ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೋಹದ ಬೆನ್ನು ಹತ್ತಿದರೆ . . . . .

ಲೇಖನ ಮೋಹದ ಬೆನ್ನು ಹತ್ತಿದರೆ ಜಯಶ್ರೀ.ಜೆ. ಅಬ್ಬಿಗೇರಿ  ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ ಇರುತ್ತಿರಲಿಲ್ಲ. ಹೊಳೆಯ ಆಚೆ ಪತ್ನಿಯ ಮನೆ ಹೊಳೆಯ ಈಚೆ ತುಳಸಿದಾಸರ ಮನೆ. ಒಂದು ದಿನ ಮಡದಿ ಅವಸರದಲ್ಲಿ ಅವರಿಗೆ ಹೇಳದೇ ತನ್ನ ತವರಮನೆಗೆ ಹೋದಳು. ಸತಿಯನ್ನು ಮನೆಯಲ್ಲಿ ಕಾಣದ ತುಳಸಿದಾಸರಿಗೆ ಚಡಪಡಿಕೆ ಶುರುವಾಯಿತು. ಇವತ್ತು ರಾತ್ರಿ ಎಷ್ಟೊತ್ತಾದರೂ ಸರಿ ಹೊಳೆ ದಾಟಿ ಸತಿಯ ಮನೆಯನ್ನು ತಲುಪಲೇ ಬೇಕೆಂದು ನಿರ್ಧರಿಸಿದರು. ಅದೇ ದಿನ ಹೊಳೆಗೆ ಮಹಾಪೂರ ಬಂದಿತ್ತು. ಮಹಾಪೂರ ಎಂದ ಮೇಲೆ ಕೇಳಬೇಕೆ? ಅದು ತನ್ನೊಡಲಿನಲ್ಲಿ ಊರಿನಲ್ಲಿರುವ ಕಸವನ್ನು ತಂದು ಹೊಳೆಗೆ ಚೆಲ್ಲಿತ್ತು. ಹೊಳೆ ಊರಿನ ಕೊಳೆಯಿಂದಲೇ ತುಂಬಿತ್ತು. ತುಳಸಿದಾಸನಿಗೆ ಮಾತ್ರ ಇದಾವುದೂ ಕಾಣಲೇ ಇಲ್ಲ. ಅವರ ಕಣ್ಣಲ್ಲಿ ಮಡದಿಯ ರೂಪ ಅಚ್ಚೊತ್ತಿತ್ತು. ಮನದಲ್ಲಿ ಆಕೆಯ ಸವಿನೆನಪು. ಸತಿಯ ಮೇಲಿನ ಮೋಹ ಅವರಲ್ಲಿ ಶಕ್ತಿಯನ್ನು ನೂರ್ಮಡಿಗೊಳಿಸಿತ್ತು. ಹಿಂದೆ ಮುಂದೆ ನೋಡದೇ ಹೊಳೆಗೆ ಧುಮುಕಿಯೇ ಬಿಟ್ಟರು. ನೋಡು ನೋಡುತ್ತಿದ್ದಂತೆಯೇ ಆಚೆ ದಡ ತಲುಪಿದ್ದರು. ತಮ್ಮೊಂದಿಗೆ ಹೊಳೆಯ ಕೊಳೆಯನ್ನು ಹೊತ್ತು ತಂದಿದ್ದರು.      ಅದೇ ಆವಸ್ಥೆಯಲ್ಲಿ ಮಡದಿ ಮನೆಯ ಕದ ತಟ್ಟಿದರು. ಮಡದಿ ಹೊರ ಬಂದು ನೋಡಿದಳು. ಮೈಯೆಲ್ಲಾ ಕೊಳೆ ತುಂಬಿತ್ತು. ಕಂಗಳಲ್ಲಿ ಮೋಹ ತುಂಬಿತ್ತು. ‘ಇದೇನಿದು ಇಷ್ಟು ರಾತ್ರಿ ಹೊತ್ತಿನಲ್ಲಿ ಹೀಗೆ ಬಂದಿದ್ದೀರಿ?’ ಎಂದಳು. ಹೌದು ಕಾಣದೇ ಇರಲಾಗಲಿಲ್ಲ ಅದಕ್ಕೆ ಬಂದೆ ಎಂದ ಪತಿ. ಪತಿಯ ಮೋಹ ಕಂಡ ಜಾಣ ಸತಿ ಹೀಗೆ ಹೇಳಿದಳು. ‘ನೀವು ಇಷ್ಟು ಪ್ರೇಮವನ್ನು ದೇವರ ಮೇಲೆ ಇಟ್ಟಿದ್ದರೆ ನಿಮಗೆ ದೇವರ ದರ್ಶನವಾಗುತ್ತಿಲ್ಲ!’ ಮಡದಿಯ ಮಾತು ಕೇಳಿದ ತುಳಸಿದಾಸರಿಗೆ ಒಮ್ಮೆಲೇ ಸತ್ಯ ಹೊಳೆಯಿತು.ಮೋಹವೆಂಬ ಕತ್ತಲೆ ಕಳೆದು ಜ್ಞಾನ ಜ್ಯೋತಿಯ ಹೊತ್ತಿಸಿದೆ. ನನ್ನ ಪಾಲಿನ ಗುರು ನೀನು. ಕಣ್ತೆರೆಸಿದ ದೇವತೆಯೂ ನೀನು. ಎನ್ನುತ್ತ ಮಡದಿಯ ಮನೆಯಿಂದ ಹೊರ ಬಂದ. ಮೈ ಮನವೆಲ್ಲ ಸುತ್ತಿದ್ದ ಮೋಹದ ಪೊರೆ ಕಳಚಿಕೊಂಡ. ಸತ್ಯದರ್ಶನ ಪಡೆದು ಮಹಾ ಸಂತನಾದ.      ಇದು ಜನ ನಾಲಿಗೆಯ ಮೇಲೆ ನಲಿದಾಡುವ ಕಥೆ.ಪುರಾಣ ಇತಿಹಾಸಗಳಲ್ಲಿ ಇಂತಹ ಕಣ್ತೆರೆಸಿದ ಕಥೆಗಳು ಹೇರಳವಾಗಿ ಲಭ್ಯ. ಹೀಗಿದ್ದಾಗ್ಯೂ ನಾವು ನಮ್ಮದೇ ಮೋಹ ಲೋಕದಲ್ಲಿ ಮೇಲೇಳದಂತೆ ಮುಳುಗಿದ್ದೇವೆ. ಒಬ್ಬೊಬ್ಬರಿಗೆ ಒಂದೊಂದು ಮೋಹ. ಹೆಣ್ಣು ಹೊನ್ನು ಮಣ್ಣಿನ ಹಿಂದೆ ಬಿದ್ದು ಜೀವನದಾನಂದವನ್ನು ಕಳೆದುಕೊಂಡು ದಿಕ್ಕು ತಪ್ಪಿದವರಂತೆ ತಿರುಗುತ್ತಿದ್ದೇವೆ. ಜ್ಞಾನವೆಂಬ ಕಣ್ಣಗಲಿಸಿ ನೋಡಿದರೆ ಎಲ್ಲೆಲ್ಲೂ ನಿರ್ಮೋಹದ ಬೆಳಕು ಕಣ್ತುಂಬಿಸಿಕೊಳ್ಳುವ ಸುದೈವ ದೊರೆಯದೇ ಇರದು.  ಮುಂಜಾನೆದ್ದು ಕಿವಿಗೆ ಬೀಳುವ ಹಕ್ಕಿಗಳ ಕಲರವ, ಬಾನಿಗೆ ಬಂಗಾರದ ಬಣ್ಣ ಬಳಿಯುತ್ತ ಉದಯಿಸುವ ಸೂರ್ಯ, ಕತ್ತಲಲ್ಲಿ ಮಿನುಗಿ ನಗುವ ನಭದ ತಾರೆಗಳು, ಸದಾ ಉತ್ಸಾಹದಲ್ಲಿರುವ ಚಿಕ್ಕ ಮಕ್ಕಳನ್ನು ಕಂಡರೆ ನಮ್ಮಲ್ಲೂ ಸಂತಸದ ಕಾರಂಜಿ ಚಿಮ್ಮುವುದು. ಆಡುವ ಮಕ್ಕಳು ಆಟಿಕೆಯಲ್ಲಿ ಮುಳುಗಿ ಚಿಮ್ಮಿಸುವ ಬೊಚ್ಚ ಬಾಯಿಯ ನಗು ಎಂಥವರನ್ನು ಆನಂದದ ಬುಗ್ಗೆಯಲ್ಲಿ ಮುಳುಗಿಸುತ್ತದೆ. ಕಡಲನ್ನು ನೋಡುತ್ತ ಅದರ ಅಲೆಗಳ ಅಬ್ಬರದಲ್ಲಿ ಕಳೆದು ಹೋಗುವುದು ಎಲ್ಲಿಲ್ಲದ ಸಂತಸ ನೀಡುವುದು.ಜೀವನವೇ ಆನಂದ ಧಾರೆ ಎನ್ನಿಸದೇ ಇರದು.  ಜೀವನದ ಮೂಲಧಾರೆ ಯಾವುದಿರಬಹುದು? ಎಲ್ಲಿಂದ ಆರಂಭವಾಗಿರಬಹುದು ಎಂದು ತಿಳಿಯುವುದು ಸುಲಭದ ಸಂಗತಿಯಲ್ಲ.ಬಹಳಷ್ಟು ಅರಿತವರಿಗೂ ವಿದ್ವಾಂಸರಿಗೂ ಪ್ರಾಯಶಃ ಬಹಳ ಬಹಳ ಸಮಯದವರೆಗೂ ಚರ್ಚಿತ ವಿಷಯವಾಗಿದೆ ಎಂದೆನಿಸುತ್ತದೆ. ಮನುಷ್ಯನ ಅಂತರಂಗದತ್ತ ಮನಸ್ಸನ್ನು ಕೇಂದ್ರೀಕರಿಸಿದರೆ ಹೊಳೆಯುವ ಸೀದಾ ಸರಳ ಉತ್ತರ ಮೋಹವನ್ನು ತೊರಯುವುದು. ಪ್ರತಿ ದಿನವನ್ನು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವುದೇ ಬದುಕಿನ ಪರಮೋಚ್ಛ ಧ್ಯೇಯ. ಇದಕ್ಕಾಗಿಯೇ ಕಬ್ಬಿಣದ ಕಡಲೆಯಂತಿರುವ ಬದುಕನ್ನು ತಿಳಿದುಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಹಾಗೆ ನೋಡಿದರೆ ಜೀವನ ತುಂಬಾ ಸರಳ ಇದೆ. ಅದನ್ನು ಸಂಕೀರ್ಣ ಮಾಡಿಕೊಂಡವರೇ ನಾವು. ನಮ್ಮ ವಿಚಾರಗಳು ನಮ್ಮ ಪ್ರಪಂಚವನ್ನು ರೂಪಿಸುತ್ತವೆ ಎಂದು ಗೊತ್ತಿದ್ದೂ ಅವುಗಳ ಮೇಲೆ ಹತೋಟಿ ಸಾಧಿಸದೇ ಮೋಹದ ಬಲೆಯಲ್ಲಿ ಬಿದ್ದಿದ್ದೇವೆ. ಕಣ್ಣು ಕಾಣದ ಗಾವಿಲರಂತೆ ಆಡುತ್ತಿದ್ದೇವೆ. ಯಾವುದರ ಬಗ್ಗೆ ಗಮನ ಹರಿಸುತ್ತೇವೆಯೋ ಅದು ಬೆಳೆಯುತ್ತದೆ. ನಾನು ನನ್ನದೆಂಬ ಮೋಹದ ಬೆನ್ನು ಹತ್ತಿದರೆ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತದೆ ಬದುಕು ಕತ್ತಲಲ್ಲಿ ಮುಳುಗಿ ನರಳುತ್ತದೆ. ನಿರ್ಮಲ ಮನಸ್ಸಿನಿಂದ ನಿರ್ಮೋಹದತ್ತ ಮುಖ ಮಾಡಿದರೆ ಹೋದ ದಿಕ್ಕು ದಿಕ್ಕಿನಲ್ಲೂ ಬದುಕಿನ ಪರಮ ಸತ್ಯದ ಕಾಮನ ಬಿಲ್ಲು ಕಮಾನು ಕಟ್ಟಿ ಕರೆಯುತ್ತದೆ. ಮೋಹ ನಾಚಿ ನೀರಾಗಿ ದೂರ ಸರಿಯುತ್ತದೆ.

ಮೋಹದ ಬೆನ್ನು ಹತ್ತಿದರೆ . . . . . Read Post »

ಇತರೆ

ಮಲೆನಾಡಿಗರ ತುಮುಲ

ಅನಿಸಿಕೆ ಮಲೆನಾಡಿಗರ ತುಮುಲ ಗಣೇಶಭಟ್ ಶಿರಸಿ ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರ ಸಹಭಾಗಿತ್ವವನ್ನ ಕಡ್ಡಾಯಗೊಳಿಸಬೇಕೆಂಬ ಗಾಡ್ಗೀಳ ವರದಿ, ಗುತ್ತಿಗೆದಾರರ, ಉದ್ಯಮಿಗಳ, ಅಧಿಕಾರಿಗಳ ರಾಜಕಾರಣಿಗಳ ಕಣ್ಣುರಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸರ್ಕಾರದ ಖಜಾನೆಯನ್ನು ಲೂಟಿಹೊಡೆಯುತ್ತಿರುವ ಗುಂಪಿಗೆ, ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ಸಿಗುವುದು ಬೇಕಾಗಿಲ್ಲ. ಜನಸಾಮಾನ್ಯರು ಈ ಗುಂಪಿನ ಗುಲಾಮರಾಗಿ ಸದಾ ಇರಬೇಕು, ಸಂಪತ್ತನ್ನು ತಾವು ಕೊಳ್ಳೆಹೊಡೆಯುತ್ತಿರಬೇಕೆಂದು ಬಯಸುವವರು ಈ ವರದಿಯ ಕುರಿತು ಜನರಲ್ಲಿ ಅಪನಂಬಿಕೆ, ಭೀತಿಯನ್ನು ಹುಟ್ಟಿಸುತ್ತಿದ್ದಾರೆ.   ಪರಿಸರ ಪೂರಕ ಅಭಿವೃದ್ಧಿಯ ಪಥದಿಂದಲೇ ಮಾನವ ಸಮಾಜದ ಏಳ್ಗೆ , ಉನ್ನತಿ, ಮತ್ತು ಪ್ರಗತಿಯ ನಿರಂತರತೆ ಸಾಧ್ಯ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಎಷ್ಟೋ ನಾಗರಿಕತೆಗಳು ನಶಿಸಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ. ಆರ್ಥಿಕ ವಿಕೇಂದ್ರೀಕರಣದತ್ತ ಅಡಿ ಇಡುವ ಗಾಡ್ಗೀಳ ವರದಿಯ ಅನುಷ್ಠಾನ ಉತ್ತಮ ಆಯ್ಕೆ. ಈ ವರದಿಯನ್ನು ಈಗಾಗಲೇ ಮೂಲೆಗುಂಪು ಮಾಡಿರುವದರಿಂದ ಕನಿಷ್ಠ ಪಕ್ಷ ಕಸ್ತೂರಿರಂಗನ್ ವರದಿಯನ್ನಾದರೂ ಅನುಷ್ಠಾನಕ್ಕೆ ತಂದು , ಮಾನವ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ತಡೆ ಒಡ್ಡಲೇ ಬೇಕು. ಸ್ವಾರ್ಥಿಗಳ ಹುನ್ನಾರಕ್ಕೆ ಒತ್ತು ನೀಡಿದರೆ,  ರಾಜ್ಯದ ಪರಿಸ್ಥಿತಿ ಅದರಲ್ಲೂ ವಿಷೇಶವಾಗಿ ಮಲೆನಾಡ ನಿವಾಸಿಗಳ ಬದುಕು ಅಪಾಯಕ್ಕೆ ಸಿಲುಕುವುದು ನಿಶ್ಚಿತ.     ಪಶ್ಚಿಮ ಘಟ್ಟಗಳ  ಅರಣ್ಯ ಮತ್ತು ಜೀವ ವೈವಿಧ್ಯತೆಯ ನಾಶದಿಂದ ಭಾರತ ಮಾತ್ರವಲ್ಲ ಪಾಶ್ಚ್ಯಾತ್ಯ ರಾಷ್ಟ್ರಗಳೂ ಹವಾಮಾನ ವೈಪರೀತ್ಯ  ಅನುಭವಿಸ ಬೇಕಾಗುತ್ತದೆಂಬುದನ್ನು ಅಧ್ಯಯನಗಳು ದೃಢಪಡಿಸಿವೆ.       ಮಾನವ ಮತ್ತು ಪರಿಸರದ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಜನರ ಸಹಭಾಗಿತ್ವದೊಂದಿಗೆ ಈ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯ; ಸ್ವ ಹಿತಾಸಕ್ತ ಗುಂಪುಗಳ ಹಿಡಿತದಿಂದ ಹೊರಬಂದು ನೇತಾರರು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೇ.   ********************************************

ಮಲೆನಾಡಿಗರ ತುಮುಲ Read Post »

ಇತರೆ

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು

ಲೇಖನ ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು  ಡಾ.ರೇಣುಕಾ. ಅ. ಕಠಾರಿ ಕನ್ನಡ ನಾಡಿನ ಚರಿತ್ರೆಯಲ್ಲಿ ‘ವಚನ ಸಾಹಿತ್ಯ’ ಹೊಸ ಮೈಲುಗಲ್ಲನ್ನೇ ಸೃಷ್ಠಿಸಿತ್ತು. ಕುಟುಂಬದಲ್ಲಿ ಹೆಣ್ಣು ಸ್ವಾತಂತ್ರ್ಯ   ಕಳೆದುಕೊಂಡ ಕಾಲದಲ್ಲಿ ಶರಣ ಪರಂಪರೆಯು ಆಕೆಗೆ ಸ್ಥಾನವನ್ನು ಒದಗಿಸಿಕೊಟ್ಟಿತು. ಈ ಮೊದಲು ಹೆಣ್ಣನ್ನು ಶೂದ್ರ ಸಮಳೆಂಬ ಅಪವಾದವನ್ನು ಹೊತ್ತುಕೊಂಡು ಬದುಕಬೇಕಾಗಬೇಕಿತ್ತು. ಹಾಗೆ ಅವಳನ್ನು  ಅಜ್ಞಾನಿಯನ್ನಾಗಿ ಮಾಡಿದ್ದರು. ಮಹಿಳೆಯರಿಗೆ ಮೋಕ್ಷ ಬೇಕಾದರೆ ಪತಿಯ ಸೇವೆಯ ಮೂಲಕವೇ ಸಾಧ್ಯವೆಂಬ ಕಲ್ಪನೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಿದ್ದರು. ಈ ಮೊದಲು ನಡೆಯುತ್ತಿದ್ದ ಎಲ್ಲ ಹಿಂಸಾ ಕೃತ್ಯಗಳಿಗೆ ಅಂತ್ಯ ಹಾಕಬೇಕೆಂದೇ ಹನ್ನೆರಡನೆಯ ಶತಮಾನವು ಹೊಸ ಕ್ರಾಂತಿಯ ರೂಪವನ್ನು ತಾಳಿತು. ಆ ಸಂದರ್ಭದಲ್ಲಿ ಹಲವಾರು ಮಹಿಳಾ ವಚನಕಾರ್ತಿಯರು ತಮ್ಮ ಜೀವನದಲ್ಲಿ ಕಂಡಿರುವ ಎಲ್ಲ ಸುಖ-ದು:ಖಗಳನ್ನು, ನೋವು-ನಲಿವುಗಳನ್ನು ಹೀಗೆ ಮೊದಲಾದುವುಗಳ ಕುರಿತು ವಚನಗಳನ್ನು ರಚಿಸುವುದರ ಮೂಲಕ ತಮ್ಮ ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಳ್ಳಲು ಹೊಸ ಮಾರ್ಗದ ಸೃಷ್ಠಿ ಆಗತೊಡಗಿತು. ಅಕ್ಷರವನ್ನು ಕಲಿಯದ ಅದೆಷ್ಟೋ ಮಹಿಳೆಯರು ಅಕ್ಷರ ಜ್ಞಾನದೊಂದಿಗೆ ಸಾಹಿತ್ಯ ಸೃಷ್ಠಿಯಲ್ಲಿ ಮುಂದಾದರು. ಚಿಂತನ ಮಂಥನಗಳೊಂದಿಗೆ ಪರಸ್ಪರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳವಂತಹ ಕಾಲ ನಿರ್ಮಾಣವಾಯಿತು. ಹೀಗೆ ಮಹಿಳೆಯರು ತಮ್ಮತನವನ್ನು ಅರಿತುಕೊಳ್ಳಲು ಆತ್ಮಾವಲೋಕನ ಮಾಡಿಕೊಂಡರು.  ಶರಣರ ದಾಂಪತ್ಯ ಒಂದು ಪರಂಪರೆಯ ಧರ್ಮವನ್ನೆ ಸೃಷ್ಟಿಸಿದೆ. ಬದುಕಿನಲ್ಲಿ ಶಾಂತಿ ನೆಮ್ಮದಿ ಸುಖ-ದು:ಖಗಳನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಂತಹ ಧ್ಯಾನ ಮಾರ್ಗದ ಜೊತೆಗೆ ಆಧ್ಯಾತ್ಮದ ಕೊಂಡಿಯನ್ನು ಅನುಸರಿಸಿದರು. ಲೌಕಿಕ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದು ಮತ್ತು ಅದರ ಜೊತೆಗೆ ಪರಮಾರ್ಥ ಸಾಧನೆಯ ಗುರಿ ಶರಣರದಾಗಿತ್ತು. ಇದಕ್ಕೆ ಅನುಗುಣವಾಗಿ ಸಾಕಷ್ಟು ಶರಣೆಯರು ಸತಿಪತಿ ಭಾವವನ್ನು ಪಡೆದರು. ಅನುಭವಿಸಿದ ಜೀವನದ ಸಾರವನ್ನು ಕಂಡುಕೊಂಡು, ಮಲ್ಲಿಕಾರ್ಜುನನ್ನೇ ಹುಡುಕುತ್ತ ನಿರತಳಾಗಿಯೇ ಆಧ್ಯಾತ್ಮದ ಸಾಧನೆಯನ್ನು ಕಂಡುಕೊಂಡವಳು ಅಕ್ಕಮಹಾದೇವಿ. ಅಂತೆಯೇ ಆತ್ಮ ನಿವೇದನೆಯೆನ್ನುವುದು ಎರಡು ಹೃದಯಗಳ ಅನ್ಯೋನ್ಯ ಮಿಲನವಾಗಿ ಶಿವಪಥದಲ್ಲಿ ನಡೆದು ದೇವನ ಪಾದವನ್ನು ಸೇರಲು ಸಹಾಯಕವಾಗುವ ಒಂದು ಅವಕಾಶವೆಂದು ನಂಬಿಕೊಂಡಿದ್ದರು. ಆಕೆಯ ಬದುಕಿನ ಚಿತ್ರಣದ ಎಲ್ಲ ನೆಲೆಗಳು ಅವಳ ವಚನಗಳಲ್ಲಿ ಕಾಣುತ್ತೇವೆ. ಅಕ್ಕನ ಒಂದೊಂದು ವಚನಗಳು ಒಂದೊಂದು ಕಥೆಯನ್ನು ಹೇಳುತ್ತವೆ ಹಾಗೇ ಆತ್ಮದ ಪರಿಶೋಧವೂ ಇದೆ. ಇಡೀ ಜೀವನದುದ್ದಕ್ಕೂ ಚೆನ್ನನನ್ನು ನೆನೆಯುತ್ತಲೆ ತನ್ನೊಡಲದ ವೇದನೆಯನ್ನು ಅನುಸಂಧಾನಿಸಿಕೊಳ್ಳಲು ಪ್ರಯತ್ದಿಸಿದ ಮಹಾ ಶರಣೆ. “ಉರಕ್ಕೆ ಜವ್ವನಗಳು ಬಾರದ ಮುನ್ನ ಮನಕ್ಕೆ ನಾಚಿಕೆಗಳು ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ ಹೆಂಗೂಸೆಂಬ ಭಾವ ತೋರುವ ಮುನ್ನ ನಮ್ಮವರಂದೆ ಮದುವೆಯ ಮಾಡಿದರು”            (ಅಕ್ಕನ ವಚನಗಳು: ಸಂ.ಡಾ.ಸಾ.ಶಿ. ಮರುಳಯ್ಯ- ೧೯೯೩. ಬೆಂಗಳೂರು ಪು.ಸಂ೧೫)             ಅಕ್ಕನಲ್ಲಿ ಅಂತರಂಗದ ತೊಳಲಾಟವಿದೆ. ಆಕೆಯ ಭಾವದ ಜೊತೆಗೆ ಆಕೆ ಹಾಕಿಕೊಂಡಿರುವ ನೂರಾರು ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ಇಡಲು ಬಯಸುವ ಸಾಲುಗಳು ಎದ್ದು ಕಾಣುತ್ತವೆ. ಜಾಗತೀಕರಣದ ತುದಿಯನ್ನು ದಾಟಿ ನಿಲ್ಲುತ್ತಿರುವ ನಾವುಗಳು ಆತ್ಮದ ಶೋಧದಲ್ಲಿ ತೊಡಗುವುದು ಅನಿವಾರ‍್ಯವೆನಿಸುತ್ತದೆ. ತಾನು ಮನದಲ್ಲಿ ಬಯಸಿದ ಆ ಚೆನ್ನನ ಹೆಸರು ಹೇಳುವ ಮೊದಲೆ, ಹಿರಿಯರು ಮಾಡಿದ ಮದುವೆಗೆ ಅರ್ಥವಿದೆಯಾ? ಎಂದು ವ್ಯಂಗ್ಯವಾಗಿ ಹೇಳುವ ನುಡಿ ಇವತ್ತಿಗೂ ಜೀವಂತವಾಗಿದೆ. ಅಕ್ಕನ ಈ ವಚನದಲ್ಲಿ ಹೇಳಿದ ಎಲ್ಲ ಶಬ್ಧಗಳ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸತ್ಯದ ಕೊಂಡಿ ಒಂದೊಂದೇ ಧ್ವನಿಗಳನ್ನು ಧ್ವನಿಸಿ ಎದ್ದು ನಿಲ್ಲುತ್ತವೆ. ಆನಾದಿ ಕಾಲದಿಂದಲೂ ಹೆಣ್ಣು ಎನ್ನುವ ಕಾರಣಕ್ಕೆ ಒಪ್ಪಿಗೆ ಇಲ್ಲದಿದ್ದರೂ ಮದುವೆಯೆಂಬ ಹೊಸ ಹಣೆ ಬರಹವನ್ನು ಕಟ್ಟುತ್ತಿದ್ದರು. ಇದು ಶೋಷಣೆಯ ರೂಪವೆಂದು ಭಾವಿಸುವಲ್ಲಿ ಯಾವುದೆ ತಪ್ಪಿಲ್ಲವೆಂದು ಅನಿಸುತ್ತದೆ. ಹಾಗೇ ಅಕ್ಕ ಪ್ರಶ್ನಿಸುವ ಮಾತು ಬಂಡಾಯದ ಹೊಸರೂಪವೇ ಹೊರತು ಬೇರೇನಲ್ಲ? “ಚೆನ್ನ ಮಲ್ಲಿಕಾರ್ಜುನಯ್ಯ ನೀನಿಲ್ಲದನ್ಯರ ಮುಖವ ನೋಂಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ”                  (ಅಕ್ಕನ ವಚನಗಳು, ದ್ವಿ ಸಂಸ್ಕರಣ ಸಂ.ಎಲ್. ಬಸವರಾಜು.೧೯೭೨,ಮೈಸೂರು)             ಹೆಣ್ಣು ತನ್ನತನದ ಹಿಂದೆಯೇ ಸಾಗುವುದು ಆಕೆ ಕಟ್ಟಿಕೊಂಡ ಒಂದು ಬೇಲಿ ಅಷ್ಟೇ. ಆದರೆ ಅದರಾಚೆಗೂ ಆಕೆಯ ಬೇಕು ಬೇಡಿಕೆಗಳನ್ನು ಮನದಾಳದಂತೆ ಪೂರೈಸಿಕೊಳ್ಳಲು ಅಸಾಧ್ಯವೆಂದು ಭಾವಿಸಬೇಕು? ಪರಸ್ಪರವಾಗಿ ಇರುವ ಬದುಕೇ ಭಿನ್ನ. ಮುಖಾಮುಖಿಯಾಗಿಸದೇ ಮತ್ತು ಬೇರೆ ಎಲ್ಲಿಯೋ ಇರುವ ಚಹರೆಯನ್ನು ಅನುಸಂಧಾನ ಮಾಡಿಕೊಳ್ಳಲು ಸಾಧ್ಯವೇ? ಎಂಬ ವಿಚಾರವಂತಿಕೆಗಳು ಬಹು ಸವಾಲನ್ನು ಎತ್ತುತ್ತವೆ. ಅಕ್ಕನ ತುಡಿತಗಳು ವೇದನೆಯಾಗಿ ಅಲಿದಾಡುವ ಬಗೆ ಬಹು ತನ್ಮಯತೆಯನ್ನು ಉಂಟು ಮಾಡುತ್ತದೆ. ಅಂದರೆ, ‘ಚೆನ್ನ ಮಲ್ಲಿಕಾರ್ಜುನೆನಗೆ ಕಟ್ಟದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವನು’. ಎಂದು ಅರುಹುವ ಮಾತು ಇಂದಿಗೂ ಜೀವಂತವಾಗಿ ನಮ್ಮನ್ನು ಪ್ರಶ್ನಿಸುತ್ತದೆ. ಇದೇ ನಾವು ಆತ್ಮಾವಲೋಕವೆಂದು ಕರೆಯುವುದು. ಹುಡುಕಾಟದ ಆಕೆಯ ತಲ್ಲಣಗಳು ಒಂದೊಂದೆ ಅಲೆಯಾಗಿ ಅಪ್ಪಳಿಸುವ ಒಡಲ ದಂಡೆಗೆ ಆತ್ಮದ ಸಾಕ್ಷಾತ್ಕಾರದ ಅವತಾರವಾಗಿದೆಂದು ಅರ್ಥವಾಗುವುದು. “ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ ಕಾಯದ ಸುಖವ ನಾನೇನೆಂದರಿಯನು ಆರು ಸೋಂಕಿದರೆಂದರಿಯೆನು ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚ(ಪ್ಪಿ)ತವಾದ ಒಳಿಕ ಹೌರಗೇನಾಯಿತೆಂದರಿಯೆನು” (ಪು.ಸA ೨೩ ವಚನ ಸಂ ೭೬-ಅಕ್ಕನ ವಚನಗಳು: ದ್ವಿ ಸಂಸ್ಕರಣ ಸಂ.ಎಲ್.ಬಸವರಾಜು ೧೯೭೨, ಮೈಸೂರು) ಹೆಣ್ಣು ತನ್ನೊಳಗೆಯೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾಳೆ.  ಹಾಗೆ ಅಕ್ಕನ ಮನದ ಪ್ರಪಂಚದಲ್ಲಿ ಆ ಚೆನ್ನನ್ನು ಕಾಣುವ ಹಂಬಲ ಹೆಣ್ತತನದ ಒಂದು ರೂಪ ಅಷ್ಟೇ ಎಂದು ತಿಳಿಯುತ್ತದೆ. ಇದು ಸರ್ವಕಾಲಕ್ಕೂ ಸತ್ಯವೆ ಆಗಿರುತ್ತದೆ. ನೀನೆ ನನ್ನ ಪ್ರಾಣವೆಂದ ಮೇಲೆ ಎಲ್ಲವೂ ನೀನೆ ಇದರಲ್ಲಿ ಸಂಶಯವೇ? ಪಾರಮಾರ್ಥಿಕದ ಸುಖವೇ ಬೇಡವೆಂದು ತನುವಿನಲ್ಲಿ ಇರುವ ನಿನ್ನ ಇರುವಿಕೆಯ ಕಾಯಕವೊಂದೆ ಸಾಕು ಎಂದು ಹೆಣ್ಣು ತನ್ನ ನಿವೇದನೆಗಳನ್ನು ಒಗ್ಗೂಡಿಸುವ ಪರಿ ಅಕ್ಕನಲ್ಲಿ ಅನನ್ಯವಾಗಿದೆ.. ಬೇರೆಯವರ ಮಾತುಗಳ ನಿಂದನೆಯೂ ಬಂದರೂ ಬಿರುಗಾಳಿಗೆ ಅಣುರೇಣುವಿನಂತೆ ಮಾಯವಾಗುವೆಂಬ ಅಕ್ಕನ ಮನದ ಒಪ್ಪತ ನಿಲುವು ಸಾಟಿಯಾಗಿದೆ. “ಹಸಿವಾದಡೆ ಊರೊಳಗೆ ಬಿಕ್ಷಾನ್ನಗಳುಂಟು  ತೃಷೆಯಾದಡೆ ಕೆರೆ ಹಳ್ಳ ಭಾವಿಗಳುಂಟು  ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು  ಶಯನಕ್ಕೆ ಹಾಳು ದೇಗುಲಗಳುಂಟು  ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು” (ಶಿವಶರಣೆಯರ ವಚನ ಸಂಪುಟ. ಸಂ.ಡಾ. ವೀರಣ್ಣ ರಾಜೂರ ೧೯೯೩. ಬೆಂಗಳೂರು ಪು.ಸಂ. ೧೦೪. ಪು. ೩೩೬)  ಸಹಜವಾಗಿ ಜೀವವನ್ನು ಉಳಿಸಿಕೊಳ್ಳಲು ಮತ್ತು ಬದುಕು ನಡೆಸಲು ಕೆಲವು ಸಕ್ರಿಯೆಗಳ ಅಥವಾ ಆಹಾರ ಪದಾರ್ಥಗಳು ಚಿಕ್ಕ ಗುಡಿಸಲು ಅವಶ್ಯಕವಿರುತ್ತದೆ. ಅವುಗಳನ್ನು ಪಡೆದುಕೊಂಡ ಮೇಲೆ ಮನವೆಂಬ ಶುದ್ಧಿಗೆ ಆತ್ಮದ ಅವಲೋಕನ ಹೊಳೆಯಬೇಕು. ಆಗ ಮಾತ್ರ ಆತ್ಮದ ಸಂಗಾತಿಯ ಪೂರ್ಣತೆ ಇರುವಿಕೆ ಆಗುತ್ತದೆ. ಅಕ್ಕಳ ಚೆನ್ನನೊಂದಿಗೆ ಮಾಡಿಕೊಂಡಿರುವ ಸಂಧಾನದ ಅರಿವು ಇಂದು ನೂತನ. “ಅಕ್ಕನ ವಚನಗಳು ಅವಳ ಆತ್ಮಚರಿತೆಯ ಮತ್ತು ವ್ಯಕ್ತಿತ್ವದ ಜೀವಂತ ಮತ್ತು ಜ್ವಲಂತ ದಾಖಲೆಗಳಾಗಿವೆ’’ ಎಂದು ಡಾ.ರಂ.ಶ್ರೀ ಮುಗಳಿರವರು ಹೇಳಿರುವ ಹೇಳಿಕೆ ಸತ್ಯವೆನಿಸುವುದು. ಆತ್ಮವಂಚನೆ ಇಲ್ಲದೆ ಅಕ್ಕನ ವಚನಗಳು ಆತ್ಮ ಶೋಧನೆಯ ಪ್ರಕ್ರಿಯೆಯಲ್ಲಿ ಮೂಡಿಬಂದಿದೆ. ಹಾಗೇ ಚೆನ್ನನೊಂದಿಗೆ ಅಕ್ಕ ಅತ್ಮವಲೋಕನ ಮಾಡಿಕೊಂಡ ಪರಿ ಅನನ್ಯವಾದುದು. ಅಕ್ಕಳ ಈ ನಿವೇದನೆಯು ಪರಂಪರೆಯಲ್ಲಿ ಒಂದು ಗಟ್ಟಿ ನೆಲೆಯನ್ನು ಸ್ಥಾಪಿಸಿದ್ದು ವಿಶೇಷ. ಹೆಣ್ಣಿನ ಆತ್ಮ ನಿವೇದನೆಗೆ ಮುಕ್ತ ಸ್ವಾತಂತ್ರ್ಯವಿದ್ದಿಲ್ಲಾ? ಎನ್ನುವ ಅನುಮಾನದ ಬೆಂಕಿ ಇದೀಗ ಬೂದಿಯಾಗಿದೆ. ಸ್ವಾತಂತ್ರ್ಯ ವಿಲ್ಲದ ಕಾಲದಲ್ಲಿ ಅಕ್ಕಳು ತನ್ನ ವಿಚಾರದ ಕಹಿ-ಸಿಹಿ ನೆನಪುಗಳನ್ನು ಆತ್ಮದೊಳಗೆ ಅಡಗಿಸಿ ಅವುಗಳನ್ನು ವಿಹರಿಸಲು ರೂಪಕದ ಮೂಲಕ ಕ್ರಿಯೆ ನಡೆಸಿದಳು. ಆ ಕಾರಣಕ್ಕೆ ಅಕ್ಕಮಹಾದೇವಿಯ ಆತ್ಮ ನಿವೇದನೆಗಳ ಹೊಳಪು ಇವತ್ತು ಪ್ರಜ್ವಲಿಸುತ್ತಿವೆ. ಹೆಣ್ಣು ಏಕಕಾಲದಲ್ಲಿ ಮಾಯೆಯಾಗಿ, ಸಂಪತ್ತಾಗಿ, ಸಖಿ ಮತ್ತು ಸತಿಯಾಗಿ ಜೊತೆ ಜೊತೆಗೆ ಹಾಕುವ ಹೆಜ್ಜೆಗಳು ಸವಾಲಾಗಿರುತ್ತವೆ. ******************************************************

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು Read Post »

ಇತರೆ

ಚಿಟ್ಟೆ

ಲೇಖನ ಚಿಟ್ಟೆ ಆಶಾ ಸಿದ್ದಲಿಂಗಯ್ಯ ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಕಾಯ್ರ್ನ್ಸ್ ಬರ್ಡ್ವಿಂಗ್ ಎನ್ನುವುದು ಆಸ್ಟ್ರೇಲಿಯಾದಲ್ಲಿನ ಅತಿ ದೊಡ್ಡ ಚಿಟ್ಟೆ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ ‘ಲೆಪಿಡಾಪ್ಟರಿಸ್ಟ್’ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆಯು ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಮ್ಯಾಣ ಮಲ್ಲಿಗೆ ಗಿಡ.  ಗಿಡದ  ಎಲೆಯ ತುಂಬೆಲ್ಲಾ ಸುಮಾರು ಗಾಢ ಕೆಂಪು ವರ್ಣದ, ಹಸಿರು ಬಣ್ಣದ ತಲೆ, ಉಳಿದ ಭಾಗದಲ್ಲಿ ಸಣ್ಣ ಸಣ್ಣ ಮುಳ್ಳಿನಂತಹ ಮೃದು ಕವಲುಗಳಿರುವ  ಕಂಬಳಿಹುಳುಗಳು ಹರಿದಾಡುತ್ತಾ ಎಲೆಯನ್ನು ಭಕಾಸುರನಂತೆ ಮುಕ್ಕುತ್ತವೆ. ಹಾಗೆ ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ ಬೆಳೆಯತೊಡಗುತ್ತವೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುವುದು. ಅವು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾವೆ ಮತ್ತು ನಿರಂತರವಾಗಿ ತಿನ್ನುತ್ತವೆ.  ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು. ಚಿಟ್ಟೆಯ ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವುಗಳ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ  ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೂವಿಂದ ಹೂವಿಗೆ ಹಾರುವ ಮಕರಂದವನ್ನು ಹೀರುವ  ಚಿಟ್ಟೆಯನ್ನು ಗಮನಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಕರ್ಷಸಿಸುವ ಚಿಟ್ಟೆಗಳು ಅಲ್ಪಯುಷ್ಯ ಹೊಂದಿದ್ದರೂ ಹಾರಡುತ್ತ ಖುಷಿಯಾಗಿ ಜೀವನ ಕಳೆಯುತ್ತಾ, ಸದಾ ಕೊರಗುವ ಮನುಷ್ಯರಿಗೆ ಜೀವನ ಪಾಠವು ಸಹ ಹೌದು ಚಿಟ್ಟೆಯ ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಮರಿಹುಳುಗಳು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವು ಸಹಜವಾಗಿ ತಿಳಿದಿರುತ್ತವೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವುಗಳ pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರನ್ನು ಕುಡಿಯುವ ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವ ನೀರನ್ನು ಪಡೆಯುತ್ತವೆ.  ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕುತ್ತವೆ..  ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತವೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ, ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಮತ್ತು ಗಾಳಿಯಿಂದ ರಕ್ಷಿಸಲು ಬಯಸುತ್ತವೆ. .*********************************************

ಚಿಟ್ಟೆ Read Post »

ಇತರೆ

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ

ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು.

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ Read Post »

ಇತರೆ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ ೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆವ್ಹಾನಿಸಲಾಗಿದೆ.ಪ್ರಶಸ್ತಿಯು ೫ ಸಾವಿರ ನಗದು,ಸ್ಮರಣಿಕೆ ಒಳಗೊಂಡಿದೆ.ಆಸಕ್ತ ಕವಿಗಳು ೨೦೨೦ ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆಸಂಚಾಲಕರು, ನಾಗಶ್ರೀ ಕಾವ್ಯಪ್ರಶಸ್ತಿ ಸಮಿತಿಸಿಂದಗಿ,ವಿಜಯಪುರ ಜಿಲ್ಲೆಈ ವಿಳಾಸಕ್ಕೆ ಪ್ರೊಫೆಷನಲ್ ಕೋರಿಯರ್ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ +918951375140,988065654 ಸಂಪರ್ಕಿಸುವಂತೆ ಕೋರಿದ್ದಾರೆ.

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ Read Post »

ಇತರೆ, ಲಹರಿ

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ ನಿರತನಾದರೆ ನನ್ನ ಮರೆತು ತನ್ಮಯನಾಗಿ ಬಿಡತಿ. ಅನೇಕ ಸಲ ಫೋನಾಯಿಸಿದರೂ ರಿಸಿವ್ ಮಾಡಲ್ಲ.  ನಾನು ಸಿಟ್ಟಿನಿಂದ ಮುಖ ಉಬ್ಬಿಸಿ ಕೂತರೆ ಸಂಜೆ ನೇರ ಬಂದವನೇ ಕೊರಳಿಗೆ ಬೆರಳಹಾರ ಹಾಕಿ ಕೆನ್ನೆ ಚುಂಬಿಸಿ  ನಿನ್ನ ಬೆವರು ಘಮಲಿನಲ್ಲಿ ಮೀಯಿಸಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತವಾಗಿದೆ. ಹೀಗಾಗಿ ನನ್ನ‌ ಸಿಟ್ಟು ಗಾಳಿಗಿಟ್ಪ ದೀಪದಂತೆ ಆಗುತ್ತದೆ. ಅಪ್ಪಾಜಿ ಪ್ಲೀಜ್ ಕ್ಷಮಿಸು ಅಂತ ನನ್ನ ಮುದ್ದು ಮಾಡುವಾಗ ನನಗೆ ಸಿಟ್ಟಿನಲ್ಲಿಯೇ ಒಲವು ಹೆಚ್ಚು ಲವಲವಿಕೆ ನೀಡುತ್ತದೆ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕದ ಚೆಲುವೆ ಎಂದು ರಾಗವಾಗಿ ಹಾಡುವ ನಿನ್ನ ದನಿಗೆ ಸೋತು ಶರಣಾಗಿ ಬಿಡುವೆ.      ನನಗೆ ಕೊಂಚ ಆರಾಮ ತಪ್ಪಿದರೂ ನಿನ್ನ ಜೀವ ಬಾಡಿ ಬಸವಳಿಯುತ್ತೆ.   ಅತಿಯಾದ ಕಾಳಜಿ ಮಾಡಿ ನನ್ನ ಆರಾಮ ಮಾಡುವೆ.  ಕಣ್ಣ ರೆಪ್ಪೆಯಂತೆ ಕಾಯುವ ನಿನ್ನ ಹೃದಯ ಅನುರಾಗಕೆ ಬಣ್ಣಿಸಲು ಪದಗಳೇ ಇಲ್ಲ ಗೆಳೆಯ. ಟೆಲಿಫೋನ್ ಗೆಳತಿ ನೀನಿಲ್ಲದೆ ಇರಲಾರೆ ಎಂದು ಛೇಡಿಸಿ ಕಾಡುವ ನೀ ಹಿಂಗ ಅಚಾನಕ್  ದೂರಾಗಿ ಹೋಗತಿ ಅಂದುಕೊಂಡಿರಲಿಲ್ಲ ಗೆಳೆಯಾ.. . ಯಾಕೆ ‌ದೂರಾದೆ ಏನಾಯ್ತು ನಿನ್ನ  ಒಲವು. ಬೊಗಸೆ ಕಂಗಳ ನಿನ್ನ ಗೆಳತಿಯನ್ನು ಮರೆಯಲು ನಾ ಮಾಡಿದ ತಪ್ಪಾದರೂ ಏನು? ನೀನಿಲ್ಲದೆ ಅರೆ ಜೀವವಾಗಿರುವೆ. ಚಂದ್ರನ ತಂಪು ಬಿಸಿಲಾಗಿದೆ.ಸುಳಿಯುವ  ಗಾಳಿಯಲೂ ನಿನ್ನನೇ ಹುಡುಕುವಂತಾಗಿದೆ. ನೀನಿಲ್ಲದೆ ಈ ಜನ್ಮದಲ್ಲಿ ನನಗೆ ಬದುಕುವ ಆಸೆಯಿಲ್ಲ. ನಿನ್ನ ಸಾನ್ನಿಧ್ಯ, ಆಲಿಂಗನ, ಬಿಸಿಯುಸಿರು ಆ ಮಿಂಚು ಕಂಗಳಲ್ಲಿ ವ್ಯಕ್ತವಾಗುವ ಮಾತು ಗಳಿಗೆ ಮೀರಿದ ಭಾವನೆಗಳನ್ನು ಹೆಂಗೆ ಮರೆಯಲಿ ದೇವರಂಥ ಗೆಳೆಯಾ… ವರ್ಷ ದ ಮೂರೂ ಕಾಲಗಳಲ್ಲಿಯೂ ಧೋ ….. ಎಂದು ಒಲವಿನ ಮಳೆ ಸುರಿಸುತ್ತಿದ್ದರೆ  ಈ ನಿನ್ನ ಗೆಳತಿ ಪುನೀತಳಾಗಿ ಅರಳುತ್ತಿದ್ದಳು. ಪ್ರೀತಿಯ ಅಮೃತಧಾರೆ ಉಣಿ‌ಸಿ ದೂರ ಹೋದೆ. ನೀ ಬರುವ ದಾರಿಯಲಿ ಕಂಗಳ ಹಾಸಿ ಕಾಯುತಿರುವ…..  ನಿನ್ನ ಕಪ್ಪು ಕಂಗಳ ಚೆಲುವೆ… ****************************************

ಒಲವಿನೋಲೆ.. Read Post »

ಆರೋಗ್ಯ, ಇತರೆ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ ಮಾಡಿಸ್ಕೊಂಡರೆ ಸರಿ ಹೋಗ್ತೀರ . ಚಿಂತೆ ಭಯವನ್ನೆಲ್ಲಾ ಬಿಟ್ಟು ಪಿಸಿಯೋತೆರಪಿ  ಹತ್ತು ಸೆಶನ್ ಮಾಡಿಸಿಕೊಳ್ಳಿ ಎಂದು ಧೈರ್ಯ ತುಂಬಿದಂತಹ ಪ್ರಾಮಾಣಿಕ ವೈದ್ಯರು. ಎಷ್ಟು ವಯಸ್ಸು ? ವಾವ್ ಹಾಗೆ ಕಾಣಸೋದೇ ಇಲ್ಲ ಎಷ್ಟು ಯಂಗ್ ಕಾಣ್ತಿದೀರ ಅದು ನಿಮಗೆ ಗೊತ್ತೇ ? ಅಂತ ಪ್ರೀತಿಯಿಂದ ಕೇಳಿದಾಗ ಮನಸ್ಸಿನಲ್ಲೇ ನಕ್ಕು  ‘ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಕೇಳಿದ್ದು ಹಾಲು ಅನ್ನ ‘  ಅನ್ನೋ ಹಾಗೆ ಮೊದಲೇ ಸ್ವಲ್ಪ ಮಟ್ಟಿಗೆ ಆರೋಗ್ಯ ದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಹಾಗೂ ಅರ್ಧ ಶತಕ ಬಾರಿಸಿದ ನನಗೆ ಆ ನೋವಿನಲ್ಲೂ ಅವರ ಮಾತು ಹಿತವೆನಿಸಿ ಇದಕ್ಕಿಂತ ಹೆಚ್ಚು ರೋಗಿಗೆ ಇನ್ನೇನು ಬೇಕು ಅಂದುಕೊಂಡು ಹೌದಾ ! ಎಂದು ಅಚ್ಚರಿ ತೋರಿಸಿ ಧನ್ಯವಾದಗಳನ್ನು ತಿಳಿಸಿದೆ. ಮೃದು ಮಾತು ನಡತೆಯಿಂದಲೇ ಅರ್ಧ ನೋವು  ಕಡಿಮೆ ಮಾಡಿ ಗೆಳೆಯರಂತೆ ಚಿಕಿತ್ಸೆ ನೀಡಿದ್ದು ಭರವಸೆಯನ್ನು ತುಂಬಿದ್ದು ಫಿಸಿಯೋತೆರಪಿಷ್ಟ  ಮಿ.ಮಾನ್ತೇಷ್    ತುಂಬಾ  ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ.  ‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ‘ ಅನ್ನೋ ಹಾಗೆ ವಯಸ್ಸು ಚಿಕ್ಕ ದಾದರೂ  ಪಿಸಿಯೋಥೆರಪಿಯಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿ .ಕೆಲವು ತಿಂಗಳುಗಳಿಂದ ನಿದ್ದೆಯನ್ನೇ ಕಾಣದ ನನಗೆ ಹಾಗೂ ಒಂದು ಚಿಕ್ಕ ವಸ್ತು ವನ್ನೂ ಹಿಡಿಯಲು ಸಾಧ್ಯವಾಗದ ಈ ನನ್ನ ತೋಳುಗಳಿಗೆ ಭರವಸೆಯಿಂದ ಸಾಂತ್ವನ ನೀಡಿದ ಪುಣ್ಯಾತ್ಮರು ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಎರಡು ವರ್ಷಗಳ ಅವರ ವೃತ್ತಿಯಲ್ಲಿ 2000 ಕ್ಕೂ ಹೆಚ್ಚು ಮತ್ತು ಒಂದು ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ 800ಕ್ಕೂ ಹೆಚ್ಚು  ವಿವಿಧ ತರಹದ ಆರ್ಥೋ ಗೆ ಸಂಬಂಧ ಪಟ್ಟಂತಹ ಎಲ್ಲಾ  ರೋಗಿಗಳಿಗೆ ಫಿಸಿಯೋತೆರಪಿ ನೀಡಿ ಗಣಮುಖಮಾಡಿದಂತಹ ಅದ್ಭುತ ಫಿಸಿಯೋಥೆರಪಿಷ್ಟ್.  ಏಕೆಂದರೆ ಯಾವುದೇ ರೀತಿಯ ನೋವು ಉಪಶಮನ ಔಷಧಿಗಳನ್ನು ಸಲಹೆ ನೀಡದೆ ಕೇವಲ ಫಿಸಿಯೋ ಮತ್ತು ಬ್ರೀಥಿಂಗ್ ವಿಥ್ ಮೆಲೋಡಿ ಮ್ಯೂಸಿಕ್,  ನೀಡಲ್ ಚಿಕಿತ್ಸೆ ಹೀಗೆ ಅನೇಕ   ಥೆರಪಿ  ಯಿಂದಲೇ ನನಗೆ ಕೇವಲ ಒಂದು ತಿಂಗಳಲ್ಲೇ  ಸಂಪೂರ್ಣ ಗುಣಮುಖಳನ್ನಾಗಿಸಿದ್ದು ನನಗೆ ಸರಿಯಾದ ಸಮಯಕ್ಕೆ ಸಿಕ್ಕ ರತ್ನ ಎಂಬುದು ನನ್ನ ಅಭಿಮತ.‘ ಯಾವುದೇ ರೋಗವಿರಲಿ ಆರಂಭದಲ್ಲೇ ಅದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವಂತಹ ಇಂತಹ ವೈದ್ಯರುಗಳ ಅವಶ್ಯಕತೆಯಿದೆ ‘ದೇವರನ್ನು ನಾವು ಒಂದು ಒಳ್ಳೆಯ ವ್ಯಕ್ತಿ ಯಲ್ಲೇ ಕಾಣಬಹುದು . ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲವೆಂದನಿಸಿತು.‘ ವೈದ್ಯಃ ನಾರಾಯಣೋ ರೂಪಃ ‘   ಅನ್ನೋ ಹಾಗೆ  ವೈದ್ಯರಲ್ಲೇ ದೇವರನ್ನು ಕಂಡ  ಕ್ಷಣ . ದಿನದಿಂದ ದಿನಕ್ಕೆ ನೋವು ಗುಣಮುಖವಾದಂತೆ ಅವರಲ್ಲಿ  ನಾರಾಯಣನ ರೂಪವನ್ನೇ ಕಂಡ ನಾನು ಅವರ ಶ್ರಮಕ್ಕೆ ಹಾಗೂ ಚಿಕಿತ್ಸೆಗೆ  ಚಿರ ಋಣಿಯಾಗಿರುತ್ತೇನೆ. ಆಪತ್ಕಾಲದ ಬಾಂಧವರೆಂದರೆ ಹೃದಯವಂತ ವೈದ್ಯರು. ಹೆಚ್ಚಾಗಿ ನಲವತ್ತರ ಹರೆಯದಲ್ಲಿ ಕಾಣಿಸಿಕೊಳ್ಳುವ ಫ್ರೋಜನ್ ಶೋಲ್ಡರ್ ಎಂಬ ದೈತ್ಯ ನೋವನ್ನು ನಿರ್ಲಕ್ಷಿಸ ಬಾರದು.  ಹಾಗೂ  ಪ್ರಾರಂಭದಲ್ಲೇ ಪರೀಕ್ಷಿಸಿ  ಚಿಕಿತ್ಸೆ ಮಾಡಿಸಿ ಕೊಳ್ಳಲೇ ಬೇಕು  ಮೂಢ ನಂಬಿಕೆಗೆ ಅವಕಾಶ ಕೊಡದೆ ಮೊದಲು ವೈದ್ಯಕೀಯ ತಪಾಸಣೆ ಮಾಡಿಸ ಬೇಕು ಅನ್ನೋ ಅರಿವು ಪ್ರತಿ ಯೊಬ್ಬರಲ್ಲೂ  ಬರಬೇಕು. ಮಿತಿ ಮೀರಿದ ಸಂದರ್ಭದಲ್ಲಿ ಭಗವಂತನೂ ಅಸಹಾಯಕನಾಗಿ ಬಿಡುತ್ತಾನೆ.ವಯಸ್ಸು ಯಾವುದೇ ಇರಲಿ ಇರುವಷ್ಟೂ ದಿನ ಆರೋಗ್ಯವಂತರಾಗೇ ಇದ್ದು ಚಟುವಟಿಕೆಯಿಂದ ಕ್ರಿಯಾಶೀಲರಾಗಿ ಜೀವನ ಪಯಣ ಮುಗಿಸ ಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡಬೇಕು. ಅದರ ಜೊತೆ ದೇವರಂಥ ವೈದ್ಯರು ದೊರಕಬೇಕು. *************************************

ಆರೋಗ್ಯದ ಬಗ್ಗೆ ಕಾಳಜಿ ಇರಲಿ Read Post »

ಇತರೆ

ಲಂಕೇಶ್ ವಿಶೇಷ ಲಂಕೇಶ್ ಪತ್ರಿಕೆಯ ಪ್ರಭಾವ ಚಂದ್ರಪ್ರಭ  ಎಂಭತ್ತರ ದಶಕದ ದಿನಗಳವು. ನಾವೆಲ್ಲ ಮಾಧ್ಯಮಿಕ ಶಾಲಾ ಶಿಕ್ಷಣದ ಹಂತದಲ್ಲಿದ್ದ ಸಮಯ. ಅಪ್ಪನ ಪುಸ್ತಕ ಪ್ರೇಮದಿಂದಾಗಿ ಸಹಜವಾಗಿ ನಾವೆಲ್ಲ ಮಕ್ಕಳು ಆ ಪ್ರಭಾವಕ್ಕೆ ಒಳಗಾಗಿದ್ದ ಸಂದರ್ಭ. ಚಂದಮಾಮ,  ಸುಧಾ ಪತ್ರಿಕೆಗಳು ನಿಯಮಿತವಾಗಿ ಓದಿಗೆ ಸಿಗ್ತಿದ್ದುವು. ಜೊತೆಗೆ ನಿತ್ಯ ಸಂಗಾತಿ ಪ್ರಜಾವಾಣಿ. ಲಂಕೇಶ್ ಪತ್ರಿಕೆ ಎಂಬ ಹೊಸ ಪತ್ರಿಕೆಯೊಂದು ಮನೆ ಪ್ರವೇಶಿಸಿತು. ಅಷ್ಟೇ ಸಲೀಸಾಗಿ ಮನಸ್ಸನ್ನೂ ಪ್ರವೇಶಿಸಿತು. ಮುಖ್ಯವಾಗಿ ಜಾಹೀರಾತುಗಳೇ ಇಲ್ಲದ ಹೊಸ ವಿನ್ಯಾಸ, ಆಕರ್ಷಕ ಶೀರ್ಷಿಕೆಗಳು ಪತ್ರಿಕೆಯ ವೈಶಿಷ್ಟ್ಯವಾಗಿದ್ದವು. ಪುಂಡಲೀಕ ಸೇರ ರ ಹುಬ್ಬಳ್ಳೀಯಾಂವ ನಮ್ಮ ಅಚ್ಚುಮೆಚ್ಚಿನ ಅಂಕಣ.  ಅದೇ ರೀತಿ ಚಿತ್ರವಿಚಿತ್ರ ರೇಖಾಚಿತ್ರಗಳೊಂದಿಗೆ ಬರುತ್ತಿದ್ದ ನೀಲು ಕವಿತೆಗಳು ಅರ್ಥವಾಗದಿದ್ದರೂ ಮಜವಾಗಿ ತೋರುತ್ತಿದ್ದವು.  ಯಾವಾಗಲೂ ಪತ್ರಿಕೆಯ ಸಂಪಾದಕೀಯ ಓದಬೇಕು ಅಂತ ಹೇಳ್ತಿದ್ದ ಅಪ್ಪ ಟೀಕೆ ಟಿಪ್ಪಣಿ ಓದಲು ಹೇಳ್ತಿದ್ದರು. ರಾಜಕೀಯ ಸುದ್ದಿ, ವಿಮರ್ಶೆ, ವೈವಿಧ್ಯಮಯ ಅಂಕಣಗಳ ಪತ್ರಿಕೆ ಬಲು ಜನಪ್ರಿಯವಾಗಿ ಎಲ್ಲೆಲ್ಲೂ ಓದುಗ ವಲಯ ಸೃಷ್ಟಿಸಿಕೊಂಡಿತ್ತು. ತಮ್ಮ ವೈಶಿಷ್ಟ್ಯಪೂರ್ಣ ಲೇಖನಗಳಿಂದ ಪರಿಚಿತರಾದ ಲೇಖಕರಲ್ಲಿ ಪ್ರಮುಖವಾಗಿ ಪೂರ್ಣಚಂದ್ರ ತೇಜಸ್ವಿ, ಸಿ. ಎಸ್. ದ್ವಾರಕಾನಾಥ್, ಕೋಟಗಾನಹಳ್ಳಿ ರಾಮಯ್ಯ, ಶ್ರೀಕೃಷ್ಣ ಆಲನಹಳ್ಳಿ, ನಟರಾಜ್ ಹುಳಿಯಾರ್, ರವಿ ಬೆಳಗೆರೆ, ಅಬ್ದುಲ್ ರಶೀದ್, ವೈದೇಹಿ, ಬಾನು ಮುಷ್ತಾಕ, ಸಾರಾ ಅಬೂಬಕರ ಅಲ್ಲದೆ ಇನ್ನೂ ಅನೇಕರು. ಆಳುವ ಸರ್ಕಾರದ ಧೋರಣೆಗಳನ್ನು ನಿರ್ಭಿಡೆಯಿಂದ  ಕಟು ವಿಮರ್ಶೆಗೆ ಒಳಪಡಿಸುತ್ತಿದ್ದ ಪತ್ರಿಕೆ ನಿಜ ಅರ್ಥದಲ್ಲಿ ವಿರೋಧ ಪಕ್ಷದಂತೆ ಕೆಲಸ ಮಾಡತಿತ್ತು ಅಂತ ಈಗ ಸ್ಪಷ್ಟವಾಗಿ ಅರ್ಥವಾಗ್ತದೆ. ಆಗ ಗುಂಡೂರಾವ್, ಎಸ್. ಬಂಗಾರಪ್ಪ ಅಧಿಕಾರದಲ್ಲಿದ್ದ ಕಾಲ.  ಗುಂ  ಬಂ  ಎಂಬ ಹೃಸ್ವಗಳಿಂದ ಅವರನ್ನು ಸಂಭೋಧಿಸುತ್ತಿದ್ದುದು ಜನಮಾನಸದಲ್ಲಿ ಅಪಾರ ಮೆಚ್ಚುಗೆಗೂ ಸಂಚಲನಕ್ಕೂ ಪಾತ್ರವಾದ ಸಂಗತಿಯಾಗಿತ್ತು.  ಪಿ. ಲಂಕೇಶ್ ತಮ್ಮ ಪ್ರಖರ ಚಿಂತನ ಹಾಗೂ ನಿಷ್ಠುರ ನೋಟದಿಂದ ಸಾಹಿತ್ಯ, ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದವರು. ಯಾವುದೇ ಸಂಗತಿ,  ಸನ್ನಿವೇಶಗಳೊಂದಿಗೆ ರಾಜಿಯಾಗದೆ  ಹಲವರ ಕೆಂಗಣ್ಣಿಗೆ ಗುರಿಯಾದವರು. ಮುಲಾಜಿಲ್ಲದ ಖಡಾಖಂಡಿತ ತಮ್ಮ ಬರಹಗಳು ಹಾಗೂ ಖಚಿತ ನಿಲುವಿನಿಂದಾಗಿ ತಮ್ಮ ವಿರುದ್ಧ ದಾಖಲಾದ ಕಾನೂನು ಕ್ರಮಗಳಿಂದಾಗಿ ಊರೂರು ಸುತ್ತಿದವರು. ಹತ್ತಾರು ಯುವ ಬರಹಗಾರರ ಲೇಖನಿಗೆ ವೇದಿಕೆಯಾಗಿದ್ದು ಲಂಕೇಶ್ ಪತ್ರಿಕೆ. ಅವರೆಲ್ಲ ಈಗ ಕನ್ನಡ ಸಾಹಿತ್ಯದ ಮೇರುವಾಗಿರುವುದು ಕಣ್ಣೆದುರಿನ ಸತ್ಯ. ಪತ್ರಿಕೆಯ ಜೀವಾಳವಾಗಿದ್ದಂಥವು ಚಿಕ್ಕ ಚಿಕ್ಕ ವಾಕ್ಯಗಳ ಪರಿಣಾಮಕಾರಿ ಬರಹಗಳು. ಆಡಂಬರದ ವಿಲಾಸವಿಲ್ಲದ ವಸ್ತುನಿಷ್ಠ  ಬರವಣಿಗೆ ಹಾಗೂ ದಮನಿತರ, ಶೋಷಿತರ ದನಿಯೂ ಆಗಿ ಸಾವಧಾನವಾಗಿ ಹೊರಹೊಮ್ಮಿದ್ದು ಲಂಕೇಶ್ ಪತ್ರಿಕೆ. ಯಾವುದನ್ನು ವಿರೋಧಿಸಿ ಯಾರನ್ನು ಕುರಿತಾಗಿ ಪತ್ರಿಕೆ ಬರೆಯುತ್ತಿತ್ತೊ ಅವರೇ ಪತ್ರಿಕೆಗಾಗಿ ಅತಿ ಹೆಚ್ಚು ದಾರಿ ಕಾಯುತ್ತ ಇರತಿದ್ದರು ಎನ್ನುವುದು ಲಂಕೇಶ್ ಪತ್ರಿಕೆಯ ಹೆಗ್ಗಳಿಕೆ. ಅಧ್ಯಾಪಕ, ಕತೆಗಾರ, ಕವಿ, ಸಿನಿಮಾ ನಿರ್ಮಾಣ, ನಟನೆ – ಹೀಗೆ ಬಹುಮುಖ ಆಯಾಮಗಳ ಲಂಕೇಶ್ ವ್ಯಕ್ತಿಯಾಗಿ ಬಹುಜನರ ಆದರ್ಶವಾದವರು. ಲಂಕೇಶ್ ತರಹ ಬರೆಯಬೇಕು ಎಂಬ ಹಂಬಲ ಇರಿಸಿಕೊಂಡ ಒಂದು ತಲೆಮಾರನ್ನೇ ಗುರುತಿಸಬಹುದು. ದೃಢ ತಾತ್ವಿಕ ನಿಲುವು, ತಾನು ಪ್ರತಿಪಾದಿಸುವ ತತ್ವ ಸಿದ್ಧಾಂತ ಕುರಿತು ಬದ್ಧತೆ, ಒಂದು ಬಗೆಯ ಆಕ್ರಮಣಕಾರಿ ನಡೆ ಇವೆಲ್ಲವೂ ಲಂಕೇಶ್ ವ್ಯಕ್ತಿತ್ವದ ಹೆಗ್ಗುರುತು. ಲಂಕೇಶ್ ತರಹ ಬರೆಯುವುದು ಸಾಧ್ಯವಾಗಬಹುದು ಆದರೆ ಆ ತರಹ ಬದುಕುವುದು ಕರಕಷ್ಟ. ಎದುರು ಹಾಕಿಕೊಳ್ಳುವುದು ಎದೆಗಾರಿಕೆ,  ತಾನು ನಡೆದದ್ದೇ ದಾರಿ ಎಂಬ ನಿರಂಕುಶತ್ವ, ಪ್ರತಿಯೊಂದು ಕ್ಷಣವನ್ನು ಸಂಪೂರ್ಣವಾಗಿ ಬದುಕುವುದು, ಗಡಿಯಾರವೇ ಸುಸ್ತಾಗುವಂತೆ ದೈತ್ಯವಾಗಿ ಕೆಲಸ ಮಾಡುವುದು ಇವೆಲ್ಲ ಒಟ್ಟಿಗೇ ದಕ್ಕುವ ಸಂಗತಿಗಳಲ್ಲ. ಇನ್ನೂ ಬಹುಕಾಲ ಬಾಳಿ ಬದುಕಿ ತಲೆಮಾರುಗಳನ್ನು ರೂಪಿಸಬೇಕಿದ್ದ, ಪ್ರಭಾವಿಸಬೇಕಿದ್ದ ಲಂಕೇಶ್ ಹೇಳದೇ ಕೇಳದೇ ಹೊರಟು ಹೋಗಿದ್ದು ಕನ್ನಡ ನಾಡು ನುಡಿಗೆ ಅಷ್ಟೇ ಅಲ್ಲ ಇಡೀ ಸಮುದಾಯದ ನಷ್ಟ.  ಕೆಲವರು ಹಾಗಿರುತ್ತಾರೆ, ಈಗ ಅವರು ಬದುಕಿರಬೇಕಿತ್ತು ಎಂದು ನೆನಪಿಸಿಕೊಳ್ಳುವಂಥ ಧೀರರು. ಹಾಗೆ ಹೆಜ್ಜೆ ಹೆಜ್ಜೆಗೂ ನೆನಪಾಗುವ ವ್ಯಕ್ತಿ ಮತ್ತು ಶಕ್ತಿ ಲಂಕೇಶ್. ವರ್ಷಗಳುರುಳಿದರೂ ಮತ್ತೆ ಮತ್ತೆ ಕಾಡುವ, ಕಾಯುವ ನೆನಪಾಗಿ   ನಮ್ಮೊಟ್ಟಿಗಿರುವ ಲಂಕೇಶ್ ನೆನಪಿಗೊಂದು ಪುಟ್ಟ ಸಲಾಮು.

Read Post »

ಇತರೆ

ದತ್ತಿ ಪ್ರಶಸ್ತಿವಿಜೇತರು

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪಡೆದ ಸಂಗಾತಿಯ ಬರಹಗಾರರು ವಿಶಾಲಾ ಆರಾಧ್ಯ ಕನ್ನಡ ಸಾಹಿತ್ಯ ಪರಿಷತ್ತಿನ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ ಬೊಂಬಾಯಿ ಮಿಠಾಯಿಮಕ್ಕಳ ಕವಿತೆಗಳು ವಿಭಾ ಪುರೋಹಿತ್ ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ. ಕಲ್ಲೆದೆ ಬಿರಿದಾಗ ( ಕವನಸಂಕಲನ ಹೆಸರು ಎನ್ ಆರ್ ರೂಪಶ್ರೀ ದತ್ತಿನಿಧಿ ಪ್ರಶಸ್ತಿಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿನಿಧಿ ಪ್ರಶಸ್ತಿ. ಪುಸ್ತಕದ ಹೆಸರುನಿನ್ನ ಪ್ರೀತಿಯ ನೆರಳಿನಲ್ಲಿ

ದತ್ತಿ ಪ್ರಶಸ್ತಿವಿಜೇತರು Read Post »

You cannot copy content of this page

Scroll to Top