ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-16 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು              ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು ಜ್ವಾಲೆಯನ್ನು ನಿರಾಸೆಗೊಳಿಸಿತು ಕಲಹಕ್ಕೊಪ್ಪದ ಉನ್ಮುಖನ ಮಾತು. ಉನ್ಮುಖ ಯುದ್ಧೋನ್ಮುಖನಾಗಲಿಲ್ಲ. ಹರಿಭಕ್ತಮುಖದವನಾಗಿ ಶಾಂತಭಾವದಿ ಕುಳಿತ. ಶ್ರೀಕೃಷ್ಣನ ಸಹಾಯವನ್ನು ಪಡೆದು ಬಂದಿರುವ ನನ್ನ ಜೊತೆ ಯುದ್ಧವನ್ನು ಮಾಡುವ ಮನಸ್ಸಿರಲಿಲ್ಲ ಅವನಿಗೆ. ಜ್ವಾಲೆಯ ರೀತಿಯದು ಹಿಂದಣ ತ್ರೇತಾಯುಗದ ಶೂರ್ಪನಖಿಯ ನೆನಪನ್ನು ಮೂಡಿಸಿತು ಅವನಿಗೆ. ತನಗೊಲಿಯದೆ ಮೂಗು ಕೊಯ್ದವರ ಮೇಲಿನ ಸೇಡಿಗೆ ರಾಮ ರಾವಣ ಸಂಘರ್ಷವನ್ನು ತಂದಿತ್ತ ಶೂರ್ಪನಖಿಯಂತೆಯೇ ತನ್ನಕ್ಕನ ಕಲಹಪ್ರಿಯವಾದ ನಡೆಯಿದೆ ಎನಿಸಿತು ಅವನಿಗೆ. ಆ ಮಾತನ್ನೇ ಕಟುವಾಗಿ ಆಡಿ ಅವಳನ್ನು ಬೈದು ಅಲ್ಲಿಂದ ಕಳುಹಿಸಿಕೊಟ್ಟ. ಅಕ್ಕನ ರೋಷದ ನೆಪದಲ್ಲಿ ನನ್ನನ್ನು ಎದುರುಹಾಕಿಕೊಳ್ಳುವ ಮನಮಾಡಿ ಅಪಾಯಕ್ಕೆ ಮನೆಮಾಡಿಕೊಡುವ ಆಸಕ್ತಿಯಿರಲಿಲ್ಲ ಉನ್ಮುಖನಿಗೆ.       ತಮ್ಮನಿಂದಲೂ ತಿರಸ್ಕೃತಳಾದ ಜ್ವಾಲೆ ಪಯಣವನ್ನು ಬೆಳೆಸುತ್ತಾ ಹೋದವಳು ಗಂಗಾತೀರವನ್ನು ಸೇರಿದಳು. ಪಾಪ ಪರಿಹಾರ ಪುಣ್ಯಜಲದಂತೆ ಹರಿಹರಿಯುತ್ತಿದ್ದ ಗಂಗೆಯನ್ನು ಕಂಡಳು. ಅಮರನದಿಯದು ಜ್ವಾಲೆಯಲ್ಲಿ ಅಮರಭಾವವನ್ನು ಬಿತ್ತಬೇಕಿತ್ತು. ಆದರೆ ಮೊಳಕೆಯೊಡೆದದ್ದು ಅಸುರಭಾವ. ಕೆಲವರ ವರ್ತನೆ ಹಾಗೆಯೇ. ದಿವ್ಯವಾದದ್ದನ್ನು ದರ್ಶಿಸಿದಾಗಲೂ ದುಷ್ಟಭಾವವೇ ಅವರಲ್ಲಿ ಚಿಗುರೊಡೆಯುತ್ತದೆ. ಆ ಬಗೆಯಲ್ಲಿ ಅವರ ಮನೋಭೂಮಿಕೆ ಸಿದ್ಧಗೊಂಡಿರುತ್ತದೆ. ಗಂಗೆಯನ್ನು ಬಳಸಿಕೊಂಡು ತನ್ನಂತರಂಗದ ಮಾತ್ಸರ್ಯಕ್ಕೊಂದು ಗಮ್ಯವನ್ನು ಕಾಣಿಸುವ ಕುಯೋಚನೆ ಮೂಡಿತು ಜ್ವಾಲೆಯಲ್ಲಿ.       ದೋಣಿ ನಡೆಸುವವರೊಂದಷ್ಟು ಜನ ಗಂಗಾತಟದಲ್ಲಿಯೇ ಕುಳಿತಿದ್ದರು. ಅವರನ್ನು ನೋಡುತ್ತಾ ಜ್ವಾಲೆ “ಗಂಗಾನದಿಯ ಒಂದು ಬಿಂದೂ ನನ್ನ ದೇಹವನ್ನು ಸೋಂಕದಂತೆ ನನ್ನನ್ನು ಈ ದಡದಿಂದ ಆ ದಡದೆಡೆಗೆ ಒಯ್ಯುವವರು ಯಾರಾದರೂ ಇರುವಿರಾ?” ಎಂದಳು.      ಅಂಬಿಗರಿಗೆ ಅಚ್ಚರಿಯಾಯಿತು. ಹನಿ ಹನಿ ಗಂಗಾಜಲವದು ಪರಮ ಪಾವನ ಪುಣ್ಯ ಪವಿತ್ರ ಎಂದು ನಂಬುವ ಅನೇಕಾನೇಕ ಜನರನ್ನವರು ಕಂಡಿದ್ದರು. ಗಂಗೆಯ ನೀರದು ಮೈಯ್ಯನ್ನು ಸ್ಪರ್ಶಿಸಿದರೆ ಘನಮಲಿನವೆಂಬ ಬಗೆಯಲ್ಲಿ ಮಾತನ್ನು ಆಡಿದವರಿರಲಿಲ್ಲ; ವರ್ತಿಸಿದವರಿರಲಿಲ್ಲ. ಜ್ವಾಲೆಯ ರೀತಿಯದು ಹೊಸದೆನಿಸಿತು ಅವರಿಗೆ. “ಬಂದದ್ದಾವ ಉದ್ದೇಶದಿಂದ? ಗಂಗಾಜಲವನ್ನು ಮುಟ್ಟಬಾರದು ಎಂದೆನಲು ಕಾರಣವೇನು?” ಎಂದು ವಿಸ್ಮಯ ಭಾವದಲ್ಲಿ ಕೇಳಿದರು.      ತನ್ನ ಪಾಡಿಗೆ ಹರಿಯುತಿರುವ ಗಂಗೆಗೆ ಕೌತುಕ ಹುಟ್ಟುವಂತೆ ಆ ಜ್ವಾಲೆ “ಗಂಗೆಗೆ ಒಂದು ದೋಷವಿದೆ. ಅದೇನೆಂದು ನಿಮಗೆ ಹೇಳಲಾರೆ. ಆ ಗಂಗೆಯೇ ನನ್ನೆದುರು ಮೈದೋರಲಿ. ಹೇಳುತ್ತೇನೆ” ಎಂದಳು.     ಅಪವಾದದ ಅಪನುಡಿಯದು ಅಂಜಿಸಿತು ಅಮರನದಿಯನ್ನು. ತನಗಿರುವ ದೋಷ ಅದಾವುದು ಎನ್ನುವುದನ್ನು ತಿಳಿಯುವ ಕುತೂಹಲಿಯಾದಳು ಗಂಗೆ. ತಕ್ಷಣವೇ ಪ್ರತ್ಯಕ್ಷಳಾದಳು. “ಇನ್ನೊಬ್ಬರ ದೋಷಗಳನ್ನೂ, ಪಾಪಗಳನ್ನೂ ದೂರ ಮಾಡುವವಳೆಂದು ವೇದಶಾಸ್ತçಗಳು ಗುರುತಿಸಿವೆ ನನ್ನನ್ನು. ಸೋಂಕಬಾರದು ಎನ್ನನ್ನು ಎಂದು ದೂಷಿಸುತ್ತಿರುವವಳು ನೀನು. ಇದಕ್ಕೆ ಕಾರಣವೇನು?” ಎಂದು ಆಶ್ಚರ್ಯದಿಂದ ಕೇಳಿದಳು ಜ್ವಾಲೆಯಲ್ಲಿ.      ಮೋಡಿಯ ಮಾತುಗಳನ್ನಾಡಿದಳು ಜ್ವಾಲೆ. “ನಾನೇನೂ ನಿನ್ನನ್ನು ಬೈದದ್ದಲ್ಲ. ಲೋಕರೂಢಿಯ ಮಾತನ್ನು ಹೇಳಿದ್ದೇನೆ ಅಷ್ಟೇ. ಮಕ್ಕಳಿಲ್ಲದ ಬಂಜೆಯನ್ನು ದೋಷವಿರುವವಳು ಎಂದು ಗುರುತಿಸುವ ಕ್ರಮವುಂಟು ಈ ಲೋಕದೊಳಗೆ” ಎಂದಳು.      ಗಂಗೆಗೆ ಈ ಮೊದಲಿಗಿಂತಲೂ ಹೆಚ್ಚಿನ ಅಚ್ಚರಿಯಾಯಿತು. ಕೋಪ ಬಂತು. “ಇಚ್ಛಾಮರಣಿಯೆಂದು ಹೆಸರು ಪಡೆದು, ತ್ರೆöÊಲೋಕ ವೀರನೆಂದು ಖ್ಯಾತಿ ಗಳಿಸಿದ ಭೀಷ್ಮ ನನ್ನ ಮಗನಾಗಿರುವಾಗ ನನ್ನನ್ನು ಮಕ್ಕಳಿಲ್ಲದವಳೆಂದು ಹಂಗಿಸುವುದು ಸರಿಯಲ್ಲ” ಎಂದು ಜ್ವಾಲೆಯನ್ನು ಬೈದಳು.      ವಾಸ್ತವವಾಗಿ ಜ್ವಾಲೆಗೆ ಬೇಕಿದ್ದುದೂ ಅದೇ, ಗಂಗೆಯ ಮನವನ್ನು ಕೆರಳಿಸುವುದು. ಭೀಷ್ಮ ಗಂಗಾಸುತನೆನ್ನುವುದು ಜ್ವಾಲೆಗೆ ತಿಳಿಯದ ಸಂಗತಿಯೇನಲ್ಲ. ಎಂಟು ಮಕ್ಕಳನ್ನು ಪಡೆದ ಗಂಗೆ ಕೊನೆಯದಾಗಿ ಭೀಷ್ಮನನ್ನು ಮಾತ್ರ ಉಳಿಸಿಕೊಂಡ ಬಗೆ ಜ್ವಾಲೆಗೆ ಗೊತ್ತಿತ್ತು. ಬಿಂದು ಬಿಂದುಗಳನ್ನು ಒಂದೊಂದಾಗಿ ಕ್ರಮಿಸುತ್ತಾ ಜ್ವಾಲೆ ಸಾಗಿಬಂದದ್ದು ಈ ಘನಸಿಂಧುವಿನೆಡೆಗೆ, ಭೀಷ್ಮ ಮರಣವನ್ನು ತಿಳಿಸುವ ಅಂತಿಮ ಗಳಿಗೆಯ ಕಡೆಗೆ. “ಹೌದು! ನಿನ್ನ ಸುತ ಭೀಷ್ಮ ಎನ್ನುವುದು ಗೊತ್ತಿದೆ. ಅವನು ವೀರ ಎನ್ನುವ ಅರಿವೂ ಇದೆ. ಅವನು ಇನ್ನೂ ಹೆಚ್ಚಿನ ಔನ್ನತ್ಯವನ್ನು ಗಳಿಸುತ್ತಿದ್ದನೋ ಏನೋ! ಆದರೆ ಆ ಅರ್ಜುನ ಕುರುಕ್ಷೇತ್ರ ಕದನದಲ್ಲಿ ನಿನ್ನ ತನುಜನನ್ನು ಕೊಂದುಹಾಕಿದ. ಹೀಗಿರುವಾಗ ನೀನು ಮಕ್ಕಳಿಲ್ಲದವಳು ಎಂದೇ ಕರೆಸಿಕೊಳ್ಳಬೇಕಾಗುತ್ತದೆ” ಎಂಬ ನುಡಿಸಿಡಿಲು ಸಿಡಿಯಿತು ಜ್ವಾಲೆಯೊಳಗಿಂದ.      ಒಣಗಿದ ಮರಕ್ಕೆ ಬಿದ್ದ ಕಿಚ್ಚು ಹಸಿಹಸಿಯಾದ ಗಿಡವನ್ನೂ ಸುಟ್ಟುಹಾಕುವಂತೆ, ಈಗಾಗಲೇ ನನ್ನ ಮೇಲಿನ ಮುನಿಸಿನಿಂದ ಉರಿಯುತ್ತಿದ್ದ ಜ್ವಾಲೆಯ ಅಂತರಂಗದ ಕಿಚ್ಚು ಗಂಗೆಯ ಮನವನ್ನೂ ಸುಟ್ಟಿತು. ಮಗ ಭೀಷ್ಮ ಅಳಿದನೆಂಬ ಸುದ್ದಿಯನ್ನು ತಾಳಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ. ಭೀಷ್ಮ ಮರಣಕ್ಕೆ ಕಾರಣನೆನಿಸಿದ ನನ್ನ ಮೇಲೆ ಕ್ರೋಧ ಉಕ್ಕಿಬಂತು. “ನನ್ನ ಮಗನನ್ನು ಯುದ್ಧದಲ್ಲಿ ಕೊಂದ ಆ ಅರ್ಜುನನ ತಲೆಯನ್ನು ಅವನ ಮಗನೇ ಇನ್ನು ಆರು ತಿಂಗಳುಗಳಲ್ಲಿ ಯುದ್ಧದಲ್ಲಿ ಕೊಚ್ಚಿ ಕೆಡಹಲಿ” ಎಂದು ಶಾಪ ಕೊಟ್ಟು, ಮತ್ತೆ ಮೊದಲಿನ ಸ್ಥಿತಿಯನ್ನು ಪಡೆದಳು.      ಜ್ವಾಲೆಯ ಕ್ರೋಧಜ್ವಾಲೆಯಿಂದಾಗಿ ನಾನು ಗಂಗೆಯ ಶಾಪಕ್ಕೆ ತುತ್ತಾದೆ. ಅಲ್ಲಿಗೇ ಜ್ವಾಲೆಯ ದ್ವೇಷವದು ತಣಿಯಲಿಲ್ಲ. ನನ್ನನ್ನು ಕೊಲ್ಲುವ ಹರಿತವಾದ ಬಾಣವಾಗುತ್ತೇನೆ ಎಂದು ಬಯಸಿದವಳು ಅಲ್ಲಿಯೇ ಗಂಗೆಯ ತೀರದಲ್ಲಿ ಅಗ್ನಿಪ್ರವೇಶ ಮಾಡಿದಳು. ಮಣಿಪುರದ ಅರಸನಾಗಿದ್ದ ಬಭ್ರುವಾಹನನ ಬತ್ತಳಿಕೆಯಲ್ಲಿನ ಹರಿತ ಬಾಣವಾದಳು.      ಗಂಗೆ ನನಗಿತ್ತ ಶಾಪವದು ಅಶ್ವಮೇಧ ಯಾಗದ ಪೂರ್ಣತೆಗೆ ಸಂಚಕಾರವನ್ನೊಡ್ಡುವ ಘನಶಾಪವಾಗಿತ್ತು. ಶಾಪ ನಿಜವಾಗುವ ಗಳಿಗೆಯನ್ನು ಅದೆಂತು ಮೀರುವೆನೋ! ನನಗೆ ತಿಳಿದಿರಲಿಲ್ಲ.                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ನಿಮ್ಮೊಂದಿಗೆ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ ಶಕ್ತಿಯ ಪ್ರತಿರೂಪ ಹೆಣ್ಣು ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ. ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. “*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನುಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು  ಸಾಧನೆ ಮಾಡುತ್ತಿದ್ದಾರೆ. ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ. ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ. ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ. *ಹೆಣ್ಣು ಸಂಸಾರದ ಕಣ್ಣು*  ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ . ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಉದಾಹರಣೆ:  ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು. ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.  ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು. 1975ರಲ್ಲಿ ಯುನೈಟೆಡ್  ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ  ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು. ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ Read Post »

ನಿಮ್ಮೊಂದಿಗೆ

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ”

ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಅರಿವಿನ ಅರಿವೆ ಕೊಳಕಾದೊಡೆ” ತಡವಾಗಿಯಾದರೂ ಬೆಳಕು ಹರಿದಿದೆ;ಎಚ್ಚರಗೊಳ್ಳದ ಮಬ್ಬು ಜನಗಳೇಎದ್ದೇಳಿ ಬೇಗ ಎದ್ದೇಳಿ… ಸೂರ್ಯನು ಬಂದು ಬೈದಾನುಚಂದ್ರನು ಕೆರಳಿ ಕೆಂಡವಾದಾನುಇಂದ್ರನು ಶಾಪ ಕೊಟ್ಟಾನು! ಅರಿವಿನ ಅರಿವೆ ಕೊಳಕಾಗಿಸ್ನಾನ ಮಾಡುವುದನ್ನು ಮರೆತರೆಬತ್ತಿ ಹೋದೀತು ಹೊಳೆಸಾಲು,ಒತ್ತುವರಿಯಾಗಿದೆ ಕೆರೆಯ ಬಯಲುಎದ್ದೇಳಿ ಬೇಗ ಎದ್ದೇಳಿ ಚರಂಡಿಯಲ್ಲಿ ಹುಟ್ಟಿ ಬೆಳೆದಸೊಳ್ಳೆಗಳಾಗದಿರಿಹಂದಿಗಳಂತೆ ಹೊರಳಾಡಿ ಗಬ್ಬು ನಾತ ಹೊಡೆಯದಿರಿ ಕಂಬಕ್ಕೆ ಕಟ್ಟಿದ ಹುಲ್ಲು ತಿನ್ನುತಮುಲಾಜಿಗೆ ಬಲಿಯಾಗುವಕುರಿಗಳಾಗದಿರಿಹೊಂಚು ಹಾಕಿ ಸಂಚು ಹೂಡುವನರಿ, ತೋಳಗಳಿಗೆ ಆಹಾರವಾಗದಿರಿ ಬೀಜ ಮೊಳಕೆಯೊಡೆದುಬೆಳೆಯುವುದು ನಿಲ್ಲಿಸಿಲ್ಲಅನಂತಾನಂತ ಅಂಬರದಲ್ಲಿಹಕ್ಕಿಗಳ ಹಾರಾಟಕ್ಕೆ ಅಡ್ಡಿಯಿಲ್ಲಗಾಳ ಹಾಕಿದರೂ, ಬಲೆ ಬೀಸಿದರೂಮೀನುಗಳು ಈಜುವುದನ್ನು ಬಿಟ್ಟಿಲ್ಲ ಪ್ರಕೃತಿ ಬೋಧಿಸುವ ಪಾಠ ಕಲಿತುಸಕಲ ಜೀವಾತ್ಮರಿಗೆ ಲೇಸನ್ನು ಬಯಸಿವಿಶ್ವಮಾನವ ಸಂದೇಶ ಸಾರುವಈಗಲಾದರೂ ಎದ್ದೇಳಿ ಬೇಗ ಎದ್ದೇಳಿಅರಿವಿನ ಅರಿವೆ ಕೊಳಕಾಗದಂತೆನೋಡಿಕೊಳ್ಳಿ….. ಮಹಾಂತೇಶ್.ಬಿ.ನಿಟ್ಟೂರು,       

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ” Read Post »

ಇತರೆ, ನಿಮ್ಮೊಂದಿಗೆ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ

ಸಂಶೋಧನಾ ಸಂಗಾತಿ ಡಾ.ಯಲ್ಲಮ್ಮ ಕೆ. ಡಾ. ಯಲ್ಲಮ್ಮ ಕೆ ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು: [ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ] ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ. *_ಹಿನ್ನಲೆ:_*ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ  ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ  ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು. *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ  ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.ವೈದಿಕ – ಜೈನ ಪ್ರತಿರೋಧ:ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ”

ಕಾವ್ಯಸಂಗಾತಿ ಡಾ ಡೋ ನಾ ವೆಂಕಟೇಶ “ಪ್ರೀತಿ-ಚಿಟ್ಟೆ” ಯಾರೂ ಪ್ರೀತಿಸಲಾಗದಷ್ಟುಪ್ರೀತಿಸಿದೆ ನಿನ್ನಪ್ರೀತಿ ಮೇಲ್ಪಂಕ್ತಿಯಾದೆ ಪ್ರೀತಿಗೆ ನೀಸವಿಗೂಡಾದೆಜೇನಾದೆ! ಗೆಳೆಯ ಗುಂಪುಗಳು ಮುತ್ತಿಡುವ ಮುನ್ನ ನಿನ್ನ  ಚಿನ್ನ ,ನೀ ರಾಣಿ ಜೇನಾದೆಪದ ತಲಗಳಿಂದಗುಯ್ ಗುಡುವ ಗಾನವಾದೆ ಹೃದಯಕ್ಕೆ ಹಾಡಾದೆಹಾರಾಡುವ ಹರಿಣಿಯಾದೆಬಣ್ಣದ ಪಾತರಗಿತ್ತಿಯೂ ನೀನಾದೆ ಕಡೆಗೆ. ಕಂಬಳಿ ಹುಳಗಳಿಂದ ಬಂದಿದ್ದ ಮರೆತೆನೀ ಹುಟ್ಟಿದ ಹಾದಿ ಮರೆತೆ ಮೆರೆದಾಡಿದೆ ಪ್ರೀತಿ ನೀಬಟರ್ ಫ್ಲೈ ಆದೆ ಮುಟ್ಟಿದವರಿಗೆಅಂಟಿಕೊಂಡೆ,ಶಾಖಕ್ಕೆ ಕರಗಿ ಹೋದೆ ನೀ!ಪ್ರೀತಿ ಹೀಗೆನೀ ಅಲ್ಪಾವಧಿಯ ಚಿಟ್ಟೆಯಾದೆಸ್ಪರ್ಶಿದರೆ ಬಣ್ಣದಿಂದ          ಧರಾಶಾಯಿಯಾದೆ ಪ್ರೀತಿನೀ ಹೀಗೂ ಹಾಗೂ  ಮರೆತೆಅಮರಳಾದೆ! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ” Read Post »

ನಿಮ್ಮೊಂದಿಗೆ

ಪರವಿನಬಾನು ಯಲಿಗಾರ ಅವರ ಕವಿತೆ”ಪ್ರೀತಿ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಪ್ರೀತಿ” ಪ್ರೀತಿ ಎಂದರೆ ಅಂಬರ ,ಅಲ್ಲಿ ಮೇಘದ ತಂಪು ಸಿಂಚನ ,ಜೊತೆಗೆ ಗುಡುಗು , ಕೋಲ್ಮಿಂಚಿನಅಬ್ಬರವು ಇದೆ….. ಪ್ರೀತಿ ಎಂದರೆ ಇಳೆ ,ಕರುಣೆಯ ಹಸಿರು ಇದೆ ,ಬದುಕು ಕಸಿಯುವ ಜ್ವಾಲೆಯಕಂಪನವೂ ಇದೆ….. ಪ್ರೀತಿ ಎಂದರೆ ಸಾಗರ ,ವಡಲಿನಲ್ಲಿ ಮುತ್ತು ಮಾಣಿಕ್ಯ ಇವೆ ,ರಕ್ಕಸ ರೂಪದ ಅಲೆಗಳಆರ್ಭಟದ ಸುನಾಮಿ ಇದೆ….. ಪ್ರೀತಿ ಎಂದರೆ  ಗಾಳಿ ,ಉಸಿರು ಕಟ್ಟುವ ಬಿರುಗಾಳಿ ಇದೆ,ಜೀವ ಕೊಡುವ ಪ್ರಾಣವಾಯುವು ಹೌದು  ….. ಪ್ರೀತಿ ಎಂದರೆ  ಬೆಂಕಿ ,ಬೆಳಗುವ ನಂದಾ ದೀಪವು ಆಗುವುದು,ಸರ್ವನಾಶಕ್ಕೆ ಚಾಚುವಕೆನ್ನಾಲಿಗೆಯೂ ಇದೆ …. ಪರವಿನಬಾನು ಯಲಿಗಾರ.

ಪರವಿನಬಾನು ಯಲಿಗಾರ ಅವರ ಕವಿತೆ”ಪ್ರೀತಿ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು.  “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.

Read Post »

ನಿಮ್ಮೊಂದಿಗೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಕನಸುಗಳಿರಬೇಕು” ಕನಸುಗಳಿರಬೇಕು ಸುತ್ತಲೂಕವಿದ ಕತ್ತಲು ಕಳೆವಬೆಳಗುವ ದೀಪದಂತೆ ಕನಸುಗಳಿರಬೇಕು ಕಣ್ಣಲ್ಲಿತುಂತುರು ಮಳೆ ಕಾಮನಬಿಲ್ಲಕಾತುರದಿಂದ ನೋಡುವಂತೆ ಕನಸುಗಳಿರಬೇಕು ಹೆಜ್ಜೆಜ್ಜೆಗೂಸಾಧನೆ ಗರಿಗೆದರಿ ಸುರಿಮಳೆಯಲ್ಲಿ ಸಂಭ್ರಮಿಸುವಂತೆ ಕನಸುಗಳಿರಬೇಕು ಮನದಲ್ಲಿಸೋಲಿನಲ್ಲೂ ಸ್ಥೈರ್ಯದಿಭರವಸೆ ಪುಟ್ಟಿದೇಳುವಂತೆ ಕನಸುಗಳಿರಬೇಕು ನೋಂದಾಗಸವಾಲುಗಳನ್ನು ಸ್ವೀಕರಿಸಿಬದುಕಿನ ದಿಕ್ಕು ಬದಲಿಸುವ ದಿಕ್ಸೂಚಿಯಂತೆ ಕನಸುಗಳಿರಬೇಕು ಬದುಕಿಗೆಸದಾ ಉತ್ಸಾಹದ ಬುಗ್ಗೆಯಾಗಿಎಂದಿಗೂ ಬತ್ತದ ವರತೆಯಂತೆ ಕನಸುಗಳಿರಬೇಕು ನನಸಾಗಿಸಲುಬರಡು ಭೂವಿಯಲ್ಲಿಹಸಿರು ಹರಡಿನೆಮ್ಮದಿ ನೀಡುವ ತಂಗಾಳಿಯಂತೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು” Read Post »

gaade
ನಿಮ್ಮೊಂದಿಗೆ

ಗಾದೆ ಸಂಗಾತಿ ಗಾದೆಗಳ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು? ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು? ಈ ಮಾತು ಅತ್ಯಂತ ಹರಿತವಾದ ಮತ್ತು ಅರ್ಥಗರ್ಭಿತವಾದ ಜಾನಪದ ಗಾದೆ ಮಾತು. ಮೇಲ್ನೋಟಕ್ಕೆ ಇದು ಸ್ವಲ್ಪ ಕಠಿಣವಾಗಿ ಕಂಡರೂ, ಇದು ಸಮಾಜದ ಒಂದು ಕಹಿ ಸತ್ಯವನ್ನು ಮತ್ತು “ಅನರ್ಹತೆ”ಯನ್ನು ಕುರಿತು ಮಾತನಾಡುತ್ತದೆ.​ಗಾದೆಗಳು ಅನುಭವದ ಹೂರಣಗಳು. ಖಂಡುಗ ಎನ್ನುವುದು ಹಳೆಯ ಕಾಲದ ಒಂದು ಅಳತೆಗೋಲು. (ಸುಮಾರು ೮೦ ಸೇರು ಅಥವಾ ಹೆಚ್ಚಿನ ಪ್ರಮಾಣ) ನಾಯಿಯ ಹಾಲಿನಲ್ಲಿ ಎಷ್ಟೇ ಪೌಷ್ಟಿಕಾಂಶವಿದ್ದರೂ ಅಥವಾ ಅದು ಎಷ್ಟೇ ಹೇರಳವಾಗಿದ್ದರೂ (ಖಂಡುಗದಷ್ಟು), ಅದನ್ನು ಮನುಷ್ಯರು ಬಳಸಲು ಸಾಧ್ಯವಿಲ್ಲ. ಈ ಲೋಕಾನುಭವದ ಹಿನ್ನೆಲೆಯಲ್ಲಿ ಹುಟ್ಟಿದ್ದೇ ಈ ಗಾದೆ.​ಯಾವುದೇ ಒಂದು ವಸ್ತು ಅಥವಾ ಸಂಪತ್ತು ಎಷ್ಟು ದೊಡ್ಡದಾಗಿದೆ ಎನ್ನುವುದಕ್ಕಿಂತ, ಅದು ಯಾರ ಕೈಯಲ್ಲಿದೆ ಮತ್ತು ಯಾರಿಗೆ ಉಪಯುಕ್ತವಾಗಿದೆ ಎನ್ನುವುದು ಮುಖ್ಯ.​ನಾಯಿಯ ಹಾಲು ಅದರ ಮರಿಗಳಿಗೆ ಮಾತ್ರ ಸೀಮಿತ. ಅದು ಮನುಷ್ಯನ ಬಳಕೆಗೆ ಬರುವುದಿಲ್ಲ.​ಹಾಗೆಯೇ, ಅಯೋಗ್ಯನ ಬಳಿ ಇರುವ ಅಗಾಧವಾದ ಸಂಪತ್ತು ಅಥವಾ ಜ್ಞಾನ ಸಮಾಜಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಅದು ಇದ್ದೂ ಇಲ್ಲದಂತೆ.​ಲೋಭಿ ಅಥವಾ ಅಯೋಗ್ಯನ ಬಳಿಯಿರುವ ಸಂಪತ್ತು​ಈ ಗಾದೆಯನ್ನು ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಬಳಸಲಾಗುತ್ತದೆ.​ಲೋಭಿಯ ಸಂಪತ್ತುಒಬ್ಬ ವ್ಯಕ್ತಿಯ ಬಳಿ ಕೋಟ್ಯಂತರ ರೂಪಾಯಿ ಹಣವಿರಬಹುದು. ಆದರೆ ಆತ ಅದನ್ನು ತಾನೂ ಅನುಭವಿಸದೆ, ಇತರರಿಗೂ ದಾನ ಮಾಡದೆ ಬಚ್ಚಿಟ್ಟರೆ, ಆ ಸಂಪತ್ತು “ನಾಯಿ ಮೊಲೆಯ ಹಾಲಿನಂತೆ”. ಅದು ಯಾರಿಗೂ ಹಸಿವು ನೀಗಿಸದು.​ಅವಿದ್ಯಾವಂತನ ಅಥವಾ ದುಷ್ಟನ ಕೈಯ ಅಧಿಕಾರಒಬ್ಬ ಕೆಟ್ಟ ವ್ಯಕ್ತಿಯ ಕೈಗೆ ದೊಡ್ಡ ಅಧಿಕಾರ ಸಿಕ್ಕಾಗ, ಆ ಅಧಿಕಾರದಿಂದ ಜನಸಾಮಾನ್ಯರಿಗೆ ಯಾವುದೇ ಒಳ್ಳೆಯದಾಗುವುದಿಲ್ಲ. ಆ ಅಧಿಕಾರ ಆತನ ಸ್ವಾರ್ಥಕ್ಕೆ ಬಳಕೆಯಾಗುತ್ತದೆಯೇ ಹೊರತು ಸಮಾಜದ ಹಿತಕ್ಕಲ್ಲ.​ದಾನವನ್ನು ನೀಡುವಾಗ “ಪಾತ್ರ ನೋಡಿ ದಾನ ಮಾಡು” ಎನ್ನುತ್ತಾರೆ. ಹಾಗೆಯೇ ಫಲವನ್ನು ನಿರೀಕ್ಷಿಸುವಾಗ ಅದು ಎಲ್ಲಿಂದ ಬರುತ್ತಿದೆ ಎಂದು ನೋಡಬೇಕು. ನಾಯಿಯ ಹಾಲಿನಿಂದ ಮೊಸರು, ಬೆಣ್ಣೆ ಅಥವಾ ತುಪ್ಪವನ್ನು ಮಾಡಲು ಸಾಧ್ಯವಿಲ್ಲ. ಅಂದರೆ, ಮೂಲವೇ ಅಶುದ್ಧ ಅಥವಾ ಅಯೋಗ್ಯವಾಗಿದ್ದಾಗ ಅದರಿಂದ ಬರುವ ಉಪಫಲಗಳು ಕೂಡ ನಿಷ್ಪ್ರಯೋಜಕವಾಗುತ್ತವೆ. ಒಬ್ಬ ವ್ಯಕ್ತಿ ತುಂಬಾ ಓದಿ ದೊಡ್ಡ ವಿದ್ವಾಂಸನಾಗಿರಬಹುದು. ಆದರೆ ಆತನಲ್ಲಿ ಸಂಸ್ಕಾರವಿಲ್ಲದಿದ್ದರೆ, ಆತ ತನ್ನ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಆ ವಿದ್ಯೆ ವ್ಯರ್ಥ. ಅದು “ನಾಯಿ ಮೊಲೆಯ ಖಂಡುಗ ಹಾಲಿನಂತೆ”. “ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು?” ಎಂಬ ಗಾದೆಯ ಆಳಕ್ಕೆ ಹೋದಂತೆ ನಮಗೆ ಇನ್ನೂ ಹತ್ತಾರು ಸಾಮಾಜಿಕ ಮತ್ತು ತಾತ್ವಿಕ ಸತ್ಯಗಳು ದರ್ಶನವಾಗುತ್ತವೆ.​ಒಂದು ವಸ್ತುವು ಅಮೂಲ್ಯವಾಗಿದ್ದರೂ ಅದು ಇರುವ ಸ್ಥಾನವು ಮೇಲ್ತರದಲ್ಲಿರುತ್ತದೆ. ಅಯೋಗ್ಯವಾಗಿದ್ದರೆ ಅದರ ಬೆಲೆ ಶೂನ್ಯವಾಗಿರುತ್ತದೆ.​ಹಸುವಿನ ಹಾಲು ಪಾತ್ರೆಯಲ್ಲಿ ಮೊಸರಾಗಿ, ಮಂಥನಗೊಂಡರೆ ಬೆಣ್ಣೆಯಾಗಿ, ಕಾಯಿಸಿದರೆ ತುಪ್ಪವಾಗಿ ದೇವರಿಗೆ ನೈವೇದ್ಯವಾಗುತ್ತದೆ.ಮತ್ತು ಉಣ್ಣಲು ಅಮೃತವಾಗಿರುತ್ತದೆ.​ಆದರೆ ನಾಯಿಯ ಹಾಲು ಎಷ್ಟೇ ಇದ್ದರೂ ಅದು ಸಂಸ್ಕರಣೆಗೆ ಒಳಗಾಗುವುದಿಲ್ಲ.ಸಮಾಜದಲ್ಲಿ ಕೆಟ್ಟ ಗುಣವುಳ್ಳ ವ್ಯಕ್ತಿ ಎಷ್ಟೇ ದೊಡ್ಡ ಪದವಿ ಅಥವಾ ಸಂಪತ್ತನ್ನು ಹೊಂದಿದ್ದರೂ, ಆತನಿಂದ ಸಾತ್ವಿಕ ಅಥವಾ ಮೌಲ್ಯಯುತವಾದ ಕೆಲಸಗಳು ಸಾಧ್ಯವಿಲ್ಲ. ಮೂಲದ ‘ಗುಣ’ವು ಫಲದ ‘ಉಪಯುಕ್ತತೆ’ಯನ್ನು ನಿರ್ಧರಿಸುತ್ತದೆ.​ಸಮಾಜಮುಖಿ​ಸಂಪತ್ತು ಮತ್ತು ಜ್ಞಾನ ಇರುವುದು ಹಂಚುವುದಕ್ಕಾಗಿ. ಹಂಚದ ಜ್ಞಾನ ಮತ್ತು ದಾನ ಮಾಡದ ಹಣ ಹೊರೆಯಷ್ಟೇ.​ನಾಯಿಯ ಹಾಲು ಒಂದು ಹಾಂಡೆದಷ್ಟು (ಅಪಾರ ಪ್ರಮಾಣ) ಇದ್ದರೂ ಅದರಿಂದ ಪಾಯಸ ಮಾಡಲು ಸಾಧ್ಯವಿಲ್ಲ, ಅತಿಥಿಗಳಿಗೆ ನೀಡಲು ಸಾಧ್ಯವಿಲ್ಲ.​ನಮ್ಮ ಸಮಾಜದಲ್ಲಿ ಕೆಲವರು ಅಪಾರ ಜ್ಞಾನದ ಭಂಡಾರವನ್ನು ಹೊಂದಿದ್ದರೂ ಅದನ್ನು ಇತರರಿಗೆ ಕಲಿಸುವುದಿಲ್ಲ ಅಥವಾ ಸಮಾಜದ ಹಿತಕ್ಕೆ ಬಳಸುವುದಿಲ್ಲ. ಅಂತಹ ‘ಸ್ವಾರ್ಥಿ ಜ್ಞಾನ’ವು ನಾಯಿ ಮೊಲೆಯ ಹಾಲಿನಷ್ಟೇ ನಿಷ್ಪ್ರಯೋಜಕ. ಶ್ರೇಷ್ಠತೆಯು ಇರುವುದು ‘ವ್ಯಾಪ್ತಿ’ಯಲ್ಲಲ್ಲ, ಅದರ ‘ಹಂಚಿಕೆ’ಯಲ್ಲಿ.​ಶ್ರೀಮಂತಿಕೆ ಎಂಬುದು ಕೇವಲ ಹಣವಲ್ಲ, ಅದು ಮನಸ್ಸಿನ ಗುಣ.​ಒಬ್ಬ ದುಷ್ಟ ವ್ಯಕ್ತಿ ಅನ್ಯಾಯ ಮಾರ್ಗ ಹಿಡಿದು ಅಥವಾ ಅಡ್ಡದಾರಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಬಹುದು. ಆದರೆ ಆತನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಹಣ ವ್ಯಭಿಚಾರಕ್ಕೋ, ಮೋಜು-ಮಸ್ತಿಗೋ ವ್ಯಯವಾಗುತ್ತದೆಯೇ ಹೊರತು ಧರ್ಮಕಾರ್ಯಕ್ಕಲ್ಲ.​ಇದನ್ನು ನಮ್ಮ ಜನಪದರು “ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ” ಎನ್ನುವ ಅರ್ಥದಲ್ಲೂ ನೋಡುತ್ತಾರೆ.ಅಯೋಗ್ಯನ ಕೈಲಿರುವ ಅಮೂಲ್ಯ ವಸ್ತು ಆ ವಸ್ತುವಿನ ಗೌರವವನ್ನೇ ಕುಂದಿಸುತ್ತದೆ. ​ಕೆಲವರಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ (ಉದಾಹರಣೆಗೆ: ಉತ್ತಮ ಕಂಠಸಿರಿ ಅಥವಾ ಕಲಾ ಕೌಶಲ), ಆದರೆ ಅವರು ಅದನ್ನು ಲೋಕಕ್ಕೆ ತೋರಿಸದೆ ಅಥವಾ ಸದುಪಯೋಗ ಪಡಿಸಿಕೊಳ್ಳದೆ ಸೋಮಾರಿತನದಿಂದ ಮನೆಯಲ್ಲೇ ಕುಳಿತಿದ್ದರೆ, ಆ ಪ್ರತಿಭೆಯು ಖಂಡುಗ ಹಾಲಿದ್ದರೂ ಬಳಕೆಯಾಗದ ಸ್ಥಿತಿಯನ್ನೇ ಸೂಚಿಸುತ್ತದೆ.​ಅಂತರಂಗ ಶುದ್ಧವಿಲ್ಲದವನು ಮಾಡುವ ಜಪ-ತಪಗಳು ಕೂಡ ಇದೇ ಸಾಲಿಗೆ ಸೇರುತ್ತವೆ.​ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು, ಹೊರಗೆ ಸಾವಿರ ಬಾರಿ ದೇವರ ನಾಮ ಸ್ಮರಿಸಿದರೂ ಅದು ಭಕ್ತಿಯಾಗದು.​ಭಕ್ತಿಯು ‘ಹಸುವಿನ ಹಾಲಿನಂತೆ’ ನಿರ್ಮಲವಾಗಿರಬೇಕು. ಕಪಟ ಭಕ್ತಿಯು ,ನಾಯಿ ಮೊಲೆಯ ಹಾಲಿನಂತೆ ಅಶುದ್ಧ ಎಂಬುದು ಶರಣರ ನಿಲುವೂ ಹೌದು.​ಅಯೋಗ್ಯನಿಗೆ ನೀಡಿದ ಅಧಿಕಾರವು ದೇಶದ ಪಾಲಿಗೆ ಶಾಪ. ​ಸಂಪತ್ತು ಮನುಷ್ಯನ ಅಹಂಕಾರವನ್ನು ಬೆಳೆಸಬಾರದು ಸಮಾಜದ ಹಸಿವನ್ನು ನೀಗಿಸಬೇಕು ಗುಣವಿಲ್ಲದವನ ಜ್ಞಾನವು ಕತ್ತಲೆಯಲ್ಲಿ ಹಿಡಿದ ದೀವಟಿಗೆಯಂತೆ ತನಗೂ ಬೆಳಕಿಲ್ಲ ಇತರರಿಗೂ ದಾರಿಯಿಲ್ಲ ​ಒಟ್ಟಾರೆಯಾಗಿ ಹೇಳುವುದಾದರೆ, ಒಂದು ವಸ್ತುವಿನ ಬೆಲೆ ಅದರ ಪ್ರಮಾಣದಲ್ಲಿಲ್ಲ, ಅದರ “ಬಳಕೆ” ಮತ್ತು “ಯೋಗ್ಯತೆ”ಯಲ್ಲಿದೆ. ಸಮಾಜಕ್ಕೆ ಉಪಕಾರವಾಗದ ಸಂಪತ್ತು, ಜನರಿಗೆ ಸ್ಪಂದಿಸದ ಅಧಿಕಾರ ಮತ್ತು ಹಂಚದ ಜ್ಞಾನ ಎಲ್ಲವೂ ವ್ಯರ್ಥ ಎಂದು ಈ ಗಾದೆ ನಮಗೆ ಎಚ್ಚರಿಸುತ್ತದೆ. ನಾವು ಗಳಿಸುವ ಸಂಪತ್ತು ಅಥವಾ ಜ್ಞಾನವು ಹಸುವಿನ ಹಾಲಿನಂತೆ ಎಲ್ಲರಿಗೂ ಲಭ್ಯವಾಗಿ, ಎಲ್ಲರಿಗೂ ಶಕ್ತಿಯನ್ನು ನೀಡುವಂತಿರಬೇಕು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

You cannot copy content of this page

Scroll to Top