ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ| ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ|| ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ| ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ|| ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ| ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ|| ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ ವಿಶ್ವಾಸ| ಕಪ್ಪು ಮೂತಿಯ ಮುಗಿಲ ಕಣ್ಣೀರು ಕೋಡಿ ಹರಿವು ಆಶಿಸಿ ಮಳೆಗಾಗಿ ಕಾಯುತಿರುವೆ|| ನೆಲ ಮುಗಿಲು ಮಿಲನ ಮರೆತರೆ ಕಂಗಳ ಕೊಳದ ನೀರುಣಿಸಿ ಬರ ಚಿಗುರಿಸುವೆ| ಸಾಚಿ ಉಡಿ ಮುತ್ತುಗಳನ್ನು ಕೂರಿಗೆ ಕಣ್ಣಲ್ಲಿ ಪೋಣಿಸಿ ಮಳೆಗಾಗಿ ಕಾಯುತಿರುವೆ|| ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾನಲ್ಲದ ನಾನು ವಿದ್ಯಾಶ್ರೀಎಸ್ಅಡೂರ್ ಬಂಧಿ ನಾನು ಕೋಟೆ ಕೊತ್ತಲಗಳಲ್ಲಲ್ಲ ನನ್ನದಲ್ಲದ ಬದುಕಿನಲ್ಲಿ, ಬಂಧಿ ನಾನು, ನಾಲ್ಕು ಗೋಡೆಗಳ ನಡುವಲ್ಲಲ್ಲ ಗೊಡ್ಡು ಸಂಪ್ರದಾಯಗಳ ಮುಖವಾಡದಲ್ಲಿ, ಒಂಟಿ ನಾನು, ಈ ಜನಜಾತ್ರೆಯ ನಡುವಲ್ಲಲ್ಲ ನನ್ನ ಮನದ ವಿಶ್ವದಲ್ಲಿ ಒಂಟಿ ನಾನು, ನನಗೆ ನನ್ನವರು ಇಲ್ಲದೆ ಅಲ್ಲ ನನ್ನತನವೆಂಬ ಲೋಕದಲ್ಲಿ. ಮೂಕಿ ನಾನು, ಮಾತ ಮಲ್ಲಯುಧ್ಧದಲ್ಲಲ್ಲ ನನ್ನ ಮೌನವಾದ ಕನಸುಗಳಲ್ಲಿ ಮೂಕಿ ನಾನು, ಈ ಮಾತಿನರಮನೆಯಲ್ಲಲ್ಲ ನನ್ನ ಸ್ವಂತಿಕೆಯ ದಿಗಂತದಲ್ಲಿ. ಬೊಂಬೆ ನಾನು, ನನಗೆ ಭಾವಗಳು ಇಲ್ಲದೆ ಅಲ್ಲ ನನ್ನ ಆವರಿಸಿದ ಬಾಹ್ಯ ಮಾನಸಿಕತೆಗಳಲ್ಲಿ ಬೊಂಬೆ ನಾನು, ನನ್ನ ಕೈ ಕಾಲು ಅಲ್ಲಾಡದೆ ಅಲ್ಲ ಅನೇಕ “ಅಹಂ”ಗಳ ಕಪಿಮುಷ್ಟಿಯಲ್ಲಿ. ಯಂತ್ರ ನಾನು, ನನ್ನ ಚಲಿಸುವಿಕೆ ನನ್ನ ಕೈಯಲ್ಲಿ ಇಲ್ಲದೆ ಅಲ್ಲ ನನ್ನ ದಿನಚರಿಯ ಪುನರಾವರ್ತನೆಯಲ್ಲಿ ಯಂತ್ರ ನಾನು, ನನ್ನ ಬೇಕು ಬೇಡಗಳ ಅರಿವಿಲ್ಲದೆ ಅಲ್ಲ ಕೂಪಮಂಡೂಕದಂತಿರುವ ಮನಸ್ಥಿತಿಗಳಲ್ಲಿ. **********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಒಂದುಕತ್ತಲನ್ನುಎತ್ತಿಟ್ಟುಕೊಂಡಿದ್ದೇನೆ ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಾಗರೇಖಾ ಗಾಂವಕರ್ ರಾಜು ಹೆಗಡೆ ಒಂದು ಕತ್ತಲನ್ನು ಎತ್ತಿಟ್ಟುಕೊಂಡಿದ್ದೇನೆ ಹಕ್ಕಿಗಳನ್ನು ಮಲಗಿಸಿ ಚುಕ್ಕೆಗಳನ್ನು ಎಬ್ಬಿಸಿ ಇನ್ನು ಕೆಲವೇ ಗಂಟೆಗಳಿವೆ ಗಿಡಗಂಟಿಗಳ ಜೊತೆಗೆ ಮಾತಾಡಲು ಆಡದಿದ್ದವರ ಸುದ್ದಿಬೇಡ! ಒಂದೊಂದಾಗಿ ದೀಪ ಆರಿಸುತ್ತೇನೆ ಕತ್ತಲೆ ನನಗೆ ಧೈರ್ಯ ತುಂಬುತ್ತದೆ ಗೋಡೆ ಕೂಡ ಮಾತಾಡುತ್ತಿದೆ ಗಡಿಯಾರದ ಬಾಯಲ್ಲಿ ಎಷ್ಟು ಸಂತೋಷ ಕತ್ತಲೆಗೆ ಸುಮ್ಮನೆ ನಗುತ್ತಿದೆ ಅರಿವೆ ಧರಿಸಿರುವ ನನ್ನ ನೋಡಿ. ಒ ಗೇಟಿನ ಸಪ್ಪಳ ಎಲ್ಲಿ ಅಡಗಿಕೊಳ್ಳಲಿ ದಾರಿಯನ್ನೂ ಬಿಡುವುದಿಲ್ಲ ಇವರು. I have picked up a darkness I have picked up A darkness Made the birds to sleep And stars to get up Only few hours left Tobe on talk With the trees and hedges Tobe silent with Those are speechless One by one I turn off the lights Darkness makes me courageous Through the mouth Of clock Walls start to talk How cheerful This darkness is! Simply smiles at me Looking at my full atire. Oh! Sound of gatedoor Where shall i hide now Not allowing the path These are ,,,, **** Translated by– Nagarekhagaonkar

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ ವ್ಯಭಿಚಾರಿ. **********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಡು ಕಾಯೋ ಹುಡುಗನ ದಿನಚರಿ ಪುಸ್ತಕ:ಆಡು ಕಾಯೋ ಹುಡುಗನ ದಿನಚರಿ (ಅನುಭವ ಕಥನ) ಲೇಖಕರು:ಟಿ.ಎಸ್.ಗೊರವರ ಪ್ರಕಾಶಕರು:ಪಲ್ಲವ ಪ್ರಕಾಶನ,ಚನ್ನಪಟ್ಟಣ ಶಿವರಾಜ್ ಮೋತಿ ಕಳೆದ ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕದಂಗಡಿಗಳ ಬಜಾರಿನಲ್ಲಿ ಮತ್ತೆ-ಮತ್ತೆ ದೋಸ್ತಿಗಳ ಜೊತೆಗೂಡಿ ವಾಲೆಂಟಿಯಾದ್ರೂ ತಿರುಗುತ್ತಿದ್ದಾಗ ಸಂಗಾತದ ಮಳಿಗೆ ಕಣ್ಣಿಗೆ ಬಿದ್ದಿತ್ತು.ಹೋಗಿ ಮಾತಾಡಿಸಿದಾಗ ಈ ಆಡು ಕಾಯೋ ಹುಡುಗನ ದಿನಚರಿ ಪುಸ್ತಕವನ್ನ ಪ್ರೀತಿಯಿಂದ ನನ್ನ ವರ್ತನೆಯನ್ನು ನೋಡಿ ಹವ್ಯಾಸವನ್ನು ಅರಿತುಕೊಂಡಂತೆ ಆಫ್ ರೇಟಿಗೆ ಕೊಟ್ಟಿದ್ದರು.ಉಡಾಳ ಹುಡುಗನಾಗಿ,ಆಡು ಕಾಯುತ್ತಾ,ಎಮ್ಮೆ ಟೀಮಿನವನಾಗಿ ಚೇಷ್ಟೇ-ಕುಚೇಷ್ಟೆಗಳನ್ನೂ ಮಾಡುತ್ತಾ ಬೆಳೆದ ಅಪ್ಪಟ ಹಳ್ಳಿ ಹುಡುಗನ ಬದುಕಿನ ಚಿತ್ರಣವಿದು. ಈ ಪುಸ್ತಕದಲ್ಲಿ ಒಟ್ಟು ೧೬ ಭಾಗಗಳಿವೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ತನ್ನ ಮುಡಿಲಿಗೇರಿಸಿಕೊಂಡಿದೆ.ಎರಡನೆಯ ಮುದ್ರಣವೂ ಮುಗಿದು,ಮೂರನೆಯದಕ್ಕೂ ಅಣಿಯಾಗುತ್ತಿದ್ದಿರಬಹುದು.ಹಿಂದೊಮ್ಮೆ ಅಲ್ಪ ಓದಿದ್ದೆ, ಈಗ ರಾತ್ರಿ ಎರಡಾದರೂ ಒಂದೇ ಗುಟುಕಿಗೆ ಓದಿ ಮುಗಿಸಿ ಇಲ್ಲಿನ‌ ಕೆಲ ಹಾಸ್ಯಗಳನ್ನು ಒಬ್ಬೊಬ್ಬನೇ ನೆನಪಿಸಿಕೊಂಡು ನಗಾಡುತ್ತಿದ್ದೆ. ಹಳ್ಳಿಯ ಸೊಡಗು,ಪರಿಸರ,ಪ್ರಾದೇಶಿಕ,ಕೂಲಿಕಾರರ ತಾಯಂದಿರ ಬವಣೆಯ ಕರಾಳ ಬದುಕನ್ನು ಬಿಚ್ಚಿಟ್ಟ ಪರಿ ಅದ್ಭುತವಾಗಿದೆ.ಇಲ್ಲಿ ಬಳಸಿದ ಕೆಲ ಹಳ್ಳಿಯ ಪದಗಳನ್ನು ಮತ್ತೊಮ್ಮೆ ಓದಿಯೇ ಅರ್ಥೈಸಕೊಳ್ಳಬೇಕಾಗಿದೆ.ಉತ್ತರಕರ್ನಾಟಕ ಭಾಷೆಯ ಅಪರೂಪದ ಪುಸ್ತಕವೆಂದರೂ ತಪ್ಪಾಗಲಾರದು. ಅವ್ವ-ಅಪ್ಪನ ಜಗಳ,ಹೊಡೆದಾಟ,ಧಾರವಾಡದ ಸೊಬಗು,ಅಪ್ಪ ಏಟು ಕೊಟ್ಟಾಗ ರಮಿಸಿ ಅವ್ವನು ಚೇಷ್ಟೆಗೆ ಕೊಟ್ಟ ಏಟು,ಮಂತ್ರಿಸಿದ ತತ್ತಿ ತಿಂದಿದ್ದು, ಚಿತ್ತಾಬಕ್ಕಾ ಆಡುವಾಗ ಅಪ್ಪನ ಕೈಗೆ ಸಿಕ್ರೂ ಸಿಗದೇ ದ್ಯಾವ್ರನ ನೆನ್ಸಿಕೊಂಡು ಓಡಿದ್ದು,ಜಾತ್ರೆಲಿ ಪಿಸ್ತೂಲ್ ಕದ್ದು ಕಪಾಳಮೋಕ್ಷ ಮಾಡಿಸಿಕೊಂಡಿದ್ದು,ಊರಿನವರ ಕೂಲಿನ ಬಗ್ಗೆ ಎಲ್ಲವೂ ಅನನ್ಯವಾಗಿ,ಅಮೂಲ್ಯವಾಗಿ ಬಹು ಚಿತ್ರಿತವಾಗಿವೆ. ಇಲ್ಲಿನ‌ ಕೆಲ ಹಾಸ್ಯಗಳನ್ನು ಸಿನಿಮಯ ರೀತಿಯಲ್ಲೇ ಓದಿಯೇ ಅದರ ಸ್ವಾದಿಷ್ಟ ಅನುಭವಿಸಲೆಬೇಕು. ಈಜಾಡಲು ಹೋದಾಗ ಬತ್ತಲೆಯಾಗಿ ಅವರದು ಇವರು,ಇವರದು ಅವ್ರು ನೋಡಿ ನಗಾಡ್ತಿದ್ದಿದ್ದು.ಅಲೈ ಹಬ್ಬದಾಗ ಹಣಮಂತ ದೇವ್ರ ಪೂಜಾರಿನ ಕಾಡಿಸಿ, ಅಟ್ಟಕೇರಿಸಿ ಕುಣಿಯ ಬೆಂಕ್ಯಾಗ ಹಾರಿಸಿದ್ದು.ಮಾಟ ಮಂತ್ರಕ ಮೂರುದಾರಿ ಸೇರೋ ಜಾಗದಲ್ಲಿ ಮಾಡಿಸಿಟ್ಟಿದ್ದಿದ್ದನ್ನ ತಿಂದ ದುರಗಮ್ಮ ದೇವ್ರಿಗೆ ಲಂಚಕೊಟ್ಟಿದ್ದು ಇನ್ನೂ ಬಿದ್ದು-ಬಿದ್ದು ನಗಿಸುವ ಪ್ರಸಂಗಗಳಾಗಿವೆ. ಒಮ್ಮೆ ಜಾತ್ರೆಯಲ್ಲಿ ಕದ್ದ ಪಿಸ್ತೂಲಿನ ಬಗ್ಗೆ ಗೊರವರ ಅವರು ಕನ್ನಡಪ್ರಭದಾಗ ಆ ಬರಹನ ಪ್ರಕಟಿಸಿದ್ದರು. ಅದನೋದಿದ್ದೆ.ಒಮ್ಮೆ ಅಚಾನಕವಾಗಿ ಧಾರವಾಡದ ಸಂಗಾತ ಕಚೇರಿಗೂ ಹೋಗಿದ್ದೆ,ಅದೇ ಸಮಯದಾಗ ಪಲ್ಲವ ವೆಂಕಟೇಶರೂ ಬಂದಾಗ ಪಿಸ್ತೂಲ್ ಕಳ್ಳನೆಂದು ಗೊರವರ್ ಸರ್ ಗೆ ಮಾತಾಡಿದಾಗ,ನೀನು ಯಾರು, ನಿನ್ನ ಹಿನ್ನೆಲೆ ಏನು ಎಂದು ಪಲ್ಲವ ಪ್ರಕಾಶನದವರೂ ಕೇಳಿದರು.ತಿಳಿಸಿದಾಗ ಆಗ ಗೊರವರ ಅವ್ರು ಅದ್ಕೇ ಅನ್ನುತ್ತಿನಿ ಇವ ಜಾತ್ರಿ ಬಗ್ಗೆ ಜಾಸ್ತಿ ಯಾಕ ಮಾತಾಡಕಂತ ಅಂತ ಅಂದ್ರು ತುಸುನಕ್ಕಿದ್ದೆ. ಇಂತ ಪುಸ್ತಕ ಕೊಟ್ಟು ನಗಿಸಿ,ಓದಿಸಿದ ಗೊರವರ ಸರ್ ಗೆ ನನ್ನ ಧನ್ಯತಾಭಾವವಿದೆ.ನನ್ನ ಬಾಲ್ಯದ ಬದುಕಿನ ಎದೆಯಾಳ ಹೊಕ್ಕಿವೆ,ನಿಜಕ್ಕೂ ಖುಷಿಯಾಗಿರುವೆ.ನೀವೂ ಓದಿ ಖುಷಿಯಾಗಿ ಎನ್ನುತ್ತಾ..!!! ************

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಎರಡರ ನಡುವೆ ವಿಭಾ ಪುರೋಹಿತ ಎಲ್ಲಿ ಹೋದರಲ್ಲಿ ಬೆಂಬತ್ತಿ ತೆರೆದ ಕೋರೆಹಲ್ಲು ಎದೆಗುಂಡಿಗೆ ಇರಿಯುತ್ತದೆ ಎನ್ನೆದೆಗುದಿಗಳನು ದಿಕ್ಕೆಡಿಸಿ ಅಡವಿಗೆ ಕೆಡವುತ್ತದೆ ಏನಿದು, ನನಗೇ ಹೀಗಾ ? ಎಲ್ಲರಿಗೂ ಬೆನ್ನಿಗೊಂದು ಭೂತ ವಕ್ಕರಿಸಿಕೊಂಡಿರುತ್ತಾ ? ಎಡಬಲಗಳ ನಡುವೆ ನಡೆಯುವುದು ದುರ್ಬರ !! ವರ್ತಮಾನದ ಕಾಲಗತಿಯಲಿ ದ್ವಂದ್ವ ಗಳ ಆಂತರ್ಯ ಹೆಜ್ಜೆ ಇಡಿಸುತ್ತದೆ ಭ್ರಮೆ ಬಿಡಿಸುತ್ತದೆ ಸಿಕ್ಕದ ದಕ್ಕದ ದೂರದ ಹಾದಿಗೆ !!! ಓಡುತ್ತಾ ಮುಗ್ಗರಿಸುತ್ತ…… ಸಿಗದ ಆಕಾಶಕ್ಕೆ ಛಂಗನೆ ! ಜಿಗಿಸಿ ಲಗ್ಗೆ ಹಾಕುತ್ತದೆ ಕನಸಿನೊಳಗಿನ ಮನಸು ಅಗೋಚರ ಕಾಳ್ಗಿಚ್ಚು ಸುತ್ತಲೂ ಕುಣಿಯುತ್ತದೆ ಎಲ್ಲೋ ಕಾರುತ್ತದೆ ತೆಗಳಿಕೆ, ತಿರಸ್ಕಾರ ನಿಂತಲ್ಲಿ ಕೂತಲ್ಲಿ, ಕವಿತೆಯ ಕಂತೆಯಲ್ಲಿ ಕಾಡುತ್ತದೆ ವಿಕ್ರಮಾದಿತ್ಯನ ಬೇತಾಳವಾಗಿ ನಿರ್ಲಿಪ್ತ ನನ್ನ ದಾರಿಗೆ ಲುಬ್ಧ ಶೂನ್ಯ ಗಮ್ಯಕ್ಕೆ ವಾಸ್ತವದ ಮೌನ ಭವಿಷ್ಯ ಗರ್ಭದಲ್ಲಿ ಬೆಳೆದು ಉತ್ತರಗಳಾಗಬೇಕಿದೆ. ತಟಸ್ಥ ವಾಗದೇ ನಡುನಡುವೆ ಸೆಡ್ಡು ಹೊಡೆದು ನಿಲ್ಲುವ ಪ್ರಶ್ನೆಗಳಿಗೆ !! ಜಗದಪುಟಕೆ ಸದಾ ತೆರೆದಿಟ್ಟ ನನ್ನ ಹೃದಯ ಯಾವ ಅರಿವಿನ ಸ್ಪರ್ಶಕ್ಕೆ ಶಪಿತಶಿಲೆ ಅಹಲ್ಯೆ ಯಾಗಿ ಜೀವತಳೆವುದೋ ? ಯಾವ ಕಾಲದ ಕರೆ ಎಂಥ ಸಂಕಲ್ಪ ಗೀತೆಯ ಯುಗ ಯುಗದ ಧ್ವನಿಯಾಗಿ ಗುಡುಗಿಸುವುದೋ ?

ಕಾವ್ಯಯಾನ Read Post »

ಇತರೆ

ಲಹರಿ

ಅಮ್ಮ,ನಾವೂ ನಾಯಿ ಸಾಕೋಣ ಶೀಲಾ ಭಂಡಾರ್ಕರ್ ನಿನ್ನೆ ರಾತ್ರಿಯಿಂದಲೂ ನಮ್ಮ ಮನೆಯಲ್ಲಿ ಏನೋ ಗುಸುಗುಸು ಪಿಸುಪಿಸು ಕೇಳಿಸುತ್ತಿದೆ. ಇಡೀ ದಿನ ಬಿಡುವಿಲ್ಲದೇ ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದುದರಿಂದ ಅದರೆಡೆಗೆ ಅಷ್ಟಾಗಿ ಗಮನ ಕೊಡುವ ‌ಮನಸ್ಸಾಗಲಿಲ್ಲ ನನಗೆ. ಇವತ್ತು ಬೆಳಗಿನಿಂದಲೂ ಅತ್ಯಂತ ಶಾಂತ ವಾತಾವರಣ. ಯಾವುದೇ ಏರು ಧ್ವನಿಯ ಮಾತಿಲ್ಲ, ಜಗಳ ಕದನಗಳಿಲ್ಲ. ಕಿರುಚಾಟಗಳಿಲ್ಲ. ಮದ್ಯಾಹ್ನದವರೆಗೆ ಆರಾಮೋ ಆರಾಮ್. ಮದ್ಯಾಹ್ನ ಊಟದ ಸಮಯದಲ್ಲೂ ಒಬ್ಬರಿಗೊಬ್ಬರು ಸಹಕರಿಸಿಕೊಂಡು, ತಟ್ಟೆ, ನೀರು ಇಡುವುದರಿಂದ ಹಿಡಿದು ಮಾಡಿದ ಅಡುಗೆಯನ್ನು ಒಂದೊಂದಾಗಿ ಬಡಿಸುವಾಗಲೂ ಅದೇನು ಶಿಸ್ತು, ಅದೆಷ್ಟು ಸಂಯಮ. ತಟ್ಟೆಯಲ್ಲಿ ಬಡಿಸಿದ ಕೂಡಲೇ ಹುಡುಗಿಯರಿಬ್ಬರೂ ನಾವು ಬಾಲ್ಕನಿಗೆ ಹೋಗ್ತೇವೆ ಅಮ್ಮಾ ನೀನೂ ಅಲ್ಲಿಗೇ ಬಾ. ಅದೆಲ್ಲಿಂದ ಇಷ್ಟು ಪ್ರೀತಿ ಸುರೀತಿದೆ!? ಮೇಲೆ ಕೆಳಗೆ ನೋಡಿದೆ. ನಾನಿಷ್ಟು ಹೊತ್ತು ಹೇಳುತ್ತಾ ಇದ್ದ ಗುಸುಗುಸು, ಪಿಸುಪಿಸು, ಜಗಳ ಕದನ, ಶಾಂತಿ ಸಂಯಮ ಎಲ್ಲಾ ನಮ್ಮ ಮನೆಯ ಎರಡು ಹುಡುಗಿಯರ ಬಗ್ಗೆ. ದಿನ ಬೆಳಗಾದಲ್ಲಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಕಾರಣಕ್ಕೆ, ಒಂದಲ್ಲ ಒಂದು ಸಮಯದಲ್ಲಿ ಅರಚುವಿಕೆ, ಕಿರುಚುವಿಕೆ ಮತ್ತೆ ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರೂ ಜೊತೆಯಲ್ಲೇ ಕೂತು ಯಾವುದಾದರೂ ಸಿನೆಮಾ ನೋಡುತ್ತಾ ಜೋರಾಗಿ ಅಥವಾ ಕಿಲಕಿಲನೆ ನಗುತ್ತಾ ಇರುವುದು ನಮ್ಮ ಮನೆಯ ದಿನಚರಿ . ನಾನೂ ನನ್ನ ಊಟದ ತಟ್ಟೆಯೊಂದಿಗೆ ಬಾಲ್ಕನಿಗೆ ಬಂದೆ. ಮತ್ತದೇ ಗುಸುಗುಸು. ಗಮನಿಸದ ಹಾಗೆ ನಾನು ನನ್ನ ಪಾಡಿಗೆ ಊಟ ಮಾಡಲು ತೊಡಗಿದೆ. ಅಮ್ಮಾ.. ಏನೋ ಕೇಳಬೇಕಿತ್ತು. ಏನು? ಅಂದೆ. ನಾವು ಇಷ್ಟರವರೆಗೆ ಏನಾದರೂ ನಮಗೆ ಇಂಥದ್ದು ಬೇಕು ಎಂದು ಕೇಳಿದ್ದೇವಾ? ಇನ್ಯಾರು ಕೇಳಿದ್ದು ನಿಮ್ಮ ಪರವಾಗಿ, ಪಕ್ಕದ ಮನೆಯವರಾ!? ಅಲ್ಲಮ್ಮಾ.. ಬೇಕೇಬೇಕು ಅಂತ ಯಾವತ್ತಾದರೂ ಹಠ ಮಾಡಿದಿವಾ? ಇವತ್ತು ಹಠ ಮಾಡುವ ಯೋಚನೆಯಾ? ಕೇಳಿದೆ. ಹಾಗಂತ ಅಲ್ಲ. ಆದರೆ ಒಂದು ಆಸೆ. ನಿನಗೆ ಏನೂ ತೊಂದರೆ ಕೊಡಲ್ಲ. ನಾವೇ ಕೆಲಸ ಎಲ್ಲಾ ಮಾಡುತ್ತೇವೆ. ಏನು ವಿಷಯ? ವಿಷಯ ಏನು? ಅಂದೆ. ನೀನು ಹೇಳು ಅಂತ ಒಬ್ಬಳು ಇನ್ನೊಬ್ಬಳಿಗೆ. ದೊಡ್ಡವಳು ಅತ್ಯಂತ ಹಸನ್ಮುಖಿಯಾಗಿ ಕೂತಿದ್ದಳು. ಚಿಕ್ಕವಳು ಬಲು ಉತ್ಸಾಹದಿಂದ, ನಾನೇ ಹೇಳ್ತೇನೆ. ಎಂದು ಭಾಷಣ ಶುರು ಮಾಡುವ ಹಾಗೆ ನೆಟ್ಟಗೆ ಕೂತಳು. ನೀನು ಚಿಕ್ಕವಳಿದ್ದಾಗ ನಿಮ್ಮನೆಯಲ್ಲಿ ಒಂದು ಬೆಕ್ಕು ಇತ್ತು ಅಂತ ಹೇಳಿದ್ದೆ ಅಲ್ವಾ? ಅದರ ಹೆಸರು ಮೀನಾಕ್ಷಿ ಅಂತ ಇತ್ತು ಅಂತ ಕೂಡ.. ಅನ್ನುವುದರೊಳಗೆ, ನಾನು ಕೇಳಿದೆ, ಈಗ ಏನು ಬೆಕ್ಕು ತರ್ತೀರಾ? ಅಲ್ಲ. ನಾಯಿ. ಎಲಾ!! ಮತ್ತೆ ನಮ್ಮ ಮನೆಯ ಮೀನಾಕ್ಷಿ ವಿಷಯ ಯಾಕೆ ಬಂತು? ನಿಂಗೂ ಪ್ರಾಣಿಗಳನ್ನು ಸಾಕಿ ಗೊತ್ತಲ್ವಾ? ಮರೆತಿದ್ರೆ ಅಂತ ನೆನಪಿಸಿದ್ದು. ಅಂದಳು. ನಾಯಿ ಸಾಕಿದ್ರೆ ಎಷ್ಟು ಕೆಲಸ ಇದೆ ಗೊತ್ತಾ? ಅಂದೆ. ನಾವೇ ಮಾಡ್ತಿವಿ, ನಾವೇ ಮಾಡ್ತೀವಿ. ನಾನು ದಿನಾ ವಾಕಿಂಗ್ ಕರಕೊಂಡು ಹೋಗ್ತಿನಿ ಅಂದಳು ಚಿಕ್ಕವಳು. ಇಷ್ಟು ಹೊತ್ತೂ ಮಾತಾಡಿದ್ದೆಲ್ಲಾ ಚಿಕ್ಕವಳೆ. ನನ್ನ ಫ್ರೆಂಡ್ ಸಿಂಚನಾ ಹತ್ರನೂ ನಾಯಿ ಇದೆ. ಅವಳೇ ವಾಕ್ ಕರಕೊಂಡು ಹೋಗ್ತಾಳೆ. ನಾನೂ ಅವಳ ಜತೆ ಹೋಗ್ತೀನಿ. ನಾವಿಬ್ರೂ ಪಾಠದ ಬಗ್ಗೆ ಚರ್ಚೆ ಮಾಡಬಹುದು. ಯಾಕಂದ್ರೆ ಅವಳೂ ಕಾಮರ್ಸ್. ನಿಂಗೆ ಖುಷಿ ಆಗ್ತದೆ ಅಲ್ವಾ! ಮತ್ತೆ ನನಗೂ ವ್ಯಾಯಾಮ ಆಗುತ್ತೆ. ಬಡಬಡ ಹೇಳಿ ನಿಲ್ಲಿಸಿದಳು. ನೋಡಮ್ಮ, ಎಷ್ಟೆಲ್ಲಾ ಒಳ್ಳೆಯದಾಗುತ್ತೆ ಅದರಿಂದ. ದೊಡ್ಡವಳು ಬಾಯಿ ಬಿಟ್ಟಳು. ಮತ್ತೆ.. ಚಿಕ್ಕವಳದು ಶುರುವಾಯಿತು. ಅದರ ಎಲ್ಲಾ ಕೆಲಸ ನಾವೇ ಮಾಡ್ತೇವೆ. ಒಂದು ಎರಡು ಎಲ್ಲಾ ನಾವೇ ಕ್ಲೀನ್ ಮಾಡ್ತೇವೆ. ಹೋ… ನಾನು ಸ್ವಲ್ಪ ಎತ್ತರದ ದನಿಯಲ್ಲಿ , ಹೌದೌದು ಮಾಡೋ ಸಣ್ಣ ಪುಟ್ಟ ಕೆಲಸಕ್ಕೂ ದಿನಾ ಹೇಳಬೇಕು ನಿಮಗೆ. ಇನ್ನು ಇದೂ ನನ್ನ ತಲೆಗೆ ಬರುತ್ತೆ. ಚಿಕ್ಕವಳಿಗೆ ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕೋ ಕೆಲಸ. ಹೇಗೆ ಹಾಕೋದು ಅಂತ ಹೇಳಿ ಕೊಡ್ತೀನಿ ಬಾ ಅಂತ ಕರೆದಾಗ ಕಿವಿಯೊಳಗೆ ವಯರ್ ಸಿಗಿಸಿಕೊಂಡು ಬಂದು ನಿಂತಳು. ಅದೆಷ್ಟು ಕೇಳಿಸಿತೋ ಅವಳಿಗೇ ಗೊತ್ತು. ವಯರ್ ಕಿತ್ತು ಎಳೆದೆ, ನೀನು ಹೇಳು. ನಂಗೆ ಕೇಳಿಸುತ್ತೆ ಅಂತ ಮತ್ತೆ ಸಿಕ್ಕಿಸಿಕೊಂಡು ಅದರ ಜೊತೆಗೆ ಹಾಡುತ್ತಾ ನಿಂತಳು. ಗೊತ್ತಾಯ್ತಾ? ಅಂತ ಸನ್ನೆ ಮಾಡಿದ್ರೆ. ಗೊತ್ತಾಯ್ತೂ ಅಂತ ಕಿರುಚಿದಳು. ಯಾಕಂದ್ರೆ ಜೋರಾಗಿ ಹಾಡು ಹಾಕಿದ್ದಳಲ್ಲ ಕಿವಿಯೊಳಗೆ. ಸರಿಯಾದ ಸಮಯಕ್ಕೆ ವಾಷಿಂಗ್ ಕೆಲಸ ಆಗ್ತಾ ಇದೆ. ಖುಷಿಯಾಯ್ತು. ಆದರೆ.. ಬಟ್ಟೆ ಏನೋ ಒಂಥರಾ ವಾಸನೆ. ಘಮ್ ಅನ್ನುತಿಲ್ಲ. ಅವಳನ್ನು ಕರೆದು ಕೇಳಿದೆ. ಕಂಫರ್ಟ್ ಹಾಕ್ತಿದ್ದಿಯಲ್ವಾ? ಇಲ್ಲ.. ಅದೆಲ್ಲಾ ಹಾಕಬೇಕಾ? ಕೇಳ್ತಾಳೆ. ಅಯ್ಯೋ ಸೋಪಿನ ಪುಡಿ ಜೊತೆ ಕಂಫರ್ಟ್ ಕೂಡ ಹಾಕಬೇಕು ಅಂದಿಲ್ವಾ ಅಂದೆ. ಆಟೋಮೆಟಿಕ್ ಅಲ್ವಾ ಅದೆಲ್ಲಾ ನಾವು ಹಾಕ್ಕೋಬೇಕಾ? ಬರೀ ಸ್ವಿಚ್ ಮಾತ್ರ ನಾವು ಹಾಕೋದಲ್ವಾ? ಮತ್ತೆಲ್ಲಾ ಅದೇ ಮಾಡ್ಕೊಳ್ಳುತ್ತೆ ಅಂತ ತಾನೇ ಆಟೋಮೆಟಿಕ್ ಅಂದ್ರೆ. ತಲೆ ಚಚ್ಚಿಕೊಂಡೆ. ಇಂಥವಳು ನಾಯಿ ತಂದ್ರೆ ಒಂದು ಎರಡು ಮೂರು ಎಲ್ಲಾ ಕೆಲಸನೂ ತಾನು ಮಾಡುತ್ತಾಳಂತೆ. ಸ್ವಲ್ಪ ವ್ಯಂಗ್ಯವಾಗಿ ನೆನಪಿಸಿದೆ. ಆಗ ಗೊತ್ತಿರಲಿಲ್ಲ. ಈಗ ಸರಿ ಮಾಡ್ತಿದಿನಿ ಅಲ್ವಾ? ಅದೆಲ್ಲಾ ಕೆಲಸ ಮಾಡಿದ್ರೆ ನಾಳೆ ನಾವು ದೊಡ್ಡವರಾಗಿ ಮದುವೆ ಆಗಿ ಮಕ್ಕಳಾದಾಗ, ಮಕ್ಕಳ ಕೆಲಸ ಮಾಡಲು ಸುಲಭ ಆಗುತ್ತೆ. ಆಗ ಕಷ್ಟ ಅನಿಸಲ್ಲ. ಅಲ್ವಾ ಅಂತ ದೊಡ್ಡವಳನ್ನು ನೋಡಿದಳು. ಅವಳು ಹಲ್ಲು ಕಚ್ಚಿ ಹಿಡಿದು, ನಿಂಗೆ ಎಷ್ಟು ಮಾತಾಡಕ್ಕೆ ಹೇಳಿದ್ನೋ ಅಷ್ಟೇ ಮಾತಾಡು. ಜಾಸ್ತಿ ಬೇಡ. ಅಂದಳು. ಚಿಕ್ಕವಳು ತಲೆ ತಗ್ಗಿಸಿ ಊಟ ಮಾಡಲು ತೊಡಗಿದಳು. ದುಡ್ಡು ಎಷ್ಟು ಬೇಕು ಅದಕ್ಕೆ? ಆಮೇಲೆ ಖರ್ಚು ಎಷ್ಟಿದೆ ಗೊತ್ತಾ ಅದರದ್ದು? ಅಂದೆ. ಚಿಕ್ಕವಳು ಏನಂತಾಳೆ ಗೊತ್ತಾ.. ನಾನು ಸೈನ್ಸ್ ತಗೊಂಡಿದ್ರೆ ಟ್ಯೂಷನ್, ಪೆಟ್ರೋಲ್ ಅಂತ ಎಷ್ಟೊಂದು ದುಡ್ಡು ಖರ್ಚಾಗ್ತಿರಲಿಲ್ವಾ? ಅದು ಉಳಿದಿಲ್ವಾ? ಹಾಗಾದ್ರೆ ನಾಯಿ ತರೊ ಯೋಚನೆ ನೀನು ಕಾಮರ್ಸ್ ತಗೊಳ್ತಿನಿ ಅನ್ನುವಾಗಲೇ ಇತ್ತಾ? ಕೇಳಿದೆ. ಇಲ್ಲಾ ನಿನ್ನೆ ಶುರುವಾಯ್ತು. ತುಂಬಾ ಆಸೆ ಮಾಡುತ್ತಮ್ಮ ಅದು. ನಿಂಗೂ, ಅಪ್ಪನಿಗೂ ಎಷ್ಟು ಖುಷಿಯಾಗುತ್ತೆ ಗೊತ್ತಾ ಆಮೇಲೆ. ದೊಡ್ಡವಳು ಕೂಡಲೇ ಕಣ್ಣು ಇಷ್ಟು ದೊಡ್ಡದು ಮಾಡಿ, ಅವಳನ್ನು ಕಣ್ಣಲ್ಲೇ ಕಿರುಚಿ ಗದರಿಸಿದಳು. ಆಮೇಲೆ ಮೆಲ್ಲ ಅತ್ಯಂತ ಮೃದುವಾಗಿ ತಂಗಿಗೆ, “ನೀನಿನ್ನು ಹೋಗು. ಇಷ್ಟೇ ಇದ್ದಿದ್ದು ನಿಂಗೆ ಮಾತಾಡ್ಲಿಕ್ಕೆ.” ಅವಳು ಎದ್ದು ಹೋಗುವಾಗ ತಿರುಗಿ ನೋಡಿ. ಹೆಂಗೆ? ನಾನಲ್ವಾ ಒಪ್ಪಿಸಿದ್ದು. ಅಂದಳು. ಯೇಯ್ ಬಾ.. ಇಲ್ಲಿ. ನಾನು ಯಾವಾಗ ಒಪ್ಪಿದೆ? ನಾನಿನ್ನೂ ಯೋಚನೆನೂ ಮಾಡಿಲ್ಲ ಅಂದೆ. ಒಪ್ಪಿಲ್ವಾ? ಛೆ! ಇಷ್ಟು ಹೊತ್ತು ಎಷ್ಟು ಕಷ್ಟ ಪಟ್ಟು ಏನೇನೋ ಹೇಳಿದೆ. ಒಪ್ಪಲ್ವಾ!?? ಅಂದಳು. ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿದೆ. ದೊಡ್ಡವಳನ್ನು ನೋಡಿದರೆ ಅವಳೂ ಅತ್ಯಂತ ದೀನಳಾಗಿ ನೋಡುತಿದ್ದಾಳೆ. ಪಾಪ ಅನಿಸಿತು. ಆಯ್ತು ಅಂದಿದಿನಿ. ಹೊಸದರಲ್ಲಿ ಅಗಸ ಗೋಣಿ ಒಗೆದಂತೆ, ಆಮೇಲೆ ನನ್ನ ತಲೆಗೆ ಕಟ್ಟುತ್ತಾರೆ. ನನ್ನ ಪರವಾಗಿ ಸಾಕ್ಷಿಗೆ ಬೇಕಾಗಬಹುದು ಅಂತ ನಿಮಗೆ ತಿಳಿಸಿದೆ. ನೋಡೋಣ ಯಾರೆಲ್ಲಾ ಬರ್ತೀರಿ ಅಂತ. **********************************

ಲಹರಿ Read Post »

ಇತರೆ

ನೆನಪುಗಳು

ಹಲಸಿನ ಹಪ್ಪಳ ಸಂಧ್ಯಾಶೆಣೈ ಇವತ್ತು ನಮ್ಮ ಕೆಳಗಿನ ಮನೆಯವರು ಒಂದು ಸಣ್ಣ ತುಂಡು ಹಲಸಿನ ಗುಜ್ಜೆ ಕೊಟ್ಟಿದ್ದರು ..ಅದನ್ನು ಅಕ್ಕಿಯ ಆಳಾವಣದಲ್ಲಿ ಹಾಕಿ ಫ್ರೈ ಮಾಡಿದೆ ..ಆಗ ನನಗೆ ಸೋಮೇಶ್ವರದ ದಿನಗಳು ನೆನಪಾದವು.. ಹೀಗೆ ಬೇಸಿಗೆ ದಿನಗಳಲ್ಲಿ ಮನೆಗೆ ಆಗಾಗ ಹಲಸಿನ ಕಾಯಿ ಬರುತ್ತಿತ್ತು..ಉಪಿಗೆ ಸೋಳೆ ಹಾಕಲು.. ಹಪ್ಪಳ ಮಾಡಲು ಎಂದು.. ಆಗೆಲ್ಲ ಅಮ್ಮ ಹಲಸಿನ ಕಾಯಿಯ ವೈವಿಧ್ಯಮಯ ಪಲ್ಯಗಳನ್ನು ಮಾಡುತ್ತಿದ್ದರು.. ಸೋಳೆ ಹಾಕಲು ತಂದ ಹಲಸಿನ ಕಾಯಿಯ ಉಪಕ್ಕರಿ .ಅದರ ಒಟ್ಟಿಗೆ ಸೌತೆ ಕಾಯಿ ಹಾಕಿ ಮಾಡಿದ ಗುಜ್ಜ.. ಹಲಸಿನ ಕಾಯಿ ಮತ್ತೆ ಧಾನ್ಯ ಹಾಕಿ ಕೊದ್ದೆಲು.. ಎಳೇಕಡಗಿ ಸಣ್ಣ ಸಣ್ಣ ಬೀಜ ಆಗುತ್ತಾ ಇರುವಂತಹ ಹಲಸಿನ ಕಾಯಿಯಿಂದ ಪೋಡಿ.. ಒಂದೇ ಎರಡೇ .. ಹಣ್ಣು ಸಿಕ್ಕಿದರೆ ದೋಸೆ ..ಇಡ್ಲಿ.. ಪಾತ್ತೋಳಿ. ಪಾಯಸ.. ಮೂಳಿಕ ಎಂದು ಎಷ್ಟೆಲ್ಲ ಬಗೆ ಮಾಡುತ್ತಿದ್ದರು.. ಈಗ ನೋಡಿದ್ರೆ ಅನ್ನಿಸ್ತಾ ಇದೆ ಪಾಪ! ನಮ್ಮ ಬಾಯಿ ರುಚಿಗಾಗಿ ಎಷ್ಟೆಲ್ಲ ಕಷ್ಟಕರ ಕೆಲಸವನ್ನು ಮಾಡುತ್ತಿದ್ದರು ..ನಾವಂತೂ ಬಕಾಸುರರು ಏನು ಮಾಡಿಟ್ಟರು ಸ್ವಾಹ ಎನ್ನುತ್ತಿದ್ದೆವು. ನಾವು ಬೆಳಿಗ್ಗೆ ಎದ್ದು ಬರುವಾಗಲೇ ಅಜ್ಜಿ ಹಲಸಿನ ಹಣ್ಣನ್ನು ಕೊಯ್ದು ಗೋಣಿಯ ಮೇಲೆ ಶೇಡು ಶೇಡು ಮಾಡಿ ಇಟ್ಟಿರುತ್ತಿದ್ದರು .ನಾವು ಎದ್ದವರೇ ಬೇಕಾದಷ್ಟು ತಿಂದು ಸ್ವಲ್ಪ ಹಣ್ಣನ್ನು ಬಿಡಿಸಿ ಸೊಳೆ ಬೇರೆ ಬೀಜ ಬೇರೆ ಮಾಡಿ ಬಿಡುತ್ತಿದ್ದೆವು . ಅಮ್ಮ ಹೇಳುತ್ತಿದ್ದರು ಹಸಿದ ಹಲಸು ಉ೦ಡ ಮಾವು ಎಂದು.. ಅಂದ್ರೆ ಹಸಿದಿರುವಾಗ ಹಲಸಿನ ಹಣ್ಣು ತಿನ್ನಬೇಕು ಊಟ ಆದ ಮೇಲೆ ಮಾವಿನ ಹಣ್ಣು ತಿನ್ನಬೇಕು ಎಂದು. ಇಷ್ಟು ಮಾತ್ರವೇ ಆ ದಿನಗಳಲ್ಲಿ ನಮ್ಮ ಬೇಸಿಗೆ ರಜೆಯಲ್ಲಿ ಹಲಸಿನ ಹಪ್ಪಳದ ಫ್ಯಾಕ್ಟರಿಯೇ ನಮ್ಮಲ್ಲಿ ನಡೆಯುತ್ತಿತ್ತು. ರಾತ್ರಿ ದೊಡ್ಡ ದೊಡ್ಡ ಹಲಸಿನ ಕಾಯಿಗಳನ್ನು ಕರ್ಕು ಎಂಬ ಹೆಸರಿನ ಹೆಂಗಸು ತಲೆಯ ಮೇಲೆ ಹೊತ್ತು ತಂದು ನಮ್ಮ ಮನೆಯಲ್ಲಿ ಹಾಕಿ ಅದನ್ನು ಕೊಡಲಿಯಿಂದ ನಾಲ್ಕು ನಾಲ್ಕು ಭಾಗ ಮಾಡಿ ಹಾಕಿ ಹೋಗುತ್ತಿದ್ದಳು.. ಈಗ ಎಣಿಸಿದರೆ ಅವಳ ಆ ಶಕ್ತಿ ವಿಸ್ಮಯಕಾರಿ ಅನ್ನಿಸುತ್ತಾ ಇದೆ. ಒಂದಲ್ಲ ಎರಡಲ್ಲ ಕೆಲವೊಮ್ಮೆ ಮೂರು ನಾಲ್ಕು ಹಲಸಿನ ಕಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡು ಎರಡು ಮೂರು ಮೈಲು ನಡೆದುಕೊಂಡು ಬರುತ್ತಿದ್ದಳು.. ಪಾಪ ಅದನ್ನು ನಮ್ಮಲ್ಲಿ ಹಾಕಿ ಒಡೆದು ಕೊಟ್ಟು ಅಮ್ಮ ಕೊಟ್ಟ ಕಾಫಿಯನ್ನು ಕುಡಿದು ಹೋಗುತ್ತಿದ್ದಳು. ಆಮೇಲೆ ಅಜ್ಜಿಯಾಗಿ ಕೆಲಸದವರಾಗಲಿ ಅದನ್ನು ಶಾಡ್ ಶಾಡ್ ಮಾಡಿ ತುಂಡು ಮಾಡಿ ಹಾಕುತ್ತಿದ್ದರು. ನಾವೆಲ್ಲರೂ. ತುಳಸಿ ಕಟ್ಟೆಯ ಎದುರಿನ ದಂಡೆ ಮೇಲೆ ಕುಳಿತುಕೊಂಡು ಆ ಹಲಸಿನಕಾಯಿಯನ್ನು ಬಿಡಿಸುತ್ತಿದ್ದೆವು. ಆಗ ಅಮ್ಮನಾಗಲೀ ಅಕ್ಕನಾಗಲೀ ಏನಾದರೂ ಕಥೆಯನ್ನು ನಮಗೆ ಹೇಳುತ್ತಿದ್ದರು.. ಅದನ್ನು ಕೇಳುತ್ತಾ ಕೇಳುತ್ತಾ ಹಲಸಿನ ಕಾಯಿ ಬಿಡಿಸಿದ್ದೇ ನಮಗೆ ತಿಳಿಯುತ್ತಿರಲಿಲ್ಲ.. ಬೆಳಿಗ್ಗೆ ನಾವು ಏಳುವಾಗ ಕಾಫಿ ತಿ೦ಡಿಯಾದ ಮೇಲೆ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಲಸಿನ ಕಾಯಿ ಹದವಾಗಿ ಬೆಂದು ತಯಾರಾಗುತ್ತಿತ್ತು.. ಅದನ್ನು ಒರಳು ಕಲ್ಲಿನಲ್ಲಿ ಹಾಕಿ ಮರದ ಗುದ್ದಲಿಯಿಂದ ಗುದ್ಧಿ ಗುದ್ಧಿ ನಮ್ಮ ಕೆಲಸದ ಹೆಂಗಸು ಹಿಟ್ಟು ಮಾಡಿ ಕೊಡುತ್ತಿದ್ದರು.. ಕೆಲವೊಮ್ಮೆ ಅಜ್ಜಿಯೇ ಹಿಟ್ಟು ಮಾಡುತ್ತಿದ್ದರು ..ಅದರೊಂದಿಗೆ ಹದವಾಗಿ ಗುದ್ದಿಟ್ಟ ಮೆಣಸು.. ಕೊತ್ತಂಬರಿ ..ಉಪ್ಪು ..ಹಾಕಿ ಹದವಾಗಿ ಹಿಟ್ಟು ತಯಾರಾಗುತ್ತಿತ್ತು.. ತಯಾರಾದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಹತ್ತು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಕೂತು ಹಲಸಿನ ಹಪ್ಪಳ ಮಾಡುವ ಕಾರ್ಯಾಗಾರವನ್ನು ಶುರು ಮಾಡುತ್ತಿದ್ದೆವು ..ಹೆಚ್ಚಾಗಿ ಅಜ್ಜಿ ಅಥವಾ ಅಮ್ಮ ಉರುಟುರುಟು ಉಂಡೆ ಕಟ್ಟಿ ಇಡುತ್ತಿದ್ದರು.. ಅದನ್ನು ನಾವು ಮಕ್ಕಳು ಎರಡು ಪ್ಲಾಸ್ಟಿಕ್ಕಿನ ನಡುವೆ ಇಟ್ಟು ಒತ್ತುತ್ತಿದ್ದೆವು ಅದನ್ನು ಅಮ್ಮನಾಗಲೀ ಅಜ್ಜಿಯಾಗಲೀ ತಟ್ಟಿ ತಟ್ಟಿ ದೊಡ್ಡ ಹಪ್ಪಳವನ್ನಾಗಿ ಮಾಡುತ್ತಿದ್ದರೆ ಅದನ್ನು ನಾವು ಯಾರಾದರೊಬ್ಬರು ಚಾಪೆಗೆ ಹಚ್ಚುತ್ತಿದ್ದೆವು.. ಚಾಪೆ ತುಂಬಿದ ಮೇಲೆ ಹೊರಗೆ ಅಂಗಳದಲ್ಲಿ ಚಾಪೆಯನ್ನು ತೆಗೆದುಕೊಂಡು ಹೋಗಿ ಹಾಕುತ್ತಿದ್ದೆವು ..ಆ ಕೆಲಸ ಭಹುಷ್ಯ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು.. ಹಪ್ಪಳ ತಟ್ಟುತ್ತಾ ತಟ್ಟುತ್ತಾ ನಾವು ಅದೆಷ್ಟು ಹಿಟ್ಟನ್ನು ಎಣ್ಣೆಯಲ್ಲಿ ಮುಳುಗಿಸಿ ಮುಳುಗಿಸಿ ತಿನ್ನುತ್ತಿದ್ದೆವು ಲೆಕ್ಕವೇ ಇಲ್ಲ .ಆ ಹಿಟ್ಟು ಎಷ್ಟು ರುಚಿಯಾಗಿರುತ್ತದೆ ಎಂದರೆ ನಾವೆಲ್ಲರೂ ದೊಡ್ಡವರಾದ ಮೇಲೆ ಕೇವಲ ಹಿಟ್ಟು ತಿನ್ನುವುದು ಗೋಸ್ಕರ ಹಲಸಿನ ಹಪ್ಪಳದ ಹಿಟ್ಟನ್ನು ಅಮ್ಮ ಮಾಡುತ್ತಿದ್ದರು.ನಮ್ಮ ಭಾಗ್ಯಕ್ಕೆ ಅಮ್ಮನಿಗೂ ಇಂಥದ್ದೆಲ್ಲ ತಿನ್ನುವುದೆಂದರೆ ತುಂಬಾ ಇಷ್ಟ ..ಹಾಗಾಗಿ ಅಮ್ಮ ಇದನ್ನೆಲ್ಲ ಬಹಳ ಉತ್ಸಾಹದಿಂದಲೇ ಮಾಡುತ್ತಿದ್ದರು .ಅಜ್ಜಿಗೆ ಅದನ್ನೆಲ್ಲ ತಿನ್ನುವ ಆಸಕ್ತಿ ಇಲ್ಲದಿದ್ದರೂ ನಮ್ಮೆಲ್ಲರ ಸಂತೋಷಕ್ಕಾಗಿ ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದರು . ಹಪ್ಪಳ ಹೊರಗೆ ಹಾಕಿದ ಮೇಲೆ ಇರುವುದು ಇನ್ನೂ ದೊಡ್ಡ ಕೆಲಸ .ಅದೇನೆಂದರೆ ಹಪ್ಪಳವನ್ನು ಕಾಗೆ ..ನಾಯಿ ತೆಗೆದುಕೊಂಡು ಹೋಗದಂತೆ ಕಾಯುವುದು. ಅದಕ್ಕಂತೂ ನಾವ್ಯಾರೂ ಸುತಾರಾಂ ಒಪ್ಪುತ್ತಿರಲಿಲ್ಲ .ಭಯಂಕರ ಬೋರಿಂಗ್ ಕೆಲಸ ಅದು.ಇದಕ್ಕಿಂತ ಈಗ ಲಾಕ್ ಡಾನ್ ಅವಧಿಯಲ್ಲಿ ಮನೆಯಲ್ಲಿ ಇರುವುದೇ ಎಷ್ಟೋ ಉತ್ತಮ.. ನಾವಂತೂ ಮಕ್ಕಳು.. ಆಡುವುದರಲ್ಲೇ ತಲೆ ನಮಗೆ ..ಎಷ್ಟು ಹಪ್ಪಳ ಕಾಯುತ್ತೇವೆ ..ಕೆಲವೊಮ್ಮೆ ಅಲ್ಲಿ ಜಗಲಿಯ ಮೇಲೆ ಆಡಿಕೊಂಡು ಹಪ್ಪಳದ ಕಡೆ ನೋಡುತ್ತಾ ಇರುತ್ತಿದ್ದೆವು.. ಆದರೂ ನಮ್ಮ ಕಣ್ತಪ್ಪಿಸಿ ಕಾಗೆ ಬಂದೇ ಬಿಡುತ್ತಿತ್ತು.. ಹಾಗಾಗಿ ಮಧ್ಯಾಹ್ನ ನಂತರ ಹೆಚ್ಚಾಗಿ ಅಜ್ಜಿ ಒಂದು ಚಂದಮಾಮವನ್ನೋ ಮಯುರವನ್ನೋ ಹಿಡಿದುಕೊಂಡು ಓದುತ್ತ ಒಂದು ಉದ್ದಕೋಲನ್ನು ಹಿಡಿದುಕೊಂಡು ಕಾಗೆಯನ್ನು ಓಡಿಸುತ್ತಿದ್ದದ್ದು ಇವತ್ತಿಗೂ ಕಣ್ಣೆದುರು ಕಾಣಿಸುತ್ತಿದೆ .. ಇಷ್ಟೇ ಮಾತ್ರವಲ್ಲ ಅರ್ಧ ಒಣಗಿದ ಹಲಸಿನ ಹಪ್ಪಳವನ್ನು ತೆಂಗಿನೆಣ್ಣೆಯಲ್ಲಿ ಮುಳುಗಿಸಿ ತಿನ್ನುವ ಇನ್ನೊಂದು ರುಚಿಯೂ ವರ್ಣಿಸಲಸಾಧ್ಯ. ಹಾಗಾಗಿ ಕೆಲವೊಮ್ಮೆ ನಾವೆಲ್ಲರೂ ಸೇರಿ ಅರ್ಧ ಚಾಪೆಯನ್ನೇ ಖಾಲಿ ಮಾಡಿ ಬಿಡುತ್ತಿದ್ದೆವು. ಅಮ್ಮ ಸುಳ್ಳು ಸುಳ್ಳೇ ಬೈಯುತ್ತಿದ್ದರು. ಯಾಕೆಂದರೆ ಅವರಿಗೂ ಅಂಥದ್ದೆಲ್ಲ ತಿನ್ನುವುದೆಂದರೆ ಬಹಳ ಇಷ್ಟ. ಹಾಗಾಗಿ ಅವರ ಬೈಗಳನು ನಾವೇನು ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ ..ನಮ್ಮ ಕೆಲಸ ನಾವು ಮಾಡುತ್ತಾನೆ ಹೋಗ್ತಿದ್ದೆವು. ಎರಡು ಮೂರು ದಿನ ಒಣಗಿ ಬಂದ ಹಪ್ಪಳ ಇಪ್ಪತ್ತೈದು ಇಪ್ಪತ್ತೈದು ಲೆಕ್ಕ ಮಾಡಿ ಕೊಡುವುದೇ ನಮ್ಮ ಸಂಭ್ರಮದ ಕೆಲಸ.. ಆಗ ಪ್ಲಾಸ್ಟಿಕ್ ಯುಗ ಅಲ್ಲದ ಕಾರಣ ಹಪ್ಪಳವನ್ನು ಬಾಳೆನಾರಿನ ಹಗ್ಗದಲ್ಲಿ ಚೆಂದವಾಗಿ ಕಟ್ಟಿ ಪುನಃ ಮತ್ತೊಂದು ದಿನ ಬಿಸಿಲಿನಲ್ಲಿಟ್ಟು ಆಮೇಲೆ ಡಬ್ಬಿಯಲ್ಲಿ ಹಾಕಿಟ್ಟರೆ ಹಪ್ಪಳದ ಮಹಾಕಾರ್ಯ ಮುಗಿದಂತೆ . ಮತ್ತೆ ಮಳೆಗಾಲದಲ್ಲಿ ನಮ್ಮೂರ ಎಡೆಬಿಡದ ಮಳೆಯಲ್ಲಿ ನಮಗೆ ಶಾಲೆಗೆ ರಜೆ ಇದ್ದೇ ಇರುತ್ತಿತ್ತು.. ಆ ಸಮಯದಲ್ಲಿ ಕೆಂಡದ ಮೇಲೆ ಸುಟ್ಟು ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದು ತಿನ್ನುವ ಈ ಹಪ್ಪಳದ ರುಚಿ ಇದೆಯಲ್ಲ ಅದು ಭಹುಷ್ಯ ಅಮೃತ ಸಮಾನ ನಿಮ್ಮೆಲ್ಲರಿಗೂ ಇದನ್ನು ಓದುವಾಗ ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ ಮತ್ತೆ ತೆಂಗಿನಕಾಯಿ ಚೂರು ತಿಂದ ಅನುಭವ ಆಗುತ್ತಾ ಇದೆಯಲ್ಲವೇ ********

ನೆನಪುಗಳು Read Post »

ಅನುವಾದ

ಅನುವಾದ ಸಂಗಾತಿ

ಪ್ರಭುವೆ ಕನ್ನಡ ಕವಿತೆ:ನಂದಿನಿ ವಿಶ್ವನಾಥ ಹೆದ್ದುರ್ಗ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಂದಿನಿ ವಿಶ್ವನಾಥ ಹೆದ್ದುರ್ಗ ನಾಗರೇಖಾ ಗಾಂವಕರ್ ಪ್ರಭುವೆ ಹಚ್ಚಿಕೊಂಡ ನಂಬಿಕೆಯೊಂದು ಕಾಯುವ ಬಯಕೆ ಹುಟ್ಟಿಸುತ್ತದೆ ಪ್ರಭುವೇ. ಕಾಲ ಭಾವಗಳ ಮಾಗಿಸಬಹುದು ಬಾಗಬಹುದು ಬಲು ಗಟ್ಟಿ ಎನಿಸಿದ್ದ ಒಳಗಿನ ಒಣ ಅಹಮ್ಮು. ಬರಡು ಎದೆಯಲ್ಲೂ ಕಳೆಹೂವುಗಳು ಅರಳಿ ಅಸಡ್ಡೆಯಲ್ಲಿ ಬಿಗಿದ ಈ ತುರುಬಿಗಿಡುವ ಆಸೆಯುದಿಸಬಹುದು. ಭೂತದ ಬೇತಾಳ ಈ ಹೆಗಲಿಂದ ಜಿಗಿದು ನೇತಾಡಿದ ಮರದಡಿಯಲ್ಲೇ ಕುಳಿತು ಹೊಸ ಮಾದರಿ ಕನಸ ಹೆಣೆಯಬಹುದು. ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ ಕುರಿತು ತಡವಾಗಿಯಾದರೂ ಅರಿವಾಗಬಹುದು. ನಾಳಿನ ಸೂರ್ಯನೆದೆಯಲ್ಲಿ ಬಾಳಿನ‌ ಬಣ್ಣ ತುಳುಕಾಡಬಹುದು. ಹಣೆಯ ಹಳೆ ಬರಹ ಬರೆದವ ಬದಲಿಸಿ ಶುಭವಾಗಲಿ ಎಂದಾಗ ಹೊಸದಾಗಿ ಸಪ್ತಪದಿ ಬಯಕೆ ಮೂಡಬಹುದು.. ಅತಿಯೆಂದು ಹಂಗಿಸದಿರು ಪ್ರಭುವೇ… ಮರಳುಗಾಡಿಗೂ ಆಗಾಗ ಅತಿವೃಷ್ಟಿ ಯೋಗವಿದೆ. ನಡುದಾರಿಯಲ್ಲೂ ಬೀಜವೊಂದು ಕುಡಿಯೊಡೆದ ಕುರುಹಿದೆ. ಎದೆ ಕಿಟಿಕಿಯ ಗಾಜು ಒರೆಸಿಡುತ್ತೇನೆ ನಾನೇ ಬೆಳಕು ಬಾಗಿ ಒಳಗಿಳಿಯಲು ತುಸುವಾದರೂ ಸಹಕರಿಸು ಪ್ರಭುವೆ. ******** Oh! My lord! A sincere faith evokes the desire to wait, My lord. As the time rolls on emotions can be ripen The self esteem inside supposed to be hard can be bent down Blossom may appear on my dried up bosom And evoke the desire to wear it on my gnarled knot. Jumped off this shoulder And sitting on the same tree, clinged earlier the haunting past may braid new dreams. Lately may be awared that the whole world is within a handful of soil All colours of my future life may spill out In tomorrow’s sun rays. When the intender changes my destiny written earlier and Wishes me good luck, Then it may arise the desire to cover saptapadi(seven steps) once again in life “Its too much” Don’t hurl an abuse like this, my lord. Even in the desert there is a possibility of a flood. In the middle of the road,there is a sign of sprouted seed. Myself will clean the window panes of my heart, My Lord, Please… assist.. the light to bow down and enter into it. **********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಸ್ಮಿತಾ ಅಮೃತರಾಜ್ ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ_ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ? ಮಿತಿ ಮೀರಿ ಬೆಳೆದು ಗೆರೆಯೇ ಗೊಡೆಯಾದರೆ ನನಗೆ ನೀನು,ನಿನಗೆ ನಾನು ಕಾಣಿಸುವುದಾದರೂ ಎಂತು? ಗೆರೆಯ ಮೊನಚು ಈಗ ಎದೆಯವರೆಗೂ ಬಂದು ತಾಕಿ ಭಯ ಹುಟ್ಟಿಸುತ್ತಿದೆ. ಗೆರೆಗಳು ಒಂದನ್ನೊಂದು ಕೂಡಿಸುತ್ತದೆ. ಕೆಲವೊಮ್ಮೆ ಗುಣಿಸಿ,ಭಾಗಿಸಿ,ಕಳೆದು ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ ಕೂಡ… ಇಲ್ಲಿ ತೀರಾ ನಿಗಾ ಬೇಕು. ಬಿಡು, ಹೇಗೋ ಹುಟ್ಟಿಕೊಂಡಿದೆ ಸಧ್ಯ ಕಂಡಿತಲ್ಲ! ಬಿಗುಮಾನ ಬಿಟ್ಟು ಬಾ ಬೇಗ ಅಳಿಸಿ ಬಿಡೋಣ. ಆ ನಡುವಲ್ಲಿ ಕಂಡೂ ಕಾಣದಂತಿರುವ ಕನ್ನಡಿಯೊಂದ ತೂಗಿ ಬಿಡೋಣ. ********

ಕಾವ್ಯಯಾನ Read Post »

You cannot copy content of this page

Scroll to Top