ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ನೂರು ಪದಗಳಮೂರು ಕಥೆಗಳು

ಕಥೆಗಳು ಡಾ.ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರದ್ದೇ ಆಗಿತ್ತು. ಸಮಸ್ಯೆಯ ಜಾಡನ್ನಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೇ ಮಸಿ ಬಳೆವಂತ ಪರಿಹಾರ ಹೇಳಿದ ಪಾಪ  ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು. ಈ ಸಂದಿಗ್ದದಲ್ಲಿ ದಿನಕ್ಕೊಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ವೆಂಕಣ್ಣಯ್ಯ ಯೋಚಿಸುತ್ತಿದ್ದರಾದರೂ ಅದನ್ನು ನಿಜವಾಗಿ ಕಾರ್ಯರೂಪಕ್ಕೆ ಇಳಿಸಲು ಅವರಲ್ಲಿ ಧೈರ್ಯ ಸಾಲುತ್ತಿರಲಿಲ್ಲ.  ಬದುಕೇ ಹೀಗಲ್ಲವೇ? ಅದೇನು ಪರಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರುವಾಗುತ್ತವೇನು? ಬದುಕನ್ನು ಕಟ್ಟುತ್ತ ಕಟ್ಟುತ್ತ ದಾರಿ ಕಂಡುಕೊಳ್ಳುತ್ತ ಸಾಗಬೇಕು. ಒಳ್ಳೇ ಪೇಚಿನಲ್ಲಿ ಸಿಕ್ಕಿಬಿಟ್ಟೆನಲ್ಲ?ಎಂದುಕೊಂಡರು. ಹಾಗಂತ ಅಂತ್ಯದಲ್ಲಾದರೂಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಇಲ್ಲದಿದ್ದರೆ ಏನು ಚೆನ್ನಾಗಿರುತ್ತದೆ? ವೆಂಕಣ್ಣಯ್ಯ ಐವತ್ತನೇ ವಯಸ್ಸಿನಲ್ಲಿ ಹೊಸದಾಗಿ ಕಥೆ ಬರೆಯಲು ಶುರುಮಾಡಿದ್ದು ತಾನೇ? ಅದೂ ಮೊದಲ ಕಥೆ! ———- ರಕ್ಷಣೆ-ಭಕ್ಷಣೆ ಯಾಕೋ ಬಟ್ಟೆಚೀಲ ವಾಪಸ್ತಂದೆ? ಹೋಗೋದ್ರೊಳಗೆ ತುಂಕೂರಿಗೆ ಕರ್ಕೊಂಡೋಗ್ಬಿಟ್ಟಿದ್ರು… ಅಯ್ಯೋ ಹಾಕ್ಕೊಳ್ಳೋಕೆ ಒಂದುಬಟ್ಟೆಇಲ್ಲ, ಕೈಯಲ್ಲೊಂದು ಕಾಸಿರ್ಲಿಲ್ಲ..ಈಗೇನ್ಮಾಡೋದು? ಅದಿರ್ಲಿ..ಈಗನಮ್ಮನ್ನೂ ಚೆಕ್ಮಾಡೋಕೆ ಬರ್ತಾರೆ ಅನ್ನಿಸುತ್ತೆ. ನಾವೇನ್ಮಾಡಿದ್ದೀವಿ ಅಂತ? ಜೊತೇಲಿದ್ವಲ್ಲಅದಕ್ಕೆ… ಮನೇಸುತ್ತ ತಗಡು ಹೊಡೀಬಹುದು.. ಯಾಕೆ ?ತಗಡುಹೊಡಿದ್ರೆ ..ಏನಾಗುತ್ತೆ? ನೋಟೀಸೂ ಅಂಟಿಸಬಹುದು.. ನಂದೀಶ…ಅವೆಲ್ಲ ಯಾಕೇಂತ ಹೇಳೋ?  ಯಾರಿಗ್ಗೊತ್ತು…ಸಾಬರೇನಾದ್ರೂ ಆಗಿದ್ರೆಇಬ್ಬರುಪೋಲೀಸರ್ನುಕಾವಲುಹಾಕ್ತಿದ್ರುಗೊತ್ತಾ?…ಇಲ್ದಿದ್ರೆ ಅವರು ತಪ್ಪಿಸ್ಕೊಂಡು ಓಡಾಡ್ತಾರಂತೆ… ನಾವು ಹಂಗ್ಮಾಡಲ್ಲ ಅಂತ ಬರಕೊಟ್ರೆ?ನಮ್ಮನ್ನೆಲ್ಲ ಕೂಡಾಕಿದ್ರೆ ಅಮ್ಮಂಗ್ ಬಟ್ಟೆ ಕೊಡೋರ್ಯಾರು? ನಿಮ್ಮಜ್ಜಿಗೆ ಫೋನ್ ಮಾಡಕ್ಕೂ ಬರಲ್ವಲ್ಲೋ?ಎಷ್ಟು ಹೆದರ್ಕೊಂಡಿರತ್ತೋ… ಜ್ವರ -ಕೆಮ್ಮು ಅಂತ ಕರ್ಕೊಂಡು ಹೋಗಿದ್ದೇ ತಪ್ಪಾಯ್ತು… ಕೈಕಾಲೇ ಆಡ್ತಿಲ್ಲ ಕಣೋ… ಒಂದೇ ಸಮನೆ ಅತ್ತಳು ಸುಭದ್ರ. –ಮರುದಿನ- ಸುಭದ್ರ-ಅಯ್ಯೋ …..ಪೋಲೀಸ್ರು.. ಈಗ್ನಮ್ಮನ್ನೂ ಕರ್ಕೊಂಡೋಗ್ತಾರೇನೋ?… ಪೋಲಿಸ್ರು-ಅಮ್ಮಾ….. ಅದೇನಂದ್ರೇ.. ಆಸ್ಪತ್ರೇಲಿ ನಿಮ್ಮವ್ವ..ಕೊರೋನಾ ಮಾರಿಗ್ ಹೆದರ್ಕೊಂಡು ಉಟ್ಕೊಂಡಿದ್ದ ಸೀರೇಲೇ ನೇಣು  ಹಾಕ್ಕೊಂಡು ಬಿಟ್ಟವ್ರೆ……… ಸ್ವಲ್ಪ ಸಮಾಧಾನ ಮಾಡ್ಕಳಿ ತಾಯಿ…. ———– ನೊಸ್ಟಾಲ್ಜಿಯ  ಮಳೆ ಬಂದು ಬಿಟ್ಟ ಸಂಜೆ,ತಂಪಾದ ಗಾಳೀಲಿ ಸುಟ್ಟ ಮುಸುಕಿದ ಜೋಳದ ವಾಸನೆ…, ಸ್ಟೇಡಿಯಂ ಮೆಟ್ಟಿಲ ಮೇಲೆ ಕೂತು,ಬೆಚ್ಚಗಿನಉಪ್ಪು-ಖಾರ, ಮಸಾಲೆ ಹಚ್ಚಿದ ಮುಸುಕಿನ ಜೋಳನ ಕಚ್ಚಿ, ಕಚ್ಚಿ ಜಗಿದು ತಿನ್ನುತ್ತ ಅದರ ಹಾಲನ್ನು  ಚಪ್ಪರಿಸೋದು ಎಂಥ ಮಜಾ…  “ ಅದಕ್ಕಿನ್ನ ಮಜಾ ಅಂದ್ರೆ, ಸ್ಕೂಲ್ ಮುಂದೆ ತಳ್ಳೋಗಾಡೀ ರಾಮಕ್ಕ ಅದೆಲ್ಲಿಂದನೋ ತರ್ತಿದ್ದ ಹಸಿರು ಕಿರು ಗಿತ್ತಳೆ ಹಣ್ಣುಗಳು. ಅದನ್ನು ಮಧ್ಯಕ್ಕೆ ಹೋಳು ಮಾಡಿ, ಚೆನ್ನಾಗಿ ಉಪ್ಪು-ಖಾರ ಹಚ್ಚಿ ಕೊಡೋಳು, ಬಾಯಿಗಿಡೋಕೆ ಮುನ್ನವೇ ಚುಳ್ಳಂತ ನಾಲ್ಗೇ ಕೆಳಗೆ ನೀರು ತುಂಬ್ಕೊಳ್ಳೋದು, ಮೊದಲು ಅದನ್ನು ನೆಕ್ಕೋದು, ಆಮೇಲೆ ಅದರ ಹುಳೀ ಸಮೇತ ನಾಲ್ಗೇ ಮೇಲೆ ಹಿಂಡಿಕೊಳ್ಳೋದು.. ಆಮೇಲೆ ಅದರ ತೊಳೆಗಳನ್ನು ಕಚ್ಚಿ, ಕಚ್ಚಿ ತಿನ್ನೋದು…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಂಗಿರೋದು ಈಗ ಅವನ್ನು ನೆನಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ ಆದ್ರೆ ಉಳಿದಿರೋ ಹಲ್ಲೆಲ್ಲ ಚುಳ್ಳಂತ ನಡುಗಿಬಿಡ್ತವೆ ಬಿಡು ಮಾರಾಯ್ತಿ.. “.ಎಂದ ಶಾಮಣ್ಣ. ಕಟ್ಟಿಸಿಕೊಂಡ ಹಲ್ಲು ಸೆಟ್ಟನ್ನು ಕಟ-ಕಟನೆಂದು ಆಡಿಸಿ ಪಕ-ಪಕನೆ ನಕ್ಕಳು ಪಂಕಜಮ್ಮ. ****************************

ನೂರು ಪದಗಳಮೂರು ಕಥೆಗಳು Read Post »

ಇತರೆ

ವೃತ್ತಿಯಷ್ಟೇ ಹವ್ಯಾಸ ಮುಖ್ಯ

ಲೇಖನ ಚಂದಕಚರ್ಲ ರಮೇಶ ಬಾಬು ವೃತ್ತಿ ಅಂದರೆ ನಾವು ಜೀವನಕ್ಕಾಗಿ ಆರಿಸಿಕೊಂಡ ಕೆಲಸ. ಆ ಕೆಲಸದಲ್ಲಿ ನಮಗಿಷ್ಟವಿಲ್ಲದಿದ್ದರೂ ಹೊಟ್ಟೆ ಹೊರೆಯುವುದಕ್ಕಾಗಿ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಮೇಲಧಿಕಾರಿಯ ದಬ್ಬಾಳಿಕೆ, ಅಲ್ಲಲ್ಲಿ ವರ್ಗಾವಣೆ, ಗ್ರಾಹಕರ ಜೊತೆ ಘರ್ಷಣೆ, ಸಹೋದ್ಯೋಗಿಗಳ ಕಿರುಕುಳ ಇವೆಲ್ಲ ವೃತ್ತಿಯ ಜೊತೆಯಿದ್ದು, ನಾವು ಗಳಿಸುವ ಸಂಬಳದ ಜೊತೆ ಬಂದು ಬೀಳುವ ಅಡ್ಡ ಒತ್ತಡಗಳು. ಇವನ್ನೆಲ್ಲ ತೂಗಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಆಗ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಮನೆ, ಮಡದಿ, ಮಕ್ಕಳು ಮನೆಯಲ್ಲಿಯ ನೆಮ್ಮದಿ ಸ್ವಲ್ಪ ಮಟ್ಟಿಗೆ ಈ ಒತ್ತಡವನ್ನು ಕಮ್ಮಿ ಮಾಡುವಲ್ಲಿ ಸಹಾಯಕವಾದರೂ, ವೈಯಕ್ತಿಕ ಸ್ತರದಲ್ಲಿ ಯಾವುದಾದರು ಹವ್ಯಾಸ ಇದ್ದಲ್ಲಿ ಅಥವಾ ಬೆಳೆಸಿಕೊಂಡಲ್ಲಿ ಅದು ಒತ್ತಡವನ್ನು ಇನ್ನೂ ಕಮ್ಮಿ ಮಾಡುವ ಸಾಧನವಾಗಬಹುದು. ಈ ನಿಟ್ಟನಲ್ಲಿ ಹವ್ಯಾಸದ ಪಾತ್ರ ಮಹತ್ವವಿರುವುದಾಗುತ್ತದೆ. ಹವ್ಯಾಸ ಎನ್ನುವುದು ಏನು ಎಂದು ಒಮ್ಮೆ ನೋಡೋಣ.” ಕೇವಲ ಹಣಕ್ಕಾಗಿ ಮಾಡದೆ ಆತ್ಮ ಸಂತೋಷಕ್ಕಾಗಿ ಮಾಡುವ, ದೈನಂದಿನ ಬದುಕಿನ ಆಗುಹೋಗುಗಳ ನಡುವೆ ಮಾನಸಿಕ ಹತಾಶೆಯನ್ನು ಕಳೆದುಕೊಳ್ಳಲು ಮಾಡುವ ಕೆಲಸ’ ಎಂದು ಒಂದು ನಿರ್ವಚನವಿದೆ. ಹವ್ಯಾಸ ತಂತಾನೇ ಬೆಳೆದು ಬಂದಿರಬಹುದು ಅಥವಾ ಬೆಳೆಸಿಕೊಂಡಿರಲೂ ಬಹುದು. ಉದಾ: ಒಬ್ಬರಿಗೆ ಚಿತ್ರಕಲೆ ಸ್ವತಃ ಸಿದ್ಧಿಸಿರಬಹುದು. ಕೆಲವರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಯಾವುದೇ ಇಂಥ ಚಟುವಟಿಕೆಯನ್ನು ನಾವು ಹವ್ಯಾಸವೆನ್ನ ಬಹುದಾಗಿದೆ. ಈ ಅಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯ ಒಂದು ಚಿಕ್ಕ ಪ್ರಯೋಗ ನೋಡೋಣ. ಹವ್ಯಾಸ ವೃತ್ತಿಯಾಗಲೂ ಬಹುದು. ಚೆನ್ನಾಗಿ ಬರೆಯುವ ಕಲೆ ಇರುವವನು ಪತ್ರಿಕಾ ಕಛೇರಿಗೆ ಸೇರಿ ಅದರಿಂದ ಹಣ ಗಳಿಸಿದರೆ ಅದು ವೃತ್ತಿಯಾಗಿಬಿಡುತ್ತದೆ. ಆದಕಾರಣ ಯಾವುದು ಹವ್ಯಾಸ ಅಥವಾ ಯಾವುದು ವೃತ್ತಿ ಎಂದು ವಿಂಗಡನೆ ಮಾಡುವುದು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ. ಕೆಲ ಹವ್ಯಾಸಗಳು ಮನುಷ್ಯನ ಅವನತಿಗೀಡು ಮಾಡುವುವೂ ಆಗಿವೆ. ಇವುಗಳನ್ನು ಹವ್ಯಾಸವೆನ್ನಲಾಗುವುದಿಲ್ಲ. ಆದರೆ ಇವುಗಳನ್ನು ಬೆಳೆಸಿಕೊಳ್ಳುವರು ಹವ್ಯಾಸವೆಂದಲೇ ಬೆಳೆಸಿಕೊಂಡು ಅವುಗಳು ಅಭ್ಯಾಸವಾಗಿ ಬಿಡಲಾರದಾಗುತ್ತವೆ. ಉದಾ: ಜೂಜು, ಕುಡಿತ ಮೊದಲಾದವು. ಇವುಗಳಿಂದ ಹಣ ಪೋಲಾಗುವುದಲ್ಲದೆ ಆರೋಗ್ಯ ಕೆಡುತ್ತದೆ. ಈ ದುರಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ತಮಾಷೆಗೆ ಹೀಗೆ ಹೇಳುತ್ತಾರೆ. ಆಂಗ್ಲದಲ್ಲಿ ಅಭ್ಯಾಸ ಅಥವಾ ಚಟಕ್ಕೆ habit ಎನ್ನುತ್ತಾರೆ. ನಿದಾನವಾಗಿ  ಬಿಡುವ ಪ್ರಯತ್ನದಲ್ಲಿ ಅದರಲ್ಲಿಯ ಐದು ಅಕ್ಷರಗಳಲ್ಲಿ ಮೊದಲನೆಯ ಅಕ್ಷರ ತೆಗೆದರೆ ಉಳಿಯುವದು a bit . ಅಂದರ ಅದರ ಶೇಷ ಉಳಿಯುತ್ತದೆ. ಮತ್ತೊಂದು ಅಕ್ಷರ ಅಂದರೆ a ತೆಗೆದರೂ ಒಂಚೂರು bit ಉಳಿಯುತ್ತದೆ. ಮುಂದುವರೆದು ಮತ್ತೊಂದು ತೆಗೆದರೂ  ಅದು it ಉಳಿಯುತ್ತದೆ. ಅಷ್ಟು ಜಿಡ್ಡಾಗಿ ಹತ್ತಿಕೊಂಡಿರುತ್ತದೆ ಎಂದು ಉದಾಹರಿಸುತ್ತಾರೆ. ದುರಭ್ಯಾಸ ವ್ಯಸನವಾಗುವ ಮುಂಚೆಯೇ ಅದನ್ನು ಗುರ್ತಿಸಿ ಬಿಟ್ಟುಬಿಡಬೇಕು. ಹವ್ಯಾಸದ ನಿರ್ವಚನದಲ್ಲೇ “ ಕೇವಲ ಹಣಕ್ಕಾಗಿ ಮಾಡದೆ, ಆತ್ಮ ಸಂತೋಷಕ್ಕಾಗಿ “ ಮಾಡುವ ಚಟುವಟಿಕೆ ಎಂದು ಹೇಳಲಾಗಿದೆ. ಇದು ಏಕೆ ಮುಖ್ಯ ಎಂದು ಒಮ್ಮೆ ನೋಡೋಣ. ಇತ್ತೀಚಿನ ಹಲವಾರು ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಅವರ ವೃತ್ತಿಪರವಾದ ಪ್ರಶ್ನೆಗಳನ್ನೇ ಅಲ್ಲದೆ ನಿಮ್ಮ ಹವ್ಯಾಸವೇನು ಎಂದು ಕೇಳುತ್ತಿರುವುದು ನಮಗೆಲ್ಲ ಕೇಳಿಬಂದಿದೆ. ಆಯ್ಕೆ ಮಾಡುವಾಗ ಈ ಅಂಶವನ್ನೂ ಪರಿಗಣನೆಗೆ ತೆಗೊಳ್ಳುವುದು ಮುಖ್ಯ ಎಂದು ಮಾನವ ಸಂಪನ್ಮೂಲದ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ. ವೃತ್ತಿಯ ಒತ್ತಡ ಮತ್ತು ಹವ್ಯಾಸಗಳೆರಡರನ್ನೂ ಸಮತೋಲನೆ ಮಾಡಬೇಕಾಗಿರುವ ಅವಶ್ಯಕತೆ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬಂದಿದೆ. ಹವ್ಯಾಸ  ಮನಸ್ಸಿಗೆ ಹಿತವೆನಿಸಿದ್ದು ಮಾಡುವಂಥದ್ದಾಗಿದೆ. ಹಾಗಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಅದರಲ್ಲೂ ಒಂದು ಸ್ತರದ ಪರಿಣಿತಿ ಸಾಧಿಸಿದರೆ ಅದು ಇನ್ನೂ ಹುಮ್ಮಸ್ಸು ತುಂಬುತ್ತದೆ. ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನಮ್ಮ ಮೈಯಲ್ಲಿ ಬಿಡುಗಡೆಯಾಗುವ ತತ್ಸಂಬಂಧೀ ಹಾರ್ಮೋನುಗಳಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಆದಕಾರಣ ಮೈ ಮತ್ತು ಮನಗಳ ಹಿತಕ್ಕಾಗಿ ಹವ್ಯಾಸ ಅವಶ್ಯಕವಾಗಿದೆ. ನಾವು ಇದುವರೆಗೆ ನೋಡಿದಂತೆ ಹವ್ಯಾಸಗಳು ಸ್ವತಃ ಬೆಳೆದಿರಬಹುದು. ಲಲಿತ ಕಲೆಗಳು ಇದರ ಕೆಳಗೆ ಬರುತ್ತವೆ. ಇವೆಲ್ಲ ಬಹುತೇಕ ಸ್ವತಃ ಸಿದ್ಧಗಳೇ. ಬರವಣಿಗೆ, ಹಾಡುಗಾರಿಕೆ, ಚಿತ್ರಕಲೆ ಇವೆಲ್ಲ ದೈವದತ್ತ ಪ್ರತಿಭೆಗಳು. ಇವುಗಳಿಗೆ ಮೆರಗನ್ನು ಕೊಟ್ಟು ಬೆಳೆಸಿ ಹವ್ಯಾಸಗಳನ್ನಾಗಿ ಮಾಡಿಕೊಂಡರೆ ಇತರೆ ಹವ್ಯಾಸಗಳಿಗಾಗಿ ಹುಡುಕಬೇಕಾಗುವುದಿಲ್ಲ. ಹಲವಾರು ಮಹನೀಯರು ಈ ತರದ ತಮ್ಮ ಪ್ರತಿಭೆಗಳನ್ನು ಅನುಸರಿಸಿ ಅವುಗಳಲ್ಲಿ ಸಹ ಹೆಸರು ಗಳಿಸಿದ್ದಾರೆ. ನಮ್ಮ ಮಾಜೀ ಪ್ರಧಾನಿ ಶ್ರೀ ವಾಜಪೇಯಿ ಅವರು ಕವಿಗಳಾಗಿದ್ದರು. ಮಾಜೀ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ಅವರು ಅತ್ಯುತ್ತಮ ಬರಹಗಾರರಾಗಿದ್ದರು.  ಇನ್ನು ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಕಡೆಗೆ ಗಮನ ಹರಿಸೋಣ. ಪುಸ್ತಕ ಓದುವುದು, ದೇಶ ಸುತ್ತುವುದು, ತೋಟಗಾರಿಕೆ, ಪರ್ವತಾರೋಹಣ, ಯೋಗ ಮತ್ತು ಪ್ರಾಣಾಯಾಮ ಹೀಗೆ ಕೆಲವು ರೂಢಿ ಮಾಡಿಕೊಳ್ಳಬಹುದು. ಇವುಗಳಲ್ಲಿ ಸಹ ನಮ್ಮ ಮನಸ್ಸಿಗೆ ಯಾವುದು ಹಿತವೆನಿಸುತ್ತದೋ ಅದನ್ನು ಆಯ್ದುಕೊಂಡು ಅವುಗಳಲ್ಲಿ ತೊಡಗಬಹುದು. ತಾಂತ್ರಿಕ ವಿಸ್ಫೋಟದ ಈ ಯುಗದಲ್ಲಿ ಈ ದಿಕ್ಕಿನಲ್ಲಿ ತುಂಬಾ ಆಯ್ಕೆಗಳು ಸಿಗುತ್ತಿವೆ.     ಬರೀ ಯುವ ಪೀಳಿಗೆಯಲ್ಲದೆ ವಯಸ್ಸಾದವರು ಸಹ ಇವುಗಳ ಲಾಭ  ಪಡೆಯುತ್ತಿದ್ದಾರೆ. ಉದಾ: ವಾಟ್ಸಪ್, ಫೇಸ್ಬುಕ್, ಕರೊಕೆ ಹಾಡುಗಾರಿಕೆ ಮುಂತಾದವು.  ಲಾಕ್ ಡೌನ್ ಸಮಯದಲ್ಲಂತೂ ಇವುಗಳ ಉಪಯೋಗ ಜಾಸ್ತಿಯಾಗಿ ಹವ್ಯಾಸಗಳ ಹೊಸ ಬಾಗಿಲನ್ನೇ ತೆರೆದಿದೆ. ಟಿವಿ, ಅಂತರ್ಜಾಲ, ಚರವಾಣಿ ಇವೆಲ್ಲವೂ ಇಲ್ಲದ ಸಮಯದಲ್ಲಿ ಸ್ನೇಹಿತರೆಲ್ಲ ಒಟ್ಟಾಗಿ ಹರಟೆ ಹೊಡೆಯುತ್ತಿದ್ದುದ್ದು ಸಹ ಉಲ್ಲಾಸಕ್ಕಾಗಿ ಮಾಡಿಕೊಂಡ ಹವ್ಯಾಸವೇ. ನಾಟಕಗಳು, ಸಂಗೀತ ಕಚೇರಿಗಳು, ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿ, ಬಯಲು ನಾಟಕ, ಯಕ್ಷಗಾನ  ಇವೆಲ್ಲ ಮನೋಲ್ಲಾಸದ ದಾರಿಗಳು. ಪಾತ್ರಧಾರಿಗಳೇ ಆಗಬೇಕಾಗಿಲ್ಲ, ಪ್ರೇಕ್ಷಕರಾಗುವ ಹವ್ಯಾಸವನ್ನು ಸಹ ಹಾಕಿಕೊಳ್ಳ ಬಹುದು. ಹವ್ಯಾಸಗಳಿಗಾಗಿ ಸಮಯವಿಲ್ಲ ಎಂದು ಹೇಳುವುದು ಬೇಡ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಹವ್ಯಾಸ ಬೆಳೆಸಿಕೊಳ್ಳುವುದು ಬರೀ ಒಳಿತೇ ಅಲ್ಲ ಅನಿವಾರ್ಯವು ಸಹ ಈಗ. ಹಾಗಂತ ಯಾವುದೇ ಹವ್ಯಾಸ ಚಟವಾಗಬಾರದು. ಅದರಿಂದ ನಮ್ಮ ಮಾನಸಿಕ ಅಥವಾ ದೈಹಿಕ ಸ್ವಾಸ್ಥ್ಯ ಕೆಡಬಾರದು. ಹಣ ಪೋಲಾಗಬಾರದು. ಒಂದು ಒಳ್ಳೆಯ ಹವ್ಯಾಸ ನಮ್ಮ ವೃತ್ತಿ ಜೀವನದ ಒತ್ತಡವನ್ನು ಕಮ್ಮಿಮಾಡಿದರೆ, ಚಟವಾದಾಗ ಅದು ಸಹ ಒತ್ತಡ ಕೊಟ್ಟು ನಮ್ಮ ಸ್ಥಿತಿಯನ್ನು ಹದಗೆಡಿಸುತ್ತದೆ. ಮಿತಿ ಅರಿತು ಅಭ್ಯಾಸ ಮಾಡಿಕೊಂಡು ಹವ್ಯಾಸದ ಲಾಭ ಪಡೆಯುವುದೇ ವಿಜ್ಞರ ಜಾಣತನ. *********************************

ವೃತ್ತಿಯಷ್ಟೇ ಹವ್ಯಾಸ ಮುಖ್ಯ Read Post »

ಇತರೆ

ಜೀವನ ಪೂರ್ತಿ ಜೀವದ ಗೆಳೆಯ

ಜಯಶ್ರೀ ಜೆ.ಅಬ್ಬಿಗೇರಿ ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮಾತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ  ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ.  ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು. ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ ಬರುತ್ತಿಯಾ ಎಂಬ ನಂಬಿಕೆಯ ಕನಸು ಹೊತ್ತು ರಾತ್ರಿಯೆಲ್ಲ ಕಣ್ಣ ರೆಪ್ಪೆ ಮುಚ್ಚದೇ ಕಾಯುತ್ತಿದ್ದೇನೆ. ಆ ನಂಬಿಕೆಯಲ್ಲಿ ದಿನ ನಿತ್ಯದ ಬದುಕು ಸಾಗುತ್ತಲೇ ಇದೆ. ಅದೆಂತ ಅನಿವಾರ್ಯತೆ ನಿನ್ನನ್ನು ಕಾಡುತ್ತಿದೆಯೊ ಗೊತ್ತಿಲ್ಲ. ಸಹಿಸಲೇಬೇಕಾದ ಅನಿವಾರ್ಯತೆ ನನಗಿದೆ. ನಿನ್ನ ಅನಿವಾರ್ಯತೆಯನ್ನು ವಿರೋಧಿಸಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿ ಅನುಭವಿಸುತ್ತಿದ್ದೇನೆ. ನೀನು ಒಳ್ಳೆಯವನೋ ಕೆಟ್ಟವನೋ ಎಂದು ಗೊತ್ತಾಗುವ ಮುನ್ನವೇ ನೀ ನನ್ನ ಹೃದಯದಲ್ಲಿ ಬಲಗಾಲಿಟ್ಟು ಪ್ರವೇಶ ಪಡೆದಾಗಿತ್ತು. ನಿನ್ನಲ್ಲಿ ನನಗಿರುವುದು ಅತಿಯಾದ ಸ್ನೇಹವೊ ಬೆಳೆದ ಸ್ನೇಹದ ಮುಂದುವರಿದ ಭಾಗವಾದ ಪ್ರೀತಿಯೋ? ಅತಿ ಎನಿಸುವಷ್ಟು ಆಕರ್ಷಣೆಯೋ ಯಾವುದು ಒಂದೂ ತಿಳಿಯುತ್ತಿಲ್ಲ. ಪೂರ್ತಿ ಗೊಂದಲದ ಮಡುವಿನಲ್ಲಿ ಬಿದ್ದಿದ್ದೇನೆ. ನಮ್ಮಿಬ್ಬರ ಸಂಬಂಧಕೆ ಅದ್ಯಾವ ಹೆಸರಿಡಲಿ ತಿಳಿಯದಾಗಿದೆ.? ಹೆಸರಿಟ್ಟು ಸೀಮಿತಗೊಳಿಸುವುದು ಬೇಡವೆಂದು ಮನಸ್ಸು ಹೇಳುತ್ತಿದೆ. ಒಮ್ಮೊಮ್ಮೆ ಪ್ರೀತಿಯ ಹೆಸರಿಟ್ಟು ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುವ ಬದಲು ಸ್ನೇಹದ ಕಡಲಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿ ಪಯಣಿಸುವುದೇ ಒಳ್ಳೆಯದೇನೋ ಅನಿಸುತ್ತಿದೆ. ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳನ್ನು ಸಿಕ್ಕಿಸಿ ಭುಜಕ್ಕೊರಗಿದಾಗ ತಂಗಾಳಿಗೆ ಆಚೀಚೆ ನಲಿದಾಡುವ ಮುಂಗುರುಳುಗಳ ಮೋಡಿಗೆ ಸೋತು ನನ್ನನ್ನೇ ನೋಡುತ್ತಿರುವಾಗ ನಿನ್ನೊಂದಿಗೆ ಹಂಚಿಕೊಳ್ಳದ ವಿಷಯವೇ ಇಲ್ಲ. ಆದರೂ ಒಮ್ಮೆಯೂ ನಿನ್ನ ಮನದ ತರಂಗಗಳಲಿ ನನ್ನ ಪ್ರೀತಿಯೇ ತುಂಬಿಕೊಂಡಿದೆಯೇ? ಎಂದು ಕೇಳಲೇ ಇಲ್ಲ. ಕೇಳಬೇಕೆನಿಸಿದರೂ ನೀನು ತಪ್ಪಾಗಿ ತಿಳಿದು ನನ್ನಿಂದ ದೂರವಾಗಿ ಬಿಡುತ್ತಿಯೇನೋ ಎಂಬ ಭಯದಲ್ಲಿ ಬೇಕಂತಲೇ ಬಾಯಿಗೆ ಬೀಗ ಹಾಕಿದ್ದೆ. ಗೆಳೆಯಾ ನಿಜ ಹೇಳು ನನ್ನೊಂದಿಗೆ ಕಳೆದ ಪ್ರತಿ ಕ್ಷಣವು ನೀನು ಸಂತಸದಿಂದಿರಲಿಲ್ಲವೇ? ಇಷ್ಟು ವರ್ಷ ಜೊತೆಗಿದ್ದರೂ ಜೊತೆಗಾತಿಯಾಗಿ ಬಾಳು ಹಂಚಿಕೊಳ್ಳಲು ಸಿದ್ದಳಿದ್ದಿಯಾ? ಎಂದು ಒಂದು ಸಾರಿ ಕೇಳಲಿಲ್ಲವೇಕೆ? ನನಗಿಂತಲೂ ಹೆಚ್ಚು ಹುಚ್ಚು ಹಿಡಿಸಿಕೊಂಡು ತುಸು ಹೆಚ್ಚೆನಿಸುವ ಹಾಗೆ ಒಳಗೊಳಗೆ ನನ್ನನ್ನು ಪ್ರೀತಿಸುತ್ತಿದ್ದರೂ ಹೇಳಿಕೊಳ್ಳಲಾಗದೇ ಮೌನಿಯಾದೆ. ಅದೇನೆ ಇರಲಿ ನೀನು ಮಾತ್ರ ನನ್ನಿಂದ ದೂರವಾಗಬೇಡ. ಹುಣ್ಣಿಮೆ ರಾತ್ರಿ ಸಾಗರ ಚಂದಿರನ ಮುಟ್ಟಲು ಜಿಗಿಯುವಾಸೆ. ಮನಸ್ಸು ನೆಗೆಯುತ್ತಿದ್ದರೂ ಪ್ರೀತಿಯ ನಿವೇದನೆಯನ್ನು ನಿನ್ನ ಮುಂದಿಡದೇ ಮೌನದಲ್ಲೇ ಕಾಲ ಕಳೆಯುತ್ತಿದ್ದೇನೆ. ನವ ಬಾಳಿನ ಹೊಸ್ತಿಲು ದಾಟುವಾಗ ನನ್ನ ಹೆಜ್ಜೆಯ ಹಿಂದೆ ನಿನ್ನ ಹೆಜ್ಜೆ ಇರುತ್ತದೆಂದು ಸುಂದರ ಕನಸು ಕಂಡಿದ್ದೇನೆ. ಹಾಡು ಹಗಲೇ ಲೂಟಿ ಹೊಡೆಯುವ ನಿನ್ನ ನೆನಪುಗಳಲ್ಲೂ ಅದೇನೋ ಹಿತವೆನಿಸುವ ಭಾವ. ನಿನ್ನ ತುಟಿಯಂಚಿನ ತುಂಟ ನಗು ಓರೆಗಣ್ಣಿನಿದ ಕದ್ದು ಕದ್ದು ನೋಡುತ್ತಿದ್ದ  ನಿನ್ನ ನೋಟ ರಂಗಿನಾಟಕೆ ಹಾತೊರೆಯುತ್ತಿದ್ದ ನಿನ್ನ ಮನಸ್ಸು ಒಲವಿನ ಮಿಡಿತವನ್ನು ತುಂಬಿಕೊAಡ ನಿನ್ನ ಹೃದಯವನ್ನು ನನ್ನಿಂದ ಎಂದೂ ಮರೆಯಲಾಗುವುದಿಲ್ಲ. ಮೊನ್ನೆ ಊರ ದೇವಿಯ ಜಾತ್ರೆಯಲ್ಲಿ ನೀನು ನನ್ನನ್ನೇ ಕದ್ದು ಕದ್ದು ನೋಡಿದ್ದನ್ನು  ಮನಸ್ಸು ಜಿಂಕೆಯಂತೆ ಜಿಗಿದಾಡಿತು.. ಜೀವನ ಪೂರ್ತಿ ನನ್ನ ಜೀವದ ಗೆಳೆಯ ನೀನೇ ಎಂದು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದಾಗಿದೆ.ನನ್ನಪ್ಪ ನಿನ್ನಪ್ಪನೊಂದಿಗೆ ಮಾತಾಡಿಯೂ ಆಗಿದೆ  ಇನ್ನೇಕೆ ಹಮ್ಮು ಬಿಮ್ಮು. ಬಂದು ಬಿಡು ನದಿಯ ದಂಡೆಗೆ ಜೀವನ ಪೂರ್ತಿ ಜೀವದ ಗೆಳತಿಯಾಗಿ ಇದ್ದು ಬಿಡುವೆ ನಿನ್ನ ತೋಳ ತೆಕ್ಕೆಯಲ್ಲಿ. ===========================================================

ಜೀವನ ಪೂರ್ತಿ ಜೀವದ ಗೆಳೆಯ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಮಹಿಳಾ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವದು ಗೌರವದ ಸಂಕೇತ ಕನ್ನಡ ಸಾಹಿತ್ಯ ಸೇವೆಯ ದ್ಯೇಯದಡಿ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಸಂಭ್ರಮದಲ್ಲಿರುವದು ಅತ್ಯಂತ ಸಂತಸದ ಸಂಗತಿ. ಈಗಾಗಲೇ ಅನೇಕ ಸಾರಥಿಗಳು ಸಾಹಿತ್ಯ ಪರಿಷತ್ ಆಳಿದ್ದು ತಮಗೆಲ್ಲ ಗೊತ್ತಿರುವ ಸಂಗತಿ ಪ್ರಸ್ತುತ ಶ್ರೀ ಮನು ಬಳಿಗಾರ ಸೇರಿದಂತೆ ಅನೇಕರು ಇಲ್ಲಿ ಅಧ್ಯಕ್ಷೀಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಜೊತೆಗೆ ಈ ನಡುವೆ ಗಮನಿಸಬೇಕಾದದ್ದು ಮಹಿಳೆಯರೊಬ್ಬರು ಇನ್ನು ಅಧ್ಯಕ್ಷರಾಗದೆ ಇತಿಹಾಸ ಸ್ರಷ್ಟಿಸದ ವಿಚಾರ. ಈ ದೇಶವನ್ನೇ ಆಳಿದ ಮಹಿಳಾ ಪ್ರಧಾನಿಗಳು ಮಾದರಿ -ಹಾಗೂ ಪರ ವಿರೋದಗಳ ತಿಕ್ಕಾಟ ಸ್ವಾಭಾವಿಕವಿದ್ದರೂ ಕೆಲವು ಬದಲಾವಣೆ ಸಹಜಸಾಧ್ಯ. ಈ ಸಾಹಿತ್ಯ ಕ್ಷೇತ್ರದಲ್ಲೂ ನಾವು ಅಳೆದು ತೂಗಿ ನೋಡಿದರೆ ಸಾಹಿತ್ಯ ಕ್ರಷಿಯಲ್ಲಿ ಹೆಚ್ಚಿಗರು ಮಹಿಳೆಯರೇ. ಹಾಗೂ ಸಂಘಟನೆ ,ಶಿಸ್ತು, ಹಾಗೂ ಇನ್ನೂ ಹೆಚ್ಚಿನ ಕ್ರಾಂತಿ ಸಾಹಿತ್ಯ ಪರಿಷತ್ ನಲ್ಲಿ ಆಗಬೇಕಾಗಿದ್ದು ಇದ್ದು ಆಗುವ ಭರವಸೆ ಭವಿಷ್ಯತ್ ಕಾಲವೇ ಸರಿ. ಯಾಕೆಂದರೆ ಇನ್ನೂ ಅಧಿಕಾರ ಸಿಕ್ಕಿಲ್ಲ, ಅಷ್ಟಕ್ಕೂ ಈ ಎಲ್ಲ ಕೂಗಿಗೆ ಉತ್ತರ ಯಾರು ಮಹಿಳೆಯಾದರೆ ಯಾರು ಸಮರ್ಥರು ?ಎನ್ನುವ ಪ್ರಶ್ನೆ ಹೊಸ ಅನ್ವೇಷಣೆಯೋ ಅಥವಾ ಇದಕ್ಕೆ ಸೂಕ್ತ ಅಕ್ಷರಶಃ ತಯಾರಿಯಲ್ಲಿ ಇದ್ದಾರೋ ಅಥವಾ ಅವರಲ್ಲಿನ ಕೆಲ ಕಷ್ಟ ಸಾಧ್ಯಗಳು ಹೇಗೆ ನೆರವೇರುವವು. ಈ ಎಲ್ಲ ಪ್ರಶ್ನೆಗಳು ಹೊಸ ನಾಳೆಗೆ ಸಿಗುವದಂತೂ ನಿಶ್ಚಿತ .ಎಕಾ ಏಕಿ ಇಂತಹ ಕೂಗಿಗೆ ಸ್ವಾಗತ ಹೇಳಬೇಕಾದರೂ ಸೂಕ್ತರ ಲಭ್ಯತೆ ಕೂಡ ಅಷ್ಟೇ ಮುಖ್ಯ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಶತಮಾನದ ಈ ಕನಸು ಸಾಕಾರಗೊಳಿಸಲು ಯಾರೆಲ್ಲ ನಿರೀಕ್ಷೆ ಮಾಡುತ್ತ ಇದ್ದೀರಾ  ಅವರಿಗೆಲ್ಲ ಶುಭವಾಗಲಿ .ಆದರೆ ಎಲ್ಲ ಕ್ಷೇತ್ರಗಳಂತೆ ಇಲ್ಲಿ ಮಹಿಳಾ ಸ್ಥಾನ ಕೇಳಿದರೆ ಹಂತ ಹಂತವಾಗಿ ಮೀಸಲಾತಿ ,ಹೀಗೆ ಹತ್ತಲವು ರಾಜಕೀಯ ಅನುಕರಣೀಯ ಪ್ರತ್ಯಕ್ಷ ಬೆಳವಣಿಗೆಗೆ ಕಾರಣವಾಗಬಹುದೇ ?ಎಂಬ ಭಯ ಜೊತೆಗೆ ಶತಮಾನದ ಸಾಹಿತ್ಯ ಪರಿಷತ್ ಉತ್ತುಂಗಕ್ಕೆ ಏರಲಿ, ಶ್ರೇಷ್ಠತೆ ಉಳಿಸಿಕೊಳ್ಳಲಿ ಎಂಬುದೇ ನನ್ನ ಹಾರೈಕೆ. ಶತಮಾನದ ಸಂಭ್ರಮಕೆ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ************************* ಅರುಣ್ ಕೊಪ್ಪ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು???

ಹತ್ತಿರ ಬರುತ್ತಿರುವ ಕ.ಸಾ.ಪ. ಚುನಾವಣೆಗಳು ಆಕಾಶಕ್ಕೆ ಸಣ್ಣ, ಸಣ್ಣ ತೂತುಗಳು ಬಿದ್ದು, ಅವುಗಳಿಂದ ಸಣ್ಣ ಸಣ್ಣದಾಗಿ ತೊಟ್ಟಿಕ್ಕುವ ಸೋರುಮಳೆ. ಸೂರ್ಯನ ನಿಚ್ಚಳ ಬಿಸಿಲ ಬೆಳಕಿಲ್ಲದೇ ಸುಂಯ್ಯಂತ ಸಣ್ಣಗೆ ಸೂಸಿ ಬರುವ ತಂಗಾಳಿ ತುಂಬಿದ ಮಳೆ ಮೋಡಗಳು. ಉಣ್ಣೆಕಂಬಳಿ ಹೊದ್ದು ಮನೆಯೊಳಗೆ ಬೆಚ್ಚಗೆ ಮಲಗಬೇಕೆನ್ನುವ ಆಶ್ಲೇಷ ಮಳೆಯ ಸುಡುರುಗಾಳಿ. ಮುಗಿಲು ತುಂಬಾ ತುಂಬಿ ತುಳುಕುವ ಹೊಗೆಮಂಜು ಭರಿತ ಶೀತದ ವಾತಾವರಣ‌. ಇಂತಹ ಬರ್ಫಿನ ಶೀತಗಾಳಿಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳ ಸಿದ್ದತೆಯ ಸುದ್ಧಿಗಳು ಸಣ್ಣಗೆ ಕೇಳಿ ಬರುತ್ತಿವೆ. ಒಂದಿಬ್ಬರು ಅಭ್ಯರ್ಥಿಗಳು ಫೀಲ್ಡಿಗಿಳಿದು  ಮತಬೇಟೆಗೆ ತೊಡಗಿರುವ ವಿದ್ಯಮಾನಗಳು ಬೇರೆ,ಬೇರೆ ರೂಪ ಮತ್ತು ಮೂಲಗಳಲ್ಲಿ ಗೋಚರವಾಗುತ್ತಿವೆ. ಕನ್ನಡ ಸಂಸ್ಕೃತಿಗೆ ಘೋರ ಅಪಚಾರದಂತೆ ಮತ್ತೆ ಯಥಾಪ್ರಕಾರ, ಹೊಲಬುಗೆಟ್ಟ ರಾಜಕಾರಣ ಮಾದರಿಯ ಜಾತಿ, ಮತ, ಪ್ರಾದೇಶಿಕತೆಯ ಪ್ರಲೋಭನೆಗಳು ಸಹಜವಾಗಿ ಮುಂಚೂಣಿಗೆ ಬರುತ್ತಿವೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂರೈದು ವರುಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬಳು ಪರಿಷತ್ತಿನ ಅಧ್ಯಕ್ಷರಾದ ನಿದರ್ಶನವಿಲ್ಲ. ಅಷ್ಟೇಯಾಕೆ ಮಹಿಳೆಯರು ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ನಿದರ್ಶನಗಳೂ ಅಪರೂಪವೇ. ನಮ್ಮನಡುವೆ ಐ.ಟಿ. ಬಿ.ಟಿ.ಯಂತಹ ಉನ್ನತ ವಿದ್ಯುನ್ಮಾನ ಉದ್ಯಮಗಳನ್ನೇ ಸ್ಥಾಪಿಸಿ ಹೆಸರು ಮಾಡಿದ ಮಹಿಳೆಯರಿದ್ದಾರೆ. ರಾಜಕೀಯವಾಗಿ ಮಹಿಳೆಯರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ರಾಜ್ಯಗಳನ್ನು, ದೇಶವನ್ನು ಆಳಿದ ಯಶಸ್ವಿ ನಿದರ್ಶನಗಳಿರುವಾಗ ಸಾಂಸ್ಕೃತಿಕ ಸಂಸ್ಥೆಯೊಂದರ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಮಹಿಳೆಯಿಂದ ಸಾಧ್ಯವಿಲ್ಲವೇ.? ಹಾಗಿದ್ದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮಹಿಳೆಯರ ಹೆಸರು ಚಲಾವಣೆಗೆ ಬರುತ್ತಿಲ್ಲವೇಕೆ.? ಮಹಿಳೆಯ ಹೆಸರು ಚಾಲನೆಗೆ, ಚರ್ಚೆಗೆ ಬಾರದಂತೆ ಪುರುಷ ಪ್ರಧಾನ ಪುರುಷಾಹಂಕಾರಗಳ ಸೂಕ್ಷ್ಮ ಶ್ಯಾಣೇತನಗಳು ವರ್ಕೌಟ್ ಆಗುತ್ತಲೇ ಇವೆ. ಈಗ್ಗೆ ಆರೇಳು ತಿಂಗಳುಗಳ ಹಿಂದೆ ” ಮಹಿಳೆಗೆ ಈ ಬಾರಿ ಪರಿಷತ್ತಿನ ಅಧ್ಯಕ್ಷಗಿರಿ ಮೀಸಲು ” ಎಂಬಂತೆ ಸಣ್ಣದಾಗಿ ಚರ್ಚೆಗೆ ಬರುತ್ತಿದ್ದಂತೆ ಅದು ತಮಣಿಯಾಯ್ತು. ಹಾಗೆ ಚರ್ಚೆ ಮಾಡಿದವರೇ ಪುರುಷಪರ ವಾಲಿಕೊಂಡರು. ಮತ್ತೊಂದು ಪ್ರಮುಖ ಸಂಗತಿಯೆಂದರೆ ಪ್ರಾದೇಶಿಕ ನ್ಯಾಯ ಸಮಾನತೆಯ ಅವಕಾಶಗಳದ್ದು. ನಿಸ್ಸಂದೇಹವಾಗಿ ಪ್ರಾದೇಶಿಕತೆಗೆ ಅವಕಾಶ ದಕ್ಕಬೇಕೆಂಬುದು ಗಂಭೀರ ವಿಷಯ. ಸಾಂಸ್ಕೃತಿಕವಾಗಿ ಹಲವು ವಂಚನೆಗಳಿಗೆ ಈಡಾಗಿರುವ ಕಲ್ಯಾಣ ಕರ್ನಾಟಕಕ್ಕೂ ಒಂದು “ಅವಕಾಶ ನೀಡೋಣ” ಎಂಬ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಹಿಡಿತಗಳ ಅಮೂರ್ತಧ್ವನಿ ಅನುಕಂಪ ಲೇಪಿತ ಉದಾರ ಸ್ವರವಾಗಿ ಕೇಳಿಬರುತ್ತದೆ. ಬೆಂಗಳೂರೇತರ ಕಲ್ಯಾಣ ಕರ್ನಾಟಕಕ್ಕೆ ಬೆಂಗಳೂರಿನ ಮರ್ಜಿ, ಮುಲಾಜು, ಹಂಗಿನ ದೇಹಿಭಾವಗಳಿಂದ ಬಿಡುಗಡೆಯ ಅಗತ್ಯವಿದೆ. ಪ್ರಾದೇಶಿಕ ಪ್ರಜ್ಞೆಯು ಪರದೇಶಿ ಪ್ರಜ್ಞೆಯನ್ನುಂಟು ಮಾಡುವಂತಾಗುತ್ತಿದೆ. ಮತ್ತೆ ಮತ್ತೆ ಬೆಂಗಳೂರು, ಮೈಸೂರು ಪ್ರಾಂತ್ಯಗಳೆಂಬ ದಕ್ಷಿಣದ ದಾಕ್ಷಿಣ್ಯದಲ್ಲಿ ಬದುಕುತ್ತಿರುವ ಭಾವಗಳು ಬಂಧುರಗೊಂಡು, ಕಲ್ಯಾಣ ಕರ್ನಾಟಕವು ಸಾಂಸ್ಕೃತಿಕ ಅವಕಾಶಗಳ  ಅಪೌಷ್ಟಿಕತೆಯಿಂದ ನರಳುವಂತಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಾಂಸ್ಕೃತಿಕ ಹಕ್ಕಿನೊಡೆತನ ಸಿಗುವುದು ಬೇಡವೇ.?  ಅಲ್ಲಿನವರು ಹಕ್ಕಿನ ಒಡೆಯರಾಗುವುದು ಯಾವಾಗ.? ಇದು ಸಾಹಿತ್ಯ ಪರಿಷತ್ತಿಗೆ ಮಾತ್ರ ಅನ್ವಯವಾಗದೇ ಅಕಾಡೆಮಿಗಳು ಸೇರಿದಂತೆ ಪ್ರಾಧಿಕಾರ, ಪ್ರತಿಷ್ಠಾನ ಇತರೆ ಎಲ್ಲ ಸಾಂಸ್ಕೃತಿಕ ಸಂದರ್ಭಗಳಿಗೂ ಲಾಗೂ ಆಗುತ್ತದೆ. ಮತ್ತೊಂದು ಅಪಾಯದ ಬೆಳವಣಿಗೆ ಇಲ್ಲಿದೆ. ಅದೇನೆಂದರೆ : ಬಲಾಢ್ಯ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರು ” ನಮ್ಮ ಜನಾಂಗದ ಓಟುಗಳು ಇಷ್ಟಿಷ್ಟಿವೆ. ನಮ್ಮ ಜಾತಿ ಮಠಗಳು ನಮ್ಮ ಬೆಂಬಲಕ್ಕಿವೆ ” ಎಂಬ ಮತಪೆಟ್ಟಿಗೆ ಲೆಕ್ಕಾಚಾರಗಳು ರಾಜಾ ರೋಷವಾಗಿಯೇ ಚರ್ಚೆಯಾಗುವುದು ಅಚ್ಚರಿಯೇನಲ್ಲ!. ಮತಪ್ರಜ್ಞೆಗಳ ಲೆಕ್ಕಾಚಾರದಲ್ಲಿ ಬ್ರಾಹ್ಮಣ ಸಮುದಾಯ ಹಿಂದೆ ಬಿದ್ದಿಲ್ಲ. ಸೂಕ್ಷ್ಮಾತೀಸೂಕ್ಷ್ಮ ಹವಣಿಕೆಯ ಮುಂಚೂಣಿಯಲ್ಲಿದೆ ಎನ್ನುವುದನ್ನು ಮರೆಯಲಾಗದು. ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯಗಳನ್ನು ಮೀರಿ ನಿಲ್ಲುವ ” ಮನುಷ್ಯ ಜಾತಿ ತಾನೊಂದೇ ಒಲಂ ” ಎಂಬ ಘೋಷವಾಕ್ಯ ಮೆರೆಯಬೇಕಲ್ಲವೇ.? ಅದೆಲ್ಲ ಹೇಳ ಹೆಸರಿಲ್ಲದೇ ಪರಿಷತ್ತು ಚುನಾವಣೆಗಳು ಕೊಳಕು ರಾಜಕಾರಣವನ್ನು ಮೀರಿಸುತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಗಳ ಘೋರ ದುರಂತವೇ ಹೌದು. ಒಂದು ಮೂಲದ ಪ್ರಕಾರ ಈ ಬಾರಿ ಕ. ಸಾ. ಪ. ಚುನಾವಣೆಗಳು ಜರುಗಿದರೆ ಅಂದಾಜು ನಾಲ್ಕು ಲಕ್ಷದಷ್ಟು ಮತದಾರರು ಮತ ಚಲಾಯಿಸಲಿದ್ದಾರೆ. ಸರಕಾರಿ ಅಂಚೆವೆಚ್ಚದ ಐದು ರುಪಾಯಿ ಖರ್ಚಿನ ಒಂದು ಮನವಿಪತ್ರ ಬರೆದು ಮತ ಯಾಚಿಸಬೇಕೆಂದರೆ ಓರ್ವ ಹುರಿಯಾಳು ಕನಿಷ್ಠ ಇಪ್ಪತ್ತು ಲಕ್ಷದಷ್ಟು ಹಣ ಖರ್ಚು ಮಾಡಲೇಬೇಕು. ಅಷ್ಟಕ್ಕೂ ಒಣ ಮನವಿಪತ್ರಕ್ಕೇ ಮತಗಳು ಖಂಡಿತಾ ಉದುರಲಾರವು. ಮತದಾರನ ವಯಕ್ತಿಕ ಭೇಟಿ ಮಾಡುವುದು ಸೇರಿದಂತೆ ತಾಲೂಕಿಗೊಂದಾದರೂ ಮೀಟಿಂಗ್, ಇನ್ನೂರಿಪ್ಪತ್ತೈದು ಕಡೆ ಮಾಡಬೇಕು. ಮತ್ತು ಜಿಲ್ಲೆಗೊಂದರಂತೆ ಮೂವತ್ತು ಜಿಲ್ಲಾ ಮೀಟಿಂಗ್. ಬೆಂಗಳೂರಿನಲ್ಲಿ ನೂರಾರು ಕಡೆ ಸಭೆ ಮಾಡಬೇಕಾಗತ್ತದೆ. ಹೀಗೆ ಕ.ಸಾ.ಪ. ರಾಜ್ಯಾಧ್ಯಕ್ಷನಾಗಲು ಕೋಟಿ, ಕೋಟಿ ಹಣಖರ್ಚು ಮಾಡಬೇಕಾದ ಒಂದು ಬಗೆಯ ಅನಿವಾರ್ಯಸ್ಥಿತಿ ನಿರ್ಮಾಣಗೊಂಡಿದೆ. ಇದು ಸಾಮಾನ್ಯ  ಸಾಹಿತಿಗಳಿಂದ ಅಕ್ಷರಶಃ ದುಃಸಾಧ್ಯದ ಮತ್ತು ದುಃಖದ ಸಂಗತಿ. ಹೀಗಾಗಿ ಸಾಹಿತ್ಯ ಪರಿಷತ್ತು ಚುನಾವಣೆ ಎಂದರೆ ವಿಧಾನ ಪರಿಷತ್ತಿನ ಚುನಾವಣೆಯನ್ನು ಮೀರಿಸುವಂತಾಗಿದೆ. ಮತ್ತೊಂದು ಬಹುಮುಖ್ಯ ಸಂಗತಿಯೆಂದರೆ ಐದುವರ್ಷದ ಅವಧಿಗೆ ಬೈಲಾ ಬದಲಾಯಿಸಿದಂತೆ ಕ.ಸಾ.ಪ. ಚುನಾವಣೆ ನಿಯಮ ಬದಲಿಸಿ ಸರಕಾರಿ ನೌಕರ ಸಂಘದ ಮಾದರಿಯಲ್ಲಿ ಚುನಾವಣೆಗಳು ನೆರವೇರುವಂತೆ ಬೈಲಾ ತಿದ್ದುಪಡಿ ಆಗಬೇಕು. ಅಂದರೆ ತಾಲೂಕು, ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರ ಆಯ್ಕೆಯ ಅವಕಾಶಗಳಿರಬೇಕು. ಈಗ ನೇರವಾಗಿ ಸಾಮಾನ್ಯ ಮತದಾರರಿಂದ ರಾಜ್ಯಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಆ ಮೂಲಕ ಜಿಲ್ಲಾಧ್ಯಕ್ಷರ, ತಾಲ್ಲೂಕು ಅಧ್ಯಕ್ಷರ ಮಹತ್ವ ಕಡಿಮೆ ಮಾಡಿದಂತಾಗುತ್ತದೆ. ಹಾಗೆಯೇ ಜಿಲ್ಲಾಧ್ಯಕ್ಷರಾದವರು ತಾಲ್ಲೂಕು ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರ ಹೊಂದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರೋಧಿಯಾಗಿದೆ. ಇಂತಹ ಕೆಲವು ತಿದ್ದುಪಡಿಗಳ ತುರ್ತು ಅಗತ್ಯವಿದೆ. ಪರಿಷತ್ತಿನ ಸದಸ್ಯತ್ವ ಹಾಗೂ ಮತದಾನದ ಹಕ್ಕು ಬೇರೆ ಬೇರೆಯಾಗಬೇಕು. ಕುರಿತೋದದ ಕಾವ್ಯ ಪ್ರಯೋಗಿಗಳನೇಕರು ಎಂಬಂತೆ ಅಂದರೆ ಇ.ಎ.ಹೆ.ಗುರುತಿನ ಬಹುಪಾಲು ಮತದಾರರಿದ್ದಾರೆ. ಕ.ಸಾ.ಪ. ಸದಸ್ಯತ್ವ ಹುಟ್ಟುಹಾಕುವ ವಿಷಮಜಾಲವೇ ಇಲ್ಲಿದೆ. ಜಾತಿನಿಷ್ಠ ನೀಚ ಮನಸುಗಳ ಕೊಳಕು ಹುನ್ನಾರಗಳು ಅಪಾಯದಮಟ್ಟ ಮೀರಿ ಬೆಳೆದು ಸದಸ್ಯತ್ವದ ಜಾತಿಜಾಲ ಹೆಣೆದಿವೆ. ಬರೀಜಾತಿ ಪಾರಮ್ಯವಲ್ಲದೇ ಒಳಜಾತಿ, ಉಪಜಾತಿ, ನೆಂಟರಿಷ್ಟರನ್ನೇ ಸದಸ್ಯರನ್ನಾಗಿಸಿರುವ ಕೊಚ್ಚೆ ರಾಜಕಾರಣ ಪರಿಷತ್ತಿನೊಳಗೆ ನುಸುಳಿ ಕೆಲವು ವರ್ಷಗಳೇ ಕಳೆದು ಪರಿಷತ್ತಿನ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಬಲಾಢ್ಯ ಮೇಲ್ಜಾತಿಗಳ ಅಧಿಪತ್ಯದಲ್ಲಿ ಪರಿಷತ್ತಿನ ಅಸ್ಮಿತೆ ಎಂಬಂತಾಗಿದೆ. ಅದೆಲ್ಲ ರಿಪೇರಿ ಮಾಡಲು ಸಾಧ್ಯವೇ.? ಕಡೆಯಪಕ್ಷ ಕನಿಷ್ಠ ಮಟ್ಟದಲ್ಲಾದರೂ ಸಾಹಿತ್ಯದ ಓದು, ಬರಹ, ಸಾಹಿತ್ಯ ಕೃತಿ ರಚನೆಗಳ ಅಗತ್ಯ ಮಾನದಂಡಗಳನ್ನು ಮತದಾರ ಹಾಗೂ ಪದಾಧಿಕಾರಿ ಸ್ಪರ್ಧೆಗಳಿಗೆ ಕಡ್ಡಾಯವಾಗುವ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಪರಿಷತ್ತು ಸ್ವಲ್ಪಮಟ್ಟಿಗಾದರೂ ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಮುಕ್ತವಾಗಬೇಕು. *****************************   ಮಲ್ಲಿಕಾರ್ಜುನ ಕಡಕೋಳ

ಕಸಾಪಗೆ ಮಹಿಳಾ ಅಧ್ಯಕ್ಷರು??? Read Post »

ಕಾವ್ಯಯಾನ

ಒಂದು ಪ್ರೇಮ ಕವಿತೆ

ಕವಿತೆ ಎಚ್.ಕೆ.ನಟರಾಜ್ ನಿಜಕ್ಕೂ ನಿನ್ನ ಮೇಲೆ ತುಂಭಾ ಮನಸಾಗಿದೆಹೇಗೇ ಹೇಳಲಿ. ನೀನೊಪ್ಪದೆ ಬಯ್ದರೆತಿರಸ್ಕರಿಸಿದರೆಆ ನೋವ ಹೇಗೆ ಸಹಿಸಲೀಈ ಮನದಾಳದೊಲವಿಗೆಏನೆಂದು ಹೆಸರಿಡಲಿ.ನಿದ್ದೆಗಳಿಲ್ರದ ರಾತ್ರೀಇರುಳ ನಿಶೆಯೂ ನಿನ್ನ ಮುಗುಳ್ನಗೆಯಹೊನಲಲ್ಲಿ ಬೆಳಕಾಗಿ ಕಾಡುತ್ತದೆನೀ ನನ್ನ ಒಲವು ತಾನೆ.ಹೇಳೇಕಾವ್ಯವನೆ ಉಲಿವ ಜಾಣೆಹೃದಯ ಕುದಿವ ಕುಲುಮೆ ಕೆಂಡವಿರಹದುರಿಯ ಹೊಂಡ..ಅಗ್ನೀಕುಂಡವಾಗಿದೆ.ಸವೆಸಿ ಬಂದ ದಾರಿಯಲ್ಲೆಲ್ಲಾ..ನಿನ್ನ ಗುರುತಿನ ನೆನಪುಗಳ ಬಳ್ಳಿ…ವೃಕ್ಷ… ಘಮಲಿನ ಪುಷ್ಪಹೇಗೆ ದಾಟಲಿ ಈ ಬದುಕ.. ಪ್ರೀತಿಯದೆಯಲ್ಲರಳಿದ ಉತ್ಥಾನದ ನೆನಪಹೇಗೆ ಬಂದರೂ.. ಸುತ್ತಿ ನಿಂತರೂಬಳಸಿ ಬಂದರೂ ಕಾಡುವುದು…ನಿಜಕ್ಕೂ ನಿನ ಮೇಲೆ ಮನಸಾಗಿದೆಕನಸುಗಳಲ್ಲಿ ಕಾಡದೆ ಬಂದು ಮುದ್ದಿಸಿಬಿಡೆ ನಿನದೇ ನೆನಪು ಹೊತ್ತು ಗೊತ್ತಿಲ್ಲದೆ ಕಾಡುವುದು. ಹಾಡುವುದು ನಿನದೇ ನೆನಪಮಂಜುಮಾತಿನ ಮಲ್ಲಿಗೆ ನಿನ ಸೂಗಸ ಹೇಳೇ ಕಿನ್ನರಿ.. ನನ್ನೊಲವ ಸುಂದರಿನೀ.. ನನ್ನ ಪ್ರೀತಿಸುವ ತಾನೆ.. ನಾ ಕಾರ್ಮುಗಿಲ ಕಪ್ಪಾದರೂ ನೀನು ಹೊಳೆವ ಬಿಳಿ ಮುಗಿಲುಅಂದುಕೊಳ್ಳಲೇ ಇನ್ನು ನನಗಿಲ್ಲಾ ದಿಗಿಲುನೀನು ಅಪ್ರತಿಮ ಸುರಸುಂದರಿಗೂ ಮಿಗಿಲುತೆರೆದಿದೆ ನಿನ ಸ್ವಾಗತಕೆಎಂದೂ ನನ್ನ ತೆರೆದೆದೆಯ ಬಾಗಿಲು ಹೊತ್ತು ಗೊತ್ತಿನ ಪರಿವೇ ಏತಕೆ ಪರಿಮಳನೀ ಬರದಿದ್ದರೆ ಮನ ತಾಳದು ತಳಮಳಬಂದು ಬೀಡೆ ನಲ್ಲೆ ನಸು ನಾಚಿ ನಿಲ್ಲೆನನ್ನೆದೆಯ ಅಂಗಳದಿ ಆಡೋಣ ನಾವಿಬ್ಬರು ಕುಂಟೋಬಿಲ್ಲೆಹೇಳಿಬಿಡಲೇ.. ನಿನ ಮೇಲೆ ಮನಸಾಗಿದೆ..ಮುನಿಸು ತೋರದೆ..ಮುಖ ಮುತ್ತಿದ ಮುಂಗುರುಳೊಳಗೆನಕ್ಕು ರಮಿಸಿಬಿಡೇ. ಒಮ್ಮೆ..ಹಾಗೇ. ಕ್ಷಮಿಸಿ ಬಿಡೆ ನನ್ನ ಸುಮ್ನೆ(ನೀನು) ******************************

ಒಂದು ಪ್ರೇಮ ಕವಿತೆ Read Post »

ಕಾವ್ಯಯಾನ

ಎಂಥಾ ಮಳೆ

ಕವಿತೆ ವಸುಂಧರಾ ಕದಲೂರು ಅಬ್ಬಾ..ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂತಟಕ್ಕನೆ ನಿಂತರೂತೊಟಕ್ ತೊಟಕ್ ಎಂದುತೊಟ್ಟಿಕ್ಕುತಾಮಲೆ ಕಾಡು ಮನೆ ಮಾಡುಮರದ ನೆತ್ತಿ ಗಿಡದ ಬೇರುಎಲ್ಲಾ ನೆನೆಸಿತು ಅಬ್ಬಾ…ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂನದಿ ತೊರೆ ಕೆರೆ ಝರಿಹಳ್ಳ ಕೊರಲು ಕೊಳ್ಳತುಂಬಿಸಿ ಚೆಲ್ಲಿ ತುಳುಕಿಸಿಹರಿದು ಹರಿದು ಹಾರಿತುಅಬ್ಬಾ… ಎಂಥಾ ಮಳೆಅಂಚಲಿ ಕೊರೆದು ಕೊಚ್ಚಿಆಳಕೆ ಸುರಿದು ಚಚ್ಚಿಒಂದೇ ಸಮನೆ ಹೊಡೆದುಹಾಸಿ ಬೀಸಿ ಬೆಚ್ಚಿ ಬೀಳಿಸಿತು.ಅಬ್ಬಾ…ಎಂಥಾ ಮಳೆಅಳತೆ ಮೀರಿ ಸುರಿದುಎಲ್ಲೆ ತೂರಿ ಹರಿದುದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿದಿಢೀರನೆ ಧಡಾರನೆಮಿಂಚು ಗುಡುಗುಸಿಡಿಲು ನಡುಗುಬಡಿದೆಬ್ಬಿಸಿ ಮಗ್ಗಲು ಮುರಿಸಿಒಳ್ಳೆ ಪಾಠ ಕಲಿಸಿತುಅಬ್ಬಾ… ಎಂಥಾ ಮಳೆಭುವಿಯ ಕೋಪ ತೋರಿತುಕಡಲ ಅಲೆಯ ಕಂಗೆಡಿಸಿತುಸುಖದ ಕನಸು ಕೆಡಿಸಿತುನಗರ ಬದುಕು ಗುಡಿಸಿತುಅಬ್ಬಾ…ಎಂಥಾ ಮರುಳು ಮಳೆ. *******************************************************

ಎಂಥಾ ಮಳೆ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕನ್ನಡ ಸಾರಸ್ವತ ಲೋಕಕ್ಕೆ ವಿದ್ಯಾ ದೇವಿ ಸರಸ್ವತಿಯ ಪಾತ್ರ ಬಹುಮುಖ್ಯವಾದುದು.ಧನ ಕನಕಗಳಿಗೆ ಲಕ್ಷ್ಮಿ ಅಧಿದೇವತೆಯಾದಂತೆ ಎಲ್ಲ ದೇವತಾ ಕಾರ್ಯಗಳು ಸಮಾನತೆಯಲಿ ಬೇಧ ಭಾವವಿಲ್ಲದೆ ನಡೆಯುವುದು. ಪೂಜೆಗಷ್ಟೇ ಸಿಮೀತ. ಅದು ದೇವರ ರೂಪದಲ್ಲಿರುವ ಸ್ತ್ರೀ ಮೂರ್ತಿಗಳಿಗೆ ಮಾತ್ರ.ಆದರೆ ವಾಸ್ತವದಲ್ಲಿ ಅವೆಲ್ಲ ಸ್ಥಾನ ಗಳು ನಿಲುಕಲು ಸಾಧ್ಯವೇ. ಅವು ಶೋಕಿಸಿನಲ್ಲಿ‌ಡುವ ಮೂರ್ತಿಗಳು.ಇವೇ ನಮಗೆ ಉತ್ತರ ನೀಡಬಲ್ಲ ಮಾನ ದಂಡಗಳು. ಮಹಿಳಾ ಸಂಘಟನೆಗಳಿಗೇನು ಬರವಿಲ್ಲ.ಆದರೆ ಮುಂದೆ ನಿಂತು ನಿಭಾಯಿಸುವ ಜವಾಬ್ದಾರಿ ಬೇಕಲ್ಲ.ಪುರುಷರಂತೆ ಮೂರು ಹೊತ್ತು ಆ ಕೆಲಸ ಮಾಡಲು ಆತ್ಮ ನಿರ್ಭರತೆಯಿ ರುವ ಮಹಿಳೆಯರಿಗೇನು ಕೊರತೆಯಿಲ್ಲ. ಆದರೆ ಆ ಮಹಿ ಳೆಯ ಮನೋಬಲ ಕುಗ್ಗಿಸುವ ಪಿತೂರಿಗಳಿಗೇನು ಬರವೇ ನಾವು ನಿಮ್ಮ ಜೊತೆ ಎಂದು ಧೈರ್ಯ ತುಂಬಿ ಬೆಳೆಸುವವ ರು ಬೆರಳೆಣಿಕೆಯಷ್ಟು. ಸಮಾನತೆ ಡಂಗುರ ಸಾರಿ ಕೂಗಿದ್ದೆ ಬಂತು.ಸಮಾನತೆ ಮಾತ್ರ ಮಂಗ ತಕ್ಕಡಿಯಿಂದ ಬೆಣ್ಣೆ ಹಂಚಿದಂತೆ.ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲ ದು ಆತ್ಮವಿಶ್ವಾಸಕ್ಕೆ ಹೆಸರೆ ಸ್ತ್ರೀ.. ಅಬಲೆಯೆಂಬ ಪಟ್ಟ ಇಂದು ನಿನ್ನೆಯದಲ್ಲ,ಅದು ಶತಮಾನಗಳಿಂದ‌ ಬಂದರೂ ಆ ಪಟ್ಟವನ್ನು ಅಲ್ಲಗಳೆದು, ಎಲ್ಲ ಕ್ಷೇತ್ರಗಳಲ್ಲೂ ಧೈರ್ಯ ಗುಂದದೇ ದಿಟ್ಟ ನಡಿಗೆಯ ಛಾಪು ಮೂಡಿಸಿದರೂ,ನಂಬಿ ಕೆ ಮೇಲ್ನೊಟಕೆ ಸಬಲೆ‌ಯಪಟ್ಟ. ಪಟ್ಟು ಹಿಡಿದು ಪಡೆಯ ಲು ಧೈರ್ಯ ಸಾತಿಲ್ಲ. ಇದೊಂದು ಅವಕಾಶ.ಪ್ರಯತ್ನದ ಹಾದಿಯ ಮುನ್ನುಡಿ ಬರೆಯಲು ಅವಕಾಶ.ಕನ್ನಡವೇ ಸತ್ಯ ಕನ್ನಡವೇ ನಿತ್ಯ… ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರರ ಸಂಭ್ರಮ.ಹೇಳಿಕೊಳ್ಳ ಲು‌ ಹೆಮ್ಮೆಪಡುವಂತ ವಿಚಾರ.ಆದರೆ ಆ ಸಂಭ್ರಮ ವನ್ನು ಪ್ರಶ್ನಿಸುವವರು ಯ್ಯಾರು? ಬೆಕ್ಕಿಗೆ ಗಂಟೆ ಕಟ್ಟಿದಂತೆ.ತುಂ ಬಾ ಮಹಿಳೆಯರು ಆಕಾಂಕ್ಷಿಗಳಾದರೂ ಅವರ ಬೆಂಬಲಕ್ಕೆ ನಿಲ್ಲುವವರಾರು? ಸಣ್ಣ ಪುಟ್ಟ ಹುದ್ದೆ ನೀಡಿ ಸಮಾಧಾನ ಪಡಿಸಲು ಮೊದಲೇ ಸಿದ್ದತೆ ನಡೆದಿರುವುದು ಗೊತ್ತಿಲ್ಲದ ವಿಚಾರವೇನಲ್ಲ.ತಾಲೂಕಿನ ಕ‌.ಸಾ.ಪ ಅಧ್ಯಕ್ಷರ ನೇಮಕಕ್ಕೆ ಆಕಾಂಕ್ಷಿಗಳಾರು ಎಂದು ಕೇಳುವ ಸಭೆ.ನಾನು ಕ.ಸಾ.ಪ. ಸದಸ್ಯೆಯಾಗಿದ್ದಕ್ಕೆ ಆ ಸಭೆಗೆ ನಾನು ಭಾಗವಹಿಸಿ ದ್ದೆ.ಎಲ್ಲ ಪುರುಷರು ತಾವುಗಳು ಆಕಾಂಕ್ಷಿಗಳೆಂದು ಹೇಳುವಾಗ, ಅಲ್ಲಿ ಯಾವ ಒಬ್ಬ ಮಹಿಳೆಯು ಉಪಸ್ಥಿತರಿರಲಿಲ್ಲ, ಇದ್ದವಳು ನಾನೊಬ್ಬಳೇ..ಅವರೆಲ್ಲ ಕೇಳುವಾಗ ನಾನು ಯ್ಯಾಕೆ ಕೇಳಬಾರದೆಂದು ಧೈರ್ಯ ಮಾಡಿ ನಿಂತು ನಾನು ಆಕಾಂಕ್ಷಿಯೆಂದು ಹೇಳಿದ್ದೆ ತಡ ಎಲ್ಲರ ಕಣ್ಣುಗಳು ನನ್ನೆ ನೋಡುತ್ತಿದ್ದವು ಅಷ್ಟೇ.ನಾನು ತಪ್ಪು ಕೇಳಿದೆನಾ ಎಂಬ ಭಾವ.ಅಂದರೆ ನಾವುಗಳು ಬಯಸಬಾರದು.ಆ ಹುದ್ದೆಗ ಳು ಅವರಿಗೆ ಮಾತ್ರ ಮೀಸಲು.ಅದು ಸಿಗದಂತೆ ಮಾಡುವ ರಾಜಕೀಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ನಡಿಯತ್ತೆ ಅ ನ್ನುವ ವಾಸ್ತವ ಅರಿವಾಗಲು ಬಹಳ ಸಮಯ ಬೇಕಾಗಲಿ ಲ್ಲ. ಮಹಿಳಾ ಸಂಘಟನೆಗಳು ಮನೋಬಲದಿಂದ ಒಗ್ಗೂಡ ಬೇಕು ಅದು ಅನಿವಾರ್ಯ.ಅಲ್ಲದೇ ಕನ್ನಡ ಸಾಹಿತ್ಯ ಪರಂ ಪರೆಗೆ ದಕ್ಕೆಯಾಗದಂತೆ ನಡೆಸಿಕೊಂಡು ಹೋಗುವ,ರಾಜ ಕೀಯ ತಂತ್ರದಿಂದ ಹೊರಬಂದು ಮನೆಬಾಗಿಲಿಗೆ ಕನ್ನಡದ ಕಂಪನ್ನು ಪಸರಿಸುವ ಮನಸ್ಸು ಮಹಿಳೆಯರಿಗೆ ಇದೆ. ಸಂ ಸಾರವನ್ನು ಅಚ್ಚುಕಟ್ಟಾಗಿ ನಡೆಸುವ,ಮಕ್ಕಳಿಗೆ ಸಂಸ್ಕಾರ ಬಿತ್ತುವ ಸಂಸ್ಕೃತಿ ನೆಲೆಯಾಗಿರಿವುದು‌ ಮಹಿಳೆಯರಲ್ಲಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಎಲ್ಲೋ ಅಪವಾದ ವೆಂಬಂತೆ ಕಳಂಕಿತರು ಪುರುಷರಲ್ಲಿಯು,ಮಹಿಳೆಯರಲ್ಲಿ ಯು ಇಲ್ಲವೆಂದು ಹೇಳಲು ಸಾಧ್ಯವೇ? ಹಾಗಂತ ದೊರಕುವವರಿಗೂ ದೊರಕದೇ ವಂಚಿತರಾಗಿರುವುದು ನ್ಯಾಯವೇ? ಪ್ರಕೃತಿ ಸಮಾನತೆಯನ್ನು ಕಾಯ್ದು ಕೊಳ್ಳುವಂತೆ,ನಾವು ಕಾಯ್ದು ಕೊಳ್ಳುವುದು ಮುಖ್ಯ. ಇಲ್ಲವಾದರೆ ಸುನಾಮಿ, ಭೂಕಂಪ ಆಗುವುದೆಂಬ ನಿರೀಕ್ಷೆ.ಇದು ಕೇವಲ ಪರಿಸರ ಕ್ಕೊಂದೇ ಇರುವ ಮಾನದಂಡ.ನಾವುಗಳು ಮುಂದಾಗುವ ಅನಾಹುತ ಮನೆಯಿಂದಲೇ ಎಂದು ನೆನೆದು.ಮೌನವಾಗು ತ್ತೆವೆ.ಅದರ ಸರಿಯಾದ ಉಪಯೋಗ ಹಾಗೂ ಉತ್ತರ ನಮ್ಮ ಮುಂದಿದೆ.ನೂರು ವರುಷ ಅದರೂ ಅಧ್ಯಕ್ಷ ಸ್ಥಾನ ಕ್ಕೆ ಯಾವ ಮಹಿಳೆಗೂ ಅವಕಾಶ ದೊರಕದಿರುವುದು. ಇನ್ನಾದರೂ ಎಚ್ಚರಗೊಂಡು ಆಂತರಂಗಿಕವಾಗಿ ಚಳುವಳಿ ನಡೆಸುವುದು ಅವಶ್ಯಕತೆಯಿದೆ. ಹೆಸರಿಗೆ ಮಹಿಳಾ ಸಂಘಟನೆಗಳು‌ ಎಂಬ ಹಣೆಪಟ್ಟಿ ಕಿತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗದ್ದುಗೆಯ ಏರುವ ಮನಸ್ಸು ಮಾಡಬೇಕು.ಇಷ್ಟು ವರುಷ ಬೆಂಬಲ ನೀಡುತ್ತ ಕೆಲಸ ಮಾಡಿದ್ದೆವೆ.ಮುಂದೆಯು ಮಾಡುವ ತಾಕತ್ತು ಇದೆ. ನಾವು ಕೊಟ್ಟ ಬೆಂಬಲಕ್ಕೆ ಪ್ರತಿಯಾಗಿ ಮಹಿಳೆಯರಿಗೆ ಅಧ್ಯಕ್ಷ ಸ್ತಾನ ಸಿಗುವಲ್ಲಿ ಧ್ಬನಿಯತ್ತಬೇಕು…ಕಾಗದ ಪತ್ರಗಳಲ್ಲಿಇದ್ದುದು ವಾಸ್ತವವಾಗಿ ಕೈಗೆಟುಕುವಂತೆ ಮಾಡಬೇಕು.ಧ್ವನಿ ಎತ್ತುವವರ ಧ್ವನಿ ನಿಲ್ಲುವಂತಾಗದಿದ್ದರೆ ಸಾಕು. ಆಪಾದನೆ,ನಿಂದನೆ,ಚಾರಿತ್ರ್ಯಿಕ ಹಾನಿಯ ಹುನ್ನಾರಗಳು ಮಹಿಳೆಯ ಆತ್ಮಾಭಿಮಾನ ಕುಗ್ಗಿದರೆ ಅವಳೆಂದೆಂದಿಗೂ ನಾಲ್ಕು ಗೋಡೆಯ ಬಿಟ್ಟು ಬರಲಾರಳು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಸೊತ್ತು.ಕನ್ನಡ ಸಾಹಿತ್ಯ ಅನೇಕ ಅನರ್ಘ್ಯ ರತ್ನಗಳು ನೀಡಿದ ಆಸ್ತಿ.ಅದನ್ನು‌ ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಅದರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯಬೇಕು. ಮಹಿಳೆಯರಿಗೆ ಮೊದಲು.ಈ ಸಲವಾದರೂ ಶುಕ್ರದೆಸೆ ಪ್ರಾರಂಭವಾಗಲಿ ಎಂಬ ಆಶಯ.ಬದಲಾವಣೆಯತ್ತ ಹೆಜ್ಜೆ ಹಾಕೋಣ…..ಸಿರಿಗನ್ನಡಂ‌ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. **************************************************** ಶಿವಲೀಲಾ ಹುಣಸಗಿ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನೊಂದಿಗೆ 1915 ರಲ್ಲೇ ಕನ್ನಡ ನಾಡು ನುಡಿಯ ರಕ್ಷಣೆ ಹಾಗೂ ಕನ್ನಡ ಲೇಖಕ ಲೇಖಕಿಯರನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿಕೊಂಡ ಸಂಸ್ಥೆ, ನಂತರದಲ್ಲಿ 1935ರಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿದ್ದು ಕನ್ನಡ ಭಾಷೆಯ ಗರಿಮೆಗೆ ಸಾಕ್ಷಿ. ಇಲ್ಲಿಯವರೆಗೂ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುವುದರೊಂದಿಗೆ ಎಲ್ಲೆಡೆ ಕನ್ನಡ ಸಾಹಿತ್ಯದ ಘಮ ಪಸರಿಸಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ ಗೆ ಸೇರಿದೆ ಎಂದರೆ ತಪ್ಪಾಗಲಾರದು. ಸುಮಾರು ನೂರು ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ ನ ಯಾನದಲ್ಲಿ ಹೆಚ್.ವಿ.ನಂಜುಂಡಯ್ಯನವರಿಂದ ಮುಂದುವರಿದು ಮನು ಬಳಿಗಾರ್ ರವರೆಗೆ ಸರಿ ಸುಮಾರು ಇಪ್ಪತ್ತೈದು ಅಧ್ಯಕ್ಷರುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಕಂಡಿದೆ. ಮುಖ್ಯವಾಗಿ ಕನ್ನಡದ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ ಮಹಿಳಾ ದನಿಗಳನ್ನು ಎತ್ತರಿಸುವ ಉದ್ದೇಶ ಹೊಂದಿದ ಪರಿಷತ್ ನಲ್ಲಿ ಈವರೆಗೂ ಒಬ್ಬ ಮಹಿಳಾ ಸಾಹಿತಿ ಅಧ್ಯಕ್ಷರ ಗಾದಿ ಏರದಿರುವುದು ಕನ್ನಡ ಸಾಹಿತ್ಯ ಪರಿಷತ್ ನ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ಇಷ್ಟಕ್ಕೂ ನಮ್ಮ ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ದನಿಗಳ ಕೊರತೆಯುಂಟೇ ಎನ್ನುವುದನ್ನೊಮ್ಮೆ ಒರೆ ಹಚ್ಚಿ ನೋಡಬೇಕಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇತ್ತೀಚಿನದ್ದೇನಲ್ಲ ಸರಿಸುಮಾರು 1500 ವರ್ಷಗಳ ಹಿಂದಿನಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯ ಗುರುತುಗಳಿವೆ. ಹನ್ನೆರಡನೆಯ ಶತಮಾನದ ವಚನಕಾಲದಲ್ಲಿ ಮೊದಲ ಬಂಡಾಯ ಲೇಖಕಿಯಾಗಿ ಅಕ್ಕಮಹಾದೇವಿ ಕಂಡುಬಂದರೂ ಸಹ ಅವರೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸುಮಾರು ಮೂವತ್ತಾರು ವಚನಕಾರ್ತಿಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೆರಗು ತುಂಬಿದವರೇ, ವಿಶೇಷವೆಂದರೆ ಈ ಕಾಲಘಟ್ಟದಲ್ಲಿ ದಲಿತ ಸ್ತ್ರೀಯರಾದ ಸಂಕವ್ವೆ ಗುಡ್ಡವ್ವೆ ಕೇತಲದೇವಿಯಂತವರೂ ವಚನ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡುವುದರೊಂದಿಗೆ ದಲಿತಸಾಹಿತ್ಯದ ದನಿಯಾಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳಲಾರದ ಮಹಿಳೆಯರು ಮುಖ್ಯವಾಹಿನಿಗೆ ಬರುವುದು ತಡವಾಯಿತಾದರೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುವುದರೊಂದಿಗೆ ಸಾಹಿತ್ಯ ಸೃಷ್ಟಿ ಸಾಂಸ್ಕೃತಿಕ ಬದಲಾವಣೆಗೆ ಲೇಖಕಿಯರು ಕಾರಣರಾಗಿದ್ದಾರೆ. ದಾಸ ಸಾಹಿತ್ಯದಲ್ಲೂ ಮಹಿಳೆಯರು ರಚಿಸಿದ ಕೀರ್ತನೆಗಳ ಕುರುಹಿದೆ. ಜನಪದ ಗೀತೆಗಳ ರಚನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು ಎಂದರೆ ತಪ್ಪಾಗಲಾರದು. ಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಡಿ ಮರೆಯಾಗಿದ್ದಂತಹ ಬಹಳಷ್ಟು ಲೇಖಕಿಯರ ನಡುವೆ ಇಪ್ಪತ್ತನೆಯ ಶತಮಾನದಲ್ಲಿ ಮುಕ್ತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪುರುಷ ಪ್ರಾಬಲ್ಯವುಳ್ಳ ಕನ್ನಡ ಸಾಹಿತ್ಯ ಲೋಕದಲ್ಲಿ ತ್ರಿವೇಣಿ ಇಂದಿರಾ ರಂತಹ ಕಾದಂಬರಿಗಾರ್ತಿಯರು ಮಿನುಗು ಚುಕ್ಕೆಯಂತೆ ಮಿನುಗಿದ್ದಾರೆ. 1970ರ ನಂತರ ದಲಿತ ಸಾಹಿತ್ಯದ ರಚನೆಯಲ್ಲಿ ತೊಡಗಿಸಿಕೊಂಡಿರುವ ಲೇಖಕಿಯರಾದ ಗೀತಾ ನಾಗಭೂಷಣ, ಅನುಪಮಾ ನಿರಂಜನ್ ಮುಂತಾದವರನ್ನು ಕಾಣಬಹುದು, ಸ್ತ್ರೀ ಸಮಾನತೆ ಎತ್ತಿ ಹಿಡಿದು, ಸ್ತ್ರೀ ಶೋಷಣೆಗಳ ವಿರುದ್ಧ ಲೇಖನಿಯಾಗಿರುವ ಅನೇಕ ಮಹಿಳಾ ಲೇಖಕಿಯರು ಕವಯಿತ್ರಿಯರು ನಮ್ಮ ನಡುವೆ ಇದ್ದಾರೆ. ಕನ್ನಡ ಸಾಹಿತ್ಯಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಮಹಿಳೆಯರು ಇದ್ದಾಗಿಯೂ ಸಹ ಕನ್ನಡ ಸಾಹಿತ್ಯ ಪರಿಷತ್ ಮಹಿಳೆಯರಿಗೆ ಸ್ಥಾನಮಾನ ದೊರಕಿಕೊಡದಿರುವುದು ವಿಷಾದನೀಯ. 1985ರಲ್ಲೇ ಸರೋಜಿನಿ ಮಹಿಷಿಯವರು ಮಹಿಳೆಯರಿಗಾಗಿಯೇ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿರುವುದು ಪ್ರಶಂಸಾರ್ಹ. ಇದೆಲ್ಲದರ ನಡುವೆಯೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಮಹಿಳೆಯರನ್ನು ಕಡೆಗಣಿಸಿರುವುದು ಕನ್ನಡ ಸಾಹಿತ್ಯದಲ್ಲಿ ಪುರುಷರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ನೂರು ವರ್ಷಗಳನ್ನು ಪೂರೈಸಿರುವ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಇನ್ನಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ನೀಡುವುದರೊಂದಿಗೆ ಸಮಾನತೆ ಎತ್ತಿ ಹಿಡಿಯಲಿ, ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕನ್ನಡದ ತೇರು ಒಟ್ಟಾಗಿ ಎಳೆಯುವಂತಾಗಲಿ. *********************************************************** ಅರ್ಪಣಾ ಮೂರ್ತಿ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು’ ಇದು ಸಾಬೀತಾಗಿ ಶತಮಾನಗಳೇ ಕಳೆದರೂ ನಮ್ಮ ಕಸಾಪ ಗೆ ಒಮ್ಮೆಯೂ ಮಹಿಳಾ ಅಧ್ಯಕ್ಷರ ಆಯ್ಕೆ ಆಗಿಲ್ಲ, ಯಾರೂ ಸಹ ಸ್ಪರ್ಧಿಸಲಾಗಿಲ್ಲ. ಭಾರತವೆಂಬ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನ ಇಂದಿರಾ ಗಾಂಧಿಯವರು ಆಳಿದರು. ಅಂತೆಯೇ ನಮ್ಮ ಕಸಾಪ ಗೂ ಮಹಿಳಾ ಅಧ್ಯಕ್ಷೆಯ ಆಯ್ಕೆ ಆಗಬೇಕು. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಆಕಾಶದಲ್ಲಿ ವಿಮಾನ ಚಾಲನೆ, ಅಷ್ಟೇ ಏಕೆ ಅಂತರಿಕ್ಷದವರೆಗೂ ಮಹಿಳೆ ತಲುಪಿಯಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದಾಗಿದೆ. ಇಲ್ಲಿ ಮಹಿಳೆ ಪುರುಷನಿಗೆ ಸಮ ಎಂದು ಹೇಳುವದಕ್ಕಿಂತ ಮಹಿಳೆಗೆ ಒಂದು ಕೈ ಹೆಚ್ಚೇ ಸಾಮರ್ಥ್ಯವಿದೆ ಎಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ! ಮನೆ, ಮಕ್ಕಳು, ಸಂಸಾರ, ಉದ್ಯೋಗ, ಕೆರಿಯರ್, ಆಸಕ್ತಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವಂತಹ ಮಹಿಳೆ ಕಸಾಪ ಅಧ್ಯಕ್ಷೆ ಆಗಿಯೂ ಬಹಳಷ್ಟು ಕೆಲಸಗಳನ್ನ ಪರಿಷತ್ತಿನ ಔನ್ಯತ್ಯಕ್ಕಾಗಿ ಮಾಡಬಲ್ಲಳು. ಶರಣರ ಕಾಲದಿಂದಲೂ ಕವಯಿತ್ರಿಯರು ಕನ್ನಡ ಸಾಹಿತ್ಯಕ್ಕೆ ಉತ್ಕೃಷ್ಟ ಕೊಡುಗೆ ಮಹಿಳೆಯರು ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಬಹಳಷ್ಟು ಹಿರಿಯ ಮಹಿಳಾ ಸಾಹಿತಿಗಳಿದ್ದಾರೆ, ಅವರಲ್ಲಿ ಯಾರಾದರೂ ಸ್ಪರ್ಧಿಸಿ ಅಧ್ಯಕ್ಷರ ಸ್ಥಾನ ತುಂಬಿದರೆ ಇಲ್ಲಿಯವರೆಗೂ ಮಹಿಳಾ ಅಧ್ಯಕ್ಷೆ ಇಲ್ಲ ಎನ್ನುವ ಕೊರಗೂ ನೀಗುತ್ತೆ. ಮತ್ತಷ್ಟು ಹೊಸ ಕನ್ನಡ ಪರ ಕೆಲಸಗಳನ್ನ, ಹೊಸ ಸಾಹಿತ್ಯಿಕ ಚಟುವಟಿಕೆಗಳನ್ನ ಮಾಡಿ ಪರಿಷತ್ತಿನ ಜೀರ್ಣೋದ್ಧಾರ ಮಾಡಲಿ ಅನ್ನೋದು ನನ್ನ ಆಶಯ. **************************************************************** ಚೈತ್ರಾ ಶಿವಯೋಗಿಮಠ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

You cannot copy content of this page

Scroll to Top