ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನೂರು ಜನಪದ ಹಾಡುಗಳು ಕೆ.ಶಿವು ಲಕ್ಕಣ್ಣವರ ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ‌ ಕೃತಿಯೇ ‘ನೂರು ಜನಪದ ಹಾಡುಗಳು’‌ ಎಂಬ ಪುಸ್ತಕವು! ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು… ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ ಹಳ್ಳಿಯ ಜನರ ಸಂಗೀತ, ರೂಪಕ, ಮಣ್ಣಿನ ವಾಸನೆಯ ಬದುಕು. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಮತ್ತು ಹಾಡುತ್ತಾರೆ. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆಯೇ ಎಲ್ಲ ಜನಪದರ ಬಾಯಿಂದ ಬಾಯಿಗೆ ಹೊರಹೊಮ್ಮುವ ಪದದ ಅಥವಾ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಇವು ರೋಮಾಂಚಕವೂ ಹೌದು… ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜಾನಪದ ಹಾಡಿನ ರೀತಿಯಲ್ಲಿ ಹೀಗಿದೆ. “ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ… ಕೂಸು ಕಂದಯ್ಯ ಒಳ ಹೊರಗ… ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…“ ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗಿರುವ ಜಾನಪದ ಹಾಡಿಗೆ ವಿಶೇಷ ಸ್ಥಾನ-ಮಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ… ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು ಇದನ್ನೇ ಹೇಳುತ್ತದೆ ಮತ್ತು ಕಟ್ಟಿಕೊಡುತ್ತದೆ… ಒಟ್ಟಾರೆ ಜನಪದವೆಂದರೆ ಮನುಷ್ಯ ಬದುಕಿನ ಕ್ರಿಯೆಗಳು, ವಸ್ತುಗಳು, ಮನರಂಜನೆಯ ಸಾಧನಗಳು, ಮನುಷ್ಯನ ಸಂಸ್ಕಾರ, ಆರಾಧನೆ, ನಂಬಿಕೆಗಳು: ಉಡುಪುಗಳು, ಹಬ್ಬ ಹರಿದಿನಗಳು, ಇದೇ ರೀತಿಯಾಗಿ ಒಟ್ಟಾರೆ ಬದುಕಿನ ಸರ್ವ ಲಯಗಳನ್ನು ಒಳಗೊಂಡಿರುವಂತದೇ ಆಗಿದೆ… ಮನುಷ್ಯ ಜೀವಿ ತನಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಾನೆ. ಹೀಗೆಂದು ಸಾರಿಹೇಳುತ್ತದೆ ಬೈಲೂರ ಬಸವಲಿಂಗಯ್ಯ ಹಿರೇಮಠರವರ ಈ ಕೃತಿಯು ‘ನೂರು ಜನಪದ ಹಾಡುಗಳು’ ಎಂಬ ಕೃತಿಯಾಗಿದೆ… ಈಗಂತೂ ಮನುಷ್ಯ ಬಹು ಎತ್ತರಕ್ಕೆ ಬೆಳೆದಿದ್ದಾನೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಶೋಧನೆಯ ತೆಕ್ಕೆಯಲ್ಲೇ ತಬ್ಬಿಕೊಳ್ಳಲು ಮನುಷ್ಯ ನಿರಂತರವಾಗಿ ಹೋರಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ಅನೇಕಾನೇಕ ಜ್ಞಾನಶಿಸ್ತುಗಳು ಆವಿಷ್ಕಾರಗಳು ಒಡಮೂಡಿವೆ. ಇಂತಹ ಜ್ಞಾನಶಿಸ್ತುಗಳಲ್ಲಿ ಅಂತರಶಿಸ್ತೀಯ ಅಧ್ಯಯನವೂ ಒಂದು. ಈ ಶಿಸ್ತಿನ ಮೂಲಕ ವಿದ್ವಾಂಸರು ಇತರ ಜ್ಞಾನ ಶಾಖೆಗಳೊಂದಿಗೆ ಜಾನಪದ ಸಾಹಿತ್ಯದ ಅಂತರ್ ಸಂಬಂಧವನ್ನು ಗುರುತಿಸುವ ಸವಾಲುಗಳನ್ನು ಎದುರಿಸುವ ಕಾರ್ಯದಲ್ಲಿ ತೊಡಗಿರುವುದು ಈ ಸಾಹಿತ್ಯದ ಸತ್ವವಾಗಿದೆ. ಜಾನಪದ ಬಿಟ್ಟು ಬದುಕಿಲ್ಲ, ಬದುಕು ಬಿಟ್ಟು ಜಾನಪದವಿಲ್ಲ ಎಂಬುದು ಕಟು ವಾಸ್ತವ. ಈ ಸಾರವನ್ನೇ ಹೇಳುತ್ತದೆ ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಕೃತಿಯು… ಇಡೀ ವಿಶ್ವವೇ ನಮ್ಮ ದೇಶದತ್ತ ಬೆರೆಗುಗಣ್ಣಿನಿಂದ ನೋಡುವಂತೆ ನಮ್ಮ ದೇಶದಲ್ಲಿ ಜಾನಪದ ಕಲೆಗಳು ಸಮೃದ್ಧವಾಗಿದೆ. ಈಗಾಗಲೇ ಗುರುತಿಸಲ್ಪಟ್ಟ ಜಾನಪದ ಕಲೆ ನೂರಾರು ಮತ್ತು ಸಮೃದ್ಧವಾಗಿವೆ. ಇನ್ನೂ ಗುರುತಿಸಲ್ಪಡಬೇಕಾದ ಕಲೆಗಳು ಸಾವಿರಾರು. ಹೀಗಿರುವುದರಿಂದಲೇ ನಮ್ಮ ಯುವ ಜನರು ಈ ಬಗೆಗೆ ಚಿಂತಿಸಬೇಕಾಗಿದೆ. ಎಲ್ಲ ಜಾನಪದ ಕಲೆಗಳನ್ನು ದಾಖಲಿಸಬೇಕಾಗಿದೆ. ಪ್ರದರ್ಶನ ಕಲೆಗಳನ್ನು ಬದಿಗಿಟ್ಟರೂ ಹಾಡುವ ಸಾಹಿತ್ಯವೇ ಅಪಾರ ಪ್ರಮಾಣದಲ್ಲಿದೆ… ಇಂತಹ ಹಾಡುವ ಸಾಹಿತ್ಯದ ಒಂದಿಷ್ಟನ್ನಾದರೂ ಸಹೃದಯರ ಮನೆ-ಮನಸ್ಸನ್ನು ಮುಟ್ಟಿಸಬೇಕೆಂಬ ಆಸೆಯಿಂದ ಬೈಲೂರ ಬಸವಲಿಂಗಯ್ಯನವರು ತಮ್ಮ ಸಾವಿರಾರು ಜಾನಪದ ಹಾಡುಗಳಲ್ಲಿ ಆಯ್ದ ಪುಸ್ತುಕೆಯೇ ‘ನೂರು ಜನಪದ ಹಾಡುಗಳು’..! ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯನ್ನು ಜಾನಪದ ಸಂಶೋಧನ ಕೇಂದ್ರ ಭೂಷಣ ಪ್ರಕಾಶನ, ಸಪ್ತಾಪುರ, ಧಾರವಾಡ-೧ ಎಂಬ ಪ್ರಕಾಶನ ಹೊರತಂದಿದೆ… ಈ ಪ್ರಕಾಶನದ ನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರು ಈ ಪುಸ್ತಕೆಯನ್ನು ಹೊರತಂದಿದ್ದಾರೆ… ಸರ್ಕಾರದ ಉದಾಸೀನತೆ, ವಿದ್ವಾಂಸರ ಅದೂರದೃಷ್ಟಿ, ಕಲಾವಿದರ ಅಜ್ಞಾನ ಮತ್ತು ಜನತೆಯ ಅನಾದಾರದ ಕಾರಣವಾಗಿಯೇ ಉತ್ತರ ಕರ್ನಾಟಕದ ಸಮೃದ್ಧ ಜಾನಪದ ಅವಸಾನದಂಚಿನಲ್ಲಿದೆ. ಈ ಅನಾದಾರ ದೂರವಾಗಬೇಕಿದೆ ಎಂದು ಹೇಳಿ ಈ ಬೈಲೂರ ಬಸವಲಿಂಗಯ್ಯ ಹಿರೇಮಠರವರ ‘ನೂರು ಜನಪದ ಹಾಡುಗಳು’ ಬಗೆಗಿನ ನನ್ನ ಮಾತು ಮುಗಿಸುತ್ತೇನೆ..! **********

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದಹೆಗಡೆ ಪ್ರಾಜ್ಞ ಎಂದುಕೊಂಡವರ ಸೋಗಲಾಡಿತನಕ್ಕೆ ನಗು ಬರುತ್ತದೆ ಬೇಲಿಯ ಮೇಲೆ ಕೂತವರ ದಿವಾಳಿತನಕ್ಕೆ ನಗು ಬರುತ್ತದೆ ಸೂರ್ಯ ಬೆಳಗುವನೆಂದರೆ ಸಾಕ್ಷಿ ಕೇಳುವರು ಇವರು ನೋಡು ತನಗೇ ತಾನು ಹುಸಿಯಾದ ಈ ಅಧಃಪತನಕ್ಕೆ ನಗು ಬರುತ್ತದೆ ರತ್ನದ ಕಾಂತಿಗೆ ಯಾರ ಶಿಫಾರಸಿನ ಹಂಗೇನಿದೆ ಹೇಳು ತಿಳಿದೂ ಬೊಗಳುವವರ ಧಾಡಸೀತನಕ್ಕೆ ನಗು ಬರುತ್ತದೆ ಕಪ್ಪುಕನ್ನಡಕ ಧರಿಸಿದರೆ ಕಣ್ಣನಷ್ಟೇ ಮರೆಸಬಹುದು ಜಗವನ್ನೇ ಯಾಮಾರಿಸುವ ಮಂಕುತನಕ್ಕೆ ನಗು ಬರುತ್ತದೆ “ನಾ ಕಂಡ ಮೊಲಕ್ಕೆ ಮೂರೇ ಕೊಂಬು” ಎಂಥ ವಾದ ‘ಜಂಗಮ’ ಅಡಿಪಾಯವಿಲ್ಲದೇ ಮಹಲೆಬ್ಬಿಸುವ ಜಾಣತನಕ್ಕೆ ನಗು ಬರುತ್ತದೆ *****

ಕಾವ್ಯಯಾನ Read Post »

ಇತರೆ

ಪರಿಚಯ

ಕೇಶವರೆಡ್ಡಿ ಹಂದ್ರಾಳ ಕೆ.ಶಿವು ಲಕ್ಕಣ್ಣವರ ಕೇಶವರೆಡ್ಡಿ ಹಂದ್ರಾಳರವರು ಅಗ್ನಿ ಶ್ರೀಧರರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ ‘ಒಕ್ಕಲ ಒನಪು’ ಅಂಕಣ ಬರೆಯುತ್ತಿದ್ದರು. ಇವರು ‘ಅಗ್ನಿ’ಗೆ ಬರೆಯಲು ಪ್ರಾರಂಭಿಸಿದ್ದು ‘ಅಗ್ನಿ’ಯ ಎರಡನೇ ಕಚೇರಿ ಶುರುವಾದ ಮೇಲೆ. ಒಟ್ಟಾರೆ ಆಗಿ ‘ಅಗ್ನಿ’ಯಲ್ಲಿಯ ಇವರ ಅಂಕಣವಾದ ‘ಒಕ್ಕಲ-ಒನಪು’ ಆ ಹೊತ್ತಿಗೆ ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂದರೆ ಅಷ್ಟು ಸೊಗಸಾಗಿ ‘ಮಣ್ಣಿನ ಗುಣ’ ಪಡೆದುಕೊಂಡಿತ್ತು. ಇವರೊಂದಿಗಿದ್ದ ಅನೇಕರ ಅಂಕಣಗಳೂ ಸೊಗಸಾಗಿದ್ದವು. ಅವರ ಬಗೆಗೆ ನಂತರ ಬರೆಯುತ್ತೇನೆ. ಈಗ ಕೇಶವರೆಡ್ಡಿ‌ ಹಂದ್ರಾಳರ ಬಗೆಗೆ ಚಿಕ್ಕ ಲೇಖನದ ಮೂಲಕ ನೋಡೋಣ… ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದವರು… ಹಂದ್ರಾಳದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು 7ನೇ ತರಗತಿಯಲ್ಲಿ ರ್ಯಾಂಕ್ ಪಡೆದವರು. ನಂತರ ಬೆಂಗಳೂರಿನ ಚಿಕ್ಕಪೇಟೆಯಲ್ಲಿದ್ದ ಭಾರತೀಯ ವಿದ್ಯಾಶಾಲೆಗೆ ಸೇರಿದರು… ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರ ಪರಿಚಯವಾಗಿ, ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂದೆ ಆನಂದರಾವ್ ಸರ್ಕಲ್‍ನಲ್ಲಿದ್ದ ಎಸ್.ಜೆ.ಆರ್.ಸಿ.ಯಲ್ಲಿ ಪಿ.ಯು.ಸಿ.ಗೆ ಸೇರಿಕೊಂಡರು… ಆ ಸಮಯದಲ್ಲಿ ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದರು. ದಲಿತ, ರೈತ ಚಳವಳಿ ಹಾಗೂ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದರು… 1981ರಲ್ಲಿ ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪಾಸಾದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು ಆರು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿದ್ದರು. ಆನಂತರ 1987ರಲ್ಲಿ ಕೆ.ಎ.ಎಸ್. ಪಾಸು ಮಾಡುವ ಮೂಲಕ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೇಶವರೆಡ್ಡಿ ಹಂದ್ರಾಳರವರ ಪ್ರಕಟಿತ ಕೃತಿಗಳೆಂದರೆ– ಹಂದ್ರಾಳ, ಅಂತಃಪುರ, ಬರದ ನಾಡಿನಲ್ಲಿ ಬೆಳದಿಂದಳು, ಜಡೆಗೆ ಗುಲ್ ಮೊಹರ್ ಕೈಗಳು, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ. ಈ ಕ್ಷಣದ ಬುದ್ಧ ಅವರ ಕೆಲವು ಕಥಾ ಸಂಗ್ರಹಗಳು. ಒಕ್ಕಲ ಒನಪು, ಮರೆತ ಭಾರತ- ಪ್ರಬಂಧ ಸಂಕಲನಗಳು, ಸಿನಿಮಾ, ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಬರೆದಿದ್ದಾರೆ, ನನ್ನ ಕ್ರಾಂತಿಯ ಹುಡುಗಿ ಅವರ ಕವನ ಸಂಗ್ರಹ… ಕೇಶವರೆಡ್ಡಿ ಹಂದ್ರಾಳರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮಾಸ್ತಿ ಕಥಾ ಪುರಸ್ಕಾರ, ಪುಸ್ತಕ ಸೊಗಸು ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ… ಕೇಶವರೆಡ್ಡಿ ಹಂದ್ರಾಳರವರ ಬಗೆಗೆ ಸಂಕ್ಷಿಪ್ತವಾಗಿ ಒಂದಷ್ಟು– ಕೇಶವರೆಡ್ಡಿ ಹಂದ್ರಾಳರವರು ಆರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. 1987ರಲ್ಲಿ ಕೆ.ಎ.ಎಸ್. ಪಾಸು ಮಾಢಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಕೇಶವರೆಡ್ಡಿಯವರು ಮದ್ದೂರಿನ ಚಂದ್ರಕಲಾ ಅವರನ್ನು ಪ್ರೀತಿಸಿ ಸರಳವಾಗಿ ವಿವಾಹ ಮಾಡಿಕೊಂಡರು. ಅವರಿಗೆ ಕ್ರಾಂತಿ, ಸಿರಿವೆನ್ನೆಲು ಎಂಬ ಇಬ್ಬರು ಮಕ್ಕಳಿದ್ದಾರೆ… ಕೇಶವರೆಡ್ಡಿ ಹಂದ್ರಾಳರವರು ಸುಮಾರು 500 ಕಥೆಗಳನ್ನು ಬರೆದಿದ್ದಾರೆ… ಅವರ ಕವನ ಸಂಕಲನಗಳು ಹೀಗಿದೆ– ನನ್ನ ಕ್ರಾಂತಿಯ ಹುಡುಗಿ… ಪ್ರಬಂಧ ಸಂಕಲನಗಳು ಹೀಗಿವೆ– ಒಕ್ಕಲ ಒನಪು ರಾಜಧಾನಿಯ ರಸ್ತೆಗಳಲ್ಲಿ ಮರೆತ ಭಾರತ ನೆಲದ ಕಣ್ಣು ಅವರು ಪಡೆದ ಪ್ರಶಸ್ತಿಗಳು– ಮಾಸ್ತಿ ಕಥಾ ಪುರಸ್ಕಾರ ಪುಸ್ತಕ ಸೊಗಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2005, 2006)..! ಒಟ್ಟಾರೆಯಾಗಿ ಕೇಶವರೆಡ್ಡಿ ಹಂದ್ರಾಳರ ‘ಮಣ್ಣಿನ ಗುಣ’ದ ‘ಒಕ್ಕಲ-ಒನಪು’ ಅಂಕಣ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅದಕ್ಕೂ ಮಿಗಿಲಾಗಿ ‘ಅಗ್ನಿ’ ಬಳಗದ ಬಲು ಪ್ರೀತಿಯ ಅಂಕಣವಾಗಿತ್ತು ಎಂದು ಹೇಳುತ್ತಾ ಈ ಬರಹ‌ ಮುಗಿಸುತ್ತೇನೆ… **********

ಪರಿಚಯ Read Post »

ಅನುವಾದ

ಅನುವಾದ ಸಂಗಾತಿ

ಅವರು ಬಂದಿದ್ದಾರೆ ಮೂಲ: ಅಲ್ಫಾನ್ಸಿನಾ ಸ್ಟಾರ್ನಿ (ಅರ್ಜೆಂಟೈನಾ) ಕನ್ನಡಕ್ಕೆ: ಕಮಲಾಕರ ಕಡವೆ ಅವರು ಬಂದಿದ್ದಾರೆ ಇಂದು ನನ್ನ ಅಮ್ಮ ಮತ್ತು ಅಕ್ಕನನ್ನ ನೋಡಲು ಬಂದಿದ್ದಾರೆ ಬಹಳ ಕಾಲ ಒಬ್ಬಂಟಿ ಇದ್ದೆ ನಾನುನನ್ನ ಕವಿತೆಯ ಜತೆ, ಗರ್ವದ ಜತೆ…ಮತ್ತೇನೂ ಇರಲಿಲ್ಲ ನನ್ನ ಹಿರಿಯಕ್ಕ, ದೊಡ್ಡವಳಾಗಿದ್ದಾಳೆ, ಕೆಂಚು ಕೂದಲವಳುಅವಳ ಕಣ್ಣ ತುಳುಕಿದೆ ಮೂಲಭೂತ ಕನಸುನಾನೆಂದೆ ಕಿರಿಯಳಿಗೆ: “ಬದುಕು ಬಲು ಸಿಹಿ.ಕೆಟ್ಟದ್ದೆಲ್ಲ ಕೊನೆಯಾಗುತ್ತದೆ. ಅಮ್ಮ ನಕ್ಕಳು, ಎಲ್ಲರ ಆಂತರ್ಯ ಅರಿತವರು ನಗುವಂತೆ;ನನ್ನ ಭುಜಗಳ ಮೇಲೆ ತನ್ನೆರಡೂ ಕೈಗಳ ಇಟ್ಟಳುನನ್ನನ್ನೇ ಕಣ್ಣುನೆಟ್ಟು ನೋಡಿದಳುನನಗೆ ಕಣ್ಣಲ್ಲಿ ನೀರು ಬಂತು. ಮನೆಯಲ್ಲೇ ಬೆಚ್ಚಗಿನ ಕೋಣೆಯಲ್ಲಿಕೂತು ಉಂಡೆವುವಸಂತದ ಮುಗಿಲು….ಅದನ್ನು ಕಾಣಲು, ಕಿಟಕಿ ತೆರೆದೆವು. ನಾವು ಸುಮ್ಮನೆ ಹಳೆಯದನೆಲ್ಲ ಮೆಲುಕುತ್ತಕೂತಿದ್ದಾಗನನ್ನ ತಂಗಿ – ಕಿರಿಯವಳು – ನಡುವೆ ಮಾತು ತೆಗೆಯುತ್ತಾಳೆ: *******

ಅನುವಾದ ಸಂಗಾತಿ Read Post »

ಕಥಾಗುಚ್ಛ

ಕಥಾಯಾನ

ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು  ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು.          ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ  ಬೇಲ್ ಪೂರಿ, ಚುರುಮುರಿ ಮಸಾಲೆ ಸೌತೆಕಾಯಿ ಮಾರುತ್ತಾ ನಿಂತಿರುತ್ತಿದ್ದ ರಾಮು, ದೂರದ ಸಕಲೇಶಪುರದಿಂದ ಬಂದಿದ್ದ ಸಂದೇಶನಿಗೆ ಆಪತ್ಬಾಂಧವನಾಗಿದ್ದ. ಸಂದೇಶ್ ಓದುವುದಕ್ಕೆಂದು ಬೆಂಗಳೂರಿಗೆ ವಲಸೆ ಬಂದವನು, ಬಿಳಿಕೆರೆ ಏರಿಯಾದ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ  ದಿನಗಳಿಂದಲೂ, ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಎಚ್ಚರವಾಗುವುದು ತಡವಾದಾಗ, ಪರೀಕ್ಷೆಗಳಿದ್ದ ಸಮಯದಲ್ಲಿ, ಅಡುಗೆಗೆ ಸಮಯ ಹೊಂದಿಸಲಾಗದೇ, ರಾಮುವಿನ ಗಾಡಿ ಮುಂದೆ ಹಾಜರಾಗಿ, ತಿಂಡಿ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದ. ಎಂಜಿನಿಯರಿಂಗ್ ಕಾಲೇಜಾಗಿದ್ದರಿಂದ ಲ್ಯಾಬ್ ಗಳಿದ್ದು ಸಂಜೆ ತಡವಾಗಿ ಮನೆಗೆ ಬರುವಂತಹ ದಿನಗಳಲ್ಲಿ  ಬೇಲ್ ಪೂರಿಯನ್ನೋ, ಮಂಡಕ್ಕಿಯ ಚುರುಮುರಿಯನ್ನೋ ಕಟ್ಟಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ. ಮೂರು ವರ್ಷಗಳ ತನಕ ರೂಮಿನಲ್ಲಿ ಅಡುಗೆ ಮಾಡಲಾಗದ ಬಹುತೇಕ ದಿನಗಳಲ್ಲಿ ರಾಮುವಿನ ತಳ್ಳುವ ಗಾಡಿಯ ತಟ್ಟೆಇಡ್ಲಿ, ಮಸಾಲೆ ವಡೆ, ಸಂಜೆಯ ಸ್ನ್ಯಾಕ್ ಗಳು ಸಂದೇಶನಿಗೆ ಒಂದು ರೀತಿಯ ಕಡಿಮೆ ಖರ್ಚಿನ, ಶ್ರಮರಹಿತ ಹೊಟ್ಟೆಪಾಡು ಎನ್ನುವಂತಾಗಿದ್ದವು. ರಾಮುವಿನ ತಿನಿಸುಗಳ್ಯಾವೂ ಆರೋಗ್ಯದ ಮೇಲೆ ವಕ್ರದೃಷ್ಟಿಬೀರದೇ ಇದ್ದುದರಿಂದ ಬೇರೆ ಜಾಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲದಾಯಿತು.          ರಾಮು ಸಂಕೋಚದ ಸ್ವಭಾವದವನಾಗಿದ್ದರೂ ಅವನ ಸಣ್ಣ ವಯಸ್ಸು, ಮುಗ್ಧತೆಯನ್ನು ಕಂಡು ಜನರಿಲ್ಲದಿದ್ದ ಸಮಯದಲ್ಲಿ ಸಂದೇಶನು ತಾನೇ ಮಾತಿಗಿಳಿಯುತ್ತಿದ್ದ. “ ಏನೋ ಹುಡುಗಾ, ಇಡ್ಲಿ ವ್ಯಾಪಾರ ಮಾಡಿ ಸ್ಕೂಲ್ ಗೆ ಎಷ್ಟೊತ್ತಿಗೆ ಹೋಗ್ತೀಯೋ?” ಅಂದರೆ, ‘ಯಾಪಾರ ಮುಗಿಸಿದ್ಮೇಲೆ’ ಅಂದು ಸುಮ್ಮನಾಗಿಬಿಡುತ್ತಿದ್ದ.  ಕೆಲವೊಮ್ಮೆ ಇವನ ವ್ಯಾಪಾರವೆಲ್ಲ ಮುಗಿದ ಮೇಲೆ ಗಾಡಿಗೆ ಸಾಮಾನು ತುಂಬಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಹೆಂಗಸರೊಬ್ಬರು ಬರುತ್ತಿದ್ದುದನ್ನು ಗಮನಿಸಿದ್ದ ಸಂದೇಶ, ಹುಡುಗನ ಅಮ್ಮ ಎಂಬುದನ್ನು ತಿಳಿದು ‘ಸ್ಕೂಲ್ ಗೆ ಹೋಗುವ ವಯಸ್ಸಿನ ಹುಡುಗನ್ನ ವ್ಯಾಪಾರಕ್ಕೆ ನಿಲ್ಲಿಸಿದೀರಿ, ಸಂಜೆಯೂ ವ್ಯಾಪಾರದಲ್ಲೇ ಇರ್ತಾನೆ. ಸರಿಯಾಗಿ ಓದ್ತಾನಾ ಏನು?’ ಎಂದು ಕೇಳಿದ್ದಕ್ಕೆ  ಅಮ್ಮ ಮಗ ಇಬ್ಬರೂ ಮುಖ ನೋಡುತ್ತಾ  ಹೌದೆನ್ನುವಂತೆ ಕತ್ತು ಅಲ್ಲಾಡಿಸಿದ್ದರು. ಸಂದೇಶನಿಗೆ ಯಾಕೋ ಅನುಮಾನವೆನಿಸಿತು.        ಒಂದು ಸಂಜೆ ಚುರುಮುರಿ ತೆಗೆದುಕೊಂಡು ಬೇರೆ ಗ್ರಾಹಕರಾರೂ ಇಲ್ಲದ್ದನ್ನು ಕಂಡ ಸಂದೇಶ, ರಾಮುವಿನ ಬಗ್ಗೆ ಸ್ವಲ್ಪ ವಿಚಾರಿಸಿದ. ಅಷ್ಟರಲ್ಲಿ ರಾಮುವೂ ಸಹ ಸಂಕೋಚ ಸರಿಸಿ ಸಂದೇಶನೊಂದಿಗೆ ಮಾತನಾಡುವಷ್ಟು ಹೊಂದಿಕೊಂಡಿದ್ದ.  “ಹೇ ರಾಮು, ನೀನ್, ನನ್ನ ಸೋಮಾರಿ ಮಾಡ್ತಿದ್ದೀಯೇನೋ ಅನಿಸ್ತಿದೆ ಕಣೋ”  ಇನ್ನೂ ಎರಡು ವರ್ಷ ಕಾಲೇಜು ಇದೆ, ಅಷ್ಟರಲ್ಲಿ ನಾನು ಅಡುಗೆ ಮಾಡಿಕೊಳ್ಳೋದೇ ನಿಲ್ಲಿಸಿಬಿಡ್ತೀನೇನೋ ಅನ್ಸತ್ತೆ, ಕೆಲವು ಸಾರ್ತಿ”  ಅನ್ನುತ್ತಾ ಹಾಗೆಯೇ ಪಕ್ಕದಲ್ಲಿ ನಿಂತು ಮೊಣಕೈಯಿಂದ ಮೆಲ್ಲನೆ ನೂಕಿದ. “ಓ, ನೀವೇನ್ ಸಂದೇಶಣ್ಣ ಅಪರೂಪಕ್ಕೆ ಬರೋವ್ರು, ಬಸ್ಸಿಗೆ ಹೋಗುವ ಎಷ್ಟೊಂದ್ ಜನ ರೆಗ್ಯುಲರ್ ಕಸ್ಟಮರಿದಾರೆ ಗೊತ್ತಾ? ಸಂಜೆನೂ ಪರಾಠ, ರಾಗಿಮುದ್ದೆ ತರ ಅಡುಗೆ ಮಾಡಿದ್ರೆ ಅವರಿಗೆ ಅನುಕೂಲ ಅಂತಾರೆ” ಅಂದು ತನ್ನ ಕೆಲಸದಲ್ಲಿ ತೊಡಗಿದ. “ಹೌದೇನೋ, ವ್ಯಾಪಾರ ಜೋರಾಗಿ ಆಗ್ತಿದೆ ಅನ್ನು ಮತ್ತೆ… ಹಂಗಂತ ಓದೋ ಕಡೆ ಗಮನ ಬಿಟ್ಟು ಬರೀ ದುಡ್ಡು ನೋಡೋ ತರ ಆಗಬೇಡ ಮತ್ತೆ” ಎಂದಿದ್ದಕ್ಕೆ ರಾಮು, “ಎಲ್ಲಣ್ಣಾ, ಆರನೇ ಕ್ಲಾಸಿಗೇ ಸ್ಕೂಲ್ ನಿಲ್ಸಾಯ್ತು, ಈ ಕೆಲಸದಲ್ಲಿ  ನಿಲ್ಲೋಕೇಂತ” ಅಂದ. ಸಂದೇಶನ ಅನುಮಾನ ನಿಜವಾಗಿತ್ತು. ಏನೆಂದು ವಿಚಾರಿಸಿದರೆ, ಅವರ ಅಮ್ಮನ ಮನೆಯಲ್ಲಿ ಬಡತನ, ಕನಕಪುರದ ಕಡೆ ದಿನಗೂಲಿ ಕೆಲಸ ಮಾಡಿಕೊಂಡು ಕಾಲೋನಿಯೊಂದರ ಸಣ್ಣ ಮನೆಯಲ್ಲಿ ವಾಸವಾಗಿದ್ದವರು. ಅಪ್ಪ ಹೊಸೂರಿನ ಕಡೆಯಿಂದ  ಕೆಲಸಕ್ಕೆಂದು ಬಂದಿದ್ದು, ರಾಮುವಿನ ಅಜ್ಜನಿಗೆ ಸ್ವಲ್ಪ ಪರಿಚಯವಾದ್ದರಿಂದ ಮಗಳನ್ನು ಮದುವೆ ಮಾಡಿದ್ದನಂತೆ. ರಾಮು ಆನಂತರ ಒಬ್ಬಳು ತಂಗಿ ಇದ್ದು, ಮದುವೆಯಾಗಿ ಹತ್ತು ವರ್ಷವಾಗುವಷ್ಟರಲ್ಲಿ ಅಪ್ಪ ಎಲ್ಲಿಯೋ ಹೋಗಿ ವಾಪಸಾಗಲಿಲ್ಲವಂತೆ. ಸಂಸಾರದ ಜವಾಬ್ದಾರಿ ಹೊತ್ತ ಅಮ್ಮ, ಸರ್ಕಾರಿ ಶಾಲೆಯಲ್ಲಿದ್ದ ರಾಮುವನ್ನೂ ತಂಗಿಯನ್ನೂ ಕರೆದುಕೊಂಡು ಬೆಂಗಳೂರು ಸೇರಿದರೆಂದು ಹೇಳಿದ.            ರಾಯರ ಮಠದ ಸ್ವಲ್ಪ ದೂರದಲ್ಲಿದ್ದ  ಸಣ್ಣ ಬೀದಿಯಲ್ಲಿ ಕಡಿಮೆ ಬಾಡಿಗೆಯ ಮನೆ ಹಿಡಿದು, ಕೆಲಸಕ್ಕೆಂದು ಹುಡುಕುವಾಗ ಮಠದ ಆವರಣವನ್ನು ಗುಡಿಸುವ, ನಿತ್ಯ ಮುಂಬಾಗಿಲು ತೊಳೆಯುವ ಕೆಲಸವಾಗಿ, ಆನಂತರ ಮೂರ್ನಾಲ್ಕು ಮನೆ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮ ಹೇಗೋ ದಿನ ದೂಡುತ್ತಿದ್ದರು. ಮಠದ ಹಿಂದಿನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರೊಬ್ಬರ ಸಲಹೆಯಂತೆ, ಬಸ್ ಸ್ಟಾಂಡಿಗೆ ಬರುವ ಅನೇಕರಿಂದ ಬೆಳಗಿನ ತಿಂಡಿಯ ವ್ಯಾಪಾರ ಹೊಳೆದಿತ್ತಂತೆ.  ತಕ್ಕಮಟ್ಟಿಗೆ ಅಡುಗೆ ಗೊತ್ತಿದ್ದ ರಾಮುವಿನ ಅಮ್ಮ ತಟ್ಟೆಇಡ್ಲಿ ವ್ಯಾಪಾರಕ್ಕೆ ಮುಂದಾಗಿ,  ಆವರಣ ಗುಡಿಸುವ ಹೆಂಗಸಿನ ಅಡುಗೆ ವ್ಯಾಪಾರವನ್ನು ಯಾರಾದರೂ ಮೆಚ್ಚಿಯಾರೇ ಎಂದುಕೊಂಡು, ವ್ಯಾಪಾರ ನಿಭಾಯಿಸುವ ಹೊಣೆ ರಾಮುವಿಗೆ ಬಂದಾಯಿತು. ಆ ಬಗ್ಗೆ ನೋವು ಬಚ್ಚಿಕೊಂಡು ಅಭಿಮಾನದಲ್ಲಿ, ಅಮ್ಮನ ಸಂಪಾದನೆಗೆ ಕಡಿಮೆಯಿಲ್ಲದಂತೆ ಬೆಳಗಿನ ಹಾಗೂ ಸಂಜೆಯ ಮೂರ್ನಾಲ್ಕು ಗಂಟೆಗಳಲ್ಲಿ ಸಂಪಾದಿಸಿಕೊಂಡು ತಂಗಿಯನ್ನು ಓದಲು ಕಳಿಸ್ತಿದ್ದಾರೆ. ಸಂದೇಶನಿಗೆ ಕೇಳಿದ್ದು ಪಿಚ್ಚೆನಿಸಿದರೂ ಬದುಕಿನ ಅನಿವಾರ್ಯತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಎಂದುಕೊಂಡು ಸಣ್ಣ ಬೇಸರದಿಂದಲೇ ಬೆನ್ನುತಟ್ಟಿದ. ‘ನಮ್ಮಮ್ಮ “ಬೆಟ್ಟದ ಹೂವು” ಸಿನಿಮಾ ನೋಡಿ ನನಗೆ ರಾಮು ಅಂತ ಹೆಸರಿಟ್ಟಿದ್ದಂತೆ ಸಂದೇಶಣ್ಣಾ’ ಅನ್ನುತ್ತಾ ಪುನೀತ್ ರಾಜಕುಮಾರರ ಬಾಲ್ಯದ ಚಿತ್ರವೊಂದನ್ನು ಗಾಡಿಯ ತುದಿಯಲ್ಲಂಟಿಸಿರುವುದು ತೋರಿಸಿಸುವಾಗ ಅವನ ಕಣ್ಣುಗಳ ಹೊಳಪು, ಕಷ್ಟದ ಬದುಕಾದರೂ ಚೈತನ್ಯಕ್ಕೆ ಕುಂದಿಲ್ಲ ಎನಿಸುವಂತಿತ್ತು.        ಸಂದೇಶನ ಮೂರನೇ ವರ್ಷದ ಕಾಲೇಜು ಮುಗಿದು ರಜೆಗೆ ಊರಿಗೆ ಹೋಗಿದ್ದಾಗ, ಬಿಳಿಕೆರೆ ಸರ್ಕಲ್ಲಿನಲ್ಲೊಂದು ಹೊಸ ಫಲಹಾರ ಭವನ ತಲೆಯೆತ್ತಿತ್ತು. “ಶ್ರೀ ರಾಘವೇಂದ್ರ ಭವನ, ಸಸ್ಯಾಹಾರಿ” ಎನ್ನುವ ಸಣ್ಣ ಅಕ್ಷರಗಳ ನಾಮಫಲಕದಲ್ಲಿ, ಬಾಳೆ ಎಲೆಗಳ ದೊಡ್ಡ ಚಿತ್ರದಲ್ಲಿ ತಟ್ಟೆಇಡ್ಲಿ, ಉದ್ದಿನ ವಡೆಗಳು ತಾಜಾತನವನ್ನು ಹೊರಹೊಮ್ಮುತ್ತಿರುವಂತೆ ಕಾಣುತ್ತಿದ್ದವು. ರಾಯರ ಮಠದ ಹಿಂಭಾಗದ ಬಿಳಿಕೆರೆ ಬಸ್ ಸ್ಟಾಂಡಿಗೆ ಕಾಣುವಂತೆ ಹೊಸ ಎಸ್ಆರ್ ಬಿ ಮಳಿಗೆಯು, ರಾಮುವಿನ ತಳ್ಳುವ ಗಾಡಿಯ ನಿಲ್ದಾಣಕ್ಕೆ ನೂರು ಅಡಿಯಷ್ಟು ದೂರದಲ್ಲಿದ್ದಿತ್ತು. ಅಲ್ಲಿಯತನಕ ಅಷ್ಟೇನೂ ಜೋರು ವ್ಯಾಪಾರವಿಲ್ಲದಿದ್ದರೂ, ನಿತ್ಯವೂ ತಪ್ಪದಂತೆ ವ್ಯಾಪಾರಕ್ಕೆ ಬರುತ್ತಿದ್ದ ರಾಮುವಿಗೆ  ಈಗ ಹೊಚ್ಚ ಹೊಸ ಎಸ್ ಆರ್ ವಿ ಭವನದ ಅಡುಗೆ ಕೋಣೆಯಿಂದ ಬರುವ ತಾಜಾ ಚಟ್ನಿಯ ಘಮಲು, ಉದ್ದಿನ ವಡೆ ಕರಿಯುವ, ನರುಗಂಪಿನ ಡಿಕಾಕ್ಷನ್ ಕಾಫಿಯ  ಸುವಾಸನೆ, ಮಿರುಗುವ ಹೊಸ ಟೇಬಲ್ಲುಗಳು, ಬಾಳೆ ಎಲೆಯ ಹಸಿರು ಹಿನ್ನೆಲೆಯಲ್ಲಿ ಬಿಳಿಯ ತಟ್ಟೆಇಡ್ಲಿಯ ಮೇಲೆ ಹೊಂದಿಕೆಯಾಗುವಂತಹ ತಿಳಿ ಕೇಸರಿ ಬಣ್ಣದ ಚಟ್ನಿ, ಇವೆಲ್ಲಾ ಆಕರ್ಷಣೆಗಳನ್ನೂ ಎದುರಿಸಬೇಕಾದ ಸವಾಲು ಕಾದಿತ್ತು. ಯಾವಾಗಲೋ ಬಣ್ಣ ಬಳಿದಂತೆ ಕಾಣುವ ನಾಲ್ಕು ಸೈಕಲ್ ಚಕ್ರದ ತಳ್ಳುವ ಗಾಡಿಯ ಮೇಲೆ  ಹಬೆಯನ್ನು ಹೊಮ್ಮುವ ಒಂದು ಪಾತ್ರೆ, ಇಡ್ಲಿ ಬಡಿಸುವ ಪ್ಲಾಸ್ಟಿಕ್ ತಟ್ಟೆ ಅದರ ಮೇಲೊಂದು ಒಣಗಿದ ಮುತ್ತುಗದ ಎಲೆ, ಕುಡಿಯುವ ನೀರು ತುಂಬಿರಿಸಿದ್ದ  ಮೂರು ಪ್ಲಾಸ್ಟಿಕ್ ಜಗ್ಗುಗಳು, ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆಯ ಮುಂದೆ ಝೀರೋ ವ್ಯಾಟ್ ಬಲ್ಬಿನಂತಾಯಿತು.          ಆದರೂ ಧೃತಿಗೆಡದವನಂತೆ ತನ್ನ ಪಾಡಿಗೆ ತಾನು ಮಾಮೂಲಿನ ಜಾಗದಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ರಾಮುವಿಗೆ  ಒಂದೆರಡು ವಾರಗಳಲ್ಲಿ ಎಸ್.ಆರ್ ಬಿ ಯ ವತಿಯಿಂದ ಒಂದು ನೋಟೀಸ್ ಬಂತು. ವ್ಯಾಪಾರದ ಪ್ರಮಾಣ ಕ್ಷೀಣಿಸಿದ್ದಕ್ಕೆ ತಕ್ಕಂತೆ ತಟ್ಟೆಇಡ್ಲಿ, ಮಸಾಲೆ ವಡೆಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡಿದ್ದ ರಾಮು ಮೊದಲಿನಂತೆ ಹತ್ತೂವರೆಯ ಬಸ್ಸು ಹೊರಡುವ ತನಕ ಕಾಯದೇ ಮಾರಾಟವಾಗುವ ಇಡ್ಲಿಯ ಪ್ರಮಾಣದ ಆಧಾರದ ಮೇಲೆ ಜಾಗ ಖಾಲಿ ಮಾಡುತ್ತಿದ್ದನು. ಸ್ವಸಹಾಯ ಪದ್ಧತಿಯ ಎಸ್ ಆರ್ ವಿ ಯ ಮಳಿಗೆಯಲ್ಲಿ ತಿಂಡಿ ಸರಬರಾಜು ಮಾಡುತ್ತಾ ಗಲ್ಲಾಪೆಟ್ಟಿಗೆಯನ್ನೂ ನಿಭಾಯಿಸುವ ನಲವತ್ತು ದಾಟಿರಬಹುದಾದ ಮಧ್ಯವಯಸ್ಸಿನ ಭಟ್ಟರು, ಹಣೆಗೆ ಮಠದ ಚಂದನ, ಕುಂಕುಮವನ್ನು ಹಣೆಗೆ ಧರಿಸಿ, ಒಳಗಿನ ಜನಿವಾರ ಕಾಣುವಂತಹ ತೆಳುವಾದ ಬನಿಯನ್ನು ಧರಿಸಿ ನೀಟಾಗಿರುತ್ತಿದ್ದರು.  ಕಪ್ಪಗೆ ಕುಳ್ಳಗೆ ಇದ್ದ, ಇನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸಿನ ರಾಮುವಿನಿಂದ ಅವರಿಗೇನೂ ಉಪಟಳವಾಗುವಂತಿರಲಿಲ್ಲ. ಆದರೂ ರಾಯರ ಮಠದ ಆವರಣಕ್ಕೆ ತಕ್ಕನಾಗಿದ್ದ ಉಪಹಾರ ಭವನದ ಕಣ್ಣಳತೆಯ ದೂರದಲ್ಲಿ ರಾಮುವಿನ ಗಾಡಿಯನ್ನು ಕಾಣುವುದೆಂದರೆ ಅವರಿಗೆ ಅಷ್ಟಾಗಿ ಸರಿಕಾಣಲಿಲ್ಲ. ಮಠದ ಮೂಲಕ ಪರಿಚಯವಾಗಿದ್ದ ಸ್ಥಳೀಯರೊಬ್ಬರಿಗೆ ಈ ವಿಚಾರವನ್ನು ನಯವಾಗಿ ಹೇಳಿದ ಭಟ್ಟರು ಬೇರೆ ಎಲ್ಲಾದರೂ ಜಾಗ ನೋಡಿಕೊಳ್ಳುವಂತೆ ನೋಟೀಸು ಕಳಿಸಿಕೊಟ್ಟಿದ್ದರು. ರಾಮು ಹೆಚ್ಚೇನೂ ಮಾತನಾಡದೇ ‘ನಾಲ್ಕು ವರ್ಷದಿಂದ ಇಲ್ಲೇ ಬತ್ತೀನಿ, ಇಲ್ಲಿ ತರಕಾರಿ ಮಾರುವ ಕೆಲವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಸ್ ಸ್ಟಾಂಡಿಗೆ ಬರೋವ್ರು ಯಾಪಾರ ಮಾಡ್ತಾರೆ ಅಂತ ಇಲ್ಲಿದಿನಿ; ಈಗ ಒಂದೇ ಸಲ ಬೇರೆ ಜಾಗ ಅಂದರೆ” ಎಂದು ಮೆಲುದನಿಯಲ್ಲೇ ಹೇಳುತ್ತಾ “ಏನ್ ಕೊಡ್ಲಿ ಸಾರ್” ಎಂದು ಕೇಳಿದ.  “ನಿನ್ನ ಪುರಾಣ ಕೇಳೋಕೆ ಟೈಮಿಲ್ಲ, ಹೇಳ್ದಷ್ಟು ಮಾಡೋದುಕಲಿ” ಎಂದು ಭಟ್ಟರ ನೋಟೀಸುದಾರರು ಹೊರಟು ಹೋಗಿದ್ದರು. ವ್ಯಾಪಾರದ ಈ ಹೊಸ ಸ್ಪರ್ಧಾತ್ಮಕತೆಯ ಬಗ್ಗೆ ಏನೂ ಮಾತನಾಡದಿದ್ದರಿಂದ, ತಾನಾಗಿಯೇ ಕೆದಕಿ ಕೇಳದೇ ಸಂದೇಶನೂ ತನ್ನಷ್ಟಕ್ಕಿದ್ದು ಮಾಮೂಲಾಗಿ ತಿಂಡಿ ಕಟ್ಟಿಸಿಕೊಂಡು ಹಿಂತಿರುಗುತ್ತಿದ್ದನು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಕೆಲಸಗಳ ಪ್ರಯುಕ್ತ ಕಾಲೇಜಿಗೆ ಲೇಟಾಗಿ ಹೋಗುತ್ತಿದ್ದಾಗ ವಾರದ ಕೆಲವು ದಿನಗಳು, ದಾರಿಯಲ್ಲಿ ರಾಮುವಿನ ಗಾಡಿಯ ಗೈರುಹಾಜರಿಯನ್ನು ಸಂದೇಶ ಗಮನಿಸಿದ್ದ. ಆನಂತರ ಶಾಶ್ವತವೆನಿಸುವಂತೆ, ರಾಮು  ಒಂದು ದಿನ ಇದ್ದಕ್ಕಿದ್ದ ಹಾಗೆ ಹೇಳದೇ ಕೇಳದೇ ಮಾಯವಾಗಿಬಿಟ್ಟಿದ್ದ. ಹಾಗಾಗಿ ತಿಂಡಿಗೆ ಅನಿವಾರ್ಯವೆನಿಸಿದಾಗ ಎಸ್ ಆರ್ ಬಿ ಯನ್ನೋ ಅಥವಾ ಕಾಲೇಜು ಕ್ಯಾಂಟೀನನ್ನೋ ಅವಲಂಬಿಸತೊಡಗಿದ. ಮುಖ ನೋಡುತ್ತಲೇ ತಿಂಡಿ ಪ್ಯಾಕ್ ಮಾಡದೇ,  ಕೌಂಟರ್ ಗೆ ಹೋಗಿ ಆರ್ಡರ್ ಮಾಡಿ ಹಣಕೊಟ್ಟು, ಮಾಣಿಗೆ ಟೋಕನ್ ತಲುಪಿಸುವಾಗ  ಬೆಟ್ಟದ ಹೂವಿನ ನಾಯಕನಂತಹ ಮಹತ್ವಾಕಾಂಕ್ಷಿ ರಾಮು ನೆನಪಾಗುತ್ತಿದ್ದ.        ಕಾಲೇಜು ಮುಗಿಸಿ ಕೆಲಸ ಪ್ರಾರಂಭಿಸಿದ್ದ ಸಂದೇಶನು ನಿತ್ಯ ಬಿಳಿಕೆರೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುವುದು ದೂರವೆನಿಸಿ, ಆಫೀಸಿನ ಒಂದು ಶಾಖೆ ಜಯನಗರದಲ್ಲೂ ಇದ್ದುದರಿಂದ ಎರಡೂ ಬ್ರಾಂಚುಗಳಿಗೆ ಸಮಾನ ದೂರವೆನಿಸುವಂತೆ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿದ್ದ. ಕಾಲೇಜಿಗೆ ಹೋಗುವಾಗಿನ ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ಬೈಕ್ ಬದಲಾಯಿಸಿ ಹೊಸ ಬುಲೆಟ್ಟ್ ಖರೀದಿಸಿದ್ದ. ಒಂದು ದಿನ ಸೌತ್ಎಂಡ್ ಸರ್ಕಲ್ಲಿನ ಟ್ರಾಫಿಕ್ ಲೈಟ್ ಕಾಯುತ್ತಾ ನಿಂತಿದ್ದಾಗ, ಅಚಾನಕ್ಕಾಗಿ ಅಪರಿಚಿತ ದನಿಯೊಂದು “ಸಂದೇಶಣ್ಣ” ಎಂದು ಕೂಗಿದಂತಾಗಿ ಸುತ್ತ ನೋಡುವಾಗ ಆಟೋ ಒಂದರಿಂದ ಮೆಲ್ಲನೆ ತಲೆ ಹೊರಗೆ ಬಂದಿದ್ದು ಕಂಡ. ದೃಷ್ಟಿಯಿಟ್ಟು ಗಮನಿಸಿ ಇಡ್ಲಿರಾಮು ಎಂದು ಗೊತ್ತುಮಾಡಿಕೊಂಡು ಅವನತ್ತ ಬರುವಂತೆ ಸೂಚಿಸಿ ಸಿಗ್ನಲ್ ನೋಡಿದ. ಅಷ್ಟರಲ್ಲಿ ಆಟೋ ಗೆ ಹಣಕೊಟ್ಟು ಇಳಿದುಬಂದ ರಾಮುವನ್ನು ಕೂರಿಸಿಕೊಂಡು ಮುಂದಿನ ರಸ್ತೆಯ ಕ್ಯಾಂಟೀನಿನತ್ತ ನಿಲ್ಲಿಸಿ ವಿಚಾರಿಸತೊಡಗಿದ-         “ಏನೋ ರಾಮು, ಧಿಡೀರನೆ ಮಾಯವೂ ಆಗ್ತೀಯ, ಮತ್ತೆ ಹೀಗೇ ಪ್ರತ್ಯಕ್ಷನೂ ಆಗ್ತೀಯಾ, ಹೇಗಿದ್ದೀಯಾ” ಎಂದು ವಿಚಾರಿಸುತ್ತಲೇ ತನ್ನ ಓದು ಮುಗಿಸಿ ಕೆಲಸ ಶುರುಮಾಡಿ ಹೊಸ ಏರಿಯಾದಲ್ಲಿರುವುದನ್ನೂ ಹೇಳಿದ. ಬಿಳಿಕೆರೆಯ ತಳ್ಳುವ ಗಾಡಿಗೆ ಒಂದು ದಿನ ಪೊಲೀಸ್ ಪೇದೆಯೊಬ್ಬರು ಬಂದು ಹೆದರಿಸಿ ಗಾಡಿ ಸೀಝ್ ಮಾಡ್ತೀವಿ ಅಂದಿದ್ದನ್ನೂ, ಅದಾಗಿ ಒಂದು ವಾರದಲ್ಲಿ ಸ್ಥಳೀಯ ದಾಂಡಿಗರಿಬ್ಬರು ಗಾಡಿಯ ಚಕ್ರವನ್ನು ಜಖಂಗೊಳಿಸಿದರೆಂದೂ ನಂತರ ಬಾಡಿಗೆಯ ತಳ್ಳುವ ಗಾಡಿಯೂ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು ಗೊತ್ತಿತ್ತು. ಅವನ ಮನೆಯವರಿಗೆ ಇದು ಸ್ವಲ್ಪ ಮುಜುಗರ ಎನಿಸಿದರೂ, ಸ್ವತ: ರಾಮಣ್ಣನಿಗೆ ಅದರಿಂದ ಯಾವ ಬೇಸರವಾಗಲಿ, ಮುಜುಗರವಾಗಲಿ ಇರಲಿಲ್ಲ. ತಾನು ಜುಗ್ಗ ಎನಿಸಿಕೊಳ್ಳುವ ನಿಟ್ಟಿನಲ್ಲಿನ ಆತನ ಪ್ರಯತ್ನ ಮುಂದುವರೆದಿತ್ತು. ಊರಲ್ಲಿ ತನ್ನ ಹೆಸರಿನ ಹಿಂದೆ ಸೇರಿಕೊಂಡ ಜುಗ್ಗ ಎನ್ನುವ ಶಬ್ದ ತನಗೆಸಿಕ್ಕ ಯಾವುದೊ ಪ್ರಶಸ್ತಿಯೇನೊ ಎಂಬಂತೆ ಒಳಗೊಳಗೆ ಖುಶಿ ಪಡುವಷ್ಟರ ಮಟ್ಟಿಗೆ ರಾಮಣ್ಣ ಅದಕ್ಕೆ ಒಗ್ಗಿ ಹೋಗಿದ್ದ. ಹಾಗೆ ನೋಡಿದರೆ ರಾಮಣ್ಣನೇನು ಹುಟ್ಟಾ ಶ್ರೀಮಂತನೇನಲ್ಲ. ಅವರ ಅಪ್ಪ ಆ ಕಾಲದಲ್ಲಿ ಒಂದು ಸೈಕಲ್ ಶಾಪ್ ಇಟ್ಟುಕೊಂಡು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಚಿರಪರಿಚಿತರಾಗಿದ್ದರು. ಹೈಸ್ಕೂಲು ದಾಟದ ರಾಮಣ್ಣನೂ ಕ್ರಮೇಣ ಸೈಕಲ್ ಶಾಪಿನ ಕೆಲಸಕ್ಕೆ ನಿಂತು ಬಿಟ್ಟ. ಪಂಕ್ಚರ್ ಹಾಕುವುದರಿಂದ ಹಿಡಿದು ವೀಲ್ ಬೆಂಡ್ ತೆಗಿಯೋವರೆಗಿನ ಅಷ್ಟೂ ಕೆಲಸಗಳನ್ನು ಕಲಿತುಕೊಂಡು ಸೈಕಲ್ ರಿಪೇರಿಯ ವಿಚಾರದಲ್ಲಿ ಪಂಟರ್ ಅನಿಸಿಕೊಂಡಿದ್ದ. ರಾಮಣ್ಣನಿಗೆ ಇಪ್ಪತ್ಕಾಲು ವರ್ಷವಾಗಿದ್ದಾಗ ಅವರ ಅಪ್ಪ ತುಮಕೂರಿನ ವ್ಯಾಪಾರಸ್ಥರೊಬ್ಬರ ಮಗಳುಸಾವಿತ್ರಮ್ಮನ ಜೊತೆ ಮದುವೆ ಮಾಡಿಸಿದ್ದರು..ರಾಮಣ್ಣನನ್ನು ಮದುವೆಯಾಗಿ ಬರುವಾಗ ಸಾವಿತ್ರಮ್ಮನೇನು ಬರಿಗೈಲಿ ಬಂದಿರಲಿಲ್ಲ. ಆ ಕಾಲದಲ್ಲಿಯೇ ಇಪ್ಪತ್ತು ಸಾವಿರ ರೂಪಾಯಿ ನಗದು ಕಾಲು ಕೆಜಿ ಬಂಗಾರ ಅರ್ದ ಕೆಜಿ ಬೆಳ್ಳಿ ಒಡವೆಗಳ ಗಂಟಿನೊಂದಿಗೆಯೇ ಬಂದಿದ್ದಳು. ಒಂದರ ಹಿಂದೆ ಒಂದರಂತೆ ನಾಲ್ಕು ಮಕ್ಕಳ ತಾಯಿಯಾದ ಸಾವಿತ್ರಮ್ಮನಿಗೆ ಮಾವ ಇರುವತನಕ ಯಾವ ಕಷ್ಟವೂ ಎದುರಾಗಿರಲಿಲ್ಲ. ಮನೆ ಮತ್ತು ಅಂಗಡಿಗಳ ವ್ಯವಹಾರಗಳನ್ನು ತನ್ನ ಕೈಲೇ ಇಟ್ಟುಕೊಂಡಿದ್ದ ರಾಮಣ್ಣನ ಅಪ್ಪ ತೀರಾ ದಾರಾಳಿಯಲ್ಲದಿದ್ದರು ಮನೆಗೆ ತಂದು ಹಾಕುವಲ್ಲಿ ಉಣ್ಣುವುದು ತಿನ್ನುವುದರಲ್ಲಿ ಜುಗ್ಗತನ ತೋರಿಸಿದವನಲ್ಲ. ಹೀಗಾಗಿ ರಾಮಣ್ಣನ ಮಕ್ಕಳು ತಾತನ ಆರೈಕೆಯಲ್ಲಿಯೇ ಬೆಳೆಯತೊಡಗಿದ್ದರು. ರಾಮಣ್ಣನ ಮೊದಲ ಮೂರೂ ಮಕ್ಕಳು ಗಂಡು ಮಕ್ಕಳಾಗಿದ್ದು ನಾಲ್ಕನೆಯದು ಮಾತ್ರ ಹೆಣ್ಣಾಗಿತ್ತು. ನಾಲ್ಕನೆಯದಾಗಿ ಹೆಣ್ಣು ಹುಟ್ಟಿದ ಮೂರನೆ ತಿಂಗಳಿಗೆ ರಾಮಣ್ಣನ ಅಪ್ಪ ಪಾಶ್ರ್ವವಾಯುವಿಗೆ ತುತ್ತಾಗಿ ಶಿವನ ಪಾದ ಸೇರಿಬಿಟ್ಟಿದ್ದರು. ಅಲ್ಲಿಂದಾಚೆಗೆ ರಾಮಣ್ಣನ ಯಜಮಾನಿಕೆ ಶುರುವಾಯಿತು. ಕೈಗೆ ವ್ಯವಹಾರ ಸಿಕ್ಕೊಡನೆ ರಾಮಣ್ಣ ಕೈ ಬಿಗಿಮಾಡತೊಡಗಿದ. ಸೈಕಲ್ಲು ಶಾಪಿಗೆ ಬರುತ್ತಿದ್ದ ಗಿರಾಕಿಗಳ ಕಷ್ಟ ಸುಖ ತಿಳಿದುಕೊಂಡಿರುತ್ತಿದ್ದ ರಾಮಣ್ಣ ನಿದಾನವಾಗಿ ಮನೆಯಲ್ಲಿದ್ದ ದುಡ್ಡನ್ನು ಬಡ್ಡಿಗೆ ಬಿಡತೊಡಗಿದ. ಮೊದಲು ಸಣ್ಣದಾಗಿ ಶುರು ಮಾಡಿಕೊಂಡ ಈಬಡ್ಡಿ ವ್ಯವಹಾರ ರಾಮಣ್ಣನ ಕೈ ಹಿಡಿಯತೊಡಗಿತು. ಮೊದಮೊದಲು ನಂಬಿಕೆಗೆ ಸೀಮಿತವಾಗಿ ನಡೆಯುತ್ತಿದ್ದ ವ್ಯವಹಾರ ಕ್ರಮೇಣ ಪತ್ರಗಳನ್ನು ಬರೆಸಿಕೊಳ್ಳುವ ಹಂತಕ್ಕೆ ಬಂದಿತ್ತು. ದಿನಕಳೆದಂತೆ ರಾಮಣ್ಣ ನಿದಾನವಾಗಿ ದೊಡ್ಡ ವ್ಯವಹಾರಗಳಿಗೆ ಕೈ ಹಾಕತೊಡಗಿದ್ದ. ಮನೆಪತ್ರ, ಹೊಲಗದ್ದೆಗಳ ಪತ್ರವನ್ನು, ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಕೊಡತೊಡಗಿದ. ಈ ಲೇವಾದೇವಿವ್ಯವಹಾರ ದೊಡ್ಡದಾಗುತ್ತಿದ್ದಂತೆ ಸೈಕಲ್ಲುಗಳ ಜಾಗದಲ್ಲಿ ಆಗತಾನೆ ಮಾರ್ಕೆಟ್ಟಿಗೆ ಬಂದ ಮೋಟಾರ್ ಸೈಕಲ್ಲುಗಳ ಹಾವಳಿ ಕಂಡ ರಾಮಣ್ಣ ತನ್ನದೇ ಆದ ಮೋಟಾರ್ ಸೈಕಲ್ ಮಾರಾಟದ ಶೋರೂಮನ್ನು ಪ್ರಾರಂಬಿಸಿದ. ಅದರಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯ ತೊಡಗಿತು. ಈ ನಡುವೆ ತನ್ನ ಲೇವಾದೇವಿ ವ್ಯವಹಾರಗಳಲ್ಲಿ ಪೋಲೀಸರ ಕಿರಿಕಿರಿ ತಡೆಯಲಾಗದೆ ನಾಮಕಾವಸ್ಥೆಗೆ ಒಂದು ಫೈನಾನ್ಸ್ ಕಂಪನಿ ರಿಜಿಸ್ಟರ್ ಮಾಡಿಸಿ ತನ್ನ ವ್ಯವಹಾರದ ಇಪ್ಪತ್ತೈದರಷ್ಟನ್ನು ಅದರ ಮೂಲಕ ಮಾಡ ತೊಡಗಿ, ಸರಕಾರದ ಕಣ್ಣಿಗೆ ಮಣ್ಣೆರಚಿ ವ್ಯವಹಾರ ನಡೆಸ ತೊಡಗಿದ. ಊರೊಳಗೆ ನಷ್ಟದಲ್ಲಿ ನಡೆಯುತ್ತಿದ್ದ ಒಂದು ರೈಸ್ ಮಿಲ್ಲನ್ನು ಖರೀಧಿಸಿ ಅದನ್ನು ಅಭಿವೃದ್ದಿ ಪಡಿಸಿ ಲಾಭ ಬರುವಂತೆ ಮಾಡಿಕೊಂಡ. ಕೊಟ್ಟ ಸಾಲ ಹಿಂದಿರುಗಿಸಲಾಗದವರ ಹತ್ತಾರು ಏಕರೆ ಗದ್ದೆ, ಅಡಿಕೆ ತೋಟಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಜಮೀನ್ದಾರನೆಂಬ ಹೆಸರು ಗಳಿಸಿಕೊಂಡ. ಇಷ್ಟೆಲ್ಲ ಆದರೂಹೀಗೆ ಯಥೇಚ್ಚವಾಗಿ ಸೇರುತ್ತಲೇ ಹೋದ ದುಡ್ಡು ಮನೆಯಲ್ಲಿ ಅವನ ಹೆಂಡತಿ ಮಕ್ಕಳಿಗೆ ಯಾವುದೆ ಸುಖಸಂತೋಷ ತರಲೇಇಲ್ಲ. ಮನೆಯಲ್ಲಿ ಒಂದು ಅಡುಗೆಮಾಡುವ ವಿಚಾರದಲ್ಲೂ ರಾಮಣ್ಣನ ಅನುಮತಿ ಬೇಕಾಗಿತ್ತು. ಆತ ತಂದು ಕೊಟ್ಟ ದಿನಸಿಯಲ್ಲಿಯೇ ಸಾವಿತ್ರಮ್ಮ ಸಂಸಾರ ನಿಬಾಯಿಸಬೇಕಿತ್ತು. ಮಕ್ಕಳು ಆಸೆಯಿಂದ ಏನಾದರು ತಿಂಡಿ ಕೇಳಿದರೂ ರಾಮಣ್ಣ ಸಂತೋಷವಾಗಿರುತ್ತಿದ್ದ ಸಮಯ ನೋಡಿ ಕೇಳಿ ಆತನ ಅಪ್ಪಣೆ ಪಡೆದೆ ಮಾಡಿಕೊಡಬೇಕಾಗಿತ್ತು. ಅವನ ಗಂಡುಮಕ್ಕಳಿಗು ಅಪ್ಪನ ಜುಗ್ಗತನ ಅರ್ಥವಾಗಿ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬೆಳೆಯ ತೊಡಗಿದ್ದರು. ವರ್ಷದಲ್ಲಿ ಗೌರಿ ಹಬ್ಬ ಮತ್ತು ದೀಪಾವಳಿಗೆ ಬಟ್ಟೆ ತೆಗೆಯುವಾಗಲೂ ಮೂವರು ಗಂಡು ಮಕ್ಕಳಿಗು ಒಂದೇ ತರದ ಅಗ್ಗದ ಬಟ್ಟೆ ತೆಗೆಯುತ್ತಿದ್ದ. ಅವನ್ನು ಹೊಲಿಸುವಾಗಲು ಅವರ ಅಳತೆಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ದೊಡ್ಡದಾಗಿಹೊಲಿಸುತ್ತಿದ್ದ.ಇನ್ನು ತನ್ನ ಮನೆಗೆ ಯಾರೇ ನೆಂಟರು ಬಂದರೂ ನೆಟ್ಟಗವರು ಒಂದು ರಾತ್ರಿಯೂ ಇರಬಾರದ ರೀತಿಯಲ್ಲಿ ಕಟುಕಿಯಾಡಿ ಕಳಿಸಿಬಿಡುತ್ತಿದ್ದ.ಅವನ ಇಂತಹ ಜಿಪುಣತೆಯನ್ನು ಕಂಡ ಸಾವಿತ್ರಮ್ಮನ ತವರಿನವರು ಸಹ ಈ ಕಡೆ ತಲೆಹಾಕಿ ಮಲಗುವುದನ್ನು ನಿಲ್ಲಿಸಿಬಿಟ್ಟಿದ್ದರು.ಗಂಡು ಮಕ್ಕಳಿಗೆ ಹದಿನಾರು ವರ್ಷ ದಾಟಿದರೂ ಯಾವತ್ತೂ ಅವರು ಒಂದೇ ಒಂದು ರೂಪಾಯಿ ತೆಗೆದುಕೊಂಡು ಅಂಗಡಿಗೆ ಹೋಗಿ ಸಾಮಾನು ತಂದವರಲ್ಲ.ಅವರುಗಳು ಹೈಸ್ಕೂಲು ಮುಗಿಸುವಷ್ಟರಲ್ಲಿ ಒಬ್ಬೊಬ್ಬರನ್ನೇ ತನ್ನ ವ್ಯವಹಾರಗಳನ್ನು ನಡೆಸಲು ಬಳಸಿಕೊಳ್ಳತೊಡಗಿದ.ದೊಡ್ಡ ಮಗ ಶೋರೂಮಿನಲ್ಲಿ ಕೂತರೂ ದಿನಸಂಜೆ ಅಪ್ಪನಿಗೆ ಪೈಸೆಪೈಸೆಗೆ ಲೆಕ್ಕ ಒಪ್ಪಿಸಬೇಕಿತ್ತು.ಬಂದ ಗಿರಾಕಿಗಳಿಗೆ ಒಂದು ಲೋಟ ಕಾಫಿ ತರಿಸಿ ಕುಡಿಸಲು ಸ್ವಾತಂತ್ರವಿಲ್ಲದೆಯೆ ಅವನು ಶೋರೂಮಲ್ಲಿ ಕೂರಬೇಕಿತ್ತು ಎರಡನೆಯವನು ಫೈನಾನ್ಸ್ ಆಪೀಸಲ್ಲಿ ಕೂತು ಲೆಕ್ಕಾಚಾರ ನೋಡಿಕೊಳ್ಳಬೇಕಿತ್ತು. ಜೊತೆಗೆ ಸಾಲ ವಸೂಲಿ ಮಾಡಿ ಅಪ್ಪನಿಗೆ ತಂದು ಕೊಡುವುದಷ್ಟನ್ನೆ ಮಾಡಬೇಕಾಗಿತ್ತು. ಇನ್ನು ವಸೂಲಿಗೆ ಹೋಗಲು ಹಳೆಯಕಾಲದ ಸೈಕಲ್ಲನ್ನೇ ತುಳಿಯಬೇಕಿತ್ತೇ ಹೊರತು ಮೋಟಾರ್ ಬೈಕು ಇರಲಿಲ್ಲ. ತಮ್ಮದೇಆದ ಮೋಟಾರ್ ಬೈಕಿನ ಶೋರೂಮಿದ್ದರೂ ಮಕ್ಕಳು ಮಾತ್ರ ಸೈಕಲ್ಲು ತುಳಿದೆ ಕೆಲಸ ಮಾಡಬೇಕಾಗಿತ್ತು. ಯಾರಾದರೂಅವನ ಸರೀಕರು ರಾಮಣ್ಣನನ್ನು ಕೇಳಿದರೆ ಸಯಕಲ್ಲು ಅನ್ನೋದು ನಮಗೆ ಮನೆದೇವರಿದ್ದ ಹಾಗೆ. ಅದರ ಪುಣ್ಯದಿಂದಲೇ ನಾವಿವತ್ತು ಈ ಮಟ್ಟಿಗೆ ಬಂದಿರುವುದೆಂದು ತಿಪ್ಪೆ ಸಾರಿಸುತ್ತಿದ್ದ. ಮೂರನೆಯವನು ರೈಸುಮಿಲ್ಲಿಗೆ ಹೋಗುತ್ತಾ ಗದ್ದೆತೋಟಗಳ ನಿಗಾ ವಹಿಸಿ ಕೆಲಸ ಮಾಡಬೇಕಾಗಿತ್ತೇ ಹೊರತು ಐದೇ ಐದು ಪೈಸೆಯ ಮುಖ ಕೂಡಾ ನೋಡಿರಲಿಲ್ಲ. ಇನ್ನು ರಾಮಣ್ಣ ಸ್ವತ: ತಾನಾದರು ಸುಖ ಅನುಭವಿಸಿದನೆ ಅಂದರೆ ಅದೂ ಇಲ್ಲ. ಒಂದು ದಿನವೂ ಒಳ್ಳೆಯ ಊಟಮಾಡದೆ ಒಂದೊಳ್ಳೆಯ ಬಟ್ಟೆ ಹಾಕದೆ ಜಿಪುಣತನದಲ್ಲಿಯೇ ಬದುಕುತ್ತಿದ್ದ. ಇನ್ನು ಊರಲ್ಲಿನ ಯಾವುದೇ ಸಮಾರಂಭಗಳಿಗೂ ನಯಾಪೈಸೆ ಕೊಡುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಾಗಿಲಿಗೆ ಸಾಲ ಕೇಳುವವರ ಹೊರತಾಗಿ ಬೇರೆಯವರೂ ಬರುತ್ತಿರಲಿಲ್ಲ. ಹಬ್ಬ ಹರಿದಿನಗಳನ್ನು ಆಚರಿಸಿದರೆ ಖರ್ಚಾಗುತ್ತದೆ ಅಂತ ಸಾವಿತ್ರಮ್ಮನ ತವರು ಮನೆಗೆ ಹೆಂಡತಿ ಮಕ್ಕಳನ್ನು ಕಳಿಸಿ ತಾನೊಬ್ಬನೆ ಮನೆಯಲ್ಲಿ ಇದ್ದು ಬಿಡುತ್ತಿದ್ದ. ಅವರು ಹೋಗಲು ಮಾತ್ರ ರೈಲಿನ ಟಿಕೇಟಿಗೆ ದುಡ್ಡು ಕೊಡುತ್ತಿದ್ದರಿಂದ ವಾಪಾಸು ಬರುವಾಗ ಅವಳ ತವರು ಮನೆಯವರೆ ಅವರನ್ನು ಕರೆದುಕೊಂಡು ಬಂದು ಬಿಟ್ಟುಹೋಗಬೇಕಾಗಿತ್ತು.. ರಾಮಣ್ಣ ಜುಗ್ಗರಾಮಣ್ಣನಾಗಿ ಹೀಗೆ ಹೆಸರುಮಾಡಿರುವಾಗಲೆ ನಡೆದ ಘಟನೆಯೊಂದು ರಾಮಣ್ಣನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ರಾಮಣ್ಣನ ಮೂವರು ಗಂಡುಮಕ್ಕಳ ನಂತರ ಹಿಟ್ಟಿದ ಮಗಳು ಸುಮ ಪಿಯುಸಿ ಓದುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋದವಳು ಮನೆಗೆವಾಪಾಸು ಬರದೆಕಣ್ಮರೆಯಾಗಿ ಬಿಟ್ಟಿದ್ದಳು. ಹಾಗೆ ನೋಡಿದರೆ ರಾಮಣ್ಣನಿಗೆ ಮಗಳನ್ನು ಕಂಡರೆ ಬಹಳ ಪ್ರೀತಿ ಇತ್ತು. ಎಷ್ಟೇ ಜುಗ್ಗನಾದರೂ ಮನೆಯಲ್ಲಿ ಬೇರ್ಯಾರಿಗು ಕಾಣದಂತೆ ಆಕೆಗೆ ಗುಟ್ಟಾಗಿ ತುಂಬಾ ದುಡ್ಡು ಕೊಡುತ್ತಿದ್ದ. ಅವಳಿಗೆ ಏನು ಬೇಕಾದರು ತೆಗೆದುಕೊಳ್ಳಲು ನಡೆದುಕೊಳ್ಳಲು ಸ್ವಾತಂತ್ರ ಕೊಟ್ಟಿದ್ದ. ಆದರೆ ಅವಳ ಮೇಲೆ ತನಗಿರುವ ಪ್ರೀತಿಯನ್ನು ಅವನ್ಯಾವತ್ತು ಬಹಿರಂಗವಾಗಿ ತೋರಿಸಿಕೊಂಡವನಲ್ಲ. ಅಂತಹ ಮಗಳು ವಾರವಾದರು ಮನೆಗೆ ಬಾರದೆ ನಾಪತ್ತೆಯಾದಾಗ ರಾಮಣ್ಣ ಕುಸಿದು ಕುಳಿತು ಬಿಟ್ಟಿದ್ದ. ವಾರ ಕಳೆದರು ಅವನು ಮನೆಯಿಂದಾಚೆ ಬರಲೆ ಇಲ್ಲ. ಕೊನೆಗೆ ಗಂಡು ಮಕ್ಕಳೆ ಸ್ಟೇಷನ್ನಿಗೆ ಹೋಗಿಕಂಪ್ಲೇಟ್ ಕೊಟ್ಟು ಬಂದಿದ್ದರು. ಹತ್ತನೆ ದಿನದ ಹೊತ್ತಿಗೆ ಅವಳು ಅದೇ ಊರಿನ ಹುಡುಗನನ್ನು ಮದುವೆಯಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿರುವುದು ಗೊತ್ತಾಯಿತು. ಈ ವಿಷಯ ಕೇಳಿದ ಸಾವಿತ್ರಮ್ಮ ಹೆಂಚು ಹಾರಿಹೋಗುವಂತೆ ಕಿರುಚಾಡಿ ಅಳುವಾಗ ‘ಮುಚ್ಚೇ ಬಾಯಿ! ಅವಳಿಗಿಷ್ಟ ಬಂದವನನ್ನು ಮದುವೆ ಮಾಡಿಕೊಂಡು ಹೋಗಿದ್ದಾಳೆ. ಎಲ್ಲೋ ಸುಖವಾಗಿರಲಿ’ ಅಂತೇಳಿ ಎಲ್ಲರಲ್ಲು ಅಚ್ಚರಿ ಹುಟ್ಟಿಸಿದ್ದ. ಬೆಂಗಳೂರಿಗೆ ಹೋಗಿ ಅವಳನ್ನು ನೋಡಿಕೊಂಡು ಬರೋಣ ಅಂತ ಹೆಂಡತಿ ಮಕ್ಕಳು ಹೇಳಿದರೂ ರಾಮಣ್ಣ ಸುತಾರಂ ಒಪ್ಪದೇ ಹೋದ.ಅಷ್ಟರಲ್ಲಿ ಊರಲ್ಲಿ ಇನ್ನೊಂದಿಷ್ಟು ವಿವರಗಳು ಬಯಲಾಗ ತೊಡಗಿದ್ದವು ಸುಮಾ ಪ್ರೀತಿಸಿ ಮದುವೆಯಾದ ಹುಡುಗ ಬೇರೆ ಯಾರೂ ಆಗಿರದೆ ನಾಲ್ಕು ವರ್ಷಗಳ ಹಿಂದೆ ರಾಮಣ್ಣನ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಾಗ ಅವಮಾನ ಸಹಿಸಲಾಗದೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಪ್ಪನ ಮಗ ಎನ್ನುವ ವಿಷಯವೇಊರಲ್ಲಿ ಕುತೂಹಲದ ಕತೆಯಾಗಿ ಹರಡಿತ್ತು. ರಾಮಣ್ಣನ ಮೇಲಿನ ಸೇಡಿನಿಂದಲೇ ಆ ಹುಡುಗ ಸುಮಾಳನ್ನು ತಲೆ ಕೆಡಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂದು, ಸ್ವಲ್ಪ ದಿನವಾದ ಮೇಲೆ ಅವಳನ್ನು ಕೈಬಿಟ್ಟು ತವರು ಮನೆಗೆ ಓಡಿಸುತ್ತಾನೆಂದು ಜನ ಮಾತಾಡಿಕೊಳ್ಳತೊಡಗಿದ್ದರು. ಈ ವಿಷಯ ರಾಮಣ್ಣನ ಕಿವಿಗೂ ಬಿದ್ದಿತ್ತು. ಇದನ್ನು ಕೇಳಿದ ಸಾವಿತ್ರಮ್ಮನಂತು ಅಯ್ಯೋ ಈ ಗಂಡಸಿನ ಜುಗ್ಗತನದಿಂದ ನನ್ನ ಮಗಳ ಜೀವನ ಹಾಳಾಯಿತಲ್ಲ ಎಂದು ಎದೆ ಬಡಿದುಕೊಂಡು ಮನೆತುಂಬಾ ಉರುಳಾಡಿ ಅತ್ತಳು. ಗಂಡು ಮಕ್ಕಳು ಅಪ್ಪನನ್ನು ಮಾತಾಡಿಸುವ ಧೈರ್ಯ ಸಾಲದೆ ಕೂತುಬಿಟ್ಟಿದ್ದರು. ಅಂತೂ ಗಂಡ ಏನಾದರು ಅಂದುಕೊಂಡು ಸಾಯಲಿ ಎಂದುಕೊಂಡ ಸಾವಿತ್ರಮ್ಮ ಅವತ್ತು ಸಾಯಂಕಾಲ ಮೂವರು ಗಂಡುಮಕ್ಕಳನ್ನು ಕರೆದು ರೂಮಿನಲ್ಲಿ ಕೂತಿದ್ದ ಗಂಡನಿಗೆ ಕೇಳುವಂತೆ ನಾಳೆ ಬೆಳಗ್ಗಿನ ರೈಲಿಗೆ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ನೋಡಿಕೊಂಡು ಬರೋಣ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಎಂದು ಹೇಳಿದಾಗ ನಡುಮನೆಯಲ್ಲಿ ಸಾಲಾಗಿ ಕೂತಿದ್ದ ಗಂಡು ಮಕ್ಕಳು ಮೌನವಾಗಿ ತಲೆಯಾಡಿಸಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡರಾಮಣ್ಣ ಏನೂ ಮಾತಾಡಿರಲಿಲ್ಲ. ರಾತ್ರಿ ಮಾಮೂಲಿಯಂತೆಎಂಟುಗಂಟೆಗೆ ಊಟಕ್ಕೆ ಕರೆದಾಗ ಹೊರಗೆದ್ದು ಬಂದ ರಾಮಣ್ಣ ಹೆಂಡತಿ, ಮೂರೂಮಕ್ಕಳನ್ನು ಮುಂದೆ ಕೂರಿಸಿಕೊಂಡು ತನ್ನ ಕೈಲಿದ್ದ ಸಣ್ನ ಪೆಟ್ಟಿಗೆಯನ್ನು ಸಾವಿತ್ರಮ್ಮನ ಕೈಲಿ ಕೊಟ್ಟು ಇದರಲ್ಲಿ ಮನೆ, ಶೋರೂಂ, ಪೈನಾನ್ಸ್ , ಸೈಟು-ಮನೆಗಳ ಪತ್ರಗಳು,ಬ್ಯಾಂಕುಗಳ ಪಾಸ್ ಬುಕ್ಕುಗಳು ಸೇರಿದಂತೆ ಎಲ್ಲ ಪತ್ರಗಳೂ ಇವೆ. ನೀವು ಬೆಂಗಳೂರಿಗೆ ಹೋಗುವ ಮುಂಚೆ ಈ ಆಸ್ತಿಯನ್ನು ನಾಲ್ಕು ಭಾಗವನ್ನಾಗಿ ಮಾಡಿ ನಾಲ್ಕೂ ಮಕ್ಕಳ ಹೆಸರಿಗೆ ಮಾಡಿಸಿಬಿಡು. ನಮ್ಮ ಲಾಯರ್ ವೆಂಕಟೇಶಯ್ಯ ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಗೆ ಬರ್ತಾರೆ. ನೀವೆಲ್ಲ ಕೂತು ಮಾತಾಡಿ ಯಾರ್ಯಾರಿಗೆ ಏನೇನು ಅಂತ ನಿದರ್ಾರ ಮಾಡಿಕೊಳ್ಳಿ ಎಂದು ಯಾರೀಗೂ ಪ್ರಶ್ನೆ ಕೇಳುವ ಅವಕಾಶ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಬೆಳಿಗ್ಗೆ ಒಂಭತ್ತು ಗಂಟೆಯಾದರು ಯಾಕೆ ಎದ್ದಿಲ್ಲವೆಂದು ಸಾವಿತ್ರಮ್ಮ ಗಂಡನ ರೂಮಿಗೆ ಹೋದರೆ ಅವನಲ್ಲಿರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ಯಾವುದಾದರು ವಸೂಲಿಗೆ ಹೋಗಿರಬೇಕೆಂದು ಕೊಳ್ಳುವಷ್ಟರಲ್ಲಿ ಲಾಯರ್ ವೆಂಕಟೇಶಯ್ಯ ಬಂದರು. ರಾಮಣ್ಣನ ಅನುಪಸ್ಥಿತಿಯಲ್ಲಿಯೇ ಅವರುಗಳು ಆಸ್ತಿಯ ಪತ್ರಗಳನ್ನಿಟ್ಟುಕೊಂಡು ಮಾತಾಡತೊಡಗಿದರು. ಅವರೆಲ್ಲ ಒಂದು ತೀಮರ್ಾನಕ್ಕೆ ಬರುವಷ್ಟರಲ್ಲಿ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಅಷ್ಟು ಹೊತ್ತಾದರು ರಾಮಣ್ಣ ಬರದೆ ಹೋದಾಗ ಎಲ್ಲರಿಗು ಆತಂಕ ಅನುಮಾನ ಶುರುವಾಗಿತ್ತು. ಮತ್ತೊಂದು

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಬಿಚ್ಚಲು ಪ್ಯಾರಿಸುತ ಎಲ್ಲಿ ನೀನಿಲ್ಲವೋ… ಎಲ್ಲಿ ನೀನಿಲ್ಲವೋ ಅಲ್ಲಿ ನಾನೂ ಇಲ್ಲ ಅದು ನಿಲಯವಾಗಿದ್ದರು, ಆಲಯದಂತಿದ್ದರೂ, ಇದ್ದರೂ ಅದು ಶರೀರವಷ್ಟೇ..! ಮನಸು ನಿನ್ನ ಬೆನ್ನು ಬಿದ್ದಿದೆ ಆ ಕರಿನೆರಳಿನಂತೆ, ಮಾರುದ್ದ ಜಡೆಗೆ ಮುಡಿದ ಮಲ್ಲಿಗೆಯಂತೆ, ಹಿಂದೆ ಅಲೆಯುವ ಸೀರೆಸೆರಗಿನ ಗಾಳಿಯಂತೆ, ಗಾಳಿಯಲ್ಲಿ ಬರುವ ಹೂಡಿದೂಳಿನಂತೆ ಯಾವಾಗಲೂ ನೀ ನನ್ನಲ್ಲೇ ಇರುವೆ ಸದಾ ನೀರಿನಲಿರುವ ಮೀನಿನಂತೆ ನೀ ಪ್ರೇತವೆಂದರು,ಭೂತವೆಂದರು…! ನಾನಂತೂ ನಿನ್ನ ಬೆನ್ನು ಬಿಡೇನು ನಿನ್ನೊಮ್ಮೆ ತಿರುಗಿ ನೋಡುವಂತಿದ್ದರೆ ನಾ ಯಾವಾಗಲೂ ನಿನ್ನ ಕಣ್ಣ ಮುಂದೆ ಕಾಯ ಎರಡಾದರೇನು…? ಹೃದಯದ ಗರ್ಭದಲ್ಲಿರುವ ಪ್ರೀತಿ ಒಂದೇ ಅಲ್ಲವೇ..? ಈ ಬಿಳಿಹಾಳೆಯಲಿ ಅದೆಷ್ಟು ನಾ ತೋರ್ಪಡಿಸಲಿ ಅದೆಷ್ಟೇ ನಾ ತೋರ್ಪಡಿಸಿದರೂ ಅದು ಗುಲಗಂಜಿ ತೂಕವಷ್ಟೇ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನ ಅಡುಗೆ ಅಮೆರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ ಕೂಗುವ ಹೊತ್ತಿಗೆ ಎದ್ದು ತನ್ನ ಕೆಲಸದಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಸುಮಾರು ಐದುಮುಕ್ಕಾಲಿಗೆ ಅಮ್ಮನ ಕೆಲಸಗಳ ಧಡಬಡ ಸದ್ದು ಕೇಳಲು ಶುರುವಾಗುತ್ತಿತ್ತು. ಸುಮಾರು ನೂರೈವತ್ತು ಅಡಿ ಉದ್ದ ಹದಿನೈದು ಅಡಿ ಅಗಲದ ಮನೆಯ ಅಂಗಳವನ್ನು ಗುಡಿಸಿ ನೀರು/ಗಂಜಲ ಹಾಕಿ ಸಾರಿಸಿ ರಂಗೋಲಿಯಿಟ್ಟು, ಹೊಸ್ತಿಲು ತೊಳೆದು ಅರಿಶಿನ ಕುಂಕುಮಗಳಿಂದ ಅಲಂಕಾರ ಮಾಡಿ, ಬಿಸಿನೀರಿನ ಒಲೆ ಹಚ್ಚುತ್ತಿದ್ದರು. ಆಮೇಲೆ ಕೊಟ್ಟಿಗೆಯಿಂದ ದನಗಳನ್ನೆಲ್ಲ ಹೊರಗೆ ಕಟ್ಟಿ ಕೊಟ್ಟಿಗೆ ಕಸ ಗುಡಿಸಲು ಅಣಿಯಾಗುತ್ತಿದ್ದರು. ಇವೆಲ್ಲವೂ ನಡೆಯುವಾಗ ನನ್ನ ನಿದ್ರೆ ಸಾಂಗವಾಗಿ ಸಾಗುತ್ತಲೇ ಇರುತ್ತಿತ್ತು. ಹಬ್ಬದ ದಿನಗಳಲ್ಲಿ ಮಾತ್ರ ಮಾತಿನಲ್ಲೇ ತಿವಿದು ತಿವಿದು ಏಳುವವರೆಗೆ ಬಿಡುತ್ತಲೇ ಇರಲಿಲ್ಲವಾದ್ದರಿಂದ ಆ ದಿನಗಳಲ್ಲಿ ಅಮ್ಮನ ನಿತ್ಯದ ಕೆಲಸಗಳನ್ನು ಗಮನಿಸುವುದು ಸಾಧ್ಯವಿತ್ತು. ಮಿಕ್ಕ ದಿನಗಳಲ್ಲಿ ಅಮ್ಮ ಕೆಲಸಗಳನ್ನೆಲ್ಲ ಮುಗಿಸಿ ನಮ್ಮ ಮನೆಯಲ್ಲಿದ್ದ ಪುಟ್ಟ ಫಿಲಿಪ್ಸ್ ರೇಡಿಯೋ ಹೊತ್ತಿಸಿದಾಗಲೇ ನನಗೆ ಬೆಳಗಾಗುತ್ತಿದ್ದುದು. ಅದರಲ್ಲೂ, ಇಯಂ ಆಕಾಶವಾಣಿಃ, ಸಂಪ್ರತಿ ವಾರ್ತಾಹ ಶ್ರೂಯಂತಾಂ, ಪ್ರವಾಚಕಾಃ ಬಲದೇವಾನಂದ ಸಾಗರಃ ಅಂದಾಗ, ಸರಿಯಾಗಿ ಆರುಮುಕ್ಕಾಲು…. ಆ ಮಾರಾಯ ಬಲದೇವಾನಂದ ಸಾಗರಾಹ ಗೆ ಹುಷಾರು ತಪ್ಪುತ್ತಲೇ ಇರಲಿಲ್ಲವೇನೋ. ಒಂದೂ ದಿನ ತಪ್ಪದ ಹಾಗೆ ಸಂಸ್ಕೃತ ವಾರ್ತೆ ಕೇಳಿಸುತ್ತಿದ್ದರು. ನಂತರ ಚಿಂತನ, ಆಮೇಲೆ ಪ್ರದೇಶ ಸಮಾಚಾರ ಹೀಗೆ ರೇಡಿಯೋ ಕಾರ್ಯಕ್ರಮಗಳು ಮುಂದುವರಿಯುತ್ತಿರುವಾಗ ನನಗೂ ಹಾಸಿಗೆಗೂ ಇರುವ ಅಂಟು ನಿಧಾನವಾಗಿ ಬಿಡಿಸಿಕೊಳ್ಳುತ್ತಿತ್ತು. ಅಂಟು ಅಂದರೆ ಅದೊಂದು ನೀಳ್ಗತೆ. ಇಲ್ಲಿ ಸ್ವಲ್ಪ polished ಭಾಷೆಯಲ್ಲಿ ಹೇಳ್ತೇನೆ. ಬಾಲ್ಯದಲ್ಲಿ ನಾನು bedwetting ಮಾಡಿಕೊಳ್ಳುವ ಹವ್ಯಾಸ ಇತ್ತು; ಹವ್ಯಾಸ ಅನ್ನುವುದಕ್ಕೆ ಅದೇನು ಫೋಟೋಗ್ರಫಿ, ಪಕ್ಷಿವೀಕ್ಷಣೆ, ಚಾರಣ ಇಂತಹದ್ದೇನಲ್ಲ. ನಿತ್ಯವೂ ತಪ್ಪದೇ ನಡೆಯುತ್ತಿದ್ದರಿಂದ ಹಾಗಂದಿದ್ದು. ನನ್ನ ಬಾಲ್ಯದಲ್ಲಿ ಕನಸು ನನಸಾಗುತ್ತಿದ್ದುದು ಉಂಟು. ಅದು ಈ ಹವ್ಯಾಸದ ಮೂಲಕವಷ್ಟೇ! ನಿತ್ಯವೂ ನಾನು ಹೊರಗೆಲ್ಲೋ ಹೋಗಿ ಸೂಸು ಮಾಡಿಬಂದಿರುತ್ತಿದ್ದೆ. ಎಚ್ಚರವಾದಾಗ ಎಂದಿನಂತೆ ಎಡವಟ್ಟಾಗಿರುತ್ತಿತ್ತು!! ಕನ್ನಡಕ್ಕೆ ಅನುವಾದಿಸಿದರೆ ಆ ಬಾಲ್ಯದ ಸಂಕೋಚ ಮತ್ತೆ ಮರಳಿಬಿಡುವುದಲ್ಲಾಂತ ಈ ರೀತಿ ಪಾಲಿಶ್ ಮಾಡಿದ್ದೇನಷ್ಟೇ. ಸಧ್ಯಕ್ಕೆ ಈ ಕತೆ ಇಲ್ಲಿಗೇ ನಿಂತಿರಲಿ. ಅಮ್ಮನ ಹೊರಗಿನ ಕೆಲಸಗಳೆಲ್ಲ ಮುಗಿದು ಅಡುಗೆ ಮನೆಗೆ ಬಂದು ರೊಟ್ಟಿ ಮಾಡಲು ಅಣಿ ಮಾಡಿಕೊಳ್ಳುತ್ತಿದ್ದರು. ಅಮ್ಮನ ತಿಂಡಿ ಅಂದರೆ ಅದು ರೊಟ್ಟಿಯೇ. ಅಪ್ಪಿತಪ್ಪಿ ಉಪ್ಪಿಟ್ಟೋ ಚಿತ್ರಾನ್ನವೋ ಆದರೆ ಆ ದಿನ ಅಮ್ಮನ ಆರೋಗ್ಯ ಸರಿಯಿಲ್ಲ ಅಂತ ಅರ್ಥ, ಅಥವಾ ಬೆಳಗಿನ ಗ್ರಹಚಾರ ನೆಟ್ಟಗಿಲ್ಲ ಅಂತ ಇನ್ನೊಂದು ಅರ್ಥ. ರೊಟ್ಟಿಯ ಹೊರತಾಗಿ ಬೇರೆ ಯಾವುದೇ ತಿಂಡಿಯನ್ನೂ ನಾನೂ ನನ್ನ ಕೊನೆಯ ಸೋದರಮಾವನೂ ಒಕ್ಕೊರಲಿನಿಂದ ನಿರಾಕರಿಸುತ್ತಿದ್ದೆವು. ಅದರಲ್ಲೂ ಅಕ್ಕಿರೊಟ್ಟಿಯೇ ಆಗಬೇಕು. ಅಪರೂಪಕ್ಕೆ ಒಮ್ಮೊಮ್ಮೆ ಅಕ್ಕಿಹಿಟ್ಟು ಖಾಲಿಯಾಗಿ ಮುದ್ದೆ ಮಾಡಲು ಯಥೇಚ್ಛವಾಗಿರುತ್ತಿದ್ದ ರಾಗಿ ಹಿಟ್ಟಿನ ರೊಟ್ಟಿಯೇನಾದರೂ ಆಯ್ತೋ, ಅದಕ್ಕೂ ಗ್ರಹಚಾರ ಬಿಡಿಸುತ್ತಿದ್ದೆವು. ರೊಟ್ಟಿಗೆ ನಿತ್ಯವೂ ತೆಂಗಿನಕಾಯಿ ಚಟ್ನಿ, ಮುಂಗಾರಿನಲ್ಲಾದರೆ ತಿಂಗಳ ಹುರುಳಿಯ ಕಾಯಿ ಫಲ್ಯ, ಆಲೂಗಡ್ಡೆ ಫಲ್ಯ. ಅಮ್ಮನ ಆ ಒಂದು ರೊಟ್ಟಿ ತಿಂದರೆ ಮಧ್ಯಾಹ್ನ ಊಟದ ಅಗತ್ಯವಿರುತ್ತಿರಲಿಲ್ಲ. ಹಾಗಾಗಿ ಸ್ಕೂಲ್ ನ ಮಧ್ಯಾಹ್ನದ ಊಟದ ಸಮಯದಲ್ಲಿ ಅದೆಷ್ಟು ಒತ್ತಾಯಿಸಿದರೂ, ಗೆಳೆಯರ ಜೊತೆಯಲ್ಲಿ ಆಟ ಆಡುವುದಕ್ಕೆ ಜಾರಿಕೊಳ್ತಿದ್ದೆ. ಹಾಗೆ ಆಟ ಆಡುವಾಗ, ಕಳ್ಳ ಪೊಲೀಸ್ ಆಟವೇನಾದರೂ ಆಗಿದ್ದು, ಗುಡ್ಡದಂತೆ ಇದ್ದ ನಮ್ಮ ಊರಿನ ಕೆಳಭಾಗದಲ್ಲಿದ್ದ ಸ್ಕೂಲ್ ನಿಂದ ಗುಡ್ಡದ ತುದಿಯಲ್ಲಿದ್ದ ನಮ್ಮ ಮನೆಯ ಸಮೀಪ ಬಂದದ್ದೇನಾದರೂ ಆಗಿದ್ದರೆ ಅಂತಹ ಮಧ್ಯಾಹ್ನ ಊಟಕ್ಕೆ. ಇಲ್ಲಾಂದ್ರೆ ಚಕ್ಕರ್. ಒತ್ತಾಯಗಳಿಗೆ ಮಣಿಯದ ನನ್ನನ್ನು ಬದಲಾಯಿಸಲಾಗದೇ ಅಮ್ಮನೇ ಒಂದರ್ಧ ರೊಟ್ಟಿಯನ್ನು ಬ್ಯಾಗಿನೊಳಗೆ ಹಾಕಿ ಸ್ಕೂಲಿಗೆ ಕಳಿಸ್ತಿದ್ದರು. ಅಮ್ಮನ ಅಡುಗೆ ಅಂದರೆ ಅದು ಖಾರಾ ಬಾಂಬು! ಓಹೋ, ಆ ಖಾರಾಪುಡಿಯನ್ನು ತಯಾರಿ ಮಾಡಿಕೊಳ್ಳುವುದಂತೂ ಅಮ್ಮನ ಸಂಪ್ರದಾಯ. ಮೆಣಸಿನಕಾಯಿ ಹೆಕ್ಕಿ ಅದನ್ನು ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಆಮೇಲೆ ಮೆಲು ಉರಿಯಲ್ಲಿ ಹುರಿದು ಪುಡಿಮಾಡಿಸುತ್ತಿದ್ದ ಪ್ರಕ್ರಿಯೆ, ನಮ್ಮ ರಕ್ಷಣಾ ಇಲಾಖೆಯ ಮದ್ದುಗುಂಡುಗಳ ತಯಾರಿಕೆಯ ಹಾಗೆ ಇರುತ್ತಿತ್ತು. ಇನ್ನು ಉಳಿದ ಸಂಬಾರ ಪದಾರ್ಥಗಳ ಏರ್ಪಾಡು ಅಂದರೆ ಅದು ಬಿಡಿ, ಬಜೆಟ್ ಮಂಡಿಸುವುದಕ್ಕೂ ಸಹ ಹಣಕಾಸು ಸಚಿವರು ನನ್ನ ಅಮ್ಮನ ರೀತಿಯ ತಯಾರಿ ಮಾಡಿಕೊಳ್ಳಲಾರರು! ಅಮ್ಮನ ಆ ಖಾರಾಬಾಂಬಿಗೆ ನಾವು ಎಷ್ಟು ಒಗ್ಗಿಹೋಗಿದ್ದೆವೆಂದರೆ ಯಾರಾದರೂ ನೆಂಟರು ಬಂದರೆ ಅವರ ಮೇಲಿನ ಕಾಳಜಿಯಿಂದ ಅಮ್ಮ ಸ್ವಲ್ಪ ಖಾರ ಕಡಿಮೆ ಮಾಡಿದರೂ ಅವರ ಬೆವರಿಳಿಯುತ್ತಿರುತ್ತಿತ್ತು. ನಾವು ಬೇರೆ ಮನೆಗಳಲ್ಲಿ ಊಟ ಮಾಡುವಾಗ ಉಪ್ಪಿನ ಕಾಯಿ ಇದ್ದರಷ್ಟೇ ಅಮ್ಮನ ಬಾಂಬಿಗೆ ತುತ್ತಾದ ನಮ್ಮ ನಾಲಿಗೆಗೆ ಬೇರೆಯವರ ಸಾಂಬಾರಿನ ರುಚಿ ಹೊಂದಿಸಿಕೊಳ್ಳಬಹುದಾಗಿತ್ತು. ಅಮ್ಮನ ಇನ್ನೊಂದು ವೈಖರಿಯೆಂದರೆ ಕಾಲಕ್ಕೆ ತಕ್ಕಂತೆ, ಋತು ಬದಲಾದ ಹಾಗೆ ಅಮ್ಮನ ತರಕಾರಿ ಪದಾರ್ಥಗಳೂ ಬದಲಾಗುತ್ತಿದ್ದವು. ಒಂದೇ ರೀತಿಯ ತರಕಾರಿಯನ್ನು ಯಾವತ್ತೂ ಪುನರಾವರ್ತಿಸುತ್ತಿರಲಿಲ್ಲ. ಸೊಪ್ಪು ಹೊಂದಿಸುವುದಕ್ಕಂತೂ ಅರ್ಧ ಮೈಲಿ ಸುತ್ತಿ ಬರುತ್ತಿದ್ದರು. ಇನ್ನು ಅಣಬೆ ಅಂದರೆ ಮುಂಜಾವಿನಲ್ಲಿಯೇ ಹೊರಟು ಒಂದು ಬುಟ್ಟಿ ಅಣಬೆ ಹೊಂದಿಸಿ ತಂದಿಟ್ಟಿರುತ್ತಿದ್ದರು. ಸೀಗೆಸೊಪ್ಪು, ನುಗ್ಗೆಸೊಪ್ಪು, ಬಸಳೆಸೊಪ್ಪು, ಬಿದಿರಿನ ಕಳಲೆ, ಗದ್ದೆಬದುಗಳಲ್ಲಿ ಇರ್ತಿದ್ದ ಕಹಿಎಣಿಗೆ ಸೊಪ್ಪು. ಹಲಸಿನ ಬಡುಕು, ಹಲಸಿನ ಬೀಜ, ಇವು ಕೆಲವೇ ಕೆಲವು. ಇನ್ನು ತರಕಾರಿಗೆ ತಕ್ಕಂತೆ ಹೊಂದುವ ಕಾಳುಗಳು. ಅವೂ ಸಹ ಎರಡು ದಿನಕ್ಕೆ ಪುನರಾವರ್ತನೆಯಾಗುತ್ತಿರಲಿಲ್ಲ. ಇಷ್ಟೆಲ್ಲಾ ಆಹಾರ ವೈವಿಧ್ಯತೆಯಿರುತ್ತಿದ್ದರಿಂದ ನಮಗೆ ಅನಾರೋಗ್ಯ ಅನ್ನುವುದೇ ಗೊತ್ತಿರಲಿಲ್ಲ. ಅಪರೂಪಕ್ಕೆಂದು ಜ್ವರವೋ, ಕೆಮ್ಮೋ ಆದರೆ ನಮ್ಮ ಊರಿನ ಪಕ್ಕದಲ್ಲಿರುವ ಶೆಟ್ಟಿಹಳ್ಳಿಯ ಸಂತಮರಿಯಮ್ಮನ ಆಸ್ಪತ್ರೆ. ಅಲ್ಲಿ ಒಂದು ಕ್ಯಾನ್ ನಲ್ಲಿ ಇರಿಸುತ್ತಿದ್ದ ಕೆಮ್ಮಿನ ಸಿರಪ್, ಅಥವಾ ಬಿಸಿನೀರಿನಲ್ಲಿ ಸದಾ ಕುದಿಸುತ್ತಿದ್ದ ಆ ಗಾಜಿನ ಸಿರಿಂಜುಗಳಲ್ಲಿ ಮೇಲಿನ ತುದಿಗೆ ಒಂದೆರಡು ಹನಿಯಂತೆ ಎಳೆದು ಚುಚ್ಚುತ್ತಿದ್ದ ಇಂಜೆಕ್ಷನ್ನು, ಅದೂ ಯುಗಾದಿ, ದೀಪಾವಳಿಯ ಹಾಗೆ ವರ್ಷಕ್ಕೊಂದೋ ಅಥವಾ ಎರಡೋ ಅಷ್ಟೇ! ನಾವು ಮಳೆಯಲ್ಲಿ ನೆನೆಯುವುದು ಧೂಳು ಕೊಳಕಿನಲ್ಲಿ ಆಟವಾಡುತ್ತಿದ್ದಕ್ಕೆ ಶೀತ ನೆಗಡಿ ಅನ್ನುವುದು ಆಗ್ಗಾಗ್ಗೆ ತೋರ್ಪಡಿಸಿಕೊಳ್ಳುತ್ತಿತ್ತು. ಹಾಲಿಗೆ ಒಂದಿಷ್ಟು ಮೆಣಸಿನ ಪುಡಿ, ಇನ್ನೊಂದಿಷ್ಟು ಅರಿಶಿನ ಹಾಕಿ ಬಿಸಿಯಾಗಿ ಕುಡಿದರೆ ಅದೇ ಮದ್ದು. ಅದಕ್ಕಿಂತ ಹೆಚ್ಚಿನ ಶುಶ್ರೂಷೆಯ ಅಗತ್ಯವಿರಲಿಲ್ಲ. ಆದರೆ ಅಮ್ಮನ ನಿತ್ಯದ ಖಾರಾಬಾಂಬಿನ ಜೊತೆಯಲ್ಲೇ, ಪ್ರತಿಶನಿವಾರವೂ ಕೊತಕೊತ ಕುದಿಯುತ್ತಿದ್ದ ನೀರಿನ ಅಭ್ಯಂಜನ. ಅದಂತೂ ಲಾವಾರಸವೇ ಮೈಮೇಲೆ ಹರಿದ ಹಾಗಿರುತ್ತಿತ್ತು. ನಾನಂತೂ ಶನಿವಾರದ ಸ್ನಾನ ತಪ್ಪಿಸಿಕೊಳ್ಳುವುದಕ್ಕೆ ತುದಿಗಾಲಿನಲ್ಲಿರುತ್ತಿದ್ದೆ. ಆಗುತ್ತಿರಲಿಲ್ಲ. ಓಹೋ, ಮೈಯೆಲ್ಲಾ ಸುಟ್ಟು ಹೊಗೆ ಬರುವ ಹಾಗೆ ಮಾಡಿಬಿಡುತ್ತಿದ್ದರು. ಅಲ್ಲಿಗೆ ಮಿಕ್ಕ ಖಾಯಿಲೆಗಳೆಲ್ಲ ಅದರಿ ಅಲ್ಲಾಡಿ ಬೆದರಿ ಬೆಂಡಾಗಿ ಹೋಗಿಬಿಡಬೇಕಿತ್ತಷ್ಟೇ! ಅಮ್ಮನ ಜೊತೆಗಿನ ಈ ದಿನಗಳಲ್ಲಿ ಅಂಗನವಾಡಿಯ ಸಮಯದಲ್ಲಿ ಆಂಟಿಯೂ ಇದ್ದರು. ನಾನು ಒಂದನೇ ಕ್ಲಾಸಿನಲ್ಲಿದ್ದಾಗ ಅವರ ಮದುವೆಯಾಯ್ತು. ಅದಾದ ನಂತರ ಏಳನೇ ಕ್ಲಾಸಿನ ತನಕ ಅಮ್ಮನ ಜೊತೆಯಲ್ಲಿಯೇ ಇದ್ದೆ. ಅಮ್ಮನ ಜೊತೆಯಿದ್ದು ಅದೆಷ್ಟು ಅವಲಂಬಿತನಾಗಿದ್ದೆ ಅಂದರೆ, ನನಗೆ ಬಾಗಿ ನನ್ನ ಕಾಲು ತೊಳೆದುಕೊಳ್ಳುವುದಕ್ಕೇ ಬರುತ್ತಿರಲಿಲ್ಲ. ನಾಲ್ಕನೇ ಕ್ಲಾಸಿನಲ್ಲಿ ನನ್ನ ಇಮ್ಮಡಿಗಳನ್ನು ಉಜ್ಜಿ ತೊಳೆಯುವುದಕ್ಕೆ ಕಲಿತಿದ್ದು. ಅಷ್ಟೇ ಯಾಕೆ, ಮೂಗಿನ ಸಿಂಬಳ ತೆಗೆಯುವುದು ಹೇಗೆ ! ಅಂತಲೂ ಗೊತ್ತಿರಲಿಲ್ಲ. ಅಮ್ಮನ ಆ ಆರೈಕೆ ಕಾಳಜಿಗಳು ಮುಂದೆ ನಾನು ಹಾಸ್ಟೆಲ್ ಸೇರಿದ ದಿನಗಳಲ್ಲಿ ವಿಪರೀತ ಹಿಂಸೆ ಅನುಭವಿಸುವ ಹಾಗೂ ಮಾಡಿದವು. ಆದರೆ ಬಾಲ್ಯದ ಅಮ್ಮನ ಆ ಆಹಾರ ಪದ್ಧತಿಯು ನನ್ನ ಆರೋಗ್ಯವನ್ನು ಏರುಪೇರಾಗದಂತೆ ಇರಿಸಿತ್ತು. ಒಂದು ಸಾರ್ತಿ ಹಾಸನದಲ್ಲಿದ್ದಾಗ ಟೈಫಾಯ್ಡ್ ಆಗಿ ಆಸ್ಪತ್ರೆ ದಾಖಲಾಗಿದ್ದ ಒಂದೇ ಘಟನೆ. ಅದು ಬಿಟ್ಟು ನಾನು ಈವರೆಗೆ ಬೇರೆ ಖಾಯಿಲೆ ಅಂತ ಡಾಕ್ಟರನ್ನು ನೋಡಿಲ್ಲ. ಇನ್ನು ದೇಶಬಿಟ್ಟ ನಂತರವಂತೂ, ಒಂದು ದಿನ ಡ್ರೈವರ್ ಲೈಸಿನ್ಸ್ ಪಡೆಯುವುದಕ್ಕೆ ಕಡ್ಡಾಯವಾಗಿ ನಡೆಸಬೇಕಾದ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದು; ಆಮೇಲೆ ಒಂದು ಸಾರ್ತಿ ರಾಶಿ ಹಿಮ ಸುರಿದಿದ್ದ ಚಳಿಗಾಲದಲ್ಲಿ ಕೆಮ್ಮಾಗಿ ನಿರ್ಲಕ್ಷಿಸಿದ್ದಕ್ಕೆ ಅದು ಜ್ವರಕ್ಕೆ ತಿರುಗಿ ಒಂದು ದಿನ ಆಸ್ಪತ್ರೆಗೆ ಹೋಗಿದ್ದೆ. ಅದು ಬಿಟ್ಟರೆ ಹತ್ತು ವರ್ಷಗಳಲ್ಲಿ ಆಸ್ಪತ್ರೆಯ ಮುಖ ನೋಡಬೇಕಾದ ಅಗತ್ಯವೇ ಬಂದಿಲ್ಲ ನನಗೆ. ಹಾಂ, ಸದಾ ಕಂಪ್ಯೂಟರ್ ಮುಂದೆಯೇ ನನ್ನ ಕೆಲಸವಾಗಿರುವುದರಿಂದ, ಮೊದಲ ಕೆಲವು ವರ್ಷಗಳ ಸಿಆರ್‌ಟಿ ಮಾನಿಟರುಗಳ ಕೃಪೆಯಿಂದಾಗಿ ದೃಷ್ಟಿ ನೆಟ್ಟಗೆ ಮಾಡಿಕೊಳ್ಳುವುದಕ್ಕೆಂದು ಕನ್ನಡಕ ಕಡ್ಡಾಯವಾಗಿಬಿಟ್ಟಿದೆ! ಅದಕ್ಕಂತೂ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜಾಸೀಟಿನ ಮೇಲೆ ಕೂತು ಆ ಡಾಕ್ಟರು ತಿರುಗಿಸುವ ಲೆನ್ಸುಗಳ ಮೂಲಕ ನೋಡಿ ನನಗೆ ಓದಲು ಬರ್ತದೋ ಇಲ್ಲವೋ ಅಂತ ಅವರ ಮುಂದೆ ಸಾಬೀತುಪಡಿಸಬೇಕಾಗ್ತದೆ. ಆದರೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾನು ಇಂದೂ ಸಹ ಅಮ್ಮನ ಆ ಮನೆ ಔಷಧಿಗಳನ್ನೇ ಅನುಸರಿಸ್ತೇನೆ, ಖಾರಾಬಾಂಬು, ಹೊಗೆಯಾಡಿಸುವಂತಹ ಆ ಅಭ್ಯಂಜನ ಸ್ನಾನ ಇವೆರಡನ್ನು ಹೊರತುಪಡಿಸಿ! *********

ಹೊತ್ತಾರೆ Read Post »

ಕಾವ್ಯಯಾನ

ಕಾವ್ಯಯಾನ

ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ ಕ್ಲಿಕ್ ಕ್ಲಿಕ್ ಚಿತ್ರ ತೆಗೆವ ಹುಸಿ ಮುಸಿ ನಗುವ ಮುಡಿಸಿ ಮಸಿಯ ಬಳಿವ ನಾಯಕ ನಾಲಾಯಕ್ಕರ ನೆನೆದು ಗಾಂಧಿ, ನಕ್ಕು ಸುಮ್ಮನಾದರು ವಿಶ್ವಗುರುವು ನಮ್ಮ ಬೃಹತ್ ದೇಶ ಉದ್ದಗಲಕೂ ಇದೇ ವೀರಾವೇಶ ಕೂತರೆ ಖಂಡಾಂತರ ನಿಂತರೆ ಹಿಮಾಲಯದೆತ್ತರ ಸಮಾನತೆಗಿಲ್ಲ ಅರ್ಥ ಸನಾತನವದೊಂದೇ ತೀರ್ಥ ಫಡಫಡ ಬಾಯಿ, ಬಡಾಯಿ ದಂಡು ಗಗನ ನೌಕೆ ತೇಲ್ವುದನ್ನು ಕಂಡು ಗಾಂಧಿ, ಸುಮ್ಮನಿರದೇ ನಕ್ಕರು ಆಟಗಾತಿ ಓಡಿ ಪದಕ ತಂದರಲ್ಲಿ ಜಾತಿ ಹುಡುಕಿಕೊಂಡು ಬಂದರಿಲ್ಲಿ ಕಣ್ ಮುಚ್ಚಿ ಹಾಲು ಕುಡಿವ ಬೆಕ್ಕು ಮುಲ್ಲಾನ ಮಿಯಾಂವೇ ಇರಬೇಕು! ಬಾಂಬಿನಲ್ಲೂ ಧರ್ಮವ ಕಂಡು ನಿಂತಲ್ಲಿಯೇ ಬೆರಗುಗೊಂಡು ಗಾಂಧಿ, ನಗಲಾರದೇ ಸುಮ್ಮನಿದ್ದರು! ಬಂಗಾರದ ರಸ್ತೆಯ ಮಾತನಾಡಿ ಬಡವರ ಬುಡಮೇಲು ಮಾಡಿ ನೂರೈವತ್ತನೇ ಜಯಂತಿ ಕಂಡು ಗಾಂಧಿ, ನಕ್ಕು ಸುಮ್ಮನಾದರು ‘ಮತ್ತೆ ಹುಟ್ಟಿ ಬಾ’ ಎಂಬುದನ್ನು ಕೇಳಿ ಗಾಂಧಿ, ನಕ್ಕು ನಕ್ಕು ಸುಸ್ತಾದರು *********

ಕಾವ್ಯಯಾನ Read Post »

You cannot copy content of this page

Scroll to Top