ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ವಚನ ಚಿಂತನೆ

ಚಿಂತನೆ ಡಾ.ವೈ.ಎಂ.ಯಾಕೊಳ್ಳಿ ಕಾಮ ಕಾಲದ ಕಾಡುವ ಮಾಯೆ ನಳಲುಗತ್ತಲೆ ನೀನು ಮಾಯೆ ಸಂಗ ಸುಖದಿಂದ ಹಿಂಗುವರಾರು ಇಲ್ಲ ಬಿಗಿದ ಕುಚ,ಉರ ಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ‌ ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ ಕರಸ್ಥಳದ ಇಷ್ಟಲಿಂಗೇಶ್ವರಾ ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಒಂದು ವಿಶೇಷ ನೆಲೆಯಲ್ಲಿ‌ ನಿಲ್ಲುವ ವಚನ‌ ಇದು . ಇದನ್ನು ರಚಿಸಿದವನು ಮೆಡ್ಲೇರಿ ಶಿವಲಿಂಗನೆಂಬ ಹದಿನಾರನೆಯ ಶತಮಾನದ ವಚನಕಾರ.ಡಾ ವೀರಣ್ಣ ರಾಜೂರ ಅವರು ಸಂಪಾದಿಸಿದ ಸಂಕೀರ್ಣ ವಚನ ಸಂಪುಟ ೯ ರಲ್ಲಿ ಈತನ ೨೩ ವಚನಗಳು ದೊರಕಿವೆ.ಬಹಳ ವಿಶಿಷ್ಟವಾದ ಅಂಕಿತವನ್ನು ಈತ ಇರಿಸಿಕೊಂಡಿದ್ದಾನೆ.ಅವನ  ‘ಕರಸ್ಥಲದ ಇಷ್ಟ  ಲಿಂಗೇಶ್ವರ’ ಎಂಬ ಅಂಕಿತವೂ ಒಂದು ವಿಶೇಷವೇ. ಇವನ ವಚನಗಳನ್ನು‌ ಪರಿಭಾವಿಸಿದರೆ ದೊರಕಿದ ೨೩ ವಚನಗಳಲ್ಲಿ‌ ಮೂರ್ನಾಲ್ಕು ವಚನಗಳಲ್ಲಿ‌ ಮಾಯೆಯ‌‌ ಮಹಿಮೆಯನ್ನು ಬಣ್ಣಿಸುತ್ತಾನೆ. ಮಾಯೆಯ ನಿರಾಕರಣೆಗಿಂತ ಅದರ ಮಹಿಮೆಯನ್ನು‌ ಹೊಗಳುವ , ಅದನ್ನು‌ ಮೀರುವದು ಅಷ್ಟು ಸರಳವಲ್ಲ ಎಂಬ ಸರಳ ಸತ್ಯದ ನಿರ್ಧಾರ ಅವನ ವಚನಗಳಲ್ಲಿರುವದು ವಿಶೇಷವಾಗಿದೆ.‌ ಶರಣರ ಮಹತ್ವ ಇರುವದೇ ಇಲ್ಲಿ. ಸುಮ್ಮ ಸುಮ್ಮನೇ ಅವರು‌ ಮಾಯೆಯನ್ನು ಮೀರುವ  ಮಾತನಾಡುವದಿಲ್ಲ. ಅದು ಅಷ್ಟು ಸರಳವೂ ಅಲ್ಲ. ಅಂತೆಯೇ ಮೆಡ್ಲೇರಿ ಶಿವಲಿಂಗನೆಂಬ ಈ ವಚನಕಾರ  ಇಲ್ಲಿ ಮೋಹದ‌ ಮಾಯೆಯ ಸ್ವರೂಪವನ್ನು ವಿವರಿಸುತ್ತಾನೆ. ಕಾಮ ಕಾಡುವ ಮಾಯೆಯಾದರೂ ಗಂಡು ಹೆಣ್ಣುಗಳ ಸಂಗ ಸುಖದಿಂದ ಪಾರಾದವರು ಯಾರು? ಪಾರಾಗಬೇಕೆಂದು ಬಯಸಿದವರಾದರೂ ಪಾರಾಗಿದ್ದಾರೆಯೆ? ಶಿವನಾದರೂ‌ ಪಾರಾದನೇ,?ಎಂಬ ಅವನ‌ ಪ್ರಶ್ನೆ ನಿಜವಾದದ್ದಿದೆ.ಎಲ್ಲರೂ ಮಾತನಾಡುವ ವರೇ ಮೀರಿದವರು ಯಾರು? ಸರ್ವಜ್ಞ ಕವಿ ಮಾತಿನೊಳಗೆಲ್ಲರೂ ಶುಚಿ ವೀರ ಸಾಧುಗಳು ಎಂದು ಸುಮ್ಮನೇ ಎಚ್ಚರಿಸಿಲ್ಲ. ಆದ್ದರಿಂದಲೇ ವಚನಕಾರ  “ಬಿಗಿದ ಕುಚವು ಉರದ ಮಧ್ಯವು ಲಿಂಗಾಕಾರವು ಮಹೇಶ್ವರಗೂ ಪ್ರಿಯವು” ಎಂದು ಸಾಂಕೇತಿಕವಾಗಿ ಬಣ್ಣಿಸುತ್ತಾನೆ.ಇಡೀ ವಚನ ಒಂದು ಸಾಂಕೇತಿಕ ಭಾಷೆಯಲ್ಕಿಯೇ ಹೆಣೆಯಲ್ಪಟ್ಟಿರುವದು ವಿಶೇಷ. ಅದು ಕೇವಲ ಮೋಹವನ್ನು ಉಂಟು ಮಾಡುವ ದೇಹದ  ಅಂಗ ಭಾಗ ಮಾತ್ರವಾಗಿರದೆ ‘ಸನ್ಮೋಹ ಅಮೃತಸಾರವೂ ‘ಆಗಿರುವಂತೆ ಇಳೆ ಉತ್ಪತ್ಯಕ್ಕೆ ಆಧಾರವೂಆಗಿದೆ.ಹಾಗಾಗಿ ಲೋಕದಲ್ಲಿ ಜನಿಸಿದ ಮೇಲೆ ಗಂಡು ಹೆಣ್ಣೆಂಬ ಭಾವಕ್ಕೆ ಬಂಧಿಯಾದ ಮೇಲೆ, ಇಂಥ‌ “ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ‌ ಕರಸ್ಥಲದ ಇಷ್ಟಲಿಂಗೇಶ್ವರಾ! ” ಎಂದು ವಚನಕಾರ ಉದ್ಘಾರವೆತ್ತುತ್ತಾನೆ. ಇಡೀ ವಚನ ಮಾಯೆಯ ನ್ನು ಸಂಸಾರವನ್ನು ಗಂಡು ಹೆಣ್ಣಿನ ಒಲವನ್ನು ದೂಷಿಸದೆ ಅದು ಜಗತ್ತಿಗೆ ಅಗತ್ಯ.ಅದನ್ನು ಹೊಂದುವದರಲ್ಲಿ ಯಾವ ತಪ್ಪೂ ಇಲ್ಲ.ಆದರೆ ಅಲ್ಲೊಂದು ಸಾಮಾಜಿಕ ಒಪ್ಪಿತ ದಾರ್ಮಿಕ‌ ನೀತಿ ಇರಬೇಕಾದದ್ದು ಅವಶ್ಯ ಎನ್ನುವದನ್ನು ಸೂಚ್ಯವಾಗಿ ಚಿತ್ರಿಸಿದೆ. ಅಕ್ಕ ‘ಹಾವಿನ ಬಾಯ ಹಲ್ಲ ಕಳೆದು ಹಾವ ನಾಡಿಸ ಬಲ್ಲಡೆ ಹಾವಿನ ಸಂಗವೇ ಲೇಸ ಕಂಡಯ್ಯ’ ಎಂ ದಿರುವದಾಗಲಿ ಬಸವಣ್ಣನವರು ‘ಹೆಣ್ಣಿನಲಿ‌ ಮನವಾದಡೆ  ಮದುವೆಯಾಗುವದು’ ಎಂದಿರುವದಾಗಲಿ ಮಾಯೆಯನ್ನು ಹೊಂದಿಸಿಕೊಂಡು‌ಹೋಗುವದರಲ್ಲಿಯೇ ಮಾಯೆಯ ಗೆಲ್ಲುವ ವಿಧಾನವಿದೆ ಎಂದು ಸೂಚಿಸಿದ್ದರು ದಾಸಿಮಯ್ಯನವರು ಬಂದುದ ಬಳಸುವಳು ತಂದುದ ಪರಿಣಾಮಿಸುವಳು ಬಂಧುಗಳ‌ಮರೆಸುವಳು ಇದು‌ಕಾರಣ ದುಗ್ಳೆಯ ತಂದು ಬದುಕಿದೆನು ಕಾಣಾ ರಾಮನಾಥಾ ಎಂದು ತಮ್ಮ ಸ್ತ್ರೀಯನ್ನು ಸ್ತುತಿಸಿದ್ದರು. ಹೀಗೆ ವಚನಕಾರರ ನಂತರ ವಚನಕಾರರ ಸಾಲಿನಲ್ಲಿಯೆ ಬಂದ ಶರಣರೂ ಬಸವಾದಿ ಶಿವಶರಣರು ಸಾರಿದ ಧನಾತ್ಮಕ ಚಿಂತನೆಯನ್ನು ಮುಂದುವರೆಸಿದ್ದರು ಎನ್ನುವದಕ್ಕೆ ಇಂಥ ವಚನಗಳು ಸಾಕ್ಷಿಯಾಗುತ್ತವೆ.

ವಚನ ಚಿಂತನೆ Read Post »

ಇತರೆ, ಜೀವನ

ಕಾಲ ಎಂದಿಗೂ ನಿಲ್ಲುವದಿಲ್ಲ

ಸ್ಮಿತಾ ಭಟ್ ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು,ಹಾಗಿತ್ತು,ಏನೋ ನಡೆದಿತ್ತು, ಎಂದು ಇತಿಹಾಸ ಪುಟಗಳಿಂದ ಅಷ್ಟೊ ಇಷ್ಟೊ ತಿಳಿಯುತ್ತೇವೆ,ಮತ್ತೊಂದಿಷ್ಟು ನಮ್ಮ ಊಹೆ. ಕಾಲದ ಜೊತೆಗೆ ಎಲ್ಲವೂ ಉರುಳುತ್ತವೆ ಎನ್ನುವದು ನಿತ್ಯ ಸತ್ಯ. ಸವೆದ ಹೆಜ್ಜೆಗಳ ಜಾಡು ಎಷ್ಟರ ಮಟ್ಟಿಗೆ ಇಂದು ಉಳಿದುಕೊಂಡಿದೆ.ಎಲ್ಲವೂ ಮಸುಕಾಗುತ್ತಲೇ ಹೋಗುತ್ತದೆ. ಹೊಸ ನೀರಿಗೆ ಹಳೆಯ ನೀರು ಕೊಚ್ಚಿಹೋಗಿ ಸಮುದ್ರಸೇರಿ ಅಸ್ತಿತ್ವವನ್ನೇ ಕಳೆದುಕೊಂಡಂತೆ. ಆಳಿದ ರಾಜ, ಕಟ್ಟಿದ ಕೋಟೆ,ಜಾರಿಯಾದ ನಿಯಮ,ತ್ಯಾಗದ ಬದುಕು,ಮಾಡಿದ ಯುದ್ಧ ಮಹಾ ಮಹಾ ರೋಗ, ಪ್ರತಿಯೊಂದು ಅಂದರೆ ಪ್ರತೀಯೊಂದೂ ಕಾಲ ತನ್ನ ಗರ್ಭದೊಳಗೆ ಎಲ್ಲವನ್ನೂ ಕರಗಿಸಿ ಬಿಡುತ್ತದೆ.ಮರೆಸಿ ಬಿಡುತ್ತದೆ. ಕಾಲಕ್ಕೆ ಮಾತ್ರ ಆ ಶಕ್ತಿ ಇರುವದು. ಇಷ್ಟೆಲ್ಲ ಗೊತ್ತಿದ್ದೂ ನಾವೇಕೆ ಪ್ರತೀ ಸಂದರ್ಭದಲ್ಲೂ ಭಯ ಬೀಳುತ್ತೇವೆಯೋ ಗೊತ್ತಿಲ್ಲ. ಇಂದು ಇದ್ದಂತೆ ನಾಳೆ ಇರಲಾರದು ನಿತ್ಯವೂ ಬೆಳಗುವ ಸೂರ್ಯ ಹೊಸಭರವಸೆಯನ್ನಂತೂ ತರುತ್ತಾನೆ. ಆದರೆ ಅದಕ್ಕೆ ತರೆದುಕೊಳ್ಳುವ ಮನಸ್ಥಿತಿಯಾಗಲಿ, ದಾರಿಯಾಗಲಿ ನಮಗೆ ಗೋಚರಿಸುವದೇ ಇಲ್ಲ. ನಾಳೆ ನಮಗೇನಾಗುತ್ತದೋ,ನೌಕರಿ ಉಳಿಯುತ್ತದಾ? ಮನೆ ಖರೀದಿಸಲು ಆಗುತ್ತದಾ? ಏನೇನೋ ಕೆಲಸಗಳನ್ನು ಎತ್ತಿಟ್ಟುಕೊಂಡಿದ್ದೆ ಅದನ್ನೆಲ್ಲ ಮುಗಿಸುತ್ತೇನಾ? ಅಕಸ್ಮಾತ್ ಸತ್ತೇ ಹೋದರೆ!? ನಮ್ಮ ಆಲೋಚನೆಗಳು ಹೀಗೆ ಒಂದರ ಹಿಂದೊಂದು ಗಿರಕಿ ಹೊಡೆಯುತ್ತಲೇ ಹೋಗುತ್ತದೆ. ಬೇಕು ಎಲ್ಲವೂ ಬದುಕಿರುವವರೆಗೆ ನಿಜ ಆದರೆ ಬದುಕುವದೇ ಆಸೆಗಳಿಗೆ ಅಂತಾಗಬಾರದು ನಮ್ಮ ಸಮಯ ಯಾವ ಕ್ಷಣ ಬೇಕಾದರೂ ಮುಗಿಯಬಹುದು ಅದಕ್ಕೊಂದು ಸಿದ್ದತೆ ಸದಾ ಬೇಕು. ಬದುಕು ನಶ್ವರ ಎಂದು ಎದ್ದು ಹೊರಟ ಬುದ್ದನನ್ನು ನಾವು ಪ್ರೀತಿಸುತ್ತೇವೆ, ಆದರೆ ಅವನ ತತ್ವಗಳನ್ನು ಮರೆಯುತ್ತೇವೆ. ಜಗತ್ತಿಗೆ ಬರುವ ಅಪಾಯಗಳು ಇಂದು ನಿನ್ನೆಯದಲ್ಲ ಅಯಾಯಾ ಕಾಲಕ್ಕೆ ತಕ್ಕಂತೆ ಗಂಡಾಂತರಗಳು,ಅವಘಡಗಳು, ಪ್ರಕೃತಿ ವಿಕೋಪಗಳು,ಸಾವು ನೋವುಗಳು ಸಂಭವಿಸುತ್ತಲೇ ಬಂದಿದೆ. ಮತ್ತೆ ಹೊಸದಾಗಿ ರೂಪಗೊಂಡಿದೆ ಕೂಡಾ ಒಮ್ಮೆ ಪ್ರಳಯ ಕಾಲ ಸನ್ನಿಹಿತ ವಾದಾಗ  ವೈವಸ್ವತ ಮನುವನ್ನು ಕುರಿತು ವಿಷ್ಣು ಹೇಳುತ್ತಾನೆ. ಸದ್ಯದಲ್ಲೇ ಮಹಾ ಪ್ರಳಯ ವೊಂದು ಸಂಭವಿಸಲಿದೆ ಒಂದು ದೊಡ್ಡ ಹಡಗನ್ನು ತೆಗೆದುಕೊಂಡು ಅದರಲ್ಲಿ ವೇದಗಳನ್ನೂ, ಕೆಲವು ಪ್ರಾಣಿಗಳನ್ನೂ,ಸಸ್ಯಗಳ ಬೀಜಗಳನ್ನೂ, ಶೇಖರಿಸಿಡು. ನೀನು ಮತ್ತು ನಿನ್ನ ಪತ್ನಿ ಅದರೊಳಗೆ ಜೀವಿಸಿ.  ಆ ಹಡಗಿನ ರಕ್ಷಣೆ ನನ್ನದು ಎನ್ನುತ್ತಾನೆ. ಒಂದು ದಿನ ಇಡೀ ಭೂಮಿಯೇ ನೀರಿನಿಂದ ತುಂಬಿ ಮಹಾಪ್ರಳಯವೊಂದು ಸಂಭವಿಸಿಯೇ ಬಿಡುತ್ತದೆ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಿ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಕೊಡುತ್ತಾನೆ.  ವರ್ಷಗಳ ನಂತರ ಪ್ರವಾಹ ತಗ್ಗಿದ ಮೇಲೆ ಮತ್ತೆ ಸೃಷ್ಟಿಯ ಕಾರ್ಯ ನಿಧಾನವಾಗಿ ಆರಂಭವಾಗುತ್ತದೆ. ಅದೇ ಕೂಡಿಟ್ಟ ಬೀಜಗಳು ಮನುವಿನ ಸಂಸಾರ. ಅಲ್ಲಿಂದ ದ್ವಿಗುಣವಾಗುತ್ತ ದ್ವಿಗುಣವಾಗುತ್ತ  ಬಂದ ಪ್ರತೀ ಸೃಷ್ಟಿ ಬ್ರಹತ್ ಬ್ರಹ್ಮಾಂಡವೇ ಆಗಿ ನಿಲ್ಲುತ್ತದೆ. ಸಂಪೂರ್ಣ ನಾಶ ಎನ್ನುವದು ಎಂದಿಗೂ ಅಗಿಲ್ಲ. ಅತಿ ಆಯಿತು ಎಂದು ಅನ್ನಿಸಿದಾಗೆಲ್ಲ  ಕಾಲಚಕ್ರದ ಸುಳಿಗೆ ಸಿಲುಕಿಸಿ ಮತ್ತೆ  ಗರ್ಭದೊಳಗೆ ಎಳೆದುಕೊಂಡೇ ಬಿಡುತ್ತದೆ ಭೂಮಿ. ಇಂತಹದ್ದೊಂದು ಸಮತೋಲನದಿಂದಲೇ ಮಿಲಿಯನ್ ಗಟ್ಟಲೆ ವರ್ಷಗಳಿಂದಲೂ ಭೂಮಿ  ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ. ಸೃಷ್ಟಿ, ಸ್ಥಿತಿ, ಲಯ,ಗಳ ಜವಾಬ್ಧಾರಿ ಹೊತ್ತ ತ್ರಿಮೂರ್ತಿಗಳು ಒಬ್ಬರಿಗೊಬ್ಬರು ಪೂರಕವಾಗಿಯೇ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಮೇಲೆ ನಮ್ಮ ಧರ್ಮ ನಿಂತಿದೆ. ಅದು ಸತ್ಯ ಕೂಡಾ ಆಗಿದೆ. ಈಗ ಬಂದಿರುವ ಕರೋನಾ ಎಂಬ ಮಹಾಮಾರಿಯಂತ ರೋಗದಿಂದ ಜಗತ್ತೇ ನಾಶವಾಯಿತು,ಇನ್ನು ಮನುಷ್ಯ ಭೂಮಿಯ ಮೇಲ ಬದುಕುವದೇ ಅಸಾಧ್ಯ,ಹಾಗಾಯಿತು ಹೀಗಾಯಿತು ಜನರು ಖಾಲಿಯೇ ಆದರು ಎನ್ನುವಂತೆ ಭಯಬೀಳಿಸುವ ಟಿ,ವಿ ಚಾನಲ್ಗಳನ್ನು ಮೈಮೇಲೆ ಎಳೆದುಕೊಂಡು ನಾವೂ ದೆವ್ವ ಬಂದವರಂತೆ ಆಡುತ್ತಿದ್ದೇವೆ. ಚಿಂತಾಜನಕರಾಗಿದ್ದೇವೆ.ಮಾನಸಿಕ ಅಸ್ವಸ್ಥರಾಗಿದ್ದೇವೆ.  ಹಿಂದೊಮ್ಮೆ ನಾವೆಲ್ಲ ಪ್ರಳಯವೇ ಸಂಭವಿಸುತ್ತದೆ ಸಂಪೂರ್ಣ ಭೂಮಿಯೇ ನಾಶವಾಗುತ್ತದೆ ಎಂದು ಅದೆಷ್ಟು ಬೊಬ್ಬೆ ಹೊಡೆದು ಕೊಂಡಿಲ್ಲ ಹೇಳಿ. ಅಯ್ಯೋ ಅಜ್ಜೀ ಇದೆಲ್ಲ ಯಾವಾಗ ಮುಗಿತದ್ಯೋ ಏನ್ ಕಥೆನೋ ಎಷ್ಟೊಂದು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಾ ವಿಚಿತ್ರ ಆಗೋಯ್ತು ಜಗತ್ತೇ .ಅಂತ ಗೊಣಗುತ್ತಿದ್ದೆ.  ಸುಮಾರು 85 ವರ್ಷದ ಅಜ್ಜಿ ಹೇಳುತ್ತಿದ್ದರು. ಅಯ್ಯೊ ಕೂಸೇ ನನ್ನ ಅಜ್ಜಿಯ ಕಾಲದಲ್ಲಿ ಇಂತಹದ್ದೇ ಒಂದು ಮಹಾ ಮಾರಿ ರೋಗ ಬಂದಿತ್ತಂತೆ. “ಗಾಂಡ್ ಗುಂದಿಗೆ” ರೋಗ ಅಂತಿದ್ರು ಅದಕ್ಕೆ. ಊರಿಗೆ ಊರೇ ಖಾಲಿ ಅಗ್ತಿತ್ತು. ಸುಡೋಕು ಯಾರೂ ಇರ್ತಿರಲಿಲ್ಲ ಗೊತ್ತಾ!? ಏನೂ ಔಷಧ ಇಲ್ಲದೇ ಇರೋ ಕಾಲ್ದಲ್ಲೇ ಅದನ್ನೇ ಗೆದ್ದು ಬಂದಿಲ್ವ ನಾವೆಲ್ಲ. ಮತ್ತೆ ಎಷ್ಟು ಬೆಳೆದಿದೆ ನೋಡು ಜನಸಾಗರ.ಸುಮ್ನೇ ಚಿಂತೆ ಮಾಡ್ತಾರೆ ಜನ.ಏನೂ ಆಗಲ್ಲ ಭಗವಂತಂಗೆ ಎಲ್ಲ ಗೊತ್ತಿರ್ತದೆ ಸುಮ್ಕಿರು ಅಂದ್ಬಿಟ್ಲು. ಯಾವ ರೋಗದ ಕುರಿತು ಅಜ್ಜಿ ಮಾತಾಡಿದ್ಲು ಗೊತ್ತಿಲ್ಲ. ಅದ್ರೆ ಬಂದಿದ್ದು ಸತ್ಯ ಅದಕ್ಕೆ ಪುರಾವೆಗಳನ್ನೂ ಕೊಡುತ್ತಿದ್ರೆ ಮೈ ಜುಂ ಎಂದಿತು ಆಗಲೇ ಅನ್ನಿಸಿದ್ದು ಆಗಬಾರದ್ದು ಏನು ಆಗಿದೆ ಈಗ. ನಿಜ ಜನರ ಸಾವು, ನೋವು, ಆಕ್ರಂದನ, ಮನಸನ್ನು ಘಾಸಿಗೊಳಿಸುತ್ತವೆ. ಆದರೆ ಬದುಕಿರುವವರು ನಮ್ಮಿಂದ ಸಾದ್ಯವಾದಷ್ಟು ಮಾನವೀತೆಯಿಂದ, ವಿಧೇಯರಾಗಿ ಯೋಚಿಸಿದರೆ, ನಡೆದುಕೊಂಡರೆ ಸಾಕಲ್ಲವೇ ಇನ್ನೊಂದು ಜೀವ ತನ್ನಿಂದ ತಾನೇ ಉಸಿರಾಡುತ್ತದೆ. ಸಾಯುವ ಪ್ರತೀ ಜೀವವನ್ನು ರಕ್ಷಿಸಲು ಯಾರಿಂದಲೂ ಸಾದ್ಯವಿಲ್ಲ ಸಾದ್ಯವಿದ್ದಷ್ಟು ಮಾಡ ಬಹುದಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಜನ ಡಾಕ್ಟರ್ ಗಳು ಪೋಲೀಸರು ದಾದಿಯರು ಕಾರ್ಮಿಕರು ದಿನ,ರಾತ್ರಿ ಇಲ್ಲದೇ ದುಡಿಯುತ್ತಲೇ ಇದ್ದಾರೆ. ಕೇವಲ ಅವರಷ್ಟೇ ದುಡಿದರೆ ತ್ಯಾಗ ಮಾಡಿದರೆ ಸಾಕೇ? ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿದೆ ಅದನ್ನು ನಿಸ್ವಾರ್ಥತೆಯಿಂದ ಮಾಡಬೇಕಿದೆ. “ಕರ್ಮಣ್ಯೇವಾ ದಿಕಾರಸ್ತೇ ಮಾ ಫಲೇಷು ಕದಾಚನ” ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ ಫಲಾ ಫಲಗಳ ಅಪೇಕ್ಷೆ ಬೇಡಾ ಕೇವಲ ಕರ್ಮಗಳನ್ನು ಮಾಡು ಎಂದು ಅವರವರ ಕರ್ಮಳಿಗನುಸಾರ ಬದುಕನ್ನು ಭಗವಂತ ಕರುಣಿಸಿಯೇ ಕರುಣಿಸುತ್ತಾನೆ ಮತ್ತೇಕೆ ಭಯ. ಆಡಂಬರವಿಲ್ಲದೇ ಜೀವಿಸುವುದ ಕಲಿಯಬೇಕಿದೆ. ಮನುಕುಲಕ್ಕೊಂದು ಪಾಠ ಕಲಿಸಲೆಂದೇ ಈ ಕರೋನಾ ಬಂದಿದೆಯೇನೋ ಅನ್ನಿಸುತ್ತದೆ ಬಹಳ ಸಲ. ಸುಮ್ಮನೇ ಭಯಬೀಳುವದರಲ್ಲಿ ಅರ್ಥವಿಲ್ಲ ಒಂದಿಷ್ಟು ಜಾಗೃತೆಯಲ್ಲಿ ಜೀವಿಸಿದರೆ ಆಯಿತು. ಮುಂದಿನದು ದೈವ ಚಿತ್ತ ಎನ್ನುವ ಮನೋ ಬಲ ತಂದುಕೊಳ್ಳಬೇಕು. ಮನುಷ್ಯರಿಗಿಂತಲೂ ಅಬಲರಾದ, ಯಾವ ಪ್ರಾಣಿ, ಪಕ್ಷಿ ,ಮರಗಳು, ಯಾರಿಂದಲೂ ಏನನ್ನೂ ಬೇಡುವದಿಲ್ಲ, ತಮ್ಮ ತಮ್ಮ ಸ್ವಪ್ರಯತ್ನದಿಂಲೇ ಬದುಕುತ್ತವೆ. “ಸರ್ವೆವೈಲ್ ಆಪ್ ದಿ ಫಿಟ್ಟೆಸ್ಟ್”ಎನ್ನುವ ಡಾರ್ವಿನ್  ಸಿದ್ದಾಂತ ಎಂದಿಗೂ ಸತ್ಯವೇ ಆಗಿದೆ. ಹುಟ್ಟು ಸಾವುಗಳಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬಂದೊದಗಿದ ಭಯದಿಂದ ಹೊರಗೆ ಬನ್ನಿ ವಿಷಾಲವಾಗಿ ಯೋಚಿಸಿ ಹೊಸಬೆಳಕಿನ ಕಿರಣವೊಂದು ನಮಗಾಗಿ ಸ್ವಾಗತಿಸುತ್ತದೆ. *************

ಕಾಲ ಎಂದಿಗೂ ನಿಲ್ಲುವದಿಲ್ಲ Read Post »

ಇತರೆ

ಶಿಶುಗೀತೆ

ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ ಅರಚಿತು|| ಶಬ್ಧ ಕೇಳಿಗೊಲ್ಲ ತನ್ನಡೇರೆಯಿಂದ ಬಂದನು|ಸುತ್ತಮುತ್ತಹುಡುಕಿ ಒಂದುಭಾರೀ ಕೋಲು ತಂದನು|| ಬೀಸಿ ಒಮ್ಮೆಕಾಲು ತಲೆಗೆಸಿಟ್ಟಿನಿಂದ ಹೊಡೆಯಲು|ಕೋಲು ತಗುಲಿಮುರಿದು ಕಾಲುಕುಂಟು ತೋಳವಾಯಿತು|| ಬಂದ ದಾರಿಸುಂಕವಿಲ್ಲಎಂದು ಹೆದರಿ ತೋಳವು|ಬೆಪ್ಪು ಮೋರೆಹಾಕಿಕೊಂಡುತನ್ನ ದಾರಿ ಹಿಡಿಯಿತು || ಗಾಯಗೊಂಡಕುರಿಯ ಮರಿಯುಮರಳಿ ಮಡಿಲ ಸೇರಿತು |ಅಂದಿನಿಂದಗೊಲ್ಲ ಮುಂದೆಜಾಗರೂಕನಾದನು || *************

ಶಿಶುಗೀತೆ Read Post »

ಇತರೆ

ಮರಳಿಗೂಡಿಗೆ

ಲಹರಿ ಅನುಪಮಾ ರಾಘವೇಂದ್ರ                              “ಎಲ್ಲಿ ಹೋದರೂ ಹಿಂತಿರುಗಿ ಮನೆಗೆ ತಲುಪುವವರೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ”  ಎಂಬ  ಭಾವ ಮೂಡಿದಾಗಲೇ  ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಎಷ್ಟು ಅರ್ಥಪೂರ್ಣ ಅನಿಸಿದ್ದು.       ತಿಂಗಳ ಹಿಂದೆ ಹಕ್ಕಿಯೊಂದು ನಮ್ಮ aಮೊಟ್ಟೆಗಳನ್ನಿಟ್ಟು,ಕಾವು ನೀಡಿ , ಮರಿ ಮಾಡಿತ್ತು. ಅಷ್ಟು ದಿನಗಳಲ್ಲಿಯೇ ಆ ಹಕ್ಕಿ ಸಂಸಾರ ಹಾಗೂ ನನ್ನ ಮಧ್ಯೆ ಅನಿರ್ವಚನೀಯ ಬಂಧವೊಂದು ಬೆಳೆದುಬಿಟ್ಟಿತ್ತು. ಆ ಮರಿಗಳ ರೆಕ್ಕೆ ಬಲಿಯುವವರೆಗೂ ತಾಯಿ ತಂದೆ ತಾವೇ ಆಹಾರ ತಂದು ಬಾಯಿಗೆ ಕೊಟ್ಟು ಸಾಕುತ್ತಿದ್ದವು. ಆ ಮರಿಗಳ ರೆಕ್ಕೆ ಬಲಿತಾಗ ಎಲ್ಲ ಹಕ್ಕಿಗಳೂ ಗೂಡು ಬಿಟ್ಟು ಹೋಗಿದ್ದವು. ನನಗೊಂದು ಸಂಶಯ……. ‘ಹಾರಿ ಹೋದ ಮೇಲೆ ಮರಿಗಳಿಗೂ ,ಅದರ ಹೆತ್ತವರಿಗೂ ಯಾವ ರೀತಿಯ ಸಂಬಂಧವಿರಬಹುದು…?’ ಆ ಮರಿಗಳು ತಮ್ಮ ಹೆತ್ತವರ ಬಗ್ಗೆ ಚಿಂತೆ ಮಾಡುತ್ತವೆಯೋ………ಇಲ್ಲವೋ…….. ಆ ದೇವರೇ ಬಲ್ಲ. ಈಗಿನ ಕಾಲದಲ್ಲಿ ತಿಳುವಳಿಕೆಯುಳ್ಳ ಮನುಷ್ಯರೇ ತಮ್ಮ ಹೆತ್ತವರ ಜವಾಬ್ದಾರಿ ವಹಿಸದೆ ನುಣುಚಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಪ್ರಾಣಿ ಪಕ್ಷಿಗಳಲ್ಲಿ ಯಾವ ಬಂಧ….? ಆ ಹಕ್ಕಿಗಳು ಹಾರಿ ಹೋದ ಮೇಲೆ ಏನೋ ಕಳಕೊಂಡ ಅನುಭವ ನನಗೆ. ಹೆರಿಗೆಗೆ ತವರಿಗೆ ಬಂದ ಮಗಳನ್ನು ಬಾಣಂತನ ಮಾಡಿ ಕಳುಹಿಸಿ ಕೊಟ್ಟ ಭಾವ….. ಮಗಳ ಹೆಜ್ಜೆಯ ಸಪ್ಪಳದ ತಾಳವಿಲ್ಲ…. ಮಗುವಿನ ಅಳುವಿನ ಇಂಪಾದ ರಾಗವಿಲ್ಲ. ಈಗ ಎಲ್ಲೆಲ್ಲೂ ಕರ್ಣ ಕಠೋರ ಮೌನರಾಗ ಮಾತ್ರ !       ಹಾಗೂ ಹೀಗೂ ಒಂದು ತಿಂಗಳು ಕಳೆದಿತ್ತು. ಅದೊಂದು ದಿನ ಹಟ್ಟಿಯ ಬಳಿ ಏನೋ ಕೆಲಸದಲ್ಲಿದ್ದೆ. ಹಕ್ಕಿಯೊಂದು ಏನನ್ನೋ ಕಚ್ಚಿಕೊಂಡು ಹಾರಿ ಹಟ್ಟಿಯೊಳಗೆ ಬರುವುದು ಕಂಡಿತು. ಹತ್ತಿರ ಹೋದರೆ ಅದು ಓಡಿ ಹೋಗಬಹುದೆಂದು ಅಂಜಿ ದೂರದಿಂದಲೇ ಗಮನಿಸಿದೆ. ಹೋ….. ಅದೇ ಹಕ್ಕಿ….. ಅಂದು ಇಲ್ಲೇ ವಾಸವಾಗಿತ್ತಲ್ಲಾ….. ನನ್ನ ಮನಸ್ಸೂ ರೆಕ್ಕೆ ಬಿಚ್ಚಿ ಹಾರತೊಡಗಿತು. ಗೂಡಿನ ಕಡೆಗೆ ಹೋದ ಹಕ್ಕಿ ಒಂದೆರಡು ಕ್ಷಣದಲ್ಲೇ ವಾಪಾಸು ಬಂದು ಕಿಚ ಪಿಚ ಹಾಡುತ್ತಾ ನನ್ನ ಸುತ್ತ ಮುತ್ತ ತಿರುಗಿ ಹೊರಗೆ ಹಾರಿತು. ಮರಳಿ ಗೂಡಿಗೆ ಬಂದೆ ಎಂಬ ಸೂಚನೆ ನೀಡಿತ್ತೋ…… ಅದರ ಗೂಡನ್ನು ಹಾಳುಗೆಡಹದೆ ಹಾಗೇ ಇಟ್ಟದ್ದಕ್ಕೆ ಧನ್ಯವಾದ ಹೇಳಿತ್ತೋ ……… ಹಕ್ಕಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಿದ್ದರೆ ಎಷ್ಟು ಚೆನ್ನ ಅನಿಸಿತ್ತು.    ನಮ್ಮ ಮನೆಯ ಸುತ್ತ ಮುತ್ತ ಗಿಡ ಮರಗಳಲ್ಲಿ ಹತ್ತು ಹಲವು ಹಕ್ಕಿಗಳು ಬಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು , ಮರಿ ಮಾಡಿ ಹಾರಿ ಹೋಗಿವೆ. ಯಾವ ಹಕ್ಕಿಗಳನ್ನೂ ನಾನು ಇಷ್ಟೊಂದು ಹಚ್ಚಿಕೊಂಡಿಲ್ಲ. ಆ ಹಕ್ಕಿಗಳು ಹಾರಿ ಹೋದ ಮೇಲೆ ಆ ಗೂಡು ಅಲ್ಲೇ ಅನಾಥವಾಗಿ ಬಿದ್ದಿರುವುದು ಸಾಮಾನ್ಯ. ಕೆಲವು ದಿನಗಳು  ಕಳೆದ ಮೇಲೆ ಆಕರ್ಷಕವಾಗಿರುವ ಆ ಗೂಡುಗಳನ್ನು  ನನ್ನ ಸಂಗ್ರಹಾಲಯದೊಳಗೆ ಸೇರಿಸಿಕೊಳ್ಳುವುದು ನನ್ನ ಅಭ್ಯಾಸ. ಆದರೆ ಯಾಕೋ ಏನೋ… ಹಟ್ಟಿಯಲ್ಲಿದ್ದ ಗೂಡು ಒಂದು ತಿಂಗಳಿನಿಂದ ಅನಾಥವಾಗಿದ್ದರೂ ನನ್ನ ಸಂಗ್ರಹಾಲಯಕ್ಕೆ ಸೇರಿಸಿಕೊಳ್ಳುವ ಯೋಚನೆ ಬರಲೇ ಇಲ್ಲ. ಹಟ್ಟಿಯ ಬಳಿಗೆ ಹೋದಾಗಲೆಲ್ಲ  ನನ್ನ ಕಣ್ಣು ಓಡುತ್ತಿದ್ದದ್ದು ಆ ಗೂಡಿನ ಕಡೆಗೆ.          ಮರುದಿನ ಮಾಮೂಲಿನಂತೆ ಹಟ್ಟಿಯ ಬಳಿಗೆ ಹೋದಾಗ ಹಕ್ಕಿ ಪುರ್ರನೆ ಹಾರಿ ಹೋಯಿತು. ಮೆಲ್ಲನೆ ಇಣುಕಿ ನೋಡಿದೆ. ಮೂರು ಮೊಟ್ಟೆ. ಹೋ…… ಇನ್ನೊಂದು ಬಾಣಂತನದ ತಯಾರಿ…… ಹಕ್ಕಿಗೆ ತಿನ್ನಲು ಕಾಳು ಹಾಕಬೇಕು, ನಾಯಿ , ಬೆಕ್ಕುಗಳ ಕಣ್ಣು ಬೀಳದಂತೆ ಜಾಗ್ರತೆ ವಹಿಸಬೇಕು, ಮೊಟ್ಟೆಯೊಡೆದು ಮರಿ ಹೊರ ಬರಲು  ಕಾಯಬೇಕು , ಅದು ಹಾರಲು ಕಲಿಯುವುದನ್ನು ಕದ್ದು ನೋಡಬೇಕು , ನನ್ನ ಮೊಬೈಲಲ್ಲಿ ಸೆರೆ ಹಿಡಿಯಬೇಕು. ಅಬ್ಬಾ…..ಎಷ್ಟೆಲ್ಲಾ ಕೆಲಸ . ಸಂಭ್ರಮವೋ ಸಂಭ್ರಮ. ************

ಮರಳಿಗೂಡಿಗೆ Read Post »

ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ. ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ. ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ. ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ. ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ. ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ. ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು. ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು? ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ. *********

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. Read Post »

ಇತರೆ

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. ಮೇ ತಿಂಗಳಿನಲ್ಲಿ ಲಾಕ್ಡೌನ್ – ವಿಸ್ತರಿಸುವ ಮೊದಲು ಕೂಡಾ ಇದನ್ನೇ ಪುನರುಚ್ಚರಿಸಿತ್ತು.ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಸರಳದಾರಿ. ಕೊರೊನಾ ಕುರಿತಾದ ಅತಿಯಾದ ಭಯವೇ ವೈರಾಣುವಿಗಿಂತ ಹೆಚ್ಚಿಗೆ ಅಪಾಯಕಾರಿ. ಅತಿಯಾಗಿ ಭಯಗ್ರಸ್ತನಾದ ವ್ಯಕ್ತಿಯ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ರೋಗ- ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾದ ಭಯದಿಂದ ಉಂಟಾಗುವ ಮಾನಸಿಕ ಒತ್ತಡವು ಹೃದಯಸ್ತಂಭನ ಅಥವಾ ಇತರೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ. ಕಾಲುದಿನ, ಅರ್ಧ ದಿನ ಲಾಕ್ಡೌನ್ ಮುಂತಾದ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಜನರು ಪೇಚೆಗೆ ಧಾವಿಸುತ್ತಾರೆ. ದಿನವಿಡೀ ನಡೆಯುತ್ತಿರುವ ವ್ಯವಹಾರ. ಸೀಮಿತ ಅವಧಿಗೆ ಮೊಟಕುಗೊಂಡಾಗ ಜನರು ಖರೀದಿಗೆ ಮುಗಿಬೀಳುತ್ತಾರೆ, ಮಾರುಕಟ್ಟೆಯಲ್ಲಿ ಅತಿಯಾದ ನೂಕುನುಗ್ಗಲು ಉಂಟಾಗುತ್ತದೆ. ಇದರಿಂದಾಗಿ ಪರಸ್ಪರ ಭೌತಿಕ ಅಂತರ ಕಾಪಾಡಿಕೊಳ್ಳುವದೂ ಸಾಧ್ಯವಾಗುವುದಿಲ್ಲ. ಜನರ ಮನದಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಗೂ ಕಾರಣವಾಗುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಳೆದ ಐದು ತಿಂಗಳುಗಳಿಂದ ಯಾವುದೇ ರಕ್ಷಾ ಕವಚಗಳಿಲ್ಲದೇ ದಿನವಿಡೀ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಿದ್ಯುತ್ ವಿತರಣಾ ವ್ಯವಸ್ಥೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು,ಮಾಧ್ಯಮ ಪ್ರತಿನಿಧಿಗಳು,ಪತ್ರಿಕಾ ವಿತರಕರು,ಪೋಲೀಸರು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರ ಧೈರ್ಯ, ಆತ್ಮವಿಶ್ವಾಸಗಳಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ನಮ್ಮೊಂದಿಗೆ,ನಮ್ಮಸುತ್ತಮುತ್ತಲೇ ಬದುಕಿತ್ತಿದ್ದಾರೆ,ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು.ಮಧ್ಯಾಹ್ನ 2 ಗಂಟೆಯ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೇ ನಂತರವೇ ಓಡಾಟ ಪ್ರಾರಂಭಿಸಲು ಕೊರೊನಾ ವೈರಸ್, ಸಾಕು ಪ್ರಾಣಿಯಲ್ಲ. ಕತ್ತಲೆಯಾದ ನಂತರ ಬೀದಿಗಳಲ್ಲಿ ಸಂಚರಿಸಲು, ಕೊರೊನಾ ಕಾಡಿನಿಂದ ಓಡಿ ಬಂದ ಚಿರತೆಯೂ ಅಲ್ಲ.ಅರೆಬರೆ ಮಾಹಿತಿ, ಮಾಧ್ಯಮಗಳ ಬೇಜವಾಬ್ದಾರಿ ಉತ್ಪ್ರೇಕ್ಷೆ, ಆಧಾರಹೀನ ಭಯಗಳಿಂದ ಪ್ರೇರಿತರಾಗಿ ಮಂಡಿಸಲ್ಪಡುತ್ತಿರುವ ಲಾಕ್ಡೌನ್ ಬೇಡಿಕೆಗೆ, ಒತ್ತಡಕ್ಕೆ, ಕೊರೊನಾ ಕುರಿತಾದ ಅನಗತ್ಯ ಭಯ, ಆತಂಕಕ್ಕೆ ಒಳಗಾಗದೇ, ಸಮೂಹಸನ್ನಿಗೆ ಸಿಲುಕದೇ, ಆತ್ಮವಿಶ್ವಾಸದಿಂದ ಬದುಕುವ ದಾರಿಯಲ್ಲಿ ಸಾಗೋಣ. ಸೂಕ್ತ ಆಹಾರ ಕ್ರಮ, ಯೋಗ, ಧ್ಯಾನ, ಧನಾತ್ಮಕ ಯೋಚನೆಗಳು ದೈವ ಚಿಂತನೆ, ಶೃದ್ಧೆಯಿಂದ ಇದು ಸಾಧ್ಯ. ಕೊರೊನಾ ಕುರಿತು ಜಾಗೃತಿ ಇರಲಿ, ಭಯ ಪಡುವುದು ಬೇಡ, ಭಯ ಹಬ್ಬಿಸುವುದೂ ಬೇಡ… *************

ಲಾಕ್ಡೌನ್ ಬೇಡಿಕೆ Read Post »

ಆರೋಗ್ಯ, ಇತರೆ

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು ವೆಂಟಿಲೆಟರ್ ಗಳ ಅವಶ್ಯಕತೆ ಇರುವುದಿಲ್ಲ ಬಹಳಷ್ಟು ಜನರಲ್ಲಿ ಅದು ಸಾಮಾನ್ಯ ಕೆಮ್ಮು, ಶೀತ ,ಜ್ವರ ದಂತಹ ಲಕ್ಷಣ ಹೊಂದಿ ಸರಿಹೋಗುತ್ತದೆ.                     ಇಷ್ಟು ಆದರೆ ಕೊರೊನಾ ಕ್ಕೆ ಯಾರ ಹೆದರುತ್ತಿರಲಿಲ್ಲವೆನೊ? ಆದರೆ ಇದು ಸಾಮಾನ್ಯ ಎನಿಸುತ್ತಲೆ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿ ರೋಗಿ ಸಾವನ್ನಪ್ಪಬಹುದು.ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಬಹುದು ಆದರೆ ಇದು ಅತಿ ವೇಗವಾಗಿ ಹಬ್ಬುವ ,ಮತ್ತು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ಸೀನು ಇದರ ಮೂಲಕ ಮತ್ತು ಶ್ವಾಸದ ಮೂಲಕವೂ ಈ ರೋಗ ಹೊರಡುತ್ತದೆ. ಇದರಲ್ಲಿ ನಾವೇನು ಮಾಡಲು ಸಾಧ್ಯ ಇದರ ಬಗ್ಗೆ  ಅಷ್ಟೇ ನಾವು ಗಮನ ಹರಿಸಬೇಕು. ನಾವು ನೋಡುತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಸಹಜ ಚಟುವಟಿಕೆ ಮತ್ತು ಆರ್ಥಿಕತೆಗೆ ಹೊಡೆತ ಬಿದ್ದಂತಾಗಿದೆ. ನಿತ್ಯದ ಜನಜೀವನ ಅಸ್ತವ್ಯಸ್ತ ಆಗಿದೆ.ಬಸ್ಸಿನಲ್ಲಿ ಕೂರಲು ಭಯ,ಹೊಟೆಲಿಗೆ ಹೋಗಲು ಭಯ, ಜನಸಂದಣಿ ಯಂತು ಆಗಲೇ ಬಾರದು. ಅದರಂತೆ ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಮದುವೆಗಳನ್ನು ಸರಳವಾಗಿ ಮಾಡಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು . ಯಾರಾದರೂ ತೀರಿ ಹೋದರು ಸಹ ಜನ ಜಾಸ್ತಿ ಸೇರಬಾರದು. ಯಾವುದೇ ಕಾರ್ಯಕ್ರಮ ಮಾಡಲು ಜನ ಸೇರಬಾರದು. ಕಾರ್ಯಕ್ರಮ ಮಾಡಲೇ ಕೂಡದು ಹೀಗೆ ಜನರ ಸಾಮಾಜಿಕ ಕೊಂಡಿಗಳು ಕಳಚುತ್ತಿದ್ದು ಮನುಷ್ಯ ಒಬ್ಬಂಟಿಯಾಗಿ ಬದುಕಬೇಕಾಗಿದೆ.ಇದು ಇಂದಿನ ತುರ್ತು ಕೂಡಾ ಪ್ರತಿಯೊಬ್ಬರೂ ಇದರ ಬಗ್ಗೆ ಹೆದರದೆ ಆತ್ಮವಿಶ್ವಾಸ ದಿಂದ  ಇದನ್ನೆದುರಿಸುವ ಧೈರ್ಯ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆಯುತ್ತಿರಬೇಕು.ಅನಿವಾರ್ಯ ಕಾರಣ ಗಳಿದ್ದರೆ ಮಾತ್ರ ಮನೆಯಿಂದ ಹೊರ ಹೋಗಬೇಕು. ಇದು ಯಾರೋ ನಮ್ಮ ಮೇಲೆ ಹೇರಿದ ಕಾನೂನು ಆಗಬಾರದು. ನಾವೇ ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಸೌಖ್ಯ ಕ್ಕಾಗಿ ಇದನ್ನು ಅನುಸರಿಸಲೇಬೇಕು .      ‌‌                **********

ಭಯ ಪಡುವುದೇನಿಲ್ಲ Read Post »

ಇತರೆ

ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ ಹಿಂಡು ಮೋಡದ ಗಾಳಿ ಸವಾರಿ -ಆಷಾಢ     ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು ಮಳೆ ಆರಂಭದ ಮಾಸ. ಆದ್ದರಿಂದ ಮಳೆಗಿಂತಲೂ ಮೊದಲು ಬರುವ ಮೋಡದ ಮೆರವಣಿಗೆ, ಅದಕ್ಕೆ ಗಾಳಿಯ ಹಿಮ್ಮೇಳ ಜೋರಾಗಿರುತ್ತದೆ. ಗಗನಂ ಕೆಟ್ಟದು ಚಂದ್ರಸೂರ್ಯರಳಿದರ್ ಆಲದೊಳ್ ಪೂಳ್ದಿತ್ತು ಧಾತ್ರೀತಳಂ ಖಗಸಂಚಾರತೆ ಶೂನ್ಯಮಾದುದು ನಿರುದ್ಯೋಗಕ್ಕೆ ಪಕ್ಕಾದುದೀ ಜಗಮೆಂದೆಂಬಿನಮೆಯ್ದೆ ಕಟ್ಟಿ ಕರೆದತ್ತಾಸಾರಮೀ ಲೋಕದೊಳ್ (ಕಾವ್ಯ ಸಾರಂ) ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿದ ಮೋಹನ ರಾಕೇಶರ ನಾಟಕ “ಆಷಾಢದ ಒಂದು ದಿನ” ಅದರ ಕತೆ ಕವಿಯಾದ ಕಾಳಿದಾಸ ರಾಜನಾಗುವ ಕುರಿತಾಗಿದ್ದು.   ಪ್ರಕೃತಿಯ ಮಡಿಲಿನಿಂದ ನಗರದೆಡೆಗೆ ಅವನಿಟ್ಟ ಹೆಜ್ಜೆಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಆತನ ಬಾಲ್ಯದ ಗೆಳತಿ ಆತನ ಒಳಿತಿಗಾಗಿ ಬಲಿಕೊಡುವ ಪ್ರೀತಿಯನ್ನು ಮತ್ತು ವಿರಹವನ್ನು ಕಟ್ಟಿಕೊಡುವುದಕ್ಕಾಗಿ ನಾಟಕಕಾರರು ಆಷಾಢದ ಪ್ರಕೃತಿಯ ಚಿತ್ರಣವನ್ನು ಬಳಸಿಕೊಂಡಿದ್ದಾರೆ. ದೂರದೂರದಿಂದ ಹಿಂಡುಗಟ್ಟಿ ಬರುವ ಕರಿಮೋಡಗಳು, ಕಿಟಕಿ ಬಾಗಿಲುಗಳನ್ನು ಮುರಿಯುವಂತೆ ಬೀಸುವ ಗಾಳಿ, ಆಗಾಗ ಆರ್ಭಟಿಸುವ ಗುಡುಗು-ಮಿಂಚು ಇವೆಲ್ಲ ಪಾತ್ರಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗುತ್ತವೆ. ಕವಿದ ಕಾರ್ಮೋಡ ನಾಯಕಿಯ ಆತಂಕವನ್ನು ಧ್ವನಿಸಿದರೆ, ಸುರಿಯುವ ಮಳೆ ಅವಳ ಉಕ್ಕುವ ದು:ಖಕ್ಕೆ ಕನ್ನಡಿ ಹಿಡಿಯುತ್ತದೆ. ತನ್ನೆಲ್ಲ ಭಾವನೆಗಳನ್ನು ಮನದೊಳಗೆ ಅದುಮಿಟ್ಟು ತ್ಯಾಗಿಯಾದ ನಾಯಕಿಯ ಮನೋಭೂಮಿಕೆಯಾಗಿ ಕಾಣುವ ಆಷಾಢ ಹಾಗೆ ನೋಡಿದರೆ ಈ ನಾಟಕದಲ್ಲಿ  ಒಂದು ಪಾತ್ರವೇ ಆಗಿದೆ. ಆಷಾಢದ ರಾತ್ರಿಗಳು ಎನ್ನುವ ಒಂದು ಪತ್ತೆದಾರಿ ಕಾದಂಬರಿಯ ಉದ್ದಕ್ಕೂ ಕೊಲೆ ಇತ್ಯಾದಿ ಘಟನೆಗಳು ನಡೆಯುವುದು ಆಷಾಢದ ರಾತ್ರಿಗಳಲ್ಲಿ. ಕಾಫಿ ತೋಟ, ಜರ‍್ರನೆಯ ಮಳೆ, ಊಳಿಡುವ ಗಾಳಿ ಇವೆಲ್ಲವುಗಳು ಸೇರಿಕೊಂಡು ಈ ಕಾದಂಬರಿ ತುಂಬ ರೋಚಕವಾದ ಅವಿಸ್ಮರಣೀಯ ಅನುಭವವನ್ನು ಕಟ್ಟಿ ಕೊಡುತ್ತದೆ. ವರಕವಿ ಬೇಂದ್ರೆಯವರು ಸಖಿಗೀತದಲ್ಲಿ ಆಷಾಢವನ್ನು ವರ್ಣಿಸುವುದು ಹೀಗೆ ಆಷಾಢದಾ ಮುಗಿಲು ಬೀಸಾಡಿ ಬಂದವು ಈಸಾಡಿ ಬಂದಂಥ ಆನೆಗಳೆ ರೋಷದ ತೋಷದ ಬೆಡಗು ಬಿನ್ನಾಣವಂ ಬೀರುವ ಬಿಂಕದಿ ಮೆರೆಯುವೊಲೆ ಹೌದು ಆಷಾಢವೇ ಹಾಗೆ. ಚೈತ್ರ-ವೈಶಾಖಗಳಲ್ಲಿ ಗಿಡಗಳು ಚಿಗುರಿ ಹೊಸದಾಗಿ ಪಡೆದದ್ದನ್ನು ಬೀಸುಗಾಳಿಯಿಂದ ಆಷಾಢ ಅಲುಗಾಡಿಸುತ್ತದೆ. ಎಷ್ಟೊ ವರ್ಷಗಳ ನಿಷ್ಟೆಯ ಬೇರುಗಳನಿಳಿಬಿಟ್ಟು ನಿಂತ ಮರಗಳನ್ನೂ ಜೋರಾಗಿ ತಳ್ಳುತ್ತ “ಗಟ್ಟಿಯಾ, ನೀನು ಗಟ್ಟಿಯಾ” ಅಂತ ಪರೀಕ್ಷಿಸುತ್ತದೆ. ತನಗೆ ತಾನೇ ಗಟ್ಟಿಯಾಗದಿರುವುದನ್ನು ಉರುಳಿಸಿ ಬಿಡುತ್ತದೆ. ಸುಳ್ಳು -ಪೊಳ್ಳುಗಳು ಆಷಾಢ ಗಾಳಿಯೆದುರು ಉಳಿಯುವುದು ಕಷ್ಟ. ಹಾಗೊಮ್ಮೆ ಎದುರಿಸಿ ಉಳಿದ ಸತ್ಯಗಳು ಹಚ್ಚಗೆ ಅರಳಿ ಶ್ರಾವಣದಲ್ಲಿ ನಳನಳಿಸುತ್ತವೆ. ಉಗುಳುತ್ತುಂ ಸಿಡಿಲೆಂಬ ತೋರಗಿಂಡಿಯಂ ಕಾಲೂರಿ ಭೂಭಾಗದೊಳ್ ಗಗನಭೋಗಮನೆಯ್ದಿ ನೀಳ್ದ ಘನವೇಣೀಬಂದನಂಗೆಯ್ದು  (ಪಂಪ ರಾಮಾಯಣ) ಆಷಾಢಕ್ಕೆ ಅದರ ರುದ್ರ ರಮಣೀಯ ಪ್ರಾಕೃತಿಕ ಲಕ್ಷಣಕ್ಕೆ ಎಲ್ಲವನ್ನೂ ನೆನಪಿಸುವ ಅಸೀಮ ಬಲವಿದೆ. ಸುಯ್ಯನೆ ಶೃತಿ ಹಿಡಿದ ಹಳೆಯ ವಾದ್ಯದಂತೆ ಬೀಸುವ ಗಾಳಿ, ಅದರ ಮುನ್ನುಡಿಯ ಜೊತೆಗೆ ಧಾಂಗುಡಿಯಿಡುವ ಮಳೆ ಇವುಗಳ ಜುಗಲಬಂದಿಯ ಕಚೇರಿ ಹಳೆಯ ನೆನಪುಗಳನ್ನು ನಿಧಾನವಾಗಿ ಮೀಟುತ್ತ ಮರೆತ ರಾಗವೊಂದನ್ನು ಎಳೆದು ತರುತ್ತವೆ. ಮತ್ತೀಗ ಎದೆಯ ಬೀದಿಗಳಲ್ಲಿ ಹಳೆಯ ಕತೆಗಳ ಮೆರವಣಿಗೆ. ಒಂಥರ ಖುಷಿಯ ಇರಚಲು, ಒಂಥರ ನೋವಿನ ತುಂತುರು. ಮನಸ್ಸು ಎಷ್ಟೇ ಒಳ ಸರಿದು ಅಡಗಲು ಯತ್ನಿಸಿದರೂ ಗಾಳಿಯ ರಭಸಕ್ಕೆ ಹನಿಗಳು ತೊಯ್ಯಿಸಿಯೇ ಬಿಡುತ್ತವೆ. ನೆನಯದೆ ಉಳಿಗಾಲವಿಲ್ಲ. ಅರೆ ನಾನು ಇದನ್ನು ಮರೆತಿದ್ದೆನಾ? ಹಳೆಯ ರಾಗದ ಆಲಾಪಕ್ಕೆ ಶೃತಿಗೊಳ್ಳುವ ಹೃದಯ ಮತ್ತೊಂದು ರಿಯಾಜಿಗೆ ಸಿದ್ಧಗೊಂಡಿತಾ? ಒದ್ದೆ ಮನಸ್ಸಿನ ತುಂಬ ಜುಳುಜುಳು ಮೌನ. ಆಷಾಢದ ಮಡುಗಟ್ಟಿದ ಮುಗಿಲು ಏನೋ ಮಬ್ಬು ಕವಿಸುತ್ತದೆ. ಎಂಥದೊ ಆಲಸ್ಯ, ಮುಜುಗರ, ನಿರುತ್ಸಾಹ. ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆಯುತ್ತಾರೆ ಏನು ಹೊಳೆಯದ ಮನಸಿನಾಗಸಕೆ ಆಷಾಢ ಆಕ್ರಮಿಸಿ ಬೆಳಕನು ಬದಿಗೆ ಸರಿಸಿ ಈಸತೊಡ ಗಿದವು ಗಾಸಿಕೊಳ್ಳುತ ಯಕ್ಷ ಯಾಚಿಸಿದ ಮೋಡ ಆಷಾಢವೆಂದರೆ- ವಿಷಮಗೊಂಡಿರುವ ಪ್ರಕೃತಿ, ಅಸಮತೋಲನದಲ್ಲಿರುವ ನಿಸರ್ಗ. ಆದ್ದರಿಂದ ಈ ಬದಲಾದ ವಾತಾವರಣಕ್ಕೆ ದೇಹ ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು  ನಿಷೇಧಗೊಳಿಸಿದರು. ಪಕ್ವಾನ್ನಗಳನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಕಷ್ಟ, ಬಂಧು-ಬಳಗ ಸೇರಲಿಕ್ಕೆ ಸಂಚಾರವೂ ಕಷ್ಟ ಎಂಬುದು ಅವರ ದೂರಾಲೋಚನೆ ಇರಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ- ದಕ್ಷಿಣಾಯನ ಕಾಲ. ಅಂದರೆ ಸೂರ್ಯ ದಕ್ಷಿಣಾಭಿಮುಖನಾಗುತ್ತಾನೆ. ಕರ್ಕಾಟಕ ವೃತ್ತವನ್ನು ಪ್ರವೇಶಿಸುತ್ತಾನೆ. ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾನೆಂಬ ಪ್ರತೀತಿ. ಆದ್ದರಿಂದ ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಾರೆ. ವೈಜ್ಞಾನಿಕವಾಗಿ ನೋಡಿದಾಗ ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಗರ್ಭಾಂಕುರವಾದರೆ ನವಮಾಸಗಳು ತುಂಬಿ ಶಿಶು ಜನನವಾಗುವುದು ಬೇಸಿಗೆಯಲ್ಲಾಗುತ್ತದೆ. ಆ ಬಿರು ಬಿಸಿಲಿನಲ್ಲಿ ಪ್ರಥಮ ಹೆರಿಗೆ ಎಂದರೆ ಮಗು-ಬಾಣಂತಿ ಇಬ್ಬರಿಗೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ರಕ್ತಸ್ರಾವ ನಿಲ್ಲಿಸುವುದೂ ಕಷ್ಟ ಎಂಬಿತ್ಯಾದಿ ಕಾರಣಗಳಿಂದ ಹಿಂದಿನ ಜನರು ಆಗಿನ ಆಧುನಿಕ ವೈದ್ಯಕೀಯ ಬೆಳೆಯದಿದ್ದ ಕಾಲದಲ್ಲಿ ನವ ದಂಪತಿಗಳನ್ನು ಆಷಾಢದಲ್ಲಿ ದೂರ ಇಡುತ್ತಿದ್ದರು. ಹೊಸ ಸೊಸೆ ಗಾಳಿ-ಮಳೆಯ ಪ್ರತಾಪಕ್ಕೆ ಹೊಂದಿಕೊಳ್ಳುವುದು ಕಷ್ಟ ಎಂದೋ ಏನೋ ತೌರಿಗೆ ಕರೆತರುತ್ತಿದ್ದರು. ಶ್ರಾವಣ ಆರಂಭ ಆದೊಡನೆ ಗೌರಿಪೂಜೆ ಮಾಡಿಸಿ ನಾಗರ ಪಂಚಮಿಯ ಉಂಡಿಗಳನ್ನು ಬುಟ್ಟಿ ತುಂಬಿಸಿ ಕಳಿಸಿ ಕೊಡುತ್ತಿದ್ದರು. ಈಗಲೂ ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಯಲುಸೀಮೆಯ ಹೆಣ್ಣು ಮಕ್ಕಳು ತಮ್ಮ ಪ್ರೀತಿಯ ತೌರು ಸೇರಿ, ತಾಯಿ-ತಂದೆ-ಸೋದರ ಪ್ರೀತಿಯ ಕಡಲಿನಲ್ಲಿ ಮೀಯುವ ಘಳಿಗೆಗಳನ್ನು ಕಾತುರತೆಯಿಂದ ಕಾಯುತ್ತಾರೆ. ಇಲ್ಲಿನ ಜನಪ್ರಿಯ ಜಾನಪದ ಗೀತೆ- “ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಕರಿಯಾಕ” ಅದರಲ್ಲಿ ಕರೆದುಕೊಂಡು ಹೋಗಲು ಬರುವ ಅಣ್ಣನನ್ನು ಕಾಯುವ ನಾರಿ ಮುಂದುವರಿದು ಹೀಗೆ ಕನವರಿಸುತ್ತಾಳೆ “ರೊಟ್ಟಿ ಬುತ್ತಿ ಮಾಡಿಕೊಂಡು                            ಎತ್ತಿನ ಬಂಡಿ ಹೂಡಿಕೊಂಡು                            ಎಂದು ಹೋಗೇನ ತವರಿಗೆ ಇಂದಿನ ಹೊತ್ತು ಹಿಂದೇ ಇರಲಿ ಮುಂದಿನ ಹೊತ್ತು ಇಂದೇ ಬರಲಿ ಎಂದು ನೋಡೇನ ತಾಯಿಯ ಮೋರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಮಿಥುನ ರಾಶಿಯಲ್ಲಿ ಶಿವನಿರುತ್ತಾನೆ. ಅಂದರೆ ಆತ ಕಾಮಾರಿ. ದುಷ್ಟ ಕಾಮವನ್ನು ಸಂಹರಿಸುತ್ತಾನೆ. ಆದ್ದರಿಂದ ಈ ಮಾಸವು ಶೃಂಗಾರ ವಿರೋಧಿ ಮಾಸ ಎಂದು ಪರಿಗಣಿಸುತ್ತಾರೆ. ಯಾರೋ ಜೋರಾಗಿ ತಳ್ಳಿದಂತೆ ಸುಂಯ್ಗುಡುತ್ತದೆ ಗೂಳಿಯಂತೆ ಗಾಳಿ ಬಡಿದುಕೊಳ್ಳುವ ಕಿಡಕಿ ಕದ ಗಂಡನ ಖಾಲಿಯೆದೆಯ ಹಾಗೆ ಪಟಪಟ ದಿನಕ್ಕೆ ಹತ್ತು ಸಲ ಎಂದು ಬರುತ್ತಿ ಎಂಬ ಫೋನು ಕಿವಿಗಾನಿಸಿ ನಗುತ್ತಾಳೆ ಹೊಸ ವಧು ಕಿಲಕಿಲ ಆದರೆ ಈ ಪದ್ಧತಿಯನ್ನು ಶಿಕ್ಷೆ ಎಂದು ಭಾವಿಸುವ ದಂಪತಿಗಳು ಗಮನಿಸಬೇಕಾದ ಅಂಶವೊಂದಿದೆ. ವರಕವಿ ಬೇಂದ್ರೆ ಹೇಳುತ್ತಾರೆ – ಗಾಳಿ ಗೋಳಿಡುವಂತೆ ಭೋರಾಡುತಿಹುದು                       ಬಾಳುವೆಯೆ ಹೊಸತೊಂದು ಒಗಟವಾಗಿಹುದು ಅದೇ ಆಗ ಹೊಸ ಬಾಳುವೆಯ ಒಗಟು ಬಿಡಿಸಲಾರಂಭಿಸಿದ ಜೋಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಒಂದು ತಿಂಗಳ ವಿರಹ ಸಹಾಯಕವಾಗಬಹುದು. ಏಕೆಂದರೆ ಬದುಕಿನ ಪ್ರಯಾಣದಲ್ಲಿ ದೈಹಿಕ ಸಾಮಿಪ್ಯವೇ ಎಲ್ಲವೂ ಅಲ್ಲ. ಮನಸ್ಸುಗಳು ಬೆರೆತು, ಕಲೆತು, ನೆನಪುಗಳಲ್ಲಿ ಪರಸ್ಪರರನ್ನು ಮೂಡಿಸಿಕೊಳ್ಳುತ್ತ ರೂಪಿಸಿಕೊಳ್ಳುತ್ತ ಧ್ಯಾನಿಸುತ್ತ ತನ್ಮೂಲಕ ಒಂದು ಸಾಮಿಪ್ಯವನ್ನು ಖುದ್ದು ಸೃಷ್ಟಿಸಿಕೊಳ್ಳುವುದಿದೆಯಲ್ಲ ಅದು ನಿಜವಾಗಿ ಆಗಬೇಕಿರುವ ಮಿಲನ. ಇಂತಹ ದೈಹಿಕ ದೂರದ ಮಿಲನದಲ್ಲಿ ಆತ್ಮಗಾನವೊಂದು ಹುಟ್ಟಿ ಬರುತ್ತದೆ. ಮತ್ತದು ಬದುಕಿಡೀ ಕೂಡಿ ಹಾಡುವ ಯುಗಳಗೀತೆಗೆ ಸೂಕ್ತ ರಾಗ-ಪ್ರಸ್ತಾರವಾಗುತ್ತದೆ. ಮದುವೆಯ ನಂತರ ಒಟ್ಟಿಗಿದ್ದು ಪರಸ್ಪರರಿಗೆ ಕಲಿಸಿದ್ದನ್ನು ದೂರ ಕೂತು ರಿವಿಜನ್ ಮಾಡಿಕೊಂಡು ಬಂದರೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗಬಹುದೊ ಏನೊ. ಕಾಳಿದಾಸನ ಪ್ರಸಿದ್ಧ ಕಾವ್ಯ ಮೇಘದೂತದಲ್ಲಿ ಶಾಪಗ್ರಸ್ತನಾದ ಯಕ್ಷ ತನ್ನ ಸಂದೇಶ ರವಾನೆಗಾಗಿ ಮೋಡಗಳು ಬರುವ ಆಷಾಢ ಮಾಸವನ್ನು ಬಹಳ ಕಾತುರನಾಗಿ ಕಾಯುತ್ತಾನೆ. ಅವನಿಗೆ ಬಂಧು ಸ್ವರೂಪಿ ಮೇಘದೂತನ ಭೆಟ್ಟಿಯಾಗುವುದು “ಆಷಾಢಸ್ಯ ಪ್ರಥಮ ದಿವಸೆ ” ಬೇಂದ್ರೆಯವರು ಕನ್ನಡ ಮೇಘದೂತದಲ್ಲಿ ಬರೆಯುವಂತೆ “ಗಾಳಿ ಬೀಸುವುದು ನಿನ್ನ ನೂಕಿಸುತ ಮಂದ ಮಂದವಾಗಿ           ಚೂಚು ಚಾಚಿ ಚಾದಗೆಯು, ಎಡಕೆ ಕೂಗುವುದು ಚೆಂದವಾಗಿ ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ ಹೀಗೆ ಮಂಕು ಕವಿದ ಪ್ರಕೃತಿ, ವಿರಹದುರಿಯ ತೊಳಲಾಟದ ನವ ಜೋಡಿ, ಹಬ್ಬ ಹುಣ್ಣಿಮೆ ಕಾಣದ ದೇವರು ಎಲ್ಲರನ್ನೂ ಬೆದರಿಸಿ ತೆಪ್ಪಗೆ ಕೂರಿಸುವ ಗಾಳಿಯೆದುರು ನಿರುತ್ತರರಾಗುತ್ತಾರೆ. ಹೆಪ್ಪುಗಟ್ಟಿದ ಕಪ್ಪು ರಾತ್ರಿಗಳಲ್ಲಿ ನೆನಪಾದ ಹಳೆ ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ ಜರ‍್ರನೆ ಸುರಿಯುತ್ತದೆ ಅಬ್ಬರದ ಮಳೆ ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ ಅಗಲಿದ ಗಂಡ-ಹೆಂಡಿರು ಮತ್ತು ದೇವರು ಆದರೆ ಈಗ ನಾವು ನೋಡುತ್ತಿರುವ ಆಷಾಢ ತನ್ನ ಮೊದಲಿನ ವಿಲಾಸ ವಿಭ್ರಮದಿಂದ ವಿಜೃಂಭಿಸುತ್ತಿಲ್ಲ. ನಾವು ಬರಿದಾಗಿಸಿದ ಪ್ರಕೃತಿಯ ಒಡಲು ನೋವಿನ ಮಡಿಲಾಗಿ ಋತುಮಾನಗಳು ಅಸ್ತವ್ಯಸ್ತಗೊಂಡು ಉದ್ವಸ್ಥಗೊಂಡಿವೆ. ಕುವೆಂಪು ಅವರು ತಾವು ಕಂಡ ಆಷಾಢದ ವೈಭವವನ್ನು ಚಿತ್ರಿಸಿದ ರೀತಿಗೆ ಈಗ ಪ್ರತ್ಯಕ್ಷವಾಗಿ ಕಾಣಬೇಕೆನ್ನುವ ಹಂಬಲ ಹುಸಿಹೋಗುತ್ತಿದೆ ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ  ಉತ್ತು ಬಿತ್ತು ನೆಲದ ಕರುಣೆಯ ಧ್ವನಿಯಂತೆ ಕುಡಿಯೊಡೆವ ಮೊಳಕೆಯ ನಿರೀಕ್ಷೆಯಲ್ಲಿರುವ ರೈತ ಆಷಾಢದ ಮಳೆಗಾಗಿ ತೀವೃವಾಗಿ ಹಂಬಲಿಸುತ್ತಾನೆ. ಪುನರ್ವಸು ಮಳೆಗೆ ಪುಳಕಗೊಳ್ಳುವ ಇಳೆ ದಳದಳವರಳಿ ಬೆಳೆಗಳ ಕಣ್ಣು ಹೊಳೆಸುತ್ತದೆ. ಆದರೆ ಈಗೀಗ ಮಳೆ ಹುಸಿ ಹೋಗುತ್ತಿದೆ. ಬೇಂದ್ರೆಯವರ ಓ ಆಷಾಢ ಪದ್ಯದಲ್ಲಿ ಈ ಬೇಡಿಕೆ ದೈನ್ಯದಿಂದ ಮಂಡಿಸಲ್ಪಟ್ಟಿದೆ. ಓ ಆಷಾಢಾ ಆಷಾಢಾ ಆಡಿಸ್ಯಾಡಬೇಡಾ ದುರುರ‍್ಹಾಂಗ | ನೆರಳು ಚಲ್ಲಿ ಆಸೀ ಹಚ್ಚೀ | ಕಸಕೊಂಢಾಂಗ ಬಂತು ಮೋಡಾ | ಹೋತು ಮೋಡಾ ನೋಡಾ ನೋಡಾ ಈಗೀಗ ಆತ್ಮಹತ್ಯೆಗಿಳಿದಿರುವ ರೈತರ ಗೋಳನ್ನು ಕಂಡಾಗ ಬೇಂದ್ರೆಯವರ ಪದ್ಯದ ಮುಂದುವರಿದ ಭಾಗ ನೆನಪಾಗುತ್ತದೆ ಮೊದಲ ಬಿತ್ತಿಗೀ ಮೊಳಕೀ ಗೋಣು ಚೆಲ್ಯಾವ ತೂಕ ತಪ್ಪಿದ ಮೂಕ ಪ್ರಾರ್ಥನೀ ಮುಗಿಲಿಗೆ ಸಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಮೋಡಾ ಮಣ್ಣೆತ್ತೂನೂ ನೀರಡಿಸ್ಯಾವ ಒಕ್ಕಲಿಗನ ಕಣ್ ಬಿಡಿಸ್ಯಾವ ಓ ಆಷಾಢಾ ಎಂತೆಂತಹ ಆಧುನಿಕ ಆವಿಷ್ಕಾರಗಳಾಗಿವೆ ಎಂದರೂ ಕೂಡ ಮನುಜನ ಬಾಳು ಸೃಷ್ಟಿಯ ಸಮಷ್ಟಿಯ ಒಟ್ಟಂದದ ಹಂದರದಲ್ಲಿಯೇ ಅರಳಬೇಕಾದ ಹೂವು. ಹಾಗಲ್ಲದಿದ್ದರೆ ಹಾಹಾಕಾರದ ಗೋಳಿನ ಬಾಳು ನಮ್ಮದಾಗುತ್ತದೆ. ನಿಸರ್ಗದ ಜೊತೆಗೆ ಅನುಸಂಧಾನ ನಡೆಸುವ ರೀತಿಯಲ್ಲಿ ಬದುಕಲು ಕಲಿತ ದಿನ ಮಾನವ ನಿಜವಾದ ಜಾಣನಾಗುತ್ತಾನೆ. ಆಯಾ ಋತುಗಳು, ಆಯಾ ಮಾಸಗಳು ತಮ್ಮ ಸಹಜ ಗುಣ-ಲಕ್ಷಣಗಳೊಂದಿಗೆ ಮೈದೋರಿ ನಮ್ಮ ಬದುಕನ್ನು ಹಸನುಗೊಳಿಸುತ್ತವೆ. *********

ಹಿಂಡು ಮೋಡದ ಗಾಳಿ ಸವಾರಿ Read Post »

You cannot copy content of this page

Scroll to Top