ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-16 ಆತ್ಮಾನುಸಂಧಾನ ಗಂಗಾವಳಿಯಲ್ಲಿ ಮೂಲ್ಕಿ ಓದಿದ ದಿನಗಳು ನಮ್ಮ ಊರಿನಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಇರಲಿಲ್ಲ. ಮುಂದಿನ ತರಗತಿಗಳಿಗಾಗಿ ಗಂಗಾವಳಿ ಭಾಗದ “ಜೋಗಣೆ ಗುಡ್ಡ” ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಸೇರಬೇಕಾಯಿತು. ಹಾರು ಮಾಸ್ಕೇರಿ ಶಾಲೆಯ ಕುಪ್ಪಯ್ಯ ಗೌಡ, ಗಣಪತಿ ಗೌಡ ಮುಂತಾದವರೊಡನೆ ಮಾಸ್ಕೇರಿಯ ದೇವರಾಯ ಇತ್ಯಾದಿ ಗೆಳೆಯರೊಂದಿಗೆ ಗಂಗಾವಳಿಯ ಶಾಲೆಗೆ ಸೇರಿಕೊಂಡೆವು.             ಅಲ್ಲಿ ಗಾಬಿತ ಸಮಾಜದ ರಾಧಾಕೃಷ್ಣ ಎಂಬುವವರು ಬಹುಶಃ ಮುಖ್ಯಾಧ್ಯಾಪಕರಾಗಿದ್ದರು ಎಂದು ನೆನಪು. ತುಂಬ ಶಾಂತ ಸ್ವಭಾವದ ಅವರು ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಶಾಲೆಯಲ್ಲಿ ನಮ್ಮ ಸಹಪಾಠಿಗಳಾಗಿದ್ದ ಗೋವಿಂದ ನಾಯ್ಕ, ಗಣಪತಿ ನಾಯ್ಕ, ವಿಶ್ವನಾಥ ನಾಯಕ, ಶಾರದಾ ನಾಯಕ, ಸರಸ್ವತಿ ಗುನಗಾ, ಉಲ್ಕಾ ನಾರ್ವೇಕರ್ ಮುಂತಾದವರು ಆತ್ಮೀಯ ಸ್ನೇಹಿತರಾಗಿ ದೊರೆತರು.             ಮೂಲ್ಕಿ (ಏಳನೆಯ ತರಗತಿ) ಓದುವ ಹೊತ್ತಿಗೆ ನಮಗೆ ತರಗತಿಯ ಶಿಕ್ಷಕರಾಗಿ ಅಬ್ದುಲ್ ಮಾಸ್ತರ್ ಎಂಬ ಮುಸ್ಲಿಂ ಯುವ ಅಧ್ಯಾಪಕರು ದೊರೆತರು. ಇನ್ನೂ ಅವಿವಾಹಿತರಾಗಿದ್ದ ಅವರು ಆಟ ವಿನೋದಗಳಲ್ಲಿ ಮಕ್ಕಳೊಡನೆ ಮಕ್ಕಳಂತೆ ಬೆರೆತು ವ್ಯವಹರಿಸುತ್ತಿದ್ದರಾದರೂ ತರಗತಿಯ ಪಾಠದಲ್ಲಿ ಕಟ್ಟುನಿಟ್ಟಿನ ಶಿಸ್ತುಪಾಲನೆ ಮಾಡುತ್ತಿದ್ದರು. ಅವರ ತಂದೆಯವರು ಊರಿನ ಗಣ್ಯ ವ್ಯಕ್ತಿಗಳೆನ್ನಿಸಿ ಹೆಸರು ಮಾಡಿದ್ದರು. ಬಹುಶಃ ಶಿಕ್ಷಕ ವೃತ್ತಿಯನ್ನೇ ಪೂರೈಸಿ ನಿವೃತ್ತಿ ಹೊಂದಿದವರಾಗಿರಬೇಕು. ಸಾಮಾನ್ಯವಾಗಿ ಊರಿನ ಎಲ್ಲರೂ ಮಾಸ್ತರ ಸಾಹೇಬರು ಎಂದೇ ಕರೆಯುವ ವಾಡಿಕೆ ಇತ್ತು. ಹೀಗಾಗಿ ಅವರ ನಿಜವಾದ ಹೆಸರು ಏನೆಂಬುದು ನಮಗೆ ತಿಳಿಯಲೇ ಇಲ್ಲ. ಮಾಸ್ತರ ಸಾಹೇಬರು ಊರಿನ ಮಸೀದಿಯ ಮೇಲ್ವಿಚಾರಣೆಗೆ ನೋಡಿಕೊಂಡು ಮಂತ್ರ ತಂತ್ರಗಳಿಗೂ ಖ್ಯಾತರಾಗಿದ್ದರು. ಭೂತ ಪಿಶಾಚಿ ಕಾಟದಿಂದ ಬಳಲುವವರಿಗೆ ಮಂತ್ರಿಸಿದ ಅಕ್ಷತೆ ಮತ್ತು ವಿಭೂತಿಯನ್ನು ನೀಡಿ ಗುಣಪಡಿಸುತ್ತಿದ್ದರು. ನಾಗರ ಹಾವುಗಳಿಗೆ ತಡೆ ಹಾಕುವುದರಲ್ಲಿಯೂ ಪರಿಣಿತರಾಗಿದ್ದರು. ನಾಗರ ಹಾವುಗಳಿಗೆ ಗಾಯ ಮಾಡಿದವರು, ನಾಗ ದೋಷಕ್ಕೆ ಗುರಿಯಾದವರು ಮಾಸ್ತರ ಸಾಹೇಬರ ಬಳಿಗೆ ಬಂದು ಅಕ್ಷತೆ ಪಡೆದು ತಡೆ ಹಾಕಿಸಿ ಪರಿಹಾರ ಕಾಣುತ್ತಿದ್ದರು. ಊರಿನಲ್ಲಿ ಮಾತ್ರವಲ್ಲದೆ ನೆರೆಯ ಅಂಕೋಲಾ, ಕುಮಟಾ, ಹೊನ್ನಾವರ ಇತ್ಯಾದಿ ಜಿಲ್ಲೆಯ ಬೇರೆ ಕಡೆಯಿಂದ ಜನರು ಇವರ ಬಳಿಗೆ ಬರುತ್ತಿದ್ದರಲ್ಲದೇ ಬೇರೆ ಬೇರೆ ಊರುಗಳಿಗೂ ಸಾಹೇಬರನ್ನು ಕರೆಸಿಕೊಳ್ಳುತ್ತಿದ್ದರು. ಇದರಿಂದಾಗಿ ಮಾಸ್ತರ ಸಾಹೇಬರ ಕುರಿತು ಆಗಲೇ ಎಳೆಯರಾಗಿರುವ ನಮ್ಮ ಮನಸ್ಸಿನಲ್ಲಿಯೂ ಗೌರವದ ಭಾವನೆ ಇತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮಿಯರಿಗೂ ಅವರು ಪ್ರಿಯರಾಗಿದ್ದರು. ಅಬ್ದುಲ್ ಮಾಸ್ತರರು ಇಂಥವರ ಮಗನೆಂಬುದಕ್ಕಾಗಿ ಅವರ ಒಡನಾಟಕ್ಕೆ ಮುನ್ನವೇ ನಮ್ಮೆಲ್ಲರ ಪ್ರೀತಿಗೆ ಪಾತ್ರರಾದುದು ಸಹಜವೇ ಆಗಿತ್ತು.             ಅಬ್ದುಲ್ ಮಾಸ್ತರರು ನಮ್ಮ ವರ್ಗಶಿಕ್ಷಕರಾಗಿ ದೊರೆತಮೇಲೆ ಅವರ ಪಾಠದ ಶಿಸ್ತು, ಆಟದ ಅಕ್ಕರೆ ಇತ್ಯಾದಿಗಳು ಪರಿಚಯವಾಗುತ್ತ ಅವರ ವ್ಯಕ್ತಿತ್ವವು ಅಸಾಧಾರಣವೆಂಬುದು ನಮ್ಮ ಅರಿವಿಗೆ ಬರುತ್ತ ಬಹುಶಃ ನಮ್ಮೆಲ್ಲರ ಬದುಕಿನಲ್ಲಿ ಮರೆಯಲಾಗದ ಅವಿಸ್ಮರಣೀಯ ವ್ಯಕ್ತಿಯಾಗಿಯೇ ಸೃತಿಪಟಲದಲ್ಲಿ ನೆಲೆಗೊಂಡಿದ್ದಾರೆ.             ಹಗಲಿನ ತರಗತಿಯ ಪಾಠವಲ್ಲದೆ “ರಾತ್ರಿ ಶಾಲೆ”ಯ ಪದ್ಧತಿಯನ್ನು ಅವರು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ಶಾಲೆಯ ಬಹುತೇಕ ಮಕ್ಕಳು ತೀರ ಬಡ ಕುಟುಂಬದಿಂದ ಬರುತ್ತಿದ್ದರು. ಯಾರ ಮನೆಯಲ್ಲೂ ವಿದ್ಯುತ್ ಸಂಪರ್ಕವಾಗಲೀ ರಾತ್ರಿ ಓದಿಗೆ ಸಮರ್ಪಕ ಬೆಳಕಿನ ವ್ಯವಸ್ಥೆಯಾಗಲೀ ಇರಲಿಲ್ಲ. ಇದನ್ನು ಗೃಹಿಸಿದ ಅಬ್ದುಲ್ ಮಾಸ್ತರರು ಮೂಲ್ಕಿ ಪರೀಕ್ಷೆಗೆ ಕೂಡ್ರುವ ಎಲ್ಲ ಮಕ್ಕಳಿಗಾಗಿ ಶಾಲೆಯಲ್ಲಿಯೇ ಸಾಮೂಹಿಕ ಓದಿನ ಅನುಕೂಲ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದರು. ಸರಿರಾತ್ರಿಯ ಹೊತ್ತಿಗೆ ನಮ್ಮ ನಮ್ಮ ಪಾಲಕರು ಬಂದು ನಮ್ಮನ್ನು ಮನೆಗೆ ಕರೆದೊಯ್ದು ಸಹಕಾರ ನೀಡುತ್ತಿದ್ದರು.                     ಮೂಲ್ಕಿ ಪರೀಕ್ಷೆ ನಡೆಯುವ ಗೋಕರ್ಣಕಡೆಯ ಪರೀಕ್ಷೆ ಕೇಂದ್ರಕ್ಕೆ ನಮ್ಮನ್ನು ಕರೆದೊಯ್ಯುವವರೆಗಿನ ಕಾಳಜಿಯನ್ನು ತೋರಿದ ಅಬ್ದುಲ್ ಮಾಸ್ತರರ ಕರ್ತವ್ಯ ದಕ್ಷತೆ ಎಲ್ಲ ಮಕ್ಕಳ ಮನಸ್ಸನ್ನು ಗೆದ್ದುಕೊಂಡಿತ್ತು. ನಮ್ಮ ಪರೀಕ್ಷೆಯ ಸಮಯದಲ್ಲಿಯೇ ನಡೆಯಬೇಕಿದ್ದ ತಮ್ಮ ವಿವಾಹ ಸಮಾರಂಭವನ್ನೇ ಮುಂದೆ ಹಾಕಿದ ಮಾಸ್ತರರು ನಮ್ಮ ಪರೀಕ್ಷೆಗಳು ಮುಗಿದ ಮರುದಿನ ಎಲ್ಲ ವಿದ್ಯಾರ್ಥಿಗಳನ್ನು ಮದುವೆಗೆ ಆಮಂತ್ರಿಸಿ ಮದುವೆ ಮಾಡಿಕೊಂಡದ್ದು ಇನ್ನೊಂದು ವಿಶೇಷವೇ ಆಗಿದೆ!             ಗಂಗಾವಳಿ ಶಾಲೆಯ ಅಂದಿನ ದಿನಗಳು ನಮಗೆ ಅತ್ಯಂತ ಪ್ರೀತಿಯ ದಿನಗಳಾಗಿದುದ್ದಕ್ಕೆ ಮತ್ತೊಂದು ಪ್ರಬಲ ಕಾರಣವಿದೆ. ಅದು ಶಾಲೆಯಲ್ಲಿ ದೊರೆಯುವ ಉಪ್ಪಿಟ್ಟು-ಹಾಲು!             ಭಾರತದ ಬಡತನವನ್ನು ಗೃಹಿಸಿದ ಅಮೇರಿಕೆಯ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ಗೋವಿನ ಜೋಳದ ರವೆ ಮತ್ತು ಹಾಲಿನ ಪೌಡರ್ ಪಾಕೇಟ್‌ಗಳನ್ನು ಉಚಿತವಾಗಿ ಪೂರೈಸಿ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಉಪ್ಪಿಟ್ಟು-ಹಾಲು ಸೇವಿಸುವ ಅವಕಾಶ ಕಲ್ಪಿಸಿತ್ತು. ಈ ಸೌಲಭ್ಯವು ನಮ್ಮ ಗಂಗಾವಳಿಯ ಶಾಲೆಗೂ ದೊರೆತಿತ್ತು. ಅಂದು ಅಲ್ಲಿ ಓದುವ ಬಹುತೇಕ ಮಕ್ಕಳು ಬಡ ರೈತರ, ಕೂಲಿ ಕಾರ್ಮಿಕರ ಕುಟುಂಬದಿಂದಲೇ ಬಂದವರಾದುದರಿಂದ ಎಲ್ಲರಿಗೂ ಇದು ಅರ್ಧ ಹಸಿವು ಹಿಂಗಿಸಿಕೊಳ್ಳುವ ಸದವಕಾಶವೇ ಎನಿಸಿತ್ತು.!             ಉಪ್ಪಿಟ್ಟು – ಹಾಲು ಸಿದ್ಧ ಪಡಿಸುವುದಕ್ಕಾಗಿ ಪ್ರತಿದಿನವೂ ಮೈದಿನ್ ಸಾಬ್ ಎಂಬ ಮುಸ್ಲಿಂ ಗ್ರಹಸ್ಥರೊಬ್ಬರು ಬರುತ್ತಿದ್ದರು. ಶಿಕ್ಷಕರ ಅನುಮತಿಯಿಂದಲೇ ನಾಲ್ಕು ಜನ ವಿದ್ಯಾರ್ಥಿಗಳು ಪಾಳಿಯ ಪ್ರಕಾರ ಮೈದಿನ್ ಸಾಬರಿಗೆ ನೆರವಿಗೆ ನಿಲ್ಲುತ್ತಿದ್ದರು. ಹೀಗೆ ಸಹಕರಿಸುವ ನಾಲ್ವರಿಗೆ ಉಪ್ಪಿಟ್ಟಿನ ಒಂದು ವಿಶೇಷ ಹೆಚ್ಚುವರಿ ಪಾಲು ಲಭಿಸುತ್ತಿತ್ತು. ಆದರೆ ಈ ಹೆಚ್ಚುವರಿ ಪಾಲಿನ ಆಸೆಯಿಂದ ಈ ಕೆಲಸಕ್ಕೆ ತಾ ಮುಂದೆ ನಾ ಮುಂದೆ ಎಂದು ಪೈಪೋಟಿ ನಡೆಸುವ ನಮ್ಮ ಸ್ನೇಹಿತರು ಹೇಗೆ ಮೇಲಾಟ ನಡೆಸುತ್ತಿದ್ದರು ಎಂಬುದನ್ನು ಇಂದು ನೆನೆಯುವಾಗ ನಗುವೇ ಬರುತ್ತದೆ. ಆದರೆ ಅಂದಿನ ಆ ದಿನಗಳ ಹಸಿವಿನ ತೀವೃತೆಯ ಕುರಿತು ವಿಷಾದವೂ ಎನಿಸುತ್ತದೆ.             ಗಂಗಾವಳಿ ಶಾಲೆಯ ಓದಿನ ದಿನಗಳು ನಮ್ಮೆಲ್ಲರ ಮನಸ್ಸಿನ ಪುಟಗಳಲ್ಲಿ ಅವಿಸ್ಮರಣೀಯವಾಗಿರುವುದಕ್ಕೆ ಅಲ್ಲಿನ ಶಿಕ್ಷಕರು, ಸಹಪಾಠಿಗಳು, ಕಾರಣರಾಗಿದ್ದಾರೆ. ಅಂದು ಪರೀಕ್ಷೆ ಮುಗಿಸಿ ಶಾಲೆಯಿಂದ ನಿರ್ಗಮಿಸುವ ದಿನ ಅಪಾರವಾದ ನೋವು ನಮ್ಮೆಲ್ಲರ ಎದೆ ತುಂಬಿತ್ತು. ಇದಕ್ಕಿಂತ ಮುನ್ನ ಮತ್ತು ನಂತರವೂ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮತ್ತು ಓದು ಮುಗಿಸಿ ನಿರ್ಗಮಿಸುವ ಸನ್ನಿವೇಶಗಳು ಎದುರಾಗಿವೆ. ಆದರೆ ಗಂಗಾವಳಿಯ ಹಿರಿಯ ಪ್ರಾಥಮಿಕ ಶಾಲೆಯ ಅಗಲುವಿಕೆಯಲ್ಲಿ ಉಂಟಾದ ನೋವಿನ ಅನುಭವ ಮತ್ತೆಂದೂ ನಮ್ಮನ್ನು ಬಾಧಿಸಲಿಲ್ಲ ****************************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಇನ್ನೊಂದು ‘ಹಕ್ಕಿ-ಕಂಬಳ’. ನಮ್ಮೂರಿನ ಗದ್ದೆ ಬಯಲಿನಲ್ಲಿರುವ ಕೆರೆದಂಡೆ, ಹಳ್ಳದ ದಂಡೆಗಳ ಮೇಲೆ ಬೆಳೆದು ನಿಂತ ಮುಳ್ಳು ಪೊದೆಗಳಲ್ಲಿ, ಕೇದಗೆ ಹಿಂಡುಗಳಲ್ಲಿ ‘ಹುಂಡು ಕೋಳಿ’ ಎಂಬ ಹಕ್ಕಿಗಳ ಗುಂಪು ಸದಾ ನೆಲೆಸಿರುತ್ತಿದ್ದವು.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಡಾ.ರಾಮಕೃಷ್ಣ ಗುಂದಿಯವರ ಆತ್ಮಕಥೆ

ನಮ್ಮ ಗೆಳೆಯರ ಗುಂಪು ಈ ಚಹಾ ಅವಲಕ್ಕಿಯ ಭಾಗ್ಯಕ್ಕಾಗಿ ಪರಸಂಗದುದ್ದಕ್ಕೂ ಎಚ್ಚರಿದ್ದು ಅನಿವಾರ್ಯವಾಗಿ ಕಥಾನಕವನ್ನು ಆಲಿಸುತ್ತ ನಮಗೆ ಅರಿವಿಲ್ಲದಂತೆ ಈ ಕಲೆಯ ಕುರಿತು ಆಸಕ್ತಿ ಅನುಭವ ಗಳಿಸಿಕೊಂಡದ್ದು ಮಾತ್ರ ತುಂಬ ವಿಚಿತ್ರವೇ ಅನ್ನಿಸುತ್ತದೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆರ್.ದಿಲೀಪ್ ಕುಮಾರ್
ಈ ಸತ್ತಿಗೆ ಕಾಯಕದ ಮಾರಿತಂದೆಯ ಒಟ್ಟೂ ೧೦ ವಚನಗಳು ಇದುವರೆವಿಗೂ ದೊರೆತಿವೆ. ಐಘಂಟೇಶ್ವರಲಿಂಗ ಎಂಬ ಅಂಕಿತನಾಮವನ್ನು ಇವು ಹೊಂದಿವೆ. ಅವನ ಒಂದು ಅತ್ಯದ್ಭುತ ವಚನವು ಹೀಗಿದೆ. ಇದೇ ವಚನವನ್ನು ಬಳಸಿ ಅವನ ಕಾಯಕವೆಂದು ಮಹಾಸಂಪುಟ ಸಂಪಾದಕರು ವ್ಯಾಖ್ಯಾನವನ್ನು ಮಾಡಿರುವುದು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಪೂರ್ಣಿಮಾ ಸುರೇಶ್
ಈಗ ಅನಿಸುತ್ತದೆ. ನವರಸಗಳನ್ನು ರಂಗದಲ್ಲಿ ಅನುಭವಿಸಿ ಎದುರಿನಲ್ಲಿ ಕೂತು ನೋಡುವ ಮನಸ್ಸುಗಳಿಗೆ ವರ್ಗಾಯಿಸಬೇಕಾದರೆ, ಮೊದಲು ಅದಕ್ಕಿಂತ ಹಿರಿದಾದ ರಂದಲ್ಲಿ ನಾವೂ ಪಾತ್ರವಾಗುವ ಅದ್ಬುತಕ್ಕೆ ತೆರೆದುಕೊಳ್ಳುತ್ತ, ಭಾವಗಳನ್ನು ಆರ್ತಿಯಿಂದ ಹೃದಯದೊಳಗೆ ಭರಿಸಬೇಕು. ಆಗ ರಂಗಭೂಮಿಯಲ್ಲಿ ಭಾವನೆಗಳ ಜೊತೆಗಿನ ಆಟ ಸುಲಲಿತವಾದೀತು.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಈ ಮೇಲಿನ ವಚನಗಳನ್ನು ಇಟ್ಟಿರುವ ಕ್ರಮದಿಂದ ಇಬ್ಬರು ವ್ಯಕ್ತಿಗಳ ನಡುವಿನ ಸಂವಾದದೋಪಾದಿಯಲ್ಲಿ ಕಾಣುತ್ತಿದೆ. ಇದೊಂದು ಕಾಲ್ಪನಿಕ‌ ಗ್ರಹಿಕೆಯಷ್ಟೇ. ಹೀಗೆ ನಡೆದಿರಬಹುದು ಎಂಬುದು ನನ್ನ ಗ್ರಹಿಕೆಯಷ್ಟೇ. ನಾನು ಗಮನಿಸಿರುವ ಹಾಗೆ ಈ ಸಂವಾದ ಕ್ರಮವೆಂಬುದನ್ನು ಹಲಗೆಯಾರ್ಯನ ಶೂನ್ಯಸಂಪಾದನೆ ಈ ಎರಡು ವಚನಗಳಿಗೆ ಅನುಸರಿಸಿಲ್ಲ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಹೀಗೆ ಗೇರು ಹಕ್ಕಲಿನಲ್ಲಿ ಹಾಕಿದ ಹೆಜ್ಜೆಗಳು ಮೆಲ್ಲಮೆಲ್ಲನೆ ತಾಳ ಗತಿಯ ಲಯಕ್ಕೆ ಹೊಂದಿಕೆಯಾಗುತ್ತಿದ್ದಂತೆಯೇ ಯಕ್ಷರಂಗದ ಆಸಕ್ತಿ ಹೆಚ್ಚುತ್ತ ಹೋಯಿತು. ಅದೇ ಸಮಯದಲ್ಲಿ ನಮ್ಮ ತಂದೆಯವರು ಸುತ್ತಲಿನ ಹಳ್ಳಿಯ ಹವ್ಯಾಸಿ ತಂಡಗಳಿಗೆ ಯಕ್ಷಗಾನ ಕಲಿಸಲು ಹೋಗುತ್ತಿದ್ದರು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ವಿಕ್ರಮಶಿಲಾ” ಮೂರು ಮಹಡಿಯ ಕಟ್ಟಡದ ಮೆಟ್ಟಲುಗಳನ್ನು ಏರುತ್ತಿದ್ದೆ‌. ಹಂಚಿನ ಮಾಡಿನ ಶಾಲೆಯ ಆಂಗಳದಿಂದ ಮಂಗಳನ ನೆಲದತ್ತ ಹಾರಿ ಹೊರಟ ಉಪಗ್ರಹದ ಏಕಾಂಗೀ ಹೆಜ್ಜೆಗಳವು.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಊರೊಳಗೆ ಪಂಥ ರಣದೊಳಗೆ ಓಟವೆ ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ ಈತನ ವಚನಗಳು ಆಗಿಹೋದ ಪುರಾತನ ಕಾಲದ ಮಹತ್ವದ ವಚನಕಾರರಲ್ಲಿ ಗಣಿಸಲು ಏನೂ ಅಡ್ಡಿಯಿಲ್ಲ.‌ ಪುರಾತನರ ವಚನಗಳಲ್ಲಿ ಈತನವೂ ಸೇರಿರುವುದರಿಂದ ಈತನ ಕಾಲವನ್ನು ಸು ೧೧೬೦ ಎಂದೇ ಹೇಳಬಹುದಾಗಿದೆ” ಎಂದಿದ್ದಾರೆ.೧ ಹನ್ನೊಂದು ಜನರ ಚರಿತ್ರೆಯ ವಿವರಗಳು ತಿಳಿದು ಬರುವುದಿಲ್ಲ, ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ.೨  ಎಂದು ಒಂದು ಕಡೆ ಹೇಳಿದರೆ. ಮತ್ತೊಂದು ಕಡೆ ‘ವಿರೂಪಾಕ್ಷ ಪಂಡಿತನು (೧೫೮೫) ಚೆನ್ನಬಸವ ಪುರಾಣದಲ್ಲಿ ಈತನೇ ‘ಮಾದರ ಕೇತಯ್ಯ ….. ‘ ಎಂಬ ಪದ್ಯದಲ್ಲಿ ಅರಿವಿನ ಮಾರಿತಂದೆಯ ಹೆಸರನ್ನು ಹೇಳಿದ್ದಾನೆ.೩ ಎಂದು ಸಾಹಿತ್ಯ ಚರಿತ್ರಾಕಾರರು ಹೇಳಿದ್ದಾರೆ. ಜ್ಞಾನ, ತಿಳುವಳಿಕೆ, ಅನುಭವಗಳ ಸಮಪ್ರಮಾಣದ ಮಿಶ್ರಣವಾದ ಅರಿವಿಗೆ ಬಹುದೊಡ್ಡ ಪ್ರಾಶಸ್ಯ್ಯವನ್ನು ಮಾರಿತಂದೆಯು ತನ್ನ ವಚನಗಳಲ್ಲಿ ಕೊಟ್ಟಿರುವುದರಿಂದ ಈತನನ್ನ “ಅರಿವಿನ ಮಾರಿತಂದೆ” ಎಂದು ಕರೆಯಲಾಗಿದೆ.೪  ಬಸವಣ್ಣನವರು ತಮ್ಮ ವಚನಗಳಲ್ಲಿ ಹೆಸರಿಸಿರುವ ಮಾರಿತಂದೆ ಈತನಲ್ಲ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.೫  ಸದಾಶಿವಮೂರ್ತಿ, ಸದಾಶಿವಮೂರ್ತಿಲಿಂಗ,  ಸದಾಶಿವಲಿಂಗಮೂರ್ತಿ, ಸದಾಶಿವಲಿಂಗ ಎಂದು ಈತನ ವಚನಗಳ ಅಂಕಿತಗಳು ಇವೆ. ಅರಿವಿನ ಮಾರಿತಂದೆಯ‌ ಒಟ್ಟೂ ವಚನಗಳ ಸಂಖ್ಯೆ ೩೦೨, ಅದರಲ್ಲಿ ೨೫೧ ಸಾಮಾನ್ಯ ವಚನಗಳಾಗಿದ್ದು, ಉಳಿದವು ಬೆಡಗಿನ ವಚನಗಳಾಗಿವೆ. ಅರಿವಿನ ಮಾರಿತಂದೆಯ ವಚನವೊಂದು ಹೀಗಿದೆ ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು ಊರೊಳಗೆ ಪಂಥ ರಣದೊಳಗೆ ಓಟವೆ ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೇ ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವವನ ಭಕ್ತಿ ಅಲಗಿನ ಘೃತವ ಶ್ವಾನ ನೆಕ್ಕಿ ನಾಲಿಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳ ಅರಿತು ನಿರತನಾಗಿರಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.೬ ಈ ವಚನವು ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣುತ್ತಿದೆಯಾದರೂ ತನ್ನ ಆಂತರ್ಯದಲ್ಲಿ ವೀರಭಾವವೊಂದರ‌ ಸಮರ ಪ್ರಜ್ಞೆ ನಿರಂತರವಾದ ಹರಿವನ್ನು ಹೊಂದಿದೆ. ಅಪಾಯಕಾರಿಗಳ ಲಕ್ಷಣ ಮತ್ತು ಅವರು ಆ ಮನಸ್ಥಿತಿಯಿಂದ ಹೊರಬರುವ ಮಾರ್ಗವನ್ನು ಈ ವಚನವು ತಿಳಿಸುತ್ತಿದೆ. ಎಲ್ಲ ಕಾಲದಲ್ಲಿಯೂ ಮಾತಿನ ಮಲ್ಲರ ಬಹುದೊಡ್ಡ ಗುಂಪೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆ ಮಾತಿನ ಮಲ್ಲರ ಗುಂಪು ಕೆಲವೊಮ್ಮೆ ತಮ್ಮೊಡನೆ ಸಂಪರ್ಕಕ್ಕೆ ಬರುವವರಿಗೆ ಹಾದಿಯ ನಿರ್ದೇಶವನವನ್ನೂ ಯಾವುದೇ ಭಿಡೆ ಇಲ್ಲದೆ ಮಾಡಲು ಶುರು ಮಾಡಿಬಿಡುತ್ತದೆ. ಕ್ರಿಯೆಯಲ್ಲಿ ನಿರತಕಾರವರಿಗೆ ಅದರ ಅಗತ್ಯವೇ ಇರುವುದಿಲ್ಲ. ಅಥವಾ ಮಾತಿನ ಮಲ್ಲರು ಕ್ರಿಯೆಯಲ್ಲಿ ತೊಡಗಿದರೆ ಮಾತು ತನ್ನಿಂದ ತಾನೇ ನಿಂತುಬಿಡುತ್ತದೆ. ಮಾತಿನಲ್ಲಿ ಎಲ್ಲರೂ, ಎಲ್ಲವೂ ಒಂದೇ ಎನ್ನುವ (ವಾಕ್+ಅದ್ವೈತ), ಆದರೆ ಅನುಭವಜನ್ಯ ಅರಿವಿನಿಂದ ಒಂದೇ ಎಂಬುದನ್ನು ಅರಿತು, ನಡೆದು ತೋರದಂತಹವರ (ಸ್ವಯ+ಅದ್ವೈತ) ಸ್ಥಿತಿಯನ್ನು ಹೇಳಲು ಅರಿವಿನ ಮಾರಿತಂದೆ ಎರಡು ಸಾದೃಶ್ಯಗಳನ್ನು ಬಳಸಿದ್ದಾನೆ. ಒಂದು, ಊರೊಳಗೆ ತಾನು ಕಟ್ಟಿಕೊಂಡ ಗುಂಪಿನೊಳಗೆ ವೀರಾಧಿವೀರ, ಆದರೆ ನಿಜವಾದ ರಣರಂಗದಲ್ಲಿ ಬೆನ್ನು ತಿರುಗಿಸಿ ಓಡಿ ಹೋಗುವ ರಣಹೇಡಿಯ ಚಿತ್ರವನ್ನು ಮತ್ತು ಖಡ್ಗದ ತುದಿಗೆ ಸವರಿದ ಘೃತ (ತುಪ್ಪ) ವನ್ನು ನೆಕ್ಕಿ ನಾಲಿಗೆ ಸೀಳಿದ ನಾಯಿಯು ಮತ್ತೆ ಖಡ್ಗವನ್ನು ಕಂಡು ಓಡುವ ಚಿತ್ರ. ಈ ಎರಡರ ಮೂಲಕ ಮಾತಿನ ಮಲ್ಲರು ಮತ್ತವರು ರಣಹೇಡಿಗಳು. ಬದುಕಿನಲ್ಲಿ ಏಕತ್ವವನ್ನು ಸಾಧಿಸಿ ತೋರಿಸಲಾರದ ಹೇಡಿಗಳು ಎಂದೂ, ನಾಲಿಗೆ ಸಿಳಿದ ನಾಯಿಯ ಸ್ಥಿತಿಯು ಅವರು ಸ್ವಯಾದ್ವೈತವನ್ನು ಸಾಧಿಸಲಾರದ, ಆಚರಿಸಲಾರದವರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಏಕಭಾವವೆನ್ನುವುದು ಘೃತದ ಹಾಗೆ. ಅದನ್ನು ಸಾಧಿಸಿದವರು ಹೆದರಿ ಓಡಬೇಕಿಲ್ಲ ಎಂಬ ದನಿಯೂ ಇದರಲ್ಲಿ ಅಡಗಿದೆ. ಮಾತಿನಲ್ಲಿ ಮಾತ್ರ ವಚನ ರಚನೆಗಳನ್ನು ಮಾಡುತ್ತಾ, ಬದುಕಿನಲ್ಲಿ ಅದರ ತತ್ವಗಳನ್ನು ಆಚರಿಸದವರೆಲ್ಲರೂ, ಸ್ವಾನುಭವದಿಂದ ನುಡಿದಂತೆ ನಡೆಯದವರು ಹೇಡಿಗಳು, ನಾಲಿಗೆ ಹರಿದ ನಾಯಿಗಳು ಎಂದು ಹೇಳುತ್ತಿದ್ದಾನೆ. ವಚನದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. “ಅರಿತು ನಿರತ” ಎಂಬ ಪದಗಳು ಒಂದಕ್ಕೊಂದು ಸಾಧಿಸುವ ಸಂಬಂಧ ವ್ಯಕ್ತಿ ಮತ್ತು ಸಮಾಜಕ್ಕೆ ಮಹತ್ವವಾದದ್ದು ಎನ್ನುತ್ತಿದ್ದಾನೆ. ಅರಿತು ಸಾಧಿಸಲಾರದ ಅಥವಾ ಅರಿಯದೆ ಮಾತನಾಡುವ ಎಲ್ಲರೂ ರಣಹೇಡಿ, ನಾಲಿಗೆ ಸೀಳಿದ ನಾಯಿಗಳೆನ್ನುವ ಭಾವ ವಚನದಲ್ಲಿದೆ. ಇದೊಂದು ರೀತಿಯಲ್ಲಿ ನುಡಿದು ಸೂತಕಿಗಳಾಗುವ ಸ್ಥಿತಿ. ಅರಿವಿನ ಮಾರಿತಂದೆಯು ಮಾತು ಮತ್ತು ಕ್ರಿಯೆಗಳು ಒಂದಿಲ್ಲದ ರಣಹೇಡಿಗಳಿಗೆ ವಚನದ ಮೊದಲ ಸಾಲಿನಲ್ಲಿಯೇ ಪಂಥಾಹ್ವಾನವನ್ನು ಕೊಡುತ್ತಾನೆ ಮತ್ತದು ಎದುರಿನವರ ನಡೆ ನುಡಿಯನ್ನು ನಿರ್ದೇಶನ ಮಾಡುವ ಸಮರ ಪ್ರಜ್ಞೆಯ ರೀತಿಯಲ್ಲಿ ಬಂದಿದೆ. ಇದು ವೀರನ ಲಕ್ಷಣ. ತಾನು ಅನುಸರಿಸಿಲ್ಲದೆ, ಅನುಭವಕ್ಕೆ ಅರಿವಿಗೆ ಬಾರದ, ಕೇವಲ ಮಾತಿಗಾಗಿ “ಸಮಯವನ್ನು ನೋಯಿಸಿ” ಎದುರಿನವರಿಗೆ ಮಾಡಲು ಆಡಲು ಹೇಳುವ ಜಾಯಮಾನದವರಲ್ಲ ವಚನಕಾರರು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವೀರರಸವನ್ನು ಕುರಿತು ವಿವೇಚನೆ ಮಾಡುವಾಗ ದಾನವೀರ, ಧರ್ಮವೀರ, ದಯಾವೀರ ಎಂದು ಮೂರು ಭಾಗಗಳಲ್ಲಿ ಈ ವೀರರಸವು ಕಾವ್ಯಗಳಲ್ಲಿ ಹರಿದು ಬಂದಿದೆ ಎಂದು ಮೀಮಾಂಸಕರು ಹೇಳಿದ್ದಾರೆ. ಅರಿವಿನ ಮಾರಿತಂದೆಯ ಒಳಗೆ ಧರ್ಮವೀರದ ನದಿಯೊಂದು ನಿರಂತರವಾಗಿ ಹರಿಯುತ್ತಿರುವ ಸ್ಥಿತಿಯಲ್ಲಿ ನಿಂತಿದ್ದಾನೆ. ನಡೆ ನುಡಿಗಳು ಒಂದಾದ ಏಕತ್ರ ಸ್ಥಿತಿಯದು. ವ್ಯೋಮಮೂರ್ತಿ, ತಲೆವೆಳಗಾದ ಸ್ವಯಜ್ಞಾನಿಯಾದ ಅಲ್ಲಮನೂ “ನುಡಿದು ಸೂತಕಿ” ಗಳಾಗದಿರಲೆಂಬ ಕಾರಣದಿಂದಲೇ ಕೊಟ್ಟ ಎಚ್ಚರಿಕೆ೭  ಬಸವಣ್ಣನವರು “ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಗಮದೇವನೆಂತೊಲಿವನಯ್ಯಾ”೮  ಎಂದು ಹೇಳುವ ಮಾತುಗಳೂ ಇದೇ ಎಚ್ಚರಿಕೆಯಲ್ಲಿ ಬಂದಿದೆ. ಪ್ರತೀ ಕ್ಷಣವೂ ಬದುಕನ್ನು ಅರಿತು ನಿರತನಾಗಿ ನಡೆವ ಕ್ರಮವನ್ನು ವಚನಕಾರರು ತಿಳಿಸುತ್ತಲೇ ಇಂದಿಗೂ ಜೀವಂತರಾಗಿದ್ದಾರೆ ಅಡಿಟಿಪ್ಪಣಿಗಳು ೧. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ (೧೯೭೭) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ (೨೦೧೬) ೩. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ ೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ ೫. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್. ಡಿ. ವಿ. ಕೆ ಮೂರ್ತಿ. ಮೈಸೂರು ಪು ೪೫೬ ಮತ್ತು ೪೫೭ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೬, ಪು ೧೦೦೩ ೭. ಮಾತೆಂಬುದು ಜ್ಯೋತಿರ್ಲಿಂಗ !      ಸ್ವರವೆಂಬುದು ಪರತತ್ವ !      ತಾಳೋಷ್ಠ ಸಂಪುಟವೆಂಬುದೇ ನಾದಬಿಂದಕಳಾತೀತ !      ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳೆ ಅಲ್ಲಮನ ವಚನ ಚಂದ್ರಿಕೆ. ಡಾ. ಎಲ್. ಬಸವರಾಜು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ. ಸಂ. ೯೫೧. ಪು ೨೧೪ (೨೦೧೪) ೮. ನುಡಿದರೆ ಮುತ್ತಿನ ಹಾರದಂತಿರಬೇಕು      ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು      ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು      ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು      ನುಡಿಯೊಳಗಾಗಿ ನಡೆಯದಿದ್ದಡೆ      ಕೂಡಲಸಂಗಮದೇವನೆಂತೊಲಿವನಯ್ಯಾ ? ( ಟಿಪ್ಪಣಿ : ವಚನದಲ್ಲಿ ಮಾತು ಹೇಗಿರಬೇಕೆಂಬುದಕ್ಕೆ ಮೂರು ಉಪಮೆಗಳನ್ನು ಕೊಡುತ್ತಾರೆ. ಹಾರ, ದೀಪ್ತಿಗಳು ಸರಿ. ಆದರೆ “ಸಲಾಕೆ” ಯ ಮೊನಚು, ಅದರ ಕಾರ್ಯ ಸ್ಪಷ್ಟವಾಗಿ ಅರ್ಥವಾಗಿದ್ದವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಮಾತೆಂಬುದು ಸಲಾಖೆಯಂತೆ ಮೊನಚು ಹೌದು,‌ ರಕ್ಷಣೆಗೂ ಹೌದು ಎಂಬುದನ್ನು ಮರೆಯುವ ಹಾಗಿಲ್ಲ. ) ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೮೦೨. ಪು ೬೭೨ **************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಗೇರು ಹಕ್ಕಲಿನಲ್ಲಿ ಅನುಭಾವ ಗೋಷ್ಠಿಗಳು (೧) ನಮ್ಮ ಕೇರಿಗೆ ಹೊಂದಿಕೊಂಡಂತೆ  ಪೇರುಮನೆ ನಾರಾಯಣ ನಾಯಕ ಎಂಬುವವರ ಒಂದು ವಿಶಾಲವಾದ ಗೇರು ಹಕ್ಕಲ’ವಿತ್ತು. ಅದನ್ನು ನಮ್ಮ ಜಾತಿಯವನೇ ಆದ ಗಣಪತಿ ಎಂಬುವನು ನೋಡಿಕೊಳ್ಳುತ್ತಿದ್ದ. ಗಣಪತಿ, ನಾರಾಯಣ ನಾಯಕರ ಮನೆಯ ಜೀತದ ಆಳು. ತನ್ನ ಹೆಂಡತಿ ಸಾವಿತ್ರಿಯೊಡನೆ ಒಡೆಯರ ಮನೆಯ ಕಸ ಮುಸುರೆ, ದನದ ಕೊಟ್ಟಿಗೆಯ ಕೆಲಸ ಮುಗಿದ ಬಳಿಕ ಅವನು ಗದ್ದೆ ಕೆಲಸದ ಮೇಲ್ವಿಚಾರಣೆ ಇತ್ಯಾದಿ ನೋಡಿಕೊಂಡು ಇರುತ್ತಿದ್ದ ಸರಿ ಸುಮಾರು ಎಪ್ರಿಲ್ ಮೇ ತಿಂಗಳು ಗೇರು ಬೀಜಗಳಾಗುವ ಹೊತ್ತಿಗೆ ಗೇರು ಬೀಜಗಳನ್ನು ಕೊಯ್ದು ದಾಸ್ತಾನು ಮಾಡಿ ಒಡೆಯನ ಮನೆಗೆ ಮುಟ್ಟಿಸುವುದು ಅವನ ಜವಾಬ್ದಾರಿಯಾಗಿತ್ತು. ಗೇರು ಬೀಜಗಳಿಗೆ ಅಷ್ಟೊಂದು ಬೆಲೆಯಿಲ್ಲದ ಕಾಲದಲ್ಲಿ ನಾಯಕರು ಗೇರು ಬೆಳೆಯ ಆದಾಯದ ಕುರಿತು ಅಷ್ಟೇನೂ ಕಾಳಜಿ ಪೂರ್ವಕ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ನಮ್ಮ ಗೆಳೆಯರ ಗುಂಪಿಗೆ ನಾಯಕರ ಗೇರು ಹಕ್ಕಲವೆಂಬುದು ಅತ್ಯಂತ ಪ್ರೀತಿಯ ಆಡುಂಬೊಲವಾಗಿತ್ತು. ಮೇವಿನ ತಾಣವೆನಿಸಿತ್ತು. ನಮ್ಮ ಅನುಭವ ಅನುಭಾವಗಳ ವಿಕಾಸ ಕೇಂದ್ರವಾಗಿತ್ತು.             ನಮ್ಮ ಕೇರಿಯಲ್ಲಿ ಆಗ ಹೆಚ್ಚೂ ಕಡಿಮೆ ಸಮಾನ ವಯಸ್ಕ ಗೆಳೆಯರೆಂದರೆ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಕೃಷ್ಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ನಾನು ಮತ್ತು ನನ್ನ ತಮ್ಮ ನಾಗೇಶ. ಈ ಸಪ್ತ ಪುಂಡರ ದಂಡು ರಜೆಯ ದಿನಗಳಲ್ಲಿ ಮನೆಯಿಂದ ಹೊರಬಿದ್ದರೆಂದರೆ ಗೇರುಹಕ್ಕಲಿನಲ್ಲೇ ಇರುತ್ತಾರೆ ಎಂದು ಹಿರಿಯರೆಲ್ಲಾ ಅಂದಾಜು ಮಾಡಿಕೊಳ್ಳುತ್ತಿದ್ದರು. ಹಾಗೆಂದು ಅದರ ಆಚೆಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿರಲಿಲ್ಲವೆಂದು ಅರ್ಥವಲ್ಲ. ಆದರೆ ಬೇರೆ ಯಾವ ಕಾರ್ಯಕ್ರಮ ಹಾಕಿಕೊಳ್ಳುವುದಕ್ಕೂ ಯೋಜನೆಗಳು ಸಿದ್ಧವಾಗುವುದು ಗೇರುಹಕ್ಕಲಿನಲ್ಲಿಯೇ. ಹಿತ್ತಲ ಮಧ್ಯದ ಹತ್ತಿಪ್ಪತ್ತು ವರ್ಷ ಹಳೆಯದಾದ ದೊಡ್ಡ ಗೇರುಮರವೊಂದು ನಮ್ಮ ಎಲ್ಲಾ ಚಟುವಟಿಕೆಗಳಿಗೆ ಹೊಂದಿಕೆಯಾಗುತ್ತ ತನ್ನ ಆಕ್ರತಿಯನ್ನು ಬದಲಿಸಿಕೊಳ್ಳುತ್ತಿತ್ತು. ಮರದ ವಿಶಾಲ ರೆಂಬೆಗಳಲ್ಲಿ ಮರಕೋತಿ ಆಟ’ ಆಡುವುದಕ್ಕೂ, ಯಕ್ಷಗಾನ ಬಯಲಾಟ’ ಕುಣಿಯುವುದಕ್ಕೂ, ಆಗಾಗ ನಡೆಯುವ ಮೇಜವಾನಿಗಳಿಗೂ ಈ ಮರದ ನೆರಳು ಆಶ್ರಯ ತಾಣವಾಗಿತ್ತು.             ಗೇರುಹಕ್ಕಲಿನಲ್ಲಿ ನಾವು ಕುಣಿಯುತ್ತಿದ್ದ ಯಕ್ಷಗಾನ ಬಯಲಾಟಗಳ ಕುರಿತು ನಾನು ಮುಂದೆ ಪ್ರಸ್ತಾಪಿಸಲಿರುವೆ. ಮೇಲೆ ಹೇಳಿದ ಮೇಜವಾನಿ’ ಎಂಬುದರ ಕುರಿತು ಒಂದಿಷ್ಟು ವಿವರಗಳನ್ನು ನೀಡಬೇಕು.             ಗೇರು ಹಕ್ಕಲಿನ ಒಡೆಯ ನಾರಾಯಣ ನಾಯಕರು ಮತ್ತು ಕಾವಲುಗಾರ ಗಣಪತಿಮಾವ’ನ ಕಣ್ಣು ತಪ್ಪಿಸಿ ನಾವು ಹಕ್ಕಲಿನಲ್ಲಿ ಗೇರುಬೀಜಗಳನ್ನು ಕದ್ದು ಯಾವುದಾದರೂ ಅಂಗಡಿಗೆ ಒಯ್ದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಬೆಲ್ಲ ಅವಲಕ್ಕಿ, ಬೇಯಿಸಿದ ಗೆಣಸು, ಚಕ್ಕುಲಿ, ಮಂಡಕ್ಕಿಉಂಡಿ ಇತ್ಯಾದಿ ಸಿಕ್ಕ ತಿನಿಸುಗಳನ್ನು ಖರೀದಿಸಿ ತಂದು ಎಲ್ಲರೂ ಗೇರುಮರದ ನೆರಳಿಗೆ ಬಂದು ಹಂಚಿಕೊಂಡು ತಿನ್ನುತ್ತಿದ್ದೆವು. ಗೇರು ಬೀಜಗಳನ್ನೇ ಸುಟ್ಟು ತಿನ್ನುವುದೂ ಇತ್ತು. ಗೇರುಬೀಜದ ಸೀಜನ್ ಮುಗಿಯುತ್ತಿರುವಾಗಲೇ ಮಾವಿನ ಮಿಡಿಗಳು ಬಿಡಲಾರಂಭಿಸುತ್ತಿದ್ದವು. ಆಗ ನಮ್ಮ ತಂಡ ಮಾವಿನ ತೋಪುಗಳನ್ನು ಅರಸಿ ಹೋಗುತ್ತಿತ್ತು. ಗೇರು ಹಕ್ಕಲಿನ ಬದಿಯಲ್ಲೇ ಮೂರ್ನಾಲ್ಕು ಮಾವಿನ ಮರಗಳಿದ್ದ ಒಂದು ಚಿಕ್ಕ ಹಿತ್ತಲವಿತ್ತು. ಅದು ಕೊಂಕಣಿ ಮಾತನಾಡುವ ಒಬ್ಬ ವಿಧವೆ ಅಮ್ಮ’ನಿಗೆ ಸೇರಿದುದಾಗಿತ್ತು.             ನಾಡುಮಾಸ್ಕೇರಿಯಲ್ಲಿರುವ ಏಕೈಕ ಕೊಂಕಣಿಗರ ಮನೆ ಅಮ್ಮನ ಮನೆ’ ನಾವು ಕಾಣುವ ಹೊತ್ತಿಗೆ ಈ ಅಮ್ಮ ವಿಧವೆಯಾಗಿ ಕೇಶಮುಂಡನ ಮಾಡಿಸಿಕೊಂಡು ಕೆಂಪುಸೀರೆ ಉಡುತ್ತಿದ್ದಳು. ಅಮ್ಮನ ಹೆಸರು ಏನೆಂದು ನಮಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಅವಳ ಹಿರಿಯ ಮಗ ಯಾವುದೋ ಉದ್ಯೋಗದಲ್ಲಿ ಹೊರಗೇ ಇರುತ್ತಿದ್ದ. ತನ್ನ ಬಳಿಯೇ ಇರುವ ಅವಳಿ ಮಕ್ಕಳು ರಾಮು ಲಕ್ಷಣರಿಗೆ ಒಂದು ಪುಟ್ಟ ಅಂಗಡಿ ಹಾಕಿಕೊಟ್ಟು ವ್ಯಾಪಾರಕ್ಕೆ ಹಚ್ಚಿದ್ದಳು. ಇದ್ದ ಸ್ವಲ್ಪ ಬೇಸಾಯದ ಭೂಮಿಯನ್ನು ಹಾಲಕ್ಕಿ ಒಕ್ಕಲಿಗರಿಗೆ ಗೇಣಿ ಬೇಸಾಯ’ ಕ್ಕೆ ನೀಡಿದ ಅಮ್ಮ, ಹಿತ್ತಲಿನಲ್ಲಿ ಬೆಳೆದ ಮಾವು ಮುರಗಲ ಇತ್ಯಾದಿ ಕಾಯಿಗಳಿಂದ ಹುಳಿ’ ತಯಾರಿಸಿ ಮಾರಾಟಮಾಡಿ ಜೀವನ ಸಾಗಿಸುತ್ತಿದ್ದಳು. ಗೇರುಹಕ್ಕಲಿಗೆ ಹೊಂದಿಕೊಂಡಂತೆ ಇರುವ ಅಮ್ಮನ ಹಿತ್ತಲಿಗೆ ಲಗ್ಗೆ ಹಾಕುವುದು ನಮಗೆ ಬಹಳ ಸುಲಭವಾಗಿತ್ತು. ಮಾವು ಕಸುಗಾಯಿಯಾದ ಸಂದರ್ಭ ನೋಡಿ ನಾವು ಅಮ್ಮನ ಹಿತ್ತಲಿನಿಂದ ಮಾವಿನ ಕಾಯಿಗಳನ್ನು ಕದ್ದು ತಂದು ಅವುಗಳನ್ನು ಸಣ್ಣಗೆ ಹೆಚ್ಚಿ ಹಸಿಮೆಣಸು ಉಪ್ಪು ಬೆರೆಸಿ ಕೊಚ್ಚೂಳಿ’ ಮಾಡಿ ಒಂದೊಂದು ಬೊಗಸೆಯಷ್ಟನ್ನು ಪಾಲು ಹಾಕಿಕೊಂಡು ತಿನ್ನುತ್ತಿದ್ದೆವು. ನಾವು ಮಾವಿನ ಕಾಯಿ ಕದಿಯಲು ಬಂದದ್ದು ಗೊತ್ತಾಗಿ ಅಮ್ಮ ತನ್ನ ಸಾಕು ನಾಯಿಯನ್ನು ಛೂ ಬಿಟ್ಟುಕೊಂಡು ಅನ್ನಿ ಯಯ್ಲಪಳೆ ರಾಂಡ್ಲೋ ಪುತಾನಿ…. ಎಂದು ಮೊದಲಾಗಿ ಬಯ್ದುಕೊಳ್ಳುತ್ತಾ ಓಡಿ ಬರುತ್ತಿದ್ದರೆ ನಾವು ಕೈಗೆ ಸಿಕ್ಕಷ್ಟು ದೋಚಿಕೊಂಡು ಓಡುವುದೇ ತುಂಬಾ ಮಜವಾಗಿರುತ್ತಿತ್ತು. ಮಾವಿನ ಹಣ್ಣುಗಳಾಗುವ ಸಮಯದಲ್ಲೂ ಮರದಡಿಯಲ್ಲೇ ಕಾದುಕುಳಿತು ಬಿದ್ದ ಹಣ್ಣುಗಳನ್ನಾಯ್ದು ತಿನ್ನುತ್ತಿದ್ದೆವು.             ಬೇಸಿಗೆಯ ದಿನಗಳಲ್ಲಿ ನಮ್ಮ ಬಾಯಿ ಚಪಲಕ್ಕೆ ಆಹಾರ ಒದಗಿಸಲು ಒಂದಿಲ್ಲೊಂದು ದಾರಿ ಇದ್ದೇ ಇರುತ್ತಿತ್ತು. ಬೆಳೆದುನಿಂತ ಗೆಣಸಿನ ಹೋಳಿಗಳಾಗಲಿ, ಶೇಂಗಾ ಗದ್ದೆಗಳಾಗಲಿ ಕಂಡರೆ ಮಬ್ಬುಗತ್ತಲಲ್ಲಿ ಉಪಾಯದಿಂದ ನುಗ್ಗಿ ಲೂಟಿ ಮಾಡುತ್ತಿದ್ದೆವು. ನಮಗೆ ಅತ್ಯಂತ ದುಷ್ಕಾಳದ ದಿನಗಳೆಂದರೆ ಮಳೆಗಾಲದ ದಿನಗಳು. ಕರಾವಳಿಯ ಜೀಗುಡುಮಳೆ ಹಿಡಿಯಿತೆಂದರೆ ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತಿತ್ತು. ಕೆಲಸವಿಲ್ಲದೆ ಕುಳಿತಾಗ ಬಾಯಿ ಚಪಲ ಇನ್ನೂ ತಾರಕಕ್ಕೇರುತ್ತಿತ್ತು. ಕೆಲವು ಮನೆಗಳಲ್ಲಿ ಮಳೆಗಾಲದ ನಾಲಿಗೆ ಚಪಲಕ್ಕಾಗಿಯೇ ಬೇಯಿಸಿದ ಗೆಣಸಿನ ಹೋಳುಗಳನ್ನು ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಜೋರು ಮಳೆ ಹೊಯ್ಯುವಾಗ ಒಂದೊಂದು ಮುಷ್ಟಿ ಒಣಗಿದ ಗೆಣಸಿನ ಹೋಳುಗಳನ್ನು ಕೈಗೆಕೊಟ್ಟು ಕೂಡ್ರಿಸುತ್ತಿದ್ದರು. ಅವುಗಳನ್ನು ಸುಲಭವಾಗಿ ಜಗಿದು ತಿನ್ನುವುದು ಸಾಧ್ಯವಿರಲಿಲ್ಲ. ಒಂದೊಂದೇ ಹೋಳುಗಳನ್ನು ಬಾಯಿಗಿಟ್ಟು ಲಾಲಾರಸದಲ್ಲಿ ನೆನೆಸಿ ಮೆದುಮಾಡಿಕೊಂಡು ಜಗಿದು ನುಂಗಬೇಕಾಗುತ್ತಿತ್ತು. ಈಗಿನ ಚೂಯಿಂಗ್ ಗಮ್ ಥರ ಸಮಯ ಕೊಲ್ಲಲು ಗೆಣಸಿನ ಹೋಳುಗಳು ಬಹಳ ಸಹಾಯ ಮಾಡುತ್ತಿದ್ದವು.             ಮಳೆಗಾಲದ ತಿನಿಸುಗಳಿಲ್ಲದ ದುಷ್ಕಾಳದ ಸಮಯದಲ್ಲಿ ನಮ್ಮ ನೆರವಿಗೆ ಬಂದದ್ದೇ ಗೊಣ್ಣೆಗೆಂಡೆ ಸುಳಿ’. ಮತ್ತೆ ಅದೇ ಗೇರುಹಕ್ಕಲ ನಮಗೆ ಬಲಿತ ಗೊಣ್ಣೆ ಗೆಂಡೆಗಳನ್ನು ನೀಡಿ ಉಪಕಾರ ಮಾಡುತ್ತಿತ್ತು. ಬೇಸಿಗೆಯಲ್ಲಿ ಸುಳಿವು ನೀಡದೇ ನೆಲದೊಳಗೆ ಅವಿತುಕೊಂಡಿದ್ದ ಗೊಣ್ಣೆಗೆಂಡೆಯ ಬೇರುಗಳು ಮಳೆ ಬೀಳುತ್ತಿದ್ದಂತೆ ಬಲಿತು ಚಿಗುರೊಡೆದು ಅದರ ಬಳ್ಳಿಗಳು ಗೇರುಮರದ ರೆಂಬೆಗಳನ್ನು ಆಶ್ರಯಿಸಿ ಹಬ್ಬುತ್ತಿದ್ದವು. ಬಳ್ಳಿಗಳ ಬುಡವನ್ನರಸಿ ಅಗೆದು ಗೊಣ್ಣೆಗೆಂಡೆಗಳನ್ನು ಆಯ್ದುಕೊಳ್ಳುವುದು ಸುಲಭವಾಗುತ್ತಿತ್ತು. ಒಂದು ಮುಷ್ಠಿಗಾತ್ರದ ಉರುಟಾದ ಈ ಗಡ್ಡೆಗಳಿಗೆ ಒರಟಾದ ಕಪ್ಪು ಸಿಪ್ಪೆಯ ಕವಚವಿರುತ್ತಿತ್ತು. ಗಡ್ಡೆಗಳನ್ನು ಬೇಯಿಸಿದಾಗ ಆಲೂಗಡ್ಡೆಯ ಸಿಪ್ಪೆಯಂತೆ ಸುಲಿದು ತೆಗೆಯಬಹುದಾಗಿತ್ತು. ಆದರೆ ಅಸಾಧ್ಯ ಕಹಿಯಾಗಿರುವ ಗೊಣ್ಣೆಗೆಂಡೆಗಳನ್ನು ಹಾಗೇ ಬೇಯಿಸಿ ತಿನ್ನುವುದು ಸಾಧ್ಯವಿರಲಿಲ್ಲ. ಅದಕ್ಕೆ ಸೂಕ್ತ ಕ್ರಿಯಾ ಕರ್ಮಗಳನ್ನು ಮಾಡಿ ಹದಗೊಳಿಸಿ ಗೊಣ್ಣೆಗೆಂಡೆಸುಳಿ’ಯನ್ನು ತಯಾರು ಮಾಡಬೇಕಾಗುತ್ತಿತ್ತು. ನಮ್ಮ ತಂಡದಲ್ಲಿ ನಮ್ಮೆಲ್ಲರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯವನೆಂದರೆ ನಾರಾಯಣ ವೆಂಕಣ್ಣ. ಅವನಿಗೆ ಅದರ ಕೌಶಲ್ಯ ಚೆನ್ನಾಗಿ ತಿಳಿದಿತ್ತು. ಅವನ ಮಾರ್ಗದರ್ಶನದಂತೆ ನಾವು ನೆರವಿಗೆ ನಿಲ್ಲುತ್ತಿದ್ದೆವು.             ಗೇರು ಹಕ್ಕಲಿನಿಂದ ಎಲ್ಲರೂ ಸೇರಿ ಗಡ್ಡೆಗಳನ್ನು ಅಗೆದು ತಂದಾದಮೇಲೆ ಅವುಗಳನ್ನು ಚೆನ್ನಾಗಿ ತೊಳೆದು ಮಣ್ಣಿನ ಗಡಿಗೆಯೊಂದರಲ್ಲಿ ಹಾಕಿ ಸರಿಯಾಗಿ ಬೇಯಿಸುವುದು. ಗಡ್ಡೆಗಳು ಬೆಂದ ಬಳಿಕ ಅದರ ಸಿಪ್ಪೆ ಸುಲಿದು ತೆಳ್ಳಗೆ ಹೋಳುಗಳಾಗಿ ಹೆಚ್ಚಿ ಕೊಳ್ಳುವುದು. ಹೆಚ್ಚಿದ ಹೋಳುಗಳನ್ನು ಜಾಳಿಗೆಯಂಥ ಬಿದಿರಿನ ಬುಟ್ಟಿಯಲ್ಲಿ ತುಂಬಿ ಒಂದು ರಾತ್ರಿಯಿಡೀ ಹರಿಯುವ ನೀರಿನಲ್ಲಿ ಇಟ್ಟು ಬರಬೇಕು. ಇದರಿಂದ ಗಡ್ಡೆಯಲ್ಲಿರುವ ಕಹಿ ಅಂಶ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.             ಮರುದಿನ ಬುಟ್ಟಿಯನ್ನು ಎತ್ತಿ ತಂದು ಮತ್ತೊಮ್ಮೆ ಚೆನ್ನಾಗಿ ತೊಳೆದು ಬೇಯಿಸಿಕೊಳ್ಳುವುದು. ಬೆಂದ ಹೋಳುಗಳನ್ನು ಮರದ ಮರಿಗೆಯಲ್ಲಿ (ಅಂದಿನ ಕಾಲದಲ್ಲಿ ಅನ್ನ ಬಸಿಯುವುದಕ್ಕಾಗಿ ದೋಣಿಯಾಕಾರದ ಕಟ್ಟಿಗೆಯ ಮರಿಗೆಗಳು ಬಹುತೇಕ ಮನೆಗಳಲ್ಲಿ ಇದ್ದವು) ಹಾಕಿ ಒನಕೆಯಿಂದ ಜಜ್ಜಿ ಮೆದುಗೊಳಿಸುವುದು. ಅದಕ್ಕೆ ಸಮಪ್ರಮಾಣದ ಬೆಲ್ಲ ಕಾಯಿಸುಳಿ’ ಬೆರೆಸಿ ಹದಮಾಡಿದರೆ ರುಚಿಯಾದ ಗೊಣ್ಣೆಗೆಂಡೆ ಸುಳಿ’ ಸಿದ್ಧವಾಗುತ್ತಿತ್ತು. ಎರಡು ದಿನಗಳ ಇಷ್ಟೆಲ್ಲ ವಿಧಿವಿಧಾನಗಳನ್ನು ನಾರಾಯಣಣ್ಣ ಅತ್ಯಂತ ತಾಳ್ಮೆಯಿಂದ ನಿರ್ವಹಿಸಿ, ಸಿದ್ಧವಾದ ಸುಳಿ’ಯನ್ನು ತಾನೇ ಬಾಳೆಲೆಯಲ್ಲಿ ನಮಗೆ ಪಾಲು ಹಾಕಿ ಕೊಡುತ್ತಿದ್ದ. ಇಪ್ಪತ್ನಾಲ್ಕು ಗಂಟೆಗಳ ಕಾಯುವಿಕೆಯ ಪರಿಣಾಮವೋ ಏನೋ ನಮ್ಮ ಪಾಲು ನಮ್ಮ ಕೈಗೆಟುಕಿದಾಗ ಮ್ರಷ್ಟಾನ್ನವೇ ಕೈಗೆ ಬಂದಂತೆ ಗಬಾಗಬಾ ಮುಕ್ಕುತ್ತಿದ್ದೆವು.             ಇಷ್ಟಾಗಿಯೂ ಗೊಣ್ಣೆ  ಕಹಿ ಗುಣ ಹಾಗೇ ಉಳಿದುಕೊಂಡಿರುವುದು ಗಮನಕ್ಕೆ ಬರುತ್ತಿತ್ತಾದರೂ ಲೆಕ್ಕಿಸದೇ ತಿಂದು ಮುಗಿಸುತ್ತಿದ್ದೆವು. ಈ ಮೇಜವಾನಿ ಹೆಚ್ಚೆಂದರೆ ಮಳೆಗಾಲದ ಒಂದೆರಡು ದಿನ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ, ನಾವು ದೊಡ್ಡವರಾಗುವವರೆಗೂ ವರ್ಷಕ್ಕೆ ಒಮ್ಮೆಯಾದರೂ ಈ ಮೇಜವಾನಿಯ ಯೋಗವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಇರಬಹುದು ನಾವೆಲ್ಲರೂ ಇದೀಗ ಐವತ್ತು ದಾಟಿದ್ದೇವೆ, ಆದರೆ ಯಾರಿಗೂ ಸಕ್ಕರೆಯ ಸಮಸ್ಯೆ’ ಕಾಡಲೇ ಇಲ್ಲ. *************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top