆಳೆಯುವ ಚಲುವ ನನ್ನವನುಜನುಮದಲಿ ಬಿಟ್ಟಿರದ ಅನುಬಂಧದ ಬೆಸುಗೆಯನು ನೀನಾಗು ಆಸರೆ ಬದುಕೆಂಬ ಪಯಣದಲಿಹೊಂದಿಕೊಂಡು ಸಾಗುವ ನಮ್ಮಿರ್ವರ ಸಂಬಂಧದಲಿಕಷ್ಟಗಳ ಕಡೆಗಣಿಸಿ ಪರಿಹರಿಸುವನು ಧೈರ್ಯದಲಿಹೆಮ್ಮರಕೆ ತಬ್ಬಿಕೊಂಡ ಬಳ್ಳಿಯಂತೆ ಪ್ರೇಮದಲಿ ದುರ್ಗುಣಗಳಿಲ್ಲದ ಎಲ್ಲರ ಮೆಚ್ಚಿನ ಹೃದಯವಂತಸದ್ಗುಣಗಳೇ ತುಂಬಿರುವ ವಿಶಿಷ್ಟತೆಯ ಗುಣವಂತಸಂಪತ್ತು ಆಶಾಶ್ವತವೆಂದು ತಿಳಿದಿರುವ ಹಣವಂತಅನ್ಯೋನ್ಯತೆಯ ದಾಂಪತ್ಯಕೆ ನೀನಾದೆನಗೆ ಸಮ್ಮತ ರತ್ನ ಜಹಗೀರದಾರ
ರತ್ನ ಜಹಗೀರದಾರ್ ಕವಿತೆ “ಸಮ್ಮತ” Read Post »
ಅನ್ನಪೂರ್ಣ ಸಕ್ರೋಜಿ ಪುಣೆ “-ಜೋಗದ ಬೆಳಕಿನ ಸಿರಿ”
ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ ಜೋಗದ ಬೆಳಕಿನ ಸಿರಿ” ಜೋಗದ ಸಿರಿ ಬೆಳಕಿನಲ್ಲಿಬೆಳಗಿದ ಕವಿ ಹೃದಯ|ಜೀವ ಹೂವಾಗಿ ನಗಿಸುತಸ್ಪಂದಿಸಿದ ವಿಸ್ಮಯ|| ಪ್ರಶಸ್ತಿಗಳ ಸರಮಾಲೆಯಲ್ಲಿಶೋಭಿವಂತ ನಿಸಾರ್|ವೈಚಾರಿಕ ಲೇಖನಗಳಲ್ಲಿಖ್ಯಾತಿ ಅಹ್ಮದ್ ಸರ್|| ಜಾತ್ಯಾತೀತರಾಗಿ ಬಾಳಿದಶರಣಗುಣದವರು|ಭಗವದ್ಗೀತೆ ವಚನಗಳ ಹೇಳಿಕೊಂಡಾಡಿದವರು|| ಪ್ರಕೃತಿಯ ಸೌಂದರ್ಯದಪ್ರೇಮದ ಆರಾಧಕರು|ಶಾಲೆಗಳಲ್ಲಿ ಎಲ್ಲರ ಪ್ರೀತಿಯಮೆಚ್ಚಿನ ಅಧ್ಯಾಪಕರು|| ಕಾಲೇಜುಗಳಲ್ಲಿ ನಲ್ಮೆಯಒಲವಿನ ಪ್ರಾಧ್ಯಾಪಕ|ಸಂವೇದನಾಶೀಲ ಕವಿಗಳಹೃದಯದ ನಾಯಕ|| ವಿವೇಕ ವೈಚಾರಿಕ ಕೃತಿಗಳವಿಶಿಷ್ಟ ಲೇಖಕರು|ಲಕ್ಷಗಟ್ಟಲೆ ಅಭಿಮಾನಿಗಳನಿಷ್ಕಲ್ಮಷ ಮಾಲಕರು|| ನಿತ್ಯೋತ್ಸವ ಆರತಿ ಬೆಳಗಿದಕನ್ನಡಮ್ಮನ ಐಸಿರಿ|ಕನ್ನಡಿಗರ ಮನ ಮನೆಗಳಲ್ಲಿಜೋಗದ ಬೆಳಕಿನ ಸಿರಿ|| ಕುರಿಗಳು ಸಾರ್ ಕುರಿಗಳುಕುರುಡು ಅನುಕರಣೆ|ಸಾಮಾಜಿಕ ಕಳಕಳಿಯ ಗೀತೆಜನರಿಗೆ ಆಕರ್ಷಣೆ|| ಸಂವೇದನಾಶೀಲ ಕವಿಗೆಸ್ಪಂದನದ ನಮನ|ನಿತ್ಯೋತ್ಸವ ನಿಸರ್ಗ ಕವಿಗೆತಲೆಬಾಗಿ ನಮನ|| ಅನ್ನಪೂರ್ಣ ಸಕ್ರೋಜಿ ಪುಣೆ
ಅನ್ನಪೂರ್ಣ ಸಕ್ರೋಜಿ ಪುಣೆ “-ಜೋಗದ ಬೆಳಕಿನ ಸಿರಿ” Read Post »









