ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ. ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ. ****************************

ಗಝಲ್ Read Post »

ಕಾವ್ಯಯಾನ

ಅವಳು ಮತ್ತು ಅಗ್ಗಿಷ್ಟಿಕೆಯು..!!

ಕವಿತೆ ವೀಣಾ ಪಿ. ಧೋ………. ಎಂದೆನುತೆ ಸುರಿಮಳೆಯ ದಾರ್ಢ್ಯತೆಯ ಗಡ-ಗಡನೆ ನಡುಗಿಸುವ ತಣ್ಣೀರ ಧಾವಂತಕೆ ತೊಯ್ದ ಕಾಯವ ಮುಚ್ಚಿಟ್ಟ ಸೀರೆಯ ಸೆರಗಿನಂಚನು ಹಿಂಡುತಲಿ ಗುಡುಗು-ಮಿಂಚಿನ ಸೆಡವಿಗೆ ಭಯಗೊಂಡ ಹುಲ್ಲೆಯಂತಾದ ಭಾವದಲಿ ಬರದೂರ ಬಯಲಿಂದ ಕಟ್ಟಿಗೆಯನಾಯಲು ಕಾನನಕೆ ಬಂದಾಕೆ ಸಂಜೆ ಮಳೆಗೆ ಸಿಲುಕಿರಲು ಕತ್ತಲಾವರಣದಂಜಿಕೆಗೆ ದೂರದಂಚಿನ ಬೆಳಕು ಅರಸುತ್ತಲೋಡುತ್ತ ಅದಾವುದೋ ಹಿತ್ತಲಿನ ಹೊಚ್ಚನೆಯ ತಾವತ್ತ ಹೊರಳಿಸಿರೆ ಅಂಜುತಲಿ ಜಿಂಕೆ ಕಣ್ಗಳನು ಬೆಳದಿಂಗಳಂತಿವಳ ಸೆಳೆದು ಕಾವು ಕೊಡುವೆನೆಂದೆಂಬ ಕಾಮದಲಿ ಅಗ್ಗಿಷ್ಟಿಕೆಯೊಂದು ಉರಿಜ್ವಾಲೆಯಾಡಂಬರ ತೋರುತಿರೆ.. ತಾ ತೋಯ್ದ ಗತಿ ಮರೆತು ಚಡಪಡಿಕೆ ಪುಟಿಸುತ್ತ ಹೊರಟೇ ಬಿಟ್ಟಳಾಕೆ ತನ್ನಿರುವಿಲ್ಲದೇ ತೊಟ್ಟಿಲಲಿ ಕನಲುತಿಹ ಕಂದನ ಕನವರಿಕೆಯಲಿ.. ಇತ್ತ ಅಗ್ಗಿಷ್ಟಿಕೆ ಬಳಿ ಸಾರದವಳನ್ನು ಹಳಿಯುತ್ತ ಕೆಂಡ ಕೆದರಿ ಮತ್ತೊಂದು ಹೊಸ ಜಿಂಕೆ ಬಂದೀತು ಬಳಿ ಸಾರಿ ಎಂಬಂತೆ ಧಗ-ಧಗನೆ ಉರಿಯುತ್ತಿತ್ತು..!! ***********************

ಅವಳು ಮತ್ತು ಅಗ್ಗಿಷ್ಟಿಕೆಯು..!! Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಶಬ್ಧಭಾರವಿಲ್ಲದ ಮನದ ಮಾತುಗಳು

ಅಂಕಣ ಬರಹ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.ಏನೂ ಬೇಡವೆಂದುಮನುಷ್ಯ ನಾಗಬೇಕೆಂದಿದ್ದೇನೆ ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆಮುಖಾಮುಖಿಯಾಗಿದ್ದೇನೆ ಎನ್ನುವ ಮೊದಲ ಕವಿತೆಯ ಸಾಲುಗಳನ್ನು ಓದುತ್ತಲೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ.ಪ್ರಕಾಶ ಖಾಡೆಯವರ ಈ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ  ಮಾನವೀಯತೆಯನ್ನು ಎಲ್ಲಿ ಹುಡುಕುತ್ತೀರಿ? ಒಂದು ಸಾವಿಗೆ ನ್ಯಾಯ ಕೊಡಿಸಲೂ ಕೂಡ ಈ ಕಾಲಘಟ್ಟ ಸಹಕರಿಸುತ್ತಿಲ್ಲ. ಯಾರೋ ಸತ್ತ ಸುದ್ದಿಗೆ ಸ್ಪಂದಿಸುವ ಮೊದಲು ಸತ್ತವನು ಹೇಗೆ ಸತ್ತ? ಕೊರೋನಾ ಬಂದಿತ್ತಾ? ಹಾಗೇನಾದರೂ ಇದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗುವುದೇ ಎನ್ನುವ ಪ್ರಶ್ನೆಯೇ ಮೊದಲು ಉತ್ಪನ್ನವಾಗುವುದು. ಕಾಲ ಹೀಗಿರುವಾಗ ಮಾನವೀಯತೆಯನ್ನು ಹುಡುಕಿ ಹೊರಡುವುದಾದರೂ ಎಲ್ಲಿಗೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಹುಡುಕುವ ಪ್ರಕಾಶ ಖಾಡೆಯವರ ಮಾನವೀಯ ಹುಡುಕಾಟ ಇಂದು ಎಲ್ಲರ ಹುಡುಕಾಟ ಆಗಬೇಕಾದ ಅವಶ್ಯಕತೆಯಾಗಿದೆ.  ನಮ್ಮ ಜೊತೆಗಿದ್ದವರನ್ನು ಮರೆತು ಬಿಡುತ್ತಿದ್ದೇವೆ. ಹೊಳೆ ದಾಟಿದ ನಂತರ ಅಂಬಿಗನ ಹಂಗಾದರೂ ಏಕೆ ಬೇಕು ಎಂಬಂತೆ ವರ್ತಿಸುವುದು ಎಲ್ಲರಿಗೂ ರೂಢಿಯಾಗುತ್ತಿದೆ. ಹೀಗಾಗಿ ನಮ್ಮ ಜೊತೆಗಿದ್ದವರನ್ನು ಎಷ್ಟು ಸುಲಭವಾಗಿ ಮರೆತುಬಿಡುತ್ತಿದ್ದೇವೆ ಎಂದರೆ ನಮ್ಮನ್ನು ಪ್ರೀತಿಸುವವರನ್ನು ಸುಲಭವಾಗಿ ದೂರ ಮಾಡಿಕೊಳ್ಳುತ್ತೇವೆ. ಮತ್ತೊಂದು ಮೈತ್ರಿಯನ್ನು ರಚಿಸಿಕೊಳ್ಳುತ್ತೇವೆ. ಅದು ವೈಯಕ್ತಿಕ ಪ್ರೀತಿಯೇ ಇರಬಹುದು. ರಾಜತಾಂತ್ರಿಕ ಕಾರಣಗಳೇ ಇರಬಹುದು. ಯಾವುದೂ ಸ್ಥಿರವಲ್ಲ. ಇಂದು ಸ್ನೇಹಿತನಂತೆ ವರ್ತಿಸುವ ದೇಶವೊಂದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಶತ್ರು ದೇಶವಾಗಿಬಿಡಬಹುದು. ಅನಾದಿ ಕಾಲದಿಂದಲೂ ಭಾರತದ ನೆರಳಾಗಿದ್ದ ನೇಪಾಳ ಕೂಡ ನಮ್ಮ ದೇಶದ ಭಾಗಗಳನ್ನು ತನ್ನದೆಂದು ಒತ್ತುವರಿ ಮಾಡಿಕೊಂಡ ಹಾಗೆ.      ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ನಾನು ತಮಾಷೆಗೆ ‘ಅವಳನ್ನು ಎಷ್ಟು ಪ್ರೀತಿಸುತ್ತೀರಿ?’ ಎಂದು ಕೇಳಿದ್ದೆ. ಗೊತ್ತು, ಹಾಗೆ ಪ್ರೇಮವನ್ನು ಪ್ರಮಾಣಿಸಲಾಗುವುದಿಲ್ಲ ಎಂಬುದು. ಆದರೆ ಅವರು ಹೇಳಿದ ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತ್ತು. ‘ಇವೆಲ್ಲ ಇಂದಿದ್ದು ನಾಳೆ ಮರೆಯಾಗುವಂತಹುದ್ದು. ನಿಜ ಜೀವನದಲ್ಲಿ ಇಂತಹ ಪ್ರೇಮಗಳು ಕೊನೆಯವರೆಗೆ ಮುಂದುವರೆಯುವಂತಹುದ್ದಲ್ಲ’ ಎಂದಿದ್ದರು. ನಾನು ದಂಗಾಗಿದ್ದೆ. ಒಂದು ಪ್ರೀತಿಯನ್ನು ಉಸಿರಿರುವವರೆಗೆ ಕಾಪಿಡುವ ನಾವು ಅದೆಷ್ಟು ಬೇಗ ಪ್ರೀತಿಯನ್ನು ದಿನನಿತ್ಯ  ಬದಲಾಯಿಸುವ ಉಡುಪಿಗೆ ಸಮನಾಗಿಸಿಕೊಂಡು ಬಿಟ್ಟೆವು ಎಂಬುದು ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಇಂದು ಧರಿಸಿದ ಮೇಲುಡುಪನ್ನು ನಾಳೆಯೂ ಧರಿಸುತ್ತೇವೆ. ಆದರೆ ಪ್ರೀತಿ ಎಂಬುದು ಒಳ ಉಡುಪಿನಂತಾಗಿದೆ. ಒಳ ಉಡುಪನ್ನು ಇಂದು ಧರಿಸಿದರೆ ಕಡ್ಡಾಯವಾಗಿ ಮರುದಿನ ಬದಲಾಯಿಸುತ್ತೇವೆ. ಹಾಗಿದ್ದರೆ ನಾವು ಜೊತೆಗಿರಬೇಕೆಂದರೆ ಜೊತೆಜೊತೆಯಾಗಿ ಇಟ್ಟ ಹೆಜ್ಜೆಗಳಿಗೆ ಕಡ್ಡಾಯವಾಗಿ ಒಂದು ಸಾಕ್ಷಿಯನ್ನು ಹುಡುಕಿಕೊಳ್ಳಬೇಕೆ?ಜೊತೆಗೆ ಬಂದವರ ನೆನಪುಗಳಿಗೆಸವೆದ ದಾರಿಯಷ್ಟೇ ಸಾಕ್ಷಿಎನ್ನುವ ಕವಿಗೆ ಅರಿವಿದೆ, ಸವೆದ ದಾರಿಗಳಾದರೂ ಅದೆಷ್ಟು ದಿನ ತನ್ನ ಸಾಕ್ಷಿಯನ್ನು ಉಳಿಸೀತು? ಧೂಳು ಹಾರಿ ನಡೆದ ಹೆಜ್ಜೆಯ ಗುರುತಿನ ಸಾಕ್ಷಿಯನ್ನು ಅಳಿಸಿಬಿಡಲು ಅದೆಷ್ಟು ಸಮಯ ಬೇಕು?ಪುಟ್ಟ ಹೃದಯದಲ್ಲಿಒಂದಿಷ್ಟು ಜಾಗ ಖಾತ್ರಿ ಮಾಡಿಕೊಳ್ಳಬೇಕುಬದುಕಿನ ಸಾಕ್ಷಿಗೆಕಡಲ ದಂಡೆಯಲ್ಲಿ ಬೆಳೆದವಳು ನಾನು. ನಡೆಯುವ ಹೆಜ್ಜೆ ಮೂಡುವ ಮುನ್ನವೇ ಅಲೆಯ ಮೃದು ಚುಂಬನಕ್ಕೂ ಹೆಜ್ಜೆ ಗುರುತು ಕರಗಿಬಿಡುವ ಮರ್ಮದ ಅರಿವಿದೆ. ಹೀಗಾಗಿ ಕವಿ ಹೇಳುವ ಜೊತೆಗಿದ್ದುದಕ್ಕೆ  ಸವೆದ ಹಾದಿಗಾಗಿ ಹೊಸ ಸಾಕ್ಷಿಯನ್ನು ಹುಡುಕಲೇ ಬೇಕಾದ ಅನಿವಾರ್‍ಯತೆಯಿದೆ.ದಾರಿಗೆ ಮುಳ್ಳನ್ನುಹೂವ ತಂದವರೇ ಹಚ್ಚಿದ್ದಾರೆನಮಗೆ ಹೂವು ನೀಡುವ ನಾಟಕವಾಡುತ್ತಲೇ ನಮ್ಮ ದಾರಿಗೆ ಮುಳ್ಳನ್ನಿಡುವ ಗೋಮುಖ ವ್ಯಾಘ್ರಗಳ ಸಂಖ್ಯೆ ಈಗ ಹೆಚ್ಚಿದೆ. ಜೊತೆಗಿರುತ್ತಲೇ ಮಗ್ಗುಲಿಗೆ ಚೂರಿ ಹಾಕುವ, ಬೆಣ್ಣೆಯಂತಹ ಮಾತನಾಡುತ್ತಲೇ ಊಟಕ್ಕೆ ವಿಷವಿಕ್ಕುವವರ ನಡುವೆ ನಾವೀಗ ಬದುಕಬೇಕಿದೆ.ಹಿಂದೆ ಮಾತನಾಡುವವರ ನಾಲಿಗೆಹರದಾರಿ ಚಾಚಲಿ ಬಿಡಿನಮ್ಮ ಶಾಂತ ಮನಸ್ಸು ವಿಚಲಿತವಾಗದಿರಲಿಎನ್ನುತ್ತಾರೆ ಕವಿ. ಯಾವ ಸ್ನೇಹವೂ ಅರ್ಥ ಉಳಿಸಿಕೊಳ್ಳದ ಈ ತುರ್ತು ಸ್ಥಿತಿಯಲ್ಲಿ ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ದೊಡ್ಡ ದಂಡೆ ಇರುತ್ತದೆ.  ಕೆಟ್ಟ ಕೆಲಸ ಮಾಡಿದರೆ ಅದು ಸಹಜವೇ. ಆದರೆ ಒಳ್ಳೆಯ ಕೆಲಸಕ್ಕೂ ಕುರುಬುವವರಿಗೇನೂ ಕಡಿಮೆಯಿಲ್ಲ. ಪ್ರತಿಯೊಂದು ಯಶಸ್ವಿ ಹೆಜ್ಜೆಗೂ ಬೆನ್ನ ಹಿಂದೊಂದು ಹಿತಶತ್ರುಗಳ ಗುಂಪೇ ತಯಾರಾಗುತ್ತದೆ. ಇಡುವ ಪ್ರತಿ ಹೆಜ್ಜೆಗೂ ಒಂದು ಕುಹಕ ಸಿದ್ಧವಾಗಿರುತ್ತದೆ. ಹೀಗಾಗಿ ಕವಿ ಬೆನ್ನಿರಿಯುವವರ ಕುರಿತೂ ನಮ್ಮ ಮನಸ್ಸು ಶಾಂತವಾಗಿರಬೇಕೆಂದು ಬಯಸುತ್ತಾರೆ. ಹಾಗೊಂದುವೇಳೆ ನಮ್ಮ ಮನದ ಹತೋಟಿಯನ್ನು ನಾವೇ ಕಳೆದುಕೊಂಡು ಬಿಟ್ಟರೆ ಬುದುಕು ಮೂರಾಬಟ್ಟೆಯಾಗುವುದು ನಮ್ಮದೇ. ಏಕೆಂದರೆ,ಎಲೆ ಉದುರಿಸಿಕೊಂಡುಬೋಳಾಗುವ ಮರಗಳಿಗೂಬರಡಾಗುವ ನೋವುಇದ್ದೇ ಇರುತ್ತದೆ. ಅಂದರೆ ಕಳೆದುಕೊಂಡ ಎಲೆಗಳ ಜಾಗದಲ್ಲೊಂದು ಕಲೆ ಮರದಲ್ಲಿ ಸಾಶ್ವತವಾಗಿ ಉಳಿದುಬಿಡುವಂತೆ ಸಂಬಂಧದ ಕುರುಹುಗಳೂ ಶಾಶ್ವತವಾಗಿ ಉಳಿಯಲೇ ಬೇಕಿದೆ. ತೆಂಗಿನ ಮರದ ಗರಿ/ ಹೆಡೆ ಬಿದ್ದಾಗ ಮರದ ಕಾಂಡದಲ್ಲಿ ಅದರದ್ದೊಂದು ಗುರುತು ಹಾಗೆಯೇ ಉಳಿದು ಮರದ ಬೆಳವಣಿಗೆಯ ಸಾಕ್ಷಿ ಹೇಳುತ್ತದೆ. ಹೀಗಿರುವಾಗ ಜೀವನದಲ್ಲಿ ಹಿಂದೆ ಬಿಟ್ಟು ಹೋದ ಪ್ರೀತಿಗೊಂದು ಸಾಕ್ಷಿ ಬೇಡವೇ? ಹಾಗೆಂದು ಸಾಕ್ಷಿ ಕೇಳಿದರೆ ಮಾತುಗಳು ಹಾಗೇ ಉಳಿಯಬಹುದೇ? ಈಗ ಆಡಿದ ಮಾತನ್ನು ಇನ್ನೊಂದು ಕ್ಷಣದಲ್ಲೇ ತಿರುಗಿಸಿ ಹಾಗೆ ಹೇಳಿದ್ದು ನಾನಲ್ಲ ಎಂದು ಬಿಡುವಾಗ ಆಡುವ ಮಾತುಗಳಿಗೆ ಬೆಲೆಯೆಲ್ಲಿದೆ. ಹಾಗೆಂದೇ ಕವಿ ಎಷ್ಟೊಂದು ಮಾತುಗಳುತೂಕ ಕಳೆದುಕೊಂಡಿವೆ ಇಲ್ಲಿಎನ್ನುತ್ತಾರೆ. ಜೀವನದಲ್ಲಿ ಮಾತಿಗೆ ಬೆಲೆಯಿಲ್ಲ ಎಂದಾದರೆ ಮುಂದೆ ಅವರ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಇಲ್ಲ. ಜೀವನದಲ್ಲಿ ಒಮ್ಮೆ ಕೊಟ್ಟ ಮಾತಿಗೆ ತಪ್ಪಿದರೆ ಮುಂದೆ ಯಾರೂ ಕೂಡ ನಂಬದಂತಹ ಸ್ಥಿತಿ ತಲುಪಿಬಿಡುತ್ತೇವೆ. ಆದರೆ ಕವಿ ಆಶಾವಾದಿ. ಹೀಗಾಗಿ ಬದುಕಿನ ತುಂಬ ಕನಸುಗಳನ್ನು ಉತ್ತು ಬೆಳೆಯುವ ಮಹದಾಸೆ ಇಟ್ಟುಕೊಂಡಿರುವವರು. ಕನಸುಗಳಿಲ್ಲದ ಜಾಗದಲ್ಲಿ ಒಂದು ಕ್ಷಣವೂ ಇರಲಾಗದು. ಕನಸುಗಳಿದ್ದರೆ ಆಕಾಶ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಸೂರ್‍ಯ ಕೂಡ ಇನ್ನಷ್ಟು ಪ್ರಕಾಶಮಾನವಾಗುತ್ತಾನೆ. ಕನಸಿನ ಶಕ್ತಿಯೇ ಅಂತಹದ್ದು. ಕಿತ್ತಷ್ಟು ಬೆಳೆವ ಕಸಕ್ಕೆಹೇಳದೆ ಬರುವ ಕನಸಿಗೆತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶಎನ್ನುವ ಕವಿಸಾಲುಗಳಲ್ಲಿ ನಿಜ ಜೀವನದ ಅನುಭವವೇ ಮೇಳೈಸಿದೆ. ಇಷ್ಟಾದರೂ ಕವಿಗೆ ಅರಿವಿದೆ. ಯಾರ ಮನಸ್ಸಿನಲ್ಲಿ ಅಪಾರವಾದ ನೋವಿರುತ್ತದೆಯೋ ಅವರು ತಮ್ಮ ನೋವನ್ನು ಮರೆಮಾಚಲು ಸದಾ ನಗುತ್ತ, ಇತರರನ್ನೂ ನಗಿಸುತ್ತಿರುತ್ತಾರಂತೆ. ನಗೆ ಮಾಂತ್ರಿಕ ಚಾರ್ಲಿ ಚಾಪ್ಲಿನ್‌ನ ಬದುಕು ನೋವಿನಿಂದ ಕೂಡಿದ್ದು. ಬಡತನದ ಬೇಗೆಯಲ್ಲೂ ಆತ ತಾನೂ ನಗುತ್ತ, ಉಳಿದವರನ್ನೂ ನಗಿಸುತ್ತಿದ್ದ. ‘ನಾನು ಸದಾ ಮಳೆಯಲ್ಲಿ ನೆನಯಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಕಣ್ಣೀರು ಆಗ ಜಗದ ಕಣ್ಣಿಗೆ ನನ್ನ ಕಣ್ಣೀರು ಕಾಣಿಸುವುದಿಲ್ಲ ಎಂದ ಆತನ ಮಾತು ಸದಾ ನನ್ನನ್ನು ಕಾಡುತ್ತಿರುತ್ತದೆ. ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ನನಗೆ ಕೋಪಿಸಿಕೊಂಡವರ ನೋಡಬೇಕಿತ್ತುಮುಗುಳ್ನಗುವವರ ಬಳಿಹೋದೆಕೋಪಗೊಂಡವರ ಮುಖದಲ್ಲಿ ಮುಗುಳ್ನಗುವಿದೆ. ಹಾಗೆ ನೋಡಿದರೆ ನಮ್ಮ ಮೇಲೆ ಕೋಪಿಸಿಕೊಂಡವರೂ ಅದನ್ನು ಮರೆಮಾಚಲು ಮುಗುಳ್ನಗುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.  ಆದರೂ ಯಾವ ಮುಗುಳ್ನಗುವೂ ನಮ್ಮ ನಡುವಿನ ಬೇಲಿಯನ್ನು ಕಿತ್ತೆಸೆಯಲಾಗುತ್ತಿಲ್ಲ. ಮನುಷ್ಯ, ಮನುಷ್ಯನ ನಡುವೆ ಕಟ್ಟಿಕೊಂಡಿರುವ ಮನದ ಬೇಲಿಯನ್ನು ಕಿತ್ತೆಸೆಯದೇ ಐಕ್ಯತೆ ಸಾಧಿಸುವುದಾದರೂ ಹೇಗೆ? ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರ ಮೇಲೊಬ್ಬರು ಕೋಪಿಸಿಕೊಂಡು ಮನಸ್ಸನ್ನು ಕಲ್ಲಾಗಿಸಿಕೊಳ್ಳುತ್ತಿದ್ದೇವೆ. ಅದೇ ಕಲ್ಲುಗಳನ್ನು ಒಂದರ ಮೇಲೊಂದನ್ನು ಪೇರಿಸಿ ಭದ್ರವಾದ ಗೋಡೆ ಕಟ್ಟುತ್ತೇವೆ. ಪ್ರೀತಿ, ಅಂತಃಕರಣದ ಬೆಳಕಿನ ಕಿರಣ ನಮ್ಮ ಹೃದಯವನ್ನು ತಾಗದಂತೆ ಬಂದೋಬಸ್ತು ಮಾಡಿಕೊಂಡಿದ್ದೇವೆ. ಎಷ್ಟೊಂದು ಬೇಲಿಗಳುತಲೆ ಎತ್ತಿವೆ ಇಲ್ಲಿ ಎನ್ನುವ ಕವಿ ನಮ್ಮ ಗುರಿ ತಲುಪುವ ಪೈಪೋಟಿಯಲ್ಲಿ ಏಟು ತಿಮದವರ ಆರ್ತನಾದವನ್ನು ಕೇಳಿ ಮರುಗುವ ಸೂಕ್ಷ್ಮತೆಯನ್ನು ಮರೆಯುತ್ತಿರುವುದರ ಕುರಿತು ಹೇಳಿದ್ದಾರೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ನಾಯಿಗೆ ಕಲ್ಲೆಸೆಯುತ್ತಾರೆ. ಕಲ್ಲೇನಾದರೂ ಕಾಲಿಗೆ ತಾಗಿದರೆ ಕುಯ್ಯೋ ಮರ್ರೋ ಎನ್ನುವ ಅದರ ರೋಧನೆ ಕೇಳಿಬಿಟ್ಟರೆ ಮಕ್ಕಳಿಗೆ ಮತ್ತೂ ಕಲ್ಲು ಹೊಡೆಯುವ ಉಮ್ಮೇದಿ ಹೆಚ್ಚುತ್ತದೆ. ಒಬ್ಬನಿದ್ದವನು ನಾಲ್ಕಾಗುತ್ತಾರೆ, ಹತ್ತಾಗುತ್ತಾರೆ. ನಾಯಿಯ ನೋವಿನ ಆಕ್ರಂದನ ಹೆಚ್ಚಿದಷ್ಟೂ ಪೈಶಾಚಿಕ ಸಂತೋಷ ಸಿಕ್ಕಂತೆ ಬಲ ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೇ ಈ ಮನೋಭಾವವನ್ನು ಕಾಣುವಾಗ ಕಲ್ಲು ಹೊಡೆದು ನಮ್ಮವರನ್ನೇ ಗಾಯಗೊಳಿಸಿ ಅಳಿಸಲು ದೊಡ್ಡವರಾದವರು ಹಿಂದೆಮುಂದೆ ನೋಡಿಯಾರೆ? ಎಸೆದ ಕಲ್ಲಿಗೆಗುರಿಯಷ್ಟೇ ಗೊತ್ತುಪೆಟ್ಟು ತಿಂದವರ ಆರ್ತನಾದ ಕೇಳದು ಆದರೆ ಕವಿ ಇಡೀ ಸಂಕಲನದಲ್ಲಿ ಎಲ್ಲಿಯೂ ದ್ವೇಷ ತಿರಿಸಿಕೊಳ್ಳುವ ಮಾತನಾಡುವುದಿಲ್ಲ. ಎಲ್ಲಿಯೂ ಹೊಡಿ ಬಡಿಯ ಶಬ್ಧಗಳಿಲ್ಲ. ತೀರಾ ಸರಳವಾದ ಮಾತುಗಳಲ್ಲಿ, ನಯವಾಗಿಯೇ ಹೇಳಬೇಕಾದುದನ್ನು ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ಉದ್ವೇಗದ ಹೇಲಿಕೆಗಳಿಲ್ಲ, ಆದ ಅಪಮಾನಕ್ಕೆ ಸೇಡು ತಿರಿಸಿಕೊಳ್ಳಬೇಕೆಂಬ ವಾಂಛೆಯಿಲ್ಲ. ಎಲ್ಲವರೂ ತನ್ನವರು ಎನ್ನುವ ಸಹಜ ಪ್ರೀತಿಯ ಕವನಗಳಿವು. ಅಪಮಾನಗಳನ್ನು ನುಂಗಿ ಪ್ರೀತಿಯನ್ನೇ ಹಂಚುವ ಶುದ್ಧ ಹೃದಯದ ಭಾವಗಳಿವು.ನಾವು ಆದ ಅಪಮಾನಉಂಡ ನೋವು ಮರೆತುಪ್ರೀತಿ ಹಂಚಿಕೊಳ್ಳುತ್ತೇವೆಅವರೋ ಉರಿವ ಬೆಂಕಿಗೆ ಎಣ್ಣಿ ಸುರಿಯುತ್ತಾರೆಹೀಗೆ ಅವಮಾನವನ್ನು ಮರೆತು ಪ್ರೀತಿಯನ್ನೇ ಬೊಗಸೆಯಲ್ಲಿಟ್ಟುಕೊಂಡು ನೀಡಿದರೂ ಅದನ್ನು ಸ್ವೀಕರಿಸಲೂ ಒಂದು ಅರ್ಹತೆ ಬೇಕಲ್ಲ.? ಪ್ರೀತಿಯ ಮೇಲೆ ಸುಡು ಸುಡು ಎಣ್ಣೆ ಸುರಿದು ತಮಾಷೆ ನೋಡುವ ಮನಸ್ಥಿತಿ ಇಲ್ಲಿದೆ. ಹೊತ್ತುರಿಯುವ ದ್ವೇಷಕ್ಕೆ ಎಣ್ಣೆ ಸುರಿದು ಪ್ರಜ್ವಲಿಸುವಂತೆ ಮಾಡಬಲ್ಲರೇ ಹೊರತೂ ಶತ್ರುತ್ವವನ್ನು ಅಳಿಸಿ ಪ್ರೀತಿಯ ಹೂವನ್ನು ಅರಳಿಸುವ ಪ್ರಯತ್ನ ಮಾಡುವವರು ಸಿಕ್ಕಾರಾದರೂ ಎಲ್ಲಿ?ನಾನು ಸುಳ್ಳುಗಳ ಸೂಡು Pಟ್ಟಿಟ್ಟುಸತ್ಯದ ಬೆನ್ನು ಹತ್ತಿದೆಆದರೂ ದ್ವಂದ್ವಗಳುವಿಜೃಂಭಿಸಿ ಹೋದವುಬದುಕು ನಮ್ಮನ್ನು ಹೈರಾಣಾಗಿಸುತ್ತಿದೆ. ಸುಳ್ಳಿನ ಸುಡನ್ನು Pಟ್ಟಿಟ್ಟು ಸತ್ಯದ ಬೆನ್ನು ಹತ್ತುತ್ತಿದ್ದರೂ ವಿಜೃಂಭಿಸುವ ಕಟು ವಾಸ್ತವವೂ ಕೆಲವೊಮ್ಮೆ ಸತ್ಯದ ಮುಖವಾಡದಲ್ಲಿ ಅಡಗಿದ ಸುಳ್ಳುಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ನಾವೇನಾಗಬೇಕೆಂದು ಬಯಸಿದ್ದೆವೋ ಅದನ್ನು ಸಾಧಿಸುವುದಕ್ಕಾಗಿ ಸತ್ಯ ಸುಳ್ಳುಗಳನ್ನು ಒಂದಾಗಿಸುತ್ತಿದ್ದೇವೆ. ಮತಮತದಲ್ಲಿ, ಜಾತಿಜಾತಿಯಲ್ಲಿ ದ್ವೇಶದ ಬೀಜಗಳನ್ನು ಬಿತ್ತಾಗಿದ್ದು ಅದೀಗ ಮೊಳಕೆಯೊಡೆಯುತ್ತಿದೆ. ನಿಮ್ಮ ಮನಸಲಷ್ಟು ಜಾಗ ಕೊಡಿಶಾಂತಿ ಬೀಜಗಳ ಊರಿ ಸಂಭ್ರಮಿಸುವೆಎನ್ನುವ ಕವಿಯ ಮಾತುಗಳಲ್ಲಿರುವ ನಿಜಾಯತಿಯನ್ನು ಗುರುತಿಸಬೇಕು. ಶಾಂತಿ ಬೀಜಗಳು ಚಿಗುರೊಡೆಸಲು ಕವಿ ಕಾತರರರಾಗಿದ್ದಾರೆ. ಇಂದಿನ ತುರ್ತು ಅಗತ್ಯವೂ ಅದೇ ಆಗಿದೆ. ತೂರಿಬಿಟ್ಟಿ ಕನಸುಗಳ ಕಟ್ಟಲಾದರೂಹರಿದ ಸೂತ್ರಗಳಿಗೆಜಗದ ಬಂಧುತ್ವವೇ ಬೆಸುಗೆಯಾಗಲಿಜಗವು ಪ್ರೀತಿ ಎನ್ನುವ ಬಂಧನದಲ್ಲಿ ಬಂಧಿಯಾಗಲಿ ಹರಿದು ಹೋದ ಸೂತ್ರ ಒಗ್ಗೂಡಲಿ, ದೇಶ, ಮನಸ್ಸುಗಳಲ್ಲವೂ ಸುಭದ್ರವಾಗಲಿ.ವಿಶ್ವಭ್ರಾತ್ರತ್ವದ ನೆಲೆಯಲ್ಲಿ ಪ್ರಕಾಶ ಖಾಡೆಯವರ ಕವನಗಳನ್ನಿಟ್ಟು ನೋಡಬೇಕು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಕವಿತೆಗಳ ಸರಳತೆ ಮತ್ತು ಅದನ್ನು ವ್ಯಕ್ತಪಡಿಸಿರುವ ರೀತಿ. ಎಲ್ಲಿಯೂ ಶಬ್ಧಭಾರದಿಂದ ಕವಿತೆ ಕುಗ್ಗಿ ಹೋಗಿಲ್ಲ. ದೊಡ್ಡದೊಡ್ಡ ರೂಪಕಗಳಿಂದ ನುಲುಗಿಲ್ಲ. ಪಂಡಿತರನ್ನು ಮೆಚ್ಚಿಸಲೇಬೇಕೆಂಬ ಘನಂಧಾರಿ ಉದ್ದೇಶವೂ ಅವರಿಗಿಲ್ಲ. ಆನು ಒಲಿದಂತೆ ಹಾಡುವೆ ಎಂಬ ಭಾವವಿದೆ. ಆದರೆ ಇಡೀ ಸಂಕಲನವಾಗಿ ಓದಿದಾಗ ಭಾವಗಳು ಮತ್ತೆ ಮತ್ತೆ ಪುನರಾವರ್ತನೆಯಾದಮತೆ ತೋರುವ ಅಪಾಯವನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಮೊದಲ ಕವನದ ಭಾವವೇ ಮುಂದುವರೆಯುತ್ತ ಹೋದಂತೆ ಕೆಲವೊಮ್ಮೆ ಭಾಸವಾಗಿ ಖಂಡಕಾವ್ಯವನ್ನು ಓದುತ್ತಿರುವ ಏಕತಾನತೆಯನ್ನು ನೀಡಿಬಿಡುವ ಅಪಾಯವೂ ಇದೆ. ಆದರೂ ಸರಳ ಹಾಗೂ ಸುಮದರ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ. ********************* ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಶಬ್ಧಭಾರವಿಲ್ಲದ ಮನದ ಮಾತುಗಳು Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ ಅಂಕಣ ಬರಹ ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, ತಳ್ಳುಗಾಡಿಯ ಮೇಲೆ ಕೆಂಪು-ಹಳದಿ ಸೇವಂತಿಗೆಗಳು ತೂಕಕ್ಕೆ ದೊರಕುತ್ತವೆ; ಪುಟ್ಟ ಮಗುವೊಂದು ಶೂಲೇಸ್ ಕಟ್ಟಿಕೊಳ್ಳಲು ಕಲಿಯುವ ಹೊತ್ತು, ಜಿಮ್ ನಲ್ಲೊಬ್ಬ ಹುಡುಗ ಮ್ಯೂಸಿಕ್ ಗೆ ತಕ್ಕಂತೆ ಹೆಜ್ಜೆ ಹಾಕುತ್ತಾನೆ; ರಾತ್ರಿ ಟ್ರೇನ್ ನಲ್ಲಿ ಅರೆಬರೆ ನಿದ್ರೆಯಲ್ಲಿಯೇ ಊರು ತಲುಪಿದ ಜೀನ್ಸ್ ತೊಟ್ಟ ಹುಡುಗಿ ತಾಮ್ರದ ಹಂಡೆಯ ಹದವಾದ ಬಿಸಿನೀರಿನಲ್ಲಿ ಫೇಷಿಯಲ್ ಮಾಡಿದ ಮುಖವನ್ನು ತೊಳೆದು, ಅಮ್ಮ ಹೊಲಿದ ಕೌದಿಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಾಳೆ; ಅಂಗಳದಲ್ಲೊಂದು ದಾಸವಾಳ ಸದ್ದಿಲ್ಲದೆ ಅರಳಿ, ಹುಟ್ಟಿದ ಪ್ರತಿ ಬೆಳಗಿಗೂ ಇನ್ನಷ್ಟು ಸೌಂದರ್ಯವನ್ನು ಒದಗಿಸುತ್ತದೆ.           ಈ ಸೌಂದರ್ಯದ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಕಥೆ-ಕಾದಂಬರಿಗಳ ನಾಯಕಿಯ ಹೆರಳು, ಕವಿಯ ಕಲ್ಪನೆಯಲ್ಲಿ ತೂಗುವ ಮರ-ಗಿಡಗಳು, ಸಿನೆಮಾವೊಂದರ ಸುಖಾಂತ್ಯವಾಗುವ ಪ್ರೇಮ, ಪಾತ್ರೆ ತೊಳೆಯುತ್ತ ಅಮ್ಮ ಹಾಡುವ ಮಂಗಳಗೌರಿ ವ್ರತದ ಹಾಡು, ತೋಟದ ಅಂಚಿನಲ್ಲಿ ಹೂವರಳಿಸಿ ನಿಲ್ಲುವ ಸಂಪಿಗೆಮರ, ಶಾಪಿಂಗ್ ಮಾಲ್ ನ ಮೂಲೆಯ ಪುಟ್ಟ ಅಂಗಡಿಯ ಬಣ್ಣಬಣ್ಣದ ಐಸ್ ಕ್ರೀಮು ಎಲ್ಲವೂ ಸೇರಿ ಸೃಷ್ಟಿಯಾಗುವ ಸೌಂದರ್ಯದ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಪೋಷಾಕು ಧರಿಸುತ್ತದೆ. ಕಪ್ಪು-ಬಿಳುಪು ಭಾವಚಿತ್ರದ ಉದ್ದ ಜಡೆಯೊಂದು ಸೆಲ್ಫಿಯ ಫ್ರೆಂಚ್ ಪ್ಲೇಟ್ ಆಗಿ ಬದಲಾದರೆ, ಹೆರಳಿನ ಸೌಂದರ್ಯವನ್ನು ಪರಿಪೂರ್ಣಗೊಳಿಸುತ್ತಿದ್ದ ಕೆಂಪುಗುಲಾಬಿಯ ಜಾಗವನ್ನು ರೆಡ್ ಸ್ಟ್ರೀಕ್ಸ್ ತನ್ನದಾಗಿಸಿಕೊಳ್ಳುತ್ತದೆ; ಜೋಕಾಲಿಯಾಗಿ ತೂಗುತ್ತಿದ್ದ ಮರ-ಗಿಡಗಳನ್ನು ಅಮ್ಯೂಸ್ಮೆಂಟ್ ಪಾರ್ಕಿನ ರೋಲರ್ ಕೋಸ್ಟರ್ ಗಳು ರಿಪ್ಲೇಸ್ ಮಾಡುತ್ತವೆ; ಪ್ರೇಮಕ್ಕೊಂದು ಹೊಸ ವ್ಯಾಖ್ಯಾನ ಬರೆಯುವಂತೆ ಲಿವಿನ್ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಆದರೂ ಪಾತ್ರೆಯೊಂದಿಗೆ ಸದ್ದುಮಾಡುವ ಹಸಿರು ಚಿಕ್ಕಿಬಳೆಯ ಅಂದವಾಗಲೀ, ಗಾಳಿಯೊಂದಿಗೆ ಮನೆಯಂಗಳವನ್ನು ತಲುಪುವ ಸಂಪಿಗೆಯ ಪರಿಮಳವಾಗಲೀ, ಎರಡೂ ಕೈಗಳಿಂದ ಕೋನ್ ಐಸ್ ಕ್ರೀಮ್ ಹಿಡಿದು ಪುಟ್ಟ ಅಂಗಡಿಯಿಂದ ಹೊರಬರುವ ಪುಟ್ಟ ಮಗುವಿನ ಮುಗ್ಧತೆಯಾಗಲೀ ಎಂದಿಗೂ ಮಾಸುವುದಿಲ್ಲ.           ಹೀಗೆ ಸೌಂದರ್ಯ ಎನ್ನುವುದು ಮುಗ್ಧತೆಯಾಗಿ, ಹೆಣ್ಣಾಗಿ, ಪ್ರೇಮವಾಗಿ, ಭಕ್ತಿಯಾಗಿ, ಪ್ರಕೃತಿಯಾಗಿ ಬೆಳಗು ಎನ್ನುವ ಬೆರಗಿನೊಂದಿಗೆ ನಮ್ಮೆದುರು ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮುಂಜಾವಿನ ಕ್ರಿಯೆ-ಪ್ರಕ್ರಿಯೆಗಳೆಲ್ಲ ಒಂದು ಅವಸರದ ದಿನಚರಿಯೊಂದಿಗೆ ಹಾಜರಾಗುತ್ತವೆ. ಶಾಲೆಗೆ ಹೋಗುವ ದಿನಗಳಲ್ಲಿ ತಿಂಡಿ ಮಾಡುವ ತರಾತುರಿಯಲ್ಲಿರುತ್ತಿದ್ದ ಅಮ್ಮ ಅಡುಗೆಮನೆಯಿಂದಲೇ ಶಾಲೆಯನ್ನು ನೆನಪಿಸಿದರೆ, ಬೆಚ್ಚಗೆ ಕಂಬಳಿ ಹೊದ್ದು ಮಲಗಿರುತ್ತಿದ್ದ ನಾನು ಶಾಲೆಯನ್ನೂ ಬೆಳಗನ್ನೂ ಬೈದುಕೊಳ್ಳುತ್ತಲೇ ಎದ್ದೇಳುತ್ತಿದ್ದೆ. ವರ್ಷದ ಏಳೆಂಟು ತಿಂಗಳುಗಳು ಚಳಿಯ ವಾತಾವರಣವಿರುತ್ತಿದ್ದ ಮಲೆನಾಡಿನ ಮುಂಜಾವಿಗೆ ಬಚ್ಚಲೊಲೆಯ ಬೆಂಕಿ ಒಂದು ಸಂಭ್ರಮದ ಸಂಗತಿಯಾಗಿತ್ತು. ಒಣಗಿದ ಅಡಕೆಯ ಹಾಳೆ, ತೆಂಗಿನಕಾಯಿಯ ಸಿಪ್ಪೆ, ಕರಟಗಳೆಲ್ಲ ಬೇಸರವಿಲ್ಲದೆ ಉರಿಯುತ್ತ ಬೆಳಗುಗಳನ್ನು ಬೆಚ್ಚಗಿಡುತ್ತಿದ್ದವು. ಜಗಲಿಯ ಮಂಚ, ಕಪಾಟು, ಆರಾಮಕುರ್ಚಿಗಳ ನಡುವೆ ಅಡಗಿರುತ್ತಿದ್ದ ಧೂಳನ್ನು ಗುಡಿಸಿ ತೆಗೆದು, ಬಕೆಟಿನ ಬಿಸಿನೀರಿನಲ್ಲಿ ಅದ್ದಿತೆಗೆದ ಬಟ್ಟೆಯಿಂದ ಅಳಿದುಳಿದ ಧೂಳನ್ನೂ ಒರೆಸಿದ ಮೇಲೆ ಬೆಳಗನ್ನು ಸ್ವಾಗತಿಸಲಿಕ್ಕೆ ಜಗಲಿ ರೆಡಿಯಾಗುತ್ತಿತ್ತು. ಸುಂದರವಾದ ಕೆತ್ತನೆಯ ಮರದ ಬಾಗಿಲು-ಕಂಬಗಳ ಸುತ್ತ ಪುಟ್ಟಪುಟ್ಟ ಹೂಗಳ ರಂಗೋಲಿಯನ್ನು ಬಿಡಿಸಿ, ಅದಕ್ಕೊಪ್ಪುವ ಕೆಂಪು ಹಳದಿ ಗುಲಾಬಿ ಬಣ್ಣಗಳನ್ನು ತುಂಬಿ, ನಡುನಡುವೆ ಆಗತಾನೇ ಅರಳಿದ ಮೋತಿಮಲ್ಲಿಗೆ ಶಂಖಪುಷ್ಪ ದಾಸವಾಳಗಳನ್ನಿಟ್ಟರೆ ಜಗಲಿಗೊಂದು ತನ್ನದೇ ಆದ ಸೌಂದರ್ಯ ಪ್ರಾಪ್ತಿಯಾಗುತ್ತಿತ್ತು. ಪಕ್ಕದಮನೆಯ ಮಗುವೊಂದು ಅಂಬೆಗಾಲಿಡುತ್ತ ಬಂದು ಹೂವಿನ ಎಸಳುಗಳನ್ನೆಲ್ಲ ಕೀಳುತ್ತ, ತನ್ನ ಪುಟ್ಟಪುಟ್ಟ ಬೆರಳುಗಳಿಂದ ರಂಗೋಲಿಯ ಹೂವುಗಳ ಆಕಾರಗಳನ್ನು ಬದಲಾಯಿಸುವ ಸುಂದರ ನೋಟಕ್ಕೆ ಬೆಳಗು ಸಾಕ್ಷಿಯಾಗುತ್ತಿತ್ತು.           ಹೀಗೆ ಬಚ್ಚಲೊಲೆಯ ಹದವಾದ ಬಿಸಿಯಂತೆ ಹರಡಿಕೊಳ್ಳುವ ಬೆಳಗು ಬಾಳೆಎಲೆಯ ಹಸಿರಾಗಿ, ತುಪ್ಪದ ತಿಳಿಹಳದಿಯಾಗಿ, ಜೋನಿಬೆಲ್ಲ-ಮಿಡಿಉಪ್ಪಿನಕಾಯಿಗಳ ಕೆಂಪು ಬಣ್ಣವಾಗಿ ಮುದ ನೀಡುತ್ತ ಯುನಿಫಾರ್ಮಿನ ನೀಲಿಯಾಗಿ ಶಾಲೆಯನ್ನು ತಲುಪುತ್ತಿತ್ತು. ಕಾಲ್ನಡಿಗೆಯ ಕಷ್ಟವನ್ನು ದೂರಗೊಳಿಸಲೆಂದೇ ಹುಟ್ಟಿದಂತೆ ಗೋಚರಿಸುತ್ತಿದ್ದ ಮಾವಿನಮರಗಳು ದಾರಿಯುದ್ದಕ್ಕೂ ಹಣ್ಣುಗಳನ್ನು ಉದುರಿಸುತ್ತಿದ್ದವು; ಬೆಟ್ಟದ ಮೇಲೊಂದಿಷ್ಟು ನೆಲ್ಲಿಕಾಯಿಗಳು ನಮಗಾಗಿಯೇ ಕಾದಿರುತ್ತಿದ್ದವು; ಕಾಸು ಕೊಟ್ಟು ಕೊಂಡುಕೊಳ್ಳಲಾಗದ ಅದೆಷ್ಟೋ ಬಗೆಯ ಹಣ್ಣು-ಕಾಯಿಗಳೆಲ್ಲ ವರ್ಷದುದ್ದಕ್ಕೂ ಪಾಟಿಚೀಲ ಸೇರುತ್ತಿದ್ದವು; ಮಳೆಗಾಲದಲ್ಲಿ ಹುಟ್ಟಿದ ಒರತೆಯೊಂದು ಮಳೆ ನಿಂತಮೇಲೂ ಚಿಮ್ಮುತ್ತ ಬೆಳಗಿನ ಪಯಣವನ್ನು ಸುಂದರವಾಗಿಸುತ್ತಿತ್ತು. ಈ ಎಲ್ಲ ದಿವ್ಯತೆಯ ಅನುಭೂತಿಗಳಿಗೆ ಎದುರಾಗುತ್ತಿದ್ದ ದಿನಗಳಲ್ಲಿ ಮಳೆಯ ನೀರು ಸ್ಕರ್ಟನ್ನು ಒದ್ದೆಯಾಗಿಸುವ ಕಷ್ಟವಾಗಲೀ, ಚಳಿಗಾಲದಲ್ಲಿ ಕೈ-ಕಾಲುಗಳು ಬಿರುಕುಬಿಡುವ ನೋವಾಗಲೀ, ಬಿಸಿಲುಗಾಲದ ಬಾಯಾರಿಕೆ ಸನ್ ಬರ್ನ್ ಗಳಾಗಲೀ, ಪಾಟಿಚೀಲದ ಭಾರವಾಗಲೀ ಯಾವುದೂ ಬಾಧಿಸಲೇ ಇಲ್ಲ. ಸೂರ್ಯ ಹುಟ್ಟುತ್ತಿದ್ದಂತೆಯೇ ತನ್ನ ಬಳಗವನ್ನೆಲ್ಲ ಕರೆದು ಪಾತ್ರೆ ತೊಳೆಯುವ ಜಾಗದಲ್ಲಿ ಅನ್ನದ ಕಾಳನ್ನು ಹೆಕ್ಕುತ್ತಿದ್ದ ಕಾಗೆ ಸಹಬಾಳ್ವೆಯ ಸೊಗಸನ್ನು ತೋರಿಸಿಕೊಟ್ಟರೆ, ಪಾತ್ರೆ ತುಂಬುವಷ್ಟು ಹಾಲು ಕೊಡುತ್ತಿದ್ದ ಹಸು ಪರೋಪಕಾರದ ಪಾಠವನ್ನು ಕಲಿಸಿತು; ದಿನ ಬೆಳಗಾದರೆ ಒಲೆಯಲ್ಲಿ ಉರಿಯುತ್ತಿದ್ದ ಕರಟದಲ್ಲಿ ತ್ಯಾಗದ ಭಾವನೆ ಕಾಣಿಸಿದರೆ, ಅಂಗಳದ ಕಂಬಕ್ಕೆ ಹಬ್ಬಿ ಹೂವರಳಿಸುತ್ತಿದ್ದ ಶಂಖಪುಷ್ಪದ ಬಳ್ಳಿ ಎಲ್ಲ ತೊಡಕುಗಳನ್ನು ಮೀರಿ ಬೆಳಕಿನೆಡೆಗೆ ಸಾಗುವ ದಾರಿಯನ್ನು ತೋರಿಸಿತು.           ಹೀಗೆ ಬದುಕಿನ ತೊಡಕುಗಳೆಲ್ಲವನ್ನೂ ಎದುರಿಸುವ ಶಕ್ತಿಯೊಂದನ್ನು ಬೆಳಗು ತನ್ನೆಲ್ಲ ಚಟುವಟಿಕೆಗಳಿಂದಲೇ ಕಲಿಸಿಕೊಟ್ಟಿತು. ಅಮ್ಮ ಅಡುಗೆಮನೆಯಿಂದಲೇ ವಿಶಿಷ್ಟವಾಗಿ ಗುಡ್ ಮಾರ್ನಿಂಗ್ ಹೇಳುತ್ತಿದ್ದ ರೀತಿ ಮೊಬೈಲ್ ನಲ್ಲಿರುವ ಅಲಾರ್ಮ್ ಗೆ ಶಿಫ್ಟ್ ಆಯಿತು; ಹದವಾದ ಬಿಸಿನೀರಿನೊಂದಿಗೆ ಬೆಳಗನ್ನು ಸ್ವಾಗತಿಸುತ್ತಿದ್ದ ತಾಮ್ರದ ಹಂಡೆಯನ್ನು ಗೀಸರ್ ರಿಪ್ಲೇಸ್ ಮಾಡಿತು; ಕಂಬವನ್ನು ತಬ್ಬಿ ಬೆಳೆಯುತ್ತಿದ್ದ ಶಂಖಪುಷ್ಪದ ಬಳ್ಳಿ ಬಾಲ್ಕನಿಯ ಸರಳುಗಳನ್ನು ಆಶ್ರಯಿಸಿತು. ಬೆಳಗಾದರೆ ತುಂಬುತ್ತಿದ್ದ ಹಾಲಿನ ಚೊಂಬಿನ ಜಾಗವನ್ನು ವಿವಿಧ ಬಣ್ಣ-ಸೈಜುಗಳ ಪ್ಯಾಕೆಟ್ಟುಗಳು ಆಕ್ರಮಿಸಿಕೊಂಡವು. ದಾರಿಯಂಚಿನ ಒರತೆ, ಬಚ್ಚಲೊಲೆಯ ಬೆಂಕಿ, ಪಾಟಿಚೀಲದ ಸಾಂಗತ್ಯ ಎಲ್ಲವೂ ಸಲೀಸಾಗಿ ರೂಪಾಂತರಗೊಂಡು ನೆನಪಿನ ಅಂಗಳಕ್ಕೂ ಬೆಳಗಿನ ಸೌಂದರ್ಯವನ್ನು ಒದಗಿಸಿಕೊಟ್ಟವು. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸ್ವರೂಪ ಬದಲಾಯಿಸಿಕೊಂಡ ಬೆಳಗು ನೆನಪಾಗಿ, ಜೀವನಪಾಠವಾಗಿ, ಜೀವಂತಿಕೆಯ ಚಲನೆಯಾಗಿ, ಸುಂದರ ಅನುಭೂತಿಯಾಗಿ ಬದುಕುಗಳನ್ನು ಸಲಹುತ್ತಲೇ ಇರುತ್ತದೆ. ಬೆಟ್ಟದಲ್ಲಿ ಹುಟ್ಟಿದ ಒರತೆಯೊಂದು ಬಾಲ್ಕನಿಯ ಶಂಖಪುಷ್ಪದ ಬಳ್ಳಿಯೆಡೆಗೆ ಹರಿದು ಸುಂದರವಾದ ಹೂವುಗಳನ್ನು ಅರಳಿಸುತ್ತದೆ. **************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಇತರೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. ಸಾಮಾಜಿಕವಾಗಿ ,ರಾಜಕೀಯವಾಗಿ ,ಆರ್ಥಿಕವಾಗಿ, ಕೌಟುಂಬಿಕವಾಗಿ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ . ಸಾಧನೆ ಮಾಡಿದ ಮಹಿಳೆಯರನ್ನೆಲ್ಲ ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸಾಲು ಸಾಲುಗಳ ಪಟ್ಟಿಯೇ ಸಿಗುತ್ತದೆ. ಸಮಾಜ ಸೇವೆ ಎಂದ ತಕ್ಷಣ ನೆನಪಿಗೆ ಬರುವುದು ಮದರ ತೆರೇಸಾ . ಬಡವರ, ದಲಿತರ ,ಅನಾರೋಗ್ಯ ಮಕ್ಕಳ ಸೇವೆ ಮಾಡುತ್ತಾ ವಿಶ್ವದಲ್ಲೇ ಗುರುತಿಸಿಕೊಂಡವರು. ಹಾಗೆ ಮೊದಲ ಮಹಿಳಾ ಪ್ರಭಾವಿ ರಾಜಕಾರಣಿ ,ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ಇಂದಿರಾಗಾಂಧಿಯವರು , ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಎಲ್ಲಾ ಮಹಿಳೆಯವರಿಗೂ ಸ್ಫೂರ್ತಿದಾಯಕರಾದ ಕಿರಣ ಬೇಡಿಯವರು, ಈ ಸಂದರ್ಭದಲ್ಲಿ ನಾವು ನೆನೆಯಬಹುದು. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮೊದಲ ಮಹಿಳಾ ಭೂ ಸೇನಾ ಅಧಿಕಾರಿ ಮೇ ಪ್ರಿಯಾ ಝಿಂಗಲ್ ,ಮಹಿಳಾ ನ್ಯಾಯಾಧೀಶರು ಫಾತಿಮಾ ಬೀವಿ ಹೀಗೆ ಮಹಿಳೆಯರ ಕೊಡುಗೆ ಅಳತೆ ಮಾಡಲು ಸಾಧ್ಯವಿಲ್ಲ. ಹಿಂದಿನ ಕಾಲ ಘಟ್ಟವನ್ನು ಪರಿಗಣಿಸಿದರೆ ಕೆಳದಿ ಚೆನ್ನಮ್ಮ ,ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿ ರಾಜ್ಯ ,ದೇಶವೆಂದು ಹೋರಾಟ ನಡೆಸಿದ ಛಲಗಾರ್ತಿಯರು. ಇವರೆಲ್ಲ ತಮ್ಮನ್ನು ತಾವೇ ಜನಸೇವೆಗೆ ಒಪ್ಪಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾದವರು . ಮಹಿಳೆಯರ ಸಾಧನೆ ಹೀಗಿರಲು ನೂರು ವರ್ಷಗಳು ಕಳೆದರೂ ಒಂದು ಮಹಿಳೆಯು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ . ವಚನಕಾರ್ತಿಯರು ವಚನಗಳ ಮೂಲಕ ತಮ್ಮ ಸೇವೆಯನ್ನು ಅಕ್ಷರ ಲೋಕಕ್ಕೆ ನೀಡುತ್ತಾ ಬಂದಿದ್ದಾರೆ . ಅವುರುಗಳಲ್ಲಿ ಅಕ್ಕಮ್ಮ ,ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮರನ್ನು ನೋಡಬಹುದು. ಇಂದು ಗೀತಾ ನಾಗಭೂಷಣ್, ಡಾಕ್ಟರ್ ಅನುಪಮ ನಿರಂಜನ, ಎಂ.ಕೆ ಇಂದಿರಾ, ತ್ರಿವೇಣಿ , ವೈದೇಹಿ ಡಾಕ್ಟರ್ ಅನುಪಮಾ ಇವರೆಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದ್ದದು.ಏನೇ ಇರಲಿ ಯಾವುದೇ ಲಿಂಗ, ಮತ , ಜಾತಿ , ಧರ್ಮ, ಇನ್ನಿತರ ಪಂಗಡಕ್ಕೆ ಜೋತು ಬೀಳದೆ ಸಶಕ್ತವೆನಿಸಿದ ಮಹಿಳೆಯೊಬ್ಬಳು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ನಾವೆಲ್ಲ ಒಂದೇ ಮನಸ್ಸಿನಿಂದ ಪಣತೊಡಬೇಕು. ************************ ಎಂ.ಜಿ.ತಿಲೋತ್ತಮೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು Read Post »

ಇತರೆ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಡಾ. ಅಜಿತ್ ಹರೀಶಿ ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ. ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ! ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ ದಿನಮಾನಗಳಲ್ಲಿದೆ. ಅದು ಇವತ್ತಿನ ಕಾಲಘಟ್ಟದಲ್ಲಿ ಸಹಜ ಕೂಡ. ಒಂದು ಕ್ಷಣ ಮೈಮರೆತರೂ ಮೋಸ ನಿಶ್ಚಿತ. ಕೆಲವರು ಹಿಡನ್ ಅಜೆಂಡಾ ಹಿಡಿದು ಬಂದು ತಮ್ಮದನ್ನು ಸಾಧಿಸಿಕೊಂಡು ಮರೆಯಾಗುವವರು. ಇದೆಲ್ಲವನ್ನು ಗಮನಿಸಿದರೆ, ಮಹಿಳಾ ಅಧ್ಯಕ್ಷೆ ಅಂತ ಹೊರಟು, ಅದು ಬಲವಾಗುತ್ತಿದ್ದಂತೆ – ಜಾತಿ, ಧರ್ಮಗಳ ಮೇಲೆ ಒಡಕನ್ನು ತೋರಲೂಬಹುದು. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಇಲ್ಲಿ ಚುನಾವಣೆ ಬೇಡ ಎಂದು ಹೇಳುವುದು ತಪ್ಪಾದೀತು. ಯೋಗ್ಯರು ಎಂಬ ಪ್ರಶ್ನೆ ಬಂದಾಗ ತಕ್ಕಡಿ ಅವರವರದೇ ಆದೀತು. ಹಾಗಾಗಿ ಈಗಿನ ವ್ಯವಸ್ಥೆಯಲ್ಲಿ ಇರುವ ಲೇಖಕಿಯರ ಸಂಘ ಇತ್ಯಾದಿ ಸಂಸ್ಥೆಗಳು, ಸಂಘಟನೆಗಳು ಒಂದೆಡೆ ಕುಳಿತು ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಒಳಿತು. ಅದನ್ನು ಒಪ್ಪದವರಿಗೆ ಚುನಾವಣೆಯಂತೂ ಇದ್ದೇ ಇದೆ. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ ಬಹಳ ಹೋರಾಟಗಳು ಹೈಜಾಕ್ ಆಗಿವೆ. ಅದು ಇಲ್ಲಿ ಆಗದಿರಲಿ. ಇಲ್ಲಿ ಮತದಾರರು ಮುಖ್ಯರಾಗುವುದರಿಂದ ಸಂಘಟನೆಯ ಶಕ್ತಿಯಿರುವ ಮಹಿಳಾ ಸಾಹಿತಿಯೋರ್ವರನ್ನು ಸರ್ವಾನುಮತದಿಂದ ಕಸಾಪದ ಬಹುತೇಕ ಮುಂಚೂಣಿಯಲ್ಲಿರುವ ಮಹಿಳೆಯರು, ಹಿರಿಯರು ಅಭ್ಯರ್ಥಿ ಎಂದು ನಿರ್ಧರಿಸಲಿ. ಒಮ್ಮೆ ಒಮ್ಮತ ಮೂಡಿದರೆ ಮುಂದಿನ ಕೆಲಸ ಸುಲಭ. ಇದು ಕೇವಲ ರಾಜಕೀಯ ಉದ್ದೇಶವನ್ನು ಹೊಂದಿದ್ದರೆ, ಕೆಲವೇ ಜನರ ಪಾಲ್ಗೊಳ್ಳುವಿಕೆ ಇದ್ರೆ ಅಭ್ಯರ್ಥಿತನಕ್ಕೆ ಮೊದಲೇ ಮಕಾಡೆ ಮಲಗುತ್ತದೆ ಎಂಬುದು ನೆನಪಿರಲಿ. ಇನ್ನು ಹಿಂದೆ ಮಹಿಳಾ ಅಧ್ಯಕ್ಷರು ಇರಲಿಲ್ಲ ಎಂಬುದರ ಕುರಿತು ಹೇಳಬೇಕಾದರೆ – ಮೊದಲು ಸ್ಪಷ್ಟ ತಯಾರಿಯೊಂದಿಗೆ ಕಣಕ್ಕಿಳಿಯುವುದು ಮುಖ್ಯವಾಗುತ್ತದೆ. ಕಸಾಪದ ಮತದಾರರು ಪ್ರಬುದ್ಧರಿದ್ದಾರೆ. ಯೋಗ್ಯ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾದರೆ ಎಲ್ಲರಿಗೂ ಖುಷಿ. ವಿವಾದಿತರು ಅಭ್ಯರ್ಥಿಯಾದರೆ ಕೆಸರೆರಚಾಟ ಮತ್ತು ಚುನಾವಣೆ ನಿಶ್ಚಿತ. ಅಂತಹ ವಾತಾವರಣ ನಿರ್ಮಾಣವಾಗದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಉತ್ತಮ ಮಹಿಳಾ ಸಾಹಿತಿ ಕಸಾಪದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿ ಮತ್ತು ಅದಕ್ಕೆ ಶೋಭೆ ತರಲಿ ಎನ್ನುವುದು ಈ ಹೊತ್ತಿನ ಆಶಯ. ಡಾ. ಅಜಿತ್ ಹರೀಶಿ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ಹೆಣ್ಣು ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ , ಅಡುಗೆ ಮನೆ ಸೌಟು ಹಿಡಿದಿರಬಹುದಾದ ಹೆಣ್ಣು ತಾಯಿಯಾಗಿ ,ಸೋದರಿಯಾಗಿ ಪತ್ನಿಯಾಗಿ ಸಂಸಾರದ ಕಣ್ಣಾಗಿದ್ದಾಳೆ ,ಸಮಾಜದ ಎಲ್ಲ ರಂಗಗಳಲ್ಲಿ ಸಕ್ರಿಯಳಾಗಿ ಸೈ  ಎನಿಸಿಕೊಂಡಿರುವ ಆಕೆ ವೈದ್ಯಳಾಗಿ .ಯೋಧಳಾಗಿ .ಪ್ರಧಾನಿಯಾಗಿ,ರಾಷ್ಟ್ರಪತಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾಳೆ . ಅಲ್ಲದೆ ಪುರುಷರಿಗೆ ಸಮನಾಗಿ ಎಲ್ಲ ಸ್ತರಗಳಲ್ಲಿ ಕಾರ್ಯವೆಸಗುವುದರಲ್ಲಿ ಯಶಸ್ವಿಯಾಗಿದ್ದಾಳೆ. ಸಾಹಿತ್ಯಮತ್ತು ಸಂಸ್ಕಾರಕ್ಕೆ ಅವಳ ಕೊಡುಗೆ ಅಪಾರ,  ಹೆಣ್ಣು ಸಮಾಜದ ಕಣ್ಣು .   ಆದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಏಕೊ ಏನೋ ಆಕೆಯನ್ನು ತನ್ನ ಅಧ್ಯಕ್ಷೆಯನ್ನಾಗಿ ಸ್ವೀಕರಿಸಿಲ್ಲ.ಈ ಸಂಸ್ಥೆಯಲ್ಲಿ ಪುರುಷರದ್ದೇ ಪಾರಮ್ಯ.ಈವರೆಗೆ ಕನ್ನಡ ಸಾಹಿತ್ಯ ಪರಿಷತ್ ಗದ್ದಿಗೆ ಹಿಡಿದು ಮುನ್ನಡೆಸಿರುವ ಎಲ್ಲರೂ ಪುರುಷರೇ.    1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ದೂರದೃಷ್ಟಿ ಹಾಗೂ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ.ಅಭಿಮಾನದಿಂದಾಗಿ ಪ್ರಾರಂಭಗೊಂಡ ಈ ಸಂಸ್ಥೆ ,25 ಅಧ್ಯಕ್ಷರ ಆಡಳಿತದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದೆ .ಕ.ಸಾಪ ಅಧ್ಯಕ್ಷರಾಗಿ ಸಾಹಿತಿಗಳೇ ಮೇಲುಗೈ ಸಾಧಿಸಿದ್ದರೂ ಇತ್ತೀಚೆಗೆ ಹೊಟೆಲ್ ಉದ್ಯಮಿ.ಬ್ಯಾಂಕ್ ಉದ್ಯಮಿ ,ಹಾಗೂ ಆಡಳಿತ ಅನುಭವಿಗಳೂ ಸಾರಥ್ಯವಹಿಸಿದ್ದಾರೆ . ಪ್ರಾರಂಭದಿಂದ 2008 ರವರೆಗೆ ಸರ್ಕಾರದ  ಅನುದಾನವಿಲ್ಲದೆ ನೌಕರರಿಗೆ ಸಂಬಳಕೊಡಲೂ ಸಾಧ್ಯವಾಗದ ಕ.ಸಾ.ಪ ಸಮ್ಮೇಳನಗಳನ್ನು ಸಾರ್ವಜನಿಕರ ವಂತಿಗೆಯಿಂದ ನಡೆಸಬೇಕಾದ ಪರಿಸ್ಥಿತಿ ಇದ್ದಿತು .ಆದರೆ 2008 ರಿಂದ 2012 ರವರೆಗೆ ಕಾರ್ಯನಿರ್ವಹಿದ ಸಮಿತಿ ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ,ಎಸ್ ಯಡಿಯೂರಪ್ಪನವರನ್ನುಸಂಪರ್ಕಿಸಿ ಬೇಡಿಕೆ ಇಟ್ಟಾಗ ಬಡ್ಜೆಟ್ ತಯಾರಿಸುವಂತೆ  ತಿಳಿಸಿದರಲ್ಲದೆ ಕನ್ನಡ ಕಟ್ಟುವುದು ನನ್ನ ಆದ್ಯ ಕರ್ತವ್ಯವೆಂದು ಅನುದಾನ ಬಿಡುಗಡೆ ಮಾಡಿದರಲ್ಲದೆ ಕ.ಸಾ.ಪದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರನ್ನೂ ಖಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿಸಿದರು ,ಇದರಿಂದಾಗಿ ಸಮಿತಿಯ ತೀರ್ಮಾನದಂತೆ ತಾಲ್ಲೂಕು ಸಮ್ಮೇಳನಕ್ಕೆ ಒಂದು ಲಕ್ಷ .,ಎರಡು ದಿನದ ಜಿಲ್ಲಾ ಸಮ್ಮೇಳನಕ್ಕೆ ಐದು ಲಕ್ಷ ಮತ್ತು ಮೂರು ದಿವಸಗಳ ರಾಜ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ ಎಂದು ಅನುದಾನ ಪಡೆಯಲಾಯಿತು ಆ ಅವಧಿಯಲ್ಲಿ ನಾಲ್ಕು ರಾಜ್ಯ ಸಮ್ಮೇಳನಳು ,ಹಲವಾರು ಜಿಲ್ಲಾ ,ತಾಲ್ಲೂಕು ಸಮ್ಮೇಳನಗಳು ನಡೆದವು .ಆ ನಂತರ ಆಡಳಿತ ಗದ್ದುಗೆಗೇರಿದ ಬ್ಯಾಂಕ್ ಉದ್ಯಮಿ ಸರ್ಕಾರದ ಮನವೊಲಿಸಿ ಪ್ರತಿ ಸಮ್ಮೇಳನಕ್ಕೆ ಐದು ಕೋಟಿಗೂ ಹೆಚ್ಚು ಅನುದಾನದಿಂದ ಸಮ್ಮೇಳನ ನಡೆಸಿದರು .ನಂತರ ಆಯ್ಕೆಯಾಗಿ ಬಂದ ನಿವೃತ್ತ ಐ.ಎಎಸ್ ಅಧಿಕಾರಿ ಪ್ರತೀ ಸಮ್ಮೇಳನಕ್ಕೆ 10ಕೋಟಿಗೂ ಹೆಚ್ಚು ಹಣವನ್ನು ಪಡೆದು ಸಮ್ಮೇಳನ ನಡೆಸಿದುದು ನಮ್ಮ ಕಣ್ಣೆದುರು ಇದೆ .ಸರ್ಕಾರದ ಅನುದಾನವಲ್ಲದೆ ಸ್ಥಳೀಯ ದಾನಿಗಳು,ಸಂಘ ಸಂಸ್ಥೆಗಳು ಸರ್ಕಾರಿ ನೌಕಲರ ದೇಣಿಗೆ ಅಲ್ಲದೆ ಸ್ವಯಂಸೇವಕರ ಉಚಿತ ಸೇವೆ ಪಡೆದು ಸಮ್ಮೇಳನಗಳನ್ನು ನಡೆಸಲಾಗಿದೆ.ಕೇವಲ ಮೂರು ದಿವಸಗಳ ಸಮ್ಮೇಳನಕ್ಕೆ 15- 20 ಕೋಟಿಗಳ ದುಂದು ವೆಚ್ಚಮಾಡಲಾಗುತ್ತಿದೆ .ಈ ಬಗೆಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಬೇಕಾಗಿದೆ ,   ಅಧಿಕಾರ ಲಾಲಸೆ ಹಾಗೂ ಆಂತರಿಕ ಆಕಾಂಕ್ಷೆಗಳಿಂದಾಗಿ ದೀರ್ಘ ಕಾಲದಿಂದ ಬದಲಾಯಿಸದೆ ಉಳಿಸಿಕೊಂಡು ಬಂದಿದ್ದ ಮೂರು ವರ್ಷಗಳ ಅವದಿಯನ್ನು ಐದು ವರ್ಷಗಳ ಅವದಿಗೆ ವಿಸ್ತರಿಸಲಾಗಿದೆ .ಮುಂದಿನ ಚುನಾವಣೆಯ ನಂತರ ಈ ಅವಧಿ ಕಡಿಮೆ ಆಗುವ ಸಾಧ್ಯತೆ ಇದೆ.  ಕ,ಸಾ.ಪ,ಇಂದು ಒಂದೂವರೆ ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಒಳಗೊಂಡಿದೆ ..ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎಲ್ಲ ಸದಸ್ಯರನ್ನು ಖುದ್ದಾಗಿ ಭೇಟಿಯಾಗಿ ಮತ ಯಾಚನೆ ಮಾಡಲು ಸಾಧ್ಯವಾಗಲಾರದು,ಆದರೆ ಮನವಿಯನ್ನಾದರೂ ಮಾಡಿಕೊಳ್ಳಲೇ ಬೇಕು .ಮನವಿಪತ್ರ ಮುದ್ರಣ,ಅಂಚೆ ವೆಚ್ಚ ಇತ್ಯಾಧಿಗಳಿಗಾಗಿ ಕನಿಷ್ಟ ಒಂದು ಕೋಟಿ ರೂ.ಬೇಕಾಗಬಹುದು ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರಕ್ಕಾದರೂ ಭೇಟಿ ನೀಡಿ ಮನವಿ ಮಾಡಿಕೊಳ್ಳಬೇಕು.ಹತ್ತಾರು ಕಾರುಗಳನ್ನು ಬಾಡಿಗೆ ಹಿಡಿದು ರಾಜಕಾರಿಣಿಗಳಂತೆ ಮತಯಾಚನೆಗೆ ಕಳುಹಿಸಬೇಕು.ಜಿಲ್ಲಾಧ್ಯಕ್ಷರ ಚುನಾವಣೆ ಸಹ ಏಕ ಕಾಲದಲ್ಲಿ ನಡೆಯುವುದರಿಂದ ಅವರ ಸಹಕಾರ ಅಗತ್ಯ.ಕ.ಸಾಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವನು ಪ್ಲತಿಯೊಬ್ಬ ಸದಸ್ಯನ ಓಟನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುವುದರಿಂದ ಚುನಾವಣಾ ವೆಚ್ಚ ಹೆಚ್ಚಾಗುತ್ತದೆ . ವಿಧಾನ ಸಭೆ.ಮತ್ತು ಸಂಸತ್ ಚುನಾವಣೆಗಳಂತೆಯೇ ಬಿರುಸಿನಿಂದ ನಡೆಯುವ ಚುನಾವಣೆಯಲ್ಲಿ ಸ್ತ್ರೀಯರು ಭಾಗವಹಿಸಲು ಹಿಂಜರಿಯುತ್ತಿದ್ದಾರೆ.ವಹಿಳೆಯರು ನಾಲ್ಕು ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ .ಆದರೆ ಕ.ಸಾ.ಪ.ಅಧ್ಯಕ್ಷರಾಗಲು ಮುಂದೆ ಬರಲು ಸಾಧ್ಯವಾಗದಿರುವುದಕ್ಕೆ ಇವುಗಳು ಕಾರಣಗಳಾಗಿವೆ .ವಾಸ್ತವವಾಗಿ ಮಹಿಳೆಯರು ಅದ್ಯಕ್ಷರಾದರೆ ಸಾಹಿತ್ಯ ಪರಿಷತ್ತು ಮತ್ತಷ್ಟು ಸದೃಢವಾಗಬಹುದು ,ಆದರೆ ಅವರೊಟ್ಟಿಗೆ ಪ್ರಾಮಾಣಿಕವಾಗಿ ದುಡಿಯುವ ಸಾಹಿತ್ಯ ,ಸಂಸ್ಕೃತಿಯ ಅರಿವಿರುವ ಪುರುಷರ ಪ್ರವೇಶ ಅಗತ್ಯವಾಗಬಹುದು .ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ .ಧೈರ್ಯ.ಸ್ಥೈರ್ಯಗಳೊಂದಿಗೆ  ಗುರಿಯೂ ಇರಬೇಕಾಗುತ್ತದೆ . ಬದಲಾವಣೆಯನ್ನು ಬಯಸುವ ಸಾವಿರಾರು ಸಾಹಿತ್ಯಾಸಕ್ತರು ಸಾಹಿತ್ತಾಭಿಮಾನಿಗಳೂ ಆಜೀವ ಸದಸ್ಯರಿರುವುದರಿಂದ ಮಹಿಳೆಯರು ಸಂಘಟಿತರಾಗಿ  ಆಸಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಬೇಕಾಗಿದೆ . *************************** ಹೆಚ್,ಚಂದ್ರಪ್ಪ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

ಇತರೆ

ಮಹಿಳಾ ಅಧ್ಯಕ್ಷರು ಯಾಕಿಲ್ಲ… !

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915 ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಆಗಿನ ಮೈಸೂರಿನ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಲನೆಗೊಂಡಿತು. ನಂತರ 1938 ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿತು. ಉದ್ದೇಶ : ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು -ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಇದು ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹರಡಲು ಸಾಧ್ಯವಾಗಿದೆ. ಇದರ ಮೂಲ ಆಶಯ ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ ದನಿಯಾಗುವ ಹಂಬಲ. ನಂತರದಲ್ಲಿ ಈ ಆಶಯವನ್ಹೊತ್ತು ರೂಪುಗೊಂಡ ಸಂಸ್ಥೆಗಳು ಸಂಸ್ಕೃತಿ ಇಲಾಖೆ, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ… ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ಇಂದಿಗೂ ಪ್ರಸ್ತುತ. ಇಂತಹ ಮಹೋನ್ನತ ಗುರಿಯನ್ನಿಟ್ಟುಕೊಂಡು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರು ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವೇ ಸರಿ. ಇದರೊಂದಿಗೆ ಈ ನೂರು ವರ್ಷಗಳ ಇತಿಹಾಸದಲ್ಲೇ ಒಮ್ಮೆಯೂ ಮಹಿಳೆಯೊಬ್ಬಳು ಕ. ಸಾ. ಪ. ದ ಅಧ್ಯಕ್ಷರಾಗಿಲ್ಲವೆಂಬುದು ಕೂಡ ಅಷ್ಟೇ ವಿಷಾದನೀಯ ಸಂಗತಿಯೂ ಹೌದು. ಪ್ರತಿಭೆ, ಸೇವೆಗಳ ವಿಷಯದಲ್ಲಿ ಗಂಡು- ಹೆಣ್ಣುಎಂಬ ಭೇದವಿರದು. ಹೆಣ್ಣೊಬ್ಬಳು ನಾಲ್ಕು ಗೋಡೆಯೊಳಗಿನಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿರುವ ಈ ಯುಗದಲ್ಲಿ ನಮ್ಮ ನಾಡು -ನುಡಿ -ಸಂಸ್ಕೃತಿಯ ದಣಿಯಾಗಲೆಂದೇ ಸ್ಥಾಪಿತವಾಗಿರುವ ಕ. ಸಾ. ಪ. ದ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾಕೆ ಓರ್ವ ಮಹಿಳಾ ಅಭ್ಯರ್ಥಿಯೂ ಅಧ್ಯಕ್ಷರಾಗಿಲ್ಲ ಎಂಬುದು ಈಗ ಅವಶ್ಯವಾಗಿ ತರ್ಕಿಸಲೇಬೇಕಾದ ವಿಷಯ. ಹಲವು ಆಯಾಮಗಳಲ್ಲಿ ಕಾರಣಗಳನ್ನು ಹುಡುಕುತ್ತಾ ಹೊರಟರೆ ಕೆಲವು ನಮ್ಮ ಕಣ್ಣಿಗೆ ಗೋಚರಿಸಬಹುದು.. ಆದರೆ ಗೋಚರವಾಗದೆ ಉಳಿದಿರುವ, ಉಳಿಯುವ ಕಾರಣಗಳೂ ಹಲವು ಸಿಗಬಹುದು. ನಾವು ಒಮ್ಮೆ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಗಂಡಿನಷ್ಟೇ ಹೆಣ್ಣು ಕೂಡ ರಾಜಕೀಯವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಜ್ಞಾನಾತ್ಮಕವಾಗಿ, ವೈಜ್ಞಾನಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮವಾಗಿ ನಿಲ್ಲಬಲ್ಲಳು. ಅವಳಲ್ಲಿ ಸಂಘಟನಾ ಸಾಮರ್ಥ್ಯ ಹುಟ್ಟಿನಿಂದಲೇ ಬಂದ ಬಳುವಳಿ. ಮಾನವ ಸಂಘಜೀವಿ. ಪ್ರತಿ ಕುಟುಂಬದ ಹೆಣ್ಣುಮಗಳು ಕೂಡ ಒಬ್ಬ ಸಮರ್ಥ ಸಂಘಟಕಿಯಾಗಿರುತ್ತಾಳೆ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ. ಕಾರಣ ಒಂದು ಕುಟುಂಬದ ಸರ್ವಸದಸ್ಯರನ್ನು ನಿಯಂತ್ರಿಸುವ ಕಲೆ ಅವಳಿಗೆ ಸಿದ್ದಿಸಿರುತ್ತದೆ. ಇದರ ಜೊತೆಗೆ ಬಂಧು -ಬಳಗ, ನೆಂಟರಿಸ್ಟರು, ವೃತ್ತಿ, ಸಮಾಜ, ಸಮುದಾಯ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಹಿಳೆ ಎಲ್ಲಾ ವಲಯದಲ್ಲೂ ಪುರುಷರಿಗೆ ಸರಿಸಳಾಗಿಯೇ ಕೆಲಸ ನಿರ್ವಹಿಸಬಲ್ಲಳು. ಆದರೆ ಇದುವರೆಗಿನ ಅಧ್ಯಕ್ಷ ಸ್ಥಾನವನ್ನು ಇಂತಹ ಪ್ರಬುದ್ಧರ ಕ್ಷೇತ್ರದಲ್ಲೇ ಯಾವ ಮಹಿಳೆಯೂ ಏರಿಲ್ಲವೆಂಬುದಕ್ಕೆ ಸಾಧ್ಯತೆಗಳು ಏನಿರಬಹುದೆಂಬುದನ್ನು ಮನಗಂಡು ಕನ್ನಡದ ಸಾಹಿತಿಗಳು, ಕನ್ನಡಪರ ಮಹಿಳಾ ಸಂಘಟನೆಗಳೆಲ್ಲವೂ ಒಗ್ಗೂಡಿ ಚಿಂತನ -ಮಂಥನಗಳ ಮೂಲಕ ಸುಧಾರಿಸಿಕೊಳ್ಳುವ ತುರ್ತು ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಂತ ಲೇಖಕರಿರುವಂತೆಯೇ ಲೇಖಕಿಯರು ಕೂಡ ಇದ್ದಾರೆ.. ಹಲವಾರು ಮಹಿಳಾ ಸಂಘಟನೆಗಳು ಕೂಡ ಮುಂಚೂಣಿಯಲ್ಲಿವೆ. ಆದರೂ ಯಾಕೆ ಮಹಿಳೆಯರು ಅಧ್ಯಕ್ಷಗಿರಿಗೆ ಏರಲು ಸಾಧ್ಯವಾಗಿಲ್ಲ, ಆಕಾಂಕ್ಷಿಗಳ ಕೊರತೆಯೇ, ಒತ್ತಡಗಳ ಕಾರಣವೇ, ರಾಜಕೀಯ ಲಾಭಿಯ ಗೊಂದಲಗಳೇ, ಇಂದಿಗೂ ಲಿಂಗ ಅಸಮಾನತೆಯನ್ನು ಬಿಂಬಿಸುತ್ತಿದೆಯೇ, ಸಾಮಾಜಿಕ ಪರಿಸ್ಥಿತಿಗಳ ಕಾರಣವೇ? ಅಷ್ಟಕ್ಕೂ ಅಧ್ಯಕ್ಷ ಪದವಿಗೆ ಬೇಕಿರುವುದು ನಾಡು – ನುಡಿ – ಸಂಸ್ಕೃತಿಯನ್ನು ಕಟ್ಟಿ, ಬೆಳೆಸಿ, ಪೋಷಿಸುವಂತಹ ಒಬ್ಬ ಪ್ರಾಮಾಣಿಕ ಸಮರ್ಥರು ಸಾಕಲ್ಲವೇ.. ಅವರು ಗಂಡಾಗಲಿ, ಹೆಣ್ಣಾಗಲಿ… ಆಯ್ಕೆ ಸೂಕ್ತವಾಗಿರಬೇಕು. ಇದುವರೆಗೆ ಈ ಸ್ಥಾನವನ್ನು ನಿಭಾಯಿಸುವ ಒಬ್ಬ ಮಹಿಳೆಯೂ ಸಿಕ್ಕಿಲ್ಲವೇ ಎಂಬುದು ಮಾತ್ರ ಅಚ್ಚರಿ.. ರಾಜಕೀಯದಿಂದ ಹಿಡಿದು ಬಾಹ್ಯಾಕಾಶದವರೆಗೆ ಪುರುಷರ ಸಮಕ್ಕೆ ಹೆಜ್ಜೆ ಹಾಕಿದ ಮಹಿಳೆಗೆ ಕ. ಸಾ. ಪ. ದ ಅಧ್ಯಕ್ಷಗಿರಿ ಕಷ್ಟವೇ? ಅಥವಾ ಬೆವರು, ಸೇವೆಗಳಿಗೂ ಸಾಮಾಜಿಕ ಪಿಡುಗುಗಳ ಸ್ಪರ್ಶ ತಾಕಿ ಇಂಥದ್ದೊಂದು ಪರಿಸ್ಥಿತಿ ಬಂದೊದಗಿದೆಯೇ? ಇಂತಹ ನೂರಾರು ಪ್ರಶ್ನೆಗಳಿಗೆ ಪರಿಹಾರ ದೊರಕಿ ಎಲ್ಲಾ ಕನ್ನಡದ ಸಾಹಿತಿಗಳು, ಕನ್ನಡಪರ ಮತ್ತು ಮಹಿಳಾ ಸಂಘಟನೆಗಳು ಎಚ್ಛೆತ್ತುಕೊಂಡು ಮುಂದಾದರೂ ಅಧ್ಯಕ್ಷ ಸ್ಥಾನವು ಮಹಿಳೆಯರಿಂದ ಅಲಂಕರಿಸುವುದೇ.. ಕಾದು ನೋಡಬೇಕಿದೆ. ********************* ತೇಜೋವತಿ.ಹೆಚ್.ಡಿ.

ಮಹಿಳಾ ಅಧ್ಯಕ್ಷರು ಯಾಕಿಲ್ಲ… ! Read Post »

ಇತರೆ

ಕಸಾಪಗೆಮಹಿಳಾ ಅಧ್ಯಕ್ಷರು

ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಮಾತನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ ಕಲೆ ಇತ್ಯಾದಿಗಳು ಹೆಣ್ಣಿನ ಮನದಲ್ಲಿ ನೈಜವಾಗಿ ಹಾಸು ಹೊಕ್ಕಾಗಿರುತ್ತೆ. ಆದರೆ ಎಷ್ಷ್ಟೊ ಸಲ ಮಹಿಳೆ ತನ್ನ ಸಂಸಾರದ ಜವಾಬ್ದ್ದಾರಿ, ಇತರೆ ಕರ್ತವ್ಯಗಳಲ್ಲಿ ತನ್ನ ಪ್ರತಿಭೆಗೆ ಬೆನ್ನು ತೋರಿಸಿದ್ದೂ ಕಾಣುತ್ತೆವೆ. ಕಣ್ಣಿಗೆ ಕಾಣಿಸುವ ತನ್ಮ ಕೆಲಸ, ಮನೆಯವರನ್ನೆಲ್ಲ ತನ್ನ ಕರ್ತವ್ಯ ದಲ್ಲಿ ಚ್ಯುತಿ ಬರದಂತೆ, ಸಹನೆಯಿಂದ ದುಡಿಯುವದೊಂದೆ ತನ್ನ ಕಾಯಕ‌ ‌ಎಂದು ಕೊಂಡ ಮಹಿಳೆ ಈಗ ತನ್ನತನವನ್ನು‌ ಅರಿತು ಕಪ್ಪೆಚಿಪ್ಪಿನಿಂದ ಹೊರಬಂದು ಸಾಧನೆ ಮಾಡಿರುವದನ್ನು‌ ಕಾಣುತ್ತಾ ಜಗತ್ತಿನ ಬದಲಾವಣೆ ಗಮನಿಸುವಂತಾಗುದೆ. ಸೂಕ್ತ ಆಸಕ್ತಿ ಇದ್ದ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತರೆ ಯಾವದೇ ರಾಜಕೀಯ ಹಿತಾಸಕ್ತಿ, ವೈಯಕ್ತಿಕ ವೈಭವ , ಇರದೇ ಕೆಲಸ ಮಾಡಬಹುದಾಗಿದೆ ಸಾಹಿತ್ಯ ದ ಒಲುಮೆ ಇರುವ ನಿಜವಾದ ಅಕ್ಷರಸ್ಥ ಮಹಿಳೆಯನ್ನು ಈ ಸಾಹಿತ್ತ ಪರಿಷತ್ತಿನ ಅಧ್ಯಕ್ಷರಾಗಿ ಆರಿಸಿದರೆ ಮಹಿಳೆ ಕೂಡ ತನ್ನಲ್ಲಿ ರಕ್ತಗತವಾದ ಕಲಾಭಿಮಾನಿಯಾಗಿ, ಇತರರನ್ನೂ ಕಲೆಗೆ ಸೇರ್ಪಡಿಸಿ ಸಾಹಿತ್ಯ ವನ್ನು ಉತ್ತುಂಗಕ್ಕೆ ಏರಿಸಬಲ್ಲಳ ********************** ಡಾ.ವಿಜಯಲಕ್ಷ್ಮಿ

ಕಸಾಪಗೆಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ತೊಟ್ಟಿಲು ತೂಗುವ ಕೈ ಜಗತ್ತನ್ನೂ ತೂಗಿದೆ. ದೇಶವನ್ನೂ ಆಳಿದೆ.ಸೌಟು ಹಿಡಿದ ಕೈ ಲೇಖನಿಯನ್ನೂ ಸಮರ್ಥವಾಗಿ ಬಳಸಿದೆ . ಅಡುಗೆ ಮನೆಯನ್ನು ಸಂಭಾಳಿಸುವ ಮಹಿಳೆ ಕನ್ನಡ ಸಾಹಿತ್ಯ ಪರಿಷತ್ತನ್ನು ನಿಭಾಯಿಸಲಾರಳೇ? ನಾನಿಲ್ಲಿ ಪುರುಷರು ಸರ್ವಾಧಿಕಾರಿಯಾಗಿದ್ದಾರೆ ಎಂದಾಗಲಿ, ಮಹಿಳೆಯರನ್ನು ತುಳಿದಿದ್ದಾರೆಂದಾಗಲಿ ಹೇಳುತ್ತಿಲ್ಲ. ಅಸಲಿಗೆ, ಮಹಿಳೆಯರೇ ಮನಸ್ಸು ಮಾಡಿರಲಿಕ್ಕಿಲ್ಲ ಎಂದು ಅನಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರರ ಮೇಲೆ ಆರು ವರುಷಗಳಾದರೂ ಇದುವರೆಗೆ ಅಧ್ಯಕ್ಷ ಸ್ಥಾನವನ್ನು ಒಬ್ಬ ಮಹಿಳೆ ವಹಿಸಿಲ್ಲ ಎನ್ನುವುದರ ಹಿಂದೆ ಪುರುಷರಿಗಿಂತ ಮಹಿಳೆಯರದೇ ಹೆಚ್ಚಿನ ಪಾಲಿದೆ. ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1974 ರಲ್ಲಿ ಜಯದೇವಿ ತಾಯಿ ಲಿಗಾಡೆ, 2000 ದಲ್ಲಿ ಶಾಂತಾದೇವಿ ಮಾಳವಾಡ, 2003 ರಲ್ಲಿ ಕಮಲಾ ಹಂಪನಾ, 2010 ರಲ್ಲಿ ಗೀತಾ ನಾಗಭೂಷಣ ವಹಿಸಿಕೊಂಡಿರುವುದು ಬಿಟ್ಟರೆ ಇನ್ನು ಉಳಿದ ಯಾವ ವರ್ಷವೂ ಮಹಿಳೆಯರ ಆಧ್ಯಕ್ಷತೆ ಇಲ್ಲ. 1915 ರಿಂದ 1940 ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.ಕಸಾಪ ಚುನಾವಣೆಗಳಲ್ಲಿ ಮಹಿಳೆಯರು ಯಾಕೆ ಪ್ರಬಲವಾಗಿ ಸ್ಪರ್ಧಿಸುತಿಲ್ಲ? ಅಥವಾ ಚುನಾವಣೆಯಲ್ಲಿ ಯಾಕೆ ಆಯ್ಕೆಯಾಗುತ್ತಿಲ್ಲ? ಎಂಬುದು ಪ್ರಶ್ನೆ. ಕನ್ನಡದ ಅನೇಕ ಹೆಸರಾಂತ ಮಹಿಳಾ ಸಾಹಿತಿಗಳು ಈ ಬಗ್ಗೆ ಯೋಚಿಸಬೇಕು.ಯೋಚಿಸಬೇಕು ಅನ್ನುವ ಮೊದಲು ಅಲ್ಲಿ ಮಹಿಳೆಯರು ಸ್ಪರ್ಧಿಸಲು ಆರೋಗ್ಯಕರ ವಾತಾವರಣ ಇದೆಯೇ ಗಮನಿಸಬೇಕಾಗುತ್ತದೆ. ಯಾವುದೇ ರಾಜಕೀಯ ಪ್ರಭಾವ, ಜಾತಿ ರಾಜಕಾರಣಗಳಿಂದ ಮುಕ್ತವಾಗಿ ಸಾಹಿತ್ಯದ ಬೆಳವಣಿಗೆ, ಭಾಷಾ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಕಸಾಪಕ್ಕೂ ಇದೆ. ಮಹಿಳೆಯರು ಅಧ್ಯಕ್ಷರಾಗಲಿ ಎಂದು ಮಹಿಳಾ ಮೀಸಲಾತಿಗೆ ಒತ್ತು ಕೊಡುವ ಬದಲು, ನಮ್ಮ ಮಹಿಳೆಯರು ಸಾಹಿತ್ಯದ ಪ್ರಬಲ ಹಿನ್ನೆಲೆಯಿಂದ ಗಂಡು ಹೆಣ್ಣೆಂಬ ಬೇಧವಿಲ್ಲದೇ ಬಹುಮತದಿಂದ ಆಯ್ಕೆಯಾಗಬೇಕು ಎನ್ನುವುದು ನನ್ನ ಆಶಯ. ಮುಂಬರುವ ಚುನಾವಣೆಯಲ್ಲಿ ಅಂತಹ ಅರ್ಹತೆ ಉಳ್ಳ ಮಹಿಳೆಯರೇ ಮುಂದೆ ಬಂದು ಸ್ಪರ್ಧಿಸಿ, ಅಧ್ಯಕ್ಷರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಿಸೋಣ. ********************** ಶೀಲಾ ಭಂಡಾರ್ಕರ್

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

You cannot copy content of this page

Scroll to Top