ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ರೊಟ್ಟಿ ತೊಳೆದ ನೀರು

ಕಥೆ ರೊಟ್ಟಿ ತೊಳೆದ ನೀರು ಶಾಂತಿವಾಸು ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು ಖಾತ್ರಿ ಮಾಡಿಕೊಂಡು ಬಾಗಿಲೆಳೆದುಕೊಂಡು ಹೊರಗೆ ನಡೆದರು. ರಸ್ತೆಯ ತಿರುವಿಗೆ ಬರುತ್ತಿದ್ದಂತೆ ಪ್ರತಿದಿನ ಅಡ್ಡ ಸಿಗುತ್ತಿದ್ದ ಚಂದ್ರಪ್ಪ ಕೂಡ ಇಂದು ಕಾಣಿಸಲಿಲ್ಲ.      ನಿಂತಲ್ಲಿಯೇ ನಿಂತು ಚಂದ್ರಪ್ಪನ ಮೊಬೈಲಿಗೆ ಫೋನ್ ಮಾಡಿದರು. ಚಂದ್ರಪ್ಪ ಫೋನ್ ತೆಗೆದದ್ದೇ ತಡ “ಎಲ್ಲಪ್ಪ? ಇವತ್ತು ಇನ್ನೂ ಬಂದೇ ಇಲ್ವಾ? ಬರ್ತಿಯೋ ಇಲ್ವೊ”? ಕೇಳಿದರು. ಆ ಕಡೆಯಿಂದ ಚಂದ್ರಪ್ಪ ಛೇಡಿಸುವ ದನಿಯಲ್ಲಿ “ಅಲ್ಲ ಶೆಟ್ರೇ, ಲೇಟಾಗಿ ಬಂದವರು ನೀವು. ನನ್ನನ್ನೇ ಬಂದಿಲ್ವಾ ಅಂತ ಕೇಳ್ತೀರಾ? ನಾನು ಆಗಲೇ ವಾಕಿಂಗ್ ಮುಗಿಸಿ, ಕಾಫಿ ಕುಡೀತಿದ್ದೀನಿ. ಬಿಸಿ ಬಿಸಿ ಇಡ್ಲಿ ಇಳಿಸ್ತಿದ್ದಾರೆ ಬನ್ನಿ. ತಿಂದು ಮನೆಗೆ ಹೋಗೋಣ” ಎನ್ನಲು, ಶೆಟ್ಟರು “ಇಲ್ಲ ನಾನು ಮನೆಗೆ ಹೋಗ್ತೀನಿ ಚಂದ್ರಪ್ಪ” ಎಂದು ಹೇಳಿ ಫೋನಿಟ್ಟ ಶೆಟ್ಟರಿಗೆ ವಾಕಿಂಗ್ ಹೋಗುವ ಮನಸ್ಸಿರಲಿಲ್ಲ. ಹೆಂಡತಿಯ ಕುರಿತು ಭಯವಾಗತೊಡಗಿತು. ಮೊಬೈಲಿನಲ್ಲಿ ಸಮಯ ಏಳೂವರೆ ತೋರಿಸುತ್ತಿತ್ತು. ವಾಪಸ್ ಮನೆಗೆ ಬಂದವರು ನೇರವಾಗಿ ರೂಮಿಗೆ ಹೋದರು.     ಅಪರೂಪಕ್ಕೆ ಇನ್ನೂ ಮಲಗಿದ್ದ ಲಲಿತಮ್ಮನನ್ನು ಎಬ್ಬಿಸಲು ಮನಸ್ಸು ಬರಲಿಲ್ಲ. ಆದರೆ ಏಕೆ ಎದ್ದಿಲ್ಲವೆಂದು ತಿಳಿಯುವ ತನಕ ನೆಮ್ಮದಿಯೂ ಇಲ್ಲ ಅವರಿಗೆ. ಮೆಲುವಾಗಿ “ಲಲಿತ ನಿದ್ದೆ ಮಾಡ್ತಿದ್ದೀಯಾ ಇನ್ನೂ”? ಎಂದರು. ಕಣ್ಣುಬಿಟ್ಟ ಲಲಿತಮ್ಮ “ಟೈಮೆಷ್ಟು? ಆಗ್ಲೇ ವಾಕಿಂಗ್ ಹೋಗಿ ಬಂದು ಬಿಟ್ರಾ”? ಕೇಳಿದರು. “ನಾನು ಎದ್ದಾಗ್ಲೇ ಏಳಾಗಿತ್ತು ಅನ್ನಿಸುತ್ತೆ. ಚಳಿ ನೋಡು. ಮಲಗಿಬಿಟ್ಟಿದ್ದೀನಿ. ನಾನು ವಾಕಿಂಗ್ ಹೋಗ್ಲೇ ಇಲ್ಲ. ಅಷ್ಟು ದೂರ ಹೋಗಿದ್ದವನು, ನೀನ್ಯಾಕೋ ಎದ್ದಿಲ್ವಲ್ಲ ಅಂತ ವಾಪಸ್ ಬಂದೆ. ಕಾಫಿ ಕೊಡು” ಎಂದರು. “ಕೊಡ್ತೀನಿ ಇರಿ” ಎನ್ನುತ್ತಾ ಎದ್ದು ಹೋದ ಲಲಿತಮ್ಮನ ಕುಗ್ಗಿದ ಬೆನ್ನನ್ನೇ ನೋಡುತ್ತಾ ಕುಳಿತ ಪಾಂಡುರಂಗಯ್ಯ ಶೆಟ್ಟರು, ‘ಇವಳಿಗೇನಾದರೂ ಆದರೆ, ನನ್ನ ಗತಿ ಏನಪ್ಪಾ ದೇವರೇ’? ಎಂದು ಎದೆಯ ಮೇಲೆ ಕೈ ಇಟ್ಟುಕೊಂಡರು. ಒಂದು ತಿಂಗಳಿನಿಂದಲೂ ಲಲಿತಮ್ಮನಲ್ಲಿ ಈ ತರಹದ ಒಂದೊಂದೇ ಬದಲಾವಣೆಯನ್ನು ಗಮನಿಸುತ್ತ ಬಂದಿದ್ದ ಶೆಟ್ಟರು ‘ಆದಷ್ಟು ಬೇಗ ಮನೆಯ ವಿಷಯ ಇತ್ಯರ್ಥ ಮಾಡಿಬಿಡಬೇಕು. ಎಲ್ಲವೂ ಹೋದರೂ ಪರವಾಗಿಲ್ಲ. ಕೊನೆಗೆ ಇವಳೊಬ್ಬಳನ್ನು ಮಾತ್ರ ಉಳಿಸಿಕೊಳ್ಳಬೇಕು’ ಎಂದು ತೀರ್ಮಾನಿಸಿದರು.      ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆರು ಹಾಗೂ ಮೂರುವರೆ ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ, ಹೊಳೆನರಸೀಪುರದಲ್ಲಿದ್ದ ಜಮೀನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ಕೈಲಿ ಹಿಡಿದು ಬೆಂಗಳೂರಿಗೆ ಬಂದು ಸಂಸಾರ ಹೂಡಿದ್ದ ಪಾಂಡುರಂಗಯ್ಯ ಶೆಟ್ಟರು ಹಾಗೂ ಲಲಿತಮ್ಮ ಬಹಳ ಕಷ್ಟ ಜೀವಿಗಳು. ಎರಡು ಬಾಗಿಲುಗಳ ದಿನಸಿ ಅಂಗಡಿ ತೆರೆದು ಅದಕ್ಕಂಟಿದಂತಿದ್ದ ಮನೆಯನ್ನು ಬಾಡಿಗೆಗೆ ಪಡೆದು, ಗಂಡ ಹೆಂಡತಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರು. ಅಪರಿಚಿತ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಸಂಸಾರವು ನೆಲೆ ಕಂಡುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಒಂದೊಂದು ಪೈಸೆಗೂ ಲೆಕ್ಕ ಹಾಕಿ ಖರ್ಚು ಮಾಡುತ್ತಾ ಬೆಂಗಳೂರಿಗೆ ಬಂದು ಹದಿನೈದು ವರ್ಷಗಳ ನಂತರ ಬಾಡಿಗೆಗೆ ಪಡೆದಿದ್ದ ಕಟ್ಟಡವನ್ನೇ ಸ್ವಂತಕ್ಕೆ ಕೊಂಡುಕೊಂಡರು.     ನಂತರ ಹಳೆಯ ಕಟ್ಟಡವನ್ನು ಕೆಡವಿ ಕೆಳಗೆ ಬಾಡಿಗೆಗೆ ಒಂದು ಮನೆ, ತಮಗೆ ಎರಡು ಬಾಗಿಲಿನ ಅಂಗಡಿ, ಅದರ ಮೇಲೆ ತಮ್ಮ ವಾಸಕ್ಕೆ ಅನುಕೂಲವಾದ ಮೂರು ಬೆಡ್ ರೂಮಿನ ಮನೆ, ಮತ್ತೂ ಮೇಲೆ ಬಾಡಿಗೆಗೆ ಎರಡು ಮನೆ ಕಟ್ಟಿಕೊಂಡರು. ಜೀವನ ಮೊದಲಿನಷ್ಟು ತ್ರಾಸ ಇಲ್ಲದಿದ್ದರೂ ಸುಮ್ಮನಿದ್ದು ಅಭ್ಯಾಸವಿರದ ದಂಪತಿಗಳು, ಮಕ್ಕಳು ಮೊಮ್ಮಕ್ಕಳಿಗೆಂದು ದುಡಿಯುತ್ತಾ ಅಂಗಡಿಯ ವ್ಯಾಪಾರವನ್ನು ಮಾತ್ರ ನಿಲ್ಲಿಸಲಿಲ್ಲ.       ಹೆಚ್ಚು ಓದದೆ ತಂದೆಯೊಂದಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ದೊಡ್ಡಮಗ ಕೇಶವನಿಗೆ ಆರು ವರ್ಷದ ಕೆಳಗೆ ತಮ್ಮದೇ ಊರು ಹೊಳೆನರಸೀಪುರದ ರಥಬೀದಿಯ ರಾಮಪ್ಪ ಶೆಟ್ಟಿಯ ಮಗಳು ಕವಿತಾಳೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಅವರಿಗೆ ಒಬ್ಬ ಮಗ ವಿಶ್ವಾಸ್ ಐದು ವರ್ಷದವನು. ಎರಡನೆಯ ಮಗ ಕೃಷ್ಣ (ಕಿಟ್ಟಿ) ಬಿ.ಕಾಂ ಓದಿ ಲೆಕ್ಕಪರಿಶೋಧಕರ ಬಳಿ ಕೆಲಸಕ್ಕೆ ಸೇರಿದವನು ಕೊನೆಗೆ ಅದೇ ಕಂಪನಿಯಲ್ಲಿ ಮ್ಯಾನೇಜರಾಗಿ ಬಡ್ತಿ ಪಡೆದು ಮುಂಬೈ ಸೇರಿದ್ದ. ಈಗ ಎರಡು ವರ್ಷಗಳ ಹಿಂದೆ ಅವನಿಗೂ ಮೈಸೂರಿನ ಕೃಷ್ಣಯ್ಯ ಶೆಟ್ಟಿಯವರ ಮಗಳು ಪಂಕಜಳಿಗೂ ಮದುವೆ ಮಾಡಿಸಿ ನೆಮ್ಮದಿಯ ನಿಟ್ಟುಸಿರೆಳೆದಿದ್ದರು ಪಾಂಡುರಂಗಯ್ಯ ಹಾಗೂ ಲಲಿತಮ್ಮ ದಂಪತಿಗಳು.      ಇಷ್ಟೇ ಆಗಿದ್ದರೆ ಇವರ ಸಂಸಾರದ ಹಣೆಬರಹವನ್ನು ಮತ್ತೆ ಆಸಕ್ತಿವಹಿಸಿ ಓದಲಾಗುವುದಿಲ್ಲವೆಂದೇ ದೇವರು ಶೆಟ್ಟರಿಗೆ ಒಂದೊಂದೇ ಕಾಯಿಲೆಯನ್ನು ಸೇರಿಸುತ್ತಾ ಸಾಗಿದ್ದ. ಸಕ್ಕರೆ ಕಾಯಿಲೆಯೊಂದಿಗೆ ರಕ್ತದೊತ್ತಡ ಬೇರೆ ಸೇರಿಕೊಂಡು ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ತಿನ್ನಬಹುದು ಎಂದು ಏನನ್ನೂ ತಿನ್ನದೆ ಬರೀ ನೋಡಿ ನೋಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಶೆಟ್ಟರ ನಾಲಿಗೆ ಚಪಲಕ್ಕೆ ಶಾಶ್ವತವಾಗಿ ಬೀಗ ಹಾಕಿತ್ತು. ಮದುವೆಗೆ ಮೊದಲು ರಜೆ ಸಿಕ್ಕಾಗೆಲ್ಲಾ ಮುಂಬೈನಿಂದ ಬರುತ್ತಿದ್ದ ಕಿಟ್ಟಿ ಮದುವೆಯಾದ ಮೊದಲ ವರ್ಷ ಒಂದೆರಡು ಸಲ ಬಂದಿದ್ದನಷ್ಟೇ, ನಂತರ ಬರುವುದು ಬೇಡ, ಕೊನೇ ಪಕ್ಷ ಫೋನ್ ಮಾಡುವುದನ್ನೂ ಬಿಟ್ಟುಬಿಟ್ಟಿದ್ದ. ಇವರಾಗೇ ಫೋನ್ ಮಾಡಿದರೂ ಒಂದೆರಡೇ ಮಾತಿನಲ್ಲಿ ಎಲ್ಲವನ್ನೂ ಕೇಳಿ ಮುಗಿಸುತ್ತಿದ್ದನಷ್ಟೇ ಹೊರತೂ ತಾನಾಗಿ ಏನನ್ನೂ ಹೇಳುತ್ತಿರಲಿಲ್ಲ.      ಬರಲಾರೆನೆಂದು ನೇರವಾಗಿ ಹೇಳದೆ, ಬಿಡುವಿಲ್ಲವೆಂದು ಮೊದಲೇ ಹೇಳಿಬಿಡುತ್ತಿದ್ದವನನ್ನು ಇವರುಗಳು ಕೂಡ “ಬಾ” ಎಂದು ಕರೆಯುವುದನ್ನು ಬಿಟ್ಟುಬಿಟ್ಟರು. ತಾವೇ ಹೋಗಿ ಮಗನ ಮನೆಯಲ್ಲಿದ್ದು ಬರಬಹುದೆಂಬ ಹೆಂಡತಿಯ ಸಲಹೆ ಶೆಟ್ಟರಿಗೆ ರುಚಿಸಲಿಲ್ಲ. “ಮನೆಬಿಟ್ಟು ನಾನೆಲ್ಲೂ ಬರುವುದಿಲ್ಲ. ಕೇಶವ ಒಬ್ಬ ಅಂಗಡೀನ ಹೇಗೆ ನೋಡಿಕೊಳ್ಳುತ್ತಾನೆ? ಅವನಿಗೆ ಕಷ್ಟವಾಗುತ್ತೆ. ನಾವು ರೈಲ್ವೇ ಸ್ಟೇಷನ್ನಿನಲ್ಲಿರೋ ವೈಟಿಂಗ್ ರೂಮ್ ತರ. ಈ ಜಾಗ ಬಿಟ್ಟು ಕದಲಲ್ಲ. ಇರೋ ಕಡೆನೇ ಪರ್ಮನೆಂಟು. ಅವರೆಲ್ಲ ರೈಲಿನ ಹಾಗೆ ಬರೋರು ಬರಲಿ ಹೋಗೋರು ಹೋಗಲಿ ನಾನು ಮಾತ್ರ ಎಲ್ಲೂ ಕದಲಲ್ಲ” ಎಂದು ನಗೆಚಟಾಕಿ ಜೊತೆಗೆ ಲಲಿತಮ್ಮನ ಬೇಡಿಕೆಯನ್ನು ಅಲ್ಲಿಯೇ ತುಂಡರಿಸುತ್ತಿದ್ದರು. ‘ಬೇಕಿದ್ದರೆ ನೀನು ಹೋಗಿ ಬಾ’ ಎಂದು ಬಾಯಿ ಮಾತಿಗೂ ಹೇಳುತ್ತಿರಲಿಲ್ಲ ಪುಣ್ಯಾತ್ಮ. ಖರ್ಚು ಎಂಬ ನೆಪ ಒಂದು ಕಡೆಯಾದರೆ, ಮನೆಯನ್ನು ಸೊಸೆಯ ಮೇಲೆ ಬಿಟ್ಟು ಹೋಗುವಷ್ಟು ನಂಬಿಕೆ  ಶೆಟ್ಟರಿಗೆ ಇರಲಿಲ್ಲ. ಇಷ್ಟಕ್ಕೂ ಇವರು ಯಾರನ್ನೂ ಮುಂಬೈಗೆ ಬಂದು ಒಂದೆರಡು ದಿನವಾದರೂ ಇರಿ ಎಂದು ಕಿಟ್ಟಿಯೋ ಅಥವಾ ಪಂಕಜಳೋ ಕರೆದೂ ಕೂಡ ಇರಲಿಲ್ಲ. ಅದನ್ನು ಗಮನಿಸುತ್ತಿದ್ದ ಹಿರಿಸೊಸೆ ಕವಿತಾ, ಇನ್ನು ಈ ವಯಸ್ಸಾದ ಎರಡೂ ಬಳ್ಳಿಗಳು ನಮ್ಮ ಕಾಲಿಗೆ ಸುತ್ತಿಕೊಂಡಿವೆ ಎನ್ನುವಂತೆ “ಇವರಿಬ್ಬರಿಂದ ನನಗೆ ಯಾವಾಗ ಮುಕ್ತಿಯೋ” ಎನ್ನುತ್ತಾ ಮೊದಲು ಗೊಣಗಲು ಆರಂಭಿಸಿ ನಂತರದ ದಿನಗಳಲ್ಲಿ ಅವರಿವರಿಗೆ ಫೋನಿನಲ್ಲೂ, ಮನೆಗೆ ಬಂದವರೊಡನೆಯೂ ಹೇಳಿಕೊಂಡು ಗೋಣಗುತ್ತಾ ಓಡಾಡುತ್ತಿದ್ದುದು ಆಗಾಗ ಕಿವಿಯ ಮೇಲೆ ಬೀಳುತ್ತಲೇ ಇತ್ತು. ಇವರಿಬ್ಬರೂ ಆಡುವ ಮಾತುಮಾತಿಗೂ ಕಿರಿಕಿರಿಯಾಗುತ್ತಿದ್ದವಳು, ಹಲವಕ್ಕೆ ಕಿವುಡಾಗಿದ್ದಳು. ಈ ನಡುವೆ ಆಗಾಗ ತಲೆತಿರುಗಿ ಬಿದ್ದು, ಸುಮ್ಮನೆ ಮಲಗಿ ಮೆಲ್ಲಮೆಲ್ಲನೆ ಹಾಸಿಗೆ ಹಿಡಿಯುವ ಹಂತದಲ್ಲಿದ್ದ ಲಲಿತಮ್ಮನ ಆರೋಗ್ಯದ ಏರುಪೇರಿನ ವಿಷಯದಲ್ಲಿ ಕುರುಡಿಯೂ ಸಹಾ ಆಗಿದ್ದಳು.  ಈ ಮಧ್ಯೆ ಕವಿತಾ ಮತ್ತೊಂದು ಮಗುವಿಗೆ ಬಸುರಾಗಿ ಮೂರು ತಿಂಗಳಿಗೆ ಗರ್ಭಪಾತವಾಗಿತ್ತು. ಅವಳು ತಾಯಿಗೆ ಫೋನಿನಲ್ಲಿ “ಇರೋ ಒಂದು ಮಗೂಗೇ ಸೆಕ್ಯೂರಿಟಿ ಇಲ್ಲ. ಈ ಅವತಾರದಲ್ಲಿ ಇನ್ನೂ ಒಂದು ಮಗು ಬೇರೆ ಯಾಕೆ ಬೇಕಿತ್ತು? ಅದು ಹೋಗಿದ್ದೇ ಒಳ್ಳೆದಾಯ್ತು. ಬಿಡಮ್ಮ” ಎನ್ನುವುದನ್ನು ಕೇಳಿಸಿಕೊಂಡ ಲಲಿತಮ್ಮನಿಗೆ ಮಗುವನ್ನು ತಾನೇ ತೆಗೆಸಿದ್ದಾಳೆ ಎಂಬ ಅನುಮಾನ ಬಲವಾಗತೊಡಗಿತು. ಗಂಡನಿಗೆ ಹೇಳಿದರೆ “ಮಗು ಹೊರೋದು, ಹೆರೋದು, ಸಾಕೋದು ಎಲ್ಲಾ ಅವಳೇ ಅಲ್ವಾ? ಇನ್ನೊಂದು ಮಗು ಬೇಕೋ ಬೇಡವೋ ಎಲ್ಲ ಅವಳೇ ತೀರ್ಮಾನ ಮಾಡಿರ್ತಾಳೆ ಬಿಡು” ಎಂದು ಉದಾಸೀನವಾಗಿ ಹೇಳಿಬಿಟ್ಟರು ಶೆಟ್ಟರು. ಆದರೆ ಲಲಿತಮ್ಮನಿಗೆ ಸಂಕಟವಾಗಿ “ಸೆಕ್ಯೂರಿಟಿ ಇಲ್ಲ ಅಂದ್ರೆ ಏನರ್ಥ”? ಎಂದು ಮತ್ತೆ ಗಂಡನನ್ನು ಕೇಳಿದಳು. “ಆ ಮಗು ಹುಟ್ಟಿ, ಬೆಳೆದು, ಓದಿ ಕೊನೆಗೆ ಫಾರಿನ್ನಿಗೆ ಹೋಗೋವರೆಗೂ ನಾವು ಸಂಪಾದಿಸಿದ ಹಣ ಅವಳಿಗೆ ಅವಳ ಮಕ್ಕಳಿಗೆ ಸೆಕ್ಯೂರಿಟಿಯಾಗಿ ಬೇಕು ಅಂತ ಅರ್ಥ” ಎಂದು ಆ ಮಾತಿಗೆ ಅಲ್ಲಿಯೇ ಪೂರ್ಣ ವಿರಾಮವನ್ನಿಟ್ಟಿದ್ದರು. ಆದರೆ ನಂತರದ ಸಮಸ್ಯೆಗಳು ಹಲವಾರು ಅಲ್ಪವಿರಾಮಗಳನ್ನು ದಾಟುತ್ತಿದ್ದವಾಗಲಿ, ತಾನು ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಹಿರಿಯರು ಪೂರ್ಣವಿರಾಮ ಹಾಕಲಿ ಎಂದು ಸೊಸೆ, ಶುರುಮಾಡಿದ ಸೊಸೆಯೇ ನಿಲ್ಲಿಸಲಿ ಎಂದು ಶೆಟ್ಟರು ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು. ಇವರಿಬ್ಬರು ಸೃಷ್ಟಿಸಿದ ಹಬೆಗೆ ಲಲಿತಮ್ಮನಿಗೆ ಪ್ರಾಣಸಂಕಟವಾಗುತ್ತಿತ್ತು. ಗಂಡಸರಿಲ್ಲದ ಸಮಯದಲ್ಲಿ ಸೊಸೆಯ ವರಸೆ ಬೇರೆಯೇ ಆಗಿರುತ್ತಿತ್ತು. ಸುಮ್ಮನೆ ಗಂಟೆಗಟ್ಟಲೆ ಟಿವಿ ನೋಡುತ್ತಾ ಕುಳಿತಿದ್ದು, ಇನ್ನೇನು ಊಟದ ಹೊತ್ತಾಯಿತು ಎನ್ನುವಾಗ ಎದ್ದು ಅವಸರದಲ್ಲಿ ಅಡುಗೆ ಮಾಡಲು ತೊಡಗಿ ಪಾತ್ರೆಗಳು ಉರುಳುರುಳಿ ಬಿದ್ದು, ಬೆಚ್ಚಿ ಬೀಳುವಂತಾಗುತ್ತಿತ್ತು. ಪಾತ್ರೆಗಳನ್ನು ಆಗಿಂದಾಗ್ಗೆ ತೊಳೆಯದೆ, ರಾಶಿ ಹಾಕಿ ಅದರತ್ತ ಗಮನಿಸದೆ ಓಡಾಡುತ್ತಾ ರಾತ್ರಿ ಮಲಗುವ ಸಮಯಕ್ಕೆ ತೊಳೆಯುವ ಅವಳ ಕ್ರಮ ಎಲ್ಲರ ಹುಬ್ಬನ್ನೂ ಗಂಟಾಗಿಸುತ್ತಿತ್ತು. ಜೊತೆಗೆ ತಾನು ಮಾಡುತ್ತಿದ್ದ ಕುಚೇಷ್ಟೆಗಳಿಗೆ ತಾನೇ ಸಿಡಿಮಿಡಿಯಾಗುತ್ತಿದ್ದಳು. ಮೊದಲೆಲ್ಲಾ ಹೀಗಿರದೆ, ಇತ್ತೀಚೆಗೆ ಬದಲಾದ ಅವಳ ನಡವಳಿಕೆಗೆ ಎಲ್ಲರೂ ಅವರವರಿಗೆ ತೋಚಿದ ಕಾರಣಗಳನ್ನು ಕಂಡುಕೊಳ್ಳುವಂತೆ ಮಾಡಿತ್ತಾಗಲೀ ಪರಿಹಾರ ಶೂನ್ಯವಾಗಿತ್ತು.      ಒಮ್ಮೆ ವಾಕಿಂಗ್ ಮುಗಿಸಿ ಬಂದು ಲಲಿತಮ್ಮ ನೀಡಿದ ಕಾಫಿ ಕುಡಿದು ಸ್ನಾನಕ್ಕೆ ಹೊರಡಲು ನಿಂತ ಶೆಟ್ಟರನ್ನು ಕವಿತಾ “ಮಾವ ಜಮೀನು ಮಾರಿ, ಹತ್ತು ಸಾವಿರ ಕೈಯಲ್ಲಿ ಹಿಡಿದು ಬಂದು ಬೆಂಗಳೂರಲ್ಲಿ ಬದುಕು ಶುರು ಮಾಡಿದೆವು ಅಂತ ಯಾವಾಗಲೂ ಹೇಳ್ತೀರಲ್ಲ? ನಿಮ್ಮ ತಂದೆ ಇದ್ದಾಗಲೇ ತಾನೇ ಜಮೀನು ಮಾರಿ ನೀವೆಲ್ಲಾ ಹಂಚಿಕೊಂಡಿದ್ದು” ಎಂದು ರಾಗವಾಗಿ ಕೇಳಲು, ಶೆಟ್ಟರು ಸಿಟ್ಟಿನಿಂದ “ನಾನು ಸ್ಕೂಲಿಗೆ ಹೋಗದೆ ಆರು ವರ್ಷದ ಮಗುವಾಗಿದ್ದಾಗಿಂದ ನಮ್ಮಪ್ಪ ಶುರುಮಾಡಿದ ಹೋಟೆಲಿನಲ್ಲಿ ಲೋಟ ತೊಳೆದಿದ್ದೀನಿ ಅದನ್ನು ನಿನಗೆ ಯಾರೂ ಹೇಳಲಿಲ್ಲವೇ?” ಎಂದು ಕೇಳುತ್ತಲೇ ಅಲ್ಲಿ ನಿಲ್ಲದೆ ಸ್ನಾನಕ್ಕೆ ಹೊರಟುಬಿಟ್ಟರು. ‘ಗಂಡ ಕೇಶವನ ತಲೆ ತಿಂದು ಏನೂ ಉಪಯೋಗವಾಗದೇ, ಕೊನೆಗೆ ನೇರವಾಗಿ ನನ್ನ ಬಳಿ ಆಸ್ತಿಯ ಬಗ್ಗೆ ಮಾತನಾಡುವ ಹಂತಕ್ಕೆ ಬಂದಿದ್ದಾಳೆ’ ಎಂದು ಅವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. “ಪಾಪ ನಮ್ಮ ಕೇಶವ ಹೆಂಡತಿಯ ಮಾತು ಕೇಳಲಾಗದೆ, ನಮ್ಮನ್ನೂ ಎದುರು ಹಾಕಿಕೊಳ್ಳಲಾಗಿದೆ, ಒಳಗೊಳಗೆ ಎಷ್ಟು ಹೆಣಗಾಡುತ್ತಿದ್ದಾನೋ” ಎಂದು ಹೆಂಡತಿಯ ಬಳಿ ಹೇಳಿಯೂ ಇದ್ದರು. ಆದರೆ ಏನನ್ನೂ ಮಾಡಲು ತೋಚದೆ ಅವಳು ಕೇಳಿದ ನೇರ ಪ್ರಶ್ನೆಗಳಿಗೆ ಚಾಟಿಯೇಟಿನ ಉತ್ತರ ನೀಡಿ, ನಂತರದ ಇರಿಸುಮುರಿಸನ್ನು ತಾವೇ ಅನುಭವಿಸುತ್ತಿದ್ದರು.       ಜೀವನ ತನ್ನ ಪಾಡಿಗೆ ತಾನು ನಡೆಯಲಿ ಎಂದು ಇದ್ದುಬಿಟ್ಟರೆ, ಅರ್ಧ ಸಮಸ್ಯೆ ಹುಟ್ಟುವುದೇ ಇಲ್ಲ ಅಲ್ಲವೇ? ಆದರೆ ಇರುವುದಕ್ಕಿಂತಲೂ ಬೇರೆಯದನ್ನು ಬಯಸಿ, ಹಲವರ ಮನಸ್ಸನ್ನು ನೋಯಿಸಿ ಪಡೆಯುವುದೇ ಸುಖವೆಂದು ತಿಳಿದು ಅದನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ  ಎಡವಟ್ಟನ್ನೇ ಮಾಡುತ್ತಿರುತ್ತಾರೆ. ಆ ಪೈಕಿಯವಳಾದ ಕವಿತಾ ಒಂದು ಮಧ್ಯಾಹ್ನ ಚೇರಿನ ಮೇಲೆ ಕುಳಿತು ಊಟ ಮಾಡುವ ಶೆಟ್ಟರ ಕಾಲಿನ ಬಳಿ ಬಂದು ಕುಳಿತು ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಳು.

ರೊಟ್ಟಿ ತೊಳೆದ ನೀರು Read Post »

ಕಥಾಗುಚ್ಛ

ಸಿನಿಮಾ ಅಲ್ಲ… ಜೀವನ

ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್             ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಸ್ನಾನ ಮಾಡಿ ನನ್ನ ರಾಜರಥವನ್ನು ಎತ್ತಿಕೊಂಡು ಹೊರಬಿದ್ದು ಯಶವಂತಪುರದ ಸ್ಟೇಷನ್ ಬಳಿ ಬಂದರೆ ಬೇಕಾದಷ್ಟು ಬಾಡಿಗೆಗಳು. ತಿಂಡಿಗೆ ಕಾಯ್ದರೆ ಮನೆಯಲ್ಲೇ ಹತ್ತಾಗುತ್ತದೆ. ಅಲ್ದೇ ಪಾಪ.. ಅಮ್ಮ ಬೇಗ ಬೆಳಿಗ್ಗೆ ಎದ್ದು ಮಾಡಬೇಕು. ಮನೆಯ ಯೋಚನೆ ಕೊಡವಿ ನನ್ನ ರಾಜರಥವನ್ನು ಪ್ರೀತಿ..ಅಭಿಮಾನದಿಂದ ನೋಡಿದೆ. ಹೌದು..ನನ್ನ ರಾಜರಥ..ಕುದುರೆ ..ವಾಹನ ಎಲ್ಲ ಈ ಆಟೋ ಆಗಿತ್ತು. ನನ್ನ ಜೀವನಾಧಾರ ಎಂದರೂ ತಪ್ಪಿಲ್ಲ. ಹಿಂದೆ ಶಂಕರನಾಗ್‌ರ ‘ಆಟೋರಾಜ’ಚಿತ್ರದ ಪೋಸ್ಟರ್ ಸಣ್ಣದಾಗಿ ರಾರಾಜಿಸುತ್ತಿತ್ತು. ಆಟೊ ಚಾಲಕರೆಲ್ಲ ಇಷ್ಟ ಪಡುವ ಹೆಮ್ಮೆಯ ಚಿತ್ರವದು. ಪಾಪ..ಸದಾ ಟ್ರಾಫಿಕ್‌ನಲ್ಲೇ ಇರುವುದರಿಂದ ಮೇಲೆಲ್ಲ ದೂಳು ಹರಡಿತ್ತು. ತುಸು ದೂರ ಕ್ರಾಸ್ ರೋಡಿನಲ್ಲಿ ತಂದು ನಿಲ್ಲಿಸಿ ಹಳೆಯ ಬಟ್ಟೆಯಿಂದ ಒರೆಸಲಾರಂಭಿಸಿದೆ. ಆಗಲೇ ಅವಳು “ಅಮ್ಮಾ..”ಎಂದು ಕೂಗಿಕೊಂಡು ಅತ್ತಲಿಂದ ಓಡಿ ಬಂದದ್ದು. ನಾನೂ ಗಾಬರಿಯಿಂದ “ಏನು..ಏನಾಯ್ತು?”ಎಂದು ಕೇಳಿದೆ. ಉತ್ತರಿಸಲಾರದೆ ಕೈ ತೋರಿದಳು. ಪುಟ್ಟ ಹಾವೊಂದು ಅವಳಿಗಿಂತ ಹೆಚ್ಚು ಹೆದರಿಕೊಂಡು ಸರಸರನೆ ಸರಿದು ಹೋಗುತ್ತಿತ್ತು. ‘ಒಹ್! ಇದಕ್ಕಾ.. ಇವಳು ಇಷ್ಟು ಹೆದರಿ ಕೂಗಿಕೊಂಡದ್ದು..’ಎಂದುಕೊಂಡೆ.  ದಾರಿಯಲ್ಲಿ ಜನರಾರೂ ಇರಲಿಲ್ಲ. ಸೀದಾ ಬಂದವಳು ನನ್ನ ಆಟೋ ಏರಿ ಕುಳಿತಳು. ಒಂದು ನಿಮಿಷ ಸುಮ್ಮನಿದ್ದು ನಾನು “ಅದು ಹೋಯಿತಮ್ಮ”ಎಂದೆ. ಅತ್ತಲಿಂದ ಉತ್ತರವಿಲ್ಲ. ಸೂಕ್ಷ್ಮವಾಗಿ ಅವಳನ್ನು ಗಮನಿಸಿದೆ. ಸೌಂರ‍್ಯದ ಖನಿ ಎಂದು ಹೇಳಲಾಗದಿದ್ದರೂ ಅಂದವಾಗಿದ್ದಳು. ಹಾಲು ಬಣ್ಣ, ನೀಳ ಮೂಗು, ಅರಳು ಕಂಗಳಲ್ಲಿ ಮಡುಗಟ್ಟಿದ್ದ ನೀರು, ಅಗಲ ಬಾಯಿಯಲ್ಲಿ ಅದರುತ್ತಿದ್ದ ಕೆಂಪು ತುಟಿಗಳು, ಹಣೆಯ ಮೇಲೆ ಸಾಲುಗಟ್ಟಿದ್ದ ಬೆವರ ಹನಿಗಳು.. ಅವಳಿನ್ನೂ ಕಂಪಿಸುತ್ತಿದ್ದಳು.             ತುಸು ಮೃದುವಾಗಿ “ಮೇಡಮ್.. ಹೆದರಬೇಡಿ. ಅದು ಹೊರಟು ಹೋಯಿತು. ಇಳಿಯಿರಿ”ಎಂದೆ. ಅವಳು ನಡಗುತ್ತಲೇ “ಉಹ್ಞೂಂ.. ಹೆಬ್ಬಾಳಕ್ಕೆ ನಡೀರಿ” ಎಂದಳು. “ನಾನಲ್ಲಿಗೆ ಬರಲ್ಲ ಮೇಡಮ್. ಏರಿಯಾ ಸರಿಯಾಗಿ ಗೊತ್ತಿಲ್ಲ”ಎಂದೆ. ಚಿಕ್ಕ ಮಗು ರಚ್ಚೆ ಹಿಡಿದು ಕೇಳುವಂತೆ  “ನಾನೀಗ ಇಳಿಯಲ್ಲ. ಕೆಳಗೆ ಕಾಲಿಡಲೂ ಹೆದರಿಕೆ ನಂಗೆ. ನಡೀರಿ.. ಪ್ಲೀಸ್..”ಎಂದು ಅಂಗಲಾಚಿದಳು. ಛೆ! ಇಂದು ಬೆಳಿಗ್ಗೆ ಯಾರ ಮುಖ ನೋಡಿದ್ದೆನೋ ಎನಿಸಿದರೂ ಅವಳ ಸ್ಥಿತಿ ಕಂಡು ಅಯ್ಯೋ.. ಎನಿಸದಿರಲಿಲ್ಲ. ಸುಮ್ಮನೆ ಒಳಗೆ ಕುಳಿತು ಮೀಟರ್ ಹಾಕಿ ಗಾಡಿ ಶುರು ಮಾಡಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿತ್ತು. ಸ್ವತಂತ್ರವಾಗಿ ಹಾರಾಡಲು ಬಿಟ್ಟ ಕೂದಲು, ಕೈಗೆ ದುಬಾರಿ ವಾಚು, ಬೆಲೆ ಬಾಳುವ ಕ್ಲಚ್ ರೂಪದ ಪರ್ಸು.. ಸ್ಥಿತಿವಂತರ ಮನೆಯ ಹುಡುಗಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಳಾಸ ಹೇಳಲು ತಡವರಿಸುತ್ತಿದ್ದವಳನ್ನು “ಸಣ್ಣ ಪುಟ್ಟದ್ದಕ್ಕೆಲ್ಲಾ ಇಷ್ಟು ಹೆದರಬಾರದು ಮೇಡಮ್. ಮುಂದೆ ಜೀವನದಲ್ಲಿ ಎಂಥೆಂಥದ್ದಕ್ಕೆಲ್ಲಾ ತಲೆ ಕೊಡಬೇಕಾಗುತ್ತೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧರ‍್ಯ ತಂದುಕೊಳ್ಳಿ” ಎಂದು ಸಾಂತ್ವನಿಸಿದಾಗ ಕೊಂಚ ತಹಬಂದಿಗೆ ಬಂದಿದ್ದಳು. ‘ಭರ್‌ರ್..’ಎಂದು ಓಡಿದ ನನ್ನ ರಥ ‘ವೀರಪ್ಪನ ಪಾಳ್ಯ’ಎಂದು ಬರೆದ ಕಮಾನಿನ ಮೂಲಕ ಹಾದು ತಿರುವುಗಳಲ್ಲಿ ತಿರುಗಿ ಅವಳು ತೋರಿಸಿದ ಭವ್ಯ ಬಂಗಲೆಯ ಮುಂದೆ ನಿಂತುಕೊಂಡಿತು. ಇಳಿದವಳು ಮೀಟರ್‌ನತ್ತ ನೋಡುವ ಗೊಡವೆಗೂ ಹೋಗದೇ ಐನೂರರ ನೋಟೊಂದನ್ನು ಕೊಟ್ಟು “ಥ್ಯಾಂಕ್ಸ.. ತುಂಬಾ ಥ್ಯಾಂಕ್ಸ”ಎಂದು ಹೊರಟು ಬಿಟ್ಟಳು. ರ‍್ರೀ.ಮೇಡಮ್, ಚಿಲ್ಲರೆನಾರೂ ತೊಗೊಳ್ಳಿ”ಎಂದು ಕೂಗಿದೆ. ತೆಗೆದುಕೊಂಡವಳು ಮನೆಯತ್ತ ನಾಲ್ಕು ಹೆಜ್ಜೆ ಹಾಕಿ ತಿರುಗಿ ನನ್ನತ್ತ ನೋಡಿ ಹೂನಗು ಬೀರಿದಳು. ಮೋಡ ಕರಗಿ ಮಳೆಯಲ್ಲಿ ಮಿಂದ ಹೂ ಶುಭ್ರವಾಗಿ ನಗುವಂತೆ.. ಹಾವು ನೋಡಿ ಹೆದರಿ ಕಂಪಿಸಿ ಕಣ್ತುಂಬಿದ ಕುರುಹೂ ಇರದಂತೆ.. ನನಗೆ ಅಚ್ಚರಿಯೊಂದಿಗೆ ಯಾವುದೋ ಪುಳಕದಲ್ಲಿ ಮಿಂದ ಭಾವ. ಒಂದೊಂದೇ ಹೆಜ್ಜೆಯನ್ನಿಡುತ್ತ ಮನೆಯೊಳಗೆ ನಡೆಯುವಾಗ ಮತ್ತೊಮ್ಮೆ ತಿರುಗಿ ಕೈ ಮಾಡಿದಳು. ನಾನೂ ಮುಗುಳ್ನಕ್ಕು ಕೈ ಮಾಡಿದೆ. ಮನಸ್ಸಿಗೆ ಎಂದೂ ಇಲ್ಲದ ವಿಚಿತ್ರ ಸಿಹಿ ಅನುಭವ. ಅದೆಂಥ ಆಕರ್ಷಣೆಯೋ.. ಗೊತ್ತಿಲ್ಲ.             ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿದ್ದರೆ ಬೆಳೆದು ಕಥೆಯಾಗುತ್ತಿರಲಿಲ್ಲ. ನಾನು ನಿಮಗೆ ಹೇಳಬೇಕಾಗೂ ಇರಲಿಲ್ಲ. ಮರುದಿನ ನಾನು ಮಹಾಲಕ್ಷ್ಮಿಲೇಔಟಿನ ಪಂಚಮುಖಿ ಆಂಜನೇಯನಿಗೆ ನಮಿಸಿ ಮೂಲೆಯಲ್ಲಿದ್ದ ಅಂಗಡಿಯಲ್ಲಿ ಚಿತ್ರಾನ್ನ ತಿಂದು.. ಕಾಫಿ ಕುಡಿದು ನನ್ನ ರಥದ ಬಳಿ ಬಂದೆ. ತುಸುದೂರದಲ್ಲಿ ಕಾಯುತ್ತ ನಿಂತವಳು ಹೂನಗು ಬೀರುತ್ತ ಹತ್ತಿರ ಬಂದಳು. ನಿನ್ನೆ ಕಂಡ ಜಾಗ.. ಅದೇ ಹುಡುಗಿ..ಎಂದು ಖಚಿತಪಡಿಸಿಕೊಂಡೆ. “ಈವತ್ತೇನು.. ತಿಂಡಿ ಲೇಟಾ?”ಎಂದು ತುಂಬಾ ಪರಿಚಯವಿರುವಂತೆ ಕುಶಲೋಪರಿ ಆರಂಭಿಸಿದಳು. “ಹ್ಞೂಂ, ಏಳಲು ತಡವಾಯ್ತು”ಎಂದೆ. ತಟಕ್ಕನೆ ಆಟೋ ಏರಿ ಕುಳಿತು “ನಡೀರಿ ಹೆಬ್ಬಾಳಕ್ಕೆ..”ಎಂದಳು. ನಾನು ನುಸುಗೋಪದಿಂದ “ಆಗಲ್ಲ ಮೇಡಮ್.. ನಾನಲ್ಲಿಗೆ ಬರೋದೇ ಇಲ್ಲ. ನಿನ್ನೆ ನೀವು ತುಂಬಾ ಹೆದರಿಕೊಂಡಿದ್ರೀಂತ ಬಂದದ್ದಷ್ಟೇ.. ಬೇರೆ ಆಟೋ ನೋಡ್ಕೊಳಿ”ಎಂದೆ ಮಾಮೂಲಿ ಧಾಟಿಯಲ್ಲಿ. ಅವಳೂ ಭಂಡತನ ತೋರುತ್ತ “ನಾನಂತೂ ಇಳಿಯಲ್ಲ. ನನ್ನ ಬಿಟ್ಟು ಮುಂದೆ ಹೋಗಿ”ಎಂದಳು. ಕೋಪವೇರಿ “ಏನಂದುಕೊಂಡಿದ್ದೀರಿ ನನ್ನನ್ನ..?” ಎಂದು ಕೇಳಿದೆ. “ಒಬ್ಬ ಒಳ್ಳೆಯ ಸ್ನೇಹಿತ..ಹಿತೈಷಿ..” ಎಂದು ಮುದ್ದಾಗಿ ಉಲಿದಳು. ಹಾಳು ಮನಸ್ಸು ಮತ್ತೆ ಮೃದುವಾಯಿತು. ಮತ್ತೆ ಈ ಹುಡುಗಿ ಕಣ್ತುಂಬಿಕೊಂಡು ಹನಿ ಪಟಪಟನೆ ಉದುರಿಸಿದರೆ ಕಷ್ಟವೆನಿಸಿ ಸೀದಾ ಓಡಿಸಿದೆ. ಮಾಮೂಲು ದಾರಿಯಲ್ಲಿ ಓಡಿದೊಡನೆ ಹಸನ್ಮ್ಮಖಿಯಾದವಳು ದಾರಿಯಲ್ಲಿ ಪ್ರವರ ಆರಂಭಿಸಿದಳು.             ಅವಳ ಹೆಸರು ಮಾನ್ಯ. ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳು ಮುಗಿದರೂ ಕೆಲವು ವಿಷಯಗಳು ಉಳಿದುಕೊಂಡಿವೆಯಂತೆ. ಅದಕ್ಕೇ ಟ್ಯೂಟರ್ ಹತ್ತಿರ ಹೇಳಿಸಿಕೊಳ್ಳಲು ಮಹಾಲಕ್ಷ್ಮಿಲೇಔಟಿಗೆ ಬರುತ್ತಾಳೆ. ಬೆಳಿಗ್ಗೆ ಏಳು ಗಂಟೆಗೆಲ್ಲ ಅಪ್ಪನ ಡ್ರೆöÊವರ್ ಬಿಟ್ಟು ಹೋಗುತ್ತಾನೆ. ಅಪ್ಪ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡುತ್ತಾರೆ. ಹೀಗಾಗಿ ಮನೆ ಸೇರಲು ನನ್ನ ಬೆನ್ನು ಬಿದ್ದಿದ್ದಾಳೆ. ಅಪ್ಪ ಆದಾಯ ತೆರಿಗೆ ಅಧಿಕಾರಿ. ಭವ್ಯ ಬಂಗಲೆ ನೋಡಿಯೇ ‘ಭಾರೀ ಕುಳ’ಎನ್ನಬಹುದು. ಅಮ್ಮ ಮಹಿಳಾ ಸಮಾಜ, ಕ್ಲಬ್‌ಗಳ ಮೆಂಬರ್. ಅಣ್ಣ ಅಮೆರಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ಯಾದಿ..ಇತ್ಯಾದಿಗಳನ್ನು ಹೇಳಿಕೊಳ್ಳುತ್ತ ತಟಕ್ಕನೇ ಅವಳು “ಇನ್ನು ಮುಂದೆ ನಿತ್ಯ ನಾನು ಟ್ಯೂಷನ್‌ಗೆ ಬರುವಷ್ಟು ದಿನ ನೀವೇ ನನ್ನನ್ನು ಮನೆಗೆ ಬಿಟ್ಟುಬಿಡಿ”ಎಂದಳು. “ಆಗಲ್ಲ ಮೇಡಮ್.. ಈ ರೂಟು ತುಂಬಾ ಬಿಝಿ ಇರುತ್ತೆ. ಟ್ರಾಫಿಕ್‌ನಲ್ಲಿ ತುಂಬಾ ಟೈಮ್ ಹಾಳಾಗುತ್ತೆ. ನೀವು ಓಲಾ..ಊಬರ್ .. ಬುಕ್ ಮಾಡಿದ್ರೆ ಬರ್ತಾರೆ”ಎಂದೆ. “ಅದೆಲ್ಲಾ ನನಗೆ ಗೊತ್ತು. ಅವರು ಬೇಡ. ನೀವೇ ಒಪ್ಕೊಳ್ಳಿ. ದುಡ್ಡು ಎಷ್ಟಾದ್ರೂ ಕೇಳಿ. ನಮ್ಮ ಏರಿಯಾದ ಶಾಪಿಂಗ ಕಾಂಪ್ಲೆಕ್ಸನಿಂದ ನಿಮಗೆ ಬೇಕಾದಷ್ಟು ಬಾಡಿಗೆಗಳೂ ಸಿಗುತ್ವೆ”ಎಂದು ಪಟ್ಟು ಹಿಡಿದಳು. ನಾನು ದ್ವಂದ್ವದಲ್ಲಿ ಮುಳುಗಿದರೂ ಯೋಚಿಸಿದೆ. ಒಳ್ಳೆ ಅವಕಾಶ. ಇಲ್ಲಿ ಕಾಯೋ ಬದಲು ಅಲ್ಲೇ ಹೊಡೀಬಹುದು. ಒಂದು ಲಾಂಗ್ ರೂಟ್ ಬಾಡಿಗೆಯಂತೂ ಫಿಕ್ಸು ಎನಿಸಿ ಒಪ್ಪಿಕೊಂಡೆ. ಹುಡುಗಿ ಫುಲ್ ಖುಷಿಯಾಗಿ“ಹರ‍್ರೇ..”ಎಂದಳು. ನನಗೋ.. ಒಮ್ಮೆ ಅಚ್ಚರಿ.. ಮತ್ತೊಮ್ಮೆ ನಗು..ಅದೇಕೆ ಈ ಹುಡುಗಿ ನನ್ನನ್ನು ಹಚ್ಚಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ.             ದಿನಗಳು ಓಡುತ್ತಿದ್ದವು. ಬಿಡುವೇ ಇರದಂತೆ.. ಆಟೋ ಕೂಡ ಹಾಗೇ ಹೆಬ್ಬಾಳಕ್ಕೆ ಓಡುತ್ತಿತ್ತು. ಅವಳು ತನ್ನ ತಾಯಿ, ತಂದೆ, ಗೆಳತಿಯರ ಬಗ್ಗೆ ನಿತ್ಯವೂ ಹೇಳುತ್ತಿದ್ದಳು. ಒಬ್ಬ ಆಪ್ತ ಸ್ನೇಹಿತೆಗೆ.. ಹಿತಚಿಂತಕರಿಗೆ ಹೇಳುವಂತೆ.. “ಅಪ್ಪ ತುಂಬಾ ಸ್ಟಿçಕ್ಟ. ಮೊದಲು ಮಾಮೂಲಿಯಾಗಿದ್ದರು. ನನ್ನನ್ನು, ಅಣ್ಣನನ್ನು ಚೆನ್ನಾಗಿ ಮಾತನಾಡಿಸುತ್ತ ಪಿಕ್ಚರ್, ಪಾರ್ಕುಗಳಿಗೆಲ್ಲ ಕರೆದೊಯ್ಯುತ್ತಿದ್ದರು. ನಮ್ಮದೊಂದು ಮಧ್ಯಮ ವರ್ಗದ ಕುಟುಂಬವಾಗಿರುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಮ್ಮ ನಮ್ಮ ಬೇಕುಬೇಡಗಳನ್ನು ಪೂರೈಸುತ್ತ ಮನೆಗೆ ಆಧಾರವಾಗಿದ್ದಳು. ವಾರವಾರವೂ ಹೊಸ ತಿಂಡಿ, ಅಡಿಗೆ ಮಾಡೋಳು. ನಾವು ಅವಳಿಗೆ ಸಹಾಯ ಮಾಡುತ್ತಿದ್ದೆವು. ನಾನೂ ಸ್ನೇಹಿತೆಯರೊಂದಿಗೆ ಆಟ, ಓದು.. ಪಿಕ್ಚರ್ ಎಂದೆಲ್ಲ ಹಾಯಾಗಿದ್ದೆ. ಅಪ್ಪನಿಗೆ ಪ್ರಮೋಷನ್ ಆಗಿ ಇನ್‌ಕಮ್‌ಟ್ಯಾಕ್ಸ ಆಫೀಸರ್ ಆದ ಮೇಲೆ ಮನೆಯ ಚಿತ್ರವೇ ಬದಲಾಯಿತು. ಬಂಗಲೆ ದೊಡ್ಡದಾದಷ್ಟೂ ನಾವೆಲ್ಲ ದೂರವಾದೆವು. ನಮ್ಮೊಂದಿಗೆ ಮಾತನಾಡಲು ಅಪ್ಪನಿಗೆ ಸಮಯವೇ ಇರುವುದಿಲ್ಲ. ವಿಪರೀತ ಮೂಡಿಯಾಗಿ ಸದಾ ವ್ಯವಹಾರಗಳಲ್ಲೇ ಮುಳುಗಿ ಎಲ್ಲ ಮರೆತುಬಿಡುತ್ತಾರೆ. ನನ್ನ ಅಕೌಂಟಿಗೆ ದುಡ್ಡು ಹಾಕುವುದನ್ನು ಬಿಟ್ಟು.. .. ಎಲ್ಲವನ್ನೂ. ಅಮ್ಮ ಸದಾ ಕ್ಲಬ್‌ನ ಮೀಟಿಂಗಿನಲ್ಲೋ.. ಮಹಿಳಾ ಸಮಾಜದ ಸೋಷಿಯಲ್ ವರ್ಕಿನ ಹೆಸರಿನ ಫಂಕ್ಷನ್‌ಗಳಲ್ಲೋ ಲೀಡರ್ ಆಗಿ ಮಿಂಚುತ್ತಾರೆ. ಅದಕ್ಕೆ ಬ್ಯೂಟಿ ಪಾರ್ಲರ್‌ಗೆ ಹೆಚ್ಚು ಟೈಮು, ದುಡ್ಡು ಹಾಕ್ತಾರೆ. ನನಗೋಸ್ಕರ ಯಾರ ಬಳಿಯೂ ಸಮಯವಿಲ್ಲ.”ಎಂದಾಗ ನನಗಾಗಿ ಊಟ, ತಿಂಡಿ ಸಿದ್ಧ ಮಾಡಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ “ನಾಗಾ.. ಒಂತುತ್ತು ತಿಂದು ಹೋಗೋ.. ಹಸಿದುಕೊಂಡು ಕೆಲಸ ಮಾಡ್ಬಾರ್ದು ಮಗಾ”ಎಂದು ಅಲವತ್ತುಕೊಳ್ಳುವ ನನ್ನಮ್ಮನ ನೆನಪಾಗಿತ್ತು. ಈ ರೀತಿಯ ಬಡ ಸಿರಿವಂತಿಕೆಗಿಂತ ನನ್ನಂಥವರ ಹೊಟ್ಟೆ ತುಂಬಿದ..ಪ್ರೀತಿ ತುಂಬಿದ ಶ್ರೀಮಂತ ಬಡತನವೇ ಲೇಸು ಎನಿಸಿತು.  “ಅಣ್ಣ ಅಮೆರಿಕದಿಂದ ಆಗಾಗ ಫೋನ್ ಮಾಡ್ತಿರ್ತಾನೆ. ಅವನಿಗೆ ಇಲ್ಲಿ ಬರಲು ಇಷ್ಟವೇ ಇಲ್ಲ. ಇಲ್ಲಿನ ರೀತಿ, ನೀತಿಗಳೊಂದಿಗೆ ಅಪ್ಪನ ಲಂಚಗುಳಿತನ, ಭ್ರಷ್ಟಾಚಾರ, ಅಮ್ಮನ ಬೂಟಾಟಿಕೆ, ಆಡಂಬರ.. ಯಾವುದೂ ಇಷ್ಟವಾಗಲ್ಲ” ಇತ್ಯಾದಿ ವಿವರಗಳು ನಾನು ಕೇಳದೆಯೇ ನನಗೆ ದೊರಕಿದ್ದವು. ನಾನು ಬರೀ ‘ಹ್ಞೂಂ..’ಗುಡುವ ಯಂತ್ರವಾಗಿದ್ದೆ. ಆದರೆ ಮನದ ಮೂಲೆಯಲ್ಲಿ ತಟ್ಟನೆ ‘ಹಾಗಾದರೆ ಕಾಳು ಹಾಕಿದವರಿಗೆ ದೊಡ್ಡ ಸಾಮ್ರಾಜ್ಯವೇ ದೊರಕುವುದುಂಟು’ಎನಿಸಿದ್ದು ಸುಳ್ಳಲ್ಲ. “ಮನೇಲಿ ಅಡಿಗೆಯವಳು, ಕೆಲಸದವಳು, ಮಾಲಿ.. ಬಿಟ್ಟರೆ ಯಾರಿರುವುದಿಲ್ಲ. ದೊಡ್ಡ ಸುಂದರ ಮನೆಯನ್ನು ಅವರೇ ಎಂಜಾಯ್ ಮಾಡ್ತಾರೆ. ಎಲ್ಲರೂ ರಾತ್ರಿಯೇ ಬರುವುದು. ಅದಕ್ಕೇ ಸಿ.ಸಿ.ಟಿವಿ. ಬೇರೆ ಹಾಕಿಸಿದ್ದಾರೆ”ಎಂದು ನಕ್ಕಳು. ವಿಷಾದಭರಿತ ನಗೆ. ‘ತುಂಬಾ ಮುಗ್ಧೆ’ಎನಿಸಿತು. ಶ್ರೀಮಂತಿಕೆಯ ಮೆಟ್ಟಿಲೇರುವ ಹುಚ್ಚಿನಲ್ಲಿ ಅಮಾಯಕ ಮನವನ್ನು ಮರೆತಿದ್ದಾರೆ ಎಂಬ ಬೇಜಾರೂ ಸೇರಿಕೊಂಡಿತು. ಯಾರ ಅಕ್ಕರೆಯೂ ಸಿಗದ ಶ್ರೀಮಂತ ಸಕ್ಕರೆಯ ಗೊಂಬೆ ಪ್ರೀತಿಗೆ.. ವಿಶ್ವಾಸಕ್ಕೆ ಹಂಬಲಿಸುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಯಾವ ವಿಷಯ ಹೇಳಬೇಕು.. ಹೇಳಬಾರದೆಂಬ ಅರಿವಿಲ್ಲದೇ ಮನೆಯ ಚಿತ್ರವನ್ನೆಲ್ಲ ಬಿಡಿಸಿಡುತ್ತಿದ್ದಾಳೆ. ಮಧ್ಯಾಹ್ನ ಹೋಗಿ ಕೊಳ್ಳೆ ಹೊಡೆಯಬಹುದು ಎನಿಸಿ ನಗು ಬಂತು. ಮಳೆಗಾಲ ಆರಂಭವಾಗಿತ್ತು. ತುಂತುರಾಗಿ ನೀರ ಧಾರೆ ಸುರಿಯತೊಡಗಿತ್ತು. ಆಟೋ ಹೆಬ್ಬಾಳಕ್ಕೆ ನಿತ್ಯವೂ ಓಡುತ್ತಿತ್ತು. “ಮಳೆಗಾಲ.. ಕಾರಲ್ಲೇ ಓಡಿಯಾಡಬಹುದಲ್ಲ..”ಎಂದೆ. ಅದಕ್ಕೆ ಅವಳು “ಹ್ಞಾಂ, ಅಪ್ಪ ಕೂಡ ಅದನ್ನೇ ಹೇಳಿದರು. ಡ್ರೈವರ್‌ನ ಕಳಿಸ್ತೀನಿ ಅಂದ್ರು. ನಾನೇ ಕ್ಯಾಬ್ ಬುಕ್ ಮಾಡ್ಕೋತೀನಿ ಅಂದೆ. ನಾನು ಆಟೋದಲ್ಲಿ ಓಡಿಯಾಡುವುದು ಅವರ ಅಂತಸ್ತಿಗೆ ಕಡಿಮೆ ಅಂತಾರೆ. ಈಗ ನಿತ್ಯ ನಾನು ಮನೆಗೆ ಹಿಂತಿರುಗುವಾಗ ಮನೇಲಿ ಯಾರೂ ಇರಲ್ಲ. ನೋಡಲ್ಲ..” ಎಂದಳು. “ಫ್ರೆಂಡ್ಸ ಜೊತೆ ಕ್ಯಾಬ್‌ನಲ್ಲೂ ಹೋಗಬಹುದು”ಎಂದೆ. “ಫ್ರೆಂಡ್ಸಾ.. ಶಬ್ದಾನೇ ಮರೆತು ಎಷ್ಟೋ ದಿನ ಆದಂಗಾಗಿದೆ. ಮೊದಲು ನಾವು ಚಿಕ್ಕ ಮನೇಲಿದ್ದಾಗ ತುಂಬಾ ಜನ ಫ್ರೆಂಡ್ಸ ಇದ್ದರು. ನಾವೆಲ್ಲ ಸಿನಿಮಾ, ಮಾಲ್, ಶಾಪಿಂಗ್ ಅಂತ ಓಡಾಡ್ತಿದ್ವಿ. ಎಲ್ಲರೂ ಕೊಳ್ಳೋದು ಜಾಸ್ತಿ ಇರಲಿಲ್ಲವಾದರೂ ವಿಂಡೋ ಶಾಪಿಂಗ್ ಮಾಡಿದ್ದೇ ಹೆಚ್ಚು. ಸಿನಿಮಾ ಅಂತೂ ಒಂದೂ ಬಿಡದೇ ನೋಡ್ತಿದ್ದೆವು. ಕನ್ನಡ, ಹಿಂದಿ, ತೆಲಗು, ತಮಿಳು, ಇಂಗ್ಲಿಷ್.. ನೋಡಿ ಮಜಾ ಮಾಡ್ತಿದ್ದೆವು. ಕನ್ನಡ ಸಿನಿಮಾದ ಡೈಲಾಗ್‌ಗಳನ್ನ ಉರು ಹೊಡೆದು ಹೇಳಿದ್ದೇ ಹೇಳಿದ್ದು. ದೊಡ್ಡ ಮನೆಗೆ ಬಂದ ಮೇಲೆ ಅವರು ಅಮ್ಮ, ಅಪ್ಪನಿಗೆ ಇಷ್ಟವಾಗಲಿಲ್ಲ. ಬಿಡಿಸಿಬಿಟ್ರು. ಅಮ್ಮ ತೋರಿಸಿದ ಹೈಕ್ಲಾಸ್ ಒಣ ಡಂಭಾಚಾರದ ಫ್ರೆಂಡ್ಸ

ಸಿನಿಮಾ ಅಲ್ಲ… ಜೀವನ Read Post »

ಕಥಾಗುಚ್ಛ

ಪಾತ್ರೆ ಪಂಡಿತೆ

ಒಂದು ತಿಂಗಳ ನಂತರ ಮನೆಯ ಅಕ್ಕ-ಪಕ್ಕ ಓಡಾಡುತ್ತಾ ನನ್ನ ಗಮನ ಸೆಳೆಯಲು ಯತ್ನಿಸಿದ್ದಳು. ಕುಡುಕರ ಎದುರು ಮರಕ್ಕೆ ನೇತು ಹಾಕಿದ ಹೆಂಡದ ಬಾಟಲಿಯಂತೆ ಗಂಗಾ ನನಗೆ ಕಾಣಲಾರಂಭಿಸಿದಳು.

ಪಾತ್ರೆ ಪಂಡಿತೆ Read Post »

ಕಥಾಗುಚ್ಛ

ಗೋಡೆಯ ಮೂಲೆ

ಶ್ರಮಕುಮಾರ್ ಬರೆಯುತ್ತಾರೆ
ಎಷ್ಟೋ ಹುಡುಗಿಯರು ರಸ್ತೆಯಲ್ಲಿ ನಡೆಯುವಾಗ ಮೂಡುವ ಸೂರ್ಯನಿಗೆ ಎದರಿ ನಡೆಯುತ್ತಾರೆ ಅವಳು ಹಾಗೆ ನಡೆದವಳಿರಲಿಕ್ಕಿಲ್ಲ ಧೈರ್ಯವಾಗಿ ನಗ್ನಳಾಗಿದ್ದವಳು. ಯಾವೊಂದು ಕಲೆಗಳು ಅವಳ ಚರ್ಮಕ್ಕಂಟಿರಲಿಲ್ಲ

ಗೋಡೆಯ ಮೂಲೆ Read Post »

ಕಥಾಗುಚ್ಛ

ಅತಿ ಮಧುರಾ ಅನುರಾಗ

ಅಮ್ಮಾ ! ದುನಿಯಾ ಬದಲಾಗ್ತಿದೆ. ಈಗ ಇಷ್ಟಪಟ್ಟವರ ಜೊತೆಯಲ್ಲೇ ಮದುವೆಗಳು ಆಗ್ತಿರೋದು. ಇವು ತಪ್ಪು ಸಹ ಅಲ್ಲ. ಅದೆಲ್ಲ ಸರಿ. ನಿಮಗಿಷ್ಟಾನಾ ಇಲ್ಲಾ ಅದ್ ಹೇಳಿ “ ಎಂದಳು.

ಅತಿ ಮಧುರಾ ಅನುರಾಗ Read Post »

ಕಥಾಗುಚ್ಛ

ಅಧ್ಯಾತ್ಮಿಕ ತುಡಿತದೆಡೆಗೆ ಮನ

ಕಥೆ ಅಧ್ಯಾತ್ಮಿಕ ತುಡಿತದೆಡೆಗೆ ಮನ ಬಸವರಾಜ ಕಾಸೆ ಆತ ಪ್ರಕಾಶ, ಅದೇನೋ ಚಿಕ್ಕವನು ಇದ್ದಾಗಿನಿಂದಲೇ ದೇವರೆಂದರೆ ಆತನಿಗೆ ಅಪಾರ ಭಕ್ತಿ. ಅವನ ಮನಸ್ಸು ಸದಾ ಅಲೌಕಿಕ ಕಡೆಗೆ ತುಡಿಯುತ್ತಿತ್ತು. ಆತನ ಮೈ ಬಣ್ಣ ಕಡುಕಪ್ಪು. ಆದರೆ ಶ್ವೇತ ಬಣ್ಣದ ಅತ್ಯಂತ ಸುಂದರ ಭಾವನೆಗಳಿದ್ದವು. ಆ ಬಣ್ಣದ ಕಾರಣದಿಂದ ಬಂಧುಗಳಿಂದಲೇ ಒಂದಿಷ್ಟು ತಿರಸ್ಕಾರಕ್ಕೆ ಒಳಗಾಗಿದ್ದ. ಆತನದು ಕೆಳಜಾತಿ ಎನ್ನುವ ಕಾರಣಕ್ಕೆ ಇನ್ನೂ ಹೊರಗಿನ ಜನಗಳಿಂದ ಅಸಡ್ಡೆಗೆ ಒಳಗಾಗಿದ್ದ. ಇವೆಲ್ಲವೂ ಒಂದೊಂದಾಗಿ ಬೆಳೀತಾ ಬೆಳೀತಾ ಆತನ ಅರಿವಿಗೆ ಬರತೊಡಗಿತು. ಇದರಿಂದಾಗಿ ಆತ ಹೆಚ್ಚೆಚ್ಚು ಇತರರೊಂದಿಗೆ ಬೆರೆಯುವುದನ್ನು ಬಿಟ್ಟು ಒಬ್ಬಂಟಿಯಾಗಿ ಉಳಿಯತೊಡಗಿದ. ಇದರಿಂದ ಆಚೆ ಬೇರೆ ಒಂದಕ್ಕೆ ಅವನು ಸದಾ ಚಡಪಡಿಸುತ್ತಿದ್ದ. ಮತ್ತೆ ಈ ಜಾತಿ ಅಂತಹ ಅನಿಷ್ಟ ಕಟ್ಟಳೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದೇ ಹಂಬಲಿಸುತ್ತಿದ್ದನು. ಬಣ್ಣ ನೋಡಿ ಹೀಯಾಳಿಸುವವರೇ ಈ ಬಣ್ಣ ಒಪ್ಪಿ ಮೆಚ್ಚಬೇಕು ಎಂದೆಲ್ಲಾ ಹಾತೊರೆಯುತ್ತಿದ್ದ. ಕೃಷ್ಣನೂ ಸಹ ಕಪ್ಪು, ಆದರೆ ಕೃಷ್ಣನೆಂದರೆ ಅದೆಂತಹ ಮೋಹ ಅಂತೆಯೇ ಈ ಕಪ್ಪು ಅಂದರೂ ಸಹ ಅಂತಹ ಒಂದು ವ್ಯಾಮೋಹ, ಎಲ್ಲಾ ದೇವರುಗಳು ಎಂತೆಂತಹ ಜಾತಿ, ಅವರನ್ನೊಮ್ಮೆ ಕೇಳಿ ಬರಬೇಕು ಎಂಬ ತರಾತುರಿ. ಬಣ್ಣ, ಜಾತಿ ಮೊದಲಾದ ಮನುಷ್ಯ ಸೃಷ್ಟಿ ದಬ್ಬಾಳಿಕೆಗಳ ಅಂತ್ಯ ಎನ್ನುವ ಆತನ ಗುರಿಯೊಂದಿಗೆ ಅಧ್ಯಾತ್ಮದೆಡೆಗಿನ ಒಲವು ದಿನ ಕಳೆದಂತೆ ಹೆಚ್ಚಾಗತೊಡಗಿತು. ಯಾವುದಾವುದೋ ಧ್ಯಾನ ಶಿಬಿರಗಳಲ್ಲಿ ವರ್ಷಗಟ್ಟಲೆ ಕಳೆದ. ಯೋಗ ಸಿದ್ದಿಯನ್ನು ರೂಢಿಗತ ಮಾಡಿಕೊಂಡ. ಪಾಠ ಪ್ರವಚನಗಳಲ್ಲೇ ಸದಾ ಮಗ್ನನಾಗಿರುತ್ತಿದ್ದ. ಅದೆಷ್ಟೋ ವರ್ಷಗಳು ಕಳೆದರೂ ಆತ ಇನ್ನೂ ಸರಿಯಾಗಿ ಮಾರ್ಗದರ್ಶನ ನೀಡುವ ಗುರುವಿನ ಹುಡುಕಾಟದಲ್ಲಿ ಇದ್ದ. ಜಾತಿಗೆ ಒಂದೊಂದು ಮಠ. “ನಿಮ್ಮ ಸೇವೆ ಮಾಡುವೆ, ಮಾರ್ಗದರ್ಶನ ನೀಡಿ” ಅವರೆಲ್ಲಾ ಕೇಳಿದೊಂದೆ “ನಿನ್ನದು ಯಾವ ಜಾತಿ”. ಅಲ್ಲಿಯೂ ಇವನಿಗೆ ಸ್ಥಳವಿರಲಿಲ್ಲ. ತನ್ನದೇ ಜಾತಿಯ ಮಠಕ್ಕೆ ಹೋದರೆ ಅಲ್ಲಿ ಬಣ್ಣದ ನೆಪ. ಹೆಚ್ಚಿನ ಮಠಗಳು ನೂರಾರು ವೈವಿಧ್ಯಮಯ ವ್ಯಾಪಾರಗಳು ಕುದುರುವ ಮತ್ತು ನಡೆಸುವ ಪುಣ್ಯ ಸ್ಥಳಗಳಾಗಿದ್ದವು. ಈತ ನಡೆ ಮುಂದೆ, ನಡೆ ಮುಂದೆ ಎಂದು ಖಾಲಿ ಜೋಳಿಗೆಯೊಂದನ್ನು ನೇತು ಹಾಕಿಕೊಂಡ ಫಕೀರ ದೇಶ ಸುತ್ತುತ್ತಾ ಹೊರಟ. ಆದರೆ ಅವನ ಆ ಜೋಳಿಗೆ ಜ್ಞಾನದಿಂದಲೇ ತುಂಬಿಕೊಂಡಿತು. ಪ್ರತಿ ಪ್ರದೇಶಕ್ಕೆ ಹೋದಾಗಲೂ ಹೊಸ ಹೊಸ ಅನುಭವ, ವಿಚಿತ್ರ ವಿಚಿತ್ರ ಜನಗಳ ಪರಿಚಯ, ವಿಭಿನ್ನ ಪರಿಸರದ ಸ್ವಾದ ಸವಿಯುತ್ತಲೇ ನಡೆದೇ ಇದ್ದ. ಆತನಿಗೆ ವಿಶ್ರಾಂತಿ ಬೇಕು ಎನಿಸಿದಾಗ ಸಿಗುವ ಸ್ಥಳವೇ ನೆಮ್ಮದಿ ತಾಣ. ಎಲ್ಲಿ ಏನು ಸಿಗುತ್ತೋ ಅದೇ ಆಹಾರ. ಜೀವನದ ಎಲ್ಲಾ ಜಂಜಾಟಗಳಿಂದ ದೂರ ಆಗಿದ್ದ ಆತನಿಗೆ ಸ್ವಾರ್ಥಗಳ ಪರಿಕಲ್ಪನೆಯೇ ನಡುಕ ಹುಟ್ಟಿಸುತ್ತಿತ್ತು. ಅದೆಷ್ಟೋ ವರ್ಷಗಳ ಕಾಲ ನಡೆದು ಎಲ್ಲಾ ದೇವ ಸನ್ನಿದಿಗಳಿಗೆ ಭೇಟಿ ನೀಡಿದ. ಕೊನೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿ ಇದ್ದ ಅಘೋರಿಗಳ ಪರಿಚಯಿಸಿಕೊಂಡು ಮುಕ್ತಿ ಮಾರ್ಗದೆಡೆಗೆ ಮುಕ್ತ ಮನಸ್ಸಿನಿಂದ ನನ್ನನ್ನು ಮುನ್ನೆಡೆಸಿ ಎಂದು ವಿನಂತಿಸಿದ. ಕೊನೆಗೆ ಒಬ್ಬ ಅಘೋರಿ ಕಠಿಣ ಯಾಗ, ಪರಿಶ್ರಮ, ತಪೋಧ್ಯಾನಗಳ ಕುರಿತು ನಿರಂತರವಾಗಿ ತಿಳಿಸುತ್ತಾ ಹೋದ. ಭಯಂಕರವಾದ ವಿಭಿನ್ನ ತಪಸ್ಸುಗಳನ್ನು ಆಚರಿಸತೊಡಗಿದ. ಆತನಿಗೆ ಈ ಜಗದ ಪರಿವೆ ಇರದೇ ಅದರಲ್ಲಿಯೇ ಕಳೆದು ಹೋಗಿ ಬಿಟ್ಟಿದ. ಭಂಗಿ ಸೇದುವುದೇ ಆತನ ಶಕ್ತಿ ಹೆಚ್ಚು ಮಾಡುತಿತ್ತು. ಇನ್ನೂ ಆಹಾರವಂತೂ ಸಿಕ್ಕಿದೆಲ್ಲವೂ ತಿನ್ನತೊಡಗಿದ. ರಹಸ್ಯ ವಿದ್ಯೆಗಳು ಎಲ್ಲಾವನ್ನು ತನ್ನೊಳಗೆ ಅರಗಿಸಿಕೊಳ್ಳತೊಡಗಿದ. ಆತನಿಗೆ ಅದೊಂದು ಸುಂದರ ಪ್ರಪಂಚವೇ ಆಗಿ ಹೋಗಿತ್ತು. ಆತನ ಮೈ ಮನಸ್ಸು ಹೇಗೇಗೋ ಹದಗೊಂಡು ಮತ್ತೊಂದು ರೂಪವೇ ಪಡೆದಿತ್ತು. ಹೀಗಾದರೆ ತನ್ನ ಗುರಿ ಎಂದುಕೊಂಡು ಹಿಮಾಲಯ ಬಿಟ್ಟು ಮತ್ತೆ ದೇಶ ಸುತ್ತುತ್ತಾ ಹಿಂತಿರುಗತೊಡಗಿದ. ಮತ್ತೆ ದಾರಿಯುದ್ದಕ್ಕೂ ಅಪರಿಚಿತ ಜನರೊಂದಿಗೆ ಓಡಾಟ, ಆತನ ದಿವ್ಯ ತೇಜಸ್ಸಿನ ಮುಖ ಮತ್ತು ಇರುವ ಜ್ಞಾನಕ್ಕೆ ಅಲ್ಲಲ್ಲಿ ಜನ ಸೋತು ಹೋದರು. ದಾರಿಯಲ್ಲಿ ಎಲ್ಲೇ ಏನೇ ಪ್ರವಚನ ನಡೆಯುತ್ತಿದ್ದರೂ ಅಲ್ಲಿ ಹೋಗಿ ವಾದಿಸತೊಡಗಿದ. ದೊಡ್ಡ ದೊಡ್ಡ ಸ್ವಾಮೀಜಿಗಳೇ ಬೆರಗಾಗುವಂತೆ ತನ್ನ ಸಿದ್ದಾಂತಗಳನ್ನು ಪ್ರತಿಪಾದಿಸತೋಡಗಿದ. ಹೋದಲ್ಲಿ ಎಲ್ಲಾ ತನ್ನದೇ ಉಪದೇಶಗಳನ್ನು ನೀಡತೊಡಗಿದ. ಅಧ್ಯಾತ್ಮಿಕತೆಯ ಉತ್ತುಂಗ ತಲುಪಿದ ಆತನ ಬೋಧನೆಗಳು ಸರಳವಾಗಿ ಜನರ ಮನಸ್ಸಿಗೆ ನಾಟಿದವು. ಈತನ ಈ ಕಾರ್ಯಗಳೆಲ್ಲವೂ ಜನರಿಂದ ಜನರಿಗೆ ಹಬ್ಬಿ ಮಾಧ್ಯಮಗಳ ಮೂಲಕ ಎಲ್ಲರನ್ನೂ ತಲುಪತೊಡಗಿದ. ಆತನ ಈ ದಾರಿಯಲ್ಲಿ ಎಷ್ಟೋ ಜನ ಆತನ ಭಕ್ತರಾದರೆ ಇನ್ನೂ ಕೆಲವರು ಆತನ ಶಿಷ್ಯಂದಿರೇ ಆದರು. ತನ್ನ ಸ್ವಂತ ಊರು ತಲುಪುವಷ್ಟರಲ್ಲಿ ಆತನ ಖ್ಯಾತಿ ಮನೆ ಮಾತಾಗಿತ್ತು. ಜಾತಿ, ಬಣ್ಣಗಳ ಮೀರಿ ಬೆಳೆದ ಆತನಿಗೆ ಅನುಯಾಯಿಗಳೇ ಆಶ್ರಮವೊಂದನ್ನು ಕಟ್ಟಿಸಿಕೊಟ್ಟರು. ಕಾಲ ಕಳೆದಂತೆ ವಿದೇಶಿ ಹಣವೂ ಹರಿದು ಬಂತು. ಅಣ್ಣ ಎಂದು ಆತನ ಶಿಷ್ಯಂದಿರೇ ಕರೆಯುತ್ತಿದ್ದರಿಂದ ಆತ ಅಣ್ಣ ಎಂದೇ ಹೆಸರು ವಾಸಿಯಾದ. ಕೈ ಕುಲುಕುವ ಒಂದು ಹೊಸ ಪದ್ಧತಿಯನ್ನು ರೂಡಿಸಿಕೊಂಡ ಆತನ ಕೈ ಕುಲುಕಲು ಇಂದು ಶ್ವೇತ ಬಣ್ಣದವರು, ಉಚ್ಚ ಜಾತಿಯವರು ಸರದಿಯಲ್ಲಿ ನಿಂತರೂ ಆತನ ದರುಶನವೇ ಇನ್ನೂ ಸಿಗುತ್ತಿಲ್ಲ. ****************************************

ಅಧ್ಯಾತ್ಮಿಕ ತುಡಿತದೆಡೆಗೆ ಮನ Read Post »

ಕಥಾಗುಚ್ಛ

ಧನ್ಯ ಮಿಲನ

ಕಥೆ ಧನ್ಯ ಮಿಲನ ಸರೋಜಾ ಶ್ರೀಕಾಂತ್ ಅಮಾತಿ ರಾಧೆ,ರಾಧೆ….ಅದೇ ಧ್ವನಿ!…..ಹೌದು ಇದು ಅದೇ ಧ್ವನಿ,ಕೃಷ್ಣ ….ಕೃಷ್ಣ ! ಎಲ್ಲವಿತಿರುವೆ!? ಎದುರಿಗೊಮ್ಮೆ ಬರಬಾರದೆ? ಅದೆಷ್ಟೋ ವರುಷಗಳ ನಂತರ ಮತ್ತೆ ಕೃಷ್ಣ ಬಂದಿದ್ದ.ಅದೇ ತೇಜಸ್ಸು,ನಗುದುಂಬಿದ ಮುಖ ಕೃಷ್ಣನ ದರ್ಶನವಾಗುತ್ತಲೇ ನದಿ ದಂಡೆಯ ಆ ಉರಿಬಿಸಿಲೂ ಹಿತವೆನಿಸಿಸುತ್ತಿತ್ತು ರಾಧೆಗೆ.ಅಬ್ಬಾ! ,ಅಂತೂ ಬಂದೆಯಲ್ಲ ಸ್ವಾಮಿ ಇಷ್ಟು ವರ್ಷಗಳು ಬೇಕಾದವೆ ಈ ರಾಧೆಯನ್ನು ಕಾಣಲು? ಅಂದಾಗ ನೀನೆಂದೂ ನನ್ನ ಜೊತೆಯೇ ಇರುವೆ ರಾಧೆ ಏಕೆ ನಿನಗೆ ಹಾಗೇಣಿಸುವುದಿಲ್ಲವೇ?ಭೇಟಿ ವಿಳಂಬವಾಯಿತೆಂದು ನನ್ನನ್ನೇ ಮರೆತು ಬಿಟ್ಟೆಯಾ ಹೇಗೆ? ಇಲ್ಲ ಕೃಷ್ಣ ಇಲ್ಲ ನೀ ನನ್ನೊಳಗೇ ಇರುವೆ ನಿನ್ನನ್ನು ಹೃದಯದಲ್ಲಿ ಕೂಡಿ ಹಾಕುವ ಮೊದಲೇ ನೀ ಮಾತಿನಲ್ಲಿ ಸೋಲಿಸಿ ಬಿಡುವೆ ನಿನ್ನಿಂದ ಸೋಲಲೂ ಅದೃಷ್ಟವೇ ಬೇಕು ಅಲ್ಲವೇ ಕೃಷ್ಣ? ಇಷ್ಟು ಕಾಯಿಸುವುದು ನಿನಗೆ ಸರಿಯೇ ಕೃಷ್ಣ…. ನದಿ ದಂಡೆಯ ಮರಳಿನ ಪ್ರತಿ ಕಣ ಕಣಕ್ಕೂ ಗೊತ್ತು ನಾ ನಿನ್ನನೆಷ್ಟು ಹಂಬಲಿಸಿದೆ ಎಂದು ಹಸಿರು ಹಾಸಿದ ಗರಿಕೆ ಪಕ್ಕದಲ್ಲಿಯೇ ನಗುತ್ತ ಅರಳಿರುವ ಸುಂದರ ಹೂಗಳು,ಸೂಸುವ ಈ ತಂಗಾಳಿಗೆ,ಗಿಡ ,ಮರ ,ಬಳ್ಳಿ ಅಷ್ಟೇ ಏಕೆ ನದಿಯೊಳಗೀಜಾಡುವ ಬಣ್ಣಬಣ್ಣದ ಮೀನಿನ ಕಣ್ಣಿಗೂ ನನ್ನ ಪ್ರೀತಿ ಕಂಡಿರಬಹುದು ಕೃಷ್ಣ .ಅವನ್ನೊಮ್ಮೆ ನೋಡಿ ಬಿಡು ಸಾಕು ನನ್ನ ಮನಸ್ಸಿನ ತುಮುಲ,ವಿರಹ ಎಲ್ಲವೂ ನಿನಗೆ ಗೊತ್ತಾಗುವುದು ಕೃಷ್ಣ. ಇಷ್ಟೊಂದು ಚಂದದ ಮಧುರ ವಾಣಿ ಎಲ್ಲಿಂದ ಕಲಿತೆ ರಾಧೆ!? ಹೃದಯವಾಸಿಯಾದ ಶ್ರೀಕೃಷ್ಣನ ಸಹವಾಸದಿಂದಲೇ ಇದೆಲ್ಲವೂ ಸಂಭವಿಸಿರಬೇಕಷ್ಟೇ ನನ್ನದೆನಿಲ್ಲ ಕೃಷ್ಣ.ಹೇಗಿರುವೆ ರಾಧೆ ತುಸು ಕೆಲಸ,ಕಾರ್ಯದಲ್ಲಿ ಮಗ್ನಳಾದಂತೆ ಕಾಣುತ್ತದೆ. ಅದೆಂತದೂ ಮಹಾ ಕಾರ್ಯವಿಲ್ಲ ಬಿಡು ಕೃಷ್ಣ ನೆನೆದವರ ಮನದಲ್ಲಿ ಎಂಬಂತೆ ನೀ ಬಂದಿರುವೆ ಅಷ್ಟೇ ಸಾಕೆನಗೆ. ಕುಶಲೋಪಚಾರದ ಬಳಿಕ ಸರಿ ರಾಧೆ ನಾನಿನ್ನು ಬರಲೇ!?…. ಸಂಜೆ ಮತ್ತೆ ಇದೇ ನದಿ ದಂಡೆಯಲ್ಲಿ ಸಿಗುವೆ ಎಂದು ಹೊರಟೇ ಬಿಟ್ಟ ಕೃಷ್ಣ. ಹೀಗೆ ಬಂದು ಹಾಗೆ ಹೋಗುವುದೇ ಕೃಷ್ಣ ನಾನೊಪ್ಪುವುದಿಲ್ಲ ಒಂದರೆಗಳಿಗೆಯಾದರೂ ನೀ ಇರಲೇಬೇಕು ಎಂದು ಮುನಿಸಿಕೊಂಡ ರಾಧೆ ಹಿಂತಿರುಗಿ ನೋಡುವಷ್ಟರಲ್ಲಿ ಕೃಷ್ಣನೇ ಕಾಣುತ್ತಿಲ್ಲ.ಅತ್ತ,ಇತ್ತ ಸುತ್ತಲೂ ಹುಡುಕಿದ ರಾಧೆಗೆ ಏನಿದು ಇದೆಲ್ಲ ಬರೀ ನನ್ನ ಭ್ರಮೆಯೊ ಹೇಗೆ ಏನೊಂದು ತೋಚುತ್ತಿಲ್ಲವೆಂದು ಮತ್ತೆ ಸುತ್ತೆಲ್ಲವೂ ಕಣ್ಣಾಡಿಸುತ್ತ ಕೃಷ್ಣ ಕಾಣದಂತಾದಾಗ ಬೇಸರದಿಂದ ಮನೆಕಡೆ ಹೆಜ್ಜೆ ಹಾಕಿದಳು ರಾಧೆ. ಇದೇನಿದು ಆಶ್ಚರ್ಯ!…. ಹಿಂತಿರುಗಿ ನೋಡಿದಾಗ ಕಣ್ಮರೆಯಾಗಿದ್ದ ಕೃಷ್ಣ ಮನೆಯಂಗಳಕ್ಕೆಲ್ಲ ನೆರಳಾಗಿರೋ ಆ ಬೇವಿನ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕೊಳಲನಿಡಿದು ಕುಳಿತಿರುವ.ಕಣ್ಣುಗಳನ್ನುಜ್ಜುತ್ತ ಮತ್ತೆ,ಮತ್ತೇ ಆ ಕಡೆಗೆ ದೃಷ್ಟಿ ನೆಟ್ಟಾಗ ರಾಧೆಯ ಎದೆಬಡಿತ ಜೋರಾಯಿತು!.ಕೃಷ್ಣನ ಮರು ಆಗಮನ ಒಂದು ಕಡೆ ಸಂತಸದ ಸುಗ್ಗಿ,ಮತ್ತೊಂದೆಡೆ ಮೊದಲ ಘಟನೆಯಂತೆ ಇದೂ ಕೂಡ ನನ್ನ ಭ್ರಮೆಯೇ ಎಂಬ ಭಯದ ನಿಗಿ ಕೆಂಡ.ಸಂಜೆ ಬರುವೆನೆಂದ ಕೃಷ್ಣ   ಈಗಲೇ ಮರಳಿದ್ದು ಯಾಕೆ “ಏನಾದರೂ ಮರೆತಿರಬಹುದೇ!?….ಅಥವಾ ಬೇಕಂತಲೇ ನನ್ನ ಆಟ ಆಡಿಸುವ ಸಂಚೆ? ….ಅದಕ್ಕೆ ಅಲ್ಲವೆ ಅವನನ್ನು ಕಳ್ಳ ಅನ್ನುವುದು ಹೀಗೆ ಅದೆಷ್ಟೋ ಪ್ರಶ್ನೆಗಳ ಸರಮಾಲೆಯೇ ರಾಧೆಯ ಮನವನ್ನು ನಲುಗಿಸಿಬಿಟ್ಟವು.ತುಸು ಸಮಾಧಾನಿಸಿಕೊಂಡ ರಾಧೆ ಅಂತರ್ಯಾಮಿ ಶ್ಯಾಮನೆ ಆಪತ್ಬಾ0ಧವ ಅವನೇ ನನ್ನ ಜೊತೆಗಿರುವಾಗ ನನಗಿನ್ನೇತರ ಭಯ!?…. ಅಂದುಕೊಳ್ಳುತ್ತಲೇ ಕೃಷ್ಣನ ಬಳಿ ಹೋಗುತ್ತಾಳೆ. ಕೃಷ್ಣ  ತನ್ನ ಸನಿಹ ಬರುತ್ತಿರುವ ರಾಧೆಯನ್ನು ಕಂಡು ಮುಗುಳ್ನಗುತ್ತಾನೆ. ಉಯ್ಯಾಲೆಯಲ್ಲಿ ತನ್ನ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತ ಕೃಷ್ಣ ತಾನೇ ಮಾತಿಗಿಳಿಯುತ್ತಾನೆ.” ಎಷ್ಟೋ ವರುಷಗಳ ನಂತರದ ನಮ್ಮಿಬ್ಬರ ಈ ಸುಮಧುರ ಭೇಟಿಯನ್ನು ಅಷ್ಟು ಸುಲಭದಲ್ಲಿ ಮುಗಿಸುವೆನೇ ರಾಧೆ!?….ಅಂದಾಗ ಮೌನವಾಗಿಯೇ ಇದ್ದ ರಾಧೆ ಕೃಷ್ಣನ ಮುಖ ನೋಡುವುದರಲ್ಲೇ ತಲ್ಲೀನಳಾಗಿದ್ದಾಳೆ.”ಏ… ರಾಧೆ ಅಂತ ಜೋರಾಗಿ ಕೂಗುತ್ತ ಅವನು ಕೈ ಸ್ಪರ್ಶಿಸಿದಾಗ ಪುಳಕಿತಳಾದ ರಾಧೆ ವಾಸ್ತವಕ್ಕೆ ಮರಳುತ್ತಾಳೆ.ಬೀಸೋ ತಂಗಾಳಿಗೆ ಬೇವಿನ ಮರದ ಪುಟ್ಟ,ಪುಟ್ಟ ತಿಳಿ ಹಳದಿ ಬಣ್ಣದ ಪುಷ್ಪಗಳು ಆಗೊಮ್ಮೆ,ಈಗೊಮ್ಮೆ ಸುರಿಯೋ ತುಂತುರು ಮಳೆ ಹನಿಯ ರೀತಿ ಕೃಷ್ಣನ ಕೆನ್ನೆಯನ್ನು ಮೃದುವಾಗಿ ತಟ್ಟುತ್ತಿವೆ.ಆಗಲೇ ಮತ್ತೊಂದು ವಸಂತ ಋತು ಬಂದಾಯಿತೇ!? ಅಷ್ಟು ಬೇಗನೆ ಬೇವಿನ ಮರ ಚಿಗುರಿ,ಹಸಿರಾಗಿ ಮತ್ತೇ ಹೂ ಕೂಡ ಬಿಟ್ಟಿತೇ!?…. ಇದಕ್ಕೆಲ್ಲ ಕಾರಣ ನನ್ನ ಕೃಷ್ಣನ ಆಗಮನವೇ ಅಥವಾ ನಾನೇ ಈ ಮೊದಲು ಅದನ್ನೆಲ್ಲ ಗಮನಿಸಿರಲಿಲ್ಲವೇ!?…… ಅದೇಷ್ಟೋತ್ತು ಮೌನವಹಿಸುವೆ ರಾಧೆ ಹಾಗೆಯೇ ಸಲುಗೆಯಿಂದ ಮತ್ತೊಮ್ಮೆ ಕೃಷ್ಣನೆಂದು ಕರೆಯಬಾರದೆ? ಎಂಬ ಕೃಷ್ಣನ ಅಂತರಾಳದ ಮಾತುಗಳನ್ನು ರಾಧೆಯ ಅಂತರಂಗ ಆಲಿಸುತ್ತಲೇ ಕೃಷ್ಣ…. ಅಂತ ಕೂಗಿದಳು ರಾಧೆ. ಈಗ ಬಾಹ್ಯ ಪ್ರಪಂಚದ ಮತ್ತಾವ ಚಿಂತೆಗಳು ಅವಳಲ್ಲಿರಲಿಲ್ಲ ಹೃನ್ಮನದೊಳಗೆಲ್ಲ ಕೃಷ್ಣನೊಬ್ಬನೇ…. ಹೌದು ಕೃಷ್ಣ, ಮತ್ತಾವ ಸಂಬಂಧದಲ್ಲೂ ಇರದ,ಅಕ್ಷರಕ್ಕೂ ನಿಲುಕದ ,ಪದಗಳಿಗೂ ಸಿಗದ ಅನನ್ಯ ಅನುಬಂಧ ನಮ್ಮದು ಎಂದು ಕೃಷ್ಣನ ಭುಜಕ್ಕೊರಗುತ್ತಾಳೆ  ರಾಧೆ….!. ಹೌದು ರಾಧೆ ನಿನ್ನ ಮಾತು ಅಕ್ಷರಶಃ ನಿಜ!…. ಸ್ನೇಹ,ಪ್ರೇಮ,ಪ್ರೀತಿ ಅವೆಲ್ಲವುಗಳನ್ನು ಮೀರಿದ ನಮ್ಮಿ ಅನುಬಂಧಕ್ಕೆ ಅದಾವುದೇ ಹೆಸರಿಲ್ಲ.ಉಸಿರಿಗೂ ಮತ್ತೊಂದು ಹೆಸರು ಬೇಕೇ ರಾಧೆ!? ಅಂದಿಗೂ,ಇಂದಿಗೂ ಮುಂದೆಯೂ ನಮ್ಮಿ ಮೈತ್ರಿಯು ಚಿರಂಜೀವಿ. ದೂರದಲ್ಲಿದ್ದಷ್ಟಕ್ಕಿಂತ ದ್ವಿಗುಣದ ಸನಿಹ ಅಂದರೂ ತಪ್ಪಿಲ್ಲ ರಾಧೆ.ಮೆಲ್ಲನೆ ಕಣ್ತೆರೆದ ರಾಧೆಗೆ ಇದಾವುದನ್ನು ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ, ಯುಕ್ತಿಯೂ ಬರುತ್ತಿಲ್ಲ. ಮತ್ತೇನೋ ನೆನಪಾದವಳಂತೆ ಒಂದೇ ಒಂದು ಕ್ಷಣ ಕೃಷ್ಣ, ಹೀಗೋಗಿ ಹಾಗೆಯೇ ಬರುವೆ ಎಂದು ಒಂದೇ ಉಸಿರಿನಲ್ಲಿ ಓಡುತ್ತಾ ದೇವರ ಮನೆಯಲ್ಲಿ ಜೋಪಾನವಾಗಿಟ್ಟ ಕೃಷ್ಣನ ಆ ಬಂಗಾರದ ಕೊಳಲನ್ನು ರೇಷ್ಮೆಯ ವಸ್ರ್ತದ ಸಮೇತ ತಂದು ಅವನೆದುರಿಗೆ ಹಿಡಿದು ಕೊಳಲು ನುಡಿಸಲೇಬೇಕೆಂದು ಹಠ ಹಿಡಿಯುತ್ತಾಳೆ.ರಾಧೆಯ ಮುಗ್ಧ ಹೃದಯಕ್ಕೆ ಸೋತ ಕೃಷ್ಣ ಆ ಕೊಳಲನ್ನೆತ್ತಿಕೊಂಡು ರಾಧೆಯನ್ನು ನೆನೆಯುತ್ತ ನಾದ ಹೊಮ್ಮಿಸುವಾಗ  ಗೋವುಗಳೆಲ್ಲ ಎಷ್ಟೋ ವರುಷದ ನಂತರ ತೇಲಿ ಬಂದ  ಸುಂದರ ಕೊಳಲ ನಾದಕ್ಕೆ ತಲೆದೂಗುತ್ತ ಕೊರಳಲ್ಲಿನ ಗಂಟೆಯ ಸಪ್ಪಳ ಮಾಡುತ್ತಿವೆ.ನವಿಲೊಂದು ನಾಟ್ಯವಾಡುತ್ತ ಅವರತ್ತ ಬರುತ್ತದೆ.ಇಷ್ಟು ವರ್ಷದ ತಪಸ್ಸು ಈಗ ಫಲ ಕೊಟ್ಟಿರುವಂತೆ ರಾಧೆಯ ಸಂತಸಕ್ಕೆ ಪಾರವೇ ಇಲ್ಲ.ತನಗರಿವಿಲ್ಲದಂತೆಯೇ ರಾಧೆ ನೃತ್ಯ ಮಾಡುತ್ತ ಕೃಷ್ಣನಿಗೆ ವಂದಿಸುತ್ತಾಳೆ…. ಅಭಿನಂದಿಸುತ್ತಾಳೆ.ಬಿಸಿಲ ತಾಪಕ್ಕೆ  ಸುರಿದ ಕೃಷ್ಣನ ಮುಖದ ಮೇಲಿನ ಬೆವರು ಹನಿಯನ್ನು ತನ್ನ ಚಿತ್ತಾರದ ಸೀರೆ ಸೆರಗಿನಿಂದ ಮೃದುವಾಗಿ ಒರೆಸುತ್ತ ಆಯಾಸವಾಯಿತೆ ಕೃಷ್ಣ?… ನೀ ಬಂದ ಖುಶಿಯಲ್ಲಿ  ನನ್ನನ್ನೇ ನಾ ಮರೆತೆ ನಿನಗೆ ಹಸಿವಾಗಿರಬಹುದು ತಾಳು ಎಂದು ಅಡುಗೆ ಕೋಣೆಯತ್ತ ನಡೆಯುತ್ತಾಳೆ. ಅದೆಂಥ ಅನನ್ಯ ಭಕ್ತಿ ನನ್ನಲ್ಲಿವಳಿಗೆ…. ಶ್ಯಾಮನೆಂದು ಧ್ಯಾನಿಸೋ ಮೊದಲೇ ಸ್ಮರಿಸಲಿ ರಾಧೆಯನ್ನೇ ಅನ್ನೋ ವರವನ್ನು ಪ್ರಧಾನಿಸುವಾಗಲೇ ಬೆಳ್ಳಿ ಬಟ್ಟಲಲ್ಲಿ ಬೆಣ್ಣೆ ಹಿಡಿದುಕೊಂಡು ಬಂದ ರಾಧೆ ತಗೋ ಕೃಷ್ಣ ನಿನಗಿಷ್ಟವಾದದ್ದನ್ನೇ ತಂದಿರುವೆ ಎನ್ನುತ್ತಾ ತಾನೇ ಕೈತುತ್ತು ಕೊಡುವಳು.ಬೇರಾವ ಮೋಹಪಾಶವಿರದ ಶುದ್ಧ ಪ್ರೀತಿ ನಿನ್ನದು ರಾಧೆ ಅದೇನು ವರ ಬೇಕು ಕೇಳು ಅಂದಾಗ ಏನು ವರ ಕೇಳಲಿ ಕೃಷ್ಣ!?…. ನನ್ನೆಲ್ಲ ಆಗು ಹೋಗು,ಮೂಲಗಳಿಗೆ ಸೃಷ್ಟಿ, ಕಾರಣಕರ್ತ ನೀನೇ ಇರುವಾಗ ನನ್ನ ಬೇಕು ಬೇಡಗಳೆಲ್ಲ ನಿನಗೇ ಗೊತ್ತು ಹೀಗಿದ್ದೂ ನನ್ನನ್ನು ಪರೀಕ್ಷಿಸುವ ಹುನ್ನಾರವೇ!?….. ಅಥವಾ ಇಷ್ಟು ವರುಷದಲ್ಲಿ ರಾಧೆ ಬದಲಾಗಿರುವಳೆಂಬ ಭಾವನೆಯೇ!?…. ಇಲ್ಲ ಕೃಷ್ಣ ಇಲ್ಲ ನೀನೆಲ್ಲವನ್ನೂ ಅರಿತಿರುವೆ, ಅರಿಯದವನಂತೇಕೆ ನಟಿಸುವೆ!? ಕಣ್ಣೊಳಗಿನ ದೃಷ್ಟಿಗೇಕೆ ವರ್ಣನೆ…. * ಸೃಷ್ಟಿಸಿದ ಬೊಂಬೆಗಳಲ್ಲೆಲ್ಲ ನಿನ್ನದೇ ಜೀವಂತಿಕೆ ನನ್ನೊಳಗಿನ ನಿನಗಾವ ಆರಾಧನೆ ಪೂಜಿಸುವ ಪದಗಳೆಲ್ಲ ನೀನಿತ್ತ ಕಾಣಿಕೆ! ಸದಾ ನಿನ್ನ ಹೃದಯದಲ್ಲಿ ವಾಸಮಾಡಿಕೊ ಎನ್ನ.ಅದರ ಹೊರತು ಮತ್ತಾವ ವರವು ಬೇಕಿಲ್ಲ ಅದರ ಅಗತ್ಯವೂ ನನಗಿಲ್ಲ ಕೃಷ್ಣ ಅಂದಾಗ .ತಥಾಸ್ತು ಅಂತಾನೆ ಕೃಷ್ಣ.ಅಷ್ಟೊತ್ತಿಗಾಗಲೇ ಸೂರ್ಯನು ಪಡುವಣ ದಿಕ್ಕಿನೆಡೆಗೆ ಧಾವಿಸುತ್ತಿದ್ದ.ಅದು ಅವನಿಗೂ ವಿರಮಿಸುವ ಹೊತ್ತಲ್ಲವೇ!?…. ಹಕ್ಕಿಗಳೆಲ್ಲ ಬಾನಂಗಳದಿ ನೇಸರನ ವಿದಾಯ ಸಲ್ಲದು ಎಂಬಂತೆ ಏನೋ ಕಿಚಿ ಪಿಚಿ ಅನ್ನುತ್ತಿದ್ದವು. ಹೇ….! ಒಲವೇ ನಾನಿನ್ನು ಹೋಗಿ ಬರಲೇ!? ಅನ್ನೋ ಕೃಷ್ಣನೆದೆಯ ಸದ್ದು ರಾಧೆಯ ಹೃದಯಕ್ಕೂ ಕೇಳಿಸುತ್ತಿತ್ತು.ಮನವದೆಷ್ಟು ಬೇಡವೆಂದು ಕೂಗಿದರೂ ಕರ್ತವ್ಯದ ಕರೆ ದೇವರಿಗೂ ಉಂಟು ರಾಧೆ.ಅದಕ್ಕಾಗಿ ಮರಳಲೇಬೇಕು .”ಇಂದು ನಾ ನಿನ್ನೊಂದಿಗೆ ಕಳೆದ ಈ ಪ್ರತಿ ಕ್ಷಣಗಳೇ ನನಗೆ ಸ್ಫೂರ್ತಿ ಕೃಷ್ಣ” ನಿನ್ನ ಇಂದಿನ ಈ  ಭೇಟಿಯದು ನಾ ನಿರೀಕ್ಷಿಸದ,ಅವರ್ಣನೀಯ ಸಂಭ್ರಮದ ಸಂಗತಿ. ಈ ಮಧುರ ನೆನಪುಗಳೊಂದಿಗೆಯೇ ನಾನು ಜೀವಿಸುತ್ತೇನೆ ಅದು ಈ ಜನ್ಮದಲ್ಲಷ್ಟೇ ಅಲ್ಲ ನಾ ಜನಿಸೋ ಪ್ರತಿಜನ್ಮದಲ್ಲೂ ನಮ್ಮ ಈ ಪವಿತ್ರ ಅನುಬಂಧ ಹೀಗೆ ಇರುವುದು.ಹೋಗಿ ಬಾ ಕೃಷ್ಣ….. ಹೋಗಿ ಬಾ….ಎನ್ನುತ್ತಲೇ ಕೃಷ್ಣ ಅವಳಾತ್ಮದೊಳಗೆ ವಿಲೀನವಾದ…! *********************************************

ಧನ್ಯ ಮಿಲನ Read Post »

ಕಥಾಗುಚ್ಛ

ಬಂದು ಹೋಗುವ ಮಳೆಯಲ್ಲಿ

ಕಥೆ ಬಂದು ಹೋಗುವ ಮಳೆಯಲ್ಲಿ ತೆಲುಗಿನಲ್ಲಿ: ಅಫ್ಸರ್ ಕನ್ನಡಕ್ಕೆ : ಚಂದಕಚರ್ಲ ರಮೇಶ ಬಾಬು “ಈ ಶಿಥಿಲಗಳ ಬಣ್ಣಗಳು ನಿನ್ನ ಹಿಡಿತಕ್ಕೆ ತುಂಬಾ ಚೆನ್ನಾಗಿ ಬಂದಿವೆ. ಈ ಬಣ್ಣಾನ್ನ ಅಷ್ಟು ಖಚಿತವಾಗಿ ನಿನ್ನ ಕಾನ್ವಾಸ್ ಮೇಲೆ ಅದ್ಹೇಗೆ ತರ್ತೀಯೋ ಮಾರಾಯಾ ! ಏನ್ ಮಿಕ್ಸ್ ಮಾಡ್ತಿಯೋ ಗೊತ್ತಿಲ್ಲಾಗ್ಲೀ ! ಪ್ರತಿ ಚಿತ್ರದಲ್ಲೂ ಅವಕ್ಕೆ ಭಿನ್ನವಾದ ಮೈ ಬಣ್ಣ ಹೊಂದಿರುವ ಹೆಣ್ಣುಗಳು…. ಒಂದು ಮೋಡ…. ನನಗೆ ಗೊತ್ತಿದ್ದ ಹಾಗೆ ಹತ್ತು ವರ್ಷದಿಂದ ಇದೇ ಅಲ್ವಾ ನಿನ್ನ ಕಾನ್ವಾಸ್…..!” ಕಾನ್ವಾಸಿನ ಕಡೆಗೆ ಮತ್ತೊಂದು ಸಲ ತೀಕ್ಷ್ಣವಾಗಿ ನೋಡ್ತಾ ಅಂದಳು ಆವಳು. ಆ ಹತ್ತು ವರ್ಷದ ಟೈಮ್ ಲೈನ್ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು. ಹತ್ತು ವರ್ಷದ ಹಿಂದೇ ಅಲ್ವಾ, ಅಪ್ಪ ತೀರಿಹೋದ ಮೇಲೆ ಆ ಊರಿನಲ್ಲಿ ಇನ್ನು ತಮಗೆ ಏನೂ ಇಲ್ಲ ಅಂತ ಅನಿಸಿದ್ದು. ನಿರ್ವಾಹ ವಿಲ್ಲದೆ ಕೆಲಸದ ನೆವ ಮಾಡಿಕೊಂಡು ಹೈದರಾಬಾದಿಗೆ ತನ್ನನ್ನು ಅಮ್ಮನ ಜೊತೆಗೆ ಕರೆಸಿದ್ದಳು ಅವಳು. ಈ ನಗರವನ್ನು ಪ್ರೀತಿಸಬೇಕೆಂದು ತುಂಬಾ ಸಲ ಅಂದುಕೊಂಡಿದ್ದ. ಹಾಗೆ ಅಂದುಕೊಂಡಿದ್ದ ಪ್ರತಿ ಸರ್ತಿಯೂ ಖಂಡಿತವಾಗಿ ದ್ವೇಷಿಸಲು ಯಾವುದೋ ಒಂದು ಕಾರಣವನ್ನು ನಾಟಕೀಯವಾಗಿ ಸೃಷ್ಟಿಸುತ್ತಿತ್ತು ಈ ನಗರ. ಇನ್ನೇನು ಸ್ವಲ್ಪ ಸೆಟ್ಲ್ ಆಗುತ್ತಿದ್ದಾನೆ ಎನ್ನುವ ಹೊತ್ತಿಗೆ ಅಮ್ಮನನ್ನು ನುಂಗಿಬಿಟ್ಟಿತ್ತು ಈ ನಗರ. ತನ್ನ ಅಶಕ್ತತೆಯನ್ನು ಈ ನಗರಕ್ಕೆ ಆಪಾದಿಸುತ್ತಿದ್ದೇನಾ ? ಏನೋ ! ಕಾರಣಗಳನ್ನು ಬಗೆದು ತೆಗೆಯಲಿಲ್ಲ ಎಂದೂ. ಹಿಂದೆಗಿಂತಲೂ ಬದುಕಿನ ಬಗ್ಗೆಯ ಹೆದರಿಕೆ ಜಾಸ್ತಿಯಾದದ್ದಂತೂ ನಿಜ. ತನ್ನ ಅಶಕ್ತತೆ ಸಹ ಸತ್ಯವೇ. ತನಗೆ ಗೊತ್ತಿರುವ ನಿಜ ಅದು. ಮುಂದಕ್ಕೆ ಒಂದು ಹೆಜ್ಜೆ ಹಾಕಬೇನಿಸಿದರೂ ಇಲ್ಲಿಯವರೆಗೂ ಸಲೀಸಾಗಿ ನಡೆದಿದ್ದ ಜೀವನ ಚೆಲ್ಲಾಪಿಲ್ಲಿಯಾಗುತ್ತದೇನೋ ಎನ್ನುವ ದಿಗಿಲು. ಅವಳ ಜೊತೆಗಿನ ಪ್ರೀತಿ, ಮದುವೆ ಸಹ ಅಷ್ಟೇ ! ಕೆಲವು ಸೋತ ಹೆಜ್ಜೆಗಳು. ಕೆಲಸದ ಮೇಲೂ ಜಾಸ್ತಿ ನಂಬಿಕೆ ಇಲ್ಲ. ಮುಂಬರುವ ಘಳಿಗೆಗಳ ಬಗ್ಗೆ ಅನಿಶ್ಚತತೆ. ಈ ಕ್ಷಣದಲ್ಲಿ ಬದುಕಲಾರದ ಅಸ್ಥಿರತೆ. “ ಯಾಕಿಷ್ಟು ಹೆದರಿಕೆ ನಿನಗೆ ಪ್ರತಿಯೊಂದಕ್ಕೂ ? ಊರಲ್ಲಿರುವಾಗ ಇಷ್ಟು ಹೆದರಿಕೆ ಇರಲಿಲ್ಲ ಅಲ್ಲ ನಿನಗೆ ?” ಅಂತ ಕೊರಗುವ ಅಮ್ಮನಿಗೆ ನನ್ನಿಂದ ಉತ್ತರ ಸಿಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಗೊತ್ತಂತ ಕಾಣತ್ತೆ, ನನ್ನೊಳಗಿನ ನಾನು ಏನು ಅಂತ. “ಈ ಶಿಥಿಲಗಳಡಿ ನೀನೇನೋ ಅಡಗಿಸ್ತಾ ಇದೀಯಾ” ಅಲ್ಲಿಗೆ ಬಹುಶಃ ನಾಲನೇ ಸಲ ನನ್ನ ಆ ಕಾನ್ವಾಸ್ ನಲ್ಲಿ ಇಣುಕಿದ್ದಳು ಅವಳು. ಕಾನ್ವಾಸಿಗೆ ಎಷ್ಟು ದೂರ ತಾನು ನಿಂತರೆ ಅದರಲ್ಲಿಯ ಚಿತ್ರ ಎಷ್ಟು ತನಗೆ ಹತ್ತಿರವಾಗಿ ಕಾಣುತ್ತದೋ ಅವಳಿಗೆ ಗೊತ್ತು. ಹಾಗೆ ನಿಂತಾಗ ಅವಳು ಚಿತ್ರದ ಒಂದು ಭಾಗವಾಗಿ ಹೋಗಿದ್ದಾಳೆ ಅನಿಸುತ್ತೆ. ಅದರಲ್ಲಿ ತಾನು ಬರೆಯಲು ಬಿಟ್ಟುಹೋದ ನೇರಳೆ ಬಣ್ಣದ ಯಾವುದೋ ಹೂವು ಆಗಿಂದಾಗಲೇ ಕಾನ್ವಾಸ್ ಮೇಲೆ ಅರಳಿದ ಅನುಭವವಾಗುತ್ತೆ. “ ಉತ್ತರ ಏನು ಅಂತಾ ಯೋಚನೇನಾ ? ಅಥವಾ ಇನ್ನೊಂದು ಪೆಯಿಂಟಿಂಗ್ ಬಗ್ಗೆ ಆಗಲೇ ಕಲ್ಪನೆ ಶುರೂನಾ?” ಹಾಗೇ ಒಂದು ನಗೆ ನಕ್ಕು ಸುಮ್ಮನಾಗಲು ಎಣಸಿದ ಅವನು. ಅವಳು ಒಪ್ಪುವುದಿಲ್ಲ. “ ಹೌದು. ನಿನ್ನಷ್ಟು ಪರೀಕ್ಷಿಸಿ ಯಾರೂ ನೋಡುವುದಿಲ್ಲ. ಅದಕ್ಕೆ ನಿನಗೇ ಚೆನ್ನಾಗಿ ಗೊತ್ತು. “ “ ನಿಜ ಹೇಳ್ಬೇಕಾದ್ರೆ ನನಗೂ ಏನೂ ಗೊತ್ತಿಲ್ಲ. ನೋಡಿದ್ದು ಹೇಳ್ತಾ ಇದೀನಿ ಅಷ್ಟೇ. ಆದರೆ ನಿನ್ನ ಪ್ರತಿ ಪೆಯಿಂಟಿಂಗ್ ನ ಹಿಂದೆ ನನಗೆ ಕಾಣದೇ ಉಳಿದದ್ದು ತುಂಬಾ ಇದೆ ಅನಿಸತ್ತೆ. ಖಂಡಿತ ಇರಲಿಕ್ಕೂ ಸಾಕು “ “ ಇರುತ್ತದೇನೋ ಗೊತ್ತಿಲ್ಲ ! ನಂಗಾದರೂ ಏನು ಗೊತ್ತು . ಚಿತ್ರ ಬರದಾದಮೇಲೆ ನನ್ನ ಕೆಲಸ ಮುಗೀತು “ “ ನೀನು ಮತ್ತೊಂದು ಭಾಷೆಯಲ್ಲಿ ಅರ್ಥೈಸುವವರೆಗೂ ನನಗೆ ನಿನ್ನ ಬಣ್ಣ, ರೇಖೆಗಳು ಅರ್ಥವಾಗುವುದಿಲ್ಲ. ಈ ಚಿತ್ರನೋಡು ! ಇಲ್ಲಿಗೆ ಹತ್ತು ಸಲ ಹತ್ತು ಕಡೆಯಿಂದ ನೋಡಿದೀನಿ. ಆದರೆ ಅದರಲ್ಲಿ ನೀನೇನು ಅಂತ ತಿಳಿತಾನೇ ಇಲ್ಲ. “ “ ಬಣ್ನ, ರೇಖೆಗಳೇ ಅದರ ಭಾಷೆ. ಅದರ ಭಾಷೆಯಲ್ಲಿರುವ ಆ ಚಿತ್ರ ನಿನಗೆ ಅರ್ಥವಾಗಲಿಲ್ಲ ಅಂದರೆ ಅದು ಸೋತಹಾಗೆ . ಆದರೂ ಒಂದು ಮಾತು ಹೇಳು. ನಿನಗೆ ನಾನು ಯಾಕೆ ಸಿಗಬೇಕು ?” “ ಏನೋ ಗೊತ್ತಿಲ್ಲ. ಸಿಕ್ಕಿದಷ್ಟು ಸಿಕ್ಕಲಿ ಅಂತ ಕಳೆದ ಹತ್ತು ವರ್ಷದಿಂದ ಅಂದುಕೊಳ್ತಾ ಇದೀನಿ. ಮೊದಲನೆ ಸಲ ನಿನ್ನ ಪೆಯಿಂಟಿಂಗ್ ಯಾವಾಗ ನೋಡಿದೆ ? ಆಗ ನಾನು ಹೇಗಿದ್ದೆ ? ಈಗ ಹೇಗಾಗಿದೀನಿ ? ಅಂತ ಆಲೋಚಿಸಿದರೆ ನಾನು ಅಂದು ನಾವು ಮೊದಲನೆ ಸಲ ಸಿಕ್ಕಾಗ ಹೇಗಿದ್ದೆನೋ ಈಗ್ಲೂ ಹಾಗೇ ಇದೀನಿ. ನಿನ್ನ ವಿಷಯ ಹಾಗಲ್ಲ. ನೀನು ಗೊತ್ತಾಗದೇ, ಗೊತ್ತಾದರೂ ಗೊತ್ತಾಗಿದೀಯ ಎನ್ನುವ ನಂಬಿಕೆ ಸಿಗದೇ….. “ ಹೀಗೆ ಸಮಯದ ಮೈಲುಗಲ್ಲುಗಳನ್ನು ನೆನಪಿಡಲಿಕ್ಕೆ ಹೇಗೆ ಸಾಧ್ಯ ಇವಳಿಗೆ ! ತನಗದು ಇಷ್ಟವೇ ಇಲ್ಲ. ನೆನಪುಗಳೆಂದರೆ ತುಂಬಾ ಭಯ. “ ಹೇಳಕ್ಕೆ ಆಗಲ್ಲ. “ ಒಮ್ಮೊಮ್ಮೆ ಅವಳು ಅಂತಾಳೆ. “ ನೀನು ಫುಲ್ ಟೈಮ್ ಆರ್ಟಿಸ್ಟ್ ಆಗಬೇಕು. ಈ ಪತ್ರಿಕೆಯ ಕೆಲಸ, ಮಧ್ಯಾಹ್ನದ ನಿದ್ದೆಯಿಂದ ಎದ್ದು ತಯಾರಾಗಿ ಹೋಗೋದು, ಅಲ್ಲೇನೋ ಗೀಚೋದು, ಅದು ನಿನ್ನ ಜೀವನ ಅಲ್ಲ ಅಂತ ಅನಿಸುತ್ತೆ. ಅದರ ಜೊತೆಗೆ ದಿನಾ ಇರೋ ಕೆಲಸದ ಅಭದ್ರತೆ, ಅವರಿಗೆ ನಿನ್ನ ಕೆಲಸ ಹಿಡಿಸೋದು, ಇಲ್ಲದ್ದು…” “ ಅದು ಮಾತ್ರ ಹೇಳ್ಬೇಡ. ಯಾರೂ ಇದನ್ನ ಫುಲ್ ಟೈಂ ಮಾಡೋಷ್ಟು ಭದ್ರತೆ ಇಲ್ಲ ಇಲ್ಲಿ. ಉಳಿದ ಕೊಸರೇ ಸಾಕು. “ ಕೆಲಸ ಅವಳಿಗಿಂತ ಹೆಚ್ಚೇನಲ್ಲ. ಆದರೆ, ಎಷ್ಟೋ ಇಷ್ಟವಾದ ತನ್ನನ್ನು ಬಿಟ್ಟುಕೊಂಡ ಹಾಗೆ, ಎಳ್ಳಷ್ಟೂ ಇಷ್ಟವಾಗದ ಕೆಲಸವನ್ನು ಆಕೆ ಬಿಡುವುದಿಲ್ಲ. ಅವಳು ಬಂದಹಾಗೆ ಬಂದು ಹೋಗಿಬಿಟ್ಟಳು. ಐದಾರು ವರ್ಷಗಳ ಪ್ರೀತಿ…. ಎರಡು ವರ್ಷಗಳ ಮದುವೆ, ನಂತರದ ಅಗಲಿಕೆ… ಈ ಎರಡು ವರ್ಷಗಳಲ್ಲಿ  ಅದೆಷ್ಟು ಬೆಳವಣಿಗೆಗಳು….. ಯಾವ ಆತ್ರದಲ್ಲೋ ಅವಳು ಗರ್ಭಿಣಿ ಆಗಬಹುದೇನೋ ಎನ್ನುವ ಮತ್ತೊಂದು ಸಂದಿಗ್ಧ… ಅಗಲಿಕೆಗೆ ಅದೊಂದೇ ಕಾರಣವಲ್ಲ ಅಂತ ಇಬ್ಬರಿಗೂ ಗೊತ್ತಿತ್ತು. ಮುಂಚಿತವಾಗಿ ನಿರ್ಧರಿಸಿದ ಹಾಗೆ ಇಬ್ಬರೂ ಮತ್ತೆ ಸಿಕ್ಕಾಗ ಮದುವೆ, ಮಕ್ಕಳ ಬಗ್ಗೆ ಮಾತನಾಡಿಕೊಳ್ಳಬಾರದು. ತಮ್ಮಿಬ್ಬರ ಜೀವನಗಳು ಕಳಚಿದ ಗಾಳಿಪಟಗಳ ತರ ಇರಬೇಕೆಂದೇನೂ ಇಲ್ಲ ಅಂತ ಮನದಟ್ಟಾದಾಗ, ಆ ವಿಷಯಗಳು ಹತ್ತಿರಬರಬೇಕಾಗಿಲ್ಲ. ಸ್ವಲ್ಪ ಹೊತ್ತು ಹಾಯಾಗಿ ಕಳೆಯಬೇಕು. ಮತ್ತೆ ಆ ಹಾಯಾದ ಸಮಯಕ್ಕಾಗಿ ಕಾಯಬೇಕು. ಅಷ್ಟೇ ! ಈಗಿನವರೆಗೆ ಹಾಗೇ ನಡೆದು ಬಂದಿದೆ. ಅವಳಿರುವ ಆ ಸ್ವಲ್ಪ ಹೊತ್ತು ಹಾಯಾಗಿರುತ್ತದೆ. ಅವಳು ಹೋದ ಮೇಲೆ ಸಹ ಅವಳ ನಗೆ ಆ ರೂಮಿನಲ್ಲಿ ಹರಡಿರುವ ಹಾಗೆ ಅನಿಸುತ್ತೆ. ಅದು ಬೇಕು ತನಗೆ ! ಬಹುಶಃ ಅವಳಿಗೂ ಬೇಕೆನೋ ! ಅದಕ್ಕೆ, ತಾನು ಇಷ್ಟಪಟ್ಟು ಮಾಡಿಕೊಂಡ ಎರಡನೆಯ ಮದುವೆಯ ನಂತರವೂ ತನ್ನ ಸ್ನೇಹವನ್ನು ಬಿಟ್ಟುಕೊಂಡಿಲ್ಲ. ಅವಳು ತನ್ನ ಸ್ನೇಹವನ್ನು ಬಿಟ್ಟಿಕೊಂಡಿದ್ದರೆ….. ಕೆಲ ಆಲೋಚನೆಗಳನ್ನು ತಡಗಟ್ಟುವುದು ಅಸಾಧ್ಯ. “ ಹೋಗ್ಬೇಡ “ ಅಂತ ಹೇಳಬೇಕು ಅನಿಸಿದರೂ ಇಲ್ಲಿಯವರೆಗೆ ತಾನು ಯಾರನ್ನೂ ಹಾಗೆ ನಿಲ್ಲಿಸಿರಲಿಲ್ಲ, ಬರುವವರನ್ನಾಗಲಿ, ಹೋಗುವವರನ್ನಾಗಲಿ. ಅವಳದೆಷ್ಟು ಸಲ ಬಂದಿದ್ದಾಳೋ, ಹೋಗಿದ್ದಾಳೋ ! ಸತ್ಯ ಹೇಳಬೇಕಾದರೆ, ಖಚಿತವಾದ ತನ್ನ ಮೌನವೇ ಅವಳು ಬಂದಾಗಲೆಲ್ಲಾ ಹೋಗಲಿಕ್ಕೆ ಕಾರಣವೇನೋ ! ೨ ತಾನು ಯಾಕೆ ಹೀಗೆ ? ಇಷ್ಟು ನೀರವತೆ ತನಗೇ ಕೆಲಸಲ ಹೆದರಿಕೆಯಾಗುತ್ತೆ.  ಅವಳನ್ನು ಪ್ರಥಮ ಬಾರಿಗೆ ಭೇಟಿಯಾದಾಗ ಅವಳಿಂದ ತಾನು ಏನು ಬಯಸಿದ್ದನೋ ನೆನಪಿಲ್ಲ. ಅವಳು ಹೇಳಿದ ಹಾಗೆ “ ನಿತ್ಯ ಹೆದರಿಕೆಗಳು”. ನಿಜ. ಆದರೆ ಈ ನಗರಕ್ಕೆ ಬರುವ ಮುನ್ನವೇ, ಈ ಕೆಲಸಕ್ಕೆ ಸೇರುವ ಮುನ್ನವೇ ಈ ಹೆದರಿಕೆಗಳು ತನ್ನಲ್ಲಿದ್ದವೇನೋ ! ಅವು ಹೈದರಾಬಾದಿಗೆ ಬಂದಮೇಲೆ ಮತ್ತಷ್ಟು ಜಾಸ್ತಿಯಾಗಿವೆ. ಮುಖ್ಯವಾಗಿ ಮನುಷ್ಯರು, ಗೆಳೆತನ, ಪರಿಚಯಗಳ ಅಪನಂಬಿಕೆಗಳಲ್ಲಿ ಬೆಳೆದ ಹೆದರಿಕೆ. ಇವೆಲ್ಲವನ್ನೂ ಮೀರಿ ತನಗೆ ತಾನೇ ಸೃಷ್ಟಿಸಿಕೊಂಡ ಭಯವಲಯ. ಒಮ್ಮೆ ದಿನಚರಿಯಲ್ಲಿ ತನ ಭಯಗಳ ಪಟ್ಟಿ ಮಾಡಿದ್ದ. ಮೊದಲನೆಯದು, ಈ ಜೀವನ ತನಗೆ ಏನೂ ಕೊಡುವುದಿಲ್ಲವೆಂದು. ಕೊಟ್ಟಹಾಗೆ ಮಾಡಿ ತಂದೆಯನ್ನು ಕಸಿದಿತ್ತು. ಇನ್ನೇನು ವಾಸಿಯಾಗಿದೆ, ಹೆದರಿಕೆ ಇಲ್ಲ ಎನ್ನುವ ಭರವಸೆಯಲ್ಲಿ ಮನೆಗೆ ತಂದ ಮೂರನೆಯ ದಿನವೇ ಅಪ್ಪ ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ಹಾಗೇನೇ, ಪ್ರಾಣಕ್ಕಿಂತ ಹೆಚ್ಚಾದ ಅಮ್ಮ ಸಹ…. ಕಡೇ ಕ್ಷಣದವರೆಗೂ ಅಮ್ಮ ಇಲ್ಲದ ಜೀವನದ ಕಲ್ಪನೆಯೇ ಇದ್ದಿಲ್ಲ ತನಗೆ. ಎರಡನೆಯದು. ಈ ಸ್ನೇಹ, ಬಂಧಗಳು ಇವೆಲ್ಲ ಹತ್ತಿರವಾದಷ್ಟೂ ದೂರವಾಗಿ ನೋವು ಕೊಡುತ್ತವೆ ಅಂತ. ತಾನು ಚಿಕ್ಕವನಾದಂದಿನಿಂದ ನೋಡಿದರೆ ತನ್ನ ಜೊತೆ ಎಷ್ಟು ಜನ ಉಳಿದಿದ್ದಾರೆ ? ಇನ್ನೇನು ತುಂಬಾ ಹತ್ತಿರವಾದರು ಎನ್ನುವವರೆಲ್ಲ ನಿರ್ದಯವಾಗಿ ದೂರವಾಗಿದಾರೆ. ಅನೇಕ ಕಾರಣಗಳು. ಕೆಲವರ ಸಾವುಗಳು, ಕೆಲವರು ವಿದೇಶಗಳಿಗೆ ಹೋಗಿದ್ದು ಮತ್ತೆ ಕೆಲವರಲ್ಲಿ ಅಕಾರಣ ವೈರತ್ವಗಳು. ಇನ್ನು ಮೂರನೆಯದು. ಅದು ಅತಿ ದೊಡ್ಡ ಭಯ. ಅವಳು ಅದೆಷ್ಟು ಹತ್ತಿರ ಬರುತ್ತಾಳೋ, ಅಷ್ಟು ದೂರವಾಗುತ್ತಾಳೆ ಅಂತ. ಆ ಅಗಲಿಕೆಗೆ ತಾನು ಎಂದೂ ಸಿದ್ದನಿರುವುದಿಲ್ಲ ಎಂದು. ಒಂದು ಮಾತಲ್ಲಿ ಹೇಳಬೇಕಾದರೆ ತನ್ನಲ್ಲಿಯ ಇದ್ದೂ ಇಲ್ಲದ ಭಯಗಳಿಗೆಲ್ಲ ಮಕುಟಾಯಮಾನ ಅವಳು. ಅವಳು ಪ್ರಥಮಬಾರಿಗೆ ತನ್ನ ಜೀವನದಲ್ಲಿ ಬಂದಾಗ …. ತನಗೆ ಆಗಷ್ಟೇ ಬಣ್ಣಗಳ ಗುಟ್ಟು ತಿಳಿಯುತ್ತಿತ್ತು. ಕವನ ಬರೆಯುವುದು ಬಿಟ್ಟು ಬಣ್ಣಗಳಲ್ಲಿ ಅಡಗುವುದು ಶುರುವಾಗಿತ್ತು. ಅದು ಯಾವಾಗ….. ಡಿಗ್ರೀ ಮಾಡುವಾಗ… ಅಲ್ವಾ … ಹೌದು. ನಿಜವಾಗ್ಲೂ ಅಡಗುವುದೇ. ಆಗಿಂದಲೂ ಅವಳು ಹಾಗೇ ಇದಾಳೆ. ತಾನೇ ಹಾಗೇ ಇಲ್ಲ ಅಂತ ತನಗೆ ಗೊತ್ತು. ಅವಳಿಗೆ ಮುಚ್ಚು ಮರೆ ಇಲ್ಲ. ತಾನು ಹೇಳಬೇಕೆನ್ನುವುದನ್ನು ಮುಖದಮೇಲೆನೇ ಹೇಳಿಬಿಡುತ್ತಾಳೆ. ಅವಳ ಎದುರಲ್ಲಿ ತಾನು ಎರಡು ಭಿನ್ನ ಲೋಕಗಳಲ್ಲಿ ಓಡಾಡಿದ ಹಾಗೆ ಇರುತ್ತದೆ. ಅವಳಿಗೆ ಎಲ್ಲವನ್ನೂ ಹೇಳಿಬಿಡಬೇಕೆನಿಸುತ್ತದೆ. ಏನೂ ಹೇಳಲು ಇಲ್ಲದ ಜೀವನ ಅಂತಲೂ ಅನಿಸುತ್ತದೆ. ಕವನ ಬಿಟ್ಟದ್ದೇ ಮಾತಿನ ಮೇಲೆ ನಂಬಿಕೆಯೋ ಮತ್ತೊಂದೋ ಕಳೆದುಕೊಂಡಾಗ! ಇನ್ನೂ ಆ ಮಾತುಗಳಲ್ಲಿ ತಾನೇನೂ ಹೇಳಲಿಕ್ಕೆ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಹಾಗೆ ಇರುತ್ತಾನೆ ತಾನು. ಮತ್ತೆ ಇವತ್ತು ಬರುತ್ತಾಳೆ ಅವಳು. ಈ ಒಬ್ಬಂಟಿ ಕೋಣೆಯನ್ನು ಅವಳಿಗೋಸ್ಕರ ಸ್ವಲ್ಪ ಸ್ವಚ್ಛ ಮಾಡಬೇಕೆಂದು ಅನಿಸುತ್ತೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ  ಪುಸ್ತಕಗಳು, ಹಾಸಿಗೆ ಮೇಲೆ ಹರಡಿಕೊಂಡಿದ್ದ ಹೊದಿಕೆ, ದಿಂಬುಗಳು, ಕಿಚೆನ್ ನಲ್ಲಿಯ ನಾತ. ಯಾಕೆ ತೂಗೊಂಡಿದಾನೋ ಗೊತ್ತಿಲ್ಲದ ಡ್ರೆಸಿಂಗ್ ಟೇಬಲ್ ಮೇಲಿನ ಧೂಳು ಎಲ್ಲಾ ಸ್ವಚ್ಛ ಮಾಡಿ, ತಾನೂ ಸ್ನಾನ ಮಾಡಿ ಕೂರಬೇಕೆಂದು ಅಂದುಕೊಳ್ಳೋದು… ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾಳೆ ಅವಳು. ಅವಳು ಹೊತ್ತು ತರುವ ಪರಿಮಳ, ಮಿಂಚಿನಂತಿರುವ ನಗೆ, ಕೆಲ ಮಾತುಗಳು…. ತನಗೆ ಸದಾ ಬೇಕು. ಮತ್ತೆ ಕೆಲ ಸಮಯದಲ್ಲಿ ಬರುತ್ತಾಳೆ. ಅವೆಲ್ಲ ಅವಳ ಜೊತೆಯಾಗಿ ಬರುತ್ತವೆ. ಹೊರಟುಹೋಗುತ್ತವೆ. ನಂತರ ಬರೀ ತಾನೂ, ತನ್ನ ಬಣ್ಣಗಳ ಶಿಥಿಲಗಳು. ೩ ಬೇಸಿಗೆಯ ರಜೆಯಲ್ಲಿ ಮೊದಲನೆಯ ಸಲ ಹಾಗೆ ಬಂದಿದ್ದಳು ಅವಳು ! ಆ ರಜೆಗಳಲ್ಲಿ ವಾನ್ ಗೋಗ್ ನ ಜೀವನ ಚರಿತ್ರೆ “ ಲಸ್ಟ್ ಫರ್ ಲೈಫ್ “ ಅವಳು ತಂದು ಕೊಟ್ಟದ್ದೇ ! ನಂತರ ಸಹ ಅವಳು ಯಾವುದೋ ಒಂದು ತಂದುಕೊಡುತ್ತಲೇ

ಬಂದು ಹೋಗುವ ಮಳೆಯಲ್ಲಿ Read Post »

ಕಥಾಗುಚ್ಛ

ಚಿಕ್ಕಿಯ ಫೋಟೋ

ಕಥೆ ಚಿಕ್ಕಿಯ ಫೋಟೋ ಮಧುರಾ ಕರ್ಣಮ್ “ಚಿಕ್ಕಿ ಇಸ್ಕೂಲಿಗೆ ಬತ್ತೀಯೇನೆ? ಟೇಮಾಗ್ತಾ ಐತೆ” ಎಂದು ಕಮಲಿ ಕೂಗು ಹಾಕಿದಾಗ ಚಿಕ್ಕಿ “ಒಸಿ ನಿಂತ್ಕೊಳ್ಳೆ, ಬಂದೆ” ಎನ್ನುತ್ತ ತಟ್ಟೆಯಲ್ಲಿದ್ದ ತಂಗಳನ್ನ ಮುಗಿಸಿ ಕೈ ತೊಳೆದಳು. ಅಲ್ಲಲ್ಲಿ ಹರಿದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ “ನಾನ್ ಇಸ್ಕೂಲಿಗೆ ಹೋಗ್ಬರ್ತೀನಿ ಕಣವ್ವೋ” ಎಂದು ಕೂಗು ಹಾಕಿದಳು. “ಚಿಕ್ಕಿ, ಹಿಂದೆ ಒಂದ್ನಾಲ್ಕು ಪಾತ್ರೆ ಅವೆ, ತೊಳದ್ಹೋಗೆ” ಎಂಬ ಕೂಗು ಕೇಳಿಸದಂತೆ ಕಮಲಿಯ ಕೈಹಿಡಿದು ಓಡಿದಳು. “ಈ ಅವ್ವ ಹೋಗಾಗಂಟ ಕೆಲ್ಸ ಮಾಡಿದ್ರೂನು ಮತ್ತೆ `ಇದ್ ಮಾಡ್, ಅದ್ ಮಾಡ್, ಅಂತೈತೆ” ಎಂದು ದೂರು ಹೇಳುತ್ತ ನಡೆದಳು. ಅಷ್ಟರಲ್ಲಿ ಕಮಲಿ ಅವಳ ಕಿವಿ ಗಮನಿಸುತ್ತ “ಐ, ಕಿವಿಯೋಲೆ ಹೊಸ್ದೇನೆ? ಎಷ್ಟ ಚೆಂದಾಗೈತೆ” ಎನ್ನುತ್ತ ಮುಟ್ಟಿ ನೋಡಿದಳು. ಚಿಕ್ಕಿ ಇನ್ನೂ ಉತ್ಸಾಹಿತಳಾಗಿ “ಹ್ಞೂಂ ಕಣೇ. ಅಪ್ಪ ಜಾತ್ರೇಲಿಂದ ತಂದಿತ್ತು. ಅವ್ವಂಗ್ ಕೊಡ್ತು. ಅವ್ವ `ಇಂಥಾದ್ ತೊಟ್ಕೊಳಾಕ್ ನಾಯೇನ್ ಸಣ್ಣ ಮಗೀನಾ?’ ಅಂತ ಬೈತು. ಅದ್ಕೆ ಅಪ್ಪ ನನಕ್ಕೊಡ್ತು. ತಕ್ಷಣ ತೊಟ್ಕೊಂಬಿಟ್ಟೆ. ಈಗ ಶಾಲೇಗ್ ಬರೋವಾಗ ಅವ್ವ ನೋಡಿದ್ರೆ `ಬಿಚ್ಚಿಡು’ ಅಂತ ಬೈದು ಗಲಾಟೆ ಮಾಡ್ತಿತ್ತು” ಎಂದು ಹೇಳುತ್ತಾ ನಿಂತಳು. ಕಂಗಳಲ್ಲಿ ಸಂತಸದ ಮಹಾಪೂರ. ಕಮಲಿ ಕೂಡ ಅಷ್ಟೇ ಆನಂದದಿಂದ ತಿರುಗಿಸಿ ನೋಡಿ “ನಕ್‌ಸತ್ರ ಇದ್ದಂಗವೆ ಬಿಡು. ಭೋ ಸಂದಾಕವೆ” ಎಂದು ಪ್ರಶಂಸಿಸುತ್ತಾ ಮುನ್ನಡೆದಳು.  ಅವರು ಸಾಗಬೇಕಿದ್ದ ದಾರಿ ಇನ್ನೂ ದೂರವಿತ್ತು. ಸುಮಾರು ಎರಡು, ಎರಡೂವರೆ ಕಿ.ಮೀ. ಮಧ್ಯೆ ಹೊನ್ನೆ ದಿಬ್ಬ ದಾಟಿದರೆ ದೊಡ್ಡ ಬಯಲು. ಅದರಾಚೆ ಊರು ಆರಂಭವಾಗುತ್ತಿತ್ತು. ಅಲ್ಲೇ ಸರಕಾರಿ ಶಾಲೆ. ಊರಿನಿಂದ ಇವರ ಕೇರಿ ಬಲು ದೂರ. ಚಿಕ್ಕಿ, ಕಮಲಿ ಇಬ್ಬರೂ ಕೇರಿಯ ಹೂಗಳೇ. ಚಿಕ್ಕಿಯ ಅಪ್ಪ ಗಾರೆ ಕೆಲಸಕ್ಕೆ ಹೋದರೆ ಅವ್ವ ಮನೆ ಕೆಲಸಕ್ಕೆ ಹೋಗುತ್ತಾಳೆ. ಅವಳಿಗೊಬ್ಬ ತಮ್ಮ ಬೇರೆ. ಅವನಿಗೆ ಹುಶಾರಿಲ್ಲದಿದ್ದರೆ ಚಿಕ್ಕಿಯ ಶಾಲೆ ಗೋತಾ. ಈಗ ಅವನನ್ನು `ಲತಾ ಮೇಡಂ’ ಬಳಿ ಬಿಡುತ್ತಿದ್ದಾರೆ. ಅವರು ಆಟವಾಡಿಸುವುದಲ್ಲದೆ “ಅ, ಆ, ಇ, ಈ, ಎ, ಬಿ, ಸಿ, ಡಿ ” ಹೇಳಿಕೊಡುತ್ತಾರೆ. “ಜಾನಿ ,ಜಾನಿ, ಎಸ್ ಪಪ್ಪಾ” ಎಂದು ಅವನ ಬಾಯಲ್ಲಿ ಕೇಳಿದಾಗ ಚಿಕ್ಕಿಯ ಅವ್ವನಿಗೆ ಆನಂದವೋ ಆನಂದ. ಅವನನ್ನು “ಇಂಗ್ಲೀಸ್ ಸಾಲೆಗೆ ಸೇರ‍್ಸಾಣ” ಅಂತಿದಾಳೆ. ಚಿಕ್ಕಿಗೆ ಬೇಜಾರು. ಬಿಸಿಯೂಟ ಕೊಟ್ಟು, ಪುಸ್ತಕ, ಬಟ್ಟೆ ಕೊಟ್ಟರೂ ಚಿಕ್ಕಿ ಶಾಲೆಗೆ ಹೋಗೋದು ಅವಳಿಗಿಷ್ಟವಿಲ್ಲ. ಮನೇಲಿದ್ದರೆ ಕೊಂಚ ಕೆಲಸ ಕಾರ‍್ಯಕ್ಕಾಗುತ್ತೆ ಅಂತ ಧೋರಣೆ. ಚಿಕ್ಕಿಗೆ ಕಲೀಲೇಬೇಕೂಂತ ಆಸೆ. ಎಲ್ಲರ ಥರಾ ಇಂಗ್ಲೀಸಿನಲ್ಲಿ ಪಟ ಪಟ ಅರಳು ಹುರಿದಂತೆ ಮಾತನಾಡಬೇಕು. ದೊಡ್ಡ ನೌಕರಿ ಮಾಡಬೇಕು………ಏನೆಲ್ಲ.ಮತ್ತೆಲ್ಲ. ಅವಳ ಕನಸುಗಳೆಲ್ಲ ಮನೆಯಲ್ಲಿ ಮುಚ್ಚಿ ಕಮಲಿಯ ಮುಂದೆ ಬಿಚ್ಚಿಕೊಳ್ಳುತ್ತವೆ. ಕಮಲಿಯದೂ ಸುಮಾರು ಅದೇ ಸ್ಥಿತಿ. ಚಿಕ್ಕಿಯ ಬಣ್ಣ ಕಪ್ಪೋ ಕಪ್ಪು. ಎಣ್ಣೆ ಕಾಣದ ಕೂದಲು, ಚಪ್ಪಟೆ ಮೂಗು, ಬತ್ತಿದ ಕೆನ್ನೆಗಳು, ಅವಳಿಗೆ ಹೋಲಿಸಿದರೆ ಕಮಲಿಯೇ ಪರವಾಗಿಲ್ಲ. ಲಕ್ಷಣವಂತೆ. ಆದರೂ ಚಿಕ್ಕಿಗೆ ಸೌಂದರ‍್ಯ ವ್ಯಾಮೋಹ ಜಾಸ್ತಿ. ಒಡೆದ ಕನ್ನಡಿಯ ಮುಂದೆ ನಿಂತು ಮುಖ ನೋಡ್ಕೊಂಡಿದ್ದೇ ಬಂತು. ಪೌಡರ್ ಖಾಲಿಯಾದಾಗ ಮನೆಯಲ್ಲಿದ್ದ ಯಾವುದೋ ಹಿಟ್ಟನ್ನು ಬಳಿದುಕೊಳ್ಳುವ ಮೋಹ. “ಅಕ್ಕಿ ಹಿಟ್ಟು ಮನೇಲಿ ಉಳ್ಸಾಕಿಲ್ಲ ಈ ಕತ್ತೆ” ಎಂದು ಉಗಿಸಿಕೊಂಡರೂ ಬೇಜಾರಿಲ್ಲ. ಇತ್ತೀಚೆಗೆ ಶಾಲೆಯಲ್ಲಿ ಸುಗುಣ, ವಿಮಲ, ಎಲ್ಲ ಮೇಡಮ್‌ಗಳಂತೆ ಪೌಡರ್‌ಗಿಂತ ಮೊದಲು ಅದೇನೋ ಕ್ರೀಮು ತಿಕ್ಕುತ್ತಾರೆಂದು ಗೊತ್ತಾಗಿತ್ತು. ಅದನ್ನೊಂದು ಹೊಂದಿಸಲಾಗಿರಲಿಲ್ಲ. ಅವಳ ನಿಜವಾದ ಹೆಸರು ಚಿಕ್ಕೀರವ್ವ. ಅದು ಅವಳಜ್ಜಿಯ ಹೆಸರಂತೆ. ಅಜ್ಜಿ ಗತಿಸಿದ ವರ್ಷವೇ ಇವಳು ಹುಟ್ಟಿದ್ದಂತೆ. ಅದಕ್ಕೇ ಅವಳಪ್ಪನಿಗೆ ಅವಳನ್ನು ಕಂಡರೆ ತುಂಬಾ ಪ್ರೀತಿ. `ನಮ್ಮವ್ವಾನೇ ಮತ್ತೆ ಹುಟ್ಟಿ ಬಂದವ್ಳೆ’ ಎಂದು ತಮ್ಮವ್ವನ ಹೆಸರನ್ನೇ ಇಟ್ಟಾಗ ಚಿಕ್ಕಿಯ ಅವ್ವನಿಗೆ ಇರಿಸು-ಮುರಿಸು. `ತಲೆ ಮೇಲೆ ಕೂರಿಸ್ಕೋ ನಿಮ್ಮವ್ವನ್ನ’ ಎಂದು ಕಾಲೆಳೆಯುವುದೂ ಇತ್ತು. ಚಿಕ್ಕಿ ಶಾಲೆಗೆ ಹೋಗುವುದು ಅಪ್ಪನ ಒತ್ತಾಸೆಯಿಂದಲೇ. ಇಲ್ಲದಿದ್ರೆ ಅವಳವ್ವ ಅವಳನ್ನು ಮನೆ ಕೆಲಸಕ್ಕೆ ಕಳಿಸಿ ತಣ್ಣಗಾಗ್ತಿದ್ಲು. ಕಮಲಿಯದೂ ಹೆಚ್ಚು ಕಡಿಮೆ ಇದೇ ಕಥೆಯೇ. ಆದರೆ ಅವಳಿಗೆ ತಮ್ಮನ ಬದಲಾಗಿ ಅಕ್ಕ ಇದ್ದಳು. ಚಿಕ್ಕಿಗೆ ಫೋಟೋದ ಹುಚ್ಚು. ಜಾತ್ರೆಯಲ್ಲಿ ಅವರಪ್ಪ ತೆಗೆಸಿದ್ದ ಹಳೆಯ ಫೋಟೋ ಬಿಟ್ಟರೆ ಫೋಟೋಗಳೇ ಇರಲಿಲ್ಲ. ಅಪ್ಪನಿಗೆ ದುಂಬಾಲು ಬಿದ್ದರೂ “ಮುಂದಿನ ಜಾತ್ರೇಲಿ ತೆಗೆಸಾಣಂತೆ ಸುಮ್ಕಿರು” ಎಂದು ಬಿಟ್ಟಿದ್ದ. ಮಗುವಾಗಿದ್ದಾಗಿನ ಒಂದೇ ಒಂದು ಫೋಟೋ ಮಸುಕಾಗಿ ಹೀನಾಯ ಸ್ಥಿತಿಗೆ ತಲುಪಿತು. ಆದರೂ ಅದನ್ನು ದೇವರ ಪುಸ್ತಕದ ಮಧ್ಯೆ ಇಟ್ಟು ಜೋಪಾನ ಮಾಡಿದ್ದಳು. ಮದುವೇಲಿ ಅಷ್ಟೊಂದು ಫೋಟೋ ತಗೀತಾರೇಂದ್ರೆ ಅದಕ್ಕೋಸ್ಕರ ಮದುವೆಯಾಗಲೂ ಸಿದ್ಧವಿದ್ದಳು ಚಿಕ್ಕಿ. ಹನ್ನೆರಡು-ಹದಿಮೂರರ ವಯಸ್ಸಾದರೂ ಇನ್ನೂ ಪೀಚು ಪೀಚಾಗಿ ಎಳೇ ಮಕ್ಕಳಂತಿದ್ದಳು. ಇಬ್ಬರೂ ಕಿವಿಯೋಲೆ, ಮೇಷ್ಟ್ರುಗಳ ಬಗ್ಗೆ ಮಾತನಾಡುತ್ತಲೇ ಹೊನ್ನೆ ದಿಬ್ಬದ ಹತ್ತಿರ ಬಂದಿದ್ದರು. ದಿಬ್ಬ ಬಳಸಿ ಮಕ್ಕಳು ಬಯಲಿಗೆ ಬಂದಾಗ ನಿತ್ಯ ಬಣಗುಡುತ್ತಿದ್ದ ಖಾಲೀ ಬಯಲಿನಲ್ಲೊಂದು ಟೆಂಟು. ಒಂದಷ್ಟು ಜನ ನೆರೆದಿದ್ದಾರೆ. ಪ್ಯಾಟೆಯವರಂತಿದ್ದಾರೆ. ಒಬ್ಬ ಮೇಕಪ್ ಮ್ಯಾನ್ ಹುಡುಗಿಯ ಮುಖಕ್ಕೆ ಬಣ್ಣ ಬಳಿಯುತ್ತಿದ್ದಾನೆ. ಚಿಕ್ಕಿ ಕಮಲಿಯ ಕೈ ಅದುಮಿ ಖುಷಿಯಿಂದ “ಐ ಕಮಲಿ, ಅಲ್ನೋಡೇ ಸೂಟಿಂಗ್ ಐತೇನೋ, ಓಗಾಣ, ನೋಡಾಣ” ಎಂದು ಕುಪ್ಪಳಿಸಿದಳು. ಕಮಲಿಗೂ ಉತ್ಸಾಹ. “ಏನೋ ನಡೀತಿರ‍್ಬೋದು ಕಣೆ. ಆದ್ರೆ ಶಾಲೆಗ್ ಲೇಟಾದ್ರೆ ದಾನಪ್ಪ ಮೇಷ್ಟ್ರು ಬೈಯಾಕಿಲ್ವಾ? ಬಿಸಿಯೂಟ ತಪ್ಪೋಗ್ ಬಿಟ್ರೆ?” ಎನ್ನುತ್ತಾ ನಿಂತಳು. “ಅಯ್ಯ, ದಾನಪ್ಪ ಮೇಷ್ಟಿçಗ್ ತಾನೆ, `ಅವ್ವಂಗ್ ಹುಸಾರಿಲ್ಲ. ಕೆಲಸದ ಮನೆಗ್ಹೋಗಿ ಬಂದ್ವಿ’ ಅಂತ ಕಣ್ಣೀರಾಕ್ಕೊಂಡ್ ಯೋಳಿದ್ರೆ ಸುಮ್ಗಾಗ್ತಾರೆ ಬಾ” ಎಂದು ಕೈಹಿಡಿದು ಎಳೆದುಕೊಂಡೇ ಹೋದಳು. ದೊಡ್ಡ ಟೆಂಟಿನ ಹೊರಭಾಗದಲ್ಲೇ ಒಂದಿಬ್ಬರು ವಿವಿಧ ಬಗೆಯ ಕ್ಯಾಮೆರಾಗಳನ್ನಿಟ್ಟುಕೊಂಡು ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ದೊಡ್ಡ ಕಟೌಟ್. ಅದರ ಮೇಲೆ ಭೂಮಿ ಬಿರಿದು ಛಿದ್ರವಾಗುತ್ತಿರುವ ದೃಶ್ಯದ ಚಿತ್ರ. ಕೆಳಗೆ `ಪರಮಾಣು ಬೇಡ. ಪರಿಸರ ಉಳಿಸಿ’ ಎಂಬ ಘೋಷಣೆ. ಇನ್ನಿತರ ಏನೇನೋ ಫಲಕಗಳು ಸಿದ್ಧವಾಗುತ್ತಿದ್ದವು. ಅಲ್ಲೇನೋ ಪರಮಾಣು ರಿಯಾಕ್ಟರ್ ಬರುವ ಸುದ್ದಿಯಿತ್ತು. ಆದರೂ ಹಳ್ಳಿಗರಿಗೆ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಊರವರಿಗಂತೂ ಇವರು ಬಂದ ವಿಚಾರವೇ ಗೊತ್ತಿಲ್ಲ. ಇಲ್ಲವಾದಲ್ಲಿ ಆಗಲೇ ಅರ್ಧ ಊರು ಅಲ್ಲಿ ನೆರೆದಿರುತ್ತಿತ್ತು. “ಇದು ಸಾಲಲ್ಲ ವಿನೀತ್, ಇನ್ನೂ ಇಫೆಕ್ಟಿವ್ ಆಗರ‍್ಬೇಕು. ನೋಡಿದಾಕ್ಷಣ ಹೃದಯಕ್ಕೆ ತಟ್ಟುವಂತಿರಬೇಕು. ಕಂಗಳಿಂದ ನೀರು ಒಸರಬೇಕು. ಅಂತದ್ದೊಂದು ಆ್ಯಡ್ ಮಾಡಬೇಕು. ಅಂತಹ ಫೋಟೋ ಬೇಕು. ಈ ಭೂಮಿಯ ಚಿತ್ರಗಳೆಲ್ಲ ಹಳೆಯವಾದ್ವು. ಜನರಿಗೆ ಇವುಗಳಲ್ಲೇನೂ ಸೆಂಟಿಮೆಂಟ್ಸ ಉಳಿದಿಲ್ಲ” ಎಂದು ಗುಂಗುರು ಕೂದಲು ಬಾಚಿಕೊಳ್ಳುತ್ತಿದ್ದ ಹುಡುಗಿ ಸ್ಯಾಂಡ್ರಾ ಹೇಳಿದಾಗ ಕ್ಯಾಮೆರಾ ಹಿಡಿದ ಇಬ್ಬರ ಜೊತೆಗೆ ಇನ್ನಿಬ್ಬರು `ಹ್ಞೂಂ’ ಗುಟ್ಟಿದರು. ಗಡ್ಡದವನೊಬ್ಬ “ಏನಾದ್ರೂ ಡಿಫರೆಂಟ್ ಮಾಡ್ಬೇಕು. ಟಚಿಂಗ್, ಯು ನೋ ಟಚಿಂಗ್” ಎನ್ನುತ್ತ ಗಡ್ಡ ಕೆರೆದ. ಅಷ್ಟರಲ್ಲಿ ಇನ್ನೊಬ್ಬನ ಕ್ಯಾಮೆರಾ ಕಣ್ಣಿಗೆ ಹತ್ತಿರ ಬರುತ್ತಿದ್ದ ಹುಡುಗಿಯರು ಕಂಡರು. “ಏ, ಇಲ್ಲಿಗೇಕೆ ಬಂದ್ರಿ? ಹ್ಞಾಂ! ಏನ್ಕೆಲಸ ಇಲ್ಲಿ? ನಿಮಗೆ. ಹೋಗಿ, ಹೋಗಿ” ಎಂದು ಗದರಿಸಿದ ಕೈಯಲ್ಲಿ ಕೂಲಿಂಗ್ ಗ್ಲಾಸ್ ಹಿಡಿದ ವಿನೀತ್. ಇಬ್ಬರೂ ಹುಡುಗಿಯರು ಗಕ್ಕೆಂದು ನಿಂತರು. ಕಮಲಿ ಹೊರಡೋಣವೆಂದು ಕೈ ಹಿಡಿದು ಹಿಂದಕ್ಕೆ ಎಳೆದರೆ ಚಿಕ್ಕಿ ಅವಳ ಕೈ ಹಿಡಿದುಕೊಂಡೇ ಭದ್ರವಾಗಿ ನಿಂತಳು. “ಏನ್ಬೇಕು?” ಎಂದ ಇನ್ನೊಬ್ಬ. ಚಿಕ್ಕಿ ಗಟ್ಟಿ ಧರ‍್ಯ ಮಾಡಿ “ಫೋಟೋ ತೆಗೆಸ್ಕೋಬೇಕು” ಎಂದಳು ಕ್ಷೀಣವಾಗಿ. “ಫೋಟೋನಾ, ನಿಮ್ದಾ?” ಎನ್ನುತ್ತ ಎಲ್ಲರೂ ಒಂದು ಸುತ್ತು ಗಹಗಹಿಸಿ ನಕ್ಕರು. ಚಿಕ್ಕಿ, ಕಮಲಿಯರ ಕಣ್ಣುಗಳಲ್ಲಾಗಲೇ ನೀರು ಒಸರಿತ್ತು. “ನಿಮ್ ಫೋಟೋ ತೆಗೆಯಕ್ಕೆ ನಾವು  ಇಲ್ಲೀಗೂ ಬಂದ್ವಿ ಅನ್ಕೊಂಡ್ರಾ? ಹೋಗಿ, ಹೋಗಿ, ಶಾಲೆಗ್ ಹೋಗಿ” ಎಂದು ಗದರಿದ. “ಹೇಯ್, ಸ್ಟಾಪ್. . . .ಲಿಸನ್. . . .ನಿಮಗೆ ಫೋಟೋ ತೆಗೀಬೇಕಾ? ಇಲ್ಲಿ ಬನ್ನಿ ತೆಗೆಯೋಣ” ಎಂದು ಕರೆದಳು ಸ್ಯಾಂಡ್ರಾ. ಕಮಲಿಗೇನೊ ಹೆದರಿಕೆ. `ಬ್ಯಾಡ’ ಎನ್ನುತ್ತ ಹಿಂಜರಿದಳು. ಚಿಕ್ಕಿ ಮಾತ್ರ ಆಸೆ ತುಂಬಿದ ಕಂಗಳಿAದ ಮುಂದೆ ಬಂದಳು. ವಿನೀತ್ “ನಿನಗೇನು ಕೆಲಸವಿಲ್ಲವಾ ಸ್ಯಾಂಡ್ರಾ? ನಾಳೆ ಇಲ್ಲೀದೆಲ್ಲ ಪೇರ‍್ನಲ್ಲಿ ಬರುತ್ತೆ. ಮಧ್ಯಾಹ್ನ ಉಳಿದ ಎನ್.ಜಿ.ಓ.ದವರೆಲ್ಲ ರ‍್ತಾರೆ. ಪ್ರೊಟೆಸ್ಟ್ ಮಾಡ್ಬೇಕು. ಈ ಹಳ್ಳಿಮುಕ್ಕರ ಫೋಟೋ ತೆಗೀತಾ ಕೂತ್ಕೊ” ಎಂದು ಕೋಪಗೊಂಡ. “ಪ್ಲೀಸ್, ಎಲ್ರೂ ಎರಡು ನಿಮಿಷ ಸುಮ್ಮನಿರಿ” ಎಂದ ಸ್ಯಾಂಡ್ರಾ ಚಿಕ್ಕಿಯನ್ನು ಹತ್ತಿರ ಕರೆದಳು. “ನಿನ್ನ ಫೋಟೋ ತೆಗೀತೀನಿ. ಚಾಕಲೇಟೂ ಕೊಡ್ತೀನಿ. ನಾನ್ಹೇಳಿದಂತೆ ಪೋಸ್ ಕೊಡ್ತೀಯಾ” ಎಂದು ಕೇಳಿದಳು. “ಅಂಗಂದ್ರೆ?” ಚಿಕ್ಕಿ ಅಮಾಯಕಳಂತೆ ಪ್ರಶ್ನಿಸಿದಾಗ “ಊಂ, ನಗ್ತೀಯಾ, ಕೂಡ್ತೀಯಾ, ನಿಲ್ತೀಯಾ………?” ಎನ್ನುತ್ತ ಸ್ಯಾಂಡ್ರಾ ಕಷ್ಟಪಟ್ಟು ಉತ್ತರಿಸಿದಳು. “ಓ… ” ಎಂದ ಚಿಕ್ಕಿ ಮತ್ತೆ ಮೇಕಪ್‌ಮ್ಯಾನ್‌ನತ್ತ ಕೈತೋರಿದಳು. “ಓ ಹೊ ಹೋ……” ಎಂದು ಬಾಯಿಗೆ ಕೈ ಅಡ್ಡ ಇಟ್ಟು ನಕ್ಕ ಸ್ಯಾಂಡ್ರಾ “ಗೋಪಾಲ್, ಇವಳಿಗೆ ಮೇಕಪ್ ಮಾಡು” ಎಂದಳು. ಮುಂದೆ ಇಂಗ್ಲೀಷಿನಲ್ಲಿ ಏನ್ಹೇಳಿದಳೋ ಚಿಕ್ಕಿಗೆ ತಿಳಿಯಲಿಲ್ಲ. ಸ್ಕೂಲ್ ಬ್ಯಾಗ್ ಎಸೆದು ಕಮಲಿಯನ್ನೂ ಬಿಟ್ಟು ಓಡಿ ಹೋದಳು. ಬಂದ ದಾರಿಗೆ ಸುಂಕವಿಲ್ಲದಂತೆ ತಿರುಗಿದ ಕಮಲಿಯನ್ನು ಸ್ಯಾಂಡ್ರಾ ಹತ್ತಿರ ಕರೆಯುತ್ತ “ಇಲ್ಬಾ, ನೀನು ಗುಡ್ ಗರ್ಲ್ ಅಲ್ಲವಾ? ಚಾಕಲೇಟ್ ಕೊಡ್ತೀನಿ. ಅಲ್ಲಿರೋ ಮುಳ್ಳು, ಕಂಟಿಗಳನ್ನು ಆಯ್ದು ತರ‍್ತೀಯಾ?” ಎಂದು ಕೇಳಿದಳು. “ಕಮಲಿ, ತಕಂಬಾರೆ, ಫೋಟೋ ತೆಗೆಸ್ಗೊಂಡು ಇಬ್ರೂ ಬಿರ‍್ನೆ ಶಾಲೆಗೆ ಹೊಂಟು ಬಿಡಾಣ” ಎಂದು ಚಿಕ್ಕಿ ಕೂಗಿದಾಗ ಕಮಲಿಗೆ ಬೇರೆ ದಾರಿಯಿಲ್ಲ. ಚೀಲವಿಟ್ಟು ಆರಿಸಲು ನಡೆದಳು. ಸುತ್ತೆಲ್ಲ ಜನರಿಗೂ ಕುತೂಹಲ. ಸುಮ್ಮನೆ ನೋಡುತ್ತಿದ್ದರು. ಗೋಪಾಲನ ಮೇಕಪ್‌ನಲ್ಲಿ ಚಿಕ್ಕಿಯ ಕೆನ್ನೆ ಇನ್ನೂ ಬತ್ತಿತು. ಕಣ್ಣು ಆಳಕ್ಕಿಳಿದಿದ್ದವು. ಜಡೆ ಬಿಚ್ಚಲು ಹೇಳಿದ ಸ್ಯಾಂಡ್ರಾ ಕ್ಯಾಮೆರಾದಲ್ಲಿ ಅವಳನ್ನು ನಿಲ್ಲಿಸಿ, ಕೂಡಿಸಿ ಎರಡು ಫೋಟೊ ತೆಗೆದಳು. ಚಿಕ್ಕಿಗೆ ಖುಷಿಯೋ ಖುಷಿ. ಇನ್ನೂ ಹಲ್ಕಿರಿದಳು. ಉಹ್ಞೂಂ, ಅವಳಿಗೆ ತೃಪ್ತಿಯಾಗಲಿಲ್ಲ. ಕಮಲಿ ತಂದ ಮುಳ್ಳು-ಪೊದೆಗಳನ್ನು ಹರಡಿ ಅದರ ಪಕ್ಕ ಕುಳಿತುಕೊಳ್ಳಲು ಹೇಳಿದಳು. ಮಲಗಿಕೊಳ್ಳಲು ಹೇಳಿದಳು. ಮಲಗಿದ ಚಿಕ್ಕಿಗೆ ಅಲ್ಲೇ ಮೇಕಪ್. ಮತ್ತೆ ಮತ್ತೆ ಕೂದಲು ಕೆದರುವುದೂ ಇದ್ದೇ ಇತ್ತು. ಆಗಲೂ ಸಮಾಧಾನವಾಗದ ಸ್ಯಾಂಡ್ರಾ ಚಿಕ್ಕಿಯ ಸಮವಸ್ತ್ರ ತೆಗೆದು ಒಳಗಿನ ಹರಿದ ಪೆಟಿಕೋಟ್ ಮೇಲೆ ಮಲಗಿಸಿ ಭಂಗಿ ಸರಿಪಡಿಸಿದಳು. ಪಕ್ಕದಲ್ಲೇ ಒಂದು ಫಲಕವನ್ನಿಟ್ಟಳು. ಚಿಕ್ಕಿಗೆ ಇಷ್ಟು ಜನರ ಮುಂದೆ ಮಲಗುವುದು, ಅದೂ ಹರಿದ ಪೆಟಿಕೋಟ್ ಮೇಲೆ ಅವಮಾನವೆನಿಸಿದರೂ ವಿಧಿಯಿರಲಿಲ್ಲ. ಒಪ್ಪಿಕೊಂಡಾಗಿತ್ತಲ್ಲ. “ಐ ಸೀ, ಗುಡ್” ಎಂಬ ಉದ್ಗಾರಗಳು ಕೇಳಿ ಬಂದವು. ಸಮವಸ್ತ್ರ ಧರಿಸಿದ ಚಿಕ್ಕಿಯ ಮೇಕಪ್ ಒರೆಸಿದ ಗೋಪಾಲ್. ಸ್ಯಾಂಡ್ರಾ ಇಬ್ಬರ ಕೈಗೂ ಒಂದೊಂದು ಚಾಕಲೇಟನ್ನಿಟ್ಟಳು. “ನನ್ನ ಫೋಟೊ ಯಾವಾಗ ಕೊಡಾದು?” ಎಂದು ಕೇಳಿದ ಚಿಕ್ಕಿಗೆ ಸ್ಯಾಂಡ್ರಾ ನಗುತ್ತ “ನಾಳೆ ಬಿಟ್ಟು ನಾಡಿದ್ದಲ್ಲಿ ಪೇಪರ‍್ನಲ್ಲಿ ಬರುತ್ತೆ. ನೋಡ್ಕೊ.” ಎಂದಳು. ಚಿಕ್ಕಿಗೆ ಖುಷಿಯೋ ಖುಷಿ. “ಯಾವ ಪಫರ‍್ನಲ್ಲಿ ಬತ್ತದೆ?” ಎಂದು ಕೇಳಿದವಳಿಗೆ ಸ್ಯಾಂಡ್ರಾ “ಇಂಗ್ಲೀಷ್ ಪೇಪರ್ `ಟೈಮ್ಸ್ ಆಫ್ ಇಂಡಿಯಾ’ ದಲ್ಲಿ ಬರುತ್ತೆ. ಇಲ್ಲಿ ನಡೆದ್ದೆಲ್ಲ ಯಾರಿಗೂ ಹೇಳ್ಬೇಡಿ. ಫೋಟೋ ಬಂದ ಮೇಲೆ ನೋಡಿ. ಈಗ ಶಾಲೆಗೆ ಓಡಿ” ಎಂದು ಕಳಿಸಿದಳು ಸ್ಯಾಂಡ್ರಾ. ಚಿಕ್ಕಿ ದೂರ ನಿಂತು ಕಾಯುತ್ತಿದ್ದ ಕಮಲಿಯತ್ತ ಓಡಿದಳು. “ಕಮಲಿ, ನಾ ಫೋಟೊ ತಗೀವಾಗ ನಗ್ತಿದ್ನ? ಚೆಂದಾಕ ಬಿದ್ದದಾ ನನ್ನ ಫೋಟೊ?” ಅತಿ ಉತ್ಸಾಹ ಅವಳಿಗೆ. ಕಮಲಿಗೆ ಅಷ್ಟೇನೂ ಆನಂದವಿಲ್ಲ.

ಚಿಕ್ಕಿಯ ಫೋಟೋ Read Post »

You cannot copy content of this page

Scroll to Top