ಒಬ್ಬ ಅಮ್ಮನ ಕಥೆ-109
ರುಕ್ಮಿಣಿ ನಾಯರ್
“ಕಲ್ಯಾಣವೆಂಬ ಪ್ರಣತಿ; ಬಿಂಬ-ಪ್ರತಿಬಿಂಬ” ಡಾ. ಪುಷ್ಪಾವತಿ ಶಲವಡಿಮಠ
ವಚನ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಕಲ್ಯಾಣವೆಂಬ ಪ್ರಣತಿ; ಬಿಂಬ-ಪ್ರತಿಬಿಂಬ” ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡುಬದುಕಿದೆನು ಕಾಣಾ ಸಿದ್ಧರಾಮಯ್ಯಾ.… … ವ್ಯೋಮಕಾಯ ಅಲ್ಲಮ ಪ್ರಭುಗಳು. ಕಲ್ಯಾಣವನ್ನು ಅವಿಮುಕ್ತ ಕ್ಷೇತ್ರವನ್ನಾಗಿಸಿದ ಬಸವಣ್ಣನವರನ್ನು ಜ್ಞಾನ ವೈರಾಗ್ಯನಿಧಿ ಅಲ್ಲಮ ಪ್ರಭುಗಳು ಗುಹೇಶ್ವರ ಲಿಂಗದಲ್ಲಿ ದರ್ಶಿಸುತ್ತಾರೆ. ಶಿವಯೋಗಿ ಸಿದ್ಧರಾಮೇಶ್ವರರನ್ನು ಉದ್ದೇಶಿಸಿ ಹೇಳಿದ ಮಾತು “ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ” ಎನ್ನುವುದು ಇಡೀ ವಚನ ಚಳುವಳಿಯ ನೇತಾರರಾದ ಬಸವಣ್ಣನವರನ್ನು ಕೇಂದ್ರೀಕರಿಸಿಕೊಳ್ಳುತ್ತಾ ಅವರ ಬಹುಮುಖ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂತಿದೆ ಅಲ್ಲಮ ಪ್ರಭುಗಳ ಈ ವಚನ. ಕಲ್ಯಾಣವೆಂಬುದು ಶುಭಕರ, ಮಂಗಳಕರ, ಶ್ರೇಯಸ್ಕರ, ಒಳಿತು, ಹಿತ ಎಂಬೆಲ್ಲ ಅರ್ಥಗಳಿಗೆ ನೆಲೆಯಾಗಿದೆ. ಕಲ್ಯಾಣವೆಂಬುದು ಕಲ್ಲು-ಮಣ್ಣುಗಳಿಂದ ಕಟ್ಟಿದ ಒಂದು ರಾಜ್ಯವಲ್ಲ. ದಯೆ, ಕರುಣೆ, ಪ್ರೀತಿ, ವಾತ್ಸಲ್ಯ, ಮಮತೆ ಮತ್ತು ಮಾನವೀಯತೆ ಎಂಬ ಹೃದಯ ರಸ ಬಸಿದು ಕಟ್ಟಿದಂಥ ಅಪರೂಪದಲ್ಲಿ ಅಪರೂಪದ ಸಾಮ್ರಾಜ್ಯ. ಕಲ್ಲು-ಮಣ್ಣುಗಳಿಂದ ಕಟ್ಟಿದ ಸಾಮ್ರಾಜ್ಯ ಕೆಡುವಂತಹದ್ದು. ಹೀಗಾಗಿ ಕಲ್ಯಾಣವೆಂಬುದು ಎರಡು ಅರ್ಥಗಳಲ್ಲಿ ನಿರೂಪಣೆಯಾಗುವ ರಾಜಧಾನಿ. ಒಂದು ಅರಸೊತ್ತಿಗೆಯ ಅರಸ ಬಿಜ್ಜಳನ ಕಲ್ಯಾಣ. ಮತ್ತೊಂದು ಭಕ್ತಿಯ ಬೆಳಸನ್ನು ಮಾನವ ಧರ್ಮವೆಂಬ ಭೂಮಿಯಲ್ಲಿ ಹುಲುಸಾಗಿ ಬೆಳೆಸಿದ ಸಾಮಾನ್ಯ ಭಕ್ತ ಕಟ್ಟಿದ ಕಲ್ಯಾಣ, ಅದುವೇ ಬಸವ ಕಲ್ಯಾಣ. ಬಿಜ್ಜಳನ ಕಲ್ಯಾಣಕ್ಕೆ ಯಾರು ಬೇಕೋ ಅವರು ಹೋಗಬಹುದಿತ್ತು ಬರಬಹುದಿತ್ತು. ಆದರೆ, ಬಸವ ಕಲ್ಯಾಣಕ್ಕೆ ಅಷ್ಟು ಸುಲಭವಾಗಿ ಹೋಗಲು ಅಸಾಧ್ಯವಾಗಿತ್ತು. ಬಿಜ್ಜಳನ ಕಲ್ಯಾಣವನ್ನು ಸುಲಭವಾಗಿ ಕೆಡವಬಹುದಿತ್ತು. ಆದರೆ ಬಸವ ಕಲ್ಯಾಣವನ್ನು ಅಷ್ಟು ಬೇಗ ಕೆಡವಲು ಆಗದು. ಸುಲಭವಾಗಿ ಪ್ರವೇಶಿಸಲೂ ಆಗದು. ಇದನ್ನೇ ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ ಸ್ಪಷ್ಟಪಡಿಸುತ್ತಾರೆ. ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?ಹೊಗಬಾರದು, ಅಸಾಧ್ಯವಯ್ಯಾ.ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು. ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು? (ಯಾರು ಪ್ರವೇಶಿಸಬಹುದು?) ಎಂಬುದೇ ಅಕ್ಕಮಹಾದೇವಿಯವರ ಮುಖ್ಯ ಪ್ರಶ್ನೆ. ಈ ಪ್ರಶ್ನೆಯೇ ಆತ್ಮ ಜಾಗೃತಿಗೆ ಕೊಟ್ಟ ಕರೆಯಂತಿದೆ. ಯಾರಿಗೆ ಆಸೆ-ಆಮಿಷದಿಂದ ದೂರವಿರಲು ಸಾಧ್ಯವಿಲ್ಲವೋ ಅಂಥವರಿಗೆ ಕಲ್ಯಾಣದ ಪ್ರವೇಶ ಅಸಾಧ್ಯ. ಒಳಗಿನಿಂದಲೂ – ಹೊರಗಿನಿಂದಲೂ ಅಂದರೆ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಲ್ಲದವರಿಗೆ ಕಲ್ಯಾಣವನ್ನು ಪ್ರವೇಶಿಸುವುದು ಅಸಾಧ್ಯ. ನೀನು-ನಾನು ಎಂಬ ಉಭಯ ಭಾವವನ್ನು ಇನ್ನೂ ಯಾರಿಗೆ ಹರಿದೊಗೆಯಲು ಸಾಧ್ಯವಿಲ್ಲವೋ ಅಂಥವರಿಗೂ ಕಲ್ಯಾಣವನ್ನು ಪ್ರವೇಶಿಸಲು ಅಸಾಧ್ಯ. ನಾನು ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಕಾರಣ ನಾನು-ನೀನು ಎಂಬ ದ್ವೈತದಿಂದ ಅದ್ವೈತ ಭಾವ (ಉಭಯ ಲಜ್ಜೆಯಳಿದೆನಾಗಿ) ಹೊಂದಿದೆನಾಗಿ ಕಲ್ಯಾಣದ ಒಳಗೆ ಪ್ರವೇಶ ಪಡೆಯಲು ನನ್ನಿಂದ ಸಾಧ್ಯವಾಯಿತು ಎಂದು ಅಕ್ಕಮಹಾದೇವಿಯವರು ಹೇಳುವಲ್ಲಿ ಕಲ್ಯಾಣದ ಪ್ರವೇಶ ಆತ್ಮ ಕಲ್ಯಾಣವಾಗಿ ಪರಿವರ್ತಿತವಾಗುವುದರ ಸ್ಪಷ್ಟ ಚಿತ್ರಣವಾಗಿದೆ. ಶ್ರೀ. ಮಹಾಂತಪ್ಪ ನಂದೂರ ಅವರ “ಕಲ್ಯಾಣವೆಂಬ ಪ್ರಣತಿ” ನಿರ್ಮಾಣಕ್ಕೂ ಅದರ ಒಳಗಿನ ಪ್ರವೇಶಕ್ಕೂ ಆತ್ಮ ಕಲ್ಯಾಣವೆಂಬುದೇ ಸೇತುವೆಯಾಗಿದೆ. ಹೌದು ಶ್ರೀ ಮಹಾಂತಪ್ಪ ನಂದೂರ ಅವರು ಅರವತ್ಮೂರು ಶರಣರ ಸಚ್ಚಾರಿತ್ರ ದರ್ಶನ ಮಾಡಿ ಆತ್ಮ ಕಲ್ಯಾಣ ಕೈಗೊಂಡಿದ್ದರೆ, ಕೃತಿ ಓದಿ ಪುನೀತನಾದ ಸಹೃದಯವೂ ಆತ್ಮ ಕಲ್ಯಾಣ ಹೊಂದುವುದರಲ್ಲಿ ಎಡರು ಮಾತಿಲ್ಲ. ಇದೊಂದು ಕರ್ಪೂರದ ಬೆಳಕನ್ನು ಕಾಣುವ ಪರಿ. ಲೇಖಕನನ್ನಾವರಿಸಿದ ಶರಣರ ಬೆಳಕು ಸಹೃದಯನ ಆತ್ಮಕ್ಕೂ ಹರಿದು ಬರುವ ಪರಿಯು ಆತ್ಮ ಕಲ್ಯಾಣದ ಬೆಳಕು. ಇಂತಹ ಕಲ್ಯಾಣವೆಂಬ ಪ್ರಣತೆಯಲ್ಲಿ ಬೆಳಗಿದ ಬಸವಾದಿ ಶರಣರ ಮಹಾ ಬೆಳಕಿನಲ್ಲಿ ಮಿಂದೇಳುವ ಸೌಭಾಗ್ಯ ಈ ಕೃತಿಯಿಂದ ದೊರಕೊಳ್ಳುವುದರಿಂದ “ಕಲ್ಯಾಣವೆಂಬ ಪ್ರಣತಿ” ಎಂಬ ಶಿರೋನಾಮೆ ಇಲ್ಲಿ ಸಾರ್ಥಕತೆ ಪಡೆದುಕೊಂಡಿದೆ. “ಕಲ್ಯಾಣವೆಂಬ ಪ್ರಣತಿ” ಶ್ರೀ ಮಹಾಂತಪ್ಪ ನಂದೂರ ಅವರ ವಿನೂತನ ಕಾವ್ಯ ಪ್ರಯೋಗ. ಆಧುನಿಕ ವಚನಗಳ ರಚನೆಯ ಈ ಕಾಲಘಟ್ಟದಲ್ಲಿ ಕಲ್ಯಾಣದ ಶರಣ ದೀಪಗಳನ್ನು ಸಾನೆಟ್ (ಅಷ್ಟಷಟ್ಪದಿ) ಎಂಬ ಕಾವ್ಯ ರೂಪದಲ್ಲಿ ಬೆಳಗಿಸಿದ ರೀತಿ ಅನನ್ಯವೂ ವಿನೂತನವೂ ಆಗಿದೆ. ಸಾನೆಟ್ ಪಾಶ್ಚಾತ್ಯ ಸಾಹಿತ್ಯದ ಕಾವ್ಯ ರೂಪವಾಗಿದ್ದರೂ ಶ್ರೀ ಮಹಾಂತಪ್ಪ ನಂದೂರ ಅವರ ಪ್ರತಿಭಾ ಕುಲುಮೆಯಲ್ಲಿ ಕನ್ನಡದ ರೂಪ ಧರಿಸಿದ್ದು ಅನುಪಮವಾಗಿದೆ. ಅಷ್ಟಷಟ್ಪದಿ ಅಥವಾ ಸುನೀತ ಎಂದು ಕರೆಯಲ್ಪಡುವ “ಸಾನೆಟ್” ಇಟಲಿಯ ಸಾಹಿತ್ಯದ ಒಂದು ಪ್ರಕಾರ. ಅದು ಇಂಗ್ಲೀಷ್ ಭಾಷೆಗೆ ಭಾವಗೀತೆಯ ರೂಪದಲ್ಲಿ ಸಾಗಿ ಬಂದಿತು. ಇಂಗ್ಲೀಷ್ ಸಾಹಿತ್ಯದಲ್ಲಿ ಇದನ್ನು 15 ನೇ ಶತಮಾನದಲ್ಲಿ ಸರ್ ಥಾಮಸ್ ವ್ಯಾಟ್ (1503-1542), ಹೆನ್ರಿ ಹಾವರ್ಡ್ (1516–1547) ಪ್ರಾರಂಭದಲ್ಲಿ ಬಳಸಿಕೊಂಡ ಪಾಶ್ಚಾತ್ಯ ಕವಿಗಳು. ಇದನ್ನು ಅತ್ಯಂತ ಜನಪ್ರಿಯಗೊಳಿಸಿದವನು ವಿಲಿಯಂ ಷೇಕ್ಸ್ಪಿಯರ್ (1564–1616). ಈತ ಸುಮಾರು 154 ಸಾನೆಟ್ ಗಳನ್ನು ರಚಿಸಿದ್ದಾನೆ. ಕನ್ನಡದಲ್ಲಿ ಅಷ್ಟಷಟ್ಪದಿ ಎಂದು ಕರೆಸಿಕೊಳ್ಳುವ ಈ ಪ್ರಕಾರವು ಒಟ್ಟು ಹದಿನಾಲ್ಕ ಪಂಕ್ತಿಯ ಕವನ. ಪ್ರತೀ ಸಾಲಿನಲ್ಲಿಯೂ ಹತ್ತು ಅಕ್ಷರಗಳಿರುತ್ತವೆ. ಇಲ್ಲಿ ಮೊದಲು ಎಂಟು ಪಂಕ್ತಿ (ಸಾಲುಗಳು) ಒಂದು ಭಾಗವಾದರೆ ಉಳಿದ ಆರು ಪಂಕ್ತಿ (ಸಾಲುಗಳು) ಇನ್ನೊಂದು ಭಾಗವಾಗಿರುತ್ತದೆ. ಪ್ರಾರಂಭದ ಎಂಟು ಸಾಲುಗಳಲ್ಲಿ ಒಂದು, ನಾಲ್ಕು, ಐದು ಮತ್ತು ಎಂಟನೇಯ ಸಾಲುಗಳಿಗೆ ಪ್ರಾಸವಿರುತ್ತದೆ. ಎರಡು, ಮೂರು, ಆರು, ಏಳು ಸಾಲುಗಳಿಗೆ ಸಮಾನ ಪ್ರಾಸವಿರುತ್ತದೆ. ಉಳಿದ ಆರು ಸಾಲುಗಳಲ್ಲಿ ಪ್ರಾಸದಲ್ಲಿ ವ್ಯತ್ಯಾಸವಾಗಬಹುದು. ಎಂಟನೇಯ ಸಾಲಿನಿಂದ ಒಂಭತ್ತನೇಯ ಸಾಲಿಗೆ ಸಾಗುವಾಗ ಭಾವಾಭಿವ್ಯಕ್ತಿ ತಿರುವು ಪಡೆಯುತ್ತದೆ. ಹೀಗೆ ಅಷ್ಟಷಟ್ಪದಿಯಲ್ಲಿ ರಚನೆಯಾದ ಕಾವ್ಯವು ಭಾವ ಪ್ರಕಟಣೆಗೆ ಹೆಚ್ಚು ಒತ್ತು ನೀಡುತ್ತದೆ. ಮೊದಲ ನಾಲ್ಕು ಸಾಲುಗಳು ಒಂದು ಭಾವವನ್ನು ಹೇಳುತ್ತವೆ. ಇದನ್ನು ಕ್ರಮವಾಗಿ ಎರಡು ಮತ್ತು ಮೂರನೇಯ ಚೌಪದಿಗಳು ಮುಂದೆ ಕೊಂಡೊಯ್ಯುತ್ತಾ ಉತ್ಕಟ ಭಾವವನ್ನು ಪ್ರಕಟಗೊಳಿಸುತ್ತವೆ. ಕೊನೇಯ ದ್ವಿಪದಿ (ಎರಡು ಸಾಲುಗಳು) ಗಳು ಒಟ್ಟು ಭಾವವನ್ನು ಸಂಗ್ರಹಿಸಿ ಮನಸ್ಸಿಗೆ ಪರಿಣಾಮಕಾರಿ ಚಿತ್ರಣವನ್ನು ಮೂಡಿಸುತ್ತದೆ. ಕನ್ನಡದಲ್ಲಿ ಸುನೀತ ಪ್ರಕಾರದಲ್ಲಿ ಮೊದಲು ಪ್ರಯೋಗ ಮಾಡಿದವರು ಗೋವಿಂದ ಪೈ ನಂತರ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ದ. ರಾ. ಬೇಂದ್ರೆ, ತೀ. ನಂ. ಶ್ರೀಕಂಠಯ್ಯ, ಪು. ತಿ. ನರಸಿಂಹಾಚಾರ್, ವಿ. ಕೃ. ಗೋಕಾಕ್, ವೀ. ಸೀತಾರಾಮಯ್ಯ ಮುಂತಾದವರು. ಮಾಸ್ತಿಯವರ “ಮಲಾರ” ಕುವೆಂಪು ಅವರ “ಕೃತ್ತಿಕೆ” ಈ ಪ್ರಕಾರದ ಪ್ರಸಿದ್ಧ ಸಂಕಲನಗಳು. ಇಂಥ ವಿಶಿಷ್ಟ ಪ್ರಕಾರದಲ್ಲಿ ಶ್ರೀ ಮಹಾಂತಪ್ಪ ನಂದೂರ ಅವರು ಅರವತ್ಮೂರು ಶರಣರ ಸಚ್ಚಾರಿತ್ರವನ್ನು ಕಟ್ಟಿ ಕೊಟ್ಟಿದ್ದು ನಿಜಕ್ಕೂ ಸಾಹಸವೇ ಸರಿ. ಶ್ರೀ ಮಹಾಂತಪ್ಪ ನಂದೂರ ಅವರ ಅಷ್ಟಷಟ್ಪದಿಯಲ್ಲಿರುವ ಒಂದು ಸುನೀತದ ಮಾದರಿಯ ಜೊತೆಗೆ ನಂದೂರ ಅವರ ಕಾವ್ಯ ಶಕ್ತಿ, ಭಾಷಾ ಕೌಶಲ್ಯ ಮತ್ತು ಅಭಿವ್ಯಕ್ತಿ ವಿಧಾನವನ್ನು ದರ್ಶಿಸೋಣ. ಸಮರತಿಯ ಆಯ್ದಕ್ಕಿ ಮಾರಯ್ಯ:ಹಕ್ಕಿ ನಿತ್ಯ ಹಾರುತ್ತ ತನ್ನಂದಿನ ಕಾಳು ಕಡ್ಡಿಯರಸಿ ನೀಗಿಸಿಕೊಳುವಂತೆ ಹಸಿವು; ಹಾರುವ ಹರವು ತೋರುವುದು ಅರಿವು!ಹಾರದಿದ್ದರೆ ಹಕ್ಕಿ ಹಾಡಿಗೆ ದನಿಯಿಲ್ಲ, ಹಾರುವುದು ಹಕ್ಕಿ ಕಾಯಕವೇ?ಹಸಿದ ಹಾದಿಯಲ್ಲಿ ಮಾರಯ್ಯ ಅಕ್ಕಿಯಾಯುವುದು ಅನ್ನಕ್ಕೆ ಅನ್ಯದಾರಿಯಿಲ್ಲದೆ ವರ್ಣಸಂಕೋಲೆಯ ಕೂಲಿ! ಊರ ಮಾರಿಯ ಪಾಶ ಹರಿದುಅನ್ನಪೂರ್ಣೆ ಅಕ್ಕಮ್ಮಳ ವರಿಸಿದಾಗ ಕಲ್ಯಾಣ ಕಣ್ಣೆದುರಿಗಿತ್ತು. ಸತಿ-ಪತಿಒಮ್ಮನದ ಬದುಕೇ ಭಕ್ತಿ. ಮಹಾ ಮನೆಯ ಬೆಳಕಲ್ಲಿ ಸರಿಸಮ, ಸಮರತಿ,“ಲಕ್ಕಾ” ಎನುವ ಎದೆಯ ನಾದ; ಒಲವ ಸತಿ, ಗುರುವಾಗಿ ಇಮ್ಮನದ ಆಸೆಗೆ, ಕಲ್ಯಾಣದ ಕಣದಲ್ಲಿ ಕಾಳು-ಬಾಳು ಹಾಳಾಗಬಾರದು. ಆಳು-ಅರಸಂಗೂ ಸಂಜೀವವದು. ಅಕ್ಕಿಯಾಯುವುದು ಭಕ್ತಿ, ನಿತ್ಯದಾನಂದ ಕಾಯಕಧ್ಯಾನದಂಬಲಿ ಮಾಡಿ ದಾಸೋಹಂಗೈಯುವುದು ಬಾಳ ಚೋದಕಅನುರಣಿಸಿತ್ತು ಕಾಯಕ ಅನುಭವ ಮಂಟಪದಲ್ಲಿ ಅಲ್ಲಮನ ಮುದ್ರೆ “ಕಾಯಕದಲಿ ನಿರತನಾದಡೆ ಗುರುದರುಶನವಾದಡೂ ಮರೆಯಬೇಕು, ಕಾಯಕವೇಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳು” ಸುನೀತದ ನಿಯಮಕ್ಕೊಳಪಟ್ಟ ಈ ಕವನ ಶರಣ ಆಯ್ದಕ್ಕಿ ಮಾರಯ್ಯನವರ ಇಡೀ ಚರಿತ್ರೆಯೇ ಹದಿನಾಳ್ಕು ಸಾಲುಗಳಲ್ಲಿ ದಾಖಲಾದ ಚಮತ್ಕೃತಿ ಇದು. ಎಂಟು ಸಾಲುಗಳು ಪ್ರತ್ಯೇಕ, ನಾಲ್ಕು ಸಾಲಿನ ಚೌಪದಿ, ಕೊನೇಗೆ ದ್ವಿಪದಿಗಳು. ಅಕ್ಕಿ ಆಯುವ ಮಾರಯ್ಯನಿಗೆ ಅಕ್ಕಿ ಆಯುವುದು ಅನ್ನದ ಪ್ರಾಮಾಣಿಕ ದಾರಿ. ಅನ್ನಪೂರ್ಣೆ ಅಕ್ಕಮ್ಮ (ಲಕ್ಕಮ್ಮ) ಸತಿಯಾಗಿ ಬಂದಳು. ಇವಳು ಒಲವ ಸತಿಯಾಗಿ ಗುರುವಾದಳು. ಮಾರಯ್ಯನವರ ಇಮ್ಮನದ ಆಸೆಗೆ ನಿಜ ನೆಲೆಯ ತೋರಿದ ಗುರುತಾಯಿ ಅವಳು, ಎಂದು ಸತಿ-ಪತಿಗಳ ಧರ್ಮಯುತ ದಾಂಪತ್ಯ ಚಿತ್ರಿಸುವ ಕವಿ ಆಯ್ದಕ್ಕಿ ಲಕ್ಕಮ್ಮಳ “ಅಸಂಗ್ರಹ ನೀತಿ” ಯನ್ನು ಪ್ರತಿಪಾದಿಸುವ ರೀತಿ ಅನನ್ಯವಾಗಿದೆ. ಶರಣೆ ಲಕ್ಕಮ್ಮಳ ಈ ತತ್ವ ಕಲ್ಯಾಣದ ಕಣದಲ್ಲಿ ಕಾಳು-ಬಾಳು ಹಾಳಾಗಬಾರದು ಎಂಬುದರತ್ತ ವಿಸ್ತರಿಸಿಕೊಳ್ಳುತ್ತದೆ. ಆಳು-ಅರಸ ಯಾರಾದರೂ ಸರಿ ಈ ತತ್ವದಡಿಯಲ್ಲಿ ಬದುಕಬೇಕೆಂಬುದು ನೀತಿಯ ಅಭಿವ್ಯಕ್ತಿ ಇಲ್ಲಿ ಅನುಪಮವಾಗಿದೆ. ಕೊನೇಯಲ್ಲಿ ದ್ವಿಪದಿಗಳು ಮಾರಯ್ಯನವರ ಕಾಯಕದ ಆದರ್ಶವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಶರಣರಾದ ಆಯ್ದಕ್ಕಿ ಮಾರಯ್ಯನವರ ವಚನವನ್ನು ಬಳಸಿಕೊಂಡು ಕವಿ ಈ ದ್ವಿಪದಿಗಳ ಮೂಲಕ ಉದಾತ್ತವಾದ ಭಾವವನ್ನು ಓದುಗರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಶ್ರೀ ಮಹಾಂತಪ್ಪ ನಂದೂರ ಅವರ ಅರವತ್ಮೂರು ಶರಣರ ಸರಿ ಸುಮಾರು ಎಪ್ಪತೈದು ಸುನೀತಗಳು ತುಂಬಾ ಶ್ರದ್ಧೆ ನಿಷ್ಠೆಯಿಂದ ಮೂಡಿ ಬಂದಿವೆ. ಒಂದು ಶರಣ ಜೀವ ಶರಣರ ಜೀವನ ರಚಿಸುತ್ತಾ ಧನ್ಯತೆ ಪಡೆದುಕೊಳ್ಳುವುದನ್ನು ಈ ಕೃತಿ ಓದಿದಾಗಲೇ ತಿಳಿಯುವುದು. ಹೆಂಡದ ಮಾರಯ್ಯ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಮಡಿವಾಳ ಮಾಚಿದೇವರು, ಹಾವಿನಹಾಳ ಕಲ್ಲಯ್ಯ, ಒಕ್ಕಲಿಗ ಮುದ್ದಣ್ಣ, ಕನ್ನದ ಮಾರಿತಂದೆ, ಅದ್ವೈತಿ ಚಂದಿಮರಸ, ಅರಿವಿನ ಚೇತನ ಕಿನ್ನರಿ ಬ್ರಹ್ಮಯ್ಯ, ಮಹಾಪ್ರಸಾದಿ ಬಿಬ್ಬಿ ಬಾಚಯ್ಯ, ಹಡಪದ ಅಪ್ಪಣ್ಣ, ವೈದ್ಯ ಸಂಗಣ್ಣ, ಬೊಂತಾದೇವಿ, ಗೋರಕ್ಷ, ಮುಗ್ಧ ಪೆದ್ದಣ್ಣ ಉರಿಲಿಂಗಪೆದ್ದಿ, ಹರಳಯ್ಯ, ಮಧುವರಸ-ಮಧುವಯ್ಯ, ದುಗ್ಗಳೆ, ಮೇದಾರ ಕೇತಯ್ಯ, ಘಟ್ಟಿವಾಳಯ್ಯ, ಕೀಲಾರದ ಭೀಮಣ್ಣ ಹೀಗೆ ಒಟ್ಟು ಅರವತ್ಮೂರು ಶಿವ-ಶರಣರ ಕಥೆ ಓದುಗರ ಗಮನ ಸೆಳೆಯುತ್ತದೆ. ಅಕ್ಕಮಹಾದೇವಿಯವರ ಕುರಿತು ಎರಡು, ಅಲ್ಲಮ ಪ್ರಭುಗಳ ಕುರಿತು ಎರಡು, ಸಿದ್ಧರಾಮರ ಕುರಿತು ಎರಡು, ವಿಶ್ವಗುರು ಬಸವಣ್ಣನವರನ್ನು ಕುರಿತು ಐದು, ಕಲ್ಯಾಣ ಕ್ರಾಂತಿ-ಪರಿಣಾಮ ಕುರಿತು ಒಂದು ಸುನೀತಗಳು ವಿಶಿಷ್ಟವಾಗಿ ರಚಿತಗೊಂಡಿವೆ. ಹನ್ನೆರಡನೇ ಶತಮಾನದ ಶಿವ-ಶರಣರ ಬದುಕಿನ ತಂಗಾಳಿ ಇಲ್ಲಿ ತೀಡಿದೆ. ಶರಣ ಮೌಲ್ಯವೆಂಬ ನದಿ ಜುಳು ಜುಳು ಸದ್ದಿಲ್ಲದೆ ಇಲ್ಲಿ ಹರಿದಿದೆ. ಕಾವ್ಯ ಭಾಷೆಯಂತೂ ಮನಸ್ಸಿಗೆ ಮುದವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಶ್ರೀ ಮಹಾಂತಪ್ಪ ನಂದೂರ ಅವರು ಕಟ್ಟಿ ಕೊಡುವ ಕಾವ್ಯದ ಅನುಭೂತಿ ಕನ್ನಡ ಕಾವ್ಯ ಪರಂಪರೆಗೆ ವಿನೂತನವಾಗಿದೆ. ಶಿವ-ಶರಣರ ಬದುಕು ಇವರ ಶಬ್ದ ಚಿತ್ರದಲ್ಲಿ ಪ್ರತಿಮೇಯಾಗಿ ಕಣ್ಣೆದುರಿಗೆ ಕಂಗೊಳಿಸುವಂತಿದೆ. “ಕರಣ ನಾಲ್ಕು ಮದವೆಂಟು ವ್ಯಸನಗಳೇಳು ಅರಿಷಡ್ವರ್ಗ …ಅರಿದುಕೊಂಡರೆ ಸುಧೆ; ಮರೆದುಕೊಂಡಲ್ಲಿ ಸುರೆ” – ಹೆಂಡದ ಮಾರಯ್ಯನವರ ತತ್ವವನ್ನು ಕಟ್ಟಿ ಕೊಡುವ ಕವಿ ಪ್ರತಿಭಾ ಶಕ್ತಿಯಿದು.“ಮಡಿವಾಳನೆನಬಹುದೆ ಆಚೆ ದಡ ದಾಟಿ ನಿಂದವರ? ಶಾಪ ವಿಮೋಚನೆಗೆ ವೀರಭದ್ರ ಬಟ್ಟೆ ತೊಳೆಯುವ ಕಾಯಕಕೆ ಧರೆಗಿಳಿದಂತೆ” – ಮಡಿವಾಳ ಮಾಚಿದೇವರ ಜೀವನ ವೃತ್ತಾಂತ ಕಟ್ಟಿ ನಿಲ್ಲಿಸುವ ಕವಿಯ ಶಕ್ತಿ.“ನಾಯಿಯಿಂದ ವೇದವನೋದಿಸುವುದು, ಸತ್ತ ಮಗಳನೆಬ್ಬಿಸುವುದು, ಪವಾಡದ ಪರಿ ಸತ್ ಪಥದಲ್ಲಿ” – ಹಾವಿಹಾಳ ಕಲ್ಲಯ್ಯ ಶರಣರ ಪವಾಡ ತಿಳಿಸುವ ಕವಿಯ ಕಾವ್ಯ ಶಕ್ತಿ.“ಮಣ್ಣಿಗೆ ಕಣ್ಣನಿತ್ತ ಅನ್ನದಾತ ಅಣ್ಣ; ಕಲ್ಯಾಣದ ಮಣಿಹಕ್ಕೆ ಹೆಗಲು ಮುದ್ದಣ್ಣ. ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ ವಿಶ್ವಾಸವೆಂಬ ಭತ್ತ ಒಳಿದು ಉಂಡು ಸುಖಿ” – ಒಕ್ಕಲಿಗ ಮುದ್ದಣ್ಣನನ್ನು ಪರಿಚಯಿಸಿದ ಪರಿ.“ಅರಮೆನಯಲ್ಲಿಲ್ಲದ್ದು ಅರಿವಿನ ಮನೆಯಲುಂಟು! ಹೊರಟನರಮನೆ ಬಿಟ್ಟು ಹರನ ಮನೆಯೆಡೆಗೆ ಚಿಮ್ಮಲಗಿ ನಿಜಗುಣ ಗುರುವಿನೆಡೆಗೆ” – ಅರಮನೆ ತೊರೆದು ಅರಿವಿನ ಮನೆಗೆ ನಡೆದು
“ಕಲ್ಯಾಣವೆಂಬ ಪ್ರಣತಿ; ಬಿಂಬ-ಪ್ರತಿಬಿಂಬ” ಡಾ. ಪುಷ್ಪಾವತಿ ಶಲವಡಿಮಠ Read Post »
ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.
ಅನುವಾದ ಸಂಗಾತಿ ಮರಣದ ನಂತರ ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ. ನೀವು ಅಪಿ೯ಸುವಪ್ರೀತಿಯ ‘ಹೂವು’ಗಳುಬಾಡಿ ಹೋಗಿರಬಹುದು…..! ನುಡಿಯುವ ಮಾತುಗಳುಹಳೆಯದ್ದು ಆಗಿರಬಹುದು… ! ಹಿಡಿದುಕೊಳ್ಳುವ ”ಕೈ’ತಂಪಾಗಿರಬಹುದು…! ನೀವು ತೋರಿಸುತ್ತಿರುವು ನ್ಯಾಯವುಅನ್ಯಾಯಕ್ಕಿಂತ ಹೆಚ್ಚುಕೊಳೆದು ಸಹ ಹೋಗಿರಬಹುದು….!! ನೀವು ಬದುಕಿರುವಾಗನೀಡದೇ ಅವಿತು ಇಟ್ಟು,…..ಮರಣದ ನಂತರನೀಡುವ ಯಾವುದೇವಸ್ತುಗಳಿಗೂ……,ಸಾವಿನ ವಾಸನೆ…ಅಪರಾಧ ಭಾವನೆಯಸಂಕಟವು ಮಾತ್ರ ಇರುತ್ತದೆ…!!!. ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.
ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »
ರಶ್ಮಿ ಶಮಂತ್ ಅವರ ಕವಿತೆ “ಅನಿರೀಕ್ಷಿತ”
ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅನಿರೀಕ್ಷಿತ” ಹೊರಟು ಬಿಡುತ್ತಾರೆವಿದಾಯಕ್ಕೆ ಅವಕಾಶವೇ ಇಲ್ಲದಂತೆಕಂಬನಿಗೂ ತಾವಿಲ್ಲದಂತೆಪರಮಾಶ್ಚರ್ಯ ಆವರಿಸುತ್ತದೆವಾಸ್ತವವ ಒಪ್ಪಲು ಸಾದ್ಯವಿಲ್ಲದಂತೆ ಅವರಿವರೆಂಬ ಬೇದವಿಲ್ಲದೆಮಕ್ಕಳು ಮರಿಗಳೆಂಬ ಕರುಣೆ ತೋರದೆಸೆಳೆಯುತಿಹನು ಕಾಲರಾಯಅದೆಂತಹಾ ಅವರಸವೋ ಅವನಿಗೆಬದುಕಿ ಬಾಳುವವರ ಸೆಳೆಯಲು ಮಾತುಗಳಿನ್ನೂ ಉಳಿದಿರಲುಕನಸುಗಳು ಸಾವಿರಾರು ಕಾದಿರಲುಜವಾಬ್ದಾರಿಯ ಹೊರೆಯ ಹೊತ್ತಿರಲುನಂಬಿ ಬದುಕುವ ಜೀವಗಳಿರಲುಅದೇನು ಮುಖ್ಯವಿಹುದೋ ಎಲ್ಲದರ ಹೊರತು ಪ್ರೀತಿ ಪಾತ್ರರನೊಮ್ಮೆ ಆಲಂಗಿಸಿಅಂತಿಮ ನಮನವ ಸಲ್ಲಿಸದೆಕಂಬನಿಯ ಉರುಳಿಸದೆಕೊನೆಯ ಸಂದೇಶವನ್ನೂ ಕೊಡಲಾಗದೆಕಳೆದು ಹೋದವರು ಅದೆಷ್ಟೋ ಜೊತೆಗಿರಲು ಸಂಭಾಷಿಸಿಇದೇ ಕೊನೆಯ ಬೇಟಿಯೆಂಬಂತೆಮನ ಬಂದಂತೆ ಬದುಕಿಬಿಡಿಆಸೆ ಕನಸುಗಳ ಆಗಾಗಲೇ ತೀರಿಸಿತಿಳಿದಿದೆ ಯಾರಿಗೆ..ನಾವೆಷ್ಟನೆಯವರೋ ಈ ನಿಗೂಢ ಸರತಿಯಲಿ ರಶ್ಮಿ ಶಮಂತ್
ರಶ್ಮಿ ಶಮಂತ್ ಅವರ ಕವಿತೆ “ಅನಿರೀಕ್ಷಿತ” Read Post »
“ಸಾವಿಲ್ಲದಶರಣರು”ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣರ ಸಂಗಾತಿ “ಸಾವಿಲ್ಲದಶರಣರು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ. ಮಹಾದೇವರ ಮನೆತನದ ಹಿರಿಯರು ಮೂಲತಃ ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದವರು. ಅವರ ಮನೆತನದ ಹಿರಿಯರು ಮನೆತನದ ಮೂಲ ಉದ್ಯೋಗವಾದ ಕಿರಾಣಿ ವ್ಯಾಪಾರ ಮಾಡುತ್ತ ಹುಬ್ಬಳ್ಳಿ ಪಟ್ಟಣದಲ್ಲಿ ಬಂದು ಅಲ್ಲಿಯೇ ನೆಲೆಸಿದರು. ಮನೆಯ ಯಜಮಾನ ಶಿವಪ್ರಭುಗಳು.ಅವರ ಧರ್ಮಪತ್ನಿ ಕಾಳಮ್ಮ. ಧಾರ್ಮಿಕ ಹಿನ್ನೆಲೆ, ಉತ್ತಮ ವ್ಯಕ್ತಿತ್ವ ಹೊಂದಿದ ಈ ದಂಪತಿಗಳು ಇಂಚಗೇರಿ ಮಠದ ಸದ್ಗುರುಗಳು ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದ ನಾಮ ಪಡೆದಿದ್ದರು. ಇಂಚಗೇರಿ ಸಂಪ್ರದಾಯದ ನಿತ್ಯನೇಮ, ಭಜನೆ,ಧ್ಯಾನದ ವಾತಾವರಣ ಅವರ ಮನೆತನದಲ್ಲಿ ಇತ್ತು. ಶಿವಪ್ರಭುಗಳು ಚೆನ್ನಾಗಿ ಇಂಗ್ಗೀಷ ಬಲ್ಲವರಾಗಿದ್ದರಿಂದ ಹುಬ್ಬಳ್ಳಿಯ ರಾಯಲಿ ಕಂಪನಿಯಲ್ಲಿ ಮ್ಯಾನೇಜರ ಹುದ್ದೆ ಪಡೆದಿದ್ದರು. ಬಾಲ್ಯ ಮತ್ತು ಶಿಕ್ಷಣ ಸತ್ಪುರುಷರು, ಮಹಾತ್ಮರು,ಜ್ಞಾನಿಗಳು ಜನ್ಮವೆತ್ತಿ ವಿಶ್ವವನ್ನೇ ಬೆಳಗಿದ್ದಾರೆ. ಅಂತಹ ಪುರುಷರು ಶ್ರೀ ಮಹಾದೇವರು.02.11.1915 ರಂದು ವೀರಾಪುರ ಓಣಿ ಹುಬ್ಬಳ್ಳಿಯಲ್ಲಿ ತಂದೆ ಶಿವಪ್ರಭುಗಳು ತಾಯಿ ಕಾಳಮ್ಮ ಇವರ ಉದರದಲ್ಲಿಜನಿಸಿದರು. ಧ್ಯಾನಸ್ಥಿತಿಯಲ್ಲಿರುವ ಮಗು ಗುರು ಗಿರಿಮಲ್ಲೇಶ್ವರರು ಹಸ್ತ ಇರಿಸಿದ ನಂತರ ಕಣ್ಣು ತೆರೆಯಿತು.ಸಾತ್ವಿಕ ಕಳೆ ಹೊಂದಿರುವ ಮಗುವಿಗೆ “ಮಹಾದೇವ”ನೆಂದು ನಾಮಕರಣ ಮಾಡಿದರು. ಮಗು ಮಹಾದೇವನ ಬಾಲ್ಯವು ಸಾಹಸದ ಘಟನೆಗಳಿಂದ ಕೂಡಿತ್ತು. ಚಿಕ್ಕಂದಿನಲ್ಲಿಯೇ ಅಪಾರ ಧೈರ್ಯವನ್ನು, ಧ್ಯಾನಯೋಗವನ್ನು ಮೈಗೂಡಿಸಿಕೊಂಡಿದ್ದರು. ಮಹಾದೇವನ ತುಂಟಾಟ, ಬಾಲಲೀಲೆಗೆ ಬೇಸತ್ತು ವೀರಾಪೂರ ಓಣಿಯಲ್ಲಿಯ ಕನ್ನಡ ಶಾಲೆಗೆ ದಾಖಲಿಸುತ್ತಾರೆ. 4 ನೆಯ ಇಯತ್ತೆಯ ವರೆಗೆ ಶಿಕ್ಷಣ ಪೂರೈಸಿದ ಮಹಾದೇವರು. ಗುರುಗಳು ಅ,ಆ,ಇ,ಈ…ಹೇಳಿದರೆ…..ಮಹಾದೇವನು..ಉ,ಊ,ಋ,ಎ ಮುಂದಿನ ಅಕ್ಷರಗಳನ್ನು ಬರೆಯುವ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ತಾನೇ ಮುಂದಾಳುತ್ವ ವಹಿಸುವುದು ವಿದ್ಯಾರ್ಥಿ ನಾಯಕತ್ವವನ್ನು ನಿರ್ವಹಿಸುವುದು ಅವರ ಗುಣಗಳಲ್ಲಿ ಸರ್ವ ಶ್ರೇಷ್ಠ. ಧ್ಯಾನಕ್ಕೆ ಹೊರಳಿದ ಶ್ರೀ ಮಹಾದೇವರು ಧ್ಯಾನವೇ ಅವರ ಆಟ, ಪಾಠವಾಗಿತ್ತು.ತನ್ನ ಸಂಗಡಿಗರಿಗೂ ಅದನ್ನು ಹೇಳಿಕೊಡುತ್ತಿದ್ದರು. ಬಾಲ್ಯದಲ್ಲಿಯೇ ಅಧ್ಯಾತ್ಮವನ್ನು ಉಸಿರನ್ನಾಗಿಸಿಕೊಂಡ ಮಹಾದೇವರು ಮುಂದೆ ಇಂಚಗೇರಿ ಮಠದ ನಾಲ್ಕನೆಯ ಗುರುಗಳಾಗಿ ಸ್ಥಾನವನ್ನು ಅಲಂಕರಿಸುತ್ತಾರೆ. ರಾಜಕೀಯ, ಸಾಮಾಜಿಕ, ಕೃಷಿ, ಧಾರ್ಮಿಕ, ಶೈಕ್ಷಣಿಕ,ಸಾಂಸ್ಕೃತಿಕ ಸಾಧನೆಯನ್ನು ಗೈಯ್ಯುತ್ತಾರೆ. ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಕ್ರಾಂತಿಕಾರಿ ಧ್ಯೇಯಗಳಿಂದ ರಾಸುರಿ ಆಯಾಮವನ್ನು ಪಡೆದು ಕಟು ಸಂಪ್ರದಾಯ ಕಂದಾಚಾರಗಳನ್ನು ಖಂಡಿಸುತ್ತಾ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ ಶ್ರೀ ಮಹಾದೇವಪ್ಪನವರಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠ ದೀನದಲಿತರಿಗೆ ಆಶ್ರಯ ನೀಡಿದ ಆಶ್ರಮವಾಗಿ ಸ್ವತಂತ್ರ್ಯ ನ್ಯಾಯಾಲಯವಾಗಿ , ಸ್ವಯಂ ಉದ್ಯೋಗ ಕೇಂದ್ರವಾಗಿ ಕಾಯಕ ತತ್ವದ ಪ್ರತ್ಯೇಕ್ಷ ನಿದರ್ಶನವಾಗಿ ರೂಪುಗೊಂಡಿದ್ದು ಒಂದು ಅದ್ಭುತ ಸಾಧನೆ ಎಂದು ಹೇಳಬಹುದು. “ಯಾರು ಜನತಾ ಜನಾರ್ಧನ ಸೇವೆಯ ಮಡುವುನಲ್ಲಿ ದುಮುಕುವರೊ ಅವರ ಅಮೃತ ಪಾನ ಮಾಡಿ ಅಮರರಾಗುವರು “ಎಂಬುದು ಶ್ರೀ ಸ.ಸ.ಮಹಾದೇವರ ಅಮೃತವಾಣಿಯಾಗಿತ್ತು. ನಿಜವಾದ ಅರ್ಥದಲ್ಲಿ ಶ್ರಿ ಮಹಾದೇವರು ಅಮರ ಜೀವಿಗಳು. ಮಹಾತ್ಮಾಗಾಂಧೀಜಯವರ ಮೊಮ್ಮಗ ಅರುಣಗಾಂಧೀಯವರು ಇಂಪ್ರಿಂಟಿ ಎಂಬ ಪಾಕ್ಷಿಕ ಇಂಗ್ಲಿಷ್ ಪತ್ರಿಕೆಯಲ್ಲಿ ಇಂಚಗೇರಿ ಸಾಂಪ್ರದಾಯದ ಕುರಿತು ತತ್ವಗಳ ಈ ದಿಟ್ಟ ಪ್ರಯೋಗ ನಮ್ಮ ಭಾರತದಾದ್ಯಂತ ಅತಿ ಶೀಘ್ರವಾಗಿ ಕಾರ್ಯಗತವಾಗಲೆಂದು ಆಶಿಸಿ ಬರೆದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವೆನಿಸಿದ ಹುಬ್ಬಳ್ಳಿ ಗಿರೀಶಾಶ್ರಮ ಅಜಾನು ಬಾಹು ಶ್ರೀ ಮಹದೇವಪ್ಪ ಮುರುಗೋಡ ಇವರು ತಮ್ಮ ಜೊತೆಗೆ ಸುಮಾರು 6000 ಕ್ಕೂ ಅಧಿಕ ಸ್ವಾತಂತ್ರ ಸೇನಾನಿಗಳನ್ನು ಸಿದ್ಧ ಪಡಿಸಿ ಆಯುಧ ಬಡಿಗೆ ಕೋಲು ಮುಂತಾದ ಅಸ್ತ್ರಗಳನ್ನು ಹೊಂದಿ ಸ್ವಾತಂತ್ರ್ಯ ಹೋರಾಟಗಾರರ ತಂಡ ಕಟ್ಟಿ ಕೊಂಡರು ತಮ್ಮ ಇಂಚಿಗೇರಿ ಸಂಪ್ರದಾಯದಂತೆ ಜಾತಿ ವಿಮೋಚನೆ ಸ್ವಯಂ ಉದ್ಯೋಗ ಅಂತರ್ಜಾತಿಯ ಮದುವೆಗಳು ನಡೆಯುತ್ತಿದ್ದವು. ಜನತಾ ನ್ಯಾಯಾಲಯವನ್ನು ಎಲ್ಲಾ ತಾಲೂಕು ಮತ್ತು ಹಳ್ಳಿಗಳಲ್ಲಿ ಏರ್ಪಡಿಸಿ ತುಳಿತಕ್ಕೆ ಒಳಗಾಗಿದ್ದ ಬಡವರನ್ನು ಅಸ್ಪೃಶ್ಯರನ್ನು ಎತ್ತಿ ಹಿಡಿದು ನ್ಯಾಯ ಒದಗಿಸುತ್ತಿದ್ದರು.ಸಮಾಲೋಚನೆ ತಿಳುವಳಿಕೆ ಪರಸ್ಪರ ಪೂರಕ ಸಂಬಂಧಗಳ ವೃದ್ಧಿಗೆ ಶ್ರಮಿಸುತ್ತಿದ್ದರು. ಇವುಗಳಿಗೆ ಬಗ್ಗದೆ ಇದ್ದವರಿಗೆ ಗಣಾಚಾರದ ರುಚಿಯನ್ನು ಶ್ರೀ ಮಹಾದೇವ ಪ್ರಭುಗಳು ತೋರಿಸುತ್ತಿದ್ದರು. ಇವರ ಕ್ರಾಂತಿಕಾರಕ ಮೌಲಿಕ ಚಿಂತನೆಗಳಿಗೆ ಮಾರು ಹೋಗಿದ್ದ ರಾಮದುರ್ಗ ಸಂಸ್ಥಾನದ ಸಿಂಹ ಶ್ರೀ ಮಹದೇವಪ್ಪ ಪಟ್ಟಣ .ಹಾವೇರಿಯ ಕ್ರಾಂತಿಕಾರಿ ಮತ್ತು ಭಗತ ಸಿಂಗ್ ಏ ಆರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಶ್ರೀ ವಿರೂಪಾಕ್ಷಪ್ಪ ಅಂಗಡಿ ಮುಂತಾದ ಅನೇಕರು ಹುಬ್ಬಳ್ಳಿಯ ಶ್ರೀ ಗಿರಿಶಾಶ್ರಮದಲ್ಲಿ ಕ್ರಾಂತಿಕಾರಕ ಗುಪ್ತ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಬ್ರಿಟಿಷರ ಮತ್ತು ಪೊಲೀಸರ ಹದ್ದಿನ ಕಣ್ಣು ಗಿರಿಶಾಶ್ರಮದ ಮೇಲಿತ್ತು. 1956 ರ ಚುನಾವಣೆ ಸಂದರ್ಭದಲ್ಲಿ ರಾಮದುರ್ಗದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸಿನ ಅಧ್ಯಕ್ಷ ಶ್ರೀ ಹೂಲಿ ವೆಂಕಟರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಹುರಿಯಾಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಲೋಕಸೇವಾ ಸಂಘದ ಕಾರ್ಯದರ್ಶಿ ರಾಮದುರ್ಗ ದುರಂತದ ನಾಯಕ ನೆಪೋಲಿಯನ್ ಎನಿಸಿಕೊಂಡ ಶ್ರೀ ಮಹದೇವಪ್ಪ ಪಟ್ಟಣ ಎದುರಿಸುತ್ತಾರೆ. ಡಾ ಬಿ ಡಿ ಜತ್ತಿ ಅವರ ರಾಜಕೀಯ ಗುರುಗಳೆನಿಸಿದ ಶ್ರೀ ಹೂಲಿ ವೆಂಕರೆಡ್ಡಿ ಅವರ ಚುನಾವಣೆಯ ಪ್ರಚಾರಕ್ಕೆ ಶ್ರೀ ಎಸ್ ನಿಜಲಿಂಗಪ್ಪನವರು ಆದಿಯಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ವರಿಷ್ಠ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಆದರೆ ಚುನಾವಣೆಯಲ್ಲಿ ಶ್ರೀ ಹೂಲಿ ವೆಂಕರೆಡ್ಡಿ ಅವರು ಶ್ರೀ ಮಹದೇವಪ್ಪ ಪಟ್ಟಣ ಅವರ ವಿರುದ್ಧ ಸೋಲುತ್ತಾರೆ. ಇಡಿ ರಾಷ್ಟ್ರವೇ ರಾಮದುರ್ಗದ ಕಡೆಗೆ ನೋಡುತ್ತದೆ. ಆರಂಭದಿಂದಲೂ ಬಿ ಡಿ ಜತ್ತಿ ಅವರ ರಾಜಕೀಯ ಎದುರಾಳಿ ಎನಿಸಿದ ಮತ್ತು ಅವರ ವಿರುದ್ಧ ಚುನಾವಣೆಗಳನ್ನು ಎದುರಿಸುತ್ತಿದ್ದ ಶ್ರೀ ಸದ್ಗುರು ಸಮರ್ಥ ಮಹಾದೇವ ಪ್ರಭು ಅವರ ಮೇಲೆ ಕೆಲ ಕ್ರಿಮಿನಲ್ ಕೇಸ್ ಗಳಲ್ಲಿ ಶ್ರೀ ಮಹದೇವಪ್ಪ ಅವರ ಮೇಲೆ ನಿರಂತರ ಪೊಲೀಸ ತನಿಖೆಗೆ ಬಿ ಡಿ ಜತ್ತಿ ಅವರು ಮುಖ್ಯ ಮಂತ್ರಿ ಆದ ಮೇಲೆ 1958 ರಲ್ಲಿ ಒತ್ತಾಯಿಸುತ್ತಾರೆ. ತಮ್ಮ ಆತ್ಮೀಯ ಸ್ವಾತಂತ್ರ್ಯ ಹೋರಾಟಗಾರ ಸಂಗಾತಿ ಶ್ರೀ ಮಹದೇವಪ್ಪ ಮುರುಗೋಡ ಇವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ ಶ್ರೀ ಮಹದೇವಪ್ಪ ಪಟ್ಟಣ ಅವರು ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಮಾಡುತ್ತಾರೆ. ಒಮ್ಮೆ ಸದನದ ಒಳಗೆ ಶ್ರೀ ಮುರುಗೋಡ ಮಹದೇವಪ್ಪ ಅವರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದೆ ಪಡೆಯಬೇಕೆಂದು ಶಾಸಕ ಶ್ರೀ ಮಹದೇವಪ್ಪ ಪಟ್ಟಣ ಅವರು ಸಿಟ್ಟಿನಿಂದ ಮುಖ್ಯ ಮಂತ್ರಿಗಳ ಕಡೆಗೆ ಪೇಪರ್ ವೆಟ್ ತೋರಿದರಂತೆ ಸ್ವತಃ ಶಾಸಕ ಶ್ರೀ ಮಹದೇವಪ್ಪ ಪಟ್ಟಣ ಅವರು ನನ್ನ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.ಕೊನೆಗೂ ಗೆಳೆಯನಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಶಾಸಕ ಶ್ರೀ ಮಹದೇವಪ್ಪ ಪಟ್ಟಣ ಯಶಸ್ವಿಯಾದರು.ಶ್ರೀ ಮಹದೇವಪ್ಪ ಮುರುಗೋಡ ಇವರು ಜೀವನ ಕೊನೆಯ ಉಸಿರಿನವರೆಗೆ ಸಾಮಾಜಿಕ ನ್ಯಾಯಪರವಾಗಿಹೋರಾಡುತ್ತಲೇ ಇದ್ದರು.ಇಂಚಿಗೇರಿ ಶ್ರೀಮಠದ ದಿಂಡಿ ಯಾತ್ರೆಯಲ್ಲಿ ಚಕ್ಕಡಿ ಟ್ರಾಕ್ಟರ್ ದನಕರುಗಳು ಹಸು ಮೇಕೆ ಅವುಗಳಿಗೆ ಬೇಕಾದ ಮೇವು ಭಕ್ತರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೊತ್ತು ಕೊಂಡು ಊರೂರು ತಿರುಗಿ ಸದ್ಭಾವನೆ ಸಾಮಾಜಿಕ ಸಾಮರಸ್ಯಗಳನ್ನುಮೂಡಿಸುವ ಭಜನೆ ಪ್ರಾರ್ಥನೆ ಕೀರ್ತನೆ ಏರ್ಪಡಿಸಿ ಮನುಷ್ಯರ ಮನವನ್ನು ತಿಳಿಗೊಳಿಸುತ್ತಿದ್ದರು. ಅಲ್ಲಿಯೇ ಸಾಮಾಜಿಕ ನ್ಯಾಯ ಬಗೆ ಹರಿಸುವುದು ವಾಡಿಕೆಯಾಗಿತ್ತು. ಶ್ರೀ ವಿನೋಭಾ ಭಾವೆಯವರ ತಾಯಿಯ ತವರು ಮನೆ ಜಮಖಂಡಿ ಅವರೂ ಸಹ ಶ್ರೀ ಮಹದೇವಪ್ಪ ಮುರುಗೋಡ ಇವರ ಕಾರ್ಯಗಳ ಬಗ್ಗೆ ತಮ್ಮ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ. ಬದುಕಿನ ತಪಸ್ಸಿಗೆ ಕೊನೆ ಹೇಳಿದ ಶಿವಯೋಗ ಸಾಧಕ ಬಾಲ ಬ್ರಹ್ಮಚಾರಿಯಾಗಿದ್ದ ಮಹಾದೇವರು ತದನಂತರ ದಿನಗಳಲ್ಲಿ ದೇವರು ಹಾಗೂ ಶ್ರೀ ಮಾಧವಾನಂದ ಪ್ರಭುಜೀ ಎಂದೆ ಪ್ರಚಲಿತರಾಗಿ ಭಕ್ತಿ ಪ್ರಚಾರದ ಜತೆಗೆ ಶ್ರೀ ಗುರು ಪುತ್ರೇಶ್ವರ ಮಹಾರಾಜರನ್ನು ತಮ್ಮ ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ,ತಮ್ಮ ಬದುಕನ್ನು ಶೋಷಿತರ ಪರವಾಗಿ ನಿಂತು ನ್ಯಾಯ ಒದಗಿಸಿ ಭಾರತದ ಸ್ವಾತಂತ್ರ್ಯ ಹೋರಾಟ ಕರ್ನಾಟಕ ಏಕೀಕರಣ ಗೋವಾ ವಿಮೋಚನೆಗೆ ದುಡಿದು 1980 ರಲ್ಲಿ ದೈವಾದಿನರಾದರು . ಬಯಲಲ್ಲಿ ಬಯಲಾದರು.__________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ”
ಕಾವ್ಯ ಸಂಗಾತಿ ತಾರಾ ಬಿ ಎನ್ ಧಾರವಾಡ “ಆತ್ಮ ಬೆಸುಗೆ” ಇರುವುದೆಲ್ಲವ ಬಿಟ್ಟುಇರದುದರ ಕಡೆಗೆ,ಹೊರಟ ಮನಸ್ಸು ಮೌನದ ನಡಿಗೆಗೆಒತ್ತು ನೀಡಿ ಕಾಣದಕನಸಿನ ಕಡೆಗೆ ಸಾಗಬಾರದುಹೃದಯದೊಳಗೆ ಕಹಿ ಭಾವತೊರೆಯಬೇಕುಹೊಸ ಹೊಳವು ತುಂಬಿಇರುವುದೇ ಸಾಕೆಂದುನಡೆಯಬೇಕುಇರದುದರಲ್ಲಿ ಹುಟ್ಟಿಸುಹೊಸ ಸ್ಪಂದನದ ಬಂಧುರವಹಳೆಯ ಸರಳುಗಳ ನೆರಳು,ಬಂಧನ ಮುರಿದು,ಹೊಸ ದಾರಿಯಕಡೆಗೆ ಜೀವ ಹರಿದು.ಇರುವುದರಲ್ಲಿ ನೆಮ್ಮದಿಹುಡುಕಬೇಕು.ಇರದುದರಲ್ಲಿ ಅರ್ಥವೇಹುಡುಕಬೇಕು,ಹುಟ್ಟಬೇಕು,ಕಳೆದುಹೋಗುವಭಯದ ಅಂಚಿನ ನೆಪ ಬೇಡ,ಧೈರ್ಯದ ನೆಲೆಯಲ್ಲಿಕನಸು ನಿಂತಿದೆ.ಇರುವುದೆಲ್ಲವ ಬಿಟ್ಟುಸಾಗುವ ದಾರಿ, ಸಂಕಟಕರ ಇದ್ದುದರಲ್ಲಿ ಬದುಕು ಸಂತಸಕರ,ಅದೇ ಜೀವನದ ನಿಜವಾದ ಸಾರಇರದುದರಲ್ಲಿ ಹುಡುಕುವಆಸೆಯೊಳಗೆ ಹರಿಯುವುದುಹೊಸ ಒಸಗೆನಮ್ಮಲ್ಲಿ ನಮ್ಮನ್ನೇಕಂಡುಕೊಳ್ಳುವಒಲವಿನ ಆತ್ಮ ಬೆಸುಗೆಬಂಧುರ ಸುಂದರ. ತಾರಾ ಬಿ ಎನ್ ಧಾರವಾಡ.
ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ” Read Post »
ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಗೆಳತಿ” ಮರೆತಿಲ್ಲ ಗೆಳತಿ ನಿನಗೆ ಕೊಟ್ಟ ಮಾತಅರಿತಿರುವೆ ನಿನ್ನ ಮನವ ನಾ ಏನಂತ!ಸರಿದು ಸಾಗದಿರು ಕೇಳಿ ನೀ ಯಾರಂತ.! ಜನುಮದ ಬಂಧಕೆ ಸಾಕ್ಷಿ ಬೇಕಿಲ್ಲಅನುದಿನವು ಜೊತೆ ಇದ್ದರೆ ಸಾಕಲ್ಲ!ನಾನು ನೀನು ಇಬ್ಬರಾದ್ರು ಆತ್ಮ ಒಂದಲ್ಲ.! ಬೆನ್ನ ಮೇಲೆ ಹೊತ್ತು ಆಡಿದ ಆಟಾನಇನ್ನ ಮರಿಯದಂತೆ ನಕ್ಕು ನಲಿದ ಎಳೆತನ!ನನ್ನ ನಿನ್ನ ಬೆಸೆದ ಆ ಗೆಳೆತನ.! ಚೆಂದಕಿಂತ ಚೆಂದಿತ್ತು ಮುಗ್ಧತೆಯು ಕೂಡಿತ್ತುಅಂದದ ಹಂಗು ತೊರೆದಿತ್ತು !ನಂದು ನಿಂದೆನ್ನುವ ಭೇದ ನಮ್ಮಿಂದ ದೂರಿತ್ತು.! ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ” Read Post »
“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್ ಗೌಡ ಪಾಟೀಲ್
ಶಿಕ್ಷಣ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ ಎಲ್ಲವೂ ಆನ್ಲೈನ್ ನಲ್ಲಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಕೂಡ ಆನ್ಲೈನ್ ನಲ್ಲಿ ಕಲಿಯುವ ದಿನಗಳು ಈಗಾಗಲೇ ಬಂದಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ದೊರೆಯುವ ದಿನಗಳು ದೂರವಿಲ್ಲ…. ಹಾಗಾದರೆ ಶಾಲೆಗಳ ಔಚಿತ್ಯವೇನು? ಎಂದು ನೀವು ಕೇಳಬಹುದು ಅಲ್ಲವೇ ? ಇದರ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿ ನಡೆದು ಬಂದ ರೀತಿಯನ್ನು ಅವಲೋಕಿಸೋಣ. ನಮ್ಮ ಭರತ ಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು ಶಿಕ್ಷಣದಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದಾಗಿತ್ತು. ಒಂದು ಕೌಟುಂಬಿಕ ಶಿಕ್ಷಣವಾದರೆ ಮತ್ತೊಂದು ಗುರುಕುಲ ಪದ್ಧತಿಯ ಶಿಕ್ಷಣ. ಕೌಟುಂಬಿಕ ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಆ ಮನೆಯ ರೀತಿ-ನೀತಿ, ಸಂಪ್ರದಾಯಗಳ ಜೊತೆ ಜೊತೆಗೆ ಸಾಮಾಜಿಕ ನಿಯಮಗಳನ್ನು ಪಾಲಿಸುವ ಕುರಿತು ಇಡೀ ಕುಟುಂಬವೇ ಗುರುವಾಗಿ ಪಾಠ ಕಲಿಸುತ್ತಿತ್ತು. ಇಲ್ಲಿ ಕುಟುಂಬದ ಹಿರಿಯರಾಗಲಿ, ಪಾಲಕರಾಗಲಿ, ತಂದೆ-ತಾಯಿಗಳಾಗಲಿ ಕೈಯಲ್ಲಿ ಬಳಪ ಹಿಡಿಸಿ ಪಾಟಿಯ ಮೇಲೆ ಬರೆಸಿ ಇಲ್ಲವೇ ಉರು ಹೊಡೆಸಿ ಪಾಠಗಳನ್ನು ಹೇಳಿಕೊಡಲಿಲ್ಲ…. ಬದಲಾಗಿ ತಮ್ಮ ನಡೆ ನುಡಿಗಳ ಮೂಲಕ ತಮ್ಮ ಮಕ್ಕಳಿಗೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಬದುಕಿನ ಪರಿಚಯವನ್ನು ಮಾಡಿಕೊಟ್ಟರು. ಇದರ ಜೊತೆ ಜೊತೆಗೆ ಗಂಡು ಮಕ್ಕಳಿಗೆ ಕುಟುಂಬದ ಕುಲ ಕಸುಬನ್ನು ಹಾಗೂ ಹೆಣ್ಣು ಮಕ್ಕಳಿಗೆ ಮನೆ ವಾರ್ತೆಯನ್ನು ಹೇಳಿಕೊಟ್ಟರು. ಒಕ್ಕಲುತನವೇ ಮೂಲ ಉದ್ಯೋಗವಾಗಿದ್ದ ನಮ್ಮ ಭಾರತ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಉದ್ಯೋಗ ಹಾಗೂ ಅದರ ಉಪ ಕಸುಬುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಉಪ್ಪಾರ, ಚಮ್ಮಾರ, ಮ್ಯಾದಾರ ಹೀಗೆ ಹತ್ತು ಹಲವು ಉದ್ಯೋಗಗಳನ್ನು ಕೈಗೊಂಡಿದ್ದು ಅದನ್ನೇ ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಇನ್ನು ರಾಜ ಮಹಾರಾಜರು, ಪಂಡಿತರು, ಜ್ಞಾನಿಗಳು, ಬ್ರಾಹ್ಮಣರು 64 ವಿದ್ಯೆಗಳಲ್ಲಿ ಕೆಲವಷ್ಟನ್ನಾದರೂ ಗುರುಕುಲಗಳಲ್ಲಿ ಇದ್ದು ಕಲಿಯುತ್ತಿದ್ದರು. ಊರಿನಿಂದ ತುಸು ದೂರ ಯಾವುದಾದರೂ ಕಾಡಿನ ಪ್ರಶಾಂತ ವಾತಾವರಣದಲ್ಲಿ ನದಿಯ ಪಕ್ಕದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ನೆಲೆಸಿರುತ್ತಿದ್ದ ಗುರುಗಳಿಗೆ ಋಷಿಮುನಿಗಳಿಗೆ ರಾಜ ಮಹಾರಾಜರುಗಳು ಗುರುಕುಲವನ್ನು ನಡೆಸಲು ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇನ್ನು ಗುರುಕುಲಕ್ಕೆ ಬರುವ ವಿದ್ಯಾರ್ಥಿಗಳು ರಾಜನ ಮಗನಾದರೂ ಸರಿಯೇ ಸೈನಿಕನ ಇಲ್ಲವೇ ಬಡ ಬ್ರಾಹ್ಮಣನ ಮಗನಾದರೂ ಎಲ್ಲರಿಗೂ ಒಂದೇ ನಿಯಮ. ಪ್ರತಿದಿನ ಆಶ್ರಮದ ನಿಯಮದಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದರ ಜೊತೆಗೆ ಶಾಸ್ತ್ರೋಕ್ತವಾಗಿ ವಿವಿಧ ವಿದ್ಯೆಗಳನ್ನು ಕಲಿಯುವುದು ಅತ್ಯವಶ್ಯಕವಾಗಿತ್ತು.ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯ, ಪುರಾಣ ಮತ್ತಿತರ ವಿದ್ಯೆಗಳನ್ನು ಕಲಿಸಿದರೆ ರಾಜ ಮಹಾರಾಜರ, ಮಂತ್ರಿಗಳ, ಸೇನಾಪತಿಗಳ ಹಾಗೂ ಸೈನಿಕರ ಮಕ್ಕಳುಶಸ್ತ್ರಾಸ್ತ್ರ ವಿದ್ಯೆಗಳಾದ ಧನುರ್ವಿದ್ಯೆ, ಕತ್ತಿ ವರಸೆ, ಭಲ್ಲೆ ಹಾಗೂ ಮತ್ತಿತರ ಆಯುಧಗಳ ಬಳಕೆಯ ಜೊತೆಗೆ ಕಾನೂನು ರಾಜಕೀಯ ನೀತಿಶಾಸ್ತ್ರ ಮುಂತಾದ ರಾಜ್ಯದ ಆಡಳಿತಕ್ಕೆ ಅತ್ಯವಶ್ಯಕವಾದ ವಿದ್ಯೆಗಳನ್ನು ಕಲಿಯುತ್ತಿದ್ದರು. ಗುರುಗಳು ಹೇಳಿದ ಮಾತುಗಳನ್ನು ವೇದ ವಾಕ್ಯದಂತೆ ಭಾವಿಸುವ, ಆಶ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುವ ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸುಮಾರು 6 ರಿಂದ 12 ವರ್ಷಗಳ ಕಾಲ ಶಾಸ್ತ್ರ ವಿದ್ಯೆಯ ಜೊತೆಗೆ ವೃತ್ತಿ ಶಿಕ್ಷಣವು ಕೂಡ ದೊರೆಯುತ್ತಿತ್ತು ಎಂದರೆ ತಪ್ಪಿಲ್ಲ. ಇದರ ಜೊತೆಗೆ ಕೋಶವನ್ನು ಓದುವ ಹಾಗೂ ದೇಶವನ್ನು ಸುತ್ತುವ ಕೆಲಸವನ್ನು ಅಂತಿಮವಾಗಿ ವಿದ್ಯಾರ್ಥಿಯು ಮಾಡುವ ಮೂಲಕ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ಅರಿಯುವ ಅವಕಾಶ ಕೂಡ ಅವರಿಗೆ ದೊರೆಯುತ್ತಿತ್ತು. ನಂತರದ ಕಳೆದೆರಡು ಶತಮಾನಗಳವರೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅದರಲ್ಲೂ ಮಠಗಳಲ್ಲಿ, ಅಗ್ರಹಾರಗಳಲ್ಲಿ ಆಯಾ ಊರಿನ ಪಂಡಿತರು ಜ್ಞಾನಿಗಳು ಮಕ್ಕಳಿಗೆ ಶಿಕ್ಷಣ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಇಲ್ಲೂ ಕೂಡ ಅದೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ಮಕ್ಕಳು ತಮ್ಮ ಮನೆಯ ವಾತಾವರಣದಲ್ಲಿ ಮುಂಜಾನೆ ಮತ್ತು ರಾತ್ರಿಗಳನ್ನು ಕಳೆಯುತ್ತಿದ್ದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ಶಿಕ್ಷಣ ನಂತರ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪಾಲಕರೊಂದಿಗೆ ವಾಸ ಇರುತ್ತಿತ್ತು. ಅದರ ನಂತರ ಕಳೆದ ಎರಡು ಶತಮಾನಗಳಿಂದ ಆರಂಭವಾಗಿದ್ದು ಇಂದಿಗೂ ಚಾಲ್ತಿಯಲ್ಲಿ ಇರುವುದು ಇಂದಿನ ಪದ್ಧತಿ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲೆ ಕಾಲೇಜು ಸ್ನಾತಕೋತ್ತರ ಹೀಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ನೀಡುವ ಪದ್ಧತಿ ಆರಂಭವಾಯಿತು. ಮೊದಲ ಹತ್ತು ವರ್ಷಗಳವರೆಗೆ ಸಾಂಪ್ರದಾಯಿಕವಾಗಿ ಆಯಾ ಪ್ರದೇಶದ ಆಡಳಿತ ಭಾಷೆ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಗಳ ಜೊತೆ ಜೊತೆಗೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದ್ದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಯಿತು. ಭಾಷೆಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಆ ಭಾಷೆಯ ಕಥೆ,ಕಾವ್ಯ, ಕವನ, ಗದ್ಯ, ಪದ್ಯ, ಹಳಗನ್ನಡ, ನಡುಗನ್ನಡ ನವ್ಯ ಸಾಹಿತ್ಯ, ನಾಟಕ ಇತಿಹಾಸ ವ್ಯಾಕರಣ, ಕವಿ ಕರ್ತೃಗಳ ಪರಿಚಯ, ಬದುಕು ಬರಹ ಇವುಗಳ ಕುರಿತು ಮಕ್ಕಳಿಗೆ ಆಯಾ ತರಗತಿಗಳಿಗೆ ಅನುಸಾರವಾಗಿ ಪಠ್ಯವನ್ನು ಇಡಲಾಗುತ್ತದೆ. ಗಣಿತದಲ್ಲಿ ಅಂಕಿಗಳನ್ನು ಬರೆಯುವ, ಓದುವ ಎಣಿಸುವ ಹೇಳುವುದರಿಂದ ಆರಂಭಿಸಿ ಕೂಡಿಸುವ ಕಳೆಯುವಾಗ ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳನ್ನು ಇದರ ಮುಂದಿನ ಭಾಗವಾಗಿ ಗಣಿತದ ಮತ್ತೆ ವಿಷಯಗಳಾದ ದಶಮಾಂಶ ಪದ್ಧತಿ ಭಿನ್ನರಾಶಿ ಸಮೀಕರಗಳು ಪ್ರಮೇಯಗಳನ್ನು ಹಂತ ಹಂತವಾಗಿ ಕಲಿಸುವ ಯೋಜನೆಗಳು ರೂಪುಗೊಂಡವು. ಗಣಿತದಲ್ಲಿ ಅಂಕಗಣಿತ ಬೀಜಗಣಿತ ಹಾಗೂ ರೇಖಾಗಣಿತ ಎಂಬ ಮೂರು ವಿಭಾಗಗಳನ್ನು ಮಾಡಿದರು. ಸಮಾಜಶಾಸ್ತ್ರದಲ್ಲಿ ಇತಿಹಾಸ,ಭೂಗೋಳ ಹಾಗೂ ನಮ್ಮ ಸಂವಿಧಾನದ ನೀತಿಗಳನ್ನು ಅರಿಯುವ ಪೌರನೀತಿ ಎಂಬ ಮೂರು ವಿಭಾಗಗಳನ್ನು ಮಾಡಿ ಭೂಗೋಳದಲ್ಲಿ ಭೂಮಿಯ ಸಂರಚನೆಯ ಕುರಿತು ವೈವಿಧ್ಯಮಯ ಪ್ರದೇಶಗಳ ಕುರಿತು ಪ್ರಸ್ಥಭೂಮಿ ಮರುಭೂಮಿ ಕಾಡು ಹುಲ್ಲುಗಾವಲು ಮುಂತಾದ ಪ್ರಾದೇಶಿಕ ವೈವಿಧ್ಯತೆಗಳನ್ನು ಪಠ್ಯದ ಭಾಗವಾಗಿಸಿದರು. ಹೀಗೆ ಎಲ್ಲ ವಿಷಯಗಳು ಕುರಿತು ನುರಿತ ಭಾಷಾ ತಜ್ಞರನ್ನು, ವಿದ್ವಾಂಸರನ್ನು ಸಂಶೋಧಕರನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಗಳನ್ನು ಮೂಲಭೂತ ವಿಷಯಗಳ ಪಟ್ಟಿಯಲ್ಲಿ ಅಡಕಗೊಳಿಸಿ ವಯೋಮಿತಿಗೆ ತಕ್ಕಂತೆ ಅವುಗಳನ್ನು ಮಕ್ಕಳ ಕಲಿಕೆಯಲ್ಲಿ ಅಳವಡಿಸಿದರು. ಇದೀಗ ಆನ್ಲೈನ್ ನಲ್ಲಿ ಕೂಡ ವೈವಿಧ್ಯಮಯ ಕೋರ್ಸುಗಳ ವಿಷಯಗಳ ಕುರಿತು ನಾವು ಕಲಿಯಬಹುದು. ಈ ಎಲ್ಲಾ ಕಲಿಕೆಗೆ ಮೂಲ ನಮ್ಮ ಆಸಕ್ತಿ ಆಗಿರಬೇಕು. ಇಂತಹ ಕಲಿಕೆಯನ್ನು ಕಲಿಸಲು ಶಾಲೆ ಪುಸ್ತಕ ಗುರುಗಳು ಬೇಕಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಭೌತಿಕವಾಗಿ ಶಾಲೆಗಳ ಅಸ್ತಿತ್ವ ಇರುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಬಹುಶಹ ಇಲ್ಲ ಎಂದು ಹೇಳಬಹುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮದೇ ಆದ ಅನುಕೂಲಕರ ವಾತಾವರಣದಲ್ಲಿ ಕುಳಿತು ನಿಂತು ಮಲಗಿ ಆನ್ಲೈನ್ ನಲ್ಲಿ ಶಿಕ್ಷಕರ ಪಾಠಗಳನ್ನು ಕೇಳಿ ಪರೀಕ್ಷೆಗಳನ್ನು ಬರೆದು ಪದವಿಗಳಿಸಬಹುದಾದ ದಿನಗಳು ಮುಂದೊಂದು ದಿನ ಬರಬಹುದು. ಹಾಗಾದರೆ ಶಿಕ್ಷಣ ಎಷ್ಟರಮಟ್ಟಿಗೆ ಪ್ರಸ್ತುತ ? ಶಾಲೆಗಳ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸಬಹುದು ಖಂಡಿತವಾಗಿಯೂ ಶಾಲೆಗಳ ಅವಶ್ಯಕತೆ ಇದೆ. ಮಕ್ಕಳು ಚಿಕ್ಕಂದಿನಿಂದಲೂ ಒಂದು ಸಾಂಫಿಕ ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆಯ ಪಾಠವನ್ನು ಕಲಿಯಲು ಶಿಕ್ಷಣ ಬೇಕು. ಆದರೆ ಅಂತಹ ಶಿಕ್ಷಣ ದೊರೆಯುವುದು ಕೇವಲ ಶಾಲೆಗಳಲ್ಲಿ ಮಾತ್ರ. ಸತ್ಯ,ಧರ್ಮ,ನ್ಯಾಯ, ನೀತಿ, ಕರುಣೆ, ದಯೆ,ಪ್ರೀತಿ, ವಿಶ್ವಾಸ, ನಂಬಿಕೆ, ದೇಶಪ್ರೇಮ, ದೇಶದ ಕುರಿತು ಅಭಿಮಾನ, ರಾಷ್ಟ್ರೀಯ ಜಾಗೃತಿ ಸಂವಿಧಾನದ ಪರಿಕಲ್ಪನೆ ನಮ್ಮ ರಾಷ್ಟ್ರೀಯ ನಾಯಕರ ಕುರಿತ ಕಥೆಗಳು, ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಬದುಕಿನ ಪಾಠಗಳು, ಆಟಗಳು ಆಟದ ಮೂಲಕ ಒಪ್ಪಿಕೊಳ್ಳಲು ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಅತ್ಯವಶ್ಯಕವಾದ ಎಲ್ಲಾ ಬಗೆಯ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ನಮಗೆ ಶಾಲೆಗಳು ಅತ್ಯವಶ್ಯಕ. ಶಿಕ್ಷಣವನ್ನು ಬೇಕಾದರೆ ಆನ್ಲೈನ್ ನಲ್ಲಿ ಪಡೆಯಬಹುದು… ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನವನ್ನು ಚಾರಿತ್ರ್ಯ ನಿರ್ಮಾಣವನ್ನು ಶಿಕ್ಷಣದಂತೆ ಕೇವಲ ಒಂದು ಇಲ್ಲವೇ ಎರಡು ವರ್ಷಗಳಲ್ಲಿ ಕಲಿಸಿ ಮುಗಿಸಲು ಸಾಧ್ಯವಿಲ್ಲ ಅದೊಂದು ನಿರಂತರ ಪ್ರಕ್ರಿಯೆ…. ಅದಕ್ಕೆ ತನ್ನದೇ ಆದ ಗತಿಯಿದ್ದು ಆ ಗತಿಯಲ್ಲಿಯೇ ಮಕ್ಕಳು ತಮ್ಮ ಬದುಕಿನಲ್ಲಿ ಶಾಲೆಗಳ ಮೂಲಕ, ಶಿಕ್ಷಕರ ಮೂಲಕ, ಸಹಪಾಠಿಗಳ ಜೊತೆಗೆ, ಹಿರಿಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆ ಎಂಬ ದೊಡ್ಡ ಆವರಣದ ಆಟದ ಮೈದಾನದಲ್ಲಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ನಿರಂತರವಾಗಿ ಕಲಿಯಬೇಕು ಇದಕ್ಕೆ ಶಾಲೆ ಅತ್ಯಂತ ಸೂಕ್ತವಾದ ಸ್ಥಳ. ಜನನೀ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯನ್ನು ನಮಗೆ ಕಟ್ಟಿಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ನಾಗರಿಕರಾಗಿ ನಮ್ಮ ದೇಶದ ಸಂವಿಧಾನದ ಮೂಲಕ ನಾವೆಲ್ಲರೂ ಒಂದು ಎಂಬ ವಿವಿಧತೆಯಲ್ಲಿ ಏಕತೆಯ ಪಾಠವನ್ನು ಹೇಳಿಕೊಡುವುದು ಶಾಲೆಯೇ. ಸಿರಿವಂತರ ಮಗನಾಗಲಿ ಗುರು ಪುತ್ರನಾಗಲಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯ ಮಗನಾಗಲಿ ಶಾಲೆಯ ವಾತಾವರಣದಲ್ಲಿ ಏಕರೂಪದ ಸಮವಸ್ತ್ರವನ್ನು ಧರಿಸಿ ಮೇಲು-ಕೀಳು, ಬಡವ-ಬಲ್ಲಿದ, ವರ್ಗ-ವರ್ಣ ಎಂಬ ಯಾವುದೇ ಭೇದಗಳಿಲ್ಲದೆ ಕಲಿಯುವ ವಾತಾವರಣವನ್ನು ಕಲ್ಪಿಸಿ ಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ಶಾಲೆಗಳೇ ಮಕ್ಕಳ ವ್ಯಕ್ತಿತ್ವ ವಿಕಸನದ ಅದ್ಭುತವಾದ ಕಾರ್ಯ ಆಧಾರಗಳು ಅಂತಹ ಶಾಲೆಗಳಲ್ಲಿ ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಹೇಗೆ ಇರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಕಲಿಯುತ್ತಾ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಒಂದೊಂದೇ ಹಂತದ ನೈತಿಕ, ಮೌಲಿಕ, ಸಾಮಾಜಿಕ ಐತಿಹಾಸಿಕ ಸಾಂಸ್ಕೃತಿಕ ಜೀವನ ಪಠ್ಯಗಳನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗುತ್ತಾರೆ. ಧೈರ್ಯ, ಸಾಹಸ, ರಾಷ್ಟ್ರೀಯವಾದ, ಸೇವಾ ಮನೋಭಾವ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಯುವ ಮಕ್ಕಳ ಬದುಕಿನಲ್ಲಿ ಮೂಡುವುದು ಶಾಲೆಯ ಮೂಲಕವೇ ಮುಂದೆ ಮಕ್ಕಳು ತಮ್ಮ ಬದುಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಮಿಂಚಿ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು.. ಆದರೆ ಅದೆಲ್ಲಕ್ಕೂ ಮುಖ್ಯವಾದ ಮೂಲಭೂತವಾದ ಅಡಿಪಾಯವನ್ನು ಶಾಲೆಗಳು ಹಾಕಿಕೊಡುತ್ತವೆ. ಸೋಲು ಗೆಲುವಿನ ನೋವು ನಲುವಿನ ನೂರಾರು ಪಾಠಗಳನ್ನು ಕೂಡ ಶಾಲೆಗಳು ಕಲಿಸಿಕೊಡುತ್ತವೆ. ಹೀಗಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳು ಬೇಕೇ ಬೇಕು ಅಂತಹ ಶಾಲೆಗಳ ಅಸ್ತಿತ್ವವನ್ನು ಗುರುತಿಸುವ ಸಂವೇದನಾಶೀಲ ಸಶಕ್ತ ಸಮಾಜದ ಹರಿಕಾರರು ನಾವಾಗಬೇಕು. ಆ ಮೂಲಕ ಶಿಕ್ಷಣ ಪದ್ಧತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತೀಕರಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾಜದ ನಾವೆಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸೋಣ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್
“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ರೆಕ್ಕೆ ಮುರಿದ ಹಕ್ಕಿ” ಗುಡಿಸಿಲಿನ ಗುಬ್ಬಚ್ಚಿ ನಾನು.ತಂದೆ–ತಾಯಿಯ ಪ್ರೀತಿ,ಅಪ್ಪನ ದುಡಿಮೆ ದುಡ್ಡಿನಿಂದಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿಹಾರಲು ಕಲಿತೆ. ಗೂಡು ಬಿಟ್ಟು,ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,ಎತ್ತರಕ್ಕೆ ಏರುತ್ತಿದ್ದೆ. ಗುಬ್ಬಚ್ಚಿಯ ಗೂಡಲ್ಲಿಬಡತನ ಇದ್ದರೂ ಬವಣೆ ಇರಲಿಲ್ಲ;ಹಣ ಇರಲಿಲ್ಲ, ಆದರೆ ಆನಂದ ಇತ್ತು.ನೋವಿತ್ತು, ನಂಜಿರಲಿಲ್ಲ;ಕೊಳಕು ಇತ್ತು, ಕತ್ತಲೆ ಇರಲಿಲ್ಲ. ಶುಭ್ರ ನೀಲಿ ಆಕಾಶ,ತಣ್ಣನೆಯ ಗಾಳಿ,ತಳಿರಿನ ತಂಪು,ಮಲ್ಲಿಗೆಯ ಕಂಪು—ಇವೆಲ್ಲಾ ನನಗೆ ಗುರಿಯಾಗಿ,ಗುರುವಾಗಿ,ಗುರಿಯವರೆಗೂ ಕರೆದೊಯ್ದವು. ಆಮೇಲೆ…ಅರಮನೆ ಸೇರಿದೆ.ಅಂದ–ಚಂದದ ಮೈಮಾಟ,ಮೋಹ–ಮಾಯೆಯ ಪಾಶ;ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,ಹಾರಲು ಆಗಲಿಲ್ಲ. ಪಂಜರದೊಳಗೆ ರೆಕ್ಕೆ ಬಡಿಯುತ್ತಾ,ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿನಲಿವು ಕಾಣದೆಕಾದು ಕುಳಿತು ಕಂಗಾಲಾದೆ. ಹೊಸ ಪ್ರಪಂಚದಲ್ಲಿದಾರಿ ತಪ್ಪಿದೆ;ದಾರಿ ತೋರಿಸುವವರೇಕತ್ತಲಿನ ಪರದೆ ಕಟ್ಟಿದರು. ಹಾರಲೂ ಆಗದೆ,ಹೊರಳಲೂ ಆಗದೆ,ಮರುಗುತ, ಸೊರಗುತ, ಕೊರಗುತಕುಳಿತೆ—ರೆಕ್ಕೆ ಮುರಿದ ಹಕ್ಕಿಯಂತೆ. ಪಂಜರದಿಂದ ಬಿಡುಗಡೆ ಯಾವಾಗ?ನಾನು ಹಾರಬೇಕು—ಶುಭ್ರ ಗಾಳಿಯ ತಂಪಿನಲ್ಲಿ,ಸ್ವಚ್ಛ ನೀಲಿ ಆಕಾಶದ ಕಡೆಗೆ. ಮೌನವೇ ಮಾತಾಗಿದೆ.ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?ಒಂದು ದಿನ ಪಂಜರದ ಸರಳು ಮರುಗಿತು“ಬಿಡುಗಡೆ ನೀಡುವೆ ಹೋಗು ನೀನು” ಹಾರುವ ಚೈತನ್ಯ ಇಲ್ಲ;ಅದೇ ಆಕಾಶ, ಅದೇ ಗಾಳಿ—ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದರೆಕ್ಕೆ ಮುರಿದ ಹಕ್ಕಿ. ಡಾ. ಹೆಚ್. ನಟರಾಜ್ ಆರ್ಯ
ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ” Read Post »
ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು
ಕಾವ್ಯ ಸಂಗಾತಿ ಕುವೆಂಪು,ಬೇಂದ್ರೆ ಬಗ್ಗೆ ಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ. ಕನ್ನಡವೆಂದರೆ ಕುವೆಂಪು !ಕವಿಶೈಲದ ಇಂಚರ ಇಂಪುಮಲೆನಾಡಿನ ಹಸಿರಿದೆಜೋಗದ ಭರವಿದೆಕಾಜಾಣದ ಕರೆಯಿದೆಅದರಲಿಅಮ್ಮನ ಲಾಲಿಯ ತಂಪು ಇದೆ ! — ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕನಾಕು ತಂತಿ ಮೀಟುವ ಶಬ್ದ ವೈಣಿಕದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕಪಂಡಿತ ಪಾಮರರ ಪ್ರೀತಿಪಾತ್ರಕನ್ನಡಾಂಬೆಯ ಔರಸ ಪುತ್ರಕಾವ್ಯಾಂತರಿಕ್ಷದ ಧ್ರುವ ನಕ್ಷತ್ರವರಕವಿಯ ಕೀರುತಿ ಸರ್ವತ್ರ ಸುಮತಿ ನಿರಂಜನ್
ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್ ಅವರ ಎರಡು ಪುಟ್ಟ ಕವಿತೆಗಳು Read Post »









