ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಡುಗೆ ಮನೆ ಹೆರಿಗೆ ಮನೆಯಲ್ಲಿ ನಾ ಬಂಧಿಯಾದಾಗ ಬಾಬಾ ವಿಮೋಚಕನಾಗಿ ಬಂದ
 ಹೊಸಿಲು ದಾಟಿ ಮುಂದೆ ಹೆಜ್ಜೆ ಇಡದಂತೆ ಗೆರೆ ಕೊರೆದಾಗ ಬಾಬಾ ಆಸರೆಯಾಗಿ ಬಂದ

ಶತ ಶತಮಾನದಿಂದ ದರ್ಪ ದೌರ್ಜನ್ಯ ದಬ್ಬಾಳಿಕೆಗೆ ನಲುಗಿ ಹೋಗಿದ್ದೆ
ಕಣ್ಣೀರಿಡುತ್ತಾ ಅಸ್ಮಿತೆಗಾಗಿ ಅಳುತ್ತಿರುವಾಗ ಬಾಬಾ ಬಂಧುವಾಗಿ ಬಂದ

ಹೆಣ್ಣು ಹೆಣ್ಣೆಂದು ಮೂಲೆಗೆ ದಬ್ಬಿದಾಗ ಸುತ್ತಲೂ ಕತ್ತಲೆಯ ಕೂಪ
ಅಕ್ಷರದ ಅರಿವಿರದೆ ತೊಳಲಾಡುತ್ತಿರುವಾಗ ಬಾಬಾ ಬೆಳಕಾಗಿ ಬಂದ

ಜಾತಿ ಮತ ಬೇಧ ಭಾವ ಮೇಲು ಕೀಳು ಸಹಿಸುತ್ತಾ ಸಣ್ಣಾಗಿ ಹೋಗಿದ್ದೆ
ಅಸಮಾನತೆ ಅಂಬು ಎದೆ ಇರಿಯುವಾಗ ಬಾಬಾ ಸಂವಿಧಾನವಾಗಿ ಬಂದ

ಕನಸು ಕಳೆದುಕೊಂಡು ಆಸೆಗಳ ಬಿಟ್ಟುಕೊಟ್ಟು ಬೊಗಸೆಯೊಡ್ಡಿ ಬೇಡುತ್ತಿದ್ದೆ
ಹೇಳಿದಂತೆ ಕೇಳಿಕೊಂಡು ದಾಸಾನುದಾಸಿಯಾದಾಗ ಬಾಬಾ ಧ್ವನಿಯಾಗಿ ಬಂದ

ಅನ್ಯಾಯ ಕಂಡಾಗ ಸಿಡಿಲಾಗಿ ಸಿಡಿದು ಗುಡುಗಾಗಿ ಗರ್ಜಿಸಿದಾತ
ಛಲದ ಜೊತೆಗೆ ಬಲದ ಪಾಠ ಕಲಿಯುವಾಗ ಬಾಬಾ ಆಸ್ತಿ ಹಕ್ಕಾಗಿ ಬಂದ

ತಾನುಂಡ ನೋವು ಪಡೆದ ಅರಿವು ತನಗೆ ಗುರುವಾಯಿತು ಕೇಳು ಅರುಣಾ
ಭಾರತದ ಭಾಗ್ಯವಿಧಾತನೆಂದು ದೇಶ ಕರೆಯುವಾಗ ಬಾಬಾ ದೈವವಾಗಿ ಬಂದ

———————————————————————————————

About The Author

2 thoughts on “ಅರುಣಾ ನರೇಂದ್ರ ಅಂಬೇಡ್ಕರ್‌ ಬಗ್ಗೆಒಂದು‌ ಗಜಲ್”

Leave a Reply

You cannot copy content of this page

Scroll to Top