ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಜಲ್ ಹಗಲು ವೇಷ ತೊಟ್ಟವರಲ್ಲ ನಾವುಕಾಲಿಗೆ ಗೆಜ್ಜೆಕಟ್ಟಿ ಕುಣಿಯುವರಲ್ಲ ನಾವು ನಾನಾ ಪರಿಯ ಅನುಭವ ಪಡೆಯುವುದೇಕೆಜಗದಿ ಜಂಗಮರಂತೆ ತಿರುಗುವರಲ್ಲ ನಾವು ಶಿರದಲ್ಲೊಂದು ಗಂಟು ಹೊತ್ತು ನಡೆದೆವಲ್ಲಉರಗದ ತೆರದಲಿ ಹರಿಯುವರಲ್ಲ ನಾವು ಗೇಣುಹೊಟ್ಟೆ ತುಂಬಿಸಲು ನೂರೆಂಟು ಆಟಬಿಡಾರದಲಿ ಶಾಶ್ವತದಲಿ ಇರುವವರಲ್ಲ ನಾವು ಹರಿದ ಎಕ್ಕಡದಂತೆ ಬಾಳು ನರಕವಾಗಿದೆಹಿಲಾಲಿನ ಬೆಳಕನ್ನು ನೋಡುವವರಲ್ಲ ನಾವು ಮೃಷ್ಟಾನ್ನಕ್ಕೆ ಕೈಗಳನ್ನು ಬೊಗಸೆ ಒಡ್ಡಲಿಲ್ಲಕಣ್ಣೆತ್ತಿ ಮೇಲೊಮ್ಮೆ ದಿಟ್ಟಿಸುವರಲ್ಲ ನಾವು ಮುಖಕ್ಕೆ ಬಣ್ಣಹಚ್ಚಿ ನಗಿಸುತಿಹನು ಅಭಿನವಸುಖದಲಿ ತೇಲುತ ಸಾಯುವವರಲ್ಲ ನಾವು ಶಂಕರಾನಂದ ಹೆಬ್ಬಾಳ

Read Post »

ಇತರೆ

ಚಾರ್ಲಿಯ ದಾಳಿಗಳು

ಚಾರ್ಲಿಯ ದಾಳಿಗಳು . ಚಾರ್ಲಿ, ನಮ್ಮ ಬೀದಿಯ ನಾಯಿ. ಯಾವಾಗಲೂ ನೆಟ್ಟಗೆ ನಿಂತ ಬಾಲ.  ಕೆಂಚುಗಣ್ಣು. ಕ್ರಿಡಾಳು ತರಹ ಹದವಾದ ಶರೀರ. ಶಕ್ತವಾದ ಕಾಲುಗಳು. ಪಟಪಟ ಚುರುಕು ಓಟ. ಅಪರಿಚಿತರ ಕಂಡರೆ ಆಕಾಶಕ್ಕೆ ‌ಕೇಳುವಂತೆ ಬೊಗಳು. ಬೀದಿಯ ತನ್ನ ಅಂಗಳಕ್ಕೆ ಬೇರೆ ನಾಯಿಯನ್ನೂ ಬಿಡದ ಛಲ. ಆಟೊಗಳನ್ನು, ದ್ವಿಚಕ್ರಗಳನ್ನು ಅಟ್ಟಿಸಿಕೊಂಡು ಓಡುವನು. ಅವರು ನಿಂತರೆ ಸುಮ್ಮನಾಗುವನು. ಬೀದಿಯಲ್ಲಿ ಎಲ್ಲರ ಮನೆಯಿಂದಲೂ ಆಹಾರ ವಸೂಲಿ. ಎಲ್ಲರಿಗೂ ಪ್ರೀತಿ ಪಾತ್ರ. ಇಲ್ಲಿಯವರೆಗೆ ಯಾರನ್ನೂ ಕಚ್ಚಿಲ್ಲ. ನೊಂದ ಬೀದಿ ನಾಯಿಗಳನ್ನು ಸಂರಕ್ಷಿಸುವ ಹವ್ಯಾಸ, ನಮ್ಮ‌ ಹುಡುಗನದು. ಹಾಗೆ‌ ರಕ್ಷಸಿದ್ದ ನಾಯಿ ಪ್ಯಾಂಥರ್. ಕಡುಗಪ್ಪು. ಕಣ್ಣೂ ಕಪ್ಪು. ರಾತ್ರಿಯ‌ ಬೆಳಕಲ್ಲಿ ಹೊಳೆಯುವುದು. ಆದರೆ ದುರದೃಷ್ಟವಶಾತ್ ಸ್ವಲ್ಪ ಕಣ್ಣು ಮಂದ. ಬೊಗಳುತ್ತಿತ್ತು. ಆದರೆ ನಿಶ್ಯಕ್ತಿ. ನಮ್ಮ ವಾಹನದಂಗಳಲ್ಲಿ ಪ್ಯಾಂಥರ್‌ನನ್ನು ಕಟ್ಟಿದ್ದೆವು. ಆದರೆ ಚಾರ್ಲಿ ಅತ್ತಿತ್ತ ಓಡಾಡುತ್ತ ಗುರ್ ಅನ್ನುತ್ತಿದ್ದ. ‘ಏಯ್’ ಅಂದ್ರೆ ಆ ಕಡೆ ಓಡುತ್ತಿದ್ದ. ನಾವು ಯಾವಾಗಲೂ ಗೇಟ್‌ನ ಅಗಳಿಯನ್ನು ಹಾಕಿಕೊಂಡೆ ಓಡಾಡುತ್ತಿದ್ದೆವು. ಪ್ಯಾಂಥರ್ ನ ನಡಿಗೆಗೆ ಕರೆದ್ಯೊಯ್ಯುತ್ತಿದುದು ಅಪರೂಪ. ಹಾಗೆ ಹೊರಟರೆ, ಕೈನಲ್ಲಿ ಕೋಲು ಖಾತ್ರಿ. ಚಾರ್ಲಿಯೊಂದಿಗೆ ಗೆಳೆತನ‌ ಬೆಳಸಲೆಂಬ ನಮ್ಮ ಪ್ರಯತ್ನ ಅಷ್ಟೇನು‌ ಯಶಸ್ವಿಯಾಗಲಿಲ್ಲ. ಒಂದು ದಿನ, ಪ್ಯಾಂಥರ್ ಅಂಗಳದಲ್ಲಿ ಇರುವಾಗ, ಅಕಸ್ಮಾತ್ ಗೇಟ್‌ನ ಅಗಳಿ ಹಾಕಿರಲಿಲ್ಲ. ಛಕ್ಕನೆ, ಅನಿರೀಕ್ಷಿತವಾಗಿ ನುಗ್ಗಿದ ಚಾರ್ಲಿ, ಪ್ಯಾಂಥರ್‌ನ ಕತ್ತಿಗೆ ಬಾಯಿ ಹಾಕಿ ಹಿಡಿದು ಬಿಟ್ಟ. ಭೋ…. ಎಂದು ಕೂಗುತ್ತಾ ‌ಪ್ಯಾಂಥರ್, ಒಮ್ಮೆಗೆ ಉಚ್ಚೆ ಕಕ್ಕಸ್ಸು ಮತ್ತು ವಾಂತಿಯನ್ನು ಮಾಡಿಕೊಂಡ. ಅಲ್ಲೆ ಇದ್ದ ನನ್ನ ಮನೆಯವರು ಕೋಲಲ್ಲಿ ಒಂದೇಟು ಚಾರ್ಲಿಗೆ ಕೊಟ್ಟರು. ಏಟು ಬಲವಾಗಿಯೇ ಬಿದ್ದಿರಬೇಕು. ಕುಂಂಯೀ….. ಚಾರ್ಲಿ ಅನ್ನುತ್ತಾ ಹೊರಗೋಡಿದ. ಗೇಟ್‌ನ ಅಗಳಿ ಹಾಕಿ , ಅಂಗಳ ಸ್ವಚ್ಛ‌ ಮಾಡುವುದೆ ಕೆಲಸವಾಯಿತು. ಎಲ್ಲರೂ ಚಾರ್ಲಿಯನ್ನು ಬೈಯ್ಯುವರೆ. *               ** ನಮ್ಮ ಮನೆಯ ಹೊರ ಕಿಟಕಿಯ ಸಜ್ಜಾದ ಮೇಲೆ ಬೆಕ್ಕೊಂದು ನಾಲ್ಕು ಮರಿ ಹಾಕಿತ್ತು. ಬೆಕ್ಕನ್ನು ಹಿಡಿಯಲು ಚಾರ್ಲಿ ಒಂದೇ ಸಮನೆ ಕಾಯುತ್ತಿದ್ದ. ನಾವು ಗೇಟ್ ಮುಚ್ಚಿದ್ದರೂ ಪಕ್ಕದ ಮನೆ ಗೋಡೆ ಹಾರಿ ಒಳಬರುತ್ತಿದ್ದ. ಅಂತೂ ಇಂತೂ ಅವನನ್ನು ತಪ್ಪಿಸಿವುದೇ ಮಹಾ ಸಾಹಸವಾಗಿತ್ತು. ಒಂದು ದಿನ‌ ಬೆಳಿಗ್ಗೆ, ಸುಮಾರು ೦೬.೩೦ ಇರಬಹುದು. ಅಂದಿನ ದಿನ ಪತ್ರಿಕೆ ತೆಗೆದಿಕೊಳ್ಳಲು ನಾನು ಗೇಟಿನ ಬಳಿ ಬಂದೆ. ಯಾವ ಮಾಯದಲ್ಲೊ ಚಾರ್ಲಿ ಒಳ ನುಸುಳಿದ್ದ. ಅಮಾಯಕ ಬೆಕ್ಕು ಅಲ್ಲೆ‌ ಬಂದಿತ್ತು. ಚಾರ್ಲಿ ಗಕ್ಕನೆ ಬೆಕ್ಕಿನ ಕತ್ತು ಹಿಡಿದ. ಬೆಕ್ಕಿನ ಒರಲು ನನ್ನ ಗಮನಕ್ಕೆ ಬರುತ್ತಿದ್ದಂತೆ ಹಿಂದೆ ಮುಂದೆ ಯೋಚಿಸಿದೆ, ಪೇಪರ್ ಸುತ್ತಿ ಚಾರ್ಲಿಗೆ ಜೋರಾಗಿಯೆ ಹೊಡೆದೆ. ಈ ಏಟನ್ನು ನಿರೀಕ್ಷೆ ಮಾಡದಿದ್ದ  ಚಾರ್ಲಿ ಪಕ್ಕನೆ ಬಾಯಿ ತೆರೆದ. ಬೆಕ್ಕು ಸರ್ರನೆ ಓಡಿ, ಛಂಗನೆ‌ ಎದುರು ಮನೆಯ ಗೇಟನ್ನು ಹತ್ತಿ ಬಿಟ್ಟಿತು. ಚಾರ್ಲಿ ನಮ್ಮ ಮನೆಯಿಂದ ಎದುರು ಮನೆಗೆ ಹೋಗಿ, ಕೆಳಗೆ‌ ನಿಂತು ಬೊಗಳಿದ. ಬೆಕ್ಕು ನಡುಗುತ್ತಿತ್ತು. ಆದರೆ ಕ್ಯಾರೇ ಅನ್ನಲಿಲ್ಲ. ಸುಮ್ಮನೆ ಕೂತ್ತಿತ್ತು. ಐದು ನಿಮಿಷದ‌ ನಂತರ ಚಾರ್ಲಿ ಹೊರಟು ಹೋದ. ನಂತರ ಯಾವಾಗಲೋ ಬೆಕ್ಕು ಹೋಯಿತು. ನಂತರ ಅದು ಮಕ್ಕಳಿಗೆ ಹಾಲು ಕುಡಿಸುತ್ತಿದ್ದನ್ನು ನಾನು ನೋಡಿದೆ. ಬೆಳಗ್ಗೆ ಹೊರಗಿದ್ದ ನೆರೆಹೊರೆಯವರು ಚಾರ್ಲಿಯನ್ನು ಓಡಿಸಿ, ಬೆಕ್ಕನ್ನು ಬಿಡಿಸಿದ್ದಕ್ಕೆ ನನ್ನನ್ನು ಅಭಿನಂದಿಸಿದರು. ನನ್ನ ಮಗ ಮಾತ್ರಾ ” ಅಪ್ಪಾ, ನಾಯಿ ಬೆಕ್ಕುಗಳು ಸಹಜ ಶತ್ರುಗಳು. ಸ್ನೇಹವಾಗಿದ್ದರೆ ಮಾತ್ರಾ ಒಟ್ಟಿಗೆ ಇರುತ್ತವೆ’ ಅಂದ. **          **** ಎಲ್ಲಿಗೋ ಹೋಗಿದ್ದೆವು. ಮನೆಗೆ ಬರುವುದು ರಾತ್ರಿ ೧೨.೩೦ ದಾಟಿತ್ತು. ಗೇಟ್ ತೆಗೆದು ಒಳಗೆ ಹೋಗಿ ಮಲಗಲು ಸಿದ್ದ ಮಾಡುತ್ತಿರುವಾಗ, ನಮ್ಮ ಹಿತ್ತಿಲಲ್ಲಿ ಪರಪರ‌ ಸದ್ದು ಕೇಳಿಸಿತು. ನಾನೆಂದೆ ‘ಏನೋ ಸದ್ದು’.  ಮನೆಯವಳು ‘ ನೋಡ್ರಿ ,ಏನಂತ. ಕಳ್ಳಕಾಕರು ಬಂದಿದ್ರೆ ಏನು ಮಾಡೋದು’. ನನ್ನ ವಾಕಿಂಗ್ ಸ್ಟಿಕ್ ಹಿಡಿದು, ಮುಂಬಾಗಿಲು ತೆರೆದು ಹೊರಬಂದೆ. ಕೋಲನ್ನು ಗೋಡೆಗೆ ಬಡಿಯುತ್ತಾ ಒಂದು ಸುತ್ತು ಹಾಕಿದೆ. ಹಿತ್ತಲಲ್ಲಿ, ಒಂದು ಭಾಗಕ್ಕೆ ಬೆಳಕು ಬೀಳುತ್ತಿರಲಿಲ್ಲ. ಅದಕ್ಕೆ ಸ್ವಲ್ಪ ದೂರವೇ ನಿಂತು, ಗೋಡೆಗೆ ಕೋಲು ಬಡಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ. ” ಸರಿ ಏನೂ‌ ಇಲ್ಲ. ಕಳ್ಳನೂ ಇಲ್ಲ. ಕಾಕನೂ ಇಲ್ಲ. ಮಲಗು” ಅಂತ್ಹೇಳಿ ಮುಸುಕು ಹಾಕಿದೆ. ಸ್ವಲ್ಪ ನಿದ್ದೆ ಬಂದ ಹಾಗಿತ್ತು. ಮಗ ಕರೆದ ಬಾಲ್ಕನಿಗೆ. ಮೊಬೈಲ್ ಬೆಳಕು ಬಿಟ್ಟು ತೋರಿಸಿದ. ಚಾರ್ಲಿ ಹಿತ್ತಲಿಗೆ ಬಂದು ನೆಲ ಕೆರೆಯುತ್ತಿದ್ದಾನೆ. ಯಾವ ಮಾಯದಲ್ಲೊ ನಾವು ಗೇಟ್ ತೆಗೆದಾಗ‌ ಒಳಗೆ ಬಂದಿದ್ದಾನೆ. ಅವನ ಅರ್ಧ ಶರೀರ ಮಣ್ಣಿನಲ್ಲಿ ಹೂತಿದೆ. ಎಷ್ಟೆ ಬೆಳಕು ಬಿಟ್ಟರೂ ಸದ್ದು ಮಾಡಿದರೂ ಅತ್ತಿತ್ತ ತಿರುಗಿ‌ನೋಡುತ್ತಿಲ್ಲ. ಅದೇನು ಏಕಾಗ್ರತೆ. ಒಂದೇ ಸಮ ನೆಲ ಬಗೆಯುತ್ತಿದ್ದಾನೆ. :ಸರಿ ಹೋಗುತ್ತಾನೆ’ ಅಂತ ಗೇಟ್ ತೆರೆದಿಟ್ಟು‌ ಮಲಗಿದೆ. ಆದರೂ ಕುತೂಹಲ. ಮಕ್ಕಳು ನೋಡುತ್ತಲೇ ಇದ್ದರು.  ಸುಮಾರು ೩೦ ನಿಮಿಷ ಕಳೆಯಿತು. ಚಾರ್ಲಿ ತಲೆಯೆತ್ತಿ, ಒಮ್ಮೆ‌ ತಲೆಯನ್ನು ಅತ್ತಿತ್ತ ಝಾಡಿಸಿ, ಹೊರಗೆ ಬಂದ. ನಿಧಾನವಾಗಿ ಗೇಟ್‌ನ ಬಳಿ ಬಂದು, ಅಲ್ಲಿರಿಸಿದ್ದ ನೀರು ಕುಡಿದು ಹೊರಗೆ ಹೋದ. ಅಲ್ಲಿ ಅವನ ಎಂದಿನ ಗೆಳತಿ ಕಾಯುತ್ತಿದ್ದಳು. ಸಮಯ ರಾತ್ರಿ ಎರಡರ ಸಮೀಪ. ಗೇಟ್ ಬೀಗ ಹಾಕಿ ಮಲಗಿದೆವು. ಚಾರ್ಲಿ ಹಿತ್ತಲಲ್ಲಿ ಏನು‌ ಮಾಡಿದ ಎಂಬುದೇ ಚರ್ಚೆ. ಮಾರನೆ ದಿನ, ಮನೆಗೆಲಸದ‌ ಗೌರಮ್ಮ ಬಂದಾಗ ” ಗೌರಮ್ಮ ಹಿತ್ತಲಲ್ಲಿ ಚಾರ್ಲಿ ಏನೋ ರಾದ್ದಾಂತ ಮಾಡಿದ್ದಾನೆ ರಾತ್ರಿ. ಏನು ನೋಡು” ಅಂದೆ. ಅವಳು ಹಿತ್ತಲಿಗೆ ಹೋಗಿ ‘ಸ್ವಾಮ್ಯಾರೇ, ಇಲ್ಲಿ ಬನ್ನಿ ‘ ಎಂದಳು. ಹೋಗಿ ನೋಡಿದರೆ,  ಚಾರ್ಲಿ ಎರಡು ಅಡಿ ಹೊಂಡ ತೋಡಿ, ಹೆಗ್ಗಣವೊಂದನ್ನು ಹಿಡಿದು, ಕಚ್ಚಿ ಸಾಯಿಸಿ ಬಿಟ್ಟಿದ್ದಾನೆ. “ಓಹ್.. ಈ ಹೆಗ್ಗಣ ಭಾಳ ದಿನದಿಂದ ತೊಂದರೆ ಕೊಡುತ್ತಿತ್ತು. ಅಂತೂ ಚಾರ್ಲಿ ಹೀರೋ. “ಛಲ ಬಿಡದ ತ್ರಿವಿಕ್ರಮನಂತೆ ಹೆಗ್ಗಣವನ್ನು ಸಾಯಿಸಿಯೇ ಹೊರಗೆ ಹೋದ. ಗಂಡು ಅಂದ್ರೆ ಅವನೇ” ಅಂತ ಎಲ್ಲರ ಹೊಗಳಿಕೆ. ** ಈ ಮೂರು ಘಟನೆಗಳಲ್ಲಿ ಚಾರ್ಲಿನೇ ಹೀರೋ. ಪ್ಯಾಂಥರ್, ಬೆಕ್ಕು‌ ಮತ್ತು ಹೆಗ್ಗಣ, ಇತರ ಪಾತ್ರಧಾರಿಗಳು. ನಾನು ಮತ್ತು ನಮ್ಮ ‌ಮನೆಯವರುಗಳು ಹಾಗೂ ನೆರೆಹೊರೆಯವರು …ಮೂರೂ ಸಂದರ್ಭದಲ್ಲಿ ಇದ್ದಂತಹ ಪಾತ್ರಗಳು. ಮೂರೂ ಘಟನೆಗಳಲ್ಲಿ ಚಾರ್ಲಿ ನಾಯಿಯು , ಬೇರೆ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿದೆ. ದಾಳಿಯು,  ನಾಯಿಯ ಸಹಜ ಗುಣ.  ಮನುಷ್ಯರಾದ ನಮ್ಮದು ಬೇರೆ ಬೇರೆ ಪ್ರತಿಕ್ರಿಯೆ. ಅದೂ ಸಹಜ ಅನ್ನಿಸುತ್ತದೆ. ಆದರೆ ಪ್ಯಾಂಥರ್, ಬೆಕ್ಕು ಹಾಗೂ ಹೆಗ್ಗಣದಲ್ಲಿ ಇದ್ದ ಜೀವ ಒಂದೇ ಅಲ್ಲವೇ.! ಬೆಂಶ್ರೀ ರವೀಂದ್ರ

ಚಾರ್ಲಿಯ ದಾಳಿಗಳು Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ–50 ಚಿಟ್ಟೆಹುಲಿಗಳ ದಾಳಿಯ ನಂತರ ಗುರೂಜಿಯವರು ಸುರೇಂದ್ರಯ್ಯನ ಮನೆಯಿಂದ ಹೊರಡುವ ಮುನ್ನ ಎಲ್ಲರನ್ನೂ ಒಂದೆಡೆ ಸೇರಿಸಿ, ಇಲ್ಲಿ ನಡೆದ ಘಟನೆಯನ್ನು ಎಲ್ಲರೂ ಗೌಪ್ಯವಾಗಿಡಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಅದಕ್ಕೆ ಎಲ್ಲರೂ,‘ಹ್ಞೂಂ! ಆಯ್ತು ಗುರೂಜೀ…!’ಎಂದು ಒಪ್ಪಿದ್ದರು. ಆದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಗುಟ್ಟು ರಟ್ಟಾಗಿಬಿಟ್ಟಿತು. ಕಾನೂನು ನಿಯಮದಂತೆ ವೈದ್ಯರು ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದರು. ಬಳಿಕ ಆ ಸುದ್ದಿಯು ಕಾಳ್ಗಿಚ್ಚಿನಂತೆ ಎತ್ತೆತ್ತಲೋ ಹರಿದಾಡುತ್ತ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೂ ಹಾಗೂ ಮುಖ್ಯವಾಗಿ ಅರಣ್ಯ ಇಲಾಖೆಗೂ ತಲುಪಿಬಿಟ್ಟಿತು. ಆದ್ದರಿಂದ ಮರುದಿನ ಬೆಳಿಗ್ಗೆ ಮಾಧ್ಯಮಗಳೆಲ್ಲ ಸುರೇಂದ್ರಯ್ಯನ ಮನೆಗೆ ದೌಡಾಯಿಸಿದವು. ಬೆಳ್ಳಂಬೆಳಗ್ಗೆ ತಮ್ಮ ಮನೆಯ ಮುಂದೆ ಜಮಾಯಿಸಿದ ಸುದ್ದಿವಾಹಿನಿಗಳ ದಂಡನ್ನು ಕಂಡ ಸುರೇಂದ್ರಯ್ಯ ದಂಗಾಗಿಬಿಟ್ಟರು. ಆದರೂ ಗುರೂಜಿಯವರ ಆಜ್ಞೆಯಂತೆ ಘಟನೆಯ ವಿವರವನ್ನು ಯಾರಿಗೂ ನೀಡಲು ನಿರಾಕರಿಸಿದರು. ಆದರೆ ಕೆಲವು ಚಾಣಾಕ್ಷ ಪತ್ರಕರ್ತರು ಅರಣ್ಯ ಕಾಯ್ದೆಯ ಕುರಿತು ಖಡಕ್ಕಾಗಿ ಮಾತಾಡಿ ಅವರನ್ನು ಹೆದರಿಸಿದರು. ಆಗ ಸುರೇಂದ್ರಯ್ಯ ಮಂಕಾದರು. ಅದೇ ಸಮಯವನ್ನು ಬಳಸಿಕೊಂಡ ಮಾಧ್ಯಮಗಳೂ ಅವರ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಿದವು. ಅದರಿಂದ ಅಶಾಂತರಾದ ಸುರೇಂದ್ರಯ್ಯ ವಿಧಿಯಿಲ್ಲದೆ ಅವರೊಡನೆ ಘಟನಾಸ್ಥಳದತ್ತ ನಡೆದರು. ಅಷ್ಟರಲ್ಲಿ ಕಾರ್ಗಲ್ಲು ವಲಯಾರಣ್ಯಾಧಿಕಾರಿ, ಮಲೆ ಮಾದೇವಪ್ಪನವರು ಮತ್ತು ಉಪ ವಲಯಾರಣ್ಯಾಧಿಕಾರಿ ಅಮರೇಶರೂ ತಮ್ಮ ಸಿಬ್ಬಂದಿವರ್ಗದೊಂದಿಗೆ ಒಂದಿಬ್ಬರು ಅರಿವಳಿಕೆ ತಜ್ಞರನ್ನೂ ಕರೆದುಕೊಂಡು ಹುಲಿ ಹಿಡಿಯುವ ಬೋನಿನ ಸಮೇತ ಸ್ಥಳಕ್ಕಾಗಮಿಸಿದರು.    ಬಹಳ ಹಿಂದಿನಿಂದಲೂ ಆ ಪ್ರದೇಶದಲ್ಲಿ ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದುದಕ್ಕೆ ಅರಣ್ಯ ಇಲಾಖೆಯಲ್ಲೂ ದಾಖಲೆಯಿತ್ತು. ಆದರೆ ಆ ಗ್ರಾಮದಲ್ಲಿ ಜನವಸತಿಗಳು ವಿರಳವಿದ್ದುದರಿಂದಲೂ ಅಲ್ಲಿನ ಜನರಿಗೂ ಮತ್ತವರ ಸಾಕುಪ್ರಾಣಿಗಳಿಗೂ ಅಲ್ಲಿನ ವನ್ಯಪ್ರಾಣಿಗಳಿಂದ ಅಲ್ಲಿಯವರೆಗೆ ಯಾವುದೇ ಹಾನಿ, ಅಪಾಯಗಳು ಸಂಭವಿಸಿದಂಥ ದೂರು ದುಮ್ಮಾನಗಳು ಇಲಾಖೆಯಲ್ಲಿ ದಾಖಲಾಗಿರದಿದ್ದುದರಿಂದಲೂ ಅವರು ಕೂಡಾ ಆ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವತ್ತು,‘ಆ ಮೃಗಗಳು ಏಕಾಏಕಿ ಊರವರ ಮೇಲೆ ದಾಳಿ ಮಾಡಿಬಿಟ್ಟಿವೆ!’ಎಂಬ ಸುಳ್ಳು ಪುಕಾರು ಊರಿನವರಿಗೂ ಮತ್ತು ಅರಣ್ಯ ಇಲಾಖೆಗೂ ಒಟ್ಟಿಗೆ ತಲುಪಿತ್ತು. ಆದ್ದರಿಂದ ಆಗಷ್ಟೇ ದಕ್ಷಿಣ ಕರ್ನಾಟಕದಿಂದ ವರ್ಗವಾಗಿ ಬಂದಿದ್ದ ಮಲೆ ಮಾದೇವಪ್ಪನವರು ಚುರುಕಾಗಿ ಆ ಪ್ರಾಣಿಗಳನ್ನು ಹಿಡಿಯುವ ಕಾರ್ಯಚರಣೆಗಿಳಿದರು. ಆದರೆ ಅವರು ತಮ್ಮ ಸಿಬ್ಬಂದಿಗಳನ್ನೇ ಅಂಥ ಅಪಾಯಕ್ಕೆ ತಳ್ಳಲು ತಯಾರಿರಲಿಲ್ಲ. ಹಾಗಾಗಿ ಅವರು ಬಂಡೆ ಒಡೆಯಲು ಬಂದಿದ್ದ ತಮಿಳು ಯುವಕರನ್ನೇ ಮುಂದೆ ಕರೆದರು. ‘ಏನ್ರಪ್ಪಾ ನಿನ್ನೆ ಘಟನೆ ನಡೆಯುವಾಗ ನೀವೆಲ್ಲರೂ ಇಲ್ಲೇ ಇದ್ದಿರಿ ಅಂತ ನಮಗೆ ಮಾಹಿತಿ ಬಂದಿದೆ. ಆದರೆ ನೀವೆಲ್ಲ ಇಲ್ಲಿಯವರಂತೆ ಕಾಣುತ್ತಿಲ್ಲವಲ್ಲ! ಎಲ್ಲಿನವರು ನೀವೆಲ್ಲ? ಇಲ್ಲಿಗ್ಯಾಕೆ ಬಂದಿದ್ದೀರಿ? ನಿಮ್ಮನ್ನು ಕರೆಯಿಸಿದವರು ಯಾರು…?’ಎಂದು ಯುವಕರ ಮೇಲೆ ಒಂದೇ ಸಮನೆ ಪ್ರಶ್ನೆಗಳನ್ನೆಸೆದರು.    ಆಗ ಆ ಅಮಾಯಕ ಯುವಕರಿಗೆ ದಢೂತಿ ದೇಹದ ಆ ಅಧಿಕಾರಿಯನ್ನು ಕಂಡು ಮತ್ತು ಅವರ ಪಾಟಿ ಸವಾಲನ್ನೂ ಕೇಳಿ ಭಯದಿಂದ ಕೈಕಾಲು ನಡುಗಿತು. ಅದರಿಂದ ಪಟ್ಟನೆ ಏನುತ್ತರಿಸಬೇಕೆಂದು ತಿಳಿಯದ ಅವರೆಲ್ಲ ಒಬ್ಬರ ಮುಖವನ್ನೊಬ್ಬರು ನೋಡುತ್ತ,‘ಅಯ್ಯಯ್ಯೋ ಶಣ್ಮುಗಾ… ನಮ್ಮೂರಲ್ಲೇ ತಿಂಗಳಿಗೊಂದು ಕೋವಿಲ್(ದೇವಸ್ಥಾನ)ತಲೆಯೆತ್ತುತ್ತ ಕೈತುಂಬಾ ಗೆಲಸವಿರುವಾಗ ಈ ನಮ್ಮ ಮುಖಂಡನ ಮಾತು ಕಟ್ಟಿಕೊಂಡು ಇಂಥ ಊರಿಗೆ ಬಂದು ಈ ಹಾಳು ಬಂಡಿಗಲ್ಲು ಒಡೆಯುವ ಅವಸ್ಥೆ ನಮಗ್ಯಾಗೆ ಬೇಕಿತ್ತಪ್ಪಾ…! ನಿನ್ನೆ ಹುಲಿಗಳ ಬಾಯಿಯಿಂದ ತಪ್ಪಿಸಿದ ನೀನೇ ಇವತ್ತು ಈ ಗರ್ನಾಟಕ ಪೊಳೀಸರ (ಅರಣ್ಯ ಮತ್ತು ಪೊಲೀಸು ಸಮವಸ್ತ್ರಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ) ಕೈಗೂ ಸಿಕ್ಕಿಸಿಬಿಟ್ಟೆಯಲ್ಲ ಸರವಣಾ…!’ಎಂದು ಕೊರಗುತ್ತ ನಿಂತುಬಿಟ್ಟರು.     ಅಷ್ಟರಲ್ಲಿ ಅವರಲ್ಲೊಬ್ಬ ಯುವಕ ಸ್ವಲ್ಪ ಧೈರ್ಯ ಮಾಡಿದವನು, ‘ಹ್ಞೂಂ ಅಯ್ಯಾ ಇದ್ದೆವು. ನಮ್ಮ ಮೇಸ್ತ್ರಿ ನಮ್ಮನ್ನು ಇಲ್ಲಿಗೆ ಗೆಲಸಕ್ಕೆಂದು ಕರ್ಕೊಂಡು ಬಂದಿದ್ದ. ನಾವು ಮದ್ರಾಸಿನವರು…!’ ಎಂದು ತನ್ನ ಅರೆಬರೆ ಕನ್ನಡದಲ್ಲಿ ಅಳುಕುತ್ತ ಹೇಳಿದ. ‘ಓಹೋ ಹೌದಾ…?’ಎಂದ ಮಾದೇವಪ್ಪನವರು ಏನೋ ಯೋಚನೆಗೆ ಬಿದ್ದರು. ಬಳಿಕ ಅದನ್ನು ಆಮೇಲೆ ನೋಡಿಕೊಳ್ಳೋಣವೆಂದುಕೊಂಡವರು,‘ಒಳ್ಳೆಯದಾಯ್ತು ಬಿಡ್ರಪ್ಪಾ… ನಿನ್ನೆಯ ಘಟನೆಯನ್ನು ನೀವೆಲ್ಲರೂ ಕಂಡಿದ್ದೀರಿ ಅಂದ ಮೇಲೆ ಮುಗಿಯಿತು. ನಮಗೂ ಸಾಕ್ಷಿ ಬೇಕಿತ್ತು. ನಿನ್ನೆ ಗಾಯಗೊಂಡವರಿಗೆ ಮತ್ತು ಅವರಲ್ಲಿ ಯಾವನಾದ್ರೂ ಸತ್ತುಗಿತ್ತು ಹೋದನೆಂದರೆ ಅವನ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನೂ ಕೊಡಿಸಬೇಡವೇನ್ರಯ್ಯಾ…?’ಎಂದು ನಗುತ್ತ ಹೇಳಿದರು. ಬಳಿಕ, ‘ಹೌದೂ, ಒಟ್ಟು ಎಷ್ಟು ಲಿಯೋಪರ್ಡ್‍ಗಳಿದ್ದುವಪ್ಪಾ…?’ ಎಂದರು ಕುತೂಹಲದಿಂದ. ಆ ಯುವಕನಿಗೆ ಸಾಹೇಬರ ಇಂಗ್ಲಿಷ್ ಅರ್ಥವಾಗದೆ,‘ಲ್ಯಾಪಾಡ್ರು ಅಲ್ಲ್ರಯ್ಯಾ… ಉಳಿಗಲು, ಚುಟ್ಟೆ ಉಳಿಗಲು. ಎರಡು ದೊಡ್ಡವು ಇನ್ನೆರಡು ಸಣ್ಣವು. ದೊಡ್ಡವೆರಡೂ ನಮ್ಮೇಲೇ ಬಿದ್ದುವಯ್ಯಾ…!’ಎಂದ ಆತಂಕದಿಂದ. ಅವನ ವಿವರಣೆ ಕೇಳಿದ ಮಾದೇವಪ್ಪನವರಿಗೂ ನೆರದವರಿಗೂ ಗೊಳ್ಳೆಂದು ನಗು ಬಂತು. ಅದನ್ನು ಕಂಡ ಆ ಯುವಕನಿಗೇನೂ ಅರ್ಥವಾಗದೆ ತಮ್ಮ ತಂಡದವರನ್ನು ಪಿಳಿಪಿಳಿ ನೋಡಿದ. ಆಗ ಅವರೂ ಕಕ್ಕಾಬಿಕ್ಕಿಯಾದರು. ‘ಹೌದಾ, ಹುಲಿಗಳಾ! ಸರಿ, ಸರಿ. ಇವತ್ತು ಅವನ್ನು ಬಿಡೋದು ಬೇಡ. ಹಿಡಿದು ಕೊಂಡೊಯ್ದು ದೂರದ ಅಭಯಾರಣ್ಯಕ್ಕೆ ಬಿಟ್ಟುಬಿಡೋಣ. ಆದರೆ ಅದಕ್ಕೀಗ ನಿಮ್ಮ ಸಹಾಯವೂ ಬೇಕಲ್ವೇ…?’ ಮಾದೇವಪ್ಪನವರು ನಗುತ್ತ ಅಂದರು. ಅಷ್ಟು ಕೇಳಿದ್ದೇ ಆ ಯುವಕರ ತಂಡವು ಹುಮ್ಮಸ್ಸಿನಿಂದ ಮುಂದೆ ಬಂತು. ಅವರ ಮುಗ್ಧತೆ ಕಂಡ ಮಾದೇವಪ್ಪನವರಿಗೆ ಒಂದುಕ್ಷಣ ಅಯ್ಯೋ ಪಾಪವೇ! ಎಂದೆನಿಸಿತು. ಆದರೆ ಮರುಕ್ಷಣ ತಮ್ಮ ಸಿಬ್ಬಂದಿಯ ಕುರಿತೂ ಯೋಚಿಸಿದವರು ಕರುಣೆಯನ್ನು ಬದಿಗೊತ್ತಿ ಮಂದಹಾಸ ಬೀರುತ್ತ ತಮ್ಮಿಬ್ಬರು ಸಿಬ್ಬಂದಿಗಳನ್ನು ಮತ್ತು ಅರಿವಳಿಕೆ ತಜ್ಞರನ್ನೂ ಕರೆದು ಅವರೊಂದಿಗೆ ಬಂಡೆಗಳತ್ತ ಕಳುಹಿಸಿಕೊಟ್ಟರು. ತಮಿಳು ಯುವಕರ ದಂಡೊಂದು ಮುಂದೆಯೂ, ಇಲಾಖೆಯ ಮಂದಿ ಹಿಂದೆಯೂ ಪರೇಡ್ ನಡೆಸುವಂತೆ ಬಂಡೆಗಳತ್ತ ನಡೆದರು. ಅಷ್ಟರಲ್ಲಿ ಆ ಕಾರ್ಯಚರಣೆಯ ರೋಚಕ ದೃಶ್ಯಗಳನ್ನು ಸೆರೆಹಿಡಿದು ತಂತಮ್ಮ ಚಾನೆಲ್‍ಗಳಲ್ಲಿ ಬಿತ್ತರಿಸುವ ಕಾತರದಲ್ಲಿದ್ದ ಕೆಲವು ಮಾಧ್ಯಮದವರೂ ಅವರ ಹಿಂದೆ ಹೊರಟರು. ಆದರೆ ಮಾದೇವಪ್ಪನವರು ಅವರಿಗೆ ಅನುಮತಿ ಕೊಡಲಿಲ್ಲ. ಅದರಿಂದ ನಿರಾಶರಾದ ಅವರು ಮತ್ತೆ ಸುರೇಂದ್ರಯ್ಯನನ್ನು ಹಿಡಿದುಕೊಂಡರು. ‘ನಿನ್ನೆ ನಡೆದ ಭೀಕರ ಘಟನೆಗೆ ಕಾರಣವೇನು? ಯಾಕಾಗಿ ಇಲ್ಲಿ ಪೂಜಾ ವಿಧಿಗಳನ್ನು ನಡೆಸಿದಿರಿ? ಈ ಜಾಗ ಖಾಸಗಿಯೋ ಅಥವಾ ಸರಕಾರದ್ದೋ? ಇಂಥ ಅರಣ್ಯ ಪ್ರದೇಶದಲ್ಲಿ ಯಾವ ಕೆಲಸಕಾರ್ಯಗಳನ್ನು ನಡೆಸಬೇಕಿದ್ದರೂ ಅರಣ್ಯ ಇಲಾಖೆ ಮತ್ತು ಭೂಕಂದಾಯ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಹೀಗಿರುವಾಗ ನೀವು ಅದನ್ನು ಪಡೆದುಕೊಂಡಿದ್ದೀರಾ…?’ಎಂದು ಸುರೇಂದ್ರಯ್ಯ ಕಕ್ಕಾಬಿಕ್ಕಿಯಾಗುವಂಥ ಪ್ರಶ್ನೆಗಳನ್ನೆಸೆದರು. ಆದರೂ ಸುರೇಂದ್ರಯ್ಯನ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ಕುಳವಲ್ಲ. ಆದ್ದರಿಂದ ಅವರು ಸಂಭಾಳಿಸಿಕೊಂಡು,‘ನೀವು ಒಬ್ಬೊಬ್ಬರಾಗಿ ಒಂದೊಂದು ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಬಹುದು. ಅದುಬಿಟ್ಟು ಎಲ್ಲರೂ ಒಟ್ಟಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಡ್ಡಿ ಗೀರುವಂತೆ ವರ್ತಿಸಿದರೆ ನಾವು ಯಾರಿಗೇನು ಹೇಳಲೀ…!’ಎಂದು ತಾವೂ ಸಿಡುಕಿದರು. ಆಗ ಮಾಧ್ಯಮದವರೂ ತಮ್ಮ ಗಡಿಬಿಡಿಯನ್ನು ಹತ್ತಿಕ್ಕಿಕೊಂಡರು.‘ನೋಡೀ… ಮೊದಲನೆಯದಾಗಿ ನಾವು ಹೇಳುವುದೇನೆಂದರೆ ಈ ಜಮೀನು ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ನಮಗೇ ಸೇರಿದ್ದು. ಇದರ ಪಟ್ಟೆಯೂ ಈಗ ನಮ್ಮ ಹೆಸರಿನಲ್ಲೇ ಇದೆ. ಜಮೀನು ನಮ್ಮದೆಂದ ಮೇಲೆ ಬಂಡೆಯೂ ನಮ್ಮದೇ ಅಲ್ಲವಾ? ಅಷ್ಟಲ್ಲದೇ ನಮ್ಮ ಹಿರಿಯರ ಕಾಲದಿಂದಲೂ ಈ ಬಂಡೆಗಳೊಳಗೆ ನಮ್ಮ ದೈವ ಭೂತಗಳು ನೆಲೆಸಿದ್ದವು ಮತ್ತು ಈಗಲೂ ಇವೆ. ಆದ್ದರಿಂದ ಅವುಗಳಿಗೆ ಹಮ್ಮಿಕೊಂಡಿದ್ದ ಪೂಜೆಯೊಂದನ್ನು ಮಾಡಲು ಏಕನಾಥ ಗುರೂಜಿಯವರನ್ನು ಕರೆಯಿಸಿದ್ದೆವು. ಅವರದನ್ನು ನಡೆಸುತ್ತಿದ್ದ ಹೊತ್ತಿಗೇ ಆ ಹಾಳು ಪ್ರಾಣಿಗಳು ನಮ್ಮೆಲ್ಲರ ಮೇಲೆ ದಾಳಿ ಮಾಡಿದವು. ಆದರೂ ದೇವರ ದಯೆಯಿಂದ ಗುರೂಜಿಯವರಿಗೇನೂ ತೊಂದರೆಯಾಗಿಲ್ಲ. ಅದು ನಮ್ಮ ಪುಣ್ಯ!’ ಎಂದು ವಿಷಾದ ತೋರ್ಪಡಿಸುತ್ತ ವಿವರಿಸಿದರು. ‘ಹಾಗಾದರೆ ಈ ಕಲ್ಲು ಒಡೆಯುವ ಜನರೆಲ್ಲ ಯಾಕೆ ಬಂದರು?’ ಪತ್ರಕರ್ತನೊಬ್ಬ ತಟ್ಟನೇ ಪ್ರಶ್ನಿಸಿದ. ಆಗ ಸುರೇಂದ್ರಯ್ಯನೂ ಅವಕ್ಕಾದವರು, ‘ಅದು, ಅದೂ… ಅವರು ಬಂಡೆ ಒಡೆಯಲು ಬಂದವರು!’ ಎಂದು ಧೈರ್ಯದಿಂದ ಹೇಳಿಯೇಬಿಟ್ಟರು. ‘ಹೌದಾ…! ಯಾವ ಬಂಡೆ? ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಸಿಕ್ಕಿದೆಯಾ…?’ ಎಂದು ಮತ್ತದೇ ಪ್ರಶ್ನೆಗಳು ಕೇಳಿ ಬಂದವು. ‘ಹೌದು! ಅದರ ಬಗ್ಗೆ ನಾವು ಇಲ್ಲಿನ ಪಂಚಾಯತ್ ಆಫೀಸಿಗೆ ಹದಿನೈದು ದಿನಗಳ ಮುಂಚೆಯೇ ಅರ್ಜಿ ಕೊಟ್ಟಿದ್ದೆವು. ಅವರು ಬಂದು ನೋಡಿಯೂ ಹೋಗಿದ್ದಾರೆ. ಆದರೆ ಅವರ ಲಿಖಿತ ಅನುಮತಿ ಸಿಕ್ಕಿದ ನಂತರವೇ ಕೆಲಸ ಆರಂಭವಾಗುವುದು!’ಎಂದು ಖಡಕ್ಕಾಗಿ ಉತ್ತರಿಸಿದ ಸುರೇಂದ್ರಯ್ಯ,‘ಹ್ಞಾಂ! ಇನ್ನೊಂದು ಮಾತು. ಅದನ್ನೂ ನಿಮಗೀಗಲೇ ಹೇಳಿಬಿಡುತ್ತೇವೆ. ನಮ್ಮ ಈಶ್ವರಪುರದ ಬುಕ್ಕಿಗುಡ್ಡೆ ಎಲ್ಲರಿಗೂ ಗೊತ್ತಿರಬಹುದಲ್ಲವಾ? ಅಲ್ಲೊಂದು ಕಡೆ ಕಾರಣಿಕದ ನಾಗ ಪರಿವಾರ ದೈವಗಳಿಗೆ ನಿರ್ಮಿಸಬೇಕೆಂದಿರುವ ದೇವಸ್ಥಾನಕ್ಕೆ ನಾವು ಈ ಬಂಡೆಯನ್ನು ದಾನವಾಗಿ ಕೊಟ್ಟಿದ್ದೇವೆ!’ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಸಡ್ಡು ಹೊಡೆವಂತೆ ಉತ್ತರಿಸಿದರು. ಸುರೇಂದ್ರಯ್ಯನ ಬಾಯಿಯಿಂದ,‘ಕಾರಣಿಕ’ ಮತ್ತು ‘ನಾಗ’ ಎಂಬ ಎರಡು ಪದಗಳು ಹೊರಗೆ ಬಿದ್ದ ಕೂಡಲೇ ಪತ್ರಕರ್ತರಲ್ಲಿ ಅನೇಕರು ತಣ್ಣಗಾದರು. ಅಷ್ಟೊತ್ತಿಗೆ ಚಿಟ್ಟೆಹುಲಿ ಹಿಡಿಯಲು ಹೋಗಿದ್ದ ತಂಡವೂ ಹಿಂದಿರುಗಿ ಬಂದಿತು. ಬಂದವರು, ಅರಣ್ಯಾಧಿಕಾರಿಗಳೊಡನೆ ಗೌಪ್ಯವಾಗಿ ಮಾತಾಡಿದರು. ಪತ್ರಕರ್ತರೂ ದೃಶ್ಯ ಮಾಧ್ಯಮದವರೂ ಸುರೇಂದ್ರಯ್ಯನನ್ನು ಬಿಟ್ಟು ಅವರನ್ನು ಮುತ್ತಿಕೊಂಡರು. ಅಷ್ಟರಲ್ಲಿ ಅಮರೇಶನಿಂದ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡ ಮಹಾದೇವಪ್ಪನವರು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡತೊಡಗಿದರು,‘ನಮ್ಮ ತಂಡವು ಇಡೀ ಬಂಡೆಗಳ ಎಡೆಎಡೆಗಳನ್ನೂ ಶೋಧಿಸಿ ನೋಡಿತು. ಅಲ್ಲೆಲ್ಲೂ ಯಾವ ಪ್ರಾಣಿಗಳೂ ಸಿಗಲಿಲ್ಲ. ಬಹುಶಃ ಅವುಗಳು ನಮ್ಮನ್ನು ಕಂಡು ಓಡಿ ಹೋಗಿರಬಹುದು. ಆದರೆ ಅವು ಬಹಳಷ್ಟು ಕಾಲದಿಂದ ಇಲ್ಲಿಯೇ ವಾಸವಿದ್ದುವು ಎಂಬುದು ನಮ್ಮ ತಜ್ಞರಿಗೆ ತಿಳಿದು ಬಂದಿದೆ. ಆದರೂ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಯಾಕೆಂದರೆ ಆ ಪ್ರಾಣಿಗಳು ಹ್ಯೂಮನ್ ಹಂಟರ್‍ಗಳಲ್ಲ. ಅಂದರೆ ನರಭಕ್ಷಕಗಳಲ್ಲ! ಅವುಗಳ ನೆಲೆಯ ಹತ್ತಿರ  ಬೆಂಕಿ ಕಾಣಿಸಿಕೊಂಡಿದ್ದರಿಂದ ಅವು ಹೆದರಿ ದಾಳಿ ನಡೆಸಿರುವ ಸಾಧ್ಯತೆಯಿದೆ. ಆ ಬಗ್ಗೆಯೂ ಸೂಕ್ತ ತನಿಖೆ ನಡೆಸಲಾಗುವುದು!’ಎಂದವರ ದೃಷ್ಟಿ ಒಂದುಕ್ಷಣ ಸುರೇಂದ್ರಯ್ಯನತ್ತ ಹೊರಳಿ ಮತ್ತೆ ಟಿವಿ ಕ್ಯಾಮರಾಗಳತ್ತ ನೆಟ್ಟಿತು. ಅದನ್ನು ಗ್ರಹಿಸಿದ ಸುರೇಂದ್ರಯ್ಯ ಒಳಗೊಳಗೇ ಚಡಪಡಿಸಿದರು. ‘ಇಂದಲ್ಲ ನಾಳೆ ಆ ಪ್ರಾಣಿಗಳು ಮರಳಿ ಬರಬಹುದು. ಆಗ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅಭಯಾರಣ್ಯಕ್ಕೆ ವರ್ಗಾಯಿಸುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತದೆ. ಅದಕ್ಕೆ ಇಲ್ಲಿನ ಸಾರ್ವಜನಿಕರ ಸಹಾಯವೂ ಬೇಕಾಗುತ್ತದೆ. ಇನ್ನು ಮುಂದೆ ಕೆಲವು ಕಾಲ ಈ ಬೋನು ಇಲ್ಲೇ ಇರುತ್ತದೆ. ಆ ಪ್ರಾಣಿಗಳಿಂದ ದಾಳಿಗೊಳಗಾದವರಿಗೆ ಸದ್ಯದಲ್ಲೇ ಪರಿಹಾರ ಮಂಜೂರು ಮಾಡಲಾಗುವುದು!’ಎಂದು ಆಶ್ವಾಸನೆಯಿತ್ತರು.    ನಡೆದ ಭಯಾನಕ ಘಟನೆಯೊಂದರ ಸಾರಾಂಶವನ್ನು ರಾಜ್ಯ ಮತ್ತು ದೇಶದಾದ್ಯಂತ ಎಪ್ಪತ್ತೆರಡು ಗಂಟೆಗಳ ಕಾಲ ಎಡೆಬಿಡದೆ ರೋಚಕವಾಗಿ ಬಿತ್ತರಿಸುತ್ತ ತಂತಮ್ಮ ವಾಹಿನಿಗಳ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದರೊಂದಿಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಸಲುವಾಗಿಯೂ ತಮ್ಮ ವೀಕ್ಷಕರಲ್ಲಿ ಅರಿವು ಮೂಡಿಸಬೇಕೆಂಬ ಧಾವಂತದಲ್ಲಿದ್ದ ಕೆಲವು ಮಾಧ್ಯಮಗಳ ಉತ್ಸಾಹಕ್ಕೆ ಸಮಸ್ಯೆಯೊಂದು ಬಿಸಿಯೇರುವ ಮುನ್ನವೇ ಟುಸ್ಸೆಂದದ್ದು ನಿರಾಶೆ ಮೂಡಿಸಿತು. ಆದ್ದರಿಂದ ಅವರೆಲ್ಲ ತಮಗೆ ಸಿಕ್ಕಷ್ಟು ಸುದ್ದಿಯನ್ನೇ ಸೆರೆ ಹಿಡಿದುಕೊಂಡವರು ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ರೂಪಾರ್ಥಗಳನ್ನು ನೀಡುತ್ತ ತಂತಮ್ಮ ವೀಕ್ಷಕರನ್ನು ಮನರಂಜಿಸುವ ಯೋಚನೆಯಿಂದ ಹಿಂದಿರುಗಿದರು. ಮಾಧ್ಯಮದವರು ಹೊರಡುತ್ತಲೇ ಸುರೇಂದ್ರಯ್ಯ, ಅರಣ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗವನ್ನು ಅಭಿಮಾನದಿಂದ ಮನೆಗೆ ಕರೆದೊಯ್ದರು. ನೆರೆಮನೆಯ ಕೆಲಸದವನನ್ನು ಕರೆದು ಸೀಯಾಳ ಕೊಯ್ಯಲು ಸೂಚಿಸಿದವರು, ‘ಬನ್ನಿ ಬನ್ನೀ ಸಾರ್ ಒಳಗೆ ಬನ್ನಿ ಕುಳಿತುಕೊಳ್ಳಿ…!’ ಎಂದು ಆದರದಿಂದ ಕರೆದು ಕುಳ್ಳಿರಿಸಿಕೊಂಡರು. ಬಳಿಕ ತಮ್ಮ ಮನೆ ಕೆಲಸದವಳನ್ನು ಕರೆದು ಏನೋ ಪಿಸುಗುಟ್ಟಿದರು. ಅವಳು ತಲೆಯಾಡಿಸಿ ಹೋದವಳು ಹರಿವಾಣದ ತುಂಬಾ ಕದಳಿ ಬಾಳೆಹಣ್ಣುಗಳನ್ನು ತಂದು ಟಿಪಾಯಿ ಮೇಲಿಟ್ಟು ಹೋದಳು. ಅಷ್ಟರಲ್ಲಿ ಸೀಯಾಳವೂ ಬಂತು.    ಸುಮಾರು ಎರಡು ಗಂಟೆಯಿಂದ ಸುಡುಬಂಡೆಗಳ ಹತ್ತಿರದ ಮತ್ತಿ ಮರದ ನೆರಳಲ್ಲಿ ನಿಂತುಕೊಂಡು ಬಿಸಿಲಿನ ಝಳಕ್ಕೆ ಬಾಯಾರಿಬಿಟ್ಟಿದ್ದ ಮಾದೇವಪ್ಪನವರಿಗೂ ಸಿಬ್ಬಂದಿಗಳಿಗೂ ಸಿಹಿಯಾದ ಸೀಯಾಳವು ಅಮೃತದಂತೆನ್ನಿಸಿ ಸುರೇಂದ್ರಯ್ಯನ ಒತ್ತಾಯಕ್ಕೆಂಬಂತೆ ಒಬ್ಬೊಬ್ಬರು ಎರಡೆರಡು ಸೀಯಾಳಗಳನ್ನು ಹೊಟ್ಟೆಗಿಳಿಸಿ ಬಾಳೆಹಣ್ಣುಗಳನ್ನೂ ತಿಂದು ನೆಮ್ಮದಿಯ ಉಸಿರುಬಿಟ್ಟರು. ಇಲಾಖೆಯವರು ತಮ್ಮ ಆತಿಥ್ಯ ಸ್ವೀಕರಿಸಿದ ಮೇಲೆ ಸುಂದರಯ್ಯ ಮೆಲ್ಲನೇ,‘ಸಾರ್ ಆ ಬಂಡೆ ಮತ್ತು ಆಸುಪಾಸಿನ ಕಾಡುಗಳನ್ನು ಸದ್ಯದಲ್ಲೇ ತೆಗೆಯಬೇಕೆಂದಿದ್ದೇವೆ. ಅದಕ್ಕೆ ನಿಮ್ಮ ಇಲಾಖೆಯ ಒಪ್ಪಿಗೆ ಮತ್ತು ಸಹಕಾರ ಎರಡೂ ಬೇಕಾಗುತ್ತದೆ. ಅದನ್ನು ನೀವು ಕೊಟ್ಟರೆ ಬಹಳ ಉಪಕಾರವಾಗುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ತಮ್ಮನ್ನೂ ಮತ್ತು ಇಲಾಖೆಯನ್ನೂ ಸಂದರ್ಭೋಚಿತವಾಗಿ ಸತ್ಕರಿಸುವುದನ್ನು ಮರೆಯುವುದಿಲ್ಲ!’ ಎಂದು ವಿನಂತಿಸಿದರು. ಸುರೇಂದ್ರಯ್ಯನ ಸಜ್ಜನಿಕೆಗೆ ಮನಸೋತ ಮಹಾದೇವಪ್ಪನವರು,‘ಆಯ್ತು ಆ ಬಗ್ಗೆ ನೀವೇನೂ ಚಿಂತಿಸಬೇಡಿ ಸುಂದರಯ್ಯನವರೇ. ಆದರೆ ಇನ್ನು ಮುಂದೆ ಅಲ್ಲಿ ನೀವು ಯಾವ ಕೆಲಸ ನಡೆಸುವುದಿದ್ದರೂ ಇಲಾಖೆಗೆ ತಿಳಿಸಿ ಅನುಮತಿ ಪಡೆದೇ ಮುಂದುವರೆಯಬೇಕು. ಆಗ ಒಬ್ಬಿಬ್ಬರು ಸಿಬ್ಬಂದಿಗಳು ನಿಮ್ಮ ಜೊತೆಗಿದ್ದು ಸಹಕರಿಸುತ್ತಾರೆ. ಇಲ್ಲದಿದ್ದಲ್ಲಿ ನಿಮಗಾಗದವರು ಯಾರಾದರೂ ಬಂದು ನಿಮ್ಮ ಮೇಲೆ ದೂರು ಕೊಟ್ಟರೆ ನಾವು ಅನಿವಾರ್ಯವಾಗಿ ನಿಮ್ಮ ಮೇಲೆ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ!’ ಎಂದೂ ಎಚ್ಚರಿಸಿದರು. ಅಷ್ಟು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಭಯಪಟ್ಟರು. ಅದನ್ನು ಗಮನಿಸಿದ ಮಹಾದೇವಪ್ಪನವರು,‘ಸರಿ ಸುರೇಂದ್ರಯ್ಯ, ನಾವಿನ್ನು ಹೊರಡುತ್ತೇವೆ. ಹಾಗೆಯೇ ನಿನ್ನೆ ನಡೆದ ಘಟನೆಯ ವಿಚಾರಣೆಗೆ ಸಂಬಂಧಿಸಿ ನೀವು ಕಛೇರಿಗೆ ಬಂದು ಹೇಳಿಕೆ ಬರೆದು ಕೊಡಬೇಕಾಗುತ್ತದೆ. ಮುಂದಿನದ್ದನ್ನು ಅಲ್ಲೇ ಕುಳಿತು ಮಾತಾಡೋಣ!’ಎಂದು ನಗುತ್ತ ಆಜ್ಞಾಪಿಸಿದರು. ಅವರ ನಗುವನ್ನು ಕಂಡ ಸುರೇಂದ್ರಯ್ಯ ಒಮ್ಮೆಲೇ ಗೆಲುವಾಗಿ,‘ಆಯ್ತು, ಆಯ್ತು ಸಾರ್ ಈಗಲೇ ಹೊರಟೆ…!’ ಎಂದು ಉಟ್ಟಬಟ್ಟೆಯಲ್ಲೇ ಅವರೊಂದಿಗೆ ಹೊರಟುಬಿಟ್ಟರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Read Post »

ಕಾವ್ಯಯಾನ

ಕಾವ್ಯ ಸಂಗಾತಿ ನಿತ್ಯ ನೂತನ ಅದೇ ಬಿಳಿ ಮುಗಿಲುಅದೇ ತಿಳಿ ಕಡಲುಅದೇ ಉರಿವ ನೇಸರಅದೇ ಹೊಳವ ಚಂದಿರಬದಲಾದುದ ಕಂಡಿಹೆ ಏನು !!? ರಂಗು ರಂಗಿನಫಳ ಫಳ ಹೊಳೆವಪುಟ ಪುಟವೂಚೆಂದ ಅಚ್ಚೋತ್ತಿಹ ಪಟ !ತಿಥಿ ವಾರ ನಕ್ಷತ್ರಎಣಿಸಿ ಗುಣಿಸಿ ನೋಡುವಕೋಣೆ ಗೋಡೆಗೆ ನೆಲ ನೋಡುತಾಜೋತು ಬಿದ್ದು ಮಾಸಕೊಂದುಅಂಗಿ ಬಿಚ್ಚಿ…ವರುಷ ಪೂರ್ಣ ನೇತಾಡುವದಿನ ದರ್ಶಿಕೆ ಮಾತ್ರ !! ಇರುಳು ಸತ್ತು ಹಗಲು ಹುಟ್ಟಿಹಳೆಯ ಕ್ಷಣಗಳ ಮರೆಸಿಹೊಸ ಭಾವಗಳ ತಣಿಸಿಮೂಡಣದಿ ಮುಗಿಲೆಲ್ಲಹೊಂಬಣ್ಣವ ಚೆಲ್ಲಿಗಿರಿ ಶಿಖರಗಳ ಮೇಲೆರಗಿನವೋಲ್ಲಾಸ ಹೊತ್ತುತರುವ ಭಾಸ್ಕರನಿತ್ಯ ನೂತನ ನಿತ್ಯ ನವ ಚೇತನ !! ನಿನ್ನೆಯ ನೆನಹುಗಳಲಿಕಾಲ ದೂಡದಿರಿನಾಳೆಗಳ ಭರವಸೆಯಲಿಮುಂದಿರುವ ಗುರಿಯಡೆಗೆಕನಸುಗಳ ಗರಿ ಬಿಚ್ಚಿ ನನಸುಮಾಡುವುದ ಮರೆಯದಿರಿ..!! ಪ!! ಅಶೋಕ ಬಾಬು ಟೇಕಲ್.

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಕಾಯುತ್ತಿದ್ದೇನೆ ದಿನವೊಂದಕ್ಕಾಗಿ ಕಾಯುತ್ತಿದ್ದೇನೆಅಮಾವಾಸ್ಯೆಯ ಚಂದಿರಹೊರಳಿ, ಮರಳಿ ಬೆಳದಿಂಗಳ ಹೊತ್ತುಹುಣ್ಣಿಮೆಯೂರಿಗೆ ಬಂದೇ ಬರುವನೆಂದು ಕಣ್ಣ ಬೆಳಕು ಮರೆಯಾದರೂಮತ್ತೆ ಸೂರ್ಯ ಉದಯಿಸುವನೆಂದುಸೇರದ ತೀರಗಳಿಗೆ ಮುತ್ತಿಡಲುಅಲೆಗಳು ಓಡೋಡಿ ಬಂದೇ ಬರುವವೆಂದು ಆಗಸದಂಚಿನಲ್ಲಿ ನಗುವಾಗಿ,ಒಲವಾಗಿ,ಗೆಲುವಾಗಿ, ನಮಗಾಗಿಕಾಮನಬಿಲ್ಲು ಮೂಡುವದಿನವೊಂದಕ್ಕಾಗಿ ಕಾಯುತ್ತಿದ್ದೇನೆ…. ಒಲವು

Read Post »

ಇತರೆ

ನಾನಂತೂ ಈ ಹೊಸಪದ್ಧತಿಗೆ ಒಗ್ಗಿಕೊಂಡು ಎಂಭತ್ತೈದು ವರ್ಷದ ಮನೆಮಾಲಿಕರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದೆ. ನೀವು?
ನಾನೂ ಈಗ ಹೇಳುತ್ತಿದ್ದೇನೆ, – “ಮುಸುರಿನಾ ಸಿಂಕಿಗೆಹಾಕಬ್ಯಾಡ್ರಿ”.

Read Post »

You cannot copy content of this page

Scroll to Top