ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್


ಇದ್ದದ್ದು ಇದ್ದ ಹಾಗೇ ಹೇಳುವವರೇ ಕಮ್ಮಿ
ಬುದ್ಧಿ ಮಾತುಗಳನು ಕೇಳುವವರೇ ಕಮ್ಮಿ
ಬೇವು-ಬೆಲ್ಲದಂತೆಯೇ ನಮ್ಮೆಲ್ಲರ ಬಾಳಿಲ್ಲಿ
ಸಂಕಷ್ಟಗಳೆಲ್ಲ ಸಹಿಸಿ ತಾಳುವವರೇ ಕಮ್ಮಿ
ಅನುಕರಣೆಯಂತು ಸುಲಭದ ಸರಕಾಯ್ತು
ಅನುಸರಿಸಿಕೊಂಡಿಲ್ಲಿ ಬಾಳುವವರೇ ಕಮ್ಮಿ
ಅನ್ಯರ ಬಗ್ಗೆ ಎತ್ತಾಡದಿರೇ ತಿಂದನ್ನ ಅರಗದು
ಈ ಹಾಳು ಹರಟೆ ಬಿಟ್ಟು ಏಳುವವರೇ ಕಮ್ಮಿ
ಕುಂಬಾರ ಸೋಲಿನಲ್ಲೂ ಸುಖವ ಕಂಡಿದ್ದಾನೆ
ದಿನ ಸಾಯುವವರಿಗಿಲ್ಲಿ ಅಳುವವರೇ ಕಮ್ಮಿ
ಎಮ್ಮಾರ್ಕೆ




