“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು
“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ. ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು. ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು ….. ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ. ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ. ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ. ” ನಕ್ಷತ್ರಗಳ ಮೋಹದಲ್ಲಿ ಹಗಲನ್ನು ಮರೆತು ಬಿಟ್ಟೆ..” ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ. “ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು. ” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ. “ಬರೆಯುವ ಹಾಳೆ ಬೋರಲಾಯಿತು ಆದರೆ ಕವಿತೆಗೆ ಮಳೆಯಂತಹ ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು. ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ. “ಕೂಡಲ ಸಂಗಮದಲ್ಲಿ ಕೃಷ್ಣ ಮಲಪ್ರಭೆಯರು ಹರಿಯುತ್ತಿಲ್ಲ ಅಳುತ್ತಿದ್ದಾರೆ” ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ. ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ. ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ! ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು. “ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ. “ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು. ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ. “ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ. ಇವರ ಪದ್ಯಗಳಲ್ಲಿ ನನ್ನನ್ನು ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ! “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ. “ನಿನ್ನ ಧ್ಯಾನದ ಯೋಗದಲಿ ನನ್ನಿರವನ್ನು ನಾನೇ ಮರೆ ತು ಹಟ ಮುನಿಯಂತೆ ಇಲ್ಲಿ ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ, “ತೀಡಿದಂತೆಲ್ಲ ಘಮ ಘಮಿಸುವ ಗಂಧದ ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ ಆನಂದ ಪ್ರೇಮಾನಂದವು ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ. “ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ ಕೊಳ್ಳಬಹುದು ಅನ್ನುವುದು ಸಹಜ ಆಶಯ. “ರಾತ್ರಿ ತುಂಬಾ ನೆನಪುಗಳು ಬಣ್ಣ ಬಣ್ಣ ತುಂಬಿದ ಸಿನಿಮಾ ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ; “ದನ ಕಾಯುವ ಹುಡುಗನೊಬ್ಬ ದಿನವೂ ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ; ಅವನಿಗೆ ಅದು ಬದುಕು:
“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು Read Post »









