ಸರಣಿ ಬರಹ ಅಂಬೇಡ್ಕರ್ ಓದು ಭಾಗ-6 ಜಾತಿಯತೆಯ ಕರಾಳ ಸ್ಪರ್ಶ ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ ಕೋಟಿ ಅಸ್ಪೃಶ್ಯ ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಸಿ ಗುಲಾಮಗಿರಿಯಿಂದ ಹೊರತರಲು ಭೂಕರ .ಟಿ. ವಾಸಿಂಗ್ಟನ್ ರವರ ಕಾರ್ಯಸಾಧನೆ ಪ್ರೇರಣೆ ನೀಡಿತು. ಅಮೇರಿಕಾದಲ್ಲಿನ ವಿದ್ಯಾಭ್ಯಾಸ ಪೂರ್ಣಗೊಂಡಿದ್ದರಿಂದ ಇಂಗ್ಲೇಂಡಿಗೆ ಹೋಗಿ ಅರ್ಥಶಾಸ್ತ್ರದಲ್ಲಿ ಡಿ.ಎಸ್.ಸಿ ಮತ್ತು ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬ ಮಹದಾಸೆ ಅಂಬೇಡ್ಕರರಿಗೆ ಬಲವಾಗಿತ್ತು. ಇಂಗ್ಲೇಂಡ್ ಅಂದು ಜಗತ್ಪ್ರಸಿದ್ದ ವಿದ್ಯಾಕೇಂದ್ರ. ಬರೋಡಾ ಮಹಾರಾಜರಿಗೆ ಪತ್ರ ಬರೆದು ಮನವಲಿಸಿ ವಿದ್ಯಾಭ್ಯಾಸ ಮುಂದುವರೆಸಲು ಅನುಮತಿ ಪಡೆದು 1916ರ ಜೂನ್ ಕೊನೆ ವಾರದಲ್ಲಿ ಇಂಗ್ಲೇಂಡಿಗೆ ಬಂದಿಳಿಯುತ್ತಾರೆ. ಅಮೇರಿಕಾದಲ್ಲಿ ಬ್ರಿಟಿಷರ ವಿರುದ್ದ ಹೋರಾಟ ಮಾಡುತ್ತಿರುವ ಗದ್ದಾರ ಸಂಘಟನೆಯ ಸದಸ್ಯನಾಗಿರಬೇಕೆಂದು, ಸಂಶಯಪಟ್ಟು ಅಂಬೇಡ್ಕರರನ್ನು ತಪಾಸಣೆಗೆ ಒಳಪಡಿಸಿದಾಗ ಅಂಬೇಡ್ಕರರು ಸೆಲಿಗ್ಮನ್ ರವರು ಕೊಟ್ಟಿದ್ದ ಪತ್ರವನ್ನು ತೋರಿಸುತ್ತಾ ತಾನು ಅರ್ಥಶಾಸ್ತ್ರ ಮತ್ತು ಕಾನೂನು ವ್ಯಾಸಂಗ ಮಾಡಲು ಬಂದಿರುವುದಾಗಿ ತಿಳಿಸಿ ಹಡಗು ಬಂದರಿನಿಂದ ಹೊರಡುತ್ತಾರೆ. ಅಂಬೇಡ್ಕರ್ ಅವರು ಈಗಾಗಲೇ ಎಂ.ಎ ಮತ್ತು ಪಿ.ಎಚ್.ಡಿ ಪದವಿ ಪಡೆದಿದ್ದರಿಂದ ನೇರವಾಗಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯಲು ಅನುಮತಿ ದೊರೆಯುತ್ತದೆ. ಇದರಿಂದ ನೇರವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಹಾವಿದ್ಯಾಲಯದಲ್ಲಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯುತ್ತಾರೆ. ಇದಲ್ಲದೆ ಗ್ರೆಸ್ ಇನ್ ಎಂಬಲ್ಲಿ ಕಾನೂನು ಪದವಿಗೆ ಹೆಸರು ನೋಂದಾಯಿಸುತ್ತಾರೆ. ಏಕಕಾಲದಲ್ಲಿ ಎರಡು ಪದವಿಗಳ ಅಧ್ಯಯನದಲ್ಲಿ ತೊಡಗುವರು. ಅರ್ಥಶಾಸ್ತ್ರದಲ್ಲಿ “ರೂಪಾಯಿ ಸಮಸ್ಯೆ” ಕುರಿತು ಮಹಾ ಪ್ರಬಂಧ ಬರೆಯಲು ಆಯ್ಕೆ ಮಾಡಿಕೊಳ್ಳುವರು. ಪ್ರೋಫೆಸರ್ ಎಡ್ವಿನ್ ಕ್ಯಾನನ್ ರವರು ಮಾರ್ಗದರ್ಶಕರಾಗಿರುತ್ತಾರೆ. ಸೇಲಿಗ್ಮನ್ ರಂತೆ ಕ್ಯಾನನ್ ರವರು, ಅಂಬೇಡ್ಕರರಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗುವರು. ಆದರೆ ಶಿಷ್ಯವೇತನ ಅವಧಿ ಪೂರ್ಣಗೊಂಡಿದ್ದರಿಂದ ಭಾರತಕ್ಕೆ ಮರಳಿ ಬಂದು ಬರೋಡಾ ಸಂಸ್ಥಾನದಲ್ಲಿ ಒಪ್ಪಂದದಂತೆ ಹತ್ತು ವರ್ಷಗಳ ಸೇವೆ ಸಲ್ಲಿಸಬೇಕೆಂದು ಬರೋಡಾ ಸಂಸ್ಥಾನದ ದಿವಾನರಿಂದ ಪತ್ರ ಬರುತ್ತದೆ. ಇದು ಅಂಬೇಡ್ಕರರಿಗೆ ಬಹಳ ನಿರಾಶೆಯನ್ನುಂಟು ಮಾಡಿತು. ಪ್ರೊ.ಎಡ್ವಿನ್ ಕ್ಯಾನನರು ವಿದ್ಯಾಭ್ಯಾಸ ಮುಂದುವರೆಸುವುದಾದಲ್ಲಿ ನಾಲ್ಕು ವರ್ಷ ಕಾಲಾವಧಿ ವಿಸ್ತರಿಸಿ ಕೊಡುವುದಾಗಿ ಅಂಬೇಡ್ಕರರಿಗೆ ಭರವಸೆ ನೀಡುವರು. ಪ್ರೊ.ಕ್ಯಾನನ್ ರ ಭರವಸೆಯ ಮಾತುಗಳನ್ನು ಕೇಳಿ ಸಮಾಧಾನ ಪಟ್ಟುಕೊಂಡು ಅವರಿಗೆ ವಂದಿಸಿ ಭಾರತಕ್ಕೆ ಹಿಂದಿರುಗುತ್ತಾರೆ. ಇತ್ತ ಅಂಬೇಡ್ಕರರು ಪ್ರಯಾಣಿಸುತ್ತಿದ್ದ ಹಡಗು ಮುಳಿಗಿತೆಂದು ಸುದ್ದಿಯೊಂದು ಪಸರಿಸಿಬಿಟ್ಟಿತು, ಸುದ್ದಿ ತಿಳಿದು, ರಮಾಬಾಯಿ ಮತ್ತು ಕುಟುಂಬಸ್ತರು ದುಃಖದಿಂದ ಕಂಗಾಲಾಗುತ್ತಾರೆ. ಅಂಬೇಡ್ಕರರು ಲಂಡನದಲ್ಲಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರಿದಿಸಿ ಹಡಗೊಂದರ ಮೂಲಕ ಮುಂಬೈಯಿಗೆ ಕಳುಹಿಸಿಕೊಡುವರು. ಆಗ ಇನ್ನು ಪ್ರಥಮ ಮಹಾಯುದ್ದ ಮುಂದುವರೆದಿತ್ತು. ಮೆಡಿಟೇರಿಯನ್ ಸಮುದ್ರದಲ್ಲಿ ಆ ಹಡಗು ಜರ್ಮನಿಯ ಸಬ್ ಮೆರಿನ್ ಬಾಂಬ್ ದಾಳಿಯಿಂದ ಆ ಹಡಗು ಮುಳುಗುತ್ತದೆ. ಮುಳುಗಿದ ಹಡಗಿನಲ್ಲಿ ಅದೃಷ್ಟವಶಾತ್ ಅಂಬೇಡ್ಕರರು ಇರಲಿಲ್ಲ, ಅವರು ಕೈಸರ್-ಇ-ಹಿಂದ್ ಹಡಗಿನ ಮೂಲಕ ಪ್ರಯಾಣ ಬೆಳೆಸಿದ್ದರು. 1917ರ ಜುಲೈ ತಿಂಗಳಲ್ಲಿ ಮುಂಬೈಯಿಗೆ ಅಂಬೇಡ್ಕರರು ಸುರಕ್ಷಿತವಾಗಿ ಬಂದಿಳಿದಾಗ ಮನೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತು. ಹಡಗು ಮುಳುಗಿದ್ದರಿಂದ ಕಳುಹಿಸಿದ್ದ ಸುಮಾರು ಎರಡು ಸಾವಿರ ಪುಸ್ತಕಗಳು ಮುಳುಗಿ ಹೋದವು. ಪುಸ್ತಕಗಳಿಗೆ ವಿಮೆ ಮಾಡಿಸಿದ್ದರಿಂದ ಕಷ್ಟದಲ್ಲಿದ್ದ ಅಂಬೇಡ್ಕರರಿಗೆ ವಿಮೆ ಹಣ ಬರುತ್ತದೆ. ಆ ಹಣ ಅವರಿಗೆ ಬಹಳ ಉಪಯುಕ್ತವಾಗುವುದು. ಪತ್ನಿ ರಮಾಬಾಯಿಗೆ ಖರ್ಚಿಗೆ ಅದರಲ್ಲಿ ಒಂದಿಷ್ಟು ಹಣಕೊಟ್ಟು ತಾವು ಒಂದಿಷ್ಟು ತೆಗೆದುಕೊಂಡು ಬರೋಡಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸುವ ಕರಾರಿನಂತೆ ಕೆಲಸ ನಿರ್ವಹಿಸಲು ಬರೋಡಾಗೆ ಹೊಗುವರು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಎಂ.ಎ, ಪಿ.ಎಚ್.ಡಿ, ಪಡೆದ ತನ್ನನ್ನು ಅಸ್ಪೃಶ್ಯನಂತೆ ನೋಡಿಕೊಳ್ಳದೆ ಗೌರವದಿಂದ ನೋಡಿ ಕೊಳ್ಳುತ್ತಾರೆ, ಕಛೇರಿ ಸಿಬ್ಬಂದಿ ಸ್ವಾಗತಿಸಲು ಸ್ಟೇಷನಗೆ ಬರುತ್ತಾರೆ ಅಂತಾ ನೀರಿಕ್ಷೇಯಲ್ಲಿ ಕಾಯುತ್ತಾ ನಿಂತಿದ್ದ ಅಂಬೇಡ್ಕರರಿಗೆ ಅಲ್ಲಿ ಸ್ವಾಗತಿಸಲು ಯಾರು ಬರುವುದಿಲ್ಲ. ಈ ದೇಶದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ಓದಿ ವಿದ್ಯಾವಂತನಾದರು, ಉನ್ನತ ಹುದ್ದೆ ಹೊಂದಿದ್ದರು ಮರ್ಯಾದೆ ಕೊಡುವುದಿಲ್ಲ. ಗೌರವ ಸಿಗುವುದಿಲ್ಲವೆಂಬ ಮನವರಿಕೆ ಅವರಲ್ಲಿ ಖಚಿತವಾಗಿತ್ತು. ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗಾಗಿ ಅಲ್ಲಿ ಇಲ್ಲಿ ವಿಚಾರಿಸಿದರು ಆದರೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಮನೆಬಾಡಿಗೆ ಕೊಡಲು ಯಾರು ಮುಂದೆ ಬರುವುದಿಲ್ಲ. ಕೊನೆಗೆ ಪಾರಸಿ ವಸತಿ ಗೃಹ ಒಂದರಲ್ಲಿ ಯಾರಾದರೂ ವಿಚಾರಿಸಿದಾಗ ಅಸ್ಪೃಶ್ಯ ಜಾತಿಯವನೆಂದು ಹೇಳದೆ ಪಾರಸಿ ಎಂದು ಹೇಳುವುದಾಗಿ ಹೇಳಿ ದಿನ ಒಂದಕ್ಕೆ ಊಟ ವಸತಿ ಸೇರಿ ಒಂದುವರೆ ರೂಪಾಯಿಗೆ ಬಾಡಿಗೆ ನಿರ್ಧರಿಸಿ ತಾತ್ಪೂರರ್ತಿಕವಾಗಿ ಆ ವಸತಿ ಗೃಹದಲ್ಲಿ ಉಳಿದುಕೊಳ್ಳುವರು. ವಸತಿ ಗೃಹದ ಮಹಡಿಯಲ್ಲಿನ ಕೋಣೆ ಅನುಪಯುಕ್ತ ವಸ್ತುಗಳಿಂದ ತುಂಬಿ ಹೊಗಿತ್ತು. ಅಲ್ಲಿಯೇ ಚಿಕ್ಕದಾದ ಸ್ಥಳದಲ್ಲಿ ವಾಸ, ಉಸ್ತುವಾರಿ ವ್ಯಕ್ತಿ, ಮುಂಜಾನೆ ಚಹ ತೆಗೆದುಕೊಂಡು ಬಂದರೆ ಒಂಬತ್ತುವರೆ ಗಂಟೆಗೆ ಉಪಹಾರ, ರಾತ್ರಿ ಅದೆ ಹೊತ್ತಿಗೆ ಊಟ ತಂದು ಕೊಟ್ಟರೆ ಮತ್ತೆ ಮೇಲೆ ಯಾರು ಬರುತ್ತಿರಲಿಲ್ಲ, ಹೀಗೆ ಅಂಬೇಡ್ಕರ್ ರು ಏಕಾಂಗಿಯಾಗಿ ದಿನ ಕಳೆಯುವರು. ಬರೋಡಾ ಮಹಾರಾಜರು, ಅಂಬೇಡ್ಕರರನ್ನು ಅಕೌಂಟಂಟ್ ಜನರಲ್ ರವರ ಕಛೇರಿಯಲ್ಲಿ ಪ್ರೋಬೇಷನರ್ ಅಧಿಕಾರಿಯನ್ನಾಗಿ ನೆಮಿಸಿಕೊಳ್ಳುವರು. ಕಛೇರಿಯಲ್ಲಿ ಸಿಪಾಯಿ ಕಡತಗಳನ್ನು ಅಂಬೇಡ್ಕರ್ರ ಕೈಗೆ ಕೊಡದೆ ಮೇಜಿನ ಮೇಲೆ ಎಸೆಯುತ್ತಿದ್ದ. ಕೆಳ ಜಾತಿಯವನೆಂದು ಅವರ ಹತ್ತಿರ ಬರುವುದು, ಕೆಲಸ ಮಾಡುವುದು ಮೈಲಿಗೆ ಎಂದು ಆತ ತಿಳಿಯುತ್ತಿದ್ದ. ಅಲ್ಲಿಯ ಕಾರಕೂನರು ಅಂಬೇಡ್ಕರರ ಜೊತೆ ಮಾತನಾಡುತ್ತಿರಲಿಲ್ಲ, ಕುಡಿಯಲು ನೀರು ಕೊಡುತ್ತಿರಲಿಲ್ಲ, ಬಾಯಾರಿಕೆಯಾಗಿ ನೀರು ತೆಗೆದುಕೊಳ್ಳಲು ಹೋದರೆ ಮೈಲಿಗೆಯಾಗುವುದೆಂದು ಮುಟ್ಟಿಸಿಕೊಡುತ್ತಿರಲಿಲ್ಲ. ಈ ಸಮಾಜದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ದೊಡ್ಡ ವಿದ್ಯಾವಂತನಾದರು, ಶುಚಿಯಾಗಿದ್ದರು ಅಸ್ಪೃಶ್ಯನಾಗಿಯೇ ಬದುಕುವಂತಾಗಿದೆ ಎಂದು ಅಂಬೇಡ್ಕರರು ನೊಂದುಕೊಳ್ಳುವರು. ಸಂಸ್ಥಾನದಲ್ಲಿ ಬಂಗಲೆ ಕಲ್ಪಿಸಲು ಅರ್ಜಿ ಹಾಕಿದ್ದರು. ಆದರೆ ದಿವಾನರು ಅರ್ಜಿಯನ್ನು ಕಸದಬುಟ್ಟಿಗೆ ಹಾಕಿದಂತೆ ಇಟ್ಟುಬಿಟ್ಟಿದ್ದರು. ಸದ್ಯಕ್ಕೆ ಹಾಳುಬಿದ್ದ ಕತ್ತಲೆ ಗವಿಯಂತಿದ್ದ ಪಾರಸಿ ವಸತಿ ಗೃಹವೇ ಲೇಸೆಂದು ದಿನಗಳನ್ನು ದುಡೂವರು. ಹನ್ನೊಂದನೆಯ ದಿನ ಅಂಬೇಡ್ಕರರು ಮುಂಜಾನೆ ತಿಂಡಿ ಮುಗಿಸಿ ಬಟ್ಟೆತೊಟ್ಟು ಕಛೇರಿಗೆ ಹೋಗಲು ತಯಾರಾಗುತ್ತಿದ್ದಾಗ ಗಟ್ಟಿಮುಟ್ಟಾದ ಸುಮಾರು ಹತ್ತು-ಹನ್ನೆರಡು ಪಾರ್ಶಿಗಳು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಂಬೇಡ್ಕರರು ಉಳಿದುಕೊಂಡಿದ್ದ ಮಹಡಿ ಮೇಲಿನ ಕೋಣೆಗೆ ಬಂದು ಸುತ್ತುವರೆದು ನಿಲ್ಲುತ್ತಾರೆ. ಅಂಬೇಡ್ಕರರಿಗೆ ಕ್ಷಣಕಾಲ ಏನು ತೋಚದಂತಾಗುತ್ತದೆ. ಆ ಪಾರ್ಸಿಗಳು ಯಾರು ನೀನು? ಇಲ್ಲಿಗೇಕೆ ಬಂದಿರುವೆ? ಪಾರ್ಸಿ ಹೆಸರನ್ನಿಟ್ಟುಕೊಂಡು ಪಾರ್ಸಿಗಳ ವಸತಿ ಗೃಹದಲ್ಲಿ ಉಳಿದುಕೊಳ್ಳಲು ಎಷ್ಟು ಧೈರ್ಯ? ಪಾರ್ಸಿ ವಸತಿ ಗೃಹವನ್ನು ಅಪವಿತ್ರಗೊಳಿಸಿರುವಿರಿ ಎಂದು ಅಂಬೇಡ್ಕರರಿಗೆ ಪ್ರಶ್ನಿಸುತ್ತಾ ಗದರಿಸುವರು. ಪಾರ್ಸಿಗಳು ಮೈಮೇಲೆ ಧರಿಸುವ ಸದ್ರ ಮತ್ತು ಕಷ್ಠಿ ಅಂಬೇಡ್ಕರರು ಧರಿಸಿರುವುದಿಲ್ಲ ಹೀಗಾಗಿ ಸುಳ್ಳು ನಟನೆ ಮಾಡಿ ಪಾರ್ಸಿಯವನೆಂದು ಸಮರ್ಥಿಸಿಕೊಳ್ಳಲು ಹೋದರೆ ಆ ಪಾರ್ಸಿಗಳು ತನ್ನ ಮೇಲೆ ಮುಗಿಬೀಳಬಹುದು, ಜೀವಕ್ಕೆ ಅಪಾಯ ತಂದುಕೊಳ್ಳಬಾರದೆಂದು ಮೌನವಹಿಸುವರು. ಗುಂಪಿನಲ್ಲಿ ಒಬ್ಬನು ವಸತಿ ಯಾವಾಗ ಖಾಲಿ ಮಾಡುವೆ ಎಂದು ಕೇಳಿದಾಗ ಸಂಸ್ಥಾನದ ಮಂತ್ರಿಯವರಿಗೆ ಬಂಗಲೆ ಏರ್ಪಾಡು ಮಾಡಿಕೊಡಲು ಅರ್ಜಿಹಾಕಿದ್ದು ಇಷ್ಟರಲ್ಲಿ ಇತ್ಯರ್ಥವಾಗಬಹುದು ಒಂದು ವಾರದವರೆಗೆ ಇಲ್ಲಿರಲು ಅವಕಾಶ ಮಾಡಿಕೊಡಲು ಕೇಳಿಕೊಳ್ಳುವರು. ಪಾರ್ಸಿಗಳಿಗೆ ಅಂಬೇಡ್ಕರ್ರ ಬೇಡಿಕೆ ಆಲಿಸುವ ಸಂಯಮ ಅವರಲ್ಲಿರಲಿಲ್ಲ. ಸಂಜೆಯ ವೇಳೆಗೆ ವಸತಿಗೃಹ ಖಾಲಿ ಮಾಡಬೇಕು, ಯಾವುದಕ್ಕೂ ಇಲ್ಲಿಯೇ ಉಳಿದುಕೊಳ್ಳುವಂತಿಲ್ಲ ಹುಷಾರ್! ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಅವರು ಕಾಲು ಕಿತ್ತುವರು. ಇನ್ನು ಎಲ್ಲಿ ಉಳಿದುಕೊಳ್ಳಬೇಕೆಂದು ಅಂಬೇಡ್ಕರರು ಚಿಂತೆಗೊಳಗಾಗುತ್ತಾರೆ. ಒಬ್ಬ ಹಿಂದೂ ಇನ್ನೊಬ್ಬ ಕ್ರಿಶ್ಚಿಯನ್ ಸ್ನೇಹಿತರಿದ್ದರು ಅವರಲ್ಲಿಗೆ ಹೋಗಿ ವಿಚಾರಿಸಿದಾಗ ಅಸ್ಪೃಶ್ಯನೆಂಬ ಕಾರಣಕ್ಕಾಗಿ ವಸತಿ ಕೊಡಲು ಇಚ್ಚಿಸದೆ ಇದ್ದುದ್ದರಿಂದ ಬೇರೆ ಸಬೂಬು ಹೇಳುವರು. ಆ ಸ್ನೇಹಿತರು ಇರಲು ಮನೆ ಕೊಡುವುದಿಲ್ಲವೆಂಬುವುದು ಅಂಬೇಡ್ಕರರಿಗೆ ಅರಿವಾಗುತ್ತದೆ. ಅಲ್ಲಿಂದ ಅವರು ಹೊರಬರುವರು ಆಗ ಸಂಜೆ ನಾಲ್ಕು ಗಂಟೆಯಾಗಿತ್ತು. ಮುಂಬಯಿಗೆ ರೈಲು ರಾತ್ರಿ 9 ಗಂಟೆಗೆ ಇತ್ತು. ಅಲ್ಲಿಯವರಗೆ ಕಾಲ ಕಳೆಯಲು ಕಾಂಟೋನಮೆಂಟ್ ಪ್ರದೇಶದಲ್ಲಿನ ಕಾಮಥಿ ಭಾಗ ಸಾರ್ವಜನಿಕ ಉಧ್ಯಾನದಲ್ಲಿ ಬಂದು ಕುಳಿತುಕೊಳ್ಳುವರು. ಸಂಸ್ಥಾದಲ್ಲಿ ಬಂಗಲೆ ಸಿಗುವುದು ಖಾತ್ರಿ ಇಲ್ಲ; ಇತ್ತ ಪಾರ್ಸಿ ವಸತಿ ಗೃಹದಲ್ಲಿ ಇರುವಂತಿಲ್ಲ. ಅಸ್ಪೃಶ್ಯ ಜಾತಿಯವನೆಂಬ ಕಾರಣಕ್ಕೆ ಬೇರೆ ಯಾರು ಮನೆ ಬಾಡಿಗೆ ನೀಡುತ್ತಿಲ್ಲ. ಸಂಸ್ಥಾನದಲ್ಲಿನ ಅಧಿಕಾರಿಹುದ್ದೆ ಬಿಟ್ಟು ಹೋಗಬೆಕಾದ ಸ್ಥಿತಿ ತಲುಪಿ ದುಃಖ ಉಮ್ಮಳಿಸಿ ಕಣ್ಣಲ್ಲಿ ನೀರು ಬರುವುದು. ಅಮೇರಿಕಾ ಮತ್ತು ಇಂಗ್ಲೇಂಡನಲ್ಲಿ ಕೆಲ ಗಣ್ಯರ ಪರಿಚಯವಿತ್ತು. ಉನ್ನತ ವ್ಯಾಸಂಗ ಪಡೆದಿದ್ದರಿಂದ ಅವರು ಇಚ್ಚಿಸಿದ್ದಲ್ಲಿ ಅಲ್ಲಿಯೇ ಉದ್ಯೋಗ ಸಿಗುವ ಅವಕಾಶವಿತ್ತು. ಆದರೆ ಬರೋಡಾ ಸಂಸ್ಥಾನದಲ್ಲಿ ಮಾತು ಕೊಟ್ಟಂತೆ ಶಿಷ್ಯ ವೇತನದ ಪ್ರತಿಯಾಗಿ ಕೆಲಸ ಮಾಡಲು ಬಂದರೆ, ಬರೋಡಾದಲ್ಲಿ ವಸತಿ ಗೃಹ ಸಿಗದೆ, ಪಾರ್ಸಿ ವಸತಿ ಗೃಹ ಖಾಲಿ ಮಾಡಿಸಿದ್ದರಿಂದ ದುಃಖಿತರಾಗಿ ಮುಂಬಯಿಗೆ ಮರಳಿ ಬಂದರು. ಅಸ್ಪೃಶ್ಯತೆಯಿಂದಾಗಿ ಅಧಿಕಾರಿ ಹುದ್ದೆಯ ಕೆಲಸವನ್ನು ಕಳೆದುಕೊಳ್ಳುವಂತಾಯಿತು. (ಮುಂದುವರೆಯುವುದು) — ಸೋಮಲಿಂಗ ಗೆಣ್ಣೂರ
ಲೇಖನ ಓಡುತ್ತಿರುವ ಜೀವನಕ್ಕೆ ಜಯಶ್ರೀ.ಜೆ. ಅಬ್ಬಿಗೇರಿ ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ ಹೊಟ್ಟೆ ಬಗೆದು ಗಣಿಗಾರಿಕೆಗೆ ಇಳಿದಿದ್ದೇವೆ. ಲಾಭಕೋರತನ ಪೀಡಿತರಾಗಿದ್ದೇವೆ. ಆರೋಗ್ಯ ರಕ್ಷಣೆಯನ್ನು ಲಾಭದಾಯಕ ಉದ್ಯಮವಾಗಿಸಿದ್ದೇವೆ. ಕೇಡುಗಳ ಕಸವು ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಬದುಕು ಲಾಭದಾಸೆಗೆ ಬಿದ್ದ ಧನದಾಹಿಗಳ ಕೈಗೊಂಬೆಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯು ಸುಖ ತಂದು ಕೊಡುವುದೆಂದು ಭ್ರಮಿಸಿದ್ದೇವೆ. ಆದರೆ ಅದು ವಾಸ್ತವದಲ್ಲಿ ಸಾವನ್ನು ಎದುರಿಗೆ ತಂದು ನಿಲ್ಲಿಸಿದೆ. ಇತಿಹಾಸದ ಪುಟದಲ್ಲಿ ಅಚ್ಚಾದ ದುರಂತಗಳ ಹಿಂದೆ ಸತ್ಯದ ಸ್ವರೂಪವನ್ನು ಅರಿಯಲಾಗದೇ ಹೋದ ಪ್ರಸಂಗಗಳು ಕಣ್ಣಿಗೆ ರಾಚುತ್ತವೆ. ಮಾನವ ಮತ್ತು ಪ್ರಕೃತಿಯ ನಡುವೆ ಒಂದು ಅವಿನಾಭಾವ ಸಂಬAಧವಿದೆ. ಆ ಸಂಬAಧದ ಕೊಂಡಿಯನ್ನು ಕಾಪಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಪ್ರಳಯದಂಥ ಅನಾಹುತ ಖಚಿತ. ಪ್ರಳಯವೆಂಬುದು ಒಂದೇ ಸಲ ಸಂಭವಿಸುವ ವಿದ್ಯಮಾನವಲ್ಲ. ಅದು ನಮ್ಮ ದಾಷ್ಟö್ರ್ಯತನದಿಂದ ಪ್ರತಿದಿನ ಪ್ರತಿಕ್ಷಣ ಆವರಿಸಿಕೊಳ್ಳುತ್ತಿದೆ ಎಂಬುದನ್ನು ಅರಿತು ನಡೆಯಬೇಕಿದೆ.ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿತಿಳಿಯಲೀಯದು ಎಚ್ಚರಲೀಯದುಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗತAದೆಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ. ಜ್ಞಾನವನ್ನು ಗಳಿಸಿದ್ದೇನೆಂಬ ಅಹಮಿಕೆಯನ್ನು ತಲೆಗೇರಿಸಿಕೊಂಡಿದ್ದು ಮನಸ್ಸಿನಲ್ಲಿ ಕಸವನ್ನು ಹುಟ್ಟಿಸಿದೆ. ಈ ಕಸ ಬುದ್ಧಿಯನ್ನು ಆವರಿಸಿದೆ. ತಿಳುವಳಿಕೆಯನ್ನು ಎಚ್ಚರತಪ್ಪಿಸುತ್ತಿದೆ. ಅರಿವಿನ ಎಚ್ಚರಕ್ಕೆ ಅಡ್ಡಿಯಾಗುತ್ತಿರುವ ಕಸವನ್ನು ಕಿತ್ತೆಸೆಯದಿದ್ದರೆ ಸುಳಿದೆಗೆದು ಬೆಳೆಯುವ ಚೈತನ್ಯ ಬಾರದು. ಮನದೊಳಗಿನ ಕಸವನ್ನು ಶುದ್ಧಗೊಳಿಸದಿದ್ದರೆ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಎಚ್ಚರಿಕೆಯ ಸಂದೇಶ ಬಸವಣ್ಣನವರ ಈ ವಚನದಲ್ಲಿದೆ.‘ಅನ್ನವನು ಉಣ್ಣುವಾಗ ಕೇಳ್ ಅದು ಬೇಯಿಸಿದ ನೀರ್ನಿಮ್ಮ ದುಡಿಮೆಯೇ ಪರರ ಕಣ್ಣೀರ್’ ಎಂದಿದ್ದಾರೆ ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿಯವರು. ಅವರ ಮಾತು ನಿಜಕ್ಕೂ ವಿಚಾರಣೀಯವಾದುದು. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ದುಡಿಯಬೇಕು. ಅನ್ಯಾಯದಿಂದ ಗಳಿಸಿದ್ದು ಎಂದಿಗೂ ಮನಸ್ಸಿಗೆ ಸಂತೋಷ ನೀಡದು. ಧರ್ಮದಿಂದ ದುಡಿದಿದ್ದನ್ನು ನಿಷ್ಕಲ್ಮಷ ಮನಸ್ಸಿನಿಂದ ಒಂದು ಹುಲ್ಲು ಕಡ್ಡಿ ಅರ್ಪಿಸಿದರೂ ಶ್ರೇಷ್ಠ. ಮತ್ತೊಬ್ಬರಿಗೆ ಮೋಸವೆಸಗದೇ ದುಡಿದ ಹಣ, ತಾತ್ವಿಕತೆಯಿಂದ ಸದ್ವಿಚಾರದಿಂದ ಗಳಿಸಿದ ಹಣ ಪವಿತ್ರವಾದುದು. ಅದು ದೈವಕ್ಕೆ ಸಲ್ಲುವಂಥದ್ದು. ಅಂಥ ಹಣವನ್ನು ದಾನ ಧರ್ಮ ಮಾಡುವುದರಿಂದ ಸತ್ಪಾತ್ರರಿಗೆ ಸಲ್ಲುತ್ತದೆ. ಇಲ್ಲವಾದರೆ ಅಪಪಾತ್ರ ದಾನವಾಗುತ್ತದೆ. ಅಹಮಿಕೆಯಿಂದ ಮಾಡಿದ ಕಾರ್ಯ ಪುಣ್ಯವಾಗುವುದಿಲ್ಲ. ಓಡುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುತ್ತೇವೆ. ಆದರೆ ಪಾಪ ಪುಣ್ಯದ ಅರಿವಿಲ್ಲದಂತೆ ಓಡುತ್ತಿರುವ ಜೀವನಕ್ಕೆ ಯಾವ ನೆಲೆಯಲ್ಲಿ ನಿಲ್ಲಿಸಿ ಅರಿವು ಮೂಡಿಸುವುದು? ಎಂಬ ಪ್ರಶ್ನೆ ಮೂಡುತ್ತದೆ. ಮನದೊಳಗಿನ ಕೇಡುಗಳೇ ಇದಕ್ಕೆಲ್ಲ ಕಾರಣವೆಂಬ ಉತ್ತರವೂ ಸಿಗುತ್ತದೆ. ಕೊನೆಯಿಲ್ಲದ ದಾಹಕ್ಕೆ ಕೊನೆ ಹಾಡದಿದ್ದರೆ ಕೇಡು ಖಚಿತ. ಅರಿವು ಜ್ಞಾನ ಕೌಶಲ್ಯಗಳ ಮೂಲಕ ಸತ್ಯ ಧರ್ಮ ಅಹಿಂಸೆಯ ನೀತಿಗೆ ಮರಳುವುದೊಂದೇ ಇದಕ್ಕೆ ದಾರಿ.=======
ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು. ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. ಸ್ವಾತಂತ್ರ್ಯ ದ ಸಂದರ್ಭದಲ್ಲಿ ದೇಶಭಕ್ತಿ ಯ ಪರ ಪದ್ಯ ರಚಿಸಿ ರಾಷ್ಟ್ರ ಪ್ರೇಮ ಸಾರಿದರು. ಹಾಗೆ ನೋಡಿದರೆ ೨೦ ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷ ವೇನು ಕಂಡು ಬಂದಿಲ್ಲ. ೨೦ ನೇ ಶತಮಾನದ ವರೆಗೆ ಮಹಿಳೆ ತನ್ನ ಮನದ ತುಮಲವನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಗಳಿಲ್ಲ. ಹದಿಬದೆಯ ಧರ್ಮ ದ ಸಂಚಿಯ ಹೊನ್ನಮ್ಮನ್ನೆ ಇರಲಿ ,ಹೆಳವನ ಕಟ್ಟೆಯ ಗಿರಿಯಮ್ಮನೆ ಇರಲಿ ,ಜಾನಪದ ಲೋಕದ ಗರತಿಯರೆ ಇರಲಿ ಇವರೆಲ್ಲರೂ ಬರೆದಿರುವದು ತ್ಯಾಗದ ಉಪದೇಶಗಳೆ. ಹನ್ನೆರಡನೆ ಶತಮಾನದ ವಚನಗಾರ್ತಿಯರಲ್ಲಿ ಅಕ್ಕಮಹದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ ದ್ವನಿಯಾಗಿ ನಿಲ್ಲುತ್ತಾಳೆ. ಮೊಟ್ಟಮೊದಲ ಬಾರಿಗೆ ಲಿಂಗ ತಾರತಮ್ಯ ದ ಬಗ್ಗೆ ದ್ವನಿ ಎತ್ತುತ್ತಾಳೆ . ಆಕೆ ಹೆಣ್ತನಕ್ಕೆ ಲೋಕ ಹೋರಿಸಿರುವ ಮಿತಿಯನ್ನು ಮೀರುವ , ಮೀರಿದ್ದನ್ನು ಹೇಳುವ ಪ್ರಯತ್ನ ಮಾಡುತ್ತಾಳೆ. ನಂತರ ಸಂಚಿಯ ಹೊನ್ನಮ್ಮ ಪುರುಷ ಪ್ರಧಾನ್ಯತೆಯನ್ನು ಸಂಪೂರ್ಣ ಒಪ್ಪಿಕೊಂಡರು ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಕ್ಕೆ ವಿರುದ್ದವಾಗಿ ಒಂದು ಸಣ್ಣ ಪ್ರತಿಭಟನೆ ಸೂಚಿಸುತ್ತಾಳೆ. ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ,ಎಂದು ದ್ವನಿ ಎತ್ತುತ್ತಾಳೆ. ಜನಪದ ಗೀತೆಯ ಗರತಿಯರು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಯಾವದೇ ಪ್ರತಿರೋಧ ಒಡ್ಡದೆ ,ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣ ರೂಢಿಸಿಕೊಂಡು ಬಾಳಿದರೆ ಬಾಳು ಹಸನು ಎಂಬ ಮಾತಿಗೆ ಹೆಚ್ಚು ಒತ್ತು ಕೊಟ್ಟಿರುವರು. ೧೯ ನೆ ಮತ್ತು ೨೦ ಶತಮಾನದಲ್ಲಿ ಮತ್ತೆ ಸ್ತ್ರೀ ಪರ ಆಲೋಚನೆಗಳು ಕಾಣತೊಡಗಿದವು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯರು ಬರೆಯತೊಡಗಿದರು. ಇಲ್ಲಿವರೆಗೆ ಮಹಿಳೆಯರ ಪರವಾಗಿ ಪುರುಷರೆ ಬರೆಯಬೇಕಾದ ಸಂದರ್ಬವಿತ್ತು. ಅವನು ಬರೆಯುವದು ಸ್ತ್ರೀ ಲೋಕದ ಅರಿವಿಲ್ಲದ ಸಾಹಿತ್ಯ. ಮುಂದೆ ೨೦ ನೆ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು.ತಮ್ಮ ಮನದ ಅಭಿವ್ಯಕ್ತಿ ಯನ್ನು ಮುಕ್ತವಾಗಿ ಹರಿಬಿಡುವ ಧೈರ್ಯ ಲೇಖಕಿಯರು ಮೈಗೂಡಿಸಿಕೊಂಡರು. ಸ್ತ್ರೀ ಯರು ಬರವಣಿಗೆಗೆ ತೊಡಗಿದಾಗ ಅಡುಗೆ ಮನೆ ಸಾಹಿತ್ಯವೆಂದರು.ಪ್ರಗತಿಪರವಾಗಿ ಬರೆದಾಗ ಸ್ತ್ರೀ ವಾದಿ ಎಂಬ ಹಣೆಪಟ್ಟಿ ಅಂಟಿಸಿದರು.ವೈಚಾರಿಕ ನೆಲೆಗಟ್ಟಿನಲ್ಲಿ ಬರೆದಾಗ ಬಂಡಾಯಗಾರ್ತಿ ಎಂದು ಸಾರಿದರು. ಇಂತಹ ಹಣೆಪಟ್ಟಿಗಳಿಲ್ಲದೆ ಮಹಿಳೆಯರ ಬರಹವನ್ನು ಸಾಹಿತ್ಯದೊಳಗೆ ಮುಕ್ತ ವಾಗಿ ಸ್ವಾಗತಿಸುವ ದಿನಗಳು ಬರಬಹುದೇ.ಎಂಬುವದೆ ಒಂದು ಪ್ರಶ್ನೆ. ವಚನಗಾರ್ತಿರು ಮತ್ತು ಜನಪದ ಸಾಹಿತ್ಯ ರಚಿಸಿರುವ ಮಹಿಳೆಯರೆಲ್ಲ ಗೃಹಿಣಿಯರೆ. ಅವರು ತಮ್ಮ ದೈನಂದಿನ ಕಾರ್ಯದೊಂದಿಗೆ , ವಚನಗಳು ,ಗಾದೆಗಳು ,ಒಗಟುಗಳು ರಚಿಸಿದರು. ಜನಪದ ಸಾಹಿತ್ಯವನ್ನು ಬಿ.ಎಂ ಶ್ರೀಕಂಠಯ್ಯ ಅವರು ಜನವಾಣಿ ಬೇರು , ಕವಿವಾಣಿ ಹೂ ಎಂದು ಕರೆದಿದ್ದಾರೆ. ಕುಟ್ಟುವ ಬೀಸುವ ಪದಗಳು. ಕಂದನನ್ನು ಮಲಗಿಸುವ ಜೋಗುಳ ಪದಗಳು , ದೇವರ ನಾಮಗಳು , ಆರತಿ ಪದಗಳು ಇವೆಲ್ಲವೂ ಗೃಹಿಣಿಯರಿಂದ ಹೊಮ್ಮಿದ ಸಾಹಿತ್ಯವೆ. ಮುಂದೆ ನವ್ಯಸಾಹಿತ್ಯ ಯುಗ ಆರಂಭವಾಯಿತು.ನಂತರ ಅಧುನಿಕ ಸಾಹಿತ್ಯ ಯುಗ.ಇಷ್ಟರಲ್ಲಿ ಎಲ್ಲರೂ ಅಕ್ಷರಸ್ಥರಾಗುತಿದ್ದರು. ಅನೇಕ ಮಹಿಳಾ ಕಾದಂಬರಿಗಾರರು ಮುನ್ನಲೆಗೆ ಬಂದರು.ತಮ್ಮ ಕಲ್ಪನೆ ಗೆ ಅಕ್ಷರ ರೂಪ ಕೊಟ್ಟು ಕಥೆ ಕಾದಂಬರಿ ಕವನ ರಚಿಸತೊಡಗಿದರು. ಸ್ತ್ರೀ ಯ ತವಕ ತಲ್ಲಣಗಳು , ಸಾಮಾಜಿ ಮತ್ತು ರಾಜಕೀಯ ಸ್ಥಿತಿ ಗತಿಗಳು ,ಪ್ರೀತಿ ಪ್ರೇಮ ಗಳ ನವಿರುತನ ಮುಂತಾದ ವಿಷಯಗಳ ಬರವಣಿಗೆಯಲ್ಲಿ ಮಹಿಳಾ ಸಾಹಿತಿಗಳು ಮೇಲುಗೈ ಸಾಧಿಸಿದರು. ಇಷ್ಟಾಗಿಯೂ ಮಹಿಳಾ ಸಾಹಿತಿಗಳು ಪುರುಷ ಸಾಹಿತಿಗಳೊಡನೆ ಸಮಾನವಾಗಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಲು ಕಾರಣವೇನು..! ಯಾವುದೇ ಒಂದು ವಿಷಯ ಸಾಮಾಜೀಕ , ಧಾರ್ಮಿಕ , ರಾಜಕೀಯ , ಶಿಕ್ಷಣ , ಇತಿಹಾಸ ಲೈಂಗಿಕತೆ , ಕಾಮ ಮತ್ತು ಪ್ರೇಮ ದ ವಿಷಯಗಳ ಬಗ್ಗೆ ಪುರುಷರು ಬರೆದ ಸಾಹಿತ್ಯ ವನ್ನು ಸಾಮಾನ್ಯವಾಗಿ ಸ್ವೀಕರಿಸುವ ಈ ಸಮಾಜ ಅದೇ ಬರಹ ಮಹಿಳೆ ಬರೆದರೆ ತರ್ಕಿಸುತ್ತದೆ. ಲೈಂಗಿಕತೆ ಕಾಮ ಪ್ರೇಮದ ವಿಷಯಗಳು ಮುಕ್ತವಾಗಿ ಬರೆಯುವದಕ್ಕೆ ಮಹಿಳಾ ಸಾಹಿತಿಗಳು ಸಂಕೋಚಪಡುತ್ತಾರೆ. ಬರೆದವರ ವ್ಯಕ್ತಿತ್ವ ದೊಂದಿಗೆ ತಳಕು ಹಾಕಿ ಓದುವ ಓದುಗರು ಇದು ನಿಮ್ಮ ಸ್ವಂತ ಅನುಭವವೇ ಎಂದು ಕೇಳಿದಾಗ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಪುರುಷರು ಏನು ಬರೆದರು ನಡೆಯುತ್ತದೆ. ಮಹಿಳಾ ಬರಹಗಾರರು ನಿರಂತರ ಈ ತರತಮ ಅನುಭವಿಸುತ್ತಿದ್ದಾರೆ. ಪುರುಷರ ದಬ್ಬಾಳಿಕೆ ಖಂಡಿಸಿ ಬರೆದರೆ ‘ ಫೇಮಿನಿಷ್ಟ ‘ ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಎಷ್ಟೋ ಬರಹಗಾರ್ತಿಯರು ಈ ಹಣೆಪಟ್ಟಿಗೆ ಹೆದರೆ ತಮ್ಮ ಆಲೋಚನೆಗಳನ್ನು ಮುಕ್ತ ವಾಗಿ ಹೇಳಲಾಗದೆ ಬರೆಯಲಾಗದೆ ಇಬ್ಬಂದಿತನದಲ್ಲಿ ತೊಳಲಾಡುತ್ತಾರೆ. ವೈಚಾರಿಕ ನಿಲುವನ್ನು ತಳೆದ ಸ್ತ್ರೀ ಯು ಸಮಾಜದಲ್ಲಿ ಒಂಟಿತನ ಅನುಭವಿಸಬೇಕಾಗುತ್ತದೆ.ಮೂಢ ನಂಬಿಕೆಗಳನ್ನು ವೀರೋಧಿಸಿದರೆ , ದೇವರ ಅಸ್ಥಿತ್ವ ಅಲ್ಲಗಳೆದರೆ ,ಪ್ರಖರ ವೈಚಾರಿಕ ಚಿಂತನೆಗಳನ್ನು ಮಂಡಿಸಿದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೆ ಬೇರೆಯಾಗುತ್ತದೆ. ಆದರೆ ಯಾವಾಗಲೂ ಒಂದೇ ಸಿದ್ದಾಂತಕ್ಕೆ ಜೋತುಬಿದ್ದು ಒಂದು ಸಮುದಾಯವನ್ನು ಓಲೈಸುವ ಬರಹಗಾರ ಅಥವಾ ಸಾಹಿತಿ ತಮ್ಮ ಆತ್ಮವಂಚನೆ ಮಾಡಿಕೊಂಡಂತೆ. ಸಾಹಿತಿ ಯಾದವರು ಯಾರನ್ನು ಓಲೈಸದೆ ತಮ್ಮ ಅಭಿವ್ಯಕ್ತಿಯನ್ನು ಮುಕ್ತವಾಗಿ ಹರಿಯಬಿಡಬೇಕು. ನಮ್ಮ ಸಮಾಜ ಗೃಹಿಣಿಯರನ್ನು ನೋಡುವ ದೃಷ್ಟಿಕೋನವೆಂದರೆ , ಅವಳು ಕೇವಲ ಗಂಡ , ಮನೆ ,ಮಕ್ಕಳು ಎಂಬ ಪರಿಧಿಯಲ್ಲಿಯೆ ಇರಬೇಕು.ಇದಕ್ಕೂ ಮೀರಿದ ಪ್ರಪಂಚ ಅನ್ಯರದು. ಈಗ ಬರಹಗಾರರಲ್ಲಿ ಸ್ತ್ರೀ ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತಿದ್ದಾರೆ.ಗೃಹಿಣಿಯರು ತಮ್ಮ ಗೃಹ ಕರ್ತವ್ಯ ದ ನಡುವೆಯೆ ಸಾಹಿತ್ಯದೆಡೆ ಹೆಚ ಒಲವು ತೋರುತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಳ್ಳುತಿದ್ದಾರೆ. ಸುಧಾ ತರಂಗ ಮಯೂರ ಕರಮವೀರ ಪತ್ರಿಕೆಗಳೆಲ್ಲ ಗೃಹಿಣಿಯರ ಅಚ್ಚುಮೆಚ್ಚಿನ ಪತ್ರಿಕೆಗಳಾಗಿವೆ.ಮಕ್ಕಳ ಪಠ್ಯ ಪುಸ್ತಕ ಓದಿ ಅವರಿಗೆ ತಿಳಿಸುವ ಮತ್ತು ತಾವು ತಿಳಿದುಕೊಳ್ಳುವ ಆಸಕ್ತಿ ಗೃಹಿಣಿಯರಿಗೆ ಇದೆ. ನಾನು ಒಬ್ಬ ಗೃಹಿಣಿ , ನನ್ನ ಬರಹ ಓದಿದವರು ತಾವು ಶಿಕ್ಷಕಿಯೆ ಎಂದು ಕೇಳುತ್ತಾರೆ. ನನ್ನನ್ನು ಸಾಹಿತ್ಯ ಸಂಬಂಧಿ ಕಾರ್ಯಕ್ರಮಕ್ಕೆ ಅಹ್ವಾನಿಸುವರು ನನ್ನ ಹೆಸರಿನ ಕೆಳಗೆ ಸಾಹಿತಿ ಎಂದೋ ಲೇಖಕಿ ಎಂದೋ ಬರೆಯುತ್ತಾರೆ. ಗೃಹಿಣಿ ಎಂದೆ ಬರೆಯಬಹುದಲ್ಲ. ಗೃಹಿಣಿ ಎಂದರೆ ಕೇವಲ ಗೃಹ ಕರ್ತವ್ಯ ಕ್ಕೆ ಮಾತ್ರ ಸೀಮಿತಳು ಎಂಬ ಧೋರಣೆ ಬದಲಾಗಬೇಕಿದೆ. ಈಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸ್ವೀಕರಿಸುವ ಗುರಿ ಇದೆ.ಆದರೆ ಎಷ್ಟು ಜನರು ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ ಅವಲೋಕನ ಮಾಡಿಕೊಳ್ಳಬೇಕಿದೆ.ಒಟ್ಟು ಪ್ರಮಾಣದ ಸದಸ್ಯರಲ್ಲಿ ಸ್ತ್ರೀ ಯರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.ಅದರಲ್ಲೂ ಗೃಹಿಣಿಯರು ಬೆರಳೆಣಿಯಷ್ಟು ಮಾತ್ರ ಇರುವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಗೃಹಿಣಿಯರು ಸಾಹಿತ್ಯ ಕ್ಷೇತ್ರದಿಂದ ದೂರ ಇರುವದೇಕೆ..? ಒಬ್ಬ ಗೃಹಿಣಿ ಬರೆಯುತ್ತಾಳೆ ಎಂದರೆ ಅವಳೆನು ಬರೆಯಬಲ್ಲಳು ಎಂಬ ಧೋರಣೆ. ಬರಹಗಾರರು ಶಿಕ್ಷಣ ಕ್ಷೇತ್ರದವರೆ ಆಗಿರುತ್ತಾರೆಂಬ ಭಾವನೆ ಇದೆ. ಪೂರ್ಣಚಂದ್ರ ತೇಜಸ್ವಿ ಯವರು ಒಂದು ಕಡೆ ಉಲ್ಲೆಖಿಸಿದ್ದರೆ. ಇಡಿಯ ಒಂದು ಭಾಷಾ ಸಮೂದಾಯದ ಅಭಿವ್ಯಕ್ತಿ ಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ ಅದು ಎಷ್ಟೆ ಸಹಜವಾಗಿ ಸಂಭವಿಸಿದರು ಆ ನಾಗರೀಕತೆ ರೋಗಗ್ರಸ್ತ ವಾದುದು ಎಂದು. ಸಾಹಿತ್ಯ ಪರಿಷತ್ತು ಬೇರೆ ಕ್ಷೇತ್ರದವರನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿಸಬೇಕು.ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಮಹಿಳೆಯರಿಗೆ ಬೆಂಬಲಿಸಲಿ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಲು ಆಸಕ್ತಿ ಹೊಂದಿದ್ದ ಪರಿಷತ್ತು ಅನ್ಯ ಕ್ಷೇತ್ರದ ಸಾಹಿತ್ತಾಸಕ್ತರನ್ನು , ಮಹಿಳೆಯರನ್ನು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರನ್ನು ಪರಿಷತ್ತಿನ ಸದಸ್ಯರನ್ನಾಗಿ ಸ್ವಿಕರಿಸಲಿ.
೨೦೨೦ ರಲ್ಲಿ ಪ್ರಕಟವಾದ ಸಿದ್ದರಾಮಹೊನ್ಕಲ್ ವಿರಚಿತ ಹೊನ್ನಮಹಲ್ ಗಜಲ್ ಸಂಕಲನಕ್ಕೆ ಕಲ್ಯಾಣ ಕರ್ನಾಟಕದ ಕನ್ನಡನಾಡು ಲೇಖಕ ಓದುಗರ ಸಹಕಾರ ಸಂಘ ಕೊಡಮಾಡುವ ಸಹಸ್ರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಲಬುರ್ಗಿ ಭಾಗದಲ್ಲಿ ಜನಜನಿತರಾಗಿದ್ದ ಪ್ರೊ.ಎಸ್.ವಿ. ಮೇಳಕುಂದಿ ಸ್ಮಾರಕ ಕಾವ್ಯ ಪ್ರಶಸ್ತಿ
ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ. ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು. ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು. ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು
ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್ ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ ಸಂಶೋದನೆಯ ಸರಳ ವಿಧಾನ ತಿಳಿಸಿ ಕೊಟ್ಟರು. ಅದರಂತೆ ಅಂಬೇಡ್ಕರರು ಅರ್ಥಶಾಸ್ತ್ರ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದರು. ಆಳವಾದ ಅಧ್ಯಯನದ ಫಲವಾಗಿ ಅಂಬೇಡ್ಕರರು 1916 ರಲ್ಲಿ ಪ್ರೊ.ಗೋಲ್ಡನ್ ವೈಜರ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದಲ್ಲಿ ಜಾತಿಗಳ ಉಗಮ ಮತ್ತು ಅವುಗಳ ವಿಕಾಸ “ (Castes in India; Their mechanism, Genesis and development) ಎಂಬ ಎರಡನೆಯ ಪ್ರಬಂಧವನ್ನು ಮಂಡಿಸಿದರು. ಸ್ವ ಗೋತ್ರ ವಿವಾಹವೇ ಜಾತಿಗೆ ಮೂಲ ಮತ್ತು ಅವುಗಳ ವಿಕಾಸದ ಸೂಕ್ಷ್ಮತೆಯನ್ನು ಅಲ್ಲದೆ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ಮಾಲಿನ್ಯದ ಪರಿಕಲ್ಪನೆ ಅಂದರೆ ಮಾಲಿನ್ಯ ,ಮೈಲಿಗೆ, ಮಡಿ, ಪರಿಕಲ್ಪನೆಯೊಂದಿಗೆ ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವುದು, ಪ್ರತ್ಯೇಕತೆ,ಅಂತರ್ಜಾತೀಯ ವಿವಾಹ ನಿಷೇದ ಮತ್ತು ಸ್ವಕುಲಜನರಿಗೆ ಮಾತ್ರ ತನ್ನೊಂದಿಗೆ ಸದಸ್ಯತ್ವ ಇವು ಜಾತಿಯ ಲಕ್ಷಣಗಳೆಂದು ವಿವರಿಸಿರುವರು. ಭಾರತದ ಹಿಂದು ಧರ್ಮವು ಮೂಲಭೂತವಾಗಿ ಪುರಾತನವಾದದ್ದು ಎಂದು ನಾಗರಿಕತೆ ಬದಲಾವನೆಯಾಗಿದ್ದರೂ ಸನಾತನ ನಿಯಮಗಳು ಶ್ರೇಷ್ಠವೆಂದು ಇಂದಿಗೂ ಬಲಯುತವಾಗಿ ಜಾರಿಯಲ್ಲಿವೆ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಪದ್ದತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಭಾರತಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಸ್ವಜಾತಿ ವಿವಾಹವು ಜಾತಿಯ ಉತ್ಪತ್ತಿಗೆ ಕಾರಣವೆಂದು, ಜಾತಿ ಉತ್ಪತ್ತಿ ನಂತರ ಅದನ್ನು ನಿರಂತರ ಹೇಗೆ ಕಾಪಾಡಿಕೊಂಡು ಬರಲಾಯಿತೆಂಬುವುದನ್ನು ಅಂಬೇಡ್ಕರರು ತಮ್ಮ ಈ ಪ್ರಬಂಧದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಗಂಡ ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ ಒಂದು ಗುಂಪಿನ ಜಾತಿ ಸಂಖ್ಯೆಯಲ್ಲಿ ಗಂಡು ಹೆಣ್ಣು ಅನುರೂಪತೆ ಕಾಣಲು ಸಾಧ್ಯ ಆದರೆ ಸ್ವಜಾತಿ ವಿವಾಹ ಪದ್ಧತಿ ಮೂಲಕ ಸಮನಾದ ಸಂಖ್ಯೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಇಲ್ಲಿ ಆಶ್ಚರ್ಯ ಚಕಿತ ಗೊಳಿಸುವಂತದೆಂದರೆ ಗಂಡ ಸತ್ತಾಗ ಆತನ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಸುಡುವುದು. ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ಉಳಿದ ಹೆಣ್ಣು ಅಂತರ್ಜಾತಿ ವಿವಾಹವಾದಲ್ಲಿ ಅವಳು ಸ್ವಜಾತಿ ವಿವಾಹ ಪದ್ಧತಿಯನ್ನು ಮುರಿದು ಜಾತಿ ಪದ್ಧತಿಯನ್ನು ನಾಶಮಾಡುತ್ತಾಳೆ. ಹಾಗಾಗಿ ಗಂಡ ಹೆಂಡತಿಯ ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷವೆಂದು, ಸಮಾಧಿಯ ಆಚೆಗೆ ಇರುವ ಭಕ್ತಿ ಎಂದು, ಸತಿ ಪದ್ಧತಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಸಾಂಪ್ರದಾಯಿಕ ಸಮರ್ಥನೆ ನೀಡಲಾಗಿದೆ. ಇದೆ ನಿಯಮ ಹೆಂಡತಿ ಸತ್ತ ಗಂಡನಿಗೆ ಕಟ್ಟು ನಿಟ್ಟಾಗಿ ಅಳವಡಿಸಿಲ್ಲ. ಇನ್ನು ಸತಿ ಪದ್ಧತಿಯಿಂದ ಪಾರಾಗಿದ್ದಲ್ಲಿ ಜೀವನ ಪೂರ್ತಿ ಅವಳು ವಿಧವೆಯಾಗಿ ಜೀವಿಸಬೇಕು. ಹೆಂಡತಿಸತ್ತು ಗಂಡ ಉಳಿದಲ್ಲಿ ಅವನು ವಿದುರನಾಗಬೇಕು. ಆದರೆ ಹೆಣ್ಣಿಗೆ ವಿಧಿಸಿದಷ್ಟು ಕಠೋರ ನಿಯಮ ಗಂಡಸಿಗೆ ಇಲ್ಲ. ಅವನು ಮರುಮದುವೆಯಾಗಬಹುದು. ಗಂಡ ಸತ್ತ ಹೆಣ್ಣು ಸತಿ-ಪದ್ಧತಿ ಅನುಸರಿಲ್ಲವಾದರೆ ವಿದವಾ ಪದ್ಧತಿ ಅನುಸರಿಸಲೇಬೇಕು. ಬಾಲ್ಯವಿವಾಹ ಪದ್ಧಿತಿಯು, ಸತಿ ಪದ್ದತಿ, ವಿಧವಾ ಪದ್ದತಿಯಂತೆ ಜಾರಿಗೆ ಬಂದಿದ್ದು, ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆ ಮಾಡುವುದು. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವಂತಿಲ್ಲ. ಆದರ್ಶ ಶೀಲವಂತಿಕೆ ಕಾಯ್ದುಕೊಳ್ಳಬೇಕು. ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕುಡದು. ಹಾಗೆ ಮಾಡಿದ್ದೆ ಆದರೆ ಅದೊಂದು ಪಾಪ. ಆದ್ದರಿಂದ ಕನ್ಯೆಯು ಲೈಂಗಿಕಪ್ರಜ್ಞೆ ಜಾಗೃತಗೊಳ್ಳುವ ಮೊದಲೆ ಅವಳ ಮದುವೆ ಮಾಡುವುದು ಒಂದು ವೇಳೆ ಕನ್ಯೆಯು ಪ್ರಜ್ಞಾವಂತಳಾದ ಮೇಲೆ ಬೇರೆ ಜಾತಿಯ ವ್ಯಕ್ತಿಯಲ್ಲಿ ಅನುರಕ್ತಳಾಗಿ ವಿವಾಹವಾದಲ್ಲಿ ಜಾತಿ ಪದ್ಧತಿಗೆ ಕಳಂಕ ತರುವಳು ಅದಕ್ಕೆಂದೆ ಬಾಲ್ಯ ವಿವಾಹ. ಸ್ವಜಾತಿ ವಿವಾಹದಿಂದ ಜಾತಿಯ ಸೃಷ್ಟಿಯಾಗುತ್ತದೆ. ಸತಿಪದ್ಧತಿ, ವಿದವೆ ಅಥವಾ ವಿಧೂರತನ ಮತ್ತು ಬಾಲ್ಯವಿವಾಹ ಈ ರೀತಿ ಸ್ತ್ರೀ ಪುರುಷರ ನಡುವೆ ತಾರತಮ್ಯವನ್ನು ಅನುಕೂಲಕರವಾಗಿ ಉಪಯೋಗಿಸುತ್ತಾ ಬಂದುದ್ದು, ಹಿಂದೂ ಸಮಾಜದಲ್ಲಿ ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೆ ಅತೀರೇಕ ಸಂಪ್ರದಾಯಗಳಾಗಿ ಎದ್ದು ಕಾಣುತ್ತವೆ. ಈ ಮೂರು ಸಂಪ್ರದಾಯಗಳು ಜಾತಿಯ ಸಂರಕ್ಷಣೆಯ ವಿಧಾನಗಳಾಗಿವೆ. ಈಮೂರು ವಿದಾನಗಳಿಂದಲೆ ಜಾತಿ ಶಾಶ್ವತವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಈ ಮೂರು ಸಂಪ್ರದಾಯಗಳ ಕರಾಳತೆಯನ್ನು ಅಂಬೇಡ್ಕರರು ಇಲ್ಲಿ ಅಲ್ಲಗಳೆಯಲಾಗದಂತೆ ವಿಶ್ಲೇಷಿಸಿರುವರು. ಅಂಬೇಡ್ಕರರು ಎರಡು ವರ್ಷಗಳ ಅವಧಿಯಲ್ಲಿ ಎರಡು ಮಹಾ ಪ್ರಬಂಧಗಳನ್ನು ಬರೆದು ಒಪ್ಪಿಸಿದ್ದರಿಂದ ಕೊಲಂಬಿಯಾ ವಿಶ್ವವಿಧ್ಯಾಲಯವು ಅವರಿಗೆ ಎರಡು ಎಂ.ಎ. ಪದವಿಗಳನ್ನು ಅನುಗ್ರಹಿಸುತ್ತದೆ. ಅಮೇರಿಕದಲ್ಲಿ ಅವರಿಗೆ ಅಲ್ಲಿನ ಸಂವಿಧಾನ ಅದರಲ್ಲೂ 14 ನೇ ತಿದ್ದುಪಡಿ,ನೀಗ್ರೋ ಜನಾಂಗಕ್ಕೆ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಅಬ್ರಾಹಂ ಲಿಂಕನ್ರ ಹೋರಾಟ ನೀಗ್ರೋಗಳಿಗೆ ಅವರು ತಂದುಕೊಟ್ಟ ಸ್ವಾತಂತ್ರ್ಯ,ಅಲ್ಲದೆ ಭೂಕರ ಟಿ ವಾಷಿಂಗಟನ್ ಜೀವನ ಮತ್ತು ಸಾಧನೆ ಅವರು ನೀಗ್ರೋ ಜನಾಂಗಕ್ಕೆ ಕೊಡಿಸಿದ ಸಮಾನತೆ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಭಾರತದಲ್ಲಿ ತುಳಿತಕೊಳಪಟ್ಟ ನಿಮ್ನ ವರ್ಗದ ಜನರ ಜೀವನ ಸುಧಾರಣೆ, ಕಲ್ಯಾಣ ಸಮಾಜ ಸ್ಥಾಪನೆ ಅವರ ಏಕೈಕ ಗುರಿಯಾಗುತ್ತದೆ. ಬರೋಡಾ ಸಂಸ್ಥಾನದಿಂದ ಬರುತ್ತಿದ್ದ ಶಿಷ್ಯವೇತನದ ಹಣದಲ್ಲಿ ದುಂದು ವೆಚ್ಚಮಾಡದೆ ಮಿತವ್ಯೆಯಮಾಡಿ, ಅರೆ ಹೊಟ್ಟೆಯಲ್ಲಿದ್ದುಕೊಂಡು ದುಡ್ಡು ಉಳಿತಾಯ ಮಾಡಿ ಸಾವಿರಾರು ಪುಸ್ತಕ ಖರೀದಿ ಮಾಡುತ್ತಾರೆ, ಛಲದಿಂದ ಕಠೋರ ಅಧ್ಯಯನ ಮಾಡುತ್ತಾರೆ, ಪಿ.ಎಚ್.ಡಿ ಪದವಿಗಾಗಿ ಮಹಾಪ್ರಬಂಧ ಬರೆಯಲು ಆರಂಭಿಸುತ್ತಾರೆ. ಕಠಿಣ ಪರಿಶ್ರಮ, ಆಳವಾದ ಅಧ್ಯಯನದಫಲವಾಗಿ 1917 ರಲ್ಲಿ “ರಾಷ್ಟ್ರೀಯ ಡಿವಿಡೆಂಟ್: ಒಂದು ಐತಿಹಾಸಿಕ ಮತ್ತು ವಿಶ್ಲೇಷನಾತ್ಮಕ ಅಧ್ಯಯನ “(National Dividend of India- A Historical and Analytical study) ಎಂಬ ಮಹಾ ಪ್ರಬಂಧವನ್ನು ಬರೆದು ಮಂಡಿಸುವರು. ಈ ಕೃತಿಗೆ “ಬ್ರಿಟಿಷ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ, ವಿಕಾಸ” ಎಂಬ ಮೂಲ ತಲೆಬರಹ ಮತ್ತು ಬ್ರಿಟಿಷ ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ವಿಕೇಂದ್ರಿಕರಣ “ ಎಂಬುದಾಗಿ ಎರಡನೆ ತಲೆಬರಹದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಮಹಾಪ್ರಬಂಧವನ್ನು ತಮಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಮಂಜೂರಿಸಿದ ಬರೋಡಾ ಮಹಾರಾಜರಾದ ಸಯ್ಯಾಜೀ ಗಾಯಕವಾಡ ರವರಿಗೆ ಅರ್ಪಿಸಿರುವರು. ವಿಶ್ವಪ್ರಸಿದ್ಧಅರ್ಥಶಾಸ್ತ್ರಜ್ಞ ಮತ್ತು ಅಂಬೇಡ್ಕರರ ಅಚ್ಚುಮೆಚ್ಚಿನ ಉಪನ್ಯಾಸಕರಾದ ಪ್ರೋ.ಎಡ್ವಿನ್ ಸೆಲಿಗ್ಮನ್ ರವರು ಪುಸ್ತಕಕ್ಕೆ ಮುನ್ನುಡಿ ಬರೆದಿರುವರು. ಹಣಕಾಸಿನ ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷನೆಮಾಡಿ ಬರೆದಂತ ಇಂತಹ ಪ್ರಬಂಧವನ್ನು ಇಲ್ಲಿಯವರೆಗೆ ನೋಡಿಲ್ಲವೆಂದು ಪ್ರೋ. ಸೆಲಿಗ್ಮನ್ ರವರು ಮುಕ್ತಕಂಠದಿಂದ ಹೊಗಳಿರುವರು. ಈ ಮಹಾ ಪ್ರಬಂಧದಲ್ಲಿ ಅಂಬೇಡ್ಕರರು ಭಾರತದ ಅರ್ಥವ್ಯವಸ್ತೆ ಮತ್ತು ಹಣಕಾಸು ವ್ಯವಸ್ಥೆಯನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ. ಒಳ್ಳೆಯ ಆಡಳಿತ –ಒಳ್ಳೆಹಣಕಾಸಿನ ಮೇಲೆ ಅವಲಂಬಿಸಿರುತ್ತದೆ. ಆಡಳಿತ ಎಂಬ ಇಂಜಿನ್ನಿಗೆ ಹಣಕಾಸು ಎಂಬುದು, ಇಂಧನವಾಗಿದೆ ಎಂದು ಹಣಕಾಸು ಆಡಳಿತವನ್ನು ವಿಮರ್ಶೆ ಮಾಡಿರುವರು. ಭಾರತಕ್ಕೆ ಇಂಗ್ಲೆಂಡ ಕೊಟ್ಟ ಕೊಡುಗೆ ಏನು ಎಂಬುದಕಿಂತಲೂ ಇಂಗ್ಲೆಂಡಗೆ ಭಾರತ ಕೊಟ್ಟ ಕೊಡುಗೆ ಆರ್ಥಿಕವಾಗಿ ಅಪಾರವಾಗಿದೆ. ಅಧಿಕ ತೆರಿಗೆಯಿಂದ ಇಂಗ್ಲೆಂಡ ಭಾರತವನ್ನು ಎಷ್ಟು ಲೂಟಿ ಮಾಡಿತು ಎಂದರೆ ಪ್ರಪಂಚದಲ್ಲಿಯೆಭಾರತವು ಒಂದು ಬತ್ತಿಹೋದ ಸ್ಥಳವಾಗಿದೆ ಎಂಬುದಾಗಿ ಹೇಳುತ್ತಾರೆ. ಬ್ರಿಟಿಷರಿಂದ ಶಾಂತಿಯುತ ಆಡಳಿತ ಪದ್ದತಿ, ನ್ಯಾಯಾಂಗ ಪದ್ದತಿ, ಕೊಡುಗೆಗಳಾದರೂ ಭಾರತವನ್ನು ಬಡತನ, ದಾರಿದ್ರ್ಯ ಕೂಪಕ್ಕೆ ತಳ್ಳಿದ್ದು ಘೋರ ಅನ್ಯಾಯವಾಗಿದೆ ಎಂಬುದಾಗಿ ಬ್ರಿಟಿಷರ ಆಡಳಿತವನ್ನು, ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಾ ಜಗತ್ತಿಗೆ ಬಹಿರಂಗ ಗೊಳಿಸಿದ್ದಾರೆ. ಬ್ರಿಟಿಷರ ಮುಖಕ್ಕೆ ಹೊಡೆದಂತೆ ಅಂಕಿ ಅಂಶ ಪ್ರಸ್ತೂತ ಪಡೆಸಿದ್ದಾರೆ. ಈ ಕೃತಿ –ಅಂದು ಎಷ್ಟು ಪ್ರಸಿದ್ದಿ ಹೊಂದಿತ್ತು ಎಂಬುದಕ್ಕೆ, ಅಂದಿನ ಸಂಸದರು, ಶಾಸಕರು ಬ್ರಿಟಿಷ ಆಡಳಿತದ ಬಜೆಟ್ ಮಂಡನೆಯ ಸಮಯದಲ್ಲಿ ಆಕರ ಗ್ರಂಥವಾಗಿ ಬಳಸಲಾಗುತಿತ್ತು. ಅಂಬೇಡ್ಕರರುಒಬ್ಬ ಶ್ರೇಷ್ಠ ಆರ್ಥಿಕ ತಜ್ಞರೆಂಬುದು, ಒಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಲೇಖನಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಬ್ರಿಟಿಷರ ಆಡಳಿತ ಪದ್ಧತಿಯನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿದ್ದು ಯಾವ ಸ್ವಾತಂತ್ರ್ಯ ಹೊರಾಟಗಾರನಿಗಿಂತಲೂ ಕಡಿಮೆಯಾದುದಲ್ಲ ಎಂಬುದನ್ನು ಕೃತಿಯು ಸಾಬೀತು ಪಡಿಸುತ್ತದೆ. ಈ ಕೃತಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರಿಗೆ ಪಿಎಚ್ ಡಿ ಪದವಿಯನ್ನು ನೀಡಿತು. (ಮುಂದುವರೆಯುವುದು) ಸೋಮಲಿಂಗ ಗೆಣ್ಣೂರ
ಧಾರಾವಾಹಿ ಆವರ್ತನ ಅದ್ಯಾಯ-46 .ಆವತ್ತು ದೇವರಕಾಡಿನಲ್ಲಿ ನೆರೆದ ಭಕ್ತಾದಿಗಳೆದುರು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿ ಬಂದಿದ್ದ ಗುರೂಜಿಯವರು ಅಲ್ಲಿನ ನಾಗ ಭವನ ನಿರ್ಮಾಣದ ಕಾಮಗಾರಿಯನ್ನು ಶಂಕರನಿಗೆ ಒಪ್ಪಿಸಲು ಇಚ್ಛಿದರು. ಆದ್ದರಿಂದ ಅಂದು ಬೆಳಿಗ್ಗೆ ಅವನನ್ನು ತಮ್ಮ ಬಂಗಲೆಗೆ ಬರಹೇಳಿದರು. ಗುರೂಜಿಯವರು ದೇವರಕಾಡಿನ ದೊಡ್ಡ ಪ್ರಾಜೆಕ್ಟ್ನ್ನು ಕೈಗೆತ್ತಿಕೊಂಡಿರುವುದು ಶಂಕರನಿಗೂ ಗೊತ್ತಿತ್ತು. ಅಲ್ಲದೇ ಅದರ ಕೆಲಸವನ್ನು ಅವರು ತನಗೇ ಕೊಡುತ್ತಾರೆಂಬುದೂ ಅವನಿಗೆ ಖಚಿತವಿತ್ತು. ಹಾಗಾಗಿ,‘ಶಂಕರಾ ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಮಾತಾಡಲಿಕ್ಕಿದೆ ಮಾರಾಯಾ, ಬೇಗ ಬಂದುಬಿಡು!’ ಎಂದು ಗುರೂಜಿಯವರು ಆಪ್ತವಾಗಿ ಕರೆದಾಗ ಅವನೂ ಅಷ್ಟೇ ನಮ್ರತೆಯಿಂದ, ‘ಆಯ್ತು ಗುರೂಜಿ. ಇನ್ನೊಂದು ಅರ್ಧ ಗಂಟೆಯಲ್ಲಿ ನಿಮ್ಮ ಮುಂದಿರುತ್ತೇನೆ!’ ಎಂದವನು ಕೂಡಲೇ ಸ್ನಾನ ಮಾಡಿ ಬಿಳಿಯ ಮಡಿಯುಟ್ಟು ಅವರ ಬಂಗಲೆಗೆ ಹೊರಟು ಬಂದಿದ್ದ. ಶಂಕರ ತಮ್ಮನ್ನು ಕಂಡಾಗಲೆಲ್ಲ ತೋರಿಸುತ್ತಿದ್ದ ವಿಶೇಷ ಗೌರವವನ್ನೂ ಮತ್ತವನ ಈ ಹೊತ್ತಿನ ವೇಷಭೂಷಣನ್ನೂ ಕಂಡ ಗುರೂಜಿಯವರಿಗೆ ಅವನ ಬಗ್ಗೆ ಹೆಮ್ಮೆಯೆನಿಸಿತು. ಅಷ್ಟೊತ್ತಿಗೆ ಕೆಲಸದವಳು ತಂದಿಟ್ಟ ಕಾಫಿಯನ್ನು ಶಂಕರನಿಗೆ ಕುಡಿಯಲು ಹೇಳುತ್ತ ಮಾತಿಗಾರಂಭಿಸಿದರು. ‘ಶಂಕರ, ಆ ನಾಗದೇವನ ದಯೆಯಿಂದ ನಿನ್ನ ಭಾಗೀವನದ ಸಮೀಪದ ದೇವರಕಾಡನ್ನು ಜೀರ್ಣೋದ್ಧಾರ ಮಾಡುವ ದೊಡ್ಡ ಜವಾಬ್ದಾರಿಯೊಂದು ನಮ್ಮ ಮೇಲೆ ಬಿದ್ದಿದೆ ಮಾರಾಯಾ. ಈ ಪ್ರಾಜೆಕ್ಟು ಕಡಿಮೆಯೆಂದರೂ ಮೂವತ್ತು ಕೋಟಿಗೂ ಮೀರಿದ್ದು ಮಾತ್ರವಲ್ಲದೇ ನಮ್ಮ ಜೀವಮಾನದಲ್ಲೇ ಅದು ಬಹಳ ದೊಡ್ಡ ವ್ಯವಹಾರ ಮಾರಾಯಾ! ಹಾಗಾಗಿ ನಮಗೆ ನಿನ್ನ ಸಂಪೂರ್ಣ ಸಹಕಾರ ಬೇಕು. ಅದರ ಕೆಲಸಕಾರ್ಯಗಳು ನಾಳೆಯಿಂದಲೇ ಶುರುವಾಗುತ್ತವೆ! ಎಂದು ಹೆಮ್ಮೆಯಿಂದ ಹೇಳಿದರು. ಗುರೂಜಿಯವರು ತಮ್ಮ ಬುದ್ಧಿಶಕ್ತಿ ಮತ್ತು ಚಾಣಾಕ್ಷತೆಯಿಂದ ತನಗಿಂತಲೂ ವೇಗವಾಗಿ ಮೇಲೇರಿದುದನ್ನು ಕಾಣುತ್ತ ಬಂದಿದ್ದ ಶಂಕರ ಮೊದಮೊದಲು ಅವರ ಮೇಲೆ ತೀವ್ರ ಮಸ್ಸರಗೊಂಡಿದ್ದನಾದರೂ ಕೊನೆಕೊನೆಗೆ ಅವರ ಸಾಮಥ್ರ್ಯಕ್ಕೆ ವಿಧಿಯಿಲ್ಲದೆ ಶರಣಾಗಿಬಿಟ್ಟಿದ್ದ. ಹಾಗಾಗಿ ಅವರು ತನ್ನ ಶಾಲಾ ಸಹಪಾಠಿ ಎಂಬುದೂ ಅವನಲ್ಲಿ ಗೌಣವಾಗಿ ಅವರ ಮೇಲೆ ಎಲ್ಲರಂತೆ ಭಯಮಿಶ್ರಿತ ಗೌರವಾದರಗಳು ಮೂಡಿದ್ದವು. ಆದ್ದರಿಂದ ಇವತ್ತು ಅವರೆದುರು ನಮ್ರನಾಗಿ ಕುಳಿತಿದ್ದವನು, ‘ಅಲ್ಲ, ಗುರೂಜಿ ನಿಮ್ಮ ಶಕ್ತಿ, ಸಾಮಥ್ರ್ಯದ ಬಗ್ಗೆ ಯಾರಾದರೂ ಮಾತಾಡಲಿಕ್ಕುಂಟಾ ಹೇಳಿ? ನೀವು ಮನಸ್ಸು ಮಾಡಿದರೆ ಯಾವ ಕಾರ್ಯವನ್ನಾದರೂ ಚಿಟಿಕೆ ಹೊಡೆದಂತೆ ಸಾಧಿಸಬಲ್ಲಿರಿ ಅಂತ ಇಡೀ ಊರಿಗೇ ಗೊತ್ತಿರುವ ಸಂಗತಿಯವಲ್ಲವಾ! ಬಹುಶಃ ಆ ಗುಣ ನಿಮ್ಮ ರಕ್ತದಲ್ಲೇ ಬಂದಿರಬೇಕು. ಹಾಗಾಗಿಯೇ ಅಲ್ಲವಾ ನೀವು ನನ್ನ ಹಳೆಯ ದೋಸ್ತಿ ಎನ್ನುವುದನ್ನೂ ಮರೆತು ನಾನು ನಿಮ್ಮ ಭಕ್ತನಾಗಿರುವುದು…!’ ಎಂದು ನಗುತ್ತ ಹೊಗಳಿದ. ಅವನ ಆ ಮಟ್ಟದ ಪ್ರಶಂಸೆಗೆ ಗುರೂಜಿಯವರು ಉಬ್ಬಿದರು. ಆದರೂ ಗಂಭೀರವಾಗಿ,‘ಅದೆಲ್ಲ ಸರಿ ಮಾರಾಯಾ. ಈಗ ಮುಖ್ಯ ವಿಷಯಕ್ಕೆ ಬರುವ. ಏನೆಂದರೆ, ಆ ನಾಗ ಪರಿವಾರ ದೈವಗಳ ದೇವಸ್ಥಾನ ನಿಮಾರ್ಣದ ಕೆಲಸವನ್ನು ನಿನಗೇ ಒಪ್ಪಿಸಬೇಕೆಂದಿದ್ದೇವೆ. ಅದು ನಿನ್ನಿಂದ ಸಾಧ್ಯವಾಗುತ್ತದಾ ಹೇಳು…?’ ಎಂದು ಸಂಶಯದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಅವರು ರಪ್ಪನೆ ತನ್ನ ಕೆನ್ನೆಗೆ ಹೊಡೆದಂತಾಯಿತು. ಸ್ವಲ್ಪಹೊತ್ತು ಮಂಕಾಗಿ ಕುಳಿತುಬಿಟ್ಟ. ಏಕೆಂದರೆ ಕಟ್ಟಡ ಕಾಮಗಾರಿಯ ವಿಷಯದಲ್ಲಿ ಶಂಕರನಷ್ಟು ನಿಪುಣರೂ, ಅನುಭವಸ್ಥರೂ ಆವಾಗ ಈಶ್ವರಪುರದ ಸುತ್ತಮುತ್ತ ಯಾರೂ ಇರಲಿಲ್ಲ. ಆದರೂ ಅವನು ಈವರೆಗೆ ಸಣ್ಣಪಟ್ಟ ಮನೆಗಳನ್ನು ಮತ್ತು ಕೆಲವು ಬಂಗಲೆಗಳನ್ನು ಹೆಚ್ಚೆಂದರೆ ಐದಾರು ಅಂತಸ್ತಿನ ಕಟ್ಟಡಗಳನ್ನೂ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದನಾದರೂ ಅವೆಲ್ಲಕ್ಕಿಂತ ಭಿನ್ನವಾದ ಹಾಗೂ ಬೃಹತ್ತಾದ ಕಾಮಗಾರಿಯನ್ನೆಂದೂ ಮಾಡುವ ಅವಕಾಶ ಅವನಿಗೆ ದೊರಕಿರಲಿಲ್ಲ. ಆದ್ದರಿಂದ ಎಂದಾದರೊಂದು ದಿನ ತನ್ನೂರಿನ ಕಟ್ಟಡ ಕಾಮಗಾರಿ ಕ್ಷೇತ್ರವೇ ತನ್ನನ್ನು ಕಂಡು ಹುಬ್ಬೇರಿಸುವಂಥ ದೊಡ್ಡ ನಿರ್ಮಾಣವೊಂದನ್ನು ತಾನು ಮಾಡಿ ತೋರಿಸಬೇಕು! ಎಂಬ ಹೆಬ್ಬಯಕೆಯೊಂದೂ ಅವನನ್ನು ಸದಾ ಕಾಡುತ್ತಿತ್ತು. ಹೀಗಿರುವಾಗ ಇಂದು ಗುರೂಜಿಯವರು ಅವನ ಸಾಮಥ್ರ್ಯದ ಮೇಲೆಯೇ ಅಪನಂಬಿಕೆ ತೋರಿಸಿದ್ದು ಅವನಿಗೆ ಬೇಸರವನ್ನು ತರಿಸಿತ್ತು. ‘ಇದೇನೀದು ಗುರೂಜಿ… ನಿಮ್ಮಿಂದ ಇಂಥ ಮಾತಾ? ಕಟ್ಟಡದ ಕೆಲಸದಲ್ಲಿ ನನ್ನ ಅನುಭವ ಯಾವ ಮಟ್ಟದ್ದು ಅಂತ ನಿಮಗಿನ್ನೂ ತಿಳಿದಿಲ್ಲವಾ!’ ಎಂದು ಅಸಹನೆಯಿಂದ ಕೇಳಿದ. ಆಗ ಗುರೂಜಿಯವರಿಗೆ ತಮ್ಮ ತಪ್ಪಿನರಿವಾಯಿತು. ‘ಛೇ,ಛೇ! ಹಾಗಲ್ಲ ಮಾರಾಯಾ ನಾವು ಹೇಳಿದ್ದು. ನಿನ್ನ ಕೆಲಸದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಇದು ಬಹಳ ದೊಡ್ಡ ಕೆಲಸ ಮತ್ತು ನಾವಿಬ್ಬರು ಈತನಕ ಮಾಡಿ ಅನುಭವವೇ ಇಲ್ಲದ ವ್ಯವಹಾರವಲ್ಲವಾ? ಹಾಗಾಗಿ ನಮ್ಮ ಬಾಯಿಂದ ಹಾಗೆ ಬಂತಷ್ಟೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಈ ಪ್ರಾಜೆಕ್ಟನ್ನು ನೀನೇ ಯಶಸ್ವಿಯಾಗಿ ನಡೆಸಿಕೊಡುತ್ತಿ ಅಂತ ಭರವಸೆಯಿದೆ ನಮಗೆ! ನಾಳೆ ಪುಷ್ಯ ನಕ್ಷತ್ರ, ಮಕರಸಂಕ್ರಮಣ. ಶುಭಕಾರ್ಯಕ್ಕೆ ಪ್ರಶಸ್ತವಾದ ದಿನ. ಬೆಳಿಗ್ಗೆ ಬೇಗನೇ ಬಂದು ಬಿಡು. ದೇವರ ಪೂಜೆ ಮುಗಿಸಿ ನಿನಗೆ ಪ್ರಸಾದವನ್ನೂ ಸ್ವಲ್ಪ ಮುಂಗಡವನ್ನೂ ಕೊಡುತ್ತೇವೆ. ಕೂಡಲೇ ಕೆಲಸ ಆರಂಭಿಸು. ಹ್ಞಾಂ! ಇನ್ನೊಂದು ಮಾತು. ಆ ಪ್ರದೇಶದ ಕಾಡು ಕಡಿಸುವ ಕೆಲಸವನ್ನೂ ನೀನೇ ವಹಿಸಿಕೊಳ್ಳಬೇಕು ಮಾರಾಯಾ. ಆ ದರಿದ್ರ ಹಾಡಿಯೊಳಗೆ ಸಿಕ್ಕಾಪಟ್ಟೆ ಮೃಗಗಳಿವೆ ಅಂತ ಮೊನ್ನೆ ಬನ ಜೀರ್ಣೋದ್ಧಾರದ ನಾಂದಿ ಮಾಡಲು ಹೋದಾಗ ತಿಳಿಯಿತು. ಆವತ್ತು ಶೀಂಬ್ರಗುಡ್ಡೆಯ ನಿನ್ನ ಲೇಔಟು ಮಾಡುವಾಗ ಅದ್ಯಾರೋ ನಿನ್ನ ಪುರಂದರಣ್ಣನ ತಂಡದ ಕಾಡು ಮನುಷ್ಯರು ಬಂದಿದ್ದರು ಅಂತ ಹೇಳಿದ್ದೆಯಲ್ಲ, ಅವರನ್ನೇ ಕರೆಯಿಸಿ ಅವರ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿಬಿಡು…!’ ಎಂದು ಜೋರಾಗಿ ನಕ್ಕಾಗ ಶಂಕರನೂ ಧ್ವನಿಗೂಡಿದ. ‘ಅಂದಹಾಗೆ ಕಾಡು ಕಡಿಸುವ ಕೆಲಸವನ್ನು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಬಿಟ್ಟು ಶುರು ಮಾಡು. ಅದಕ್ಕೂ ಒಂದು ಒಳ್ಳೆಯ ದಿನವನ್ನು ಗೊತ್ತುಪಡಿಸಿದ್ದೇವೆ!’ ಎಂದ ಗುರೂಜಿಯವರು ತಟ್ಟನೆ ಗಂಭೀರವಾದರು. ಬಳಿಕ, ‘ಶಂಕರಾ, ಈಗ ಬಹಳ ಮುಖ್ಯವಾಗಿ ದೇವಸ್ಥಾನದ ಕಟ್ಟಡಕ್ಕೆ ಬೇಕಾಗುವ ಉತ್ತಮವಾದೊಂದು ದೊಡ್ಡ ಬಂಡೆಯನ್ನು ಹುಡುಕುವುದು ನಮ್ಮ ಮೊದಲ ಕೆಲಸ ನೋಡು! ಯಾಕೆಂದರೆ ನಾವು ಹಮ್ಮಿಕೊಂಡಿರುವ ಆ ದೇವಸ್ಥಾನದ ನಿರ್ಮಾಣವು ಏಕಶಿಲೆಯಿಂದಲೇ ಆಗಬೇಕೆಂಬ ನಿಯಮವಿದೆ. ಹಾಗಾಗಿ ಮೊದಲು ನೀನು ಅದನ್ನು ಹುಡುಕಬೇಕು! ಆನಂತರ ದೇವಸ್ಥಾನದೊಳಗಿನ ಕಾಷ್ಠಶಿಲ್ಪಕ್ಕೆ ಉತ್ತಮವಾದ ಮರಮುಟ್ಟುಗಳೂ ಬೇಕಾಗುತ್ತವೆ. ಅದಕ್ಕೆ ಸ್ವಲ್ಪ ಮಟ್ಟದ ಮರಗಳು ಆ ಕಾಡಿನಲ್ಲಿಯೇ ಸಿಗುತ್ತವೆ. ಉಳಿದದ್ದನ್ನು ಬೇರೆಡೆಯಿಂದ ಹೊಂದಿಸಿಕೊಂಡರಾಯ್ತು’ ಎಂದರು. ಗುರೂಜಿಯವರ ಮಾತು ಕೇಳಿದ ಶಂಕರನಲ್ಲಿ ಉತ್ಸಾಹ ಚಿಮ್ಮಿತು. ‘ಆಯ್ತು, ಆಯ್ತು ಗುರೂಜಿ. ನೀವು ಹೇಗೆ ಹೇಳುತ್ತೀರೋ ಹಾಗೆ. ನಾಳೆ ಬರುತ್ತೇನೆ. ಕೆಲಸ ಆದಷ್ಟು ಬೇಗ ಶುರು ಮಾಡುವ!’ ಎಂದವನು ಉಗುರುಸುತ್ತಿನಿಂದ ಊದಿಕೊಂಡಿದ್ದ ಅವರ ಬಲಗಾಲ ದಪ್ಪ ಹೆಬ್ಬೆರಳನ್ನು ಭಕ್ತಿಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡು ಹಿಂದಿರುಗಿದ. ಆಗ ಗುರೂಜಿಯವರ ತುಟಿಯಂಚಿನಲ್ಲಿ ಹೆಮ್ಮೆಯ ನಗುವೊಂದು ಹೊಮ್ಮಿತು. ಮರುದಿನ ಮುಂಜಾನೆ ಶಂಕರ ಸಮಯಕ್ಕೆ ಸರಿಯಾಗಿ ಗುರೂಜಿಯವರ ಬಂಗಲೆಗೆ ಬಂದ. ಅವರು ಅವನನ್ನು ವರಾಂಡದಲ್ಲಿ ಕುಳ್ಳಿರಿಸಿ ತಮ್ಮ ಮನೆ ದೇವರ ಪೂಜೆಗೆ ಕುಳಿತವರು, ಬರೋಬ್ಬರಿ ಅರ್ಧ ಗಂಟೆಯ ವಿಶೇಷ ಪೂಜೆಯೊಂದನ್ನು ನೆರವೇರಿಸಿದ ಬಳಿಕ ಬೆಳ್ಳಿಯ ಹರಿವಾಣದಲ್ಲಿ ಗಂಧಪ್ರಸಾದವನ್ನೂ ಎರಡು ಸಾವಿರ ಮುಖಬೆಲೆಯ ನೋಟಿನ ಐದು ಕಟ್ಟುಗಳನ್ನೂ ಇರಿಸಿ ತಂದು ನಗುತ್ತ ಶಂಕರನಿಗೆ ನೀಡಿದರು. ಅದನ್ನವನು ಭಕ್ತಿಯಿಂದ ಸ್ವೀಕರಿಸಿ, ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿ ತನ್ನ ಕಾರು ಹತ್ತಿದ. ತಮ್ಮಿಂದ ನಿರ್ಮಾಣಗೊಳ್ಳಲಿರುವ ನಾಗನ ಇಡೀ ದೇವಸ್ಥಾನವು ಏಕಶಿಲೆಯಿಂದಲೇ ಅರಳಬೇಕು. ಆ ಶಿಲೆಗಳಲ್ಲಿ ಮತ್ತು ಒಳಗಿನ ಕಾಷ್ಠಶಿಲ್ಪಗಳಲ್ಲಿ ನಾಗಪುರಾಣಕ್ಕೆ ಸಂಬಂಧಿಸಿದ ಮತ್ತು ನಾಗಾರಾಧನೆಯ ಪ್ರಾಚೀನತೆಯನ್ನು ಸಾರುವಂಥ ಸಹಸ್ರಾರು ಬಗೆಯ ಕಲಾಕೃತಿಗಳು ಅದ್ಭುತವಾಗಿ ಕೆತ್ತನೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ವಿಶೇಷ ಭಯಭಕ್ತಿಯನ್ನು ಮೂಡಿಸುವಂತಿರಬೇಕು. ಆ ಮಟ್ಟದ ತಮ್ಮ ಸಾಧನೆಯನ್ನು ಕಂಡು ಊರಿನ ಇನ್ನಿತರ ದೇವಸ್ಥಾನಗಳ ಮುಖ್ಯಸ್ಥರೆಲ್ಲರೂ ವಿಸ್ಮಯದಿಂದ ಮೂಗಿನ ಮೇಲೆ ಬೆರಳಿಡುವಂತಾಗಬೇಕು! ಎಂಬುದು ಗುರೂಜಿಯವರ ಹೆಬ್ಬಯಕೆಯಾಗಿತ್ತು. ಆದ್ದರಿಂದ ಶಂಕರನೂ ಅವರ ಮಹದಾಸೆಯನ್ನು ನೆರವೇರಿಸಲು ಹೊರಟವನು, ಮೊದಲನೆಯದಾಗಿ ದೊಡ್ಡ ಬಂಡೆಯೊಂದರ ಹುಡುಕಾಟಕ್ಕಿಳಿದ. ತನ್ನ ಕಟ್ಟಡಗಳ ಅಡಿಪಾಯ ಕೆಲಸದ ತಂಡದ ಹಲವರಲ್ಲಿ ಆ ಕುರಿತು ವಿಚಾರಿಸುತ್ತ ಬಂದ. ಆದ್ದರಿಂದ ಅವರಲ್ಲಿ ತಮಿಳುನಾಡಿನ ತಂಗವೇಲು ಎಂಬವನು ಈಶ್ವರಪುರದ ಅಂಚಿನಲ್ಲಿರುವ ಕಾರ್ಗಲ್ಲು ಎಂಬ ಗ್ರಾಮದ ಒಂದು ಕಡೆ ಅಂಥದ್ದೊಂದು ಬೃಹತ್ತ್ ಬಂಡೆ ಇರುವುದು ತನಗೆ ಗೊತ್ತಿದೆ ಎಂದು ಶಂಕರನಿಗೆ ತಿಳಿಸಿದ. ಹಾಗಾಗಿ ಶಂಕರ ಮರುದಿನ ಬೆಳಿಗ್ಗೆಯೇ ಗುರೂಜಿಯವರ ಪ್ರಸಾದವನ್ನು ತನ್ನ ಹೊಸ ಇನ್ನೋವಾ ಕಾರಿನಲ್ಲಿಟ್ಟುಕೊಂಡು ತಂಗವೇಲುವಿನೊಂದಿಗೆ ಅತ್ತ ಹೊರಟ. ತಂಗವೇಲು ಬಹಳ ವರ್ಷಗಳ ಹಿಂದೊಮ್ಮೆ ತನ್ನ ಮೊದಲಿನ ಮಾಲಿಕನೊಡನೆ ಕಾರ್ಗಲ್ಲಿನ ಯಾವುದೋ ಒಂದು ಸಣ್ಣ ಊರಿನಲ್ಲಿದ್ದ ಆ ಬಂಡೆಯನ್ನು ನೋಡಲು ಹೋಗಿದ್ದ. ಆದರೆ ಈಗ ಅವನು ಅಲ್ಲಿನ ದಾರಿಯನ್ನು ಮರೆತಿದ್ದ. ಊರು ಕಾರ್ಗಲ್ಲು ಮತ್ತು ಬಂಡೆಯ ಮಾಲಿಕ ಸುರೇಂದ್ರಯ್ಯ ಎಂಬುದು ಮಾತ್ರ ಗೊತ್ತಿತ್ತು. ಹಾಗಾಗಿ ಧೈರ್ಯ ಮಾಡಿ ಶಂಕರನನ್ನು ಕರೆದುಕೊಂಡು ಹೊರಟ. ಆದರೆ ಕಾರ್ಗಲ್ಲು ಸಮೀಪಿಸುತ್ತಲೇ ಮತ್ತೆ ಮುಂದೆ ಹೋಗಲು ಅವನಿಗೆ ದಿಕ್ಕು ಹೊಳೆಯಲಿಲ್ಲ. ಆದ್ದರಿಂದ, ‘ಇನ್ನು ಸ್ವಲ್ಪ ಮುಂದೆ ಹೋಗುವ ಸಂಗರಣ್ಣ. ಇನ್ನು, ಇನ್ನೂ ಸ್ವಲ್ಪ ಹೋಗುವ…!’ ಎನ್ನುತ್ತ ತನಗೆ ತಿಳಿಯದ ದಾರಿಯನ್ನೇ ಅವನಿಗೂ ತೋರಿಸುತ್ತ ಕೊನೆಯಲ್ಲಿ ಅವನ ದಾರಿಯನ್ನೂ ತಪ್ಪಿಸಿಬಿಟ್ಟ. ಅಷ್ಟೊತ್ತಿಗೆ ಶಂಕರ ಅಳಂದೂರು ಚರ್ಚಿನ ರಸ್ತೆ ಹಿಡಿದಿದ್ದವನು ಇನ್ನು ಇವನನ್ನು ನಂಬಿದರಾಗದು ಎಂದುಕೊಂಡು ಅಲ್ಲೇ ಎದುರಿಗೆ ಸಿಕ್ಕಿದ ಗೂಡಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ ಹಾಗೂ ಕಾರಿನೊಳಗೆ ಕುಳಿತುಕೊಂಡೇ ತಾನು ಹೋಗಬೇಕಾದ ಬಂಡೆಯ ವಿಳಾಸವನ್ನು ಗತ್ತಿನಿಂದ ಅಂಗಡಿಯವನಲ್ಲಿ ವಿಚಾರಿದ. ಆದರೆ ಅಂಗಡಿಯವನು ಇವನ ಅಹಂಕಾರವನ್ನು ಕಂಡು ತಾನೂ ಎದ್ದು ಬಾರದೆ, ‘ಅಯ್ಯಯ್ಯಾ… ನೀವು ಎಂಥದು ಮಾರಾಯ್ರೇ ತುಂಬಾ ಮುಂದೆ ಬಂದು ಬಿಟ್ಟಿದ್ದೀರಲ್ಲಾ…! ಆ ಊರಿನ ಹೆಸರು ಗೋಳಿಬೆಟ್ಟು ಅಂತ. ಒಂದು ಕೆಲ್ಸ ಮಾಡಿ. ಈಗ ಬಂದ ದಾರಿಯಲ್ಲೇ ಸುಮಾರು ಹಿಂದೆ ಹೋಗಿ. ಆಗ ಕುಂಟಲಪಾಡಿ ಅಂತ ಸಿಗುತ್ತದೆ. ಅಲ್ಲಿ ಒಂದುಕಡೆ ಮಣ್ಣಿನ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಆ ವಿಳಾಸ ಸಿಗುತ್ತದೆ ನೋಡಿ…’ ಎಂದು ತನ್ನ ಹಲ್ಲಿಲ್ಲದ ಬೊಚ್ಚು ಬಾಯಿಬಿಟ್ಟು ನಗುತ್ತ ವಿವರಿಸಿದ. ಅವನ ನಗುವನ್ನು ಕಂಡ ಶಂಕರನಿಗೆ ಅವನು ತನ್ನನ್ನು ಗೇಲಿ ಮಾಡಿದನೆಂದೇ ಅನ್ನಿಸಿ ಮೈಯೆಲ್ಲ ಉರಿಯಿತು. ಆದ್ದರಿಂದ ಅವನನ್ನು ತಿರಸ್ಕಾರದಿಂದ ದಿಟ್ಟಿಸುತ್ತ ಸರ್ರನೆ ಕಾರು ತಿರುಗಿಸಿದ. ಶಂಕರನ ಕೊಬ್ಬು ಕಂಡು ಅಂಗಡಿಯವನಿಗೂ ಸಿಟ್ಟು ಬಂತು. ಅವನು ಥೂ! ಬೇವರ್ಸಿ ನಿನ್ನ ಚರ್ಬಿಯೇ…! ಎಂದು ಉಗಿಕೊಂಡ. ಆದರೆ ಶಂಕರನ ಕೋಪ ಹಾಗೆಯೇ ಕೊರೆಯುತ್ತಿದ್ದುದು ತಟ್ಟನೇ ತಂಗವೇಲುವಿನ ಮೇಲೆ ತಿರುಗಿತು.‘ಹೇ, ತಂಗವೇಲು ಇದೆಂಥದನಾ ನಿನ್ನ ಕರ್ಮ? ಎಡ್ರಸ್ ಗೊತ್ತಿಲ್ಲದಿದ್ದರೆ ಇಲ್ಲ ಅಂತ ಹೇಳಬೇಕು. ಅದನ್ನು ಬಿಟ್ಟು, ‘ಸ್ವಲ್ಪ ಹೋಗುವ, ಸ್ವಲ್ಪ ಹೋಗುವ ಅಂತ ಎಲ್ಲಿಗೆ ನಿನ್ನ ಅಪ್ಪನ ಮನೆಗೆ ಕರ್ಕೊಂಡು ಹೋದದ್ದಾ…? ಸುಮ್ಮನೆ ನಾಯಿ ಸುತ್ತಿದ ಹಾಗೆ ಸುತ್ತಿಸಿದೆಯಲ್ಲ ಮಂಡೆ ಸಮ ಉಂಟಾ ನಿಂಗೆ…? ಎಂದು ಕೆಟ್ಟದಾಗಿ ಬೈದುಬಿಟ್ಟ. ಅದನ್ನು ಕೇಳಿದ ತಂಗವೇಲು ಪೆಚ್ಚಾಗಿ ಹಲ್ಲುಗಿಂಜುತ್ತ ಕುಳಿತ. ಅಷ್ಟರಲ್ಲಿ ಕುಂಟಲಪಾಡಿ ಎದುರಾಯಿತು. ಅಲ್ಲಿ ಸುಮಾರು ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕುಂಟಾಲ ಹಣ್ಣಿನ ಮರಗಳಿಂದ ತುಂಬಿದ ದಟ್ಟ ಹಾಡಿಗಳಿದ್ದವು. ಅಲ್ಲೇ ಬಲಕ್ಕೊಂದು ಮಣ್ಣಿನ ಒಳದಾರಿ ಕಾಣಿಸಿತು. ಆ ಪ್ರದೇಶವನ್ನು ನೋಡಿದ ತಂಗವೇಲುವಿಗೆ ಹಿಂದೆ ತಾನು ಬಂದಿದ್ದ ನೆನಪು ಈಗ ತಟ್ಟನೆ ಮರುಕಳಿಸಿತು. ‘ಓಹೋ… ಸಂಗರಣ್ಣಾ ಇದೇ ದಾರಿ, ಇದೇ ದಾರಿ. ಈಗ ತಿಳೀತು ಬಿಡಿ!’ ಎಂದು ತನ್ನ ಎಣ್ಣೆಗಪ್ಪಿನ ಮೂತಿಯನ್ನು ಊರಗಲ ಮಾಡಿಕೊಂಡು ಸಂಜೆಯ ಮಬ್ಬು ಬಾನಿನಲ್ಲಿ ಮಿಂಚುವ ಶುಕ್ರಗ್ರಹದಂಥ ನಗುವಿನಿಂದ ಹೇಳಿದ. ಆಗ
‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.
‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ರಚನೆ: ಡಾ. ವರದರಾಜಚಂದ್ರಗಿರಿಮತ್ತುಸಾ.ದಯಾ ಪ್ರಸ್ತುತಿ : ಕನ್ನಡಕಲಾಕೇಂದ್ರ, ಮುಂಬೈ. ಸಮಯ- ಸಂರ್ಭ, ನವಿಮುಂಬಯಿಕನ್ನಡಸಂಘ, ವಾಶಿ, ನವಿಮುಂಬಯಿ , ಮೊನ್ನೆದಿನಆಯೋಜಿಸಿದರ್ನಾಟಕರಾಜ್ಯೋತ್ಸವಕರ್ಯಕ್ರಮದಂದು ರೂಪಕದಲ್ಲಿ ನೃತ್ಯರೂಪಕ, ಸಂಗೀತರೂಪಕ ಇರುವಂತೆ, ಕಾವ್ಯವಾಚನ-ಗಾಯನ- ನಟನೆಯ ಮೂಲಕ ‘ರಂಗರೂಪಕ’ವನ್ನು ಸಾಧ್ಯವಾಗಿಸಿ ಸಾದರಪಡಿಸಿದವರು ಕಳೆದ ಮೂರು ದಶಕಗಳಿಂದ ಮುಂಬಯಿನ ಕನ್ನಡ ತುಳು ರಂಗಭೂಮಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವಸೃಜನಶೀಲ ನಾಟಕಕಾರ, ನಟ, ನಿರ್ದೇಶಕ, ಕವಿಮಿತ್ರ ಸಾ.ದಯಾ ಎಂಬ ಸರಳ ವಿರಳ ಸಹೃದಯಿ. ಹಿನ್ನೆಲೆ ಸಂಗೀತ ಸರ್ವ ಹೊಣೆ ಹೊತ್ತು ತಮ್ಮ ಮಧುರಕಂಠದಿಂದ ಬೇಂದ್ರೆಯವರ ಗೇಯಗೀತೆಗಳ ಭಾವಲಹರಿಯ ನಾದತರಂಗಗಳನ್ನು ಸಭಾಂಗಣದಲಿ ಪಸರಿಸಿದವರು ವಾಸು.ಜೆ.ಮೊಯಿಲಿ.ಸಂಕೋಚದ ಸ್ವಭಾವದ ಈತ ರಾತ್ರಿಶಾಲಾ ದಿನಗಳಿಂದಲೇ ಹಾಡನ್ನು ಗೀಳಾಗಿಸಿಕೊಂಡವರು.ಗೆಳೆಯರಿಂದ ಅಂದಿನಿಂದಲೂ ಮುಂಬೈನ ಪಿ.ಬಿ.ಶ್ರಿನಿವಾಸ್ ಅಂತಲೇ ಕರೆಯಿಸಿಕೊಂಡು,ಎಲೆಮರೆಯಲ್ಲೇ ಇರುವ ಇವರನ್ನು ಮುಂಬೈಯಲ್ಲಿ(ಪರಿಚಿತರೇ), ಮುಖ್ಯ ಕಾರ್ಯಕ್ರಮಗಳನಡುವಿನಸಮಯದಲ್ಲಿ ‘ಫಿಲ್ಲರ್‘ ತರಹ ಹಾಡನ್ನು ಹಾಡಲು ಉಪಯೋಗಿಸಿಕೊಂಡವರೇಹೆಚ್ಚು !!! ಹೇಳಲೇಬೇಕಾದುದುಅಂದು ರೂಪಕದಲ್ಲಿ ಪಾಲುಗೊಂಡ ಪುಟ್ಟ ಪುಟ್ಟ ಮಕ್ಕಳಾದ ಪ್ರತೀಕ್ಷಾ, ಸುನಿಧಿ, ಸಾಕ್ಷೀ, ಸನಾತನ್, ಪ್ರಥ್ವಿ.ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯ ಇವರಲ್ಲಿ ಹೆಚ್ಚಿನವರ ಮಾತೃಭಾಷೆ ಕನ್ನಡ ಅಲ್ಲ.ಬೆರಳೆಣಿಕೆಯ ತಾಲೀಮಿನಲ್ಲಿ ತಮ್ಮ ತಮ್ಮ ಪಾಲಿನದನ್ನು ಶ್ರದ್ದೆಯಿಂದ ನಿರ್ವಹಿಸಿದ ಮಕ್ಕಳ ಹುರುಪು, ಉತ್ಸಾಹ ಚೇತೋಹಾರಿಯಾಗಿತ್ತು.ತಾಲೀಮಿಗೆ ದೂರ ದೂರದಿಂದ ಅವರನ್ನು ಕರೆತರುವ ಹೆತ್ತವರ ಸಹನೆ,ಕೊಡುಗೆಯೂಮಹತ್ತರವಾದುದ್ದೇ. ಸಾ.ದಯಾ. ಅವರ ಐದು ವರ್ಷದ ಮಗ ಮೊಹಿನೀಷ್, ತಬಲದಲ್ಲಿ ಸಾಥ್ ನೀಡಿದ ಅವರ ಹಿರಿಯ ಮಗ ರಾಘವೇಂದ್ರ ದೂರದ ದೊಂಬಿವಲಿಯಿಂದ ಬರುವ ಪಾಡು; ಸಂಘದ ಕಾರ್ಯದರ್ಶಿ ಆಗಿದ್ದು ಗುರುತರ ಜವಾಬ್ದಾರಿಯ ಹೊರೆ ಹೊತ್ತ ಜಗದೀಶ್ ರೈಯವರು ತಮ್ಮ ಪೂರ್ಣ ಪರಿವಾರದ(ಮಡದಿ ಬಬಿತಾ ರೈ, ಮಗಳು ಸಾನ್ವಿ, ಮಗ ಸಾತ್ವಿಕ್) ಜೊತೆ ರೂಪಕದಲ್ಲಿ ತೊಡಗಿಸಿಕೊಂಡದ್ದು ಅವರ ಬದ್ಧತೆ ಬಗ್ಗೆ ಶರಣೆನ್ನದೆ ಬೇರೆ ಮಾತಿಲ್ಲ. ಮಕ್ಕಳ ನೃತ್ಯವಿನ್ಯಾಸ ಮಾಡಿ, ಕೆಲವೊಂದು ಹಾಡಿಗೆ ತಮ್ಮ ಲಾಲಿತ್ಯಪೂರ್ಣ ಭಾವಾಭಿನಯ ನೃತ್ಯದ ಮೂಲಕ ರೂಪಕದ ಸೊಬಗಿಗೆ ರಂಗೇರಿಸಿದ ಕಲಾವಿದೆ ಸಹನಾ ಭಾರದ್ವಾಜ್,ಹಾರ್ಮೋನಿಯಂನಲ್ಲಿ ಶಿವಾನಂದ ಶೆಣೈ, ತಬಲಾದಲ್ಲಿ ಮರಾಠಿಗ ಶುಭಂ, ಕಲಾವಿದರಾದ ಗಣೇಶ್ಕುಮಾರ, ಮಧುಸೂದನ ಟಿ.(ಕನ್ನಡಕಲಾ ಕೇಂದ್ರದ ಅಧ್ಯಕ್ಷರು), ಬೆಳಕಿನಲ್ಲಿ ಸಹಕರಿಸಿದವರು ವೆಂಕಟ, ಪ್ರಸಾಧನದಲ್ಲಿ ಮಂಜುನಾಥ ೧ ಶೆಟ್ಟಿಗಾರ ಬಳಗ, ಇವರೆಲ್ಲರ ಸೃಜನಶೀಲ ಕೊಡುಗೆ ಮುಖ್ಯವಾದದ್ದು. ನೇಪಥ್ಯದಲ್ಲಿ ಸುಚೇತಾ ಶೆಟ್ಟಿ, ವೀಣಾ ಭಟ್ ಇವರ ನೆರವು ನೆನೆಸುವಂತಹದ್ದೇ. ಪಶ್ಚಿಮೋತ್ತರ ಮುಂಬೈನ ದೂರದ ಕಾಂದವಲಿಯಿಂದ ವಾಶಿನವಿ ಮುಂಬೈಗೆ ಸುಮಾರು ೪೫ ಕಿ.ಮಿ. ದಾರಿಯನ್ನು ಕ್ರಮಿಸಲು ಏನೆಂದರೂ ಎರಡು ತಾಸು ಬೇಕೇಬೇಕು. ತಾಲೀಮಿಗೆ ನಾಲ್ಕಾರು ಬಾರಿ ತಮ್ಮ ಕಾರಿನಲಿ ಡ್ರೈವ್ಮಾಡಿಕೊಂಡೊಯ್ದು ಕರೆತರುತಿದ್ದ ಕಲಾವಿದ ಗೆಳೆಯ ಗಣೇಶ್ಕುಮಾರರ ತಾಳ್ಮೆ ಅಪಾರವಾದುದು. ಅವರ ಸಹನೆ ಸಹಕಾರಕ್ಕೊಂದು ಸಲಾಮ್. ……………….. ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಹೌದಲ್ಲ, ಭಾವ ಅದೊಂದು ಭೃಂಗದಂತೆ, ಮಿಂಚಿ ಮಾಯವಾಗುವಂತಹದ್ದು.ಆದರೆ ಕವಿ ಅಂತಹ ಮಿಂಚನ್ನೂ ಹಿಡಿದಿರಿಸಬಲ್ಲ! ಕಾವ್ಯ ಭಾವ ಕನ್ನಡಿಯ ಮೂಲಕ‘ ಅರ್ಥವಿಲ್ಲ ಸ್ವರ್ಥವಿಲ್ಲ ಬರಿಯ ಭಾವಗೀತ’ ಎಂಬ ಜೀವನ ದರ್ಶನವನ್ನು ಮಾಡಿಸಬಲ್ಲ ದಾರ್ಶನಿಕನೂ ಹೌದು. ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂಬ ಸುಸೂತ್ರ ಸಂಸಾರಕೆ ಮೂಲಬೀಜ ಮಂತ್ರದ ಸೂತ್ರದಾರಿಯೂ ಹೌದು. ‘ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ ಹಾಲ್ಜೇನು ಸುರಿಯೋಣ, ಕುಣಿಯೋಣು ಬಾರಾ, ಕುಣಿಯೋಣು ಬಾ ಎಂದು ಬದುಕಿನ ಸಂತಸವನ್ನು ಕುಣಿಕುಣಿದು ಅನುಭವಿಸಲು ಹಾರೈಸುವಂತೆ,ಸಂಸಾರಸಾಗರದಾಗ ಕವಿ ಪಟ್ಟ ದು:ಖ ದುಮ್ಮಾನಗಳ ಹೊರೆ ಭಾರವೇನು ಕಡಿಮೆಯದಲ್ಲ. ‘ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ?’ ಆಗ ತಾನೆ ಹುಟ್ಟಿದ ಇನ್ನೊಂದು ಮಗುವೂ ಕಣ್ಣು ಮುಚ್ಚಿದಾಗ, ಮಡದಿಯ ಆ ಕರುಳು ಹಿಂಡುವ ನೋಟವನ್ನು ನೋಡಲಾರದ ಕವಿಕರುಳು ಮಿಡಿವ ಬಗೆಯದು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದಾ, ನುಣ್ಣನೆ ಎರಕಾವ ಹೋಯ್ದಾ” ಸುಮಾರು ನೂರಾ ಎರಡು ವರ್ಷಗಳ ಹಿಂದೆ ಸಾಧನಕೇರಿಯ ಮನೆ ಅಂಗಳದಿಂದ ಕವಿ ಕಂಡ, ಕಾಣಿಸುವ, ಸೂರ್ಯೋದಯ ವರ್ಣನೆಯಲ್ಲಿ ತೇಲಿಸುವ, ಇದು ಬರಿ ಬೆಳಗಲ್ಲೋ ಅಣ್ಣಾ ಎಂಬ ಅನೂಹ್ಯ ಅದ್ಭುತಕೆ ಸರಿಸಾಟಿಯಾದ ಕಾವ್ಯವೆಲ್ಲಿ? ಬೆಳಗಲ್ಲಿ ಅದ್ಯಾತ್ಮ ದರ್ಶನಗೈವ ಕವಿ ಸಂಜೆಹೊತ್ತಲ್ಲಿ ; ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ, ಆಗ ಸಂಜೆಯಾಗಿತ್ತ’ ಅಂತ ಕಣ್ಣ ಮಿಟಿಕಿಸುವ ತುಂಟತನಕ್ಕೂ ಕಡಿಮೆ ಇಲ್ಲ. ತಾನೊಲಿದವಳ ಮೊಗದ ಮೇಲೆ ನಗೆನವಿಲು ಆಡುವುದನ್ನು ಕಾಣುವ ಕವಿಯ ಕಲ್ಪನಾ ಕಾಣ್ಕೆಗೆ ಮಿಗಿಲುಂಟೇ ? ಸಾಮಾನ್ಯರ ಪಾಲಿನ ಸಹಜ ಪ್ರೇಮಭಾವ ಮೆರೆವ ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು…’ ಎಂಥ ಮಧುರ ಮಧುರ ಪ್ರೇಮಾಲಾಪವಿದು..! ಪ್ರೇಮದ ಮುಂದಿನ ಹೆಜ್ಜೆ ಪ್ರಣಯವಲ್ಲವೇ. ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತ್ತಿದೆ ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ…..’ ಕವಿ ಪ್ರಣಯ ಭಾವವನ್ನು ವ್ಯಕ್ತಪಡಿಸುವ ಪರಿ ನೋಡಿ! ಆದರೆ ಇಲ್ಲಿ ಎಲ್ಲವೂ ಸರಿ ಇರುವುದೇ? ಇಲ್ಲ.ಸಮಾಜದಲ್ಲಿ ಮಾನವ ಪ್ರೇರಿತ ಅತಿರೇಕಕ್ಕೆ ಕೆರಳುವ ಕವಿಯೊಳಗಿನ ರುದ್ರವೀಣೆ ಮಿಡಿಯುವ ಬಗೆ; ‘ಧರ್ಮಾಸನಹೊರಳುತಿವೆ’ ಸಿಂಹಾಸನ ಉರುಳುತಿವೆ, ಜಾತಿಪಂಥ ತೆರಳುತಿವೆ ಮನದ ಮರೆಯಲಿ, ಯಾಕೋ ಕಾಣೆ ರುದ್ರವೀಣೆ ಮಿಡಿಯುತ್ತಿರುವುದು…’ ಹೀಗೆ ತನ್ನ ಸುತ್ತಲ ಆಗುಹೋಗುಗಳಿಗೆ ಕಣ್ಣಾದ,ಕಿವಿಯಾದ ಕವಿ ನೊಂದಿದ್ದಾರೆ, ಮರುಗಿದ್ದಾರೆ ಮತ್ತು ಪ್ರತಿಭಟಿಸಲೂ ಹಿಂಜರಿಯದೆ ಧ್ವನಿಯಾಗಿದ್ದಾರೆ. ಕವಿ ಜನರ ನಡುವೆ,ಜನರೊಂದಿಗೇಬದುಕುವವನು ಸಂವಹನಿಸುವವನು. ಆಗ ಹೊರಹೊಮ್ಮುವ ಜನಪದೀಯ ಹಿಗ್ಗಿನ ಹಾಡೇ; ‘ಮಲ್ಲೀಗಿ ಮಂಟಪದಾಗ, ಗಲ್ಲಗಲ್ಲ ಹಚ್ಚಿಕೂತು, ಮೆಲ್ಲ ದನಿಲೆ ಹಾಡೋಣಂತ, ಯಾರಿಗೂ,ನಾವು ಯಾರಿಗೂ ಹೇಳೋಣು ಬ್ಯಾಡ.’. ಜನಸಾಮಾನ್ಯರ ಹಾಡಾಗುವುದು ಹೀಗೆ. ‘ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ….’ ಎಂದು ಮೈದಡವಿ ಎಚ್ಚರಿಸುವ ಕವಿ ಸ್ವತ: ಒಂದು ಕಡೆ ಹೀಗೆ ಹೇಳುತ್ತಾರೆ, “ಈ ಬೇಂದ್ರೆ ಇನ್ನೂ ಬದುಕಿದ್ದಾನೆ. ಏಕೆ ಬದುಕಿದ್ದಾನೆ ಅಂದ್ರೇ, ಹಿಂದಿನವರೆಲ್ಲ ಏನು ಹೇಳಿದ್ದಾರೆ ಅದನ್ನ ಹೇಳೋದಕ್ಕೆ ಬದುಕಿದ್ದಾನೆ…” ….. ಇಂತಹ ಸಶಕ್ತವಾದ ಸ್ಕ್ರಿಪ್ಟ್, ನಾಡಿನ ಧೀಮಂತ ಕವಿವರ್ಯರ ಬದುಕನ್ನು ಅವರದ್ದೆ ಕವಿತೆಗಳ ಮೂಲಕ ಎಳೆಎಳೆಯಾಗಿ ತೆರೆದಿಡುವಲ್ಲಿ ಮುಖ್ಯ ಭೂಮಿಕೆ ನಿರ್ವಹಿಸುತ್ತದೆ. ಲೇಖಕದ್ವಯರಾದ ಡಾ.ವರದರಾಜಚಂದ್ರಗಿರಿ ಮತ್ತು ಸಾ.ದಯಾರಿಗೆ ವಂದನೆಗಳು, ಅಭಿನಂದನೆಗಳು. …… ಕವಿವರ್ಯ ದ.ರಾ.ಬೇಂದ್ರೆಯವರುಬದುಕಿದ್ದರೆ ಅವರಿಗೀಗ ೧೨೫. ಹೌದು, ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಕಾವ್ಯಪ್ರಿಯರ ಅಕ್ಕರಾಸ್ಥೆಯಲಿ ಮತ್ತೆಮತ್ತೆ ಉಸಿರಾಡುತ್ತಲೇ ಇರುತ್ತಾನೆ. ಈ ಅಂಬೋಣವನ್ನು ಅಕ್ಷರಶ: ಸಾಕ್ಷಾತ್ಕಾರಗೊಳಿಸಿ ಮುದ ನೀಡಿದ ನಾದಮಯ ಸಂಜೆಯಾಗಿತ್ತು…. ಅಂಬಿಕಾತನಯದತ್ತ ಕೇವಲ ರೂಪಕವಲ್ಲ, ಬದುಕಿನುದ್ದಕೂ ಕವಿ ಪ್ರತಿಪಾದಿಸುವ, ಅನುಭಾವ ಜೀವನದರ್ಶನವಾಗಿದೆ. ನೆರೆದ ಸುಮಾರು ೨೫೦ ಮಂದಿ ನವಿಮುಂಬೈ ಕನ್ನಡಸಂಘದ ಬಂಧುಗಳಲ್ಲಿ ಹೆಚ್ಚಿನವರಿಗೆ ಈ ರಂಗ ರೂಪಕದ ಪರಿಕಲ್ಪನೆಯೇ ಹೊಸತು. ಆದರೆ ಆ ಒಂದು ತಾಸು ಸಭಾಂಗಣದಲ್ಲಿ ಪಿನ್ಡ್ರಾಪ್ಸೈಲೆನ್ಸ್. ಕೊನೆಯಲ್ಲಿ ಹೆಚ್ಚಿನವರ ನಿಂತು ಕರತಾಡನ ಮಾಡುವುದನ್ನು ವೀಕ್ಷಿಸುವ ಆ ಕ್ಷಣದ ಆನಂದ ವರ್ಣನಾತೀತ… ಇಷ್ಟೆಲ್ಲ ಸೋಜಿಗ ಸಾಧ್ಯವಾದದ್ದು ಕವಿಶ್ರೇಷ್ಠ ಅಂಬಿಕಾತನಯದತ್ತರಕಾವ್ಯ ಭಾವವಿಲಾಸದ ಸಂಭ್ರಮದಿಂದಲೇ ಅಲ್ಲವೆ. ಗೋಪಾಲತ್ರಾಸಿ ..
‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ. Read Post »






