ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮೋಹದ ಕಡಲಲ್ಲಿ…

ಕವಿತೆ ಮೋಹದ ಕಡಲಲ್ಲಿ… ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅಂಗ ಸಂಗವ ಜರೆದುಅರಿವೆ ಹಂಗನು ತೊರೆದುಬೆತ್ತಲಾದ ಅಕ್ಕಯ್ಯನಿಗೂಆತ್ಮ ಸಂಗಾತದ ಮೋಹ..! ಮಾಯೆಯ ಜಗದೊಳಗೆಈಸಿ ಗೆದ್ದ ಅಲ್ಲಮನಿಗೂಲಿಂಗದಾಲಿಂಗನದ ಮೋಹ…! ಕಾನನದ ಕಾರ್ಪಣ್ಯಗಳಅರಿವಿದ್ದೂ ಸೀತೆಯ ಬಿಡದಬಂಗಾರದ ಮೋಹ…! ಬಸುರಿ ಹೆಂಡತಿಯಕಾಡಿಗಟ್ಟಿದ ಪುರುಷೋತ್ತಮನಜನಪದದ ಮೋಹ..! ಮಡದಿಯ ಅಡವಿಟ್ಟೂಮಾತುತಪ್ಪದ ಹರೀಶ್ಚಂದ್ರನಸತ್ಯನಿಷ್ಠೆಯ ಮೋಹ..! ಗೆದ್ದ ರಾಜ್ಯವ ಒದ್ದುತಪೋನಿರತನಾದವನಿಗೂಜಿತನಾಗುವ ಮೋಹ…! ಸಾವಿನ ಬಾಗಿಲಿನಲಿ ನಿಂತಅರಿವಿದ್ದೂ ಫಣಿಕೇತನನಿಗೆಛಲಮೆರೆವ ಮೋಹ..! ತುಂಡು ಅರಿವೆಯ ಮಂಡಿಯ ಮೇಲೆಸುತ್ತಿಕೊಂಡ ಫಕೀರನಿಗೆಮುಕ್ತಿ ಕೊಡಿಸುವ ಮೋಹ…! ಮೋಹವ ಗೆದ್ದೂ ಗೆಲ್ಲದನಿರ್ಮೋಹಿಗಳೂಮೋಹದ ಕಡಲೊಳಗಿನಆಣಿಮುತ್ತುಗಳಾದರು….!! **************************************

ಮೋಹದ ಕಡಲಲ್ಲಿ… Read Post »

ಕಾವ್ಯಯಾನ

ಅವ್ಯಕ್ತ

ಕವಿತೆ ಅವ್ಯಕ್ತ ಡಾ.ಪ್ರೀತಿ. ಕೆ. ಎ  ಹೇಳಿಬಿಡಬಹುದಿತ್ತು ನಾನುನಿನ್ನ ಪ್ರತಿಯೊಂದು ಮಾತುನನ್ನಲ್ಲಿ ಅನುರಾಗದ ಅಲೆಗಳನ್ನುಎಬ್ಬಿಸುವುದೆಂದು ನಿನ್ನ ಸಾಮೀಪ್ಯವು ನನಗೆಎಷ್ಟೊಂದು ಮುದನೀಡುವುದೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಹೊಗಳಿಕೆಯೊಂದುಇಂದಿಗೂ ಕೂಡನನ್ನ ಕೆನ್ನೆಯ ರಂಗೇರಿಸುವುದೆಂದು ನನ್ನ ನಗೆಯ ಹಿಂದಿನಕಾರಣವು ನೀನಷ್ಟೇಆಗಿರುವೆಯೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಒಂದೇ ಒಂದು ಸ್ಪರ್ಶನನ್ನೊಳಗಿನ ಭಾವ ತಂತಿಯನ್ನುಮೀಟುವುದೆಂದು ನಿನ್ನ ಬಾಹುಗಳಲ್ಲಿನನ್ನನ್ನೇ ನಾನುಕಳೆದುಕೊಳ್ಳುತ್ತೇನೆಂದು ಹೇಳಿಬಿಡಬಹುದಿತ್ತು ನಾನುನೀನು ನನ್ನೊಡನಿದ್ದ ಕ್ಷಣನನಗೆ ಮತ್ತೇನೂನೆನಪಾಗುವುದಿಲ್ಲವೆಂದು ಎದೆ ಬಡಿತ ನಿಲ್ಲುವ ತನಕನನ್ನ ಹೃದಯ ನಿನ್ನ ಹೆಸರನ್ನಷ್ಟೇಕೂಗುವುದೆಂದು ಆದರೂ ಹೇಳಲಿಲ್ಲಏಕೆಂದರೆ ನನಗೆ ಗೊತ್ತುನಿನ್ನೆಡೆಗಿನ ನನ್ನ ಪ್ರೀತಿಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟುಬಲಹೀನವಲ್ಲವೆಂದು ! **********************************

ಅವ್ಯಕ್ತ Read Post »

ಇತರೆ

ಅವಲಕ್ಕಿ ಪವಲಕ್ಕಿ

ಮಕ್ಕಳ ಕಥೆ ಅವಲಕ್ಕಿ ಪವಲಕ್ಕಿ ಗಿರೀಶ ಜಕಾಪುರೆ –                       ಅವಲಕ್ಕಿ ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್ಸ             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ             ‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ.             ‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು.             ಚಿಂಟೂಗೆ ಅವಲಕ್ಕಿ ಅಂದರೆ ತುಂಬ ಇಷ್ಟ. ಬೇರೆ ಯಾವ ತಿಂಡಿಯೂ ಅವನಿಗೆ ಸೇರಲ್ಲ, ಅವಲಕ್ಕಿ ಇದ್ದರೆ ಅವನು ಬೇರೇನೂ ಬೇಡಲ್ಲ. ಈಗ ಸಿರಿ ಮೇಡಂ ಅವಲಕ್ಕಿ ಹಾಡು ಹೇಳಿಸಿದ್ದೂ ಅವನಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.             ಮೂರನೇ ಕ್ಲಾಸಿನ ಮಕ್ಕಳಿಗೆ ಅವರ ಕ್ಲಾಸ್‌ಟೀಚರ್ ಶ್ರೀದೇವಿ ಮೇಡಂ ಅವರು ವಾರ್ಷಿಕ ಸ್ನೇಹಸಮ್ಮೇಳನಕ್ಕಾಗಿ ಅವಲಕ್ಕಿ ಪವಲಕ್ಕಿ ಹಾಡಿನ ಪ್ರದರ್ಶನಕ್ಕೆಂದು ಮಕ್ಕಳಿಂದ ಅಂತಿಮ ರಿಹರ್ಸಲ್ ಮಾಡಿಸಿಕೊಳ್ಳುತ್ತಿದ್ದರು. ಊಟದ ಬಿಡುವಿತ್ತು. ಮಕ್ಕಳು ತಮ್ಮ ತಮ್ಮ ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತ ಮಾತಾಡುತ್ತಿದ್ದರು. ಚಿಂಟೂನ ಅಮ್ಮ ಅವನ ಫೆವ್ಹರಿಟ್ ಅವಲಕ್ಕಿ ಕೊಟ್ಟಿದ್ದರು. ರಮಿ ಮಾತ್ರ ಶಾಲೆಯ ಬಿಸಿಯೂಟದ ಅನ್ನ ತಿನ್ನುತ್ತಿದ್ದ. ಚಿಂಟೂ ಅವನಿಗೂ ಸ್ವಲ್ಪ ಅವಲಕ್ಕಿ ಕೊಟ್ಟು, ಅವನಿಂದ ತಾನೂ ಸ್ವಲ್ಪ ಅನ್ನ ಪಡೆದಿದ್ದ.             ‘ಯಾಕೋ ರಮಿ, ಸಪ್ಪಗಿದ್ದೀಯಾ?’ ಚಿಂಟೂ ಕೇಳಿದ.             ‘ನಾಳೆಯೇ ಗ್ಯಾದರಿಂಗ್ ಅಲ್ವಾ?’             ‘ಹೌದು, ಅದಕ್ಕೇನಾಯ್ತು?’             ‘ಸಿರಿ ಮೇಡಂ, ಗ್ಯಾದರಿಂಗ್ ಫೀಸ್ ಕೊಡಲು ಹೇಳಿದ್ರು. ನನ್ನಪ್ಪ ಇನ್ನೂ ಫೀಸ್ ಕಟ್ಟಿಲ್ಲ. ಫೀಸ್ ಕಟ್ಟದಿದ್ದರೆ ಗ್ಯಾದರಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಅಂತ ಹೇಳಿದ್ದಾರೆ’ ಎಂದ. ಮುಖ ಇನ್ನಷ್ಟು ಚಿಕ್ಕದಾಗಿತ್ತು.             ‘ಹೌದಲ್ವ? ಮತ್ತೆ, ಈಗ ಏನು ಮಾಡೋದು?’ ಚಿಂಟೂ ಕೇಳಿದ.             ‘ಅದೇ ತಿಳೀತಿಲ್ಲ, ಇವತ್ತು ಹೋಗಿ ಅಪ್ಪನಿಗೆ ಮತ್ತೆ ಫೀಸ್ ಕಟ್ಟಲು ಹೇಳುವೆ’ ಎಂದ. ಆಶಾಕಿರಣ ಮೂಡಿತು.             ಅವರು ತಿಂಡಿ ಮುಗಿಸಿ ಕೈತೊಳೆಯುವ ಹೊತ್ತಿಗೆ ಬೆಲ್ ಆಯ್ತು.             ಕ್ಲಾಸ್‌ನಲ್ಲಿ ಸಿರಿ ಟೀಚರ್ ‘ನೋಡಿ ಮಕ್ಕಳೆ, ನಾಳೆ ಎಲ್ಲರೂ ಸಾಯಂಕಾಲ ಗ್ಯಾದರಿಂಗ್ ಸಿದ್ಧತೆಯೊಂದಿಗೆ ಬರಬೇಕು, ನಿಮ್ಮ ತಂದೆ-ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರನ್ನೂ ಕರೆತರಬೇಕು. ನೀವು ಹಾಡೋದು, ಡಾನ್ಸ್ ಮಾಡೋದು ಅವರು ನೋಡಬೇಕು ತಾನೆ? ಸಂಜೆಯ ಟಿಫನ್ ತರೋದು ಮರೀಬಾರದು’ ಎಂದು ಸೂಚಿಸಿದರು.             ಮಕ್ಕಳೆಲ್ಲ ‘ಹೋ.. ಎಸ್ ಟೀಚರ್..’ ಎಂದರು ಹಿಗ್ಗಿನಿಂದ. ರಮಿಯ ದನಿ ಮಾತ್ರ ಕೇಳಿಸಲಿಲ್ಲ.             ಟೀಚರ್ ಮುಂದುವರಿದು ‘ಫೀಸ್ ಕೊಟ್ಟವರಿಗೆಲ್ಲ ಡಾನ್ಸ್ ಯುನಿಫಾರಂ ಕೊಡುತ್ತೇವೆ. ನಿಮ್ಮ ಕ್ಲಾಸ್‌ನಲ್ಲೇ ನೀವು ರೆಡಿ ಆಗಬೇಕು, ಹಾಂ, ಇನ್ನೊಂದು ಮಾತು ಫೀಸ್ ಕೊಡದಿರೋರಿಗೆ ಚಾನ್ಸ್ ಇಲ್ಲ, ತಿಳೀತಾ?’ ಎಂದರು.             ಮತ್ತೆ ಮಕ್ಕಳು ಕೇಕೇ ಹಾಕಿದರು. ರಮಿಯ ಕಣ್ಣು ತುಂಬಿ ಬಂದಿದ್ದವು.             ಶಾಲೆ ಬಿಟ್ಟು ಮರಳಿದ ಕೂಡಲೇ ಚಿಂಟೂ ತಾಯಿಯ ಬಳಿಗೆ ಹೋಗಿ ‘ಅಮ್ಮ, ಇವತ್ತು ನೀನು ಕೊಟ್ಟಿದ್ದ ಅವಲಕ್ಕಿ ತುಂಬಾ ಸಕತ್ತಾಗಿತ್ತು. ಚೂರೂ ಬಿಡದೇ ತಿಂದುಬಿಟ್ಟೆ, ಅಷ್ಟೇ ಅಲ್ಲ ರಮಿಗೂ ಸ್ವಲ್ಪ ಕೊಟ್ಟೆ. ನನ್ನಂತೆ ಅವನಿಗೂ ಅವಲಕ್ಕಿ ತುಂಬಾ ಇಷ್ಟ’ ಎಂದ.              ರಮಿ ವಿಷಯ ಬಂದ ಕೂಡಲೇ ಅವನ ದನಿಯಲ್ಲಿನ ಉತ್ಸಾಹ ಕಡಿಮೆಯಾಗಿತ್ತು, ಅವನ ಕಣ್ಣಲ್ಲಿನ ನೀರು ನೆನಪಾಗಿ ಪಾಪ ಅನಿಸಿತು.             ‘ಹೌದಾ, ಗುಡ್, ಜಾಣ ನೀನು. ದಿನಾಲೂ ಟಿಫನ್ ಬಾಕ್ಸ್ ಖಾಲಿ ಮಾಡಬೇಕು, ಚೆನ್ನಾಗಿ ತಿಂಡಿ ತಿನ್ನಬೇಕು, ಆಗ ನೀನು ಸ್ಟ್ರಾಂಗ್ ಆಗೋದು’ ಎಂದಳು ಅಮ್ಮ.             ಚಿಂಟೂ ‘ಹಾಗಿದ್ದರೆ ನೀನು ದಿನಾಲೂ ನನಗೆ ಅವಲಕ್ಕಿ ಕೊಡು. ಒಂದಲ್ಲ ಎರಡು ಬಾಕ್ಸ್ ಕೊಡು, ಎಲ್ಲ ಖಾಲಿ ಮಾಡುವೆ’ ಎಂದ.             ‘ಹಾಗಲ್ಲ ಮರಿ, ಇಷ್ಟ ಎಂದು ಒಂದೇ ಪದಾರ್ಥ ಹೆಚ್ಚು ತಿನ್ನಬಾರದು, ಹೊಟ್ಟೆ ಕೆಟ್ಟುಹೋಗುತ್ತದೆ, ಹೊಟ್ಟೆ ನೋವು ಪ್ರಾರಂಭ ಆದರೆ ನಿನಗೆ ಓದ್ಲಿಕ್ಕೂ ಆಗಲ್ಲ, ಬರೀಲಿಕ್ಕೂ ಆಗಲ್ಲ, ಡಾನ್ಸ್ ಮಾಡ್ಲಿಕ್ಕೂ ಆಗಲ್ಲ..’ ಎಂದರು.             ‘ಇಲ್ಲಮ್ಮ, ಏನೂ ಆಗಲ್ಲ, ನೀನು ಸುಮ್ಮನೆ ಹೇಳ್ತಿಯಾ. ನಾಳೆ ನೋಡು ನಾನು ಹೊಸ ಬಟ್ಟೆ ತೊಡ್ಕೊಂಡು ಹೇಗೆ ಡಾನ್ಸ್ ಮಾಡ್ತೀನಿ ಅಂತ. ಆದರೆ, ಪಾಪ ರಮಿ’             ‘ಏನಾಯ್ತು ಅವನಿಗೆ?’             ‘ಅಮ್ಮ, ಅವರು ಬಹಳ ಬಡವರು. ಅವನಪ್ಪ ಇನ್ನೂ ಗ್ಯಾದರಿಂಗ್ ಫೀಸ್ ಕಟ್ಟಿಲ್ಲ. ಸಿರಿ ಟೀಚರ್ ಫೀಸ್ ಕಟ್ಟಿಲ್ಲ ಅಂದ್ರೆ ಡಾನ್ಸಿಗೆ ಚಾನ್ಸ್ ಇಲ್ಲ ಅಂದ್ರು. ಗೊತ್ತಾ ಅಮ್ಮ, ಅವನಿಗೂ ನನ್ನಂತೆ ಅಲವಕ್ಕಿ ಅಂದರೆ ತುಂಬ ಇಷ್ಟ. ಆದರೆ ಅವನಮ್ಮ ಅವನಿಗೆ ಟಿಫನ್ ಬಾಕ್ಸ್ ಕೊಡಲ್ಲ. ಅವ ಶಾಲೆಯಲ್ಲಿ ಬಿಸಿಯೂಟ ತಿಂತಾನೆ..’ ಎಂದ ಉದಾಸೀನತೆಯಿಂದ.             ‘ಹೌದಾ? ಪಾಪ. ಇರಲಿ, ಈಗ ನೀನು ಓದ್ತಾ ಕೂತ್ಕೋ, ನಾನು ಅಡುಗೆ ಮಾಡಬೇಕು’ ಎನ್ನುತ್ತ ಅಮ್ಮ ಒಳಕ್ಕೆ ಹೋದರು. ಅವರ ಹಿಂದೆಯೇ ಚಿಂಟೂ ‘ಅಮ್ಮ, ಪ್ಲೀಸ್ ಅವಲಕ್ಕಿ ಮಾಡು’ ಎಂದ. ಅವನ ದ್ವನಿಯೂ ಅಡುಗೆ ಮನೆ ಸೇರಿತು. ‘ಇಲ್ಲ, ಪಾಪು, ಅವಲಕ್ಕಿ ಬೇಡ, ಪಪ್ಪಾ ಬಂದ್ಮೇಲೆ ಊಟ ಮಾಡುವಿಯಂತೆ’ ಎಂದಳು ಅಮ್ಮ ಒಳಗಿನಿಂದ.             ಚಿಂಟೂನ ತಂದೆ ಬಂದ ಮೇಲೆ ಊಟ ಮಾಡುವಾಗ ಆತ ‘ಪಪ್ಪಾ, ನಾಳೆ ಗ್ಯಾದರಿಂಗ್ ಇದೆ. ನೀವು ಬರಬೇಕೆಂದು ಸಿರಿ ಟೀಚರ್ ಹೇಳಿದ್ದಾರೆ’ ಎಂದ. ‘ಓಹ್, ಹೌದಾ, ನಾಳೆ ಡಾನ್ಸ್ ಮಾಡ್ತಿಯಾ? ಯಾವ ಹಾಡಿಗೆ?’ ಎಂದು ತಂದೆ ಕೇಳಿದರು. ಚಿಂಟೂ ಅವನ ಫೆವ್ಹರಿಟ್ ‘ಅವಲಕ್ಕಿ ಪವಲಕ್ಕಿ..’ ಹಾಡು ಶುರು ಮಾಡಿದ. ಹಾಡುತ್ತ ‘ಪಪ್ಪಾ, ರಮಿ ನನಗಿಂತ ಚೆಂದ ಡಾನ್ಸ್ ಮಾಡ್ತಾನೆ, ಬಹಳ ಚೆಂದ ಹಾಡ್ತಾನೆ. ಆದರೆ ಪಾಪ..’ ಎಂದ.  ಅಷ್ಟರಲ್ಲಿ ಅವನಮ್ಮ ‘ಈಗ ಹಾಡಿದ್ದು ಸಾಕು, ಊಟ ಮಾಡು’ ಎಂದು ಗದರಿಸಿದರು. ಚಿಂಟೂ ‘ಅಮ್ಮ, ಮರೆತೇ ಹೋಗಿತ್ತು ನೋಡು, ನಾಳೆ ಸಾಯಂಕಾಲದ ತಿಂಡಿಗೆ ಟಿಫನ್ ತರಬೇಕು ಅಂತ ಟೀಚರ್ ಹೇಳಿದಾರೆ, ಅವಲಕ್ಕಿ ಮಾಡು..’ ಎಂದ. ‘ಮತ್ತೆ ಶುರು ಮಾಡಿದಿಯಾ, ಒಂದು ಕೊಡ್ತೀನಿ ನೋಡು ಈಗ’ ಎಂದು ಅಮ್ಮ ಸ್ವಲ್ಪ ಸಿಟ್ಟಾದರು. ಚಿಂಟೂ ಸುಮ್ಮನೆ ಊಟ ಮಾಡಿ ಎದ್ದ. ಮಲಗಿದರೆ ನಿದ್ರೆ ಬರುತ್ತಿಲ್ಲ. ಪದೇ ಪದೇ ಸಿರಿ ಟೀಚರ್ ಮಾತು ನೆನಪಾಗ್ತಿವೆ, ಮತ್ತೆ ಮತ್ತೆ ರಮಿಯ ಕಣ್ಣೀರೂ ಕೂಡ ಕಣ್ಮುಂದೆ ಬರುತ್ತಿವೆ. ಪಾಪ, ರಮಿ..! ನಾಳೆ ಅವನು ಡಾನ್ಸ್ ಮಾಡುವಂತಿಲ್ಲ, ಅವನಿಗೆ ಹೊಸ ಯುನಿಫಾರಂ ಇಲ್ಲ..! ಮರುದಿನ, ಚಿಂಟೂ ತನ್ನ ತಂದೆ ತಾಯಿಯೊಂದಿಗೆ ಗ್ಯಾದರಿಂಗ್ ಶುರುವಾಗುವದಕ್ಕೂ ಅರ್ಧ ಗಂಟೆ ಮೊದಲು ಶಾಲೆ ತಲುಪಿದ. ಭರ್ಜರಿ ವೇದಿಕೆ ಸಿದ್ಧವಾಗಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಡ್ರೆಸ್ ಮಾಡಿಕೊಂಡು ಸಿದ್ಧರಾಗುತ್ತಿದ್ದರು. ಇವರು ಬಂದಿದ್ದನ್ನು ಗಮನಿಸಿದ ಸಿರಿ ಟೀಚರ್ ಬಳಿಬಂದು ‘ಬೇಗ ಬಾ ಚಿಂಟೂ, ನೀನು ರೆಡಿಯಾಗಬೇಕು. ಪ್ಯಾರೆಂಟ್ಸ್ ನೀವು ಹೋಗಿ ಹಾಲ್‌ನಲ್ಲಿ ಕುಳಿತುಕೊಳ್ಳಿ’ ಎಂದು ಅವರು ಚಿಂಟೂನನ್ನು ಕರೆದುಕೊಂಡು ಹೋದರು. ಅಪ್ಪ-ಅಮ್ಮಳತ್ತ ಕೈಬೀಸಿ ಚಿಂಟೂ ಡ್ರೆಸಿಂಗ್ ರೂಂನೊಳಗೆ ಹೋದ. ಅವನ ಕಣ್ಣುಗಳು ರಮಿಯನ್ನು ಹುಡುಕುತ್ತಿದ್ದವು. ಎಲ್ಲರೂ ಬಂದಿದ್ದರು. ಆದರೆ ರಮಿ ಮಾತ್ರ ಕಾಣಲಿಲ್ಲ. ಚಿಂಟೂ ಅಲ್ಲಿಂದ ಹೊರಬಂದು ಶಾಲೆಯ ಆವರಣದಲ್ಲೆಲ್ಲ ಹುಡುಕಿದ. ರಮಿ ಎಲ್ಲೂ ಇರಲಿಲ್ಲ. ಮರಳಿ ಡ್ರೆಸಿಂಗ್ ರೂಂಗೆ ಹೊರಟ. ವಾಟರ್ ಟ್ಯಾಂಕ್ ಹಿಂಬದಿಯಲ್ಲಿ ಯಾರೋ ಬ್ಯಾಗ್‌ಗೆ ತಲೆಯಿಟ್ಟು ಕುಳಿತಂತೆ ಅನಿಸಿತು. ಹೋಗಿ ನೋಡಿದ. ‘ಅರೆ, ರಮಿ, ಇಲ್ಯಾಕೆ ಕುಳಿತಿರುವೆ? ಬಾ ಒಳಗೆ’ ‘ಬೇಡ ಚಿಂಟೂ, ನನಗೆ ಹೊಟ್ಟೆ ನೋಯ್ತಿದೆ’ ‘ಸುಮ್ಮನೆ ಏನೇನೋ ಹೇಳಬೇಡ, ನಡೀ’ ‘ಇಲ್ಲ, ನಿಜಕ್ಕೂ ಹೊಟ್ಟೆ…’ ಎಂದ. ಅವನ ಕಣ್ಣು ತುಂಬಿದ್ದವು. ಚಿಂಟೂ ಅವನ ಕೈಹಿಡಿದುಕೊಂಡು ಒತ್ತಾಯದಿಂದ ಡ್ರೆಸಿಂಗ್ ರೂಂನೊಳಗೆ ಕರೆದುಕೊಂಡು ಹೋದ. ಎದುರಿಗೆ ಸಿರಿ ಟೀಚರ್ ನಿಂತಿದ್ದರು. ರಮಿಯ ಕಣ್ಣುಗಳು ನೆಲವನ್ನೇ ನೋಡುತ್ತಿದ್ದವು. ಚಿಂಟೂ ‘ಟೀಚರ್, ಟೀಚರ್, ನನಗೆ ಹೊಟ್ಟೆ ನೋವಾಗ್ತಿದೆ. ಬಹಳಷ್ಟು ಅವಲಕ್ಕಿ ತಿಂದಿದ್ದೆ. ಈ ನೋವಲ್ಲಿ ನನಗೆ ಡಾನ್ಸ್ ಮಾಡೋಕೆ ಆಗಲ್ಲ. ನೀವು ನನ್ನ ಯುನಿಫಾರಂ ರಮಿಗೆ ಕೊಡಿ. ಅವನು ಡಾನ್ಸ್ ಮಾಡಲಿ. ನಾನು ಮುಂದೆ ಕೂತು ನೋಡ್ತೆನೆ’ ಎಂದ. ಟೀಚರ್‌ಗೆ ಏನೋ ವಿಷಯ ಇದೆ ಎಂಬುದು ಅರ್ಥ ಆಯ್ತು. ‘ಏನಾಯ್ತು ಚಿಂಟೂ, ನಿಜಕ್ಕೂ ಹೊಟ್ಟೆ ನೋವಾ?’ ಎಂದು ಕೇಳಿದರು. ರಮಿಯ ಕಣ್ಣಲ್ಲೂ, ಚಿಂಟೂನ ಕಣ್ಣಲ್ಲೂ ನೀರೂರಿದ್ದವು. ‘ಇಲ್ನೋಡು, ರಮಿಯ ತಂದೆ ಫೀಸ್ ಕೊಡದಿದ್ದರೂ ಪರವಾಗಿಲ್ಲ. ಅವನಿಗಾಗಿಯೂ ನಾನು ಯುನಿಫಾರಂ ತಂದಿದ್ದೇನೆ. ಅವನೂ ತೊಟ್ಟುಕೊಂಡು ರೆಡಿಯಾಗಲಿ, ನೀನು ರೆಡಿಯಾಗು. ಬನ್ನಿ ಬೇಗ, ಬೇಗ’ ಎನ್ನುತ್ತ ಇಬ್ಬರನ್ನೂ ಸೆಳೆದು ಅಪ್ಪಿಕೊಂಡರು. ಮೂವರ ಕಣ್ಣು ತುಂಬಿದ್ದರೂ ತುಟಿಗಳಲ್ಲಿ ನಗು ಅರಳಿತ್ತು.   ವೇದಿಕೆ ಕಾರ್ಯಕ್ರಮ ಪ್ರಾರಂಭವಾಯ್ತು. ಒಂದೊAದಾಗಿ ಪ್ರದರ್ಶನ ಜರುಗಿದವು. ಮೂರನೇ ಕ್ಲಾಸಿನ ಸರದಿ ಬಂತು. ಮಕ್ಕಳೆಲ್ಲ ವೇದಿಕೆಗೆ ಬಂದರು. ಹಾಡಿನ ಯುನಿಫಾರಂನಲ್ಲಿ ಮಕ್ಕಳು ತುಂಬ ಮುದ್ದಾಗಿ ಕಾಣುತ್ತಿದ್ದರು. ಹಾಡು ಶುರುವಾಯ್ತು. ಅವಲಕ್ಕಿ ಪಲವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ ಮಕ್ಕಳು ಬಲು ಉತ್ಸಾಹದಿಂದ ಕುಣಿದರು. ರಮಿ ಎಲ್ಲರಿಗಿಂತ ಚೆಂದ ಕುಣಿದ. ಅವನಿಗಿಂತ ಚೆಂದ ಎನ್ನುವಂತೆ ಚಿಂಟೂ ಕುಣಿದ. ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಕುಣಿತ ಕಂಡು ಸಿರಿ ಟೀಚರ್‌ಗೂ ಆನಂದ. ಹಾಡು ಮುಗಿದ ಕೂಡಲೇ ಎಲ್ಲರೂ ವೇದಿಕೆಯಿಂದ ನಿರ್ಗಮಿಸಿದರು. ರಮಿ ಬಹಳ ಹಿಗ್ಗಿನಲ್ಲಿದ್ದ. ಅಷ್ಟರಲ್ಲಿ ಅವನಿಗೆ ತಾನು ಮನೆಯಿಂದ ಬರುವಾಗ ಅಮ್ಮ ಕೊಟ್ಟಿದ್ದ ಟಿಫನ್ ಬಾಕ್ಸ್ ನೆನಪಾಯ್ತು. ‘ಏಯ್ ಚಿಂಟೂ, ಬಾ ಇಲ್ಲಿ. ಇವತ್ತು ನನ್ನಮ್ಮ ಟಿಫನ್ ಕಟ್ಟಿದ್ದಾಳೆ, ಬಾ ತಿನ್ನೋಣ’ ಎನ್ನುತ್ತ ಕೂಗಿದ. ಕೂಡಲೇ ಚಿಂಟೂ ಅವನ ಬಳಿ ಬಂದ. ಟಿಫನ್ ತೆರೆದು ನೋಡಿದರೆ ಅದರಲ್ಲಿಯೂ ‘ಅವಲಕ್ಕಿ..’..ಓಹ್…!! ಮತ್ತೆ ಶುರುವಾಯ್ತು… ಅವಲಕ್ಕಿ, ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್

ಅವಲಕ್ಕಿ ಪವಲಕ್ಕಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ ಕವಿತೆಯ ರಚನೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ: ವಸ್ತು ಇಂಥದ್ದೇ ಇರಬೇಕು ಅಂತೇನೂ ಇಲ್ಲ ನನಗೆ. ಸುತ್ತಲಿನ ಆಗುಹೋಗುಗಳೆಲ್ಲಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವವಳು ನಾನು. ಯಾರದೋ ಸಾವು ಮತ್ಯಾರದೋ ಕಷ್ಟ ಎಲ್ಲವೂ ನನ್ನನ್ನು ಅಳಿಸುತ್ತವೆ. ಒಂದು ಆರ್ಟ್ ಮೂವಿ ಚಾಲು ಆಯಿತೆಂದರೆ ನನ್ನ ಕಣ್ಣೀರು ಕೋಡಿ ಬೀಳುವುದು ಗ್ಯಾರೆಂಟಿ ಎಂದು ಮೊದಲೇ ಹೇಳಿಬಿಡಬಹುದು. ಮತ್ತೆ ಅದರ ಬಗ್ಗೆ ನನಗೆ ಮುಜುಗರವಿಲ್ಲ. ಇನ್ಫ್ಯಾಕ್ಟ್ ಎಷ್ಟೋ ಹೊತ್ತು ಅಥವಾ ಕೆಲ ದಿನಗಳೂ ಅದೇ ಹ್ಯಾಂಗೋವರಿನಲ್ಲಿ ಇರಲು ಬಯಸ್ತೇನೆ ನಾನು. ಆಗ ನನ್ನಲ್ಲಿ ಕವಿತೆಯೊಂದು ಮೊಳಕೆಯೊಡೆಯಬಹುದು. ನೋವು, ಸಂತೋಷ, ಸಿಟ್ಟು, ಅಸಹನೆ, ಕೋಪ….. ಇತ್ಯಾದಿ ಯಾವ ಭಾವವೇ ಆಗಿರಲಿ ಅದರ ಶಿಖರ ಮುಟ್ಟುವ ತೀವ್ರತೆ ನನ್ನನ್ನಾವರಿಸಿದಾಗ ನನ್ನೊಳಗೆ ಕವಿತೆ ಮೊಟ್ಟೆ ಇಡುತ್ತದೆ. ಮತ್ತೆ ಕವಿಯಾದವನು ಅಂತರಂಗದ ದನಿಯಾಗುತ್ತಲೇ ಬಹಿರಂಗದ ಕಿವಿಯಾಗಲೂ ಬೇಕಿರುತ್ತದೆ. ಹಾಗಾಗಿ ಅವನ ಕಾವ್ಯ ಅದೆರಡರಿಂದಲೂ ಪ್ರಭಾವಿಸಲ್ಪಟ್ಟಿರುತ್ತದೆ. ಅದಕ್ಕೆ ನಾನೂ ಹೊರತಲ್ಲ. ಹೆಣ್ಣು ನನ್ನ ಬರಹದ ಮೂಲ ಕಾಳಜಿ ಕಾರಣ ಹೆಣ್ಣು ಹೊರಗಿನಿಂದಷ್ಟೇ ಅಲ್ಲ ಒಳಗಿನಿಂದಲೂ ಹೆಚ್ಚು ಗೊತ್ತಿರುವ ಕಾರಣ ಇರಬಹುದು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ: ಖಂಡಿತಾ. ಬಾಲ್ಯದ ನೆನಪುಗಳಿಲ್ಲದೇ ನಮ್ಮ ಯಾವ ಪ್ರಕಾರದ ಬರಹವೂ ಸಂಪೂರ್ಣವಾಗಲಿಕ್ಕೇ ಸಾಧ್ಯವಿಲ್ಲ ಎನಿಸುವಷ್ಟು ಅದು ನಮ್ಮ ಬರಹಗಳಲ್ಲಿ ಹಾಸು ಹೊಕ್ಕು. ಇನ್ನು ಹರೆಯ ಎನ್ನುವುದು ಕಲ್ಲನ್ನೂ ಕವಿಯನ್ನಾಗಿಸಿಬಿಡುವ ಕಾಲ. ಅದಕ್ಕೆ ಯಾರೂ ಹೊರತಾಗಲು ಸಾಧ್ಯವಿಲ್ಲ. ಇದೇ ಹಂತದಲ್ಲಿಯೇ ನಮ್ಮ ದೇಹ ಮತ್ತೊಂದು ಹಂತದ ಬೇಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಯ ವೈಪರಿತ್ಯ ನಮ್ಮ ಭಾವಕೋಶವನ್ನು ನಾನಾಥರದ ಪರೀಕ್ಷೆಗೆ ಒಳಗಾಗುವಂತೆ ಮಾಡುತ್ತದೆ. ಇವೆಲ್ಲವೂ ಒಂದಿಡೀ ಬದುಕಿಗೆ ಅಗತ್ಯವಿರುವ ಅನುಭವಗಳು. ನಾವವನ್ನು ಅಗತ್ಯವಾಗಿ ಕಟ್ಟಿಟ್ಟುಕೊಳ್ಳಲೇ ಬೇಕು. ಅದು ಪ್ರೇಮ ಮತ್ತು ಕಾಮದ ಭಾವಗಳು ಬಲಗೊಳ್ಳುವ ಕಾಲವೂ ಹೌದು. ಪ್ರೇಮ ಮತ್ತು ಕಾಮ ನಮ್ಮನ್ನು ಅತ್ಯಂತ ತೀವ್ರವಾಗಿ ತಲ್ಲಣಿಸುವಂತೆ ಕಾಡಬಲ್ಲ ಭಾವಗಳು. ಕವಿಯಾದವನಿಗೆ ಅವು ವರದಾನವೇ ಸರಿ. ಮತ್ತೆ ಪ್ರತಿಯೊಬ್ಬರೂ ಅವಕ್ಕೆ ಈಡಾಗದೇ ಪಾರಾಗುವುದು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಹಿಂದಿನಿಂದಲೂ ರಾಜಕೀಯದ ಅಂಗಳದಲ್ಲಿಯೇ ಸಾಹಿತ್ಯ ಪೋಷಣೆ ಪಡೆದು ಬೆಳೆದು ಬಂದಿರುವುದನ್ನು ಕಾಣಬಹುದು. ರಾಜಾಶ್ರಯವಿಲ್ಲದೇ ಕವಿಗಳು ಕಾವ್ಯವನ್ನಷ್ಟೇ ನಂಬಿ ಬದುಕುವ ಸ್ಥಿತಿ ಆಗ ಇರುತ್ತಿರಲಿಲ್ಲ. ಅದರ ನಡುವೆಯೂ ಯಾವ ಆರ್ಥಿಕ ಸಹಾಯವಿಲ್ಲದೆಯೂ ಬರೆದ ಕೆಲವರು ಸಿಗುತ್ತಾರೆ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಸಿಗಬೇಕಾದ ಮಾನ ಮನ್ನಣೆ ಸಿಗದೆ ಹೋಗಿರುವುದು ಕಂಡುಬರುತ್ತದೆ. ಇದು ರಾಜಾಶ್ರಯದ ಬೆಂಬಲವಿಲ್ಲದ್ದು ಕಾರಣ ಎನ್ನುವುದೂ ತಿಳಿದುಬರುತ್ತದೆ. ಆದರೆ ಈಗ ಹಾಗಿಲ್ಲ. ಬಹಳಷ್ಟು ಬರಹಗಾರರು ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಮತ್ತು ಮುಖ್ಯವಾಗಿ ಬರಹವನ್ನೇ ನಂಬಿ ಬದುಕುತ್ತಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇಲ್ಲಿ ಸಾಹಿತ್ಯವನ್ನು ಪ್ರೀತಿಯಿಂದ ಓದುವ ಮತ್ತು ಬರೆಯುವ ಕಾರಣಕ್ಕಾಗಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈಗ ಆಮಿಷಗಳಿಲ್ಲ, ಹೊಗಳು ಭಟ್ಟಂಗಿಗಳಾಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಯಾರಿಗೂ ಇಲ್ಲ. ಆದರೆ ಇಂದಿನ ರಾಜಕೀಯ ಪ್ರಭಾವವೇ ಬೇರೆ. ಮತ್ತದು ಸಾಹಿತ್ಯದ ಮಟ್ಟಿಗೆ ಪೂರಕವಾಗಿದೆ ಅಂತನ್ನಿಸುವುದಿಲ್ಲ ನನಗೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗ. ದೇವರು ಎಂದರೆ ನಾವು ತಪ್ಪು ಮಾಡದಂತೆ ಸದಾ ನಮ್ಮನ್ನು ಎಚ್ಚರಿಸುವ ಅರಿವು. ಇದು ನನ್ನ ಸರಳ ನಂಬಿಕೆ. ದೇವರನ್ನು ನಾನು ನಂಬುವುದು ಹೀಗೆ. ತೋರಿಕೆಗೆ ದೇವರ ಮುಂದೆ ಕೂತು ಭಜನೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹಸಿದವನನ್ನ “ಮುಂದೆ ಹೋಗು…” ಎಂದು ಹೇಳಿ ದೇವರ ಮುಂದೆ ನೈವೇದ್ಯಕ್ಕಿಡುವುದು ನನ್ನಿಂದಾಗದ ಕೆಲಸ. ಮನಸ್ಸು ಶುದ್ಧಾವಗಲ್ಲದೆ ಸ್ನಾನ ಮಾಡಿರುವೆ ಎನ್ನುವ ಕಾರಣಕ್ಕೆ ದೇವರ ಎದುರು ಕೂರುವುದು ನನ್ನಿಂದ ಸಾಧ್ಯವಿಲ್ಲ. ದೇವರ ಭಾವಚಿತ್ರವೇ ಒಂದು ಅಗ್ನಿದಿವ್ಯವಿದ್ದಂತೆ. ಅದರ ಕಣ್ಣಿಗೆ ಕಣ್ಣು ಸೇರಿಸಲು ನಿಜಾಯಿತಿ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ನಿಯತ್ತಾಗಿರಬೇಕು. ಹಾಗಿಲ್ಲದೇ ಹೋಗಿ ಕೂತು ಕಣ್ಣುತಪ್ಪಿಸಿ ಕೂತು ಎದ್ದುಬರುವುದು ನನಗಂತೂ ಕಷ್ಟ. ನಾನು ಆಸ್ತಿಕಳು. ಆದರೆ ನನ್ನನ್ನು ಹತ್ತಿರದಿಂದ ನೋಡುವವರು ನಾಸ್ತಿಕಳೆಂದು ತಿಳಿಯಬಹುದು. ಕಾರಣ ಅವರ ನಂಬಿಕೆಗೂ ನನ್ನ ನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ನನ್ನ ದೇವರಿಗೊಂದು ಹೆಸರಿರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ದೇವರಿಗೆ ಜಾತಿ, ಧರ್ಮದ ಹಂಗಿಲ್ಲ. ಅದೊಂದು ಶಕ್ತಿ, ಅದೊಂದು ಬೆಳಕು… ಹಚ್ಚಿಟ್ಟ ದೀಪದ ಜ್ಯೋತಿಯೇ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ: ಇವತ್ತಿನ ಸಾಂಸ್ಕೃತಿಕ ಪ್ರಪಂಚ ಜಾಗತಿಕ ಮಟ್ಟದಲ್ಲಿ ವೈವೀಧ್ಯಮಯ ಅವಕಾಶಗಳನ್ನು ನಮಗೆ ಮಾಡಿಕೊಡುತ್ತಿದೆ. ಇವತ್ತು ಬರಹಗಾರನಿಗೆ ಸಾಕಷ್ಟು ಸ್ಪೂರ್ತಿ ಇದೆ ಬರೆಯಲಿಕ್ಕೆ. ಯಾವುದೇ ಒತ್ತಡವಿಲ್ಲ. ಆದರೆ ಆಧುನಿಕತೆಯ ವೇಗ ಅವನಲ್ಲಿ ವಿಚಿತ್ರ ಧಾವಂತವನ್ನು ಸೃಷ್ಟಿಸುತ್ತಿದೆ. ಎಲ್ಲವೂ ಇನ್ಸ್ಟಂಟ್ ಆಗುತ್ತಿರುವ ಈ ಹೊತ್ತಿನಲ್ಲಿ ಇನ್ಸ್ಟಂಟ್ ಹೆಸರು, ಪ್ರಸಿದ್ಧಿ, ಗುರುತಿಗಾಗಿ ಅರೆಬೆಂದ ಪದಾರ್ಥವನ್ನು ಬಡಿಸುವ ತರಾತುರಿಯೂ ಬೆಳೆಯುತ್ತಿದೆ. ಸ್ವಾರ್ಥ, ಅಸಹನೆ, ಮೇಲರಿಮೆ, ಕೀಳರಿಮೆ… ಮುಂತಾದ ಕಾರಣಕ್ಕೆ ತಮ್ಮ ಜಾಗಟೆಯನ್ನು ತಾವೇ ಹೊಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಅದರಿಂದ ಪಾರಾಗಿ ಬರೆಯಬೇಕಾಗಿರುವುದು ಸಧ್ಯದ ತುರ್ತು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಸಾಂಸ್ಕೃತಿಕ ಕ್ಷೇತ್ರದ ಒಳಗಿನ ರಾಜಕಾರಣ ಭಯ ಹುಟ್ಟಿಸುತ್ತದೆ. ಅರಣ್ಯದ ಯಾವ ಮರವೂ ಒಂದನ್ನೊಂದು ತುಳಿದು ಬೆಳೆಯುವುದಿಲ್ಲ. ಅಲ್ಲಿ ಒಂದು ಸಣ್ಣ ಪೊದೆ ಹೇಗೆ ಸ್ವತಂತ್ರವಾಗಿ ಹಬ್ಬಿ ಬೆಳೆಯುತ್ತದೋ ಹಾಗೆಯೇ ತೇಗ, ಹೊನ್ನೆ, ದೇವದಾರುವಿನಂತಹ ಮರಗಳೂ ಬೆಳೆಯುತ್ತವೆ. ಅಲ್ಲಿನ ಪ್ರತಿಯೊಂದು ಪ್ರಾಣಿಯೂ ಸ್ವಾಭಾವಿಕ ಆಹಾರ ಸರಪಣಿಯನ್ನು ಅನುಸರಿಸಿ ತಮ್ಮ ಬದುಕನ್ನು ತಾವು ಸಾಗಿಸುತ್ತವೆ. ಹಾಗೆ ಬೆಳೆಯಬೇಕು ನಾವು. ಆದರೆ ಇಲ್ಲಿ ಹಾಗಾಗುವುದಿಲ್ಲ. ನಕಾರಾತ್ಮಕ ಬಾಹ್ಯ ಪ್ರೇರಣೆಗಳು, ಪ್ರಭಾವಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಅವುಗಳಿಂದ ಪಾರಾಗಿ ಬರಹವನ್ನು ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ: ಸಧ್ಯದ ಕರೋನಾ ಪರಿಸ್ಥಿತಿಯಲ್ಲಿ ಯಾವುದನ್ನೂ ಅರ್ಥೈಸುವುದು, ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಆದರೂ ವಿಶ್ವದ ಮುಂದೆ ಭಾರತದ ಚಲನೆ ಆಶಾದಾಯಕವೆನಿಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ: ಖಂಡಿತ ನನಗೆ ಕನಸುಗಳಿಲ್ಲ. ಬರೆಯುವುದು ನನ್ನ ಜರೂರತ್ತು. ಯಾರನ್ನೂ ಮೆಚ್ಚಿಸಲಿಕ್ಕಲ್ಲ. ಯಾರಾದರೂ ಹೊಗಳಿದರೆ ನನಗೆ ವಿಪರೀತ ಮುಜುಗರವಾಗುತ್ತದೆ. ಇನ್ನೊಂದೇ ಒಂದು ಮಾತನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ನನ್ನಿಂದ ಎನ್ನಿಸುವಷ್ಟು. ನಾನು ನನ್ನ ತುಡಿತ, ತುಮುಲ, ಒಳ ಒತ್ತಡವನ್ನ ತಡೆಯಲಾಗದೆ ಬರೆದದ್ದನ್ನು ಸೌಜನ್ಯದಿಂದ ಓದಿ ಪ್ರೀತಿಸುವವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿರುತ್ತದೆ. ಅವರು ನಿಜವಾಗಲೂ ಹೊಗಳಿಕೆಗೆ ಅರ್ಹರು. ಇನ್ನು ಇದುವರೆಗೂ ನಾನೇನು ಬರೆದಿರುವೆನೋ ಅದೆಲ್ಲ ನಾನು ಕನಸುಕಟ್ಟಿ ಬರೆದದ್ದಲ್ಲ. ಹಾಗಾಗಿ ಇನ್ನು ಮುಂದೆಯೂ ಅದು ಹಾಗೇ ನಡೆದುಕೊಂಡು ಹೋಗುತ್ತದೆ. ನನಗೆ ನಿರೀಕ್ಷೆಗಳು ಕಡಿಮೆ. ಹಾಗಾಗಿ ನೋವೂ ಕಡಿಮೆ. ಯಾರಾದರೂ ನ್ಯಾಯವಾಗಿ ಟೀಕಿಸಿದರೆ ಖುಷಿಯಾಗುತ್ತದೆ. ಮತ್ತು ಅನಗತ್ಯ ಟೀಕೆಗಳನ್ನು ತಳ್ಳಿಹಾಕಿ ಮುನ್ನಡೆಯುವುದೂ ಗೊತ್ತು. ನೆನ್ನೆ ನಾಳೆಗಳಿಗಿಂತ ವರ್ತಮಾನದಲ್ಲಿ ಬದುಕುವವಳು ನಾನು. ಈ ಕ್ಷಣ ನಾನೇನು ಮಾಡುತ್ತಿರುತ್ತೇನೋ ಅದನ್ನು ನೂರು ಪ್ರತಿಶತ ನನ್ನ ಸಾಮರ್ಥ್ಯ ಸುರಿದು ಚೊಕ್ಕವಾಗಿ ಮಾಡಿ ಮುಗಿಸಬೇಕು, ಅಷ್ಟೇ ನನ್ನ ಗುರಿಯಾಗಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ: ಒಬ್ಬರೇ ಅಂತ ಹೇಳುವುದು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಓ.ಹೆನ್ರಿ, ಎಮಿಲಿ ಡಿಕಿನ್ಸನ್, ಶೇಕ್ಸ್‌ಪಿಯರ್, ವಿಲಿಯಮ್ ಬ್ಲೇಕ್, ಕೀಟ್ಸ್, ಮಾಯಾ ಏಂಜೆಲೋ… ಮುಂತಾದವರು. ಮತ್ತೆ ಭಾರತೀಯ ಇಂಗ್ಲೀಷ್ ಬರಹಗಾರರಲ್ಲಿ ಅರವಿಂದ್ ಅಡಿಗ, ಚೇತನ್ ಭಗತ್, ಕಮಲಾದಾಸ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್… ಮತ್ತು ಹೆಸರಿಸಲಾದಷ್ಟು ಮಂದಿ ಒಂದೇ ಒಂದು ಕವಿತೆ, ಒಂದೇ ಒಂದು ಕತೆ ಅಥವಾ ಒಂದೇ ಒಂದು ಬರಹವಾಗಿ ನನ್ನ ಓದಿಗೆ ದಕ್ಕಿ ನನ್ನ ಅರಿವನ್ನು ವಿಸ್ತರಿಸಿರುತ್ತಾರೆ. ಅವರೆಲ್ಲರೂ ನನಗೆ ಇಷ್ಟವೇ. ಮತ್ತೆ ಕನ್ನಡದಲ್ಲಿ ನನ್ನನ್ನು ಬಹಳ ಕಾಡಿದವರೆಂದರೆ ಕುವೆಂಪು ತೇಜಸ್ವಿ, ಅನಂತಮೂರ್ತಿ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ….. ಇವರೆಲ್ಲ ಈಗಲೂ ನನ್ನನ್ನು ಕಾಡುವವರೇ. ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಮಂದಿ ಬರಹಗಾರರು ತಮ್ಮ ಗಟ್ಟಿ ಬರಹದಿಂದಾಗಿ ನನಗೆ ಬಹಳ ಇಷ್ಟ. ಈಚೆಗೆ ಓದಿದ ಕೃತಿಗಳಾವವು? ಉತ್ತರ: ಇತ್ತೀಚೆಗೆ ಆಲ್ಕೆಮಿಸ್ಟ್ (poulo coelho) ಓದಿದೆ. ಬಹಳ ಇಷ್ಟವಾಯ್ತು. ಈ ಕಾದಂಬರಿಯ ಮೊದಲಲ್ಲಿ ಒಂದು ಸಣ್ಣ ಕತೆ ಬರುತ್ತದೆ. ಅಲ್ಲೊಬ್ಬ ಸಣ್ಣ ವಯಸ್ಸಿನ ಹುಡುಗನಿರುತ್ತಾನೆ. ಅವನು ಬಹಳ ಸುಂದರವಾಗಿರುತ್ತಾನೆ. ಪ್ರತಿನಿತ್ಯ ಅವನೊಂದು ತಿಳಿಗೊಳಕ್ಕೆ ಬರುತ್ತಿರುತ್ತಾನೆ. ಅದರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖುಷಿಪಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವ ಅದೇ ಕೊಳದಲ್ಲಿ ಜಾರಿ ಬಿದ್ದು ಸತ್ತು ಹೋಗುತ್ತಾನೆ. ಕೊಳ ದುಃಖಿತವಾಗುತ್ತದೆ. ಅವನು ಬಿದ್ದ ಜಾಗದಲ್ಲಿ ಸುಂದರವಾದ ಕಮಲವೊಂದು ಹುಟ್ಟಿ ಅರಳುತ್ತದೆ. ಒಮ್ಮೆ ಅತ್ತ ಹೋಗುತ್ತಿದ್ದ ದೇವತೆಗಳು ಕೊಳವನ್ನು ಕೇಳುತ್ತಾರೆ, “ನಿನಗೀಗ ದುಃಖವಾಗುತ್ತಿರಬಹುದಲ್ಲವಾ, ಅವ ಅದೆಷ್ಟು ಸುಂದರವಾಗಿದ್ದ, ಪ್ರತಿನಿತ್ಯ ನಿನ್ನ ಸಮತಲದ ಮೇಲೆ ಬಹಳ ಹತ್ತಿರದಿಂದ ತನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಂಡು ಆನಂದಿಸುತ್ತಿದ್ದ ” ಎಂದು ಕೇಳುತ್ತಾರೆ. ಆಗ ಕೊಳ “ಹುಡುಗ ಸುಂದರನಿದ್ದನಾ? ನಿಜಕ್ಕೂ ನನಗೆ ಗೊತ್ತಿಲ್ಲ. ಅವನು ಪ್ರತಿಬಾರಿ ಕಣ್ಣರಳಿಸಿ ಬಹಳ ಹತ್ತಿರದಿಂದ ನನ್ನನ್ನು ನೋಡುವಾಗ ನಾನು ಅವನ ಕಣ್ಣಲ್ಲಿ ನನ್ನದೇ ಸೌಂದರ್ಯವನ್ನು ಕಂಡು ಬೆರಗಾಗುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ, ಅದು ನನ್ನ ನೋವು” ಎನ್ನುತ್ತದೆ. ಈ ಕತೆ ಅದೆಷ್ಟು ನನ್ನನ್ನು ಕಾಡಿತೆಂದರೆ, ಹೌದಲ್ಲವಾ ನಾವು ಯಾವ ಮಟ್ಟಿಗೆ ತಯಾರಾಗಿದ್ದೇವೆ ಎಂದರೆ ನಮಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬೇಕಾಗೂ ಇಲ್ಲ. ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ: ಹಾಡುವುದು, ಬಣ್ಣಗಳ ಜೊತೆ ಆಟ ಆಡುವುದು, ಚಿತ್ರ ಬರೆಯುವುದು, ಕ್ರಾಫ್ಟ್ ಮಾಡುವುದು, ಸುಮ್ಮನೆ ಗೊತ್ತು ಗುರಿ ಇಲ್ಲದೇ ಓದುತ್ತಾ ಕೂರುವುದು, ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಏನಾದರೂ ಕಲಿಸುವುದು, ಅವರಲ್ಲಿ ಸ್ಪೂರ್ತಿ ತುಂಬುವುದು…. ಹೀಗೆ ಒಟ್ಟಿನಲ್ಲಿ ಸುಮ್ಮನೆ ಕೂರಲಿಕ್ಕಂತೂ ನನಗೆ ಸಾಧ್ಯವಿಲ್ಲ. ಏನಾದರೂ ಸರಿ ಮಾಡುತ್ತಲೇ ಇರಬೇಕು ನಾನು. ಜೊತೆಗೆ ಕೌಟುಂಬಿಕ ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ. ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ: ಸಮುದ್ರ ತೀರ ಮತ್ತು ದಟ್ಟ ಕಾಡು. ನಾನು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಂದಿನ ಟ್ರಿಪ್ಪುಗಳಲ್ಲಿ ಬಹಳಷ್ಟು

Read Post »

You cannot copy content of this page

Scroll to Top