ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-41 ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ. ‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ ಆ ಕುರಿತು ನಾನು ಮಾತಾಡುವುದಿಲ್ಲ. ಅದು ನಿಮಗೂ ಅವರಿಗೂ ಸಂಬಂಧಿಸಿದ ವಿಚಾರ. ಆದರೆ ನೀವೀಗ ಆಸಕ್ತಿಯಿಂದಲೋ, ಅಸಮಾಧಾನದದಿಂದಲೋ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಧರ್ಮ. ಆ ಉದ್ದೇಶದಿಂದ ಹೇಳುತ್ತೇನೆ ಕೇಳಿ. ನಾಗರಹಾವೇ ಅಂತಲ್ಲ ಬೇರೆ ಯಾವುದೇ ಹಾವೊಂದು ನಮ್ಮ ಮನೆ ಮತ್ತು ವಠಾರದೊಳಗೆ ಪ್ರವೇಶಿಸಬೇಕಾದರೆ ಆ ಜೀವಿಗೆ ಹಸಿವು ಅಥವಾ ಬಾಯಾರಿಕೆಯಾಗಿದೆ ಮತ್ತದರ ಆಹಾರದ ಜೀವಿಗಳಾದ ಇಲಿ, ಹೆಗ್ಗಣ, ನಾಯಿಮರಿ, ಬೆಕ್ಕು, ಕೋಳಿ ಅಥವಾ ಇನ್ನಿತರ ಜೀವಿಗಳು ಹಾಗೂ ನೀರು ನಮ್ಮ ವಠಾರದಲ್ಲಿಯೇ ಇದೆ ಅಥವಾ ಆ ಹಾವು ಅಲ್ಲಿರಬಹುದಾದ ತನ್ನ ಸಂಗಾತಿಯನ್ನು ಅರಸುತ್ತಲೂ ಬಂದಿರಬಹುದು ಎಂದರ್ಥ. ಆದ್ದರಿಂದ ಯಾವುದೇ ಒಂದು ಬಡಾವಣೆಯೊಳಗೆ ಹಾವುಗಳಿಗೆ ಸಂಬಂಧಿಸಿದ ಇಂಥ ವಸ್ತುಗಳು ಇಲ್ಲವೇ ಇಲ್ಲವೆಂದಾದಲ್ಲಿ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಯಾವ ಹಾವುಗಳೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಒಂದುವೇಳೆ ಕಾಣಿಸಿಕೊಂಡವೆಂದರೆ ಅದು ಪ್ರಪಂಚದ ಅದ್ಭುತಗಳಲ್ಲಿ ಒಂದೆನ್ನಬಹುದು. ನಾವೆಲ್ಲರೂ ಯೋಚಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೇನೆಂದರೆ ಕೇರೆಹಾವು ಅಥವಾ ಇನ್ನಿತರ ಯಾವುದೇ ಹಾವುಗಳು ನಮ್ಮ ಸುತ್ತಮುತ್ತ ಕಂಡು ಬಂದರೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ನಾವುಗಳು ಅದೇ ನಾಗರಹಾವೊಂದು ಕಾಣಿಸಿಕೊಂಡ ಕೂಡಲೇ ಏನೇನೋ ತಪ್ಪುನಂಬಿಕೆ ಮತ್ತು ಅರ್ಥವಿಲ್ಲದ ಭಯಕ್ಕೆ ಬಿದ್ದು ಸೋತು ಕುಗ್ಗುತ್ತೇವೆ ಯಾಕೆ…? ಈ ಪ್ರಶ್ನೆಯನ್ನು ಯಾವತ್ತಾದರೂ ನಮಗೆ ನಾವೇ ಕೇಳಿಕೊಂಡಿದ್ದುಂಟಾ…? ಇಲ್ಲ ಅಲ್ಲವೇ? ಬದಲಿಗೆ ನಾವೇನು ಮಾಡುತ್ತೇವೆಂದರೆ ಹಿಂದಿನವರು ಹೇಳುತ್ತ ಬಂದಿರುವ ಅಥವಾ ಯಾರೋ ಅಜ್ಞಾನಿಗಳು ಅಂಥ ಸಂದರ್ಭದಲ್ಲೇ ಹೆಣೆಯುವ ಕಟ್ಟುಕಥೆ ಮತ್ತು ಮೂಢನಂಬಿಕೆಗಳನ್ನೇ ನಂಬಿ ಭಯದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವಲ್ಲದೇ ಅದೇ ವಿಷಯವನ್ನು ಹಿಡಿದುಕೊಂಡು ಮುಂದಿನ ಜೀವನದ ಸಣ್ಣಪುಟ್ಟ ಸುಖಸಂತೋಷಗಳನ್ನೂ ಹಾಳು ಮಾಡಿಕೊಳ್ಳಲು ತೊಡಗುತ್ತೇವೆ!    ಹಾಗಾಗಿ ಸುಮಿತ್ರಮ್ಮಾ ಎಲ್ಲಿಯವರೆಗೆ ನಮ್ಮಲ್ಲಿ ಯಾವುದೇ ಒಂದು ವಿಷಯದ ಕುರಿತು ಸಾಮಾನ್ಯ ಜ್ಞಾನವೇ ಇರುವುದಿಲ್ಲವೋ ಅಲ್ಲಿಯತನಕ ಅದರ ಕುರಿತ ಅಜ್ಞಾನ ಮತ್ತು ಭಯಗಳೂ ನಮ್ಮನ್ನು ಕಾಡುವುದು ಸಹಜವೇ. ಅಂಥ ಭಯ ಪೀಡಿತರಾದವರಿಗೆ ನೀವು ಹೇಳಿದ ಹಾಗೆ ಹಾವಿನ ಸಮಸ್ಯೆಯೂ ಎದುರಾಯಿತೆಂದರೆ ಅವರು ಸಂಪೂರ್ಣ ಕಂಗೆಟ್ಟುಬಿಡುತ್ತಾರೆ. ಅಂಥ ಪರಿಸ್ಥಿತಿಯಲ್ಲಿಯೇ ಆ ಅಮಾಯಕರ ದೌರ್ಬಲ್ಯವನ್ನು ಸುತ್ತಮುತ್ತಲಿನ ಅರೆಬರೆ ಜ್ಞಾನಿಗಳೋ ಅಥವಾ ಪ್ರಕೃತಿಯ ಜೀವಜಾಲ ಪ್ರಕ್ರಿಯೆಯ ಬಗ್ಗೆ ಎಳ್ಳಷ್ಟೂ ತಿಳಿವಳಿಕೆಯಿಲ್ಲದ ಜ್ಯೋತಿಷ್ಯರುಗಳೋ ಅಥವಾ ಸ್ವಯಂಘೋಷಿತ ಗುರೂಜಿ, ಬಾಬಾಗಳೋ ತಮ್ಮ ಲಾಭಕ್ಕಾಗಿ ಬಳಸಿಕೊಂಡು ತಾವೇ ಸೃಷ್ಟಿಸಿದ ಮೂಢನಂಬಿಕೆಗಳನ್ನು ಅವರೊಳಗೆ ತುರುಕಿಸುತ್ತ ಜೀವನ ಪರ್ಯಂತ ಅವರನ್ನು ಶೋಷಿಸುತ್ತಾ ಬಂದಿರುವುದು ಈಗೀಗ ದೇಶದಾದ್ಯಂತ ಕಂಡು ಬರುವ ವಿಲಕ್ಷಣ ಸಮಸ್ಯೆಯಲ್ಲವೇ!’ ಎಂದು ನರಹರಿಯು ಸುಮಿತ್ರಮ್ಮನನ್ನು ಅನುಕಂಪದಿಂದ ನೋಡುತ್ತ ವಿವರಿಸಿದ. ಆದರೆ ಆರಂಭದಲ್ಲಿ ಅವನ ಮಾತುಗಳನ್ನು ಒಲ್ಲದ ಮನಸ್ಸಿನಿಂದ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮನಲ್ಲಿ ಬಳಿಕ ವಿಚಿತ್ರ ತಳಮಳವೂ ಗೊಂದಲವೂ ಆರಂಭವಾಗಿತ್ತು. ಹಾಗಾಗಿ ಅವರು ಮೌನವಾಗಿ ಅವನ ವಿಚಾರಧಾರೆಯನ್ನು ಆಲಿಸತೊಡಗಿದ್ದರು. ಅವರ ಸ್ಥಿತಿಯನ್ನು ಗಮನಿಸಿದ ನರಹರಿಯು ಮತ್ತೆ ಮಾತು ಮುಂದುವರೆಸಿದ. ‘ನಮ್ಮ ವಠಾರದಲ್ಲೂ ಸುತ್ತಾಡುತ್ತಿರುವ ಹಾವಿನ ಕಥೆಯೂ ಇದೇ ಸುಮಿತ್ರಮ್ಮ. ಹಸಿದ ಹಾವೊಂದಕ್ಕೆ ಅದರ ಆಹಾರದ ಜೀವಿಗಳು ನೇರವಾಗಿ ಬಾಯಿಗೆ ಬಂದು ಬೀಳುತ್ತವೆಯೇ ಹೇಳಿ…? ಆ ಹಾವು ಅವುಗಳನ್ನು ಹುಡುಕಾಡಿ ಬೆನ್ನುಹತ್ತಿ ಬೇಟೆಯಾಡಿಯೇ ತಿನ್ನಬೇಕಲ್ಲವೇ. ನಾನು ಸ್ವತಃ ಕಂಡ, ಓದಿದ ಮತ್ತು ಒಂದಷ್ಟು ಉರಗತಜ್ಞರಿಂದಲೂ ತಿಳಿದುಕೊಂಡ ಮಾಹಿತಿಯ ಪ್ರಕಾರ ಇನ್ನೊಂದೆರಡು ತಿಂಗಳಲ್ಲಿ ಹಾವುಗಳ ಸಂತಾನೋತ್ಪತ್ತಿ ಕಾಲ ಆರಂಭವಾಗಲಿದೆ. ಆ ಕಾಲಕ್ಕಿಂತ ಒಂದೆರಡು ತಿಂಗಳು ಮುಂಚಿತವಾಗಿ ಹೆಚ್ಚಿನ ಪ್ರಭೇದದ ಹಾವುಗಳೆಲ್ಲ ತೀವ್ರ ಆಹಾರದ ಹುಡುಕಾಟದಲ್ಲಿ ತೊಡಗುತ್ತವೆ. ಆ ಮೂಲಕ ಅವು ಮುಂದಿನ ಎರಡು, ಮೂರು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಿಂದು ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದು ವಂಶೋತ್ಪತ್ತಿಗೆ ತಯಾರಾಗುತ್ತವೆ. ಅಂಥ ಕಾಲದಲ್ಲಿ ಹಾವುಗಳ ಓಡಾಟವೂ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ ನಾಗನಿಗೆ ಸಂಬಂಧಿಸಿದ ನಮ್ಮ ನಂಬಿಕೆ, ಆಚರಣೆಗಳಿಗೂ ಜೀವ ಬರುತ್ತದೆ. ಹಾಗಾಗಿ ಆ ನಾಗರಹಾವಿನ ವಿಷಯದಲ್ಲೂ ಯಾರ್ಯಾರೋ ಏನೇನೋ ಹೇಳಿದ್ದನ್ನೂ ಮತ್ತು ನಿಮಗೆ ನೀವೇ ಒಂದಷ್ಟು ಕಲ್ಪಿಸಿಕೊಂಡದ್ದನ್ನೂ ಕಲಸುಮೇಲೊಗರ ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಂಡಿದ್ದೀರಷ್ಟೆ!’ ಎಂದು ಆಪ್ತವಾಗಿ ವಿವರಿಸಿದ.    ನರಹರಿಯ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಂಡ ಸುಮಿತ್ರಮ್ಮ ಕೊನೆಯಲ್ಲಿ ಅವನ ವಿಚಾರದಲ್ಲಿದ್ದ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಪೇಚಾಡತೊಡಗಿದರು. ಅತ್ತ ರಾಧಾಳಿಗೂ ತನ್ನ ನಂಬಿಕೆಯು ನಿಂತ ನಿಲುವಿನಲ್ಲೇ ಬುಡಮೇಲಾದುದು ಗೊಂದಲವನ್ನೂ ವಿಸ್ಮಯವನ್ನೂ ತರಿಸಿತ್ತು. ಆದರೆ ಡಾ. ನರಹರಿ ಅವರದೇ ಹಿತಚಿಂತಕನಾಗಿ ಕರುಣೆಯಿಂದ ಮಾತಾಡಿದ್ದ. ಅವಳು ಕೂಡಾ ಅವನ ಮಾತುಗಳನ್ನು ಯಾವುದೇ ವಿರೋಧವಿಲ್ಲದೆ ತಲ್ಲೀನತೆಯಿಂದ ಕೇಳಿಸಿಕೊಂಡಿದ್ದಳು. ಆದ್ದರಿಂದ ಅಷ್ಟರವರೆಗೆ ಅವಳನ್ನು ಪೀಡಿಸುತ್ತಿದ್ದ ನಾಗದೋಷವೆಂಬ ಭಯವು ಮೆಲ್ಲನೆ ಕಣ್ಮರೆಯಾಗಿ ಹಗುರ ಭಾವವು ಮೂಡಿತು. ಹಾಗಾಗಿ ಅವಳು, ‘ದೇವರೇ ನಮ್ಮನ್ನು ಕಾಪಾಡಿದೆಯಪ್ಪಾ…!’ ಎಂದು ಕಣ್ಣು ತುಂಬಿಕೊಂಡು ಮನದಲ್ಲೇ ಕೈಮುಗಿದವಳು,‘ಅಂದರೆ ಡಾಕ್ಟ್ರೇ, ನನ್ನ ಗಂಡನನ್ನು ಕಾಡುತ್ತಿರುವುದು ನಾಗದೋಷದ ತೊಂದರೆಯಲ್ಲವಾ…? ಎಂದು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳುವ ಆತುರದಿಂದ ಪ್ರಶ್ನಿಸುತ್ತ ಕಣ್ಣೀರೊರೆಸಿಕೊಂಡಳು. ‘ಛೇ, ಛೇ! ಅಲ್ಲಮ್ಮಾ. ಇದೊಂದು ಯಾರಿಗೂ ಬರಬಹುದಾದ ಗಂಭೀರ ಕಾಯಿಲೆ! ಆದರೂ ಹೆದರಬೇಕಾಗಿಲ್ಲ. ಇದಕ್ಕೂ ಸರಿಯಾದ ಚಿಕಿತ್ಸೆಯಿದೆ! ಎಂದು ನರಹರಿ ಮೃದುವಾಗಿ ಹೇಳಿ ಅವಳನ್ನು ಸಂತೈಸಿದ. ಮರುಕ್ಷಣ ರಾಧಾ ಅವನನ್ನು ಧನ್ಯತೆಯಿಂದ ದಿಟ್ಟಿಸಿದವಳು ತಟ್ಟನೆ ಸುಮಿತ್ರಮ್ಮನತ್ತ ಹೊರಳಿ,‘ನಮ್ಮಂಥ ಬಡವರನ್ನು ಹೀಗೆಲ್ಲ ಶೋಷಿಸಬಾರದಿತ್ತು ಸುಮಿತ್ರಮ್ಮಾ ನೀವು…!’ ಎಂಬಂತೆ ವಿಷಾದದಿಂದ ದಿಟ್ಟಿಸಿದಳು. ಅವಳ ನೋಟವನ್ನು ಕಂಡ ಸುಮಿತ್ರಮ್ಮನಿಗೆ ಅವಮಾನದಿಂದ ನಿಂತ ನೆಲವೇ ಕುಸಿದಂತಾಯಿತು. ಆದ್ದರಿಂದ ಎತ್ತಲ್ಲೋ ನೋಡುತ್ತ ನಿಂತರು. ಅದನ್ನು ಗಮನಿಸಿದ ನರಹರಿಯು,‘ಸುಮಿತ್ರಮ್ಮಾ, ನಮ್ಮ ನಾಡಿನ ಒಂದಷ್ಟು ಅಮಾಯಕ ಜನರು, ನಾಗರ ಹಾವಿಗೆ ಸಂಬಂಧಿಸಿದೆ ಎಂದು ನಂಬಿರುವ ‍ನಾಗದೋಷ ಎಂಬ ಸಂಗತಿ ಅಥವಾ ಅಂಥದ್ದೊಂದು ನಂಬಿಕೆಯ ಕುರಿತು ನಮ್ಮ ಸನಾತನವಾದ ಯಾವ ಶಾಸ್ತ್ರಗ್ರಂಥಗಳಲ್ಲೂ ಉಲ್ಲೇಖವಿಲ್ಲಮ್ಮಾ…! ಇದು ನಮ್ಮ ನಡುವೆಯೇ ಇರುವ ಕೆಲವು ಸ್ವಾರ್ಥ ಬುದ್ಧಿಗಳು ತಮ್ಮ ತಮ್ಮ ಲಾಭಕ್ಕೋಸ್ಕರ ಸೃಷ್ಟಿಸಿರುವ ವ್ಯಾಪಾರಿ ನಂಬಿಕೆಗಳಷ್ಟೆ!’ ಎಂದು ಒತ್ತಿ ಹೇಳಿದ.    ಅಷ್ಟು ಕೇಳಿದ ಸುಮಿತ್ರಮ್ಮ ಈಗ ತೀವ್ರ ಗೊಂದಲಕ್ಕೆ ಬಿದ್ದರು. ಆದರೂ ನರಹರಿಯೊಂದಿಗೆ ವಾದಿಸುವ ಶಕ್ತಿಯಾಗಲೀ, ಜ್ಞಾನವಾಗಲೀ ಇಲ್ಲದ ಅವರು,‘ಏನೋ ಡಾಕ್ಟ್ರೇ, ನನಗೊಂದೂ ಅರ್ಥವಾಗುವುದಿಲ್ಲ. ಆ ಗುರೂಜಿಯವರು ನೋಡಿದರೆ ನಾಗದೋಷದಿಂದಲೇ ನಾಗರಹಾವು ಸುತ್ತಾಡುವುದು. ಅದೇ ಕಾರಣಕ್ಕೆ ನಿಮ್ಮನ್ನು ಕಾಯಿಲೆ ಕಸಾಲೆಗಳೂ ಮತ್ತಿತರ ತೊಂದರೆಗಳೂ ಕಾಡುತ್ತಿರುವುದು. ಆ ದೋಷವನ್ನು ನಿವಾರಿಸಿಕೊಳ್ಳದಿದ್ದರೆ ಕೊನೆಯ ತನಕವೂ ನೀವೆಲ್ಲ ನರಳುತ್ತಲೇ ಸಾಯಬೇಕಾಗುತ್ತದೆ! ಅದಕ್ಕೆ ಆ ಶಾಸ್ತ್ರ ಮಾಡಿಸಿ, ಈ ಪೂಜೆ ಮಾಡಿಸಿ ಅಂತಾರೆ. ನೀವು ನೋಡಿದರೆ ಬೇರೇನೋ ಹೇಳುತ್ತಿದ್ದೀರಿ. ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಒಂದೂ ಅರ್ಥವಾಗುತ್ತಿಲ್ಲ. ಆದರೆ ಈಗ ಯೋಚಿಸಿದರೆ ಆ ಗುರೂಜಿಯನ್ನೂ ಊರ ಕೆಲವರ ಮಾತುಗಳನ್ನೂ ನಂಬಿಕೊಂಡು ನಾನೂ ಹೆದರಿದೆನಲ್ಲದೇ ಈ ಪಾಪದ ಹುಡುಗಿಯನ್ನೂ ಹೆದರಿಸಿಬಿಟ್ಟೆನೇನೋ ಅಂತನೂ ಅನ್ನಿಸುತ್ತದೆ. ಅಯ್ಯೋ ದೇವರೇ…!’ಎಂದು ಪಶ್ಚಾತ್ತಾಪಪಟ್ಟರು. ಅಷ್ಟು ಕೇಳಿದ ರಾಧಾಳಲ್ಲೂ ನೆಮ್ಮದಿಯ ಭಾವ ಮೂಡಿತು. ‘ಸುಮಿತ್ರಮ್ಮಾ, ಒಬ್ಬ ಮನುಷ್ಯನ ಬಹಳ ದೊಡ್ಡ ಗೆಲುವೆಂದರೆ ಅವನು ತನ್ನ ತಪ್ಪಿಗೆ ಪಡುವ ಪಶ್ಚಾತ್ತಾಪವಂತೆ! ಆದ್ದರಿಂದ ಯಾವುದೇ ಒಂದು ವಿಷಯವಿರಲಿ ಅದನ್ನು ಕುರುಡಾಗಿ ನಂಬುವುದಕ್ಕಿಂತ ಧೈರ್ಯದಿಂದ ಪ್ರಶ್ನಿಸುತ್ತ ಸ್ವಂತ ಬುದ್ಧಿ ಮತ್ತು ವಿವೇಕದಿಂದ ವಿಚಾರ ಮಾಡಿ ನೋಡಿ ಸ್ವೀಕರಿಸುವುದು ಒಳ್ಳೆಯದಲ್ಲವೇ. ನಾವೆಲ್ಲರೂ ಆ ಮನಸ್ಥಿತಿಯನ್ನು ಬೆಳೆಸಿಕೊಂಡೆವೆಂದರೆ ಆಮೇಲೆ ಯಾರೂ ನಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ! ನಮ್ಮ ಗೋಪಾಲ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದಾನೆ. ಈ ರೋಗ ಭಾದಿಸುವ ಮನುಷ್ಯರು ಕೆಲವೊಮ್ಮೆ ಅದರ ತೀವ್ರತೆಗೆ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾರೆ. ಅವನ ವರ್ತನೆಗಳನ್ನೂ, ನಿಮ್ಮೊಳಗಿನ ನಂಬಿಕೆಗಳನ್ನೂ ಒಂದಕ್ಕೊಂದು ತಾಳೆ ಹಾಕಿ ಭ್ರಮೆಗೆ ಬಿದ್ದು ಹೆದರಿಕೊಂಡಿದ್ದೀರಷ್ಟೆ!’ ಎಂದು ಹೇಳಿದ ನರಹರಿ ರಾಧಾಳತ್ತ ತಿರುಗಿ,‘ನೋಡಮ್ಮಾ ನಿಮ್ಮ ಬಂಧುಗಳು ಯಾರಾದರಿದ್ದರೆ ಬೇಗ ಕರೆಸಿಕೊಂಡು ಇವನನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ. ಹುಷಾರಾಗುತ್ತಾನೆ!’ಎಂದು ಹೇಳಿ ಹೊರಡಲನುವಾದ. ಆದರೆ ರಾಧಾಳಿಗೆ ಭಯವಾಯಿತು.‘ಅಯ್ಯಯ್ಯೋ ಡಾಕ್ಟ್ರೇ… ಇಲ್ಲಿ ಸಮೀಪದಲ್ಲಿ ನಮ್ಮವರು ಯಾರೂ ಇಲ್ಲವಲ್ಲ ಏನು ಮಾಡಲೀ…!’ಎಂದು ಅಳತೊಡಗಿದಳು. ನರಹರಿಗೆ ಕನಿಕರವೆನಿಸಿತು.‘ಆಯ್ತಮ್ಮ ಅಳಬೇಡಿ. ಕಾರು ತರುತ್ತೇನೆ. ಅಡ್ಮಿಟ್ ಮಾಡೋಣ!’ಎಂದವನು ಕೂಡಲೇ ಮನೆಗೆ ಹೋಗಿ ಕಾರು ತಂದು ರಾಧಾಳೊಂದಿಗೆ ಗೋಪಾಲನನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೊರಟ. ನರಹರಿಯ ಕಾರು ಕಣ್ಮರೆಯಾಗುವವರೆಗೂ ಮರಗಟ್ಟಿ ನಿಂತು ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಸುಮಿತ್ರಮ್ಮ ಆಮೇಲೆ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಅರ್ಥವಾಗದ ಆಲೋಚನೆ ಮತ್ತು ದ್ವಂದ್ವ ತಾಕಲಾಟಗಳಿಗೆ ಸಿಲುಕಿದ್ದ ಅವರ ಮನಸ್ಸು ಗಿಡುಗನ ದಾಳಿಯಿಂದ ನೆಲೆ ತಪ್ಪಿದ ಹಕ್ಕಿಯಂತೆ ಒದ್ದಾಡುತ್ತಿತ್ತು. ಅವರು ಅದನ್ನು ಸಹಿಸಲಾಗದೆ ಅಶಾಂತರಾಗಿ ನಡೆಯುತ್ತಿದ್ದರು.                                                                                 *** ಆಸ್ಪತ್ರಗೆ ಹೋಗುತ್ತಿದ್ದ ನರಹರಿಯು ರಾಧಾಳೊಡನೆ ಮಾತಿಗಾರಂಭಿಸಿದವನು, ನಮ್ಮ ಪ್ರಾಚೀನರಿಂದ ಸೃಷ್ಟಿಯಾದ ನಾಗಾರಾಧನೆ ಮತ್ತು ಅದರ ಮಹತ್ವದ ಕುರಿತು ಹಾಗೂ ಅಂಥದ್ದೊಂದು ನಿಸರ್ಗಾರಾಧನೆಯ ಆಚರಣೆಗೆ ಈಚೀಚೆಗೆ ಸೋಕಿರುವ ‘ದೋಷ’ ಎಂಬ ಹುಸಿನಂಬಿಕೆಯ ಕುರಿತೂ ಅವಳಿಗೆ ಸರಳವಾಗಿ ವಿವರಿಸಿ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತ ಸಾಗಿದ. ಅದರಿಂದ ಅವಳಲ್ಲೂ ಆ ಕುರಿತ ಅಜ್ಞಾನ ಮತ್ತು ಭಯ ನಿಧಾನವಾಗಿ ಕಡಿಮೆಯಾಗುತ್ತ ಅವಳು ಮತ್ತಷ್ಟು ಗೆಲುವಾದಳು. ಆಗ ಅವಳಿಗೊಂದು ವಿಚಾರವೂ ನೆನಪಿಗೆ ಬಂತು. ಆದ್ದರಿಂದ ತಮ್ಮ ವಠಾರದಲ್ಲಿ ಸುತ್ತಾಡುತ್ತಿದ್ದ ನಾಗರಹಾವಿನ ಕಥೆಯನ್ನೂ ಮತ್ತದರ ಸಲುವಾಗಿ ಸುಮಿತ್ರಮ್ಮ ಬಂದು ತಮ್ಮನ್ನು ಹೆದರಿಸುತ್ತಿದ್ದುದನ್ನೂ, ಅದಕ್ಕೆ ಸಂಬಂಧಿಸಿ ಸಮೀಪದ ದೊಡ್ಡ ಕಾಡೊಂದು ಇನ್ನು ಕೆಲವೇ ತಿಂಗಳೊಳಗೆ ನೆಲಸಮವಾಗಿ ಜೀರ್ಣೋದ್ಧಾರವಾಗಲಿರುವುದನ್ನೂ, ಆ ಕೆಲಸವನ್ನು ಊರಿನವರೂ ಮತ್ತು ತಮ್ಮ ವಠಾರದವರೂ ಕೂಡಿಯೇ ಮಾಡಬೇಕೆಂದು ಏಕನಾಥ ಗುರೂಜಿಯವರು ಆಜ್ಞೆ ಮಾಡಿರುವುದನ್ನೂ ಸವಿವರವಾಗಿ ಅವನಿಗೆ ತಿಳಿಸಿದಳು. ಅಷ್ಟು ಕೇಳಿದ ನರಹರಿಗೆ ತನ್ನ ಹೃದಯವನ್ನು ಯಾರೋ ಬಲವಾಗಿ ಹಿಂಡಿದಂತಾಯಿತು! ಏಕೆಂದರೆ ಅವನು ಕೂಡಾ ಬುಕ್ಕಿಗುಡ್ಡೆಯ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನೂ ಮುಖ್ಯವಾಗಿ ನಿತ್ಯ ಹರಿದ್ವರ್ಣದ ಆ ದೇವರಕಾಡನ್ನೂ, ಅದರ ಶುದ್ಧ ಆಮ್ಲಜನಕವನ್ನೂ ಹಾಗೂ ವರ್ಷವಿಡೀ ತುಂಬಿ ಹರಿಯುತ್ತ ಇಡೀ ಊರಿಗೆ ತಣ್ಣನೆಯ ನೀರನ್ನು ಪೂರೈಸುತ್ತಿದ್ದ ಅಲ್ಲಿನ ಬೃಹತ್ ಮದಗವನ್ನೂ ನೋಡಿಯೇ ಮನಸೋತು ಅಲ್ಲಿ ಜಾಗವನ್ನು ಕೊಂಡು ಮನೆ ಕಟ್ಟಿಸಿ ಬಾಳಲು ಮನಸ್ಸು ಮಾಡಿದ್ದವನು.    ಅಷ್ಟುಮಾತ್ರವಲ್ಲದೇ, ಅವನು ತನ್ನ ಬಿಡುವಿನ ಸಮಯವನ್ನು ಹಾಗೂ ರಜಾದಿನಗಳ ಬಹುಪಾಲನ್ನು ಸ್ವರ್ಗದಂಥ ಆ ಕಾಡಿನಲ್ಲೂ, ಅದರೊಳಗಿನ ಸರೋವರದ ದಡದಲ್ಲೂ ಕುಳಿತು ಕಳೆಯುತ್ತ ಅಲ್ಲಿನ ಪ್ರಾಣಿಪಕ್ಷಿಗಳ ಕಲವರವನ್ನೂ ಇತರ ಜೀವರಾಶಿಗಳ ವಿಸ್ಮಯ ಜಗತ್ತನ್ನೂ ಕಂಡು ಆಸ್ವಾದಿಸುತ್ತ ಬಂದಂಥ ಮನಸ್ಥಿತಿಯವನು. ಹಾಗಾಗಿ ಆ ಹಸಿರು ತಾಣವನ್ನು ಅವನು ತನ್ನ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ. ಆದರೆ ಆ ಅಮೂಲ್ಯ ಪರಿಸರವು ಇನ್ನು ಕೆಲವೇ ಕಾಲದೊಳಗೆ ಸುಡುಗಾಡಾಗಿ ಬಿಡಲಿದೆ ಎಂಬ ಸತ್ಯವನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ! ಅದೇ ನೋವಿನಿಂದ ಮೌನವಾಗಿ ಕಾರು ಚಲಾಯಿಸುತ್ತಿದ್ದ. ಅವನು ಸಾಗುತ್ತಿದ್ದ ದಾರಿಯುದ್ದಕ್ಕೂ ಕಣ್ಣ ಮುಂದೆ ಚಿತ್ರಪಟಗಳಂತೆ ಸರಿದು ಹೋಗುತ್ತಿದ್ದ ಬೆಟ್ಟಗುಡ್ಡಗಳೂ, ಗಿಡಮರ ಬಳ್ಳಿಗಳೂ

Read Post »

ಇತರೆ

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ ಕತ್ತಲಿನ ಬಗೆಗೆ ಸೋಜಿಗವೂ ಬೆಳಕಿನ ಬಗೆಗೆ ಬೆರಗು ಹುಟ್ಟಿಸುವ ಹಬ್ಬವೇ ದೀಪಾವಳಿ. ಮನುಷ್ಯ  ಮೊಟ್ಟಮೊದಲು ಬೆಳಕು ನೀಡಿದ ಸೂರ್ಯನ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡ. ನಂತರ ಬೆಂಕಿ ಆವಿಷ್ಕಾರವಾದ ಮೇಲೆ ಬೆಳಕಿನ ಮೂಲವಾದ ಅದು ತನ್ನ ಅಗತ್ಯತೆಗಳನ್ನು ಪೂರೈಸಲು ಸಹಾಯಕವಾದಾಗ ಅದನ್ನು ದೈವತ್ವಕ್ಕೇರಿಸಿದ.  ಹೀಗೆ ಬೆಳಕು ಹಾಗೂ ಅದರ ವಿವಿಧ ಮೂಲಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಮುಖ ಸ್ಥಾನವನ್ನು ನಿರ್ಮಿಸಿಕೊಂಡವು.   ಪ್ರಾಚೀನ ಕಾಲದಿಂದಲೂ ಕತ್ತಲು ನಿಗೂಡತೆ ಅಜ್ಞಾನದ ಸಂಕೇತ .ಬೆಳಕು ಜ್ಞಾನದ ಪ್ರತಿನಿಧಿ. ಬೆಳಕಿನ ಬಲದಲ್ಲಿ ಅಜ್ಞಾನದ ಕತ್ತಲೆ ಹರಿದು ಅರಿವಿನ ವಿವೇಕ ಅರಳುತ್ತದೆ.  ಕತ್ತಲಿನ ಮಾರ್ಗದಲ್ಲಿ ಅರಿವಿನ ದಾರಿ ದೀಪ ಬೆಳಗಿ ಮನುಷ್ಯನಿಗೆ ಚೈತನ್ಯ ತುಂಬಿ ಮಾರ್ಗದರ್ಶಿಯಾಗುತ್ತದೆ. ಹಾಗಾಗಿಯೇ ಎಲ್ಲ ನಾಗರಿಕತೆ ಸಂಸ್ಕೃತಿಗಳಲ್ಲಿ ದೀಪಕ್ಕೆ ಜ್ಯೋತಿಗೆ ಅತ್ಯಂತ ಪ್ರಾಧಾನ್ಯತೆ.   ಬ್ರಹ್ಮಾಂಡದಲ್ಲಿ ಅಂಧಕಾರ ಅಥವಾ ಕತ್ತಲೆಯೆಂಬುದೇ ವ್ಯಾಪಕ ಅಂದರೆ ಕತ್ತಲೆಯೇ ಒಂದು ರೀತಿಯ ನಿರಂತರತೆ .ಆದರೆ ಒಂದು ಸಣ್ಣ ಜ್ಯೋತಿಯು ಕತ್ತಲೆಯನ್ನು ಓಡಿಸುತ್ತದೆ. ತಮಸ್ಸು ಎಂದರೆ ಮನಸ್ಸಿಗೆ ನಯನಕ್ಕೆ ಆವರಿಸಿದ ಅಂಧತ್ವ . ಅಜ್ಞಾನ ಅಂದರೆ ಮನುಷ್ಯನ ಕುರುಡುತನವೇ.  ಹಾಗಾಗಿಯೇ ಬೆಳಕು ಕಣ್ಣಿಗೆ ಕವಿದ ಕತ್ತಲೆಯನ್ನು ದೂರ ಮಾಡುತ್ತದೆ ದೃಷ್ಟಿಗೋಚರವಾಗಿಸುತ್ತದೆ. ವಿಸ್ತೃತ ಪರಿಭಾಷೆಯಲ್ಲಿ ಮನದ ಅಜ್ಞಾನ ತಮವನು ನಿವಾರಿಸಿ ಜ್ಞಾನ ದರ್ಶನ ಮಾಡಿಸುತ್ತದೆ. ಅಂಧಕಾರವೆಂದರೆ ಅದು ಕಪ್ಪು, ವಿಷ . ಬೆಳಕು ಪ್ರಕಾಶ, ಜೀವನದ ಸಂಕೇತ, ಅಮೃತತ್ವದ ದ್ಯೋತಕ . ಹೀಗಾಗಿಯೇ ಬೆಂಕಿ ಬೆಳಕು ಪ್ರಕಾಶ ಇವೆಲ್ಲವೂ ಚೈತನ್ಯದ ಸ್ವರೂಪ.  ಬೆಳಕನ್ನುಂಟು ಮಾಡುವುದು ಎಂದರೆ ದೀಪವನ್ನು ಹಚ್ಚುವುದು ಜ್ಞಾನಾರ್ಜನೆಯ ಸಂಕೇತವಾಗಿ ಶುಭದ ಸೂಚನೆಯಾಗಿ ನಂಬಿಕೆಯ, ಧಾರ್ಮಿಕತೆಯ ಅವಿಭಾಜ್ಯ ಅಂಗವಾಗಿದೆ.   ಕಾರ್ತೀಕ ಮಾಸದಲ್ಲಿ ಬೇಗ ಕತ್ತಲು. ಚಳಿಯ ಕಾಲವಾದ್ದರಿಂದ ವಾತಾವರಣವು ಚಳಿ ಹೆಚ್ಚಾಗಿ ಮಂಕುತನ.  ಇಂತಹ ಸಮಯದಲ್ಲಿ ತಮ ನಿವಾರಕ ದೀಪ ಜ್ಯೋತಿಯನ್ನು ಬೆಳಗುವ ಮೂಲಕ ಮನೆ ಮನಗಳಲ್ಲಿ ಚೈತನ್ಯ ಲವಲವಿಕೆ ಪ್ರವಹಿಸುವ ಆಚರಣೆಯೇ ದೀಪಾವಳಿಯ ಸಂಭ್ರಮದ ಆದಿ.  ಹಿಂದೂ ಧರ್ಮದ ಅತ್ಯಂತ ಜನಪ್ರಿಯ, ಪ್ರತಿ ಮನೆಯಲ್ಲೂ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಅಗ್ನಿಗೆ ನೀಡಿದ ಮಹತ್ತ್ವಕ್ಕೆಉದಾಹರಣೆ. ಆದರೆ ಜಗತ್ತಿನ ವಿವಿಧ ಧರ್ಮಗಳಲ್ಲೂ ಬೆಂಕಿ ದೀಪ ಬೆಳಕುಗಳಿಗೆ ಧಾರ್ಮಿಕ ಪ್ರಾಧಾನ್ಯತೆ ಇದೆ ಎಂಬ ಅಂಶವೂ ಇಲ್ಲಿ ಗಮನಾರ್ಹ.   “ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ” ಭಾರತೀಯ ಪರಂಪರೆಯಲ್ಲಿ ದೀಪವೆಂದರೆ ಶುಭ ಮಂಗಳ ಎಂಬ ಉದಾತ್ತ ಕಲ್ಪನೆ.  ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಃ ಶತ್ರು ಬುದ್ದಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ  ದೀಪ ಪ್ರಾಣದ ಸಂಕೇತ ಜ್ಞಾನದ ಸಂಕೇತ ಶುಭದ ಸಂಕೇತ ಅಭಿವೃದ್ಧಿಯ ಸಂಕೇತ. ದೀಪದ ಬೆಳಗುವಿಕೆಯಿಂದ ಶುಭವಾಗಲಿ ಮಂಗಳವಾಗಲಿ ಆರೋಗ್ಯ ಧನ ಸಂಪತ್ತು ವೃದ್ಧಿಯಾಗಲಿ.  ಮನದ ಶತ್ರುಗಳು ಅಂದರೆ ರಜೋತಾಮಸ ಗುಣಗಳು, ಅರಿಷಡ್ವರ್ಗಗಳು ನಾಶವಾಗಲಿ ಎಂಬ ಆಶಯ.   ದೀಪದ ಮತ್ತೊಂದು ವಿಭಿನ್ನ ವಿಶಿಷ್ಟ ಸ್ವಭಾವ ಬೆಳಗುವುದು.  ತನ್ನನ್ನು ತಾನೇ ದಹಿಸಿಕೊಳ್ಳುವುದು . ಉರಿಯುತ್ತಲೇ ಕತ್ತಲನ್ನು ದಕ್ಕಿಸಿಕೊಂಡು ಅರಗಿಸಿಕೊಳ್ಳುವುದು .ಎಂತಹ ಗಾಢವಾದ ಕತ್ತಲೆಯನ್ನು ಸಣ್ಣ ದೀಪ ನಿವಾರಿಸುತ್ತದೆ ನುಂಗಿಬಿಡುತ್ತದೆ.  ಕತ್ತಲೆಗೆ ಹೇಗೆ ಆವರಿಸಿಕೊಳ್ಳುವ ಗುಣ ಇದೆಯೋ ಆ ಕೊನೆಯಿಲ್ಲದ ದಾಹ ಬೆಳಕಿಗೂ ಇದೆ. ಬೆಳಕಿನ ಮಹತ್ವ ತಿಳಿಯುವುದು ಕತ್ತಲೆಯಿದ್ದಾಗ. ಕತ್ತಲೆ ನೀಡುವ ಅವಕಾಶವೇ ಬೆಳಕಿನ ಪ್ರಜ್ವಲನೆ. ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವ.  ಜ್ಞಾನ ಗಳಿಕೆಗೆ ಮೂಲ ಅಜ್ಞಾನವೇ. ಅಂತೆಯೇ ಅಜ್ಞಾನಿಗಳಾದ ನಾವು ಜ್ಞಾನ ಪ್ರಾಪ್ತಿಗೊಳಿಸಿಕೊಳ್ಳಬೇಕೆಂಬ ಕ್ರಿಯೆಯೇ ಈ ದೀಪೋತ್ಸವ .  ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ  ಇದು ಒಮ್ಮೆ ಮಾತ್ರ ಮಾಡಿ ಮುಗಿಯಿತೆಂದು ಕೊಳ್ಳುವ ಕ್ರಿಯೆ ಖಂಡಿತ ಅಲ್ಲ . ಕತ್ತಲು ಮತ್ತೆಮತ್ತೆ ಮುಸುಕುವಂತೆ ಅಜ್ಞಾನವು ಅಡರುತ್ತಲೇ ಇರುತ್ತದೆ . ಹಾಗಾಗಿ ದೀಪ ಬೆಳಗುವಿಕೆ ಪುನರಾವರ್ತನ ಕ್ರಿಯೆ. ಅಗ್ನಿ ಬಲದ ದ್ಯೋತಕವಾದ ದೀಪ ಬೌದ್ಧಿಕ ಬಲ. ಇದಕ್ಕೆ ೭ಬಣ್ಣ ಹಾಗೂ ೭ ಜಿಹ್ವೆಗಳಿವೆ ಎನ್ನುತ್ತಾರೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಪಂಚೇಂದ್ರಿಯಗಳ ಜತೆ ಮನಸ್ಸು ಅಹಂಕಾರಗಳನ್ನು ಸಹ ಅಭಿವ್ಯಕ್ತಿಸುತ್ತದೆ .ದೀಪ  ಅನಂತ. ದೀಪದಿಂದ ದೀಪವನ್ನು ಬೆಳಗುತ್ತಾ ಹೋದಂತೆ ಅದು ಅಕ್ಷಯವಾಗಿ ಬಿಡುವುದಿಲ್ಲ. ಹಾಗೆಯೇ ಓದಿದಷ್ಟೇ ಜ್ಞಾನ ವಿಸ್ತರಿಸುತ್ತದೆ .  ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಮನಸ್ಸಿನ ತಮಸ್ಸನ್ನು ದುಷ್ಟಬುದ್ಧಿ ರಾಕ್ಷಸಿ ಪ್ರವೃತ್ತಿ ಮೊದಲಾದ ತಮೋ ಗುಣಗಳನ್ನು ವಿನಾಶ ಮಾಡುವ ಜ್ಞಾನದ ದೀಪವನ್ನು ಮನೆಮನೆಗಳಲ್ಲಿ ಬೆಳಗೋಣ . ಈ ದೀಪ ಪ್ರಜ್ವಲನೆಯ ಸತ್ಕಾರ್ಯ ಕೆಲ ಘಳಿಗೆ, ಕೆಲದಿನ  ಅಥವಾ 1ತಿಂಗಳಿಗೆ ಸಿಮೀತ ಗೊಳಿಸದೆ ಆಜೀವ ಪರ್ಯಂತದ ವ್ರತವಾಗಿ ನೋಮಿಯಾಗಿ ನೇಮವಾಗಲಿ .  ಕೆ ಎಸ್ ನರಸಿಂಹಸ್ವಾಮಿ ಅವರು ನುಡಿದಂತೆ ಬೆಳಕಿನಸ್ತಿತ್ವವನೆ  ಅಣಕಿಸುವ ಕತ್ತಲೆಗೆ  ತಕ್ಕ ಉತ್ತರವಿಲ್ಲಿ ಕೇಳಿ ಬರಲಿ  ದೀಪಾವಳಿಯ ಜ್ಯೋತಿ  ಅಭಯ ಹಸ್ತವನೆತ್ತಿ  ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ 

ತಮಸೋಮಾ ಜ್ಯೋತಿರ್ಗಮಯ Read Post »

ಇತರೆ

ಬದಲಾಗಲಿ ಕರ್ನಾಟಕದ ಸನ್ನಿವೇಶ

ಬದಲಾಗಲಿಕರ್ನಾಟಕದಸನ್ನಿವೇಶ ಇರಾಜ ವೃಷಭ ಎ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬ ಅಂದರೆ ಎಲ್ಲರೂ ಹೇಳೋದು ದೀಪಾವಳಿ, ದಸರಾ, ಗಣೇಶ ಚತುರ್ಥಿ, ನಾಗರಪಂಚಮಿ ಇತ್ಯಾದಿ. ಆದರೆ ಇದು ಅವರ ಪಾಲಿಗೆ ಹಬ್ಬಗಳಲ್ಲಿ ದೊಡ್ಡದಾದ ಹಬ್ಬ. ಪಟಾಕಿ ಶಬ್ದ, ಮೆರವಣಿಗೆ, ಡ್ಯಾನ್ಸ್, ಡಿಜೆ, ಕೋಲಾಟ, ಹಾಡು ಇತ್ಯಾದಿ ಆದರೆ ಸಮಯ ಮತ್ತು ಆಚರಿಸುವ ವಿಧಾನಗಳು ಎರಡು ಜಾಸ್ತಿನೇ.  ಅದೇನೊ ಖುಷಿ ಮತ್ತು ಸ್ವಾಭಿಮಾನ  ಈ ಹಬ್ಬವನ್ನು ಹೆಚ್ಚಾಗಿ ವಿಜ್ರಂಭಣೆಯಿಂದ ಆಚರಿಸುವಂತೆ ಮಾಡುತ್ತವೆ. ಆ ಹಬ್ಬವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ಪಾಲಿಗೆ ಅದರಲ್ಲೂ ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಕನ್ನಡ ರಾಜ್ಯೋತ್ಸವವು ಒಂದು. ಹಳದಿ-ಕೆಂಪು ಬಾವುಟ, ಬಣ್ಣಬಣ್ಣದ ತೋರಣ, ತಾಯಿ ಭುವನೇಶ್ವರಿಗೆ ಮಾಡುವ ಸುಂದರ ಅಲಂಕಾರ, ಕಿತ್ತೂರರಾಣಿ ಚೆನ್ನಮ್ಮನ ಪ್ರತಿಮೆಗೆ ಸುತ್ತುವರೆದು ಹೂ ಗುಚ್ಚ ಅರ್ಪಿಸುವುದು,  ಭಿನ್ನ  ಮತ್ತು ವಿಭಿನ್ನ ರೀತಿಯಲ್ಲಿ ಸಂದೇಶ ಸಾರುವ ಕನ್ನಡದ ಘೋಷವಾಕ್ಯಗಳು, ಪರಿಸರ, ನೆಲ-ಜಲ ರಕ್ಷಿಸಿದ ಮಹಾತ್ಮರ ಭಾವಚಿತ್ರವಿಟ್ಟು ಪೂಜಿಸುವುದು, ಇದೆಲ್ಲದರ ಜೊತೆಗೆ ಕನ್ನಡ ನಾಡು ನುಡಿಗೆ ಗೌರವ ಕೊಡುವ ಕನ್ನಡ ನುಡಿಯ ಡಿಜೆ ಸಾಂಗ್ಸ್! ಅಬ್ಬಬ್ಬಾ!! ಮನಸ್ಸು ಮತ್ತು ಮೈ ಹೇಳದೆ, ಕೇಳದೆ ಕುಣಿದು ಬಿಡುತ್ತದೆ. ಅಲೆಗಳಂತೆ ಬರುವ ಜನಸಾಗರದಲ್ಲಿ ನೂಕುನುಗ್ಗಲು ಸಾಮಾನ್ಯ. ಅದರಲ್ಲಿ ನಾಮುಂದು, ತಾಮುಂದು ಎಂದು ಕುಣಿಯುವುದನ್ನು  ನೋಡುವುದು ಮತ್ತು ಅದರಲ್ಲಿ ಭಾಗಿಯಾಗುವುದಕ್ಕೆ ನಿಜಕ್ಕೂ ಅದೃಷ್ಟ ಮಾಡಿರಬೇಕು. ಕರ್ನಾಟಕದ ಮೂಲೆ ಮೂಲೆಗಳಿಂದ ಜನ ರಾಜ್ಯೋತ್ಸವ ನೋಡಲೆಂದೇ ಬರುತ್ತಾರೆ. ಮದ್ರಾಸ್, ಹೈದರಾಬಾದ್, ಮೈಸೂರು ಮತ್ತು ಮುಂಬೈ ಪ್ರಾಂತ್ಯಗಳಾಗಿ ಕರ್ನಾಟಕ ಹರಿದು ಹಂಚಿಹೋಗಿತ್ತು. ಅದನ್ನು ಸರಿಪಡಿಸಲು ಕಾರಣೀಭೂತರಾದ ನಿಜಲಿಂಗಪ್ಪ, ಬೆಳಗಲ್ ರಾಮರಾಯರು, ಹುಲ್ಲೂರು ಶ್ರೀನಿವಾಸ ಜೋಯಿಸ ಇನ್ನು ಮುಂತಾದ ಕೈಗಳಿಂದ ಭವ್ಯ ಮತ್ತು ಅಖಂಡ  ಕರ್ನಾಟಕವಾಗಿ ನಿರ್ಮಾಣವಾಗಿದೆ.  ೧೯೫೬ ರ ನವೆಂಬರ್ ೧ ರಂದು ಭಾಷಾವಾರು ಪ್ರಾಂತ್ಯಗಳಿಗೆ ಅನುವು ಕೊಟ್ಟಿದ್ದರಿಂದ, ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರಚನೆಯಾದವು ಎನ್ನುವುದು ಗೊತ್ತಿರುವ ಇತಿಹಾಸ.       ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿರುವ ಕನ್ನಡ ಬರದವನು/ ಬರದವಳು ಕೂಡ ಆಟೋಮೆಟಿಕ್ ಆಗಿ ಕನ್ನಡ ಮಾತನಾಡುತ್ತಾರೆ.  ಅದು ಹೇಗೆ ಅಂತ ತಿಳ್ಕೊಬೇಕು ಅಂದ್ರೆ, ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಜೀವನದಲ್ಲಿ ಒಂದು ಸಲನಾದರೂ ನೀವು ನೋಡಲೇಬೇಕು ಮತ್ತು ಆಚರಿಸಲೇಬೇಕು ಆದರೆ ಇನ್ನೊಂದು ಕಡೆ ಕರಾಳ ದಿನ ಆಚರಿಸುವ ಮೂರ್ಖರು ಕೂಡ ಅಲ್ಲೇ ತಂಗಿದ್ದಾರೆ. ಇತ್ತ ಕನ್ನಡ ರಾಜ್ಯೋತ್ಸವನ್ನು ಕನ್ನಡಿಗರು ಆಚರಿಸುತ್ತಿದ್ದರೆ ಅಲ್ಲೇ ಹುಟ್ಟಿ ಬೆಳೆದು ಕನ್ನಡ ನಾಡಿಗೆ ಕೇಡು ಬಗೆಯುವ ಜನರು ಕಪ್ಪುಬಟ್ಟೆ ಮತ್ತು ಧ್ವಜದ ಜೊತೆ ಕನ್ನಡದ ವಿರುದ್ಧ ಮಾತುಗಳನ್ನು ಆಡುತ್ತಾ ಪ್ರತಿಭಟನೆ ಮಾಡುತ್ತಾ ಇರುವುದು ನೋವಿನ ಸಂಗತಿ. ಈ ಘಟನೆ ಇಂದು ನಿನ್ನೆಯದಲ್ಲ. ಹೆಚ್ಚು ಕಮ್ಮಿ ಕರ್ನಾಟಕ ಏಕೀಕರಣವಾದಾಗಿನಿಂದ ನಡೆಯುತ್ತಾ ಬಂದಿದೆ. ಎಲ್ಲ ಸೌಲತ್ತುಗಳನ್ನು ಕರ್ನಾಟಕ ಸರ್ಕಾರದಿಂದ ಪಡೆದುಕೊಂಡು; ಅದೇ ನಾಡಿನ ವಿರುದ್ಧ ಘೋಷಣೆ ಕೂಗುವ ದ್ರೋಹಿಗಳನ್ನು ಈಗಲೂ ಕಾಣಬಹುದು. ಇದೆಲ್ಲವೂ ಬದಲಾಗಬೇಕಿದೆ. ನಾಡು-ನುಡಿಗೆ ಸರ್ಕಾರ ಮಾಡಬೇಕಾಗಿರೋದು ಬಹಳಷ್ಟಿದೆ. * ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡದ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸುತ್ತಿಲ್ಲ.  ಈ ಸಮಯದಲ್ಲಿ ದೇಶದ ತ್ರಿವರ್ಣಧ್ವಜ ಹಾರಿಸುತ್ತಿದ್ದಾರೆ. ಈ ಸಮಯದಲ್ಲಿ ತ್ರಿವರ್ಣಧ್ವಜದ ಅವಶ್ಯಕತೆ ಇಲ್ಲ ಮತ್ತು ಬೇಕಾಗಿಲ್ಲ. * ನಾಡಗೀತೆಯನ್ನು ಎಲ್ಲಿ, ಯಾವಾಗ, ಎಷ್ಟು ಸಮಯ ಬಳಸಬೇಕು ಎನ್ನುವುದು ಕಾನೂನಿನಲ್ಲಿ ಬದಲಾವಣೆಯಾಗಬೇಕು ಮತ್ತು ಅದು ರೂಢಿಕೃತ ವಾಗಬೇಕು. * ಮಕ್ಕಳಿಂದ ಹಿಡಿದು ಮುದುಕರ/ಮುದುಕಿಯರ ವರೆಗೆ ನಾಡ ಗೀತೆ, ನಾಡ  ದ್ವಜಕ್ಕೆ ಗೌರವ ನೀಡುವುದು ಕಡ್ಡಾಯವಾಗಬೇಕು( ಅಂದರೆ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ನೀಡುವ ಗೌರವದ  ಹಾಗೆ ನಾಡ ಗೀತೆ, ಮತ್ತು ನಾಡ ಧ್ವಜಕ್ಕೆ ನೀಡಬೇಕು) * ಗಡಿಜಿಲ್ಲೆಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಹಾನಿ ಉಂಟಾಗದಂತೆ ಅತಿ ಹೆಚ್ಚಿನ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ರಾಜ್ಯ ಒಡೆಯುವ, ಕೆಡಕು ಬಯಸುವ ಮತ್ತು ಮಾಡುವ ವ್ಯಕ್ತಿ ಅಥವಾ ರಾಜಕಾರಣಿ ಯಾರೇ ಆಗಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. *  ಕರ್ನಾಟಕ ರಾಜ್ಯಕ್ಕೆ ಸೇರಿರುವ ಪ್ರತಿ ಶಾಲೆ-ಕಾಲೇಜು ಮತ್ತು ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಿಸಬೇಕು. ತಪ್ಪಿದ್ದಲ್ಲಿ ದಂಡ ವಸೂಲಾತಿ ಮತ್ತು ಶಿಕ್ಷೆಗೆ ಒಳಪಡಿಸಬೇಕು. *  ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಕನ್ನಡ ವಿಷಯದಲ್ಲಿ ಹೆಚ್ಚು ಪರಿಣಿತ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಮತ್ತು ಅದಕ್ಕೆ ತಕ್ಕಂತೆ ಇರುವ ಉದ್ಯೋಗಗಳನ್ನು ನೀಡಬೇಕು. ಈ ಮೇಲಿನವುಗಳನ್ನೆಲ್ಲಾ ಚಾಚೂತಪ್ಪದೆ ಪಾಲಿಸುವುದರಿಂದ ಮತ್ತು ರೂಢಿಕರಿಸುವುದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಯಾವುದೇ ಕೊರತೆ ಬರುವುದಿಲ್ಲ. ಕನ್ನಡರಾಜ್ಯ ಒಂದು ಬಲಿಷ್ಠ ರಾಜ್ಯವಾಗಿ ಎದ್ದು ನಿಲ್ಲುತ್ತದೆ. ಈ ತರಹದ ಬಲಿಷ್ಠ ರಾಜ್ಯವನ್ನು ಕಣ್ತುಂಬಿಕೊಳ್ಳಲು ಕನಸು ಕಟ್ಟಿದ ಅದೆಷ್ಟು ಕನ್ನಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ಎಲ್ಲ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. “ಜೈ ಕರ್ನಾಟಕ, ಜೈ ಕನ್ನಡ “

ಬದಲಾಗಲಿ ಕರ್ನಾಟಕದ ಸನ್ನಿವೇಶ Read Post »

ಇತರೆ

ನಿದ್ದೆ ಬಾರದಿದ್ದಾಗ

ಈ ಗೊರಕೆ ಅನ್ನೋದು ಖಾಯಿಲೆ ಏನೂ ಅಲ್ಲ.ಒಂದು ವಿಧದ ಡಿಸ್ ಆರ್ಡರ್ ಅಷ್ಟೇ. ಅಲ್ಲದೇ ಇದು ವಂಶ ಪಾರಂಪರ್ಯವಾಗಿ ಬಂದಿರುವ,ಅದರಲ್ಲೂ ನಮ್ಮಪ್ಪ,ಅಣ್ಣನಿಂದ ಬಂದಂತಹ ಕೊಡುಗೆ.ಅಷ್ಟು ಸುಲಭವಾಗಿ ಹೊರಟು ಹೋಗು ಅಂದ್ರೆ ಹೋಗದು

ನಿದ್ದೆ ಬಾರದಿದ್ದಾಗ Read Post »

ಇತರೆ

ಕನ್ನಡ ಬಾಷಾ ಬಳಕೆಯ ಅಭಿಯಾನದ ಹಬ್ಬವಾಗಲಿ ಕರ್ನಾಟಕ ರಾಜ್ಯೋತ್ಸವ

ಕನ್ನಡಬಾಷಾಬಳಕೆಯಅಭಿಯಾನದಹಬ್ಬವಾಗಲಿಕರ್ನಾಟಕರಾಜ್ಯೋತ್ಸವ ಕರ್ನಾಟಕ ರಾಜ್ಯೋತ್ಸವ ಈ ದಿನವನ್ನು ಕನ್ನಡದ ಉತ್ಸವ ಹಬ್ಬವನ್ನಾಗಿ ಆಚರಿಸುತ್ತೇವೆ. 1956ರಲ್ಲಿ ದಕ್ಷಿಣ ಭಾರತದ ಎಲ್ಲಾಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು.ಉತ್ತರ ಕರ್ನಾಟಕದ ಜನತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂದು 1972ರ ಜುಲೈನಲ್ಲಿ ಚರ್ಚೆ ಭುಗಿಲೆದ್ದಿತು. ಸಾಕಷ್ಟು ದೀರ್ಘಾವಧಿ ಚರ್ಚೆಗಳ ನಂತರ ರಾಜ್ಯವಿಧಾನ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಿತು. ಹಿಂದಿನ ಸಂಸ್ಥಾನ ಮತ್ತು ಹೊಸದಾದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಅನುಗುಣವಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಬದಲಾಯಿಸಲಾಯಿತು.. ಪ್ರತಿ ವರ್ಷ ಇದರ ಸವಿನೆನಪಿಗಾಗಿ ನಾವು ಈ ಕನ್ನಡ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಕನ್ನಡ ನಾಡು ನುಡಿಗಾಗಿ ನಾವು ಇನ್ನೂ ಶ್ರಮಿಸಬೇಕಾಗಿದೆ. ಕನ್ನಡಾಂಬೆಯಾದ ಭುವನೇಶ್ವರಿ ದೇವಿಯ ಪೂಜೆ ಸಲ್ಲಿಸಿ ಭಾಷಣ ಮಾಡಿ ಘೋಷಣೆ ಕೂಗುವ ಕನ್ನಡ ಭಾಷೆ ಕ್ರಾಂತಿ ಕೇವಲ ಇವತ್ತೊಂದೇ ದಿನಕ್ಕೆ ಸೀಮಿತವಲ್ಲಕನ್ನಡನಾಡಿನ ಕೋಟಿ ಕೋಟಿ ಜನರ ಕೊರಳದನಿ ಈ ನಮ್ಮ ಕಸ್ತೂರಿ ಕನ್ನಡ. ಚಲನಶೀಲತೆಯನ್ನು ಪಡೆದಿರುವ ಕರ್ನಾಟಕ ಸಂಸ್ಕೃತಿಯ ಮೂಲಸೆಲೆ. ಭಾಷೆ ಒಂದು ಸಂಪರ್ಕ ಸಾಧನ. ನಮ್ಮೆಲ್ಲರ ನೋವು-ನಲಿವು, ದುಃಖ-ದುಮ್ಮಾನ ಕನಸು-ಕಲ್ಪನೆಗಳನ್ನು ಅಭಿವ್ಯಕ್ತಗೊಳಿಸಲು ಬಳಸುವ ಒಂದು ಸಶಕ್ತ ಮಾಧ್ಯಮವನ್ನು ತಪ್ಪಾಗಲಿಕ್ಕಿಲ್ಲ. ಅದು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಭಾವನಾತ್ಮಕವಾಗಿ ಹೃದಯಗಳು ತಟ್ಟಿ ಮನಮುಟ್ಟಿ ಅಭಿಮಾನದಿಂದ ಮೆಟ್ಟಿ ನಿಲ್ಲುವ ಸವಿಗನ್ನಡವಾಗಿದೆ. ಹಾಗಾದರೆ ಅನವರತ ಕನ್ನಡ ನಾಡು ನುಡಿಯ ಸೇವೆಗೆ ಕಟಿಬದ್ಧರಾಗಬೇಕಾದರೆ ಕನ್ನಡವನ್ನು ನಾವು ಹೆಚ್ಚು ಹೆಚ್ಚು ಬಳಸಬೇಕಾಗಿದೆ. ಪ್ರತಿಯೊಂದು ಭಾಷೆಯೂ ಬಳಕೆಯಿಂದ ಮಾತ್ರವೇ ಬೆಳೆಯುತ್ತದೆ ಉಳಿಯುತ್ತದೆ. ಕನ್ನಡದ ಬಗೆಗಿನ ನಮ್ಮ ಪ್ರೀತಿಗೆ ಮಾನದಂಡ ವ್ಯವಹಾರಲ್ಲಿ ಅದರ ಕಡ್ಡಾಯವಾದ ಬಳಕೆ. ನಾವು ಬರೆಯುವ ಪತ್ರಗಳು, ಮುದ್ರಿಸುವ ಆಹ್ವಾನ ಪತ್ರಗಳು, ತುಂಬುವ ಅರ್ಜಿಗಳು, ಅಲ್ಪಸಂಖ್ಯಾತರು ಮೊದಲ್ಗೊಂಡು ಕನ್ನಡದಲ್ಲಿ ಇರಲೇಬೇಕೆಂಬ ಖಡಕ್ಕಾದ ಕರಾರನ್ನು ಜಾರಿಗೆ ತರಬೇಕು. ಇದರ ಕುರಿತು ಶಾಲೆ, ಕಾಲೇಜುಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನಡೆಸುವದು ಹಾಗೂ ಆಗಮಿಸಿದ ಅತಿಥಿವರೇಣ್ಯರು ಕನ್ನಡದಲ್ಲಿ ಮಾತನಾಡಿದಾಗ ಕನ್ನಡದ ಕಂಪನ್ನು ಹರಡಬಹುದಾಗಿದೆ. ಕನ್ನಡದ ಕವಿಗಳ ಪರಿಚಯ ಅವರ ಕವನಗಳ ಗಾಯನ, ವಾಚನ ವಿಶ್ಲೇಷಣೆ, ಜನಪದಗೀತೆ ಮತ್ತು ನೃತ್ಯ, ಭಾಷಣ, ಪ್ರಬಂಧ, ಆಶುಭಾಷಣ, ಅಂತ್ಯಾಕ್ಷರಿ -ಈ ಎಲ್ಲ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಪರಿಪಾಠವಿರಿಸಿಕೊಂಡು, ಎಲ್ಲಾ ಮಕ್ಕಳೂ ಭಾಗವಹಿಸಿ ಕನ್ನಡ ವಿಷಯದ ಕುರಿತು ಆಸಕ್ತಿ ಬೆಳೆಸಿಕೊಳ್ಳುವಲ್ಲಿ ವಿಶೇಷ ಆಸ್ಥೆ ವಹಿಸಬೇಕಾಗಿದೆ.ಸುಮಾರು೨೦೦೦ಕ್ಕೂ ಹೆಚ್ಚಿನ ವರ್ಷಗಳಷ್ಟು ಸುದೀರ್ಘ ಇತಿಹಾಸವಿರುವ ಕನ್ನಡ ಒಂದು ಸಮೀಕ್ಷೆಯ ಪ್ರಕಾರ ಕೆಲವೇ ದಿನಗಳ ಕಾಲಘಟ್ಟದಲ್ಲಿ ಕಣ್ಭರೆಯಾಗಲಿರುವ ಜಗತ್ತಿನ ೨೫ ಭಾಷೆಗಳಲ್ಲಿ ಕನ್ನಡವೂ ಸೇರಿರುವದು ವಿಷಾದನೀಯವಾದ ಸಂಗತಿಯಾಗಿದೆ. ಇನ್ನಾದರೂ ಕನ್ನಡಿಗರಾದ ನಾವು ಎಚ್ಚತ್ತುಕೊಳ್ಳೋಣ ಯಾವ ರೀತಿಯಾಗಿ ಲಕ್ಷಕಂಠಗಳ ಗೀತ ಗಾಯನ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆಯೋ ಹಾಗೆಯೇ ಯಾವುದೇ ಆದೇಶಕ್ಕಾಗಿ ಕಾಯದೇ ನಮ್ಮ ಮನೆ, ಮನದಲ್ಲಿ ಕನ್ನಡಾಭಿಮಾನದ ಕೆಚ್ಚು “ಕನ್ನಡ ನಮ್ಮ ಉಸಿರುಬಳಸಿ ಉಳಿಸೋಣ ಹೆಸರು”ಎಂದು ಸ್ವಯಂ ಪ್ರೇರಣೆಯಿಂದ ನಮ್ಮತನವನ್ನು ಉಳಿಸಿಕೊಳ್ಳೋಣ. ಅಂದರೆ ಯಾವುದೇ ಬೇರೆ ಭಾಷೆಯನ್ನು ಕಡೆಗಣಿಸಬೇಕಾಗಿಲ್ಲ. ಅವುಗಳನ್ನು ಗೌರವಿಸುತ್ತ ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ ಕನ್ನಡ ಸೇವೆಗೆ ಕಂಕಣ ಬದ್ಧರಾಗೋಣ. ಭಾರತಿ ಕೇದಾರಿ ನಲವಡೆ

ಕನ್ನಡ ಬಾಷಾ ಬಳಕೆಯ ಅಭಿಯಾನದ ಹಬ್ಬವಾಗಲಿ ಕರ್ನಾಟಕ ರಾಜ್ಯೋತ್ಸವ Read Post »

ಇತರೆ

ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..!

ಏಕೀಕರಣಕ್ಕೆಅರವತ್ತಾರು;  ಇನ್ನೂಎಳೆಯುತ್ತಿಲ್ಲಕನ್ನಡದತೇರು..! ಬರಿಯ ಚದರ ಮೈಲಿಗಳಲ್ತು ಕರ್ನಾಟಕದ ದೇಶ ವಿಸ್ತೀರ್ಣಮಂ/ ನೆನೆ ನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ/ ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ/ ಪ್ರಾಣಮಯ, ಭಾವಮಯ ವಿಸ್ತೀರ್ಣಮಂ/ ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ//                                       –ಕುವೆಂಪು   “ಬರಿಯ ವಿಸ್ತೀರ್ಣದ  ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಅಳೆಯಬೇಡ. ಅದರ ಆಂತರಂಗಿಕವಾಗಿ ಅಡಗಿರುವ ಸಂಸ್ಕೃತಿಯ ಕೋಶವನ್ನು ನೋಡು. ಅದರ ಪ್ರಾಚೀನತೆ ಅಥವಾ ಹಿನ್ನೆಲೆಯನ್ನು ಗಮನಿಸು. ಅದರ ಪ್ರಾಣಮಯವಾದ, ಭಾವಮಯವಾದ ವಿಸ್ತೀರ್ಣತೆಯನ್ನು, ವೈಜ್ಞಾನಿಕ ಕೊಡುಗೆಗಳನ್ನು ಸ್ಮರಿಸು” ಹೀಗೆ ರಸಋಷಿ ಕುವೆಂಪುರವರು ಹೇಳಿ ಅನೇಕ ವರ್ಷಗಳು ಗತಿಸಿ ಹೋದವು. ಈ ಪ್ರಕಾರವಾಗಿ ಜಗತ್ತಿಗೆ ಬೆಳಕಾಗಬಹುದಾದ ಅತ್ಯುನ್ನತವಾದ ಸಂಸ್ಕೃತಿಯ ಹಿನ್ನೆಲೆಯೊಂದನ್ನು, ಭಾಷೆಯೊಂದರ ಘನತೆಯನ್ನು, ಶ್ರೇಷ್ಠತೆಯನ್ನು  ಕೇಳಿ ತಿಳಿದು ನಾವದನ್ನು ಆರ್ಜಿಸಿಕೊಂಡಿದ್ದೇವೆ.ಹಾಗಾದರೆ ಇವನ್ನೆಲ್ಲ ಅರಿತು, ತಿಳಿದು ನಾವು ಇಷ್ಟು ವರ್ಷ ಸಾಧಿಸಿದುದೇನು? ಕನ್ನಡ ಕನ್ನಡಿಗರ ಜೀವನದ ಭಾಷೆಯಾಗಿದೆಯೆ? ಕನ್ನಡ ಸಂಸ್ಕೃತಿಯ ಹಿರಿಮೆ ಉತ್ಥಾನಗೊಂಡಿದೆಯೆ? ನಮ್ಮನ್ನೇ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.     ‘ಕಾವೇರಿಯಿಂದ ಗೋದೆ’ವರೆಗೆ ಹಬ್ಬಿದ್ದಂತಹ ನಾಡು ನಮ್ಮದು. ಇಂದು ಅದರ ವಿಸ್ತಾರವನ್ನು ಕಳೆದುಕೊಂಡು ಅದು ಸಂಕೀರ್ಣತೆಗೆ ಒಳಗಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಕೇರಳದ ಕಾಸರಗೋಡಿನಂಥ ಅದೆಷ್ಟೋ ಅಪ್ಪಟ ಕನ್ನಡಿಗರಿರುವ ಭೂಭಾಗಗಳು ಇಂದು ಕರ್ನಾಟಕದಿಂದ ಏಕೀಕರಣದ ಕಾಲಕ್ಕೆ ದೂರವಾಗಿವೆ.  ಭಾಷಾವಾರು ಪ್ರಾಂತಗಳ ಏಕೀಕರಣದ ಕಾಲಕ್ಕೆ ಇಂತಹ ಸಂದಿಗ್ಧ ಸನ್ನಿವೇಶಗಳು ಎಲ್ಲಾ ರಾಜ್ಯಗಳನ್ನು ಕಾಡಿವೆ‌ . ಕೆಲವೊಂದು ಕೊಡು ಕೊಳ್ಳುವಿಕೆ ಅನಿವಾರ್ಯ ಎಂಬ ಕಾರಣದಿಂದ ಅದನ್ನು ನಾವು ಮರೆತು ಬಿಡಬಹುದು. ಆದರೆ ಏಕೀಕರಣದ ನಂತರ ಅರವತ್ತಾರು ವರ್ಷಗಳಲ್ಲಿ ಈಗಿರುವ ಪುಟ್ಟ ಕನ್ನಡನಾಡಿನಲ್ಲೇ   ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಾಗಿಲ್ಲ ಎಂಬುದು ಬಹಳ ಖೇದಕರ ಸಂಗತಿ.   ಜಗತ್ತಿನುದ್ದಗಲಕ್ಕೂ ವಸಾಹತುಗಳನ್ನು ಸ್ಥಾಪಿಸಿ, ಇಂಗ್ಲೆಂಡ್ ಎಂಬ  ಪುಟ್ಟ ದೇಶಕ್ಕೆ ‘ಸೂರ್ಯ ಮುಳುಗದ ನಾಡು’ ಎಂಬ ಅಭಿದಾನ ಕೊಡಿಸಿದ  ಆಂಗ್ಲರು ಬರೇ ವಸಾಹತುಗಳ ಆಳ್ವಿಕೆಯನ್ನಷ್ಟೇ ನಡೆಸಲಿಲ್ಲ. ತಮ್ಮ ಶಿಕ್ಷಣ ಪದ್ಧತಿಯನ್ನು ಆ ದೇಶಗಳಿಗೆ ನೀಡಿ,  ತಮ್ಮ ಭಾಷೆ ಮತ್ತು ಸಂಸ್ಕೃತಿ ವಿಶ್ವ ವಿಶಾಲತೆಗಳಿಸುವಂತೆ ಮಾಡಿದರು. ಅರಬ್ ನಾಡಿನಲ್ಲಿ ಉದಯಿಸಿದ ಇಸ್ಲಾಂ ಧರ್ಮೀಯರು ಉರ್ದು ಭಾಷೆಯನ್ನು ಜಗದಾದ್ಯಂತ ವಿಸ್ತರಿಸಿದರು. ಆದರೆ ನಾವೇನು ಮಾಡುತ್ತಿದ್ದೇವೆ. ಜಗದುದ್ದಗಲದ ವಿಚಾರ ಬಿಡೋಣ. ನಮ್ಮದೇ ಆದ ಸೀಮಿತ ವ್ಯಾಪ್ತಿಯಲ್ಲಿ ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಿದ್ದೇವೆಯೇ? ಚಿಂತಿಸಬೇಕಾಗಿದೆ.     ನಾವೇ ಪೋಷಿಸಿ ಬೆಳೆಸಬೇಕಾದ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಭಾಷೆಗಳಲ್ಲೊಂದಾದ ಕನ್ನಡವನ್ನು ಇಂದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ  ಬಳಸುತ್ತಿರುವವರ ಸಂಖ್ಯೆ  ಶೇ. 36. ಪರಭಾಷೆಯ ಆಕ್ರಮಣ ಎನ್ನುವುದಕ್ಕಿಂತ ನಮ್ಮ ಭಾಷಾಭಿಮಾನ ಶೂನ್ಯತೆ ಕನ್ನಡಕ್ಕೆ ಶಾಪವಾಗಿ ಪರಿಣಮಿಸಿದೆ. ನಮ್ಮ ಪಕ್ಕದಲ್ಲೇ  ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಂತಹ ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಾಪಿಟ್ಟು ರಕ್ಷಿಸುವಂತಹ ರಾಜ್ಯಗಳಿದ್ದೂ  ನಾವು ಅವರಿಂದ  ಈ ವಿಚಾರ ಕಲಿಯದಿರುವುದು ದುರದೃಷ್ಟಕರ ಸಂಗತಿ.           ಕನ್ನಡನಾಡಿನ ಪೂರ್ವ ಸಂಸ್ಕೃತಿಯು ಸುಮಾರು 2500 ವರ್ಷಗಳಷ್ಟು ಹಿಂದಕ್ಕೆ ಸಾಗುತ್ತದೆ. ಅದು ಜಗದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿದೆ. ಕಾಲ ಗರ್ಭದಲ್ಲಿ ಸಾಗುತ್ತಾ ಬಂದಿರುವ ಭಾಷೆಯ, ಸಂಸ್ಕೃತಿಯ ಹಿನ್ನೆಲೆಯನ್ನು ಗಮನಿಸಿದಾಗ ಅದು ನಿರಂತರವಾಗಿ ಏಳುಬೀಳಿನ ಹಾದಿಯಲ್ಲೇ ಸಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ರಾಜಾಡಳಿತದ ಕಾಲಕ್ಕೆ ಒಮ್ಮೆ ರಾಜ್ಯದ ಆಡಳಿತ ಭಾಷೆಯಾಗಿ, ಇನ್ನೊಮ್ಮೆ  ಅದರಿಂದ ಹೊರತಾಗಿ, ಮತ್ತೊಮ್ಮೆ ಕನ್ನಡ ಭಾಷಿಕ ಪ್ರದೇಶಗಳೇ ಹರಿದು ಹಂಚಿಹೋಗಿ ಹೀಗೆ ನಿರಂತರವಾಗಿ ಏಳುಬೀಳುಗಳನ್ನು ಕಂಡಿದೆ. ಆದರೆ ಅಂತಹ ಕಠಿಣ ಸನ್ನಿವೇಶದಲ್ಲಿಯೂ ಭಾಷೆ ಮತ್ತು ಸಂಸ್ಕೃತಿ  ತನ್ನತನವನ್ನು ಕಾಯ್ದುಕೊಂಡು ಬರಲು ಕಾರಣವಾದ ಸಂಗತಿಯೆಂದರೆ, ಜನತೆಯಲ್ಲಿನ ಸ್ವಸಂಸ್ಕೃತಿ ಮತ್ತು ಭಾಷೆಯ ಕುರಿತಾಗಿ ಇದ್ದ ಪ್ರಜ್ಞೆ ಮತ್ತು ಅಭಿಮಾನ. ಇಂದಿನ ದುಸ್ತರ ಸನ್ನಿವೇಶದಲ್ಲಿ ಈ ಪ್ರಜ್ಞೆ ಮತ್ತೆ ಮೂಡಬೇಕಿದೆ. ” ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು” ಎಂದ ಅಡಿಗರ ಕಾವ್ಯ ಸಾಲುಗಳು ಕನ್ನಡಿಗರ ಧಮನಿ ಧಮನಿಯಲ್ಲಿ ಹರಿದು ಮೈದೋರಬೇಕಿದೆ.    ಚಿತ್ತಾಣ ,ಬೆದಂಡೆಗಳಂತಹ ಕಾವ್ಯ ಜಾತಿಗಳಿಂದ , ಚಂಪೂವಾಗಿ, ವಚನವಾಗಿ, ಷಟ್ಪದಿಯಾಗಿ, ರಗಳೆಯಾಗಿ, ಆಧುನಿಕ ಗದ್ಯಕ್ಕೆ ತನ್ನನ್ನು  ತೆರೆದುಕೊಂಡು ನವೋದಯ, ಪ್ರಗತಿಶೀಲ, ಬಂಡಾಯ, ದಲಿತ ಬಂಡಾಯ ಸಾಹಿತ್ಯಕ್ಕೆ ಮೇಲ್ಪಂಕ್ತಿ ದೊರಕಿಸಿಕೊಟ್ಟ ಭಾಷೆ ಕನ್ನಡ. ಪಂಪನಿಂದ  ಮಹಾಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯದ ಮಾರ್ಗ ಅದೊಂದು ರಾಜ ಮಾರ್ಗ. ಇಂತಹ ವಿಶಾಲವಾದ ಸಾಹಿತ್ಯದ ಅರಿವು, ಈ ದಾರಿಯಲ್ಲಿ ಕನ್ನಡ ಭಾಷೆ ತನ್ನನ್ನು ಮಾರ್ಪಡಿಸಿಕೊಂಡ ರೀತಿ, ಒಗ್ಗಿಕೊಂಡ ರೀತಿ ಅನನ್ಯ. ನಮ್ಮ ಮನದ ವಿಕಾಸಕ್ಕೆ, ನಮ್ಮತನದ ಕುರಿತಾಗಿ ಹೆಮ್ಮೆಪಡಲು ಈ ವಿಶಾಲತೆಯ ಅರಿವು ನಮಗಿಂದು ಬೇಕಾಗಿದೆ.      ಹಾಗಾದರೆ ಕನ್ನಡ ನಾಡಿನಲ್ಲಿ ಕನ್ನಡವನ್ನುಳಿದು ಬೇರೆ ಭಾಷೆಗಳು ಇರಬಾರದೆ? ಕನ್ನಡಿಗರು ಪರಭಾಷೆಗಳನ್ನು ಕಲಿಯಬಾರದೆ? ಖಂಡಿತವಾಗಿಯುೂ ಇರಬೇಕು; ಕಲಿಯಬೇಕು. ಸಂಸ್ಕೃತಿಯ ಪ್ರವಾಹ ಒಂದರಿಂದ ಇನ್ನೊಂದಕ್ಕೆ ಹರಿಯಬೇಕು. ಭಾಷೆಗಳ ಕೊಡು- ಕೊಳ್ಳುವಿಕೆಯಾಗಬೇಕು. ತ್ರಿ ಭಾಷಾ ಸೂತ್ರ ಬೇಕು.  ಹೆಚ್ಚಿನ ಜ್ಞಾನವನ್ನು ಎಲ್ಲರೂ ಸಂಪಾದಿಸಬೇಕು. ಆಗ ಮಾತ್ರವೇ ಒಂದು ಭಾಷೆ, ಸಂಸ್ಕೃತಿ  ಶ್ರೀಮಂತವಾಗಬಲ್ಲದು. ಆದರೆ ಈ ಕಲಿಕೆ ಅಥವಾ ಸಂಸ್ಕೃತಿಯ ವಿಕಾಸ‌ ಎನ್ನುವುದು ಮರದ ಮೇಲೆ ಬೆಳೆದು ಕೊನೆಗೆ ಮರದ ಜೀವವನ್ನೇ ಹೀರುವ ‘ಬಂದಳಿಕೆ’ಗಳಂತಾಗಬಾರದು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು ಯೋಗ್ಯವೇ..! ಹಾಗಂತ ಮನೆಯ ಯಜಮಾನನ ಸ್ಥಾನವನ್ನೇ ಆತನಿಗೆ ಬಿಟ್ಟು ಕೊಡಲಾದೀತೆ? ಈ ನಿಲುವಿನಲ್ಲಿ ಪರಭಾಷೆಯ ಜೊತೆಗಿನ ನಮ್ಮ ಸ್ನೇಹ , ಸಂಬಂಧಗಳು ಸಾಗಬೇಕಿದೆ.      ಭಾಷೆ ಉಳಿಯಬೇಕಂದರೆ ಮೊದಲು ಕನ್ನಡನಾಡಿನ ಆಡಳಿತ ಭಾಷೆ, ವ್ಯವಹಾರದ ಭಾಷೆ ಕನ್ನಡವಾಗಬೇಕು. ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು. ಕಾರ್ಖಾನೆಗಳು ಮತ್ತು ಕನ್ನಡನಾಡಿನಲ್ಲಿ ನೆಲೆಸಿರುವ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕು. ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಅತಿಯಾದ ಹೇರಿಕೆ ನಿಲ್ಲಬೇಕು. ಕನ್ನಡ ಮಾದ್ಯಮ ಶಾಲೆಗಳ ಅಭಿವೃದ್ಧಿಗೆ  ಕಂಕಣಬದ್ಧರಾಗಬೇಕು. ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲಾ ನಾಮಫಲಕಗಳು ಕನ್ನಡರೂಪ ಪಡೆಯಬೇಕು. ಮುಖ್ಯವಾಗಿ ಕನ್ನಡಿಗರೆಲ್ಲರ ಮನೆ ಮನಗಳ  ಭಾಷೆ ಕನ್ನಡವಾಗಬೇಕು. ಆಗ ಮಾತ್ರವೇ ಕನ್ನಡದ ತೇರು ಮುಂದಕ್ಕೆ ಸಾಗಬಲ್ಲದು.  “ಮನೆಯ ಹಿತ್ತಲದೊಳಗೆ ಅರಳಿದರೆ ಭಾಷೆ ಹಣ್ಣು ಹಂಪಲದಾಗಿ ಪಲಿಸುವುದು ಆಸೆ ನೀರು ಗೊಬ್ಬರ ಹಾಕಿ ಬೆಳೆಸಿದರೆ ತೋಟ ಈ ನೆಲಕೆ ತಪ್ಪುವುದು ಪರಭಾಷೆ ಕಾಟ”  ಎಂಬ ದಿನಕರರ ಸಾಲುಗಳು ಎಷ್ಟು ಸತ್ಯ ಅಲ್ಲವೇ?  –ವಿಷ್ಣು ಆರ್. ನಾಯ್ಕ Top of Form Bottom of Form

ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..! Read Post »

ಇತರೆ

ಅಪ್ಪು ನೆನಪಲ್ಲಿಷ್ಟು ಕವಿತೆಗಳು

ಅಪ್ಪು ನೆನಪಲ್ಲಿಷ್ಟು ಕವಿತೆಗಳು ಗಜಲ್ ನಾನೊಂದು ಪ್ರಶ್ನೆ ಕೇಳುವೆ ಸರಿ ಉತ್ತರ ಹೇಳುವೆಯೇನು ವಿಧಿಯೇಅನ್ಯಾಯದ ಪರಮಾವಧಿ ಮೀರಿದ ಕಾರಣ ತಿಳಿಸುವೆಯೇನು ವಿಧಿಯೇ ಎಲ್ಲಿಂದ ಕಲಿತಿರುವೆ ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಟ್ಟ ಕಸುಬುಜೀವ ಜೀವನದ ಜೊತೆಗಿನ ನಿನ್ನ ಚೆಲ್ಲಾಟಕೆ ಕೊನೆಯಿಲ್ಲವೇನು ವಿಧಿಯೇ ದೊಡ್ಡ ಮನೆಯ ಬೆಳಕಿನದೇನು ತಪ್ಪು ಹೇಳು ನಿನ್ನ ದುಷ್ಟ ಕಣ್ಣು ಕುಕ್ಕಿದರೆತಪ್ಪು ಒಪ್ಪು ಒರೆಗೆ ಹಚ್ಚಿ ನಿನ್ನ ನೀನು ಸಂತೈಸಿ ಕೊಳ್ಳಬಾರದಿತ್ತೇನು ವಿಧಿಯೇ ಗೊತ್ತಲ್ಲ ಒಂದಗುಳೂ ಹೆಚ್ಚು ಕಡಿಮೆ ಇಲ್ಲದಂತೆ ತೀರುತ್ತದೊಮ್ಮೆ ಈ ಮಣ್ಣ ಋಣಹಚ್ಚ ಹಸಿರೆಲೆಗೆ ಕಫನ್ ಹೊದಿಸಿ ಬಿಟ್ಟೆಯಲ್ಲ ಈ ಆತುರ ತರವೇನು ವಿಧಿಯೇ ಕಾಲಮಿಂಚಿದ ದಾರಿಯಲ್ಲಿ ಕನಸ ಗೋರಿಯ ಸುತ್ತ ಉಮ್ಮಳಗಳೇ ಬಿಕ್ಕುತ್ತಿವೆಶೋಕ ಗೀತೆ ಮೊರೆಯುತ್ತ ಸಂತೈಸಲಾದರೂ ನೀ ಬರಬಾರದೇನು ವಿಧಿಯೇ ******************** ಡಾ.ಗೀತಾ ಪಾಟೀಲ ನೀ ಅಜರಾಮರ ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವುನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವುಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು? ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನುಈಗ ನಮ್ಮನ್ನಗಲಿ ಮನ ಭಾರಗೊಳಿಸಿಎಲ್ಲಿ ಮರೆಯಾದೆ ನೀನುದುಃಖದಿಂದ ಮಾತು ಮೌನ ತಾಳಿದೆಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂಮುದ ನೀಡಿದೆಪರದೆ ಮುಂದೆ,ಪರದೆ ಹಿಂದೆಯೂಮೇರು ನಾಯಕ ನೀನಾದೆ ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾಬೇರೆ ಪಾತ್ರ ಮಾಡಲು ದೌಡಾಯಿಸಿಹೋದಿಯಾ ನಿನ್ನ ಸ್ಥಾನವ ತುಂಬುವರಾರು ರಾಜಕುವರಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರವಿನೀತ, ಪುನೀತ್ ನೀ ಅಜರಾಮರ ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವುನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವುಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು? ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನುಈಗ ನಮ್ಮನ್ನಗಲಿ ಮನ ಭಾರಗೊಳಿಸಿಎಲ್ಲಿ ಮರೆಯಾದೆ ನೀನುದುಃಖದಿಂದ ಮಾತು ಮೌನ ತಾಳಿದೆಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂಮುದ ನೀಡಿದೆಪರದೆ ಮುಂದೆ,ಪರದೆ ಹಿಂದೆಯೂಮೇರು ನಾಯಕ ನೀನಾದೆ ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾಬೇರೆ ಪಾತ್ರ ಮಾಡಲು ದೌಡಾಯಿಸಿಹೋದಿಯಾ ನಿನ್ನ ಸ್ಥಾನವ ತುಂಬುವರಾರು ರಾಜಕುವರಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರವಿನೀತ, ಪುನೀತ್ ನೀ ಅಜರಾಮರ ***************** ಲಕ್ಷ್ಮೀದೇವಿ ಪತ್ತಾರ ಕಾಯುತಿದೆ ಸಾವನ್ನಪ್ಪಲುಕೈ ಚಾಚಿ ಕಾದವರು ಎಷ್ಟೋ ಮಂದಿಎಲ್ಲರನ್ನು ದಾಟಿಪುನೀತನನ್ನು ಅಪ್ಪಿದೆಯ ವಿಧಿ ನಲ್ವತ್ತಾರರ ಹೃದಯಕೊಂಡೊಯ್ಯುವ ಕ್ರೂರತೆ ನಿನಗೇಕೆಆಟವಾಡಲು ಹರೆಯದಜೀವವೇ ಬೇಕೇ ತಪ್ಪಾಗಿದ್ದರೆ ತಿದ್ದಿಕೊತಿರುಗಿ ಕಳಿಸಿಬಿಡುಕಾಯುತ್ತಿದೆ ಕನ್ನಡ ನಾಡು ********************* ನಾಗರತ್ನ ಎಂ.ಜಿ ಈ ಸಾವು ನ್ಯಾಯವೇ ಕನ್ನಡ ನಾಡಿನವೀರ ಕನ್ನಡಿಗ.ಯುವ ರತ್ನನದಿಡೀರ್ ನಿರ್ಗಮನ| ಕನ್ನಡಿಗರ ಮನಗೆದ್ದರಾಜಕುಮಾರ. ನಟನೆಯಲ್ಲಿನಟ ಸಾರ್ವಭೌಮ.ಅಗಲಿಕೆ ನ್ಯಾಯವೇ? ಕನ್ನಡ ಚಿತ್ರರಂಗದ ಅರಸುಕನ್ನಡದ ಪವರ್ ಸ್ಟಾರ್ಕಣ್ಣೀರು ಕೋಡಿಯಾಗಿದೆನಿಮ್ಮ ಅಕಾಲಿಕ ನಿಧನ. ದೊಡ್ಮನೆ ಹುಡುಗನಿನಗೆ ನೀನೇ ಸಾಟಿ.ಯಾವ ಚಕ್ರವ್ಯೂಹದಲ್ಲಿಸಿಲುಕಿದೆಯೋ ಅಪ್ಪು. ಮತ್ತೊಮ್ಮೆ ಜನಿಸಿ ಬಾಅಂಜನಿಪುತ್ರನಿನ್ನಿಂದಲೇ ಪಾವನವಾಗಲಿಕನ್ನಡ ನಾಡು. ************ ನಾಗರಾಜ ಎಮ್ ಹುಡೇದ

ಅಪ್ಪು ನೆನಪಲ್ಲಿಷ್ಟು ಕವಿತೆಗಳು Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ ಮನೆಗೆ ಬಂದಿದ್ದ ನಾಗರಹಾವು ಅದಕ್ಕೂ ಮುಂಚೆ ರಾಧಾಳ ಮನೆಯಂಗಳಕ್ಕೂ ಬಂದು ಹೋಗಿದ್ದನ್ನು ಆತಂಕದಿಂದ ವಿವರಿಸಿದರು. ಸುಮಿತ್ರಮ್ಮನ ಮಾತುಗಳನ್ನು ಕೇಳಿದ ಗುರೂಜಿಯ ಕವಡೆಗಳು ರಾಧಾಳ ಹಣೆ ಬರಹದೊಂದಿಗೂ ಆಟವಾಡಲು ಮುಂದಾಗಿ ನೀಡಿದ ಸುಳಿವಿನ ಮೇರೆಗೆ ಗುರೂಜಿಯವರು ಅವಳನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದವರು, ‘ನೋಡಮ್ಮಾ, ಸುಮಿತ್ರಮ್ಮ ನಿಮ್ಮ ವಠಾರಕ್ಕೆ ಸಂಬಂಧಿಸಿದ ನಾಗನ ಕುರಿತು ನಿನಗೆ ಎಲ್ಲ ವಿಷಯವನ್ನೂ ತಿಳಿಸಿರಬಹುದು. ಆದರೆ ನಾವೂ ಒಮ್ಮೆ ಹೇಳುತ್ತೇವೆ. ನಿನ್ನ ಮನೆಯ ಹತ್ತಿರ ಇರುವ ದೊಡ್ಡ ಹಾಡಿಯು ನಾಗ ಪರಿವಾರ ದೈವಗಳಿಗೆ ಸೇರಿದ ಸ್ಥಾನ. ಅದರ ಸುತ್ತಮುತ್ತ ಮಾಂಸಾಹಾರಿಗಳು ವಾಸಿಸುವುದು ನಿಷಿದ್ಧ. ಆದರೂ ನೀವು ಕುಳಿತಾಗಿದೆ. ತಿಳಿದೋ ತಿಳಿಯದೆಯೋ ಆ ವಠಾರದಲ್ಲಿ ಸಂಚರಿಸುವ ನಾಗನಿಗೂ ಅವನ ಪರಿವಾರಕ್ಕೂ ನಿಮ್ಮಿಂದ ಅಶುದ್ಧವಾಗಿಯೂ ಆಗಿದೆ. ಅದರಿಂದ ಅವನು ಕೋಪಗೊಂಡಿದ್ದಾನೆ. ಅದರ ಸೂಚನೆಯಾಗಿ ನಿನ್ನ ಗಂಡನ ಕನಸಿನಲ್ಲೂ ಮತ್ತು ಅವನ ಮೈಮೇಲೂ ನಾಗಧೂತನೇ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ತೋರಿ ಬರುತ್ತಿದೆ!’ ಎಂದು ಆತಂಕದಿಂದ ಹೇಳಿದರು. ಅಷ್ಟು ಕೇಳಿದ ರಾಧಾ ಕಂಗಾಲಾದಳು. ಅವಳಿಗೆ ಅಳು ಉಕ್ಕಿ ಬಂತು. ‘ನಿಮ್ಮ ದಮ್ಮಯ್ಯ ಗುರೂಜೀ… ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ…!’ ಎಂದು ಬೇಡಿಕೊಂಡಳು. ಆಗ ಅವಳ ಅಳುವಿಗೆ ತಾವೂ ಕನಿಕರಪಟ್ಟಂತೆ ಗುರೂಜಿಯವರ ಮುಖಭಾವವು ಬದಲಾಯಿತು. ‘ನೋಡಮ್ಮಾ ನಿನ್ನ ಕಷ್ಟ ನಮಗೂ ಅರ್ಥವಾಗುತ್ತದೆ. ಸದ್ಯಕ್ಕೆ ನಾಗನ ಕೋಪದಿಂದ ಪಾರಾಗಬೇಕಾದರೆ ನಿಮ್ಮ ಶಕ್ತ್ಯಾನುಸಾರ ಮನೆಯಲ್ಲಿ ನಾಗಶಾಂತಿಯೊಂದನ್ನು ಮಾಡಿಸಬೇಕು. ಬಳಿಕ ಸಂಸಾರ ಸಮೇತ ಷಣ್ಮುಖಕ್ಷೇತ್ರಕ್ಕೆ ಹೋಗಿ ಸೇವೆ ಕೊಟ್ಟು ಬನ್ನಿ. ಅದಾಗುವ ಹೊತ್ತಿಗೆ ಆ ಬನವೂ ಜೀರ್ಣೋದ್ಧಾರವಾಗುತ್ತದೆ. ಆ ಕಾರ್ಯದಲ್ಲೂ ತನು ಮನ ಧನಾದಿಗಳಿಂದ ಸಹಕರಿಸಿ. ಆಮೇಲೆ ನಿನ್ನ ಗಂಡ ಹುಷಾರಾಗುತ್ತಾನೆ ಮತ್ತು ನಿಮ್ಮೆಲ್ಲ ತೊಂದರೆಗಳೂ ಪರಿಹಾರವಾಗುತ್ತವೆ. ಹೋಗಿ ಬನ್ನಿ!’ ಎಂದು ಅಭಯವಿತ್ತರು. ಆದರೆ ರಾಧಾ ಗುರೂಜಿಯ ಪರಿಹಾರ ವಿಧಿಗಳನ್ನು ಕೇಳಿ ದಂಗಾದಳು. ಅವುಗಳನ್ನು ನೆರವೇರಿಸಲು ಹಣಕ್ಕೇನು ಮಾಡುವುದು? ಎಂಬ ಚಿಂತೆ ಅವಳನ್ನು ಆಕ್ಷಣವೇ ಕಾಡತೊಡಗಿತು. ಏನೂ ತೋಚದೆ ಕುಳಿತಳು. ಅವಳ ಮೌನ ಕಂಡು ಗುರೂಜಿಗೆ ಕಿರಿಕಿರಿಯಾಯಿತು. ಅವರು ಅಸಡ್ಡೆಯಿಂದ ಸುಮಿತ್ರಮ್ಮನನ್ನು ದಿಟ್ಟಿಸಿದರು. ಆಗ ಸುಮಿತ್ರಮ್ಮನೂ ಸಂಕೋಚದಿಂದ, ‘ಏನು ಮಾಡುತ್ತಿ ಮಾರಾಯ್ತೀ…?’ ಎಂದು ಮೃದುವಾಗಿ ಪ್ರಶ್ನಿಸಿದರು. ರಾಧಾಳಿಗೆ ಮಾತಾಡುವುದು ಅನಿವಾರ್ಯವಾಯಿತು. ಏನಾದರಾಗಲಿ. ಈಗ ಬಂದಿರುವ ಗಂಡಾಂತರವೊಂದು ನಿವಾರಣೆಯಾದರೆ ಸಾಕು ಎಂದುಕೊಂಡವಳು, ‘ಆಯ್ತು ಗುರೂಜಿ ತಾವು ಹೇಳಿದಂತೆಯೇ ಮಾಡುತ್ತೇವೆ’ ಎಂದಳು. ಆಗ ಗುರೂಜಿ ಶಾಂತರಾದವರು, ಕುಂಕುಮದ ಪೊಟ್ಟಣವೊಂದನ್ನೂ, ಒಂದಿಷ್ಟು ಉರಿದ ಕಡಲೇಬೇಳೆ ಕಾಳುಗಳನ್ನೂ ಅವರಿಬ್ಬರ ಕೈಗಳಿಗೆ ಎಸೆದರು. ಅವರು ಅದನ್ನು ಕಣ್ಣಿಗೊತ್ತಿಕೊಂಡು ಗುರೂಜಿಯ ಕಾಣಿಕೆಯಿಟ್ಟು ಹಿಂದಿರುಗಿದರು. ರಾಧಾಳ ಪರಿಸ್ಥಿತಿಯನ್ನು ನೆನೆದ ಸುಮಿತ್ರಮ್ಮನಿಗೆ, ಗುರೂಜಿಯವರು ಅವಳಿಗೆ ಸೂಚಿಸಿದ ಪರಿಹಾರವನ್ನು ಕೇಳಿ ಯಾಕೋ ಒಂಥರಾ ಸಂಕಟವಾಗತೊಡಗಿತು. ಇಂಥ ಬಡ ಅಮಾಯಕರ ವಿಷಯದಲ್ಲಿ ತಾವೆಲ್ಲೋ ತಪ್ಪು ಮಾಡುತ್ತಿದ್ದೇವೇನೋ ಎಂಬ ಭಯ, ಪಾಪಪ್ರಜ್ಞೆಯೂ ಅವರನ್ನು ಕಾಡತೊಡಗಿತು. ಆದ್ದರಿಂದ ತಮ್ಮ ತಳಮಳವನ್ನು ನಿವಾರಿಸಿಕೊಳ್ಳುವುದಕ್ಕಾಗಿ ದಾರಿಯುದ್ದಕ್ಕೂ ರಾಧಾಳಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ನಡೆದರು. ರಾಧಾ ಮನೆಗೆ ಬಂದವಳು ಗಂಡನಿಗೆ ವಿಷಯ ವಿವರಿಸಿದಳು. ಅಷ್ಟು ಕೇಳಿದ ಗೋಪಾಲ ಮತ್ತೂ ವಿಚಲಿತನಾದ. ಅಲ್ಲದೇ ಅವನು ತನ್ನ ಕನಸಿನಲ್ಲಿ ಕಾಣಿಸಿಕೊಂಡ ಸರ್ಪಕ್ಕೂ ಮತ್ತದರ ಭಯಂಕರ ವರ್ತನೆಗೂ ಹಾಗೂ ಜ್ವರದಿಂದ ತನಗಾದ ವಿಚಿತ್ರಾನುಭವಕ್ಕೂ ತಾಳೆ ಹಾಕಿದ. ಮರುಕ್ಷಣ, ಹೌದು ಗುರೂಜಿಯ ಮಾತುಗಳು ಅಕ್ಷರಶಃ ಸತ್ಯ ಎಂದು ಅವನಿಗನ್ನಿಸಿತು! ‘ಗುರೂಜಿಯವರು ಹೇಳಿದ ಪೂಜೆಗಳನ್ನು ಊರಲ್ಲಿ ಮಾಡಿಸುವುದೆಂದರೆ ನಿಮಗೆ ತುಂಬಾ ಖರ್ಚಾಗುತ್ತದೆ. ಹಾಗಾಗಿ ಅವರು ನಿಮ್ಮನ್ನು ಹ್ಯಾಗೂ ಷಣ್ಮುಖಕ್ಷೇತ್ರಕ್ಕೆ ಹೋಗಿ ಬರಲು ಹೇಳಿದ್ದಾರೆ. ನಾಗಶಾಂತಿಯನ್ನೂ ಅಲ್ಲಿಯೇ ಮಾಡಿಸಿಕೊಂಡು ಬಂದುಬಿಡಿ. ಎಲ್ಲಿಯಾದರೇನು? ನಾಗನಿಗೆ ಸಂದಾಯವಾದರೆ ಸೈಯಲ್ಲವಾ!’ ಎಂದು ರಾಧಾಳ ಅಪ್ಪ ಅಳಿಯನಿಗೆ ಹಗುರವಾಗುವಂಥ ಸಲಹೆಯನ್ನು ನೀಡಿ ಒಂದಿಷ್ಟು ಹಣವನ್ನೂ ಕೊಟ್ಟರು. ಗೋಪಾಲ ದಂಪತಿಗೂ ಅವರ ಮಾತು ಸರಿಯೆನಿಸಿತು. ಕೂಡಲೇ ಮಕ್ಕಳನ್ನು ಕಟ್ಟಿಕೊಂಡು ಷಣ್ಮುಖಕ್ಷೇತ್ರಕ್ಕೆ ಹೋದರು. ಅಲ್ಲಿ ಮೂರು ದಿನಗಳ ಕಾಲ ಕ್ಷೇತ್ರದ ಛತ್ರದಲ್ಲಿದ್ದು ತಮಗೆ ಸೂಚಿಸಲಾದ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿದವರು, ಇನ್ನು ಮುಂದಾದರೂ ನಮ್ಮನ್ನು ಹಿಡಿದಿರುವ ನಾಗದೋಷವು ನಿವಾರಣೆಯಾಗಬಹುದು ಎಂಬ ದೃಢವಿಶ್ವಾಸದಿಂದ ಊರಿಗೆ ಹಿಂದಿರುಗಿದರು. ಆದರೆ ಗೋಪಾಲನ ದುರಾದೃಷ್ಟ ಅಷ್ಟುಬೇಗನೇ ಅವನ ಬೆನ್ನು ಬಿಡುವಂತೆ ತೋರಲಿಲ್ಲ. ಷಣ್ಮುಖಕ್ಷೇತ್ರಕ್ಕೆ ಹೋಗಿ ಬಂದ ಮೂರನೆಯ ದಿನ ಅದೇ ಜ್ವರ ಅವನನ್ನು ಮರಳಿ ಹಿಡಿದುಕೊಂಡಿತು. ರಾಧಾ ಮತ್ತೆ ದಿಕ್ಕು ತೋಚದಾದಳು. ಆದರೆ ಆಗ ಅವಳಿಗೆ ಡಾ. ನರಹರಿ ಕೊಟ್ಟಿದ್ದ ಮಾತ್ರೆಗಳಲ್ಲಿ ಇನ್ನೂ ಕೆಲವು ಉಳಿದಿರುವುದು ತಟ್ಟನೆ ನೆನಪಾಯಿತು. ಕೂಡಲೇ ಅದನ್ನು ಹುಡುಕಿ ತಂದು ಬಿಸಿ ನೀರಿನೊಂದಿಗೆ ಗಂಡನಿಗೆ ನುಂಗಿಸಿದಳು. ಆದರೆ ಅವನು ಸ್ವಲ್ಪಹೊತ್ತಿನಲ್ಲಿ ಮರಳಿ ವಿಚಿತ್ರವಾಗಿ ಬದಲಾದವನು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಗಾಯಗೊಂಡ ಕೋಪಿಷ್ಟ ಹಾವಿನಂತೆ ಉಸಿರು ದಬ್ಬುತ್ತ ಇಡೀ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತ ಹೊರಳಿ, ಹೊರಳಿ ತೆವಳತೊಡಗಿದ. ಕೈಕಾಲುಗಳು ಸೆಟೆದುಕೊಂಡಂತೆ ವರ್ತಿಸತೊಡಗಿದ. ಅವನ ಅಂತ ಭೀಕರ ಸ್ಥಿತಿಯನ್ನು ಕಂಡ ರಾಧಾ ಕಂಗಾಲಾದಳು. ಮರಳಿ ಅವಳನ್ನು ನಾಗದೋಷದ ಭಯವು ಕಾಡತೊಡಗಿತು. ಹಾಗಾಗಿ ಗಂಡನೆದುರು ಕೂರಲಾಗದೆ ದಡಕ್ಕನೆದ್ದು ಸುಮಿತ್ರಮ್ಮನ ಮನೆಗೆ ಧಾವಿಸಿದಳು. ‘ಸುಮಿತ್ರಮ್ಮಾ, ಸುಮಿತ್ರಮ್ಮಾ…ಇವರು ಹೇಗೇಗೋ ಆಡುತ್ತಿದ್ದಾರೆ ಮಾರಾಯ್ರೇ…ಸ್ವಲ್ಪ ಬನ್ನಿಯೇ…!’ ಎಂದು ಅಂಗಲಾಚಿದಳು. ಸುಮಿತ್ರಮ್ಮನೂ ಗಾಬರಿಬಿದ್ದು ಅವಳನ್ನು ಹಿಂಬಾಲಿಸಿದರು. ಆದರೆ ಅಷ್ಟರವರೆಗೆ ಕೋಣೆಯಿಡೀ ತೆವಳುತ್ತಿದ್ದ ಗೋಪಾಲ ಈಗ ನಿತ್ರಾಣಗೊಂಡು ಕವುಚಿ ಬಿದ್ದ ಹೆಣದಂತೆ ಮಲಗಿದ್ದ. ಅವನ ಬಾಯಿಯಿಂದ ಎಂಜಲು ನೊರೆನೊರೆಯಾಗಿ ಹರಿಯುತ್ತಿತ್ತು. ಅವನ ಘೋರ ಸ್ಥಿತಿಯನ್ನು ಕಂಡ ಸುಮಿತ್ರಮ್ಮನಿಗೆ ಗುರೂಜಿಯ ಮಾತು ಮತ್ತು ಸಲಹೆಗಳು ತಟ್ಟನೆ ಕಣ್ಣೆದುರು ಸುಳಿದವು. ಹೌದು ಗುರೂಜಿಯವರು ಹೇಳಿದ್ದೆಲ್ಲವೂ ಸತ್ಯ. ಇವನಿಗೆ ಖಂಡಿತಾ ನಾಗನ ಶಾಪ ತಟ್ಟಿದೆ! ಎಂದು ಯೋಚಿಸಿದ ಅವರನ್ನೂ ಆ ಭಯವು ಆವರಿಸಿಕೊಂಡಿತು. ‘ಅಯ್ಯಯ್ಯೋ ದೇವರೇ…! ಇದೇನಪ್ಪಾ ದುರಾವಸ್ಥೆ? ನೀವು ಆದಷ್ಟು ಬೇಗ ಈ ಮನೆಯನ್ನು ಮಾರಿ ದೂರವೆಲ್ಲಾದರೂ ಹೊರಟು ಹೋಗಿ ಮಾರಾಯ್ತೀ… ಇನ್ನು ನಿಮಗೆ ಈ ಸ್ಥಳ ಖಂಡಿತಾ ಆಗಿಬರುವುದಿಲ್ಲ!’ ಎಂದು ಆತಂಕದಿಂದ ಹೇಳಿದವರು ಕೆಲವು ಕ್ಷಣ ಏನೂತೋಚದೆ ನಿಂತುಬಿಟ್ಟರು. ಸುಮಿತ್ರಮ್ಮನಿಂದಲೂ ಆ ಮಾತುಗಳನ್ನು ಕೇಳಿದ ರಾಧಾಳಿಗೆ ನಿಂತ ನೆಲವೇ ಕುಸಿದಂತಾಯಿತು. ಆದರೆ ಆ ಪರಿಸ್ಥಿತಿಯಲ್ಲೂ ಅವಳಿಗೆ ಮತ್ತೆ ಡಾ. ನರಹರಿ ನೆನಪಾದ. ಸುಮಿತ್ರಮ್ಮನನ್ನು ಕರೆದುಕೊಂಡು ಅವನ ಮನೆಗೆ ಓಡಿದಳು. ಇಂದು ರಾಧಾಳ ಅದೃಷ್ಟಕ್ಕೆ ನರಹರಿಗೆ ರಜೆಯ ದಿನವಾಗಿತ್ತು. ಅವನು ತಾರಸಿಯ ಮೇಲೆ ಕುಳಿತುಕೊಂಡು ಯಾವುದೋ ಪುಸ್ತಕ ಓದುತ್ತಿದ್ದ. ಅಷ್ಟರಲ್ಲಿ ಮನೆಯ ಕರೆಗಂಟೆ ಬಾರಿಸಿದ್ದರಿಂದ ಕೆಳಗಿಳಿದು ಬಂದವನು ಸುಮಿತ್ರಮ್ಮನನ್ನೂ ರಾಧಾಳನ್ನೂ ಕಂಡು ಆತ್ಮೀಯ ನಗು ಬೀರಿದ. ರಾಧಾಳ ಕಣ್ಣೀರು ಗಮನಿಸಿ, ‘ಏನಾಯ್ತಮ್ಮಾ…?’ ಎಂದ. ರಾಧಾ ತನ್ನ ಗಂಡನ ಪರಿಸ್ಥಿತಿಯನ್ನು ಅಳುತ್ತ ಬಡಬಡಿಸಿದಳು. ನರಹರಿಯು ಕೂಡಲೇ ತನ್ನ ಶುಶ್ರೂಷೆಯ ಚೀಲವನ್ನು ಹಿಡಿದುಕೊಂಡು ಅವರೊಂದಿಗೆ ನಡೆದ. ಗೋಪಾಲನ ಮನೆಯ ತೊಡಮೆಯ ಹತ್ತಿರ ಬಂದ ನರಹರಿಯು ಅಪ್ರಜ್ಞಾಪೂರ್ವಕವಾಗಿ ಕೆಲವು ಕ್ಷಣ ಸುಮ್ಮನೆ ನಿಂತುಬಿಟ್ಟ. ಅಲ್ಲೊಂದು ವಿಶೇಷ ಚೈತನ್ಯವು ತನ್ನೊಳಗೆ ಪ್ರವಾಹಿಸಿದಂತಾಗಿ ಅಚ್ಚರಿಗೊಂಡ. ರಾಧಾಳ ವಠಾರದಲ್ಲಿ ನಿಸರ್ಗದತ್ತವಾದ ಸಹಜ ಜೀವಂತಿಕೆ ತುಂಬಿ ತುಳುಕುತ್ತಿರುವುದನ್ನು ಅವನ ಒಳಮನಸ್ಸು ಗ್ರಹಿಸಿತು. ಮರುಕ್ಷಣ ಉಲ್ಲಸಿತನಾದ. ರಾಧಾಳ ಅಂಗಳದಲ್ಲಿ ಹಸುವಿನೊಂದಿಗಿದ್ದ ಕಂದು ಬಣ್ಣದ ಪುಟ್ಟ ಕರುವೊಂದು ಅಮ್ಮನ ಕೆಚ್ಚಲನ್ನು ಗುದ್ದಿಗುದ್ದಿ ಹಾಲು ಕುಡಿಯುತ್ತಿತ್ತು. ಆದರೆ ಆ ತಾಯಿ ಹಸುವು ಯಾಂತ್ರಿಕವಾಗಿ ಮೇಯುತ್ತಿತ್ತು. ಅತ್ತ ಕಡೆ ಏಳೆಂಟು ಊರ ಕೋಳಿಗಳ ಹಿಂಡೊಂದು ಸ್ವಚ್ಛಂದವಾಗಿ ಮೇಯುತ್ತಿದೆ ಎಂದೆನಿಸಿದರೂ ತಮ್ಮ ಮನೆಯಜಮಾನರ ನೋವು ದುಃಖಗಳು ಅವುಗಳನ್ನೂ ಭಾದಿಸುತ್ತಿವೆ ಎಂಬುದು ಅವುಗಳ ನೀರಸ ಚಲನೆಯಿಂದಲೇ ತಿಳಿಯುತ್ತಿತ್ತು. ನರಹರಿಯು ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತ ಅಂಗಳಕ್ಕಡಿಯಿಟ್ಟ. ಅಲ್ಲಿನ ಹಸುಗಳ ಸೆಗಣಿ ಮತ್ತು ಗಂಜಲದ ಸುವಾಸನೆಗಳು ತನ್ನ ಮೆದುಳನ್ನು ಚುರುಕುಗೊಳಿಸಿದಂತೆ ಭಾಸವಾಯಿತು ಅವನಿಗೆ. ಅದರ ಬೆನ್ನಿಗೆ ನೇರಳೆ, ಪೇರಳೆ, ಸಂಪಿಗೆ ಮತ್ತು ಹಲಸಿನ ಮರಗಳಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಕಲರವವೂ ಹೃದಯಸ್ಪರ್ಶಿಯೆನಿಸಿತು. ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿವನು, ನಮ್ಮ ಮನುಷ್ಯಕುಲವು ನಿಜವಾಗಿಯೂ ಬದುಕಿ ಬಾಳಬೇಕಾದ ಜೀವನಕ್ರಮವೆಂದರೆ ಹೀಗೆಯೇ ಅಲ್ಲವೇ! ಎಂದುಕೊಂಡು ಮುಂದುವರೆದ. ನರಹರಿಯನ್ನು ಕಂಡ ಮೋತಿಯು ಜೋರಾಗಿ ಬೊಗಳಿತು. ಆದರೆ ಅವನ ಆತ್ಮೀಯ ನಗುವನ್ನು ಕಂಡದ್ದು ಅವನತ್ತ ಓಡಿ ಬಂದು ಬಾಲವಲ್ಲಾಡಿಸುತ್ತ ಗೌರವ ಸೂಚಿಸಿತು. ಆದರೆ ನರಹರಿಯ ಹಿಂದೆ ಸ್ವಲ್ಪದೂರದಲ್ಲಿ ನಿಂತುಕೊಂಡು ತನ್ನತ್ತ ಭಯದಿಂದ ದಿಟ್ಟಿಸುತ್ತಿದ್ದ ಸುಮಿತ್ರಮ್ಮನನ್ನು ಕಂಡದ್ದು ಮರಳಿ ಕೆರಳಿತು. ಅಷ್ಟೊತ್ತಿಗೆ ರಾಧಾ ಅದನ್ನು ಗದರಿಸಿ ದೂರಕ್ಕಟ್ಟಿದಳು. ಆದ್ದರಿಂದ ಆಗಿನ ಸನ್ನಿವೇಶವನ್ನು ಅರ್ಥಮಾಡಿಕೊಂಡ ಆ ಪ್ರಾಣಿಯೂ ಬೊಗಳುವುದನ್ನು ನಿಲ್ಲಿಸಿ ದೂರ ಹೋಗಿ ಕುಳಿತು ಮನೆಯತ್ತ ಆತಂಕದಿಂದ ನೋಡತೊಡಗಿತು. ನರಹರಿ ಗೋಪಾಲನ ಮನೆಯೊಳಗೆ ಹೋದ. ಅಲ್ಲಿ ಪಡಸಾಲೆಯಲ್ಲಿ ಸೆಗಣಿ ಸಾರಿಸಿದ ಮಣ್ಣಿನ ನೆಲದ ಮೇಲೆ ಕೇದಗೆಯ ಒಲಿಗಳಿಂದ ನೆಯ್ದ ಚಾಪೆಯೊಂದು ಹಾಸಿದ್ದು ಅದೀಗ ಪುಡಿಪುಡಿಯಾಗಿತ್ತು! ಸ್ವಲ್ಪ ಹೊತ್ತಿನ ಮುಂಚೆ ಅದರಲ್ಲಿ ಮಲಗಿದ್ದ ಗೋಪಾಲ ಈಗ ತಣ್ಣನೆ ಉಸಿರು ದಬ್ಬುತ್ತ ಕೋಣೆಯ ಮೂಲೆಯೊಂದರಲ್ಲಿ ನಿಸ್ತೇಜನಾಗಿ ಬಿದ್ದಿದ್ದ. ನರಹರಿ ಅವನನ್ನು ದೀರ್ಘವಾಗಿ ಪರೀಕ್ಷಿಸಿದ. ಅವನ ಮುಖ ಕೆಲವು ಕ್ಷಣ ವೇದನೆಯಿಂದ ಕಳೆಗುಂದಿತು. ‘ಆವತ್ತು ಕೆಲವು ಪರೀಕ್ಷೆಗಳನ್ನು ಮಾಡಿಸಲು ಹೇಳಿದ್ದೆನಲ್ಲಮ್ಮಾ, ಅದನ್ನು ಮಾಡಿಸಿದ್ದೀರೇನು…?’ ಎಂದ ಮೃದುವಾಗಿ. ‘ಹೌದು ಡಾಕ್ಟ್ರೇ ಹೇಳಿದ್ರೀ. ಆದರೆ ನೀವು ಕೊಟ್ಟ ಔಷಧಿಯಿಂದಲೇ ಜ್ವರಬಿಟ್ಟಿತು. ಹಾಗಾಗಿ ಮರೆತುಬಿಟ್ಟೆವು…!’ ಎಂದು ರಾಧಾ ಹಿಂಜರಿಯುತ್ತ ಅಂದಳು. ‘ಛೇ ಛೇ! ಎಂಥ ಕೆಲಸವಾಯಿತಮ್ಮಾ…? ಆ ಪರೀಕ್ಷೆಗಳನ್ನು ಆವತ್ತೇ ಮಾಡಿಸಿಕೊಳ್ಳಬೇಕಿತ್ತಲ್ಲವಾ…!’ ಎಂದ ನರಹರಿ ಆತಂಕದಿಂದ. ‘ಹೌದಾ ಡಾಕ್ಟ್ರೇ..?’ ಎಂದು ನೋವಿನಿಂದ ಕೇಳಿದ ರಾಧಾ, ‘ಈಗೇನು ಮಾಡುವುದು…?’ ಎಂಬಂತೆ ಅವನನ್ನೇ ದಿಟ್ಟಿಸಿದಳು. ‘ನೋಡಿಯಮ್ಮ. ಇದೊಂದು ಬಗೆಯ ಮೆದುಳು ಜ್ವರದ ಸೂಚನೆ! ಈಗಲೇ ತಡವಾಗಿಬಿಟ್ಟಿದೆ. ಸದ್ಯಕ್ಕೊಂದು ಔಷಧಿ ಕೊಡುತ್ತೇನೆ. ಅದರ ಪರಿಣಾಮ ಇಳಿಯುವುದರೊಳಗೆ ಇವನನ್ನು ಆಸ್ಪತ್ರೆಗೆ ದಾಖಲಿಸಬೇಕು!’ ಎಂದು ನರಹರಿ ಗಂಭೀರವಾಗಿ ಹೇಳಿದ. ಅದರಿಂದ ರಾಧಾ ಇನ್ನಷ್ಟು ಹೆದರಿದಳು. ಅತ್ತ ಮರಗಟ್ಟಿ ನಿಂತುಕೊಂಡು ನಾಗದೋಷದ ಹೆದರಿಕೆಯನ್ನೇ ಉಸಿರಾಡುತ್ತ ಗೋಪಾಲನನ್ನು ದಿಟ್ಟಿಸುತ್ತಿದ್ದ ಸುಮಿತ್ರಮ್ಮನಿಗೆ ನರಹರಿ, ‘ಇದು ಮೆದುಳು ಜ್ವರದ ಸೂಚನೆ!’ ಎಂದಾಗ ಒಮ್ಮೆಲೇ ದಿಗಿಲಾಯಿತು. ‘ಅಯ್ಯಯ್ಯೋ ದೇವರೇ…! ಈ ಮನುಷ್ಯ ಏನು ಹೇಳುತ್ತಿದ್ದಾನೆ…!? ಎಂದು ಆತಂಕ, ವಿಸ್ಮಯದಿಂದ ಚಡಪಡಿಸುತ್ತ ಅಂದುಕೊಂಡರು. ಅದರ ಬೆನ್ನಿಗೆ ಅವರನ್ನು ಬಲವಾದ ಅನುಮಾನವೊಂದೂ ಕಾಡಿತು. ಈ ನರಹರಿ ಎಷ್ಟು ಒಳ್ಳೆಯ ಡಾಕ್ಟ್ರಾಗಿದ್ದರೂ ಇವನದಿನ್ನೂ ಹುಡುಗು ಪ್ರಾಯ. ಹಾಗಾಗಿ ಇಂಥ ವಿಚಾರಗಳ ಬಗ್ಗೆ ಇವನಿಗೇನು ಗೊತ್ತಿದ್ದೀತು ಮಣ್ಣು! ಎಂದು ಯೋಚಿಸಿದವರು, ‘ಅಲ್ಲ ಡಾಕ್ಟ್ರೇ, ಅವನು ಹೆಡೆ ತುಳಿದ ನಾಗರಹಾವಿನಂತೆ ಆಡುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಅಷ್ಟಲ್ಲದೆ ಪ್ರಶ್ನೆಯಿಟ್ಟಲ್ಲೂ ಅದು ನಾಗದೋಷದ್ದೇ ಸೂಚನೆ ಅಂತನೂ ತಿಳಿದು ಬಂದಿದೆ. ಹೀಗಿರುವಾಗ ನೀವು ನೋಡಿದರೆ ಮೆದುಳು

Read Post »

ಇತರೆ

ಡಾ.ಸುಜಾತಾ.ಚಲವಾದಿಯವರ ಪ್ರಬಂಧ

ನಾನು ಅಲ್ಲಿಂದ ಕಾಲು ಕಿತ್ತೆ. ಮಳೆಹನಿ ಹಾಗೆ ಜಿನುಗುತ್ತಿತ್ತು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. ಮಳೆ ನಿಂತಿತು ಪ್ರಶ್ನೆಗಳು ಮಾತ್ರ ನಿಲ್ಲಲಿಲ್ಲ. ಮತ್ತೆ ಬುದ್ದರ ಕಡೆ ಧ್ಯಾನಸ್ಥೆಯಂತೆ ಮೂಕಳಾದೆ

ಡಾ.ಸುಜಾತಾ.ಚಲವಾದಿಯವರ ಪ್ರಬಂಧ Read Post »

ಇತರೆ

ಜ್ಞಾನದ ಹೊತ್ತಿಗೆಗಳು

ಲೇಖನ ಜ್ಞಾನದ ಹೊತ್ತಿಗೆಗಳು ಆರ್. ಬಿ. ಪ್ರಿಯಾಂಕ : ಪುಸ್ತಕಗಳು  ಮಸ್ತಕಗಳ   ತೆರೆಸುತ್ತವೆ,  ಪುಸ್ತಕಗಳು  ಹೃದಯಗಳ  ತಟ್ಟುತ್ತವೆ,   ಪುಸ್ತಕಗಳು  ಮಾತು – ಮನಗಳ ಒಂದು ಮಾಡುತ್ತವೆ,   ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ  ಜಿಜ್ಞಾಸೆಗಳ ಫಲವಾಗಿವೆ.  ಮನುಷ್ಯನ  ಯೋಚನೆಗಳು,  ಕಾರ್ಯಗಳು,  ಸಾಧನೆಗಳು, ಪುಸ್ತಕಗಳ  ರೂಪದಲ್ಲಿ   ಶಾಶ್ವತವಾಗಿರುತ್ತವೆ. ಈ  ಪುಸ್ತಕಗಳು ಪೀಳಿಗೆಯಿಂದ  ಪೀಳಿಗೆಗೆ ಜ್ಞಾನವವನ್ನು  ವರ್ಗಾಯಿಸುವ ಸುಲಭ ಸಾಧನಗಳಾಗಿವೆ. ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ ನಮ್ಮ ಅಜ್ಞಾನದ ಅರಿವು ನಮಗಾಗುತ್ತದೆ. ಡಾ ll A.P.J.ಅಬ್ದುಲ್ ಕಲಾಂ  ರವರ ಮಾತಿನಂತೆ ” ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ” ಎಂಬ ನುಡಿಯಂತೆ ಪುಸ್ತಕಗಳು ನಮ್ಮಿಂದ ಎಂದಿಗೂ ದೂರ ಹೋಗದ ಆಪ್ತ ಸ್ನೇಹಿತನಂತೆ. ಪುಸ್ತಕಗಳು ಜ್ಞಾನದ ಜೊತೆ ಜೊತೆಗೆ ಜೀವನ ಪಾಠವನ್ನು, ಸಹಾಯ – ಸಹಕಾರಗಳನ್ನು ಕಲಿಸುತ್ತವೆ. ” ದೇಶ ಸುತ್ತಿ ನೋಡು ಕೋಶ ಓದಿ ನೋಡು “ ಎಂಬಂತೆ ಪುಸ್ತಕಗಳನ್ನು  ಓದುವುದರಿಂದ ವಿವಿಧ ದೇಶಗಳಲ್ಲಿನ  ಸಾಹಿತ್ಯ, ಕಲೆ,  ಸಂಸ್ಕೃತಿ,  ಹಾಗೂ ಆಚಾರ-ವಿಚಾರಗಳು ತಿಳಿಯುತ್ತವೆ. ಒಬ್ಬ  ವ್ಯಕ್ತಿ  ತಾನಿರುವ ಸ್ಥಳದಲ್ಲಿಯೇ  ಲೋಕದ ಅನುಭವವನ್ನು  ಪುಸ್ತಕಗಳಿಂದ  ಪಡೆಯುತ್ತಾನೆ.   ಪುಸ್ತಕಗಳು ಧರ್ಮ,  ದೇಶ,  ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರಿಂದ ಇವು ಸತ್ಯವೂ, ನಿತ್ಯವೂ, ನಿರಂತರವೂ,  ಸುಂದರವೂ  ಆಗಿವೆ.  ” ಓದಿನ ಸುಖವೊಂದೇ ನಿತ್ಯವಾದದ್ದು, ಮಿಕ್ಕ ಸುಖಗಳಿಗೆ ನಾವು  ಹಲವರನ್ನು ಅವಲಂಬಿಸಬೇಕಾಗುತ್ತದೆ ಎಂಬ ಮಾತಿನಂತೆ, ಪುಸ್ತಕಗಳು ಸ್ಪಂದನಕ್ಕೆ ಗುರಿಯಾಗಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತವೆ. ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು  ಹೋಗುತ್ತವೆ. ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ, ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿಸುವಂತೆ ಮಾಡುತ್ತದೆ, ಪುಸ್ತಕವು ಹೇಗೆ ಜೀವಿಸಬೇಕೆಂದು ಕಲಿಸುತ್ತದೆ. ಎಂಬ ಡಾ ll ಬಿ. ಆರ್. ಅಂಬೇಡ್ಕರ್ ರವರ ನುಡಿಯಂತೆ, ಉತ್ತಮ ಪುಸ್ತಕಗಳು  ನಮ್ಮ ಬದುಕಿನ ದಾರಿದೀಪಗಳಾಗಿವೆ. ಜೀವನವನ್ನು ಕಟ್ಟುವ ಶಕ್ತಿಗಳಾಗಿವೆ. ” A room without books is like a body without a soul”      ಎಂಬಂತೆ ” ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ “.        ಪುಸ್ತಕಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಓದಬೇಕು ಅದರಿಂದ ಜ್ಞಾನ ಹೆಚ್ಚುತ್ತದೆ.                     ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.  ಎಂಬಂತೆ ಬಂಗಾರವನ್ನು ಉಜ್ಜಿದಷ್ಟೂ ಹೊಳಪು ಬರುವಂತೆ ಜ್ಞಾನವನ್ನು ಹಂಚಿದಷ್ಟೂ ಹೆಚ್ಚುತ್ತಲೇ ಹೋಗುತ್ತದೆ. ಈ ಜ್ಞಾನ ಪುಸ್ತಕಗಳನ್ನು ಓದುವುದರಿoದ  ಸಿಗುತ್ತದೆ. ಪುಸ್ತಕಗಳನ್ನು ಓದುವ, ಸಂಗ್ರಹಿಸುವ  ಪ್ರವೃತ್ತಿ  ಪ್ರತಿಯೊಬ್ಬ  ಸುಶಿಕ್ಷಿತನಲ್ಲೂ  ಬೆಳೆಯಬೇಕು. ಮಹಾಕಾವ್ಯಗಳಾದ ರಾಮಾಯಣ,  ಮಹಾಭಾರತ, ಮತ್ತು ಭಗವದ್ಗೀತೆ,  ಬೈಬಲ್, ಕುರಾನ್ ಗ್ರಂಥಗಳು ಹಾಗೂ ಕಾಳಿದಾಸರ ಕೃತಿಗಳು ಇನ್ನೂ ಇತ್ಯಾದಿ ಪುಸ್ತಕಗಳನ್ನು ಮೊದಲು  ಓದಿದವರು ನಂತರದಲ್ಲಿ ಅವುಗಳನ್ನು  ನಿರ್ಲಕ್ಷಿಸಿದ್ದರೆ,  ಇಂತಹ ಮಹಾನ್ ಗ್ರಂಥಗಳ ಹಿನ್ನೆಲೆ ಮತ್ತು ಅವುಗಳ ಮಹತ್ವ  ನಮಗೆ ತಿಳಿಯುತ್ತಿರಲಿಲ್ಲ. ಸಾಧ್ಯವಾದಷ್ಟು ಪುಸ್ತಕಗಳನ್ನು ಓದಿ ಅವುಗಳನ್ನು ಜೋಪಾನವಾಗಿ  ಸಂಗ್ರಹಿಸಿಡೋಣ. ಎಲ್ಲರ   ಮನೆ-ಮನಗಳಲ್ಲಿ  ಪುಸ್ತಕಗಳು ಬೆಳಗಲಿ ಎಂದು ಆಶಿಸೋಣ…..

ಜ್ಞಾನದ ಹೊತ್ತಿಗೆಗಳು Read Post »

You cannot copy content of this page

Scroll to Top