ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಬಿಂದುವೊಂದು ಸರಳ ರೇಖೆಯಮುಂದೆ ಸಾಗುತ್ತಿದೆ ಎಂದರೇನರ್ಥ ಲೋಕದೊಳಗೆ ಸಕಲವೂ ಸನ್ಮಾರ್ಗ ನೀಗುತ್ತಿದೆ ಎಂದರೇನರ್ಥ ಲೋಭ,ಮೋಹಾದಿಗಳೊಳಗೆ ಬಂಧಿಯಾಗುವೆವು ಈ ಭವದೊಳಗೆ ಬಾಳಿನರ್ಥವ ಸಾರಿದವನ ತ್ಯಾಗವೇ ಸಂಶಯವಾಗುತ್ತಿದೆ ಎಂದರೇನರ್ಥ ಲೋಕ ಬಿಡಲೂ ಬೇಕು, ಅಳಲೂ ಬೇಕು ಅಂತರಂಗವು ಕದಡಿ,ಅವನೆಲ್ಲಿ ಮುಕ್ತ ಮೆಚ್ಚಿ ಆಡಿದ,ಅಚ್ಚೊತ್ತಿದ ಅಭಿನಯವೇ ಮರೆಯುತ್ತಿದೆ ಎಂದರೇನರ್ಥ. ಒಬ್ಬನೇ ನಿರ್ಗಮಿಸುವಾಗ ಯಾರೂ ಹತ್ತಿರವಿರೆ,ಇಲ್ಲದಿರೆ ಏನು ಅಂತರ? ಮುಗಿಯಲಾರದ್ದು,ಮುಗಿಯಾಬಾರದ್ದು,ಮುಗಿದಂತೆ ತೋರುತ್ತಿದೆ ಎಂದರೇನರ್ಥ ಅಗಲಿಕೆಯ ಸಂಕಟವ ಹೆಚ್ಚಿಸುವುದು ಜೊತೆಯಾದ ಬಂಧ ಏಕಾಂಗಿ ಬಯಲಿನಲಿ ಮರವೊಂದು ರೋದಿಸುತ್ತಿದೆ ಎಂದರೇನರ್ಥ . ದೌರ್ಬಲ್ಯಗಳು ಇಲ್ಲದೆಯೇ ಬದುಕು ಚಲಿಸದ ಪಯಣ “ಸ್ಮಿತ” ಹೃದಯದ ಭಾಷೆ ಅರಿಯಲು ಅಶಕ್ತವಾಗುತ್ತಿದೆ ಎಂದರೇನರ್ಥ ********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ ಅನ್ನುವ ವಿಚಾರವೂ ಹೊಳೆಯಿತು! ಹಳೆ ಕಾಲದಲ್ಲಿ ಭಟ್ರ ಪೂರ್ವಜರು ಕಟ್ಟಿದ್ದ ಬೆಲ್ಲದ ಕತೆಯ ನೆನಪು ಮರುಕಳಿಸತೊಡಗಿತು. ಮೆದ್ದವನೇ ಬಲ್ಲ ಬೆಲ್ಲದ ರುಚಿಯ…. ಆದರೆ ಬೆಳೆದವನೇ ಬಲ್ಲ ಬೆಲ್ಲದ ನಿಜಬಂಡವಾಳವ. ಒಂದು ಮಾರಗಲದ ಚೌಕದಲ್ಲಿ ಬೆಳೆದಿರುವ ಎರಡು ಹೊರೆಯಷ್ಟು ಕಬ್ಬನ್ನು ಗಾಣದಲ್ಲಿ ಅರೆದು ಮೂರು ಸೇರು ಕಬ್ಬಿನ ಹಾಲು ಹಿಂಡಿ, ನಾಲ್ಕಡಿ ಬಾಯಗಲದ ಬಾಣಲೆಯೊಳಗೆ ಐದು ಗಂಟೆ ನಿಧಾನದ ಉರಿಯಲ್ಲಿ ಕುದಿಯಿಸಿ ಕುದಿಯಿಸಿ ಕುದಿಸುತ್ತಲೇ ಅರೆದ್ರವಘನರೂಪದ ಪಾಕದ ಹದಕ್ಕೆ ತಂದು ಕಡೆಗೆ ಒಂದಡಿ ಅಗಲದ ಅಚ್ಚಿನ ಮಣೆಯೊಳಗೆ ಸುರಿಯಬಹುದಾದಷ್ಟು ಪಾಕವಷ್ಟೇ… ಒಂದು ವಾರದ ಕಾಫಿಗೆ ಸಾಕಾಗದೆ ಉಳಿಯದಷ್ಟು ಬೆಲ್ಲಕ್ಕಾಗಿ ಎರಡು ದೊಡ್ಡ ಹೊರೆ ಕಬ್ಬನ್ನು ಅರೆಯುವುದರ ಹಿಂದಿನ ನಿಜ ಅರ್ಥ ಪೂರ್ವಜರಿಗೆ ಗೊತ್ತಿತ್ತು. ಖುದ್ದಾಗಿ ಕಬ್ಬಿನ ಜಲ್ಲೆಯನ್ನು ಹಿಡಿದು ಸೀಳುವಾಗ ಒಂದೋ ಅಥವಾ ಅಬ್ಬಬ್ಬಾ ಅಂದರೆ ಎರಡು ಜಲ್ಲೆಯನ್ನು ಜಗಿಯುವಷ್ಟರಲ್ಲಿ ವಸಡುಗಳು ತಡವರಿಸುವಂತಾಗಿ ಕಬ್ಬಿನ ಸಿಹಿಯನ್ನು ಹೀರುವುದರ ಮಹತ್ವದ ಜೊತೆಯಲ್ಲೇ ಅದಕ್ಕೆ ಪಡಬೇಕಾದ ಶ್ರಮದ ಅರಿವೂ ಆಗುತ್ತಿತ್ತು. ಆ ಅರಿವಿನ ಹಿನ್ನೆಲೆಯಲ್ಲಿ ಎರಡು ಹೊರೆ ಕಬ್ಬಿನಿಂದಾದ ಬೆಲ್ಲದ ಅಚ್ಚು ಎಷ್ಟು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಭಟ್ರ ಪೂರ್ವಜರಿಗೆ ಗೊತ್ತಿತ್ತು. ಆದರೆ ಆರೋಗ್ಯದ ವಿಚಾರವನ್ನೇನೂ ಹೇಳದೇ, ಅವರು ಆವಿಷ್ಕರಿಸಿದ ಆಕರ್ಷಕ ಬೆಲ್ಲದ ರುಚಿಯನ್ನಷ್ಟೇ ಮುಂದುವರಿಸಿಕೊಂಡು ಬಂದು ಕಡೆಗೆ ದಾಸರ ಪದವೂ ಸೇರಿ ʼಸಕ್ಕರೆ ತುಪ್ಪದ ಕಾಲುವೆ ಹರಿಸಿ…ʼ. ತನಕವೂ ಬಂದು ಬೆಲ್ಲ ಸಕ್ಕರೆಯೆಲ್ಲವೂ ರುಚಿಯ ಮಾರುಕಟ್ಟೆಯಲ್ಲಿ ಹೊಳೆಯುವಾಗ, ಆರೋಗ್ಯದ ಅರಿವು ಮೂಲೆ ಹಿಡಿದು ಕೂತಿತ್ತು. ಈಗ ಭಟ್ಟರಿಗೆ ಸಕ್ಕರೆಯೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಮುಖ್ಯವಾಹಿನಿಯಲ್ಲಿ ಸಕ್ಕರೆಯದೇ ಕಾರುಬಾರು. ಈ ಸಕ್ಕರೆ ಬಣ್ಣಾತೀತ. ಪಾನಕ ಮಾಡಿದರೆ ಅದರಲ್ಲಿ ಬಣ್ಣವೇ ಇಲ್ಲ ಹಾಗಾಗಿ ಸಿಹಿಯಲ್ಲಿರುವ ಬೇರೆ ಪದಾರ್ಥಗಳನ್ನು ಹೆಚ್ಚು ಆಕರ್ಷಕವನ್ನಾಗಿಸಬಹುದು. ಸಕ್ಕರೆಯ ಹಿಂದಿನ ಆರೋಗ್ಯದ ಗುಟ್ಟಂತೂ ಬೆಲ್ಲಕ್ಕಿಂತ ಇನ್ನೂ ಅತ್ತತ್ತ. ಯಾಕೆಂದ್ರೆ ಮುಖ್ಯವಾಹಿನಿಗೆ ಸಕ್ಕರೆಯನ್ನು ತರುವುದಕ್ಕೋಸುಗ, ಅದನ್ನು ಕಾರ್ಖಾನೆಗಳಲ್ಲಿ ತಯಾರಿಸಬೇಕಾದ್ದು. ದೊಡ್ಡದೊಡ್ಡ ಕಾರ್ಖಾನೆ, ಅದಕ್ಕಂಟಿಕೊಂಡ ಕುಂಠಿತ ಆಡಳಿತ ವಗೈರೆ ವಗೈರೆ… ಆದರೆ ಈಗ ಭಟ್ರಿಗಿನ್ನೊಂದು ವಿಷಯ ಹೊಳೆಯಿತು. ಪೂರ್ವಜರ ಬೆಲ್ಲದ ಹಿನ್ನೆಲೆಯ ಕತೆ. ಈಗಿರುವ ಮುಖ್ಯವಾಹಿನಿಯ ಬಣ್ಣಾತೀತ ಸಕ್ಕರೆಯ ಕತೆ. ಎರಡನ್ನೂ ಒಮ್ಮೆ ಮಿಲಾಯಿಸಿದರೆ! ಬಣ್ಣರೂಪಾಂತರ… ಕತೆ…ಪೂರ್ವಜರ ಬೆಲ್ಲದ ಪಾಯಸದ ಘಮಲು ಮನೆಯಲ್ಲಷ್ಟೇ ಆವರಿಸದೇ ಊರಿಗೂರೇ ಆವರಿಸುತ್ತಿತ್ತು. ಸಕ್ಕರೆಯವರು ಬಂದು ಸುವಾಸೆಯನ್ನು ಕಡಿಮೆ ಮಾಡಲಾಗಿ, ಸದ್ಯ ಮನೆಯನ್ನಷ್ಟೇ ಆವರಿಸುತ್ತಿದೆ. ಭಟ್ಟರು ಮರೆತ ವಿಚಾರ, ಬೆಲ್ಲವೂ ಸಕ್ಕರೆಯೂ ಅಥವಾ ಮತ್ತೊಂದು ಸಿಹಿಯೂ ಮೂಲದಲ್ಲಿ ಕಬ್ಬಿನ ಹೊರೆಗಳೆಲ್ಲ ಒಂದೇ ಆಗಿದ್ದು, ಅದರ ಹಿಂದಿರುವ ಆರೋಗ್ಯದ ಅರಿವಿನ ಕತೆ ಅತಿ ಮುಖ್ಯವಾದುದೆಂದು. ಹಾಗೆಂದುಬಿಟ್ಟರೆ ಭಟ್ಟರ ಪಾಯಸದ ಕತೆಯ ಗತಿಯೇನು? *******

ಕಥಾಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-2 ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಸಮಾನ ಶಿಕ್ಷೆ ಸರಿಯೇ ಹರಿಯೇ? ಅಷ್ಟರಲ್ಲಿ ಹೊರಗಡೆಯಿಂದಲೇ ನಾಯ್ಕ ಮಾಸ್ತರು ಬಾಗಿಲು ತೆರೆದರು. ಅವರ ಕಂಗಳು ಕೋಪದಿಂದ ಕೆಂಪಾಗಿದ್ದವು. ರೌದ್ರಾವತಾರ ತಾಳಿ ಒಳಗೆ ಬಂದವರೆ ಎಲ್ಲರೂ ಅವರವರ ಜಾಗದಲ್ಲಿ ನಿಲ್ಲಿ, ಎರಡೂ ಕೈ ಮುಂದೆ ಚಾಚಿ ಎಂದರು. ಎಲ್ಲರೂ ಹೆದರುತ್ತ ಅವರವರ ಜಾಗಕ್ಕೆ ಹೋಗಿ ನಿಂತೆವು. ಬೋರ್ಡ ಹಿಂದಿಟ್ಟ ಬೆತ್ತ ತೆಗೆದು ಎಲ್ಲರ ಕೈಮೇಲೂ ಎರಡೇಟು ಬಿಗಿದರು. ಉರಿ ತಾಳದೇ ಅನೇಕರು ಚೀರಿದರು, ಅಳಲಾರಂಭಿಸಿದರು. ಕೆಲವರು ‘ನಾನು ಗಲಾಟೆ ಮಾಡಲಿಲ್ಲಾಗಿತ್ತು’ ಎನ್ನುತ್ತಾ ತಾವು ಬರೆದಿದ್ದನ್ನು ತೋರಿಸಿದರು. (ಶಾಲಾಧ್ಯಕ್ಷರು ಬಂದಾಗಲೇ ನಾವು ಗಲಾಟೆ ಮಾಡಿದ್ದರಿಂದ ಅವರಿಗೆ ಅವಮಾನವಾಗಿ ಸಿಟ್ಟು ಬಂದಿತ್ತು. ಆದರೆ ನಮ್ಮ ಬಾಲ ಬುದ್ಧಿಗೆ ಆಗ ಅದು ಅರ್ಥ ಆಗಿರಲಿಲ್ಲ) ಎಂದೂ ಮಕ್ಕಳ ಮೇಲೆ ಸಿಟ್ಟು ಮಾಡದ ಮಾಸ್ತರು ಅಂದು ತಾಳ್ಮೆ ಕಳೆದುಕೊಂಡಿದ್ದರು. ಗಲಾಟೆ ಮಾಡಿದವರಿಗೆ, ಮಾತಾಡಿದವರಿಗೆ, ಮೌನವಾಗಿ ಕುಳಿತವರಿಗೆ ಸಮಾನವಾದ ಶಿಕ್ಷೆ ಕೊಟ್ಟರು. ಕೆಲವರು ಶಾಲೆಯಲ್ಲಿ ಅತ್ತು ಮನೆಗೆ ಹೋಗಿ ಹೇಳದೆ ವಿಷಯ ಮುಚ್ಚಿಟ್ಟರು. ಕೆಲವರು ಮನೆಗೆ ಹೋಗುವಾಗ ದಾರಿಯುದ್ದಕ್ಕೂ ಮಾಸ್ತರು ಹೊಡೆದಿದ್ದು ಸರಿಯೋ ತಪ್ಪೋ ಎನ್ನುವ ಕುರಿತು ತಮಗೆ ತಿಳಿದಂತೆ ವಿಮರ್ಶೆ ಮಾಡಿದರು. ಕೆಲವರು ಅಪ್ಪ ಅಮ್ಮನವರೆಗೆ ದೂರನ್ನು ಕೊಂಡೊಯ್ದರು. ರಾತ್ರಿ ಎಲ್ಲ ಮಕ್ಕಳ ಮನೆಗಳಲ್ಲಿ ಚರ್ಚೆ ಆಯಿತು. ಮರುದಿನ ಒಬ್ಬ ಪಾಲಕರು ಶಾಲೆಗೆ ಬಂದು ಮಾಸ್ತರರಿಗೇ ‘ಹುಡುಗರಿಗೆ ಹಿಂಗೆಲ್ಲ ಹೊಡೆಯುದೆಂತಕ್ಕೆ? ಮಕ್ಕಳಿಗೆ ನಾವೇ ಹೊಡೆಯೋದಿಲ್ಲ. ನೀವೆಂತಕ್ಕೆ ಹೊಡೆದಿದ್ದು? ಬಾಸುಂಡೆ ಬರೋ ಹಂಗೆ ಹೊಡೆದು ಬಿಟ್ಟೀರಿ. ಊಟ ಮಾಡಲಿಕ್ಕು ಆಗಲಿಲ್ಲ ನಮ್ಮ ಮಗನಿಗೆ…’ ಎಂದು ಬೈದು ಹೋದರು. ಇನ್ನೊಬ್ಬ ಪಾಲಕರು ‘ತಪ್ಪು ಮಾಡಿದ್ರೆ ನಮ್ಮ ಮಕ್ಕಳಿಗೆ ನಾಲ್ಕು ಬಿಗೀರಿ ಬುದ್ದಿ ಬರ್ತದೆ ಎಂದರು! ಕರೋನಾ ಶಿಕ್ಷೆಯೂ ಥೇಟ್ ಮಾಸ್ತರು ಕೊಟ್ಟ ಶಿಕ್ಷೆಯಂತೆನಿಸುತ್ತದೆ. ಭುವಿಯ ಮೇಲಿನ ಎಲ್ಲ ಜೀವಿಗಳಂತೆ ನಾವು ಎನ್ನುವುದನ್ನು ಒಪ್ಪದೇ ನಾವೇ ಶ್ರೇಷ್ಠರೆಂಬ ಹಮ್ಮಿನಲ್ಲಿ ಮೆರೆದೆವು. ಚೀನಿಯರಂತೂ ಆಧುನಿಕ ಬಕಾಸುರರಂತೆ ಸಿಕ್ಕಿದ್ದನ್ನೆಲ್ಲ ಮೆದ್ದು ಕೋವಿಡ್ ೧೯ ವೈರಸ್ಸನ್ನು ಪ್ರಾಣಿಗಳಿಂದ ಮನುಕುಲಕ್ಕೆ ವರ್ಗಾ ಯಿಸಿದರು. ನೆಲ ಜಲ, ಗಾಳಿಯನ್ನು ಮಲಿನಗೊಳಿಸುವಲ್ಲಿ, ನಮ್ಮ ಅಗತ್ಯಕ್ಕೆ ಮೀರಿ ಸಂಗ್ರಹಿಸುವುದರಲ್ಲಿ ಎಲ್ಲರೂ ನಾ ಮುಂದೆ, ತಾ ಮುಂದೆ.. ಸೋಂಕನ್ನು ತಿಳಿದೋ ತಿಳಿಯದೆಯೋ ಹಬ್ಬಿಸುತ್ತಿರುವವರು, ಅರಿತೋ ಅರಿಯದೆಯೋ ಅವರ ಸಂಪರ್ಕಕ್ಕೆ ಬಂದವರು.. ಹೀಗೆ ಎಲ್ಲರಿಗೂ ತಪ್ಪಿಗೆತಕ್ಕ ಶಿಕ್ಷೆಯೋ ಅಥವಾ ಮಾಸ್ತರರ ಹೊಡೆತದಂತೆಯೋ? ತಪ್ಪು ಮಾಡಿದವರಿಗೆ ತಪ್ಪಿನ ಅರಿವಾದರೂ ಇದೆಯೋ? ಇಲ್ಲವೋ ?ಕನಿಷ್ಟ ಪಕ್ಷ ಪಶ್ಚಾತ್ತಾಪವಾದರೂ ಇದೆಯೋ? ಕಾಲವೇ ಉತ್ತರಿಸಬೇಕು… ********** (ಮುಂದುವರಿಯುವುದು….) ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಸುಜಾತ ಲಕ್ಷ್ಮೀಪುರ. ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ ಬಡತನ ಹಸಿವು ನಮ್ಮ‌ನ್ನು ರೂಪಿಸುತ್ತದೆಯಂತೆ ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ ಜ್ಣಾನವೊಂದೆ‌ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ ನನ್ನ ಜನ ನನ್ನ ನಾಡು ಎನ್ನದವರ ಎದೆ ಬೆಂಗಾಡು ಜನರ ಹಸಿವು ನೋವಿಗೆ ಮಿಡಿದು ದುಡಿದ ಈ ಭೀಮಾ ಪ್ರಜಾಪ್ರಭುತ್ವದ ಜೀವಾಳವೆ ಮತದಾನ ಅಲ್ಲವೇ ಹಕ್ಕು ಬಾಧ್ಯತೆಗಳ‌ನು ಕಾನೂನಿನ ಮೂಲಕವೆ ಕೊಡಿಸಿದ ಈ ಭೀಮಾ ಸರ್ವೋದಯ ಸಮಾನತೆ ಸಾಮಾಜಿಕ ನ್ಯಾಯ ಇದ್ದೆಡೆ ಸ್ವರ್ಗ ಎಲ್ಲರ ಅಭ್ಯದಯಕಾಗಿ ಸಂವಿಧಾನ ರೂಪಿಸಿದ ಈ ಭೀಮಾ ಶಿವೆ,ಬಾಬಾ ಸಾಹೇಬರ ಅಂಬೇಡ್ಕರ್ ಬಗೆಗೆ ಎಷ್ಟು ಹೇಳಿದರೂ ಅಪೂರ್ಣವೆ ದೇಶದ ಜನತೆಗೆ ಬದುಕು ಕೊಟ್ಟ ಭಾರತ ಭಾಗ್ಯವಿದಾತ ಆದ ಈ ಭೀಮ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೌದು ; ನಿನಗಾಗಿ… ನಾಗರಾಜ ಹರಪನಹಳ್ಳಿ ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ…. ಎಷ್ಟೊಂದು ಕನಸುಗಳು.. ನೂರಾರು ಬಯಕೆಗಳು ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು ಒಂದೊಂದು ಮಾತಿಗೂ ಸಹಿ ಸವಿ ನೆನಪು ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ ಹುಮ್ಮಸ್ಸು … ಬರೆಯುವ ,ಓದುವ ಹೆಬ್ಬಯಕೆ ಜೊತೆಗೊಂದಿಷ್ಟು ಪ್ರೇಮ ಬದುಕಿಗೆ ಉಸಿರಿಗೂ ಈಗ ಕನಸಿನ ಕಾಲ ಬಂಧನವೂ ಬಿಡುಗಡೆಯೂ ಏಕಕಾಲಕ್ಕೆ ಇನ್ನೂ ಕಾಯುವುದೋ ಅನಿವಾರ್ಯ ಸೊಗಸು ಬೆಳಗು ಮಧ್ಯಾಹ್ನ ಅಪರಾಹ್ನ ಇಳಿಸಂಜೆ, ಮುಸ್ಸಂಜೆ ಗೋಧೂಳಿ ಸಮಯಗಳ ಬೆಸೆದ ಬೆಸುಗೆಯ ಪ್ರೇಮ ಇನ್ನೇನು ಈ‌ ಬದುಕಿಗೆ ಮುದ್ದು ; ಬಂದಾಯಿತು ಇನಿ ಇನಿಯ ರೋಮಾಂಚನಕೆ ಹೊಸ‌ ಭಾಷ್ಯ ಬರೆದಾಯಿತು ತೇರಾ ಸಹರಾ ಮಿಲ್ಗಯಾ ಯೇ ಜಿಂದಗಿ ಗಲೇ ಲಗ್ಜಾ ಯೇ ಜಿಂದಗಿ ಗಲೇ ಲಗ್ಝಾ … ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಹಿತ್ಯ ಶ್ವೇತಾ ಮಂಡ್ಯ ಸಾಹಿತ್ಯ, ಒಳಿತ ಉಣಿಸಿ ಕೆಡುಕ ಅಳಿಸಿ ಮನವ ಅರಳಿಸಿ ಸರ್ವರ ಹಿತ ಬಯಸುವ ಸಾಹಿತ್ಯ; ಅಂತ:ಕರಣವ ತಟ್ಟಿ ಮಾನವೀಯತೆಯ ಮುಟ್ಟಿ ಕರ್ತವ್ಯಪ್ರಜ್ಞೆಯ ಎಚ್ಚರಿಸಿ ಬದುಕಿನುದ್ದ ದಾರಿದೀಪವಾಗುವ ಸಾಹಿತ್ಯ, ಸರ್ವಜನ ಸರ್ವ ಭಾವಗಳ ಶುದ್ದೀಕರಿಸಿ ಮನುಕುಲದ ಕಲ್ಮಶಗಳ ತೊಳೆಯುವ ಸಾಹಿತ್ಯ; ನಿನ್ನ ಮೆಚ್ಚಿ ನಿನ್ನಪ್ಪಿ ಕೊಂಡವರೆಲ್ಲಾ ನಡೆಯುತ್ತಿದ್ದರೆ ನಿನ್ನಾಶಯದಂತೆಯೇ ಬದುಕುತ್ತಿದ್ದರೆ ತಾವು ಬರೆಯುವಂತೆ…..!!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮ ಅಂತರಂಗ ವೀಣಾ ರಮೇಶ್ ಮೌನದಲಿ ಅದೆಷ್ಟೋ ಮಾತುಗಳನು ಕಟ್ಟಿ ಹಾಕಿದ್ದೇನೆ ಗೆಳತಿ ಏಕಾಂತದಲ್ಲಿ ಒಂದಷ್ಟು ಪದಗಳಿಗೆ ಮೌನದಲ್ಲೆ ತಿವಿದಿದ್ದೇನೆ ಗೆಳತಿ ಕಣ್ಣುಗಳು ಹೊಳೆಯಾಗಿವೆ ಹರಿದು ಬಿಡಲೆ ದೋಣಿ ನಿನ್ನ ನೆನಪಿನ ಹುಟ್ಟು ಹಾಕಿ ಉಸಿರು ಕಟ್ಟಿದೆ ಪ್ರೀತಿ ಎದೆಯ ಪಂಜರದಲಿ, ಉಸಿರು ಬಿಡಲು ತತ್ವಾರ ಎದೆಯ ಬಡಿತವೊಂದೇ ಉಳಿದಿದೆ ಮೌನ ಪರದೆಯ ಹಿಂದೆ ನಿನ್ನ ತುಂಟ ನಗು ಅಣಕಿಸುತ್ತಿದೆ ಈ ಕತ್ತಲೆಯ ನೀರಸ ಮೌನ ಒಂದಷ್ಟು ನಕ್ಷತ್ರಗಳ ನುಂಗ ಬಾರದೆ ಒಂದು ಸಿಹಿಮುತ್ತು, ಒಂದು ಸಿಹಿ ನಗುವಿಗೆ ಬಾಚಿ ತಬ್ಬಿಕೊಳ್ಳಲು, ನೆನಪಿನ ಕಂಬಳಿ ಯೊಳಗೆ ಬಚ್ಚಿಟ್ಟು ಕೊಳ್ಳಲು ಯಾವ ಅಂತರದ ಗೊಡವೆಯು ಇದು? ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಡಿಗೆಯ ಹೆಜ್ಜೆ ಪೂರ್ಣಿಮಾ ಸುರೇಶ್ ಹುಣ್ಣಿಮೆಯಂತಹ ಹೆಣ್ಣೊಂದು ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ ತುಸುತುಸುವೇ ಅರಳಿ ಒಂದಿಷ್ಟು ಬಾಡಿ,ಕರಗಿ ಮತ್ತೆ ಹುಡುಹುಡುಕಿ ಅಮಾವಾಸ್ಯೆಯಂತಹ ಗಂಡನ್ನು ಪ್ರೇಮಿಸಿದಳು! ಕಪ್ಪು- ಎಲ್ಲಿರಿಸುವೆ ಕುಹಕಕೆ ಉತ್ತರಿಸುವಂತೆ ಬಚ್ಚಿಟ್ಟುಕೊಂಡಳು ಕಣ್ಣೊಳಗೆ ಅವನನ್ನು ಕಾಡಿಗೆಯಾಗಿಸಿ! ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ. ಅವಳ ನೋವಿಗೆ ಕರಿನೀರಾಗಿ ಧುಮುಕಿ ಜಲಪಾತವಾಗುತ್ತಾನೆ ಕಡಲಾಗಿ ಸುಯ್ಲಿಟ್ಟು ಆವಿಯಾಗಿ ಮಳೆಯಾಗಿ ಅವಳ ತೋಯಿಸುತ್ತಾನೆ. ಜಗಕೆ ಕಾಣುವ ಕಣ್ಣಿನ ಬೆಳಕು, ಮೊರೆವ ಕಡಲಲೆಯ ಸುಯ್ಲು ಸುರಿವ ಮಳೆ ಹನಿಗಳು ಅರ್ಥವಾಗುವುದೇ ಇಲ್ಲ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ ಬೆಳೆಯಲಾರೆ ಬೀಗಲಾರೆ ತೂಗಲಾರೆ ತೊನೆಯಲಾರೆ ಹೂತು ಹಣ್ಣಾಗಬೇಕೆಂದವಳು ಚಾಚಿ ನೆರಳಾಗಬೇಕೆಂದವಳು ಇಂತು ನಿಂತಿದ್ದೇನೆ ವಾಮನಳಾಗಿ ಸುಡುವ ದೈತ್ಯ ನೆರಳುಗಳ ನಡುವೆ ಇದೆಂಥ ಬದುಕ ಕೊಟ್ಟಿರಿ ನನಗೆ ಓ ನೆತ್ತರು ನೀರಾದವರೆ! ಇನ್ನಿರಲಾರೆ ಕುಲಾವಿ ಕಟ್ಟಿಕೊಂಡು ಸಾವಿನ ಈ ತೊಟ್ಟಿಲಲಿ ಹಸಿರಾದರೂ ಹೊನ್ನಲ್ಲ ನೆರಳಿಲ್ಲ ಗೂಡಿಲ್ಲ ಸರ್ಕಸ್ಸಿನ ಜೋಕರನಂತೆ ನನ್ನ ಮೈಯ ಪೆಟ್ಟುಗಳೆಲ್ಲ ನಿಮ್ಮ ಮೋಜಿನ ಸರಕು ಮೈ ಚಾಚಿ ಮಲಗಲೂ ಮರ್ಜಿ ಕಾಯಬೇಕು ಪುರುಷ ಹುನ್ನಾರಗಳಿಗೆಂದು ಪ್ರಕೃತಿಯೆಷ್ಟು ಬಲಿಯಾಗಬೇಕೊ ಇನ್ನೂ ಓ ನೆತ್ತರು ನೀರಾದವರೆ ಇನ್ನಾದರೂ ಕರಗಿ ಹರಿಯಿರಿ ನಮ್ಮಂತೆ ಉಸುರಿ ಹಸುರಿ ನೆರಳಾಗಲು ಕಲಿಯಿರಿ ನಿಂತ ನೆಲವನು ಯಾರೂ ಕಸಿಯಲಾಗದು ಅದೋ ನೋಡಿ! ಬೀಳುತಿದೆ ನನ್ನ ಬೀಜ ಈ ನೆಲದಲಿ ಬಿದ್ದು ಮೊಳತೇ ತೀರುವುದು ಮುಗಿಲಗಲ ಮಿಗೆಯಗಲ ಇನ್ನು ನಿಮ್ಮ ಕಣ್ಣಿಗೆ ಬೀಳದ ಅಂತರಿಕ್ಷದ ಒಂದು ಚುಕ್ಕೆ ಮಾತ್ರ ನಾನು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾರಯ್ಯ ಸಂಭವಿಸು ಮದ್ದೂರು ಮಧುಸೂದನ್ ಕೇಡುಗಾಲಕೆ ನಾಯಿ ಮೊಟ್ಟೆ ಇಕ್ಕಿದೆ ಮೊಟ್ಟೆ ಇಕ್ಕಿದ್ದು ದಿಟವೇ ? ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ ಕರ್ಪ್ಯೂ ಜಾರಿಯಾಗಿದೆ ಹುತ್ತವೇ ಹಾವನ್ನು ನುಂಗುವ ದುರಿತ ಕಾಲವಿದು ಭುಸಗುಡುವ ಬಾಯಿಗೆ ಬಾಂಬಿಕ್ಕುವ ಭಯ ಚಾಲು ಇದೆ ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು ಈಗಾಗಲೇ ಕುಂಡಿ ಮೇಲೆ ಅಂಟಿಸಿಯಾಗಿದೆ ಶಬ್ದಕೆ ನಾಚಿಕೆಯಾಗುವಷ್ಟು ಮೈಕಾಸುರ ಅಬ್ಬರಿಸುತ್ತಿದ್ದಾನೆ ಕಾಶ್ಮೀರದೀ ಕನ್ಯಾಕುಮಾರಿವರೆಗೆ ಚಾಲ್ತಿಯಲ್ಲಿದೆ. ಸಗಣಿ ತಿಂದವರ ಭಕ್ತಿಯ ಮಾರಾಟ ಜೋರಿದೆ ಕಾವಿ ಮರೆಯಲಿ ತ್ರಿಶೂಲಗಳಿಗೂ ನಾಚಿಕೆ ಸಂಭವಿಸಿದೆ ಪ್ರಜಾಪ್ರಭುತ್ವದ ಸಿಂಹಾಸನಕೆ ಇನ್ನುಷ್ಟು ಮೊಳೆ ಬಡಿದು ಬಿಗಿ ಮಾಡಲಾಗುತ್ತಿದೆ ಸಿಂಹಾಸನದಡಿಯಲಿ ಸಿಲುಕಿದ ನಿನ್ನ ಕಿರು ಬೆರಳು ಈಚೆ ಬಾರಲಾರದೆ ಒಳಗೊಳಗೆ ಮಿಡುಕುತ್ತಿದೆ ಬಾರಯ್ಯ ಬಾರೋ ಸಂಭವಿಸು ಶುದ್ದೋದನನ ಮೊಮ್ಮಗನೇ.. ಎಂದು.. *******

ಕಾವ್ಯಯಾನ Read Post »

You cannot copy content of this page

Scroll to Top