ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ಲೇಖನಗಳ ಸಂಕಲನ ಎನ್. ಆರ್ ರೂಪಶ್ರೀ ಬೆನಕ ಬುಕ್ಸ್ ಬ್ಯಾಂಕ್ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ. ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ. ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ‘ ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು’. ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ. ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ. ಮಂಗಳಾ ಅವರು ಹೇಳಿರುವಂತೆ – ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ. ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು. ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ. ಒಮ್ಮೆ ಈ ಕೃತಿಯನ್ನು ಓದಿ. ********** ಡಾ.ಅಜಿತ ಹರೀಶಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನಾನೀಗಲೂ ನಿನಗೆ ಆಭಾರಿ. ಶೀಲಾ ಭಂಡಾರ್ಕರ್ ಕನಸೊಂದನ್ನು ಕನಸಾಗಿಯೇ ಉಳಿಸಿದಕ್ಕಾಗಿ, ಮತ್ತೆ ಮತ್ತೆ ಅದೇ ಕನಸಿನ ಗುಂಗಿನಲ್ಲಿ ಇರಿಸಿದಕ್ಕಾಗಿ, ನಿನಗೆ ನಾ ಸದಾ ಆಭಾರಿ. ಕನಸೊಂದಿತ್ತು ನನಗೆ ಸಮುದ್ರ ಕಿನಾರೆಯಲ್ಲಿ, ಮುಸ್ಸಂಜೆಯ ಹೊತ್ತಲ್ಲಿ, ಸೂರ್ಯನೂ ನಾಚಿ ಕೆಂಪಾಗಿ ನಮ್ಮನ್ನೋಡುತ್ತಾ ಮುಳುಗುತ್ತಿರುವಾಗಲೇ ಕೈಯೊಳಗೆ ಕೈ ಹಿಡಿದು ನಮ್ಮೊಳಗೆ ನಾವು ಕಳೆದು ಹೋಗುತ್ತಲೇ ಇರಬೇಕು ದೂರ ಬಲು ದೂರ ನಡೆದು. ಆ ದಿನವಿನ್ನೂ ಬರಲೇ ಇಲ್ಲ. ಸೂರ್ಯನು ನಾಚಿ ನಮ್ಮನ್ನು ನೋಡಲೇ ಇಲ್ಲ. ನಮ್ಮೊಳಗೆ ನಾವು ಕಳೆದು ಹೋಗಲೇ ಇಲ್ಲ. ಕನಸೊಂದು ನನಸಾಗಲೇ ಇಲ್ಲ. ನೀ ನನ್ನ ಜೀವನದಲ್ಲಿ ಬರಲೇ ಇಲ್ಲ. ನಾನೀಗಲೂ ನಿನಗೆ ಆಭಾರಿ. ಕನಸೊಂದು ಕನಸಾಗಿಯೇ ಉಳಿದುದಕ್ಕಾಗಿ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೀಲಿ ಕೈ ತರಲು ಧರಣೇಂದ್ರ ದಡ್ಡಿ ಯಾವ ದೇವರು ಕಣ್ಣು ತೆರೆಯಲೇ ಇಲ್ಲ ಯಾವ ದೇವರು ತಾನೇ ಕಣ್ಣು ತೆರೆದಾನು? ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ ಇಲ್ಲಿ ಮನಸ್ಸುಗಳೆಲ್ಲ ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ ಜೊತೆಗೆ ದೊಡ್ಡದೊಂದು ಬೀಗವು ಕೂಡ ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ ಇರಲಿ, ಆದರೂ ಒಂದು ಮಾತು ನೆನಪಿರಲಿ ದೇವರು ಕಣ್ಣು ತೆರೆಯದಿದ್ದರೂ ಬಿಡಲಿ ನಾನು ಕರ್ಮ ಧರ್ಮದ ಪಾಲಕ ಮುತ್ತುಗಳ ಹುಡುಕಲು ಜನ ಸಮದ್ರಕ್ಕೆ ನೆಗೆಯುವರು ನಾನು ನೆಗೆಯುವೆನು ನಿನ್ನ ಮನಸ್ಸಿನಕೋಟೆ ಬಾಗಿಲಿನ ಕೀಲಿ ಕೈ ತರಲು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅನುವಾದಿತ ಟಂಕಾಗಳು ಮೂಲ ಕರ್ತೃ – ಸಂಪತ್ ಕುಮಾರ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ನೀನಿತ್ತ ಜನ್ಮ ಬೇಡೆ ನಾ ಮರುಜನ್ಮ! ಭವಸಾಗರ ದಾಟಿಸು, ನೆನೆವೆನಾ ಕೊನೆ ಜೀವ ಕ್ಷಣಕು. Life bestowed by you Don’t need next life Rescue from worldly pursuits Always remember Till my last breath ಬರುವೆನಿಲ್ಲಿ ನೋವ ಮರೆಯೆ, ಭೇದ ಇಲ್ಲ ನಿನ್ನಲಿ. ಮಧು ಉಣಿಸಿ, ಮನ ತಣಿಸೈ “ಮಧುಶಾಲಾ” Come here To forget the sorrow Where no discrimination prevails Feed the drinks; Soothe the mind, oh drunk yard ಬೀಸಲೇಬೇಕು ಬಿರುಗಾಳಿ ಬಾಳಲಿ, ಅನುಭವಕೆ ಕೈ ಯಾರು ಚಲ್ಲುವರು? ಹಿಡಿಯುವವರಾರು? Storm is inevitable In the life For the experience Who stretch their arms ? Who embrace to hold ? ಬದುಕೆನ್ನುವ ನಾಟಕದಿ, ಮೇಲುಗೈ ನಾಟಕಗಾರ, ಸುಖಕಿಂತ ನೋವಿನ ನಟನೆ ಬಲು ಭಾರ ! In the play called life Writer’s upperhand obvious Staging sorrow Always outweighs Playing pleasure ******************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀ ಬರುವೆಯ ಒಮ್ಮೆ ಉಷಾ ಸಿ ಎನ್ ಬದುಕ ಜಂಜಾಟದಲ್ಲೀಗ, ಅಲೆಗಳ ಸಂಭ್ರಮದ ವಿಹಂಗಮ ನೋಟದಿ ಕಷ್ಟಸುಖಗಳ ಮೆಲುಕುಹಾಕುತ್ತಾ ಒಬ್ಬಂಟಿಗಳಾಗಿ ಬಿಟ್ಟಿದ್ದೇನೆ..!! ನಿನ್ನ ನೆನಪುಗಳ ಬದಿಗೊತ್ತಿ ಮರೆಮಾಚಿ ಕೈ ಚೆಲ್ಲಿದ್ದೇನೆ. ಹೊಸ ಬದುಕ ಹೊಸೆಯಲು ತುರಾತುರಿ ತಯಾರಿ ನಡೆಸಿದ್ದೇನೆ. ನೆನಪುಗಳಿಗೆ ಮುಕ್ತಿ ಸಿಕ್ಕಿತೆಂಬ, ಕ್ಷಣಿಕ ಸಂತಸ ಕೂಡ ಮೊಳಕೆಯೊಡಿಯುತ್ತಿಲ್ಲ..!! ಅದೆಲ್ಲೊ ಮೂಲೆಯಲ್ಲಿ ಅವಿತು ಕುಳಿತ ನೆನಪುಗಳು ಬರಸೆಳೆದು ಬರುತ್ತಿವೆ ನನ್ನತ್ತಲೇ!! ನನ್ನಂತರಾಳದ ಭದ್ರತೆಯ ಸರದಾರ, ಭರವಸೆಯ ಹರಿಕಾರ ವಿರಹದ ಕಾದಾಟಕೆ ಪೂರ್ಣವಿರಾಮವಿಟ್ಟು!! ಬಂದು ಬಿಡು ಒಮ್ಮೆ ಬದುಕು ಮುಗಿಯುವ ಮುನ್ನ…!! *********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮುದುಕ ಗ್ರೀಸ್ ದೇಶದ ರಾಷ್ಟ್ರ ಕವಿ ಕೋನ್ಸ್ಟಾ೦ಟಿನ್ ಪಿ ಕವಾಫಿ ಯ “ಏನ್ ಓಲ್ದ್ ಮ್ಯಾನ್”ಕವಿತೆಯ ನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇದೊ೦ದು ವೃದ್ಧಾಪ್ಯದ ಲ್ಲಿ ನಿ೦ತು ಕಳೆದುಹೋದ ಯೌವನದ ಕಾಲವನ್ನು ಕುರಿತು ಯೋಚಿಸುತ್ತಾ ತಳ ಮಳ ಗೊಳ್ಳುವ ಚಿತ್ರವನ್ನು ಕಟ್ಟಿಕೊಡುವಸು೦ದರ ಕವನ. ನನ್ನ ಅನುವಾದದ ಜತೆಗೆ ಕವಾಫಿಯ ಕವನದ ಇ೦ಗ್ಲಿಶ್ ಪಠ್ಯವನ್ನೂ ಇಲ್ಲಿಕೊಟ್ಟಿದ್ದೇನೆ ಮೇಗರವಳ್ಳಿ ರಮೇಶ್ ಅಲ್ಲಿ, ಗದ್ದಲದ ಕೆಫೆಯ ಆ ಕೊನೆಯಲ್ಲಿತಲೆ ಬಗ್ಗಿಸಿ ಕುಳಿತಿದ್ದಾನೊಬ್ಬ ಮುದುಕಎದುರು ಟೇಬಲ್ಲಿನ ಮೇಲೆ ಹರಡಿದೆ ವೃತ್ತ ಪತ್ರಿಕೆ. ನಿಸ್ಸಾರ ಮುದಿತನದ ದೈನೇಸಿ ತನದಲ್ಲವನು ಯೋಚಿಸುತ್ತಾನೆ –ತನಗೆ ಶಕ್ತಿಯಿದ್ದಾಗ, ಮಾತುಗಾರಿಕೆಯಿದ್ದಾಗ,ಸೌ೦ದರ್ಯವಿದ್ದಾಗತಾನು ಅನುಭವಿಸಲಾಗದೇ ಕಳೆದು ಹೋದ ವರ್ಷಗಳ ಬಗ್ಗೆ. ಅವನಿಗೆ ಗೊತ್ತಿದೆ ತನಗೆ ತು೦ಬಾ ವಯಸ್ಸಾಗಿದೆಯೆ೦ದುಅದನ್ನವನು ಕಾಣುತ್ತಾನೆ, ಅನುಭವಿಸುತ್ತಾನೆ, ಆದರೂನಿನ್ನೆಯಷ್ಟೇ ಅವನು ಯುವಕನಾಗಿದ್ದ ಹಾಗೆ ಅನಿಸುತ್ತಿದೆಮಧ್ಯ೦ತರವೆಷ್ಟು ಚಿಕ್ಕದು, ಎಷ್ಟು ಚಿಕ್ಕದು. ಅವನು ಯೋಚಿಸುತ್ತಾನೆ- ತನ್ನನ್ನು ಯಾಮಾರಿಸಿದತನ್ನ ದೂರ ದೃಷ್ಟಿಯ ಬಗ್ಗೆ“ನಾಳೆ ನಿನಗೆ ಬೇಕಾದಷ್ಟು ಸಮಯವಿದೆ” ಎ೦ದುಹೇಳಿದ ಆ ಮೋಸಗಾರನ ಮಾತನ್ನು ನ೦ಬಿದತನ್ನ ಹುಚ್ಚು ತನದ ಬಗ್ಗೆ. ಅವನು ಯೋಚಿಸುತ್ತಾನೆ –ತಾನೇ ಕಡಿವಾಣ ಹಾಕಿದ ತನ್ನ ಬಯಕೆಯೊತ್ತಡಗಳ ಬಗ್ಗೆ.ಅವನು ಕಳಕೊ೦ಡ ಪ್ರತಿಯೊ೦ದು ಅವಕಾಶಗಳೂಮೂದಲಿಸುತ್ತವೆ ಅವನ ಅವಿವೇಕಿ ಎಚ್ಚರಿಕೆಯನ್ನ. ಇಷ್ಟೊ೦ದು ಯೋಚನೆಗಳು, ಇಷ್ಟೊ೦ದು ನೆನಪುಗಳುತತ್ತರಿಸಿದ ವೃದ್ಧ ಹಾಗೇ ಮಲಗುತ್ತಾನೆಕೆಫೆಯ ತೇಬಲ್ಲಿನ ಮೇಲೆ ತಲೆಯಿಟ್ಟು At the noisy end of the cafe, head bentover the table, an old man sits alone,a newspaper in front of him. And in the miserable banality of old agehe thinks how little he enjoyed the yearswhen he had strength, eloquence, and looks . He knows he’s aged a lot: he sees it, feels it.Yet it seems he was young just yesterday.So brief an interval, so brief. And he thinks of Prudence, how it fooled him,how he always believed – what madness –that cheat who said: “Tomorrow. You have plenty of time.” He remembers impulses bridled, the joyhe sacrificed. Every chance he lostnow mocks his senseless caution. But so much thinking, so much rememberingmakes the old man dizzy. He falls asleep,his head resting on the cafe table. ******* Constantine P. Cavafy

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

 ಎಲ್ಲಾ ಒಲವುಗಳು ಉಳಿಯುವುದಿಲ್ಲ  ವಸುಂಧರಾ ಕದಲೂರು ಪಡೆದುಕೊಳ್ಳಲಾಗದ ಒಲವು ನೋವಾಗಿ ಕಾಡುವಾಗ ಸಂತೈಸಿಕೋ ಮನವ.. ಏಕೆಂದರೆ, ಎಲ್ಲಾ ಒಲವುಗಳು ನಮ್ಮದಾಗಿ ಉಳಿಯುವುದಿಲ್ಲ. ಭೋರೆಂದು ಸುರಿದ ಮಳೆಯ ಹನಿ ಇಳೆಯ ಗರ್ಭಕ್ಕಿಳಿಯದೇ ಆವಿಯಾಗಿ ಬಿಡುವುದು ಕಡಲ ಅಲೆ ದಡಕ್ಕೆ ಅಪ್ಪಳಿಸಿದ ಚಿಪ್ಪೊಳಗೆಂದೂ ಮುತ್ತು ಕೂಡದು ಗಡಿಯಾರವೂ ಹಿಂದೆ ತಿರುಗಲಾರದ ಸಂಕಟಕ್ಕೆ ಆಗಾಗ್ಗೆ ನಿಸೂರ ನಿಟ್ಟುಸಿರಿಟ್ಟು ನಿಂತು ಬಿಡುವುದು ಚಿಗುರೊಡೆಯದ ಬೀಜಗಳ ಕತೆ ಗೊಬ್ಬರದ ಹಾಡಿನಲ್ಲಿ ಕೊನೆಯಾಗುವುದು ಒಲವು ಕನಸ ಕನವರಿಕೆಯಲ್ಲರಳಿ ಸುಗಂಧ ಸೂಸುವ ಮುನ್ನ ಭಗ್ನ ಸ್ವಪ್ನವಾಗಿಬಿಡುವುದು ಬರೆಯಲಾಗದ ಸಂಕಟಕ್ಕೇ ಖಾಲಿ ಉಳಿಯುವ ಹಾಳೆಗಳು ರದ್ದಿಯಾಗುವುದು ನೆನವರಿಕೆಯಲ್ಲಿ ಬಲುಪ್ರಿಯವಾಗುವ ಅನನ್ಯ ಪ್ರೇಮದ ಒಲವಿನ ಸಾಂಗತ್ಯ ನಿಜದಲ್ಲಿ ಎಂದೂ ಅಪೂರ್ಣವೇ…. **********

ಕಾವ್ಯಯಾನ Read Post »

ಇತರೆ

ಲಾಕ್ ಡೌನ್ ದುರಿತಗಳು..

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು ನಂದಿನಿ ಹೆದ್ದುರ್ಗ ದಾಖಲಿಸಿದ್ದ ಲಾಕ್ ಡೌನ್ ದುರಿತಗಳು.. ಕಳೆದ ವಾರ ನನ್ನ ಮೊಬೈಲ್ಲು ಬೆಂಗಳೂರಿಗರು ಕಳಿಸುತ್ತಿದ್ದ ಹೂ ಉದುರಿದ ಖಾಲಿ ರಸ್ತೆಗಳಿಂದಲೇ ತುಂಬಿಹೋಯ್ತು. ಒಂದು ರಸ್ತೆ ಹಳದಿ,ಮತ್ತೊಂದು ನೀಲಿ,ಮಗದೊಂದು ಕಡುಗೆಂಪು…ಇನ್ನೊಂದು ತಿಳಿಗುಲಾಬಿ.. ಆಹಾ… ಊರಿಗೆ ಊರೇ ಯಾರದೋ ಸ್ವಾಗತಕ್ಕೆ  ಕಾದವರಂತೆ ತೋರಣ ಕಟ್ಟಿಕೊಂಡಿದೆ… ಯಾವ ರಸ್ತೆಯಲ್ಲಿ ಯಾರು ನಡೆದರೂ ಎಲ್ಲಿ ನಲುಗುತ್ತದೊ ಎಂಬಂಥ ಪಕಳೆಗಳ ಹಾಸು. ಬೆಂಗಳೂರು ಎನ್ನುವ ಹೆಸರು ಬದಲಿಸಿ ಹೂವೂರು ಎನುವಷ್ಟು  ಹೂಮರಗಳು.. ಯಾರೊ ಇನ್ನೊಂದು ಜೋಕು ಕಳಿಸಿದ್ರು…ಮಹಾನಗರದ ನಾಯಿಗಳೆಲ್ಲಾ ಮೀಟಿಂಗ್ ಸೇರಿ  ಅಲ್ಲಿ ಚರ್ಚೆ ಆಗ್ತಿದೆಯಂತೆ…  ‘ಮನುಷ್ಯರೆಲ್ರನ್ನೂ ಪಾಲಿಕೆಯವರು ಬಂದು ಎತ್ತಾಕೊಂಡು ಹೋಗಿರಬಹುದೇ…!?’ ಒಂಥರ ಸೊಗಸೇ ಇದೆಲ್ಲಾ ಓದಲಿಕ್ಕೆ.. ಅಳಿಲಿನ ಯೋಗಕ್ಷೇಮ ವಿಚಾರಿಸುವ ನೀಳಕತ್ತಿನ ನವಿಲೂ. ಜಯನಗರ,ಫೋರಮ್, ಕಮರ್ಷಿಯಲ್ಲು ಅಂತ ಶಾಪಿಂಗ್ ಬಂದು ಹೋದ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು.. ಒಂದುಕಾಲದಲ್ಲಿ ಅತಿ ನಿಬಿಡವಾಗಿದ್ದ ದಾರಿ ಮಧ್ಯದಲ್ಲಿ ಹಾಯಾಗಿ ಮಲಗಿ ಮೆಲುಕುತ್ತಿರುವ ದೊಡ್ಡ ಹೊಟ್ಟೆಯ ಹಸುಗಳು..!! ಮಹಾನಗರದ ಹೃದಯ ಭಾಗದಲ್ಲಿರುವ ಸ್ನೆಹಿತರೊಬ್ಬರು “ನೋಡಿಲ್ಲಿ…‌ಎಂತೆಂತಾ ಹಕ್ಕಿಗಳು ‌ಬಂದಿದಾವೆ ನಮ್ಮೂರಿಗೆ “ ಎನ್ನುತ್ತಾ ಪಕ್ಕದ ಖಾಲಿಸೈಟಿನ ಪೊದೆಯಲ್ಲಿ  ಚಿಲಿಪಿಲಿಗುಡುವ ಹೊಸ ಹಕ್ಕಿಗಳ ಫೋಟೋ ಕಳಿಸಿದ್ದೇ ಕಳಿಸಿದ್ದು… ಆಹಾ ಓಹೋ ಹೇಳಿ‌ ನಂಗೆ ಆಯಾಸವಾದರೂ ಅವರ ಆಸಕ್ತಿ ಮಾತ್ರ ಕುಂದಲೇ ‌ಇಲ್ಲ.. ಮನುಷ್ಯನೇ ಹಾಗಲ್ಲವೇ…? ತಾನೇ ವಿರೂಪ ‌ಮಾಡಿದ  ಪ್ರಕೃತಿ ಮತ್ತೆ  ಸ್ವರೂಪ ಪಡೆಯುತ್ತಿದೆ ಎನುವಾಗ ಅವನ ಸಂತೋಷ ಉಕ್ಕಿ ಹರಿಯುತ್ತದೆ. ನಿಮಿತ್ತವಾಗಿ ಮಹಾನಗರದಲ್ಲಿದ್ದರೂ ಮನಸ್ಸು‌ ತನ್ನ ನಾಲ್ಕು ಮನೆಯ ಬಾಲ್ಯದ ಹಳ್ಳಿಯ ಚಿತ್ರಣವನ್ನೇ ಸದಾ ತುಂಬಿಕೊಂಡಿರ್ತದೆ. ಹಾಗಾಗಿಯೇ ಸಣ್ಣ ಪಲ್ಲಟ,ಪರಿವರ್ತನೆಯಲ್ಲೂ ಮೂಲ ಕಾಣಬಹುದೇ ಎನ್ನುವ ಹುಡುಕಾಟದಲ್ಲೇ ಇರ್ತನೆ. ಮೂಲದಲ್ಲಿ ಬಹುತ್ವ ಎನುವುದೇ ಮನುಷ್ಯನ ಗುಣ. ಆದರೆ…ಆಧುನಿಕತೆ,ಜಾಗತೀಕರಣ ಮುಂತಾದ ಅತಿಮಾನುಷ ಪದಗಳು  ಮನುಷ್ಯನ ಮೂಲ ಗುಣವನ್ನು ತಿರುಚಿ  ಏಕಾಂಗಿಯಾಗುವುದೇ ಚಂದ ಎನುವ ಭಾವ ಸೃಷ್ಟಿಸುತ್ತಿವೆ. ಇರಲಿ..  ಅತಿಯೆಲ್ಲಾ ಅವನತಿಗೇ… ತುಂಬಿಕೊಳುವುದು ಖಾಲಿಯಾಗುವುದಕ್ಕೆ… ಆರಂಭವೆಲ್ಲಾ ಮುಗಿಯಲಿಕ್ಕೆ.. ಅಟ್ಯಾಚುಗಳೆಲ್ಲಾ ಡೀಟ್ಯಾಚ್ ಆಗುವುದಿಕ್ಕೇ ಎನ್ನುತ್ತದೆ ಕಾಲ ಧರ್ಮ. ‘ಈ ದಾರಿಯಲ್ಲಿ ಒಮ್ಮೆ ನಿನ್ನ ಕಿರುಬೆರಳು ಹಿಡಿದು ನಡೆಯುವಾಸೆ !” ಹೂದಾರಿ ಕ್ಲಿಕ್ಕಿಸಿ ಹೀಗೆ ಮೆಸೇಜಿಸದ ಅವನು…! ಹಳ್ಳಿಯಲ್ಲಿ ‌ಕುಳಿತು ಲಾಕಿನ ಹೆಚ್ಚಿಗೇನೂ ಎಫೆಕ್ಟಿಲ್ಲದೆ ,ಪ್ರೀತಿಯ ಓದೂ ಸಾಗದೆ /ಆಗದೆ ಒದ್ದಾಡುತ್ತಿದ್ದವಳ‌ ಮುಖಕ್ಕೆ ಒಂದು ಮಂದಸ್ಮಿತ ಮೂಡಲು ಇಷ್ಟು ಸಾಕಾಗದೇ..? “ಮಾತು ತಪ್ಪಬಾರದು” ಎನ್ನುವ ಮರು ಸಂದೇಶದೊಂದಿಗೆ ಕಡುಗೆಂಪಿನ ಗುಲಾಬಿ ಕಳಿಸಿ ಮತ್ತೆ ಮೌನಕ್ಕೆ ಜಾರಿದೆ.. _ ಬದುಕು ಕೊರೊನಾಮಯವಾಗಿದೆ. ಲಾಕಡೌನೆಂಬ ಪದ‌ ಮೊದಲು ಕೇಳಿದಾಗ ಅಷ್ಟೇನೂ ದಿಗಿಲು‌ ಬೀಳದೆ ‘ಮಾಮೂಲು ಬದುಕು ನಮ್ಮದು.ನಾವು ಭೂಮಿ ನಂಬಿರುವವರು.ಉಳುವ ಯೋಗಿಯ ನೋಡಲ್ಲಿ ಅಂತ ರಾಷ್ಟ್ರಕವಿ ಸುಮ್ಮನೇ ಬರೆದದ್ದಲ್ಲ’ ಅಂದುಕೊಂಡಿದ್ದೆ.. ಆದರೆ ಮೂರೇ ದಿನಕ್ಕೆ ನನ್ನ ನೂರು ಮನೆಯ ಊರಿನಲ್ಲೂ ಆರು ಮಂದಿ ಒಟ್ಟಿಗೆ ನಿಂತು ಕೊರೊನಾ ಹಾಡು ಪಾಡು ಮಾತಾಡ್ತಿದ್ದರೆ ಅದೆಲ್ಲಿಂದಲೋ ಪೋಲಿಸರು ಬಂದು ಅವರ ಕೈ ಸೋಲುವವರೆಗೂ ಬಿಗಿದು ಹೋಗುತ್ತಿದ್ದರು… ನಾಕು ದಿನ ಬಾಯಾಡಲಿಕ್ಕೆ ಆ ಮಾತಾದರೂ ‌ನಡೆದೀತು  ಅಂದುಕೊಂಡರೂ  ಕೇಳಲಿಕ್ಕೆ ಜೋಡಿ ಕಿವಿಯಿಲ್ಲದೆ ಅಕ್ಷರಶಃ ಈ ಲಾಕು ಸಾಕು ಎನಿಸತೊಡಗಿತು. ನಿಕ್ಕಿಯಾಗಿದ್ದ ಮದುವೆಯೊಂದು ಕೊರೊನಾ ಕಾರಣಕ್ಕೆ  ಅತ್ಯಾಪ್ತರು‌ ಮಾತ್ರ ನಿಂತು‌ ನೆರವೇರಿಸುವ ಹಾಗಾಯ್ತು.. ಯಾಕೋ ಗೊತ್ತಿಲ್ಲ.ಅದರಿಂದ ಒಳಗೊಳಗೆ ಖುಷಿ ಪಟ್ಟವರಲ್ಲಿ ನಾನೂ ಒಬ್ಬಳು. ನಮ್ಮ ಭಾರತೀಯರಲ್ಲಿ ಮಾತ್ರ ಕಾಣುವ ಈ ಬಿಗ್ ಫ್ಯಾಟ್ ಮದುವೆಗಳು  ಮಗದೊಂದು ಕಾರಣದಲ್ಲಿ ನೇಚರನ್ನು ನುಂಗಿ ನೊಣೆಯುತ್ತಿವೆಯೇನೊ ಅನಿಸ್ತದೆ.. ಒಂದು ಸಾಧಾರಣ ಕುಟುಂಬದ ಮದುವೆಗೂ ಒಂದು ಸಣ್ಣ ಬೆಟ್ಟದಷ್ಟು ಕಸದ ಉತ್ಪಾದನೆ ಆಗ್ತದೆ. ಅದರಲ್ಲೂ ಹೆಚ್ಚಿನದು ವಿಘಟನೆಯಾಗದ ಕಸ. ತಮ್ಮ ಸ್ಟೇಟಸ್ಸು ತೋರಿಸಿಕೊಳ್ಳುವ ಸಲುವಾಗಿ ಪ್ರತಿ ಊಟ ತಿಂಡಿಗೂ  ಪ್ಲಾಸ್ಟಿಕ್ ಬಾಟಲಿಯಲ್ಲೇ‌ ನೀರು ಪೂರೈಕೆ.. ಇಟ್ಟ ಬಾಳೆಲೆ ಒರೆಸಿಕೊಳ್ಳಲು ಪುಟ್ಟದೊಂದು ಪ್ಲಾಸ್ಟಿಕ್ ಕುಡಿಕೆ .ಅದರೊಳಗೆ ನೀರು ಹಾಕಿದರೆ ಊದಿಕೊಳ್ಳುವ ಟಿಷ್ಯೂ. ಮುಕ್ಕಾಲು ಮೂರು ಪಾಲು ಸಕ್ಕರೆ ರೋಗಿಗಳಿರುವ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ನಾಲ್ಕು ನಾಲ್ಕು ಬಗೆಯ ಸಿಹಿ. ಉಂಡದ್ದಕ್ಕಿಂತ ಒಗೆದದ್ದೇ ಹೆಚ್ಚು.. ಸಾಯಲಿ ,ನಾಯಿ ನರಿಯಾದರೂ ತಿಂದುಕೊಳ್ತವೆ ಅಂದುಕೊಂಡರೆ ಪ್ರತಿ ಸಿಹಿಗೂ ಪ್ರತ್ಯೇಕ ಪ್ಲಾಸ್ಟಿಕ್ ಬಟ್ಟಲು.ಜೊತೆಗೆ ಚಮಚ. ಬರೆಯುತ್ತಾ ಹೋದರೆ ಸಂ ವಿಧಾನವೇ ಆಗಬಹುದು… ಕೊರೊನಾದ ಪಾಸಿಟಿವ್ ಪರಿಣಾಮವಾಗಿ ಪ್ರಮುಖವಾಗಿ ಊರಲ್ಲಿ ನಡೆದ ಸರಳ ಮದುವೆ ಹೆಸರಿಸಬಹುದು. ನೆಲ ,ಮುಗಿಲು ನೀರು,ನಿಡಿ  ತಿಳಿಯಾಗಿದ್ದು, ಮನಸ್ಸುಗಳು ತಿಳಿದದ್ದು, ವೃದ್ದಾಶ್ರಮಗಳಾಗಿದ್ದ ಹಳ್ಳಿಗಳೆಲ್ಲಾ ಸಂಜೆ ಮುಂಜಾನೆ ಲಕಲಕಿಸಿದ್ದು. ಕ್ರಿಕೆಟ್ಟು ,ಶಟಲ್ಲುಗಳು ನಮ್ಮ ಸಗಣಿಸಾರಿಸಿದ ಅಂಗಳಕ್ಕೂ ಬಂದು  ನಮ್ಮ ಹೊಲ ತೋಟಗಳು ದಿಗಿಲಾಗಿದ್ದು.. ಓದು ವೃತ್ತಿಯ ಕಾರಣಕ್ಕಾಗಿ ವರ್ಷಾನುಗಟ್ಟಲೆ ಮನೆಯಿಂದ ಹೊರಗಿದ್ದು,ಬಂದರೂ ನೆಂಟರ ಹಾಗೆ ಬಂದು ಹೋಗುತ್ತಿದ್ದ ಮಕ್ಕಳೇ ಅಪ್ಪ ಅಮ್ಮನಿಗೆ ಹೊಸದಾಗಿ ಕಂಡದ್ದು.. ಊರಿನಲ್ಲಿ ಜೊತೆಗಿರುವ ಸೊಸೆಗಿಂತ  ನಗರ ಸೇರಿ ವಾರಕ್ಕೊಮ್ಮೆ ವಿಡಿಯೊ ಕಾಲು ಮಾಡಿ  ‘ಆರೋಗ್ಯ ನೋಡಿಕೊಳ್ಳಿ,ನಾವಿದ್ದೆವೆ ಜೊತೆಗೆ ‘ ಎನ್ನುವ  ಸೊಸೆಯೇ ಬಲು ಪ್ರೀತಿಸುವುದು ತಮ್ಮನ್ನು ಎಂದುಕೊಂಡಿದ್ದ ಅತ್ತೆಮಾವನಿಗೆ‌ ಸತ್ಯ ದರ್ಶನವಾಗಿ ಬೆಸ್ತು‌ಬಿದ್ದಿದ್ದು. ಊರ ಕಾಲುಹಾದಿಗಳಲ್ಲೂ ವಾಕಿಂಗ ಹೋಗುವವರು ಹೆಚ್ಚಾಗಿದ್ದು… ಇನ್ನೂ ಮುಂತಾದವು ಕೊರೊನಾ ಕಾಲದ ಕೊಡುಗೆ ಎನಬಹುದು. ನಿಜ.. ಸಾಮಾಜಿಕವಾಗಿ,ರಾಜಕೀಯವಾಗಿ,ಸಾಂಸ್ಕ್ರತಿಕವಾಗಿ ಇದು ಇತಿಹಾಸದ ಪುಟ ಸೇರಿದ ವರ್ಷ.ನಾವಿದಕ್ಕೆ ಸಾಕ್ಷಿಯಾಗಿದ್ದೇವೆ. ಲಘುವಾಗಿ ತೆಗೆದುಕೊಳ್ಳುವ ವಿಚಾರ ಅಲ್ಲವೇ ಅಲ್ಲ. ಕೊರೊನಾ ಕಾಲವನ್ನು ಹಿಂದೂಡಿದೆ. ನಷ್ಟ ವಾಗಿರುವ ಆರ್ಥಿಕತೆಯ ರಿಪೇರಿಗೆ ಯಾವ ಸೂತ್ರವೂ ಏನು ಮಾಡಲಾರದಂತಾಗಿದೆ.  ಕಲಿತ ಮಕ್ಕಳನ್ನು ಕನಲುವಂತೆ ಮಾಡಿದೆ. ಬೆಳೆದ ಬೆಳೆಗೆ ತಗುಲಿದಷ್ಟೂ ಬೆಲೆ ಸಿಗದೆ ರೈತ ಹೈರಾಣಾಗಿದ್ದಾನೆ.. ಒಮ್ಮೆ ಕೆಮ್ಮಿದರೂ  ಸಾಕು.ಮನೆಯವರೇ ಮುಖ ಸಿಂಡರಿಸುತ್ತಾರೆ. ಇನ್ನೇನು ಮರೆಯಾಗುತ್ತಿದೆ ಎಂದುಕೊಂಡಿದ್ದ ಅಸ್ಪರ್ಶ್ಯತೆ ಹೊಸ ಫ್ಯಾಷನ್ ಆಗಿ  ಜಗವನ್ನಾಳತೊಡಗಿದೆ. ನಮ್ಮ ಸಂಸ್ಕೃತಿಯ ಮೇರುವೆನಿಸಿದ್ದ ಅತಿಥಿ ದೇವೋಭವ ಇನ್ನೂ ಅರ್ಥ‌ಕಳೆದುಕೊಳ್ಳಬಹುದೆನಿಸುತ್ತಿದೆ.. ಮೊದಲೆ ಮುಖ ತಪ್ಪಿಸಿ ಓಡಾಡುತ್ತಿದ್ದ ‌ಮಂದಿಗೆ ಕೇವಲ ಕಣ್ಣು‌ಮಾತ್ರ ಕಾಣುವಂತೆ ಬಂದ ಮಾಸ್ಕಿನ ಯುಗ ವರದಾನವಾಗಿದೆ. ಮಾದ್ಯಮಗಳ ಬೇಳೆಬೇಯಿಸಿಕೊಳ್ಳುವ ಗುಣದಿಂದ ಧರ್ಮ ಧರ್ಮಗಳ ನಡುವೆ ಶೀತಲ ಸಮರ ನಡೆಯುತಿದೆ. ಯಾರೋ ಹತ್ತು ‌ಕಿಡಿಗೇಡಿಗಳ ಕೊಳಕು ಮನ ಸ್ಥಿತಿಯಿಂದಾಗಿ ಒಂದು ವರ್ಗದ ಮನುಷ್ಯರನ್ನೇ ಜಗತ್ತು ಸಂದೇಹದ ಕನ್ನಡಕ ದಿಂದ ನೋಡುವ ವಾತವರಣ ಸೃಷಿಯಾಗಿದೆ. ದುಡಿದು ನಿತ್ಯದ ಅನ್ನ ಉಣ್ಣುತ್ತಿದ್ದ ಶ್ರಮಜೀವಿ ನಿತ್ಯದ ಕೂಳಿಗೆ ಸ್ವಾಭಿಮಾನ ಬದಿಗಿಟ್ಟು ದಾನಿಗಳ ಕೈ ನೋಡುತ್ತಿದ್ದಾನೆ. ಮೂರು ಟೊಮ್ಯಾಟೊ ,ಎರಡು ಆಲೂಗೆಡ್ಡೆ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಒಳಗಿನ ಮನ್ನಣೆಯ ದಾಹಕ್ಕೆ ನೀರೆರುಯುವವರ ಸಂಖ್ಯೆ ಅತಿಯಾಗುತ್ತಿದೆ. ಆದರೆ.. ಇವೆಲ್ಲದರ ನಡುವೆ ನಮ್ಮ ನೇಗಿಲಯೋಗಿ,ಭಾರತದ ಬೆನ್ನೆಲುಬು ಮಾತ್ರ ಎಂದಿನಂತೆ  ಉತ್ತಿಬಿತ್ತುತ್ತಿದ್ದಾನೆ.. ಒಂದು ಸಮೀಕ್ಷೆಯ ಪ್ರಕಾರ ಕೊರೊನಾ ಕಾಲಕ್ಕೆ ಭಾರತದಲ್ಲಿ ತರಕಾರಿ ಸೊಪ್ಪು ಗಳ ಅವಕ ಮಾರುಕಟ್ಟೆಯಲ್ಲಿ ಅತಿಯೆನಿಸುವಷ್ಟೇ ಆಗಿದೆ. ಆದರೆ ವ್ಯವಸ್ಥೆ ಇಲ್ಲೂ ಒಂದು ತಪ್ಪೆಸಗಿದೆ..ರೈತನ ಸರಕನ್ನು ಎಪಿಎಮ್ ಸಿಯ ಒಳ ತರಿಸಿಕೊಂಡ ಅಧಿಕಾರಿಗಳು ಕೇವಲ ವ್ಯಾಪಾರಿ ವರ್ಗವನ್ನು ಮಾತ್ರ ಒಳಬಿಟ್ಟುಕೊಂಡಿದೆ. ರೈತರಿಂದ ನೇರ ಗ್ರಾಹಕ ವ್ಯವಸ್ಥೆ ಮಾತ್ರ ಇಂದಿನ ಕಂಗೆಟ್ಟ ಕೃಷಿಕನ ಬದುಕನ್ನು ನೇರೂಪು‌ ಮಾಡಬಲ್ಲದು ಎನುವುದು ಗೊತ್ತಿದ್ದರೂ ಜಾಣಗುರುಡು ತೋರಿದೆ. ಯಾರೊ ಹುಸಿದೈರ್ಯ ಇರುವ ರೈತಾಪಿ ಮಂದಿ ಇದನ್ನು ಪ್ರಶ್ನಿಸಿದ್ದಾರೆ. ಎಲ್ಲೊ ನಾಲ್ಕು ಮಂದಿಗೆ ನ್ಯಾಯ ಸಿಕ್ಕಿದೆ.. ಉಳಿದವರು ಮತ್ತದೆ‌ ಮಹಾನಗರದ  ತಮ್ಮ ಬಾಂಧವರು ಅಪ್ಲೋಡಿಸಿದ ತಮ್ಮದೆ ಹೊಲಗದ್ದೆಗಳಿಂದ ಹೋದ ತರಕಾರಿ ಹಣ್ಣುಗಳ ಬಗೆಬಗೆಯ ಅಡುಗೆಗಳನ್ನು ನೋಡಿ ಉಗುಳು ನುಂಗಿಕೊಳ್ಳುತ್ತಿದ್ದಾರೆ.‌ ಯಾಕೋ  ಇದೆಲ್ಲವನ್ನೂ ನೋಡುವಾಗ ಇನ್ನು ಕೃಷಿ ಕ್ಷೇತ್ರಕ್ಕೆ ಯಾವುದೇ ಭವಿಷ್ಯ ವಿಲ್ಲ ಎನುವುದು ಖಚಿತವಾಗುತ್ತದೆ. ಆದರೆ.. ಈ ಸಮಾಜದ ಅಥವಾ ಈ ವ್ಯವಸ್ಥೆಯ ಒಂದು ವೃತ್ತದಲ್ಲಿ ಮೂಲದಲ್ಲಿ ರೈತನಿದ್ದರೆ ಕೊನೆಯಲ್ಲಿ ಟೆಕ್ನಾಲಜಿ ಇದೆ ಎನುವುದು ಎಲ್ಲರಿಗೂ ತಿಳಿದ ವಿಚಾರವೇ. ಮೂಲದ ಬೇರನ್ನೇ ಗೆದ್ದಲು ಹಿಡಿಸಿದರೆ ವೃತ್ತ ಪೂರ್ತಿಯಾಗುವುದಾದರೂ ಹೇಗೆ.? ತೆರಿಗೆ ಕೇಂದ್ರೀಕೃತ ದೃಷ್ಟಿಯಿಂದ ನೋಡುವ  ಎಲ್ಲಾ ಸರ್ಕಾರಗಳು ರೈತನ ಬಾಯಿಗೆ ಬೆಣ್ಣೆ ಹಚ್ಚುವಂತೆ ಆಡುವ ನಾಟಕಗಳನ್ನು ಇನ್ನಾದರೂ ನಿಲ್ಲಿಸಬೇಕು.  ಸಾವಿರ ರೈತರ ಬದುಕು ಹಸನಾಗುವುದಕ್ಕೆ ಕೊಡಬಲ್ಲ  ಒಂದು ಬೆಂಬಲ ಬೆಲೆಯ ಮೊತ್ತವನ್ನು  ಹೊಟ್ಟೆ ತುಂಬಿದ ಉದ್ಯಮಿಯೊಬ್ಬನ ಬ್ಯಾಂಕ್ ಸಾಲ ಮನ್ನಾ ಮಾಡುವುದಕ್ಕೆ ಬಳಸುವುದನ್ನು ಸರ್ಕಾರಗಳು ನಿಲ್ಲಿಸಬೇಕು. ಕಾಲಕಾಲಕ್ಕೆ ರೈತೋಪಯೋಗಿ ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಗ್ರಾಮೀಣ ಬದುಕಿನ ಹಿತಕಾಯಬೇಕು. ವೈಯಕ್ತಿಕ ಆದಾಯವನ್ನು ಇಲ್ಲೂ ಹೆಚ್ಚಿಸುವ,ವೃತ್ತಿ ಘನತೆ ಎತ್ತಿಹಿಡಿಯುವ ಮನಸ್ಥಿತಿ ಅಧಿಕಾರಿಗಳಲ್ಲೂ ಬರಬೇಕು.  ಬೀಜ ಗೊಬ್ಬರ ನೀರಾವರಿಗೆ ಪ್ರಾದೇಶಿಕವಾಗಿ ಭಿನ್ನ ರೂಪುರೇಷೆಗಳನ್ನು ಕೈಗೊಂಡು  ರೈತರ ಗೌರವದ ಬದುಕಿಗೆ ಅನುವು ಮಾಡಬೇಕು. ಬ್ಯಾಂಕುಗಳು,ಅಧಿಕಾರಿಗಳು ರೈತನನ್ನು ಕೇವಲ ನೆಪಮಾತ್ರಕ್ಕೆ ಎತ್ತರದಲ್ಲಿರಿಸದೆ ವಾಸ್ತವದಲ್ಲೂ ಹಾಗೇ ನಡೆದುಕೊಳ್ಳಬೇಕು ಕೊರೊನಾ ಕಾಲದಲ್ಲಿ ಜಗತ್ತಿಗೊಂದು ಹೊಸ ಪಾಠ ದೊರಕಿದೆ. ಮಹಾನಗರದ ಮೋಹ ತುಸುವಾದರೂ ಕಡಿಮೆಯಾಗಿದೆ. ಹಳ್ಳಿಗಳೂ ಬದುಕಲು ಅರ್ಹ ಎನುವುದನ್ನು ಮಂದಿ ತಿಳಿದುಕೊಳ್ತಿದ್ದಾರೆ. ಅಯ್ಯೋ..ಊರಲ್ಲೊಂದು‌ ಮನೆಯಿದ್ದಿದ್ದರೆ,ತುಂಡು ನೆಲವಿದ್ದಿದ್ದರೆ ಎನ್ನುವ ಜನ ಹೆಚ್ಚಾಗ್ತಿದ್ದಾರೆ.. ಸರ್ಕಾರ ಇಂತಹ ಸನ್ನಿವೇಶಗಳ ಉಪಯೋಗ ಪಡೆಯಬೇಕು.. “ಕೆಟ್ಟಡುಗೆ ಅಟ್ಟವಳೇ ಜಾಣೆ’ ಎನ್ನುವ ಮಾತಿದೆ. ಗುಣಮಟ್ಟದ ಬದುಕನ್ನು ರೂಪಿಸುವಲ್ಲಿ , ಹಳ್ಳಿಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವ್ಯವಸ್ಥೆ ಗಮನ ಹರಿಸಲೇಬೇಕಾದ ದುರಿತ ಕಾಲ ಇದಾಗಿದೆಯಲ್ಲವೇ.? ************

ಲಾಕ್ ಡೌನ್ ದುರಿತಗಳು.. Read Post »

ಕಾವ್ಯಯಾನ

ಕಾವ್ಯಯಾನ

ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. ಕನಸ ಹಕ್ಕಿಗಳಿಗೆ ಗೂಡು ಕಟ್ಟುವ ಮರವಾಗಿದ್ದೆ ನಾನು ಅವುಗಳ ಚಿಕ್ ಚೀವ್ ಕಲರವದಿಂದ ಮುದಗೊಳ್ಳುತ್ತಿದ್ದೆ ಅವುಗಳೆಲ್ಲ ವಲಸೆಹೋಗಿ ಮರವೆಲ್ಲ ಖಾಲಿ ಈಗ ಮೌನ ಆವರಿಸಿ ಕಿವಿ ಇದ್ದೂ ಕಿವುಡಿ ಯಾಗಿದ್ದೇನೆ. ಎಲ್ಲರ ರೀತಿ ನೀತಿ ನಿರ್ಧಾರ ಗಳಿಗೆ ಸಮ್ಮತಿಯಾಗಿದ್ದೆ ನಾನು ಎಲ್ಲರ ಮನಗಳಿಗೂ ತೆರೆದುಕೊಳ್ಳುತ್ತಿದ್ದೆ ಹಿಂದಿದ್ದ ಜೀವನದ ಉತ್ಸಾಹವೇ ಇಲ್ಲ ಈಗ ಮನದ ಬಾಗಿಲು ಮುಚ್ಚಿ ಒಂಟಿ ಯಾಗಿದ್ದೇನೆ. *******

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪ್ರಶಸ್ತಿ-ಪುರಸ್ಕಾರ

ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ . ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ . ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಶ್ಮವಾಗಿ ಕಟ್ಟಿ ಕಲಾ ಕೃತಿಯ ಅನುಭವ ನೀಡುತ್ತಾ ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ . ಈ ಕಾರಣಕ್ಕಾಗಿ “ಏಕತಾರಿ”ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ . ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ***********************************

ಪ್ರಶಸ್ತಿ-ಪುರಸ್ಕಾರ Read Post »

You cannot copy content of this page

Scroll to Top