ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ದಿ ಲಾಸ್ಟ್ ಲೆಕ್ಚರ್ ಮೂಲ: Ryandy pash ಕನ್ನಡಕ್ಕೆ: ಎಸ್. ಉಮೇಶ್ “ಅದ್ಭುತಕನಸುಗಳನ್ನು ಕಾಣಲು ಪ್ರಯತ್ನಿಸಿ, ನಿಮ್ಮ ಮಕ್ಕಳಿಗೂ ಸಹ ಅಂತಹ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿ. ಮಕ್ಕಳು ಕತ್ತಲಿನ ಪ್ರಪಂಚದಿಂದ ಹೊರಬಂದು ಬೆಳಕಿನ ಸುಂದರ ಪ್ರಪಂಚವನ್ನು ನೋಡುವಂತೆ ಮಾಡಿ – Ryandy pash ಇದೊಂದು ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂ. ಮ. ಸಾ. ಸಂ. ನೀಡುವ ಪ್ರತಿಷ್ಠಿತ *ಅರಳು ಸಾಹಿತ್ಯ ಪ್ರಶಸ್ತಿ” ಪಡೆದ ಜನಮೆಚ್ಚುಗೆಯ ನಂಬರ್ ಒನ್ ಕೃತಿಯಾಗಿದೆ. ಈ ಕೃತಿಗೆ ವಿಶ್ವೇಶ್ವರ ಭಟ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಮೂಲ ಲೇಖಕರು Ryandy pash(ಪ್ರೊಫೆಸರ್, ಕಾರ್ನಿಗಿ ವಿಶ್ವವಿದ್ಯಾಲಯ) ಮತ್ತು ಜೆಫ್ರಿ ಜೆಲ್ಲೊ. ಮೈಸೂರಿನ ಧಾತ್ರಿ ಪ್ರಕಾಶನದಿಂದ ಹೊರಬಂದ ಕೃತಿಯಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಲ್ಲಿನ ಉಪನ್ಯಾಸಕರಿಗೆ “ಅಂತಿಮ ಉಪನ್ಯಾಸ” ನೀಡುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಾವು – ಬದುಕಿನ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಉಪನ್ಯಾಸದ ವೇದಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಪ್ರೊ. Ryandy pash ಗೆ ಇಂತಹ ಅವಕಾಶ ಒದಗಿದಾಗ ಅದು ನಿಜಕ್ಕೂ ಅಂತಿಮ ಉಪನ್ಯಾಸವಾಗಲಿದೆ ಎಂದು ಆತ ಊಹಿಸಿಯೇ ಇರಲಿಲ್ಲ. ಕಾರಣ ವೈದ್ಯರು ಆತನಿಗೆ ಕ್ಯಾನ್ಸರ್ ಇರುವಿಕೆಯನ್ನು ದೃಢಪಡಿಸಿದ್ದರು. Ryany ಯ ಉಪನ್ಯಾಸ ಸಾವಿನ ಬಗ್ಗೆ ಇರಬಹುದೆಂದು ಭಾವಿಸಿದವರಿಗೆ ದೊರಕಿದ್ದು “ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ಹೇಗೆ ” ಎಂದು. ಈ ಪ್ರಶ್ನೆಗಳಿಗೆ “ದಿ ಲಾಸ್ಟ್ ಲೆಕ್ಚರ್” ಸಮರ್ಪಕ ಉತ್ತರ ನೀಡಿತು. ಅದು ಇಂದು ಜಗತ್ತಿನ ಲಕ್ಷಾಂತರ ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಜಗತ್ತಿನ ಪ್ರತಿಯೊಬ್ಬ ಪೋಷಕರಿಗೂ ಇದೊಂದು ಮಾರ್ಗದರ್ಶಿ ಹೊತ್ತಿಗೆ. ಆದರ್ಶ ಶಿಕ್ಷಕರಿಗೊಂದು ಪಠ್ಯ. ವಿದ್ಯಾರ್ಥಿಗಳಿಗೊಂದು ಅಮೂಲ್ಯ ಕೈಪಿಡಿ ಹಾಗೂ ಸಂಶೋಧಕರಿಗೊಂದು ದಾರಿದೀಪ. ಡಾ. Ryandy pash ಅಮೇರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದಲ್ಲಿ 1988 ರಿಂದ 1997 ರವರೆಗೆ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ವಿಜ್ಞಾನಿಯಾದ ಇವರು ವರ್ಜಿನಿಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದ್ದು, ಅನಂತರ ಅಡೋಬ್, ಗೂಗಲ್, ಇಲೆಕ್ಟ್ರಾನಿಕ್ಸ್ ಆರ್ಟ್ ಮತ್ತು ವಾಲ್ ಡಿಸ್ನಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್ತಿನ ಪ್ರಸಿದ್ಧ ಆಲಿಸ್ ಸಾಫ್ಟವೇರ್ ನ ಜನಕ. ಮಡದಿ ಜೈ ಮತ್ತು ಮೂವರು ಮಕ್ಕಳಾದ ಡೈಲನ್, ಲೋಗನ್ ಮತ್ತು ಚೋಲೆ ಯರೊಂದಿಗೆ  ಸಾರ್ಥಕ ಜೀವನ ನಡೆಸಿ ತಮ್ಮ 47 ನೇ ವಯಸ್ಸಿನಲ್ಲೇ (25-07-2008) ಪ್ಯಾಂಕ್ರಿಯಾಸಿಸ್ ಕ್ಯಾನ್ಸರ್ ನಿಂದ ನಿಧನರಾದರು. Ryandy ಅವರ ಅಂತಿಮ ಉಪನ್ಯಾಸದಲ್ಲಿ ಭಾಗವಹಿಸಿ ಈ ಪುಸ್ತಕವನ್ನು ಬರೆದು ಕೋಟ್ಯಂತರ ಜನರ ಕನಸುಗಳಿಗೆ ನೀರೆರೆದು ಹಸಿರು ಮೂಡಿಸಿದ ಕೀರ್ತಿ ಅಮೇರಿಕಾದ ಪ್ರತಿಷ್ಠಿತ ಪತ್ರಿಕೆಯ ವರದಿಗಾರ ಜೆಫ್ರಿ ಅವರಿಗೆ ಸಲ್ಲುತ್ತದೆ. ಇದನ್ನು ಕನ್ನಡಕ್ಕೆ ಎಸ್. ಉಮೇಶ್ ರವರು ಅನುವಾದಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾಯುವುದು ಗ್ಯಾರಂಟಿ ಎನಿಸಿದ ಮೇಲೆ ತಾನು ಇಲ್ಲದ ಜಗತ್ತಿನಲ್ಲಿ ಬದುಕುವುದು ಹೇಗೆಂದು ಹೆಂಡತಿಗೆ ಹೇಳಿಕೊಟ್ಟು ಯಾರಿಗೆ ಯಾರೂ ಅನಿವಾರ್ಯವಲ್ಲವೆಂದು ಮನವರಿಕೆ ಮಾಡಿಕೊಡುವ ಪರಿ ಒಂದು ಕ್ಷಣ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ. Ryandy ಬದುಕಿನ ಕಷ್ಟಸುಖಗಳ ವಿಶ್ಲೇಷಣೆಯನ್ನು ಕುರಿತು”ಇಸ್ಪೀಟ್ ಆಟದಲ್ಲಿ ಯಾವ ಕಾರ್ಡ್ ನಮ್ಮ ಕೈ ಸೇರುತ್ತದೆ ಅನ್ನುವುದಕ್ಕಿಂತ ಬಂದ ಕಾರ್ಡ್ ಗಳಲ್ಲಿ ನಾವು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯ” ಎನ್ನುತ್ತಾರೆ. ಅವನ ಇಡೀ ಬದುಕಿನಲ್ಲಿ ಪತ್ನಿ ಜೈ ಳ ಧೈರ್ಯ, ಶ್ರಮ, ಸಹಕಾರ, ಸಹಾಯ ಎಲ್ಲವನ್ನೂ ತನ್ನ ಕಣ್ಮುಂದೆ ತಂದುಕೊಂಡು ಅವಳ ದಿಟ್ಟತನವನ್ನು ಕೊಂಡಾಡುತ್ತಾ ಜೈ ಳನ್ನು ‘ಸದೃಢ ಗೋಡೆ’ (ದಿ ವಾಲ್) ಎಂಬ ರೂಪಕಕ್ಕೆ ಹೋಲಿಸಿದ್ದಾನೆ. ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮ್ಮೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಅಪರಿಮಿತ ಶಕ್ತಿ. ಸಮಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಆಗ ಅಗಾಧವಾದುದನ್ನು ಸಾಧಿಸಬಹುದು ಎಂದು ಕರೆ ನೀಡಿದ್ದರೆ. ಇದರಿಂದ ಅವರು ಸಮಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೆಂಬುದು ಅರಿವಾಗುತ್ತದೆ. ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಅಗತ್ಯವಾಗಿ ಪೂರ್ವಸಿದ್ಧತೆ ಮಾಡಿಕೊಂಡಾಗ ಮಾತ್ರ ಆಶಾವಾದಿಯಾಗಿ ಬಾಳಲು ಸಾಧ್ಯವೆಂದು ಹೇಳಿ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿದ್ದಾರೆ. ಇಂತಹ ಒಂದು ಪುಸ್ತಕ ಹಲವರ ಜೀವನದ ಪಥವನ್ನೇ ಬದಲಿಸುವಂತಹ ಸ್ಫೂರ್ತಿಯಾಗಬಲ್ಲದು. ಆದ್ದರಿಂದ ಪುಸ್ತಕ ಜೀವನದ ಅಮೂಲ್ಯ ಸಂಗಾತಿ ಎಂದರೆ ತಪ್ಪಾಗಲಾರದು. ತಡೆಗೋಡೆಗಳು ನಮ್ಮನ್ನು ಹೊರದಬ್ಬಲು ಅಲ್ಲ, ದಾಟಿ ಮುನ್ನುಗ್ಗಲು, ನಮಗೆ ಅವಕಾಶ ನೀಡುವುದಕ್ಕಾಗಿ ಇವೆ –  ryandy pash ***************************** ತೇಜಾವತಿ ಹೆಚ್. ಡಿ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮೌನ ಮಂದಾರ ಕವಿ: ವಾಣಿ ಮಹೇಶ್ ಕವಯಿತ್ರಿ ವಾಣಿ ಮಹೇಶ್ ರವರ “ಮೌನಮಂದಾರ” ಪುಸ್ತಕ *ಎಪ್ಪತ್ತು ಕವನಗಳ ಮುಪ್ಪುಬರುವವರೆಗೂ ಓದಬೇಕು ಬೆಪ್ಪ* ಎನ್ನುವ *ಮೌನ ಮಂದಾರ*         ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ, ಅತ್ತುಅತ್ತು ಉತ್ತರಗಳು ಕಣ್ಣೀರ ಹಾಕದಿದ್ದರೆ ಮತ್ತೇರಿದ ನುಡಿಗಳು ಮೌನಿಯಾಗಿಸಿ ಸುತ್ತುವರಿಯುತ್ತವೆ. ನುಡಿಯದೇ ಭಾವನಾಕ್ಷರಗಳ ಪೋಣಿಸಿ ಗೀಚುತ್ತಿದ್ದರೆ, ಆ “ಮೌನ ಮಂದಾರ ಪುಷ್ಪ ವಾಗಿ ತನ್ನ ಸಕಲ ಶ್ರೇಷ್ಠ ಗುಣಗಳಿಂದ ಸೌರಭವನ್ನು ಸೂಸುತ್ತ ತನ್ನೆಡೆಗೆ ಸೆಳೆಯುತ್ತದೆ. ಅದರ ಸೌಂದರ್ಯ ಭಾವವು ಹಂದರವ ನಿರ್ಮಿಸಿ, ಒಂದೊಂದು ದಳಗಳು ಕವಿತೆಯಾಗಿ ಬಾಂದಳವನ್ನು ನೋಡುತ್ತಿದೆ. ಇಣುಕಿ ನಾನೋಡಿ ಒಮ್ಮೆ ಸ್ಪರ್ಶಿಸಿದೆ’. ಅದು “ಮೌನ ಮಂದಾರ”  ಪುಸ್ತಕವಾಗಿ ನನ್ನ ಕೈಸೇರಿತು, ಅದನ್ನು ಓದಿದೆ ಎನ್ನಲು ಹರ್ಷಿಸುವೆ.  ‘ಪುರುಷ ಸಮಾಜಕ್ಕೆ ಸಬಲೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಗೌರವಿಸಬೇಕೆಂಬ ಭಾವ ತುಂಬಿರುವ ಪುಸ್ತಕ ಮೌನ ಮಂದಾರ’ ಮೊದಲ ಪುಟದಲ್ಲಿ ವೀರಯೋಧನ ಕಥೆ ಹೇಳುವ ‘ಸಮರ ಸಾಮ್ರಾಟ’ ಎಂಬ ಕವಿತೆಯಲ್ಲಿ ಹೇಳುತ್ತಾರೆ; “ಒಂಟಿಯಾಗಿ ಬೆನ್ನಿಗಂಟಿದ ಸಿಡಿಮದ್ದು ಲೆಕ್ಕಿಸದೆ ಮನೋಬಲಕ್ಕೆ ಕಿವಿಗೊಟ್ಟು ವೀರಾಧಿವೀರನಂತೆ ಸದೆಬಡಿದ ಸಮರದಿ ದೇಹವೆಲ್ಲ ತೂತಾಗಿ ಕಾಲಿಲ್ಲದ ಕುಂಟನಾದರೂ ಭರತಮಾತೆಯ ಸೆರಗಿಗಂಟಿದ ನೆತ್ತರ ಒರೆಸಿ ಬಲಿಕೊಡಲು ತಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ” ಎಂಬ ಸಾಲು ವೀರಯೋಧನ ವೀರತ್ವ ದೇಶಪ್ರೇಮವನ್ನು ಎತ್ತಿಹಿಡಿಯುವ ಸಾಲುಗಳಾಗಿದ್ದು ಹೃದಯ ಸ್ಪರ್ಶಿಸುವಂತೆ ಲೇಖಕಚಿತ್ರಿಸಿದ್ದಾರೆ.  ಇನ್ನು ‘ನೆತ್ತರ ದಾಹ’ ಎಂಬ ಕವಿತೆಯಲ್ಲಿ ಅಮಾಯಕ ಬಲಿ ತೆಗೆದುಕೊಳ್ಳುತ್ತಿರುವ ಭಯೋತ್ಪಾದಕರಿಗೆ ಕಾಮಾಂಧರಿಗೆ ಪ್ರಶ್ನಿಸುತ್ತಾ ಗಾಂಧೀಜಿ ಮತ್ತು ಬುದ್ಧರ ಅಹಿಂಸಾ ಮಂತ್ರಗಳನ್ನು ನೆನೆಸುತ್ತಾ ಧರ್ಮಕ್ಕಾಗಿ ಹೋರಾಡದೆ ಮನುಷ್ಯತ್ವ ಧರ್ಮ ಗುಣಗಳಿಗೆ, ನ್ಯಾಯಕ್ಕೆ ಹೋರಾಡಿ ಎನ್ನುತ್ತಾ ಶಾಂತಿ ಮಂತ್ರವ ಪಾಲಿಸಿ ಎಂಬ ಸಂದೇಶವನ್ನು ನೀಡಿದ್ದಾರೆ    ಇನ್ನು ‘ದರ್ಪಣ’ ಎಂಬ ಕವಿತೆಯಲ್ಲಿ ಕನ್ನಡಿಯ ವಾಸ್ತವವನ್ನು ನೈಜತೆಯ ಗುಣಗಳನ್ನು ತೋರುತ್ತದೆ. ಅದೇ ರೀತಿ ನಾನಾ ಮುಖವಾಡಗಳನ್ನು ಧರಿಸಿ ವಿಷವನ್ನು ಅಂತರಂಗದಲ್ಲಿರಿಸಿರುವ ಮನೋವಿಕಾರಗಳಿಗೂ ಸಹ ದರ್ಪಣ ಬಿಡಬೇಕು ಎಂಬುದನ್ನು ಸುಪ್ರಿಯವಾಗಿ ವರ್ಣಿಸಿದ್ದಾರೆ.  ಸಾಹಿತ್ಯ ಕೃಷಿಯಲ್ಲಿರುವ ಲೇಖಕರ ‘ಸಬಲೆ’  ಎಂಬ ಕವನವನ್ನು ಗಮನಿಸಿದರೆ “ಒಂಟಿ ಜೀವ ಕಾಲಿ ಕೈಯಲ್ಲಿ ಹೊರಟೆ ಅರಿಯದ ದೂರದೂರಿನತ್ತ ದಿನವಿಡೀ ದುಡಿತ ಸಂಜೆಯಾಯಿತೆಂದರೆ ಜ್ಞಾನಾರ್ಜನೆಯ ತುಡಿತ ಅಂತೂ ಗಿಟ್ಟಿಸಿ.. ಬಿಟ್ಟೆ ಪದವಿಯ” ಈ ಕವಿತೆಯಲ್ಲಿ ಹೆಣ್ಣಿನ ಮನಸ್ಸು ಮೃದುವಾಗಿದ್ದರೂ ದಿಟ್ಟ ಹೆಜ್ಜೆ ಇಟ್ಟು ನಿಂತರೆ ಸಾಧನೆಯಲ್ಲಿ ಗುರಿಮುಟ್ಟುವಳು, ಒಂಟಿ ತಾನಾದರೂ ಧೃತಿಗೆಡದೆ ಜೀವನದಲ್ಲಿ ತಟ್ಟುತ್ತಾ ಇರಬಹುದಾದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಜ್ಞಾನಾರ್ಜನೆ ಪಡೆದು ತನ್ನ ಸಾಧನೆಯಲ್ಲಿನ ನೂರಾರು ಕಷ್ಟಗಳನ್ನು ಗೆದ್ದು ತನ್ನ ಬದುಕನ್ನು ಕಟ್ಟಿಕೊಂಡು ಬದುಕಬಲ್ಲಳು ಎಂಬ ಕಟು ಸತ್ಯವನ್ನು ಹೊರಗೆಳೆದಿದ್ದಾರೆ. ಇನ್ನು ‘ಗುಬ್ಬಿ’ ಎಂಬ ಶಿಶುಗೀತೆ ಯಲ್ಲಿ ಮಗುವಿನ ಹಿಂದುಮುಂದೊಬ್ಬರು ನಿಂತು ಜೀವನ ಪಾಠ ಕಲಿಸಿಕೊಡುವ ಅಪ್ಪ ಅಮ್ಮನ ಪಾತ್ರವನ್ನು ಪುಳಕ ಬರುವ ಕಾವ್ಯಾತ್ಮಕ ನೇರನುಡಿ ಗಳಿಂದ ಚಿತ್ರಿಸಿದ್ದಾರೆ ಶೋಚನೀಯ ಕಥೆ ಹೇಳುವ ‘ಕಾಮದಬ್ಬರ’, ‘ಶಂಖೆಯ ಅಟ್ಟಹಾಸ’, ‘ಜನನ ಮರಣ’ ಮುಂತಾದವು ಕಣ್ಣೀರು ತರಿಸುತ್ತವೆ. ‘ನಂಜಿನ ಮನೆ’ ಯಲ್ಲಿ ಬರುವ “ಮುಂಜಾವಿನ ಮಂಜಲ್ಲಿ ಯಿಂದ ಸುಮವೊಂದು ಬಾಡಿದೆ ಪುರುಷನೋರ್ವನ ಗರ್ವದ ಕಾಮ ಕೇಳಿಗೆ ಸಿಲುಕಿ ನಲುಗಿದೆ” ಇದು ಅರಳಿದ ಸುಮದಂತಿರುವ ಹೆಣ್ಗರುಳ ಬಳ್ಳಿಗೆ ಕೊಳ್ಳಿಹಿಡಿದು ಕಮರಿದಂತಾಗುವ ಸಾಲುಗಳು ಓದುಗರ ಮನಕಲಕುತ್ತದೆ.        ಇನ್ನು ‘ದೇವದಾಸಿ’ ಎಂಬ ಕವನದಲ್ಲಿ “ಊರಿಗೊಬ್ಬಳೇ ದೇವದಾಸಿ ಉರಿ ಮೊಗದಿ ಉಗಿದಟ್ಟಿದ ಪತಿವ್ರತೆಯರು ಸಹಿಸಿ ಸಾಕಾಗಿ ಬೇಕಾಗಿ ಬಂದ ಕಸುಬಲ್ಲವಿದೆಂದರೂ ಕೇಳುವರಾರು” ಕವಿತೆಯಲ್ಲಿ ಹಿಂದಿನ ಅನಿಷ್ಠ ಪದ್ದತಿಯಿಂದ ದೇವದಾಸಿ ಪಟ್ಟ ಕಟ್ಟಿ ಕಾಮಾಗ್ನಿ ಕೂಪಕ್ಕೆ ತಳ್ಳಿ ಹೆಣ್ಣಿನ ಜೀವನ ನರಕವಾಗಿಸಿ ಇದು ನನ್ನ ಕಸುಬಲ್ಲ ಎಂದರೂ ಕೇಳದೆ ಶೋಷಣೆಗೊಳಗಾಗುವ ಒಂದು ಹೆಣ್ಣಿನ ಕಥೆಯನ್ನು ಲೇಖಕರು ಕಣ್ಣೀರು ತರಿಸುವಂತೆ ಚಿತ್ರಿಸಿದ್ದಾರೆ.       ಸಾಹಿತ್ಯ ಕೃಷಿಗೆ ಕವಿಯ ಮನವೇ ಹೊಲವಾದರೆ ಭಾವಗಳ ನೇಗಿಲಿನಿಂದ ಹದ ಮಾಡಿ ಪದಗಳ ಸುಬೀಜ ಬಿತ್ತಿ ಮಾಧುರ್ಯತೆಯ ನೀರುಗೊಬ್ಬರ ನೀಡಿದಾಗ ಉತ್ತಮ ಫಲ ದೊರೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಚಿತವಾದ ಒಂದೊಂದು ಕವನ ಓದುತ್ತ ಸಾಗಿದರೆ ಕರುಣೆ ಅನುಭವ, ಮಹಿಳಾ ಶೋಷಣೆ, ಮೌನ ಸಿಡಿದೇಳುವಕೆ ನೋವು, ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಮಹಿಳೆಗೆ ಪ್ರಾಧಾನ್ಯತೆ ಮತ್ತು ಗೌರವ ಭಾವಗಳ ವಿಚಾರ ವೈಖರಿ ಕಾಣುತ್ತದೆ  ಕವಿತೆಗಳ ಎಲ್ಲಾ ಪದಗಳಲ್ಲಿ ಒಂದೊಂದು ಅನುಭವದ ಪ್ರಯೋಗಮಾಡಿ ವಿಭಿನ್ನ ಮನಸ್ಸಿನಿಂದ ಮುಕ್ತವಾಗಿ ಮಾಧುರ್ಯ ತುಂಬಿ “ಮೌನಮಂದಾರ”ವೆಂಬ ಪುಸ್ತಕವನ್ನು ಹೊರತಂದಿದ್ದಾರೆ ಎಂಬುದು ನನ್ನ ಅಭಿಪ್ರಾಯ ******* ಚಂದ್ರು ಪಿ ಹಾಸನ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ದಿನ

ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library”                            -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ ರುಚಿ ಗೊತ್ತಿರುತ್ತದೆ.ಓದು ಮನುಷ್ಯನ್ನು ಮನುಷ್ಯನಾಗಿ ನೋಡುವುದನ್ನು ಕಲಿಸುತ್ತದೆ ಎಂಬುದನ್ನು ಓದಿದ ನೆನಪು.ಆದರೆ ಓದುವ ಮನಸ್ಸು ಬರುವುದು ಯಾರಲ್ಲಿ? ಎಂದು ಪ್ರಶ್ನಿಸಿದರೇ ಬಹುತೇಕವಾಗಿ ನಿರ್ಮೊಹಿಗಳು..! ಅಂದರೆ ಅಲ್ಪಸ್ವಲ್ಪ ಆಸಕ್ತಿಯನ್ನು ಉಳಿಸಿಕೊಂಡ ಮಹನೀಯರು..! ಪರೀಕ್ಷೆಯ ಪುಸ್ತಕಗಳನ್ನು ಮುಗಿಸುವುದೇ ಯಕ್ಷ ಪ್ರಶ್ನೆಯಾದಾಗ..? ಪೂರಕವಾಗಿ ಓದಲು ಸಮಯವೆಲ್ಲಿ? ಎಲ್ಲವೂ ಅಂಕಗಳಿಗೆ ಸೀಮಿತವಾದಾಗ.ಪಠ್ಯವಲ್ಲದ ಪುಸ್ತಕಗಳನ್ನು ಅಷ್ಟು ಅರ್ಥಗರ್ಭಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.! “ಪುಸ್ತಕ ಜ್ಞಾನದ ಕಿಟಕಿ ಅರಿವಿನ ಗುರಿಗೆ ಪುಸ್ತಕವೇ ಗುರು”.. ಹಾಗದರೆ ಈ ಪುಸ್ತಕ ದಿನ ಹೇಗೆ ಜಾರಿಗೆ ಬಂತು? ಎಂದು ಅವಲೋಕಿಸಿದರೆ.ಮೊದಲಿಗೆ ವೆಲೆನ್ಸಿಯಾದ ಬರಹಗಾರ *ವಿಸೆಂಟ್ ಕ್ಲವಲ್ ಆಂಡ್ರೋ*ಅವರು ಸುಪ್ರಸಿದ್ಧ ಬರಹಗಾರರು.ಅವರ ಜನ್ಮ ದಿನ ಅಕ್ಟೋಬರ್ ೭ ರಂದು  ದಿನವಾಗಿ ಆಚರಿಸುತ್ತಾ ಬಂದ ಕಾಲ.. ಅವರು ಮರಣ ಹೊಂದಿದ ತಿಂಗಳು ಎಪ್ರಿಲ್ ೨೩.ವೆಲೆನ್ಸಿಯಾದ ಜನತೆ ವಿಸೆಂಟ್ನ ನೆನಪಿಗಾಗಿ ಎಪ್ರಿಲ್ ೨೩ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ೧೯೯೫ ರಲ್ಲಿ ಯುನೆಸ್ಕೋ ಈ ದಿನವನ್ನು ವಿಶ್ವಖ್ಯಾತ ವಿಲಿಯಂ ಷೇಕ್ಸ್‌ಪಿಯರ್ ಹಾಗೂ ಇಕಾಗಾಸಿಸ್ಕೋಡೆಲಾವೆಗಾ ಮರಣ ಹೊಂದಿದನ್ನು ಹಾಗೂ ಅನೇಕ ಬರಹಗಾರ ಜನ್ಮದಿನವನ್ನು ವಿಶ್ವ ಪುಸ್ತಕ ದಿನ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಘೋಷಿಸಿತು. ಇದರ ಉದ್ದೇಶ “ವಿಶ್ವಪುಸ್ತಕದಿನದಂದು ದಿಟ್ಟ ನಿರ್ಧಾರ” ವೆಂದರೆ ತಪ್ಪಾಗದು.. ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸದ ಜಾಗೃತಿ ಮೂಡಿಸುವುದು.ಅಭಿರುಚಿ ಹೆಚ್ಚಿಸುವುದು.ಜ್ಞಾನ ವ್ಯಕ್ತಿತ್ವವನ್ನು ಬೆಳಗಿಸಲು ಪುಸ್ತಕ ಸಹಕಾರಿಯೆಂದು ಮನದಟ್ಟು ಮಾಡುವುದು.ಅವಶ್ಯವಾಗಿತ್ತು. ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ  ರಾಷ್ಟಗಳು ಆಚರಿಸುತ್ತಿವೆ.ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಾದವರಿಗೆ ಪುಸ್ತಕ ಬಹುಮಾನವಾಗಿ ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ಮೆಚ್ಚಲೇಬೇಕು.. *ಕೃತಿ ಸ್ವಾಮ್ಯ ವೆಂದರೆ…* ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು ಪ್ರತಿಗಳನ್ನು ಮಾಡಿ ಮಾರಲು,ರೂಪಾಂತರಗೊಳಿಸಲು,ಮಾರ್ಪಡಿಸಲು, ಪ್ರದರ್ಶಿಸಲು,ಅಥವಾ ನಿರೂಪಿಸಲು ಕಾನುನು ನೀಡುವ ಅನನ್ಯ ಅಧಿಕಾರ.ಹಾಗೂ ಕಾನೂನು ಮನ್ನಿತ ಸಾಹಿತ್ಯ ಸ್ವಾಮ್ಯಾಧಿಕಾರ..ಇದರಿಂದ ಪುಸ್ತಕಗಳು ಮುದ್ರಿತಗೊಳ್ಳುವಲ್ಲಿ,ಮಾರುವಲ್ಲಿ,ಓದುಗರ ಮನ ಮುಟ್ಟುವಲ್ಲಿ ಕಾರ್ಯ ಸುಲಭ.ಪುಸ್ತಕಗಳಿಂದ ಜೀವನ ಬೆಳಕು..ಓದಿದವರೆಂದೂ ಹಾಳಾದ ಉದಾಹರಣೆಯಿಲ್ಲ. ಇಂದು ನಾವೆಲ್ಲ ಆತ್ಮಸಾಕ್ಷಿಯಾಗಿ ಎಷ್ಟು ಓದುತ್ತೇವೆ ಎಂಬುದನ್ನು ಅವಲೋಕಿಸಬೇಕಿದೆ.ನೂರಾರು ಜಂಜಾಟಗಳ ನಡುವೆ ಸಮಾಧಾನಗೊಂಡು ಪುಸ್ತಕ ಅಪ್ಪಿ ಮುದ್ದಾಡುವ ಸಮಯದ ಅಭಾವ. ಅಂಬೇಡ್ಕರ್ ರಂತಹ ಮಹಾನ್ ನಾಯಕ್ ತನ್ನ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದು.ಯುವ ಪಿಳಿಗೆಗೆ ಮಾದರಿ. ದೇಶದ ಮೊದಲ ಶಿಕ್ಷಕಿ ಶ್ರೀ ಮತಿ ಸಾವಿತ್ರಿಬಾಯಿಪುಲೆ..ಶಿಕ್ಷಣಕ್ಕೆ ಆದ್ಯತೆ ನೀಡಿದವರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಯುವಜನಾಂಗಕ್ಕೆ ತೋರಿದ ಮಾರ್ಗ ಮರೆಯಲಾದಿತೇ? ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್,ಕಿತ್ತೂರು ಚನ್ನಮ್ಮ,ಹೀಗೆ ಹತ್ತು ಹಲವಾರು ಸಂಗತಿಗಳು ರಿತ್ರೆಗಳಅರಿತುಬೆಳೆಯುವುದುಯ್ಯಾವಾಗ?? “ಜೀವನವನ್ನು ಸಾರ್ಥಕವಾಗಿ ಬದುಕಲು ಪುಸ್ತಕದ ಆಸರೆ” ಬಯಸಿದಾಗೆಲ್ಲ ನೆಮ್ಮದಿ ಒಳಸುಳಿಯಿವುದಂತು ದಿಟ.! “ಮೌಲ್ಯ ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು.” ಒಮ್ಮೆ ಅವಲೋಕಿಸಿ …ಇಂದಿನ ಸರಕಾರಿ ಶಾಲೆಗಳಲ್ಲಿ *ಓದುವ ಮೂಲೆ* ತಗೆ ಪುಸ್ತಕ ಹೊರಗೆ* ಶೃದ್ಧಾ ವಾಚನಾಲಯ* ಕಾರ್ಯಕ್ರಮಗಳು.ಸರಕಾರ ಶಾಲೆಗಳಿಗೆ ಅನುದಾನ ನೀಡಿ ಗ್ರಂಥಾಲಯಕ್ಕೆ ಅವಶ್ಯಕ ಮಕ್ಕಳ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹಾಗೂ ಸ್ಥಳಿಯ ಬರಹಗಾರರ ಪುಸ್ತಕ ಖರೀದಿಸುವುದರೊಂದಿಗೆ ಬರಹಗಾರರ ಮನೋಬಲವನ್ನು ಹೆಚ್ಚಿಸುವತ್ತ ದಿಟ್ಟ ನೆಡ ಹೊಂದಿ.ಎನ್ ಸಿ.ಎಪ್.೨೦೦೫ ಆಶಯದಂತೆ ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರ ದೃಷ್ಟಿಯ ಚಿಂತನೆ ಹಾಗೂ ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.ಕಾರಣವಿಷ್ಟೇ.. *ಪುಸ್ತಕದಲ್ಲಿರುವಜ್ಞಾನಮಸ್ತಕಕ್ಕೆವರ್ಗಾವಣೆಯಾಗಬೇಕು ಅಲ್ಲಿ ಶಿಕ್ಷಕರ ಪಾತ್ರ,ಹಾಗೂ ಮನೆಯಲ್ಲಿ ಪಾಲಕ/ಪೋಷಕರ ಪಾತ್ರ ಅತೀ ಮಹತ್ವದ್ದು. ಮಕ್ಕಳಿಗೆ ಬೇಗ ಆಕರ್ಷಿಸುವ ಮಾಧ್ಯಮವೆಂದರೆ ಒಂದು ಟಿವಿ ಇನ್ನೊಂದು ಮೊಬೈಲ್.. ಬಹತೇಕ ಪಾಲಕರ ಅಸ್ತ್ರ ಮಕ್ಕಳನ್ನು ಸುಮ್ಮನೀರಿಸಲು ಬಳಸುವ ಏಕೈಕ ಸಾಧನ ಮೊಬೈಲ್…ಅದೇ ಮಗುವಿಗೆ ಬಣ್ಣಬಣ್ಣದ ಚಿತ್ರಕಥೆಗಳಿರುವ ಪುಸ್ತಕ ನೀಡಿದರೇ ಮಗು ಸಂತಸ ಪಡದು….ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿ ಹೇಳುವ ವೇದಿಕೆಗಳು ಮನೆಯಿಂದಲೇ ಪ್ರಾರಂಭವಾಗಬೇಕಿದೆ.. *ಒಂದು ಆಶ್ಚರ್ಯವೆಂದರೆ ಬಹುತೇಕರು ಪುಸ್ತಕಗಳನ್ನು ಖರೀದಿಸುವುದಿಲ್ಲ. *ಖರೀದಿಸಿ ತಂದ ಪುಸ್ತಕಗಳನ್ನು ಓದುವುದಿಲ್ಲ. *ಮನೆಯಲ್ಲಿ ಬಹತೇಕರು ಟಿವಿ ಧಾರಾವಾಹಿಗಳನ್ನು ಚಾಚು ತಪ್ಪದೇ ನೋಡುವವರು. *ಭೌತಿಕವಾಗಿ ಪುಸ್ತಕವನ್ನು ಜನರ ಆಕಷರ್ಣೆಗೆ ತರುವುದು ಕಷ್ಟ ‌. *ಪುಕ್ಕಟೇ ಓದಲು ಹಾತೋರೆವರು.ಖರೀದಿಸಲು ಹಿಂದೇಟು..! ನಾವೆಲ್ಲ ಗ್ರಹಿಸುವುದು ಓದುವವರು ಇದ್ದಾರೆ. ಪುಸ್ತಕಗಳನ್ನು ಬರೆಯುವವರು,ಮುದ್ರಿಸುವವರು, ಆದರೆ ಕೋಟ್ಯಾಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕಗಳನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿದ್ದರೂ,ಸಾವಿರ ಪ್ರತಿಗಳು ಮಾರಾಟವಾಗುವುದು ಕಷ್ಟ. ಎಲ್ಲರೂಎಲ್ಲರ ಪುಸ್ತಕ ಕೊಳ್ಳುವುದಿಲ್ಲ.ಕೊಳ್ಳಬೇಕಾಗಿಲ್ಲ,ಓದಬೇಕಿಲ್ಲ ಆದರೆ ಆಸಕ್ತಿ ವಿಷಯಕ್ಕನುಕೂಲವಾಗಿ ಸಾವಿರ ಪುಸ್ತಕಗಳು ಮಾರಾಟವಾಗಬೇಕಿತ್ತು.ಆಗುತ್ತಿಲ್ಲ.ಕೆಲವು ಕಡೆಗಳಲಂತೂ ತಮ್ಮ ಸೈದ್ದಾಂತಿಕ ಬದ್ದತೆ ಮತ್ತು ನೈತಿಕ ಕರ್ತವ್ಯವೆಂಬಂತೆ ಪುಸ್ತಕ ಖರೀದಿಯಾಗುತ್ತಿದೆ.ಕನ್ನಡ ಓದುಗರೊಗಿಂತ ಆಂಗ್ಲಭಾಷೆಯ ಓದುಗರು ಹೆಚ್ಚಾಗುತ್ತಿರುವರು.ಓದುವುದಕ್ಕೆ ಬಂಧನವಾಗಲಿ,ನಿಬಂಧವಾಗಲಿ ಇಲ್ಲ. ” ಪುಸ್ತಕಗಳು ಜಗತ್ತನ್ನಾಳುತ್ತವೆ” ಎಂಬ ಸತ್ಯ ಅರಿಯಬೇಕಿದೇ… ಕನ್ನಡ ಸಾರಸ್ವತ ಲೋಕದಲ್ಲಿ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಮೇರು ಕಣಜಗಳು.ನಮ್ಮಮುಂದಿವೆ.ಹೊಸಹೊಸ ಪ್ರತಿಭೆಗಳಿಗೆ, ಅವರ ಸಾಹಿತ್ಯಕ್ಕೆ ಬರವಣಿಗೆಗೆ ಪುಸ್ತಕ ಕೊಂಡುಓದುವ ಹಾಗೂ ವಿಮರ್ಶಿಸುವ ಮನೋಭಾವದ ಕ್ರಾಂತಿಯು ಪ್ರತಿ ಮನೆಯಲ್ಲಿ ನಡೆಯವುದರಿಂದ ಮಕ್ಕಳ ಸಾಹಿತ್ಯ ದ ಅಭಿರುಚಿ ಹೆಚ್ಚಿಸಿದಂತಾಗುತ್ತದೆ.ಕೇವಲ ಇಂದು *ವಿಶ್ವ ಪುಸ್ತಕ ದಿನವೆಂದು ಹೆಸರಿಗೆ ಓದಿಬಿಟ್ಟರೆ ಅದು ಸಾರ್ಥಕವಾಗಲಾರದು.ಬಿಡುವಿನ ವೇಳೆಯ ಸದುಪಯೋಗ ಪಡೆಯುವ ದಿಕ್ಕಿನಲ್ಲಿ ಯುವ ಪಿಳಿಗೆಯನ್ನು ಬೆಳೆಸಬೇಕಾಗಿರುವುದು ಹಿರಿಯರ ಆದ್ಯ ಕರ್ತವ್ಯ ವಾಗಿದೆ. ಮೊಬೈಲ್ ಬಳಕೆ ನಿಯಮಿತವಾಗಿದ್ದಷ್ಟು ಉತ್ತಮ.. “ಜನರು ಈಗಲೂ ಆಲೋಚಿಸುತ್ತಿದ್ದಾರೆ ಎನ್ನುವುದಕ್ಕೆ ಪುಸ್ತಕದ ಅಂಗಡಿಗಳೇ ಸಾಕ್ಷಿ”                                 —-ಚೆರ್ರಿ ಸೀನ್ ಫೆಲ್ಡ್. ಪುಸ್ತಕದ ಅಂಗಡಿಗಳಿಗೆ ಮಕ್ಕಳೊಂದಿಗೆ ಬೇಟಿನೀಡಿ.ವಿವಿಧ ಪುಸ್ತಕಗಳನ್ನು ಗಮನಿಸುವ,ಸ್ಪರ್ಶಿಸುವ ಅವಕಾಶನೀಡಿ..ಮಕ್ಕಳು ಮೌಲ್ಯಾಧಾರಿತವಾಗಿ ಬೆಳೆಯಲು ವಿಸ್ಮಯ ಜಗತ್ತನ್ನು ತರೆದಿಟ್ಟಂತಾಗುತ್ತದೆ……..ನಿಮ್ಮ ಆಸುಪಾಸಿನ ಸಾಹಿತಿಗಳ ಸಾಹಿತ್ಯ ಓದಿ.ಹುರುದುಂಬಿಸಿ ಪುಸ್ತಕ ದಿನವನ್ನು ಅರ್ಥಗರ್ಭಿತವಾಗಿ ಹೊರಹೊಮ್ಮಲಿ… “ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ         ವಸ್ತುವೆಂದರೆ.ಅದು. -ಪುಸ್ತಕ”.. ******* .

ಪುಸ್ತಕ ದಿನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೇಗರವಳ್ಳಿ ರಮೇಶ್ ಆಲ್ಖೆಮಿಸ್ಟ್ ಕಾದಂಬರಿ ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ) ಕನ್ನಡಕ್ಕೆ: ಕಮಲ ಹೆಮ್ಮಿಗೆ ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ                                                                                                               ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ ಆವೃತ್ತಿಯಿಂದ  (ಅನುವಾದಕರು ರಮಾ ಮೆನೋನ್) ಕನ್ನಡಕ್ಕೆ ತಂದಿದ್ದಾರೆ. ಅನುವಾದಕಿ ಕಮಲಾ ಹೆಮ್ಮಿಗೆಯವರು ಈ ಕಾದಂಬರಿಯ ಇಂಗ್ಲಿಶ್ ಅನುವಾದವನ್ನು ಓದಿದಾಗ ಸಪ್ಪೆಯೆನಿಸಿತಂತೆ. ಅವರ ಕಿರಿಯ ಸ್ನೇಹಿತೆಯೊಬ್ಬರ ಸಲಹೆಯ ಮೇರೆಗೆ ಶ್ರೀಮತಿ “ರಮಾ ಮೇನೋನ್” ರ ಮಲಯಾಳಂ ಅನುವಾದವನ್ನುಓದಿ, ಪ್ರಭಾವಿತರಾಗಿ ಅದರಿಂದ ಈ ಕಾದಂಬರಿಯ ಕನ್ನಡಾನುವಾದವನ್ನು ಮಾಡಿದಾರೆ.  ಇದಕ್ಕೂ ಮೊದಲು ಈ ಕಾದಂಬರಿಯ ಕನ್ನಡಾನುವಾದ ಬಂದಿತ್ತೆಂದು ತಿಳಿಯಿತು. ಆದರೆ ಅದರ ಪ್ರತಿಗಳಾಗಲೀ, ಅನುವಾದಕರ ಹೆಸರಾಗಲೀ ಲಭ್ಯವಿಲ್ಲ.    ಕಮಲಾ ಅವರು ಕಾದಂಬರಿಯ ಆಶಯಕ್ಕೆ ಸ್ವಲ್ಪವೂ ಕುಂದು ಬರದ ಹಾಗೆ ಅದ್ಭುತವಾಗಿ ಅನುವಾದಿಸಿದ್ದಾರೆ. ಅನುವಾದ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಓದುಗರು ಕಾದಂಬರಿಯ ನಾಯಕ ಸ್ಯಾಂಟಿಯಾಗೋನ ಅರಸುವಿಕೆಯ ಪಯಣದಲ್ಲಿ ಅವನೊಂದಿಗೆ ಹೆಜ್ಜೆ ಹಾಕುತ್ತಾ, ಆಂಡಲೂಸಿಯಾದ ಹುಲ್ಲುಗಾವಲುಗಳಲ್ಲಿ, ಆಫ್ರಿಕಾದ ಊರುಗಳಲ್ಲಿ, ಸಹಾರಾ ಮರುಭೂಮಿಯ ಮರಳಿನಲ್ಲಿ ,  ಪಿರಮಿಡ್ಡುಗಳ ಸನಿಹದಲ್ಲಿ ಸುತ್ತಾಡಿ ಅವನ ಅನುಭವಗಳನ್ನು ತಾವೂ ಒಳಗೊಳ್ಳುತ್ತಾ ಸಾಗುತ್ತಾರೆ. ಇದೊಂದು ಸಾರ್ಥಕ ಅನುವಾದವೆಂದರೆ ತಪ್ಪಾಗುವುದಿಲ್ಲ.      ಕಥೆ ಪ್ರಾರಂಭವಾಗುವುದಕ್ಕೂ ಮುನ್ನ ನಾಂದಿ ರೂಪದಲ್ಲಿ  ಆಲ್ಖೆಮಿಸ್ಟ್ ಓದಿದ ನಾರ್ಸಿಸಸ್ ಕಥೆಯ ಪ್ರಸ್ತಾಪವಿದೆ.  ಈ ಕಥೆ ಕೊನೆಯಾಗುವುದು ಅಳುತ್ತಿರುವ ಕೊಳ ವನದೇವತೆಯರಿಗೆ ತನ್ನ ಅಳುವಿನ ಕಾರಣ ತನ್ನನ್ನು ನೋಡುತ್ತಿದ್ದ ನಾರ್ಸಿಸಸ್ ನ ಕಣ್ಣುಗಳಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬವೇ  ಹೊರತು ಅವನ ಬಾಹ್ಯ ಸೌಂದರ್ಯವಲ್ಲ ಎಂದು ಹೇಳುವಲ್ಲಿ ಮನುಷ್ಯನ ಬಾಹ್ಯ ರೂಪಕ್ಕಿಂತ ಆಂತರ್ಯದ ಸೌಂದರ್ಯಮುಖ್ಯ ಎಂಬ ಅಂಶವನ್ನುಎತ್ತಿ ಹಿಡಿಯುತ್ತದೆ. ಇದು ಆಲ್ಖೆಮಿಸ್ಟ್ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿರುವ, ಸ್ಯಾಂಟಿಯಾಗೋ ಕೊನೆಯಲ್ಲಿ ಕಂಡುಕೊಳ್ಳುವ ದರ್ಶನಕ್ಕೆ ಬರೆದ ಮುನ್ನುಡಿಯಂತಿದೆ. ಇದರಿಂದ ಕಾದಂಬರಿಯ ಮೌಲ್ಯ ವೃದ್ಧಿಯಾಗಿದೆ.     ಮಧ್ಯಕಾಲೀನ ಯುಗದಲ್ಲಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಕೆಲ ಭಾಗಗಳಲ್ಲಿ ಆಲ್ಖೆಮಿ  ಅಂದರೆ ರಸ ವಿದ್ಯೆ ಪ್ರಚಲಿತದಲ್ಲಿದ್ದು ಕೆಲವರು ಇದನ್ನು ಅಭ್ಯಸಿಸಿ ಪ್ರಯೋಗಗಳನ್ನು ನಡೆಸುತ್ತಿದ್ದರು.  ಅಂಥವರಿಗೆ ಆಲ್ಖೆಮಿಸ್ಟ್ ಗಳು (ರಸವಾದಿಗಳು) ಎಂಬ ಹೆಸರಿತ್ತು.  ಈ ಆಲ್ಖೆಮಿಸ್ಟ್ ಗಳು ಸಾಧಾರಣ ಲೋಹವನ್ನುಕರಗಿಸಿ ಶುದ್ಧೀಕರಿಸಿ ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗುತ್ತಿದ್ದರು. ಈ ವಿದ್ಯೆಯ ಮೂಲ ಗ್ರೀಕೋ-ರೋಮನ್ ಮತ್ತು ಈಜಿಪ್ಟ ದೇಶಗಳೆಂದು ಹೇಳುತ್ತಾರೆ.ಆಲ್ಖೆಮಿಸ್ಟ್ ಗಳು ಕೇವಲ ಸಾಧಾರಣ ಲೋಹಗಳನ್ನು ಚಿನ್ನವಾಗಿಸುವುದಲ್ಲದೇ ತತ್ವಜ್ನಾನಿಗಳೂ ಆಗಿರುತ್ತಿದ್ದರು. ಆತ್ಮ ಶುದ್ಧಿಯ ಬಗ್ಗೆ, ಜೀವಾತ್ಮಗಳ ಸಂಬಂಧದ ಬಗ್ಗೆ ಚಿಂತನೆ ನಡೆಸುತ್ತಿದ್ದರು.  ಅಲ್ಲದೇ ಮನುಷ್ಯನ ಆಯುಷ್ಯವನ್ನು ವೃದ್ಢಿಸುವ ಕಷಾಯವನ್ನೂ ಸಹ ತಯಾರಿಸುತ್ತಿದ್ದರು. ಈ ಕಾದಂಬರಿಯ ಮುಖ್ಯ ವ್ಯಕ್ತಿ ಸ್ಯಾಂಟಿಯಾಗೋ ಎಂಬ ಯುವಕ. ತಮ್ಮ ಮಗ ಪಾದ್ರಿಯಾಗಬೇಕೆಂಬ ತಂದೆ ತಾಯಿಯರ ಇಚ್ಚೆಗೆ ವಿರುದ್ಧವಾಗಿ, ಪಾದ್ರಿಯಾಗಿ ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವುದರಲ್ಲಿ ಅರ್ಥವಿಲ್ಲವೆಂದು ಮನಗಂಡು, ದೇಶ ಸುತ್ತಿ ಅನುಭವ ಗಳಿಸುವ ಆಶಯದಿಂದ ಕುರಿಗಾಹಿಯ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾನೆ.  ಇಲ್ಲಿಂದ ಅವನ ಸಂಚಾರೀ ಬದುಕು ಆರಂಭವಾಗುತ್ತದೆ.      ಒಮ್ಮೆ ಟರೀಫ಼ಾದಲ್ಲಿವ್ಯಾಪಾರಿಯೊಬ್ಬನಿಗೆ ಕುರಿಗಳತುಪ್ಪಳವನ್ನು ಮಾರುವ ಸಂದರ್ಭದಲಿ ಆ ವ್ಯಾಪಾರಿಯ ಮಗಳನ್ನು ಕಂಡು ಸ್ಯಾಂಟಿಯಾಗೊ ಮೋಹಗೊಳ್ಲುತ್ತಾನೆ.ಎರಡು ವರ್ಷಗಳ ನಂತರ ಅವಳನ್ನು ನೋಡುವ ಉದ್ದೇಶದಿಂದ ಹೊರಟವನಿಗೆ ಸಂಜೆ ಒಂದು ಪಾಳು ಬಿದ್ದ, ಛಾವಣಿಯಿಲ್ಲದ ಚರ್ಚ್ ಕಾಣಿಸುತ್ತದೆ. ಆ ಚರ್ಚ್ ಒಳಗೆ ಬೆಳೆದಿರುವ ಒಂದು ಸೈಕೋಮೋರ್ ಮರದ ಕೆಳಗೆ  ಆ ರಾತ್ರಿ ಕಳೆಯುವುದೆಂದು ನಿರ್ಧರಿಸಿ ಮಲಗಿದವನಿಗೆ ಒಂದು ಕನಸು ಬೀಳುತ್ತದೆ.  ಕನಸಿನಲ್ಲಿ ಮಗುವೊಂದು ಅವನ ಕೈ ಹಿಡಿದು ಈಜಿಪ್ಟಿನ ಪಿರಮಿಡ್ಡುಗಳ ಬಳಿಗೆ ಒಯ್ದು ಅಲ್ಲಿರುವ ನಿಧಿಯನ್ನು ತೋರಿಸುತ್ತದೆ.  ಈ ರೀತಿಯ ಕನಸನ್ನು  ಅವನು ಹಲವಾರು ಬಾರಿ ಕಂಡಿರುತ್ತಾನೆ.      ಟರೀಫಾದಲ್ಲಿರುವ ಜಿಪ್ಸಿ ಮುದುಕಿಯಿಂದ ಕನಸಿನ ಅರ್ಥವನ್ನು ತಿಳಿದುಕೊಳ್ಳ ಬೇಕೆಂದು ಅವಳ ಬಳಿ ಹೋಗುವ ಸ್ಯಾಂಟಿಯಾಗೋನಿಗೆ ಅವನ ಕನಸಿನ ನಿಧಿ ಈಜಿಪ್ಟಿನ ಪಿರಮಿಡ್ಡುಗಳ ಬುಡದಲ್ಲಿರುವುದಾಗಿಯೂ, ಸ್ಯಾಂಟಿಯಾಗೋ ಅದನ್ನು ಪಡೆದಾಗ ಅದರಲ್ಲಿ ಹತ್ತನೇ ಒಂದು ಭಾಗವನ್ನು ತನಗೆ ಕೊಡಬೇಕೆಂದು ತಾಕೀತು ಮಾಡುತ್ತಾಳೆ.  ಮುಂದೆ ಸ್ಯಾಂಟಿಯಾಗೋ ಗೆ ಸಾಲೆಮ್ ನ ರಾಜನೆಂದು ಹೇಳಿಕೊಳ್ಳುವ ಮಿಲ್ಚಿ ಜ಼ೆಡೆಕ್ ಎಂಬ ಮುದುಕನ ಭೇಟಿಯಾಗುತ್ತದೆ.  ಮಿಲ್ಚೆಜ಼ೆಡೆಕ್ ಸ್ಯಾಂಟಿಯಾಗೋಗೆ  ಅನೇಕ ವಿಚಾರಗಳನ್ನು ಕುರಿತು ತಿಳಿಸುತ್ತಾನೆ. ಆತ್ಮಾನುಭವ ಮತ್ತು ಪ್ರಕೃತಿಯೊಂದಿಗಿನ ಅದರ ಸಂಬಂಧ ಗಳನ್ನು ತಿಳಿಸಿ “ಪೂರ್ಣ ಮನಸ್ಸಿನಿಂದ ಕೇಳಿಕೊಂಡರೆ ಪ್ರಕೃತಿ ನಮಗೆ ನೆರವಾಗುತ್ತದೆ ಎಂದೂ ತಿಳಿಸುತ್ತಾನೆ. ಕನಸಿನ ಸಾಕ್ಷಾತ್ಕಾರಕ್ಕಾಗಿ ಈಜಿಪ್ಟಿನ ಪಿರಮಿಡ್ಡುಗಳ ಬಳಿ ತೆರಳಲು ಪ್ರೇರೇಪಿಸುತ್ತಾನೆ. ಅವನಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಸಹಾಯವಾಗಲೆಂದು ಯೂರಿಮ್ ಮತ್ತು ತುಮಿಮ್ ಎಂಬ ಎರಡು ಕಲ್ಲುಗಳನ್ನು ನೀಡುತ್ತಾನೆ.      ಸ್ಯಾಂಟಿಯಾಗೋ ತನ್ನಲ್ಲಿದ್ದ ಕುರಿಗಳಲ್ಲಿ ಆರು ಕುರಿಗಳನ್ನು ತಾನು ಕೊಟ್ಟ ಮಾತಿನಂತೆ ಮಿಲ್ಚಿಜ಼ೆಡೆಕ್ ನಿಗೆ ಕೊಟ್ಟು ಉಳಿದ  ಕುರಿಗಳನ್ನು ಮಾರಿ ಆಫ್ರಿಕಾಕ್ಕೆ ಪಯಣಿಸಿ ಆಫ್ರಿಕಾದ ಟ್ಯಾನ್ಜೀರ್ ಪಟ್ಟಣಕ್ಕೆ ಬಂದಿಳಿಯುತ್ತಾನೆ.  ಅಪರಿಚಿತ ಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗುವ, ಸ್ಪ್ಯಾನಿಷ್ ಮಾತನಾಡುವ ಯುವಕ ಸ್ಯಾಂಟ್ಯಾಗೋನೊಂದಿಗೆ ಸ್ನೇಹ ಬೆಳೆಸಿ ಅವನಲ್ಲಿದ್ದ ಹಣವನ್ನೆಲ್ಲ ಲಪಟಾಯಿಸುತ್ತಾನೆ. ಎಲ್ಲವನ್ನೂ ಕಳೆದುಕೊಂಡ ಸ್ಯಾಂಟಿಯಾಗೋನನ್ನು ಅನಾಥಪ್ರಜ್ನೆ ಕಾಡುತ್ತದೆ. ಹೇಗಾದರೂ ಮಾಡಿ ಸ್ವಲ್ಪ ಹಣ ಸಂಪಾದಿಸಿ  ಆಂಡಲೂಸಿಯಾಗೆಹಿಂದಿರುಗಬೇಕೆಂದುಕೊಳ್ಳುತ್ತಾನೆ. ಅವನಿಗೆ ಒಬ್ಬ ಹರಳು ಮತ್ತು ಗಾಜಿನ ವಸ್ತುಗಳ ವ್ಯಾಪಾರಿಯ ಅಂಗಡಿಯಲ್ಲಿ ಕೆಲಸ ಸಿಗುತ್ತದೆ. ತನ್ನ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಗಳಿಂದ ಅಂಗಡಿಯ ಯಜಮಾನನ ವಿಶ್ವಾಸ ಗಳಿಸುತ್ತಾನೆ.  ಅವನ  ಬಳಿ ಸಾಕಷ್ಟು ಹಣವೂ ಸಂಗ್ರಹವಾಗುತ್ತದೆ.  ಅಂಗಡಿಯಲ್ಲಿ ಕೆಲವಾರು ತಿಂಗಳುಕೆಲಸ ಮಾಡಿದ ನಂತರ ಸ್ಯಾಂಟಿಯಾಗೋನನ್ನು ಆಂಡಲೂಸಿಯಾಗೆ ಹಿಂದಿರುಗುವುದೋ ಅಥವಾ ಕನಸಿನ ನಿಧಿಯನ್ನರಸಿ ಪಿರಮಿಡ್ಡುಗಳ ಕಡೆ ಹೋಗುವುದೋ ಎಂಬ ದ್ವಂದ್ವ ಕಾಡ ತೊಡಗುತ್ತದೆ.  ಅದೇ ಸಂದರ್ಭದಲ್ಲಿ ಈಜಿಪ್ಟಿಗೆ ಪಯಣ ಹೊರಟಿದ್ದ ಜನರ ಗುಂಪೊಂದು ಅಲ್ಲಿಗೆ ಬರುತ್ತದೆ.ಆ ಗುಂಪನ್ನು ಸೇರಿಕೊಂಡು ಈಜಿಪ್ಟಿನ ಕಡೆಗೆ ಪಯಣ ಬೆಳೆಸುತ್ತಾನೆ.      ಅವನಿಗೆ ಆ ಗುಂಪಿನಲ್ಲಿದ್ದ ಆಂಗ್ಲ ಮನುಷ್ಯನೊಬ್ಬನ ಪರಿಚಯವಾಗುತ್ತದೆ.  ಆ ಮನುಷ್ಯ ರಸವಾದದ (ಆಲ್ಖೆಮಿ) ರಹಸ್ಯಗಳನ್ನು ಅರಿಯಲೋಸುಗ ಪಿರಮಿಡ್ಗೆ ಹೋಗುವ ದಾರಿಯಲ್ಲಿರುವ ಓಯಸಿಸ್ನಲ್ಲಿ ವಾಸಿಸುತ್ತಿರುವ ಆಲ್ಖೆಮಿಸ್ಟ್ ಒಬ್ಬನನ್ನು ಭೇಟಿಮಾದಲು ತಾನು ಇಚ್ಚಿಸುವುದಾಗಿಯೂ, ಮತ್ತು ಆ ಆಲ್ಖೆಮಿಸ್ಟ್ ಗೆ  ಇನ್ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವುದೆಂದೂ ಹೇಳುತ್ತಾನೆ. ಮರುಭೂಮಿಯಲ್ಲಿ ಪಯಣಿಸುತ್ತಾ ಸ್ಯಾಂಟಿಯಾಗೋ ಮರುಭೂಮಿಯ ಮಾತುಗಳನ್ನು ಆಲಿಸುವುದನ್ನೂ ಮತ್ತು ಜಗತ್ತಿನ ಆತ್ಮವನ್ನು ಶೋಧಿಸುವುದನ್ನೂ ಕಲಿಯುತ್ತಾನೆ.      ಗುಂಪು ಓಯಸಿಸ್ ಪ್ರದೇಶಕ್ಕೆ ಬರುತ್ತದೆ.  ಅಲ್ಲಿ ಅವರೆಲ್ಲ ಕೆಲ ದಿನ ತಂಗುತ್ತಾರೆ. ಅಲ್ಲಿ ಸ್ಯಾಂಟಿಯಾಗೊನಿಗೆ ಫಾತಿಮಾ ಎಂಬ ಅರಬ್ ಹುಡುಗಿಯ ಭೇಟಿಯಾಗುತ್ತದೆ.  ಅವಲ ಸೌಂದರ್ಯಕ್ಕೆ ಮಾರು ಹೋದ ಸ್ಯಾಂಟಿಯಾಗೋ ಅವಳಲ್ಲಿ  ಅನುರಕ್ತನಾಗುತ್ತಾನೆ.  ಗುಂಪಿನ ನಾಯಕ  ಎಲ್ಲರನ್ನೂ ಸೇರಿಸಿ  “ಮರುಭೂಮಿಯ ಬುಡಕಟ್ಟು ಜನಾಂಗದ ಬಣಗಳ ನಡುವೆ ಯುದ್ಧ ನಡೆಯುತ್ತಿರುವುದಾಗಿಯೂ, ಆದ್ದರಿಂದ ಪಯಣ ಮುಂದುವರಿಸಲು ಸಧ್ಯಕ್ಕೆ ಸಾಧ್ಯವಾಗುವುದಿಲ್ಲ” ಎಂದು ಹೇಳುತ್ತಾನೆ.      ಗುಂಪಿನೊಂದಿಗೆ ಅನಿವಾರ್ಯ ಓಯಸಿಸ್ನಲ್ಲಿ  ಉಳಿಯಲೇ ಬೇಕಾದ ಸ್ಯಾಂಟಿಯಾಗೋ  ಮರುಭೂಮಿಯ ಕಡೆ ನಡೆದು ಸುತ್ತಾಡುತ್ತಾನೆ.  ಆಗ ಅವನಿಗೆ ಆಗಸದಲ್ಲಿ ಎರಡು ಗಿಡುಗಗಳು ಹೋರಾಡುತ್ತಿರುವ ದೃಶ್ಯ ಕಾಣುತ್ತದೆ.  ಅದನ್ನು ಕಂಡ ಸ್ಯಾಂಟಿಯಾಗೊಗೆ ಸೈನ್ಯದ ತುಕುಡಿಯೊಂದು ಓಯಸಿಸ್ ಪ್ರದೇಶವನ್ನು ಆಕ್ರಮಿಸುವ ಮುನ್ಸೂಚನೆ ಸಿಗುತ್ತದೆ.  ಓಯಸಿಸ್ ಗಳ ಮೇಲೆ ದಾಳಿ ಮಾಡುವುದು ಅಲ್ಲಿಯ್ ನಿಯಮಕ್ಕೆ ವಿರುದ್ಧವಾದದ್ದರಿಂದ ಈ ವಿಶಯವನ್ನು ಓಯಸಿಸ್ ಪ್ರದೇಶದ ಮುಖ್ಯಸ್ಥನೊಂದಿಗೆ ಹಂಚಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಕೈಯಲ್ಲಿ ಕತ್ತಿ ಹಿಡಿದ, ಬಿಳಿಯ ಕುದುರೆಯ ಮೇಲೆ ಕುಳಿತಿದ್ದ, ಕಣ್ಣುಗಳೆರಡನ್ನು ಬಿಟ್ಟು ದೇಹದ ಉಳಿದ ಭಾಗವನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನು ಸ್ಯಾಂಟಿಯಾಗೋಗೆ ಎದುರಾಗುತ್ತಾನೆ. ಅವನೇ ಆಂಗ್ಲ ಮನುಷ್ಯ ಹೇಳಿದ ಆಲ್ಖೆಮಿಸ್ಟ್ ಆಗಿರುತ್ತಾನೆ.  ಆಲ್ಖೆಮಿಸ್ಟ್ ಸ್ಯಾಂಟಿಯಾಗೋನನ್ನು ತನ್ನ ಗುಡಾರಕ್ಕೆ ಕರೆದುಕೊಂಡುಹೋಗುತ್ತಾನೆ.  ಅವನಿಂದ ಸ್ಯಾಂಟಿಯಾಗೋ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾನೆ.  ಮುಖ್ಯವಾಗಿ ಪ್ರಕೃತಿ ಭಾಷೆಯನ್ನು ಮತ್ತು ಭೌತ ಶಕ್ತಿಗಳೊಂದಿಗೆ ಸಂಭಾಷಿಸುವುದನ್ನು ಕಲಿಯುತ್ತಾನೆ.  ಆಲ್ಖೆಮಿಸ್ಟ್ ತಾನು ಮರುಭೂಮಿಯನ್ನು ದಾಟಿ ಈಜಿಪ್ಟಿನ ಪಿರಮಿಡ್ಡುಗಲ ಕಡೆ ಹೋಗುವುದಾಗಿಯೂ, ಬೇಕಾದರೆ ತನ್ನ ಜತೆ ಬರಬಹುದೆಂದು ಸ್ಯಾಂಟಿಯಾಗೊಗೆ ಹೇಳುತ್ತಾನೆ. ಸ್ಯಾಂಟಿಯಾಗೋ ಆಲ್ಖೆಮಿಸ್ಟ್ ಜತೆ ಪಯಣಿಸಲು ಒಪ್ಪುತ್ತಾನೆ. ಇಬ್ಬರೂ ಯುದ್ಧ ನಡೆಯುತ್ತಿದ್ದ  ಮರುಭೂಮಿಯ ಪ್ರದೇಶವನ್ನು ಪ್ರವೇಶಿಸುತ್ತಾರೆ.      ಯುದ್ಧ ಮಾಡುತ್ತಿದ್ದ ಯೋಧರು ಇವರಿಬ್ಬರನ್ನು ಬಂಧಿಸುತ್ತಾರೆ.  ಆಗ ಆಲ್ಖೆಮಿಸ್ಟ್ ಯೋಧರ ಹತ್ತಿರ ಸ್ಯಾಂಟಿಯಾಗೋ ನಿಗೆ ಬಿರುಗಾಳಿಯಾಗಿ ಮಾರ್ಪಡುವ ವಿದ್ಯೆ ಗೊತ್ತಿದೆಯೆಂದು ಹೇಳುತ್ತಾನೆ. ಆಲ್ಖೆಮಿಸ್ತ್ನನ್ನು ಅವಹೇಳನ ಮಾಡಿದ ಯೋಧರು, ಹಾಗಿದ್ದರೆ ತಮ್ಮ ಸೇನಾಧಿಪತಿಯ ಎದುರು  ಸ್ಯಾಂಟಿಯಾಗೋ ಆ ವಿದ್ಯೆಯನ್ನು ಪ್ರದರ್ಷಿಸ ಬೇಕೆಂದು ತಾಕೀತು ಮಾಡುತ್ತಾರೆ.  ಆಲ್ಖೆಮಿಸ್ಟ್ ಒಪ್ಪಿಕೊಳ್ಳುತ್ತಾನೆ. ಆದರೆ ಏನೂ ಅರಿಯದ ಸ್ಯಾಂಟಿಯಾಗೋನಿಗೆ  ಆತಂಕ ಶುರುವಾಗುತ್ತದೆ.  ಮರುದಿನ ಮುಂಜಾನೆ ಸ್ಯಾಂಟಿಯಾಗೋ ಮರುಭೂಮಿಯಲ್ಲಿದ್ದ ಒಂದು ಮರಳು ದಿಬ್ಬದ ಮೇಲೆ ಕುಳಿತು ಈ ಗಂಡಾಂತರದಿಂದ ತನ್ನನ್ನು ಪಾರುಮಾಡುವಂತೆ ದೇವರನ್ನು ಪ್ರಾರ್ಥಿಸುತ್ತಾನೆ.  ಮರುಭೂಮಿ, ಸೂರ್ಯ, ಗಾಳಿಗಳೂ ಕೂಡ ಅವನೊಂದಿಗೆ ಪ್ರಾರ್ಥಿಸುತ್ತಿವೆ ಅನಿಸುತ್ತದೆ. ಅವುಗಳೊಂದಿಗೆ ಅವನು ಸಂಭಾಷಿಸುತ್ತಾನೆ, ತನ್ನ ಹೃದಯದ ಮಾತು ಕೇಳುತ್ತಾನೆ.   ಗಾಳಿ ಬಿರುಗಾಳಿಯಾಗಿ ಪರಿವರ್ತಿತವಾಗುತ್ತದೆ.  ಬಿರುಗಾಳಿ ನಿಂತಾಗ ಸ್ಯಾಂಟಿಯಾಗೋ ಆ ಯೋಧರ ನಡುವೆ ಇರುತ್ತಾನೆ.  ಅವರು ಇವರಿಬ್ಬರನ್ನೂ ಮುಂದೆ ಹೋಗಲು ಬಿಡುತ್ತಾರೆ.      ಮಧ್ಯದಲ್ಲಿ ಆಲ್ಖೆಮಿಸ್ಟ್ ತನಗೆ ಬೇರೆ ಎನೋ ಜರೂರು ಕೆಲಸವಿದೆ ಎಂದು ಹೇಳಿ ಓಯಸಿಸ್ಗೆ ಹಿಂದಿರುಗುತ್ತಾನೆ.  ಒಂಟಿಯಾದ ಸ್ಯಾಂಟಿಯಾಗೋ ಛಲ ಬಿಡದೇ ಮುಂದೆ ಸಾಗಿ ಪಿರಮಿಡ್ಡುಗಳ ಬಳಿ  ಬರುತ್ತಾನೆ.  ನಿಧಗಾಗಿ ಮರಳನ್ನು ಅಗೆಯುತ್ತಾನೆ, ಆದರೆ ಅವನಿಗೆ ನಿಧಿ ಸಿಗುವುದಿಲ್ಲ.  ಆಗ ಅಲ್ಲಿಗ ಬಂದ ಕಳ್ಳರ ಗುಂಪೊಂದು ಅವನನ್ನು ಥಳಿಸಿ ಅವನ ಬಳಿಯಿದ್ದ, ಅವನಿಗೆ ಆಲ್ಖೆಮಿಸ್ಟ್ ಕೊಟ್ಟಿದ್ದ ,ಚಿನ್ನದ ಗಟ್ಟಿಯನ್ನು ಕಿತ್ತುಕೊಳ್ಳುತ್ತಾರೆ.  ಆಗ ಸ್ಯಾಂಟಿಯಾಗೋ  ತಾನು ಕಂಡ ಕನಸಿನ ನಿಧಿಯ ಬಗ್ಗೆ ಹೇಳಿದಾಗ ಆ ಕಳ್ಳರಲ್ಲೊಬ್ಬನು ತಾನು ಕಂಡ ನಿಧಿಯ ಕನಸಿನ ಬಗ್ಗೆ ಹೇಳಿ, ಅದು ಆಂಡಲೂಸಿಯಾದ ಪಾಳು ಬಿದ್ದ ಚರ್ಚಿನಲ್ಲಿ ಇರುವುದಾಗಿ ಹೇಳುತ್ತಾನೆ.     ಆಂಡಲೂಸಿಯಾಗೆ ಹಿಂದಿರುಗುವ ಸ್ಯಾಂಟಿಯಾಗೋ ಹಿಂದೆ ತಾನು ಮಲಗಿದ್ದ ಪಾಳು ಚರ್ಚಿನ ಸೈಕೊಮೋರ್ ಮರದಡಿ ಅಗೆಯುತ್ತಾನೆ.  ನಿಧಿಯಿದ್ದ ಪೆಟ್ಟಿಗೆ ಸಿಗುತ್ತದೆ.  ಆಗ ಈಜಿಪ್ಟಿನ ಮರುಭೂಮಿಯ ಕಡೆಯಿಂದ ಹಿತವಾದ ತಂಗಾಳಿ ಬೀಸಿ ಬರುತ್ತದೆ. ಅದರಲ್ಲಿ ಫಾತಿಮಾಳ ಪ್ರೀತಿಯ ಚುಂಬನದ ಸುಗಂಧವಿರುತ್ತದೆ.  ಅವಳ ಮೊದಲ ಚುಂಬನ!  ಪರವಶನಾದ ಸ್ಯಾಂಟಿಯಾಗೋ “ಫಾತಿಮಾ ಬಂಗಾರೀ  ನಾ ಬರ್ತೀನಿ ಮರೀ”  ಎನ್ನುವಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.            ಇಡೀ ಕಾದಂಬರಿಯನ್ನು ಆವರಿಸಿಕೊಳ್ಳುವ ಆಲ್ಖೆಮಿ ( ರಸವಿದ್ಯೆ) ಒಂದು ಪ್ರತಿಮೆಯಾಗಿ ಹೊಮ್ಮಿದೆ.  ಆಲ್ಖೆಮಿಯಲ್ಲಿ ಸಾಧಾರಣ ಲೋಹವೊಂದು ಚಿನ್ನವಾಗಿ ಮಾರ್ಪಡಲು ಅದು ಶುಚಿರ್ಭೂತವಾಗ ಬೇಕು. ಹೀಗೆ ಶುಚಿರ್ಭೂತವಾಗಲು ಅದು ಅನೇಕ ವಿಧಿಗಳಿಗೆ ಒಳಪಡ ಬೇಕಾಗುತ್ತದೆ. ಆಗ ಮಾತ್ರ ಅದು ಚಿನ್ನವಾಗಿ ಮಾರ್ಪಡಲು ಸಾಧ್ಯ. ಕಾದಂಬರಿಯ ನಾಯಕ ಸ್ಯಾಂಟಿಯಾಗೋ ಕೂಡ ಒಬ್ಬ ಸಾಧಾರಣ ಮನುಷ್ಯ. ಅವನು ತನ್ನನ್ನೇ ತಾನು ಶೋಧಿಸಿಕೊಳ್ಳ ಬೇಕಾದರೆ, ಆತ್ಮದ ಮಾತನ್ನು ಆಲಿಸುವ, ಪ್ರಕೃತಿ ಭಾಷೆಯನ್ನು ಅರಿಯುವ ಸಿದ್ಧಿಯನ್ನು ಪಡೆಯ ಬೇಕಾದರೆ,  ನಿಧಿಗಿಂತಲೂ ಹೆಚ್ಚಾದ ಫಾತಿಮಾಳ ಪ್ರೇಮದ ಮಹತ್ವವನ್ನು ಅರಿಯ ಬೇಕಾದರೆ ಅವನೂ ಕೂಡ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಚಿಗುರಿದ ಕನಸು ಡಾ.ಶಿವರಾಮ ಕಾರಂತ ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”. ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.                   ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ ಮನಸ್ಸಿಗೆ ಬರದೆ ಇರಲು ಸಾಧ್ಯವಾಗಲಿಲ್ಲ ಅದೇನೆಂದರೆ ನಾವು ಸಹ ಈ ನಗರದ ಜೀವನವನ್ನು, ಯಾಂತ್ರಿಕ ಬದುಕನ್ನು ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಇರುವಂತಹ ಅಲ್ಪ ಸ್ವಲ್ಪ ಜಮೀನಿನಲ್ಲಿ ವೈಜ್ಞಾನಿಕವಾಗಿ ವ್ಯವಸಾಯವನ್ನು ಮಾಡಿಕೊಂಡು ನಿಸರ್ಗದ ಮಡಿಲಲ್ಲಿ ಸುಸ್ಥಿರವಾದಂತಹ ಜೀವನವನ್ನು ತೃಪ್ತಿಯಿಂದ ಜೀವಿಸಬಹುದಲ್ಲವೇ ಎಂಬುದು.                ಈ ಕಥೆಯ ನಾಯಕ ಶಂಕರ ರವರ ಪಾತ್ರ ಮಹತ್ವದ್ದು. ಅವರ ವ್ಯಕ್ತಿತ್ವ, ಯೋಚನಾ ಲಹರಿ, ಸಾಧನೆ, ಅವರ ಮಿತಭಾಷೆ ಎಲ್ಲವೂ ಇತರರಿಗೆ ಮಾದರಿಯಾಗಿದೆ.             ಉನ್ನತ ವ್ಯಾಸಂಗವನ್ನು ಮಾಡಿ ಮುಂಬಯಿ, ದೆಹಲಿಯಂತಹ ಮಹಾ ನಗರಗಳಲ್ಲಿ ಓದಿ, ಬೆಳೆದು ತಾನು ಬೆಳೆದ ವಾತಾವರಣಕ್ಕೆ ತೀರಾ ವಿರುದ್ಧವಾದಂತಹ ತನ್ನ ತಾತ ಮುತ್ತಾತಂದಿರು ಬಾಳಿ ಬದುಕಿದ ಒಂದು ಪುಟ್ಟ ಹಳ್ಳಿಗೆ ಬಂದು ಅಲ್ಲಿ ಅವರ ತಾತಂದಿರ ಜಮೀನು ಕಾಡು ಪಾಲಾಗಿದ್ದನ್ನು ದಕ್ಕಿಸಿಕೊಂಡು ತನ್ನ ಶ್ರಮ ಮತ್ತು ವೈಜ್ಞಾನಿಕ ವಿಧಾನಗಳಿಂದ ಆ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡಿದ ಕೀರ್ತಿ ಶಂಕರ್ ರವರದ್ದಾಗಿದೆ.               ಶಂಕರ ರವರ ತನ್ನ ಆಸೆ, ಕನಸು ಆಗಿದ್ದಿದ್ದು ಏನೆಂದರೆ ತನ್ನ ತಾತ ನವರು ಬಾಳಿ ಬದುಕಿದ ಹಳ್ಳಿಯಲ್ಲಿ ಅವರ ಜಮೀನಿನಲ್ಲಿ ತಾನು ವ್ಯವಸಾಯವನ್ನು ಮಾಡಿಕೊಂಡು ಬದುಕಬೇಕು ಎಂಬುದು.ತನ್ನ ಈ ಆಸೆಯನ್ನು ತನ್ನ ಅಪ್ಪ ಅಮ್ಮನಿಗೆ ತಿಳಿಸಿದಾಗ ಅವರಿಂದ ಒಪ್ಪಿಗೆ ಸಿಗುವುದಿಲ್ಲ.ಕಾರಣ ಅವರಿಗೆ ಹಳ್ಳಿ, ವ್ಯವಸಾಯ ಇವು ತಮ್ಮ ಪ್ರತಿಷ್ಠೆಗೆ ಸರಿಹೊಂದುವುದಿಲ್ಲ ಎಂಬುದು.ತನ್ನ ಅಪ್ಪ ಅಮ್ಮ ನವರಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ಸಿಗುವುದಿಲ್ಲ. ಆದರೂ ಛಲ ಬಿಡದೆ ಹಳ್ಳಿಗೆ ಬಂದು ಕೃಷಿಯನ್ನು ಮಾಡಿ ಯಶಸ್ವಿಯಾಗುತ್ತಾರೆ. ತನ್ನ ತಮ್ಮ ಅಣ್ಣನ ಆಸೆ ಕನಸುಗಳಿಗೆ ತನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಾನೆ.                 ಶಂಕರ ರವರು ಹಳ್ಳಿಗೆ ಬಂದು ಕಾಡು ಬೆಳೆದುಕೊಂಡ ಜಮೀನಿನಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಲು ಶುರು ಮಾಡುತ್ತಾರೆ.ಅವರ ಈ ಹಾದಿಯಲ್ಲಿ ಮೇಲಿಂದ ಮೇಲೆ ಕಷ್ಟಗಳು, ಆಘಾತಗಳು ಎಷ್ಟು ಬಂದರು ಧೃತಿಗೆಡುವುದಿಲ್ಲ.ಆ ಕಷ್ಟಗಳನ್ನು ಮೇಲಿಂದ ಮೇಲೆ ಬಂದ ತನ್ನ ಆಪ್ತರ ಸಾವುಗಳನ್ನು ಸಹನೆಯಿಂದ, ಧೈರ್ಯದಿಂದ ಎಲ್ಲಾ ತೊಂದರೆಗಳನ್ನು ನಿಭಾಯಿಸಿ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.       ಇವರ ಈ ಸಾಧನೆ ಸುತ್ತಾ ಹತ್ತಾರು ಹಳ್ಳಿಗಳಿಗೆ ಹಬ್ಬಿ ಇವರ ಮಾದರಿಯ ಕೃಷಿ ವಿಧಾನಗಳನ್ನು ಬೇರೆಯವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಮನಸ್ಸು ಮಾಡುವರು. ಇದರಲ್ಲಿ ಮೊದಲಿಗರು ಶಂಕರರ ಗೆಳೆಯನಾದ ಸೀತಾರಾಮನ ತಮ್ಮ ಕೃಷ್ಣನೂ ಸಹ ಕೆಲವು ವರ್ಷಗಳು ಶಂಕರರೊಂದಿಗೆ ಕೆಲಸ ಮಾಡಿ ತಮ್ಮದೇಯಾದ ಹೊಸ ಜಮೀನನ್ನು ಕೊಂಡು ಅದನ್ನು ಶಂಕರ ರವರ ಮಾರ್ಗದರ್ಶನದಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗುತ್ತಾರೆ.               ಕಥಾನಾಯಕ ಶಂಕರ ರವರ ವ್ಯಕ್ತಿತ್ವ, ಸಾಧನೆ ಇಂದಿನ ಯುವಜನತೆಗೆ ಮಾದರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಸುಮಾರು ಜನ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕೃಷಿಯ ಮೇಲೆ,ಅದರ ಪ್ರಗತಿಯ ಮೇಲೆ ತುಂಬಾ ದುಷ್ಪರಿಣಾಮಗಳುಂಟಾಗುತ್ತಿವೆ. ಯುವ ಜನತೆ ಇಂತಹ ದುಷ್ಪರಿಣಾಮಗಳಿಗೆ ಅವಕಾಶ ಕೊಡದೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೃಷಿಯನ್ನು ಆಧುನಿಕ ರೀತಿಯಲ್ಲಿ ಮಾಡಿ ಅಲ್ಲಿಯೇ ತಮ್ಮ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಂಡು ಇತರರಿಗೂ ನೆರವಾಗಬೇಕು ಎಂಬುದು ನನ್ನ ಆಶಯ…. ******** ಸೌಮ್ಯ.ವಿ.

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೂರು ದಾರಿಗಳು ಯಶವಂತ ಚಿತ್ತಾಲ ಮೂರು ದಾರಿಗಳು ಕಾದಂಬರಿ ಯಶವಂತ ಚಿತ್ತಾಲ ಸಾಹಿತ್ಯ ಭಂಡಾರ ಮೂರು ದಾರಿಗಳು ಯಶವಂತ ಚಿತ್ತಾಲರ ಮೊದಲ ಕಾದಂಬರಿ.ಭೀತಿ, ಪ್ರೀತಿ ಮತ್ತು ಭಂಡಾಯ ( ಆತ್ಮನಾಶ) ; ಇವು ಈ ಕೃತಿಯಲ್ಲಿ ಉದ್ಭವಿಸಿದ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ವ್ಯಕ್ತಿತ್ವಗಳು ಕಂಡುಕೊಳ್ಳುವ ದಾರಿಗಳು. ಹನೇಹಳ್ಳಿ, ಸಾಣಿಕಟ್ಟಾ, ಗೋಕರ್ಣ ಮತ್ತು ಕುಮಟಾದ ಸುತ್ತಲಿನ ಪರಿಸರದ ಚಿತ್ರಣ, ಭಾಷೆ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ಮೂಡಿಬಂದಿದೆ. ವಿಶ್ವನಾಥ ಶಾನಭಾಗರು ಸಾಣೇಕಟ್ಟೆಯ ಧಕ್ಕೆಯಿಂದ ಕುಮಟೆಯ ಕಡೆಗೆ ಹೋಗುವ ಬೋಟಿಯನ್ನು ಹತ್ತುವುದರೊಂದಿಗೆ ಕತೆ ಆರಂಭವಾಗುತ್ತದೆ. ವಿಶ್ವನಾಥ ಶಾನಭಾಗರು ಅನುಕೂಲಸ್ಥರು ಮತ್ತು ಅಂಗಡಿಯ ಮಾಲೀಕರು. ಅವರಿಗೆ ನಿರ್ಮಲಾ ಎಂಬ ಒಬ್ಬಳೇ ಮಗಳು. ಅವಳ ಮೇಲೆ ಒಂದು ಅಪವಾದ ಬಂದಿದೆ. ಅದು ಅವಳಲ್ಲಿ, ಪಾಲಕರಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಹೇಗೆ ತಲ್ಲಣಗಳನ್ನು ಸೃಷ್ಟಿಸಿದೆ ಎಂಬುದೇ ಇಲ್ಲಿನ ಕಥಾಹಂದರ. ಶಾರದ ಮತ್ತು ವಿಶ್ವನಾಥರ ಮಗಳಾದ ನಿರ್ಮಲೆ ವಿದ್ಯಾಭ್ಯಾಸಕ್ಕಾಗಿ ಕಾರವಾರದ ಚಂದ್ರಭಾಗಿ ಮತ್ತು ಜೋಶಿಯವರ (ಅತ್ತೆ- ಮಾವ) ಮನೆಯಲ್ಲಿದ್ದವಳು. ರಾಮನಾಥ ಅವಳ ಬಾವ. ನಿರ್ಮಲೆ – ರಂಗಪ್ಪನ ಪ್ರಕರಣವನ್ನು ಮಾವನ ಮನೆಗೆ ತಿಳಿಸುವವರು ದೇವಪ್ಪ ನಾಯ್ಕ ಮಾಸ್ತರರು. ಈ ಫೋಟೋಶಾಪಿನ ರಂಗಪ್ಪ,ಪ್ರಿಯಾಗಿ, ವಲ್ಲಿಗದ್ದೆ ಸುಬ್ಬ ಇವರುಗಳಿಗೆ ಊರಿನಲ್ಲಿ ಹೀನ ಸುಳಿಯವರು ಎಂಬ ಹೆಸರಿದೆ.ಅಂತಹ ರಂಗಪ್ಪನ ಅಂಗಡಿಯಲ್ಲಿ ಶಾಲೆಯ ಗೆದೆರಿಂಗ್ ನ ರಾತ್ರಿ ನಿರ್ಮಲಾ ಕಾಣಿಸಿಕೊಂಡ ಸುದ್ದಿ ಊರಲ್ಲಿ, ನೆಂಟರಿಷ್ಟರಲ್ಲಿ ಧಿಗ್ಗನೆ ಹೊತ್ತಿಕೊಳ್ಳುತ್ತದೆ. ಆಗ ಆತಂಕಕ್ಕೆ ಒಳಗಾಗುವ ಶಾನುಭಾಗರು, ಸೀತಾ ಮತ್ತು ದಿ.ಉಪೇಂದ್ರ ಕೇಣಿಯವರ ಮಗ ವಾಸುದೇವನಿಗೆ ಮಗಳ ಮದುವೆ ಮಾಡಿಕೊಡುವ ಪ್ರಸ್ತಾಪ ಇಡುತ್ತಾರೆ. ಇದು ಸಮಾಜದಲ್ಲಿ ಮತ್ತಷ್ಟು ಅನುಮಾನವನ್ನು ಮೂಡಿಸುತ್ತದೆ. ವಾಸುದೇವ ಮಾಸ್ತರಿಕೆ ಮಾಡುತ್ತಿರುವವನು. ಅಂತಸ್ತಿನಲ್ಲಿ ವಿಶ್ವನಾಥರಿಗೆ ಸಾಟಿಯಿಲ್ಲ.ಮದುವೆಯ ಪ್ರಸ್ತಾಪ ಬಂದಾಗ ಸಹಜವಾಗಿ ಸಮಯ ಕೇಳುತ್ತಾನೆ. ನಂತರ ನಿರ್ಮಲೆಯ ಗುಲ್ಲು ತುಂಗಕ್ಕನ ಮೂಲಕ ಸರ್ವವ್ಯಾಪಿಯಾಗುತ್ತದೆ. ಅದು ಬಾಲ್ಯದಿಂದಲೂ ಗೆಳೆಯನಾದ ಶಿನ್ನನ ಮೂಲಕ ಇವನ ಕಿವಿಯನ್ನೂ ತಲುಪುತ್ತದೆ. ಸಾಹಿತಿಯಾದ ವಾಸುದೇವ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮದುವೆಗೆ ತಯಾರಾಗುತ್ತಾನೆ. ಈ ಮಧ್ಯೆ ಸಂಬಂಧಿಕನಾದ ವೆಂಕಟರಮಣ ಹೆಚ್ಚಿನ ವಿಷಯ ತಿಳಿಯಲು ಶಿರಸಿಯಲ್ಲಿ ಖಾನಾವಳಿ ಮಾಡಿಕೊಂಡಿರುವ ಪ್ರಿಯಾಗಿಯ ಬಳಿ ತೆರಳುತ್ತಾನೆ. ಆಗ ಆತ ನೋಡುವುದು ಲೈಂಗಿಕ ರೋಗ ತಗುಲಿಸಿಕೊಂಡು ಹಾಸಿಗೆ ಹಿಡಿದ ವಲ್ಲಿಗದ್ದೆ ಸುಬ್ಬನನ್ನು.ಭಯಂಕರ ಅಸಹ್ಯನಾದ ಆತನನ್ನು ನೋಡಿ ಹೆದರಿ ಮನೆ ಸೇರಿದ ವೆಂಕಟರಮಣ ಮುಂದೆ ಜನರ ಬಾಯಿಗೆ ಆಹಾರವಾಗುತ್ತಾನೆ. ನಿರ್ಮಲಾಳ ಪ್ರಕರಣ ಹಿಂದೆ ಸರಿಯುತ್ತದೆ. ಈ ಮಧ್ಯೆ ನಿರ್ಮಲೆಯ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿಗಳನ್ನು ಮತ್ತು ಅವರ ಕಥಾಸಂಕಲನಗಳನ್ನು ಓದಿ ಈ ಕೃತಿಯನ್ನು ಓದುವವರು ನೀವಾಗಿದ್ದರೆ ಕೊಂಚ ನಿರಾಸೆಯಾಗಬಹುದು. ಅದೇ ನೀವು ಚಿತ್ತಾಲರ ಅಭಿಮಾನಿಯಾಗಿದ್ದರೆ ಇದನ್ನು ಸವಿಯಲು ಮರೆಯದಿರಿ. ****** ಡಾ. ಅಜಿತ್ ಹರೀಶಿ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾನ್ಮನೆಯ ಕಾಲುದಾರಿ ಪಶ್ಚಿಮ ಘಟ್ಟದೊಳೆಗೇ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಲಿನ ಪ್ರದೇಶಗಳಲ್ಲೇ ಹರಿದಾಡುವ ‘ಕಾನ್ಮನೆಯ ಕಾಲುದಾರಿ’ ಎಂಬ ಕಾದಂಬರಿಯೂ..! ದಿನೇಶ ಹಲಿಮನೆಯವರು ನನಗೆ ‘ಸಿರ್ವಂತೆ ಕ್ರಾಸ್‌’‌ ಕಥಾಸಂಕಲನ ಮತ್ತು ‘ಕಾನ್ಮನೆಯ ಕಾಲುದಾರಿ’‌ ಕಾದಂಬರಿ ಕಳುಹಿಸಿ ಎರಡು-ಮೂರು ತಿಂಗಳಾಗಿತ್ತು. ಇವುಗಳಲ್ಲಿ ‘ಸಿರ್ವಂತೆ ಕ್ರಾಸ್’ ಕಥಾಸಂಕಲನದ‌ ಬಗೆಗೆ ನನ್ನ ಅನಿಸಿಕೆ ಬರೆದು ಬಹಳ ದಿನವಾಯಿತು.‌ ಆದರೆ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ ಇಷ್ಟು ದಿವಸ ನನ್ನ ಅನಿಸಿಕೆ ಬರೆಯಲಾಗಿರಲಿಲ್ಲ. ಈ ಕಾದಂಬರಿ ಓದಿದ್ದೆನಾದರೂ ಈ‌‌‍ ಕುರಿತು ಬರೆಯಲಾಗಿರಲಿಲ್ಲ. ಹಾಗಾಗಿ ಇಂದು ಅವಡುಗಚ್ಚಿ ಕುಳಿತು ಬರೆದೆನು. ಇದು ನನ್ನ ವ್ಯಯಕ್ತಿಕ ಅನಿಸಿಕೆ ಈ ಕಾದಂಬರಿ ಕುರಿತು ಎಂದು ಹೇಳುತ್ತಾ ನೋಡೋಣ ಬರ್ರಿ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ… ಅದು ಹೀಗಿದೆ… ಶಿವರಾಮ ಕಾರಂತರಂತೆ‌ ಪಶ್ಚಿಮ ಘಟ್ಟದೊಳಗೆ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಹರಿದಾಡುತ್ತದೆ ಈ ಕಾದಂಬರಿಯ ಕಥಾಹಂದರ. ಅದೇ ಕಾರಣಕ್ಕೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕಾಂಬರಿಕಾರರಾದ ದಿನೇಶ ಹುಲಿಮನೆ ಅವರು ಮೂಲತಃ ಅವರ ಹತ್ತಿರದವರೇ ಎಂಬುದು ಕಾದಂಬರಿಯ ಆಪ್ತತೆಯನ್ನು ಹೆಚ್ಚಿಸುತ್ತದೆ. ಕಾದಂಬರಿಕಾರರು ಪ್ರಾರಂಭದಲ್ಲೇ ಹೇಳುವ ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ. ಆಧುನೀಕರಣ, ಸಂಪ್ರದಾಯ, ಸಂಬಂಧ, ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿಯನ್ನು ಓದಲೇಬೇಕು… ಈ ಕಾದಂಬರಿ ದಿನೇಶ ಹಲಿಮನೆಯವರ ಮೊದಲ ಕಾದಂಬರಿ ಎಂದರೆ ಒಂದು ಕ್ಷಣ ಬೆರಗಾಗಬೇಕು ನಾವು ಅಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ..! ಬರವಣಿಗೆ ಎಲ್ಲರಿಗೂ ಒಲಿಯುವುದಲ್ಲ. ಅದೂ ಕಾದಂಬರಿಯನ್ನು ಬರೆಯಲು ಬಹಳ ತಾಳ್ಮೆ ಬೇಕು. ತಮ್ಮ ಮೊದಲ ಪ್ರಯತ್ನದಲ್ಲಿಯೇ ದಿನೇಶ‌ ಹಲಿಮನೆಯವರು ಗೆದ್ದಿದ್ದಾರೆ. ಹೌದು, ಈ ಕಾದಂಬರಿಯಲ್ಲಿ ತೇಜಸ್ವಿಯವರ ಬರವಣಿಗೆಯ ಛಾಯೆ ದಟ್ಟವಾಗಿದೆ ಎಂಬುದೂ ನಿಜ. ಓದುತ್ತಿರುವಾಗ ಹಲವೆಡೆ ಚಿದಂಬರ ರಹಸ್ಯದ ಮುಂದುವರಿದ ಭಾಗವೇ ಇದು ಎಂದು ಎನ್ನಿಸಿದ್ದು ನಿಜವೂ ಹೌದು. ಆದರೆ ಕಾದಂಬರಿಯ ಉತ್ತರಾರ್ಧದಲ್ಲಿ ಆ ನೆರಳಿನಿಂದ ಹೊರಬಂದು ನಾಗಾಲೋಟದಲ್ಲಿ ಮುಂದೆ ಸಾಗಿದ್ದಾರೆ ದಿನೇಶ ಹಲಿಮನೆಯವರು. ನಡುನಡುವೆ ಬರುವ ನಾಗಜ್ಜಿಯ ಪಾತ್ರ ನನಗೆ ಕಾರಂತರ ಮೂಕಜ್ಜಿಯನ್ನೊಮ್ಮೆ ನೆನಪಿಸಿತು ಎಂದರೆ ಅತಿಶಯೋಕ್ತಿಯೇನಲ್ಲ ಎಂಬುದು ನನ್ನ ಭಾವನೆ..! ಎತ್ತು ಕಾಣೆಯಾದಾಗ ಬೈರ ಕಾಡಿನ ನಡುವಿನಲ್ಲಿರುವ ಹುಲಿದೇವರ ಬನಕ್ಕೆ ಬಂದು ಹುಲಿದೇವರ ಕಲ್ಲಿಗೆ ದೂರದಿಂದಲೇ ಕೈಮುಗಿಯುವ ಸನ್ನಿವೇಶ, ಜನರ ನಂಬಿಕೆ, ಹಾಗೂ ಭಯ ಎರಡರ ಪ್ರತಿರೂಪವೂ ಹೌದು. ಹಿಂದೆಲ್ಲ ಹುಲಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಅಲ್ಲಲ್ಲಿ ಹುಲಿಗಳ ತಾಣವನ್ನು ಗುರುತಿಸುವುದಕ್ಕಾಗಿಯೇ ಹುಲಿದೇವರ ಕಟ್ಟೆ, ಹುಲಿಮನೆ, ಹುಲಿಗುಡಿ, ಹುಲೇಕಲ್ ಅಥವಾ ಹುಲಿಕಲ್ಲು, ಹುಲಿಕಟ್ಟೆ, ಹುಲಿಯೂರು, ಇತ್ಯಾದಿ ಹೆಸರುಗಳು ಜನಿಸಿದ್ದು. ಅಂತಹ ಹೆಸರುಗಳು ಅಸಂಖ್ಯ. ಇಲ್ಲಿ ಬೈರ ಹುಲಿಯಪ್ಪ ದೇವರ ಬಳಿ ಬಂದು ಕೆಂಪನಿಗೆ ಏನೂ ಆಗದೆ ಇರಲಿ, ದೊಡ್ಡ ಹಬ್ಬಕ್ಕೆ ಒಂದು ಬಾಳೆಕೊನೆ ಒಪ್ಪಿಸಿಕೊಡ್ತೀನಿ ಎಂದು ಹರಕೆ ಹೊರುತ್ತಾನೆ. ಅದೂ, ಹುಲಿದೇವರ ಕಲ್ಲಿನ ಬಳಿಗೆ ಹೋಗದೇ..! ಕೆಂಪ ಎಂಬ ಎತ್ತನ್ನು ಒಂದು ಪ್ರಾಣಿ ಎಂದು ನೋಡದೇ ತನ್ನ ಮನೆಯ ಸದಸ್ಯನೇನೋ ಎಂದು ಭಾವಿಸುವ ಬೈರ, ಹುಲಿದೇವರ ಕಲ್ಲಿನ ಬಳಿ ಹೋದರೆ ಮೈಲಿಗೆ ಆಗುತ್ತದೆ ಎಂದೂ ಯೋಚಿಸುತ್ತಾನೆ..! ಹುಲಿಯನ್ನೂ ಒಂದು ಪ್ರಾಣಿ ಎಂದು ಭಾವಿಸದೇ ಒಂದು ದೇವರಾಗಿ ಕಾಣುತ್ತಾನೆ. ಕೊಲ್ಲುವ ಹುಲಿಯೂ ದೇವರೇ… ಸಾಯುವ ಎತ್ತೂ ದೇವರೇ ಎಂಬುದು ಭಾರತೀಯ ಜೀವನ ದರ್ಶನ. ಇಂತಹ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಸುಂದರವಾಗಿ ವೈಬವಿಕರಿಸಲ್ಪಟ್ಟಿದೆ… ದೊಡ್ದಬ್ಬ ಅಥವಾ ದೀಪಾವಳಿ ಹಬ್ಬದ ಸಡಗರ, ಸೊಬಗು, ಆಚರಣೆಗಳು, ಹಸುಗಳಿಗೆ ಬೇಕಾದ ದಂಡೆ ಹುರಿ ಹೊಸೆಯುವಂತಹ ಪದ್ದತಿಗಳು ಕಾದಂಬರಿಯ ಮೊದಲಲ್ಲಿ ಸೊಗಸಾಗಿ ಚಿತ್ರಿತವಾಗಿವೆ. ಇದೇ ಆಚರಣೆಗಳನ್ನು ಕಾದಂಬರಿಯ ಅಂತ್ಯದಲ್ಲಿ, ನಿರುತ್ಸಾಹದಿಂದ, ಯಾಂತ್ರಿಕವಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರ ಕಾದಂಬರಿ ಸಾಗಿ ಬಂದ ಕಾಲಘಟ್ಟವನ್ನು ಹಾಗೂ ನಮ್ಮ ಇಂದಿನ ಬದುಕು ಸಾಗಿಬಂದ ಕಾಲಘಟ್ಟವನ್ನೂ ಚಿತ್ರಿಸಿದ್ದಾರೆ. ಬೂರೆ ಹಬ್ಬ, ಬೂರ್ಗಳು, ಬಿಂಗಿಪದ, ಕಹಿ ಸವತೆಯನ್ನು ತಂದು ಹಂಡೆಗೆ ಕಟ್ಟಿದ್ದು, ಹಬ್ಬದ ದಿನ ಒಬ್ಬರ ಮನೆಯಲ್ಲಿ ಜಾಗಟೆ ಸದ್ದು ಮುಗಿಯುತ್ತಿದ್ದಂತೆ ಮೊತ್ತೊಂದು ಮನೆಯಿಂದ ಕೇಳಿಬರುವುದು, ದನ-ಕಾರುಗಳನ್ನು ಬೆಚ್ಚುವುದು ಇತ್ಯಾದಿ ವಿವರಗಳನ್ನು ಓದುತ್ತಿರುವಾಗ, ಹಬ್ಬದ ಸೊಗಸು ಮೊತ್ತೊಮ್ಮೆ ನಮ್ಮ ಕಣ್ಣು-ಮನಸುಗಳಲ್ಲಿ ತುಂಬಿಕೊಳ್ಳುತ್ತದೆ. ವಿಳ್ಯದ ಎಲೆಯಿಂದ ದೃಷ್ಟಿ ತೆಗೆಯುವ ನಂಬಿಕೆ, ಕೊಟ್ಟೆ ಕಡುಬು ಮಾಡುವ ಬಗೆ, ಬಿಂಗಿ ಪದ ಹಾಡಲು ಬರುವವರಿಗೆ ಹೋಳಿಗೆ-ಕಡುಬು ಕೊಡುವ ಸಂಪ್ರದಾಯ ಇತ್ಯಾದಿಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರ… ಕುರಿ ಕಡಿದು ಬಾಡೂಟ ಮಾಡುವುದೇ ಆಗಿದ್ದರೂ ಅಲ್ಲಿ ಹಿಂಸೆ ಆಗಬಾರದು ಎಂಬ ಒಂದು ನಂಬಿಕೆ ಹಳ್ಳಿಗಳಲ್ಲಿ ಈಗಲೂ ಇದೆ. ಅದನ್ನೇ ಮಾದಿ ಈರನಿಗೆ “ಥೂ! ಹುಚ್ಚು ಮುಂಡೇಗಂಡಾ, ನಾಲ್ಕೈದು ಕೊಚ್ಚು ಹಾಕಿ ಕಡದ್ಯಂತಲ್ಲೋ, ಎರಡು ಕೊಚ್ಚಿಗೂ ತುಂಡಾಗ್ದೆ ಕುರಿ ಬಿದ್ದು ಒದ್ದಾಡ್ತಂತೆ, ಹಂಗೆಲ್ಲಾ ಮಾಡಿದ್ರೆ ಪಾಪ ಬತೈತೆ, ಕುರಿನಾ ಒಂದೇ ಕೊಚ್ಚಿಗೆ ಕಡಿದ್ರೆ ಸರಿ, ಅದಿಲ್ಲಾ ಅಂದ್ರೆ ನನ್ನ ಕೈಯಾಗೆ ಆಗಲ್ಲಾ ಅಂತ ಸುಮ್ನೇ ಇರಬೇಕಪ್ಪ. ಅದು ಬಿಟ್ಟು ಪರ ಊರೋರ ಮುಂದೆ ಹಿರೇತನ ಎಂತಾಕೆ ಮಾಡೋದು“ ಎಂದು ತಾರಾಮಾರಾ ಬೈದು ಹೇಳುತ್ತಾಳೆ. ಕಾದಂಬರಿಕಾರರು ಈ ತರಹದ ಸಣ್ಣಸಣ್ಣ ವಿವರಗಳನ್ನೂ, ಸೂಕ್ಷ್ಮ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಭವಿಷ್ಯದಲ್ಲಿ ಇನ್ನೂ ಸೊಗಸಾದ ಕೃತಿಗಳನ್ನು ಬರೆಯಬಲ್ಲರು ಎಂಬ ನಂಬಿಕೆ ಮೂಡಿಸಿದ್ದಾರೆ… ಬೈರ ನಿಧನನಾಗಿದ್ದಾನೆ ಎಂಬುದನ್ನು ತಿಳಿದ ನಾಯಿ, ಕೊಟ್ಟಿಗೆಯಲ್ಲಿದ್ದ ಎತ್ತುಗಳೂ ನೀರು, ಆಹಾರ ಮುಟ್ಟದೇ ಇದ್ದವು ಎಂದು ಚಿತ್ರಿಸುವ ಕಾದಂಬರಿಕಾರರು ಮಾನವನಿಗಿಂತ ಮೂಕ ಪ್ರಾಣಿಗಳೇ ಮೇಲು ಎಂಬ ಒಂದು ಝಲಕ್ ನೀಡುತ್ತಾರೆ. ಹಳ್ಳಿಗಳಲ್ಲಿ ಜಾತಿ ಜಾತಿಗಳು ಅಸ್ತಿತ್ವದಲ್ಲಿದ್ದರೂ ಅವರ ನಡುವೆ ಇರುವ ಸಾಮರಸ್ಯ ಹೇಗೆ ಕೆಲವರ ಕುತಂತ್ರ, ಸ್ವಾರ್ಥ, ದುರಾಸೆ, ನೀಚತನಗಳಿಂದ ಹಾಳಾಗುತ್ತದೆ, ಹಾಳಾಗುತ್ತಿತ್ತು ಎಂಬ ವಿಷಯ ಪ್ರಸ್ತಾಪಿಸುತ್ತಾ ಕಾದಂಬರಿ ಬೆಳೆಸುತ್ತಾ ಹೋಗಿದ್ದಾರೆ. ಪ್ರೀತಿ, ಪ್ರೇಮ, ಬದುಕು ಕಟ್ಟಿಕೊಳ್ಳಲು ಪಟ್ಟಣಕ್ಕೆ ವಲಸೆ ಹೋಗುವುದು, ಮುಂದುವರಿದು ವಿದೇಶಕ್ಕೂ ಹೋಗುವುದು, ಅವುಗಳಿಂದ ಕುಟುಂಬ ಮಟ್ಟದಲ್ಲಿ ಆಗುತ್ತಿರುವ ಸಂಕಷ್ಟಗಳು, ತಂದೆ, ಅಣ್ಣ ತೀರಿದರೂ ವಿಷಯ ತಿಳಿಸಲಾಗದ ಪರಿಸ್ಥಿತಿ ಇಂತಹ ಹಲವಾರು ವಿಷಯಗಳು, ನಮ್ಮ ಇಂದಿನ ಬದುಕಿನ ಪ್ರತಿಫಲನವೇ ಸರಿ, ಮತ್ತು ಕಾದಂಬರಿರಕಾರು ಅವುಗಳನ್ನು ಎಲ್ಲೂ ಕೃತಕವೆನ್ನಿಸುವಂತೆ ಬರೆದಿಲ್ಲ. ಬಲಿಷ್ಟರಾದವರು ತಮ್ಮ ಸ್ವಾರ್ಥಕ್ಕೆ ಈ ಕುಟುಂಬಕ್ಕೆ ಕಟ್ಟಿ ಕೊಡಲು ಹೊರಟಾಗ ಬರುವ ಒಂದು ವಾಕ್ಯ “ಕಾನ್ಮನೆಯ ಕಾಲುದಾರಿಯಲ್ಲಿ ಹುಲ್ಲು ಬೆಳೆಯದಿರಲಿ“ ಎಂಬುದು ಇಷ್ಟವಾಯಿತು. ನಮ್ಮ ಮನದ ದಾರಿಯಲ್ಲೂ ಹುಲ್ಲು ಬೆಳೆಯದಿರಲಿ, ಅಂದರೆ ನಮ್ಮ ಮನದಲ್ಲೂ ಉತ್ತಮ ವಿಚಾರಗಳು ಪದೇಪದೇ ಓಡಾಡುತ್ತಾ ಇರಲಿ… ಹೇಗೆ ಹಿಂದುಳಿದವರನ್ನು ಕೆಲವು ಸ್ವಾರ್ಥಿಗಳು ಬಳಸಿಕೊಳ್ಳುತ್ತಾರೆ, ಹೇಗೆ ಕೆಲವು ತತ್ವಗಳು ಜನರನ್ನು ಹಾಳುಮಾಡುತ್ತವೆ. ಅನ್ಯಧರ್ಮದ ಸಂಘಟನೆಗಳ ಮುಖವಾಡ ಹೇಗೆ ನಿಧಾನವಾಗಿ ಬಯಲಾಗುತ್ತದೆ, ಹೇಗೆ ಅನ್ಯಾಯವಾಗಿ ಪಾಪದ ಜನರು ತಮ್ಮದಲ್ಲದ ತಪ್ಪಿಗೆ ನಷ್ಟ, ಸಂಕಟ ಅನುಭವಿಸುತ್ತಾರೆ ಎಂಬ ವಿವರಗಳನ್ನೂ ಕಾದಂಬರಿಕಾರರು ಸೊಗಸಾಗಿ ಸೇರಿಸಿದ್ದಾರೆ… ಕಾದಂಬರಿ ಮೊದಮೊದಲು ತೇಜಸ್ವಿಯವರ ಬರಹಗಳಂತೆ ಆಪ್ತವಾದರೆ, ನಂತರ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ ಕೂಡಾ..! ವಿವಾಹದ ಬಗ್ಗೆ “ಮೇದಿನಿ ಮಠ“ ದ ಸ್ವಾಮಿಗಳ ನಿಲುವು, ಅವರನ್ನು ತಮ್ಮೆಡೆಗೆ ಸೆಳೆಯಲು ಹೋಗಿ ತಾವೇ ಕಕ್ಕಾಬಿಕ್ಕಿಯಾಗುವ ದೊಡ್ಡೇಗೌಡ ಮತ್ತು ಮಹಾಬಲ, ಅಲ್ಲಿನ ಚರ್ಚೆಗಳು ನಮ್ಮನ್ನು ವಿಚಾರ ಮಾಡಲು ಪ್ರಚೋದಿಸುವುದೂ ನಿಜ… ಆದರೆ ಅಂತ್ಯ ನನಗೆ ತೃಪ್ತಿ ತರಲಿಲ್ಲ. ಅಂತ್ಯವನ್ನು ಓದುಗರ ಕಲ್ಪನಾಶಕ್ತಿಗೇ ಬಿಡುವುದು ಒಂದು ಕಥನ ತಂತ್ರ ಹೌದಾದರೂ, ಇನ್ನಷ್ಟು ಮುಂದುವರಿಸಬಹುದಿತ್ತೇನೋ ಎನ್ನಿಸಿದ್ದಂತೂ ನಿಜ… *********** ಕೆ.ಶಿವು.ಲಕ್ಕಣ್ಣವರ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ

ಅಸಹಾಯಕ ಆತ್ಮಗಳು ಸಣ್ಣ ಕಥೆಗಳು ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು ಮತ್ತು ಅವರುಗಳ ಬದುಕಿನಲ್ಲಿ ಬರುವ ಅನಿರೀಕ್ಷಿತ ವ್ಯಕ್ತಿಗಳು ಅವರನ್ನು ವೇಶ್ಯಾವಾಟಿಕೆಯ ಕೂಪದೊಳಗೆ ಬೀಳುವಂತೆ ಮಾಡುತ್ತಿವೆ. ಇಂತಹ ಹತ್ತಾರು ಹೆಣ್ಣುಮಕ್ಕಳನ್ನು ಲೇಖಕರು ಖುದ್ದಾಗಿ ಭೇಟಿಯಾಗಿ ಅವರ ಬಾಯಿಂದಲೇ ಕೇಳಿ ತಿಳಿದ ಅವರ ಬದುಕಿನ ಕರುಣಾಜನಕ ಕತೆಗಳೇ ಈ ಪುಸ್ತಕದ ಒಳಗಿರುವ ಆತ್ಮಗಳು. ಪ್ರಿಯರೆ,ನನ್ನ ‘ಅಸಹಾಯಕ ಆತ್ಮಗಳು’ my lang ನಲ್ಲಿ e-book ರೂಪದಲ್ಲಿ ಪ್ರಕಟವಾಗಿದೆ.ಬೆಲೆ ಕೇವಲ99=00 ರೂಪಾಯಿಗಳು.ಪುಸ್ತಕ ಕೊಳ್ಳುವ ರೀತಿ.ನಿಮ್ಮಮೊಬೈಲಲ್ಲಿ mylang ಡೌನ್ ಲೋಡ್ ಮಾಡಿ ಲಾಗಿನ್ ಆಗಿ ನಿಮಗೆ ಅನುಕೂಲವಾದ ರೀತಿಯಲ್ಲಿ online ನಲ್ಲಿ ಹಣ ಸಂದಾಯ ಮಾಡಿ -ಪುಸ್ತಕ ಪಡೆಯಿರಿ.

ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ

ಪ್ರಭುಲಿಂಗ ಲೀಲೆ ಚಾಮರಸ  ಚಾಮರಸನ ಮಹಾಕಾವ್ಯ ‘ಪ್ರಭುಲಂಗಲೀಲೆ’ಯೂ..! ಚಾಮರಸನು ಕನ್ನಡದ ಪ್ರಸಿದ್ಧ ಕವಿ. ಇವರು ‘ಪ್ರಭುಲಿಂಗ ಲೀಲೆ’ಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯವಾಗಿದೆ. ಇವರು ಇಮ್ಮಡಿ ಪ್ರೌಢದೇವರಾಯನ ರಾಜಾಶ್ರಯದಲಿದ್ದವನು. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವನಿಗೆ ಸಂದಿದ ಬಿರುದುಗಳು… ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ‘ಪ್ರಭುಲಿಂಗಲೀಲೆ’ಯ ಕರ್ತೃ ಈತ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರ ಮಾರ್ಗಸಾರೋದ್ಧಾರ, ಅನ್ಯಮತ ಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗ ಇಲ್ಲವೇ ನಾಗಣಾಪುರ ಎಂದು ಹೇಳಲಾಗಿದೆ…. ಹರಿಹರ, ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯನಾಗಿದ್ದನು. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ‘ಪ್ರಭುಲಿಂಗಲೀಲೆ’ ಮಧ್ಯಮ ಗಾತ್ರದ ಕಾವ್ಯವಾಗಿದೆ. ‘ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ… ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ… ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ… ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸ ಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ… ಚಾಮರಸನ ‘ಪ್ರಭುಲಿಂಗಲೀಲೆ’ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ..! ಹೀಗೆಯೇ ಚಾಮಾರಸನ ಕಾವ್ಯ ಸಾಗುತ್ತದೆ… ಲೇಖನ ಸಹಕಾರ– ಎಚ್. ವೃಷಬೇಂದ್ರಸ್ವಾಮಿಯವರ ಕೃತಿ. ******** ಕೆ.ಶಿವು.ಲಕ್ಕಣ್ಣವರ                  

ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ವಿರಹಿ ದಂಡೆ ಬಾನಿಗೂ ಭೂವಿಗೂ ಸಾಕ್ಷಿಯಾಗಲಿ ಕಡಲಂಚಿನಾ ವಿರಹಿ ದಂಡೆ….  ಯುಗಯುಗಗಳು ಜಾರಿದರೂಪ್ರೀತಿಯಭಾಷೆಯೆಂದಿಗೂ ಬದಲಾಗದಿರುವುದು‌ ಸರ್ವಕಾಲಿಕ ಸತ್ಯ. ಹಠಾತ್ ಸುರಿದ ಮಳೆಗೆ ದಂಡೆ ನಾಚಿದೆಎಂಬ ಕವಿ ನುಡಿಯಂತೆ                                            ಕಣ್ಣಂಚಿನಕುಡಿನೋಟಅರಿಯುವುದುಎದೆಯುಸಿರಬಡಿತಗಳು…..ಕಂಗಳಿಗೂ ಭಾರವಾದ ಮನ ಹೃದಯದಲ್ಲಿ ಮಿಡಿಯುವುದು..ಎಂಬಂತೆ.. ಬಹುತೇಕ ಮನಸುಗಳು ಮೀನಿನಂತೆ..! ಕಡಲಾಚೆ ದಂಡೆಯಲಿ ವಿಲವಿಲ ಒದ್ದಾಡಿ,ವಿರಹದಲಿ ಬೆಂದಂತೆ..!.. ಆತ್ಮೀಯ ಸಹೃದಯಿ ,ಇದ್ದುದನ್ನು ಇದ್ದ ಹಾಗೆ ವರದಿ ನೀಡಿ ಮನವನ್ನು ಹಗುರಮಾಡಿಕೊಳ್ಳುವ,ಅನ್ಯಾಯದ ವಿರುದ್ಧ ಒಂಟಿಯಾಗಿಯಾದರೂ ಹೋರಾಟಮಾಡುವ,ಮೃದುಸ್ವಭಾವದಮನೋಭಾವಹೊಂದಿರುವಕವಿಮಿತ್ರ,ಪತ್ರಕರ್ತ   ಶ್ರೀ ನಾಗರಾಜಹರಪನಹಳ್ಳಿಯವರ ಮುದ್ದಾದಕವನ ಸಂಕಲನ *ವಿರಹಿ ದಂಡೆ** ಕೈಸೇರಿದಾಗ ಕುತುಹಲ… ಎಲೆಗಳು ಉದುರುವ ಸಮಯ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಕಾಲ…ದಲೊಂದು ಹೊಸ ಚೈತನ್ಯ..!! ಪ್ರೇಮವೆಂದರೆ ಕಾಮವೆಂದು ಪೂರ್ಣವಿರಾಮವಿಟ್ಟರೆ ಮುಗಿಯಿತೇ?? ಪ್ರೇಮವೆಂದರೆ ಗಹಗಹಿಸಿ ಮುಸುಕುಹಾಕಿ ಕತ್ತಲೆಯಲಿ ನರಳಾಡಲು ಪ್ರೀತಿಯ ಪಟ್ಟ ಬೇಕೆ..??? ಅಲ್ಪನ ಮನಸು ಕೊಚ್ಚೆಯಲ್ಲಿ…! ವಿಕೃತನಾಗಿ ಅಲೆದಾಡುವ ಕಾಮುಕನಂತೆ..!! ಇವೆಲ್ಲ ಪ್ರೀತಿ, ಪ್ರೇಮದ ಕೊನೆಯ ಪುಟಗಳಾಗಿ ವಿರಮಿಸಿದರೆ ಸಾಕೆ??? ಎಂಬ ಪ್ರಶ್ನೆಗೆ??.. ವಿರಹದ ಹಗಲ ಸುಡಬೇಕಿದೆ ತಣ್ಣಗೆ ದಂಡೆಯಲಿ ಕುಳಿತು… ಅಲ್ಲಿ ಪ್ರೇಮದ ಗಿಡ ನೆಡುತ್ತೇನೆ ನೀ ನೀರು ಹಾಕುವುದಷ್ಟೆ ಬಾಕಿ……  ಅಧ್ಬುತಚಿಂತನೆ…ಪ್ರೀತಿಗೊಂದು ಹೊಸ ಭಾಷೆ..  ಕವಿಯ ಮನಸ್ಸು ಕೇವಲ ಪ್ರೇಮವಷ್ಟೆ ಅಲ್ಲ,ಆ‌ ಪ್ರೀತಿಗೆ ಪರಿಸರವು ಪೂರಕವೆಂಬಂತೆ ಭಾವಿಸಿ ಸದಾ ಪಕೃತಿಯ ಜೀವಾಳವಾಗಿ ತನ್ನಂತರಂಗದ ಸಂಗಾತಿಯನ್ನು ಪ್ರತಿಕ್ಷಣದಲ್ಲೂ ಹೃದಯದಲ್ಲಿಟ್ಟುಕೊಳ್ಳಬೇಕೆನ್ನುವ ತವಕ. ಕವಿ ನಿಜವಾಗೂ ಬದುಕನ್ನು ಬಹುವಾಗಿ ಪ್ರೀತಿಸುವ ವ್ಯಕ್ತಿ…..  ಕಡಲು ನೀರಾಳ..! ಅದಕ್ಕೆಂದು ಭಯವಿಲ್ಲ..!ಕರಗುವೆನೆಂಬ ಆತಂಕವಿಲ್ಲ..! ಜಗದ ಪ್ರಳಯಕ್ಕೂ,ಜಗದ ಉಳಿವಿಗೂ ಸಾಮರಸ್ಯದ ಕೊಂಡಿ…!   ಕವಿಯ ತುಡಿತ. ಸಮುದ್ರ ನಿದ್ದೆ ಹೋಗಿದೆ ಗೆಳತಿ ವಿರಹಿ ದಂಡೆಗೆ ಮೌನ ಆಕಾಶಬಾಗಿ ಮುನಿಸಿ ಕುಳಿತಿದೆ ಗಾಳಿ ಮಿಸುಗದೇ ನಿಂತಿದೆ ನದಿಗೆ ಈಗ ಧ್ಯಾನದ ಸಮಯ ಮಾತು ಮೂಕವಾಗಿ ಸೋತು ಕುಳಿತಿದೆ ಭುಜಕೆಭುಜ ಬೆಸೆದ ಹೊತ್ತು… ಮಂಚದ ತುಂಬಾ ಎಕಾಂಗಿ ಕನವರಿಕೆಗಳು…! .. ಕಾಯುವ ಸಂಯಮ ವಿರಹಿಗೆ ಅನಿವಾರ್ಯ…!ಪ್ರೀತಿಯ ತುಮುಲಗಳು,ಕನವರಿಕೆಗಳು ,ಕನಸುಗಳು,ಎಲ್ಲವೂ ಪ್ರೇಮಮಯವೇ…ಎಲೆಯದುರಿದ ಮರವೂ..ಪ್ರೇಮ ನಶೆಗೆ ಬಯಲಾದಂತೆ.ಕಂಗಳ ಕಾತರಿಕೆ ಉದರಾಗ್ನಿಗೆ ತುಪ್ಪ ಸುರಿದಂತೆ..! ಪ್ರಾಣಿ,ಪಕ್ಷಿ,ಗಿಡ ಬಳ್ಳಿ, ಚರಾಚರಗಳೆಲ್ಲ ಪ್ರೇಮಿಯ ಆಣತಿಯಂತೆ ನವಿಲು‌ನರ್ತಿಸಿದಂತೆ…! ಬಾನು ಭೂಮಿ ಅದೆಷ್ಟು ದೀರ್ಘವಾಗಿ ಚುಂಬಿಸುತ್ತೆ ನಾಚಿಕೆಯೇ ಇಲ್ಲ,ಅದು ಬಟ್ಟಬಯಲಿನಲಿ ನಟ್ಟ ನಡು ರಸ್ತೆಯಲಿ ನವ ವಧುವರರಂತೆ…!  ಪ್ರಕೃತಿಗೆ ಮಳೆಯಲ್ಲಿಯೇ ಮಿಲನೋತ್ಸವ..ಬಾನು ಭುವಿ ಒಂದಾದರೆ ಮಾತ್ರ ನಮ್ಮ ಒಡಲು ತುಂಬುವುದು…ಹಸಿರು ಉಸಿರಾಗಲೂ ಸಮಯ ಬೇಕು.  ಹಿಂದಿನಂತೆ ಮಳೆಗಾಲವಿಲ್ಲ..ಬರಗಾಲದ ಛಾಯೇ..! ಧರೆತಣಿಯಲು,ಪ್ರವಾಹ ಉಕ್ಕಿಹರಿದರೂ ಭೂಮಿಯ  ವಿರಹದ ತಾಪ ಕಡಿಮೆಯಾಗಿಲ್ಲ…ಕಾರಣ                ಕಾದ ಕಾವಲಿಯಂತಿದ್ದ ವಿರಹದ ಬೇಸಿಗೆ  ಮಳೆ ಮೋಡ ಬಿಗಿದಪ್ಪಿದರೂ  ಕರಗದಾ ಮೋಹ….! ಹರೆಯದ ಬಯಕೆಗಳು ನೂರಾರು..ಕವಿಗೆ ಆಗಾಗ ಬುದ್ದನ ನೆನಪಾದಂತಿದೆ.. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷ ದ ಬೆನ್ನು ಹತ್ತಲಾರೆ ಬುಧ್ದನಾಗಲಾರೆ… ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ..!! ಇದ್ದು ಜಯಿಸಬೇಕು ಎಂಬ ಧೀಮಂತ ಮನಸ್ಸಿನವರು, ಕವಿ ಪಕ್ಕಾ ನಂಬಿಗಸ್ಥ.  ಪ್ರೇಮಿ…! ಪ್ರೀತಿಗೆ ಬೆನ್ನುತೋರಿಸದೆ ಹೃದಯದಲ್ಲಿಟ್ಟು ಪೊರೆದವ. ಕವಿಗೆ ತನ್ನವರನ್ನು ಬಿಟ್ಟಿರುವಾಗೆಲ್ಲ..ಕಡಲ ದಂಡೆ ವಿರಹವನ್ನು ತಣಿಸುವ ತಾಣವಾಗಿದೆ…. ವಿಶಾಲ ಕಡಲನ್ನು ಸೇರುವ ನದಿಗಳು ಗುಡ್ಡಗಳನ್ನು ,ಕಾಡುಗಳನ್ನು, ಇಳಿಜಾರುಗಳನ್ನು  ಲೆಕ್ಕಿಸದೇ ಹಾತೊರೆವ ಜಾತಕ ಪಕ್ಷಿಯಂತೆ ಎಡರು ತೊಡರುಗಳ ದಾಟಿ ನಿರ್ಭಯವಾಗಿ ಸಾಗರವ ಮುತ್ತಿಡಲು ಹವಣಿಸುವಂತೆ….ತನ್ನ ಕೊನೆಯ ಪಯಣ ನಿನ್ನಲ್ಲೆಯೆನ್ನುವಂತೆ ಧಾವಿಸುವ ಧಾವಂತಕೆ ಕವಿ ಪ್ರೀತಿಯ ಹಸಿರು ನಿಶಾನೆ ತೋರಿಸಿದ್ದಂತೂ ಸತ್ಯ…! ಒಟ್ಟಾರೆ ಕವಿ ಶ್ರೀ ನಾಗರಾಜ ಹರಪನಹಳ್ಳಿಯವರ ಸುಕೋಮಲ ಪ್ರೇಮ ಗೀತೆಗಳು ವಿರಹದ ನೋವನ್ನು ಅನುಭವಿಸುತ್ತಾ ವಿರಹದ ನೂರುಭಾವಗಳು ತಾವು ಕಂಡಂತೆ ಬಿತ್ತರಿಸುತ್ತಾ ಸಾಗುವಾಗ ಪ್ರೇಮ ಕವಿ ನಿಸಾರ ಅಹಮ್ಮದ ನೆನಪಾಗದಿರಲಿಲ್ಲ ನನಗೆ… ಉತ್ತಮ ಹನಿಗವನಗಳು ಅಲ್ಲಿ ಬಟ್ಟಲು ಹೂವಿನಂತೆ ಅರಳಿ ನಕ್ಕಿದ್ದಂತೂ ನಿಜ..!ಕವಿಯ ಮನಸು ಪಕ್ಕಾ ಮಾಗಿದೆ. ಒಲವಾಗಲು ಹೆಚ್ಚೇನು ಬೇಕಿಲ್ಲ ಸೊಗಸಾದ ಒಂದು ಪ್ರೇಮದ ಹಾಡು ಸಾಕು….!!! ಶ್ರೀ ನಾಗರಾಜರವರ *ವಿರಹಿದಂಡೆ *ಅರಿತವನಿಗೆ  ಖಂಡಿತ ನಿಸರ್ಗದ ಅಧ್ಬುತ ಪ್ರೇಮದ ಕೊಡುಗೆಯ ದರ್ಶನವಾಗುವುದಂತೂ ದಿಟ..!ಅವರವರ ಭಾವಕ್ಕೆ..ನನ್ನರಿವಿಗೆ ತೋಚಿದ್ದು…ಇನ್ನೂ ಹೆಚ್ಚೆಚ್ಚು ಪ್ರೇಮ ಗೀತೆಗಳು ದುಂಬಿಯಂತೆ ಝೆಂಕರಿಸಲೆಂದು ಶುಭಹಾರೈಸುವೆ…. ***************** ಶಿವಲೀಲಾ ಹುಣಸಗಿ

ನಾನು ಓದಿದ ಪುಸ್ತಕ Read Post »

You cannot copy content of this page

Scroll to Top