ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಶರಣಾಗಿರುವೆ ನಿನಗೀಗ” ಓ ಮೌನವೇ! ಮಹಾಮೌನವೇ!ನೀರವ ನಿರಾಳ ಮೌನವೇ!ಬಾ ನನ್ನೆದೆಯಾಳದಲಿನಿಶ್ಚಲವಾಗಿ ನೆಲೆಸುಶರಣಾಗಿರುವೆ ನಿನಗೀಗಸೋತು ಬಂದಿರುವೆ ನಿನ್ನ ಬಳಿಗೀಗಕರುಣೆದೋರು ದಯೆತೋರಿ|| ಓ!ಅನಂತ ಮಹಾಮೌನವೇ!ನಿನ್ನ ಮೌನಗರ್ಭದಲಿ ಮಿಸುಕಾಡುತಿರುವಭಾವಕೂಸುಗಳೆಲ್ಲ ಸುಂದರ ಪದಗಳೇಒಂದೊಂದು ಮೌನ ಮಹಾಕಾವ್ಯಗಳೇ|| ತೀಡಿ ಬಂದ ತಂಗಾಳಿಯುತೂಗಿ ತಂದ ಮಣ್ಣ ಗಂಧವೆಲ್ಲಬಾಳ ಗಂಧವೇlತುಂಬಿ ಬಂದ ತಾಯ್ ಮಮತೆಯೆಲ್ಲಮಡಿಲ ಮಗುವಿಗೆ ಜೋಗುಳವೇ lಮೌನದ ಬಿಸಿ ಅಪ್ಪುಗೆಯದುಸುಂದರ ಭಾಷೆಯೇ ll ಪ್ರಕೃತಿಯ ಭಾಷೆಯೆಲ್ಲವೂ ಮೌನವೇlಮೊಗ್ಗೆಯೊಡೆದು ಅರಳುವ ಅರಳೇ!ಒಲವಿನ ಬೆಳಕೇ!ಸದ್ದಿಲ್ಲದೇ ನಡೆಯುವ ಸಂಭ್ರಮವೇ! ಓ ಮೌನವೇ!ಸೂರ್ಯೋದಯ ಚಂದ್ರೋದಯನಿನ್ನ ಪದ ಲಾಲಿತ್ಯವೇ lದಣಿದ ಮನಗಳಿಗೆ ನಿನ್ನ ಮಡಿಲದುಹೂವಿನ ಹಾಸಿಗೆಯೇ ll ಗಾಳಿಯ ಮೃದು ಸ್ಪರ್ಶಕೆ ತೂಗುವಸಸ್ಯ ಕುಲವೇ ಭೂ ದೇವಿಯ ದಣಿವಿಗೆಬೀಸಿದ ಮೌನ ಚಾಮರವೇ llಅಯ್ಯೋ!ಗಳಿಗೆಗೊಂದು ತೆರೆ ಬಂದುಕಲಕುತಿದೆ ಕಡಲ ಧ್ಯಾನವನೆ lಹಕ್ಕಿಗಳಿಂಚರವದು ತೇಲಿ ಬಂದುಕದಡುತಿದೆ ಅನಂತಕಾಲದ ಬನದ ತಪವನೆ lನೀರವತೆಯಲೂ ಮೌನವೇಸದ್ದಿನಲ್ಲೂ ನಿದ್ದೆಯೇ lಮೌನವೇ ಇದೆಲ್ಲ ನಿನ್ನ ಲೀಲೆಯೇ ll ಋಷಿಮುನಿಗಳ ಕವಿಪುಂಗವರೆದೆಯಲಿವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!ಜಗದ ಸುಂದರ ಭಾಷಿಣಿ ನೀನೆಯೇ llಕರುಣೆದೋರಿ ಬಾ ನನ್ನೊಳಗೆ ತಾಯಿಯೇ lಮೌನದೇವಿಯೇ!ಅನಂತಯಾನಕೆ ಮೌನದಲಿಕೈಹಿಡಿದು ನಡೆಸೆನ್ನನುl ಶರಣಾಗಿರುವೆ ನಾನೀಗ ನಿನಗೆಓ!ಮೌನದೇವತೆಯೇನಾನೀಗ ಶರಣಾಗಿರುವೆ ನಿನ್ನಡಿಗಳಿಗೆಓ!ಮೌನ ದೇವತೆಯೇಶರಣಾಗಿರುವೆ ನಿನಗೀಗ ಶರಣಾಗಿರುವೆ. ಡಾ. ಪುಷ್ಪಾವತಿ ಶಲವಡಿಮಠ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಜಾತಿಭೂತ” ಹಿಡ್ಕೊಂಡದ ಬಡ್ಕೊಂಡದಹಾಳು ಜಾತಿಯ ಭೂತ,ಅದರ ಬೆನ್ನು ಹತ್ತಿ ಹತ್ತಿಯೇಈ ಮನುಷ್ಯಾ ಸೋತ ಮ್ಯಾಲ ಮ್ಯಾಲಂತ ಇವ್ರುತುಂಬಾ ಮೆರಿಲಾಕತ್ತಾರ,ಕೀಳ ಕೀಳ ಅಂತ ಅವ್ರನತುಂಬ ತುಳಿಲಾಕತ್ತಾರ ಖೊಟ್ಟಿ ಮಂದಿ ಎಲ್ಲ ಸೇರಿಗಟ್ಟ್ಯಾನ ಗ್ವಾಡಿ ಕಟ್ಟ್ಯಾರ,ಆರಕ ಜೋತ ಬಿದ್ದ ಮ್ಯಾಲಇದ್ದ ಮೂರನ್ನೂ ಬಿಟ್ಟಾರ ಜಾತಿಯ ಹೆಸರಲ್ಲಿ ಎಷ್ಟೋಜೀವಗಳ ಬಲಿ ಕೊಟ್ಟಾರ,ದೇವ್ರು ದಿಂಡ್ರೆಲ್ಲವು ಕೂಡಜಾತಿಗಿ ಸೇರಿಸಿ ಬಿಟ್ಟಾರ ಭೂಮಿ ಮ್ಯಾಲ ಏನಂತಇಂತವರೆಲ್ಲ ಹುಟ್ಟ್ಯಾರ,ಜಾತಿ ಜಾತಿ ಅಂತಾ ಹೇಳಿಮನುಷ್ಯತ್ವವ ಸುಟ್ಟಾರ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ” Read Post »

ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”. ಮರಿ ಹಕ್ಕಿಗೆ ರೆಕ್ಕೆಗಳಿವೆಎಲ್ಲವನು ಎದುರಿಸುವಛಲವಿದೆಆಗಸದೆತ್ತರಕ್ಕೆ ಏರುವಆಕಾಂಕ್ಷೆಯಿದೆರೆಕ್ಕೆಯ ಶಕ್ತಿಗೆ  ಅನುಮತಿಗಿಂತಪ್ರೀತಿ ವಿಶ್ವಾಸದಆರೈಕೆಯಿರಲಿಬಾನೆತ್ತರಕೆ ಹಾರಬೇಕಾದಒಲವಿರಲಿಜೊತೆಯಿರುವೆನೆಂಬ ಭರವಸೆಯಿರಲಿಸಂವಾದದಸಂವೇದನೆಯಿರಲಿ. ಪ್ರೊ. ರಾಜೇಶ್ವರಿ ಶೀಲವಂತ ಪುಣೆ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ” Read Post »

ಇತರೆ

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                     

ಮಾಧ್ಯಮ ಸಂಗಾತಿ ವನಜ ಮಹಾಲಿಂಗಯ್ಯ .                      “ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ಈಗ ಏಳೆಂಟು ವರ್ಷಗಳ ಹಿಂದೆ ಹೋಗಿ ನೋಡಿ, ಮೊಬೈಲ್ ಗಳನ್ನಿಡಿದು ರಸ್ತೆಗಳಲ್ಲಿ ಹುಚ್ಚರಂತೆ ಒಬ್ಬೊರೇ ಮಾತನಾಡುತ್ತಾ, ಕಿವುಡರು ಹಾಕಿಕೊಳ್ಳುವ ಮಿಷನ್ಗಳಂತೆ  ಇಯರ್ ಪೋನ್, ಬ್ಲೂಟೂತ್ ಹಾಕಿಕೊಂಡು ಓಡಾಡುವವರನ್ನು ನೋಡಿ ಏನಪ್ಪ ಇದು  ಅನ್ನೋ ತರ ಆಗಿತ್ತು. ಇತ್ತೀಚೆಗಂತೂ ಮೊಬೈಲ್ ನ ಹಾವಳಿ  ಬೇರೆ ತರ ಆಗಿದೆ.watsapp , F b, insta ದಲ್ಲಿ ಪರಿಚಯವಾದವರ ಜೊತೆಯಲ್ಲಿ ಚಾಟಿಂಗ್ ಮಾಡ್ತಾ ಮಾಡ್ತಾ ಮನೆಯ ಪ್ರತಿಯೊಂದು ವಿಷಯಗಳನ್ನು ವಿವರವಾಗಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಮಕ್ಕಳು ಹೆಚ್ಚಾಗಿಯೇ ಬೆಳಸಿಕೊಳ್ಳುತ್ತಿದ್ದಾರೆ.ಇದನ್ನೇ ಬಳಸಿಕೊಂಡು  ಹುಡುಗಿಯರ  ಜೊತೆ ಸಲುಗೆಯಿಂದ ಮಾತನಾಡುತ್ತಾ ಅವರನ್ನು ಸಂತೈಸುತ್ತ  ನಾಟಕವಾಡುವ ಮಂದಿ ಜಾಸ್ತಿಯಾಗುತ್ತಿದ್ದಾರೆ.ಆದರೆ ಮಕ್ಕಳು ತಂದೆ ತಾಯಂದಿರ ಪ್ರೀತಿ ಅವರ ಜವಾಬ್ದಾರಿಗೆ ಬೆಲೆ ಕೊಡದೇ ಮೂರು ದಿನದ ಪರಿಚಯಸ್ಥರಿಗೆ ತಮ್ಮೆಲ್ಲಾ ಗುಟ್ಟನ್ನು ಬಿಟ್ಟುಕೊಟ್ಟು ಮೂರ್ಖರಾಗುತ್ತಿದ್ದಾರೆ. ಎಷ್ಟೇ ಆಗಲಿ ನನ್ನ ಅಪ್ಪ ಅಮ್ಮ ಹೆತ್ತು ಹೊತ್ತು ಸಾಕಿ ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಕಾಳಜಿ ವಹಿಸಿದ್ದಾರೆ ಎನ್ನುವ  ಅರಿವಿಲ್ಲದೆ ಮನೆಯ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಎಷ್ಟು ಸರಿ? ಮೊನ್ನೆ ಇದೇ ತರಹದ ಒಂದು ದೂರು ನನಗೆ ಬಂದಿತ್ತು.ಅಪ್ಪ ಅಮ್ಮನಿಗೆ ಮಗಳಿಂದ ತುಂಬಾ ಕಿರುಕುಳ, ಮಾತೇ ಕೇಳುವುದಿಲ್ಲ, ಪಿ ಜಿ ಗೆ ಸೇರಿಸಿ   ಎಂದು ಒತ್ತಾಯ ಮಾಡುತಿದ್ದಾಳೆಂದು. ನಾನು ಹೋದೆ ಅಲ್ಲಿ ಅವಳ ತಂದೆ ತಾಯಿ ಅವಳ ಬಗ್ಗೆ ಏನು ಹೇಳಲು ಹುಡುಗಿ ಬಿಡುತ್ತಿಲ್ಲ.ಒಂದೇ ಹಠ ನನ್ನ ಪಿಜಿಗೆ ಕಳಿಸಿ ಮೇಡಂ ನಾನು ಮನೆಯಲ್ಲಿರುವುದಿಲ್ಲ. ನನಗೆ ತುಂಬಾ ಕಿರುಕುಳ ಕೊಡುತ್ತಾರೆ ನಾನು ಪಿ ಜಿಯಲ್ಲಿರುತ್ತೇನೆ ಎಂದು. ಯಾಕೆ ಇಂತಹ ತೀರ್ಮಾನವೆಂದು ಕೆಳಿದರೆ ನನಗೆ ಮನೆಯಲ್ಲಿರಲು ಇಷ್ಷವಿಲ್ಲ.ಒಂದೇ ಉತ್ತರ. ನಾನಾಗ ನಿನ್ನ ಮೊಬೈಲ್ ಕೊಡು ಎಂದು ಕೇಳಿದೆ. ಇಲ್ಲ ಮೇಡಂ ನನ್ನ ಹತ್ತಿರ ಮೊಬೈಲ್ ಇಲ್ಲಅಂದಳು .ಇದೆ ಎಂದು ಅವರ ತಾಯಿ ಹೇಳಿದರು..ಕೊಡು ಎಂದೆ ತಂಬಾ ಜೋರುಮಾಡಿದ ಮೇಲೆ ಸ್ವಿಚ್ ಆಫ್ ಮಾಡಿ   ಬಚ್ಚಿಟ್ಟ ಮೊಬೈಲ್ ಕೊಟ್ಟಳು. ಲಾಕ್ ಓಪನ್ ಮಾಡೆಂದರೆ ಮಾಡಲೇ ಇಲ್ಲ ಗೊತ್ತಿಲ್ಲ, ಮರೆತೋಗಿದೆ ಅಂದಳು. ಸಿಟ್ಟು ಬಂದು ಎರಡು ಬಿಟ್ಟೆ.ಆಗ ಆನ್ ಮಾಡಿದಳು.ನಾನು ತೆಗೆದು ನೋಡ್ತಿನಿ ಮನೆಯಲ್ಲಿ ನಡೆಯೋದನ್ನೆಲ್ಲ ಒಬ್ಬ ಹುಡುಗನಿಗೆ ಮೆಸೇಜ್ ಮಾಡಿದಾಳೆ. ಅವನ್ಯಾರೆಂದು ಕೇಳಿದೆ , f b ಸ್ಹೇಹಿತ  ತುಂಬಾ ಒಳ್ಳೆಯವನು ಅಂದಳು. ಸರಿ ಅಂದು  ಅವನಿಗೆ ಕಾಲ್ ಮಾಡಿದೆ.ಯಾರೆಂದು ವಿಚಾರಿಸಿದೆ,  ಅವನು ಬೇಂಗಳೂರಿನಲ್ಲಿ ಕೋರಿಯರ್ ಬಾಯ್. ಅಂತೆ ,  ಏನಪ್ಪ ನೀನು ನಮ್ಮ ಹುಡುಗಿಗೆ  ಇಷ್ಷವಾಗಿದಿಯಂತೆ ಇವಳಿಗೆ ಮದುವೆ ಮಾಡ್ಕೋತಿಯಾ? ಅಂತ ಕೇಳಿದೆ. ಸ್ಪೀಕರ್ ಅನ್ ಮಾಡಿದ್ದೆ  ನಾನ್ಯಾಕರಿ ಅವಳನ್ನ ಮದುವೆಯಾಗಲಿ ಟೈಂಪಾಸಿಗೆ ಅವಳ ಹತ್ತಿರ ಮಾತಾಡ್ತಿದ್ದೆ , ನನಗೆ ಲವ್ವರ್ ಇದಾಳೆ ಅಂದ. ಹುಡುಗಿ ಶಾಕ್!  ಅವಳು ಪಿ ಜಿ ಗೆ ಹೊರಟಿದ್ದು ಅವನ ಜೊತೆ ಚಾಟಿಂಗ್ ಮಾಡಲಿಕ್ಕೆ.ಅವನು ಹೇಳಿದ್ದು ಕೇಳಿದ ನಂತರ ನಾನು ಎಲ್ಲಿಗೂ ಹೊಗಲ್ಲ. ಮನೆಯಲ್ಲಿಯೆ ಇರುತ್ತೇನೆ ಅಂದಳು. ಅಂದರೆ ಅರ್ಥ ಮಾಡಿಕೊಳ್ಳಿ ಮೊಬೈಲ್ನಿಂದ  ತಾಯಿ ತಂದೆಯನ್ನು ದೂರಮಾಡಿಕೊಂಡು ಹೋಗುವ ಕೆಟ್ಟ ನಿರ್ಧಾರಕ್ಕೆ ಬರುವ ಈ ಮಕ್ಕಳು  ಎಂತಹ ವಿದ್ಯಾವಂತರು?  ಪೋನಿಂದ ಪರಿಚಯವಾದ ತಕ್ಷಣ ಮನೆಯ ವಿಷಯವನ್ನೆಲ್ಲ  ಹೇಳಿಕೊಳ್ಳುವುದು ಎಷ್ಟು ಸಮಂಜಸ?  ಬೇಡ ಮಕ್ಕಳೇ ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಹೆತ್ತವರನ್ನು ನೋಯಿಸಬೇಡಿ. ಜೀವ ಜೀವನ ಹೋದರೆ ಮತ್ತೆ ಸಿಗುವುದಿಲ್ಲ. ತಂದೆ ತಾಯಿಯ ಮರ್ಯಾದೆಯನ್ನು ಕಳೆದು  ಯಾರನ್ನೋ ನಂಬಿ ಹಾಳಾಗಬೇಡಿ.ಮೊಬೈಲನ್ನು ಒಳ್ಳೆಯದಕ್ಕೆ ಉಪಯೋಗಿಸಿ ಎಂದಷ್ಟೆ ನನ್ನ ಕಾಳಜಿ ವನಜ ಮಹಾಲಿಂಗಯ್ಯ                      

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                      Read Post »

ಕಾವ್ಯಯಾನ

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಹೌದು, ಗಂಡಸರೆ ಹೀಗೇ!!” ಗಂಡಸರು ಸ್ವಲ್ಪ ಕೆಟ್ಟವರೇ ಹೌದು,ಆದರೆ ಜವಾಬ್ದಾರಿಯ ಸಾಹುಕಾರರು.ಮಾತಿನಲ್ಲಿ ಕಠಿಣತೆ ಇದ್ದರೂ,ಮನದೊಳಗೆ ಕರ್ತವ್ಯದ ಭಾರ ಹೊತ್ತವರು. ಹೌದು, ಅವರು ಕೆಟ್ಟವರೇ ಸರಿ,ಭಾವನೆ ತೋರಿಸೋದು ಅವರು ಕಲಿತಿಲ್ಲ.ನೋವುಗಳನ್ನು ನಗು ಮುಖಕ್ಕೆ ಮರೆಸಿಕೊಂಡು,ಜೀವನದ ಹೊರೆ ಹೊತ್ತು ನಡೆಯುವವರು. ತಮ್ಮ ಕನಸುಗಳನ್ನು ಬಲಿಕೊಟ್ಟು,ಕುಟುಂಬದ ನಗುವಲ್ಲಿ ಸಂತೋಷ ಕಂಡವರು.ಮೌನದಲ್ಲೇ ಪ್ರೀತಿ ತೋರಿ,ನಗುವ ಮಾರಿಯೇ ಬದುಕಿದವರು. ಕಣ್ಣೀರು ಕಣ್ಣಲ್ಲಿ ನಿಂತರೂ,“ನಾನು ಬಲಿಷ್ಠ” ಎನ್ನುವ ಮುಖವಾಡ.ಕುಟುಂಬದ ನಾಳೆಗೆ ಆಶ್ರಯವಾಗಿ,ಇಂದಿನ ನೋವನ್ನು ನುಂಗಿದವರು. ಹೆಣ್ಣಿಗೆ ಸಹಾಯ ಮಾಡಿದರೆ,ಅವನು “ಕಾಮುಕ” ಎಂಬ ಬಿರುದು.ಉದ್ದೇಶದ ಪಾವಿತ್ರ್ಯ ಕಾಣದೆ,ಸಮಾಜವೇ ತೀರ್ಪು ಬರೆಯುವುದು. ಒಳ್ಳೆಯತನಕ್ಕೂ ಸಂಶಯದ ಕಣ್ಣು,ಸಹಾಯಕ್ಕೂ ತಪ್ಪು ಅರ್ಥ.ಮೌನವಾಗಿ ಹಿಂದೆ ಸರಿದು,ತಮ್ಮ ಮನಸನ್ನೇ ಮುಚ್ಚಿಕೊಂಡವರು. ಹೌದು ಗಂಡಸರೆ ಹೀಗೆ ಅವರು ದೂರ ಉಳಿದರು,ಭಾವನೆ ತೋರಿಸೋ ಧೈರ್ಯ ಕಳೆದುಕೊಂಡರು.ತಪ್ಪಾಗಿ ಅರ್ಥವಾಗುವ ಭಯದಲ್ಲಿ,ಒಳ್ಳೆಯತನವನ್ನೇ ಮರೆಮಾಚಿಕೊಂಡರು.  ಹೌದು ಗಂಡಸರೆ ಹೀಗೆ,ಅತ್ತರು ಅವಮಾನ, ನಕ್ಕರು ಅವಮಾನ,ಭಾವನೆ ತೋರಿಸದಿದ್ದರೆ,ಕಲ್ಲು ಹೃದಯದವರು. ಅವರಿಗೆ ಯಾರೂ ಹೇಳಲಿಲ್ಲ,“ನಿನ್ನ ಅಳುವಿಗೂ ಅರ್ಥ ಇದೆ” ಎಂದು.ಕಣ್ಣೀರಿಲ್ಲದೇ ಅಳುವುದನ್ನ ಕಲಿತು,ಹೃದಯವನ್ನೇ ಸಮಾಧಿ ಮಾಡಿಕೊಂಡವರು.ಈ ಗಂಡಸರು. ಹೌದು ಈ ಗಂಡಸರೆ ಹೀಗೆ ಸರಸ್ವತಿ ಕೆ ನಾಗರಾಜ್.

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್ Read Post »

ಇತರೆ, ಲಹರಿ

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ

ಲಹರಿ ಸಂಗಾತಿ ಪ್ರೇಮಾ ಟಿ ಎಂ ಆರ್‌ ಅವರ ಲಹರಿ “ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..” ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ… “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..                 “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ… ಪ್ರೇಮಾ ಟಿ ಎಂ ಆರ್

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಆ ರಾತ್ರಿ” ಆ…. ರಾತ್ರಿ… ಯಾಕೇ… ಹೀಗೆಕಡಲ ತೆರೆಯ ಶಬ್ದದ ಹಾಗೆ….ತೆರೆಯನೊರೆಯು ತಟವ ಸೇರಿದ ಹಾಗೆ..ಕತ್ತಲೆಯಲ್ಲಿ ಮೌನವೇ ಮಾತಾಡಿದ ಹಾಗೆ ನಿನ್ನ ಕಣ್ಣೊಳಗಿನ ಬೆಳಕಿನಲಿನನ್ನ ಕನಸು ಕರಗಿದ ಹಾಗೆತುಟಿಗಳ ಅಂಚಿನ ನಗುವಿನಲಿನನ್ನ ಮನಸು ನಾಚಿದ ಹಾಗೆ ನಿನ್ನ ಉಸಿರಿನ ಬೆಚ್ಚನೆಯಲಿನಾ ನನ್ನ ಮರೆತ ಹಾಗೆನಿನ್ನ ಹೃದಯದ ಬಡಿತಕೆನನ್ನ ಹೃದಯ ನೃತ್ಯ ಮಾಡಿದ ಹಾಗೆ ನಿನ್ನ ಬೆರಳ ಬಂಧನದಲ್ಲಿನನ್ನ ಅಲಂಕಾರ ಕಂಡ ಹಾಗೆನಿನ್ನ ಎದೆಗೆ ತಲೆಬಾಗಿನನ್ನುಸಿರನು ಚೆಲ್ಲಿದ ಹಾಗೆ ನಿನ್ನ ತುಟಿಗಳ ಮೌನನನ್ನೊಡಲ ಮಧುರತೆಯ ಹಾಗೆಈ ಪ್ರೀತಿಯ ರಾತ್ರಿಯ ಅಂಗಳದಲ್ಲಿನಿನ್ನಲ್ಲಿ ನಾನು ಲೀನವಾದ ಹಾಗೆ. ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ” Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ತನಗಗಳು ಮಳೆ ಹೊಯ್ದ ವರುಣಸೂರ್ಯನ ಕಳಿಸಿದಹಸಿಯಾದ ಭೂಮಿಯುಹದವಾಗಿದೆನೆಂದ? ಬಿಸಿ ಕೊಟ್ಟ ರವಿಯುಹೂವು ಅರಳಿಸಿದಸಂಜೆ ಹೊತ್ತಾಗುತಾತಾನೇ ನಾಚಿ ಕೆಂಪಾದ. ಮಳೆ ಸುರಿಸಿ ಬಾನುಇಳೆಗೆ ಇಣುಕಿತುಚಿಗುರೊಡೆದ ಭೂಮಿಧನ್ಯವಾದ ಹೇಳಿತು. ಹುಲುಸಾದ ಭೂಮಿಗೆಸಂಕ್ರಾಂತಿಯೇ ಸೀಮಂತಸಲಹುವ ಭೂತಾಯಿಕಕ್ಕುಲಾತಿ ಹೃದಯಿ. ಕೀಟವ ತಿಂದ ಹಕ್ಕಿಬೆಳೆಯ ರಕ್ಷಿಸಿತುಮಾಗಿದ ತೆನೆ ತುಂಬಿಮೃಷ್ಟಾನ್ನಪಡೆಯಿತು. ಬೆವರು ಸುರಿಸುತಕಷ್ಟಪಡೋ ರೈತನುಸಾಲ-ಶೂಲವಾದರೂಅನ್ನ ಕೊಡೋ ದಾತನು. ವ್ಯಾಸ. ಜೋಶಿ.

ವ್ಯಾಸ ಜೋಶಿ ಅವರ ತನಗಗಳು Read Post »

ಇತರೆ, ಗಜಲ್ ದುನಿಯಾ

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ

ಗಜಲ್‌ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಎಲ್ಲರಿಗೂ ನಮಸ್ಕಾರಗಳು…ಗಜಲ್.. ಇದು ಕೇವಲ ಕಾವ್ಯ ಪ್ರಕಾರವಲ್ಲ, ಇದೊಂದು ಜೀವನ ಶೈಲಿ, ತಹಜೀಬ್ ಹಾಗೂ ಸಂವೇದನೆಗಳ ಒಂದು ಭಾಗ. ಹೃದಯದ ಆಳದಿಂದ ಹೊರಬರುವ ನಿಜವಾದ ಧ್ವನಿ. ಇದು ಭಾವನೆಗಳು, ಪ್ರೀತಿ, ನೋವು ಮತ್ತು ಭರವಸೆಯ ಸುಂದರ ಅಭಿವ್ಯಕ್ತಿ. ಇದೊಂದು ಎಕ್ಸರೇ ಇದ್ದಂತೆ, ನಮ್ಮೊಳಗಿನ ಗಾಯ ತೋರಿಸಿ ಅರಿತುಕೊಳ್ಳಲು ಸಹಕರಿಸುತ್ತದೆ. ಗಜಲ್… ಕನ್ನಡದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಹೆಚ್ಚೆಚ್ಚು ಓದುಗರನ್ನೂ- ಬರಹಗಾರರನ್ನು ಸೆಳೆಯುತ್ತಿರುವ ಕಾವ್ಯ ಪ್ರಕಾರ. ಕನ್ನಡದ ಭಾಗಶಃ ಸಾಹಿತ್ಯಾಸಕ್ತರು ಗಜಲ್ ಗಳನ್ನು ಬರೆಯಲು, ಓದಲು ಹಾಗೂ ಗಜಲ್ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಇಂಥ ಗಜಲ್ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಇಂದು ಗಜಲ್ ಕಾವ್ಯ ಪ್ರಕಾರ ಅಸಂಖ್ಯಾತ ಸಹೃದಯಿಗಳಿಂದ ಕನ್ನಡ ಸಾಹಿತ್ಯ ಪರಪಂಚದಲ್ಲಿ ಸಕ್ರೀಯವಾಗಿದೆ. ಈ ಗಜಲ್ ಕಾವ್ಯ ಪ್ರಕಾರ ಹತ್ತು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಲಕ್ಷಣಗಳೆಂದು ವಿಂಗಡಿಸಲಾಗಿದೆ. ಇಂದು ನಾವು ಈ ಲಕ್ಷಣಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ಅಳವಡಿಸಿಕೊಳ್ಳುತಿದ್ದೇವೆ ಹಾಗೂ ಆ ದಿಸೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮತ್ಲಾ, ಮಕ್ತಾ, ರದೀಫ್ ಹಾಗೂ ಕಾಫಿಯಾ… ಇವು ಗಜಲ್ ನ ನಾಲ್ಕು ಅಂಗಗಳು. ಇವುಗಳಲ್ಲಿ ‘ರದೀಫ್’ ಐಚ್ಛಿಕವಾಗಿದ್ದು, ಉಳಿದವುಗಳು ಗಜಲ್ ನ ಜೀವಾಳವಾಗಿವೆ. ಇವುಗಳ ಹೊರತು ಗಜಲ್ ರಚನೆಯಾಗದು. ಯಾರಾದರೂ ಬರೆದಿದ್ದಾರೆ, ಬರೆಯುತ್ತಾರೆ ಎಂದರೆ ಅದು ಗಜಲ್ ಎಂದೆನಿಸಿಕೊಳ್ಳದೆ, ಕಾವ್ಯ ಎಂದೆನಿಸಿಕೊಳ್ಳುವುದು! ಗಜಲ್ ಮೂಲಭೂತವಾಗಿ ಷೇರ್ ಮಾದರಿಯಲ್ಲಿ ಇರುವಂತದ್ದು. ಈ ಷೇರ್ ನ ಪ್ರತಿ ಮಿಸ್ರಾ ಸ್ವತಂತ್ರವಾಗಿದ್ದು, ಒಂದಕ್ಕೊಂದು ಪೂರಕವಾಗಿಯೋ ಅಥವಾ ವಿರುದ್ಧಮುಖವಾಗಿಯೊ ಇರಬೇಕು. ಮಿಸ್ರಾ-ಎ-ಊಲಾದ ಕೊನೆಯಲ್ಲಿಯ ಕೌತುಕತೆ ಮಸ್ರಾ-ಎ-ಸಾನಿಯ ಆರಂಭದಲ್ಲಿ ರೂಪ ಪಡೆಯಬೇಕು. ಅವು ಒಂದರೊಳಗೊಂದು ತಳುಕು ಹಾಕಿಕೊಂಡಿರಬಾರದು. ಇದುವೇ ಕಾವ್ಯವನ್ನು ‘ಗಜಲ್’ ಆಗಿಸುವತ್ತ ಮುನ್ನಡೆಯುತ್ತದೆ. ಇಂಥ ಗಜಲ್ ಗೆ ‘ಮತ್ಲಾ’ ತುಂಬಾ ಅವಶ್ಯಕ. ಇದು ಮನೆಗೆ ಹೊಸ್ತಿಲು ಇರುವಂತೆ! ಇನ್ನೂ ‘ಮತ್ಲಾ’ ಅಂದರೆ ಆರಂಭ, ಉದಯ ಎಂದರ್ಥ. ಇಲ್ಲಿ ಏನು ಹೇಳಬೇಕಾಗಿದೆ ಎನ್ನುವುದರ ನಿರ್ಣಯ, ಗಜಲ್ ಕಾರರ ಉದ್ದೇಶವಿರುತ್ತದೆ. ಗಜಲ್ ಒಳಗೊಂಡಿರಬಹುದಾದ, ಒಳಗೊಳ್ಳಬಹುದಾದ ವಿಷಯ, ಮೀಟರ್, ವಜನ್, ಬೆಹರ್ ಹಾಗೂ ಕವಾಫಿ (ಕಾಫಿಯಾಗಳು) ಆಯ್ಕೆಯನ್ನು ನಿರ್ಧರಿಸುತ್ತದೆ. ‘ಮತ್ಲಾ’ ಏನು ಒಳಗೊಂಡಿರುತ್ತದೆಯೋ ಅದುವೇ ಇಡೀ ಗಜಲ್ ನ ಉದ್ದಕ್ಕೂ ಬರಬೇಕು. ಅದು ಅಲಾಮತ್ ಆದರೂ ಸರಿ, ಮೀಟರ್, ಬೆಹರ್ ಆದರೂ ಸರಿಯೆ! ಅಂತೆಯೇ ಶಾಯರ್/ಶಾಯರಾ ಆದವರು ಮತ್ಲಾವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಹೋಗಬೇಕು. ಇದೊಂದು ರೀತಿಯಲ್ಲಿ ಗಜಲ್ ನ ಉಳಿದ ಅಶ್ಆರ್ ಗೆ ಸ್ಪಷ್ಟಿಕರಣ ಕೊಡುವ ರೀತಿಯಲ್ಲಿ ಇರುತ್ತದೆ, ಇರಬೇಕು! ಇದು ಗಜಲ್ ನ ಸೌಂದರ್ಯಕ್ಕೆ ಬಾಗಿಲು, ಭಾವ ಲೋಕಕ್ಕೆ ಪ್ರವೇಶದ್ವಾರವಿದ್ದಂತೆ. ಇದು ಅಷ್ಟೊಂದು ಸರಳವಲ್ಲ, ಸುಲಭವೂ ಅಲ್ಲ. ಪ್ರತಿಯೊಬ್ಬರೂ ಇದನ್ನು ‘ಸವಾಲು’ ಎಂದು ಸ್ವೀಕರಿಸಿ ಗಜಲ್ ರಚನೆಗೆ ಮುಂದಾಗಬೇಕು. ‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ. ಗಜಲ್ ಗೆ ‘ಮತ್ಲಾ’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಮಕ್ತಾ’. ಇದು ಗಜಲ್ ಗೆ ಒಂದು ತಾರ್ಕಿಕ ಹಾಗೂ ಭಾವನಾತ್ಮಕ ಅಂತ್ಯವನ್ನು ನೀಡುತ್ತದೆ. ಅಂದರೆ, ಶಾಯರ್/ಶಾಯರಾ ಅವರ ಇಂಗಿತ, ಆಶಯ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂದರೆ, ಅವರ ಅಂತಿಮ ಮಾತು, ಸಂದೇಶ ಹಾಗೂ ವೈಯಕ್ತಿಕ ಧ್ವನಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಷೇರ್ ಓದುತಿದ್ದಂತೆಯೇ ಗಜಲ್ ಮುಗಿಯಿತು ಎಂಬ ಭಾವ ಸಹೃದಯ ಓದುಗರಲ್ಲಿ, ಕೇಳುಗರಲ್ಲಿ ಬರುತ್ತದೆ, ಬರಬೇಕು. ಇಂತಹ ‘ಮಕ್ತಾ’ಗೆ ಇನ್ನೊಂದು ಬಹುಮುಖ್ಯವಾದ ಲಕ್ಷಣವಿದೆ. ಅದೆಂದರೆ ‘ತಖಲ್ಲುಸ’. ತಖಲ್ಲುಸ್ ಅಂದರೆ ಶಾಯರ್/ಶಾಯರಾ ಅವರ ಗುರುತು. ಇಲ್ಲಿ ಅವರು ತಮ್ಮ ಹೆಸರು, ಇಲ್ಲವೇ ತಮ್ಮ ಇಷ್ಟದ ಹೆಸರನ್ನು ಬಳಸುತ್ತಾರೆ. ಇದು ಹೆಚ್ಚಾಗಿ ‘ನಾಮವಾಚಕ’ವಾಗಿಯೇ ಬಳಕೆಯಾಗಿದೆ. ಆದಾಗ್ಯೂ ಈ ತಖಲ್ಲುಸ್ ರೂಪಕವಾಗಿ ಬಳಕೆಯಾದರೆ ‘ಮಕ್ತಾ’ಗೆ ಒಂದು ಅನುಪಮ ಕಳೆ ಬರುತ್ತದೆ. ‘ತಖಲ್ಲುಸ್’ ಬಳಕೆ ಐಚ್ಛಿಕವಾಗಿದ್ದರೂ ಅದರ ಉಪಸ್ಥಿತಿಯೇ ‘ಮಕ್ತಾ’ಗೆ ಅನ್ವರ್ಥಕವಾಗಿದೆ. ಒಂದುವೇಳೆ ಬೇಮಕ್ತಾ ಷೇರ್ ಇದ್ದರೆ ಅದನ್ನು ಗಜಲ್ ನ ಕೊನೆಯ ಷೇರ್ ಎಂದು ಗುರುತಿಸುವುದು ಕಷ್ಟ! ಇನ್ನೂ ಕಾಫಿಯಾ… ಗಜಲ್ ನ ಉಸಿರು, ಕವಾಫಿ (ಕಾಫಿಯಾಗಳು) ಹೊರತುಪಡಿಸಿ ಗಜಲ್ ಅನ್ನು ಊಹಿಸಿಕೊಳ್ಳಲೂ ಆಗದು! ಕಾಫಿಯ ಆಯ್ಕೆ ಶಾಯರ್/ಶಾಯರಾ ಅವರ ಸೃಜನಶೀಲತೆ, ಗಜಲ್ ಮೇಲಿನ ಪ್ರೀತಿ-ಹುಚ್ಚನ್ನು ಅವಲಂಬಿಸುತ್ತದೆ. ಗಜಲ್ ಕಲಿಕೆಯ ಆರಂಭಿಕ ಹಂತದಲ್ಲಿ ‘ಕಾಫಿಯಾ’ವನ್ನು ಸಾಮಾನ್ಯವಾಗಿ ‘ಪ್ರಾಸ’ ಎಂದು ಗುರುತಿಸಲಾಗುತ್ತದೆ. ಆದರೆ ‘ಪ್ರಾಸ’ ಎಂಬ ಸಾಮಾನ್ಯೀಕರಣ ತುಂಬಾ ಅಪಾಯಕಾರಿ! ಏಕೆಂದರೆ ಕಾಫಿಯಾ ಎಂದರೆ ಕೇವಲ ಪ್ರಾಸವಲ್ಲ, ರವಿ/ರವೀಶ್ ಹೊಂದಿದ್ದರೆ ಸಾಲದು. ಸಾಧ್ಯವಾದಷ್ಟು ಸಮತೂಕ ಹಾಗೂ ಸಮ ಅಕ್ಷರಗಳಿಂದ ಕೂಡಿದ್ದು ರೌಫ್, ಕೈದ್ ಒಳಗೊಂಡಿರಬೇಕು. ಏಕ ಅಲಾಮತ್ -ಬಹು ಅಲಾಮತ್ ರೂಢಿಸಿಕೊಂಡಿರಬೇಕು. ಇದು ಅಷ್ಟೊಂದು ಸುಲಭವಲ್ಲ, ಇದಕ್ಕೆ ಬದ್ಧತೆ ಮತ್ತು ಅಭ್ಯಾಸ ಬೇಕು. ಇದು ಸೃಜನಶೀಲತೆಗೆ ಅಡ್ಡಿಪಡಿಸುತ್ತದೆ ಎಂದು ಭಾವಿಸುವುದು ತರವಲ್ಲ, ಬದಲಿಗೆ ಇದುವೇ ಸೃಜನಶೀಲತೆ ಎಂದು ಬಯಸಬೇಕು! ಪರಿಪೂರ್ಣ ಕವಾಫಿಯ ಆಯ್ಕೆಯೇ ಗಜಲ್ ಅನ್ನು ಗೆಲ್ಲಿಸುತ್ತದೆ. ಅಂತೆಯೇ ಕವಾಫಿ ಗಜಲ್ ನ ಧ್ವನಿಯನ್ನು ಬಲಪಡಿಸುವಂತಿರಬೇಕು, ಗಜಲ್ ನ ಭಾವಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಇರಬೇಕು. ಇಂತಹ ‘ಕಾಫಿಯಾ’ ಇಲ್ಲದ ಬರಹ ಕಾವ್ಯವಾಗಬಹುದೇ ಯಾವತ್ತೂ ಗಜಲ್ ಆಗದು! ಇದು ಕಹಿಯೆನಿಸಿದರೂ ಸತ್ಯ! ರದೀಫ್.. ಗಜಲ್ ಗೆ ಹಾಡುಗಬ್ಬದ ಪೋಷಾಕು ತೊಡಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ‘ಗಜಲ್’ ಶಿಷ್ಟ ಸಾಹಿತ್ಯ ಪ್ರಕಾರವಾದರೂ ರದೀಫ್ ಇದಕ್ಕೆ ಜಾನಪದೀಯ ರೂಪವನ್ನು ನೀಡುವಲ್ಲಿ ಶ್ರಮಿಸುತ್ತದೆ. ಗಜಲ್ ಗೆ ವಿಶಿಷ್ಟ ಗೇಯತೆ, ಲಾಲಿತ್ಯ ಮತ್ತು ಭಾವತೀವ್ರತೆಯನ್ನು ನೀಡುತ್ತದೆ. ಇದುವೇ ಜನರ ನಾಲಿಗೆಯ ತುದಿಯಲ್ಲಿ ಜೀವಂತವಾಗಿ ಉಳಿಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ರದೀಫ್ ನ ಆಯ್ಕೆಗೆ ಸಮರ್ಪಕ ಯೋಚನೆ ಅವಶ್ಯಕ. ಅನಗತ್ಯ ಪದಗಳ, ಶಬ್ಧಗಳ ಬಳಕೆ ರಸಭಂಗ ಮಾಡುತ್ತದೆ ಎಂಬುದನ್ನು ಮರೆಯಬಾರದು! ಸಾಮಾನ್ಯವಾಗಿ ದಿನನಿತ್ಯ ಬಳಸುವ ಪದಗಳಿಗಿಂತ ವಿಭಿನ್ನವಾಗಿಯೂ, ಗಾಢಭಾವ, ಸುಲಭವಾಗಿ ಉಚ್ಚರಿಸಬಲ್ಲಂತಹ ಪದಗಳ ಆಯ್ಕೆ ಮಾಡಬೇಕು. ರದೀಫ್ ಗಜಲ್ ನ ಕಾಂತಿ, ರಮ್ಯತೆ ಹಾಗೂ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ‘ರದೀಫ್’ ಅತ್ಯವಶ್ಯಕ. ಆದಾಗ್ಯೂ ಇದರ ಬಳಕೆ ಐಚ್ಛಿಕವಾಗಿದೆ! ಇನ್ನೂ ಗಜಲ್‌ನ ಭಾಷೆ ಲಾಲಿತ್ಯಪೂರ್ಣ, ಸಂಕೇತಾತ್ಮಕ ಮತ್ತು ಸಂವೇದನಾಶೀಲವಾಗಿರಬೇಕು. ನೇರವಾದ ಹೇಳಿಕೆಗಳ ಬದಲು ಸೂಚನೆ, ಸಂಕೇತ ಮತ್ತು ರೂಪಕಗಳ ಮೂಲಕ ಭಾವವನ್ನು ಹೇಳುವುದು ಗಜಲ್‌ನ ಮುಖ್ಯ ಲಕ್ಷಣವಾಗಿದೆ. ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಗಾಢತೆ ಹೊಂದಿರಬೇಕು. ರೂಪಕ, ಪ್ರತೀಕ, ಅಲಂಕಾರ, ವ್ಯಂಗ್ಯಗಳ ಸಮೃದ್ಧ ಬಳಕೆಯಾಗಬೇಕು. ಪ್ರತಿ ಷೇರ್ ಸ್ವತಂತ್ರವಾಗಿದ್ದರೂ ಭಾಷೆಯ ಲಯ ಮತ್ತು ಭಾವದ ತೀವ್ರತೆ ಗಜಲ್‌ಗೆ ಏಕತೆಯನ್ನು ನೀಡಬೇಕು. ಉರ್ದೂ ಗಜಲ್ ಪರಂಪರೆಯಲ್ಲಿ ಪರ್ಷಿಯನ್–ಅರಬಿ ಪದಗಳ ಪ್ರಭಾವ ಕಂಡುಬಂದರೂ, ಕನ್ನಡ ಗಜಲ್‌ನಲ್ಲಿ ದೇಸಿ, ತದ್ಭವ ಮತ್ತು ತತ್ಸಮ ಪದಗಳ ಸಮನ್ವಯ ಕಾಣಸಿಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್‌ನ ಭಾಷೆ ಹೇಳುವುದಕ್ಕಿಂತ ಸೂಚಿಸುವುದರ ಕಡೆಗೆ, ವಿವರಿಸುವುದಕ್ಕಿಂತ ಅನುಭವಿಸಿಸುವುದರ ಕಡೆಗೆ ಗಮನ ಹರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಗಜಲ್ ಕೋಮಲ, ಮೃದುತ್ವ ಮತ್ತು ಹೃದಯ ತಟ್ಟುವ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಅಂತೆಯೇ ಇಲ್ಲಿ ಬೌದ್ಧಿಕತೆಗಿಂತ ಹೃದಯವಂತಿಕೆ ಅತ್ಯವಶ್ಯಕ! ಇಂದು ಗಜಲ್ ಕೇವಲ ಪ್ರೇಮಕ್ಕೆ ಸೀಮಿತವಾಗಿ ಉಳಿದಿಲ್ಲ; ಮಾನವನ ಅಂತರಂಗ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಪ್ರೇಮ ಮತ್ತು ವಿರಹ, ನೋವು ಮತ್ತು ಮನೋವ್ಯಥೆ, ತತ್ತ್ವ ಮತ್ತು ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ವ್ಯಂಗ್ಯ ಮತ್ತು ವಿರೋಧ, ಆಧ್ಯಾತ್ಮಿಕ ಮತ್ತು ಸೂಫಿ ಭಾವನೆ, ನೆನಪು, ಕನಸು ಮತ್ತು ಹಂಬಲ.. ಎಲ್ಲವನ್ನೂ ಗಜಲ್ ಒಳಗೊಳ್ಳುತ್ತಿದೆ! ಆದರೆ ಒಂದನ್ನು ನಾವು ಮರೆಯಬಾರದು, ಅದೆಂದರೆ ಅಭಿವ್ಯಕ್ತಿಯ ಕ್ರಮ! ಗಜಲ್ ಯಾವುದೇ ವಿಷಯವನ್ನು ಒಳಗೊಳ್ಳಬಹುದು, ಆದರೆ ಅದು ಸಹೃದಯ ಓದುಗರ, ಕೇಳುಗರ ಹೃದಯದ ಕದ ತಟ್ಟಬೇಕು! ಪ್ರತಿಯೊಂದು ಕಾವ್ಯದ ಬಗ್ಗೆ ಮಾತಾಡುವಾಗಲೆಲ್ಲ ನಾವು ‘ಆತ್ಮ’ದ ಉಲ್ಲೇಖ ಮಾಡುತ್ತೇವೆ. ಅಂದರೆ, ಬಾಹ್ಯ ಲಕ್ಷಣಗಳಿಗಿಂತಲೂ ಆಂತರಿಕ ಭಾವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ನೆಲೆಯಲ್ಲಿ! ಹೌದು, ಪ್ರತಿ ಬರಹದ ಮೂಲ ಸ್ಥಾಯಿಯೇ ಅದು ಒಳಗೊಂಡಿರಬಹುದಾದ ಧ್ವನಿ, ರಸ! ಹಾಗಂತ ಬಾಹ್ಯ ಲಕ್ಷಣಗಳನ್ನು ನಿರಾಕರಿಸುವಂತಿಲ್ಲ. ಏಕೆಂದರೆ ನಮಗೆ ಮೊದಲು ಗೋಚರಿಸುವುದೆ ಭೌತಿಕ ಶರೀರ, ನಂತರವಷ್ಟೇ ಆತ್ಮದ ಪರಿಚಯ! ಇಲ್ಲಿ ಇನ್ನೊಂದು ಅಪಾಯವಿದೆ, ಏನೆಂದರೆ ಲಕ್ಷಣಗಳು ಕೇವಲ ‘ಹಿಟ್ಟಿನ ಹುಂಜ’ವನ್ನು ತಯಾರಿಸುವಂತಾಗಬಾರದು! ಆಂತರಿಕ ಹಾಗೂ ಬಾಹ್ಯ ಲಕ್ಷಣಗಳ ಸಾಮರಸ್ಯ ಶಾಯರ್/ಶಾಯರಾ ಸಾಧಿಸುವಂತಾಗಬೇಕು. ಆವಾಗಲೇ ಗಜಲ್ ಉದಯಿಸಲು ಸಾಧ್ಯ, ಸಾರಸ್ವತ ಲೋಕದಲ್ಲಿ ನೆಲೆಯೂರಲು ಸಾಧ್ಯ ಹಾಗೂ ರಸಿಕರ ನಾಲಿಗೆಯ ತುದಿಯಲ್ಲಿ ನುಲಿಯಲೂ ಸಾಧ್ಯ! ಡಾ. ಮಲ್ಲಿನಾಥ ಎಸ್. ತಳವಾರ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ Read Post »

You cannot copy content of this page

Scroll to Top