ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಧಾರಾವಾಹಿ ಆವರ್ತನ ಅದ್ಯಾಯ-43 ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಸುಂದರವಾಗಿ ರಂಗೋಲಿಯಿಟ್ಟು ಶೃಂಗಾರಗೊಂಡ ಜಾಗದಲ್ಲಿದ್ದ ದೈತ್ಯ ಮರಗಳು ತಂತಮ್ಮ ಅಂತ್ಯ ಕಾಲ ಸಮೀಪಿಸಿತೆಂಬುದನ್ನು ನೆನೆದು ಭಯ, ದುಃಖದಿಂದ ತರತರ ಕಂಪಿಸುತ್ತ ಕೆಲವುಕ್ಷಣ ಆಮ್ಲಜನಕವನ್ನು ಸ್ರವಿಸುವುದನ್ನೇ ಮರೆತು ಇಂಗಾಲವನ್ನು ಕಕ್ಕುತ್ತಿವೆಯೇನೋ ಎಂಬಂತೆ ಅಲ್ಲಿನ ಪರಿಸರವು ಒಮ್ಮೆಲೇ ಮಲೀನಗೊಂಡಿತು. ಅದರೊಂದಿಗೆ ಕಾಡಿನ ಸೆರಗಿನಲ್ಲಿದ್ದ ಸರೋವರವೂ ತಲ್ಲಣಿಸುತ್ತ, ಸ್ಫಟಿಕದಂಥ ಜಲರಾಶಿಯು ಮಂದವಾಗಿ ಮೇಲ್ಪದರದಲ್ಲಿ ಹಳದಿಮಿಶ್ರಿತ ಕೆಂಬಣ್ಣದ ದಟ್ಟ ಪದರವೊಂದು ಸೃಷ್ಟಿಯಾಗಿ ಸೇವಿಸಲಯೋಗ್ಯವಾಗಿಬಿಟ್ಟಿತು. ಗುರೂಜಿಯವರ ಚಟುವಟಿಕೆ ನಡೆಯಲಿದ್ದ ಸ್ಥಳದ ಒಂದು ಮೂಲೆಯಲ್ಲಿ ನಿಂತುಕೊಂಡು ಅವರನ್ನು ಕಾಯುತ್ತಿದ್ದ ಭೂಮಾಲಕರ ಮತ್ತು ಊರ ಭಕ್ತಾದಿಗಳ ಗುಂಪು ಅಲ್ಲಿ ಸೃಷ್ಟಿಯಾದ ವಿಷಮ ವಾತಾವರಣವನ್ನು ಕಂಡು ತೀವ್ರ ಗಾಬರಿಗೊಂಡಿತು. ಕೆಲವರಿಗೆ ಕಾಡಿಗೆ ಕಾಡೇ ನೊಂದು ರೋಧಿಸುವಂತೆಯೂ ಭಾಸವಾಗಿ ಭಯವಾಯಿತು.      ಇತ್ತ ಹುಚ್ಚೆದ್ದು ಧಾವಿಸುತ್ತಿದ್ದ ಬಿರುಗಾಳಿಯು ರಪ್ಪನೆ ಜನರ ಗುಂಪಿನತ್ತ ನುಗ್ಗಿತು. ತಾನು ಬಾಚಿ ಹೊತ್ತು ತಂದಿದ್ದ ಕಸಕಡ್ಡಿ ಕಶ್ಮಲಗಳನ್ನೆಲ್ಲ ಕ್ರೋಧವೆತ್ತಂತೆ ರಪರಪನೇ ನೆರೆದವರ ಮೇಲಪ್ಪಳಿಸುತ್ತ ಸುಳಿಯಿತು. ಆ ಜನರು ಭೀತಿಯಿಂದ ದಿಕ್ಕುದೆಸೆ ತಪ್ಪಿ ಓಡುತ್ತ ಸಿಕ್ಕಸಿಕ್ಕ ಮರಗಿಡಗಳ ಮರೆಗೆ ಸರಿದು ಅಡಗಿಕೊಳ್ಳತೊಡಗಿದರು. ಅಷ್ಟರಲ್ಲಿ ಗುರೂಜಿಯವರ ತಂಡವೂ ಕಾಡಿನೊಳಗೆ ಅಡಿಯಿಟ್ಟಿತು. ಅವರನ್ನು ಕಂಡ ಬಿರುಗಾಳಿಯ ರಭಸವು ದುಪ್ಪಟ್ಟಾಗುವುದಕ್ಕೂ ನಂದಿಮರದ ದೊಡ್ಡ ಒಣ ರೆಂಬೆಯೊಂದು ಗುರೂಜಿಯವರ ನೆತ್ತಿಯ ನೇರಕ್ಕೆ ಮುರಿದು ಬೀಳುವುದಕ್ಕೂ ಸರಿಹೋಯಿತು. ಆದರೆ ಅದನ್ನು ತಟ್ಟನೆ ಗಮನಿಸಿದ ಗುರೂಜಿಯವರು ಹೌಹಾರಿ ಒಂದೇ ಉಸಿರಿಗೆ ಹಿಂದೆ ನೆಗೆದು ಅದೇ ವೇಗದಲ್ಲಿ ಹಿಂದಿರುಗಿ ಓಡಲಿದ್ದರು. ಆದರೆ ಅದು ಹೇಗೋ ಕಷ್ಟಪಟ್ಟು ಸಂಭಾಳಿಸಿಕೊಂಡು ನಿಂತರು. ಆದರೆ ಆಕ್ಷಣ ಅವರ ಗಟ್ಟಿ ಹೃದಯವನ್ನು ಯಾರೋ ಬಿರುಸಾಗಿ ತಿವಿದಂಥ ನೋವೊಂದು ಕಾಣಿಸಿಕೊಂಡಿತು. ಎದೆಯ ಭಾಗನ್ನು ರಪ್ಪನೆ ಅಮುಕಿ ಹಿಡಿದುಕೊಂಡು ಅವುಡುಗಚ್ಚಿ ನೋವು ನುಂಗಿದರು. ಬಿರುಗಾಳಿಯ ರೌದ್ರ ನರ್ತನ ತಣ್ಣಗಾಗುವವರೆಗೆ ಮರವೊಂದನ್ನು ಬಿಗಿಯಾಗಿ ಹಿಡಿದು ನಿಂತು ಸುಧಾರಿಸಿಕೊಂಡರು.    ಅತ್ತ ಅಲ್ಲೊಂದು ತಮಾಷೆಯೂ ನಡೆದಿತ್ತು. ರಾಘವ ಉಟ್ಟಿದ್ದ ಬಿಳಿಯ ಪಂಚೆಯೂ ಹೆಗಲ ಮೇಲೆ ಹೆಮ್ಮೆಯಿಂದ ನೇತಾಡಿಸಿಕೊಂಡಿದ್ದ ಉತ್ತರೀಯವೂ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿ ಮರದ ಎತ್ತರದ ಕೊಂಬೆಯೊಂದಲ್ಲಿ ನೇತಾಡುತ್ತಿದ್ದವು. ಅವನ ಅವಸ್ಥೆಯನ್ನು ಕಂಡ ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗು ಉಕ್ಕಿತು.  ಅವರೆಲ್ಲ ಮುಸಿಮುಸಿ ನಕ್ಕಾಗ ಉಳಿದವರೂ ಜೋರಾಗಿ ನಗತೊಡಗಿದರು. ಆಗ ರಾಘವನಿಗೆ ತೀರಾ ಅವಮಾನವೆನಿಸಿತು. ಆತ ಕೂಡಲೇ ಪಂಚೆಯಿದ್ದ ಮರವೇರಲು ಮುಂದಾದ. ಆದರೆ ಮತ್ತೇನೋ ಹೊಳೆದು ಕಾರಿನತ್ತ ಓಡಿದ. ಅಲ್ಲಿದ್ದ ಹಳೆಯ ಪಂಚೆಯೊಂದನ್ನು ಉಟ್ಟುಕೊಂಡು ಹಿಂದಿರುಗಿದ.                                                                                *** ದೇವರಕಾಡಿನಲ್ಲಿ ಭುಗಿಲೆದ್ದ ಬಿರುಗಾಳಿಯು ಸ್ವಲ್ಪಹೊತ್ತಿನಲ್ಲಿ ನಿಧಾನಕ್ಕೆ ಬಿಸಿಯೇರಿ ಕಾಡಿನೊಳಗಿನ ಮನುಷ್ಯ ಕ್ರಿಮಿಗಳನ್ನೆಲ್ಲ ಉಸಿರುಗಟ್ಟಿಸಿ ಹೊರಗೋಡಿಸಲೆತ್ನಿಸಿತು. ಆದರೆ ಅಷ್ಟರಲ್ಲಿ ಗೂರೂಜಿಯವರ ಮಹತ್ವಾಕಾಂಕ್ಷೆಯೂ ಜಾಗ್ರತಗೊಂಡಿದ್ದರಿಂದ ಬಿರುಗಾಳಿಯು ಮೆಲ್ಲನೆ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು. ಪರಿಸ್ಥಿತಿ ಶಾಂತವಾಗುತ್ತಲೇ ಗುರೂಜಿಯವರು ಜೀರ್ಣೋದ್ಧಾರದ ನಾಂದಿಗೆ ಬಂದು ಸೇರಿದ್ದ ಭಕ್ತಾದಿಗಳನ್ನುದ್ದೇಶಿಸಿ ಮಾತಾಡಲಿಚ್ಛಿಸಿದರು. ‘ಉಙಂ…ಉಙಂ…!’ ಎಂದು ಗಂಟಲು ಸರಿಪಡಿಸಿಕೊಳ್ಳುತ್ತ ಎಲ್ಲರನ್ನೂ ಎಚ್ಚರಿಸಿದರು. ಆಗ ಜನರೂ ಅಷ್ಟರವರೆಗೆ ತಮ್ಮನ್ನು ಕಾಡುತ್ತಿದ್ದ ಆತಂಕವನ್ನು ಬದಿಗೊತ್ತಿ ಗುರೂಜಿಯವರ ಮಾತುಗಳನ್ನು ಆಲಿಸತೊಡಗಿದರು. ‘ನೋಡಿ ಭಕ್ತಾದಿಗಳೇ… ಈಗ ಸ್ವಲ್ಪಹೊತ್ತಿನ ಮುಂಚೆ ಈ ಪವಿತ್ರ ಸನ್ನಿಧಿಯಲ್ಲಿ ನಡೆದ ವಿಚಿತ್ರ ಘಟನೆಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ ಅಂತ ಹೇಳಲು ನಮಗೆ ಸಂತೋಷವಾಗುತ್ತಿದೆ. ಯಾವ ಮಹಾಶಕ್ತಿಯನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲು ಇಚ್ಛಿಸಿದ್ದೇವೋ ಅದೇ ಶಕ್ತಿಯು ಇವತ್ತು ನಮಗೆಲ್ಲರಿಗೂ ಎಂಥ ವಿಶೇಷ ಸ್ವಾಗತವನ್ನು ನೀಡಿತು ಎನ್ನುವುದನ್ನು ನೀವೆಲ್ಲ ಕಣ್ಣಾರೆ ನೋಡಿರುವಿರಿ. ಆದರೂ ನಿಮಗೆ ನಾವದನ್ನು ಸ್ವಲ್ಪ ವಿವರಿಸಿ ಹೇಳಬೇಕು. ನಮ್ಮೆಲ್ಲರ ಈ ನಿರ್ಧಾರದಿಂದ ನಾಗದೇವನಿಗೆ ಆದಂಥ ಅಪರಿಮಿತ ಸಂತೋಷವು ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡರೆ ನಂದಿಮರದ ಒಣ ಗೆಲ್ಲೊಂದು…!’ ಎಂದು ಮಾತು ನಿಲ್ಲಿಸಿದವರು, ‘ಭಕ್ತಾದಿಗಳೇ ಗಮನವಿಟ್ಟು ಕೇಳಿಸಿಕೊಳ್ಳಿ! ನಾವು ಹೇಳುತ್ತಿರುವುದು ಗಟ್ಟಿಮುಟ್ಟಾದ ಹಸಿ ಗೆಲ್ಲಿನ ಬಗ್ಗೆ ಅಲ್ಲ…, ಒಣಗಿ ಕುಂಬಾದ ಗೆಲ್ಲು! ಅದು ಒಂದುವೇಳೆ ನಾಡಿದ್ದು ಜೀರ್ಣೋದ್ಧಾರದ ಸಮಯದಲ್ಲೆಲ್ಲಾದರೂ ಮುರಿದು ಬೀಳುತ್ತಿದ್ದರೆ ಎಂಥ ಅನಾಹುತವಾಗುತ್ತಿತ್ತು ಅಂತ ನೀವೇ ಊಹಿಸಿಕೊಳ್ಳಿ! ಅಂಥ ಕುಂಬು ರೆಂಬೆಯೊಂದು ನಮ್ಮೆಲ್ಲರ ಕಣ್ಣಮುಂದೆಯೇ ಮುರಿದು ಬಿದ್ದಿರುವುದು ಇಲ್ಲಿನ ದೈವಭೂತಗಳೂ ನಮ್ಮೆಲ್ಲರ ಮೇಲೆ ಇಟ್ಟಿರುವ ಕೃಪಾಕಟಾಕ್ಷಕ್ಕೆ ಸಣ್ಣದೊಂದು ಉದಾಹರಣೆ ಎಂದೇ ತಿಳಿಯಬೇಕು. ಆದ್ದರಿಂದ ಮುಂದೆ ನಡೆಯಲಿರುವ ಮಹತ್ಕಾರ್ಯಕ್ಕೆ ಇಲ್ಲಿನ ಸರ್ವಶಕ್ತಿಗಳ ಸಂಪೂರ್ಣ ಸಹಕಾರ ನಮಗಿದೆ ಎನ್ನುವುದೇ ಈ ಘಟನೆಯ ಒಳಾರ್ಥ. ಹಾಗಾಗಿ ನಮ್ಮ ಪಾಲಿಗೆ ಇದಕ್ಕಿಂತ ಶುಭಗಳಿಗೆ ಇನ್ನೊಂದು ಬರಲಾರದು. ಆದಷ್ಟು ಬೇಗ ಕೆಲಸ ಆರಂಭಿಸುವ ಬನ್ನಿ…!’ ಎಂದು ನಗುತ್ತ ಹೇಳಿದವರು ರಾಘವನತ್ತ ತಿರುಗಿ ಮುಂದಿನ ಕಾರ್ಯಕ್ಕೆ ಅಣಿ ಮಾಡುವಂತೆ ಸಂಜ್ಞೆ ಮಾಡಿದರು.    ರಾಘವನು ಕೂಡಲೇ ಜಾಗದ ಹಿರಿಯನೊಬ್ಬನನ್ನು ಕರೆದುಕೊಂಡು ನೀರು ತರಲು ಸಮೀಪದ ಮದಗದತ್ತ ಹೋದ. ಆದರೆ ಆ ಸರೋವರದ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಅಷ್ಟಲ್ಲದೇ ಯಾವುದೋ ಪ್ರಾಣಿಯೊಂದು ಸತ್ತು ಕೊಳೆತ ದುರ್ವಾಸನೆ ಬೀರುತ್ತಿದ್ದ ನೀರಿನ ಮೇಲೆ ಹಿಂಡುಹಿಂಡು ನೊಣಗಳು ಗುಂಯ್ಯಿಗುಟ್ಟುತ್ತಿದ್ದವು. ಅದನ್ನು ಕಂಡ ಆ ಹಿರಿಯನಿಗೆ ಆತಂಕವಾಯಿತು. ಎಂದೂ ಹೀಗೆ ಮಲೀನವಾಗದಿದ್ದ ನಿರ್ಮಲ ಸರೋವರಕ್ಕೆ ಇಂದೇನಾಯಿತು? ಎಂದು ಚಿಂತಿಸಿದವನು ರಾಘವನನ್ನು ತಡೆದು ಗುರೂಜಿಯವರಿಗೆ ವಿಷಯ ತಿಳಿಸಿ ಬರಲು ಸೂಚಿಸಿದ. ರಾಘವ ತಕ್ಷಣ ಹೋಗಿ ಗುರೂಜಿಯ ಕಿವಿಯಲ್ಲಿ ವಿಷಯವನ್ನರುಹಿದ. ಅದನ್ನು ಕೇಳಿದ ಗುರೂಜಿಯವರ ಮುಖವು ವಿವರ್ಣವಾಯಿತು. ಆದ್ದರಿಂದ ಅವರು ಕ್ಷಣಹೊತ್ತು ಧ್ಯಾನಮಗ್ನರಾಗಿಬಿಟ್ಟರು. ಬಳಿಕ ತಮ್ಮ ಚೀಲದಿಂದ ಮಣ್ಣಿನ ಸಣ್ಣ ಪೊಟ್ಟಣವೊಂದನ್ನು ತೆಗೆದು ಅವನ ಕೈಗಿತ್ತು,‘ಇದು ಮೂಲ ನಾಗನ ಹುತ್ತದ ಪ್ರಸಾದ. ಭಕ್ತಿಯಿಂದ ಪ್ರಾರ್ಥಿಸಿಕೊಂಡು ಮದಗಕ್ಕೆ ಚೆಲ್ಲಿ ಅದೇ ಜಾಗದ ನೀರನ್ನು ತೆಗೆದುಕೊಂಡು ಬಾ!’ ಎಂದು ಆಜ್ಞಾಪಿಸಿದರು. ರಾಘವ ಆ ಪ್ರಸಾದವನ್ನು ಕೊಂಡೊಯ್ದು ಹಾಗೆಯೇ ಮಾಡಿದ. ಆಶ್ಚರ್ಯ! ಆ ಮಣ್ಣಿನ ಪ್ರಸಾದ ಬಿದ್ದ ಜಾಗದಷ್ಟು ನೀರು ತಕ್ಷಣ ಶುದ್ಧವಾದಂತೆ ತೋರಿತು! ಇಬ್ಬರಿಗೂ ವಿಸ್ಮಯವಾಯಿತು. ಅವರು ಗುರೂಜಿಯವರ ಮಹಿಮೆಯನ್ನು ಕೊಂಡಾಡುತ್ತ ನೀರು ಹೊತ್ತುಕೊಂಡು ಹಿಂದಿರುಗಿದರು.   ಹಿಂದಿರುಗಿ ಬಂದ ಹಿರಿಯ ತಾನು ಕಂಡ ವಿಚಿತ್ರವನ್ನು ಉಳಿದ ಭಕ್ತಾದಿಗಳಿಗೂ ವಿವರಿಸಿದ. ಅವರೂ ಅಚ್ಚರಿಗೊಂಡು ಭಯಭಕ್ತಿಯಿಂದ ಪುಳಕಿತರಾದರು. ಗುರೂಜಿಯವರು ಭಕ್ತಾದಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ಚಮತ್ಕಾರವನ್ನು ತೋರಿಸಲು ಸಿದ್ಧರಾದರು. ಕಾಡಿನ ನಡುವೆ ಪ್ರಶಸ್ತ ಸ್ಥಳವೊಂದರಲ್ಲಿ ಹೋಮ ಕುಂಡವನ್ನು ಸ್ಥಾಪಿಸಲಾಯಿತು. ಗುರೂಜಿಯವರು ತಮ್ಮೊಂದಿಗೆ ಕರೆದು ತಂದಿದ್ದ ಏಳು ಮಂದಿ ಸಹಾಯಕರೊಂದಿಗೆ ಹೋಮ ಕುಂಡದೆದುರು ಪದ್ಮಾಸೀನರಾಗಿ ಕುಳಿತು ಮಂತ್ರೋಚ್ಛರಣೆಯಲ್ಲಿ ತೊಡಗಿದರು. ಸುಮಾರು ಅರ್ಧ ಗಂಟೆಯ ಕಾಲ ವಿಶೇಷ ಹೋಮವೊಂದು ನಡೆದು ಪೂರ್ಣಾಹುತಿ ಕೊಟ್ಟು ಎದ್ದು ನಿಂತ ಗುರೂಜಿಯವರು ತಮ್ಮ ಮೈತುಂಬಾ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಮುಂದಿನ ವಿಶೇಷ ವಿಧಿಗೆ ಮುಂದಾದರು.    ಗುರೂಜಿಯವರ ಸಹಾಯಕರು ಅವರ ಇಂಗಿತವನ್ನು ಅರ್ಥೈಸಿಕೊಂಡು ಮುಂದೆ ಬಂದು ಅವರ ಅಕ್ಕಪಕ್ಕ ಕೈಮುಗಿದು ನಿಂತುಕೊಂಡರು. ಮುಂದಿನಕ್ಷಣ ಗುರೂಜಿಯವರು ನಾಗದೇವನೇ ಮೈಮೇಲೆ ಬಂದಂತೆ ಆವೇಶಭರಿತರಾಗಿ ನಡುಗತೊಡಗಿದರು. ಹತ್ತಾರು ಕಪ್ಪು ಮಚ್ಚೆಗಳಿಂದ ಕೂಡಿದ ಅವರ ಕೆನ್ನಾಲಿಗೆಯು ಕ್ಷಣಕ್ಷಣಕ್ಕೂ ಹೊರ ಒಳಗೆ ಹರಿದಾಡುತ್ತ ಭಯ ಹುಟ್ಟಿಸುವಂಥ ಹಾವಿನ ವರ್ತನೆಯಂತೆಯೇ ಭಕ್ತಾದಿಗಳಿಗೆ ಭಾಸವಾಯಿತು. ಎಲ್ಲರೂ ಭೀತರಾಗಿ ನೋಡುತ್ತಿದ್ದರು. ಅಷ್ಟರಲ್ಲಿ ಗುರೂಜಿಯವರ ಆವೇಶವು ಸ್ವಲ್ಪ ತಗ್ಗಿತು. ರಾಘವ ಅದನ್ನೇ ಕಾಯುತ್ತಿದ್ದವನಂತೆ ರಪ್ಪನೆ ಸಿಪ್ಪೆ ಸುಲಿದ ಕಾಯಿಯೊಂದನ್ನೂ, ಕತ್ತಿಯನ್ನೂ ತಂದು ಅವರ ಕೈಗಿತ್ತು ಗೋಣು ಬಗ್ಗಿಸಿ ಹಿಂದೆ ಸರಿದು ಕೈಕಟ್ಟಿ ನಿಂತುಕೊಂಡ. ಗುರೂಜಿಯವರು ಕಣ್ಣುಮುಚ್ಚಿ ವಿಚಿತ್ರ ಮಂತ್ರವೊಂದನ್ನು ತಾರಕಸ್ವರದಲ್ಲಿ ಪಠಿಸುತ್ತ ಕಾಯಿಯನ್ನು ಒಂದೇ ಏಟಿಗೆ ಎರಡು ಹೋಳಾಗಿ ಒಡೆದರು. ಬಳಿಕ ಊರ ಗುರಿಕಾರನತ್ತಲೂ ಜಾಗದ ವಾರಸುದಾರರತ್ತಲೂ ಮತ್ತು ಭಕ್ತಾದಿಗಳತ್ತಲೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣಸನ್ನೆಯಿಂದಲೇ ಅವರೆಲ್ಲರ ಅಪ್ಪಣೆ ಕೋರಿದರು. ಆಗ ಎಲ್ಲರೂ ಭಕ್ತಿಯಿಂದ ಅನುಮತಿ ಸೂಚಿಸಿದರು. ಗುರೂಜಿಯವರು ಅದೇ ಮಂತ್ರವನ್ನು ಮರಳಿ ಉಚ್ಛರಿಸುತ್ತ ಕಾಯಿಯ ಹೋಳುಗಳನ್ನು ಬೀಸಿ ಎದುರಿನ ಒಂದಷ್ಟು ದೂರಕ್ಕೆಸೆದರು. ಅದರಲ್ಲೊಂದು ಜುಟ್ಟಿನ ಹೋಳು ರುಮ್ಮನೆ ಹಾರಿ ಹೋಗಿ ರೆಂಜೆ ಮರದ ಬುಡಕ್ಕೆ ಬಡಿದು ಅಂಗಾತ ಬಿದ್ದಿತು.     ನೆರೆದ ಭಕ್ತಾದಿಗಳು ಮುಂದೆ ನಡೆಯಲಿದ್ದ ಸೋಜಿಗವನ್ನು ಕಾಣಲು ಉಸಿರು ಬಿಗಿದು ಹಿಡಿದು ನಿಂತಿದ್ದರು. ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು. ಜಾಗಕ್ಕೆ ಸಂಬಂಧಿಸಿದ ಒಂದಿಬ್ಬರು ಮಧ್ಯ ವಯಸ್ಕರನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಗುರೂಜಿಯವರ ನೋಟಕ್ಕೆ ಆ ಬಡಪಾಯಿಗಳ ಹೃದಯಗಳು ಜೋರಾಗಿ ಬಡಿದುಕೊಳ್ಳಲಾರಂಭಿಸಿದವು. ಅಷ್ಟರಲ್ಲಿ ಗುರೂಜಿಯವರು, ‘ಭಯಪಡಬೇಡಿ ಭಕ್ತಾದಿಗಳೇ ಮುಂದೆ ಬನ್ನಿ…!’ ಎಂದು ಅವರಿಗೆ ಆಜ್ಞಾಪಿಸಿದರು. ಅವರು ಅಳುಕುತ್ತ ಮುಂದೆ ಬಂದರು. ‘ಓ ಅಲ್ಲಿಗೆ ಹೋಗಿ ಆ ರೆಂಜೆಮರದ ಕೆಳಗೆ ನಾಗನು ಎಸೆದ ಪ್ರಸಾದ ಬಿದ್ದಿದೆಯಲ್ಲಾ ಆ ಸ್ಥಳವನ್ನು ಪೂರ್ಣ ಭಕ್ತಿಯಿಂದ ಅಗೆಯಿರಿ. ಹ್ಞೂಂ, ಹೊರಡಿ!’ ಎಂದು ಒರಟಾಗಿ ಸೂಚಿಸಿದರು. ಅವರಿಬ್ಬರೂ ಗುರೂಜಿಯ ಸಾಕು ಪ್ರಾಣಿಗಳಂತೆ ತಲೆಯಲ್ಲಾಡಿಸಿ ಕೈಮುಗಿದು ಹೋಗಿ ಅಗೆಯತೊಡಗಿದರು. ಉಳಿದ ಭಕ್ತಾದಿಗಳು ಅವರ ಕ್ರಿಯೆಯನ್ನು ಭಯಾಸಕ್ತಿಯಿಂದ ನೋಡತೊಡಗಿದರು. ಕೆಲಹೊತ್ತಲ್ಲಿ, ಅಗೆಯುವವರ ಪಿಕ್ಕಾಸಿಗೆ ಕಲ್ಲಿನಂಥ ವಸ್ತುವೊಂದು ಟಣ್ಣೆಂದು ತಗುಲಿತು. ಅವರು ತಟ್ಟನೆ ಕೆಲಸ ನಿಲ್ಲಿಸಿ, ‘ಮುಂದೇನು…?’ ಎಂಬಂತೆ ಗುರೂಜಿಯವರನ್ನು ದಿಟ್ಟಿಸಿದರು. ಗುರೂಜಿಯವರು ಕೆಲಸ ಮುಂದುವರೆಸುವಂತೆ ಸನ್ನೆ ಮಾಡಿದರು. ಅವರು ಮರಳಿ ಅಗೆಯತೊಡಗಿದರು. ಸ್ವಲ್ಪಹೊತ್ತಿನಲ್ಲಿ ಹೊಂಡದಲ್ಲಿದ್ದ ನಾಗನಕಲ್ಲುಗಳೂ ಮತ್ತು ದೈವದ ಕುರುಹುಗಳೂ ಒಂದೊಂದಾಗಿ ಕಾಣಿಸಿಕೊಂಡವು. ಆಕೂಡಲೇ ಗುರೂಜಿಯವರು ಮುಂದೆ ಬಂದು ಅವರನ್ನು ತಡೆದು, ‘ಹ್ಞೂಂ ಹ್ಞೂಂ…! ನೀವು ಮುಟ್ಟಬೇಡಿ. ಇನ್ನು ನಿಮ್ಮ ಕೆಲಸವಾಯಿತು. ಮೇಲೆ ಬನ್ನಿ!’ ಎಂದು ಹೇಳಿ ರಾಘವನನ್ನು ಕರೆದು ಆ ಕಲ್ಲುಗಳನ್ನು ಹೊರಗೆ ತೆಗೆದಿರಿಸಿದರು. ಆಗ ಊರ ಜನರೂ ಜಾಗದ ಮಾಲಕ ತಂಡವೂ ವಿಸ್ಮಯದಿಂದ ಮೂಕರಾಗಿ ಆ ಕಲ್ಲುಗಳಿಗೂ, ಗುರೂಜಿಯವರ ಪಾದಗಳಿಗೂ ದಡಬಡನೇ ಸಾಷ್ಟಾಂಗ ಬಿದ್ದರು. ‘ಹ್ಞೂಂ! ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ದೇವರು ದೊಡ್ಡವನು. ಎಲ್ಲರಿಗೂ ಕಾರಣಿಕವನ್ನು ತೋರಿಸಿಕೊಟ್ಟ! ಇನ್ನು ಈ ಸ್ಥಳದಲ್ಲಿ ಅವನನ್ನು ಮತ್ತು ಅವನ ಪರಿವಾರವನ್ನು ನಂಬುವುದು, ಬಿಡುವುದು ನಿಮಗೆ ಸೇರಿದ್ದು!’ ಎಂದ ಗುರೂಜಿಯವರು ಹೊರಡಲನುವಾದರು. ಆಗ ಜಾಗ ವಾರಿಸುದಾರರಿಗೂ ಭಕ್ತಾದಿಗಳಿಗೂ ಆತಂಕವೆದ್ದಿತು. ಅವರೆಲ್ಲ ಕೆಲಹೊತ್ತು ತಂತಮ್ಮೊಳಗೆ ಚರ್ಚಿಸಿಕೊಂಡರು. ಕೊನೆಯಲ್ಲಿ ಗುರಿಕಾರನು ಮುಂದೆ ಬಂದು ಗುರೂಜಿಯವರನ್ನು ಕುಳಿತುಕೊಳ್ಳಲು ವಿನಂತಿಸಿ, ಜೀರ್ಣೋದ್ಧಾರದ ಮಾತುಕತೆಗೆ ಬೇಡಿಕೊಂಡ. ಅದರಿಂದ ಗುರೂಜಿಯವರು ಒಳಗೊಳಗೇ ಆನಂದಪಟ್ಟರು. ಎಲ್ಲರನ್ನೂ ಕರೆದು ತಮ್ಮೆದುರು ಕುಳ್ಳಿರಿಸಿಕೊಂಡರು. ಅವರಲ್ಲಿ ಅನೇಕರನ್ನು ಆಯ್ದು, ‘ಭಾಗಿವನ ನಾಗಬನ ಜೀರ್ಣೋದ್ಧಾರ ಸಮಿತಿ!’ ಎಂಬ ತಂಡವನ್ನು ರಚಿಸಿದರು. ಅದರಲ್ಲೂ ಮೂರು ಪಂಗಡವನ್ನು ಮಾಡಿದರು. ಒಂದನ್ನು ಹಣಕಾಸು ಹೊಂದಿಸಲು ಮತ್ತೊಂದನ್ನು ವ್ಯವಹಾರ ನಿರ್ವಹಿಸಲು ನೇಮಿಸಿದರು. ನಾಗಬನ ಜೀರ್ಣೋದ್ಧಾರದ ಉಸ್ತುವಾರಿಯನ್ನು ಉಳಿದೊಂದು ತಂಡಕ್ಕೊಪ್ಪಿಸಿದರು. ಮುಂದಿನ ಕೆಲಸಕ್ಕೆ ಸದ್ಯದಲ್ಲೇ ‘ಕೆಸರುಗಲ್ಲು ಹಾಕುವ ಭರವಸೆಕೊಟ್ಟು ಎಲ್ಲರಿಗೂ ಆಶೀರ್ವಚನ ನೀಡಿ ಹಿಂದಿರುಗಿದರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾ

Read Post »

ಅಂಕಣ ಸಂಗಾತಿ

ಅಂಕಣ ಸಂಗಾತಿ ನೆನಪಿನದೋಣಿಯಲಿ–02 ಕಾಲನ ಸುಳಿಗಾಳಿಯಲ್ಲಿ ಸಿಕ್ಕಿದ ತರಗೆಲೆಗಳು ನಾವು. ಆದರೂ ಸಿಗುವ ಒಂದಿಷ್ಟು ವಿರಾಮದಲ್ಲೇ ಸ್ಮರಣೆಗಳ ಜಾಡನ್ನು ಹಿಡಿದು  ಹೋದಾಗ………. ನೆನಪಿನ ದೋಣಿಯಲಿ ~೨ ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ ನೆರಯಿಸುತ ಪರಿಪರಿಯ ರಸಗಳಂ ಪ್ರಕೃತಿ  ಕೆರಳಿಸುತ ಹಸಿವುಗಳ ಸವಿಗಳನು ಕಲಿಸುವಳು ಗುರು ರುಚಿಗೆ ಸೃಷ್ಟಿಯಲ _  ಮಂಕುತಿಮ್ಮ   ಪ್ರಕೃತಿ ಅನೇಕ ಬಗೆಯ ರಸಗಳನ್ನು ತನ್ನ ಅಗಾಧವಾದ ಸೃಷ್ಟಿಯ ರೂಪಿನಲ್ಲಿ ಕಾಂತಿಯಲ್ಲಿ ಬಣ್ಣದಲ್ಲಿ ತುಂಬಿ ಜೀವದ ಹಸಿವುಗಳನ್ನು ಕೆರಳಿಸುತ್ತಾಳೆ.  ಅದನ್ನು ರುಚಿ ನೋಡಿದರೆ ಆನಂದ ಎಂಬುದನ್ನು ಕಲಿಸುತ್ತಾಳೆ . ಹೀಗೆ ನಮ್ಮ ಎಲ್ಲ ರುಚಿಗಳಿಗೂ ಸೃಷ್ಟಿಯೇ ಪ್ರಕೃತಿಯೇ ಗುರು .  ಹಾಗೆಯೇ ನಮ್ಮ ಆಹಾರಕ್ರಮ, ಅಭ್ಯಾಸ ,ಪಾಕವಿಧಾನಗಳು ಬಾಲ್ಯದಲ್ಲಿ ನಾವು ಏನನ್ನು ತಿಂದಿರುತ್ತೇವೆಯೋ ಅದರ ಮೇಲೆ ನಿರ್ಭರ.  ಅಮ್ಮನ ಅಡಿಗೆ, ಅಮ್ಮನ ಪಾಕ, ಅಜ್ಜಿಯ ಕೈ ತುತ್ತಿನ ರುಚಿ ಇವೆಲ್ಲಾ ನಾವಿರುವವರೆಗೂ ಮನ ಮಂಜೂಷದಲ್ಲಿ ಜತನದಲಿ ಕಾಪಿಟ್ಟ ನವಿಲುಗರಿ.  ಮುಟ್ಟಿ ತಡವಿದಾಗಲೆಲ್ಲ ಸ್ಮೃತಿಯಲೆಯ ಪುಳಕದ ನವಿರು. ಇವತ್ತು ತುಂಬಾ ನೆನಪಿಗೆ ಬರುತ್ತಿರುವುದು ಪಿಡಿಚೆಯನ್ನ.  ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ ಈಗ ನಾಲ್ಕು ಕೋರ್ಸ್, ೫ ಕೋರ್ಸ್ ಮೀಲ್ಸ್ ಅಂತಾರಲ್ಲ ಹಾಗೆ,  ಮೂವತ್ತು ನಲವತ್ತು ವರ್ಷಗಳ ಹಿಂದೆ ಸಾಮಾನ್ಯ ಮಧ್ಯಮ ವರ್ಗದ ಮನೆಗಳಲ್ಲಿ  ದಿನದ ಊಟ ಹೀಗೆ 4 ಕೋರ್ಸಿನದು.   ಹೇಗೆ ಅಂತೀರಾ? ಎಲೆಯ ತುದಿಯ ನೆಂಚಿಕೆಗಳು ಉಪ್ಪಿನಕಾಯಿ, ಚಟ್ನಿ, ತೊಕ್ಕು, ವಿವಿಧ ಪುಡಿಗಳು ಅವುಗಳೊಂದಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಕಲಿಸಿಕೊಳ್ಳುವುದು ಇದೇ ಪಿಡಚೆ ಅನ್ನ ಮೊದಲ ಸುತ್ತು.  ಹುಳಿ ಕೂಟು ಇತ್ಯಾದಿಗಳದು ಎರಡನೆಯ ಸುತ್ತು . ತಿಳಿಸಾರಿನ ಮೂರನೇ ಸುತ್ತು ಮತ್ತು ಕಡೆಯ ಮಜ್ಜಿಗೆ ಅನ್ನದ ನಾಲ್ಕನೆ ಸುತ್ತು . ಆಯ್ತಲ್ಲ ಫೋರ್ ಕೋರ್ಸ್ ಮೀಲ್ಸ್. ಆಗೆಲ್ಲಾ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಊಟದ ಅಭ್ಯಾಸವೇ ..ಹೀಗಾಗಿ ಪುಷ್ಕಳ ಭೋಜನ.  ಪಿಡಿಚೆ ಅಂದರೆ ನಿಘಂಟಿನ ಪ್ರಕಾರ ಒಂದು ಹಿಡಿಯಷ್ಟು ಪ್ರಮಾಣದ ಮುದ್ದೆ ಅಥವಾ ಉಂಡೆ . ಹುಳಿ ಸಾರುಗಳಂತೆ ದ್ರವ ರೂಪದಲ್ಲಿರದ ಕಾರಣ ಕಲಸಿದ ಮೇಲೆ ಅಂಗೈಯಲ್ಲಿ ಒತ್ತಿ ಉಂಡೆ ಮಾಡುತ್ತಿದ್ದುದರಿಂದ ಪಿಡಿಚೆ ಅನ್ನ  ಎನ್ನುವುದು ವಾಡಿಕೆ. ಮಿಡಿಕೆ ಅನ್ನ ಎಂತಲೂ ಅನ್ನುತ್ತಿದ್ದರು. ಆದರೆ ಅದು ಅಷ್ಟೊಂದು ರೂಢಿಯಲ್ಲಿರದ ಪದ.  ಇನ್ನು ಈ ಪಿಡಚೆ ಅನ್ನದ ವಿಧಗಳು ಹೇಳುತ್ತಾ ಹೋದರೆ ಹನುಮಂತನ ಬಾಲದುದ್ದದ ಪಟ್ಟಿ . ತರಹ ತರಹದ ಉಪ್ಪಿನಕಾಯಿಗಳು, ಹುಣಸೆ ಮಾವು ಅಮಟೆ ನೆಲ್ಲಿ ಕಾಯಿ ಮೊದಲಾದ ತೊಕ್ಕುಗಳು,  ಪುಡಿಗಳ ವಿಷಯಕ್ಕೆ ಬಂದರೆ ವಿಧವಿಧದ ಚಟ್ನಿಪುಡಿಗಳು, ಅನ್ನದಪುಡಿ, ಮೆಂತೆ ಹಿಟ್ಟಿನ ಪುಡಿಗಳು, ತರಕಾರಿಯ ಸಿಹಿ ಪಲ್ಯಗಳು, ಪುಡಿ ಕುಟ್ಟಿಹಾಕಿದ ಖಾರದ ಪಲ್ಯಗಳು, ಗೊಜ್ಜುಗಳು, ತಂಬುಳಿ, ಹಸಿಮಜ್ಜಿಗೆ ಒಂದೇ ಎರಡೇ ? ವಿಶಿಷ್ಟವಾದದ್ದು ಇನ್ನೊಂದೆಂದರೆ ತಿಳಿಸಾರಿನ (ರಸಂ) ಪುಡಿ ಮಾಡಿದ ಹೊಸದರಲ್ಲಿ ತಾಜಾ ಇರುವಾಗ ಬಿಸಿ ಅನ್ನಕ್ಕೆ ಉಪ್ಪು ಎಣ್ಣೆ ಹಾಕಿ ಇದನ್ನು ಕಲಿಸಿ ತಿಂದರೆ…..!  ಆಹಾ ವರ್ಣಿಸಲು ಪದಗಳಿಲ್ಲ ಬಿಡಿ.ಇವುಗಳೊಂದಿಗೆ ಬೇಳೆ ಮತ್ತುಮೆಂತೆಸೊಪ್ಪು/ಗೋರಿಕಾಯಿ ಹಾಕಿದ ಮಾಟೋಡಿ ಪಲ್ಯ ಪಿಡಿಚೆಯನ್ನಗಳ ರಾಜ . ನುಚ್ಚಿನುಂಡೆಯನ್ನು ಪುಡಿಮಾಡಿ ಚೂರು ಉಪ್ಪು ಜಾಸ್ತಿ ಎಣ್ಣೆ ಹಾಕಿ ಅನ್ನದೊಂದಿಗೆ ಕಲಸಿ ತಿಂದರೆ ತುಂಬಾ ಸ್ವಾದ . ಮೆಂತ್ಯ ಹಿಟ್ಟನ್ನು ಹುಣಸೆ ರಸದಲ್ಲಿ ಕಲಸಿ ಮೆಣಸಿನಕಾಯಿ ಒಗ್ಗರಿಸಿ ಮಾಡುತ್ತಿದ್ದ ಮೆಂತೆ ಹಿಟ್ಟಿನ ಗೊಜ್ಜು, ತೊಗರಿಬೇಳೆಯ ಅನ್ನದ ಪುಡಿ …..ಪಟ್ಟಿ ಅನಂತ _ಪ್ರಕಾರ ಅಪರಿಮಿತ .   ಆರೋಗ್ಯದ ದೃಷ್ಟಿಯಿಂದಲೂ ಕೆಲವು ಈ ರೀತಿಯ ಪಿಡಚೆ ಮೊದಲ ಮಗಳು ತುಂಬಾ ಉತ್ತಮ ಎಂದು ಪರಿಗಣಿಸಲ್ಪಟ್ಟಿವೆ ಮೊದಲ ಅನ್ನಕ್ಕೆ ತುಪ್ಪ ಹಾಕಿ ಕಲಿಸುವ ದೊಡ್ಡಿ ಪತ್ರೆ ತಂಬುಳಿ , ಹೇರಳೆಕಾಯಿ ಉಪ್ಪಿನಕಾಯಿ ರಸದ ಅನ್ನ  ಇವು ಪಿತ್ತಹಾರಿಗಳು. ಇನ್ನು ಬಾಣಂತಿಯರಿಗೆ ಕೊಡುವ ಬೆಳ್ಳುಳ್ಳಿ ಹಾಗೂ ಮೆಣಸು ಸೇರಿಸಿದ ಪುಡಿಯ ಅನ್ನ ಹೇರಳೆಕಾಯಿ ಹೋಳಿನ ಮೇಲೆ ಉಪ್ಪು ಮೆಣಸು ಪುಡಿ ಉದುರಿಸಿ ಸ್ಟವ್ ಮೇಲೆ ಸ್ವಲ್ಪ ಕಂದಿಸಿ ಹಿಂಡುವ ರಸ ಇವುಗಳನ್ನು ಮರೆಯಲಾದೀತೆ ? ಈ ಪಿಡಿಚೆ ಅನ್ನಗಳನ್ನು ನಂಚಿಕೆ ಮಾತ್ರ ಹಾಕಿ ಕಲೆಸಿದರೆ ಹೊಂದುವುದಿಲ್ಲ . ಎಣ್ಣೆಯೋ ತುಪ್ಪವೋ ಅಂತೂ ಜಿಡ್ಡಿನ ಮಾಧ್ಯಮ ಬೇಕು .ರುಚಿಗೆ ಅನುಸಾರ ಒಂಚೂರು ಲವಣ ಸೇರಿಸಿದರೆ ಸ್ವರ್ಗಸಮಾನಂ. ಎಣ್ಣೆಗಳಲ್ಲೂ ಹಸಿ ಕಡಲೆಕಾಯಿ ಎಣ್ಣೆ 1 ಭಾಗದವರಿಗೆ ಇಷ್ಟವಾದರೆ ಕರಾವಳಿ ಕಡೆಯವರಿಗೆ ಕೊಬರಿಎಣ್ಣೆ ಪ್ರಿಯ.ಆದರೆ ಉತ್ಕೃಷ್ಟ ರುಚಿಯ ಇರುತ್ತಿದ್ದುದು ಖಾದ್ಯಗಳನ್ನು ಕರಿದು ಉಳಿದ ಕರಿದ ಎಣ್ಣೆಯಲ್ಲಿ. ಕರಿದ ಪದಾರ್ಥಗಳ ರುಚಿ ವಾಸನೆಯನ್ನು ಇಲ್ಲಿಗೆ ವರ್ಗಾಯಿಸಿ ಬೇರೆಯದೇ ವಿಶಿಷ್ಟವಾದ ಸ್ವಾದ.  ಚಕ್ಕುಲಿ ಕರೆದೆಣ್ಣೆಯದು ಒಂದು ಘಮ ಕೋಡುಬಳೆ ಕರೆದೆಣ್ನಮೆ ಕೆಂಪಗೆ ಖಾರ, ಸಿಹಿ ಕರಿದ ಎಣ್ಣೆ ಸೂಸುತ್ತಿದ್ದ ಬೆಲ್ಲದ ಘಮಲು ನಾಲಿಗೆಯಂಚಿನ ಸಿಹಿ. ಆಗೆಲ್ಲಾ ಕರೆದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ನಮಗೆಲ್ಲ ತಿಳಿದೇ ಇರಲಿಲ್ಲ . ರುಚಿಗೆ ಪರ್ಯಾಯ  ಅಷ್ಟೇ ಅಲ್ಲ ಗೃಹಿಣಿಯರ ಆಪತ್ಕಾಲಕ್ಕೆ ಒದಗಿ ಬರುತ್ತಿದ್ದ ಮಿತ್ರನೂ ಹೌದು. ಹುಳಿ/ಸಾರು ಮಾಡಿಯಾದ ಮೇಲೆ ಅತಿಥಿಗಳು ಬಂದರೆ ಈಗಿನ ಹಾಗೆ ಕ್ಷಣಾರ್ಧದಲ್ಲಿ ಕೆಲಸ ಮುಗಿಸುವ ಗ್ಯಾಸ್ ಕುಕ್ಕರ್ ಮಿಕ್ಸಿ ಇರದಿದ್ದಾಗ  ಇರುವುದರಲ್ಲಿಯೇ ಸವರಿಸಬೇಕಾದ ಅನಿವಾರ್ಯ ಸಮಯದಲ್ಲಿ ಈ ಎಲ್ಲಾ ಪಿಡಿಚೆ ಯನ್ನದ ಪರಿಕರಗಳು ಸಾರು/ಹುಳಿ ಯ ಕೊರತೆ ಸರಿದೂಗಿಸುತ್ತಿದ್ದವು.  ರಾತ್ರಿ ಊಟದಲ್ಲೂ ಅಷ್ಟೇ ಬೆಳಗಿನ ವ್ಯಂಜನಗಳಲ್ಲೇ ಅಡ್ಜಸ್ಟ್ ಮಾಡಲು ಇದೇ ಸಹಾಯಕ್ಕೆ ಬರುತ್ತಿದ್ದುದು . ಮನೆಯಲ್ಲಿ ತುಂಬಾ ಜನರಿದ್ದು ಲೋಕೋ ಭಿನ್ನರುಚಿಃ ಅಂದಾಗ ಮಾಡಿದ ತರಕಾರಿಯನ್ನು ಇಷ್ಟಪಡದವರು ಇನ್ನೊಂದು ಸುತ್ತು ಇವುಗಳಲ್ಲೇ ಊಟ ಮುಗಿಸಿ ಬಿಡಬಹುದಿತ್ತು . ಈಗಿನಂತೆ ಒಬ್ಬೊಬ್ಬರಿಗೆ ಒಂದೊಂದು ತರಹ ಮಾಡುವ ಅಭ್ಯಾಸ, ವ್ಯವಧಾನ, ಮುಚ್ಚಟೆ ಆಗಿನ ಕಾಲದಲ್ಲಿರಲಿಲ್ಲ . ಇನ್ನು ಬ್ರಹ್ಮಚಾರಿಗಳು, ಹೆಂಡತಿ ಮನೆಯಲ್ಲಿರದ ಟೆಂಪರರಿ ಬ್ರಹ್ಮಚಾರಿಗಳು ಬಿಸಿಯನ್ನ ಒಂದು ಮಾಡಿಕೊಂಡು ಇವು ಮತ್ತು ಮೊಸರಿನಲ್ಲಿ ಊಟ ಮುಗಿಸಿ ಬಿಡುತ್ತಿದ್ದರು .ಆಗಲೂ ಈಗಲೂ ಯಾವಾಗಲೂ “ಅವರಿಲ್ಲದ ಊಟ”ದ ಮುಖ್ಯ ಭಾಗ ಪಿಡಚೆ ಅನ್ನ ಅಂದರೆ ನೀವೆಲ್ಲಾ ಒಪ್ಪೇ ಒಪ್ತೀರಿ ಅಲ್ವಾ?  ಹಾಗೆ ಮಕ್ಕಳ ಅಕಾಲದ ಹಸಿವಿಗೆ ಆ ಕಾಲದಲ್ಲಿ ಅಮ್ಮಂದಿರು ಉತ್ತರ ಕಂಡುಕೊಳ್ಳುತ್ತಿದ್ದುದು ಇದರಲ್ಲೇ. ಪಿಡಚೆ ಅನ್ನಗಳ ಒಂದು ಕೈತುತ್ತು ಆ ಸಣ್ಣ ಹಸಿವನ್ನು ನೀಗಿಸಿ ಬಿಡುತ್ತಿತ್ತು. ದೂರದೂರಿನ ಪ್ರವಾಸಗಳು ಕೈಗೊಂಡ ಸಮಯದಲ್ಲೂ ಇವು ಆ ಹೊತ್ತಿನ ಊಟಕ್ಕೆ ಒದಗಿಬರುತ್ತಿದ್ದವು .ಗೃಹಿಣಿಯ ನಾಜೂಕುತನ, ಸಮಯಸ್ಫೂರ್ತಿ, ವಿಶಿಷ್ಟ ಕೈರುಚಿಗೆ ಒಳ್ಳೆಯ ಸಾಕ್ಷ್ಯ ಬರೆಯುತ್ತಿದ್ದವು ಇವುಗಳು. ಇನ್ನು ನಮ್ಮ ಮನೆಯಲ್ಲಿ ಚಿಕ್ಕವರಿದ್ದಾಗ ನಮಗೆಲ್ಲ ಈ ಪಿಡಚೆ ಅನ್ನ ಕಲಿಸಿಕೊಡುತ್ತಿದ್ದದು ಅಣ್ಣನೇ (ನಮ್ಮ ತಂದೆ) ಅವರು ತಿನ್ನಲು ಶುರುಮಾಡುವ ಮೊದಲು ಯಾವುದನ್ನು ಎಲೆಯ ತುದಿಗೆ ಬಡಿಸಿರುತ್ತಾರೋ ಅದರಲ್ಲಿ ಜಾಸ್ತಿ ಅನ್ನ ಕಲೆಸಿ 3 ಜನಕ್ಕೂ ಕೈ ತುತ್ತು ಮಾಡಿ ನಮ್ಮ ತಟ್ಟೆಗಳಿಗೆ ಹಾಕಿದ ನಂತರವೇ ಅವರು ಊಟ ಆರಂಭಿಸುತ್ತಿದ್ದದ್ದು.  ಹದವಾಗಿ ಮೇಲುಪ್ಪು ಸೇರಿಸಿ ಚಟ್ನಿಪುಡಿ, ಮೆಂತೆ ಹಿಟ್ಟು, ಸಿಹಿ ಪಲ್ಯ, ಉಪ್ಪಿನಕಾಯಿ ರಸಗಳಿಗಾದರೆ ಕರಗಿಸಿದ ತುಪ್ಪ, ಅನ್ನದ ಪುಡಿ ತೊಕ್ಕು ಬೇರೆ ಪಲ್ಯ ಗೊಜ್ಜುಗಳಿಗಾದರೆ ಕರಿದ ಎಣ್ಣೆಯೋ ಹಸಿ ಕಡಲೆಕಾಯಿ ಎಣ್ಣೆಯೋ ಹಾಕಿ ಕಲಸಿ ಕೊಡುತ್ತಿದ್ದ ಆ ಘಳಿಗೆಗಳು ಬಾಲ್ಯದ ನೆನಪಿನ ಅನರ್ಘ್ಯ ರತ್ನಗಳು. ನಾವು ಎಷ್ಟೇ ಕಲಸಿ ತಿಂದರೂ ಅಣ್ಣ ಕೊಡುತ್ತಿದ್ದ ಆ ರುಚಿ ಬರುವುದೇ ಇಲ್ಲ.  ಒಟ್ಟಿಗೆ ಊಟಕ್ಕೆ ಕುಳಿತಾಗಲೆಲ್ಲಾ ಎಷ್ಟೇ ದೊಡ್ಡವರಾದ ಮೇಲೂ “ಅಣ್ಣಾ” ಅಂದರೆ ಸಾಕು 3 ಜನಕ್ಕೂ ಆಮೇಲೆ ಅಳಿಯಂದಿರಿಗೂ ಅವರೇ ಕಲಿಸಿಕೊಡುತ್ತಿದ್ದುದು. ತಟ್ಟೆಯ ಬದಲು ದೊಡ್ಡ ಪಾತ್ರೆ ಇರುತ್ತಿತ್ತು ಅಷ್ಟೇ ವ್ಯತ್ಯಾಸ . ನಮ್ಮ ತಂದೆಯ ಚಿಕ್ಕಪ್ಪ ಅಂದರೆ ನಮ್ಮ ಚಿಕ್ಕ ತಾತನವರು ಅನ್ನ ಕಲಿಸಲು ಎಣ್ಣೆ ಅಥವಾ ತುಪ್ಪ ಹಾಕಿ ಅನ್ನುವ ಬದಲು “ಜಿಡ್ಡು ಬಿಡಿ” ಅಂತಿದ್ರು .  ಅದನ್ನು ನೆನೆಸಿಕೊಂಡು ನಗುತ್ತಿದ್ದೆವು. ಈರುಳ್ಳಿ ಬಜ್ಜಿ ಅಥವಾ ಪಕೋಡಾ ಈರುಳ್ಳಿ ಸಂಡಿಗೆ ಅಂತಹವುಗಳನ್ನು ಕರೆದು ಮಿಕ್ಕಿದ ಎಣ್ಣೆ ಎಂದರೆ ಮೇಲೆ ಕಲಿಸಲು ತುಂಬಾ ರುಚಿ ಅಂತಿದ್ರು ನಮ್ಮಣ್ಣ .  ಭೌತಿಕವಾಗಿ ಅಣ್ಣಾ ದೂರವಾಗುವ ಸ್ವಲ್ಪ ದಿನಕ್ಕೆ ಮೊದಲು ಅಂದೇ ಮಾಡಿದ ಹುಣಸೆ ತೊಕ್ಕಿನ ಅನ್ನ ಕಲಿಸುತ್ತಿದ್ದರು . ಒಬ್ಬಳೇ ಇದ್ದದ್ದು ಆವತ್ತು.  ಅಣ್ಣನ ಕೈ ತುತ್ತು ತಿನ್ನಬೇಕೆನಿಸಿತ್ತು. ಎಣ್ಣೆ ಒಳಗಿಟ್ಟು ಬರುವುದರಲ್ಲಿ ಅಣ್ಣ ನನಗಾಗಿ ಒಂದು ದೊಡ್ಡ ತುತ್ತು ಮಾಡಿದ್ದರು “ಆಮೇಲೆ ಊಟ ಮಾಡುವೆಯಂತೆ . ಇದೊಂದು ತುತ್ತು ತಿನ್ನು ಎಷ್ಟು ದಿನ ಆಗಿತ್ತು ಹೀಗೆ ತುತ್ತು ಕೊಟ್ಟು” ಎಂದರು. ಅಂದಿನ ಆ ತುತ್ತೇ ಅವರ ಕಡೆಯ ಕೈತುತ್ತಾಗಿ ಬಿಟ್ಟಿತು.  ಈಗಲೂ ಪಿಡಿಚೆ ಅನ್ನ ತಿನ್ನುವಾಗಲೆಲ್ಲಾ ಅಣ್ಣನ ನೆನಪು . ಅಮ್ಮ ಇಲ್ಲವಾದಾಗ ಅಣ್ಣ ಹೇಳ್ತಿದ್ರು ಅಮ್ಮನಿಗೆ ಇಷ್ಟವಾದದ್ದು ಮಾಡಿ ನಾವು ತಿಂದರೆ ಅವರ ಆತ್ಮಕ್ಕೆ ಶಾಂತಿ ಅಂತ. ಹಾಗಾಗಿ ಅಣ್ಣನಿಗೆ ಇಷ್ಟವಾದದ್ದನ್ನೆಲ್ಲಾ ನಾನು ಬಿಟ್ಟಿಲ್ಲ . ಬಾಳ ಪುಸ್ತಕದ ಪುಟ ಪುಟಗಳಲ್ಲಿ ನೆನಪುಗಳ ಬುತ್ತಿ ಆಗಾಗ ತೆಗೆದು ಮೆಲುಕು ಹಾಕುವ ಭಾಗ್ಯವಷ್ಟೇ ಈಗ ಉಳಿದಿರುವುದು.  ಪ್ರತಿಯೊಂದು ಮನೆಯಲ್ಲೂ ಹೀಗೆ ಏನಾದರೂ 1 ವಿಶಿಷ್ಟ ವಿಶೇಷ ಅಭ್ಯಾಸ ಸಂಪ್ರದಾಯ ರೂಢಿಯಾಗಿರುತ್ತದೆ . ಒಟ್ಟಿಗಿನ ಒಡನಾಟದಲ್ಲಿ, ಸಂಸರ್ಗದಲ್ಲಿ ಅಚ್ಚಳಿಯದ ನೆನಪುಗಳು ಸರಪಳಿಯಾಗಿ ಬೆಸೆದುಕೊಂಡಿರುತ್ತದೆ . ಪರಸ್ಪರರ ಬಗೆಗಿನ ಮಮತೆ ವಾತ್ಸಲ್ಯಗಳು ಅಲ್ಲಿ ಪ್ರತಿಬಿಂಬಿತ.  ಅಪ್ಪ ಅಣ್ಣ ಅಜ್ಜ ಅಜ್ಜಿ ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ ಸೋದರ ಸೋದರಿಯರು ಕೆಲವೊಮ್ಮೆ ಕಸಿನ್ ಗಳು ಎಲ್ಲಾ ಸೇರಿ ಒಟ್ಟಿಗಿನ ಸಹಭೋಜನಗಳು ಒಂದಾಗಿ ಕಳೆದ ಘಟನೆಗಳು ಎಲ್ಲವೂ ಸ್ಮೃತಿಪಟಲದ ಹಸಿಗೋಡೆಯ ಮೇಲೆ ಅಂಟಿ ನಿಂತ ಹರಳುಗಳು . ಅವರಿಗೆ ಅದು ಇಷ್ಟ ಇವರಿಗೆ ಇದು ಇಷ್ಟ ಎಂದೆಲ್ಲಾ ಎಷ್ಟು ಚೆನ್ನಾಗಿ ಅರಿತಿದ್ದೆವಲ್ಲ.  ಸಹವಾಸ ಸಹಭೋಜನ ಸಹಅನುಭೂತಿ ಗಳಿಂದಲೇ ನಿಜವಾದ ಸಾಹಚರ್ಯ.  ಈಗ ಸಹಭೋಜನದ ಪರಿಕಲ್ಪನೆಯೇ ಮಾಸಿಹೋಗಿದೆ. ಬೆಳಗಿನ ಅವಸರದ ತಿಂಡಿ, ಮಧ್ಯಾಹ್ನದ ಡಬ್ಬಿಯೂಟ .ರಾತ್ರಿಯಾದರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸ ಕಾಲನ ಮಯಕದ ಮಬ್ಬಿನಲ್ಲಿ ಮಾಯವಾಗುತ್ತಿದೆ.  ಒಂದಿಷ್ಟು ತಟ್ಟೆಯಲ್ಲಿ ಕಲಸಿ ತಂದು ದೂರದರ್ಶನದ ಮುಂದೆಯೋ ಲ್ಯಾಪ್ ಟಾಪ್, ಮೊಬೈಲ್ ಮೇಲೆ ಕೈಯಾಡಿಸುತ್ತಲೋ ಊಟದ ಶಾಸ್ತ್ರ ಮುಗಿಸುವುದೇ ಹೆಚ್ಚು.  ಪಿಜ್ಜಾ ಬರ್ಗರ್ ನೂಡಲ್ಸ್ ಗಳ ಮುಂದೆ ಪಿಡಚೆಯನ್ನ ಬಿಡಿ, ಮಾಮೂಲಿನ ಹುಳಿ/ಸಾರಿನ ಊಟಗಳೇ ಇಂದಿನ ತಲೆಮಾರಿನವರಿಗೆ ರುಚಿಸುವುದಿಲ್ಲ .  ಪುಟ್ಟ ಕುಟುಂಬದ ಮುಷ್ಟಿಯಿಂದ ವಸುದೈವ ಕುಟುಂಬಕಂ ಎಂಬ ಸಮಷ್ಟಿಯವರೆಗಿನ ಪಯಣಕ್ಕೆ  ಸಂಸಾರದ ಮಮತೆ ಪ್ರೀತಿಗಳೆಂಬ ಪ್ರಥಮ ಹೆಜ್ಜೆಗಳಿಂದ ಶ್ರೀಕಾರ . ಇಂದಿನ ದಿನಗಳಲ್ಲಿ ಅಪರೂಪವಾಗಿರುವ ಭಾವನೆಗಳು, ಮಾರ್ದವತೆಯ ಬರಗಾಲದಲ್ಲಿ ಮಮತೆಯ ಸಿಂಚನಗಳು ಇಂತಹ ಚಿಕ್ಕ ವಿಷಯಗಳಿಂದಲೇ ಆರಂಭವಾದರೆ ಒಳಿತು . ಈಗಲಾದರೂ ಎಚ್ಚೆತ್ತುಕೊಳ್ಳೋಣ, ಹಳೆಯ ಸಾಂಪ್ರದಾಯಿಕ ಅಡುಗೆ ಊಟದ ವಿಧಾನಗಳನ್ನು ಅನುಕರಿಸೋಣ, ಅನುಸರಿಸೋಣ . ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗೋಣ.  ಏನಂತೀರಿ ? ಸುಜಾತಾ ರವೀಶ್     ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು”

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

You cannot copy content of this page

Scroll to Top