ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಗಾಂಧಿ ವಿಶೇಷ

ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು….

ಗಾಂಧಿ ವಿಶೇಷ  ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ  ಗಾಂಧಿ  ಬಂದು ಹೋಗಿದ್ದರು…. ಗಾಂಧಿಜೀ ಉತ್ತರ ಕನ್ನಡ ಜಿಲ್ಲೆಯ ಪ್ರವಾದ ನನಗೆ  ಮುಖ್ಯವಾಗುವುದು ಮೂರು ಕಾರಣಗಳಿಗೆ. ಒಂದನೇ ಕಾರಣ ಗಾಂಧಿಜೀ ಅಸ್ಪೃಶ್ಯತೆಯನ್ನು ಜನರ ಮನದಿಂದ ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಎರಡನೇ ಕಾರಣ ದೇವಸ್ಥಾನದಲ್ಲಿನ ಪ್ರಾಣಿ ಬಲಿ ನಿಲ್ಲಿಸಲು ಯತ್ನಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಮೂರನೇ ಕಾರಣ  ಬಾಲವಿಧವೆಯರ ಕೇಶ ಮುಂಡನೆಯಂಥ ಸಂಪ್ರದಾಯವನ್ನು ನಿಲ್ಲಿಸಿದರು. ವಿಶೇಷವೆಂದರೆ ಈ ಮೂರು ಘಟನೆಗಳು ನಡೆದದ್ದು ೧೯೩೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಎಂಬುದು ಗಮನಾರ್ಹ.   ಇದಕ್ಕೆ ಭಾರತದಲ್ಲಿ ಆಗ ಪ್ರಕಟವಾಗುತ್ತಿದ್ದ ದಿನ ಪತ್ರಿಕೆ ವರದಿಗಳೇ ಸಾಕ್ಷಿ. ಅಲ್ಲದೇ  ಗಾಂಧಿಜೀಯೇ ಹೊರ ತರುತ್ತಿದ್ದ ಪತ್ರಿಕೆಯಲ್ಲಿ ಈ ಸಂಗತಿಗಳು ದಾಖಲಾಗಿವೆ.  ಮುಂಬೈ ಪ್ರಾವಿಜೆನ್ಸಿಯಲ್ಲಿದ್ದ ಅಂದಿನ ಕೆನರಾ ಜಿಲ್ಲೆ, ಇಂದಿನ ಕಾರವಾರ ಜಿಲ್ಲೆಯನ್ನು ಸುಬ್ರಾಯ್  ರಾಮಚಂದ್ರ ಹಳದೀಪುರ  ಪ್ರಜಾಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿದ್ದರು. ಅಲ್ಲದೇ ಗಾಂಧಿಜೀಯನ್ನು ಮುಂಬಯಿನಲ್ಲಿ ಭೇಟಿಯಾಗಿ ಕಾರವಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ೧೯೩೪ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಜಾಗೃತಿಗಾಗಿ ಗಾಂಧಿಜೀ ಭಾರತ ಪ್ರವಾಸ ಕೈಗೊಂಡಿದ್ದರು. ೨೩ ಫೆಬ್ರುವರಿ ೧೯೩೪ರಲ್ಲಿ ಮಂಗಳೂರು ಪ್ರವಾಸ ಮುಗಿಸಿ, ಫೆ.೨೮ ರಂದು ಕುಮಟಾ ತಲುಪಿದ ಗಾಂಧಿಜೀ, ಕುಮಟಾ ಹಾಗೂ  ಅಂಕೋಲಾದಲ್ಲಿ ಅಸ್ಪೃಶ್ಯತೆಯ ಅನಿಷ್ಠದ ವಿರುದ್ಧ ಮಾತನಾಡಿದ್ದರು.  ಗಾಂಧೀಜಿ ಸಂಜೆ ಕಾರವಾರಕ್ಕೆ ಬಂದರು. ಅವರನ್ನು ಸುಬ್ಬರಾವ್ ಆರ್. ಹಳದೀಪುರ ಸ್ವಾಗತಿಸಿದರು. ಕಾರವಾರ ನಗರಸಭೆಯಿಂದ ಆಗ ಗಾಂಧಿಜೀಯನ್ನು  ಸನ್ಮಾನಿಸಲಾಗಿತ್ತು.  ಗಾಂಧಿಜೀಗೆ ನೀಡಿದ ಸ್ಮರಣಿಕೆಯನ್ನು ಗಾಂಧೀ ಸಾರ್ವಜನಿಕ ಸಭೆಯಲ್ಲಿ ಹರಾಜು ಮಾಡಿದರು. ಅದನ್ನು ಶಾಸಕ ಸುಬ್ಬರಾಯ ಹಳದೀಪುರ ಅವರು ಹರಾಜಿನಲ್ಲಿ ಪಡೆದು ಸಾವಿರ ರೂ. ಮೊತ್ತವನ್ನು ನೀಡಿದರು. ಆ ಹಣವನ್ನು  ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಕ್ಕೆ ಬಳಸುವುದಾಗಿ ಗಾಂಧೀಜಿ ಹೇಳಿದರು. ಇಲ್ಲಿ ಪ್ರಮುಖವಾದುದು  ಅಸ್ಪೃಶ್ಯತೆ ವಿರುದ್ಧ ಜನ ಜಾಗೃತಿಗಾಗಿ ದೇಶದ ಹಲವು ರಾಜ್ಯ ಸುತ್ತಿದ ಗಾಂಧೀಜಿ ಅಸ್ಪೃಶ್ಯತಾ ನಿವಾರಣಾ  ನಿಧಿ ಸಂಗ್ರಹದ ಮೂಲಕ ದೇಶದ ಜನತೆಯಲ್ಲಿ ಮನುಷ್ಯ ಸಣ್ಣತನಗಳನ್ನು ಬಿಡಿಸಲು ಯತ್ನಿಸಿದರು. ಆಸ್ಪೃಶ್ಯತೆ ನಮಗೆ ಲಜ್ಜಾಸ್ಪದವಾದುದು. ಅದನ್ನು  ನಾವು ತೊಲಗಿಸಬೇಕು ಎಂದಿದ್ದರು. ಕಾರವಾರದ ಸಭಾ ಕಾರ್ಯಕ್ರಮದಲ್ಲಿ  ಜನತೆಯನ್ನು ಉದ್ದೇಶಿಸಿ ಮಾತನಾಡಿದ  ಗಾಂಧೀಜಿ ಕರ್ನಾಟಕದ ಜನತೆ ಅಸ್ಪೃಶ್ಯತೆಯನ್ನು ಕಿತ್ತೊಗೆಯುವತ್ತ ಸಜ್ಜಾಗಿರುವುದನ್ನು ನಾನು ಕಾಣುವಂತಾದುದಕ್ಕಾಗಿ, ನನಗೆ ಬಹಳ ಸಂತೋಷವಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಅನುಕೂಲವಾಗಿ ಜನರಲ್ಲಿ ಪರಿವರ್ತನೆ  ದಿನಾಲು ಬೆಳೆಯುತ್ತಿರುವ ಸಂತೋಷ. ಈ  ಭಾವನೆಯನ್ನು ಕ್ರಿಯೆಯ ರೂಪದಲ್ಲಿ ಮಾರ್ಪಡಿಸಿಕೊಳ್ಳುವ ಸತ್ಯನಿಷ್ಠ ಮತ್ತು ಉತ್ಸಾಹ ಶಾಲಿ ಕಾರ್ಯಕರ್ತರನ್ನು ಅಭಿನಂದಿಸುವೆ.  ಅಸ್ಪೃಶ್ಯರ ಬಗ್ಗೆ ಎಲ್ಲೆಲ್ಲೂ ಸಹಾನುಭೂತಿ ಇದೆ. ಸರಿಯಾದ ವಾತಾವರಣ ಇದೆ. ಆದರೆ ಆ ನಂಬಿಕೆಯನ್ನು ಸಾರ್ಥಕಗೊಳಿಸುವ ಜ್ಞಾನಬೇಕು. “ ಎಲ್ಲಿ ಶ್ರದ್ಧೆ ಮಾಯಾವಾಗುತ್ತದೆಯೋ, ಅಲ್ಲಿ  ಆರಂಭಶೂರರಾಗಿ ಉಳಿಯುತ್ತೇವೆ” ಎಂದರು. ಹಿಂದೂಗಳು ನಾವು ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತೇವೆ. ಅವರನ್ನು ಮುಟ್ಟಿದರೆ ಪಾಪ ಎಂದು ತಿಳಿದಿದ್ದೇವೆ. ಇದು ದೇವರೆದುರು ಮಾಡಿದ ಮಹಾಪಾಪ. ಭಗವಂತ ಮಾನವಕುಲದ ಒಂದು ಭಾಗವನ್ನು ಅಸ್ಪೃಶ್ಯ ಎಂದು ಬೇರೆ ಮಾಡಿದ ಎಂಬ ಮಾತು ದೈವದ್ರೋಹ. ಹಿಂದೂಗಳಿಗೆ ನಾನು ಎಚ್ಚರಿಕೆ ಕೊಡಬಯಸುತ್ತೇನೆ. ಅಸ್ಪೃಶ್ಯತಾ ನಿವಾರಣೆ ಒಂದು ಪ್ರಾಯಶ್ಚಿತ್ತ. ಸವರ್ಣ ಹಿಂದೂಗಳು ತಮಗೂ ಹಿಂದೂಧರ್ಮಕ್ಕೂ ಪ್ರಾಯಶ್ಚಿತ್ತ ಮೂಲಕ ಋಣಮುಕ್ತರಾಗಬೇಕು. `ಹೊಲಸು’ ರಾಷ್ಟ್ರಗಳಿಗೆ ಹೇಗೋ,  ಧರ್ಮಗಳಿಗೂ ಹಾಗೆಯೇ. ದೇವರ ಅನುಗ್ರಹ, ದೇವರ ಸಾಕ್ಷಾತ್ಕಾರವು ಯಾವ ಜಾತಿಗೂ ಯಾವ ರಾಷ್ಟçಕ್ಕೂ ಗುತ್ತಿಗೆಯಲ್ಲ. ಯಾವ ರಾಷ್ಟ,ಯಾವ ಮತ, ಅನ್ಯಾಯಕ್ಕೆ, ಅಸತ್ಯಕ್ಕೆ, ಹಿಂಸೆಗೆ ಮಡಿಲು ಕಟ್ಟುತ್ತದೆಯೋ ಅದು ಈ ಭೂಮಿಯಿಂದ ಮಾಯವಾಗುತ್ತದೆ. ಅಸ್ಪಶ್ಯತೆಯು ಹಿಂದೂ ಧರ್ಮಕ್ಕೆ ಒಂದು ಕಳಂಕ ಮತ್ತು ಮಾನವೀಯತೆಗೆ ಎಸಗಿದ ಅಪರಾಧ ಎಂದು ಗಾಂಧಿ ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ವಿವರಿಸಿದರು. ೧೯೩೪ ಮಾರ್ಚ ೧ ರಂದು ಗಾಂಧಿ ಶಿರಸಿ ತಲುಪಿದರು.  ಗಾಂಧೀಜಿ ಶಿರಸಿಯಲ್ಲಿ ಅವರು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದರು.   ಕುರಿ, ಕೋಣ, ಕೋಳಿಗಳನ್ನು ಬಲಿ ಕೊಡಬಾರದು ಎಂದು ಹೇಳಿದ್ದರು. ಆಗ ಶಾಸಕರೂ ಮತ್ತು ದೇವಾಲಯದ ಧರ್ಮದರ್ಶಿಗಳೂ ಆಗಿದ್ದ ಎಸ್.ಎಸ್.ಕೇಶವ್ವಾನ್ ಗಾಂಧೀಜಿ ಕರೆಯನ್ನು ಅನುಸರಿಸಿ, ಕೋಣ ಬಲಿ ನಿಲ್ಲಿಸಿದರು. ಅದು ಈಗಲೂ ಮುಂದುವರಿದಿದೆ. ೧೯೪೨ ಮಾರ್ಚ ೨೬  ಹರಿಜನ ಪತ್ರಿಕೆಯ ಸಂಚಿಕೆಯಲ್ಲಿ ಶಿರಸಿಯ ಮಾರಿಕಾಂಬ ಜಾತ್ರೆ ಕುರಿತಂತೆ ನೆನಪುಗಳನ್ನು ಗಾಂಧಿಜೀ ದಾಖಲಿಸಿದ್ದಾರೆ. ಶಿರಸಿ ಭೇಟಿಯ ನಂತರ  ಗಾಂಧಿಜೀ ಸಿದ್ದಾಪುರಕ್ಕೆ ತೆರಳಿದರು.  ಮಹಾದೇವಿ ತಾಯಿ ರಾಮಕೃಷ್ಣ ಹೆಗಡೆ ಅವರ ಅಕ್ಕ. ಸಿದ್ದಾಪುರದ ದೊಡ್ಮನೆ ಹೆಗಡೆ ಅವರ ಮಗಳು. ಮಹಾದೇವಿ ಅವರಿಗೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಆಕೆಯ ಗಂಡ ತೀರಿಹೋಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಆಕೆಯ ತಲೆಯ ಕೇಶ ಮುಂಡನ ಮಾಡಿಸಲಾಗಿತ್ತು. ಇದನ್ನು ಸಿದ್ದಾಪುರಕ್ಕೆ ಗಾಂಧೀಜಿ ಬಂದಾಗ ಗಮನಿಸಿದರು. ಮಹಾದೇವಿ ಅವರ ತಂದೆಯ  ಜೊತೆ ಗಾಂಧೀಜಿ ಮಾತನಾಡಿದರು. ಕೇಶ ಮುಂಡನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದು ಸಂಪ್ರದಾಯ ಎಂದು ಮಹಾದೇವಿ ತಂದೆ ಪ್ರತಿಕ್ರಿಯಿಸಿದಾಗ `ನಿಮ್ಮ ಮಗಳಿಂದಲೇ ಕೇಶ ಮುಂಡನಾ ಪದ್ಧತಿ ನಿಲ್ಲಲಿ.  ಹೊಸ ಪದ್ಧತಿ ಆರಂಭವಾಗಲಿ. ಏಕೆ ಆಗಬಾರದು? ಎಂದು ಗಾಂಧೀಜಿ ಮರು ಪ್ರಶ್ನಿಸಿದರು. `ವರ್ದಾ ಆಶ್ರಮಕ್ಕೆ ತೆರಳಲು ಆಕೆ ಇಚ್ಚೆಸುತ್ತಾಳೆ. ನಿಮ್ಮ ಅನುಮತಿ ಇದೆಯೇ’ ಎಂದು ಗಾಂಧೀಜಿ ಮತ್ತೆ ಪ್ರಶ್ನಿಸಿದರು. `ಅವಳು ಪ್ರಬುದ್ಧಳು. ಮನಸ್ಸಿಗೆ ಬಂದಲ್ಲಿ ಹೋಗಲು ಸ್ವತಂತ್ರಳು’ ಎಂದರು ದೊಡ್ಮನೆ ಹೆಗಡೆ. ಹೀಗೆ ಗಾಂಧಿಜೀ ಉತ್ತರ ಕನ್ನಡ ಪ್ರವಾಸ ಮೂರು ಮುಖ್ಯ ಸಂದೇಶಗಳನ್ನು ನೀಡಿತ್ತು. ಅವು ಈಗಲೂ ನಮಗೆ , ಸಮಾಜಕ್ಕೆ ದಾರಿ ದೀಪವಾಗಿವೆ ಎಂಬುದನ್ನು ಮರೆಯಲಾಗದು. ……….. ಮಹಾತ್ಮಾ ಗಾಂಧಿಜೀ ಅವರ ೧೫೧ ನೇ ಜನ್ಮದಿನ ವಾರ್ಷಾಚರಣೆಯ ಈ ಸಂದರ್ಭದಲ್ಲಿ ದೇಶ ಅವರನ್ನು ಈಗ ಸ್ಮರಿಸುತ್ತಿದೆ. ರಾಷ್ಟ್ರಪಿತನನ್ನು  ಪುನಃ ಪುನಃ ಸ್ಮರಿಸಿಕೊಳ್ಳುತ್ತಿದೆ. ಗ್ರಾಮೀಣ ಭಾರತದ ಪುನಶ್ಚೇತನಕ್ಕೆ ಗಾಂಧಿಜೀ ಕೆಲ ಸಿದ್ಧ ಸರಳ ಮಾದರಿಗಳನ್ನು ಬಿಟ್ಟುಹೋಗಿದ್ದರು. ಸರಳತೆ ಮತ್ತು ಕೃಷಿ ಆಧಾರಿತ ಬದುಕು ಗ್ರಾಮೀಣ ಭಾರತವನ್ನು ಪುನಃ ಕಟ್ಟಬಲ್ಲದು ಎಂಬುದು ಗಾಂಧಿಜೀ ಆಶಯವಾಗಿತ್ತು. ಗ್ರಾಮೀಣ ಗುಡಿಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು, ಯಂತ್ರಗಳ ನೆರವಿನಿಂದ ಸಾಧ್ಯವಾದಷ್ಟು ದೂರ ಇರುವುದು ಗಾಂಧಿಜೀ ತಿಳಿ ಹೇಳಿದ ಸರಳ ಸಂಗತಿಗಳು. ಸತ್ಯ, ಅಹಿಂಸೆ, ಸಹನೆ ಮಾರ್ಗ ಗಾಂಧಿಜೀ ನಡೆ ನುಡಿಯಲ್ಲೇ ಇತ್ತು. ಅದಕ್ಕಾಗಿ ಗಾಂಧಿ ಹೇಳಿದ್ದು ನನ್ನ ಜೀವನವೇ ನನ್ನ ಸಂದೇಶ ಎಂದು. ತುಂಬಾ ಪ್ರಯೋಗಶೀಲರಾಗಿದ್ದ ಗಾಂಧಿಜೀ ಜೀವನದುದ್ದಕ್ಕೂ ಅಧಿಕಾರ ದಿಂದ ದೂರ ಉಳಿದರು. ಆದರೆ ಅಧಿಕಾರ ಕೇಂದ್ರವನ್ನು ನಿರ್ದೇಶಿಸಿದರು.ತ ಬ್ರಿಟಿಷರನ್ನು ಗಾಂಧಿ ಬದಲಿಸಿದರು, ಮನವೊಲಿಸಿದರು, ಅವರಿಂದ ಸ್ವಾತಂತ್ರ್ಯವನ್ನು ಪಡೆದರು ಎಂಬುದು ಸ್ಮರಣಿಯ. ..************************************ ನಾಗರಾಜ ಹರಪನಹಳ್ಳಿ.

ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು…. Read Post »

ಕಾವ್ಯಯಾನ

ಅಸಹನೆ

ಕವಿತೆ ಅಸಹನೆ ಭಾಗ್ಯ ಸಿ. ಯಾರೊಂದಿಗೆ ಅಸಹನೆ ಏತಕ್ಕಾಗಿಬೂದಿ ಮುಚ್ಚಿದ ಕೆಡದಂತೆ ಕೋಪಸ್ಥಾನಪಲ್ಲಟವಾಗಿವೆ ಜಡ ವಸ್ತುಗಳುಮನಸ್ಸಿನ ತುಂಬೆಲ್ಲ ಅಶಾಂತತೆಯ ಛಾಯೆ ಸಾಗುತ್ತಿರುವ ದಾರಿ‌ ಮುಟ್ಟುವುದೆಲ್ಲಿಗೆಪರಿಶ್ರಮವಿಲ್ಲದೆ ಯಶಸ್ಸಿನ ಬಯಕೆ ಏಕೆ?ಅಂಧರೇನಲ್ಲ ಬಿದ್ದರು ಮೇಲೆಳಬಹುದುಸ್ವಚ್ಛಂದವಾಗಬೇಕು ಜಿಗುಟುತನ ತೊರೆದು ಬಿರುಗಾಳಿ ಯಿಂದ ಅಸ್ತವ್ಯಸ್ತ ಜೀವನವಿವೇಚನೆಯಿಲ್ಲದ ಹುಚ್ಚು ನಿರ್ಧಾರವೈರುಧ್ಯಗಳ ನಡುವೆ ಋಣಾತ್ಮಕತೆಜಂಟಿ ಹೋರಾಟ, ಹೊರನಡೆ ಶೀಘ್ರದಲಿ ತಲೆಹರಟೆ ಪ್ರಕ್ರಿಯೆಗಳ ತೊರೆದುಭ್ರಮಾ ಲೋಕ ಬಿಟ್ಟು ವಾಸ್ತವದೆಡೆಗೆನಡೆ ತನ್ನ ಉಳಿವಿನ ಬೆಳಕಿನೆಡೆಗೆಅಸಹನೆ ತೊರೆದು ಮಿನುಗುವ ನಕ್ಷತ್ರವಾಗಿ **********************************************

ಅಸಹನೆ Read Post »

ಪುಸ್ತಕ ಸಂಗಾತಿ

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್:

ಪುಸ್ತಕ ಪರಿಚಯ ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್: ಒಂದು ಅವಲೋಕನ (ಅಂಕಿತ ಪುಸ್ತಕ, ಬೆಂಗಳೂರು: ೨೦೨೦; ಪು.೧೬೦  ಬೆಲೆ: ರೂ.೧೫೦/-) ಭಾರತೀಯ ಕಾನೂನುಗಳ – ಅದರಲ್ಲೂ ವಿಶೇಷವಾಗಿ ‘ಭಾರತೀಯ ದಂಡ ಸಂಹಿತೆ’ – ಕುರಿತು ಮಾತನಾಡುವಾಗ “ಮಹಿಳೆ” ಎನ್ನುವುದನ್ನು ಒತ್ತಿ ಹೇಳಬೇಕಾಗಿ ಬಂದಿರುವುದು ನಿಜಕ್ಕೂ ದುರದೃಷ್ಟಕರವಾದರೂ ಅದೊಂದು ನಿಷ್ಠುರ ಸಾಮಾಜಿಕ ಸತ್ಯ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ‘ಸರ್ವರ ಸಮಾನತೆ’ಯನ್ನು ನಮ್ಮ ಸಂವಿಧಾನ ಎತ್ತಿ ಹಿಡಿದಿದೆಯಾದರೂ ಅದೊಂದು ಅತೀ ಉದಾತ್ತ ಆಶಯವಾಗಿ ಮಾತ್ರ ಉಳಿದುಕೊಂಡಿದೆ; ವಾಸ್ತವದಲ್ಲಿ ಹಾಗಿಲ್ಲ ಎನ್ನುವುದಕ್ಕೆ ಯಾವ ದೊಡ್ಡ ಸಂಶೋಧನೆಯೂ ಬೇಕಾಗಿಲ್ಲ. ಪುರುಷ-ಪ್ರಧಾನ ಭಾರತೀಯ ಸಮಾಜದಲ್ಲಿ (ವಿಶ್ವದ ಎಲ್ಲೆಡೆಯೂ ಇದೊಂದು ಸಾಮಾಜಿಕ ಅಸಮತೋಲನದ ಅತ್ಯಂತ ಸಾಮಾನ್ಯ ಸಮಸ್ಯೆ – ತರ ತಮ ವ್ಯತ್ಯಾಸಗಳು ಇವೆ ಎನ್ನುವುದನ್ನು ಒಪ್ಪಿಕೊಂಡಾಗಲೂ!) ಮಹಿಳೆ ಲಿಂಗಾಧಾರಿತ ತಾರತಮ್ಯ ಹಾಗೂ ಅದರೊಂದಿಗೆ ಅನೂಚಾನವಾಗಿ ಬೆಸೆದುಕೊಂಡಿರುವ ಶೋಷಣೆಗೆ ತಲೆತಲಾಂತರಗಳಿಂದಲೂ  ಒಳಗಾಗುತ್ತಾಳೆ ಇದ್ದಾಳೆ. ಮಹಿಳೆಗೆ ನ್ಯಾಯ, ಸಾಮಾಜಿಕ ಭದ್ರತೆ ಹಾಗೂ ರಕ್ಷಣೆ   ಒದಗಿಸುವ ನಿಟ್ಟಿನಲ್ಲಿ ರಚಿಸಲ್ಪಟ್ಟ ಕಾನೂನುಗಳ ಮಾಹಿತಿ, ನಿರ್ವಚನ ಮತ್ತು ಅವುಗಳ ಮಿತಿಗಳನ್ನು ಈ ಪುಸ್ತಕ ಸಾಧಾರವಾಗಿ ಮಂಡಿಸುತ್ತದೆ. ಇಲ್ಲಿಯ ಭಾಷೆ ಕಾನೂನಿನ ಕ್ಲಿಷ್ಟತೆಯನ್ನು ನಿವಾರಿಸಿ ಅತ್ಯಂತ ಸರಳ ಹಾಗೂ ಸ್ಪಷ್ಟ ಮಾತುಗಳಲ್ಲಿ ವಿಷಯ ಮಂಡನೆ ಮಾಡುವುದರಿಂದ ಎಲ್ಲಾ ವರ್ಗದ ಓದುಗರಿಗೂ – ವಿಶೇಷತಃ ಸಾಮಾನ್ಯ ಮಹಿಳೆಯರಿಗೂ ಇದು “ನೀರಿಳಿಯದ ಗಂಟಲಲ್ಲಿ ಕಡುಬಂ ತುರುಕಿ”ದಂತಾಗದೆ ಇರುವುದು ಈ ಪುಸ್ತಕದ ಮೊದಲ ಹೆಗ್ಗಳಿಕೆ. ಈ ಪುಸ್ತಕದ ಅಧ್ಯಾಯಗಳ ಶೀರ್ಷಿಕೆಗಳೇ ಗಮನ ಸೆಳೆಯುವಂತಿವೆ: ಅಧ್ಯಾಯ ೧: ಮಹಿಳೆ ಮತ್ತು ವೈವಾಹಿಕ-ಕೌಟುಂಬಿಕ ವ್ಯವಸ್ಥೆ (ಪು.೧೮-೬೩) ಅಧ್ಯಾಯ ೨: ಮಹಿಳೆಯ ಮೇಲಾಗುವ ಲೈಂಗಿಕ ಅಪರಾಧಗಳು (ಪು.೬೪-೮೬) ಅಧ್ಯಾಯ ೩: ಮಹಿಳೆಯ ಘನತೆಗೆ ಕುಂದು ತರುವ ಅಪರಾಧಗಳು (ಪು.೮೭-೧೦೩) ಅಧ್ಯಾಯ ೪: ಮಹಿಳೆಯ ಹಕ್ಕುಗಳು (೧೦೪-೧೧೦) ಅಧ್ಯಾಯ ೫: ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಮಹಿಳೆಯರು (೧೧೧-೧೩೪) ಅಧ್ಯಾಯ ೬: ಉಪಸಂಹಾರವಿಲ್ಲದ ಕಥನ (ಪು.೧೩೫-೧೩೭)    ಸಿ.ಎನ್. ರಾಮಚಂದ್ರನ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿ, ತಮ್ಮ ವಿಸ್ತಾರವಾದ ಓದು, ಬರೆಹ, ಅಧ್ಯಯನಗಳಿಂದ   ಮಹತ್ವಪೂರ್ಣ ಒಳನೋಟಗಳನ್ನು ಕೊಡಬಲ್ಲ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಾಗಿ, ಉತ್ತಮ ಲೇಖಕರಾಗಿ, ಅನುವಾದಕರಾಗಿ ಖ್ಯಾತನಾಮರು. ಅವರು ಕಾನೂನಿಗೆ ಸಂಬಂಧಪಟ್ಟ ಈ ಪುಸ್ತಕ ಬರೆಯಲು ಕಾರಣ, ಪ್ರೇರಣೆ ಏನು ಎನ್ನುವುದು ಒಂದು ಕುತೂಹಲಕ್ಕೆ ಕಾರಣವಾಗಬಹುದಾಗಿದೆ. ಇದಕ್ಕೆ ಉತ್ತರ ಹೀಗಿದೆ: ಸಾಹಿತ್ಯ ಎಂದರೆ ಜೀವನ ಪ್ರೀತಿ, ಜೀವಪರ ನೀತಿ ಎಂದೇ ಅರ್ಥ ಅಲ್ಲವೇ? ಅಂದ ಮೇಲೆ ಜೀವನವನ್ನು ಸಹ್ಯವಾಗಿಸುವ, ಬದುಕನ್ನು ಕಟ್ಟಿಕೊಡುವ ಎಲ್ಲಾ ಕ್ರಿಯೆಗಳೂ ಅದರ ವ್ಯಾಪ್ತಿಯೊಳಗೆ ಸಹಜವಾಗಿ ಬರುತ್ತವೆ. ಜೊತೆಗೆ ಅವರ ಕಾನೂನು ಆಧ್ಯಯನದ ಪದವಿ ಕೂಡಾ ಈ ಪುಸ್ತಕಕ್ಕೊಂದು ಅಧಿಕೃತ ಮುದ್ರೆಯನ್ನೂ ಒತ್ತಿದೆ ಎಂಬುದೂ ಸತ್ಯ. ಪದ್ಮರಾಜ ದಂಡಾವತಿಯವರು ಪುಸ್ತಕಕ್ಕೆ ಬರೆದ ತಮ್ಮ ಮುನ್ನುಡಿಯಲ್ಲಿ ಇದನ್ನು ಸರಿಯಾಗಿಯೇ ಗುರುತಿಸಿದ್ದಾರೆ: “ಸಾಹಿತ್ಯಕ್ಕೂ, ಕಾನೂನಿಗೂ ಎಲ್ಲಿಯೋ ಒಂದು ಆಳವಾದ ಸಂಬಂಧ ಇರುವಂತೆ ಕಾಣುತ್ತದೆ ಮತ್ತು ಸಾಹಿತ್ಯ ಕೊಡುವ ತಿಳುವಳಿಕೆ ಕಾನೂನಿನ ತಪ್ಪುಗಳ ಜೊತೆಗೆ ಸದಾ ಸಂಘರ್ಷ ಮಾಡುತ್ತಾ ಇರುವಂತೆಯೂ ಕಾಣುತ್ತದೆ… ಈ ಸಂಘರ್ಷದ ಮುಂದುವರಿಕೆಯಾಗಿಯೇ ರಾಮಚಂದ್ರನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಅವರು ಕೇವಲ ಕಾನೂನಿನ ವಿದ್ಯಾರ್ಥಿಯಾಗಿದ್ದರೆ ಈ ಪುಸ್ತಕ ಈಗಿನ ಸ್ವರೂಪದಲ್ಲಿ ಇರುತ್ತಿರಲಿಲ್ಲ ಎಂದೂ ಧೈರ್ಯವಾಗಿ ಹೇಳಬಹುದು. ಅಂದರೆ ಪ್ರೊ. ಸಿ.ಎನ್.ಆರ್. ಅವರು ಸಾಹಿತ್ಯದ ವಿದ್ಯಾರ್ಥಿ ಎಂಬ ಕಾರಣಕ್ಕಾಗಿಯೇ ಈ ಪುಸ್ತಕದ ವಸ್ತು ಅವರನ್ನು ಹೆಚ್ಚು ಕಾಡಿದೆ ಎಂದೂ ನಾವು ಅರ್ಥೈಸಬಹುದು. ಏಕೆಂದರೆ ಸಾಹಿತ್ಯ ನಮಗೆ ಕಲಿಸುವುದು ಮನುಷ್ಯ ಪ್ರೀತಿಯನ್ನು ಮತ್ತು ಜೀವಪರತೆಯನ್ನು. ಬರೀ ಕಾನೂನಿನ ಜ್ಞಾನ ಇದನ್ನು ಕಲಿಸುವುದಿಲ್ಲ. ಶಾಸನ ರೂಪಿಸುವ ರಾಜಕಾರಣಿ ಸಾಹಿತ್ಯವನ್ನು ಓದಬೇಕಾದುದು ಈ ಕಾರಣಕ್ಕಾಗಿ, ಈ ಜೀವಪರತೆಯನ್ನು ಗಳಿಸಬೇಕಾದ ಅಗತ್ಯಕ್ಕಾಗಿ.”                             ಭಾರತೀಯ ದಂಡ ಸಂಹಿತೆ ಬ್ರಿಟಿಷರಿಂದ ನಮಗೆ ಬಂದ ಬಳುವಳಿ! ತಮ್ಮ ಸ್ವಾರ್ಥ-ಸಾಧನೆಗಾಗಿ ಇಲ್ಲಿ ಬಂದ ಬ್ರಿಟಿಷರು ಆಡಳಿತದ ಜೊತೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾನೂನುಗಳನ್ನು ರಚಿಸಿದ್ದು (ರೈಲ್ವೆ, ಪೋಸ್ಟಲ್ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಇತ್ಯಾದಿ) ಮತ್ತು ನಮಗೆ ಅವು ಇಂದಿಗೂ ಪ್ರಮಾಣಗಳಾಗಿ ಉಳಿದಿವೆಯೆಂದರೆ ಅದು ನಮ್ಮ ಆತ್ಮವಿಮರ್ಶೆಗೆ ಒಡ್ಡಿದ ಸವಾಲು ಎಂದೇ ಅರ್ಥವಲ್ಲವೇ? ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷಗಳಾದರೂ ಇಂದಿನ ಪರಿಸ್ಥಿತಿಗನುಗುಣವಾಗಿ ಈ ಕಾನೂನುಗಳ ಸಮಗ್ರ ಪರಿಷ್ಕರಣೆ ಆಗಬೇಕೆಂದು ಕಾನೂನು ಪಂಡಿತರಾದಿಯಾಗಿ ಪರಿಣಿತರೆಲ್ಲರೂ ಹೇಳುತ್ತಿದ್ದರೂ ಅದು ಈ ವರೆಗೂ ತೃಪ್ತಿಕರವಾಗಿ ಸಾಧ್ಯವಾಗಿಲ್ಲ ಎನ್ನುವುದು ಸತ್ಯ. ಈ ಕುರಿತು ಲೇಖಕರಿಗೂ ವಿಷಾದವಿದೆ. ನಮ್ಮ ಕೋರ್ಟು ಕಛೇರಿಗಳು ‘justice delayed is justice denied’ ಎನ್ನುವ ಮಾತಿಗೆ ಪುಷ್ಟೀಕರಣ ನೀಡುವ ತಾಣಗಳಾಗಿವೆ ಎಂಬುದಕ್ಕೆ ಬಾಕಿ ಉಳಿದಿರುವ ಖಟ್ಲೆಗಳ ಸಂಖ್ಯೆಯೇ ನಿರ್ವಿವಾದ ಪುರಾವೆ. ಒಂದು ಅಂದಾಜಿನ ಪ್ರಕಾರ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರಿಗೆ ತಾವು ಮಾಡಿದ ಅಪರಾಧವೇನು ಎಂಬುದೇ ಗೊತ್ತಿಲ್ಲ, ಜೊತೆಗೆ ಅವರಲ್ಲಿ ಹೆಚ್ಚಿನವರು ಅತ್ಯಂತ ಕೆಳವರ್ಗದ ಬಡಜನರು ಎನ್ನುವ ವಿಡಂಬನೆಯೂ ಇರುವುದು ಕಹಿ ಸತ್ಯ. ದೇಶದ ಅತೀ ದೊಡ್ಡ ಕಾರಾಗ್ರಹ ದೆಹಲಿಯ ತಿಹಾರ್ ಜೈಲು ಇದಕ್ಕೆ ಸಾಕ್ಷಿ. ಕಿರಣ್ ಬೇಡಿಯವರು ಇಲ್ಲಿನ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಅವರು ಕೈಗೊಂಡ ಸುಧಾರಣೆಗಳ ಹೊರತು ಬೇರೇನೂ ಇಂದಿಗೂ ಆಗಿಲ್ಲ. ನಮ್ಮಲ್ಲಿ ಕಾನೂನುಗಳ ಕೊರತೆಗಿಂತ ಇರುವ ಅಸಂಖ್ಯಾತ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದೇ ಅತೀ ದೊಡ್ಡ ಸಮಸ್ಯೆ. ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಏನೆಂದರೆ ಈ ಹಿನ್ನೆಲೆಯ ಅರಿವಿಲ್ಲದೇ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲಾಗಲಿ, ಅರ್ಥೈಸಿಕೊಳ್ಳಲಾಗಲಿ ಸಾಧ್ಯವಿಲ್ಲ. ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡ ನ್ಯಾಯದೇವತೆ justice without discrimination ಗೆ ಸಮರ್ಥ ರೂಪಕವಾಗಿದ್ದೂ –- ಮಹಾಭಾರತದ ಗಾಂಧಾರಿಯಂತೆ — ವಸ್ತುಸ್ಥಿತಿಗೂ ಅಷ್ಟೇ  ಕುರುಡಾಗಿರುವುದೂ ಒಂದು ವ್ಯಂಗ್ಯವಲ್ಲದೆ ಮತ್ತೇನು? ಮಹಿಳೆಯ ದುಸ್ಥಿತಿಗೆ ಎರಡು ಕಾರಣಗಳನ್ನು ಪ್ರೊ. ಸಿ.ಎನ್.ಆರ್. ನೀಡುತ್ತಾರೆ: “ಮೊದಲಿಗೆ ಮಹಿಳೆ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡಳು (ಕ್ರಿ.ಶ. ಮೂರನೆಯ ಶತಮಾನದಿಂದ); ನಂತರ, ಶಿಕ್ಷಣಾವಕಾಶಗಳಿಂದ ವಂಚಿತಳಾದಳು. ಪರಿಣಾಮತಃ ಸಮಾಜದಲ್ಲಿಯೂ ತನ್ನ ಸ್ಥಾನ-ಮಾನಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ಪರಾವಲಂಬಿಯಾದಳು.” ಇವೆರಡೂ ಸಾಧನಗಳಿದ್ದೂ ಮಹಿಳೆ ಸುರಕ್ಷಿತಳಲ್ಲ ಎನ್ನುವುದಕ್ಕೆ ‘ರೂಪನ್ ಬಜಾಜ್ – ಕೆ.ಪಿ.ಎಸ್. ಗಿಲ್ ಪ್ರಕರಣ’ (ಪು.೯೦) ಮತ್ತು ‘ರೀನಾ ಮುಖರ್ಜಿ – ಸ್ಟೇಟ್ಸ್ ಮನ್ ಪತ್ರಿಕಾ ಸಂಸ್ಥೆ’ (ಪು.೦೩-೯೫) ಕೇಸ್-ಗಳೇ ಸಾಕ್ಷಿ. ಹಾಗಿದ್ದರೆ ಇದಕ್ಕೆ ಆತ್ಯಂತಿಕವಾದ ಕಾರಣವೇನೆಂದು ಹುಡುಕಿದರೆ ಅದು ಆಕೆ ‘ಮಹಿಳೆ’ಯಾಗಿರುವುದೇ, ಅಂದರೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಲೈಂಗಿಕತೆ – sexually desirable, and vulnerable too – ಭೋಗವಸ್ತು’ವಾಗಿ  ಎಂಬ ಸಾರ್ವಕಾಲಿಕ ಸತ್ಯ ಮುಖಕ್ಕೆ ರಾಚುವಂತೆ ಎದ್ದು ಕಾಣುತ್ತದೆ. ಇದು ಎಲ್ಲಾ ಕಾಲಕ್ಕೂ, ಎಲ್ಲಾ ಸಮಾಜಗಳಲ್ಲಿಯೂ ಇದ್ದಂತಹ, ಇರುವಂತಹ ಸಮಸ್ಯೆ. ಹಾಗಿದ್ದಾಗಲೂ ಕೂಡಾ ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಡುವ, ಜೊತೆಗೆ ಅವರಿಗೆ ರಕ್ಷಣೆ ಕೊಡುವ ಕೆಲಸ ಜೊತೆ ಜೊತೆಯಾಗಿ ಸಾಮಾಜಿಕ-ನೈತಿಕ-ಕಾನೂನಾತ್ಮಕ ನೆಲೆಗಳಲ್ಲಿ ಸಾಗಬೇಕಾದ ಅನಿವಾರ್ಯತೆ ಎಲ್ಲಾ ನಾಗರೀಕ ಸಮಾಜದ ಜವಾಬ್ದಾರಿ ಎನ್ನುವುದನ್ನು ಮರೆಯಲಾಗದು. ಈ ನಿಟ್ಟಿನಲ್ಲಿ ರಚಿತವಾಗಿರುವ ಕಾನೂನುಗಳ ಪರಿಚಯ ಹಾಗೂ ಜ್ಞಾನ ಎಲ್ಲರಿಗೂ ಇರಬೇಕಾದ ಆವಶ್ಯಕತೆ ಇದೆ. ಹಾಗಾಗಿ ಈ ಪುಸ್ತಕದ ಪ್ರಸ್ತುತತೆ, ಮೌಲಿಕತೆ ಪ್ರಶ್ನಾತೀತ.  ಯಾಕೆಂದರೆ ignorance of law is not an excuse to violate law nor it is a license to commit any crime! ಕಾನೂನಿನ ಕುರಿತು ಅಜ್ಞಾನಿಯಾಗಿರುವುದು ಅಪಾಯಕ್ಕೆ ಆಹ್ವಾನವಿತ್ತಂತೇ ಸರಿ. ‘ಸೆಕ್ಷನ್ ೪೯೪ ಮತ್ತು ೪೯೮ ಎ’ – ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾನೂನುಗಳ ಉಪಯುಕ್ತತೆ ಹಾಗೂ ವ್ಯತಿರಿಕ್ತ ಪರಿಣಾಮಗಳ ಕುರಿತು ಸಾಕಷ್ಟು ಉದಾಹರಣೆಗಳ ಮೂಲಕ ವಿವರಿಸುತ್ತಾ ಸಿ.ಎನ್.ಆರ್. ಅವರು ಹೇಳುವ ಈ ಮಾತು ಮಾರ್ಮಿಕವಾಗಿದೆ: “ಈ ಜಗತ್ತಿನಲ್ಲಿ ಲೈಂಗಿಕ ಕಾಮದಂತೆಯೇ ಅರ್ಥ ಕಾಮವೂ ಕೂಡಾ ಎಂದಿಗೂ ಶಮನವಾಗದ ವ್ಯಸನವೆಂದು ಕಾಣುತ್ತದೆ.” ಲೈಂಗಿಕತೆ ಜೀವಿಯ ಆದಿಮ ಪ್ರವೃತ್ತಿಯಾಗಿಯೂ ಗುರುತಿಸಲ್ಪಟ್ಟಿದೆ ತಾನೇ? “ಆಹಾರ, ನಿದ್ರಾ, ಭಯ, ಮೈಥುನಂಚ ಸಾಮಾನ್ಯಮೇತತ್ ಪಶುಭಿಃ ನರಣಾಮ್ | ಧರ್ಮೋಹಿ ತೇಷಾಂ ಅಧಿಕೊ ವಿಶೇಷಃ ಧರ್ಮೇಣ ಹೀನಃ ಪಶುಭಿಃ ಸಮಾನಃ||” ಸಕಲ ಚರ ಜೀವಿಗಳಿಗೆ ಅನ್ವಯವಾಗುವ ‘ಪ್ರಕೃತಿ ಧರ್ಮ ಚತುಷ್ಟಯ’ಗಳೆಂದರೆ ಆಹಾರ, ನಿದ್ರಾ, ಭಯ, ಮತ್ತು ಮೈಥುನ. ಹಾಗಾದರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಪ್ರತ್ಯೇಕವಾಗಿಸುವಂಥದ್ದು ಏನು? ಅದೇ ಧರ್ಮ = ವಿವೇಕ = ಸರಿ, ತಪ್ಪುಗಳ ವಿವೇಚನೆ; ಅದೊಂದಿಲ್ಲದಿದ್ದರೆ ಮನುಷ್ಯನೂ ಪಶುವೇ ಸರಿ.’ ಯಾವಾಗ ಮನುಷ್ಯ ವಿವೇಚನಾರಹಿತನಾಗುತ್ತಾನೋ ಆಗೆಲ್ಲಾ ಅವನನ್ನು ಕಾನೂನಿನ ಅಂಕುಶದಿಂದ ನಿಯಂತ್ರಿಸುವ ಕೆಲಸ ಆಗಬೇಕಾದದ್ದೇ.  ‘ಸೆಕ್ಷನ್ ೪೯೮ ಎ’ ಅಡಿಯಲ್ಲಿ ಮಹಿಳೆಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ನಡೆದು “ಗಂಡನನ್ನು ಹಾಗೂ ಗಂಡನ ಮನೆಯಲ್ಲಿರುವ ಅವನ ತಂದೆ, ತಾಯಿ, ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು ಎಲ್ಲರನ್ನೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಅವರ ಮೇಲೆ ಸುಳ್ಳು ದೂರು ಕೊಟ್ಟು ಅವರೆಲ್ಲರನ್ನೂ ಜೈಲಿಗೆ ಅಟ್ಟುವ ಘಟನೆಗಳು ಮರುಕಳಿಸಲಾರಂಭಿಸಿದುವು.” (ಪು.೪೩). ಇದು ಸತ್ಯಸ್ಯ ಸತ್ಯ. ಹೆಚ್ಚನ ವಿವರಗಳಿಗೆ ‘ನಿಶಾ ಶರ್ಮ ಮೊಕದ್ದಮೆ’ (ಪು.೪೩-೪೬) ಮತ್ತು ‘ಅರ್ಣೆಶ್ ಕುಮಾರ್ ವರ್ಸಸ್ ಸ್ಟೇಟ್ ಆಫ್ ಬಿಹಾರ್’ ಮತ್ತು ‘ರಾಜೇಶ್ ಶರ್ಮಾ ಮೊಕದ್ದಮೆ’ (ಪು.೪೬-೪೯) ನೋಡಿ.  ಆದರೆ ಈ ‘ಆತಿರೇಕ’ವನ್ನು ಶತಮಾನಗಳಿಂದ ಶೋಷಣೆಗೆ ಪರ್ಯಾಯ ಹೆಸರೇ ಆದ ‘ಮಹಿಳೆ’ ತನ್ನಲ್ಲಿ ಅಂತಸ್ಥವಾಗಿದ್ದ, ಮಡುಗಟ್ಟಿದ್ದ ನೋವನ್ನು ಹೊರಹಾಕಿದ ಒಂದು ಸಾಮಾಜಿಕ ಸಂಕಥನವಾಗಿ (ವೃಥಾ ಶೋಷಿತರನ್ನು ಹೊರತುಪಡಿಸಿ) ನೋಡಿದರೆ ಆ ನೋವಿನ ಆಳ, ಅಗಲ, ವಿಸ್ತಾರ ಮನವರಿಕೆಯಾದೀತು! ಇದು ಮಹಿಳೆಯರ ಅತಿರೇಕ ವರ್ತನೆಗೆ ಸಮಜಾಯಿಷಿಕೆ ಅಲ್ಲ ಎನ್ನುವುದನ್ನು ಒತ್ತಿ ಹೇಳುತ್ತಿದ್ದೇನೆ. ಇದನ್ನು ಸಿ.ಎನ್.ಆರ್. ಅವರು ಗುರುತಿಸುವುದು ಹೀಗೆ: “ಯಾವುದೇ ಅವಕಾಶವಾಗಲಿ ಕಾನೂನು ಆಗಲಿ ಅದರ ಉದ್ದೇಶವನ್ನು ಮರೆತು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಮನುಷ್ಯ ಸ್ವಭಾವ. ಈ ಹೇಳಿಕೆ ಸ್ತ್ರೀ-ಪರ ಕಾನೂನುಗಳಿಗೂ – ವಿಶೇಷವಾಗಿ ೪೯೮-ಎ ಸೆಕ್ಷನ್ ಗೆ – ಅನ್ವಯಿಸುತ್ತದೆ. (ಪು.೪೩)” ಅಂತೆಯೇ “ಮಹಿಳೆಯನ್ನು ನೋಡುವ, ಸ್ವೀಕರಿಸುವ ಸ್ತ್ರೀ-ಪುರುಷರ ಮನೋಭಾವ ಬದಲಾಗದಿದ್ದರೆ ಯಾವ ಕಾನೂನೂ ಅಥವಾ ಯೋಜನೆಯೂ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ ಎಂಬ ಖೇದಕರ ಸತ್ಯ ಸ್ಪಷ್ಟವಾಗುತ್ತದೆ. (ಪು.೫೪)”. ಈ ಒಳನೋಟಗಳು ಕೇವಲ ಶುಷ್ಕ ಕಾನೂನು ಪಾಂಡಿತ್ಯದಿಂದ ಸಾಧಿತವಾಗಲಾರದು; ಅದು ಸಾಹಿತ್ಯಮೂಲದ ಸಂವೇದನೆ – ಮನುಷ್ಯ ಸ್ವಭಾವಕ್ಕೊಂದು ಭಾಷ್ಯ ಎನ್ನುವುದೇ ಸರಿಯಾದ ಮಾತು. ಮಹಿಳೆಯ ಮೇಲೆ ನಡೆಯುವ ಅತ್ಯಂತ ಹೀನಾಯ, ಹೇಯ, ಅಮಾನವೀಯ, ಬರ್ಬರ ಕೃತ್ಯವೆಂದರೆ ಅತ್ಯಾಚಾರ. ನಮ್ಮ ನ್ಯಾಯಿಕ ವ್ಯವಸ್ಥೆ ಸಾಕ್ಯಾಧಾರಿತವಾದದ್ದು – evidence-based. ಇದೊಂದೇ ಕಾರಣಕ್ಕೆ, ಅಂದರೆ ಸಾಕ್ಷಿಯ ಕೊರತೆಯಿಂದ  ಅತ್ಯಾಚಾರದ ಕೇಸುಗಳು ಹೆಚ್ಚಿನ ಸಂದರ್ಭಗಳಲ್ಲಿ ಬಿದ್ದು ಹೋಗುತ್ತವೆ. ಈ ಕೇಸುಗಳ ವಿಚಾರಣಾ ವಿಧಾನ, ವೈದ್ಯಕೀಯ ಪರೀಕ್ಷಾ ವಿಧಾನ (ಈಗ ನಿಷೇಧಿಸಲ್ಪಟ್ಟ ಕುಖ್ಯಾತ  two finger-test) ಎಲ್ಲವೂ ಆ ದುರ್ಘಟನೆಯನ್ನು ಮತ್ತೆ ಮತ್ತೆ ಮಾನಸಿಕವಾಗಿ ಪುನರಾವರ್ತಿಸುತ್ತ, ಮಹಿಳೆಯ ಆತ್ಮಾಭಿಮಾನವನ್ನೇ ನಾಶಮಾಡುತ್ತವೆ. ಕಾನೂನಿಗೆ ಆದ ಹಲವು ತಿದ್ದುಪಡಿಗಳಲ್ಲಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ನನಗೆ ಮಹತ್ವದ್ದೆಂದು ಕಂಡು ಬಂದದ್ದು ಇದು: ಸಾಕ್ಷ್ಯ ಶಾಸನ, ಸೆಕ್ಷನ್

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್: Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಶ್ರೀದೇವಿ ಕೆರೆಮನೆ ನೀನು ಮತ್ತೆ ಬರುವುದಿಲ್ಲವೆಂದು ಬುದ್ಧಿಗೆ ಅರ್ಥವಾಗಿದೆಹಾಳಾದ ಮನಸ್ಸು ಇನ್ನೂ ನಿನಗಾಗಿ ಕಾತರಿಸುತ್ತಿದೆ ಹೀಗೆ ಬಂದು ಹಾಗೆ ಹೋಗಲು ನಾನೇಕೆ ಬೇಕಿತ್ತು ಹೇಳುನನ್ನ ಮನೆಯಂಗಳದ ಮಲ್ಲಿಗೆ ನಿನಗೀಗ ಮರೆತು ಹೋಗಿದೆ ಅಗಲುವ ಮಾತಾಡಿದ್ದು ಇಂದು, ನಿರ್ಧಾರ ಎಂದಾಗಿತ್ತು?ಮಾಮರದ ಕೋಗಿಲೆಯೇಕೆ ಹೀಗೆ ಕರ್ಕಶವಾಗಿ ಅಳುತಿದೆ ಕೊನೆಯ ಕ್ಷಣದವರೆಗೂ ಗುಟ್ಟು ಬಿಡದ ಮಹಾ ಚತುರ ನೀನುನೆತ್ತರಿಲ್ಲದೇ ಇರಿಯುವುದನು ನಿನ್ನಿಂದ ಕಲಿಯಬೇಕಿದೆ ನಾಟಕದ ಮಂದಿರದಲ್ಲೀಗ ಕಣ್ಣು ಕುಕ್ಕುವ ಬೆಳಕಿಲ್ಲಮನಸನು ಬಲಿ‌ಪಡೆದ ಪ್ರಹಸನವು ಜಗಜ್ಜಾಹೀರಾಗಿದೆ ನಿನ್ನವಳೆಂಬ ಹೆಮ್ಮೆ ಎದೆಯೊಳಗೆ ಮೊರೆದು ನೆತ್ತಿಗೇರಿತ್ತುಸುರೆಗೂ ಮಿಗಿಲಾಗಿ ಆವರಿಸಿದ ಯೌವನದ ನಶೆ ಇಳಿದಿದೆ ಸದಾ ಜೊತೆಗಿದ್ದ ಗೆಲುವಿಗು ನಾನೆಂದರೀಗ ತಿರಸ್ಕಾರಎಂದು ಬತ್ತದ ಉಕ್ಕುವ ಸೆಲೆಯಂತಹ ತುಟಿಯ ನಗು ಮಾಸಿದೆ ಶ್ರೀ, ಎರಡು ದಿನ ನಿನ್ನ ಹೆಸರಿನ ಸೆರಗಿನಲ್ಲಿ ಮೆರೆದಾಡಿದೆಮೇಲಕ್ಕೇರಿ ಕೆಳಗಿಳಿದ ಮೇಲೀಗ ಬದುಕು ಸಾಕೆನಿಸಿದೆ ***************************************************************

ಗಝಲ್ Read Post »

ಇತರೆ, ಜೀವನ

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಲೇಖನ ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕೆ.ಶಿವು ಲಕ್ಕಣ್ಣವರ ಹಿಂದಿ ಹೇರಿಕೆಯು ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು; ಹಿಂದಿ ಹೇರಿಕೆಯ ವಿರುದ್ಧ ರಾಜ್ಯ ನಾಯಕರು ಕೆಂಡಾಮಂಡಲವಾಗಿದ್ದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ  ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ಮತ್ತೇ ದಕ್ಷಿಣ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲೂ ಸಹ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಹಾಗಾದರೆ ಏನಿದು ತ್ರಿಭಾಷಾ ನೀತಿ? ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?..?– ಏನಿದು ತ್ರಿಭಾಷಾ ಸೂತ್ರ?— ಬಹುಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986 ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಇದರಂತೆಯೇ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್​ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ  ಕಲಿಸುವುದು ಈ ನೀತಿಯ ಉದ್ದೇಶವಾಗಿತ್ತು. ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ ಒಂದು ಭಾಷೆ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂಗಾಗುತ್ತದೆ. ಇದರಿಂದ ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಸ್ವತಂತ್ರ್ಯ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು. ಕೊನೆಗೆ ಕೇಂದ್ರದ ನೀತಿಗೆ ಬೆನ್ನು ತೋರಿಸಿದ್ದ ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಮಾತ್ರ ಅನುಸರಿಸುತ್ತಿದೆ. ತಮಿಳುನಾಡಿನಲ್ಲಿ ಕಳೆದ 6 ದಶಕದಿಂದ ಹಿಂದಿ ಕಲಿಕೆ ಕಡ್ಡಾಯವಲ್ಲ. ಇದರಂತೆ ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡನ್ನು ಗುರಿಯಾಗಿಸಿಕೊಂಡು ಮತ್ತೇ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಕೇಂದ್ರದ ಈ ನೀತಿಗೆ ಇದೀಗ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ದಕ್ಷಿಣ ರಾಜ್ಯಗಳು ಒಮ್ಮೆಲೆ ತಿರುಗಿಬಿದ್ದಿವೆ. ರಾಜ್ಯದ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ..! ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ರಾಜ್ಯ ನಾಯಕರು ಇದನ್ನು ಸಾರಾಸಗಟಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದಿದ್ದರು. ಕುಮಾರಸ್ವಾಮಿ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದೀಗ ಬಹುತೇಕ ರಾಜ್ಯದ ಎಲ್ಲಾ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಕೂಗೆತ್ತಿದ್ದಾರೆ. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಗುಡುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಮಾಡಿದ್ದಾರೆ ಅವರು. ಮತ್ತೊಂದು ಟ್ವೀಟ್​ನಲ್ಲಿ, ‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿದೆ. ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ‘ಕೇಂದ್ರ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ನಾವೇನಾದರೂ ಹಿಂದೆ ಭಾಷೆಬೇಕೆಂದು ಕೇಳಿದ್ದೇವೆಯೇ? ಕೇಂದ್ರ‌ ಇದಕ್ಕೆ‌ ನೀತಿ ಜಾರಿಗೆ ತರುತ್ತಿರುವುದು ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯಾಗಿದೆ. ನೆಲ‌, ಜಲ‌, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲೂ ಸಿದ್ಧ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಅವರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು, ‘ಕೇಂದ್ರ ಸರ್ಕಾರದ ಈ ನೀತಿ ರಾಜ್ಯಗಳ ಸಂವೇದನೆ ಹಾಗೂ ಉತ್ತಮ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ, ಈ ಭಾಷಾ ನೀತಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ಮೇಲಿನ ಯಾವುದೇ ಭಾಷಾ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರದಲ್ಲಿ ಹೊಸ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಮತ್ತೇ ಅಧಿಕಾರ ಹಿಡಿದ ಕೇವಲ ಮೂರು ದಿನಗಳಲ್ಲಿ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗಲು ದಕ್ಷಿಣ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಪ್ರಬಲವಾಗಿ ವಿರೋಧಿಸಿತ್ತು. ಇದೀಗ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸಹ ಒಟ್ಟಾಗಿ ಕೇಂದ್ರದ ವಿರುದ್ಧ ಹಿಂದಿ ಹೇರಿಕೆ ವಿರೋಧದ ಹೋರಾಟಕ್ಕೆ ದನಿಗೂಡಿಸಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಚಳುವಳಿಯಾಗಿ ರೂಪಗೊಂಡರೂ ಅಚ್ಚರಿ ಇಲ್ಲ. ಹೀಗಿರುವಾಗ ಹಿಂದಿ ಹೇರಿಕೆಯನ್ನು ಕೈಬಿಟ್ಟರೇ ಒಳಿತು..! *****************************************************************

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! Read Post »

ಕಾವ್ಯಯಾನ

ಸಿಂ(ಹ)ಪತಿ

ಕವಿತೆ ಸಿಂ(ಹ)ಪತಿ ವಿಶಾಲಾ ಆರಾಧ್ಯ ಮನದ ಮೆಟ್ಟಿಲುಗಳನೀ ಒಂದೊಂದಾಗಿಎಷ್ಟೇ ಬಾರಿ ಇಳಿದುಹೋದರೇನು ಗೆಳೆಯ ?ಮತ್ತೆ ಮತ್ತೆ ನೀ ಕೂರುವೆಬಂದು ಅಧಿಪತಿಯಾಗಿ …// ಒಡಲ ಕಣದಲಿನೀ ಅಂಗಾಂಗುಲವೂಎಷ್ಟೇ ಗಾಯಗೊಳಿಸಿಕೊರಗಿಸಿದರೇನು ಗೆಳೆಯ ?ಮತ್ತೆ ಮತ್ತೆ ನೀನೇ ಬರುವೆನನ್ನ ಭೂಪತಿಯಾಗಿ…// ಮೋಹಕ ನೋಟದಕಣ್ಣ ಕಂಬನಿಗೆನೀ ಕಾರಣವಾಗಿಎಷ್ಟೇ ಕಾಡಿದರೇನು ಗೆಳೆಯ ?ಆ ಕಣ್ಣ ಕನಸಲಿಮತ್ತೆ ಮತ್ತೆ ನೀನೇ ಬರುವೆನನ್ನ ಪತಿಯಾಗಿ…!!ಅದಕ್ಕೆ ನಾವಾಗಿರುವೆವುದಂಪತಿಯಾಗಿ …// ***************************

ಸಿಂ(ಹ)ಪತಿ Read Post »

ಕಾವ್ಯಯಾನ

ಒಂದು ಸಾಂದರ್ಭಿಕ ಚಿತ್ರ

ಕವಿತೆ ಒಂದು ಸಾಂದರ್ಭಿಕ ಚಿತ್ರ ಬಸವರಾಜ ಹೂಗಾರ ಕರಿಕಲ್ಲಿನ ಮೇಲೆಚಂದದ ನಾಮಫಲಕಚಿಕ್ಕ ಗೇಟುಎರಡು ಕುರ್ಚಿ ಹಾಕುವಷ್ಟೇ ವರಾಂಡಇಣುಕಿ ನೋಡಿದರೆದೊಡ್ಡ ಪಡಸಾಲೆಎರಡು ಕೋಣೆಗಳ ಮಧ್ಯೆಅಂಗೈಯಗಲದ ದೇವರಮನೆ.ಬಾಡಿಗೆ ಮನೆಯಲಿಇದ್ದೂ ಇದ್ದೂ ಸಾಕಾಗಿಸಾಕಿಷ್ಟು ನಮಗೆಎನ್ನುವಷ್ಟಿತ್ತು ಮನೆ. ರಸ್ತೆಯಲ್ಲಿ ಹೋಗುವಾಗಆ ಮನೆ ಈ ಮನೆಬಣ್ಣ ಬಣ್ಣದ ಮನೆಗಳನೂರು ನೋಟ ಆಸೆ ಕನಸುಗಳಗಿಲಕಿ ಹಳವಂಡಎಚ್ಚರಾದವನಿಗೆ ಲೋಕ ಸುಂದರ. ಎಲ್ಲ ಮನೆಗಳೂ ಚಂದಕಂಡವರ ಮನೆ ಸಿಟೌಟಿನಲಿಪೇಪರ್ ಓದುವವನು ನಾನೊಬ್ಬನೆ !ಹತ್ತುವಾಗ ಇಳಿಯುವಾಗಹೆಚ್ಚು ಕಂಡದ್ದು ಈ ಚಿಕ್ಕ ಮನೆಗಂಡ ವ್ಯಾಪಾರಿ ಹೆಂಡತಿ ಸಂಸಾರಿಕಂಪೌಂಡಿನಂಗಳದಲಿಗೆಜ್ಜೆ ಗಿಲಕಿಯ ಹೆಜ್ಜೆವೂರುವ ಮಗು. ಈ ಊರಲ್ಲೇ ಇದ್ದುಬಿಡಿತೆಗೆದುಕೊಳ್ಳಿ ಮನೆ ಇಲ್ಲ ಕಟ್ಟಿಸಿಸೈಟಾದರೂ ಇರಲಿದಿನಕ್ಕಿಷ್ಟು ಹಿತಚಿಂತಕರಮಾತಿನ ಏಣಿಗೆಹತ್ತವವನಿಗಿರಬೇಕು ‌ತಾಕತ್ತು. ರೂಮು ಖಾಲಿ ಮಾಡಿದೆ ಒಂದು ದಿನದಾಟಿ ತಿರುವಿನಲಿ ಹೊರಟೆಎದುರಿಗೆ ಬಂದಳು ಕೆಲಸದಾಕೆಮಾರುತ್ತಾರಂತೆ ಆ ಮನೆಕೇಳಿದೆನು ಸುಮ್ಮನೆ ಎಷ್ಟಂತೆ?ಕೋಟಿ ಒಂದೂವರೆಯಂತೆ. ತಿರುತಿರುಗಿ ಅದೇ ಕನಸುಅಲ್ಲಿದ್ದೆ ನಾನು ಅದೇ ಮನೆಯಲ್ಲಿ !ರಸ್ತೆಯಲಿ ರವಿವಾರ ಹೊರಟಿದ್ದೆಮನೆ ಮುಂದೆಅರೆ !ಒಡೆದು ಹಾಕಿದ್ದಾರೆ ಇಡೀ ಮನೆಖಾಲಿ ಸೈಟಿನಲ್ಲಿ ಬಿದ್ದಕೆಂಪು ಕಲ್ಲಿನ ಚೂರುಗಳುಒಡೆದವರಿಬ್ಬರ ಕೇಳಿದೆಯಾಕೆ ಒಡೆಯಲಾಯಿತು ಮನೆ ?ಒಡೆಯುವುದಷ್ಟೇ ನಮ್ಮ ಕೆಲಸಒಡೆ ಎಂದರು ಒಡೆದೆವು. ಒಡೆಯುವವರು ಕೂಲಿಯಾಳುಗಳುಒಡಿಸುವವರ ಅಂಗೈ ರಕುತದಲಿಎಷ್ಟು ಮನೆಗಳು ಕರಗಿದವೋಒಡೆಯುತ್ತಲೇ ಇದ್ದಾರೆ ಇನ್ನೂ…. ********************************************

ಒಂದು ಸಾಂದರ್ಭಿಕ ಚಿತ್ರ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಶ್ರೀಮಂತ ಅನುಭವಗಳ ಸಹಜ ಒಡಂಬಡಿಕೆ ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಇರುವ ಕಾರಣ ರಾಧಾ, ನೃತ್ಯಗಾಥಾ, ಮಕ್ಕಳ ರವೀಂದ್ರ, ನಾರಸಿಂಹ, ಮಕ್ಕಳ ರಾಮಾಯಣ, ಕನಕ-ಕೃಷ್ಣ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ರವೀಂದ್ರ ನಾಥ ಟ್ಯಾಗೋರರ ಚಿತ್ರಾ, ಕೆಂಪುಕಣಗಿಲೆ, ಅವಳ ಕಾಗದ ಮೊದಲಾದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹ ಜಿ.ಎನ್ ಮೋಹನ್ ಸಾರಥ್ಯದ “ಅವಧಿ” ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅದನ್ನು ನಂತರ “ಬಹುರೂಪಿ” ಪ್ರಕಟಿಸಿತು. ಸಾಹಿತ್ಯ ಪರಿಷತ್ತಿನ  ಈ ವರ್ಷದ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಯಿತು. ಶ್ರೀಮತಿ ಸುಧಾ ಬರಿಯ ರಂಗ ತಜ್ಞೆ, ಪುಸ್ತಕ ಪರಿಚಾರಿಕೆಯಲ್ಲದೆ ಸ್ವತಃ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆ ಕೂಡ ಅವರ ಬರಹಗಳ ಘಮಕ್ಕೆ ಇಂಬು ಕೊಟ್ಟಿದೆ. ಶಿಕ್ಷಕಿಯಾಗಿ ಮತ್ತು ರಂಗ ನಿರ್ಮಿತಿಯ ಮಿತಿ ಪರಿಮಿತಿಗಳ ಸಂಪೂರ್ಣ ಅರಿವು ಇರುವ ಕಾರಣ ಅವರ ಕವಿತೆಗಳಲ್ಲೂ ಹೆಚ್ಚು ಜನಪ್ರಿಯಗೊಳ್ಳುವ ಸೊಲ್ಲುಗಳು ಮತ್ತು ಇಮೇಜುಗಳು ತನ್ನಿಂತಾನೆ ರೂಪುಗೊಳ್ಳುತ್ತವೆ. ತೀರ ಸಾಮಾನ್ಯ ಸರಕನ್ನು ಕವಿತೆಯ ರೂಪಕವನ್ನಾಗಿಸುವ ಅಥವ ಕವಿತೆಯ ಆತ್ಮಕ್ಕೆ ಬೇಕೇ ಬೇಕಾಗುವ ಪ್ರತಿಮೆಯಾಗಿ ಅವರು ಬಳಸುವ ಕ್ರಮ ಸಮಯೋಚಿತವಾಗಿರುತ್ತದೆ. ” ಈ ರಾತ್ರಿ” ಎನ್ನುವ ಪದ್ಯವನ್ನೇ ನೋಡಿ, ಶಿವನ ಪ್ರೀತಿಸಬೇಕು ಪ್ರೀತಿಯಲಿ ಲಯವಾಗುವ ಪಾಠ ಕಲಿಯಬೇಕು ಎಂದು ಸಾಮಾನ್ಯ ತಿಳುವಳಿಕೆಯಲ್ಲಿ ಆರಂಭವಾಗುವ ಪದ್ಯ ಶಿವನ ಪೂಜಾ ವಿಧಾನವನ್ನು ಅನುಸರಿಸಿ ನಡೆಯುತ್ತಲೇ ಇದ್ದಕ್ಕಿದ್ದಂತೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಎಂದು ಬದಲಾವಣೆಯನ್ನು ಬಯಸುತ್ತಲೇ, ಕಡೆಗೆ ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ಎಂದು ಮುಕ್ತಾಯವಾಗುವ ಪರಿ ಅನೂಹ್ಯ ದಿವ್ಯಕ್ಕೆ ಹಾತೊರೆಯುತ್ತಲೇ ಹೇಗೆ ಶಿವನನ್ನೂ ಒಲಿಸಿ ಅಂಥ ಕಠಿಣ ಮನಸ್ಸಲ್ಲೂ ಹೂವಿನ ಮೃದುತನವನ್ನು ಅರಳಿಸಬಹುದು ಎಂದು ತನ್ನ ನಿಲುವನ್ನು ಪ್ರಕಟಿಸುತ್ತದೆ. “ನಾನು ಮುಟ್ಟಾದ ದಿನ” ಎನ್ನುವ ಪದ್ಯ ಹೆಣ್ಣಿನ ಪಿರುಕಣೆ ಎಂದೇ ಕೆಲವರು ತಿಳಿದಿರುವ ಮಾಸಿಕ ಋತುಚಕ್ರವನ್ನು ಕುರಿತ ದಿಟ್ಟ ಪದ್ಯ. “ಅವನಿಗಿಲ್ಲದ ತೊಡರೊಂದು/ ನನಗೆದುರಾದ ನೋವು” ಎಂದು ಮುಟ್ಟನ್ನು ಬೇರೆಯದೇ ರೀತಿಯಲ್ಲಿ ಅರಿಯುವ “ಅವಳು” ಪರೀಕ್ಷೆಯಲ್ಲಿ ಪ್ರತಿ ಸ್ಪರ್ಧಿ ಹುಡುಗನಿಗೆ ಆ ನೋವು ಇಲ್ಲವಲ್ಲ ಮತ್ತು “ಅವನು” ಅದರಿಂದ ಮುಕ್ತನಾದ ಕಾರಣಕ್ಕೇ ಅವನಿಗೆ ಗೆಲುವು ಸುಲಭ ಎಂದೇ ಭಾವಿಸುತ್ತಾಳೆ. ಮುಂದುವರೆದ ಅವಳು ಮುಟ್ಟಿದಲ್ಲದೇ, ಮುಟ್ಟಿಲ್ಲದೇ ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ, ಎಲ್ಲ ಸಹಿಸಬಹುದು ಮುಟ್ಟಿನ ಬಿಲಕ್ಕೆ ದುರ್ಬೀನು ಇಡುವ ಕ್ರೌರ್ಯವ ಹೇಗೆ ಸಹಿಸುವುದು? ಎಂದು ಪ್ರಶ್ನಿಸುವ ಎದೆಗಾರಿಕೆಯನ್ನು ತೋರುತ್ತಲೇ, ಹೊಕ್ಕಿಬಿಡಿ ಮುಟ್ಟು ಸುರಿಯುವ ದಾರಿಯಲಿ, ನಿಮ್ಮ ಹುಟ್ಟಿನ ಗುಟ್ಟಲ್ಲದೇ ಬೇರೇನಿಹುದಿಲ್ಲಿ? ಎಂದು ಪದ್ಯ ಮುಗಿಯುವಾಗ “ಅವನ” ಮಿತಿಯನ್ನು ಸ್ಪಷ್ಟವಾಗಿ ಹೇಳುತ್ತಾಳೆ ಮತ್ತು ನೈಸರ್ಗಿಕ ಸತ್ಯವನ್ನು ಅರಿ ಎಂದು ಜರ್ಭಾಗಿಯೇ ತಿವಿಯುತ್ತಾಳೆ. ಪದ್ಯದ ಅಶಯ ಮತ್ತು ತಿಳಿವನ್ನು ಪರ್ಯಾಲೋಚಿಸುವ ಕ್ರಮ ಚನ್ನಾಗಿದ್ದರೂ ಈ ಪದ್ಯದ ಹೆಣಿಗೆಯಲ್ಲಿ ಕುಶಲತೆ ಮತ್ತು ನಾಜೂಕು ಇದ್ದೂ ಇಲ್ಲದಂತಿರುವುದನ್ನು ಮುಖ್ಯ ಗಮನಿಸಬೇಕು. ಹೌದು, ಕೆಲವೊಮ್ಮೆ ನಾಜೂಕಿಗಿಂತ ಕಠಿಣ ಮಾತುಗಳೇ ಅನಿವಾರ್ಯವಾಗುತ್ತವೆ.  ಶಿವನನ್ನೆ ಕುರಿತ ಮತ್ತೊಂದು ಪದ್ಯದಲ್ಲಿ “ಹೇ ಜಟಾಧರ, ಚಂದ್ರಚೂಡಾ ಸ್ಮಶಾನದ ಮೌನದಲಿ ಸಂಚರಿಸುವಾಗ”  ಎಂದು ಶಿವನನ್ನು ಸಂಭೋದಿಸುತ್ತಲೇ ಅವನ ಗುಣಗಾನ ಮಾಡುವ ಭರದಲ್ಲೇ ಅವನ ಅವಗುಣಗಳನ್ನು ಹಾಸ್ಯವಾಗಿ ಪರಿಶೀಲಿಸುವ ಕ್ರಮ ಹೊಸತೇ ಆಗಿದೆ.  “ಉರಿವ ಬೆಂಕಿಯಲಿ ಸಿಗರೇಟು ಹಚ್ಚಿ ಕುಳಿತಾನು!”, “ಇವನೆಲ್ಲಿಯಾದರೂ ಸೇರಿಕೊಂಡಾನು ಡೋಲು ಬಡಿಯುವುದರಲ್ಲಿ ನಿಸ್ಸೀಮ ಇವನು”, ಎಂಬೆಲ್ಲ ಅಂಬುಗಳ ಮಳೆ ಕಡೆಗೆ ಈ ರೀತಿಯಲ್ಲಿ ಸುರಿಯುತ್ತದೆ; ಹೇ ವಿಷಕಂಠ, ಗಂಗಾಧರಾ ಇವನೂ ವಿಷವ ಕುಡಿಯುವವನೇ ಬೇಡವೆಂದರೂ ನಶೆಯೇರಿಸಿಕೊಳ್ಳುವವನು ನಿನ್ನ ಎಲ್ಲ ಛಾಯೆಗಳಿರುವ ಇವನು ನಿನ್ನೊಳಗೇ ಸೇರಿಕೊಂಡಿರುವನೋ ಏನೋ ಒಮ್ಮೆ ಜಟೆಯ ಬಡಿದು ನೋಡು ಮತ್ತೆ ಮತ್ತೆ ಈ ಪದ್ಯದ ಓದು ಇದು ಬರಿಯ ಶಿವನನ್ನು ಕುರಿತ ಪ್ರಾರ್ಥನೆಯಲ್ಲದೇ ನಿಜದ ಬದುಕಿನಲ್ಲಿ ಏಗುತ್ತಿರುವ ಶಿವರನ್ನು ಅಂದರೆ ಸಾಮಾನ್ಯರ ಬದುಕನ್ನು ಧೇನಿಸಿದ, ಆ ಶಿವನ ನಾಮೋತ್ತರಗಳ ಮೂಲಕ ನಮ್ಮ ಜೊತೆಗೇ ಇರುವ ಸರೀಕರನ್ನು ಕುರಿತ ಚಿತ್ರಣವಾಗಿಯೂ ತೋರುತ್ತದೆ. “ತೊಟ್ಟು ಕಳಚಿ ಬೀಳುತ್ತವೆ ಕನಸುಗಳು ಹೂವಿನಂತೆ” ಎಂದು ಕೊನೆಗೊಳ್ಳುವ ಪದ್ಯದ ಆರಂಭ ಹೀಗಿದೆ;  “ಒಂದು ಮುಂಜಾವಿನೊಂದಿಗೆ ಒಂದಿಷ್ಟು ಕನಸುಗಳೂ ಅರಳುತ್ತವೆ”. ಈ ಪದ್ಯ ಹೆಣ್ಣೊಬ್ಬಳು ತನ್ನ ನಿತ್ಯದ ಕಾಯಕದಿಂದ ಬಿಡುಗಡೆ ಹೊಂದಿ ತನಗೆ ಬೇಕಾದ ರೀತಿಯಲ್ಲಿ ಒಂದು ದಿನವನ್ನು ಕಳೆಯುವುದು ಬರಿಯ ಕನಸಾಗಿ ಉಳಿಯುತ್ತದೆ ಎಂಬುದನ್ನು ಹೇಳುತ್ತಿದೆ. ಮೇಲ್ನೋಟಕ್ಕೆ ಇಂಥ ಪದ್ಯಗಳಿಗೆ ತುಟಿ ತುದಿಯ ಅನುಕಂಪ ಮತ್ತು ಸಾರ್ವಜನಿಕ ಪರಿತಾಪಗಳು ಸಂದರೂ ನಿಜಕ್ಕೂ ಬದುಕು ಅಷ್ಟು ಘೋರವಾಗಿಲ್ಲ‍ ಮತ್ತು ಸದ್ಯದ ಸ್ಥಿತಿಯಲ್ಲಿ ಹೆಣ್ಣನ್ನು ಅದರಲ್ಲೂ ದುಡಿಯುವ ಹೆಣ್ಣನ್ನು ತೀರ ಹೀನಾಯವಾಗಿ ಕಾಣುವುದನ್ನು ಸಮಾಜ ಬಿಟ್ಟಿದೆ. ಆದರೆ ಇಂಥ ಅತಿಶಯಗಳನ್ನು ಮುಂದುಮಾಡದೇ ಇದ್ದರೆ, ತಮ್ಮ ಬರಹಗಳಲ್ಲಿ ಗಂಡನ್ನು ಶೋಷಣೆಯ ಕಾರಣ ಎಂದು ಹೇಳದೇ ಇದ್ದರೆ, ಮತ್ತು  ತಮ್ಮ ನಿಜದ ಬದುಕಲ್ಲಿ ಇಲ್ಲದೇ ಹೋದರೂ ಇದೆ ಎನ್ನುವ ” ಶೋಷಣೆ”ಯನ್ನು ಮುಂದು ಮಾಡದೇ ಇದ್ದರೆ ಅದು ಸ್ತ್ರೀ ಸಂವೇದನೆ ಇರದ ಪಠ್ಯ ಆಗುತ್ತದೆ ಎನ್ನುವ ಹುಂಬ ನಿರ್ಧಾರಗಳೂ ಕೂಡ ಒಟ್ಟಿಗೇ ಸೇರಿ ಇಂಥ ರಚನೆಗಳಿಗೆ ಕೈ ಹಾಕಲು ಕಾರಣವಾಗಿರುತ್ತವೆ. ಇಂಥದೇ ಆಲೋಚನೆಯಲ್ಲೇ ಹುಟ್ಟಿರಬಹುದಾದ “ಕುಂಭ ಸಮ್ಮೇಳನ” ಸಾಹಿತ್ಯ ಸಮ್ಮೇಳನವೇ ಮೊದಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಅನಿವಾರ್ಯ ಎನಿಸಿರುವ ಕುಂಭ ಹೊತ್ತ ಮಹಿಳೆಯರ ಪ್ರದರ್ಶನವನ್ನು ಪ್ರಶ್ನಿಸುತ್ತದೆ. ಇಂಥ ಪ್ರದರ್ಶನಗಳನ್ನು ವಿರೋಧಿಸುವುದು ಸರಿಯಾದ ಕ್ರಮವೇ ಹೌದಾದರೂ ಇಲ್ಲಿ ಭಾಗವಹಿಸುವವರೂ  ಹೆಣ್ಣು ಮಕ್ಕಳೇ ಆದುದರಿಂದ ಮೊದಲು ಅವರಲ್ಲಿ ಎಚ್ಚರ ಹುಟ್ಟಿಸಿ ಇಂಥ ಚಟುವಟಿಕೆಯಿಂದ ದೂರ ಇರಲು ತಿಳುವಳಿಕೆ ಹೇಳಬೇಕು‌.ಒಮ್ಮೆ ಕುಂಭ ಹೊರುವವರೇ ಸಿಗದಂತೆ ಆದರೆ ತನ್ನಿಂದ ತಾನೇ ಇಂಥ ಆಚರಣೆಗಳು ನಿಲ್ಲುತ್ತವೆ. ಆದರೆ ಬರಿಯ ಗಂಡನ್ನು ಮಾತ್ರ ಇಲ್ಲಿ ಹೊಣೆ ಮಾಡುವುದು ಹೇಗೆ ಸರಿಯಾದೀತು? ಇದು ನಮ್ಮ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿಯ ನಟಿಯರ ಅಂಗಾಂಗ ಪ್ರದರ್ಶನಕ್ಕೂ ಅನ್ವಯಿಸುತ್ತದೆ. ಪ್ರದರ್ಶನ ಮಾಡುವವರನ್ನು ಮೊದಲು ಅದರಿಂದ ನಿವೃತ್ತರನ್ನಾಗಿಸಿದರೆ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಕ್ಕುತ್ತದೆ. ಘೋಷಣೆಗಳಿಂದ ವಿರೋಧದ ಮಾತುಗಳಿಂದ ಹಾಗೆ ಆಡುವವರು ಮುನ್ನೆಲೆಗೆ ಬಂದಾರು ಅಷ್ಟೆ!! “ಬ್ರಾ ಮತ್ತು ಅಭಿವೃದ್ಧಿ” ಎ‌ನ್ನುವ ಕವಿತೆ ಕೂಡ ಸಂದರ್ಭವೊಂದಕ್ಕೆ ತುರ್ತು ಪ್ರತಿಕ್ರಿಯೆಯಾಗಿ ಬರೆದ ಕಾರಣ ಅದು ನಿಜಕ್ಕೂ ಹೇಳಬಹುದಾಗಿದ್ದ ದಿವ್ಯವೊಂದರ ಅನುಭೂತಿಯನ್ನು ಕಳೆದುಕೊಂಡಿದೆ. ಆದರೆ “ಗೌರಿಯ ಹಾಡು” ಎನ್ನುವ ಪದ್ಯ ನಿಜಕ್ಕೂ ಮೇಲೆ ಹೇಳದೇ ಉಳಿದ ಶೋಷಣೆಯನ್ನು ಅದ್ಭುತವಾಗಿ ಚಿತ್ರಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಮತ್ತು ಈ ಕವಿತೆಯ ಅಂತ್ಯ ಒಂದು ಅದ್ಭುತ ರೂಪಕದಲ್ಲಿ ಮುಗಿಯುತ್ತದೆ; ಗೌರಿಯ ದುಃಖದ ಝಳಕ್ಕೆ ಮಂಜಿನ ಬೆಟ್ಟವೂ ಬೆವರುತ್ತದೆ! ಇಂಥದೊಂದು ರೂಪಕವನ್ನು ಸೃಷ್ಟಿಸಿದ ಈ ಕವಿಯನ್ನು ಅಭಿನಂದಿಸದೇ ಇರುವುದು ಹೇಗೆ ಸಾಧ್ಯ? ಸುಧಾ ಆಡುಕಳ ಉದ್ದುದ್ದದ ಪದ್ಯಗಳಿಗಿಂತ ನಾಲ್ಕು ಸಾಲುಗಳಲ್ಲಿ ಇಮೇಜುಗಳನ್ನು ಕಟ್ಟಿ ಕೊಡುವುದರಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇರುವವರು‌. ರಾತ್ರಿ ಯಾವುದೋ ಹೊತ್ತಿನಲ್ಲಿ ಛಕ್ಕನೆ ನಾಲ್ಕು ಸಾಲು ಪೇರಿಸಿ ಝಗ್ಗನೆಯ ಬೆಳಕು ಮತ್ತು ಬೆರಗು ನೇಯುವುದರಲ್ಲಿ ಅವರ ಜಾಣ್ಮೆ ಮತ್ತು ರಂಗ ಶಾಲೆಯ ಅನುಭವ ಮೇಳೈಸುತ್ತವೆ ಎಂದು ಅರಿಯಬಹುದು. ಉದಾಹರಣೆಗೆ ಮಾಯಗಾತಿ ಈ ಕವಿತೆ ಯಾರ ಜಪ್ತಿಗೂ ಸಿಗಳು ಪ್ರೀತಿಯಿಂದ ಕರೆದರೆ ಎದೆಯ ದನಿಯಾಗಿ ಬರುವಳು ಇದಕ್ಕಿಂತ ಕಾವ್ಯ ಕಾರಣವನ್ನು ಇಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ಸಂಕ್ಷೇಪಿಸುವುದು ಕಷ್ಟ ಸಾಧ್ಯದ ಮಾತು! “ಗಾಯ ಮತ್ತು ಹೊಲಿಗೆ” ಎನ್ನುವ ಕವಿತೆ ಸದ್ಯಕ್ಕೆ ಈ ಕವಿ ಬರೆದಿರುವ ಉತ್ತಮ ಕವಿತೆಗಳಲ್ಲಿ ಒಂದು‌. ಹೊಲಿಗೆ ಹಾಕುವಾಗ ಚುಚ್ಚುಮದ್ದಿನಿಂದ ಅಮಲಿರುತ್ತದೆ ಬಿಚ್ಚುವಾಗಿನದೇ ಪೇಚಾಟ ನೋಯುವ ಗಾಯ ಮತ್ತು ಎಚ್ಚರದಲ್ಲೇ ಎಳೆಯುವ ದಾರ ಸಂಬಂಧಗಳೂ ಹಾಗೆ ಬೆಸೆದುಕೊಳ್ಳುವಾಗಿನ ಅಮಲು ಬಿಚ್ಚಿಕೊಳುವಾಗ ಇರದು! ಎಂದು ಶುರುವಾಗುವ ಈ ಪದ್ಯ ಮೇಲ್ನೋಟಕ್ಕೆ ಗಾಯ ಮತ್ತು ಅದರ ಚಿಕಿತ್ಸೆಗೆ ಬೇಕಾದ ಹೊಲಿಗೆಯನ್ನು ಕುರಿತು ಹೇಳುತ್ತಿರುವಂತೆ ಕಂಡರೂ ಯಾವುದೇ ಗಾಯದ ಹಿಂದೆ ಮತಾಂಧತೆಯ, ಜಾತಿಯ, ಶ್ರೇಷ್ಠತೆಯ ಅಮಲು ಇದ್ದರೆ ಅಂಥ ಗಾಯ ಸುರುವಲ್ಲಿ ನೋಯದು. ಆದರೆ ಆ ಗಾಯ ಮಾಯುವುದಕ್ಕೆ ಸಮಯ ಮತ್ತು ಸನ್ನಿವೇಶಗಳು ಅತ್ಯಗತ್ಯ ಗಾಯದ ಹೊಲಿಗೆ ತೆಗೆಯುವಾಗ ಆಗುವ ನೋವು ಸುಲಭಕ್ಕೆ ಸಹಿಸಿಕೊಳ್ಳಲಾರದ್ದು. ಚೂರೇ ಚೂರು ಬೇರ್ಪಟ್ಟಾಗಲೇ ಗೊತ್ತಾಗುವುದು ಸೇರಿರುವ ಸುಖ ಬೇರ್ಪಡದ ಸಂಬಂಧಗಳ ಬೆಲೆಯಂತೆ! ಒಮ್ಮೆ ಬೇರ್ಪಟ್ಟ ತನ್ನದೇ ಭಾಗವನ್ನೂ ಸೇರಿಸಿಕೊಳ್ಳಲು ಸಂಶಯಿಸುವುದು ಮಹಾನ್ ಮೂಲಭೂತವಾದಿ ದೇಹ! ಇಂಥ ಯಾವತ್ತೂ ಮಾಯಲಾಗದ ಗಾಯಗಳನ್ನು ಹೇಗೆ ಸಹಿಸಿಕೊಳ್ಳುವುದು, ಮಹಾನ್ ಮೂಲಭೂತವಾದ ನಮ್ಮ ಉಸಿರೇ ಆಗಿ ಪರಿವರ್ತಿತವಾಗಿರುವ ಸನ್ನಿವೇಶದಲ್ಲಿ? ಶ್ರೀಮತಿ ಸುಧಾ ಆಡುಕಳ ಪುಸ್ತಕ ಪರಿಚಾರಿಕೆ, ರಂಗ ಪಠ್ಯ, ಅಂಕಣ ಬರಹಗಳ ಒತ್ತಡಗಳ ನಡುವೆಯೂ ತೀರ ಖಾಸಗಿ ಸಮಯವನ್ನು, ರೂಪಕ ಪ್ರತಿಮೆಗಳ ಬೇಟವನ್ನೇ ಬೇಡುವ ಕಾವ್ಯ ಕೃಷಿಯಲ್ಲೂ ಹುಲುಸು ಬೆಳೆಯನ್ನೇ ತೆಗೆಯುತ್ತಿದ್ದಾರೆ. ಫಸಲಿನ ಪ್ರಮಾಣಕ್ಕಿಂತ ಆ ಫಸಲಿಗೆ ಪ್ರತ್ಯೇಕ ಪ್ರಮಾಣ ಮತ್ತು ಪರಿಣಾಮಗಳು ಇವೆಯೇ ಎಂದು ಸ್ವತಃ ಅವರೇ ತೀರ್ಮಾನಿಸಿದರೆ ಹತ್ತು ಸಾಮಾನ್ಯ ಸೀರೆಗಳನ್ನು ನೇಯುವ ಬದಲು ಒಂದು ಕಲಾಬತ್ತಿನ ಅಪರೂಪದ ಭರ್ಜರಿ ಸೀರೆಯನ್ನೇ ನೇಯ್ದಾರು. ಏಕೆಂದರೆ ಅವರ ಜೀವನಾನುನುಭವದ ಥಡಿಯಲ್ಲಿ ತರಹೇವಾರಿ ಬಣ್ಣ ಬಣ್ಣದ ಲಡಿಗಳ ದಾಸ್ತಾನೇ ಇದೆ‌. ಅವನ್ನು ಆ ಅಂಥ ಅಪರೂಪದ ಕೃತಿಗಳ ಕಾರಣಕ್ಕೆ ಬಳಸಲಿ ಎನ್ನುವ ಆಶಯದೊಂದಿಗೆ ಅವರ ಆಯ್ದ ಆರು ಕವಿತೆಗಳು ಆಸಕ್ತರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಸುಧಾ ಆಡುಕಳ ಕವಿತೆಗಳು ೧.ಈ ರಾತ್ರಿ ಜಗದ ಹಂಗು ಗುಂಗಿಲ್ಲದ ಜಂಗಮನ ಎದೆಗೊರಗಿ ಎದೆಯ ಡಿಂಡಿಮವ ಆಲಿಸಬೇಕು- ಅದಕೊಂದು ಏಕತಾರಿಯ ನಾದವ ಅವನಗರಿವಿಲ್ಲದಂತೆ ಜೋಡಿಸಬೇಕು ಬರಸೆಳೆದು ಅಪ್ಪಿದರೆ ಭಸ್ಮವಾಗುವ ವಿಸ್ಮಯವ ಭೂತನಾಥನ ಕಿವಿಯೊಳಗುಸುರಿ ತೆಕ್ಕೆಯೊಳಗೆ ಉರಿದು ಭಸ್ಮವಾಗಬೇಕು ಕಾಪಾಲಧಾರಿ ಶಿವನ ಕಪಾಲವ ತೋಯಿಸಿ ಹಣೆಗಣ್ಣೊಳಗೂ ಪ್ರೀತಿಯ ಅಮಲು ತುಂಬಿಸಬೇಕು ಮಾತನೊಲ್ಲದ ಹರನ ಹರವಾದ ಎದೆಗೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ೨.ನಾನು ಮುಟ್ಟಾದ ದಿನ; ಅಣ್ಣನ ಕಿಸಕ್ಕನೆ ನಗು ‘ಹೆಣ್ಣು ಜನ್ಮಕ್ಕಂಟಿದ ಬವಣೆ’ ಅಮ್ಮನ ವಿಷಾದದ ಮಾತು ನನಗೆ ಮಾತ್ರ ಪರೀಕ್ಷೆಯಲಿ ನನ್ನ ಸೋಲಿಸುವ ಹುನ್ನಾರದಲ್ಲಿರುವ ಹುಡುಗನ ನೆನಪು ಅವನಿಗಿಲ್ಲದ ತೊಡರೊಂದು ನನಗೆದುರಾದ ನೋವು ತೊಡೆಯ ಸಂಧಿಯಲಿಷ್ಟು ಬಟ್ಟೆ ತುರುಕಿ ಶಾಲೆಗೆ ಓಡಿದವಳ ಕುಂಟುನಡಿಗೆಗೆ: ಗೆಳತಿಯರ ಗುಸುಗುಸು! ಲೆಕ್ಕಮಾಡಲು ಬೋರ್ಡಿಗೆ ಕರೆದ ಶಿಕ್ಷಕರೂ ಲಂಗಕೆ ಅಂಟಿದ ಕೆಂಪ ಕಂಡು ಪೆಚ್ಚು! ಎಂದೂ ತಪ್ಪದ ಲೆಕ್ಕ ತಪ್ಪಾಗಿತ್ತು ರಾತ್ರಿ ಅಪ್ಪ ಹೇಳಿದ ದ್ರೌಪದೀ ವಸ್ತ್ರಾಪಹರಣದ ಕಥೆ ಮುಟ್ಟಾದವಳ ಹಿಡಿದೆಳೆದ ದುಷ್ಟ ತೊಡೆ ಮುರಿದು ರಣಾಂಗಣದಲ್ಲಿ ಬಿದ್ದಿದ್ದ ಉರಿವ ತೊಡೆಯ ಗಾಯಕ್ಕೆ ಕಥೆಯ ಮುಲಾಮು ತಿಂಗಳ ಸ್ರಾವ ಸುರಿಯುತ್ತ ಮೈಲಿಗೆಯ ಪಟ್ಟ ಹೊತ್ತ ಕಾಲ ಸರಿದು ನಾ ಹೇಳಿದಲ್ಲದೇ ಮುಟ್ಟು ಬಯಲಾಗದ ಗುಟ್ಟು ಮುಟ್ಟು ಹುಟ್ಟುವ ಗರ್ಭದಲಿ ಮಗುವ ಹೊತ್ತು ನಿಂತಾಗ ಮುಟ್ಟೂ ಒಂಥರಾ ಹಿತವೆನಿಸಿ, ಮುಟ್ಟಾಗುವವರ ಮುಟ್ಟೆನೆಂದ ದೇವರ ಮೇಲೆ

Read Post »

ಅನುವಾದ

ಸೇಡಿನ ಫಲ

ಸೇಡಿನ ಫಲ ವಿಲಿಯಂ ಬ್ಲೇಕ್ ಕವನದ ಅನುವಾದ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನುತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದುಮಾಯವಾಗಿಯೆ ಹೋಯ್ತು ಕೋಪವಂದು.ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನುಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದುಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ ಹಗೆತನದ ಬೀಜವದು ಮೊಳಕೆಯೊಡೆಯುತ್ತಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತುಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆವಂಚನೆಯ ತಂತ್ರಗಳ ನಡುನಡುವೆ ತುರುಕುತ್ತಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತುನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನುಕಿಂಚಿತ್ತು ಯೋಚಿಸಿದಲೆ ನನ್ನ ಹಣ್ಣೆಂದರಿತುಕಳಿತ ಹಣ್ಣನು ಕದ್ದು ತಿಂದು ಮುಗಿಸಿದನುಕತ್ತಲಿನ ಆವರಣ ಅವನ ಕಣ್ಣನು ಮುಚ್ಚಿನನ್ನ ಖೆಡ್ಡದಲಿ ಅವನ ಎಳೆದು ಕೆಡವಿತ್ತು ಬೆಳಗಿನಾ ಬೆಳಕಲ್ಲಿ ಸಂತಸದಿ ನೋಡಿದೆನುನನ್ನ ಮರದಡಿಯಲ್ಲಿ ಸೆಟೆದು ಬಿದ್ದಾ ವೈರಿಯನು **************************************** ಮೂಲ: A Poisonous Tree: By William Blake ಕನ್ನಡಕ್ಕೆ: ಗಣೇಶ್.ವಿ

ಸೇಡಿನ ಫಲ Read Post »

ಇತರೆ

ನಂದ ಗೋಕುಲ

ಅನುಭವ ನಂದ  ಗೋಕುಲ ಮಾಲಾ ಕಮಲಾಪುರ್ ನಾನು  ಸರ್ಕಾರಿ ಶಾಲೆಯಲ್ಲಿ  ಶಿಕ್ಷಕಿ ಯಾಗಿ ಕೆಲಸ ನಿರ್ವಹಿಸುವಾಗ ನಡೆದ ಘಟನೆ. ಒಂದು ದಿನಾ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗು ತರಗತಿಯಲ್ಲಿಯೇ ಮೊದಲು ಆಕಿಗೆ ಕಲಿಕೆಯಲ್ಲಿ ಆಸಕ್ತಿ. ಮನೆಯಲ್ಲಿ ತಾಯಿ ಸಹ ಕೂಲಿ ನಾಲಿಮಾಡಿ ಓದಿಸುತ್ತಿದ್ದಳು ತಂದೆಗೆ ಇದಾವ ಪರಿವೇ ಇಲ್ಲದೆ ಸದಾ ಕುಡಿದುಕೊಂಡು ಮನೆಗೆ ಬಂದು ಹೆಂಡತಿ ಮಗುವಿಗೆ ಹೊಡೆದು ಬಡೆದು ಮನೆ ಬಿಟ್ಟು ಹೋಗುವದು ಇದೆಲ್ಲದರ ನಡುವೆ ಮಗು ಗುಡಿಸಿಲಿನಲ್ಲಿ ಓದುವುದು ರಜೆಯದಿನ ಹೊಲದಲ್ಲಿ ತಾಯಿಗೆ ಸಹಾಯ ಮಾಡೋದು ಎಲ್ಲೋ ಹೋಗಿ ನೀರು ತರುವದು ಹೀಗೆ ಎಲ್ಲದರಲ್ಲೂ ತನ್ನದೇ ಛಾಪು ಮೂಡಿಸಿ ಸೈ ಅನಿಸಿಕೊಂಡ ಮಗು. ದಿನಾಲೂ ಶಾಲೆಗೆ ಬರುವಾಗ ಕಣ್ಣು ಒರೆಸುತ್ತಾ ಓಡೋಡಿ ಪ್ರಾರ್ಥನೆ ಸಮಯಕ್ಕೆ ಬರುತ್ತಿದ್ದಳು. ಆದರೆ ಒಂದು ದಿನ ಮಾತ್ರ ಶಾಲೆಗೆ ಒಂದು ತಾಸು ತಡವಾಗಿ ಬಂದು ಹೊರಗಡೆಯೇ ಅಳುತ್ತ ನಿಂತಿದ್ದು ನೋಡಿ ನಾನು ಒಳಗೆ ಕರೆದೆ ಏನಾಯಿತು ಯಾಕೆ ಅಳುತ್ತಿರುವೆ ಬಾ ತರಗತಿ ಯೊಳ್ಗೆ ಅಂದೆ. ಅದಕ್ಕೆ ಆ ಮಗು ಹೆದರುತ್ತ ಗಾಬರಿಯಾಗಿ ಬಲಕೈಯನ್ನು ತನ್ನ ಡ್ರೆಸ್ನಲ್ಲಿ ಮುಚ್ಚಿಕೊಂಡು ಅಳುತ್ತ ನಾನು ಮನೆಗೆ ಹೋಗಿ ಬರುವೆ ಅಂದಳು. ಕೈನಡುಗತ್ತ ಬೆವರುತ್ತ ಹೇಳಿದಳು ಏನು ಇದೆ? ನಿನ್ನ ಕೈಯಲ್ಲಿ ಅಂದೆ. ಅದಕ ಆ ಮಗು ಸ್ಕರ್ಟ್ನಲ್ಲಿ ಮುಚ್ಚಿದ ಕೈ ತೆಗೆದು ಸರಾಯಿ ಬಾಟಲಿ ತೋರಿಸಿ ಇದು ನಮ್ಮ ಅಪ್ಪ ತೆಗೆದುಕೊಂಡು ಬರಲು ನಂಗೆ ಹೇಳಿದ. ನಾನು ತರೋಲ್ಲ ಅಂದರೆ ನಂಗೆ ಮೈಯಲ್ಲ ಬರೇ ಬೀಳುವಂತೆ ಹೊಡಿದಿರುವ ಅಂದಳು ಅದಕ್ಕೆ ನನಗೆ ಶಾಲೆಗೆ ಬರುವುದು ತಡ ವಾಯಿತು ಮೇಡಂ ಅಂದಾಗ ನನ್ನ ಕಣ್ಣಿಂದ ನೀರು ಜಾರಿತು. ಅಯ್ಯೋ ಎಂಥ ತಂದೆ ಮಗಳು ಅನ್ನುವದನ್ನು ಮರೆತು ತನ್ನ ಹುಚ್ಚು ವ್ಯಸನಕ್ಕೆ ಏನೆಲ್ಲಾ ಮಾಡುತ್ತಾರಲ್ಲ ಅನಿಸಿತು. ಎಲ್ಲಿಯವರೆಗೆ ದುಶ್ಟಟದ ವ್ಯಸನಿಗಳು ಅದರಿಂದ ದೂರವಾಗುವುದಿಲ್ಲವೋ ಅಲ್ಲಿಯವರೆಗೂ ಇಂಥ ಹೆಣ್ಣು ಮಕ್ಕಳ ಗೋಳು ತಪ್ಪಿದ್ದಲ್ಲ. ಅದಕ್ಕೆ ಹೇಳೋದು ಮನೆಯಲ್ಲಿ ಸಂಸ್ಕಾರ ಕೊಡುವ ತಂದೆ ತಾಯಿ ಮೊದಲು ಸರಿ ಇರಬೇಕು ಆಗ ಮನೆಯ ಮಕ್ಕಳು ಅದನ್ನೇ ನೋಡಿ ಅನುಸರಿಸುವರು. ಮನೆಯಲ್ಲಿ ಸುಂದರ ವಾತಾವರಣ ಇದ್ದರೆ ಅಲ್ಲಿ ಸುಖ ನೆಮ್ಮದಿ ಶಾಂತಿ ಕಾಣಲು ಸಾದ್ದ್ಯ ಮನೆ ನಂದ ಗೋಕುಲವಾದರೆ ಮಕ್ಕಳ ಭವಿಷ್ಯ ಅದೆಷ್ಟು ಚಂದ. ಮನೆಯೊಂದು  ನಂದ ಗೋಕುಲವಾದರೆ ಅಲ್ಲಿರುವ ಸುಂದರ ಮೊಗ್ಗುಗಳನೋಟ ಅದೆಷ್ಟು ಚಂದ. ಆ  ಮೊಗ್ಗುಗಳಿಗೆ ಚಿವಟಿಹಾಕದೆ ಅರಳುತ್ತಿರುವ ಹೂವು ಆಗುವುದನ್ನು ನೋಡೋಣ  ಆ ಹೂವು ಜ್ಞಾನ ವೆಂಬ ಪರಿಮಳ ಬೀರಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುವುದಲ್ಲವೇ.. *********************************

ನಂದ ಗೋಕುಲ Read Post »

You cannot copy content of this page

Scroll to Top