ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಸಹನಾರವರ ನ್ಯಾನೊ ಕಥೆಗಳು

ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ ಎಲ್ಲಿ ಹೋಗಿತ್ತು? ಇಷ್ಟು ಸಣ್ಣ ಕಂತೆಗೆ ೨೦ ರೂಪಾಯಿಗಳಾ? ಹೂ, ಕೊಡು, ಕೊಡು, ನನ್ನ ಮಗ ದುಡಿದ್ದಿದ್ದೆಲ್ಲ ನಿನ್ನ ದುಂದುವೆಚ್ಚಕ್ಕೆ ಸರಿಹೋಗುತ್ತದೆ!” ಸೀತಮ್ಮ ಸೊಸೆಯನ್ನು ಗದರುತ್ತಿದ್ದದ್ದು ಇಡೀ ವಠಾರದಲ್ಲಿ ಕರ್ಕಶವಾಗಿ ಕೇಳಿಬರುತ್ತಿತ್ತು. ಮರುದಿನ ದೊಡ್ಡ ಕಂತೆ ಕೊತ್ತಂಬರಿಸೊಪ್ಪು ಸೊಸೆಯ ಕೈಲಿಟ್ಟು ಸೊಪ್ಪಿನವಳು ಮೆಲು ನುಡಿದಳು ”ನೀ ೧೦ ರೂಪಾಯಿ ಕೊಡು, ಸಾಕು” ಹೊರಗಿನವರ ಅಂತಃಕರಣ ಮನೆಯವರಿಗಿಲ್ಲವಲ್ಲ ಎಂದು ಹಲುಬುತ್ತಾ ಬಸುರಿ ಹೆಣ್ಣು ಭಾರವಾದ ಹೆಜ್ಜೆಹಾಕುತ್ತಾ ನಡೆದಳು. ಹೊಸಸೀರೆ “ಇದ್ಯಾವಗ್ರೂಪ್” ಅಕ್ಕನ ಫೋನಿನಲ್ಲಿರೋ ಫೋಟೋ ನೋಡುತ್ತಾ ಕೇಳಿದಳು ವಿನುತ. “ಹೊಸದುಕಣೆ, ಸೀರೆಗ್ರೂಪ್. ನಮ್ಮ ಹತ್ತಿರ ಇರುವ ಸೀರೆಗಳನ್ನು ಒಂದೊಂದಾಗಿ ಉಟ್ಟು, ಪಟತೆಗೆದು, ಅದರ ಬಗ್ಗೆ ಬರೆದು ಪೋಸ್ಟ್ಮಾಡುವುದು”. “ಅಬ್ಬಾ, ಒಂದೊಂದು ಸೀರೆನೂ ಎಷ್ಟು ಸೊಗಸಾಗಿದೆ. ಇನ್ನು ಆ ರವಿಕೆಗಳೂ, ಅವುಗಳ ಶೈಲಿ, ಮಾದರಿಗಳೋ..ಸಕ್ಕತ್! ನನ್ನೂ ಸೇರಿಸೆ ಇದಕ್ಕೆ! ಮೊನ್ನೆ ತಾನೆ ಇವರು ಸುಮಾರು ಹೊಸ ಸೀರೆಗಳನ್ನು ಕೊಡಿಸಿದ್ದಾರೆ”ಮೆಚ್ಚುಗೆಯಿಂದ, ಹೆಮ್ಮೆಯಿಂದ ಹೇಳಿದ ತಂಗಿಯನ್ನು ನೋಡಿ ಅಕ್ಕ ಮೆಲುನುಡಿದಳು ”ಇಲ್ಲಿ ಒಂದೊಂದು ಸೀರೆ ಕೊಂಡಾಗಲೂ ಒಂದು ಹಳೆಸೀರೆಯನ್ನು ಯಾರಿಗಾದರೂ ಕೊಡಬೇಕು, ಆಗುತ್ತಾನಿನಗೆ?!” ಎಳೆಮನಸ್ಸು “ಅಪ್ರಯೋಜಕ,ದಡ್ಡ ನಿನ್ನಮಗ” ಅಪ್ಪನ ಕರ್ಣಕಠೋರ ಮಾತುಗಳು ಅವನನ್ನು ಚೂರುಚೂರು ಮಾಡಿದ್ದು ಇದು ಮೊದಲ ಸಲವಲ್ಲ. ಆದರೆ ಕೊನೆಯದಾಗುತ್ತೆ ಎಂದು ನಿರ್ಧಾರ ಮಾಡಿ, ಕಣ್ಣೀರನ್ನು ತೊಡೆದು ಎದ್ದ ಮಾಧವ. “ವಿಜ್ಞಾನ ನನಗೆ ಓದಲಿಕ್ಕೆ ಆಗೋಲ್ಲ, ಅಪ್ಪ. ನಾನು ಆರ್ಟ್ಸ್ ತೊಗೋತೀನಿ. ಅಮ್ಮ, ನೀ ಸಪೋರ್ಟ್ಮಾಡ್ತಿ ತಾನೇ” ಮಗನ ಮಾತಿಗೆ ಸುಮ್ಮನೆ ತಲೆಆ ಡಿಸಿದರೂ ಕಣ್ಣಲ್ಲಿ ಭರವಸೆ ಇತ್ತು. 5 ವರುಷದ ನಂತರ ಮಗ ಪತ್ರಿಕೋದ್ಯಮದ ಪ್ರಶಸ್ತಿ ಸ್ವೀಕರಿಸಿದಾಗ ಅಪ್ಪನ ಕಣ್ಣಲ್ಲೂ ಸಂತಸದ ಹೊನಲು! ಇಷ್ಟೇಬದುಕು “ಬೆಳಗ್ಗೆ ಸಂಜೆ ಬರೀ ಕೆಲಸ, ಕೆಲಸ, ಕೆಲಸ. ಕಚೇರಿಯಲ್ಲಿ ಮುಗಿಸಿ ಬಂದರೆ ಮನೆಯಲ್ಲೂಹೊರೆಗೆಲಸ. ಥೂ, ಇದೂ ಒಂದು ಬದುಕೇ!” ಗೊಣಗುತ್ತಾ ಕೆಲಸ ಮಾಡುತ್ತಿದ್ದ ಮಡದಿಯನ್ನು ನೋಡಿ ರವೀಂದ್ರನಿಗೆ ಕನಿಕರ, ಬೇಸರ ಎರಡೂ ಉಕ್ಕಿತು. ತಾನು ಬೇಸರಿಸಿ ಸಿಟ್ಟಾದರೆ ಅವಳೂ ಕಿರುಚಾಡಿ ಮನೆ ರಣರಂಗವಾಗುತ್ತದೆ ಎಂದು ಕ್ಷಣಕಾಲ ದೀರ್ಘ ಉಸಿರೆಳೆದುಕೊಂಡ. ಹೆಂಡತಿಯನ್ನಪ್ಪಿ “ಈ ಭಾನುವಾರ ಖಂಡಿತ ಹೊರಗೆ ಹೋಗೋಣ, ಆಯ್ತಾ”ಎಂದವಳ ನೆತ್ತಿಗೆ ಮುತ್ತನಿತ್ತಾಗ ಅವಳ ಅರಳಿದ ಮುಖ ತಾವರೆಯನ್ನೂ ನಾಚಿಸುವಂತಿತ್ತು! ನಾಏನುಮಾಡಲಿ ಆರ್ಜಿಯನ್ನೊಮ್ಮೆ, ಅವಳನ್ನೊಮ್ಮೆ ದಿಟ್ಟಿಸಿ ನೋಡಿದರು ಹೆಡ್ಮ್ಯಾಡಮ್. “ಸರಿಯಾಗಿ ಯೋಚಿಸಿದೀರ, ಸೀಮಾ?”ಅವರ ಮಾತಿಗೆ ತುಂಬಿ ಬಂದ ಕಣ್ಣೊರೆಸಿಕೊಂಡು ಧೈರ್ಯವಾಗಿನುಡಿದಳು“ಜಾಸ್ತಿಯೋಚಿಸಿಲ್ಲ. ಏಕೆಂದರೆ ಯೋಚಿಸಿದಷ್ಟೂ ಸಮಸ್ಯೆ ಹೆಚ್ಚಾಗುತ್ತಿದೆ” ಮರುಮಾತಾಡದೆ ಟ್ರಾನ್ಸ್ಫ ರ್ ಬರೆದು ಕೊಟ್ಟರು. ಗಂಡನಿಗೆ ಯಾವಾಗಲೂ ಕೆಲಸದ ಚಿಂತೆ, ಮನಸ್ಸು ಸದಾ ಆಫೀಸಿನಲ್ಲಿ. ಒಂಟಿಯಾಗಿ ಸಮಯ ಕಳೆದು ಸಾಕಾಗಿತ್ತು ಸೀಮಾಳಿಗೆ. ಓಡಿ ಹೋಗುವುದು ಸರಿಯಾದ ಆಯ್ಕೆಯಲ್ಲ, ಆದರೂ ಕಷ್ಟಪಟ್ಟು ಜತೆಯಲ್ಲಿರುವುದಕ್ಕಿಂತ ಇದು ಮೇಲು ಎಂದು ಧೈರ್ಯ ಮಾಡಿದಳು. *********************************** *********************************

ಸಹನಾರವರ ನ್ಯಾನೊ ಕಥೆಗಳು Read Post »

ಪುಸ್ತಕ ಸಂಗಾತಿ

ಇರುಳ ಹೆರಳು

ಪುಸ್ತಕ ಪರಿಚಯ ಮನ ಸೆಳೆವ ಇರುಳ ಹೆರಳು [11:15 am, 11/10/2020] YAKOLLY: ತಮ್ಮ‌ಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ  ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ ಸುತ್ತಲೂ ಹರಡಿಕೊಂಡ ಆನಂದವೂ ನನಗಿದೆ. ಹನಿಗವನ ಗಳ ಪ್ರೇಮ ಮಾಯೆಯ ಕುರಿತು ಮತ್ತೊಮ್ಮೆ ಬರೆಯುವ ಅವಕಾಶ ದೊರೆಯಬಹುದೆಂಬ ಆಸೆಯಿದೆ. ಈಗ ನನ್ನ ಮುಂದಿರುವದು ೨೦೧೭ ರಲ್ಲಿ ಪ್ರಕಟವಾದ ಅವರ ಕವನ ಸಂಕಲನ ಇರುಳ ಹೆರಳು ನನ್ನ ಮುಂದಿದೆ.ಸಮಕಾಲೀನ ಕನ್ನಡದ ಪ್ರಮುಖ ಕವಿ ಸವದತ್ತಿಯ ನಾಗೇಶ ನಾಯಕರವರು ಸಂಕಲನದ ಅಂತರಂಗವನ್ನೇ ತೆರೆದಿಡುವಂತಹ ಚಂದದ ಬೆನ್ನುಡಿ ಬರೆದಿದ್ದಾರೆ.ಜೀವ ಮುಳ್ಳೂರ ಅವರ ಎದೆ ತೆರೆದ ಮಾತುಗಳು ಸಂಕಲನದ ಅಂದಕ್ಕೆ ಮುನ್ನುಡಿ ಬರೆದಿವೆ. ಇಲ್ಲಿಯವರೆಗೆ ಹನಿಗವಿತೆಗಳನ್ನೇ ಬರೆದ ಕವಿ ಕವನಸಂಕಲನ ಪ್ರಕಟಿಸುವ ಆಸೆ ವ್ಯಕ್ತ ಪಡಿಸುತ್ತಾ ತಮ್ಮ ಬದುಕಿನ ದುರಿತದ ಬಗೆಗು ಅದಕ್ಕಿಂತ ಮಿಗಿಲು ಕಾಣೆಯಾದ ಹಿರಿಯ ಜೀವ,ಸಾಹಿತ್ಯ ಪೋಷಕ ದಿವಂಗತ ಅರ್ಜುನ ಕೊರಟಕರ ಸರ್ ಬಗೆಗೆ ಬರೆದಿರುವ ಮಾತುಗಳು ಎದೆ ಹಿಂಡುತ್ತವೆ. ಇಲ್ಲಿನ ಕವಿತೆಗಳ ಅಂದ ವಿಮರ್ಶೆಯ ಮಾನದಂಡದಾಚೆಯೂ‌ ಮರುಳಾಗುವಷ್ಟು ಚಂದವಿವೆ.ತುಂಬ ಸರಳವಾಗಿ ಶ್ರೀಶೈಲ ಬದುಕಿನ ಆತಂಕಗಳನ್ನು ಅನಾವರಣಗೊಳಿಸುತ್ತಲೇ ಬಾಳನ್ನು ತುಂಬಿರುವ ಪ್ರೀತಿ‌ ಮಾಯೆಯ ಬಗೆಗೂ ಬರೆದಿರುವದು ಮನ ಹಿಡಿಸುವದೆಂದರೆ ಅತಿಶಯೋಕ್ತಿಯ  ಮಾತಲ್ಲ..ಇಲ್ಲಿನ‌ ಕವಿತೆಗಳು ಇನಿಯಳ ಹೆರಳಿನಷ್ಟೇ ಮೃದು ಮತ್ತು ವ್ಯಾಮೋಹ ಹುಟ್ಟಿಸುವಂತಿವೆ.ನವಿರೋನ್ಮಾದ ಕವಿತೆಯ ಈ ಸಾಲುಗಳನ್ನು ನೋಡಿ, ಬಿಸಿಯುಸಿರ ಸವಿ ಸೋಕಿ ದಾಗಲೆಲ್ಲ ರೋಮಾಂಚನ ಕಣ್ ಕೊಳದಲೆಲ್ಲ ತಣ್ ಗಿರಣಗಳ ತೂರುವ ಅಗ್ನಿದಿವ್ಯ ಎನ್ನುವ ಕವಿ ಇಲ್ಲವಾಗುವದಾದರೂ ಅಲ್ಲಿಯೂ‌ ಪ್ರೇಮವೇ ಇರಲಿ ಎನ್ನುವದಕ್ಕೆ ತೆರೆಯ ನಲಿವಿನ ನವಿಲ ಹರಿಗುಂಟ ಸಾಗೋಣ ಮುಳುಗಿದರೂ ಜೇಂಗಡಲಲಿ ಹೆಣವಾಗಿ ತೇಲೋಣ ಎನ್ನುವದು ನಿಜವಾದ ಪ್ರೇಮಿಯ ಬಾಳ ಉದ್ದೇಶವೇ ಆಗಿಸೆ.ಈ ಪ್ರೇಮ ಮಾಯೆಯ ಯಾರಾದರೂ ಎಂದಾದರೂ ಬರೆದು ಮುಗಿಸಿದ್ದಾರೆಯೇ,?ಅದಕ್ಕೆ ಕವಿ ಬಾನ ದಾರಿಗುಂಟ ನಡೆವೆ ನಿನ್ನ ತೋಳ‌ಮೇಳದಲ್ಲಿ ಚಂದ್ರ ತಾರೆ ಹಿಡಿದು ತರುವೆ ಕಣ್ಣ ಬಿಂಬದಾಳದಲ್ಲಿ ಕಣ್ಣ ಬಿಂಬದಾಳದ ಚಂದ್ರ ತಾರೆ ಹಿಡಿದು ತಂದವರೇ ಧನ್ಯರು .ಅದು ಆಸೆಯಷ್ಟೇ ! ಇಲ್ಲದಿರೆ ನಲ್ಲಳ ಇರುಳಿಡೀ   ಧಾರಾಕಾರವಾಗಿ ಸುರಿಸು ಗುಡುಗು ಮಿಂಚು  ಸಹಿತ ಬಿರುಮಳೆ! ಎಂಬ ಕೋರಿಕೆಯ ಅಗತ್ಯವಿರಲಿಲ್ಲ.’ಕಂಡಿಲ್ಲ ಯಾರೂ ಆಚೆಯ ದಂಡಿ’ ಎಂದು ಕವಿ ಸುಮ್ಮನೆ ಹಾಡಿಲ್ಲ.ಬ್ರಹ್ಮ‌ಕಮಲದ ಆಸೆ ಇದ್ದಷ್ಟೂ ಬದುಕಲ್ಲಿ ಸಂತಸದ ಪಸೆಯೊಸರುತ್ತದೆ.ಈ ಅರಕೆ ನಿರಂತರ ಇದ್ದರೇನೆ ಚಂದ .ತೃಪ್ತಿಯ ಮಾತೆಲ್ಲಿ? ಈ. ಎಲ್ಲ ಅರಕೆಯ ಪಲಕುಗಳ ಸಾಕ್ಷಿಯಾಗಿ ಸಂಕಲನದ ಹಲವು‌ ಕವಿತೆಗಳನ್ನು ಉದಾಹರಿಸುತ್ತಾ ಹೋಗಬಹುದು.ನನ್ನ ಆ ಆಸೆಯನ್ನು ಬೇಕೆಂತಲೇ ತಡೆ ಹಿಡಿದಿದ್ದೇನೆ .ಮೂಗಿಗಿಂತ‌ ಮೂಗುತಿ ಭಾರವಾಗದಿರಲೆಂದು. ಸಮಕಾಲಿನ ಕಾಳ ಕೂಟಗಳತ್ತಲೂ ಕವಿ ಗಮನ ಹರಿಸಿರುವದು ಅವರ‌ ಕವಿತೆ ಏಕಮುಖಿಯಲ್ಲ  ಎನ್ನುವದಕ್ಕೆ ಸಾಕ್ಷಿ .ರೈತನ ಬದುಕು ದುಃಖದ ಸರಪಳಿಯಲ್ಕಿ ಸಿಲುಕಿನಲ್ಲಿ ನಲುಗುವದನ್ನು ಬರೆಯುವ ಕವಿ ಇದಕ್ಕೆ ಎಲ್ಲೋ ಒಂದಿಷ್ಟು ನಾವೂ ಕಾರಣರಾಗಿರುವದನ್ನು ಸೂಚಿಸುತ್ತಾರಾದ್ದರಿಂದಲೇ ಅವರ ಕವಿತೆ ಇಷ್ಟವಾಗುತ್ತದೆ. ಕವಿಗೆ ಈ‌ ಪ್ರಾಮಾಣಿಕ‌ ಪ್ರಜ್ಞೆ ಇರದಿದ್ದರೆ ಬರೆಯುವ ಸಾಲುಗಳು ಈಟಿಯಾಗಿ ಚುಚ್ಚತೊಡಗುತ್ತವೆ. ಕುಟಿಲ‌ಕೂಟ  ಕವಿತೆಯಲ್ಲಿ ಬೆಳೆದು ಬಂದ ಹೊಲಗದ್ದೆ ಗುಡಿಸಲುಗಳ ಮರೆತಿರುವ ನಮ್ಮನ್ನು  ಚುಚ್ಚಲೆಂದೇ ಕವಿ ಕುಡಿವ ನೀರಲಿ ಮನಸೋ ಇಚ್ಛೆ ಈಜಾಡಿ ತುಚ್ಛತನದಿ ಆ ಸ್ವಚ್ಛ ನೀರಲೇ ಉಚ್ಛೆ ಹೊಯ್ವ ಕೊಚ್ಚೆ ಮನಸಿನ ಲುಚ್ಛಾ ಲಪಂಗರು ನಾವು ಆಕ್ರೋಶ ಪ್ರಾಮಾಣಿಕವಾದಾಗಲೇ ಇಷ್ಟು ತೀವ್ರ ಹರಿತ ಪದಗಳಿಗೆ ಬರುವದು.ಕವಿತಾ ಸಂಕಲನದ ಕೆಲವು ಸಮಾಜಮುಖಿ ಕವಿತೆಗಳು ತಮ್ಮ ಇರವನ್ನು ಸಾರ್ಥಕಗೊಳಿಸಿವೆ. ಮಲ್ಲಿಗೆಯ ಮನದ ಈ‌ ಕವಿಯ ಬತ್ತಳಿಕೆಯಲ್ಲೂ ಬಾಣ ಬಿರುಸಿಗಳಿರುವದಕ್ಕೆ ಸಾಕ್ಷಿಯಾಗಿವೆ.      ಕೊರಗುಗೊರಳು,ಹೇಳಿ ಬಿಡೊಮ್ಮೆ, ಭಾವ ಸ್ಪುರಣ ಮೊದಲಾದ ಕವಿತೆಗಳು ಹಾಡಾಗಿಯೂ ರಾಗ ಸಂಯೋಜನೆಯ ಸಂಗ ಬಯಸುವ ಗೀತಗಳಾಗಿವೆ. ಮನೆಯ ಮುಂದಿರುವ ಸಾಕು ನಾಯಿಯೂ ಕೂಡಾ ಮನೆಗೆ ಬರುವ ಅತಿಥಿಗಳನು ನಾದಸ್ವರದೆ ಸುಮ್ಮನಿರಿಸಿ ಒಡೆಯನನ್ನು ಕೂಗಿ ಕರೆವ ಪರಮಾಪ್ತ ಬಂಧುವೇ ! ಎಂಬಂತೆ  ಕಂಡ  ಕವಿಯ ಮನುಷ್ಯತ್ವದ ಪರಮಾವಧಿ ಭಾವಕ್ಕೆ  (ಕವಿತೆಯ ಹೆಸರೂ ನಾಯಿಯಲ್ಲ,ತಾಯಿ) ಶರಣಾಗಲೇಬೆಕೆನಿಸುತ್ತದೆ. ಅಪರೂಪಕ್ಕೊಮ್ನೆ ಒಂದು ಒಳ್ಳೆಯ ಕವನಸಂಕಲನ ಸಿಕ್ಕಾಗ ಬರೆಯುತ್ತಲೇ ಹೋಗಬೇಕೆನಿಸುತ್ತದೆ.ಪ್ರತಿ ಕವಿತೆ ಎತ್ತಿ ಹೇಳಿ ಓದುಗರ  ಸವಿಯ ರುಚಿ  ಕೆಡಿಸಬಾರದಲ್ಲವೇ? ನಾಕು ಸಾಲು ಬರೆವ ನಮಗಿಂತ ಇಡೀ ಸಂಕಲನ ಓದಿ ಸಂತಸ ಪಡುವ ಮನಸುಗಳು ಹಲವಿರುವಾಗ ನಡುವೆ ನಮ್ಮಂಥವರದು ಮಿತಿ ದಾಟುವ ಹುಚ್ಚುತನವೂ ಆಗಬಹುದು. ನೀ.ಶ್ರೀಶೈಲ ಅವರ ಸಮಗ್ರ ಹನಿಗಳ ಓದಿಗೆ,ಪ್ರಾಮಾಣಿಕ ಓದುಗನಾಗಿ ನಾನು ಕಾಯ್ದಿರುವೆ *****************************. ಡಾ.ವೈ.ಎಂ.ಯಾಕೊಳ್ಳಿ

ಇರುಳ ಹೆರಳು Read Post »

ಕಾವ್ಯಯಾನ

ನಿರಾಕರಣೆ

ಕವಿತೆ ನಿರಾಕರಣೆ ಕಾವ್ಯ ಎಸ್. ನನ್ನ ಮರೆತ ಹೊನ್ನ ಮೆತ್ತ ಹೊತ್ತುನನ್ನ ತೊರೆದು ಯೋಚಿಸಿದಆ ಘಳಿಗೆಗಳ ಚಲನಗಳುಕಳಚುತ್ತಿವೆ, ಇಂದು-ನಾಳೆಗಳ ಅಂಗಿಯಯಾರ ಕತ್ತಲು ಯಾರ ಒಡಲ್ಲಲ್ಲಿಜಿನುಗಿ ಹಾವಾಗುತ್ತಿರುವುದೋಕಡಲ ತುಂಬೆಲ್ಲ ಬರುವ ನಿನ್ನ ನೆನಪಿನಆರಿದ ಮಲ್ಲಿಗೆಯ ಕೆಂಡಗಳುಎಷ್ಟು ಹೊತ್ತು ಸುಡಬಲ್ಲವು ನನ್ನಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲುಬೇಕ ಸಮಯದ ಎಲ್ಲೆಗಳುಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿಹರಿದು ಹೋಗಲಿಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನತೋಳಲ್ಲಿ ಮಲಗಲಿನನ್ನೊಬ್ಬಳದೇ ಎಂಬ ಸಾಕ್ಷಾತ್ಕಾರಗೋರಿಯ ಮೇಲೆ ಬೆಳೆದ ರಜವಾಗಿದೆಕಳೆಯ ಭಾರಕೆ, ನೀ ಬರುವ ದಾರಿ ಕಾಣುತ್ತಿಲ್ಲಇಂದು -ನೆನ್ನೆಗಳಲ್ಲಿ ಭೂಗತವಾಗಿ ನಿರಾತ್ಮವಾಗಿದ್ದಅಣುಗಳೆಲ್ಲ ಕಣ್ಣು, ಕಿವಿ, ಮೂಗು, ಬಾಯಿಗಳಾಗಿಅಸ್ಥಿಪಂಜರಕ್ಕೆ ಇಂದು ರೆಕ್ಕೆ ಬಂದು ಉಸಿರಾಡುತ್ತಿವೆನನ್ನ ನೋವುಗಳೆಲ್ಲ ಸುಟ್ಟ ಬದನೆಕಾಯಿಗಳಾಗಿಹೊಟ್ಟೆ ಸೇರಿ ಆರಾಮದಲ್ಲಿ ನಿದ್ರಿಸುತ್ತಿವೆ. ****************************

ನಿರಾಕರಣೆ Read Post »

ಕಾವ್ಯಯಾನ

ಧಿಕ್ಕಾರ… ಧಿಕ್ಕಾರ…!!

ಕವಿತೆ ಧಿಕ್ಕಾರ… ಧಿಕ್ಕಾರ…!! ಡಾ. ಮಲ್ಲಿನಾಥ ಎಸ್. ತಳವಾರ ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರುತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರುಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳುಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ ಜಗದೊಳಗೆಬೆತ್ತಲೆ ದೇಹಕ್ಕೆ ಬೆಣ್ಣೆ ಸವರುವ ಮಾತಿನ ಮಲ್ಲರಿಗೊಂದು ಧಿಕ್ಕಾರ ತಮ್ಮ ದೇಹಕ್ಕಿಂತ ನಮ್ಮ ತುಂಬಿದ ಅವಯವಗಳ ಮೇಲೆ ಅವರ ಕಣ್ಣುಚಾವಡಿಗಳ ತುಂಬೆಲ್ಲ ಸೀರೆ, ಚೂಡಿದಾರ ಎಳೆಯುವ ನಯವಂಚಕರಿದ್ದಾರೆಅಂತರ್ಜಾಲವೂ ಬಿಕರಿಯಾಗುತಿದೆ ಇಂದು ಸೌಂದರ್ಯದ ಮಣ್ಣಿನಲ್ಲಿರಕ್ತಸಿಕ್ತ ಅಂಗಾಂಗಗಳ ಮೇಲೆ ಆಟ ಆಡುವ ಸಜ್ಜನರಿಗೊಂದು ಧಿಕ್ಕಾರ ಧಿಕ್ಕಾರ.. ಧಿಕ್ಕಾರ.. ಪುರುಷಾರ್ಥಗಳಲ್ಲಿ ಕಾಮವನ್ನು ಪೂಜಿಸುವವರಿಗೆಧಿಕ್ಕಾರ… ಧಿಕ್ಕಾರ.. ದಾನವ ರೂಪದಲ್ಲಿ ಅಡಗಿರುವ ಬುದ್ಧಿವಂತರಿಗೆ *******************************

ಧಿಕ್ಕಾರ… ಧಿಕ್ಕಾರ…!! Read Post »

ಇತರೆ

ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ ಸಜ್ಜನರ ಸಂಗ ಲೇಸು ಕಂಡಯ್ಯಾ…! ಬಾಲಾಜಿ ಕುಂಬಾರ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕುರಿ ಕಾಯುವುದು ಈತನ ಕಾಯಕವಾಗಿತ್ತು.ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ. ಅನುಭಾವಿ ವಚನಕಾರ, ವೀರಗೊಲ್ಲಾಳ ಒಬ್ಬ ಮುಗ್ಧ ಚಿಂತಕ, ಕಾಯಕ ಸಿದ್ಧಾಂತ ಮೈಗೂಡಿಸಿಕೊಂಡು ಸಾತ್ವಿಕ ಜೀವನ ಸಾಗಿಸಿದನು. “ವೀರಬೀರೇಶ್ವರ ಲಿಂಗಾ” ಎನ್ನುವ ವಚನಾಂಕಿತದಲ್ಲಿ ರಚಿಸಿದ ಈತನ ವಚನಗಳಲ್ಲಿ ‌ಲೌಕಿಕ ಬದುಕಿನ ಮೌಲ್ಯಗಳ ಅನಾವರಣಗೊಂಡಿದೆ. ಕುರಿ ಕಾಯುವ ವೃತ್ತಿ ಜೀವನದ ಅನುಭವದ ನುಡಿಗಳೇ ವಚನಗಳಾಗಿ ರೂಪಾಂತರ ಪಡೆದಿರುವುದು ಗಮನಿಸಬಹುದು. ಇದು ಕಾಯಕ ನಿಷ್ಠೆಯ ಬದ್ಧತೆಗೆ ಸಾಕ್ಷಿಯಾಗಿದೆ. ಆತ್ಮಜ್ಞಾನ ಪರಿಶುದ್ಧತೆ, ಸಾರ್ಥಕ ಬದುಕಿನ ಮೌಲ್ಯಗಳನ್ನು ಹೇಗೆ ಸಂಪಾದಿಸಿಬೇಕು ಎನ್ನುವ ‘ಜೀವನ ಸಂದೇಶ’ ವೀರಗೊಲ್ಲನು ತುಂಬಾ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾನೆ. “ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ ,ದೊಡ್ಡೆಯ ಹೊಡೆವುತ್ತ,ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.ಈ ವಿಕಾರದ ಹಿಂಡ ಬಿಡಿಸಿ,ನಿಜ ನಿಳಯ ನಿಮ್ಮಂಗವ ತೋರಿ,ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗಾ.” ಸಾರ್ಥಕ ಬದುಕಿನ ಬಗ್ಗೆ ಸಲಹೆ ನೀಡುವ ಈ ಮೇಲಿನ ವಚನ ಸಾಲುಗಳು ಪ್ರಸ್ತುತ ಎನಿಸುತ್ತವೆ. ಹಾಗಾಗಿಯೇ ಇಂದಿಗೂ ಈತನು ಜನಪದರ ಹೃದಯದೊಳಗೆ ಅಚ್ಚಳಿಯದೇ ಉಳಿದುಕೊಂಡಿದ್ದಾನೆ. ವೀರಗೊಲ್ಲಾಳ ವಚನದಲ್ಲಿ ಮನುಷ್ಯನ ಅಂತರಂಗ ಮತ್ತು ಬಹಿರಂಗದ ತೊಳಲಾಟದ ಕುರಿತು ವಿಶ್ಲೇಷಿಸುತ್ತಾನೆ. ಲೋಕಿಕ ಬದುಕಿನ ಗಂಟು ಹಾಕಿ, ಚಿಂದಿಯ ಬಟ್ಟೆ ತೊಟ್ಟು, ಚರ್ಮವನ್ನು ಹೊದಿಕೆ ಮಾಡಿಕೊಂಡಿದ್ದೇನೆ, ಚರ್ಮದ ಚೀಲವನ್ನು ಹೊತ್ತು, ಕುರಿ – ಮರಿಗಳ ಹಿಂಡು ನಡೆಸುತ್ತಿದ್ದೇನೆ. ಕುರಿಯ ಹಿಂಡಿನಲ್ಲಿ ದೊಡ್ಡ ಕುರಿಗಳು ಮತ್ತು ಚಿಕ್ಕ ಕುರಿಗಳು ಇರುತ್ತವೆ, ಅವುಗಳನ್ನು ತಾಳ್ಮೆಯಿಂದ ಹೊಡೆದುಕೊಂಡು ಮುನ್ನಡೆಸುತ್ತಿದ್ದೇನೆ ಎಂದು ಹೇಳುತ್ತಾನೆ. ಇಲ್ಲಿ ‘ದೊಡ್ಡ ಕುರಿ, ಚಿಕ್ಕ ಕುರಿ’ ಎಂಬುದು ಆತನ ವೃತ್ತಿಪರಿಭಾಷೆಯ ಪದಗಳು, ಆದರೆ ಅದನ್ನು ಮಾನವನ ಬದುಕಿಗೆ ಹೋಲಿಕೆಯ ನುಡಿಗಳು ಎಂಬುದು ನಾವು ಅರಿತುಕೊಳ್ಳಬೇಕಾಗಿದೆ. ಮಾನವನ ಜೀವನದಲ್ಲಿ ಆಸೆ, ದುರಾಸೆ, ಅಪೇಕ್ಷೆ, ಆಕಾಂಕ್ಷೆ, ಕನಸುಗಳು ಇರುವುದು ಸಹಜ. ಸಣ್ಣ ಪುಟ್ಟ ತೊಂದರೆಗಳು ಎದುರಾದಾಗ ಅವೆಲ್ಲವೂ ಹಿಮ್ಮೆಟಿಸಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು, ಬದುಕಿನ ಎಲ್ಲಾ ತೊಡಕುಗಳನ್ನು ಪ್ರೀತಿಯಿಂದ ಬಿಡಿಸಿಕೊಳ್ಳಬೇಕೆಂಬುದು ವಚನಕಾರ ವೀರಗೊಲ್ಲಾಳ ನೀಡುವ ಅನುಭವ. ದೊಡ್ಡ ಕೆಲಸಗಳು ಕೈಗೊಂಡಾಗ ದೊಡ್ಡ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಅವುಗಳಿಗೆ ಹೆಚ್ಚು ಒತ್ತು ಕೊಟ್ಟು ಮುಂದಿನ ದಾರಿ ಹುಡುಕಬೇಕಾಗುತ್ತದೆ. ಹಾಗೇ ಸಣ್ಣ ಕುರಿಗಳು ಸಾಲಾಗಿ ಸರಿದಾರಿಗೆ ನಡೆದರೆ, ದೊಡ್ಡ ಕುರಿಗಳು ಅಡ್ಡದಾರಿ ಹಿಡಿಯುತ್ತವೆ. ಅವುಗಳಿಗೆ ಸರಿದಾರಿಗೆ ತರಲು ಜ್ಞಾನ ಎಂಬ ಕೋಲು ಅವಶ್ಯವಾಗಿದೆ ಎನ್ನುವ ಚಿಂತನೆ ವಚನಕಾರರು ಪ್ರತಿಪಾದಿಸುತ್ತಾರೆ. . ಸರಿದಾರಿ ಬಿಟ್ಟು ಅಡ್ಡದಾರಿ ಹಿಡಿಯುವ ಚುಕ್ಕಿ ಚುಕ್ಕಿ ಬಣ್ಣದ ಕುರಿಗಳನ್ನು ಬಯ್ಯುತ್ತೇನೆ, ಕೋಲಿನಿಂದ ಹೊಡೆದು ತಿದ್ದುತ್ತೇನೆ. ಅಂದರೆ ಸತ್ಯ, ನಿಷ್ಠೆ, ಸನ್ಮಾರ್ಗದಲ್ಲಿ ಹೋಗುವ ಮಾನವನು ಒಮ್ಮೊಮ್ಮೆ ಅಡ್ಡದಾರಿ ಹಿಡಿಯುತ್ತಾನೆ. ಅರಿವಿಲ್ಲದೆ ತಂತಾನೆ ಅಜ್ಞಾನದ ಕೂಪದಲ್ಲಿ ಮುಳುಗುತ್ತಾನೆ. ಅಂತಹ ಮಾನವರಿಗೆ ಅರಿವಿನ ಕೊರತೆ ಇರುತ್ತದೆ ಎಂದು ಹೇಳುತ್ತಾನೆ. ಕುರಿಗಳಲ್ಲಿ ಒಂದೇ ರೀತಿಯ ಕುರಿಗಳು ಇರುವುದಿಲ್ಲ. ಹಾಗೇ ಮನುಷ್ಯರಲ್ಲಿಯೂ ಕೂಡ ಒಂದೇ ವಿಚಾರಧಾರೆದವರು ಇರಲು ಸಾಧ್ಯವಿಲ್ಲ. ಒಬ್ಬರು ಸತ್ಯ ಶುದ್ಧ ಶಾಂತಿ ಪ್ರೀಯರು, ಇನ್ನೂ ಕೆಲವರು ಅಹಂಕಾರ ಭಾವನೆದವರು, ಮತ್ತೆ ಕೆಲವರು ದುಷ್ಟರು, ಅಜ್ಞಾನಿಗಳು ಇರುತ್ತಾರೆ. ಮನುಜ ಪಥ ಬಿಟ್ಟು ಅವಗುಣ ಬೆಳೆಸುಕೊಂಡು ಹೋಗುವರನ್ನು ನ್ಯಾಯಪಥಕ್ಕೆ ಬರುವಂತೆ ಸೂಚಿಸುತ್ತಾನೆ. ಕುರಿಯ ಹಿಂಡು ತೊರೆದು ಅಡ್ಡದಾರಿ ಹಿಡಿದು ಹೋಗುವ ಸೊಕ್ಕೇರಿದ ಟಗರನ್ನು ಕೋಲಿನಿಂದ ಬಾರಿಸಿ ಸತ್ಪಥದಲ್ಲಿ ಹೋಗುವಂತೆ ತಿರುಗಿಸುತ್ತೇನೆಂದು ಹೇಳುತ್ತಾನೆ. ಹಾಗೇ ಮನುಷ್ಯ ಕೂಡ ಸಾರ್ಥಕ ಜೀವನಕ್ಕೆ ಅವಶ್ಯವಾದ ಸದ್ಗುಣಗಳಿಗೆ ಒಳಗೊಳ್ಳದ ಕಾರಣ ಒಮ್ಮೊಮ್ಮೆ ಕೆಟ್ಟ ಪ್ರವೃತ್ತಿಗಳಿಗೆ ದಾಸನಾಗುತ್ತಾನೆ. ಅಂತಹ ದಾರಿಬಿಟ್ಟವರನ್ನು ಸರಿಪಡಿಸಲು ಪ್ರಜ್ಞಾವಂತರ ಅಗತ್ಯವಿದೆ. ಎಲ್ಲಿ ಕತ್ತಲೆ ಆವರಿಸುತ್ತದೆಯೋ ಅಲ್ಲಿ ಸುಜ್ಞಾನದ ಬೆಳಕು ಹರಿಯಬೇಕು, ಅಂತಹ ಕೋಲು ನಮ್ಮ ಕೈಯಲ್ಲಿ ಇರಬೇಕು ಎನ್ನುವ ರೂಪಕದ ನುಡಿಗಳು ಶರಣರು ಹೇಳುತ್ತಾರೆ. ಜೀವನದ ಸತ್ಪಥ ಕಂಡುಕೊಳ್ಳದವರು ಮದ, ಮತ್ಸರ, ಅಹಂಕಾರ ಎಂಬ ವ್ಯಸನಗಳಿಗೆ ಒಳಪಡುತ್ತಾರೆ. ಸೊಕ್ಕೇರಿದ ಟಗರು ಹಾಗೇ ಮನುಷ್ಯ ಕೂಡ ಒಮ್ಮೊಮ್ಮೆ ತನ್ನ ನೀಚ ಬುದ್ಧಿ, ಕೌರ್ಯ, ಹಿಂಸೆ, ಶೌರ್ಯ ಪ್ರದರ್ಶಿಸಲು ಮುಂದಾಗುತ್ತಾನೆ.ಇಂತಹ ದುರ್ಗುಣ, ದುರ್ಬುದ್ಧಿಯನ್ನು ಸರಿಪಡಿಸಲು ಶರಣರ ಮಾರ್ಗದರ್ಶನ, ಒಡನಾಟ, ತೀರ ಅಗತ್ಯವಿದೆ. ಇಂದು ಸಮಾಜದಲ್ಲಿ ಜೀವಪರ, ಜನಪರ ವಿಚಾರಧಾರೆಯ ವ್ಯಕ್ತಿತ್ವಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಮದವೇರಿದ ಟಗರುಗಳ ಸೊಕ್ಕು ಮುರಿಯಲು ಅಹಿಂಸೆಯೇ ಪರಮ ಅಸ್ತ್ರವಾಗಿದೆ. ಅದನ್ನು ಸಂಪ್ರೀತಿ, ಸುಜ್ಞಾನದ ದಾರಿ ಎಂದು ಕರೆಯುತ್ತೇವೆ. ಕುರಿಗಳ ಹಿಂಡಿನೊಳಗೆ ತಿರುಗಾಡುವ ಅನುಭಾವಿ ವಚನಕಾರ ವೀರಗೊಲ್ಲನು ಕುರಿಗಳ ಜೊತೆಗಿನ ತನ್ನ ಒಡನಾಟದ ಅನುಭವ ತತ್ವಸಾರ ಮನುಷ್ಯನ ಬದುಕಿಗೆ ಕೇಂದ್ರಿಕರಿಸಿ ಬೋಧಿಸಲು ಪ್ರಯತ್ನಿಸುತ್ತಾನೆ. ಈ ವಿಕಾರ ಬಿಡಿಸಿ ನನ್ನೊಳಗೆ ಅಡಗಿರುವ ಘನಜ್ಞಾನ ಕರುಣಿಸು, ನಿನ್ನ ನಿಜ ಸ್ವರೂಪ ತೋರುವ ಮೂಲಕ ನನ್ನ ಅರಿವಿನ ಬೆಳಕು ತೋರಯ್ಯಾ ಎಂದು ಬೇಡುತ್ತಾನೆ. ದೇವರ ದಿವ್ಯ ಜ್ಞಾನಕ್ಕಾಗಿ ‘ಶರಣ ಮಾರ್ಗ’ದಲ್ಲಿ ಇರಿಸು ನನ್ನೊಡೆಯನೇ ಎಂದು ಆಧ್ಯಾತ್ಮ ಗುರು ವೀರಬೀರೇಶ್ವರನಲ್ಲಿ ಬಿನ್ನಹಿಸಿಕೊಳ್ಳುತ್ತಾನೆ. ಬಸವಣ್ಣನವರ ಸ್ಥಾಪಿಸಿದ ಶರಣಮಾರ್ಗ ಸಾತ್ವಿಕ ಬದುಕಿನ ಸತ್ಪಥ ತೋರಿಸುತ್ತದೆ. ಶರಣರು ಕಾಯಕದ ಮೂಲಕ ಆತ್ಮಜ್ಞಾನ ಪಡೆದುಕೊಂಡು ದೈನಂದಿನ ಜೀವನಕ್ಕೆ ಒಳಗೊಳ್ಳುವಂತೆ ಸೂಚಿಸುತ್ತಾರೆ. ಜೀವನದಲ್ಲಿ ಎದುರಾಗುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಆದರೆ ಪರಿಹಾರ ಕಂಡುಕೊಳ್ಳಲು ಬಹುತೇಕರು ವಿಫಲರಾಗುತ್ತಾರೆ. ಅದಕ್ಕೆ ಜ್ಞಾನ, ತಾಳ್ಮೆ, ಕಾಲ, ಸತ್ಯ ಮತ್ತು ಧೈರ್ಯದ ಅಗತ್ಯವಿದೆ. ಕಾಯಕದ ಅನುಭಾವದ ಮೂಲಕ ಜ್ಞಾನ ಚೈತನ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಬಸವಾದಿ ಶರಣರು ಜೀವನ ಚೈತನ್ಯರಾಗಿ, ವಿಶ್ವಮಾನವರಾಗಿ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರ ಜೀವನ ದರ್ಶನದ ಅನುಭಾವ ಸಾರ್ವಕಾಲಿಕ ಸತ್ಯವಾಗಿದೆ‌. ಶರಣರ ವಚನ ಅನುಭವದ ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ. “ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.” ಶರಣ ವೀರಗೊಲ್ಲಾಳ ಮತ್ತೊಂದು ವಚನದಲ್ಲಿ ಕಲ್ಲು, ಮಣ್ಣು, ಮರ ದೇವರಲ್ಲ, ಕಲ್ಲು ದೇವರು ಉಳಿಗೆ ಹೆದರಿತು, ಮರ.ದೇವರು ಉರಿಗೆ ಬೆಂದಿತು, ಮಣ್ಣು ದೇವರು ನೀರಿನಲ್ಲಿ ಕರಗಿತು. ಇಂತಹ ದೇವರು ದೇವರಲ್ಲ ಎನ್ನುವ ತಾತ್ವಿಕ ಚಿಂತನೆ ಶರಣ ವೀರಗೊಲ್ಲನು ದಾಖಲಿಸುತ್ತಾನೆ. ಒಬ್ಬ ಸಾಮಾನ್ಯ ಕಾಯಕ ಜೀವಿ, ಇಂತಹ ಅನನ್ಯವಾದ ತತ್ವಪರಿಭಾಷೆಯ ವಚನಗಳು ರಚಿಸಿರುವುದು ಈ ನೆಲದ ಹೆಮ್ಮೆ ಎಂದಷ್ಟೇ ಹೇಳಬಹುದು. ಶರಣರ ಸಂದೇಶಗಳನ್ನು ಮತ್ತೆ ಮುನ್ನೆಲೆಗೆ ಬಂದರೆ ಈ ನೆಲ ಶಾಂತಿ, ಸೌಹಾರ್ದತೆ ಹಾಗೂ ಕಲ್ಯಾಣ (ಸಮ ಸಮಾಜ) ರಾಜ್ಯವಾಗಿ ರೂಪುಗೊಳ್ಳಲು ಸಾಧ್ಯವಿದೆ. *****************************

ಸಜ್ಜನರ ಸಂಗ ಲೇಸು ಕಂಡಯ್ಯಾ…! Read Post »

ಕಾವ್ಯಯಾನ

ಸ್ವಗತ

ಕವಿತೆ ಸ್ವಗತ ಮಮತಾ ಶಂಕರ್ ದೂರದಲ್ಲಿ ನಾನು ನೀನುಒಂದಾಗಿ ಕಂಡರೂ ಒಂದಾಗದ ನಿಜದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ ನೀನು ಒಮ್ಮೊಮ್ಮೆ ಉರಿಯೆದ್ದುಸುರಿಸುವೆ ಕೆಂಡ ಮೈಮನಗಳಿಗೆ ;ನಾನೋ ಹಪಹಪಿಸುವೆ ಒಂದೆರಡುತಂಪನಿಗಳಿಗೆಹುಚ್ಚೆದ್ದು ಮಳೆ ಸುರಿಸುವೆ ಅದೆಒಲವೆಂದು ಬಾನೆದೆಯ ಸೀಳಿ ;ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆಬಿಕ್ಕಳಿಸುತ ನಾನಿಲ್ಲಿ…… ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನುನಿನಗುಂಟೆ ಈ ಒಡಲೊಳಗಿಂದಕಣಕಣವು ನೋವಾಗಿ ಚಿಗುರಿ ಮರಹೂ ಕಾಯಿ ಹಣ್ಣಾಗುವ ಭಾರ ?ನೀ ಸುರಿಸಿದರೂ ಬೆಳದಿಂಗಳು ಮಳೆಯಕ್ಷಣವಷ್ಟೆ ; ಮತ್ತೆಲ್ಲ ಮಾಯೆ…….. ನನ್ನೆದೆಯ ನೋವುಗಳು, ನಿಟ್ಟುಸಿರುಗಳುತಾಕುವುದೇ ಇಲ್ಲ ನಿನಗೆಏಕೆಂದರೆ ತಾಕುವುದೇ ಇಲ್ಲನಾ ನಿನಗೆ ನೀ ನನಗೆ !ಆದರೂ ಇರಬೇಕಾಗುತ್ತದೆಒಬ್ಬರಿಗೊಬ್ಬರು ಪೂರಕವಾಗಿಸೌಖ್ಯಯಾನಕೆ ಒಂದಾಗದರೈಲು ಹಳಿಗಳ ಹಾಗೆಒಂದಾಗಿ ಬಾಳುವುದೆ ಬದುಕೆಂದುಕೊಳ್ಳುವುದಕ್ಕಿಂತಜೊತೆಯಾಗಿ ಸಾಗುವುದೆ ಒಲವೆಂದುಕೊಳ್ಳುತ್ತ **************************************

ಸ್ವಗತ Read Post »

ಕಾವ್ಯಯಾನ

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

ಚಿಂದಿ ಆಯುವ ಕುಡಿಗಳು Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ ದಣಿದು ಹೊರ ಜಾರುವ ಮಂದ ಬೆಳಕು. ಮನೆ ಕಟ್ಟಲು ಜಾಗ ಕಡಿಮೆ ಅಂತ ಸಾಲುಮನೆಗಳು ಗೋಡೆಗಳನ್ನು ಹಂಚಿಕೊಂಡಿವೆ. ಹ್ಞಾ! ಅಲ್ಲಿದೆ ನೋಡಿ, ವಾಂಖೇಡೆ ಸ್ಟೇಡಿಯಂ. ಈ ಅಂಗಣದಲ್ಲಿ ಐದಡಿಯ ಹುಡುಗ ಸಚಿನ್ ಸಿಕ್ಸರ್ ಹೊಡೆದಾಗ ಸಾವಿರ ಚಪ್ಪಾಳೆಗಳು ಅನುರಣಿಸಿತ್ತು. ಆತ ಸೊನ್ನೆಗೆ ಔಟಾದಾಗ ಜನ ಅವಹೇಳನದಿಂದ ಕಿರುಚಿದ್ದೂ ಇಲ್ಲಿಯೇ. ವಿಮಾನ ರೆಕ್ಕೆ ತಗ್ಗಿಸಿ ಎಡಕ್ಕೆ ವಾಲಿ, ಮೂತಿ ತಿರುಗಿಸುವಾಗ, ಕೆಳಗಿನ ರೆಡ್ ಲೈಟ್ ನ ರಸ್ತೆಗಳು, ಹತ್ತಿರವಾದಂತೆ ಕಂಡಿತು. ಇಲ್ಲಿ ಕೆಂಪು ದೀಪಗಳು ಮೊಟ್ಟೆಯಿಟ್ಟು, ಕಾಯದಕಾವು ಕೊಟ್ಟು, ಮರಿಯಾಗುವಾಗ ಬೆಳಕಿನ ಹೆಣ್ಣು-ಬಣ್ಣಕ್ಕೆ ಕಣ್ಣೀರು ಬೆರೆತು ರಾಡಿ ರಾಡಿಯಾಗಿ ಹರಡುತ್ತೆ. ಹರಡಿದ ವರ್ಣ ಕೊಲಾಜ್ ಆರ್ಟ್ ಅನ್ನೋವವರೂ ಇದ್ದಾರೆ. ಚಿತ್ರ ಚಲಿಸುತ್ತಾ ಚಲನಚಿತ್ರವಾಗಿ ಬಾಕ್ಸ್ ಆಫೀಸ್ ಹಿಟ್ ಕೂಡಾ ಆಗಿದೆ. ಆಗಸದ ಕಣ್ಣಿಗೆ, ಬುಸ್ ಬುಸ್ ಅಂತ ಬುಸುಗುಟ್ಟುತ್ತಾ ಓಡುವ  ಉಗಿಬಂಡಿಗಳು ಸಹಸ್ರ ಪದಿಯಂತೆ ನಿಧಾನವಾಗಿ ತೆವಳುವಂತೆ ಕಂಡವು. ಇರುವೆ ಸಾಲಿನಂತೆ ರಸ್ತೆ ತುಂಬಾ ವಾಹನಗಳು. ಕರ್ರಗೆ ಹೊಗೆ ಕಾರ್ಖಾನೆಯ ಚಿಮಿಣಿಯಿಂದ, ರಜನೀಕಾಂತ್ ಸಿನೆಮಾದಲ್ಲಿ ಧೂಮದ ಉಂಗುರ ಬಿಟ್ಟ ಹಾಗೆ ಸುತ್ತಿ ಸುಳಿದು ವಿದ್ಯುತ್ ದೀಪಗಳ ನಡುವೆ ಕತ್ತಲನ್ನು ಕಪ್ಪಾಗಿಸಲು ಪ್ರಯತ್ನ ಮಾಡುತ್ತವೆ. ಸಹಸ್ರಾರು ವರ್ಷಗಳಿಂದ ದಡದಿಂದ ಬಿಡುಗಡೆಗೆ ಎಡೆಬಿಡದೆ ಅಲೆಯಾಗಿ ಅಪ್ಪಳಿಸಿ ಪ್ರಯತ್ನಿಸಿ ಉಪ್ಪುಪ್ಪಾದರೂ ಸೋಲೊಪ್ಪದ ಕಡಲಿನ ನೀರು, ಇಡೀ ಪೇಟೆಯ ಬೆಳಕನ್ನು ಪ್ರತಿಫಲಿಸಿ ತನ್ನೊಳಗೆ ಬಿಂಬವಾಗಿಸಿ ಬೆಚ್ಚಗಿದ್ದಂತೆ ಕಂಡಿತು. ಮುಂಬಯಿಯಲ್ಲಿ ಅತ್ಯಂತ ದೊಡ್ಡ ಸ್ಲಮ್ ಇದೆ ಅಂತಾರೆ. ಆದರೆ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತ ಕಣ್ಣುಗಳಿಗೆ ಈ ಗುಡಿಸಲುಗಳು, ನಿರ್ಲಕ್ಷಿಸುವಷ್ಟು ಚಿಕ್ಕವು. ಷಹರದ ಅಂಡರ್ ಗ್ರೌಂಡ್ ಚಟುವಟಿಕೆಗಳು ಮನಸ್ಸಿನ ಒಳಪದರದ ವ್ಯಭಿಚಾರೀ ಭಾವದ ಹಾಗೆ, ವಿಮಾನದ ನೇರ ಕಣ್ಣಿಗೆ ಕಾಣಿಸಲ್ಲ.  ಪ್ಲೀಸ್ ಟೈ ಯುವರ್ ಸೀಟ್ ಬೆಲ್ಟ್.  ವಿಮಾನ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಲಿದೆ ಅಂತ ಪೈಲಟ್ ಗೊಗ್ಗರು ಇಂಗ್ಲಿಷ್ ನಲ್ಲಿ ಕೊರೆದಾಗ ಪೇಟೆಯ ನೋಟದಿಂದ ಕಣ್ಣು ಒಳ ಸೆಳೆದು ವಿಮಾನದ ಚೌಕಟ್ಟಿನ ಒಳಗೆ ಸ್ಥಿರನಾದೆ. ಹೌದಲ್ಲಾ! ಇದೇ ಮುಂಬಯಿ ನಗರದ ಬಗ್ಗೆ ಜಿ.ಎಸ್.ಶಿವರುದ್ರಪ್ಪ ನವರು ಬರೆದ ಕವಿತೆ ನೆನಪಾಯಿತು. ಕೇಳುವಿರಾ.. **   **   **   ** ಮುಂಬೈ ಜಾತಕ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. ***       ***       **** ಕವಿತೆಯ ಹೆಸರೇ ಮುಂಬೈಯ ಜಾತಕ. ಜಾತಕ ಎಂದರೆ ಹುಟ್ಟು, ಸಾವು ಇವಿಷ್ಟರ ನಡುವಿನ ಬದುಕಿನ ಚಿತ್ರವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟ ಚಿತ್ರಸಮೀಕರಣ. ಕವಿತೆ ಮುಂಬಯಿ ನಗರದ ಬದುಕಿನ ಹಲವು ಘಟ್ಟಗಳನ್ನು ಒಂದೊಂದಾಗಿ ತೆರೆದಂತೆ ನಗರದ ಫಿಸಿಯಾಲಜಿ ಮತ್ತು ಸೈಕಾಲಜಿ ಎರಡರ ಪರಿಚಯವಾಗುತ್ತೆ. ಇಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಕವಿ ಪಟ್ಟಣವನ್ನು ಒಳ್ಳೆಯದು, ಕೆಟ್ಟದು ಎಂಬ ಬೈಪೋಲಾರ್ ದೃಷ್ಟಿಕೋನದಿಂದ ನೋಡುವುದೇ ಇಲ್ಲ. ಸರಿ- ತಪ್ಪುಗಳು, ಯಾವಾಗಲೂ ಮನುಷ್ಯನ ಪರಿಸ್ಥಿತಿಗೆ ಸಾಪೇಕ್ಷವಾಗಿರುವುದರಿಂದ, ಈ ಕವಿತೆಯ ಧ್ವನಿಗೆ ಸಮತೋಲನವಿದೆ. ಹುಟ್ಟಿದ್ದು: ಆಸ್ಪತ್ರೆಯಲ್ಲಿ ಯಾರು ಹುಟ್ಟಿದ್ದು!  ಹಳೆಯ ಕಾಲದಲ್ಲಿ ಹಳ್ಳಿಯಲ್ಲಿ ಮನೆಯಲ್ಲಿಯೇ ಹೆರಿಗೆಯ ವ್ಯವಸ್ಥೆ ಇತ್ತು. ಹಳ್ಳಿಯಲ್ಲಿ ಮನೆಗೆ ಬಂದು ಹೆರಿಗೆ ಮಾಡಿಸುವ ಹೆಂಗಸು, ಮಗುವಿನ ಜೀವನದುದ್ದಕ್ಕೂ, ಎರಡನೇ ಅಮ್ಮನ ಥರ ವಿಶೇಷ ಅಟ್ಯಾಚ್ಮೆಂಟ್ ಮತ್ತು ಸ್ಥಾನಮಾನ ಪಡೆಯುತ್ತಾಳೆ. ಆ ಹೆಂಗಸು, ಆಗಾಗ ತಾನು ಹೆರಿಗೆ ಮಾಡಿದ ಮಕ್ಜಳನ್ನು ನೋಡಿ ಖುಷಿ ಪಡುವುದು ಅತ್ಯಂತ ಸಾಮಾನ್ಯ. ಅದೊಂದು ಭಾವನಾತ್ಮಕ ಸಂಬಂಧ. ಆದರೆ ನಗರದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ. ಅದೊಂದು ವ್ಯವಸ್ಥೆ. ಒಂದು ಥರಾ ಈ ಕಡೆ ಬಾಗಿಲಿಂದ ಗರ್ಭವತಿಯರು ಒಳ ಹೋದರೆ, ಆ ಕಡೆ ಬಾಗಿಲಿಂದ ಅಮ್ಮ ಮತ್ತು ಮಗು ಹೊರಗೆ ಬರುವಂತಹ ಇಂಡಸ್ಟ್ರಿಯಲ್ ವ್ಯವಸ್ಥೆ. ಇಲ್ಲಿ ಭಾವನಾತ್ಮಕ ಸಂಬಂಧ ಇಲ್ಲ. ಆಸ್ಪತ್ರೆಗೆ ಹಣ ಕಟ್ಟಿದರೆ, ಹೆರಿಗೆ ಮಾಡಿಸಿ ಕಳಿಸುತ್ತಾರೆ. ಹಾಗೆ, ಮಗುವಿನ ಹುಟ್ಟಿನಲ್ಲಿಯೇ ನಗರಸ್ವಭಾವವಿದೆ. ಹಾಗೆ ಹುಟ್ಟಿದ ಮಕ್ಕಳು ಬೆಳೆದು ನಗರದ ಪ್ರಜೆಗಳಾಗುತ್ತಾರೆ. ಅಂದರೆ ನಗರವೇ ಆಗುತ್ತಾರೆ. ಹಾಗೆ ನೋಡಿದಾಗ ತಿಳಿಯುತ್ತೆ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಅನ್ನುವಾಗ, ನಗರಕ್ಕೆ ನಗರವೇ ಹುಟ್ಟಿದ್ದು ಆಸ್ಪತ್ರೆಯಲ್ಲಿ ಅಂತ. ” ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ “ ಬಸ್ಸು,ಟ್ರಾಂ, ಕಾರು, ಎಲೆಕ್ಟ್ರಿಕ್ ಟ್ರೈನ್ ಗಳು ಸದಾ ಚಲನಶೀಲವಾದ, ಸದಾ ಗಿಜಿಗುಟ್ಟುವ, ವ್ಯವಸ್ಥೆಯ ಸಂಕೇತ. ಮುಂಬಯಿಯಲ್ಲಿ ಅಮ್ಮಂದಿರೂ ದಿನವಿಡೀ ಕೆಲಸಕ್ಕಾಗಿ ಚಲಿಸುವಾಗ ಕಂಕುಳಲ್ಲಿ ಮಗು! ಹಳ್ಳಿಯಲ್ಲಿ ಪ್ರಾಣಿ ಪಕ್ಷಿಗಳ ಜತೆಗೆ ಬೆಳೆದರೆ, ಮುಂಬಯಿ ಯಲ್ಲಿ ಬೆಳವಣಿಗೆಯ ಸಂಗಾತಿ, ಯಂತ್ರಗಳು. ಅದರ ಪರಿಣಾಮ ಮನಸ್ಸಿನ ಮೇಲೆ ಏನು ಎಂಬುದು ಓದುಗನ ಗ್ರಹಿಕೆಗೆ ಬಿಟ್ಟದ್ದು. ” ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ “ ಸಾಧಾರಣವಾಗಿ ಹಳ್ಳಿಯ ಮನೆಯಲ್ಲಿ ದನ, ಅದರ ಹಾಲು ಕರೆದು ಮಗುವಿಗೆ ಕುಡಿಸುತ್ತಾರೆ. ಮಗು ಬೆಳೆದು ಮಾತಾಡಲು ತೊಡಗಿದಾಗ ಆ ದನವನ್ನು ಮಗುವಿಗೆ ಗೋಮಾತೆ ಎಂದು ಪರಿಚಯಿಸುವ ಪರಿಪಾಠ. ಆ ಮಗು ಮತ್ತು ದನದ ನಡುವೆ ಒಂದು ಅನೂಹ್ಯ ಸಂಬಂಧ ಬೆಳೆಯುತ್ತೆ. ಮುಂಬಯಿಯಲ್ಲಿ ಹಾಗಲ್ಲ. ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಲೀ ಹಾಲು!. ಮಗುವಿಗೆ ಹಾಲಿನ ಉಗಮವೇ ಒಂದು ಬಾಟಲಿಯಂತಹ ವಸ್ತುವಾದ ಹಾಗೆ. ಗೋಮಾತೆಯ ಜಾಗದಲ್ಲಿ ಬಾಟಲಿ. ಗ್ರೈಪ್ ಸಿರಪ್, ಹಾರ್ಲಿಕ್ಸು ಎಲ್ಲವೂ, ಜಾಹೀರಾತು ಜಗತ್ತಿನ ಪೇಯಗಳು. ಮಗು ಮತ್ತು ಅಮ್ಮ ಎಲ್ಲರೂ ಜಾಹೀರಾತಿನ ಮೇಲೆ ವಿಶ್ವಾಸವಿಟ್ಟು ಮಗುವಿನ ಬೆಳವಣಿಗೆಯ ಪೋಷಕಾಂಶಗಳ ನಿರ್ಧಾರ ಮಾಡುತ್ತಾರೆ. ” ಕಂಡಿದ್ದು: ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ನೂರಾರು ಕೊರಳು “ ಕಾಣುವುದು ಎಂದರೆ ದರ್ಶನ. ಬೆಳಗಿನಿಂದ ಸಂಜೆಯ ತನಕ ಎಂದರೆ, ಒಂದು ದಿನವೂ ಆಗಬಹುದು, ಹುಟ್ಟಿನಿಂದ ಸಾವಿನ ತನಕದ ಬದುಕೂ ಆಗಬಹುದು. ಲಕ್ಷ ಲಕ್ಷ ಚಕ್ರದ ಉರುಳು, ಕಾಲಚಕ್ರವೇ, ಋತುಚಕ್ರವೇ, ಬದುಕಿನ ಏರಿಳಿತವೇ, ನಗರದ ಚಲಿಸುವ ವಾಹನಗಳ ಚಕ್ರಗಳು ಉರುಳುವ ಚಲನಶೀಲತೆಯೇ, ಅಥವಾ ಕೊರಳಿಗೆ ಉರುಳಾಗುವ ಹಲವಾರು ಸಮಸ್ಯೆಗಳೇ?. ಸುಶಾಂತ್ ಸಿಂಗ್ ಹಾಕಿಕೊಂಡ ಉರುಳೇ?. ಅವಸರದ ಹೆಜ್ಜೆ ಹಾಕುವುದು, ಕಾಲುಗಳು. ಜತೆಗೇ ಸರಿಯುವುದು ಕೊರಳು. ಕೊರಳು ಎಂದರೆ ಧ್ವನಿ, ಮಾತು,ಅಭಿಪ್ರಾಯ ಸಿದ್ಧಾಂತ ಇತ್ಯಾದಿಗಳಾಗಿ ಅನ್ವಯಿಸಲು ಸಾಧ್ಯ. ನಡಿಗೆಯ ವೇಗಕ್ಕೆ ಪ್ರಾಮುಖ್ಯತೆ. ಕೊರಳಿನ ದನಿಗಲ್ಲ ಅನ್ನುವುದು ಒಂದರ್ಥವಾದರೆ, ಚಲನಶೀಲ ವ್ಯವಸ್ಥೆಗೆ ಸಾಪೇಕ್ಷವಾಗಿ ಸಿದ್ಧಾಂತ, ಅಭಿವ್ಯಕ್ತಿ, ಚಲಿಸುತ್ತೆ. ” ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು.” ಜೀವನದ ಶಾಲೆಯಲ್ಲಿ ನಡೆದ ಪ್ರತೀ ಹೆಜ್ಜೆ ಪಠ್ಯ.  ಮೇಲಿನ ಪ್ಯಾರಾದಲ್ಲಿ ಅಷ್ಟೂ ಪ್ರತಿಮೆಗಳೇ.  ಅವುಗಳನ್ನು ಓದುಗರ ಚಿಂತನೆಗೆ ಬಿಡಲೇ?. ಬೇರೂರು, ಹೀರು ಎನ್ನುವ ಕವಿಯ ಭಾವ ಚಲನಶೀಲ ಬದುಕು ಹಂಬಲಿಸುವ ಸ್ಥರತೆಯೇ?. ಬೇರೂರದಿದ್ದಲ್ಲಿ ಹೀರುವುದು ಹೇಗೆ. ಜೀವನದ ಸಾರವನ್ನು ಹೀರಲು ಚಲನಶೀಲತೆಯಷ್ಟೇ ಸ್ಥಿರಪ್ರಜ್ಞೆಯೂ ಆಳ ಚಿಂತನೆಯೂ ಅಗತ್ಯವೇ. ತಾಯಿ, ತಂದೆ, ವಿದ್ಯೆಯ ಬಗ್ಗೆ ಕವಿ ಸೂಚ್ಯವಾಗಿ ತಿಳಿಸುವ ಸಾಲುಗಳು ನಿಮ್ಮ ಸೃಜನಶೀಲ ಚಿಂತನೆಗೆ ಹಲವು ರೂಪದಲ್ಲಿ ಕಾಣ ಬಹುದು. ” ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.” ಈ ಸಾಲುಗಳಲ್ಲಿ ಪ್ರತಿಯೊಂದು ಪದವೂ ರೂಪಕ ಅಥವಾ ಪ್ರತಿಮೆ. ಬಟ್ಟೆಯಲ್ಲಿ ಮೈ ತುರುಕಿ ಓಡುವುದು! ಎಂತಹಾ ಕಲ್ಪನೆ ಅಲ್ಲವೇ. ಬಟ್ಟೆಗೆ ಹೊಂದುವಂತೆ ದೇಹವನ್ನು ಫಿಟ್ ಮಾಡುವ ಜರೂರತ್ತು. ಬಟ್ಟೆ ಎಂದರೆ ದಾರಿ ಎಂಬ ಅರ್ಥ ತಗೊಂಡರೆ, ಬದುಕಿನ ದಾರಿ ಹೇಗಿದೆಯೋ ಅದಕ್ಕೆ ಸರಿಯಾದ ದೇಹಶಿಸ್ತು ಅಗತ್ಯ. ಆಫೀಸ್ ೫೦ ಕ.ಮೀ.ದೂರದಲ್ಲಿ ಇದ್ದರೆ, ಬೆಳಗಿನ ಜಾವ ಎದ್ದು ಮೂಡುವ ಸೂರ್ಯನಿಗೆ ಬೆನ್ನು ಹಾಕಿ,  ಆಫೀಸಿನತ್ತ ರೈಲುಗಾಡಿ ಹತ್ತಿ ಚಲಿಸಬೇಕು. ನಿದ್ದೆ ಬೇಡುವ ದೇಹವನ್ನು ದಂಡಿಸಿ, ಹೊಂದಿಸಿ, ಬದುಕಿನ ಬಟ್ಟೆಗೆ ತುರುಕಬೇಕು.   ‘ಸಾಯಂಕಾಲ ರೆಪ್ಪೆಯ ಮೇಲೆ ಹತ್ತು ಮಣ ಭಾರ ಹೊತ್ತು’  ಬದುಕಿನ ಸಾಯಂಕಾಲವೇ? ಅನುಭವದ ಭಾರವೇ?. ಕಲಿತ, ನಂಬಿದ ಸಿದ್ಧಾಂತದ/ ನಂಬಿಕೆಗಳ ಭಾರವೇ. ಆ ಭಾರದಿಂದ ಮುಂದಿನ ದರ್ಶನದ ಬಾಗಿಲಾದ ರೆಪ್ಪೆ ಮುಚ್ಚುತ್ತಾ ಇದೆಯೇ?. “ಬಾಡಿಗೆ ಮನೆಯ ನೆರಳು” ಅನನ್ಯ ಅಭಿವ್ಯಕ್ತಿ.  ಇಹ ಲೋಕವೇ ಬಾಡಿಗೆ ಮನೆಯೇ?. “ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು”

Read Post »

You cannot copy content of this page

Scroll to Top