ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಡಾಡತ ಆಯುಷ್ಯ ಆಡಾಡತ ಆಯುಷ್ಯ ಆತ್ಮ – ಕತೆಗಳು ಗಿರೀಶ ಕಾರ್ನಾಡ ಮನೋಹರ ಗ್ರಂಥಮಾಲಾ ಆಡಾಡತ ಆಯುಷ್ಯ ಗಿರೀಶ್ ಕಾರ್ನಾಡರ ಆತ್ಮಕಥನ. ಈ ಕತೆಯನ್ನು ಅವರು ಹನ್ನೊಂದು ಅಧ್ಯಾಯಗಳಲ್ಲಿ ಹೇಳಿದ್ದಾರೆ. ಪ್ರಾಕ್ಕು – ತಾಯಿ ಕೃಷ್ಣಾಬಾಯಿ ಮಂಕೀಕರ ( ಕುಟ್ಟಾಬಾಯಿ) ಅವರ ಬದುಕಿನ ಕುರಿತು ಇದರಲ್ಲಿ ಅವರು ಹೇಳಿದ್ದಾರೆ. ಬಾಲಚಂದ್ರ ಎಂಬ ಮಗ ಹುಟ್ಟಿ ಒಂದು ವರ್ಷದೊಳಗೇ ಗಂಡ ತೀರಿಕೊಳ್ಳುತ್ತಾನೆ. ನಂತರ ಅವರ ಭಾವ ಅವಳನ್ನು ಡಾ. ಕಾರ್ನಾಡರ ಬಳಿ ನರ್ಸ್ ಕೋರ್ಸಿಗೆ ಸೇರಿಸುತ್ತಾರೆ.ಐದು ವರ್ಷಗಳ ಕಾಲ ಅವರ ಮನೆಯಲ್ಲೇ ಇದ್ದ ಕುಟ್ಟುಬಾಯಿ ಮುಂದೆ ಅಗ್ನಿಸಾಕ್ಷಿಯಾಗಿ ಡಾ. ಕಾರ್ನಾಡರನ್ನು ಮದುವೆಯಾಗುತ್ತಾರೆ. ಅವರಿಗೆ ವಸಂತ, ಪ್ರೇಮಾ, ಗಿರೀಶ್ ಮತ್ತು ಲೀನಾ ಜನಿಸುತ್ತಾರೆ. ಮುಂದೆ ಮೊದಲ ಗಂಡನಿಗೆ ಜನಿಸಿದ ಬಾಲಚಂದ್ರನ ಮನಸ್ಥಿತಿಯ ವಿವರಗಳಿವೆ, ಗೋಕರ್ಣ ಅಡ್ಡಹೆಸರು ಹೋಗಿ ಕಾರ್ನಾಡ್ ಆದ ಮಾಹಿತಿಗಳಿವೆ. ಶಿರಸಿ – ಶಿರಸಿಯ ಪಂಡಿತ ಕಾಟೇಜ್ ಹಾಸ್ಪಿಟಲ್ ಗೆ ಗಿರೀಶರ ತಂದೆ ವೈದ್ಯರಾಗಿ ಬರುತ್ತಾರೆ. ಶಿರಸಿ ಸಿದ್ದಾಪುರ ಮಧ್ಯದ ಕಾಡಿನ ವರ್ಣನೆಯಿದೆ. ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಪಟ್ಟೆ ಹುಲಿಗಳನ್ನು ನೋಡಿದ್ದನ್ನು ಗಿರೀಶರು ನೆನಪಿಸಿಕೊಳ್ಳುತ್ತಾರೆ. ಆಗ ಕುಮಟಾ- ಸಿದ್ಧಾಪುರ ಮಧ್ಯೆ ಕಲ್ಲಿದ್ದಲು ಬಳಸುವ ಬಸ್ಸುಗಳು ಒಂದೆರಡು ಓಡಾಡುತ್ತಿದ್ದವಂತೆ! ಆಯಿ ಬಾಪ್ಪಾ ಜೊತೆ ವಾಸಿಸುವ ಗಿರೀಶರ ಬಾಲ್ಯದ ನೆನಪುಗಳು ಇಲ್ಲಿವೆ. ನಿಲೇಕಣಿಯಲ್ಲಿ ಚಂಪಾಷಷ್ಠಿಯ ದಿನ ನಡೆಯುವ ತೇರಿನ ವಿವರ ಇಲ್ಲಿದೆ. ಇದು ಏಳೆಂಟು ಸಾರಸ್ವತ ಕುಟುಂಬಗಳು ಮಾಡುತ್ತಿದ್ದ ಖಾಸಗಿ ರಥೋತ್ಸವ ಆಗಿತ್ತಂತೆ. ಚಿತ್ರಾಪುರ ಮಠದ ಬಗ್ಗೆ ಇಲ್ಲಿ ಅವರು ಬರೆದಿದ್ದಾರೆ. ಶಿರಸಿಯ ಐದುಕತ್ರಿ, ಚರ್ಚ್, ಫಾದರ್, ನೀಲೇಕಣಿ ವೆಂಕಟರಾಯರು, ಆವೆ ಮರಿಯಾ ಕಾನ್ವೆಂಟ್, ಮಾರಿಕಾಂಬಾ ಹೈಸ್ಕೂಲ್, ಯಕ್ಷಗಾನ, ಅಡಿಕೆ ತೋಟ, ಹುಲಿಮನೆ ಸೀತಾರಾಮ ಶಾಸ್ತ್ರಿಗಳ ನಾಟಕ ಮಂಡಳಿ, ಮಾರಿಕಾಂಬಾ ದೇವಸ್ಥಾನ,ಬೇಡರ ಕುಣಿತ, ಕತೆ- ಕವಿತೆಗಳ ಪ್ರಾರಂಭಿಕ ಪಾಠ ಮಾಡಿದ ಜಿ.ಕೆ ಹೆಗಡೆ ಮಾಸ್ತರರ ಚಿತ್ರಣವನ್ನು ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಧಾರವಾಡ: ಐವತ್ತೊಂದು ಮನೆ – ಸಹಕಾರಿ ತತ್ವದಡಿ ಭಾನಪ ( ಚಿತ್ರಾಪುರ ಸಾರಸ್ವತ) ರು ಕಟ್ಟಿದ ಹೌಸಿಂಗ್ ಕೊಲೋನಿಯ ವಿವರಗಳು ಈ ಅಧ್ಯಾಯದಲ್ಲಿವೆ. ಹುಬ್ಬಳ್ಳಿ- ಧಾರವಾಡ, ಶಿರೂರ ಶಂಕರಾಯರ ಬಗ್ಗೆ ಇಲ್ಲಿ ಹೇಳಿದ್ದಾರೆ. ಧಾರವಾಡ: ಕರ್ನಾಟಕ ಕಾಲೇಜು- ಕಾರ್ನಾಡ್ ಕುಟುಂಬ ಶಿರಸಿ ಬಿಟ್ಟು ಧಾರವಾಡಕ್ಕೆ ಹೋಗುವುದು ೧೯೫೨ರಲ್ಲಿ. ಇಲ್ಲಿನ ಸಾಹಿತ್ಯ ಮತ್ತು ಶಿಕ್ಷಣದ ಬಗ್ಗೆ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆಲೂರು ವೆಂಕಟರಾಯರು, ವಿ.ಕೃ ಗೋಕಾಕ, ಬೇಂದ್ರೆ, ಶ್ರೀರಂಗ, ರಾಮಾನುಜನ್, ವಿ.ಜಿ ಭಟ್ ಕುರಿತು ಉಲ್ಲೇಖಗಳಿವೆ. ಮುಂಬಯಿ, ಆಕ್ಸ್ಫರ್ಡ್, ಮದ್ರಾಸ್, ಶೃಂಗೇರಿ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ಓದಿನ ದಿನಗಳ ಮತ್ತು ವೃತ್ತಿ ಜೀವನದ ಆರಂಭದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಹಳೆ ಮೈಸೂರು: ಹೊಸ ಅಲೆ, ಪುಣೆ: ಫಿಲ್ಮ್ ಹಾಗೂ ಟೆಲಿವಿಜನ್ ಇನ್ಸ್ಟಿಟ್ಯೂಟ್ ಮತ್ತು ಅರ್ಧ ಕಥಾನಕ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ನೌಕರಿ, ನಾಟಕ, ಸಿನಿಮಾ ರಂಗ ಮತ್ತು ವೈವಾಹಿಕ ಜೀವನದ  ಕುರಿತು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ತಾನು ಹುಟ್ಟುತ್ತಲೇ ಇರಲಿಲ್ಲ ಎಂದೂ ಮತ್ತು ಕೊನೆಯಲ್ಲಿ, ಸುದೀರ್ಘ ಕಾಲ ಪ್ರೀತಿಸಿದ ಸರಸ್ವತಿಯನ್ನು ಮದುವೆಯಾಗುತ್ತೀಯಾ ಎಂದು ಕೇಳುವಾಗಿನ ಘಟನೆಗಳು ಸ್ವಾರಸ್ಯಕರವಾಗಿವೆ. ಆತ್ಮಕತೆಗಳನ್ನು ಇಷ್ಟಪಡುವ ಮತ್ತು ಗಿರೀಶ್ ಕಾರ್ನಾಡರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಎಲ್ಲರೂ ಖಂಡಿತವಾಗಿ ಓದಲೇಬೇಕಾದ ಪುಸ್ತಕವಿದು. ******* ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬರ್ಫದ ಬೆಂಕಿ ನಾಗರೇಖಾ ಗಾಂವಕರ್ ಗೆಳತಿ ನಾಗರೇಖಾ ಗಾಂವಕರ ಅವರ ಪುಸ್ತಕಗಳು ತಲುಪಿ ಬಹಳ ದಿನಗಳಾದರೂ ಓದಿದ್ದು ಈ ವಾರ..ಭರವಸೆಯ ಕವಯಿತ್ರಿ, ಕತೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡದವರು. “ಬರ್ಫದ ಬೆಂಕಿ” ಹೆಸರೇ ಹೇಳುವಂತೆ ಹೊಸ ರೀತಿಯ ಕಾವ್ಯ ಕಟ್ಟುವಿಕೆಯ ಪ್ರಯತ್ನ. ನನಗೆ ಸ್ವಲ್ಪ ಸಂಕೀರ್ಣವೆನಿಸಿದ ಕವಿತೆಗಳನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಲ್ಲಿನ ಕವಿತೆಗಳು ಭಾವ, ಅನುಭವದ ಹಿನ್ನೆಲೆಯಲ್ಲಿ ಸಹಜವಾಗಿ ಹೊಮ್ಮಿದಂಥವು. ಮಾಗುವುದೆಂದರೆ ಅವಳ ಕವಿತೆಗಳು ಕಾಲಾತೀತ ಕವಿತೆಗಳು ಬಾನ್ಸುರಿಯ ನಾದ ಎಂಬ ವಿಭಾಗಗಳಡಿ ಕವಿತೆಗಳು ದಾಖಲಾಗಿವೆ. ಅಕ್ಷರಗಳು ಶೋಕೇಸಿನ ಪದಕವಾಗಲ್ಲ, ಕೆಸರಿನ ನೈದಿಲೆಯೂ, ಬೆಳಕಿನ ಹಾಡೂ ಆಗಬೇಕು ಎಂಬ ಆಳದ ಅರಿವಿದೆ ಇಲ್ಲಿ. ಅಸ್ಮಿತೆಯ ಹಂಗಿಲ್ಲದ, ಕಾಯಕವೇ ಯೋಗವಾದ ಬೆಳಕಿನ ಪುಂಜಗಳಿಗೂ, ಸೂಟು ಬೂಟು ವಿಚಿತ್ರ ಆಕ್ಸೆಂಟುಗಳ ಜಂಭದ ಬೀಜಕ್ಕೂ ನಡುವೆ ಗೋಜಲಿನ ಗೂಡಾದ ಮನ ಶೂನ್ಯಕ್ಕೆ ಶರಣಾಗುವುದಿದೆ, ದೇಸಿ, ದೈನೇಸಿತನಕ್ಕಾಗಿ ಹಂಬಲಿಸುವುದಿದೆ ಇಲ್ಲಿ. ಕಾಯುವುದು, ನೋಯುವುದು, ಕೊರಗುವುದು, ಬೇಯುವುದು, ಮಾಗುವುದು ಹೇಗೆಂದರೆ ಬೆಂಕಿಯನ್ನು ಅಂಗೈಲಿಟ್ಟುಕೊಂಡು ಹೊಳಪಿನ ಚುಕ್ಕಿಯನ್ನು ಹಣೆಯಲ್ಲಿ ಧರಿಸುವುದು!! ಉಕ್ಕುವ ಕಡಲ ಮೋಹಿಸುವ ಇವರ ಹಟಕ್ಕೆ ಬರ್ಫದ ಬೆಂಕಿ ಕುಡಿವ ಹುಚ್ಚಿದೆಯಂತೆ. ಸುರಿದು ಹೋದ ಎಣ್ಣೆಯ ದೀಪ ಹಚ್ಚಲಾಗದೇ ಕತ್ತಲಲ್ಲಿ ಕಳೆದ ಹಸಿಹಸಿ ಬಯಕೆಯ ಬೆಳದಿಂಗಳ ರಾತ್ರಿಯಿದೆಯಂತೆ!! ಅವಳ ದ್ವಂದ್ವ, ತಲ್ಲಣಗಳು, ಅಬ್ಬಾ!! ರಾತ್ರಿಯಲ್ಲಿ ಹಗಲಿನ ಪಾಳಿ ಮಾಡುತ್ತಲೇ ನಡೆಯುತ್ತಿದ್ದಾಳೆ ಅವಳು. ನಾಜೂಕು ಬಳೆಗಳು ಗಾಯಗೊಳಿಸಿ ಬೇಡಿಯಾಗಿಸುವ, ಮೂಗುತಿ ಘಾಸಿಗೊಳಿಸುವ, ನಂಜು ತೆಗೆವ ಅರಿಶಿನವೂ ಕೆರೆತ ತಂದಿಡುವ, ಗೆಜ್ಜೆಯ ಸದ್ದೂ ಸಂತೆಯಾಗುವ, ತಾಳಿಯ ನೀರೂ ತಾಳಿಕೊಳ್ಳದ ನಿರಾಕರಣೆಯಲ್ಲೂ ಅವನನ್ನೇ ಒಳಗೊಳ್ಳುವುದು, ತನು ಬಂಧನವ ಮೀರಿ ಮನಗುದುರೆಗೆ ನಾಗಾಲೋಟ ಕಲಿಸುವ ಅವಳು. ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್ಡನ್ನು , ಪರದಾ ಬುರ್ಖಾ, ಕುಂಕುಮವನ್ನು, ತನ್ನ ಹೆಸರಿನೊಡನೆ ಅವನ ಹೆಸರು ಜೋಡಿಸುವುದನ್ನು, ಮಾಧವಿ, ಶಕುಂತಲೆ, ಪಾಂಚಾಲಿಯರನ್ನು ನಿರಾಕರಿಸುತ್ತ “ಹೆಂಡತಿಯಾಗಲಾರೆ” ಎನ್ನುವ ಅವಳು..ಬಿಂಕ ಬಿನ್ನಾಣ, ಒನಪು, ವೈಯಾರದ ಹಂಗು ತೊರೆದ, ಜಡ್ಡುಗಟ್ಟಿದ ಕೈಗಳ, ಮಾಸಿದ ಬಳೆಗಳ ಭೂಮಿ ತೂಕದ ಹೆಣ್ಣು ಅವಳು.. ಇಲ್ಲಿ ಸ್ವಾತಂತ್ರ್ಯವೂ ಬಂಧನವೂ ಕೈ ಜೋಡಿಸಿದೆ. ಬಾಯಿಲ್ಲದವನ ಕೂಗಿಗೆ ಕಂಚಿನ ಕಂಠ ಎರವಲು ಸಿಕ್ಕಿದೆ…ದಲಿತ ಕೇರಿಯಲಿ ದಿಗ್ವಿಜಯ…ರಾಮ ರಹೀಮರ ಮನೆಯ ಬೆಂಡು ಬತ್ತಾಸು, ಸಿರಕುರಮಾ ಮಾತು ಬಿಟ್ಟಿವೆ..ಕಾಲಾತೀತ ಕವಿತೆಗಳು ಹೀಗಿವೆ. “ನನ್ನ ಪೇಲವ ಮುಖದ ಮ್ಲಾನತೆಗೆ ನಿನ್ನ ನಿರಾಕರಣೆ ಕಾರಣ ಎನ್ನಬೇಕೆನಿಸುವುದಿಲ್ಲ. ಮುಂಗುರುಳ ಹೆರಳುಗಳು ನಿನ್ನ ಕೈ ಬೆರಳ ಸಂದಿಯಲ್ಲಿ ಹೊರಳಿ ನರಳಿ ಬೆಳಕಾದವಂತೆ. ನನಗೇನೂ ಈ ಬಂಧಕ್ಕೆ ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ. “ ಎಡತಾಕುವ ಬೆಕ್ಕಿನಂತೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ಆದರೂ ಹಳೆಯ ಉಸಿರ ಬಸಿರ ಕಡತಗಳ ತೆಗೆದೊಮ್ಮೆ ನೋಡಬೇಕೆನಿಸುತ್ತದೆ. ಓದಬಲ್ಲೆನೇ ಹಳೆಯ ದಿಟ್ಟಿಯ ಹಿಡಿದು.. “ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗಳ ನಡುವೆಯೂ ಅದೆಂತಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ. ಅವನ ಕನಸಿನ ತುಂಬಾ ಮುತ್ತಾಗುವುದು ಮಣಿ ಪೋಣಿಸುವುದು ಆಕೆ ಮಾತ್ರ.” ದೇಹ ಮೀರಿದ ಪ್ರೇಮದ ಠೇವಣಿ ಇಟ್ಟಿದ್ದು ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ ಈಗ ನಾನು ಅವನೂ ಕೂಡಿಯೇ ಮನೆ ಕಟ್ಟುತ್ತಿದ್ದೇವೆ. “ಸೀತೆಯಂತಿರಬೇಕು ನೀನು ಎಂದಾಗಲೆಕ್ಲ ನಾನೆನ್ನುತ್ತಿದ್ದೆ ನೀನು ರಾಮನಾದರೆ.. ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.. ಕಲ್ಪನೆಯಲ್ಲಿ ತೇಲುತ್ತಲೇ, ವಾಸ್ತವದಲ್ಲಿನ ನಡಿಗೆಯಿದು. ಬರ್ಫದಂತೆ‌ ತಣ್ಣಗಿದ್ದರೂ, ಉರಿವ ಬೆಂಕಿಯದು. ಹೀಗೇ… ಬೆಳಕು, ಕಡಲು, ಬೆಂಕಿ, ರಾತ್ರಿ, ಆಗಸ, ಗಾಳಿ…ಪ್ರಕೃತಿಯೊಡನೆಯ ಪ್ರೀತಿ, ಸಂಕೀರ್ಣತೆ ..ಒಂದೆಡೆ, ಅವಳ ತರ್ಕ, ತಲ್ಲಣಗಳು, ತಾಕತ್ತು, ದೌರ್ಬಲ್ಯ, ಶೋಷಣೆ ಮತ್ತೊಂದೆಡೆ.. ಜಾತಿ, ಧರ್ಮ, ಆಚರಣೆ ಇನ್ನೊಂದು ಕಡೆ…ಪ್ರೀತಿ, ವಿರಹ,ಬಯಕೆ, ವಿಷಾದ ಮಗದೊಂದೆಡೆ… *********** ಅಮೃತಾ ಮೆಹಂದಳೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಮಗರಿಬ್ ಗಜಲ್ ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ* ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದುಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.  ಗಜಲ್ ರಾಣಿಯ ಹುಚ್ಚು ಹಿಡಿಸಿಕೊಂಡು ಅವಳದೇ ಧ್ಯಾನದಲ್ಲಿ ತಲ್ಲಿನರಾದವರ ಸಾಲಿನಲ್ಲಿ ಸಾವನ್ ಕೆ ಸಿಂಧನೂರು ಅವರು ಹೊಸ ಸೇರ್ಪಡೆಯಾಗುತ್ತಿದ್ದಾರೆ. ಸಾವನ್ ಕೆ ಸಿಂಧನೂರು ಅವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಪ್ರೌಢಶಾಲೆಯಲ್ಲಿ ಲೆಕ್ಕಾಚಾರದ ಗಣಿತ ಶಿಕ್ಷಕರಾದ ಇವರಿಗೆ ಕನ್ನಡ ಸಾಹಿತ್ಯದ ಸೆಳೆತ ತೀರ್ವವಾಗಿ ಕಾಡಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಪದವಿ ಓದುತ್ತಿರುವಾಗಲೇ ಸಾಹಿತ್ಯದ ಅಭಿರುಚಿ ಹಚ್ಚಿಸಿಕೊಂಡಿದ್ದ ಇವರಿಗೆ ವೃತ್ತಿಯ ಒತ್ತಡ, ಸಾಂಸಾರಿಕ ಜೀವನ ಕಟ್ಟಿಹಾಕಿತ್ತು, ಮತ್ತೆ ಇವರಿಗೆ ಸಾಹಿತ್ಯದ ಜೀವಸೆಲೆ ಪುಟಿದೇಳುವಂತೆ ಮಾಡಿದ್ದು ವಾಟ್ಸಪ್ ಬಳಗವಾದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ. ಗಜಲ್ ರಾಣಿಯ ಹುಚ್ಚು ಇವರಿಗೆ ಅಷ್ಟಿಷ್ಟು ಹಿಡಿಯಲಿಲ್ಲ ತೀರ್ವವಾಗಿ ಹುಚ್ಚು ಹಿಡಿಸಿಕೊಂಡ ಪರಿಣಾಮ ಇವರ ಚೊಚ್ಚಲ ಗಜಲ್ ಸಂಕಲನವಾದ ಮಗರೀಬ್ ಗಜಲ್ ಸಂಕಲನ. ಈ ಗಜಲ್ ಸಂಕಲನದಲ್ಲಿ ಒಟ್ಟು ೫೨ ಗಜಲ್ ಗಳಿವೆ. ಇವರೇ ಹೇಳಿಕೊಂಡಂತೆ ನನ್ನ ಪಾಲಿನ ದ್ರೋಣಾಚಾರ್ಯ ಶ್ರೀ ಅಲ್ಲಾಗಿರಿರಾಜ್ ರವರು ಎಂದು , ಅಲ್ಲಾಗಿರಿರಾಜ್ ಅವರ ಗಜಲ್ ಗಳ ಓದು, ಹಾಗೂ ಹನಿ ಹನಿ ಇಬ್ಬನಿ ಬಳಗದಿಂದ ನನ್ನಲ್ಲೂ ಗಜಲ್ ಬರೆಯುವ ಶಕ್ತಿ ಇದೆ ಎಂದು ಹುರಿದುಂಬಿಸಿದ ಪರಿಣಾಮ ಈ ಗಜಲ್ ಗಳು. ಇವರ ಗಜಲ್ ಸಂಕಲನದಲ್ಲಿ ವಾಸ್ತವದಲ್ಲಿ ನಡೆಯುವ ಘಟನೆಗಳೇ ವಸ್ತುವಿಷಯಗಳಾಗಿವೆ, ಪ್ರೀತಿ ಪ್ರೇಮದ ಕಡೆ ವಾಲಿದರೂ ವಾಸ್ತವದಲ್ಲಿ ನಡೆಯುವ ಘಟನೆಗಳಿಗೂ ಧ್ವನಿಯಾಗಿದ್ದಾರೆ. ಮಹಾತ್ಮಾ ಗಾಂಧಿಯವರು ಇವರನ್ನು ಕಾಡಿ ಗಜಲ್ ಬರೆಸಿದ್ದಾರೆಂದೆ ಹೇಳಬೇಕು, ಗಾಂಧಿಯ ಕೋಲು, ಕನ್ನಡಕ ರೂಪಕಗಳನ್ನಾಗಿ ಬಳಸಿಕೊಂಡಿದ್ದಾರೆ. ಸ್ತ್ರೀ ಸಂವೇದನೆ, ವಿರಹ, ರೈತನ ದಾರುಣ ಸ್ಥಿತಿ, ಹೆಣ್ಣಿನ ಮುಟ್ಟಿನ ಬಗ್ಗೆ, ಜಾತಿ ,ಧರ್ಮ, ಪ್ರೀತಿ, ದ್ವೇಷ ಹೀಗೆ ಪ್ರತಿಯೊಂದು ವಿಷಯ ವಸ್ತುವಿನಿಂದ ಈ ಗಜಲ್ ಸಂಕಲನ ಗಮನ ಸೆಳೆಯುತ್ತದೆ.*”ಕಾದಿರುವನು ಸಾವನ್ ನಿನ್ನ ಪ್ರೇಮ ತುಂಬಿದ ಸುರಪಾನಕ್ಕೆ**ಸುರಿದುಬಿಡು ಅಮರವಾಗಲಿ ಜೀವ ಉಳಿಸಿಬಿಡು ಮರಳಬೇಡ ಚಿನ್ನ”*ಪ್ರೇಮ ಎಲ್ಲರನ್ನೂ ಕಾಡುತ್ತದೆ ಅದರಂತೆ ಸಾವನ್ ಅವರನ್ನು ಕಾಡಿದ ಪರಿಣಾಮ ಈ ಮೇಲಿನ ಶೇರ್ *”ಹಾಡುವ ಹಕ್ಕಿಗೂ ಗಂಟಲು ಕಟ್ಟಿದೆ ಕಣ್ಣೀರಿನಿಂದ ಕಟ್ಟಬೇಕಿದೆ ಜಲಾಶಯ**ಕೇಡುಗಾಲಕ್ಕೂ ಸೋಬಾನೆ ಹಾಡೆಂದರೆ ಮದ್ದು ಬೇಡಿದ್ದೇ ತಪ್ಪಾ”*ಹಾಡುವ ಹಕ್ಕಿಗೂ ನೋವಿದೆ ಎನ್ನುವ ಆಶಯ ವ್ಯಕ್ತಪಡಿಸುವ ಗಜಲ್ ಇದಾಗಿದೆ. ಗಂಟಲು ಕಟ್ಟಿದೆ ಕಣ್ಣೀರಾಗಿ ಹೊರಗೆ ಬಂದರೆ ಜಲಾಶಯವಾಗಬಹದು ಎನ್ನುವಲ್ಲಿ ನೋವು ಎಷ್ಟಿದೆ ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ *”ಇದಹದೊಳಗೆ ಪರ ಹುಡುಕುವ ಊರಿನೊಳು ಒಬ್ಬಂಟಿ ಪಯಣಿಗ ನಾನು**ಮಧು ಪಾತ್ರೆಗೆ ತುಟಿ ತಾಕದೆ ನಶೆ ಏರಿದ ವ್ಯಸನಿ ಮಧುಮಗ ನಾನು”*ಒಬ್ಬಂಟಿ ಪಯಣಿಗ ನಾನು ಪ್ರೀತಿ ಪ್ರೇಮವನ್ನೆ ಹಂಚುತ್ತಾ ಸಾಗುವವನು, ಜಾತಿ ಧರ್ಮ ಎನ್ನುತ್ತಾ ತಿರುಗುವವರ ಮಧ್ಯೆ ಪ್ರೀತಿ ಹಂಚುವೆ ಎನ್ನುತ್ತಾರೆ ಈ ಗಜಲ್ ನಲ್ಲಿ.*”ನಿದಿರೆ ಇಲ್ಲದೆ ಹೆಣೆದ ಕನಸುಗಳಿಗೆ ಪ್ರಸವ ಪೂರ್ವ ಗರ್ಭಪಾತ**ಜನ್ನತ್ ಗೂ ನಿನಗೂ ಒಂದೇ ಹೆಸರು ನರಕಕ್ಕೆ ತಳ್ಳುವ ಹುನ್ನಾರವೇ ಗೆಳತಿ”*ಬಡತನವನ್ನು ನೋಡಿ ತೊರೆದು ಹೋದ ಅವಳ ಬಗೆಗೆ ಎದೆಯಾಳದ ನೋವು ಹೊರಚೆಲ್ಲಿದ್ದಾರೆ, ಅದೇಷ್ಟು ಸುಂದರವಾದ ರೂಪಕ ಕೊಟ್ಟಿದ್ದಾರೆ ಈ ಗಜಲ್ ನಲ್ಲಿ, ನಿದಿರೆಯಿಲ್ಲದೆ ಹೆಣೆದ ಕನಸುಗಳನ್ನು ಕೊಂದುಹೋದವಳು ಎಂದು ಅವಲತ್ತುಕೊಳ್ಳುತ್ತಾರೆ. *”ಹಸಿರ ಸಿರಿಯ ಸೊಬಗು ನೋಡವ್ವ ಗೆಳತಿ**ಕರುನಾಡು ಇದು ಸ್ವರ್ಗಕ್ಕೆ ಸಮನವ್ವ ಗೆಳತಿ”*ಕನ್ನಡನಾಡಿನ ವರ್ಣನೆ, ಕನ್ನಡದ ಲಿಪಿ, ಜ್ಞಾನ, ಧ್ಯಾನ, ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಅಭಿಮಾನ ಮೂಡಿಸುವ ಗಜಲ್ ಇದಾಗಿದೆ. *”ಉಸಿರು ಬಿಡುವಾಗಲು ರಾಮನನ್ನೇ ನೆನೆದು ರಾಮರಾಜ್ಯ ಕಂಡ ಕನಸುಗಾರ**ರಘುಪತಿ ರಾಜನ ಜೊತೆ ಈಶ್ವರ ಅಲ್ಲಾನನ್ನೇ ಸೇರಿಸಿ ತಿರಂಗ ಲೆಹರಾಯಿಸಲು ಗಾಂಧಿಯಲ್ಲದೆ ಇನ್ನಾರು?”*ಗುಂಡಿಗೂ ಗುಂಡಿಗೆ ಒಡ್ಡಲು ಗಾಂಧಿಯಿಂದ ಮಾತ್ರ ಸಾಧ್ಯ ಎನ್ನುವ ಇವರ ಗಜಲ್ ಗಾಂಧಿಯ ಬಗೆಗೆ ಹೆಮ್ಮೆಯ ಭಾವ ಮೂಡುಸುತ್ತದೆ *”ದೇಹವಷ್ಟೆ ಬೇಕಿದ್ದರೆ ಬಿಸಿ ತಾಕಿಸಿ ಕುಲುಮೆ ಲೋಹಕ್ಕೆ ನೀರು ಕುಡಿಸುತ್ತಿದ್ದೆ**ಸುರಪಾನದಂತ ಮೊಹಬ್ಬತಿಗೆ ಈಗಲೂ ಬೊಗಸೆಯಿದೆ ವಿಷಕಾರಿದವಳೇ ನನ್ನ ತಪ್ಪೇನು”*ಮೋಸ ಮಾಡಿದ ಅವಳ ಬಗ್ಗೆ ಮಾರ್ಮಿಕವಾಗಿ ರೂಪಕಗೊಂದಿಗೆ ಮೂಡಿಬಂದ ಗಜಲ್ ಇದು ವಿರಹ ವೇದನೆಯನ್ನು ಅದೇಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.*”ಬೀಜ ಬಿತ್ತುವ ಹಿಮ್ಮತ್ ಇದೆ ಎಂದು ಸೆಟೆದು ಸಾಗುವ ಯಜಮಾನರೇ**ಹಡೆವ ಬ್ಯಾನಿಯ ಜಹನ್ನುಮ್ಮಿನ ಪಡೆಯಲು ನೋವು ಯಾರು ಸಿದ್ದರಿಹರಿಲ್ಲಿ ಸಖಿ”*ಪುರುಷ ಸಮಾಜದ ಮೇಲೆ ಹೆಣ್ಣಿನ ಆಕ್ರೋಶ ವ್ಯಕ್ತವಾಗುವ ಈ ಗಜಲ್ ನಲ್ಲಿ ಬೀಜ ಬಿತ್ತುವದೇ ಯೋಗ್ಯತೆಯಾ ಎಂದು ಪ್ರಶ್ನಿಸುತ್ತಲೆ ಹಡೆವ ಬ್ಯಾನಿ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸುತ್ತಾ ಹೆಣ್ಣಿನ ನೋವಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. *”ಇರುವುದೊಂದು ಗೋಳ ಅದೆಷ್ಟು ಬೇಲಿ ಹಾಕುವಿರಿ ನೀವು**ಬಿತ್ತಿದ್ದೆ ಬೆಳೆಯುವಿರಿ ಬೇವ ರಾಶಿಯ ಜಾಗದಲ್ಲಿ ಜೇನಿಲ್ಲ ಯಾಕೇ?”*ಇರುವುದೊಂದೆ ಭೂಮಿ ಅದೆಷ್ಟು ಬೇಲಿ ಹಾಕುವಿರಿ ಎಂದು ಮನುಜನನ್ನು ಪ್ರಶ್ನಿಸುತ್ತಾರೆ, ಜಾತಿ, ಧರ್ಮದದಿಂದ ಬೇಲಿಯಾಕುವ ಮಂದಿಯನ್ನು ತಣ್ಣಗೆ ಕುಟುಕಿದ್ದಾರೆ.*”ಸತ್ತ ದೇಹದ ಕಫನಿನ ಮೇಲೆ ಅವರು ಎಸೆಯಬಲ್ಲರು ಪರಿಹಾರ ಸಾವನ್**ಅನ್ನ ಬೆಳೆವ ಮಣ್ಣ ಕಲೆಗೆ ಇನ್ನಾರು ಗತಿ ಆಳಿದ ನೋಡು ಭೂಮಿ ಪುತ್ರ”*ರೈತನ ಶವದ ಮೇಲೆ ಪರಿಹಾರದ ಎಂಜಲು ಕಾಸನ್ನು ಮಾತ್ರ ರಾಜಕಾರಣಿಗಳಿಂದ ಕೊಡಲು ಸಾಧ್ಯ, ಉತ್ತಿ ಬಿತ್ತಿ ಬೆಳೆಯಲು ಅವರಿಂದ ಸಾಧ್ಯವಿಲ್ಲ ಅದು ಭೂಮಿಪುತ್ರನೆಂಬ ರೈತನಿಂದ ಮಾತ್ರ ಎಂದು ರೈತನ ಬಗ್ಗೆ ಒಂದೊಳ್ಳೆ ಗಜಲ್ ರಚಿಸಿದ್ದಾರೆ. ಸಲಿಂಗಿಗಳ ಕುರಿತಾಗಿ ಮೂಡಿಬಂದ ಗಜಲ್ ಅವರ ಬಗ್ಗೆ ಕರುಣೆಯ ನೋಟ ಬೀರುವಂತೆ ಮಾಡುತ್ತದೆ. ಅವರು ಮನುಷ್ಯರಲ್ಲವೇ ಎಂದು ಚಿಂತಿಸುವಂತೆ ಮಾಡುತ್ತದೆ.ಮದುವೆಗೆ ಹೆಣ್ಣು ಹುಡುಕುವ ಬ್ರಹ್ಮಚಾರಿ ಹುಡುಗರ ಮನದ ಅಳಲನ್ನು ದೇವರಿಗೆ ಮುಟ್ಟಿಸುತ್ತಿದ್ದಾರೆ. ಒಳ್ಳೆಯ ಸತಿಯನ್ನು ಕರುಣಿಸು ಎಂದು ಹುಡುಗರ ಪರವಾಗಿ ಮೊರೆಯಿಡುತ್ತಿದ್ದಾರೆ. ಮುಟ್ಟಿನ ಬಗ್ಗೆ ಮೂಡಿಬಂದ ಗಜಲ್ ಹಾಗೂ ಭಾರತದ ಬಗೆಗಿನ ಪ್ರೇಮದ ಗಜಲ್ ಗಳು ಗಮನ ಸೆಳೆಯುತ್ತವೆ. ಮಾತೃಭಾಷೆ ಹಿಂದಿ ಇರುವುದರಿಂದ ಉರ್ದು ಪದಗಳನ್ನು ಗಜಲ್ ಗಳಲ್ಲಿ ಬಳಸುವುದರ ಮೂಲಕ ಗಜಲ್ ಪಂಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಯುತ ಸಾವನ್ ಕೆ ಸಿಂಧನೂರು ಅವರ ಮೊದಲ ಗಜಲ್ ಸಂಕಲನವಾದ್ದರಿಂದ ಹಾಗೂ ಅಧ್ಯಯನದ ಕೊರತೆ ಇರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಬಹುತೇಕ ಗಜಲ್ ಗಳು ಮುರದ್ದಪ್ಪ ಗಜಲ ಗಳಾಗಿದ್ದು ಕೆಲವು ಗಜಲ್ ಗಳು ಆಜಾದಿ ಗಜಲ್ ಗಳಾಗಿವೆ. ಗಜಲ್ ಲೋಕದಲ್ಲಿ ಭರವಸೆಯ ಗಜಲ್ ಕವಿಯಾಗಿ ಭಾಗಶಃ ಯಶಸ್ವಿಯಾಗಿದ್ದಾರೆಂದೆ ಹೇಳಬಹುದು. ಗಜಲ್ ಬಗೆಗೆ ಅಧ್ಯಯನ ಮಾಡಲಿ ಇನ್ನೂ ಹೆಚ್ಚು ಗಜಲ್ ಸಂಕಲನಗಳನ್ನು ನಾಡಿಗೆ ಕೊಡುಗೆಯಾಗಲಿ ನೀಡಲಿ ಎಂದು ಹಾರೈಸುತ್ತೇನೆ. ********** ಶಿವಕುಮಾರ ಮೋ ಕರನಂದಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಡು ಕಾಯೋ ಹುಡುಗನ ದಿನಚರಿ ಪುಸ್ತಕ:ಆಡು ಕಾಯೋ ಹುಡುಗನ ದಿನಚರಿ (ಅನುಭವ ಕಥನ) ಲೇಖಕರು:ಟಿ.ಎಸ್.ಗೊರವರ ಪ್ರಕಾಶಕರು:ಪಲ್ಲವ ಪ್ರಕಾಶನ,ಚನ್ನಪಟ್ಟಣ ಶಿವರಾಜ್ ಮೋತಿ ಕಳೆದ ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕದಂಗಡಿಗಳ ಬಜಾರಿನಲ್ಲಿ ಮತ್ತೆ-ಮತ್ತೆ ದೋಸ್ತಿಗಳ ಜೊತೆಗೂಡಿ ವಾಲೆಂಟಿಯಾದ್ರೂ ತಿರುಗುತ್ತಿದ್ದಾಗ ಸಂಗಾತದ ಮಳಿಗೆ ಕಣ್ಣಿಗೆ ಬಿದ್ದಿತ್ತು.ಹೋಗಿ ಮಾತಾಡಿಸಿದಾಗ ಈ ಆಡು ಕಾಯೋ ಹುಡುಗನ ದಿನಚರಿ ಪುಸ್ತಕವನ್ನ ಪ್ರೀತಿಯಿಂದ ನನ್ನ ವರ್ತನೆಯನ್ನು ನೋಡಿ ಹವ್ಯಾಸವನ್ನು ಅರಿತುಕೊಂಡಂತೆ ಆಫ್ ರೇಟಿಗೆ ಕೊಟ್ಟಿದ್ದರು.ಉಡಾಳ ಹುಡುಗನಾಗಿ,ಆಡು ಕಾಯುತ್ತಾ,ಎಮ್ಮೆ ಟೀಮಿನವನಾಗಿ ಚೇಷ್ಟೇ-ಕುಚೇಷ್ಟೆಗಳನ್ನೂ ಮಾಡುತ್ತಾ ಬೆಳೆದ ಅಪ್ಪಟ ಹಳ್ಳಿ ಹುಡುಗನ ಬದುಕಿನ ಚಿತ್ರಣವಿದು. ಈ ಪುಸ್ತಕದಲ್ಲಿ ಒಟ್ಟು ೧೬ ಭಾಗಗಳಿವೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ತನ್ನ ಮುಡಿಲಿಗೇರಿಸಿಕೊಂಡಿದೆ.ಎರಡನೆಯ ಮುದ್ರಣವೂ ಮುಗಿದು,ಮೂರನೆಯದಕ್ಕೂ ಅಣಿಯಾಗುತ್ತಿದ್ದಿರಬಹುದು.ಹಿಂದೊಮ್ಮೆ ಅಲ್ಪ ಓದಿದ್ದೆ, ಈಗ ರಾತ್ರಿ ಎರಡಾದರೂ ಒಂದೇ ಗುಟುಕಿಗೆ ಓದಿ ಮುಗಿಸಿ ಇಲ್ಲಿನ‌ ಕೆಲ ಹಾಸ್ಯಗಳನ್ನು ಒಬ್ಬೊಬ್ಬನೇ ನೆನಪಿಸಿಕೊಂಡು ನಗಾಡುತ್ತಿದ್ದೆ. ಹಳ್ಳಿಯ ಸೊಡಗು,ಪರಿಸರ,ಪ್ರಾದೇಶಿಕ,ಕೂಲಿಕಾರರ ತಾಯಂದಿರ ಬವಣೆಯ ಕರಾಳ ಬದುಕನ್ನು ಬಿಚ್ಚಿಟ್ಟ ಪರಿ ಅದ್ಭುತವಾಗಿದೆ.ಇಲ್ಲಿ ಬಳಸಿದ ಕೆಲ ಹಳ್ಳಿಯ ಪದಗಳನ್ನು ಮತ್ತೊಮ್ಮೆ ಓದಿಯೇ ಅರ್ಥೈಸಕೊಳ್ಳಬೇಕಾಗಿದೆ.ಉತ್ತರಕರ್ನಾಟಕ ಭಾಷೆಯ ಅಪರೂಪದ ಪುಸ್ತಕವೆಂದರೂ ತಪ್ಪಾಗಲಾರದು. ಅವ್ವ-ಅಪ್ಪನ ಜಗಳ,ಹೊಡೆದಾಟ,ಧಾರವಾಡದ ಸೊಬಗು,ಅಪ್ಪ ಏಟು ಕೊಟ್ಟಾಗ ರಮಿಸಿ ಅವ್ವನು ಚೇಷ್ಟೆಗೆ ಕೊಟ್ಟ ಏಟು,ಮಂತ್ರಿಸಿದ ತತ್ತಿ ತಿಂದಿದ್ದು, ಚಿತ್ತಾಬಕ್ಕಾ ಆಡುವಾಗ ಅಪ್ಪನ ಕೈಗೆ ಸಿಕ್ರೂ ಸಿಗದೇ ದ್ಯಾವ್ರನ ನೆನ್ಸಿಕೊಂಡು ಓಡಿದ್ದು,ಜಾತ್ರೆಲಿ ಪಿಸ್ತೂಲ್ ಕದ್ದು ಕಪಾಳಮೋಕ್ಷ ಮಾಡಿಸಿಕೊಂಡಿದ್ದು,ಊರಿನವರ ಕೂಲಿನ ಬಗ್ಗೆ ಎಲ್ಲವೂ ಅನನ್ಯವಾಗಿ,ಅಮೂಲ್ಯವಾಗಿ ಬಹು ಚಿತ್ರಿತವಾಗಿವೆ. ಇಲ್ಲಿನ‌ ಕೆಲ ಹಾಸ್ಯಗಳನ್ನು ಸಿನಿಮಯ ರೀತಿಯಲ್ಲೇ ಓದಿಯೇ ಅದರ ಸ್ವಾದಿಷ್ಟ ಅನುಭವಿಸಲೆಬೇಕು. ಈಜಾಡಲು ಹೋದಾಗ ಬತ್ತಲೆಯಾಗಿ ಅವರದು ಇವರು,ಇವರದು ಅವ್ರು ನೋಡಿ ನಗಾಡ್ತಿದ್ದಿದ್ದು.ಅಲೈ ಹಬ್ಬದಾಗ ಹಣಮಂತ ದೇವ್ರ ಪೂಜಾರಿನ ಕಾಡಿಸಿ, ಅಟ್ಟಕೇರಿಸಿ ಕುಣಿಯ ಬೆಂಕ್ಯಾಗ ಹಾರಿಸಿದ್ದು.ಮಾಟ ಮಂತ್ರಕ ಮೂರುದಾರಿ ಸೇರೋ ಜಾಗದಲ್ಲಿ ಮಾಡಿಸಿಟ್ಟಿದ್ದಿದ್ದನ್ನ ತಿಂದ ದುರಗಮ್ಮ ದೇವ್ರಿಗೆ ಲಂಚಕೊಟ್ಟಿದ್ದು ಇನ್ನೂ ಬಿದ್ದು-ಬಿದ್ದು ನಗಿಸುವ ಪ್ರಸಂಗಗಳಾಗಿವೆ. ಒಮ್ಮೆ ಜಾತ್ರೆಯಲ್ಲಿ ಕದ್ದ ಪಿಸ್ತೂಲಿನ ಬಗ್ಗೆ ಗೊರವರ ಅವರು ಕನ್ನಡಪ್ರಭದಾಗ ಆ ಬರಹನ ಪ್ರಕಟಿಸಿದ್ದರು. ಅದನೋದಿದ್ದೆ.ಒಮ್ಮೆ ಅಚಾನಕವಾಗಿ ಧಾರವಾಡದ ಸಂಗಾತ ಕಚೇರಿಗೂ ಹೋಗಿದ್ದೆ,ಅದೇ ಸಮಯದಾಗ ಪಲ್ಲವ ವೆಂಕಟೇಶರೂ ಬಂದಾಗ ಪಿಸ್ತೂಲ್ ಕಳ್ಳನೆಂದು ಗೊರವರ್ ಸರ್ ಗೆ ಮಾತಾಡಿದಾಗ,ನೀನು ಯಾರು, ನಿನ್ನ ಹಿನ್ನೆಲೆ ಏನು ಎಂದು ಪಲ್ಲವ ಪ್ರಕಾಶನದವರೂ ಕೇಳಿದರು.ತಿಳಿಸಿದಾಗ ಆಗ ಗೊರವರ ಅವ್ರು ಅದ್ಕೇ ಅನ್ನುತ್ತಿನಿ ಇವ ಜಾತ್ರಿ ಬಗ್ಗೆ ಜಾಸ್ತಿ ಯಾಕ ಮಾತಾಡಕಂತ ಅಂತ ಅಂದ್ರು ತುಸುನಕ್ಕಿದ್ದೆ. ಇಂತ ಪುಸ್ತಕ ಕೊಟ್ಟು ನಗಿಸಿ,ಓದಿಸಿದ ಗೊರವರ ಸರ್ ಗೆ ನನ್ನ ಧನ್ಯತಾಭಾವವಿದೆ.ನನ್ನ ಬಾಲ್ಯದ ಬದುಕಿನ ಎದೆಯಾಳ ಹೊಕ್ಕಿವೆ,ನಿಜಕ್ಕೂ ಖುಷಿಯಾಗಿರುವೆ.ನೀವೂ ಓದಿ ಖುಷಿಯಾಗಿ ಎನ್ನುತ್ತಾ..!!! ************

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಿಂದಿನ ಬೆಂಚಿನ ಹುಡುಗಿಯರು ಕೃತಿ: ಹಿಂದಿನ ಬೆಂಚಿನ ಹುಡುಗಿಯರು ಲೇಖಕಿ :- ಶೈಲಜಾ ಹಾಸನ  # ಸಾಬು :-             ತನಗೆಷ್ಟೇ ಕಷ್ಟಗಳಿದ್ದರೂ ಮಗ  ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ  ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ ಅಪ್ಪ.          ಇಲ್ಲಿ ಯಾರದ್ದು  ಸರಿ ಯಾರದ್ದು  ತಪ್ಪು ಎಂದು ಏಳುವ ಪ್ರಶ್ನೆಗಳು. ಸುಂದರವಾಗಿ ಹೆಣೆಯಲ್ಪಟ್ಟ ಕಥೆ ಬಂದು ನಿಲ್ಲುವುದು ನೂರಾರು ಪ್ರಶ್ನೆಗಳನ್ನು ಓದುಗನ ಮನದಲ್ಲಿ ಹುಟ್ಟು ಹಾಕುತ್ತಾ.          ಸಾಬುವಿಗೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇರುವವಳು ಗೌರಕ್ಕ. ಇಲ್ಲಿ ಜಾತಿ ಭೇದಗಳಿಂದ ಹೊರತಾಗಿ ಅರಳುವ ಮನಸ್ಸುಗಳು, ಸುಂದರ ಸ್ನೇಹ ಸಂಬಂಧಗಳನ್ನು ನಾವು ಕಾಣಬಹುದು.           ಹೌದು, ಮಾನವೀಯ ದೃಷ್ಟಿಯಿಂದ ಮಗನೇಕೆ ಅಪ್ಪನನ್ನು ತನ್ನೊಡನೆ ಇರಿಸಿಕೊಳ್ಳಬಾರದು?, ಅರಿವಿಲ್ಲದೆ ವೃದ್ಧಾಪ್ಯದಲ್ಲಿ ಕಾಲಿರಿಸುತ್ತಿರುವಾಗ ಮತ್ತೊಂದು ಮಗು ಹುಟ್ಟುವುದು ಅಕ್ಷಮ್ಯ ಅಪರಾಧವೇ?, ಸರಿ ಸಾಬುವಿನದು ಅವಿವೇಕವೇ ಅಂದುಕೊಳ್ಳೋಣ ,ಆಗಿ ಹೋದ ಕಾರ್ಯಕ್ಕೆ ಏನು ಮಾಡಲು ಸಾಧ್ಯ?, ಇವೆಲ್ಲದರ ನಡುವೆ ಜಗತ್ತಿಗೆ ಕಾಲಿರಿಸಿ ಹೊರಟ ಮುಗ್ಧ ಜೀವದ ತಪ್ಪೇನು? ಹೀಗೆ ಕತೆಯನ್ನು ಓದಿದ ನಂತರ ಹುಟ್ಟಿಕೊಳ್ಳುವ ಹತ್ತು ಹಲವಾರು ಪ್ರಶ್ನೆಗಳು. # .ಮೌನ ಮನದ ವೀಣೆ :-                ಪ್ರೀತಿಯಂತಹ ವಿಚಾರ ಬಂದಾಗ ಮನಸ್ಸುಗಳು ಒಡೆದು, ಹೆತ್ತವರು ಹಾಗೂ ಮಕ್ಕಳ ನಡುವೆ ಕಿತ್ತಾಟ ನಡೆದು, ಮಕ್ಕಳು ಹೆತ್ತವರನ್ನು ತೊರೆದು ಸಾಗುವ ದೃಶ್ಯವೇ ಎಲ್ಲೆಡೆ ಕಾಣ ಸಿಗುವುದು. ಆದರೆ ಇಲ್ಲಿ ಕಥೆಯಲ್ಲಿ ಮಗನೆನಿಸಿಕೊಂಡವ ಪ್ರೀತಿಸಿ ಮದುವೆಯಾದರೂ, ತಾಯಿ ಅವನ ಬಳಿ ಮಾತೇ ಆಡದೆ ಇದ್ದರೂ, ಅವನು ಮಾತ್ರ ತನ್ನೆಲ್ಲ ದಿನಚರಿ, ಹೆಂಡತಿ ಮಗುವಿನ ಜತೆಗಿನ ಒಡನಾಟ ಎಲ್ಲವನ್ನೂ ವರದಿ ಒಪ್ಪಿಸುತ್ತಿರುತ್ತಾನೆ. ಆದರೆ ಆ ಅಮ್ಮನೆಂಬ ದೇವತೆ ಮಾತ್ರ ಕಲ್ಲು ಆಗಿರುತ್ತಾಳೆ. ಇಲ್ಲಿ ಅವಳೇಕೆ ಅವಳ ಮನಸ್ಸಿನಲ್ಲಿರುವ ಬಿಗುಮಾನವನ್ನು  ಮರೆತು ಮಗನನ್ನು ಸ್ವೀಕರಿಸಬಾರದು ಅನ್ನುವ ಪ್ರಶ್ನೆ ಏಳುತ್ತದೆ. ಮಗನಾದರೂ ಅಷ್ಟೇ ತನ್ನ ಹೆಂಡತಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ಓಲೈಸಿ ಸಂತೈಸ ಬಾರದೆ?. ಹಠವೆಂಬುದು ಹಾಗೇನೇ ಮನಗಳನ್ನು ಸೇರಿಕೊಂಡ ಬಳಿಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತದೆ. ಒಮ್ಮೆ ಆವರಿಸಿ ದಲ್ಲಿ ಅದರ ಹಿಡಿತದಿಂದ ಹೊರಬರುವುದು ಕಷ್ಟ.           ಬಾಲ್ಯದಲ್ಲಿ ತಾನು ಇಷ್ಟಪಡದ ವಿಚಾರವನ್ನೇ ಅವನ ಮಗಳು ಬಹಳ ಇಷ್ಟಪಟ್ಟಾಗ ಕಥಾನಾಯಕನಿಗೆ ಅದು ಅಪ್ಯಾಯಮಾನವಾಗುತ್ತದೆ. ಆದರೆ ಚಿಕ್ಕವನಿರುವಾಗ ಆ ವಿಚಾರ ಅವನಮ್ಮ ಇಷ್ಟಪಟ್ಟಾಗ ಅವಳು ಅದರಿಂದ ವಿಮುಖಳಾಗುವಷ್ಟು ಹಠ ಹಿಡಿದು ಅವಳು ಅದರ ಪ್ರತಿ ಆಕರ್ಷಿತಳಾಗದಂತೆ  ಹಠ ಹೂಡಿರುತ್ತಾನೆ. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಪ್ರತಿಯೊಬ್ಬನ ಸ್ವಾರ್ಥ. ” ಮೌನ ಮನದ ವೀಣೆಯ ಝೇಂಕಾರ, ಕೇಳದಷ್ಟು ಹೃನ್ಮನಗಳಿಲ್ಲಿ ದೂರ, ಬದುಕೋ…  ಸ್ವಾರ್ಥ,  ಹಠ,  ಛಲಗಳೇ ತುಂಬಿ ಭೋರ್ಗರೆಯೋ ಸಾಗರ, ಆಗಿರಲು ಹೇಗಾದೀತು ಪ್ರೀತಿ, ಪ್ರೇಮ,  ಮಮತೆಯ ತಂಗಾಳಿಯ ಸಂಚಾರ??? “. #. ಹಿಂದಿನ ಬೆಂಚಿನ ಹುಡುಗಿಯರು :-           ಹದಿ ಹರೆಯ ಕಾಲಿಡುವ ಹೊತ್ತಿನ ಬದುಕಿನ ಅನಾವರಣ. ಹೆಣ್ಣು ಹೂವಂತೆ, ಅರಳುವ ಪ್ರಾಯದ ತವಕ, ತಲ್ಲಣ, ಅರೆ ಬಲಿತ ಮನಸ್ಸುಗಳು ಹೇಗಿರುತ್ತವೆ ಅನ್ನುವುದರ ಕುರಿತಾದ ವಿವರ. ಮುಗ್ಧತೆಯ ಪರಮಾವಧಿಯ ವಯಸ್ಸು .ಒಳಿತು ಕೆಡುಕಿನ ನಡುವಿನ ವ್ಯತ್ಯಾಸ ಅರಿಯದ ಪ್ರಾಯ. ಶಾಲೆಯಂತಹ ದೇಗುಲದಲ್ಲಿ ಎಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇರುತ್ತಾರೆ ಹಾಗೂ ಗೋಮುಖ ವ್ಯಾಘ್ರ ದಂತಹ ಮುಖವಾಡಧಾರಿ ಅಧ್ಯಾಪಕರುಗಳು ಇರುತ್ತಾರೆ ಅನ್ನುವುದನ್ನು ಬಯಲಾಗಿಸುವ ಕಥೆ. ಗುರುವೆಂದರೆ ದೇವರ ಸಮಾನ. ಆದರೆ ಈ ಗೌರವವನ್ನು ಉಳಿಸಿಕೊಳ್ಳುವಂತಹ ಯೋಗ್ಯತೆ ಹಲವರಲ್ಲಿ ಇರುವುದಿಲ್ಲ. ಏನೂ ಅರಿಯದ ಮುಗ್ಧ ಹೂವುಗಳು ಅರಳುವ ಮುನ್ನವೇ ಕಮರುವಂತೆ ಮಾಡುವ ರಾಕ್ಷಸರು ಬಹಳ ಮಂದಿ ಇರುತ್ತಾರೆ ಗುರುವಿನ ರೂಪದಲ್ಲಿ. ಇವತ್ತಿನ ದಿನಗಳಲ್ಲಿ ಇಂತಹ ಸಮಸ್ಯೆ ಬಹಳ ಹೆಚ್ಚಾಗಿದೆ. “ಹಿಂದಿನ ಬೆಂಚಿನ ಹುಡುಗಿಯರು” ಕಥೆಯ ಮೂಲಕ ಇಲ್ಲಿ ಲೇಖಕಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಊರುಗಳ ಶಾಲೆಗಳಲ್ಲಿ ಕಾಣ ಸಿಗುವಂತಹ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ವಿದ್ಯೆ ಹೇಳಿಕೊಡುವ ಗುರುವೇ ಕಾಮ ಪಿಪಾಸುವಾದರೆ ಏನು ಮಾಡಬಹುದು….?         ಹದಿಹರೆಯದ ವಯಸ್ಸೇ ಹಾಗೆ ಎಲ್ಲದರಲ್ಲೂ ಕುತೂಹಲ, ಏನೂ ಅರಿಯದ ಪ್ರಾಯ ಈ ವಯಸ್ಸಲ್ಲಿ ಬದುಕು ಹಳಿ ತಪ್ಪಿದರೆ ಮುಂದೆ ಬಾಳು ನರಕ ದೃಶ್ಯವೇ ಸರಿ. #. ಎಲ್ಡು ಕೊಡ ನೀರು :-             ಕೆಲವು ಬಡವರ ಬೀದಿಗಳಲ್ಲಿ ಕುಡಿಯುವ ನೀರಿನ ಬವಣೆ ಎಷ್ಟಿದೆ ಎನ್ನುವ ಚಿತ್ರಣವನ್ನು ಓದುಗರ ಕಣ್ಣ ಮುಂದೆ ಬಿಚ್ಚಿಡುವ ಕಥೆ. ಎರಡು ಕೊಡ ನೀರು ಒಂದು ಜೀವವನ್ನು ಬಲಿ ಪಡೆದ ಘಟನೆ ಹೃದಯವಿದ್ರಾವಕ . ಇಲ್ಲಿ ಜನರ ಅನಾಗರಿಕ ವರ್ತನೆ ಅಷ್ಟೇ ಅಲ್ಲ, ಕೆಳವರ್ಗದವರ ಮೇಲೆ ಮೇಲ್ವರ್ಗದ ಜನ ನಡೆಸುವ ದೌರ್ಜನ್ಯ, ಶೋಷಣೆ, ದರ್ಪ ಎಷ್ಟೆಂಬುದು ಅನಾವರಣಗೊಳ್ಳುತ್ತ ಸಾಗುತ್ತದೆ. ಉಳ್ಳವರು ಇಲ್ಲದವರನ್ನು ಕಾಡುವ ಪರಿ ಕಣ್ಣಿಗೆ ಕಟ್ಟುತ್ತದೆ. ಎರಡು ಕೊಡ ನೀರು ಪಡೆದಿದ್ದನ್ನು ಮಹಾಪರಾಧ ಆಗಿಸಿ ಇಡೀ ಊರನ್ನು ಸ್ಮಶಾನ ವಾಗಿಸಿದ ಜನರ ಅವಿವೇಕ ಕಥೆಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ.         ಒಂದು ಸಣ್ಣ ವಿಷಯ ಹೇಗೆ ಇಡೀ ಊರಿಗೆ  ಊರನ್ನೇ ಭಸ್ಮವಾಗಿಸಬಲ್ಲದು ಅನ್ನುವ ವಾಸ್ತವವನ್ನು ಶೈಲಜಾ ಅವರು ತಮ್ಮ ಕಥೆಯ ಮೂಲಕ ಓದುಗರಿಗೆ ಮನದಟ್ಟಾಗುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಈ ಜಗತ್ತಿನ ಇವತ್ತಿನ ಸತ್ಯ ಕೂಡ. #. ತುಮುಲ :-             “ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ”- ಅನ್ನುವ ದಾಸರ ಪದವನ್ನು ಜ್ಞಾಪಿಸುವ ಕಥೆ. ಈ ಜಗದಲ್ಲಿ ಪ್ರತಿಯೊಬ್ಬನೂ ಸ್ವಾರ್ಥಿಯೆ. ಎಲ್ಲರೂ ಅವರವರದೇ ಆದ ಮನೆ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಯಾರೂ ಯಾರ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ. ತನ್ನ ಕೆಲಸವಾಗ ಬೇಕಾದಲ್ಲಿ ಮಾತ್ರ ಇನ್ನೊಬ್ಬರ ನೆನಪಾಗುವುದು ಇಲ್ಲಿ. ಅದಾದ ಮೇಲೆ ನೀನ್ಯಾರೋ ನಾನ್ಯಾರೋ. ಬದುಕೆಂಬ ಸಂತೆಯಲ್ಲಿ ಪ್ರೀತಿ, ವಿಶ್ವಾಸ, ಅಂತಃ ಕರಣಗಳೆಲ್ಲ ಸೀಮಿತ ಪರಿಧಿಯೊಳಗಷ್ಟೇ ಇದೆ. ಆ ರೇಖೆಯನ್ನು ದಾಟಿ ಇವೆಲ್ಲೂ ಕಾಣಸಿಗವು. ಅತಿಯಾದ ನಿರೀಕ್ಷೆಯನ್ನು ಇಲ್ಲಿ ಯಾರ ಮೇಲೂ ಇಡುವಂತಿಲ್ಲ. ಈ ಎಲ್ಲಾ ಸಂದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಕಥೆ “ತುಮುಲ “. #. ಅಮ್ಮ :-          ಅತ್ತೆಯೂ ಅಮ್ಮನಾಗಿ ಸೊಸೆಯನ್ನು ಮಗಳಂತೆ ಕಾಣಬಲ್ಲಳು ಅನ್ನುವುದನ್ನು ಪರಿಚಯಿಸುವ ಮನ ಮಿಡಿಯುವಂತೆ ಕಥೆ. ಅತ್ತೆ ಸೊಸೆಯ ಸಂಬಂಧವೆಂದರೆ ಎಣ್ಣೆ ಸಿಗೇಕಾಯಿ ಅನ್ನುವ ಭಾವ ಎಲ್ಲರಲ್ಲೂ. ಹೊಂದಿಕೊಂಡು ಹೋಗುವುದಿಲ್ಲ ಇಬ್ಬರು ಅನ್ನುವ ಅಭಿಪ್ರಾಯ. ಆದರೆ ಇದು ಸುಳ್ಳು. ಹೊಂದಾಣಿಕೆಯ ಸೂತ್ರ ಯಾವ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೊ ಅಂತಹವರು ಎಲ್ಲ ಕಡೆ ಅನುಸರಿಸಿಕೊಂಡು ಸಂಬಂಧಗಳನ್ನು ಬೆಸೆಯುತ್ತಾ ಸಾಗುತ್ತಾರೆ. ಅತ್ತೆಯಾಗುವ ಮೊದಲು ಅವಳು ಒಬ್ಬ ಸೊಸೆಯಾಗಿರುತ್ತಾಳೆ. ಸಾಕಷ್ಟು ಆಗು ಹೋಗುಗಳನ್ನು ಕಂಡಿರುತ್ತಾಳೆ. ಹಾಗಾಗಿ ತನಗೆ ಸೊಸೆಯಾಗಿ ಬಂದವಳನ್ನು ಅವಳು ಹೇಗೆ ಮಗಳಂತೆ ಕಾಣದೇ ಇರಲು ಸಾಧ್ಯ ?. ಎಲ್ಲ ಘಟನೆಗಳಿಗೂ ಆಯಾಯ ಸಂದರ್ಭವೇ ಕಾರಣ ಹೊರತು ಮನುಷ್ಯರಲ್ಲ. ಸೊಸೆಯಾದವಳು ಅತ್ತೆಯನ್ನು ಅಮ್ಮನಂತೆ ಪ್ರೀತಿಸಿದಾಗ ಅತ್ತೆ ಅವಳನ್ನು ಮಗಳಂತೆ ಕಾಣುತ್ತಾಳೆ. ಭಿನ್ನಾಭಿಪ್ರಾಯಗಳು ಮೂಡದ ಮನಗಳಿಲ್ಲ, ಮನೆಗಳಿಲ್ಲ. ಆದರೆ ಈ ಭಿನ್ನಾಭಿಪ್ರಾಯವನ್ನು ಪರಿಹರಿಸುವಲ್ಲಿ ಹೊಂದಾಣಿಕೆಯೇ ಮೂಲ ಸೂತ್ರ. ಪ್ರೀತಿ ವಾತ್ಸಲ್ಯ ಎಂತಹ ಮನಸ್ಸುಗಳನ್ನು ಬದಲಾಯಿಸಬಲ್ಲುದು ಅನ್ನುವುದೇ ಸತ್ಯ. #. ವಿಪರ್ಯಾಸ :-           ಸ್ವಾರ್ಥ ಮನುಷ್ಯನನ್ನು ಅವನ ಮನುಷ್ಯತ್ವವನ್ನು ಯಾವ ಮಟ್ಟಿಗೆ ಬದಲಾಯಿಸುತ್ತದೆ ಅನ್ನುವ ಪ್ರಶ್ನೆಯನ್ನು ಮನಸ್ಸಲ್ಲಿ ಎಬ್ಬಿಸಿದ ಒಂದು ಕಥೆ ಇದು. ತನ್ನ  ಬಳಿ ಇಲ್ಲದೇ ಇದ್ದಾಗ ಯಾವ ವಿಚಾರವೇ ಇರಲಿ ಅದು ಬೇರೆಡೆಯಿಂದ ದೊರೆತಾಗ ದೊಡ್ಡ ನಿಧಿ ದೊರೆತ ಅನುಭವ. ಆದರೆ ಅದುವೇ ವಸ್ತು, ವ್ಯಕ್ತಿ ಅಥವಾ ಯಾವುದೇ ವಿಚಾರ ಇರಬಹುದು ತನ್ನ ಸ್ವಂತದ್ದು ದೊರೆತಾಗ ಈ ಸಿಕ್ಕಿದ್ದಕ್ಕೆ ಯಾವ ಬೆಲೆಯೂ ಇಲ್ಲ. ಮಾನವ ಯಾಕೆ ಹೀಗೆ ಸಂಕುಚಿತ ಗುಣ ಸ್ವಾರ್ಥಪರ ನಾಗುತ್ತಾನೆ ಎಂದು ಕಾಡುವ ಪ್ರಶ್ನೆ …. #. ದಾರಿ ಯಾವುದಯ್ಯ :-            ಕಣ್ಣಿಗಂಟಿದ ಭ್ರಮೆಯ ಪರದೆ ಸರಿದಾಗ ವಾಸ್ತವದ ದರ್ಶನ. ಈ ವಿಶಾಲ ಜಗತ್ತಲ್ಲಿ ಯಾರೂ ಒಬ್ಬಂಟಿಯಲ್ಲ. ಎಲ್ಲರಿಗೂ ಒಂದಲ್ಲ ಒಂದು ಆಸರೆ ದೊರೆತೇ ದೊರೆಯುತ್ತದೆ. ಎಲ್ಲವೂ ಕಾಲದ ಮೇಲೆ ಅವಲಂಬಿತ. ಇಲ್ಲಿ ಎಲ್ಲವೂ ನಾನೇ ಎಲ್ಲವೂ ನನ್ನಿಂದಲೇ ಅನ್ನುವುದು ಸುಳ್ಳು. #. ಚಂದೂ ಮಾಮ:-            ಎಲ್ಲರನ್ನು ಅತಿಯಾಗಿ ಪ್ರೀತಿಸಿ ನಂಬುವ ವ್ಯಕ್ತಿ. ಅಷ್ಟೇ ಪ್ರೀತಿ ಮರಳಿ ಸಿಗಬೇಕೆಂಬ ನಿರೀಕ್ಷೆ. ಈ ನಿರೀಕ್ಷೆಯೇ ಅವನನ್ನು ಸಾವಿನ ಮನೆಯ ಬಾಗಿಲನ್ನು ತಟ್ಟುವಂತೆ ಮಾಡಿದ್ದು ದುರಂತ. ಇವತ್ತಿದ್ದ ವ್ಯಕ್ತಿ ನಾಳೆಯೂ ಇರುತ್ತಾನೆ ಎಂಬ ನಂಬಿಕೆ ಇಲ್ಲ, ನಾಳೆ ಅಲ್ಲ ಮತ್ತೊಂದು ಕ್ಷಣವೇ ಏನು ಬೇಕಾದರೂ ಆಗಬಹುದು. ಹಾಗಾಗಿ ಮಾಡಬೇಕು ಮಾತಾಡಬೇಕು ಅನ್ನಿಸಿದ್ದನ್ನು ಕೂಡಲೇ ನಮ್ಮ ಹಮ್ಮನ್ನು ತೊರೆದು ತಮ್ಮ ಆಪ್ತರೊಡನೆ ಆಡಿ ಮುಗಿಸಬೇಕು. ಇನ್ನೊಂದು ಕ್ಷಣ ಇಲ್ಲಿ ಏನಾಗುವುದೆಂದು ಯಾರಿಗೂ ಗೊತ್ತಿಲ್ಲ. ಕೊನೆಯಲ್ಲಿ ಉಳಿಯುವುದು ಪಶ್ಚಾತ್ತಾಪ ಮಾತ್ರ. #. ಆಳ :-            ಕಥಾ ಸಂಕಲನದ ಕೊನೆಯ ಕಥೆ. ಬಹಳ ಹಿಂದಿನಿಂದಲೂ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಹೆಣ್ಣಾದವಳ ಹೋರಾಟ ಬಹಳ ದೊಡ್ಡದು. ಅವಳು ಈ ನಿಟ್ಟಿನಲ್ಲಿ ಅನುಭವಿಸುವ ಯಾತನೆ, ನೋವು, ಕಷ್ಟ, ಅವಮಾನಗಳು, ಹಿಂಸೆ ಲೆಕ್ಕವಿಲ್ಲದಷ್ಟು. ಹಿಂದಿನಿಂದಲೂ ಹೆಣ್ಣು ಒಂದಲ್ಲ ಒಂದು ವಿಧದಲ್ಲಿ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾಳೆ. ಗಂಡಿನ ದೃಷ್ಟಿಯಲ್ಲಿ ಹೆಣ್ಣೆಂದರೆ ಭೋಗದ ವಸ್ತು. ಹೂವಿನಂತಹ ಅವಳನ್ನು ಹೆಜ್ಜೆ ಹೆಜ್ಜೆಗೂ ಕ್ರೂರಿಯಾಗಿ ಹೊಸಕಿ ಹಾಕುವ ಪ್ರಯತ್ನಗಳೇ ಹಲವು ಕಡೆ. ಇದರಿಂದ ತಪ್ಪಿಸಿಕೊಳ್ಳಲು ಅವಳು ನಡೆಸುವ ಹೋರಾಟ ಹೆಣಗಾಟಗಳು ಅವೆಷ್ಟೋ . ಅಪ್ಪ, ಅಣ್ಣ ತಮ್ಮ ಅನ್ನಿಸಿಕೊಂಡವರು ಕೂಡ ತಮ್ಮ ಮಗಳು, ತಂಗಿ, ಅಕ್ಕನನ್ನು ಕಾಮದ  ತೃಷೆಗೆ ಬಲಿ ಕೊಡುವಂತಹ  ಅವೆಷ್ಟೋ ಜೀವಂತ ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ. ಇಂತಹುದೇ ಕ್ರೂರ ಮೃಗಗಳ ಕೈಯಿಂದ ತಪ್ಪಿಸಿಕೊಂಡು ಬದುಕಲು ಹಾತೊರೆಯುವ ಒಂದು ಹೆಣ್ಣಿನ ಕಥೆ “ಆಳ “.                 ಶೈಲಜಾ ಅವರು ಎಲ್ಲಿಯೂ ತಮ್ಮ ಕಥೆಗಳಲ್ಲಿ ಆ ಘಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ, ತೀರ್ಪನ್ನು ನೀಡಿಲ್ಲ. ಎಲ್ಲವನ್ನೂ ಓದುಗರ ಅರಿವಿಗೆ ಬಿಟ್ಟಿದ್ದಾರೆ. ಆದರೆ ವಾಸ್ತವಗಳನ್ನು ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಆಗು ಹೋಗುಗಳನ್ನು ಒಳಗೊಂಡಿರುವಂತಹ ಸುಂದರ ಕಥಾಸಂಕಲನ- “ಹಿಂದಿನ ಬೆಂಚಿನ ಹುಡುಗಿಯರು”.  ಇಲ್ಲಿನ ಪ್ರತಿಯೊಂದು ಬರಹವೂ, ಕಥೆಯೂ ಬಹಳ ಸರಳವಾಗಿದೆ ಹಾಗೂ ಓದುಗರ ಮನಸ್ಸನ್ನು ತಟ್ಟುವಂತಿದೆ. ********** ನಯನ ಬಜಕೂಡ್ಲು        

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಅಪರೂಪದ ಕತೆಗಳು ಕೆ.ವಿ. ತಿರುಮಲೇಶ್ ಅಪರೂಪದ ಕತೆಗಳು ಕಥಾಸಂಕಲನ ಕೆ.ವಿ. ತಿರುಮಲೇಶ್ ಅಭಿನವ ಪ್ರಕಾಶನ. ಇದು ಒಂದು ಅಪೂರ್ವವಾದ ಕಥೆಗಳ ಸಂಕಲನ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ ಒಟ್ಟು ಹದಿನಾರು ಕತೆಗಳಿವೆ. ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ತಿರುಮಲೇಶರು ಈ ಕತೆಗಳನ್ನು ಹೇಳಿದ್ದಾರೆ. ಅವರ ಕವನ ಸಂಕಲನಗಳು – ಅಕ್ಷಯ ಕಾವ್ಯ,ಅರಬ್ಬಿ, ಅವಧ, ಏನೇನ್ ತುಂಬಿ,ಪಾಪಿಯೂ, ಮಹಾಪ್ರಸ್ಥಾನ, ಮುಖವಾಡಗಳು,ಮುಖಾಮುಖಿ,ವಠಾರ. ಕಥಾಸಂಕಲನಗಳು- ನಾಯಕ ಮತ್ತು ಇತರರು, ಕೆಲವು ಕಥಾನಕಗಳು,ಕಳ್ಳಿ ಗಿಡದ ಹೂ,ಅಪರೂಪದ ಕತೆಗಳು. ಕಾದಂಬರಿಗಳು- ಆರೋಪ, ಮುಸುಗು, ಅನೇಕ. ನಾಟಕಗಳು – ಕಲಿಗುಲ, ಟೈಬೀರಿಯಸ್ ತಿರುಮಲೇಶರು ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿರುವುದು ಇಲ್ಲಿ ಕಂಡುಬರುತ್ತದೆ. ಈ ಕಥಾಗುಚ್ಛದಲ್ಲಿ ನನಗೆ ಅತ್ಯಂತ ಪ್ರಿಯವಾದ ಕತೆ ‘ ಭುಜ್’. ಸದಾಶಿವ ಮತ್ತು ಶಾರದಾ ಹಳ್ಳಿಯಲ್ಲಿ ವಾಸಿಸುತ್ತಿರುವವರು. ಅವರ ತೋಟದಲ್ಲಿ ಕೆರೆಯ ಕೆಸರು ತೆಗೆಯುವ ಕೆಲಸ ಶುರು ಮಾಡಿದ ಮಾಹಿತಿಯೊಂದಿಗೆ ಕತೆ ಆರಂಭವಾಗುತ್ತದೆ. ಭುಜ್ ಎಂಬುದು ಅವರ ಮನೆಯಲ್ಲಿ ಸಾಕಿದ ನಾಯಿ. ಅದು ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಬೊಗಳುವುದು. ಈ ಕೆಲಸಕ್ಕೆ ಬಂದ ಕೆಲಸಗಾರರ ಮುಖ್ಯಸ್ಥ ನಂಜೇಶನನ್ನು ನೋಡಿ ಬೊಗಳುವುದು ಜಾಸ್ತಿ ಆಗುತ್ತದೆ. ಕೆಸರೆತ್ತುವ ಕೆಲಸವನ್ನು ತೀರ್ಪಿಗೆ ( ಗುತ್ತಿಗೆಗೆ) ನಂಜೇಶನಿಗೆ ನೀಡಿದ ಮೇಲೆ ಸದಾಶಿವರಿಗೆ ಅವನ ಮೇಲೆ ಅಲವರಿಕೆ ಶುರುವಾಗುತ್ತದೆ. ಕೆಲಸ ವಿಳಂಬವಾಗುತ್ತಿದೆ ಎಂದು ಅನುಮಾನ ಉಂಟಾಗುತ್ತದೆ. ಮಧ್ಯೆ ಅವರಿಗೆ ಬೆಂಗಳೂರು ತಿರುಗಾಟ ಬೇರೆ. ಆಗ ಅವರ ಸಂಶಯ ಓದುಗರದೂ ಆಗುತ್ತದೆ. ಹೀಗೆ ಹಲವು ತಿರುವುಗಳನ್ನು ಪಡೆಯುತ್ತಾ ಕತೆ ಸಾಗುತ್ತದೆ‌. ಆದರೆ ಈ ಕತೆ ನಾಯಿಯ ನಿಷ್ಠೆಯ ಬದಲಾವಣೆ, ಅದರಿಂದ ಸದಾಶಿವರಿಗೆ ಉಂಟಾಗುವ ವೇದನೆ ಮತ್ತು ಅವರು ಅಂತಿಮವಾಗಿ ಕಂಡುಕೊಳ್ಳುವ ಊಹಿಸಲಾಗದ ಪರಿಹಾರದೊಂದಿಗೆ ಅಂತ್ಯಗೊಳ್ಳುತ್ತದೆ. ಈ ಕತಾಸಂಕಲನದ ಆರಂಭದ ಕತೆ ಐತ – ಇಲ್ಲಿ ಅಜಿತ ಎಂಬಾತನ ಮೂಲಕ ಬಾಲ್ಯ ಮತ್ತು ಅದರ ನೋವು, ಹಲ್ಲು ಮುರಿದುಕೊಳ್ಳುವ ಪ್ರಸಂಗ ಎಲ್ಲ ಹೇಳುವಾಗ ಒಮ್ಮೊಮ್ಮೆ ಕತೆಗಾರ ಕತೆಯ ಒಳನುಗ್ಗಿ ಏನೋ ಹೇಳುತ್ತಿದ್ದಾರೆ ಅನಿಸುತ್ತದೆ. ಅದೇ ರೀತಿ ಅವಿನಾಶನ ಜನ್ಮದಿನ 1 ಮತ್ತು 2 ರಲ್ಲಿ ಹಾಗೂ ಅನೇಕ: ದ ಮಾರ್ಜಿನಲ್ ಮ್ಯಾನ್ ಎಂಬ ಕಥೆಗಳಲ್ಲಿ ಕಟುವಾಸ್ತವ ಮತ್ತು ತಮ್ಮ ಅನುಭವಕ್ಕೆ ಬಂದ ವಿಷಾದವನ್ನು ಅನಾವರಣ ಮಾಡಿದ್ದಾರೆ ಎಂದೆನಿಸುತ್ತದೆ. ಸಿಂಗರೇನಿ ಸಿರಾಮಿಕ್ಸ್ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಒಂದೊಳ್ಳೆಯ ಕತೆ. ಅತಿಥಿ ನಟಿ ಗ್ರಾಮೀಣ ಪರಿಸರದಲ್ಲಿ ನಡೆಯುವ ಉತ್ತಮ ಕತೆ. ಅರೇಬಿಯಾ – ಅರಬ್ ದೇಶಗಳಲ್ಲಿ ನಡೆದ ಕ್ರಾಂತಿ, ಧಂಗೆ, ಧರ್ಮ ರಾಜಕಾರಣದ ಬಗ್ಗೆ ಹೇಳುತ್ತಾ ವಿಶ್ವದ ರಾಜಕೀಯವನ್ನು ನಮ್ಮ ಮುಂದಿಡುತ್ತದೆ. ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಜನಪದದ ಕತೆಯನ್ನು ಹೇಳುತ್ತಾ ಹಳ್ಳಿಯ ಅಮಾಯಕತೆಯನ್ನು, ವಾತಾವರಣವನ್ನೂ ಬಿಚ್ಚಿಡುತ್ತದೆ. ಎಲ್ಲಿ ಮನಕಳುಕಿರದೊ ಒಂದು ನವಿರಾದ ಪ್ರೇಮ ಮತ್ತು ಸಾಮಾಜಿಕ ಕತೆ. ಸಂಧ್ಯಾದೇವಿ ಎಂಬ ಕತೆಯಲ್ಲಿ ಆರಂಭದಲ್ಲಿ ಮೂರು ಡಾಟು ಮತ್ತು ಅಂತ್ಯದಲ್ಲಿ ನಾಲ್ಕು ಡಾಟು ಬಿಟ್ಟರೆ ಮಧ್ಯೆ ಯಾವ ವಿರಾಮವೂ ಇಲ್ಲ. ಇದು ಚನ್ನಣ್ಣ ವಾಲೀಕಾರ ಅವರನ್ನು ನೆನಪಿಸಿತು. ಮಾತು ಮತ್ತು ಮೌನದ ಕತೆಯಿದು. ಒಂಯ್ಕ ಒಬ್ಬ ಹಳ್ಳಿಯ ಹುಡುಗನ ಕತೆ. ಇಶ್ನಾತ ಮಾಸ್ತರರು ಒಂಯ್ಕ ಓಂಕಾರನಾಥ ಎಂಬ ಹೆಸರಾಂತ ನಟನಾಗಲು ಹೇಗೆ ಕಾರಣರಾದರು ಎಂಬುದನ್ನು ಈ ಕಥೆ ಹೇಳುತ್ತದೆ. ಕಂದೀಲಿನ ಸ್ತ್ರೀ, ಮಾಯಾಬಝಾರ್, ನಿನಾದಗಳು, ಶುಭವಾಗುತೈತೆ! ಕತೆಗಳು ಕೂಡ ತಿರುಮಲೇಶರ ಛಾಪಿನ ವಿಭಿನ್ನ ಕತೆಗಳು. ಈ ವಿಶಿಷ್ಟವಾದ ಕಥಾಸಂಕಲನವನ್ನು ಒಮ್ಮೆ ಓದಿ, ಆಸ್ವಾದಿಸಿ. ***************************************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ದಿ ಲಾಸ್ಟ್ ಲೆಕ್ಚರ್ ಮೂಲ: Ryandy pash ಕನ್ನಡಕ್ಕೆ: ಎಸ್. ಉಮೇಶ್ “ಅದ್ಭುತಕನಸುಗಳನ್ನು ಕಾಣಲು ಪ್ರಯತ್ನಿಸಿ, ನಿಮ್ಮ ಮಕ್ಕಳಿಗೂ ಸಹ ಅಂತಹ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿ. ಮಕ್ಕಳು ಕತ್ತಲಿನ ಪ್ರಪಂಚದಿಂದ ಹೊರಬಂದು ಬೆಳಕಿನ ಸುಂದರ ಪ್ರಪಂಚವನ್ನು ನೋಡುವಂತೆ ಮಾಡಿ – Ryandy pash ಇದೊಂದು ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂ. ಮ. ಸಾ. ಸಂ. ನೀಡುವ ಪ್ರತಿಷ್ಠಿತ *ಅರಳು ಸಾಹಿತ್ಯ ಪ್ರಶಸ್ತಿ” ಪಡೆದ ಜನಮೆಚ್ಚುಗೆಯ ನಂಬರ್ ಒನ್ ಕೃತಿಯಾಗಿದೆ. ಈ ಕೃತಿಗೆ ವಿಶ್ವೇಶ್ವರ ಭಟ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಮೂಲ ಲೇಖಕರು Ryandy pash(ಪ್ರೊಫೆಸರ್, ಕಾರ್ನಿಗಿ ವಿಶ್ವವಿದ್ಯಾಲಯ) ಮತ್ತು ಜೆಫ್ರಿ ಜೆಲ್ಲೊ. ಮೈಸೂರಿನ ಧಾತ್ರಿ ಪ್ರಕಾಶನದಿಂದ ಹೊರಬಂದ ಕೃತಿಯಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಲ್ಲಿನ ಉಪನ್ಯಾಸಕರಿಗೆ “ಅಂತಿಮ ಉಪನ್ಯಾಸ” ನೀಡುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಾವು – ಬದುಕಿನ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಉಪನ್ಯಾಸದ ವೇದಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಪ್ರೊ. Ryandy pash ಗೆ ಇಂತಹ ಅವಕಾಶ ಒದಗಿದಾಗ ಅದು ನಿಜಕ್ಕೂ ಅಂತಿಮ ಉಪನ್ಯಾಸವಾಗಲಿದೆ ಎಂದು ಆತ ಊಹಿಸಿಯೇ ಇರಲಿಲ್ಲ. ಕಾರಣ ವೈದ್ಯರು ಆತನಿಗೆ ಕ್ಯಾನ್ಸರ್ ಇರುವಿಕೆಯನ್ನು ದೃಢಪಡಿಸಿದ್ದರು. Ryany ಯ ಉಪನ್ಯಾಸ ಸಾವಿನ ಬಗ್ಗೆ ಇರಬಹುದೆಂದು ಭಾವಿಸಿದವರಿಗೆ ದೊರಕಿದ್ದು “ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ಹೇಗೆ ” ಎಂದು. ಈ ಪ್ರಶ್ನೆಗಳಿಗೆ “ದಿ ಲಾಸ್ಟ್ ಲೆಕ್ಚರ್” ಸಮರ್ಪಕ ಉತ್ತರ ನೀಡಿತು. ಅದು ಇಂದು ಜಗತ್ತಿನ ಲಕ್ಷಾಂತರ ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಜಗತ್ತಿನ ಪ್ರತಿಯೊಬ್ಬ ಪೋಷಕರಿಗೂ ಇದೊಂದು ಮಾರ್ಗದರ್ಶಿ ಹೊತ್ತಿಗೆ. ಆದರ್ಶ ಶಿಕ್ಷಕರಿಗೊಂದು ಪಠ್ಯ. ವಿದ್ಯಾರ್ಥಿಗಳಿಗೊಂದು ಅಮೂಲ್ಯ ಕೈಪಿಡಿ ಹಾಗೂ ಸಂಶೋಧಕರಿಗೊಂದು ದಾರಿದೀಪ. ಡಾ. Ryandy pash ಅಮೇರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದಲ್ಲಿ 1988 ರಿಂದ 1997 ರವರೆಗೆ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ವಿಜ್ಞಾನಿಯಾದ ಇವರು ವರ್ಜಿನಿಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದ್ದು, ಅನಂತರ ಅಡೋಬ್, ಗೂಗಲ್, ಇಲೆಕ್ಟ್ರಾನಿಕ್ಸ್ ಆರ್ಟ್ ಮತ್ತು ವಾಲ್ ಡಿಸ್ನಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್ತಿನ ಪ್ರಸಿದ್ಧ ಆಲಿಸ್ ಸಾಫ್ಟವೇರ್ ನ ಜನಕ. ಮಡದಿ ಜೈ ಮತ್ತು ಮೂವರು ಮಕ್ಕಳಾದ ಡೈಲನ್, ಲೋಗನ್ ಮತ್ತು ಚೋಲೆ ಯರೊಂದಿಗೆ  ಸಾರ್ಥಕ ಜೀವನ ನಡೆಸಿ ತಮ್ಮ 47 ನೇ ವಯಸ್ಸಿನಲ್ಲೇ (25-07-2008) ಪ್ಯಾಂಕ್ರಿಯಾಸಿಸ್ ಕ್ಯಾನ್ಸರ್ ನಿಂದ ನಿಧನರಾದರು. Ryandy ಅವರ ಅಂತಿಮ ಉಪನ್ಯಾಸದಲ್ಲಿ ಭಾಗವಹಿಸಿ ಈ ಪುಸ್ತಕವನ್ನು ಬರೆದು ಕೋಟ್ಯಂತರ ಜನರ ಕನಸುಗಳಿಗೆ ನೀರೆರೆದು ಹಸಿರು ಮೂಡಿಸಿದ ಕೀರ್ತಿ ಅಮೇರಿಕಾದ ಪ್ರತಿಷ್ಠಿತ ಪತ್ರಿಕೆಯ ವರದಿಗಾರ ಜೆಫ್ರಿ ಅವರಿಗೆ ಸಲ್ಲುತ್ತದೆ. ಇದನ್ನು ಕನ್ನಡಕ್ಕೆ ಎಸ್. ಉಮೇಶ್ ರವರು ಅನುವಾದಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾಯುವುದು ಗ್ಯಾರಂಟಿ ಎನಿಸಿದ ಮೇಲೆ ತಾನು ಇಲ್ಲದ ಜಗತ್ತಿನಲ್ಲಿ ಬದುಕುವುದು ಹೇಗೆಂದು ಹೆಂಡತಿಗೆ ಹೇಳಿಕೊಟ್ಟು ಯಾರಿಗೆ ಯಾರೂ ಅನಿವಾರ್ಯವಲ್ಲವೆಂದು ಮನವರಿಕೆ ಮಾಡಿಕೊಡುವ ಪರಿ ಒಂದು ಕ್ಷಣ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ. Ryandy ಬದುಕಿನ ಕಷ್ಟಸುಖಗಳ ವಿಶ್ಲೇಷಣೆಯನ್ನು ಕುರಿತು”ಇಸ್ಪೀಟ್ ಆಟದಲ್ಲಿ ಯಾವ ಕಾರ್ಡ್ ನಮ್ಮ ಕೈ ಸೇರುತ್ತದೆ ಅನ್ನುವುದಕ್ಕಿಂತ ಬಂದ ಕಾರ್ಡ್ ಗಳಲ್ಲಿ ನಾವು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯ” ಎನ್ನುತ್ತಾರೆ. ಅವನ ಇಡೀ ಬದುಕಿನಲ್ಲಿ ಪತ್ನಿ ಜೈ ಳ ಧೈರ್ಯ, ಶ್ರಮ, ಸಹಕಾರ, ಸಹಾಯ ಎಲ್ಲವನ್ನೂ ತನ್ನ ಕಣ್ಮುಂದೆ ತಂದುಕೊಂಡು ಅವಳ ದಿಟ್ಟತನವನ್ನು ಕೊಂಡಾಡುತ್ತಾ ಜೈ ಳನ್ನು ‘ಸದೃಢ ಗೋಡೆ’ (ದಿ ವಾಲ್) ಎಂಬ ರೂಪಕಕ್ಕೆ ಹೋಲಿಸಿದ್ದಾನೆ. ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮ್ಮೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಅಪರಿಮಿತ ಶಕ್ತಿ. ಸಮಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಆಗ ಅಗಾಧವಾದುದನ್ನು ಸಾಧಿಸಬಹುದು ಎಂದು ಕರೆ ನೀಡಿದ್ದರೆ. ಇದರಿಂದ ಅವರು ಸಮಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೆಂಬುದು ಅರಿವಾಗುತ್ತದೆ. ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಅಗತ್ಯವಾಗಿ ಪೂರ್ವಸಿದ್ಧತೆ ಮಾಡಿಕೊಂಡಾಗ ಮಾತ್ರ ಆಶಾವಾದಿಯಾಗಿ ಬಾಳಲು ಸಾಧ್ಯವೆಂದು ಹೇಳಿ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿದ್ದಾರೆ. ಇಂತಹ ಒಂದು ಪುಸ್ತಕ ಹಲವರ ಜೀವನದ ಪಥವನ್ನೇ ಬದಲಿಸುವಂತಹ ಸ್ಫೂರ್ತಿಯಾಗಬಲ್ಲದು. ಆದ್ದರಿಂದ ಪುಸ್ತಕ ಜೀವನದ ಅಮೂಲ್ಯ ಸಂಗಾತಿ ಎಂದರೆ ತಪ್ಪಾಗಲಾರದು. ತಡೆಗೋಡೆಗಳು ನಮ್ಮನ್ನು ಹೊರದಬ್ಬಲು ಅಲ್ಲ, ದಾಟಿ ಮುನ್ನುಗ್ಗಲು, ನಮಗೆ ಅವಕಾಶ ನೀಡುವುದಕ್ಕಾಗಿ ಇವೆ –  ryandy pash ***************************** ತೇಜಾವತಿ ಹೆಚ್. ಡಿ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮೌನ ಮಂದಾರ ಕವಿ: ವಾಣಿ ಮಹೇಶ್ ಕವಯಿತ್ರಿ ವಾಣಿ ಮಹೇಶ್ ರವರ “ಮೌನಮಂದಾರ” ಪುಸ್ತಕ *ಎಪ್ಪತ್ತು ಕವನಗಳ ಮುಪ್ಪುಬರುವವರೆಗೂ ಓದಬೇಕು ಬೆಪ್ಪ* ಎನ್ನುವ *ಮೌನ ಮಂದಾರ*         ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ, ಅತ್ತುಅತ್ತು ಉತ್ತರಗಳು ಕಣ್ಣೀರ ಹಾಕದಿದ್ದರೆ ಮತ್ತೇರಿದ ನುಡಿಗಳು ಮೌನಿಯಾಗಿಸಿ ಸುತ್ತುವರಿಯುತ್ತವೆ. ನುಡಿಯದೇ ಭಾವನಾಕ್ಷರಗಳ ಪೋಣಿಸಿ ಗೀಚುತ್ತಿದ್ದರೆ, ಆ “ಮೌನ ಮಂದಾರ ಪುಷ್ಪ ವಾಗಿ ತನ್ನ ಸಕಲ ಶ್ರೇಷ್ಠ ಗುಣಗಳಿಂದ ಸೌರಭವನ್ನು ಸೂಸುತ್ತ ತನ್ನೆಡೆಗೆ ಸೆಳೆಯುತ್ತದೆ. ಅದರ ಸೌಂದರ್ಯ ಭಾವವು ಹಂದರವ ನಿರ್ಮಿಸಿ, ಒಂದೊಂದು ದಳಗಳು ಕವಿತೆಯಾಗಿ ಬಾಂದಳವನ್ನು ನೋಡುತ್ತಿದೆ. ಇಣುಕಿ ನಾನೋಡಿ ಒಮ್ಮೆ ಸ್ಪರ್ಶಿಸಿದೆ’. ಅದು “ಮೌನ ಮಂದಾರ”  ಪುಸ್ತಕವಾಗಿ ನನ್ನ ಕೈಸೇರಿತು, ಅದನ್ನು ಓದಿದೆ ಎನ್ನಲು ಹರ್ಷಿಸುವೆ.  ‘ಪುರುಷ ಸಮಾಜಕ್ಕೆ ಸಬಲೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಗೌರವಿಸಬೇಕೆಂಬ ಭಾವ ತುಂಬಿರುವ ಪುಸ್ತಕ ಮೌನ ಮಂದಾರ’ ಮೊದಲ ಪುಟದಲ್ಲಿ ವೀರಯೋಧನ ಕಥೆ ಹೇಳುವ ‘ಸಮರ ಸಾಮ್ರಾಟ’ ಎಂಬ ಕವಿತೆಯಲ್ಲಿ ಹೇಳುತ್ತಾರೆ; “ಒಂಟಿಯಾಗಿ ಬೆನ್ನಿಗಂಟಿದ ಸಿಡಿಮದ್ದು ಲೆಕ್ಕಿಸದೆ ಮನೋಬಲಕ್ಕೆ ಕಿವಿಗೊಟ್ಟು ವೀರಾಧಿವೀರನಂತೆ ಸದೆಬಡಿದ ಸಮರದಿ ದೇಹವೆಲ್ಲ ತೂತಾಗಿ ಕಾಲಿಲ್ಲದ ಕುಂಟನಾದರೂ ಭರತಮಾತೆಯ ಸೆರಗಿಗಂಟಿದ ನೆತ್ತರ ಒರೆಸಿ ಬಲಿಕೊಡಲು ತಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ” ಎಂಬ ಸಾಲು ವೀರಯೋಧನ ವೀರತ್ವ ದೇಶಪ್ರೇಮವನ್ನು ಎತ್ತಿಹಿಡಿಯುವ ಸಾಲುಗಳಾಗಿದ್ದು ಹೃದಯ ಸ್ಪರ್ಶಿಸುವಂತೆ ಲೇಖಕಚಿತ್ರಿಸಿದ್ದಾರೆ.  ಇನ್ನು ‘ನೆತ್ತರ ದಾಹ’ ಎಂಬ ಕವಿತೆಯಲ್ಲಿ ಅಮಾಯಕ ಬಲಿ ತೆಗೆದುಕೊಳ್ಳುತ್ತಿರುವ ಭಯೋತ್ಪಾದಕರಿಗೆ ಕಾಮಾಂಧರಿಗೆ ಪ್ರಶ್ನಿಸುತ್ತಾ ಗಾಂಧೀಜಿ ಮತ್ತು ಬುದ್ಧರ ಅಹಿಂಸಾ ಮಂತ್ರಗಳನ್ನು ನೆನೆಸುತ್ತಾ ಧರ್ಮಕ್ಕಾಗಿ ಹೋರಾಡದೆ ಮನುಷ್ಯತ್ವ ಧರ್ಮ ಗುಣಗಳಿಗೆ, ನ್ಯಾಯಕ್ಕೆ ಹೋರಾಡಿ ಎನ್ನುತ್ತಾ ಶಾಂತಿ ಮಂತ್ರವ ಪಾಲಿಸಿ ಎಂಬ ಸಂದೇಶವನ್ನು ನೀಡಿದ್ದಾರೆ    ಇನ್ನು ‘ದರ್ಪಣ’ ಎಂಬ ಕವಿತೆಯಲ್ಲಿ ಕನ್ನಡಿಯ ವಾಸ್ತವವನ್ನು ನೈಜತೆಯ ಗುಣಗಳನ್ನು ತೋರುತ್ತದೆ. ಅದೇ ರೀತಿ ನಾನಾ ಮುಖವಾಡಗಳನ್ನು ಧರಿಸಿ ವಿಷವನ್ನು ಅಂತರಂಗದಲ್ಲಿರಿಸಿರುವ ಮನೋವಿಕಾರಗಳಿಗೂ ಸಹ ದರ್ಪಣ ಬಿಡಬೇಕು ಎಂಬುದನ್ನು ಸುಪ್ರಿಯವಾಗಿ ವರ್ಣಿಸಿದ್ದಾರೆ.  ಸಾಹಿತ್ಯ ಕೃಷಿಯಲ್ಲಿರುವ ಲೇಖಕರ ‘ಸಬಲೆ’  ಎಂಬ ಕವನವನ್ನು ಗಮನಿಸಿದರೆ “ಒಂಟಿ ಜೀವ ಕಾಲಿ ಕೈಯಲ್ಲಿ ಹೊರಟೆ ಅರಿಯದ ದೂರದೂರಿನತ್ತ ದಿನವಿಡೀ ದುಡಿತ ಸಂಜೆಯಾಯಿತೆಂದರೆ ಜ್ಞಾನಾರ್ಜನೆಯ ತುಡಿತ ಅಂತೂ ಗಿಟ್ಟಿಸಿ.. ಬಿಟ್ಟೆ ಪದವಿಯ” ಈ ಕವಿತೆಯಲ್ಲಿ ಹೆಣ್ಣಿನ ಮನಸ್ಸು ಮೃದುವಾಗಿದ್ದರೂ ದಿಟ್ಟ ಹೆಜ್ಜೆ ಇಟ್ಟು ನಿಂತರೆ ಸಾಧನೆಯಲ್ಲಿ ಗುರಿಮುಟ್ಟುವಳು, ಒಂಟಿ ತಾನಾದರೂ ಧೃತಿಗೆಡದೆ ಜೀವನದಲ್ಲಿ ತಟ್ಟುತ್ತಾ ಇರಬಹುದಾದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಜ್ಞಾನಾರ್ಜನೆ ಪಡೆದು ತನ್ನ ಸಾಧನೆಯಲ್ಲಿನ ನೂರಾರು ಕಷ್ಟಗಳನ್ನು ಗೆದ್ದು ತನ್ನ ಬದುಕನ್ನು ಕಟ್ಟಿಕೊಂಡು ಬದುಕಬಲ್ಲಳು ಎಂಬ ಕಟು ಸತ್ಯವನ್ನು ಹೊರಗೆಳೆದಿದ್ದಾರೆ. ಇನ್ನು ‘ಗುಬ್ಬಿ’ ಎಂಬ ಶಿಶುಗೀತೆ ಯಲ್ಲಿ ಮಗುವಿನ ಹಿಂದುಮುಂದೊಬ್ಬರು ನಿಂತು ಜೀವನ ಪಾಠ ಕಲಿಸಿಕೊಡುವ ಅಪ್ಪ ಅಮ್ಮನ ಪಾತ್ರವನ್ನು ಪುಳಕ ಬರುವ ಕಾವ್ಯಾತ್ಮಕ ನೇರನುಡಿ ಗಳಿಂದ ಚಿತ್ರಿಸಿದ್ದಾರೆ ಶೋಚನೀಯ ಕಥೆ ಹೇಳುವ ‘ಕಾಮದಬ್ಬರ’, ‘ಶಂಖೆಯ ಅಟ್ಟಹಾಸ’, ‘ಜನನ ಮರಣ’ ಮುಂತಾದವು ಕಣ್ಣೀರು ತರಿಸುತ್ತವೆ. ‘ನಂಜಿನ ಮನೆ’ ಯಲ್ಲಿ ಬರುವ “ಮುಂಜಾವಿನ ಮಂಜಲ್ಲಿ ಯಿಂದ ಸುಮವೊಂದು ಬಾಡಿದೆ ಪುರುಷನೋರ್ವನ ಗರ್ವದ ಕಾಮ ಕೇಳಿಗೆ ಸಿಲುಕಿ ನಲುಗಿದೆ” ಇದು ಅರಳಿದ ಸುಮದಂತಿರುವ ಹೆಣ್ಗರುಳ ಬಳ್ಳಿಗೆ ಕೊಳ್ಳಿಹಿಡಿದು ಕಮರಿದಂತಾಗುವ ಸಾಲುಗಳು ಓದುಗರ ಮನಕಲಕುತ್ತದೆ.        ಇನ್ನು ‘ದೇವದಾಸಿ’ ಎಂಬ ಕವನದಲ್ಲಿ “ಊರಿಗೊಬ್ಬಳೇ ದೇವದಾಸಿ ಉರಿ ಮೊಗದಿ ಉಗಿದಟ್ಟಿದ ಪತಿವ್ರತೆಯರು ಸಹಿಸಿ ಸಾಕಾಗಿ ಬೇಕಾಗಿ ಬಂದ ಕಸುಬಲ್ಲವಿದೆಂದರೂ ಕೇಳುವರಾರು” ಕವಿತೆಯಲ್ಲಿ ಹಿಂದಿನ ಅನಿಷ್ಠ ಪದ್ದತಿಯಿಂದ ದೇವದಾಸಿ ಪಟ್ಟ ಕಟ್ಟಿ ಕಾಮಾಗ್ನಿ ಕೂಪಕ್ಕೆ ತಳ್ಳಿ ಹೆಣ್ಣಿನ ಜೀವನ ನರಕವಾಗಿಸಿ ಇದು ನನ್ನ ಕಸುಬಲ್ಲ ಎಂದರೂ ಕೇಳದೆ ಶೋಷಣೆಗೊಳಗಾಗುವ ಒಂದು ಹೆಣ್ಣಿನ ಕಥೆಯನ್ನು ಲೇಖಕರು ಕಣ್ಣೀರು ತರಿಸುವಂತೆ ಚಿತ್ರಿಸಿದ್ದಾರೆ.       ಸಾಹಿತ್ಯ ಕೃಷಿಗೆ ಕವಿಯ ಮನವೇ ಹೊಲವಾದರೆ ಭಾವಗಳ ನೇಗಿಲಿನಿಂದ ಹದ ಮಾಡಿ ಪದಗಳ ಸುಬೀಜ ಬಿತ್ತಿ ಮಾಧುರ್ಯತೆಯ ನೀರುಗೊಬ್ಬರ ನೀಡಿದಾಗ ಉತ್ತಮ ಫಲ ದೊರೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಚಿತವಾದ ಒಂದೊಂದು ಕವನ ಓದುತ್ತ ಸಾಗಿದರೆ ಕರುಣೆ ಅನುಭವ, ಮಹಿಳಾ ಶೋಷಣೆ, ಮೌನ ಸಿಡಿದೇಳುವಕೆ ನೋವು, ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಮಹಿಳೆಗೆ ಪ್ರಾಧಾನ್ಯತೆ ಮತ್ತು ಗೌರವ ಭಾವಗಳ ವಿಚಾರ ವೈಖರಿ ಕಾಣುತ್ತದೆ  ಕವಿತೆಗಳ ಎಲ್ಲಾ ಪದಗಳಲ್ಲಿ ಒಂದೊಂದು ಅನುಭವದ ಪ್ರಯೋಗಮಾಡಿ ವಿಭಿನ್ನ ಮನಸ್ಸಿನಿಂದ ಮುಕ್ತವಾಗಿ ಮಾಧುರ್ಯ ತುಂಬಿ “ಮೌನಮಂದಾರ”ವೆಂಬ ಪುಸ್ತಕವನ್ನು ಹೊರತಂದಿದ್ದಾರೆ ಎಂಬುದು ನನ್ನ ಅಭಿಪ್ರಾಯ ******* ಚಂದ್ರು ಪಿ ಹಾಸನ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ದಿನ

ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library”                            -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ ರುಚಿ ಗೊತ್ತಿರುತ್ತದೆ.ಓದು ಮನುಷ್ಯನ್ನು ಮನುಷ್ಯನಾಗಿ ನೋಡುವುದನ್ನು ಕಲಿಸುತ್ತದೆ ಎಂಬುದನ್ನು ಓದಿದ ನೆನಪು.ಆದರೆ ಓದುವ ಮನಸ್ಸು ಬರುವುದು ಯಾರಲ್ಲಿ? ಎಂದು ಪ್ರಶ್ನಿಸಿದರೇ ಬಹುತೇಕವಾಗಿ ನಿರ್ಮೊಹಿಗಳು..! ಅಂದರೆ ಅಲ್ಪಸ್ವಲ್ಪ ಆಸಕ್ತಿಯನ್ನು ಉಳಿಸಿಕೊಂಡ ಮಹನೀಯರು..! ಪರೀಕ್ಷೆಯ ಪುಸ್ತಕಗಳನ್ನು ಮುಗಿಸುವುದೇ ಯಕ್ಷ ಪ್ರಶ್ನೆಯಾದಾಗ..? ಪೂರಕವಾಗಿ ಓದಲು ಸಮಯವೆಲ್ಲಿ? ಎಲ್ಲವೂ ಅಂಕಗಳಿಗೆ ಸೀಮಿತವಾದಾಗ.ಪಠ್ಯವಲ್ಲದ ಪುಸ್ತಕಗಳನ್ನು ಅಷ್ಟು ಅರ್ಥಗರ್ಭಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.! “ಪುಸ್ತಕ ಜ್ಞಾನದ ಕಿಟಕಿ ಅರಿವಿನ ಗುರಿಗೆ ಪುಸ್ತಕವೇ ಗುರು”.. ಹಾಗದರೆ ಈ ಪುಸ್ತಕ ದಿನ ಹೇಗೆ ಜಾರಿಗೆ ಬಂತು? ಎಂದು ಅವಲೋಕಿಸಿದರೆ.ಮೊದಲಿಗೆ ವೆಲೆನ್ಸಿಯಾದ ಬರಹಗಾರ *ವಿಸೆಂಟ್ ಕ್ಲವಲ್ ಆಂಡ್ರೋ*ಅವರು ಸುಪ್ರಸಿದ್ಧ ಬರಹಗಾರರು.ಅವರ ಜನ್ಮ ದಿನ ಅಕ್ಟೋಬರ್ ೭ ರಂದು  ದಿನವಾಗಿ ಆಚರಿಸುತ್ತಾ ಬಂದ ಕಾಲ.. ಅವರು ಮರಣ ಹೊಂದಿದ ತಿಂಗಳು ಎಪ್ರಿಲ್ ೨೩.ವೆಲೆನ್ಸಿಯಾದ ಜನತೆ ವಿಸೆಂಟ್ನ ನೆನಪಿಗಾಗಿ ಎಪ್ರಿಲ್ ೨೩ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ೧೯೯೫ ರಲ್ಲಿ ಯುನೆಸ್ಕೋ ಈ ದಿನವನ್ನು ವಿಶ್ವಖ್ಯಾತ ವಿಲಿಯಂ ಷೇಕ್ಸ್‌ಪಿಯರ್ ಹಾಗೂ ಇಕಾಗಾಸಿಸ್ಕೋಡೆಲಾವೆಗಾ ಮರಣ ಹೊಂದಿದನ್ನು ಹಾಗೂ ಅನೇಕ ಬರಹಗಾರ ಜನ್ಮದಿನವನ್ನು ವಿಶ್ವ ಪುಸ್ತಕ ದಿನ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಘೋಷಿಸಿತು. ಇದರ ಉದ್ದೇಶ “ವಿಶ್ವಪುಸ್ತಕದಿನದಂದು ದಿಟ್ಟ ನಿರ್ಧಾರ” ವೆಂದರೆ ತಪ್ಪಾಗದು.. ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸದ ಜಾಗೃತಿ ಮೂಡಿಸುವುದು.ಅಭಿರುಚಿ ಹೆಚ್ಚಿಸುವುದು.ಜ್ಞಾನ ವ್ಯಕ್ತಿತ್ವವನ್ನು ಬೆಳಗಿಸಲು ಪುಸ್ತಕ ಸಹಕಾರಿಯೆಂದು ಮನದಟ್ಟು ಮಾಡುವುದು.ಅವಶ್ಯವಾಗಿತ್ತು. ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ  ರಾಷ್ಟಗಳು ಆಚರಿಸುತ್ತಿವೆ.ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಾದವರಿಗೆ ಪುಸ್ತಕ ಬಹುಮಾನವಾಗಿ ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ಮೆಚ್ಚಲೇಬೇಕು.. *ಕೃತಿ ಸ್ವಾಮ್ಯ ವೆಂದರೆ…* ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು ಪ್ರತಿಗಳನ್ನು ಮಾಡಿ ಮಾರಲು,ರೂಪಾಂತರಗೊಳಿಸಲು,ಮಾರ್ಪಡಿಸಲು, ಪ್ರದರ್ಶಿಸಲು,ಅಥವಾ ನಿರೂಪಿಸಲು ಕಾನುನು ನೀಡುವ ಅನನ್ಯ ಅಧಿಕಾರ.ಹಾಗೂ ಕಾನೂನು ಮನ್ನಿತ ಸಾಹಿತ್ಯ ಸ್ವಾಮ್ಯಾಧಿಕಾರ..ಇದರಿಂದ ಪುಸ್ತಕಗಳು ಮುದ್ರಿತಗೊಳ್ಳುವಲ್ಲಿ,ಮಾರುವಲ್ಲಿ,ಓದುಗರ ಮನ ಮುಟ್ಟುವಲ್ಲಿ ಕಾರ್ಯ ಸುಲಭ.ಪುಸ್ತಕಗಳಿಂದ ಜೀವನ ಬೆಳಕು..ಓದಿದವರೆಂದೂ ಹಾಳಾದ ಉದಾಹರಣೆಯಿಲ್ಲ. ಇಂದು ನಾವೆಲ್ಲ ಆತ್ಮಸಾಕ್ಷಿಯಾಗಿ ಎಷ್ಟು ಓದುತ್ತೇವೆ ಎಂಬುದನ್ನು ಅವಲೋಕಿಸಬೇಕಿದೆ.ನೂರಾರು ಜಂಜಾಟಗಳ ನಡುವೆ ಸಮಾಧಾನಗೊಂಡು ಪುಸ್ತಕ ಅಪ್ಪಿ ಮುದ್ದಾಡುವ ಸಮಯದ ಅಭಾವ. ಅಂಬೇಡ್ಕರ್ ರಂತಹ ಮಹಾನ್ ನಾಯಕ್ ತನ್ನ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದು.ಯುವ ಪಿಳಿಗೆಗೆ ಮಾದರಿ. ದೇಶದ ಮೊದಲ ಶಿಕ್ಷಕಿ ಶ್ರೀ ಮತಿ ಸಾವಿತ್ರಿಬಾಯಿಪುಲೆ..ಶಿಕ್ಷಣಕ್ಕೆ ಆದ್ಯತೆ ನೀಡಿದವರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಯುವಜನಾಂಗಕ್ಕೆ ತೋರಿದ ಮಾರ್ಗ ಮರೆಯಲಾದಿತೇ? ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್,ಕಿತ್ತೂರು ಚನ್ನಮ್ಮ,ಹೀಗೆ ಹತ್ತು ಹಲವಾರು ಸಂಗತಿಗಳು ರಿತ್ರೆಗಳಅರಿತುಬೆಳೆಯುವುದುಯ್ಯಾವಾಗ?? “ಜೀವನವನ್ನು ಸಾರ್ಥಕವಾಗಿ ಬದುಕಲು ಪುಸ್ತಕದ ಆಸರೆ” ಬಯಸಿದಾಗೆಲ್ಲ ನೆಮ್ಮದಿ ಒಳಸುಳಿಯಿವುದಂತು ದಿಟ.! “ಮೌಲ್ಯ ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು.” ಒಮ್ಮೆ ಅವಲೋಕಿಸಿ …ಇಂದಿನ ಸರಕಾರಿ ಶಾಲೆಗಳಲ್ಲಿ *ಓದುವ ಮೂಲೆ* ತಗೆ ಪುಸ್ತಕ ಹೊರಗೆ* ಶೃದ್ಧಾ ವಾಚನಾಲಯ* ಕಾರ್ಯಕ್ರಮಗಳು.ಸರಕಾರ ಶಾಲೆಗಳಿಗೆ ಅನುದಾನ ನೀಡಿ ಗ್ರಂಥಾಲಯಕ್ಕೆ ಅವಶ್ಯಕ ಮಕ್ಕಳ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹಾಗೂ ಸ್ಥಳಿಯ ಬರಹಗಾರರ ಪುಸ್ತಕ ಖರೀದಿಸುವುದರೊಂದಿಗೆ ಬರಹಗಾರರ ಮನೋಬಲವನ್ನು ಹೆಚ್ಚಿಸುವತ್ತ ದಿಟ್ಟ ನೆಡ ಹೊಂದಿ.ಎನ್ ಸಿ.ಎಪ್.೨೦೦೫ ಆಶಯದಂತೆ ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರ ದೃಷ್ಟಿಯ ಚಿಂತನೆ ಹಾಗೂ ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.ಕಾರಣವಿಷ್ಟೇ.. *ಪುಸ್ತಕದಲ್ಲಿರುವಜ್ಞಾನಮಸ್ತಕಕ್ಕೆವರ್ಗಾವಣೆಯಾಗಬೇಕು ಅಲ್ಲಿ ಶಿಕ್ಷಕರ ಪಾತ್ರ,ಹಾಗೂ ಮನೆಯಲ್ಲಿ ಪಾಲಕ/ಪೋಷಕರ ಪಾತ್ರ ಅತೀ ಮಹತ್ವದ್ದು. ಮಕ್ಕಳಿಗೆ ಬೇಗ ಆಕರ್ಷಿಸುವ ಮಾಧ್ಯಮವೆಂದರೆ ಒಂದು ಟಿವಿ ಇನ್ನೊಂದು ಮೊಬೈಲ್.. ಬಹತೇಕ ಪಾಲಕರ ಅಸ್ತ್ರ ಮಕ್ಕಳನ್ನು ಸುಮ್ಮನೀರಿಸಲು ಬಳಸುವ ಏಕೈಕ ಸಾಧನ ಮೊಬೈಲ್…ಅದೇ ಮಗುವಿಗೆ ಬಣ್ಣಬಣ್ಣದ ಚಿತ್ರಕಥೆಗಳಿರುವ ಪುಸ್ತಕ ನೀಡಿದರೇ ಮಗು ಸಂತಸ ಪಡದು….ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿ ಹೇಳುವ ವೇದಿಕೆಗಳು ಮನೆಯಿಂದಲೇ ಪ್ರಾರಂಭವಾಗಬೇಕಿದೆ.. *ಒಂದು ಆಶ್ಚರ್ಯವೆಂದರೆ ಬಹುತೇಕರು ಪುಸ್ತಕಗಳನ್ನು ಖರೀದಿಸುವುದಿಲ್ಲ. *ಖರೀದಿಸಿ ತಂದ ಪುಸ್ತಕಗಳನ್ನು ಓದುವುದಿಲ್ಲ. *ಮನೆಯಲ್ಲಿ ಬಹತೇಕರು ಟಿವಿ ಧಾರಾವಾಹಿಗಳನ್ನು ಚಾಚು ತಪ್ಪದೇ ನೋಡುವವರು. *ಭೌತಿಕವಾಗಿ ಪುಸ್ತಕವನ್ನು ಜನರ ಆಕಷರ್ಣೆಗೆ ತರುವುದು ಕಷ್ಟ ‌. *ಪುಕ್ಕಟೇ ಓದಲು ಹಾತೋರೆವರು.ಖರೀದಿಸಲು ಹಿಂದೇಟು..! ನಾವೆಲ್ಲ ಗ್ರಹಿಸುವುದು ಓದುವವರು ಇದ್ದಾರೆ. ಪುಸ್ತಕಗಳನ್ನು ಬರೆಯುವವರು,ಮುದ್ರಿಸುವವರು, ಆದರೆ ಕೋಟ್ಯಾಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕಗಳನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿದ್ದರೂ,ಸಾವಿರ ಪ್ರತಿಗಳು ಮಾರಾಟವಾಗುವುದು ಕಷ್ಟ. ಎಲ್ಲರೂಎಲ್ಲರ ಪುಸ್ತಕ ಕೊಳ್ಳುವುದಿಲ್ಲ.ಕೊಳ್ಳಬೇಕಾಗಿಲ್ಲ,ಓದಬೇಕಿಲ್ಲ ಆದರೆ ಆಸಕ್ತಿ ವಿಷಯಕ್ಕನುಕೂಲವಾಗಿ ಸಾವಿರ ಪುಸ್ತಕಗಳು ಮಾರಾಟವಾಗಬೇಕಿತ್ತು.ಆಗುತ್ತಿಲ್ಲ.ಕೆಲವು ಕಡೆಗಳಲಂತೂ ತಮ್ಮ ಸೈದ್ದಾಂತಿಕ ಬದ್ದತೆ ಮತ್ತು ನೈತಿಕ ಕರ್ತವ್ಯವೆಂಬಂತೆ ಪುಸ್ತಕ ಖರೀದಿಯಾಗುತ್ತಿದೆ.ಕನ್ನಡ ಓದುಗರೊಗಿಂತ ಆಂಗ್ಲಭಾಷೆಯ ಓದುಗರು ಹೆಚ್ಚಾಗುತ್ತಿರುವರು.ಓದುವುದಕ್ಕೆ ಬಂಧನವಾಗಲಿ,ನಿಬಂಧವಾಗಲಿ ಇಲ್ಲ. ” ಪುಸ್ತಕಗಳು ಜಗತ್ತನ್ನಾಳುತ್ತವೆ” ಎಂಬ ಸತ್ಯ ಅರಿಯಬೇಕಿದೇ… ಕನ್ನಡ ಸಾರಸ್ವತ ಲೋಕದಲ್ಲಿ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಮೇರು ಕಣಜಗಳು.ನಮ್ಮಮುಂದಿವೆ.ಹೊಸಹೊಸ ಪ್ರತಿಭೆಗಳಿಗೆ, ಅವರ ಸಾಹಿತ್ಯಕ್ಕೆ ಬರವಣಿಗೆಗೆ ಪುಸ್ತಕ ಕೊಂಡುಓದುವ ಹಾಗೂ ವಿಮರ್ಶಿಸುವ ಮನೋಭಾವದ ಕ್ರಾಂತಿಯು ಪ್ರತಿ ಮನೆಯಲ್ಲಿ ನಡೆಯವುದರಿಂದ ಮಕ್ಕಳ ಸಾಹಿತ್ಯ ದ ಅಭಿರುಚಿ ಹೆಚ್ಚಿಸಿದಂತಾಗುತ್ತದೆ.ಕೇವಲ ಇಂದು *ವಿಶ್ವ ಪುಸ್ತಕ ದಿನವೆಂದು ಹೆಸರಿಗೆ ಓದಿಬಿಟ್ಟರೆ ಅದು ಸಾರ್ಥಕವಾಗಲಾರದು.ಬಿಡುವಿನ ವೇಳೆಯ ಸದುಪಯೋಗ ಪಡೆಯುವ ದಿಕ್ಕಿನಲ್ಲಿ ಯುವ ಪಿಳಿಗೆಯನ್ನು ಬೆಳೆಸಬೇಕಾಗಿರುವುದು ಹಿರಿಯರ ಆದ್ಯ ಕರ್ತವ್ಯ ವಾಗಿದೆ. ಮೊಬೈಲ್ ಬಳಕೆ ನಿಯಮಿತವಾಗಿದ್ದಷ್ಟು ಉತ್ತಮ.. “ಜನರು ಈಗಲೂ ಆಲೋಚಿಸುತ್ತಿದ್ದಾರೆ ಎನ್ನುವುದಕ್ಕೆ ಪುಸ್ತಕದ ಅಂಗಡಿಗಳೇ ಸಾಕ್ಷಿ”                                 —-ಚೆರ್ರಿ ಸೀನ್ ಫೆಲ್ಡ್. ಪುಸ್ತಕದ ಅಂಗಡಿಗಳಿಗೆ ಮಕ್ಕಳೊಂದಿಗೆ ಬೇಟಿನೀಡಿ.ವಿವಿಧ ಪುಸ್ತಕಗಳನ್ನು ಗಮನಿಸುವ,ಸ್ಪರ್ಶಿಸುವ ಅವಕಾಶನೀಡಿ..ಮಕ್ಕಳು ಮೌಲ್ಯಾಧಾರಿತವಾಗಿ ಬೆಳೆಯಲು ವಿಸ್ಮಯ ಜಗತ್ತನ್ನು ತರೆದಿಟ್ಟಂತಾಗುತ್ತದೆ……..ನಿಮ್ಮ ಆಸುಪಾಸಿನ ಸಾಹಿತಿಗಳ ಸಾಹಿತ್ಯ ಓದಿ.ಹುರುದುಂಬಿಸಿ ಪುಸ್ತಕ ದಿನವನ್ನು ಅರ್ಥಗರ್ಭಿತವಾಗಿ ಹೊರಹೊಮ್ಮಲಿ… “ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ         ವಸ್ತುವೆಂದರೆ.ಅದು. -ಪುಸ್ತಕ”.. ******* .

ಪುಸ್ತಕ ದಿನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೇಗರವಳ್ಳಿ ರಮೇಶ್ ಆಲ್ಖೆಮಿಸ್ಟ್ ಕಾದಂಬರಿ ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ) ಕನ್ನಡಕ್ಕೆ: ಕಮಲ ಹೆಮ್ಮಿಗೆ ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ                                                                                                               ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ ಆವೃತ್ತಿಯಿಂದ  (ಅನುವಾದಕರು ರಮಾ ಮೆನೋನ್) ಕನ್ನಡಕ್ಕೆ ತಂದಿದ್ದಾರೆ. ಅನುವಾದಕಿ ಕಮಲಾ ಹೆಮ್ಮಿಗೆಯವರು ಈ ಕಾದಂಬರಿಯ ಇಂಗ್ಲಿಶ್ ಅನುವಾದವನ್ನು ಓದಿದಾಗ ಸಪ್ಪೆಯೆನಿಸಿತಂತೆ. ಅವರ ಕಿರಿಯ ಸ್ನೇಹಿತೆಯೊಬ್ಬರ ಸಲಹೆಯ ಮೇರೆಗೆ ಶ್ರೀಮತಿ “ರಮಾ ಮೇನೋನ್” ರ ಮಲಯಾಳಂ ಅನುವಾದವನ್ನುಓದಿ, ಪ್ರಭಾವಿತರಾಗಿ ಅದರಿಂದ ಈ ಕಾದಂಬರಿಯ ಕನ್ನಡಾನುವಾದವನ್ನು ಮಾಡಿದಾರೆ.  ಇದಕ್ಕೂ ಮೊದಲು ಈ ಕಾದಂಬರಿಯ ಕನ್ನಡಾನುವಾದ ಬಂದಿತ್ತೆಂದು ತಿಳಿಯಿತು. ಆದರೆ ಅದರ ಪ್ರತಿಗಳಾಗಲೀ, ಅನುವಾದಕರ ಹೆಸರಾಗಲೀ ಲಭ್ಯವಿಲ್ಲ.    ಕಮಲಾ ಅವರು ಕಾದಂಬರಿಯ ಆಶಯಕ್ಕೆ ಸ್ವಲ್ಪವೂ ಕುಂದು ಬರದ ಹಾಗೆ ಅದ್ಭುತವಾಗಿ ಅನುವಾದಿಸಿದ್ದಾರೆ. ಅನುವಾದ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಓದುಗರು ಕಾದಂಬರಿಯ ನಾಯಕ ಸ್ಯಾಂಟಿಯಾಗೋನ ಅರಸುವಿಕೆಯ ಪಯಣದಲ್ಲಿ ಅವನೊಂದಿಗೆ ಹೆಜ್ಜೆ ಹಾಕುತ್ತಾ, ಆಂಡಲೂಸಿಯಾದ ಹುಲ್ಲುಗಾವಲುಗಳಲ್ಲಿ, ಆಫ್ರಿಕಾದ ಊರುಗಳಲ್ಲಿ, ಸಹಾರಾ ಮರುಭೂಮಿಯ ಮರಳಿನಲ್ಲಿ ,  ಪಿರಮಿಡ್ಡುಗಳ ಸನಿಹದಲ್ಲಿ ಸುತ್ತಾಡಿ ಅವನ ಅನುಭವಗಳನ್ನು ತಾವೂ ಒಳಗೊಳ್ಳುತ್ತಾ ಸಾಗುತ್ತಾರೆ. ಇದೊಂದು ಸಾರ್ಥಕ ಅನುವಾದವೆಂದರೆ ತಪ್ಪಾಗುವುದಿಲ್ಲ.      ಕಥೆ ಪ್ರಾರಂಭವಾಗುವುದಕ್ಕೂ ಮುನ್ನ ನಾಂದಿ ರೂಪದಲ್ಲಿ  ಆಲ್ಖೆಮಿಸ್ಟ್ ಓದಿದ ನಾರ್ಸಿಸಸ್ ಕಥೆಯ ಪ್ರಸ್ತಾಪವಿದೆ.  ಈ ಕಥೆ ಕೊನೆಯಾಗುವುದು ಅಳುತ್ತಿರುವ ಕೊಳ ವನದೇವತೆಯರಿಗೆ ತನ್ನ ಅಳುವಿನ ಕಾರಣ ತನ್ನನ್ನು ನೋಡುತ್ತಿದ್ದ ನಾರ್ಸಿಸಸ್ ನ ಕಣ್ಣುಗಳಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬವೇ  ಹೊರತು ಅವನ ಬಾಹ್ಯ ಸೌಂದರ್ಯವಲ್ಲ ಎಂದು ಹೇಳುವಲ್ಲಿ ಮನುಷ್ಯನ ಬಾಹ್ಯ ರೂಪಕ್ಕಿಂತ ಆಂತರ್ಯದ ಸೌಂದರ್ಯಮುಖ್ಯ ಎಂಬ ಅಂಶವನ್ನುಎತ್ತಿ ಹಿಡಿಯುತ್ತದೆ. ಇದು ಆಲ್ಖೆಮಿಸ್ಟ್ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿರುವ, ಸ್ಯಾಂಟಿಯಾಗೋ ಕೊನೆಯಲ್ಲಿ ಕಂಡುಕೊಳ್ಳುವ ದರ್ಶನಕ್ಕೆ ಬರೆದ ಮುನ್ನುಡಿಯಂತಿದೆ. ಇದರಿಂದ ಕಾದಂಬರಿಯ ಮೌಲ್ಯ ವೃದ್ಧಿಯಾಗಿದೆ.     ಮಧ್ಯಕಾಲೀನ ಯುಗದಲ್ಲಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಕೆಲ ಭಾಗಗಳಲ್ಲಿ ಆಲ್ಖೆಮಿ  ಅಂದರೆ ರಸ ವಿದ್ಯೆ ಪ್ರಚಲಿತದಲ್ಲಿದ್ದು ಕೆಲವರು ಇದನ್ನು ಅಭ್ಯಸಿಸಿ ಪ್ರಯೋಗಗಳನ್ನು ನಡೆಸುತ್ತಿದ್ದರು.  ಅಂಥವರಿಗೆ ಆಲ್ಖೆಮಿಸ್ಟ್ ಗಳು (ರಸವಾದಿಗಳು) ಎಂಬ ಹೆಸರಿತ್ತು.  ಈ ಆಲ್ಖೆಮಿಸ್ಟ್ ಗಳು ಸಾಧಾರಣ ಲೋಹವನ್ನುಕರಗಿಸಿ ಶುದ್ಧೀಕರಿಸಿ ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗುತ್ತಿದ್ದರು. ಈ ವಿದ್ಯೆಯ ಮೂಲ ಗ್ರೀಕೋ-ರೋಮನ್ ಮತ್ತು ಈಜಿಪ್ಟ ದೇಶಗಳೆಂದು ಹೇಳುತ್ತಾರೆ.ಆಲ್ಖೆಮಿಸ್ಟ್ ಗಳು ಕೇವಲ ಸಾಧಾರಣ ಲೋಹಗಳನ್ನು ಚಿನ್ನವಾಗಿಸುವುದಲ್ಲದೇ ತತ್ವಜ್ನಾನಿಗಳೂ ಆಗಿರುತ್ತಿದ್ದರು. ಆತ್ಮ ಶುದ್ಧಿಯ ಬಗ್ಗೆ, ಜೀವಾತ್ಮಗಳ ಸಂಬಂಧದ ಬಗ್ಗೆ ಚಿಂತನೆ ನಡೆಸುತ್ತಿದ್ದರು.  ಅಲ್ಲದೇ ಮನುಷ್ಯನ ಆಯುಷ್ಯವನ್ನು ವೃದ್ಢಿಸುವ ಕಷಾಯವನ್ನೂ ಸಹ ತಯಾರಿಸುತ್ತಿದ್ದರು. ಈ ಕಾದಂಬರಿಯ ಮುಖ್ಯ ವ್ಯಕ್ತಿ ಸ್ಯಾಂಟಿಯಾಗೋ ಎಂಬ ಯುವಕ. ತಮ್ಮ ಮಗ ಪಾದ್ರಿಯಾಗಬೇಕೆಂಬ ತಂದೆ ತಾಯಿಯರ ಇಚ್ಚೆಗೆ ವಿರುದ್ಧವಾಗಿ, ಪಾದ್ರಿಯಾಗಿ ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವುದರಲ್ಲಿ ಅರ್ಥವಿಲ್ಲವೆಂದು ಮನಗಂಡು, ದೇಶ ಸುತ್ತಿ ಅನುಭವ ಗಳಿಸುವ ಆಶಯದಿಂದ ಕುರಿಗಾಹಿಯ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾನೆ.  ಇಲ್ಲಿಂದ ಅವನ ಸಂಚಾರೀ ಬದುಕು ಆರಂಭವಾಗುತ್ತದೆ.      ಒಮ್ಮೆ ಟರೀಫ಼ಾದಲ್ಲಿವ್ಯಾಪಾರಿಯೊಬ್ಬನಿಗೆ ಕುರಿಗಳತುಪ್ಪಳವನ್ನು ಮಾರುವ ಸಂದರ್ಭದಲಿ ಆ ವ್ಯಾಪಾರಿಯ ಮಗಳನ್ನು ಕಂಡು ಸ್ಯಾಂಟಿಯಾಗೊ ಮೋಹಗೊಳ್ಲುತ್ತಾನೆ.ಎರಡು ವರ್ಷಗಳ ನಂತರ ಅವಳನ್ನು ನೋಡುವ ಉದ್ದೇಶದಿಂದ ಹೊರಟವನಿಗೆ ಸಂಜೆ ಒಂದು ಪಾಳು ಬಿದ್ದ, ಛಾವಣಿಯಿಲ್ಲದ ಚರ್ಚ್ ಕಾಣಿಸುತ್ತದೆ. ಆ ಚರ್ಚ್ ಒಳಗೆ ಬೆಳೆದಿರುವ ಒಂದು ಸೈಕೋಮೋರ್ ಮರದ ಕೆಳಗೆ  ಆ ರಾತ್ರಿ ಕಳೆಯುವುದೆಂದು ನಿರ್ಧರಿಸಿ ಮಲಗಿದವನಿಗೆ ಒಂದು ಕನಸು ಬೀಳುತ್ತದೆ.  ಕನಸಿನಲ್ಲಿ ಮಗುವೊಂದು ಅವನ ಕೈ ಹಿಡಿದು ಈಜಿಪ್ಟಿನ ಪಿರಮಿಡ್ಡುಗಳ ಬಳಿಗೆ ಒಯ್ದು ಅಲ್ಲಿರುವ ನಿಧಿಯನ್ನು ತೋರಿಸುತ್ತದೆ.  ಈ ರೀತಿಯ ಕನಸನ್ನು  ಅವನು ಹಲವಾರು ಬಾರಿ ಕಂಡಿರುತ್ತಾನೆ.      ಟರೀಫಾದಲ್ಲಿರುವ ಜಿಪ್ಸಿ ಮುದುಕಿಯಿಂದ ಕನಸಿನ ಅರ್ಥವನ್ನು ತಿಳಿದುಕೊಳ್ಳ ಬೇಕೆಂದು ಅವಳ ಬಳಿ ಹೋಗುವ ಸ್ಯಾಂಟಿಯಾಗೋನಿಗೆ ಅವನ ಕನಸಿನ ನಿಧಿ ಈಜಿಪ್ಟಿನ ಪಿರಮಿಡ್ಡುಗಳ ಬುಡದಲ್ಲಿರುವುದಾಗಿಯೂ, ಸ್ಯಾಂಟಿಯಾಗೋ ಅದನ್ನು ಪಡೆದಾಗ ಅದರಲ್ಲಿ ಹತ್ತನೇ ಒಂದು ಭಾಗವನ್ನು ತನಗೆ ಕೊಡಬೇಕೆಂದು ತಾಕೀತು ಮಾಡುತ್ತಾಳೆ.  ಮುಂದೆ ಸ್ಯಾಂಟಿಯಾಗೋ ಗೆ ಸಾಲೆಮ್ ನ ರಾಜನೆಂದು ಹೇಳಿಕೊಳ್ಳುವ ಮಿಲ್ಚಿ ಜ಼ೆಡೆಕ್ ಎಂಬ ಮುದುಕನ ಭೇಟಿಯಾಗುತ್ತದೆ.  ಮಿಲ್ಚೆಜ಼ೆಡೆಕ್ ಸ್ಯಾಂಟಿಯಾಗೋಗೆ  ಅನೇಕ ವಿಚಾರಗಳನ್ನು ಕುರಿತು ತಿಳಿಸುತ್ತಾನೆ. ಆತ್ಮಾನುಭವ ಮತ್ತು ಪ್ರಕೃತಿಯೊಂದಿಗಿನ ಅದರ ಸಂಬಂಧ ಗಳನ್ನು ತಿಳಿಸಿ “ಪೂರ್ಣ ಮನಸ್ಸಿನಿಂದ ಕೇಳಿಕೊಂಡರೆ ಪ್ರಕೃತಿ ನಮಗೆ ನೆರವಾಗುತ್ತದೆ ಎಂದೂ ತಿಳಿಸುತ್ತಾನೆ. ಕನಸಿನ ಸಾಕ್ಷಾತ್ಕಾರಕ್ಕಾಗಿ ಈಜಿಪ್ಟಿನ ಪಿರಮಿಡ್ಡುಗಳ ಬಳಿ ತೆರಳಲು ಪ್ರೇರೇಪಿಸುತ್ತಾನೆ. ಅವನಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಸಹಾಯವಾಗಲೆಂದು ಯೂರಿಮ್ ಮತ್ತು ತುಮಿಮ್ ಎಂಬ ಎರಡು ಕಲ್ಲುಗಳನ್ನು ನೀಡುತ್ತಾನೆ.      ಸ್ಯಾಂಟಿಯಾಗೋ ತನ್ನಲ್ಲಿದ್ದ ಕುರಿಗಳಲ್ಲಿ ಆರು ಕುರಿಗಳನ್ನು ತಾನು ಕೊಟ್ಟ ಮಾತಿನಂತೆ ಮಿಲ್ಚಿಜ಼ೆಡೆಕ್ ನಿಗೆ ಕೊಟ್ಟು ಉಳಿದ  ಕುರಿಗಳನ್ನು ಮಾರಿ ಆಫ್ರಿಕಾಕ್ಕೆ ಪಯಣಿಸಿ ಆಫ್ರಿಕಾದ ಟ್ಯಾನ್ಜೀರ್ ಪಟ್ಟಣಕ್ಕೆ ಬಂದಿಳಿಯುತ್ತಾನೆ.  ಅಪರಿಚಿತ ಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗುವ, ಸ್ಪ್ಯಾನಿಷ್ ಮಾತನಾಡುವ ಯುವಕ ಸ್ಯಾಂಟ್ಯಾಗೋನೊಂದಿಗೆ ಸ್ನೇಹ ಬೆಳೆಸಿ ಅವನಲ್ಲಿದ್ದ ಹಣವನ್ನೆಲ್ಲ ಲಪಟಾಯಿಸುತ್ತಾನೆ. ಎಲ್ಲವನ್ನೂ ಕಳೆದುಕೊಂಡ ಸ್ಯಾಂಟಿಯಾಗೋನನ್ನು ಅನಾಥಪ್ರಜ್ನೆ ಕಾಡುತ್ತದೆ. ಹೇಗಾದರೂ ಮಾಡಿ ಸ್ವಲ್ಪ ಹಣ ಸಂಪಾದಿಸಿ  ಆಂಡಲೂಸಿಯಾಗೆಹಿಂದಿರುಗಬೇಕೆಂದುಕೊಳ್ಳುತ್ತಾನೆ. ಅವನಿಗೆ ಒಬ್ಬ ಹರಳು ಮತ್ತು ಗಾಜಿನ ವಸ್ತುಗಳ ವ್ಯಾಪಾರಿಯ ಅಂಗಡಿಯಲ್ಲಿ ಕೆಲಸ ಸಿಗುತ್ತದೆ. ತನ್ನ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಗಳಿಂದ ಅಂಗಡಿಯ ಯಜಮಾನನ ವಿಶ್ವಾಸ ಗಳಿಸುತ್ತಾನೆ.  ಅವನ  ಬಳಿ ಸಾಕಷ್ಟು ಹಣವೂ ಸಂಗ್ರಹವಾಗುತ್ತದೆ.  ಅಂಗಡಿಯಲ್ಲಿ ಕೆಲವಾರು ತಿಂಗಳುಕೆಲಸ ಮಾಡಿದ ನಂತರ ಸ್ಯಾಂಟಿಯಾಗೋನನ್ನು ಆಂಡಲೂಸಿಯಾಗೆ ಹಿಂದಿರುಗುವುದೋ ಅಥವಾ ಕನಸಿನ ನಿಧಿಯನ್ನರಸಿ ಪಿರಮಿಡ್ಡುಗಳ ಕಡೆ ಹೋಗುವುದೋ ಎಂಬ ದ್ವಂದ್ವ ಕಾಡ ತೊಡಗುತ್ತದೆ.  ಅದೇ ಸಂದರ್ಭದಲ್ಲಿ ಈಜಿಪ್ಟಿಗೆ ಪಯಣ ಹೊರಟಿದ್ದ ಜನರ ಗುಂಪೊಂದು ಅಲ್ಲಿಗೆ ಬರುತ್ತದೆ.ಆ ಗುಂಪನ್ನು ಸೇರಿಕೊಂಡು ಈಜಿಪ್ಟಿನ ಕಡೆಗೆ ಪಯಣ ಬೆಳೆಸುತ್ತಾನೆ.      ಅವನಿಗೆ ಆ ಗುಂಪಿನಲ್ಲಿದ್ದ ಆಂಗ್ಲ ಮನುಷ್ಯನೊಬ್ಬನ ಪರಿಚಯವಾಗುತ್ತದೆ.  ಆ ಮನುಷ್ಯ ರಸವಾದದ (ಆಲ್ಖೆಮಿ) ರಹಸ್ಯಗಳನ್ನು ಅರಿಯಲೋಸುಗ ಪಿರಮಿಡ್ಗೆ ಹೋಗುವ ದಾರಿಯಲ್ಲಿರುವ ಓಯಸಿಸ್ನಲ್ಲಿ ವಾಸಿಸುತ್ತಿರುವ ಆಲ್ಖೆಮಿಸ್ಟ್ ಒಬ್ಬನನ್ನು ಭೇಟಿಮಾದಲು ತಾನು ಇಚ್ಚಿಸುವುದಾಗಿಯೂ, ಮತ್ತು ಆ ಆಲ್ಖೆಮಿಸ್ಟ್ ಗೆ  ಇನ್ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವುದೆಂದೂ ಹೇಳುತ್ತಾನೆ. ಮರುಭೂಮಿಯಲ್ಲಿ ಪಯಣಿಸುತ್ತಾ ಸ್ಯಾಂಟಿಯಾಗೋ ಮರುಭೂಮಿಯ ಮಾತುಗಳನ್ನು ಆಲಿಸುವುದನ್ನೂ ಮತ್ತು ಜಗತ್ತಿನ ಆತ್ಮವನ್ನು ಶೋಧಿಸುವುದನ್ನೂ ಕಲಿಯುತ್ತಾನೆ.      ಗುಂಪು ಓಯಸಿಸ್ ಪ್ರದೇಶಕ್ಕೆ ಬರುತ್ತದೆ.  ಅಲ್ಲಿ ಅವರೆಲ್ಲ ಕೆಲ ದಿನ ತಂಗುತ್ತಾರೆ. ಅಲ್ಲಿ ಸ್ಯಾಂಟಿಯಾಗೊನಿಗೆ ಫಾತಿಮಾ ಎಂಬ ಅರಬ್ ಹುಡುಗಿಯ ಭೇಟಿಯಾಗುತ್ತದೆ.  ಅವಲ ಸೌಂದರ್ಯಕ್ಕೆ ಮಾರು ಹೋದ ಸ್ಯಾಂಟಿಯಾಗೋ ಅವಳಲ್ಲಿ  ಅನುರಕ್ತನಾಗುತ್ತಾನೆ.  ಗುಂಪಿನ ನಾಯಕ  ಎಲ್ಲರನ್ನೂ ಸೇರಿಸಿ  “ಮರುಭೂಮಿಯ ಬುಡಕಟ್ಟು ಜನಾಂಗದ ಬಣಗಳ ನಡುವೆ ಯುದ್ಧ ನಡೆಯುತ್ತಿರುವುದಾಗಿಯೂ, ಆದ್ದರಿಂದ ಪಯಣ ಮುಂದುವರಿಸಲು ಸಧ್ಯಕ್ಕೆ ಸಾಧ್ಯವಾಗುವುದಿಲ್ಲ” ಎಂದು ಹೇಳುತ್ತಾನೆ.      ಗುಂಪಿನೊಂದಿಗೆ ಅನಿವಾರ್ಯ ಓಯಸಿಸ್ನಲ್ಲಿ  ಉಳಿಯಲೇ ಬೇಕಾದ ಸ್ಯಾಂಟಿಯಾಗೋ  ಮರುಭೂಮಿಯ ಕಡೆ ನಡೆದು ಸುತ್ತಾಡುತ್ತಾನೆ.  ಆಗ ಅವನಿಗೆ ಆಗಸದಲ್ಲಿ ಎರಡು ಗಿಡುಗಗಳು ಹೋರಾಡುತ್ತಿರುವ ದೃಶ್ಯ ಕಾಣುತ್ತದೆ.  ಅದನ್ನು ಕಂಡ ಸ್ಯಾಂಟಿಯಾಗೊಗೆ ಸೈನ್ಯದ ತುಕುಡಿಯೊಂದು ಓಯಸಿಸ್ ಪ್ರದೇಶವನ್ನು ಆಕ್ರಮಿಸುವ ಮುನ್ಸೂಚನೆ ಸಿಗುತ್ತದೆ.  ಓಯಸಿಸ್ ಗಳ ಮೇಲೆ ದಾಳಿ ಮಾಡುವುದು ಅಲ್ಲಿಯ್ ನಿಯಮಕ್ಕೆ ವಿರುದ್ಧವಾದದ್ದರಿಂದ ಈ ವಿಶಯವನ್ನು ಓಯಸಿಸ್ ಪ್ರದೇಶದ ಮುಖ್ಯಸ್ಥನೊಂದಿಗೆ ಹಂಚಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಕೈಯಲ್ಲಿ ಕತ್ತಿ ಹಿಡಿದ, ಬಿಳಿಯ ಕುದುರೆಯ ಮೇಲೆ ಕುಳಿತಿದ್ದ, ಕಣ್ಣುಗಳೆರಡನ್ನು ಬಿಟ್ಟು ದೇಹದ ಉಳಿದ ಭಾಗವನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನು ಸ್ಯಾಂಟಿಯಾಗೋಗೆ ಎದುರಾಗುತ್ತಾನೆ. ಅವನೇ ಆಂಗ್ಲ ಮನುಷ್ಯ ಹೇಳಿದ ಆಲ್ಖೆಮಿಸ್ಟ್ ಆಗಿರುತ್ತಾನೆ.  ಆಲ್ಖೆಮಿಸ್ಟ್ ಸ್ಯಾಂಟಿಯಾಗೋನನ್ನು ತನ್ನ ಗುಡಾರಕ್ಕೆ ಕರೆದುಕೊಂಡುಹೋಗುತ್ತಾನೆ.  ಅವನಿಂದ ಸ್ಯಾಂಟಿಯಾಗೋ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾನೆ.  ಮುಖ್ಯವಾಗಿ ಪ್ರಕೃತಿ ಭಾಷೆಯನ್ನು ಮತ್ತು ಭೌತ ಶಕ್ತಿಗಳೊಂದಿಗೆ ಸಂಭಾಷಿಸುವುದನ್ನು ಕಲಿಯುತ್ತಾನೆ.  ಆಲ್ಖೆಮಿಸ್ಟ್ ತಾನು ಮರುಭೂಮಿಯನ್ನು ದಾಟಿ ಈಜಿಪ್ಟಿನ ಪಿರಮಿಡ್ಡುಗಲ ಕಡೆ ಹೋಗುವುದಾಗಿಯೂ, ಬೇಕಾದರೆ ತನ್ನ ಜತೆ ಬರಬಹುದೆಂದು ಸ್ಯಾಂಟಿಯಾಗೊಗೆ ಹೇಳುತ್ತಾನೆ. ಸ್ಯಾಂಟಿಯಾಗೋ ಆಲ್ಖೆಮಿಸ್ಟ್ ಜತೆ ಪಯಣಿಸಲು ಒಪ್ಪುತ್ತಾನೆ. ಇಬ್ಬರೂ ಯುದ್ಧ ನಡೆಯುತ್ತಿದ್ದ  ಮರುಭೂಮಿಯ ಪ್ರದೇಶವನ್ನು ಪ್ರವೇಶಿಸುತ್ತಾರೆ.      ಯುದ್ಧ ಮಾಡುತ್ತಿದ್ದ ಯೋಧರು ಇವರಿಬ್ಬರನ್ನು ಬಂಧಿಸುತ್ತಾರೆ.  ಆಗ ಆಲ್ಖೆಮಿಸ್ಟ್ ಯೋಧರ ಹತ್ತಿರ ಸ್ಯಾಂಟಿಯಾಗೋ ನಿಗೆ ಬಿರುಗಾಳಿಯಾಗಿ ಮಾರ್ಪಡುವ ವಿದ್ಯೆ ಗೊತ್ತಿದೆಯೆಂದು ಹೇಳುತ್ತಾನೆ. ಆಲ್ಖೆಮಿಸ್ತ್ನನ್ನು ಅವಹೇಳನ ಮಾಡಿದ ಯೋಧರು, ಹಾಗಿದ್ದರೆ ತಮ್ಮ ಸೇನಾಧಿಪತಿಯ ಎದುರು  ಸ್ಯಾಂಟಿಯಾಗೋ ಆ ವಿದ್ಯೆಯನ್ನು ಪ್ರದರ್ಷಿಸ ಬೇಕೆಂದು ತಾಕೀತು ಮಾಡುತ್ತಾರೆ.  ಆಲ್ಖೆಮಿಸ್ಟ್ ಒಪ್ಪಿಕೊಳ್ಳುತ್ತಾನೆ. ಆದರೆ ಏನೂ ಅರಿಯದ ಸ್ಯಾಂಟಿಯಾಗೋನಿಗೆ  ಆತಂಕ ಶುರುವಾಗುತ್ತದೆ.  ಮರುದಿನ ಮುಂಜಾನೆ ಸ್ಯಾಂಟಿಯಾಗೋ ಮರುಭೂಮಿಯಲ್ಲಿದ್ದ ಒಂದು ಮರಳು ದಿಬ್ಬದ ಮೇಲೆ ಕುಳಿತು ಈ ಗಂಡಾಂತರದಿಂದ ತನ್ನನ್ನು ಪಾರುಮಾಡುವಂತೆ ದೇವರನ್ನು ಪ್ರಾರ್ಥಿಸುತ್ತಾನೆ.  ಮರುಭೂಮಿ, ಸೂರ್ಯ, ಗಾಳಿಗಳೂ ಕೂಡ ಅವನೊಂದಿಗೆ ಪ್ರಾರ್ಥಿಸುತ್ತಿವೆ ಅನಿಸುತ್ತದೆ. ಅವುಗಳೊಂದಿಗೆ ಅವನು ಸಂಭಾಷಿಸುತ್ತಾನೆ, ತನ್ನ ಹೃದಯದ ಮಾತು ಕೇಳುತ್ತಾನೆ.   ಗಾಳಿ ಬಿರುಗಾಳಿಯಾಗಿ ಪರಿವರ್ತಿತವಾಗುತ್ತದೆ.  ಬಿರುಗಾಳಿ ನಿಂತಾಗ ಸ್ಯಾಂಟಿಯಾಗೋ ಆ ಯೋಧರ ನಡುವೆ ಇರುತ್ತಾನೆ.  ಅವರು ಇವರಿಬ್ಬರನ್ನೂ ಮುಂದೆ ಹೋಗಲು ಬಿಡುತ್ತಾರೆ.      ಮಧ್ಯದಲ್ಲಿ ಆಲ್ಖೆಮಿಸ್ಟ್ ತನಗೆ ಬೇರೆ ಎನೋ ಜರೂರು ಕೆಲಸವಿದೆ ಎಂದು ಹೇಳಿ ಓಯಸಿಸ್ಗೆ ಹಿಂದಿರುಗುತ್ತಾನೆ.  ಒಂಟಿಯಾದ ಸ್ಯಾಂಟಿಯಾಗೋ ಛಲ ಬಿಡದೇ ಮುಂದೆ ಸಾಗಿ ಪಿರಮಿಡ್ಡುಗಳ ಬಳಿ  ಬರುತ್ತಾನೆ.  ನಿಧಗಾಗಿ ಮರಳನ್ನು ಅಗೆಯುತ್ತಾನೆ, ಆದರೆ ಅವನಿಗೆ ನಿಧಿ ಸಿಗುವುದಿಲ್ಲ.  ಆಗ ಅಲ್ಲಿಗ ಬಂದ ಕಳ್ಳರ ಗುಂಪೊಂದು ಅವನನ್ನು ಥಳಿಸಿ ಅವನ ಬಳಿಯಿದ್ದ, ಅವನಿಗೆ ಆಲ್ಖೆಮಿಸ್ಟ್ ಕೊಟ್ಟಿದ್ದ ,ಚಿನ್ನದ ಗಟ್ಟಿಯನ್ನು ಕಿತ್ತುಕೊಳ್ಳುತ್ತಾರೆ.  ಆಗ ಸ್ಯಾಂಟಿಯಾಗೋ  ತಾನು ಕಂಡ ಕನಸಿನ ನಿಧಿಯ ಬಗ್ಗೆ ಹೇಳಿದಾಗ ಆ ಕಳ್ಳರಲ್ಲೊಬ್ಬನು ತಾನು ಕಂಡ ನಿಧಿಯ ಕನಸಿನ ಬಗ್ಗೆ ಹೇಳಿ, ಅದು ಆಂಡಲೂಸಿಯಾದ ಪಾಳು ಬಿದ್ದ ಚರ್ಚಿನಲ್ಲಿ ಇರುವುದಾಗಿ ಹೇಳುತ್ತಾನೆ.     ಆಂಡಲೂಸಿಯಾಗೆ ಹಿಂದಿರುಗುವ ಸ್ಯಾಂಟಿಯಾಗೋ ಹಿಂದೆ ತಾನು ಮಲಗಿದ್ದ ಪಾಳು ಚರ್ಚಿನ ಸೈಕೊಮೋರ್ ಮರದಡಿ ಅಗೆಯುತ್ತಾನೆ.  ನಿಧಿಯಿದ್ದ ಪೆಟ್ಟಿಗೆ ಸಿಗುತ್ತದೆ.  ಆಗ ಈಜಿಪ್ಟಿನ ಮರುಭೂಮಿಯ ಕಡೆಯಿಂದ ಹಿತವಾದ ತಂಗಾಳಿ ಬೀಸಿ ಬರುತ್ತದೆ. ಅದರಲ್ಲಿ ಫಾತಿಮಾಳ ಪ್ರೀತಿಯ ಚುಂಬನದ ಸುಗಂಧವಿರುತ್ತದೆ.  ಅವಳ ಮೊದಲ ಚುಂಬನ!  ಪರವಶನಾದ ಸ್ಯಾಂಟಿಯಾಗೋ “ಫಾತಿಮಾ ಬಂಗಾರೀ  ನಾ ಬರ್ತೀನಿ ಮರೀ”  ಎನ್ನುವಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.            ಇಡೀ ಕಾದಂಬರಿಯನ್ನು ಆವರಿಸಿಕೊಳ್ಳುವ ಆಲ್ಖೆಮಿ ( ರಸವಿದ್ಯೆ) ಒಂದು ಪ್ರತಿಮೆಯಾಗಿ ಹೊಮ್ಮಿದೆ.  ಆಲ್ಖೆಮಿಯಲ್ಲಿ ಸಾಧಾರಣ ಲೋಹವೊಂದು ಚಿನ್ನವಾಗಿ ಮಾರ್ಪಡಲು ಅದು ಶುಚಿರ್ಭೂತವಾಗ ಬೇಕು. ಹೀಗೆ ಶುಚಿರ್ಭೂತವಾಗಲು ಅದು ಅನೇಕ ವಿಧಿಗಳಿಗೆ ಒಳಪಡ ಬೇಕಾಗುತ್ತದೆ. ಆಗ ಮಾತ್ರ ಅದು ಚಿನ್ನವಾಗಿ ಮಾರ್ಪಡಲು ಸಾಧ್ಯ. ಕಾದಂಬರಿಯ ನಾಯಕ ಸ್ಯಾಂಟಿಯಾಗೋ ಕೂಡ ಒಬ್ಬ ಸಾಧಾರಣ ಮನುಷ್ಯ. ಅವನು ತನ್ನನ್ನೇ ತಾನು ಶೋಧಿಸಿಕೊಳ್ಳ ಬೇಕಾದರೆ, ಆತ್ಮದ ಮಾತನ್ನು ಆಲಿಸುವ, ಪ್ರಕೃತಿ ಭಾಷೆಯನ್ನು ಅರಿಯುವ ಸಿದ್ಧಿಯನ್ನು ಪಡೆಯ ಬೇಕಾದರೆ,  ನಿಧಿಗಿಂತಲೂ ಹೆಚ್ಚಾದ ಫಾತಿಮಾಳ ಪ್ರೇಮದ ಮಹತ್ವವನ್ನು ಅರಿಯ ಬೇಕಾದರೆ ಅವನೂ ಕೂಡ

ಪುಸ್ತಕ ವಿಮರ್ಶೆ Read Post »

You cannot copy content of this page

Scroll to Top