ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಎ. ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ?ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ?ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದುಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? *****************

ಗಜ಼ಲ್ Read Post »

ಪುಸ್ತಕ ಸಂಗಾತಿ

ರಾಗವಿಲ್ಲದಿದ್ದರೂ ಸರಿ

ಪುಸ್ತಕ ಸಂಗಾತಿ ರಾಗವಿಲ್ಲದಿದ್ದರೂ ಸರಿ ಕೃತಿ…..ರಾಗವಿಲ್ಲದಿದ್ದರೂ ಸರಿ   ಗಜಲ್ ಸಂಕಲನ ಲೇಖಕರು.‌.‌‌‌‌ಉಮರ್ ದೇವರಮನಿ ಪ್ರಕಾಶಕರು…….ಸಮದ್ ಪ್ರಕಾಶನ  ಮಾನವಿ ಜಿ.ರಾಯಚೂರು * ಉಮರ್ ದೇವರಮನಿ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಾನವಿ ನಗರದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಭಾಷಾ  ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸ ಕರಾಗಿದ್ದರೂ ಪ್ರವೃತ್ತಿಯಲ್ಲಿಸಾಹಿತಿಗಳಾಗಿದ್ದಾರೆ.ಮೂರು ವರ್ಷಗಳ ಹಿಂದೆ ಕಾವ್ಯ ಕಡಲು ವಾಟ್ಸಪ್ ಗುಂಪಿನಲ್ಲಿ ಪರಿಚಯ ವಾದವರು ,ಆಗಾಗ ಗುಂಪಿನಲ್ಲಿ ಉತ್ತಮವಾದ ಗಜಲ್ಗಳನ್ನು  ಓದಲು ಹಾಕುತ್ತಿದ್ದರು.ಈಗ ಅವರು ತಮ್ಮ ಪ್ರಕಟಿತ ಮೊದಲ ಗಜಲ್ ಸಂಕಲನ *ರಾಗವಿಲ್ಲದಿದ್ದರೂ ಸರಿ * ಎಂಬ ಕೃತಿಯನ್ನು  ಓದಲು ಕಳಿಸಿಕೊಟ್ಟಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರ, ಕನಾ೯ಟಕ ಸರಕಾರ ಯುವ ಬರಹಗಾರರ ಚೊಚ್ಚಲು ಕೃತಿ ಪ್ರಕಟಿಸಲು ಕೊಡುವ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಉಮರ್ ದೇವರಮನಿ ಯವರು ಮಿತ ಭಾಷಿ,ಸಂವೇದನಾಶೀಲ ಕವಿಯಾಗಿದ್ದಾರೆ. ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಅನೇಕ ಉದು೯ ಕವಿಗಳ ಉದು೯ ಗಜಲ್ ಗಳನ್ನು ಓದಿ  ಆಳವಾಗಿ ಅದರ ಛಂದೋಬದ್ಧತೆ ಯನ್ನು ಗೇಯತೆ ಲಾಲಿತ್ಯ ತಿಳಿದುಕೊಂಡು ಕನ್ನಡ ಗಜಲ್ ಗಳ ಛಂದೋಬದ್ಧತೆ ಯನ್ನು ಅರಿತುಕೊಂಡು ಕನ್ನಡ ಗಜಲ್ಗಳನ್ನು ರಚಿಸಿ ಓದುಗರಿಗೆ ಉತ್ತಮವಾದ  ಕನ್ನಡ ಗಜಲ್ ಗಳ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಕನ್ನಡ ಗಜಲ್ ಸಂಕಲನಕ್ಕೆ ಖ್ಯಾತ ಹಿರಿಯ ಕವಿಯತ್ರಿ,ಗಜಲ್ ಕಾತಿ೯,ವಿಮರ್ಶಕಿ ಚಿಂತಕಿ ಹಾಗೂ ಸಹೃದಯಿ ಗಳಾದ ಮೆಹಬೂಬ್ ಬೀ ಶೇಖ ಅವರು ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದಿದ್ದಾರೆ. ಮತ್ತು ಗಜಲ್ ಪರಂಪರೆ ಬಗ್ಗೆ ,ಗಜಲ್ಗಳಿಗೆ ಬಳಿಸುವ ಸಾಂಕೇತಿಕ  ಭಾಷೆಯ ಬಗ್ಗೆ ,ರೂಪಕಗಳ ಬಗ್ಗೆ, ಹಾಗೂ ಉಮರ್ ದೇವರಮನಿಯವರ “ರಾಗವಿಲ್ಲದಿದ್ದರೂ ಸರಿ” ಸಂಕಲನದ ಬಗ್ಗೆ ವಿಮಶಾ೯ತ್ಮಕವಾಗಿ ವಿವರವಾಗಿ ಬರೆದಿದ್ದಾರೆ, ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆ.           ಸಂಕಲನಕ್ಕೆ ಬೆನ್ನುಡಿಯನ್ನು ಹಿರಿಯ ಸಾಹಿತಿಗಳಾದ ಕೇಶವ ಮಳಗಿ ಯವರು ವಿಮಶಾ೯ತ್ಮಕ ವಾದ ಬೆನ್ನುಡಿಯನ್ನು ಬರೆದು ದೇರವಮನಿ ಯವರ ಬೆನ್ನುತಟ್ಟಿದ್ದಾರೆ.     ಶ್ರೇಷ್ಠ ಗಜಲ್ ಕಾರರಾದ”ಅಲ್ಲಮ” ಗಿರೀಶ ಜಕಾಪುರೆ ಯವರು ದೇವರಮನಿಯವರು ತಮ್ಮ ಇಷ್ಟವಾದ ಗಜಲ್ ಕಾರರೆಂದು ಸಂವೇದನಾಶೀಲ ಕವಿ ಎಂದು ಉತ್ತಮ ಗಜಲ್ ಸಾಹಿತ್ಯದ ಗಂಭೀರ ಗಜಲ್ ಕೃಷಿಕರೆಂದು ಹೇಳಿದ್ದಾರೆ.             ಹಿರಿಯ ಗಜಲ್ ಕಾರರಾದ ಡಾ.ಗೋವಿಂದ ಹೆಗಡೆ ಯವರು ಉಮರ್ ದೇವರಮನಿ ಯವರು ಗಜಲ್ನ ನಾಡಿ ಮಿಡಿತವನ್ನು ಬಲ್ಲವರಾಗಿದ್ದಾರೆಂದು,ಇದು ಇವರ ಮೊದಲ ಸಂಕಲನವಾಗಿದ್ದರೂ ಗಜಲ್ ಲೋಕದ ಹೊಸ ವಿಸ್ತಾರಗಳನ್ನು ನಮಗೆ ಕಾಣುವಂತೆ ಗಜಲ್ ಗಳನ್ನು ರಚಿಸಿದ್ದಾರೆಂದು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ                       ಜಬೀವುಲ್ಲಾ ಎಂ ಅಸದ್ ಅವರು ಗಜಲ್ ಕಾರರು ಹಾಗೂ ಚಿತ್ರಕಲಾವಿದರೂ ಆಗಿದ್ದು ಈ ಸಂಕಲನದ ಎಲ್ಲಾ ಗಜಲ್ ಗಳಿಗೆ ಅರ್ಥ ಪೂರ್ಣವಾದ ಸುಂದರ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆ, ಹಾಗೂ ಕೃತಿಯಲ್ಲಿ ಬೆರಗು ಹುಟ್ಟಿಸುವ ರೂಪಕಗಳು ,ಪರವಶಗೊಳಿಸುವ ಪ್ರತಿಮೆಗಳು ದಿವ್ಯ ಪ್ರಭೆಯ ಮೂಲಕ ಓದುಗನ ಮೈ ಮನಸ್ಸು ಗಳನ್ನು ಆವರಿಸಿ ದೈವಿಕ ಸಾಕ್ಷಾತ್ಕರವನ್ನು ಈ ಗಜಲ್ ಗಳು ಪ್ರಸಾದಿಸುತ್ತವೆಂದು,ತಮ್ಮ ಅನಿಸಿಕೆಯಲ್ಲಿ ಬರೆದಿದ್ದಾರೆ.    ಸಂಕಲನದ ಮುಖ ಪುಟವನ್ನು ರಟ್ಟಿಹಳ್ಳಿ ರಾಘವಾಂಕುರ  ಅವರು ಸೊಗಸಾಗಿ ಸಿದ್ದ ಪಡಿಸಿದ್ದಾರೆ.               ಉಮರ್ ದೇವರಮನಿ ಯವರ ವ್ಯಾಖ್ಯಾನ ದಲ್ಲಿ ಗಜಲ್ ಎಂದರೆ “ಆತ್ಮದೊಂದಗಿನ ಸಂವಾದ ,ಅದು ನನಗೆ ದಕ್ಕಿದ್ದಲ್ಲ ನನ್ನಾತ್ಮಕ್ಕೆ ದಕ್ಕಿದ್ದು,ಏಕಾಂತದಲ್ಲಿ ಪ್ರಾಥಿ೯ಸಿದ್ದು,ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳೊಂದಿಗಿನ  ನನ್ನ ಅಂತರಂಗದ ಮನುಷ್ಯತ್ವದ ನೋವಿನ ಪಿಸುನುಡಿಯ ರಾಗ” ಎಂದು ಹೇಳಿದ್ದಾರೆ. ಉಮರ್ ದೇವರಮನಿ ಯವರು ಕೇವಲ ಪ್ರೀತಿ ,ಪ್ರೇಮ,ವಿರಹ,ಗಳಿಗೆ ಮಾತ್ರ ಗಜಲ್ ಗಳನ್ನು ರಚಿಸದೆ ಸಮುದಾಯ ಎದುರಿಸುತ್ತಿರುವ ತಲ್ಲಣಗಳು   ಹಾಗೂ ಅವಮಾನಗಳನ್ನು ಮೂಕನಾಗಿ ನೋಡೂತ್ತಾ ಧಿಗ್ಬ್ರಾಂತಿ ಗೊಳಗಾಗಿ ಅವುಗಳಿಗೆ ಸ್ವಂದಿಸಿ ಗಜಲ್ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಎಂಬ ಕನ್ನಡ ಗಜಲ್ ಸಂಕಲನದಲ್ಲಿ ಒಟ್ಟು ೫೩ ಗಜಲ್ಗಳಿದ್ದು ಪ್ರತಿಗಜಲ್ ಗಳಿಗೆ  ಶೀರ್ಷಿಕೆ ಯನ್ನು ಕೊಟ್ಟಿದ್ದಾರೆ ಮತ್ತು ಭಾವಕ್ಕೆ ತಕ್ಕಂತೆ ಕಲಾಕಾರರಿಂದ ಚಿತ್ರಗಳನ್ನು  ತೆಗೆದಸಿದ್ದಾರೆ.ಸಂಕಲನದ ಗಜಲ್ಗಳನ್ನು ಓದುತ್ತಾ ಹೋದಂತೆ ಗಜಲ್ ಗಳಿಗೆ ಬೇಕಾಗುವ ಭಾವತೀವ್ರತೆ,ರೂಪಕಗಳು,ಪ್ರತೀಕಗಳನ್ನು ಬಳಿಸಿ ಗಜಲ್ ರಚಿಸಿದ್ದಾರೆ.ಗಜಲ್ದ ಮಿಸ್ರಾ ಗಳು ಉದ್ದವಿರದೆ(ಚೋಟಿ ಬೆಹರ್)ಕಡಿಮೆ ಶಬ್ದ ಗಳಲ್ಲಿ ಹೆಚ್ಚಿನ ಭಾವತುಂಬಿದ್ದಾರೆ.ಈ ಸಂಕಲನದಲ್ಲಿ ಹೆಚ್ಚಿಗೆ ಗಮನಕ್ಕೆ ಬರುವ ಅಂಶವೆಂದರೆ ಬಹುತೇಕ ಗಜಲ್ ಗಳು ಸಮಾಜಮುಖಿಯಾಗಿವೆ.ಕವಿಯು ಸಮಾಜದ ದುಃಖವನ್ನು ತನ್ನದಾಗಿಸಿಕೊಂಡು ನೊಂದು ಗಜಲ್ ಮೂಲಕ ಸಾಂತ್ವನ ಹೇಳುತ್ತಾ ಮುಲಾಮ ಹಚ್ಚ ಬಯಸಿದ್ದಾರೆ.ವಿಶ್ವವೇ ಕುಟುಂಬ ಎಂಬಂತೆ ಕವಿಯು ವಿಶ್ವದ ನೋವಿಗೆ ನೊಂದು ಮನುಕುಲ ಉಧ್ಧಾರದ ಆಶಯವನ್ನು ಎತ್ತಿ ಹಿಡಿದಿದ್ದಾರೆ.ಗಜಲ್ ಕಾರರಿಗೆ ಇರಬೇಕಾದ ಧ್ಯಾನಸ್ಥ ಮನದಿಂದ ತನ್ನಾತ್ಮದೊಂದಿಗೆ ಸಂವಾದಿಸಿ ಗಜಲ್ ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ ” ಎಂಬ ಗಜಲ್ ಸಂಕಲನದಲ್ಲಿ ಮುರದ್ದಫ್,ಗೈರಮುರದ್ದಫ್, ಮುಸಲ್ ಸಲ್, ಗೈರ್ ಮುಸಲ್ ಸಲ್ ,ಆಜಾದ್ ಗಜಲ್ ,ಮತ್ತು ರಾಜಕೀಯ ಗಜಲ್ ಗಳನ್ನು ಓದಬಹುದು.ಕೆಲವು ಗಜಲ್ಗಳು ಛಂದೋಬದ್ಧ ವಾಗಿದ್ದರೆ ಇನ್ನೂ ಕೆಲವು ಮುಕ್ತ ಛಂದಸ್ಸು ಗಳಾಗಿರುವುದರಿಂದ ದೇವರಮನಿ ಯವರು ತಮ್ಮ ಸಂಕಲನಕ್ಕೆ “ರಾಗವಿಲ್ಲದಿದ್ದರೂ ಸರಿ” ಎಂಬ ಶೀರ್ಷಿಕೆಯನ್ನು ಸಂಕಲನಕ್ಕೆ ಇಟ್ಟಂತೆ ಅನಿಸುತ್ತದೆ ಕೆಲವು ಗಜಲ್ ಗಳಲ್ಲಿ ಬಳಿಸಿದ ರೂಪಕಗಳು ವಚನ ಸಾಹಿತ್ಯ, ತತ್ವಪದಗಳ ಸಾಹಿತ್ಯ, ನುಡಿಗಟ್ಟುಗಳನ್ನು ಬಳಿಸಿದ್ದು ಕಂಡುಬರುತ್ತದೆ.ಮತ್ತು ಕೆಲವು ಗಜಲ್ ಗಳನ್ನು ಓದಿದಾಗ ಗಾಲಿಬ್ ಅವರ ಗಜಲ್ಗಳ ಛಾಯೆ ಬಿದ್ದಂತೆ ಭಾಸವಾಗುತ್ತದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಸಂಕಲನವು ಪ್ರೌಢತೆಯಿಂದ ಕೂಡಿದ್ದು ಯುವ ಗಜಲ್ ಕಾರರಿಗೆ ಮಾರ್ಗದರ್ಶನ ಮಾಡುವಂತಹ ಕೃತಿಯಾಗಿದೆ. *ನನ್ನ ಹೃದಯ ದಲ್ಲಿ ನೆಲೆಸಿದ ಮತ್ತು ಅನುರಾಗದ ಅಲೆಯನ್ನು ಎಬ್ಬಿಸಿದ ಕೆಲವು ಗಜಲ್ ಗಳ ಮಿಸ್ರಾ ಗಳನ್ನು ಇಲ್ಲಿ ಸಾದರ ಪಡಿಸಲು ಇಚ್ಛಿಸುವೆ * “ಪ್ರೀತಿಯ ಮೈಖಾನೆಯಲಿ ಅಪರಿಚಿತರು ಇರುವುದಿಲ್ಲ ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ” “ಕಲ್ಲು ಹೃದಯ ಗಳ ಮೇಲೆ ಹೂವು ಅರಳುವುದಿಲ್ಲ ನೀ ಪ್ರೀತಿಯ ಹನಿಯಾಗಬೇಕು ನನ್ನ ಈ ನೆಲಕೆ” “ ಚಿಗುರೊಡೆಯಬೇಕು ನಿನ್ನ ಎದೆಗೆ ಬಿದ್ದ ಬೀಜ ಹೇಗೆ ಉಸಿರಾಡುವುದು ಮೊಳಕೆ ಒಲವು ಮಣ್ಣಾಗು” “ಮೌನ ಮುರಿದು ಮಾತನಾಡಬೇಕಿದೆ”ಉಮರ್” ಮೂಕ ಮಗುವಿಗೆ ಎಂದು ಹಾಲು ಸಿಗಲೇ ಇಲ್ಲ” “ಮುಲ್ಲಾ ನೀನು ಕರೆಯಲಿಲ್ಲ ನಾ ಅಲ್ಲಾಹನಿಗಾಗಿ ಬರಲೇ ಇಲ್ಲ ಮಸೀದಿಯೇನೋ ಕಟ್ಟಿಸಿದೆ ನಮಾಜು ಅಲ್ಲಿ ಮಾಡಲೇ ಇಲ್ಲ” “ಮುಖ ಸ್ವಚ್ಛ ವಾಗುವುದಿಲ್ಲ ಕನ್ನಡಿಯನ್ನೆಷ್ಟೇ ಉಜ್ಜುತಿರು ನಿನ್ನ ಬಾಗಿಲು ತೆರೆಯುವುದಿಲ್ಲ ಬೇರೆ ಕದ ಎಷ್ಟೇ ತಟ್ಟುತಿರು” “ಎಲ್ಲರು ತಲೆದೂಗುತಿದ್ದಾರೆ ವಿರಹದ ಗೀತೆ ಕೇಳಿ ನೋವುಂಡ ಗಾಯ ಪ್ರೀತಿಯನು ಬೇಡುತಿದೆ” “ಬುದ್ಧ ಬಸವ ಏಸು ಪೈಗಂಬರರೇ ನೀವೆ ಕೇಳಿ ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ” “ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲ ತುಕ್ಕು ಹಿಡಿದ ಕಬ್ಬಿಣ  ಎಂದೂ ತೂತು ಮುಚ್ಚುವುದಿಲ್ಲ” “ಇನ್ನೂ ಉಸಿರಾಡುವ ಹೆಣಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ ಬಿಕ್ಕಳಿಸಿತಿರುವ ಪ್ರಜೆಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ” “ರೊಟ್ಟಿ ಕೇಳಿದರೆ ಹೇಸಿಗೆ ತಿನ್ನುಎನುವವರೆ ಹೆಚ್ಚು ಒಂದು ರೂಪಾಯಿ ಇವರಿಂದ ಕೊಡಲಾಗಲಿಲ್ಲ ಆನಂದ” “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ ” ಉಮರ್” ದ್ವೇಷವಾರಿಸಲು ಪ್ರೀತಿಯ ಒರತೆ ತೋಡಿಸುವುದಾದರೆ ತೋಡಿಸು” “ನಿನ್ನ ಹೂದೋಟದಲಿ ಹಾರಾಡುವ ಮರಿದುಂಬಿ ನಾ ಭರವಸೆಯ ಹೂ ಅರಳಿದಾಗಲೆಲ್ಲಾ ಹಗುರವಾಗುತ್ತೇನೆ”            ಉಮರ್ ದೇವರಮನಿ ಯವರು “ಉಮರ್” ಎಂಬ ತಖಲ್ಲುಸ್ (ಕಾವ್ಯನಾಮ) ವಾಗಿಟ್ಟುಕೊಂಡು ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ.ಈ ತಖಲ್ಲುಸ್ ಓದಿದಾಗ ವಿಶ್ವ ಕಂಡ ಮಹಾನ್ ಕವಿ “ಉಮರ್ ಖೈಯಾಮ್” ನೆನಪಾಗುತ್ತಾರೆ.ಉಮರ್ ದೇವರಮನಿ ಯವರ ಗಜಲ್ ರಚನೆ ಸರಳವಾಗಿ ,ವಾಸ್ತವವಾಗಿ, ಶಬ್ದ ಗಳ ಮಿತ ಬಳಿಕೆಯಲ್ಲಿ ಸಂವೇದನಾಶೀಲವಾದ ಭಾವ ತೀವ್ರತೆಯನ್ನು ತುಂಬಿದ್ದಾರೆ.ಗಜಲ್ ಒಂದು ಹಾಡುಗಬ್ಬ ವೆಂದು ಅವರು ಅರಿತಿದ್ದಾರೆ.ಪ್ರೀತಿ, ಪ್ರೇಮ ವಿರಹ , ವೈರಾಗ್ಯ, ಸಮಾನತೆ ,ಸ್ವಾತಂತ್ರ, ಶಾಂತಿ ಹೀಗೆ ಎಲ್ಲಾ ವಿಷಯಗಳಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ,ಲೌಕಿಕದಿಂದ ಅಲೌಕಿಕ ಕಡೆ ಕೊಂಡೊಯ್ಯತ್ತಾರೆ ಉಮರ್ ದೇವರಮನಿಯವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಓದುಗರಿಗೆ ತೃಪ್ತಿ ಪಡಿಸುತ್ತಾರೆಂಬ ಭರವಸೆಯ ಗಜಲ್ ಕಾರರಾಗಿದ್ದಾರೆ.ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಇವರಿಂದ  ಅನೇಕ ಗಜಲ್ ಕೃತಿಗಳು ಬರಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆನು. *****************************************************  ಪ್ರಭಾವತಿ ಎಸ್ ದೇಸಾಯಿ

ರಾಗವಿಲ್ಲದಿದ್ದರೂ ಸರಿ Read Post »

ಕಾವ್ಯಯಾನ

ಅರಳುವುದೇಕೋ.. ?ಬಾಡುವುದೇಕೋ

ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು  ನಲುಗುತಿವೆ,ನೀರವ ಮೌನದಲ್ಲಿ….,ಬಿಸಿಲು -ಮಳೆಯೆನ್ನದೆ,ಬಾಳ ಕೊನೆಯನರಿಯದೆ…… ತಾನಾಗಿಯೂ ಅರಳಲಿಲ್ಲ,ತಾನಾಗಿಯೂ ಮುದುಡಲಿಲ್ಲ,….,ಅರಳುವ ಆಸೆಯೂ ಇರಲಿಲ್ಲ,ಮುದುಡುವ ಬಯಕೆಗೂ ಬರವಿಲ್ಲ…, ಬಿಡಿಸಲಾಗದ ಗಂಟುಗಳಲ್ಲಿ,ಉತ್ತರವಿಲ್ಲದ ಪ್ರಶ್ನೆಗಳಲ್ಲಿ,ಪ್ರಶ್ನೆಗಳಿಗೇ ಪ್ರಶ್ನೆಯಾಗಿ,ಬಾಳುತಿರುವ  ಈ ಕುಸುಮಅರಳುವುದೇಕೋ… ?ಮುದುಡುವುದೇಕೋ… ? ************************

ಅರಳುವುದೇಕೋ.. ?ಬಾಡುವುದೇಕೋ Read Post »

ಇತರೆ

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ

ಜನ್ಮದಿನಾಚರಣೆ 11/04/2021 ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ [01:48, 11/04/2021] +91 95382 66593: ಭಾರತದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಜ್ಯೋತಿಬಾ ಪುಲೆ.ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಧರ್ಮ, ಪಂಥ, ಸಂಪ್ರದಾಯ ಈ ರೀತಿಯ ಕಟ್ಟುಪಾಡುಗಳಿಗೆ ಜೋತುಬೀಳದೆ,ಮಾನವ ಧರ್ಮವನ್ನು ಆಧರಿಸಿ ನಡೆಯಬೇಕೆಂದು ಅಪೇಕ್ಷೆ ಪಟ್ಟವರು. ಜ್ಯೋತಿಬಾ ಪುಲೆ ಅವರು 11/04/1827 ರಂದು ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್,ತಾಯಿ ಚಿಮಣಾಬಾಯಿ. ಜ್ಯೋತಿಬಾ ಅವರು ಇನ್ನೂ ಚಿಕ್ಕವರಿದಾಗಲೇ ತಾಯಿ ಚಿಮಣಾಬಾಯಿ ಅವರು ಸ್ವರ್ಗಸ್ತರಾಗುತ್ತಾರೆ.ನಂತರ ಜ್ಯೋತಿಬಾ ಅವರನ್ನು ಸಾಕಿ ಸಲುಹಿದ್ದು ತಾಯಿ ಚಿಮಣಾಬಾಯಿ ಅವರ ಸೋದರಿ ಸಗುಣಾಬಾಯಿ ಅವರು.ಸಗುಣಾಬಾಯಿ ಅವರು ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆ ಎಂಬ ಬೆಳಕಿನ ಜ್ಞಾನವನ್ನು ಬಿತ್ತುತ್ತಾರೆ. ಜಾತಿಯ ಕಟ್ಟಲೆಗಳಿಂದ ಮಡುಗಟ್ಟಿದ್ದ ಸಮಾಜದಲ್ಲಿ ಶಿಕ್ಷಣವೆಂಬ ಸೇವೆಯ ಮೂಲಕ ಸಂಪೂರ್ಣ ಭಾರತದಲ್ಲಿ ಪ್ರಗತಿಪರ ನಡೆಯನ್ನು ಹುಟ್ಟುಹಾಕಿದ ಜ್ಯೋತಿಬಾ ಫುಲೆ ಅವರು,ಅಂಬೇಡ್ಕರರವರಿಗೂ ಹಲವು ವಿಚಾರಗಳಲ್ಲಿ ಆದರ್ಶವಾಗಿದ್ದರು.ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪ್ರದಾಯದ ಹೆಸರಿನಲ್ಲಿ ನಿಷೇಧಿಸಿದ್ದ ಕಾಲದಲ್ಲಿ ಜ್ಯೋತಿಬಾರವರು ತನ್ನ ಪತ್ನಿ ಸಾವಿತ್ರಿಭಾಯಿ ಪುಲೆ ರವರಿಗೆ ಅಕ್ಷರ ಕಲಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ರೂಪಿಸಿದ ಮಹಾನ್ ಚೇತನ. ಆ ಕಾಲದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವೆಂಬ ಅನಿಷ್ಟ ಪದ್ಧತಿ ಇತ್ತು.ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಶಾಲೆಗಳಿದ್ದವು.ಆದರೆ ಆ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಕಲಿಯುವ ಅವಕಾಶ ಇತ್ತು, ಆ ಎಲ್ಲಾ ಕಟ್ಟಲೆಗಳನ್ನು ಮೀರಿ 1848 ರಲ್ಲಿ ಪುಣೆಯಲ್ಲಿ ಶ್ರೀ ಬಿಡೇಯವರ ಭವನದಲ್ಲಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿ ಭಾರತದಲ್ಲಿ ಪ್ರಪ್ರಥಮ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಕೀರ್ತಿಯನ್ನು ಪುಲೆ ದಂಪತಿ ಪಡೆದರು.ಬಡವ,ಶ್ರೀಮಂತ, ಜಾತಿ ಧರ್ಮಗಳ ಬೇಧ ಮಾಡದೇ ಸಕಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಪುಲೆ ದಂಪತಿಗಳು,ಆ ಕಾಲದಲ್ಲಿ ಜ್ಯೋತಿಬಾ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು.ಆದರೆ ಅವರ ಇಚ್ಛೆ,ಗುರಿ ಒಂದೇ ಆಗಿತ್ತು ಸಮಾಜ ಸೇವೆ.ಶಿಕ್ಷಣದ ಕ್ರಾಂತಿಯ ಜೊತೆಗೆ ಜ್ಯೋತಿಬಾ ಪುಲೆ ಅವರು ವಿಧವೆಯರ ಮಕ್ಕಳಿಗಾಗಿ ಅನಾಥ ಶಾಲೆ,ವಿಧವಾ ವಿವಾಹ, ಸತ್ಯಶೋದಕ ಸಮಾಜದ ಸ್ಥಾಪನೆ ಮಾಡಿ ಬಸವ ಮಾರ್ಗದಲ್ಲಿ ಸಾಗಿದ ಮಹಾನ ಚೇತನ ಜ್ಯೋತಿಬಾ ಪುಲೆ. ಇಂದಿನ ಯುವ ಸಮಾಜ ಪುಲೆ ದಂಪತಿಗಳ ಆದರ್ಶಗಳನ್ನ ಪಾಲಿಸಿಕೊಂಡು ಹೋಗಬೇಕಾಗಿದೆ.ನಟ ನಟಿಯರ ಜನ್ಮದಿನದವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಕಾರ್ಯದಲ್ಲಿ ಬಹುತೇಕ ಇಂದಿನ ಯುವ ಸಮಾಜ ಮುಳುಗಿದೆ.ಆದರೆ ಈ ರೀತಿಯ ಮಹಾನ ಚೇತನಗಳು ಯುವ ಸಮಾಜಕ್ಕೆ ನೆನಪಾಗದೆ ಇರುವುದು ವಿಪರ್ಯಾಸ,ಪುಲೆ ದಂಪತಿಗಳ ಜನ್ಮದಿನವನ್ನು ಅದ್ದೂರಿಯಾಗಿ ಮಾಡದೇ ಇದ್ದರೂ ಅವರ ಜೀವನದ ಕುರಿತು ತಿಳಿದುಕೊಂಡು ಅವರು ಸಾಗಿದ ಮಾರ್ಗದಲ್ಲಿ ಒಂದಿಷ್ಟಾದರೂ ಸಾಗುವ ಮನಸ್ಸು ನಾವುಗಳು ಮಾಡಬೇಕಿದೆ. ************************************** ಹೊರನಾಡ ಕನ್ನಡಿಗ ಪ್ರಕಾಶ (ಇಂದೋರ್- ಮಧ್ಯಪ್ರದೇಶ)

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ Read Post »

ಇತರೆ

ನುಡಿ ಕಾರಣ

ಧನ ಸಂಪತ್ತು ಕೆಲವರಿಗೆ ಇರಬಹುದು,ಕೆಲವರಿಗೆ ಇರಲಿಕ್ಕಿಲ್ಲ.ಒಬ್ಬನು ಸಿರಿವಂತ ನಾಗಬೇಕಾದರೆ ಒಬ್ಬ ಬಡವನಾಗುತ್ತಾನೆ.( ರಾಜಕಾರಣಿ ಶ್ರೀಮಂತನಾದಾಗ,ಆದಾಯ ಕರ ಸಲ್ಲಿಸುವವನು ಬಡವನಾಗುವುದು

ನುಡಿ ಕಾರಣ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ ಸರಿಸದಿರು ರಸಿಕತೆ ರಂಗೇರಿದಾಗ ಕೋಣೆಯ ದೀಪ ನಾಚಿ ಮುಖ ಮುಚ್ಚಿಕೊಳ್ಳುತ್ತದೆಅರುಣಾ ನೀ ಕೊಟ್ಟ ಹಿಡಿ ಪ್ರೀತಿ ಉಣ್ಣಬೇಕೆಂದಿರುವೆ ದೂರ ಸರಿಸದಿರು *******************************************

ಗಜಲ್ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.

Read Post »

ಕಾವ್ಯಯಾನ

ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ ಹೇಳಿಬಿಡುವೆನಾನೀಗ ಬರಿಯ ಸಂತ್ರಸ್ತೆಯಲ್ಲ,ಶಸ್ತ್ರಾಸ್ತ್ರ ಸಜ್ಜಿತೆಮುರಿದುಬಿಡುವೆ ಎಲ್ಲ ಮುರಿದುಬಿಡುವೆ. ಕಾಡುಮೇಡಲಿ ಅಲೆದೆ ಕಾಡೆಂದರಿಯದೆಕಾಡು ಪ್ರಾಣಿಯೆ ನಿನ್ನ ಜಾಡನರಿಯದೆ,ಸುಖವುಂಡು ನೋವಿತ್ತು ನೀಹರಿದು ಮುಕ್ಕಿಬಿಟ್ಟೆ ; ನೆಲಕೆ ಒತ್ತಿಬಿಟ್ಟೆ ಬರೆದ ಶಾಸ್ತ್ರಗಳಲಿ ನೆಯ್ದ ಸೂತ್ರಗಳಲಿನಿಲ್ಲಿಸಿಬಿಟ್ಟೆ ಎನ್ನ ಬಾಗಿಲ ಹೊರಗೆ ಜಾಣತನದಲಿನದಿ ತಟಾಕಗಳಲಿ ನಾಗರೀಕತೆಯ ಕಟ್ಟಿದೆನೆಂಬ ಬಿಮ್ಮಲಿಬುವಿ ನದಿಗಳ ಬಳಸಿ ನನ್ನ ಹೆಸರಿಟ್ಟುಆರತಿಯ ಜ್ವಾಲೆಯಲಿ ಕರಕಾಗಿಸಿಟ್ಟೆ ಜಗದ ಉದ್ದಗಲ ಅಂಗುಲಂಗುಲ ಲಂಗುಲಗಾಮಿಲ್ಲದೆ ಹೇಸಿಗೆಯ ಮಾಡಿಮನಸು ಕೊರಾಡಾಗಿಸಿನನ್ನ ಆಳ ಹೊರಟೆ, ಮೇಲಾಳಾಗಿಆಳಕೆ ಅದುಮಿ ಆಳ ಮಾಡಿಬಿಟ್ಟೆ ನೀನು ಮಾಡಿದಯುದ್ದಗಳಿಗೆ ಶಸ್ತ್ರಾಸ್ತ್ರವೆನ್ನ ಮಾಡಿದೆಫಿರಂಗಿಗಳ ಗುಂಡುಗಳಲಿ ಸೀಳಿಬಿಟ್ಟೆಬಸಿದ ರಕ್ತವ ಕ್ಯಾನ್ವಾಸಿನಲ್ಲಿ ಚೆಲ್ಲಿ ನವ್ಯಕಲೆಯೆಂದು ಸಾರಿಬಿಟ್ಟೆ ಎದೆಯ ನುಡಿಯನು ಎರಡಾಗಿಸಿಒಳಾಂಗಳದ ಭಾನಗಡಿಯ ಬಚ್ಚಿಟ್ಟೆನನ್ನ ಚಿಟ್ಟೆಯೆಂದು ಬಿಟ್ಟೆ. ನಾನಿನ್ನು ಬಿಡುವುದಿಲ್ಲನನ್ನ ಕೈ ಕಾಲಿಗೆ ಕೋಳವಿಕ್ಕಲುಪುಕಪುಕಿಸಿಸುವ ನಿನ್ನ ಪುಕ್ಕಲುತನಕೆಸೋಗದಂಬರ ತೊಡಲುಇನ್ನು ಆಗಲಾರೆ ನಿನ್ನ ತೆಕ್ಕೆಯ ಮುಳ್ಳುಗಳಿಗೆ ಮಗ್ಗುಲು ಹಿಮಾಲಯದ ತುದಿಗೆ ಹೋಗುವೆಕನ್ಯಾಕುಮಾರಿಯ ಅಂಚಿಗೆ ಸಾಗುವೆಕೂಗಿ ಹೇಳುತ್ತೇನೆ, ಬೀಳಲಾರೆ ಸಂಚಿಗೆನೋವುಗಳ ಎದೆಯಲ್ಲಿಟ್ಟುದೈನ್ಯತೆಯ ಬೇಡಿನಿನ್ನ ಅನುಕಂಪಿತ ಕೂಸು ನಾನಾಗಲಾರೆಶಸ್ತ್ರವೆತ್ತುವೆ,ನಿನ್ನ ಪಾಪದ ಹೆಣವಾದರೂ ಸರಿಯೆ, ಸಂತ್ರಸ್ತೆಯಾಗಲಾರೆ. **************************************************

ನಿನ್ನ ಪಾಪದ ಹೆಣ Read Post »

ಇತರೆ

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾರಿಗೆ ಮುರಿದು ಈ ಬಾರಿ  11 ಗಂಟೆಗೆ ಮತ ಚಲಾವಣೆಗೆ ಹೊರಟೆ. ಚಾಲೀಸಾ ಪಠಣೆ ಮುಗಿದರೂ ಹನುಮಂತ ಪ್ರತ್ಯಕ್ಷ ಆದರೂ ಮುಗಿಯದಷ್ಟು ಬಾಲದಷ್ಟುದ್ದದ ಸಾಲಿತ್ತು. ಬರೋಬರಿ 1 ಗಂಟೆ ನಲವತ್ತು ನಿಮಿಷದ ನಂತರ ಮತಹಾಕುವ ಕೋಣೆಯ  ಎದುರು ಸಾಲಿನಲ್ಲಿ ನಿಂತಿದ್ದೆ .ಪೊಲೀಸಪ್ಪನೊಬ್ಬ ಸರಬರ ಬಂದು ಬಾಗಿಲಲ್ಲಿ ನಿಂತ . ಐದು ನಿಮಿಷಕ್ಕೆ ತಂದೆಯೊಬ್ಬ ಮಗಳನ್ನು ಕರೆದುಕೊಂಡು ಬಂದು ಅದೇ ಪೊಲೀಸ್ಗೆ “ನೋಡಿ ತಪ್ಪು ಸಾಲಲ್ಲಿ ನಿಂತಿದ್ದ್ವಿ ಈಗ ಗೊತ್ತಾಯ್ತು ಇದು ನಮ್ಮ ಸಾಲು ಅಂತ” ಎಂದು ಹೇಳುತ್ತಾ ನಡುವೆ ಮಗಳನ್ನು ತೂರಿಸಲು ಪ್ರಯತ್ನ ಪಡುತ್ತಿದ್ದನ್ನು ಕಂಡು ತುಂಬಾ ಮೇಲು ದನಿಯಲ್ಲಿ ಆ ಹುಡುಗಿಗೆ ಸರತಿಯಲ್ಲಿಯೇ ಬರಲು ಹೇಳಿದೆ. ಅವರಿಗೆ ಅಲ್ಲಿದ್ದ ಪೊಲೀಸಪ್ಪನೇ ನೆಂಟನಾದ್ದರಿಂದ ಅವರುಗಳನ್ನು ಒಳ ತೂರಿಸಲು ಆತನೂ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದ. ನನ್ನ ಕೋರಿಕೆಗೆ ಅವರುಗಳ ಮಾತು , ಹುಡುಗಿಯ ದಡ್ಡ ಮೌನ ಎಲ್ಲವೂ ಸೇರಿತ್ತು. ಆತ “ಆಯ್ತು ಬಿಡಿ ನೀವೇ ವೋಟ್ ಆಕೋಳಿ ನನಗೆ ವೋಟ್ ಆಕದಿದ್ದರೆ ಪ್ರಾಣ ಓಗಲ್ಲ” ಎಂದ. “ಅಪ್ಪ ತಂದೆ ವೋಟ್ ಹಾಕದಿದ್ದರೆ ನಿನ್ನ ಪ್ರಾಣ ಹೋಗಲ್ಲ ಆದರೆ ನನ್ನದು  ಹೋಗತ್ತಪ್ಪಾ” ಎಂದು ಹೇಳಿ ಅಂತೂ ಸರತಿ ಸಾಲಿನ ಕೊನೆ ಸೇರಿಸಿದೆ ಆ ಅಪ್ಪ ಮಗಳನ್ನು. ಇದು ಹೆಚ್ಚುಗಾರಿಕೆಯಲ್ಲ . ಆದರೆ ನಾ ವಿರೋಧ ವ್ಯಕ್ತ ಪಡಿಸಿ ಗೆದ್ದ ಮೇಲೆ ಅಲ್ಲಿದ್ದ ಒಂದಷ್ಟು ಹೆಂಗಸರು Thank you  ಎಂದದ್ದು ಒಂದು ಪಾಠ. ದನಿ ಎತ್ತಬೇಕು ಎನ್ನುವ ಮೆದುಳಿದ್ದರೂ “ಶ್ ಸೈಲೆನ್ಸ್” ಎನ್ನುವ ಗುಡುಗಿಗೆ ಬಲಿಯಾಗುವ ಹೆಂಗಸರ ಪರವಾಗಿ ಮಾತಾಗಲಾದರೂ ಮತ ಹಾಕಬೇಕು. ಬಾಲ್ಯ ಕಳೆಯುತ್ತಿದ್ದ ಕಾಲದಲ್ಲಿ ನನ್ನ ಅಜ್ಜಿ ತಾತನ ತಲೆ ಮಾರಿನವರು ನಮ್ಮ ಹಾಗೆ ಕೈಕೈ ಹಿಡಿದುಕೊಂಡು ಮುಸಿಮುಸಿ ನಗುತ್ತಾ, ಕಣ್ಣಲ್ಲೇ ಕಾಮಿಸುತ್ತಾ, ಮಾತುಗಳಲ್ಲಿ ಪ್ರೇಮಿಸುತ್ತಿದ್ದವರಲ್ಲ. ಯಾರು ಗಂಡ ಆತನ ಹೆಂಡತಿ ಯಾರು ಎನ್ನುವುದು ಕೇವಲ ಹೆಸರುಗಳ ಮೂಲಕವೇ ಕಂಡುಕೊಳ್ಳ ಬೇಕಿತ್ತು. ಆದರೆ ಅಂತಹ ಮಡಿವಂತರುಗಳು ಜೋಡಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಚುನಾವಣೆಯ ದಿನ, ಮತಗಟ್ಟೆಗಳ ಮುಂದಿನ ಸಾಲುಗಳಲ್ಲಿ ಮಾತ್ರ. ಗಂಡನ ಇತರೆ ಸಂಬಂಧಗಳು, ಹೆಂಡತಿಯ ಮೂದಲಿಕೆ, ಮನೆ ಭರ್ತಿ ಮಕ್ಕಳು, ನೆಂಟರು ಇಷ್ಟರುಗಳ ಕದಲಿಕೆ, ಹಣ-ಕಾಸಿನ ಅಗಲಿಕೆ ಯಾವುದಕ್ಕೂ ಆ ದಿನ ಮಾತ್ರ ಜಗ್ಗದೆಯೇ ಬಂದು ಮತ ಚಲಾಯಿಸುತ್ತಿದ್ದರು ವೃದ್ಧ ದಂಪತಿಗಳು ಅದು ಒಂದೇ ಕಾರಣಕ್ಕೆ ಸೊಗಸಾಗಿ ಕಾಣಿಸುತ್ತಿದ್ದರು ಕೂಡ. ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರ, ವಿದ್ಯಾವಂತ ಕುಟುಂಬ ನಮ್ಮದು. ಊಟವನ್ನಾದರೂ ಬಿಟ್ಟೇವು ಪ್ರತಿಷ್ಠೆ, ನಿಷ್ಠೆಯಿಂದ ಕದಲೆವು ಎನ್ನುವ ಪಾಠವನ್ನು ಮನೆಯ ಪ್ರತಿ ಅಮ್ಮನೂ ಮಕ್ಕಳಿಗೆ ತುತ್ತಿಡುವಾಗಲೇ ಜೀರ್ಣಿಸಿಕೊಡುತ್ತಿದ್ದ ಮನೆತನ. ಅಂದಮೇಲೆ ಚುನಾವಣೆ ದಿನ ದಸರೆಯ ದಿನಗಳ ಸಂಭ್ರಮಕ್ಕಿಂತ ಭಿನ್ನ ಎನಿಸುತ್ತಿರಲಿಲ್ಲ. ಕೂಡು ಕುಟುಂಬದ ಪ್ರತೀ ಗಂಡಸರು ಹೆಂಗಸರು ವಯಸ್ಕ ಮಕ್ಕಳು ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7.30 ಗಂಟೆಗೆ ಮತಗಟ್ಟೆಯ ಮುಂದೆ ನಿಂತಿರಬೇಕು ಎನ್ನುವ ಅಲಿಖಿತ ನಿಯಮ. ಮತಗಟ್ಟೆಯ ಸಿಬ್ಬಂದಿಗಳು ಇನ್ನೂ ಬೆಳಗಿನ ಕಾಫಿ ಕುಡಿದು ಮುಗಿಸುವುದರ ಮೊದಲೇ ಕೆ.ರಾಮಣ್ಣ (ನನ್ನ ತಂದ) ಇವರ ಕುಟುಂಬದವರು ಹನುಮಂತನ ಬಾಲದಂತೆ ಮತಗಟ್ಟೇಯ ಮುಂದೆ ನಿಂತಿರುತ್ತಿದ್ದರು. ಆ ದಿನಗಳಲ್ಲಿ ದೇಶ ಭಕ್ತಿ ಮತ್ತು ಕರ್ತವ್ಯ ಎನ್ನುವ ಪರಿಕಲ್ಪನೆಗಳ ವ್ಯಾಖ್ಯಾನವನ್ನು ಸುಪ್ರೀಮ್ ಕೋರ್ಟ್ ಕೊಟ್ಟೀರಲಿಲ್ಲ ಬದಲಿಗೆ ದೇಹದಲ್ಲಿರುವ ಪ್ರತೀ ಜೀವಕೋಶಗಳು ಉತ್ಪಾದನೆ ಮಾಡುತ್ತಿದ್ದವು ಅದಕ್ಕೇ ವಯಸ್ಸು, ಅಂತಸ್ತುಗಳ ವ್ಯತ್ಯಾಸವಿಲ್ಲದೆ ಮತಗಳು ನೊಂದಾಯಿತವಾಗುತ್ತಿತ್ತು. ಈ ಬಾರಿಯೂ ನಾನು ಮತ್ತು ಹಾಕಿದ್ದು ಅಭ್ಯರ್ಥಿಯ ಬಗ್ಗೆ ನನಗಿರುವ ವಿಶ್ವಾಸಕ್ಕಾಗಲೀ, ರಾಜಕೀಯದಲ್ಲಿ ಉಳಿದುಕೊಂಡಿರುವ ಅಲ್ಪ ಆಸಕ್ತಿಯಿಂದಾಗಲೀ ಅಲ್ಲ. ನನ್ನ ಮನೆತನದ ಹೆಮ್ಮೆಯ ಧ್ಯೋತಕವಾಗಿ. ನನ್ನ ಪಪ್ಪ-ಅಮ್ಮ ನಮ್ಮೆಲ್ಲರನ್ನು ಬೆಳಿಸಿದ ಪರಿಗೆ ಸಲ್ಲಿಸುವ ಗೌರವಕ್ಕಾಗಿ. ಈ ನೆಲಕ್ಕೆ ಸ್ವಾತಂತ್ರ್ಯದ ಗಾಳಿಯನ್ನು ಸರಾಗವಾಗಿಸಿಕೊಟ್ಟ ನನ್ನ ಪಪ್ಪನಂತಹ ಹೋರಾಟಗಾರರಿಗೆ ಧನ್ಯವಾದ ಹೇಳುವುದಕ್ಕಾಗಿ. ಮೈ ಮನ ಮಸಿಯಾಗಿಸದೆಯೇ ಬೆರಳನ್ನು ಮಾತ್ರ ಕರೆ ಮಾಡಿಕೊಳ್ಳುವ ಸೋಜಿಗದ ಪ್ರತೀಕದಂತೆ ಕಾಣುತ್ತದೆ ನನಗೆ ಮತ ಚಲಾವಣೆ. ಒಂದು ಕಪ್ಪು ಕಲೆ ವಿಕಾರ ರೂಪದಲ್ಲಿ ಹುಟ್ಟಿ ದಿನಗಳೆದಂತೆ ಗಾಢವಾಗುತ್ತಾ, ಆಕಾರ ಪಡೆಯುತ್ತಾ, ಕ್ರೋಢಿಕರಣಗೊಂಡು, ಉಗುರ ತುದಿಯಲ್ಲಿ ಸಾಂಧ್ರವಾಗಿ, ಮತ್ತೆ ಬರುತ್ತೇನೆ ಎಂದು ಹೇಳುತ್ತಾ ದೂರಾಗುವ ಪರಿಯನ್ನು ನೋಡುವುದು ಮತ್ತು ಅದರಿಂದ ಕಲಿಯುವುದು, ಈ ರೊಮ್ಯಾಂಟಿಕ್ ಪ್ರಕ್ರಿಯೆಯಲ್ಲಿ ದೇಶ ಎನ್ನುವ ಚಿರಯೌವ್ವನೆ ಅರಳುವುದ ಕಾಣಲು ಮತ ಹಾಕಿದ್ದೇನೆ. ಹಾಂ ಹಿಂದಿರುಗಿ ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ತೆಗೆದಿತ್ತು . ಹೊಸ ಮುಖ ಚಿಗುರು ಮೀಸೆ ಹೊತ್ತು ಗಿರಾಕಿಗಳ ಕೈಯಿಂದ ಚೀಟಿ ತೊಗೊಂಡು ಚುರುಕಾಗಿ ಔಷಧಿ ಬಟವಾಡೆ ಮಾಡುತ್ತಿತ್ತು. ಬೆರಳು ನೋಡಿದೆ ಮಸಿ ಇಲ್ಲ. ‘ ವೋಟ್ ಮಾಡಲಿಲ್ಲವಾ ಮಗಾ’ ಎಂದೆ . ‘ಇಲ್ಲಾ ಮೇಡಂ ಊರಿಗೆ ಹೋಗಿ ವೋಟ್ ಹಾಕಕ್ಕೆ ಓನರ್ ರಜಾ ಕೊಡಲಿಲ್ಲ ‘ ಎಂದ. ಓನರ್ಗೆ ಫೋನ್ ಮಾಡಿದೆ. ಆತ ಕುಟುಂಬ ಸಮೇತ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ರು. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಸಾರೀಮೇಡಮ್ ಎಂದರಷ್ಟೇ. ಆ ಕೊನೆಘಳಿಗೆಯಲ್ಲಿ ನಾ ಏನೂ ಮಾಡಲಾಗಲಿಲ್ಲ. ಆದರೆ ಮುಂದಿನ ಚುನಾವಣೆಗೆ ಹುಡುಗ ರಜೆ ಪಡೆದು ವೋಟ್ ಹಾಕುತ್ತೇನೆ ಎನ್ನುವಷ್ಟು ಸಬಲನಾದರೆ ಚಲಾವಣೆಯಾದ ನನ್ನ ಮತಕ್ಕೂ ಹೆಮ್ಮೆ. ನನ್ನ ಮೈಸೂರಿನ ದಿನಗಳಲ್ಲಿ ’ಅಮ್ಮ ಎಲ್ಲಿ?’ ಎನ್ನುವ ಯಾರದ್ದೇ ಪ್ರಶ್ನೆಗೂ ಉತ್ತರ ಇರುತ್ತಿದ್ದದ್ದು ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ, ಬಟ್ಟೆ ಒಣಗುವಲ್ಲಿ, ಪಾತ್ರೆ ತೊಳೆಸಿಕೊಳ್ಳುವ ಹಿತ್ತಲಲ್ಲಿ, ದಾಸವಾಳಕ್ಕೆ ನೀರು ಹಾಕುವ ಕಾಂಪೌಂಡ್‍ನಲ್ಲಿ, ಗಂಡನ ಕೇಳಿ ಬರುವ ದೂರವಾಣಿ ಕರೆಗಳಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ, ನೆಂಟರಲ್ಲಿ-ನೆರೆಹೊರಯವರಲ್ಲಿ, ಪುಸ್ತಕದ ಓದಿನಲ್ಲಿ, ವೀಣೆ ನುಡಿಸುವುದರಲ್ಲಿ, ಯೋಗಾಭ್ಯಾಸ ಮಾಡುವಲ್ಲಿ, ಲೇಖನಗಳನ್ನು ಬರೆಯುವಲ್ಲಿ ಎಂದಾಗಿತ್ತು. ಇಷ್ಟೆಲ್ಲವೂ ಆಗಿಹೋಗಿದ್ದ ನನ್ನಮ್ಮ ಚುನಾವಣೆ ದಿನದಲ್ಲಿ ಕೇವಲ ಮತದಾರಮಾತ್ರ ಆಗಿರುತ್ತಿದ್ದಳು. ಸ್ವತಂತ್ರ್ಯ ಭಾರತಕ್ಕೆ ಎರಡೇ ವರ್ಷ ಚಿಕ್ಕವಳು ಅವಳು. ಈಗಲೂ ಬದಲಾವಣೆ ಆಗದ ಅವಳ ಒಂದೇ ಸ್ವಭಾವ ಎಂದರೆ ಮತ ಹಾಕುವುದು. ಒಮ್ಮೆ ಮೈಸೂರಿನ ಸ್ಥಳೀಯ ಚುನಾವಣೆಯ ಸಮಯ. ಕಾಲು ಫ್ರ್ಯಾಕ್ಚರ್ ಆಗಿ ಇವಳು ಬೆಂಗಳೂರಿನ ಆಸ್ಪತ್ರೆ ವಾಸಿ. “ಇನ್ನು ಎರಡು ವಾರ ರೆಸ್ಟ್ ನಲ್ಲಿ  ಇರಬೇಕು” ಡಾಕ್ಟರ್ ಹೇಳಿಯಾಗಿತ್ತು. ಬಿಡುವಳೇ ಇವಳು, ’ಸಾಧ್ಯವೇ ಇಲ್ಲ ಮತ ಹಾಕಲೇ ಬೇಕು” ಎಂದು ಶೂರ್ಪಣಕಿಯ ಹಠದಲ್ಲಿ ಮೈಸೂರಿಗೆ ನೇರವಾಗಿ ಮತಗಟ್ಟೆಗೇ ಬಂದವಳು. ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ಮತ ಹಾಕಲು ತಪ್ಪಿಸಿಕೊಳ್ಳದವಳು. ಯಾವ ಚುನಾವಣೆಯ ದಿನದ ಹಿಂದಿನ ರಾತ್ರಿಯೇ ಫೋನ್ ಮಾಡಿ ಬೆಳಗ್ಗೆ ಬೇಗ ಹೋಗಿ ಮತ ಹಾಕಿಬಿಡು ಎಂದು ಎಚ್ಚರಿಸಿ ಮಲಗುವವಳು ಅಷ್ಟೇ ಅಲ್ಲ ,  ಮತ ಹಾಕಿ ಬರುವವರೆಗೂ ಪ್ರಾಣ ತಿನ್ನುವ ನನ್ನ ಅಮ್ಮ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯದ ಸದ್ಬಳಕೆ ಕಲಿಸಿಕೊಟ್ಟವಳು. ನಾ ಮತ ಹಾಕುವುದು ಅವಳೆಡೆಗೆ ನನ್ನ ಒಂದು ಮುಷ್ಟಿ ಋಣ ಸಂದಾಯದಂತೆ. ಪಪ್ಪ ಇರುವವರೆಗೂ ಅವರೊಂದಿಗೇ ಹೋಗಿ ಮತ ಹಾಕಿ ಬರುತ್ತಿದ್ದ ಅಮ್ಮನ ಕಾಲುಗಳು ಈಗ ಊರುಗೋಲಿನ ಸಾಂಗತ್ಯಕ್ಕೆ ಜೋತು ಬಿದ್ದಿವೆ. ಚಾಮುಂಡಿ ತಾಯಿ ನೀಡುತ್ತಿರುವ ಬೇಸಿಗೆ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಹೊಸಿಲು ದಾಟಲು ಯಾರದ್ದಾದರೂ ಕೈ ಹಿಡಿದುಕೊಳ್ಳಲೇ ಬೇಕು ಎನ್ನುವ ಸ್ಥಿತಿ ಆದರೂ ಚುನಾವಣಾ ದಿನಕ್ಕೆ ಉಡಬೇಕಾದ ಸೀರೆ ರವಿಕೆಗೆ ಇಸ್ತ್ರಿ ಮಾಡಿರಿಸಿಕೊಂಡಿದ್ದಳು. ಈಗಂತೂ ಮತ ಚಲಾವಣೆ ಅವಳ ಪಾತಿರ್ವ್ರತ್ಯದ ಒಂದು ಭಾಗವಾಗಿದೆ. ಅದನ್ನು ಅವಳು ತನ್ನ ಗಂಡನಿಗೆ ತೋರುವ ಪ್ರೀತಿ, ಕಾಳಜಿ ನಿಷ್ಠೆ ಎಂದುಕೊಂಡಿರುವಂತಿದೆ. “ಅಮ್ಮ ನೀ ಕಳೆದ ಬಾರಿ ಮತ ಹಾಕಿದವರು ಗೆಲ್ಲಲಿಲ್ಲ, ಸುಮ್ಮನೆ ಯಾಕೆ ಶ್ರಮ ಪಡ್ತೀಯ, ಮನೇಲಿರು” ಎನ್ನುವ ಮಗಳ ಉಪದೇಶದ ಒಂದು ವಾಕ್ಯಕ್ಕೆ , ಪ್ಯಾರಾಗ್ರಾಫ್‍ನಲ್ಲಿ ಸಿಟ್ಟಾಗುತ್ತಾಳೆ. “ಹೌದು ಈ ಬಾರಿಯೂ ನನ್ನ ಅಭ್ಯರ್ಥಿ ಗೆಲ್ಲುವ ಸಂಭವ ಕಡಿಮೆ , ಆದರ ನಾನು ಅವನಿಗೇ ವೋಟ್ ಹಾಕೋದು” ಎನ್ನುತ್ತಾಳೆ. “ಇಷ್ಟೆಲ್ಲಾ ಮೈಕೈ ನೋಯಿಸಕೊಂಡು ಹೋಗ್ತಿದ್ದೀಯ ಗೆಲ್ಲುವ ಅಭ್ಯರ್ಥಿಗೇ ಹಾಕು ನಿನ್ನ ಮತ ಉಪಯೋಗಕ್ಕೆ ಬರಲಿ” ಎನ್ನುವ ನನ್ನೆಡೆಗೆ ಅನುಮಾನದ ನೋಟ ತೂರುತ್ತಾ ಹೇಳುತ್ತಾಳೆ  “ನಿನ್ನ ಪಪ್ಪ ಇದ್ದಿದ್ದರೆ ಅವರು ನೀ ಹೇಳುವ ಅಭ್ಯರ್ಥಿಗೆ ವೋಟ್ ಹಾಕ್ತಿದ್ದ್ರಾ? ಇದು ನನ್ನ ಮತ ಅಲ್ಲ ನನ್ನ ಗಂಡನ ವೋಟ್ ನಾನು ಹಾಕುತ್ತಿದ್ದೇನೆ” ಬೇಗ ಹೋಗಲು ಉಸಿರು ಸಾಲದೆ ನಡು ಮಧ್ಯಾಹ್ನದಲ್ಲಿಯಾದರೂ ಮತ ಹಾಕಿದ್ದು ಅವಳ ಪಾಲಿಗೆ ಜೀವದ್ರವದಂತೆ. ಆ ತಲೆಮಾರಿಗೆ ನಿಷ್ಠೆ ಕಲಿಸಿಕೊಟ್ಟ ಚುನಾವಣೆಗಳು ನನ್ನ ತಲೆಮಾರಿಗೆ ಬದಲಾವಣೆಯನ್ನು “ಬಯಸು, ಆರಿಸು, ಒಪ್ಪಿಕೊ”  ಎನ್ನುವುದನ್ನು ಕಲಿಸಿಕೊಟ್ಟಿದೆ. ಆದರೆ ಈ ದೇಶ ನನ್ನದು ಎನ್ನುವ ಸ್ವಾರ್ಥವನ್ನು ಮಾತ್ರ ಕಡಿಮೆ ಮಾಡಿಲ್ಲ ರಾಜಕೀಯ. ಅದಕ್ಕಾಗಿಯಾದರೂ ಮತ ಹಾಕಲು ತಪ್ಪಿಸುವುದಿಲ್ಲ.  ಹೌದು, ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಥೇಟ್ ಅಮ್ಮನ ವಾತ್ಸಲ್ಯ ಮತ್ತು ಅಪ್ಪನ ಅಭಯದಂತೆ. ಇದೇ ಆಸ್ಥೆಯೊಂದಿಗೆ ಈ ಬಾರಿಯೂ ಮತ ಹಾಕಿ ಬಂದೆ. ********************************* (ಲೇಖನ ಕೃಪೆ: ಆಂದೋಲನ ಪತ್ರಿಕೆ ಮೈಸೂರು-ಏಪ್ರಿಲ್-2019) ಮತ್ತು ಅಸ್ಥಿತ್ವ ಲೀಗಲ್ ಬ್ಲಾಗಸ್ಪಾಟ್.ಕಾಮ್

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!    ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು. ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.    ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.    ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ. ‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.    ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.    ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.   ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.                                                          *** ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ

Read Post »

You cannot copy content of this page

Scroll to Top