ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರಿ ಮೋಡಗಳಿಂದಿಳಿದ ಮೊದಲ ಮಳೆ
ಇಳೆಯ ಸ್ಪರ್ಷಿಸಿದೆ
ಉರಿ ಬಿಸಿಲ ತಾಪದಲಿ ಬಳಲಿದ್ದ ಭುವಿ ತೋಯುತ ಹರ್ಷಿಸಿದೆ

ಸುತ್ತ ಆವರಿಸಿದ ಮಣ್ಣ ಘಮಲು ಮನಕೆ
ನವ‌ ಚೈತನ್ಯವ ನೀಡಿದೆ
ಮುತ್ತ ಹನಿಗಳ ಹೊತ್ತ‌ ಹಸಿರೆಲೆ ಮತ್ತಷ್ಟು ಮಳೆನೀರನು ಬೇಡಿದೆ

ಬಿರಿಯುತ ವನಸುಮವದು ತನ್ನೊಡಲಿನ ಪರಿಮಳವ ಪಸರಿಸಿದೆ
ಸುರಿಸುತ ಹೂವ ಕೆಂಪುತುರಾಯಿ ಮರವು
ಮಳೆಯ ಸ್ವಾಗತಿಸಿದೆ

ನೆಟ್ಟ ಗಿಡ ಮರಗಳು ಮೈಧೂಳ ತೊಳೆದು ಉಲ್ಲಾಸದಿ ಓಲಾಡಿವೆ
ಪುಟ್ಟ ಹಕ್ಕಿ ಪಕ್ಷಿಗಳು ಚಿಲಿಪಿಲಿಗುಟ್ಟುತಲಿ
ಆಗಸದಿ ತೇಲಾಡಿವೆ

ಓಡುವ ಮೇಘಗಳನು ನೋಡಿ ನಲಿಯುತ ನವಿಲು ನರ್ತನ ಮಾಡುತಿದೆ
ನಡುರಾತ್ರಿ ಕತ್ತಲಲಿ ಮಿಂಚುಹುಳ ಬೆಳಕ ಚೆಲ್ಲುತ ಆಟ ಆಡುತಿದೆ

ಗುಡುಗು ಸಿಡಿಲ ಆರ್ಭಟದೊಡನೆ ಮಿಂಚುತ ಮೃಗಶಿರ ಮಳೆ ಧರೆಗಿಳಿದಿದೆ
ಇಡುಗು-ತೊಡಗುಗಳಿಂದ ರೈತನ ಹೊರತರಲು ಧೃಢ ನಿರ್ಧಾರ ತಳೆದಿದೆ

ತುಂತುರು ಹನಿಗಳಾಡಿಹ ಒಲವ ನುಡಿಗಳ ಕೇಳಿ ಕವಿಮನ ಹುಚ್ಚಾಗಿದೆ
ನಿಂತ ನೀರಲಿ ಕುಣಿದು ಕುಪ್ಪಳಿಸಿಹ ಮಕ್ಕಳ ಕಂಡು ಉತ್ಸಾಹ ಹೆಚ್ಚಾಗಿದೆ..


About The Author

Leave a Reply

You cannot copy content of this page

Scroll to Top