ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು’ ಇದು ಸಾಬೀತಾಗಿ ಶತಮಾನಗಳೇ ಕಳೆದರೂ ನಮ್ಮ ಕಸಾಪ ಗೆ ಒಮ್ಮೆಯೂ ಮಹಿಳಾ ಅಧ್ಯಕ್ಷರ ಆಯ್ಕೆ ಆಗಿಲ್ಲ, ಯಾರೂ ಸಹ ಸ್ಪರ್ಧಿಸಲಾಗಿಲ್ಲ. ಭಾರತವೆಂಬ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನ ಇಂದಿರಾ ಗಾಂಧಿಯವರು ಆಳಿದರು. ಅಂತೆಯೇ ನಮ್ಮ ಕಸಾಪ ಗೂ ಮಹಿಳಾ ಅಧ್ಯಕ್ಷೆಯ ಆಯ್ಕೆ ಆಗಬೇಕು. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಆಕಾಶದಲ್ಲಿ ವಿಮಾನ ಚಾಲನೆ, ಅಷ್ಟೇ ಏಕೆ ಅಂತರಿಕ್ಷದವರೆಗೂ ಮಹಿಳೆ ತಲುಪಿಯಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದಾಗಿದೆ. ಇಲ್ಲಿ ಮಹಿಳೆ ಪುರುಷನಿಗೆ ಸಮ ಎಂದು ಹೇಳುವದಕ್ಕಿಂತ ಮಹಿಳೆಗೆ ಒಂದು ಕೈ ಹೆಚ್ಚೇ ಸಾಮರ್ಥ್ಯವಿದೆ ಎಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ! ಮನೆ, ಮಕ್ಕಳು, ಸಂಸಾರ, ಉದ್ಯೋಗ, ಕೆರಿಯರ್, ಆಸಕ್ತಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವಂತಹ ಮಹಿಳೆ ಕಸಾಪ ಅಧ್ಯಕ್ಷೆ ಆಗಿಯೂ ಬಹಳಷ್ಟು ಕೆಲಸಗಳನ್ನ ಪರಿಷತ್ತಿನ ಔನ್ಯತ್ಯಕ್ಕಾಗಿ ಮಾಡಬಲ್ಲಳು. ಶರಣರ ಕಾಲದಿಂದಲೂ ಕವಯಿತ್ರಿಯರು ಕನ್ನಡ ಸಾಹಿತ್ಯಕ್ಕೆ ಉತ್ಕೃಷ್ಟ ಕೊಡುಗೆ ಮಹಿಳೆಯರು ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಬಹಳಷ್ಟು ಹಿರಿಯ ಮಹಿಳಾ ಸಾಹಿತಿಗಳಿದ್ದಾರೆ, ಅವರಲ್ಲಿ ಯಾರಾದರೂ ಸ್ಪರ್ಧಿಸಿ ಅಧ್ಯಕ್ಷರ ಸ್ಥಾನ ತುಂಬಿದರೆ ಇಲ್ಲಿಯವರೆಗೂ ಮಹಿಳಾ ಅಧ್ಯಕ್ಷೆ ಇಲ್ಲ ಎನ್ನುವ ಕೊರಗೂ ನೀಗುತ್ತೆ. ಮತ್ತಷ್ಟು ಹೊಸ ಕನ್ನಡ ಪರ ಕೆಲಸಗಳನ್ನ, ಹೊಸ ಸಾಹಿತ್ಯಿಕ ಚಟುವಟಿಕೆಗಳನ್ನ ಮಾಡಿ ಪರಿಷತ್ತಿನ ಜೀರ್ಣೋದ್ಧಾರ ಮಾಡಲಿ ಅನ್ನೋದು ನನ್ನ ಆಶಯ. **************************************************************** ಚೈತ್ರಾ ಶಿವಯೋಗಿಮಠ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ?

ಚರ್ಚೆ . ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷದ ಹಾದಿ ಸವೆಸಿ ಮೇಲೆ ನಾಲ್ಕು ವರ್ಷಗಳಾಗಿವೆ.‌ ಮತ್ತೊಂದು  ಚುನಾವಣೆ ಎದುರಿಸಿ, ಕಸಾಪ ಅಧ್ಯಕ್ಷ ಗದ್ದುಗೆ ಏರಲು ಹಲವಾರು ಕಸರತ್ತುಗಳು ನಡೆದಿವೆ. ಕಸಾಪ ಅಧ್ಯಕ್ಷರ  ಅವಧಿ ಐದು ವರ್ಷ ಎಂದೂ ಬೈ ಲಾದಲ್ಲಿ (ಠರಾವು)ತಿದ್ದುಪಡಿಯಾಗಿ, ಅದಕ್ಕೆ ಕಸಾಪ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮುದ್ರೆ ಸಹ ಬಿದ್ದಿದೆ. ಚಾಮರಾಜನಗರದಲ್ಲಿ  ೨೦೧೯ ರಲ್ಲಿ ನಡೆದ ರಾಜ್ಯ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿ ಐದು ವರ್ಷ ಎಂದು ಅನುಮೋದನೆ ಸಹ ಸಿಕ್ಕಿದೆ. ಅದರ ಫಲ ಮುಂದೆ ಕಸಾಪ ಅಧ್ಯಕ್ಷರಾಗಿ ಗೆದ್ದು ಬರುವವರು ಉಣ್ಣಲಿದ್ದಾರೆ‌ .ಈಗ  ಕಸಾಪ ಅಧ್ಯಕ್ಷರಾಗಿ ಸಾಹಿತ್ಯದ ರಥ ಎಳೆಯಲು ಕೆಲವರು  ಬಹಿರಂಗ ವಾಗಿ, ಕೆಲವರು ಅಪ್ತರಲ್ಲಿ  ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ‌ . ಇದು ಸಹಜ. ಪ್ರಜಾಪ್ರಭುತ್ವದ ದಾರಿಯಲ್ಲಿ ಎಲ್ಲವೂ ಸಾಗಿದೆ. ಪ್ರಶ್ನೆ ಏನಪ ಅಂದರ ಕಸಾಪ ೧೦೪ ವರ್ಷದ ತನ್ನ ಅವಧಿಯಲ್ಲಿ ಒಮ್ಮೆಯೂ ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ.‌ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಮಹಿಳೆಯರು , ಮಹಿಳಾ ಸಾಹಿತಿಗಳ ದೊಡ್ಡ ಪಡೆ ನಮ್ಮಲ್ಲಿದೆ. ಕರ್ನಾಟಕ ಲೇಖಕಿಯರ ಸಂಘವೂ ಇದೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸಲು ಮನಸು ಮಾಡಿದಂತಿಲ್ಲ.‌ ಯಾಕೆ ಮನಸು ಮಾಡಲಿಲ್ಲ ಎಂಬ ಪ್ರಶ್ನೆ ಗಿಂತ , ಮುಂದೆ ಅವರು ಸ್ಪರ್ಧಿಸಲಿ ಎಂಬುವ ಪುರುಷ ಮನಸುಗಳು  ಸಹ ಇವೆ.‌ಹಣ ,ಜಾತಿ ರಾಜಕೀಯ, ರಾಜಕೀಯದ ಪರೋಕ್ಷ ಬೆಂಬಲ ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು , ಸ್ಪರ್ಧಿಸಲು ಅವಕಾಶವಿದೆ. ಅತ್ಯಂತ ಪ್ರಖರ ವೈಚಾರಿಕತೆ ಇರುವ ಮಹಿಳಾ ಬರಹಗಾರರು ಇದ್ದಾರೆ.‌ಹಾಗಾಗಿ ಮಹಿಳೆಯೊಬ್ಬರು ಮುಂಬರುವ ಕಸಾಪ ಅಧ್ಯಕ್ಷ ಗಾದಿಗೆ ಸ್ಪರ್ಧಿಸಬೇಕಿದೆ.‌ಇದು ಸಾಹಿತ್ಯ ಸಂಗಾತಿ ಕನ್ನಡ ವೆಬ್ನ ಆಶಯ. ಯಾಕೆ ಮಹಿಳೆ ಬೇಕು? ಕಸಾಪ ಅಧ್ಯಕ್ಷ ಹುದ್ದೆಗೆ ಮಹಿಳೆ;  ಪುರುಷರಷ್ಟೇ ಅರ್ಹಳು. ಇದು ಕರ್ನಾಟಕ.‌ ಮಹಿಳಾ ಸಮಾನತೆಯನ್ನು ೧೨ ನೇ ಶತಮಾನದಲ್ಲಿ ಸಾಧಿಸಿದ ನೆಲ. ಪುರುಷರಷ್ಟೇ , ಸಮರ್ಥ ಆಡಳಿತ ನೀಡುವ ಹಾಗೂ ಪಾರದರ್ಶಕ ಆಡಳಿತ ನೀಡಲು ಮಹಿಳೆಯರಿಗೂ ಸಾಧ್ಯವಿದೆ.‌ ಆಡಳಿತ ಮಾಡುವ ಛಾತಿ ಇದೆ.‌ಸಮ್ಮೇಳನ ನಡೆಸುವ ಚಾಕಚಕ್ಯತೆ ಇದೆ.‌ಒಮ್ಮೆ ಕಣಕ್ಕೆ ಇಳಿದರೆ, ಚುನಾವಣಾ ವಾತಾವರಣ ಬದಲಾಗಿ ಮಹಿಳೆಯನ್ನೇ  ಅವಿರೋಧವಾಗಿ ಆಯ್ಕೆ ಮಾಡುವ ಸನ್ನಿವೇಶ ಸೃಷ್ಟಿಯಾಗಬಹುದು.ಸಾಹಿತ್ಯ ಸಮ್ಮೇಳನದಲ್ಲಿ ಪುರುಷ ಪ್ರಾಬಲ್ಯವನ್ನು ತಪ್ಪಿಸಬಹುದು. ಅಲ್ಲದೆ ಇಚ್ಛಾ ಶಕ್ತಿಯಿಂದ ಸಮ್ಮೇಳನದ ನಿರ್ಣಯಗಳನ್ನು ಜಾರಿ ಮಾಡಿಸಬಹುದು . ಮುಖ್ಯಮಂತ್ರಿಗಳ ಕಿವಿಹಿಂಡಿ ಕನ್ನಡದಲ್ಲಿ ಆಡಳಿತವನ್ನು ಇನ್ನೂ ಪರಿಣಾಮಕಾರಿ ಮಾಡಬಹದು.ಕಾರಣ ಮಹಿಳೆಗೆ ತಾಯ್ತನದ ಗುಣವಿರುತ್ತದೆ‌ .ಹಾಗಾಗಿ ಈ ಸಲ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಸಾಹಿತಿ ಸ್ಪರ್ಧಿಸುವುದು ಔಚಿತ್ಯಪೂರ್ಣ. ಅಲ್ಲದೇ ಇದು ಲಿಂಗ ಸಮಾನತೆಯ ಪ್ರಶ್ನೆಯೂ ಆಗಿದೆ.ಕಸಾಪವನ್ನು ಇನ್ನೂ ಎಷ್ಟು ದಿನ ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಡೆಸುವುದು?. ಈ ಸಲ ಮಹಿಳಾ ಸಾಹಿತಿಗಳು ಸಭೆ ಸೇರಿ ಒಂದು ನಿರ್ಧಾರಕ್ಕೆ ಬರಲಿ. ‌ನಮ್ಮಲ್ಲಿ ಹಿರಿಯರಾದ ವೀಣಾ ಶಾಂತೇಶ್ವರ, ಸುಕನ್ಯಾ ಮಾರುತಿ, ಬಿ.ಟಿ.ಜಾನ್ಹವಿ, ಬಿ.ಟಿ.ಲಲಿತಾ ನಾಯಕ, ವಸುಂದರಾ ಭೂಪತಿ, ಸುನಂದಾ‌ಕಡಮೆ, ಸಾರಾ ಅಬೂಬಕರ್,‌ಮಹಿಳಾ  ವಿ.ವಿ.ಕುಲಪತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಬಿಹಾ ಭೂಮಿಗೌಡ, ಕನ್ನಡ ಹಂಪಿ ವಿವಿ ನಿಕಟಪೂರ್ವ ಕುಲಪತಿ‌ ಮಲ್ಲಿಕಾ‌ ಘಂಟಿ, ಭಾನು‌ ಮುಷ್ತಾಕ, ಡಾ.ಎಚ್.ಎಸ್.ಅನುಪಮಾ, ವೈದೇಹಿ, ಡಾ.ಮೀನಾಕ್ಷಿ  ಬಾಳಿ, ಗುಲ್ಬರ್ಗಾದ ಹೋರಾಟಗಾರ್ತಿ ನೀಲಾ,  ದು.ಸರಸ್ವತಿ , ಪ್ರತಿಭಾ ನಂದಕುಮಾರ್…ಹೀಗೆ  ದೊಡ್ಡ ಮಹಿಳಾ ಪಡೆಯೇ ಕರ್ನಾಟಕದಲ್ಲಿ ಇದೆ. ಇವರಲ್ಲಿ ಯಾರಾದರೂ ಒಬ್ಬರೂ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಬೇಕು. ಕನ್ನಡಿಗರಾದ ನಾವು ಅವರ ಚುನಾವಣಾ ವೆಚ್ಚ ಭರಿಸೋಣ.  ಪಾರದರ್ಶಕವಾಗಿ ಕಸಾಪ ಸದಸ್ಯರ ಮತ ಕೇಳೋಣ.‌ ಇದು‌ ಮಹಿಳಾ ಸಮಾನತೆಯ ಹಕ್ಕಿನ ಪ್ರಶ್ನೆ .‌ಬಾಯ್ಮತಲ್ಲಿ  ಮಹಿಳಾ ಪ್ರಾತಿನಿಧ್ಯ ಎಂಬುದಕ್ಕಿಂತ ಅದು ಕಸಾಪ ಅಧ್ಯಕ್ಷ ಸ್ಥಾನದಿಂದ ಅನುಷ್ಠಾನವಾಗಲಿ. ಕನ್ನಡಿಗರ ಪ್ರಾತಿನಿಧಿಕ ಕನ್ನಡ ಸಾಹಿತ್ಯ ಪರಿಷತ್ತಗೆ  ಮಹಿಳೆ ಅಧ್ಯಕ್ಷೆಯಾಗಿ ೫ ವರ್ಷ ಕನ್ನಡಿಗರ ಕಷ್ಟ ಸುಖಗಳಿಗೆ ಸ್ಪಂದಿಸಲಿ.‌ ಸರ್ಕಾರಕ್ಕೆ  ಕನ್ನಡ ಭಾಷೆ, ಆಡಳಿತ, ಶಿಕ್ಷಣದ ವಿಷಯದಲ್ಲಿ ಮಹತ್ವದ ಮಾರ್ಗದರ್ಶನ ಮಾಡುವಂತಾಗಲಿ.‌ ಈ ಎಲ್ಲಾ ದೃಷ್ಟಿಯಿಂದ  ರಾಜ್ಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ, ಮಹಿಳಾ ಸಾಹಿತಿ ಸ್ಪರ್ಧಿಸಬೇಕೆಂದು ನನ್ನ  ಹಾಗೂ ಸಾಹಿತ್ಯ ಸಂಗಾತಿಯ ಆಶಯವಾಗಿದೆ. ಈ ಸಂಬಂಧ ಮುಕ್ತ ಚರ್ಚೆಗೆ ಸಾಹಿತ್ಯ ಸಂಗಾತಿ ವೇದಿಕೆ ಒದಗಿಸುತ್ತದೆ. …. ************************* ನಾಗರಾಜ ಹರಪನಹಳ್ಳಿ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಬಹುದು. ನಿಮ್ಮಅಭಿಪ್ರಾಯಗಳನ್ನುನಮಗೆಬರೆಯಿರಿ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ? Read Post »

ಇತರೆ

ಕಾಡುವ ನೆನಪು

ನೆನಪು ವೀಣಾ ನಿರಂಜನ್ ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, ಮಾತುಗಳು. ಚಿಕ್ಕವಳಾಗಿದ್ದ ನಾನು ಇದೆಲ್ಲವನ್ನೂ ವಿಸ್ಮಯದಿಂದ ನೋಡುತ್ತಿದ್ದೆ. ಆದರೆ ದುರದೃಷ್ಟವಶಾತ್ ಅಪ್ಪ ನಾನಿನ್ನೂ ಬದುಕನ್ನು ಬೆರಗಿನಿಂದ ನೋಡುತ್ತಿರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಬಿಟ್ಟ. ಕಾಯಿಲೆಯಿಂದ ನರಳುತ್ತಿದ್ದ ಅಪ್ಪನ ಸಂಕಟ ಮತ್ತು ಸಾವು ಆಗಲೇ ನನ್ನನ್ನು ಅಕಾಲ ಮುಪ್ಪಿಗೆ ತಳ್ಳಿದಂತೆ ಯೋಚಿಸತೊಡಗಿದ್ದೆ. ಅಪ್ಪ ಇಲ್ಲದೆ ಸೃಷ್ಟಿಯಾದ  ನಿರ್ವಾತದಿಂದ, ಅನಾಥ ಪ್ರಜ್ಞೆಯಿಂದ ಬಿಡುಗಡೆ ಪಡೆಯುವುದಕ್ಕಾಗಿಯೇ ಎಂಬಂತೆ ಓದನ್ನು, ಬರವಣಿಗೆಯನ್ನು ವಿಪರೀತ ಹಚ್ಚಿಕೊಂಡು ಬಿಟ್ಟೆ.     ಅಪ್ಪ…     ಇಂದು ನೀವಿದ್ದಿದ್ದರೆ     ಖಂಡಿತ ಹೀಗಾಗುತ್ತಿರಲಿಲ್ಲ     ನಾವು ಭೂತದ ಕಡೆಗೆ     ತಲೆ ತೂರಿಸುತ್ತಿರಲಿಲ್ಲ     ಭವಿಷ್ಯಕ್ಕೆ ಹೆದರುತ್ತಿರಲಿಲ್ಲ     ಪದೇ ಪದೇ ಮುಗ್ಗರಿಸಿ     ಪಶ್ಚಾತ್ತಾಪ ಪಡುತ್ತಿರಲಿಲ್ಲ.     ಅಂತ ಏನೇನೋ ಹಳಹಳಿಕೆಗಳೇ ಕವಿತೆಯಾಗಿ ಮೂಡಿ ಬರತೊಡಗಿದ್ದವು ಆಗ.     ಕುವೆಂಪು ಅವರು ನಮ್ಮನ್ನಗಲಿದ ದಿನ ಹೀಗೇ ತೋಚಿದ್ದು ಗೀಚಿದ್ದೆ.      ಮರೆಯಾಯಿತು      ಮರೆಯಾಗಿ ಮಲೆನಾಡ ಕಾಡಿನ      ಭವ್ಯ ರಮಣೀಯತೆಯಲ್ಲಿ      ರುದ್ರ ಭಯಂಕರ ಮನೋಹರ      ಶೂನ್ಯದಲ್ಲಿ ಸೇರಿಕೊಂಡಿತು      ಮರೆಯಾಯಿತು ಕರುನಾಡ ಜ್ಯೋತಿ      ಅಪ್ಪ ಲಂಕೇಶ್ ಪತ್ರಿಕೆಯ ಕಟ್ಟಾ ಅಭಿಮಾನಿ. ಮನೆಗೆ ತಪ್ಪದೆ ಪತ್ರಿಕೆ ಬರುತ್ತಿತ್ತು. ಅಪ್ಪನ ನಂತರವೂ ಪತ್ರಿಕೆ ಬರುವುದು ನಿಲ್ಲಲಿಲ್ಲ. ಆಗ ಪತ್ರಿಕೆಯಲ್ಲಿ ಪುಂಡಲೀಕ ಶೇಟ್ ಅವರ ಕಾಲಂ ಬರುತ್ತಿತ್ತು. ಅವರು ಉತ್ತರ ಕರ್ನಾಟಕದ ಅಪ್ಪಟ ಜವಾರಿ ಕನ್ನಡದಲ್ಲಿ ಅದನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿದ್ದದ್ದೆ. ನಾನು ಡಿಗ್ರಿ ಓದುತ್ತಿದ್ದಾಗ ಅಕಸ್ಮಾತ್ ಒಂದು ಪುಂಡಲೀಕ ಶೇಟ್ ಅವರು ಅಪಘಾತದಲ್ಲಿ ಹೋಗಿ ಬಿಟ್ಟರು ಎನ್ನುವ ಸುದ್ದಿ ಬಂತು. ಅವರ ಅಭಿಮಾನಿಯಾಗಿದ್ದ ನಾನು ಮತ್ತೊಮ್ಮೆ ಸಾವಿನ ಕುರಿತು ಯೋಚಿಸಿದ್ದೆ. ಅವರ ಅಕಾಲಿಕ ಅಗಲಿಕೆಯ ಕುರಿತು ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಒಂದು ಕವಿತೆ ಬರೆದೆ ‘ಹ್ಯಾಂಗ ಮರಿಯೂದು’ ಅಂತ. ಆ ಕವಿತೆಯನ್ನು ಒಂದು ಕವಿಗೋಷ್ಠಿಯಲ್ಲಿ ಓದುವ ಅವಕಾಶ ಸಿಕ್ಕಿತು. ಅಳುಕುತ್ತ, ಹಿಂಜರಿಯುತ್ತ ಓದಿ ಬಂದಿದ್ದೆ. ಮೊದಲೇ ಸಂಕೋಚದ ಮುದ್ದೆ ನಾನು. ಓದಿ ಬಂದು ಮೂಲೆಯಲ್ಲಿ ಮುದ್ದೆಯಾಗಿ ಕುಳಿತೆ. ನಂತರ ಅಂದಿನ ಕವಿಗೋಷ್ಠಿಯ ಅಧ್ಯಕ್ಷರು ನನ್ನ ಕವಿತೆಯನ್ನೇ ಪ್ರಧಾನವಾಗಿ ಎತ್ತಿಕೊಂಡು ಭಾಷಣ ಪ್ರಾರಂಭಿಸಿದಾಗ ಪುಳಕದಿಂದ, ಹೆಮ್ಮೆಯಿಂದ ಬೀಗಿದ್ದೆ. ಮುಂದೆ ಆ ಕವಿತೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಾಗ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದು ನಾನು ನನಗೆ ತಿಳಿಯದೇ ಕವಿಯತ್ರಿಯ ಪಟ್ಟ ಧರಿಸಿ ಬಿಟ್ಟಿದ್ದೆ. ಆದರೆ ಆ ಕವಿತೆ ಈಗ ನನ್ನ ಬಳಿ ಇಲ್ಲ ಹಾಗೂ ಅದರ ಸಾಲುಗಳು ನೆನಪಿನಲ್ಲಿಲ್ಲ. ನನ್ನ ಬದುಕಿನ ಅಸ್ತವ್ಯಸ್ತ ಅಧ್ಯಾಯದಲ್ಲಿ ಎಲ್ಲೋ ಕಳೆದು ಹೋಗಿದೆ.        ಹೀಗೆ ಏಕಾಏಕಿ ದೊರಕಿದ ಕವಿಯತ್ರಿ ಎಂಬ ಬಿರುದು ನನ್ನನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಆಕಾಶವಾಣಿ ಧಾರವಾಡ ಕೇಂದ್ರವು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ನನ್ನ ಮತ್ತೊಂದು ಕವಿತೆ ಪ್ರಥಮ ಸ್ಥಾನ ಪಡೆದಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿಯವರು ಕವಿತೆಯ ಕುರಿತು ಆಡಿದ ಮಾತುಗಳು ನನ್ನನ್ನು ಭಾವುಕಳನ್ನಾಗಿಸಿ ಬಿಟ್ಟಿದ್ದವು. ಆ ಕವಿತೆ      ಇದೆಂಥ ಊರು!      ಎಲ್ಲಿಯೋ ಉದಿಸಿ ಎಲ್ಲಿಯೋ ಬೆಳಗಿ      ಮತ್ತೆಲ್ಲಿಯೋ ಮುಳುಗುವ      ಸೂರ್ಯ ಕೂಡ      ಇಲ್ಲಿಯವನೇ ಆಗಿ ಬಿಡುತ್ತಾನಲ್ಲ ! ಅಂತ ಶುರುವಾಗಿ       ನನ್ನೂರು, ನನ್ನ ಮನೆ, ನನ್ನ ನಾಡು       ಎಂದೆಲ್ಲ ಹತ್ತಿರವಾದಂತೆ       ಹರವು ಪಡೆಯುತ್ತ ಬಿಚ್ಚಿ ಕೊಳ್ಳುತ್ತ       ನಮ್ಮೂರು, ನಮ್ಮ ಮನೆ, ನಮ್ಮ ನಾಡು         ಎಂದೆಲ್ಲ ವಿಶಾಲವಾಗಿ ಬಿಡುತ್ತದಲ್ಲ!       ಒಳಹೊಕ್ಕು ತಡಕಾಡಿದಾಗ       ತನ್ನೆಲ್ಲವನ್ನೂ ತೆರೆಕೊಂಡು        ಈಟೀಟು ಇಡಿ ಇಡಿಯಾಗಿ       ಬೆರೆತು ಕೊಂಡು ಮತ್ತೆ       ಆಪ್ತವಾಗಿ ಬಿಡುತ್ತದಲ್ಲ !!                                             ಹೀಗೆ ಕವಿತೆ ನಿಧಾನವಾಗಿ ನನ್ನನ್ನು ನನ್ನ ನೋವುಗಳಿಂದ, ಹಳಹಳಿಕೆಗಳಿಂದ ದೂರ ಮಾಡುತ್ತಾ, ಸಾಂತ್ವನ ಹೇಳುತ್ತ ನನ್ನ ಸುತ್ತ ಹೊಸದೊಂದು ಲೋಕವನ್ನು ನಿರ್ಮಾಣ ಮಾಡತೊಡಗಿತು. ಮುಂದೆ ಕವಿವಿ ಕನ್ನಡ ಅಧ್ಯಯನ ಪೀಠ, ಕ್ರೈಸ್ಟ್ ಕಾಲೇಜು ಸಂಘ, ಜೆ ಎಸ್ ಎಸ್ ಧಾರವಾಡ ಮುಂತಾದವರು ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಪಡೆದೆ. ಆದರೆ ನಂತರದ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಅನಿರೀಕ್ಷಿತ ಆಘಾತಗಳು, ಅದರಿಂದಾದ ಆರೋಗ್ಯದಲ್ಲಿನ ಏರುಪೇರುಗಳು, ಸಂಸಾರದ ಜವಾಬ್ದಾರಿ ಎಲ್ಲವೂ ಸೇರಿ ಒಂದು ಸುದೀರ್ಘ ಮೌನ… ಕಾವ್ಯ ಸಖಿಯಿಂದ ವಿಮುಖಳಾಗಿ ಬಿಟ್ಟೆ. ಇತ್ತೀಚೆಗೆ ಮತ್ತೆ ಕಾವ್ಯ ನನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ.  ಈ ಸೆಳೆತವೇ ಒಂದೂ ಸಂಕಲನವಿಲ್ಲದ ನನ್ನನ್ನು ಕೂಡ ಮೊದಲ ಕವಿತೆಯ ಕುರಿತು ಬರೆಯುತವಂತೆ ಪ್ರೇರೆಪಿಸಿದ್ದು. ಎಲ್ಲ ಹಳವಂಡಗಳಿಂದ ನನ್ನ ಮುಕ್ತ ಗೊಳಿಸಿ ಕಾವ್ಯದ ಮೇಲಿನ ಮೋಹ ಮತ್ತೊಮ್ಮೆ ಬದುಕನ್ನು ಪ್ರೀತಿಸುವಂತೆ ಮಾಡಿದೆ. **********************************

ಕಾಡುವ ನೆನಪು Read Post »

ಇತರೆ, ಸಿನೆಮಾ

ನೂತನ ನೋಡಿದ ಸಿನೆಮಾ

ವಿದ್ಯಾ ಕಸಂ ಶಕುಂತಲಾ ದೇವಿ ನೂತನ ದೋಶೆಟ್ಟಿ ವಿದ್ಯಾ ಕಸಂ ಈ ಶಬ್ದಗಳು , ಇತ್ತೀಚೆಗೆ ಬಿಡುಗಡೆಯಾದ, ಖ್ಯಾತ ಗಣಿತಜ್ಞೆ , ಸಂಖ್ಯಾ ನಿಪುಣೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಹಿಂದಿ ಚಲನಚಿತ್ರದಲ್ಲಿ ಬಹಳ ವಿಶೇಷವಾಗಿ ಉಪಯೋಗಿಸಲ್ಪಡುತ್ತವೆ. ಈ ವಿದ್ಯಾ ಕಸಂ ಎಂಬ ಆಣೆ- ಪ್ರಮಾಣ ಚಿತ್ರದುದ್ದಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ತಿರುವನ್ನು ಕೊಡುತ್ತ ಹೋಗುತ್ತದೆ. ಅಮೇಜಾನ್ ಪ್ರೈಂನಲ್ಲಿ ಜುಲೈ 31 ರಂದು ಬಿಡುಗಡೆಯಾದ ಈ ಚಿತ್ರವನ್ನು ನಾನು ನೋಡಿದ್ದು ವಿದ್ಯಾ ಬಾಲನ್ ಎಂಬ ಅನನ್ಯ ಅಭಿನೇತ್ರಿಗಾಗಿ. ಗಣಿತಕ್ಕೂ ನನಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಹಾಗಾಗಿ ಶಕುಂತಲಾ ದೇವಿಯವರ ಬಗ್ಗೆ ನನಗೆ ಇದ್ದದ್ದು ಅಪಾರ ಭಯ ಮಿಶ್ರಿತ ಗೌರವ. ಅವರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಓದಿ, ಆನಂತರದಲ್ಲಿ ಟಿವಿಯಲ್ಲಿ ನೋಡಿ ಬೆರಗಾಗಿದ್ದಿದೆ. ಸಂಖ್ಯೆಗಳೊಂದಿಗೆ ಅವರ ಸರಸ, ಸಲಿಗೆ ಆಗ ವಿಶ್ವದಾದ್ಯಂತ ಮನೆಮಾತಾಗಿತ್ತು.ಅಂಥ ಶಕುಂತಲಾ ದೇವಿಯವರ ಬಗೆಗಿನ ಚಲನಚಿತ್ರವನ್ನು ಕುತೂಹಲದಿಂದಲೇ ನೋಡಲು ಕುಳಿತೆ.  ಆರಂಭದಲ್ಲೇ ನಿರ್ದೇಶಕ ಅನು ಮೆನನ್, ಶಕುಂತಲಾ ದೇವಿಯವರ ಮಗಳು ಅನುಪಮಾ ಬ್ಯಾನರ್ಜಿಯವರು ಹೇಳಿರುವಂತೆ ಚಿತ್ರಿಸಲಾಗಿದೆ ಎಂದು ಹೇಳಿ ತಾವು ಸುರಕ್ಷರಾಗುವುದರೊಂದಿಗೆ ಚಿತ್ರದ ಆಯಾಮವನ್ನು ಸಿದ್ಧಪಡಿಸುತ್ತಾರೆ. ಇಡಿಯ ಚಿತ್ರ ಮಗಳ ಕಣ್ಣೋಟದಲ್ಲೇ ಸಾಗುತ್ತದೆ. ಆರಂಭವಾಗುವುದೇ ಮಗಳು ಅನು, ಶಕುಂತಲಾ ದೇವಿ ಎಂಬ, ಅಪ್ರತಿಮ ಬುದ್ಧಿಮತ್ತೆಗಾಗಿ ವಿಶ್ವಮಾನ್ಯಳಾದ , ತನ್ನ ತಾಯಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ಮೂಲಕ. ನೋಡುಗರನ್ನು ಅವಾಕ್ಕಾಗಿಸಿ ಸೆರೆ ಹಿಡಿಯುವ ತಂತ್ರ ಇಲ್ಲಿ ಕೆಲಸ ಮಾಡಿದೆ. ಚಿತ್ರ ಮುಂದುವರೆದಂತೆ ‘ದೇವಿ’ಎಂಬ ಹೆಣ್ಣು, ಪತ್ನಿ, ತಾಯಿಯೇ ವಿಜ್ರಂಭಿಸುತ್ತಾಳೆ! ಬಾಲ್ಯದಲ್ಲಿ ತಂದೆಯಿಂದಲೇ ಶೋಷಣೆಗೆ ಒಳಗಾಗಿ ತನ್ನ ಬಾಲ್ಯವನ್ನೇ ಪುಟ್ಟ ದೇವಿ ಕಳೆದುಕೊಳ್ಳುತ್ತಾಳೆ. ಅವಳ ಬುದ್ಧಿಮತ್ತೆಯನ್ನು ತನ್ನ ಮನೆಯ ಹೊಟ್ಟೆ ಹೊರೆಯಲು ಬಳಸಿಕೊಳ್ಳುವ ಕಟುಕ ಹಾಗೂ ಹೀನ ಬುದ್ಧಿಯ ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಶಾಲೆ, ಆಟ-ಪಾಠಗಳಿಂದ ವಂಚಿತಳಾಗಿ ಅವುಗಳನ್ನು ಹಂಬಲಿಸುವ ದೇವಿ ಕೊನೆಗೆ ಮನೆಯಲ್ಲಿ ತನ್ನ ಅಂಗವಿಕಲ ಅಕ್ಕನೊಂದಿಗೆ ಕೆಲ ಹೊತ್ತು ನಗುತ್ತ, ತನ್ನಿಷ್ಟದ ಕೊಳಲು ನುಡಿಸುತ್ತ ಕಾಲ ಕಳೆಯುವುದಕ್ಕೂ ತಂದೆ ಅವಕಾಶ ಕೊಡದಾಗ ವ್ಯಗ್ರಳಾಗುತ್ತಾಳೆ. ತಂದೆಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಳ್ಳುವ ತಾಯಿಯನ್ನು ದ್ವೇಷಿಸಲು ಆರಂಭಿಸುತ್ತಾಳೆ. ಈ ಎಲ್ಲ ರೇಜಿಗೆ ಗಳಿಂದ ಮುಕ್ತಿ ಹೊಂದಲು  ಯೌವನದಲ್ಲಿ ಇಂಗ್ಲೆಂಡಿಗೆ ಹಾರಿ ಬಿಡುತ್ತಾಳೆ. 1950 ರ ಆಸುಪಾಸಿನಲ್ಲಿ ಆಕೆ ಹೇಗೆ ಅಲ್ಲಿಗೆ ಹೋದರು ಎಂಬುದರ ಬಗ್ಗೆ ಯಾವ ಮಾಹಿತಿಯೂ ಚಿತ್ರದಲ್ಲಿಲ್ಲ! ಒಬ್ಬಳೇ ಹೆಣ್ಣುಮಗಳು ತನ್ನ ಬದುಕನ್ನು ಅರಸಿ ಮಾಡುವ ಮುಂದಿನ ಪ್ರಯಾಣ ಹಳೆಯ ಹಿಂದಿ ರೊಮ್ಯಾಂಟಿಕ್ ಚಿತ್ರದಂತೆ ಸಾಗಿಬಿಡುತ್ತದೆ. ದೇವಿ ಪುರುಷರೊಂದಿಗೆ ತೀರ ಸಲಿಗೆಯಿಂದಿರುತ್ತಾಳೆ. ಮೊದಲ ಜೊತೆಗಾರ ತನ್ನ ಮದುವೆಯನ್ನೇ ಅವಳಿಂದ ಮುಚ್ಚಿಟ್ಟದ್ದು ತಿಳಿದಾಗ ಅವನದೇ ಬಂದೂಕಿನಿಂದ ಅವನ ಕಿವಿಹಾರಿಸಿ ಓಡಿ ಹೋಗುತ್ತಾಳೆ. ಆನಂತರ ಒಬ್ಬ ಸ್ಪೇನಿಯವನೊಂದಿಗೆ ಸರಸ. ಅವನು ಅವಳ ಪ್ರತಿಭೆಗೆ  ಅಪಾರ ಮನ್ನಣೆ ಸಿಗುವಂತೆ ಮಾಡುತ್ತಾನೆ. ದೇವಿ ಹಣವನ್ನು ಎರಡು ಕೈಗಳಲ್ಲಿ ಬಾಚಿ ದುಡಿಯುತ್ತಾಳೆ.  ಈ ಹೊತ್ತಿಗೆ ಅವಳು ಪ್ರಖ್ಯಾತರಾಗಿರುತ್ತಾಳೆ.  ಅವನು ಅವಳನ್ನು ಬಿಟ್ಟು ತನ್ನ ದೇಶಕ್ಕೆ ಹೊರಡಬೇಕಾದಾಗ ಸ್ವಲ್ಪ ದುಃಖವಾದರೂ ದೇವಿಗೆ ಸಂಬಂಧಗಳ ಬಂಧದಲ್ಲಿ ನಂಬಿಕೆ ಇದ್ದಂತೆ ಕಾಣುವುದಿಲ್ಲ. ತನಗಾಗಿ, ತನ್ನಿಷ್ಟದಂತೆ ಬದುಕುವುದು ಅವಳ ಜೀವನದ ಏಕೈಕ ಗುರಿ. ಅವಳು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅವಳ ಜೀವನ ಪ್ರವೇಶಿಸಿದವನು  ಪಾರಿತೋಷ್ ಬ್ಯಾನರ್ಜಿ. ಅವನಲ್ಲಿ ಅವಳು ಕೇಳುವುದು ಮಗುವನ್ನು. ಮದುವೆಯನ್ನಲ್ಲ. ಬಾಲ್ಯದಲ್ಲೇ ಗಳಿಕೆಗೆ ಇಳಿದ ಪುಟ್ಟ ಬಾಲಕಿ, ಮನೆಯನ್ನು ನಡೆಸುವ ಒಡತಿಯಾಗಿ, ತಂದೆಯ ಪಾಖಂಡಿತನ, ತಾಯಿಯ ಅಸಹಾಯಕತೆಯನ್ನು ತನಗೆ ಅರ್ಥವಾದಂತೆ ಅರ್ಥೈಸಿಕೊಂಡು ಹಠ, ಮೊಂಡು, ಮಹತ್ವಾಕಾಂಕ್ಷೆ, ಬಂಧನರಹಿತ ಸ್ವಾತಂತ್ರ್ಯ, ಕಟ್ಟುಪಾಡುಗಳಿರದ ಜೀವನಕ್ಕೆ ಹಾತೊರೆಯುವಂತೆ ಚಿತ್ರಿಸಲಾಗಿದೆ. ಹೀಗಿದ್ದರೆ ಶಕುಂತಲಾ ದೇವಿ ಎಂದು ಆಶ್ಚರ್ಯ ವಾಗುತ್ತದೆ. ಅವರದು ಸ್ವಾಭಿಮಾನವೋ ಅಂಹಂಕಾರವೋ ತಿಳಿಯುವುದಿಲ್ಲ.  ಒಬ್ಬ ಓವರ್ ಪೊಸೆಸಿವ್ ತಾಯಿಯಾಗಿ ಅವರನ್ನು ತೋರಿಸಲಾಗಿದೆ. ತನ್ನ ಮಗು ತನ್ನಂತೆಯೇ ಆಗಬೇಕು. ತನ್ನ ನೆರಳಿನಲ್ಲೇ ಇರಬೇಕು ಎಂಬ ಹಠದಿಂದ ಮಗು ಅನುಳನ್ನು ತಂದೆಯಿಂದ ದೂರ ಮಾಡುವುದಷ್ಟೇ ಅಲ್ಲ ಅವಳ ಬಾಲ್ಯದಿಂದಲೂ ವಂಚಿಸುತ್ತಾಳೆ. ರಾಷ್ಟ್ರಗಳಿಂದ ರಾಷ್ಟ್ರಕ್ಕೆ ಹಾರುತ್ತ ಹಣ, ಖ್ಯಾತಿ  ಗಳಿಸುವ ಗೀಳು ಹೆಣ್ಣಾಗಿ ಅವರು ಕಾಣಿಸುತ್ತಾರೆ. ಸಿಟ್ಟು, ಸ್ವೇಚ್ಛೆ,  ಸ್ವಾರ್ಥದ ಮೂರ್ತ ರೂಪವೇ ಆಗಿ ಕಾಣುತ್ತಾರೆ. ವಿದ್ಯಾ ಅವರ ನಟನೆಯಲ್ಲಿ  ಶಕುಂತಲಾ ದೇವಿ ಬಹು ಹಗುರವಾಗಿ, ಕೆಲವೊಮ್ಮೆ ಉಡಾಫೆಯಾಗಿ ಕಾಣುತ್ತಾರೆ. ವಿದ್ಯಾ ಅಗತ್ಯಕ್ಕಿಂತ  ಹೆಚ್ಚೇ ಗಹಗಹಿಸುತ್ತಾರೆ. ದೇವಿ ನಿಜವಾಗಿಯೂ ಹಾಗಿದ್ದರೆ ಅಥವಾ ಪ್ರೇಕ್ಷಕರಿಗಾಗಿ ಅವರನ್ನು ಹಾಗೆ ಮಾಡಲಾಗಿದೆಯೇ ಗೊತ್ತಿಲ್ಲ. ಆರಂಭದಲ್ಲಿ ಇರುವ ಕುತೂಹಲ, ಗತಿಯ ಬಿಗಿ ಬಂಧ ಅರ್ಧಕ್ಕಿಂತ ಮೊದಲೇ ಕಳೆದು ಹೋಗುತ್ತದೆ. ಒಟ್ಟಿನಲ್ಲಿ ಸಿನಿಮಾ ಅನುಪಮಾ ಬ್ಯಾನರ್ಜಿಯವರ ಏಕಮುಖ ದ್ರಷ್ಟಿಕೋನದಂತೆ ಇದೆ. ಕೊನೆಯಲ್ಲಿ ನಿರಾಸೆಯೂ ಆಗುತ್ತದೆ. ‘ಶಕುಂತಲಾ ದೇವಿ’ ಎಂಬ ಹೆಸರಿನ ಮಾಂತ್ರಿಕತೆ ಚಿತ್ರದಲ್ಲಿ ಒಡಮೂಡಿಲ್ಲ. ಆದರೂ ವಿದ್ಯಾ ಬಾಲನ್  ಅವರ ನಟನೆಯ  ಕೆಲ ಸನ್ನಿವೇಶಗಳು, ಅಲ್ಲಲ್ಲಿ ಹಾಯಾಗಿ ಸಾಗುವ ಕೆಲ ಪಾತ್ರಗಳು, ಅನುಪಮಾ ಪಾತ್ರದ  ಸನ್ಯಾ ಮಲ್ಹೋತ್ರಾ , ಅವಳ ಗಂಡನ ಪಾತ್ರದಲ್ಲಿ ಅಮಿತ್ ಸಾಧ್ಯ , ಪಾರಿತೋಷ್   ಬ್ಯಾನರ್ಜಿಯ  ಪಾತ್ರದಲ್ಲಿ ಜಿಷು ಸೇನ್ ಗುಪ್ತ ಹಿಡಿದು ಕೂರಿಸಿ ಪೂರ್ಣ ಚಿತ್ರ ತೋರಿಸಿ ಬಿಡುತ್ತಾರೆ.ಅಪ್ರತಿಮ ಸಂಖ್ಯಾ ಕುಶಲೆಗೆ ಬಾಲ್ಯದಲ್ಲಿ ಆದ  ಆಘಾತ ಆಕೆ ಬೆಳೆದಂತೆ ಮಾನಸಿಕ ತೊಂದರೆಯಾಗಿತ್ತೇ ಎಂಬ ಅನುಮಾನ ಬರುತ್ತದೆ. ಯಾವುದಕ್ಕೂ ಸರಿಯಾದ ಉತ್ತರ ಸಿಗದೆ, ಹಾಗೆಂದು ತೀರ  ಗೋಜಲಾಗದಂತೆ ಎಚ್ಚರವಹಿಸಿ ಮಾಡಿದಂತಿದೆ ಈ ಚಿತ್ರ.  ಭಾಗ್ ಮಿಲ್ಖಾ ಭಾಗ್, ಎಂ ಎಸ್ ಧೋನಿ ಮೊದಲಾದ ಚಿತ್ರಗಳೆದುರು ಕಳೆಗುಂದುತ್ತದೆ. ನಿರೀಕ್ಷೆ ಹುಸಿಯಾಗುತ್ತದೆ. ಆದರೆ ವಿದ್ಯಾ ಬಾಲನ್ ಇಡಿಯ ಚಿತ್ರವನ್ನು ಅಳುತ್ತಾರೆ. ವಿದ್ಯಾ ಕಸಂ…  ಅವರಿಗೆ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ. *********************************************

ನೂತನ ನೋಡಿದ ಸಿನೆಮಾ Read Post »

ಇತರೆ, ಜೀವನ

ಯಡ್ರಾಮಿಯ ಉಡುಪಿ ಹೋಟೆಲ್

ಪ್ರಬಂಧ ಮಲ್ಲಿಕಾರ್ಜುನ ಕಡಕೋಳ   ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ  ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ.  ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ ಪತರಾಸುಗಳು, ಹಳೆಯ ಮೇಜು, ಮುಪ್ಪಾನು ಮುರುಕು ಬೆಂಚುಗಳು, ಮಣ್ಣುನೆಲದ ದೇಸಿಯ ಈ ಹೋಟೆಲುಗಳೆದುರಿಗೆ “ಉಡುಪಿ  ಬ್ರಾಹ್ಮಣರ ಹೋಟೆಲ್ ” ಬೋರ್ಡ್ ಹೊತ್ತು ಆರ್ಸಿಸಿ ಬಿಲ್ಡಿಂಗಿನಲ್ಲಿ ಈಸ್ಟ್ ಇಂಡಿಯಾ ಕಂಪನಿ‌ಯಂತೆ ಯಡ್ರಾಮಿಯಲ್ಲಿ ಝಂಡಾ ಊರಿತು. ಅದು ಆಗ ಮದುವೆ ಹೆಣ್ಣಿನಂತೆ ಅಲಂಕರಿಸಿತ್ತು. ಕಲರ್ಫುಲ್ ಕುರ್ಚಿ, ಟೇಬಲ್ ಗಳು, ಚೆಂದನೆಯ ಗಲ್ಲಾಕುರ್ಚಿ, ಆ ಕುರ್ಚಿ ಮೇಲ್ಭಾಗದ ಮೆರುಗಿನ ಬಣ್ಣದ ಗೋಡೆಗೆ ಅಷ್ಟಮಠದ ಭಗವತ್ಪಾದರ ಫೋಟೋ. ಅದನ್ನು ನೋಡಿದರೆ ಸಾಕು ಇವರು ಮಂಗಳೂರು, ಉಡುಪಿ ಬ್ರಾಹ್ಮಣರೆಂದು ಹೇಳಬಹುದಿತ್ತು. ಉಡುಪಿ ಕಡೆಯಿಂದ ಬರುವಾಗಲೇ  ರುಚಿಕರವಾದ ಖಾದ್ಯ ತಯಾರಕ ಒಂದಿಬ್ಬರು ಅಡುಗೆ ಭಟ್ಟರು, ಸಪ್ಲಯರೊಂದಿಗೆ  ಹೊಸರುಚಿ ಬಡಿಸುವ ಸೌಟುಗಳನ್ನೂ ತಂದಿದ್ದರು. ಇನ್ನು ಕ್ಲೀನಿಂಗ್ ಗೆ ಲೋಕಲ್ ಕೆಲಸಗಾರರನ್ನು ನೇಮಿಸಿಕೊಂಡರು. ಬಿಳಿ ಆಫ್ ಶರ್ಟ್, ಅಚ್ಚ ಬಿಳಿ ಲುಂಗಿಯ ಭಟ್ಟರು ಗಲ್ಲಾ ಪೆಟ್ಟಿಗೆ ಮೇಲೆ ಕುಂತು ಸಂಜೀಮುಂದ ಬರುವ “ಉದಯವಾಣಿ”ಯಲ್ಲಿಯ ಕರಾವಳಿ ಸುದ್ದಿಗಳನ್ನು ಓದುವಲ್ಲಿ ತೋರುವಷ್ಟೇ ಆಸಕ್ತಿಯನ್ನು ಹೋಟೆಲಿನ ಶುಚಿ ಮತ್ತು ರುಚಿಯಲ್ಲೂ ತೋರಿಸುತ್ತಿದ್ದರು. ಹಾಡಿನ ಶೈಲಿಯ ಮಧುರ ಮೆಲುದನಿಯ ಭಟ್ಟರ ಮಾತುಗಳಿಗೆ ನಮ್ಮ ಮೊಗಲಾಯಿ ಸೀಮೆಯ ಹಳ್ಳೀಮಂದಿ ಮುರಕೊಂಡು  ಬಿದ್ದಿದ್ರು. ಯಡ್ರಾಮಿ ಅಷ್ಟೇಅಲ್ಲ ಸುತ್ತಮುತ್ತಲ ಹತ್ತಾರು ಹಳ್ಳಿಯ ನಾಲಗೆಗಳಿಗೆಲ್ಲ ಭಟ್ಟರ ಹೊಟೆಲಿನ ಅಕ್ಕಿ ಖಾದ್ಯಗಳ ಹೊಸರುಚಿಯದೇ ಬಿಸಿ – ಬಿಸಿ, ಮಾತು – ಮಾತು. ದೋಸೆ, ಇಡ್ಲಿ, ವಡೆ, ಭಟ್ಟರ ಕೇಸರಿಬಾತಿನ ಪರಿಮಳ ನಮ್ಮ ಸಿರಾಕ್ಕೆ ಇಲ್ಲದಿರುವುದು ಸಾಬೀತು ಮಾಡಿದಂಗಿತ್ತು. ಇಡ್ಲಿ ವಡಾ ತಿನ್ನಲು ಎರಡೆರಡು ಸ್ಟೀಲ್ ಚಮಚಗಳು. ಸ್ಟೀಲ್ ಗಿಲಾಸಿನಲ್ಲಿ ಕುಡಿಯುವ ನೀರು. ನೀರು ತುಂಬಿದ ಸ್ಟೀಲ್ ಜಗ್. ಅದುವರೆಗೆ ಪ್ಲಾಸ್ಟಿಕ್ ಮತ್ತು ಗಿಲಾಟಿ ಗಿಲಾಸುಗಳಲ್ಲಿ ನೀರು ಕುಡಿದ ಗಿರಾಕಿಗಳಿಗೆ ಇದೆಲ್ಲ ಹೊಸ ಮೇಜವಾನಿ, ಸಹಜವಾಗಿ ಖುಷಿಕೊಟ್ಟದ್ದು ಸುಳ್ಳಲ್ಲ. ನಮ್ಮ ದೇಸಿಯ ಹೋಟೆಲುಗಳಲ್ಲಿ ಚಾರಾಣೆಗೆ ಸಿಗುವ ಸಾದಾ ಚಹ ಇಲ್ಲಿ ಬಾರಾಣೆ. ಹೊಟ್ಟೆ ತುಂಬಾ ನಾಸ್ಟಾ ಮಾಡಿದ ಗಿರಾಕಿಗಳು ದೀಡು ರುಪಾಯಿಯ ಕೇಟಿ ಕುಡಿಯಲು ಹಿಂದೇಟು ಹಾಕುತ್ತಿರಲಿಲ್ಲ. ಆಗ ಬರೀ ಬಾರಾಣೆಗೆ ಕಟ್ಟಿಗೆ ಒಲೆ ಊದಿ ಗಟ್ಟಿಯಾದ ಕೇಟೀ ಮಾಡುತ್ತಿದ್ದ ಚಾ ದುಕಾನಿನ ಎಕ್ಸಕ್ಲೂಸಿವ್  ಕೇಟೀ ಸ್ಪೆಷ್ಲಿಸ್ಟಗಳಾದ ಮುಗಳಿ ದುಂಡಪ್ಪ, ರಾವೂರ ಬಸಣ್ಣ, ಬಸಗೊಂಡೆಪ್ಪ, ಬ್ಯಾಳಿ ಶಾಂತಪ್ಪನವರ ಕಿಟ್ಲಿ ಕೇಟೀಯ  ಖಾಸಬಾತ್ ಖಾಯಂ ಗಿರಾಕಿಗಳಿಗೂ ಉಡುಪಿ ಹೊಟೇಲಿನ ಕಾಸ್ಟಲೀ ಖಡಕ್ ಟೀ ಕುಡಿಯುವ ಖಾಯಷ್. ನಮ್ಮ ಗಾಂವಟೀ ಹೊಟೇಲುಗಳು ಮಾಡಿದ ಪೂರಿ ಭಾಜಿ ಪುಟಾಣಿ ಚಟ್ನಿಗೆ ಸಕ್ಕರೆ, ಸೂಸ್ಲಾದ ಮೇಲೂ, ಉಪ್ಪಿಟ್ಟಿನ ಮೇಲೂ ಸಕ್ಕರೆ ಉದುರಿಸಿಕೊಂಡು  ಹೀಗೆ ಎಲ್ಲದಕ್ಕೂ ಸಕ್ಕರೆ ಉದುರಿಸಿಕೊಳ್ಳುವ ಗೋಧಿ ಖಾದ್ಯದ ನಾಲಗೆಗಳಿಗೆ ಉಡುಪಿ ಖಾದ್ಯಗಳು ಬರೀ ರುಚಿಯನ್ನಷ್ಟೇ ಬರಿಸಲಿಲ್ಲ. ಉಡುಪಿ ಹೋಟೆಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವಾಯಿತು. ಅಂತೆಯೇ ಕಡುಬಡವರು ಕೂಡ ಉಡುಪಿ ಹೋಟೆಲಿಗೆ ಹೋಗಿ ಉಡುಪಿ ಕೃಷ್ಣನ ದರ್ಶನ ಪಡಕೊಂಡು ಬಂದಷ್ಟೇ ಸಂತೃಪ್ತರಾಗುತ್ತಿದ್ದರು. ಜವೆಗೋಧಿಯ ಉದುರು ಉಪ್ಪಿಟ್ಟು ಕೊಡುತ್ತಿದ್ದ ಶಿವಣ್ಣನ  ಜವಾರಿ ರುಚಿಯ ಮುಂದೆ ಹೈಬ್ರಿಡ್ ರವೆಯ ” ಉಪ್ಮಾ “ಆರ್ಡರ್ ಮಾಡುವಲ್ಲಿ ನಮ್ಮ ನಾಲಗೆ ರುಚಿಗಳು ಕಲಕಾಗಿದ್ದವು ಎಂದರೆ ಉಡುಪಿ ಹೊಟೆಲ್ ಪ್ರಭಾವ ಯಾವ ಪ್ರಮಾಣದ್ದೆಂದು ಅರ್ಥೈಸಬಹುದು.  ಈಗ್ಗೆ ಎರಡು ವರ್ಷದ ಹಿಂದೆ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಅಲ್ಲೀಗ ಫಿಜ್ಜಾ, ಬರ್ಗರ್, ದಾಬಾ ಕಲ್ಚರ್. ವೈನ್ ಸೆಂಟರ್, ರೆಸ್ಟುರಾಗಳು ಪ್ರವೇಶ ಪಡೆದಿವೆ. ಇದರ ನಡುವೆ ಉಡುಪಿ ಹೋಟೆಲ್ ಕಣ್ಮರೆಯಾಗಿದೆ. ಭಟ್ಟರ ವಯಕ್ತಿಕ ಕಾರಣಗಳಿಂದಾಗಿ ಕೆಲವು ವರ್ಷಗಳ ಹಿಂದೆಯೇ ನಾಪತ್ತೆಯಾಯಿತು. ಈಗೀಗ ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಹೋಟೆಲುಗಳ ಗೋಧಿ ಖಾದ್ಯಗಳಿಗೆ  ಬದಲು ಅಕ್ಕಿ ಖಾದ್ಯದ ವಿವಿಧ ತಿಂಡಿ ಪದಾರ್ಥಗಳು ಯಾಕೋ ಅನ್ನಭಾಗ್ಯದ ನೆನಪು ತರಿಸುತ್ತಿವೆ ? ಆದರೆ ಪಥ್ಯ ಮಾಡುವ ಉತ್ತಮರೆಲ್ಲ ಎತ್ತ ಹೋದರೋ ಎಂಬ ನಮ್ಮ ಕಡಕೋಳ ಮುತ್ಯಾ ಮಡಿವಾಳಪ್ಪನ ಹಾಡಿನಂತೆ  ನೆಲದ ನೆನಪಿನ ರುದ್ರಯ್ಯ ಮುತ್ಯಾ, ಹಲಕರಟಿ ಶಿವಣ್ಣನಂಥವರು ಎತ್ತ ಹೋದರೋ ಗೊತ್ತಿಲ್ಲ. ನಮ್ಮ ನಾಲಗೆಗಳು ಮಾತ್ರ ಹೊಸರುಚಿಯ ಬಲೆಯಲ್ಲಿ ಬಿದ್ದು ಜವಾರಿ ರುಚಿ ಮತ್ತು ಅಭಿರುಚಿಯನ್ನೇ ಕಳಕೊಂಡಿವೆ. ***************

ಯಡ್ರಾಮಿಯ ಉಡುಪಿ ಹೋಟೆಲ್ Read Post »

ಇತರೆ, ಮಕ್ಕಳ ವಿಭಾಗ

ಬೆಕ್ಕು -ನಾಯಿಗಳ ಹುಲ್ಲಿನೌಷಧ!

ಅನುಭವ ಕಥನ(ಮಕ್ಕಳಿಗಾಗಿ) ವಿಜಯಶ್ರೀ ಹಾಲಾಡಿ   ‘ಮುದೂರಿ’ ಒಂದು ಸಣ್ಣ ಹಳ್ಳಿ.   ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು ಹತ್ತಿ ‘ಶಂಕರನಾರಾಯಣ’ ಎಂಬ ಪಕ್ಕದೂರಿಗೆ ಹೋಗಬೇಕಿತ್ತು. ಅಥವಾ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರವಾದ ಕುಂದಾಪುರಕ್ಕೆ ಧಾವಿಸಬೇಕಿತ್ತು. ಮುದೂರಿಯಲ್ಲಿ ಒಂದು ಬೆಂಕಿಪೊಟ್ಟಣ ಕೂಡಾ ಸಿಗಲು ಸಾಧ್ಯವಿರಲಿಲ್ಲ. ಅಗತ್ಯ ಬೇಕಾದ ವಸ್ತುಗಳನ್ನು ಹಾಲಾಡಿಯಿಂದ ತಂದು ಇಟ್ಟುಕೊಳ್ಳಬೇಕಿತ್ತು. ಹಾಗಾಗಿ ಅವರ ಊರಿನ ಜನ ತಮ್ಮಲ್ಲಿ ಇದ್ದುದರಲ್ಲೇ ಅಲ್ಪಸ್ವಲ್ಪ ಹೊಂದಿಸಿಕೊಂಡು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದ್ದರು. ತೀರಾ ಅನಿವಾರ್ಯವಾದಾಗ ಮಾತ್ರ ದೂರದ ಪೇಟೆಪಟ್ಟಣಗಳಿಗೆ ಭೇಟಿಕೊಡುತ್ತಿದ್ದರು . ಆಹಾರಕ್ಕೆ ಬೇಕಾಗುವ ಅಕ್ಕಿ ,ಕಾಳು ,ತರಕಾರಿ ,ಸೊಪ್ಪು ಹಣ್ಣು ಮುಂತಾದುವನ್ನು ಬೆಳೆದುಕೊಳ್ಳುತ್ತಿದ್ದರು. ಜೊತೆಗೆ ಅಕ್ಕಪಕ್ಕದ ಕಾಡು ,ಬಯಲುಗಳಲ್ಲಿ ಬೆಳೆದ ತಿನ್ನಲಿಕ್ಕಾಗುವ ಹಣ್ಣು, ಕಾಯಿ ಗಡ್ಡೆ, ಎಲೆಗಳನ್ನು ಕೊಯ್ದು ಬಳಸುತ್ತಿದ್ದರು. ಆರೋಗ್ಯ ಸರಿಯಿಲ್ಲದಾಗ ಮನೆಯಲ್ಲೇ ಸಣ್ಣಪುಟ್ಟ ಮದ್ದು ಮಾಡಿಕೊಂಡು ಮತ್ತೂ ಗುಣವಾಗದಿದ್ದರೆ ವೈದ್ಯರನ್ನು ಕಾಣುತ್ತಿದ್ದರು. ದನಕರುಗಳಿಗೆ ಹಳ್ಳಿಯ ಪಂಡಿತರಲ್ಲಿ ಔಷದ ತಂದು ಕುಡಿಸುತ್ತಿದ್ದರು. ಇಂತಹ ವಿಷಯಗಳಿಗೆ ಸಂಬಂಧಿಸಿದ ಕೆಲ ನೆನಪುಗಳು ವಿಜಿಯ ಮನಸ್ಸಿನಲ್ಲಿ ಆಗಾಗ ಹಣಕಿಹಾಕುತ್ತಿರುತ್ತವೆ.  ಕಾಲಿಗೆ ಗರ್ಚ (ಕರಂಡೆ ,ಕವಳಿ )ನ ಗಿಡದ ಮುಳ್ಳು ಹೆಟ್ಟಿ ಅದೇ ಒಂದು ದೊಡ್ಡ ನೋವಾಗಿ ನಡೆದಾಡಲು ಆಗದೆ ಪುಟ್ಟ ವಿಜಿ ಹಾಸಿಗೆ ಹಿಡಿದ ಪ್ರಸಂಗ ಮೊದಲ ಪುಸ್ತಕದಲ್ಲಿ ಬಂದಿದೆ. ಆಗ ನೋವಿನ ತೀವ್ರತೆಗೆ ಜೋರು ಜ್ವರ ಕೂಡಾ  ಬಂದಿತ್ತು. ಅಮ್ಮ ಪ್ರತಿರಾತ್ರಿ ಮುಳ್ಳಿನ ಗಾಯಕ್ಕೆ ಸುಣ್ಣ ಹಚ್ಚಿ ಬಿಸಿಯಾದ ಒಲೆದಂಡೆಯ ಮೇಲೆ ಇಡಲು ಹೇಳುತ್ತಿದ್ದರು. ವಿಜಿ ಹಾಗೇ ಮಾಡುತ್ತಿದ್ದಳು. ಇದರಿಂದ ಗಾಯ ಬೇಗನೇ ಮಾಗಿ ಮೆದುಗೊಂಡು ಒಳಗಿರುವ ಮುಳ್ಳು ಹೊರಬರಲು ಸಹಾಯವಾಗುತ್ತದೆ ಎನ್ನುತ್ತಿದ್ದರು. ಇದಲ್ಲದೆ ತೋಟದಲ್ಲಿ ತಾನೇತಾನಾಗಿ ಬೆಳೆದು ಹಳದಿ ಹೂ ಬಿಡುವ ಕಡ್ಲಂಗಡ್ಲೆ  ಗಿಡದ ಎಲೆ ತಂದು ರಸ ಮಾಡಿ ಹಚ್ಚುತ್ತಿದ್ದರು . ಕೊನೆಗೊಂದು ದಿನ ಸೂಜಿಯಲ್ಲಿ ಕುತ್ತಿ ದೊಡ್ಡದಾದ ಮುಳ್ಳನ್ನು ಹೊರತೆಗೆದಾಗ ಒಂದು ಲೋಟದಷ್ಟು ರಶಿಗೆ (ಕೀವು) ಹೊರಬಂದು ಅಂಗಾಲಿನಲ್ಲಿ ದೊಡ್ಡ ಗಾಯವಾಗಿತ್ತು. ನೋವೆಂದು ಕಿರುಚಿ ಕುಣಿಯುತ್ತಿದ್ದ ವಿಜಿಗೆ ಸಮಾಧಾನವಾಗುವಂತೆ ಬಸಳೆಸೊಪ್ಪನ್ನು ಬಾಡಿಸಿ ಅದರ ರಸವನ್ನು ಹಚ್ಚಿದ್ದರು. ಆಗ ಸ್ವಲ್ಪ ತಣ್ಣ ತಣ್ಣಗೆ ಆಗಿ ಅವಳು ಅಳುವುದನ್ನು ನಿಲ್ಲಿಸಿದಳು. “ಬಸಳೆ ರಸ ಭಾರೀ ತಂಪು “ಎಂದು ಮುಳ್ಳು ತೆಗೆಯಲು ಬಂದಿದ್ದ ಶೇಷಿಬಾಯಿ, ರುಕ್ಮಿಣಿಬಾಯಿ ಹೇಳಿದ್ದರು.  ಜಿರಾಪತಿ ಸುರಿಯುವ ಮಳೆಗಾಲದ ನಾಲ್ಕು ತಿಂಗಳಲ್ಲಂತೂ ಅವರೂರಿನಲ್ಲಿ ಶೀತ, ಜ್ವರ ಮಾಮೂಲಿ ವಿಚಾರವಾಗಿತ್ತು. ಸೀನಿ ಸಾಕಾಗಿ ಮೂಗಿನಲ್ಲಿ ನೀರಿಳಿದು ಮೈಕೈ ನೋವು, ತಲೆಭಾರ ಆಗಿ ಮೈಯೆಲ್ಲಾ ಕೆಂಡದಂತೆ ಸುಡುತ್ತಾ ಸ್ವಸ್ಥ ನಿದ್ದೆ ಮಾಡಲೂ ಬಿಡದೆ ಜ್ವರ ಕಾಡುವಾಗ ಆರಂಭದಲ್ಲಿ ಜನರು ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಕಾಳು ಮೆಣಸಿನ ಕಷಾಯ ಮಾಡುತ್ತಿದ್ದರು. ಕಾಳುಮೆಣಸು ಬೆಳೆಯುವುದು ತೋಟದ ಅಡಕೆ, ತೆಂಗಿನ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ. ಆರಂಭದಲ್ಲಿ ಹಸಿರಾಗಿದ್ದು ಹಣ್ಣಾದ ಮೇಲೆ ಕೆಂಪಾಗಿ, ಕೊಯ್ದು ಒಣಗಿಸಿದ ನಂತರ ಕಪ್ಪಾಗುತ್ತದೆ.  ಇದು ಚಿಕ್ಕ ಚಿಕ್ಕ ಕಾಳಿನಂತಹಾ ಮೆಣಸು. ಇದನ್ನು ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಕಷಾಯ ಮಾಡುವಾಗ ಒಂದರ್ಧ ಮುಷ್ಟಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ನೀರು -ಬೆಲ್ಲ ಬೆರೆಸಿ ಕುದಿಸುತ್ತಿದ್ದರು. ಒಂದ್ಹತ್ತು ನಿಮಿಷ ಕುದಿದ ಮೇಲೆ ಕಷಾಯ ತಯಾರಾಗುತ್ತದೆ. ಇದನ್ನು ಸೋಸಿ ಕುಡಿದರೆ ಜೋರು ಖಾರ!  ವಿಜಿಗೆ ಖಾರ ಇಷ್ಟವಿಲ್ಲದಿದ್ದರೂ ಕುಡಿಯಲೇಬೇಕು. ಅವಳಿಗೆ ಆಗಾಗ ಜ್ವರ ಬರುತ್ತಿತ್ತು. ಸಪೂರಕ್ಕಿದ್ದ ವಿಜಿಗೆ ಏನೂ ತಿನ್ನದೇ ನಿಶ್ಶಕ್ತಿಯಿಂದಲೇ ಜ್ವರ ಬರುವುದೆಂದು ಅಮ್ಮ ದೂರುತ್ತಿದ್ದರು. ಅವರ ಮನೆಯಲ್ಲಿ ಶೋಲಾಪುರ (ಸೊಲ್ಲಾಪುರ) ಹೊದಿಕೆಗಳಿದ್ದವು. ಅಪ್ಪಯ್ಯ ಯಾವಾಗಲೂ ಅವುಗಳನ್ನೇ ತರುತ್ತಿದ್ದುದು. ವಿಜಿ ನೋಡಿದ ಹೊದಿಕೆಗಳಲ್ಲೆಲ್ಲ ಇವೇ ಅತ್ಯುತ್ತಮವಾದವು. ಉದ್ದ- ಅಗಲ ಹೆಚ್ಚು ಇರುವುದರ ಜೊತೆಗೆ ದಪ್ಪ ಇರುತ್ತವೆ. ಆದರೆ ದಿನಗಳಲ್ಲೂ ಹೊದ್ದುಕೊಳ್ಳಬಹುದು. ಸೆಕೆಗೆ ತಣ್ಣಗೆ ಇರುತ್ತವೆ. ಚಳಿ ಬಂದಾಗ ಎರಡೆರಡು ಹೊದಿಕೆ ಹೊದ್ದು ಮೇಲೊಂದು ರಗ್ಗು ಹಾಕಿಕೊಳ್ಳಬೇಕು. ಶೋಲಾಪುರ ಹೊದಿಕೆಯ ಡಿಸೈನ್ಗಳೂ ಚಂದ . ಈ ಎಲ್ಲ ಕಾರಣಕ್ಕಾಗಿ ಅವಳಿಗೆ ಶೋಲಾಪುರ ಹೊದಿಕೆಗಳೆಂದರೆ ಬಹಳ ಇಷ್ಟ. ಆದರೆ ಜ್ವರ ಬಂದ ರಾತ್ರಿಗಳಲ್ಲಿ ಆಗುತ್ತಿದ್ದುದೇ ಬೇರೆ. ಆಗ ಜ್ವರ ತಲೆಗೇರಿ ಹೊದಿಕೆಯ ಬಣ್ಣದ ಚಿತ್ತಾರಗಳು ರಾಕ್ಷಸಾಕಾರ ತಾಳಿ ಬಂದು ಹೆದರಿಸುತ್ತಿದ್ದವು. ಅರೆನಿದ್ದೆಯಲ್ಲಿರುತ್ತಿದ್ದ ವಿಜಿ ಹಲ್ಲುಮಟ್ಟೆ ಕಚ್ಚಿ ಕೈ ಮುಷ್ಟಿ ಬಿಗಿದುಕೊಂಡು ರಾಕ್ಷಸಾಕಾರಗಳನ್ನು ನೋಡುತ್ತಿದ್ದುದು ಮರೆತೇ ಹೋಗುವುದಿಲ್ಲ .ಹೀಗಾಗಿ ಜ್ವರವೆಂದರೆ ಕೆಟ್ಟ ಕನಸಿನಂತೆ ಅವಳಿಗೆ. ಇಂತಹ ಸಂದರ್ಭದಲ್ಲಿ ಕಾಳು ಮೆಣಸಿನ ಕಷಾಯ ಕುಡಿಯದಿದ್ದರೆ ಅಜ್ಜಿ ಹೊಡೆಯುತ್ತಾರೆಂಬ ಕಾರಣಕ್ಕಾದರೂ ಕುಡಿದೇ ಕುಡಿಯುತ್ತಿದ್ದಳು. ಸುಮಾರು ಏಳೆಂಟು ದಿನವಾದರೂ ಜ್ವರ ಬಿಡದಿದ್ದರೆ ಆಸ್ಪತ್ರೆಗೆ ಹೋಗಬೇಕಿತ್ತು. ಆಚೆಮನೆ ದೊಡ್ಡಮ್ಮ ಜ್ವರ, ಗಂಟಲುನೋವು ಬಂದರೆ ಈರುಳ್ಳಿ, ಶುಂಠಿ, ಕಾಳುಮೆಣಸು ಎಲ್ಲಾ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರು.” ನಂಗೆ ಗಂಟ್ಲ್ ನೋವ್. ನೀರುಳ್ಳಿ ಸುಟ್ಕಂಡ್, ಬೆಲ್ಲ ಹಾಯ್ಕಂಡ್ ತಿಂದೆ” ಅಂತ ಆಗಾಗ ಹೇಳುತ್ತಿದ್ದರು. ಅಜ್ಜಿಗೆ ಜ್ವರ ಬರುತ್ತಿದ್ದುದು ಕಮ್ಮಿ. ಬಂದರೆ ಮಾತ್ರ ಜೋರಾಗಿಬಿಡುತ್ತಿತ್ತು. ಅವರಿಗೆ ಜ್ವರ ಬಂದಾಗ ನಾಲಗೆ ರುಚಿ ಇರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಡುಗೆ ಚೆನ್ನಾಗಿಲ್ಲವೆಂದು ಅಮ್ಮನಿಗೆ ಬಯ್ಯುತ್ತಿದ್ದುದೂ ಇದೆ! ಕಟ್ಟಗಿನ ಮಿಡಿ ಉಪ್ಪಿನಕಾಯಿ ರಸವನ್ನು ನಾಲಗೆಗೆ ತಾಗಿಸಿಕೊಂಡು ಒಂದೆರಡು ತುತ್ತು ತಿಂದು ಬೇಡವೆಂದು ಎದ್ದುಹೋಗುತ್ತಿದ್ದರು. ಆಮೇಲೆ ಕಷಾಯ ಕುಡಿದು ಕಂಬಳಿ ಹೊದ್ದು ಮಲಗುತ್ತಿದ್ದರು. ಆದರೆ ಅಮ್ಮ ಹಾಗಲ್ಲ, ಜ್ವರ ಬಂದಾಗಲೂ ಸ್ವಲ್ಪ ಊಟ ಮಾಡಿ ಆಗಾಗ ಕಷಾಯ ಕುಡಿದು ಬೇಗನೆ ಗುಣ ಮಾಡಿಕೊಳ್ಳುತ್ತಿದ್ದರು.  ಮುದೂರಿ ಮತ್ತು ಆಸುಪಾಸಿನಲ್ಲಿ ನರ್ಸಿಹಾಂಡ್ತಿ, ಅಕ್ಕಣಿಬಾಯಿ ಮುಂತಾದ ಸೂಲಗಿತ್ತಿಯರಿದ್ದರು. ಪೈಕನಾಯ್,ಕ ಸುಬ್ಬನಾಯ್ಕ ಎಂಬ ನಾಟಿ ವೈದ್ಯರಿದ್ದರು.  ಜನರಿಗೆ ಮತ್ತು ದನಕರುಗಳಿಗೂ ಇವರುಮದ್ದು ಕೊಡುತ್ತಿದ್ದರು. ಗಂಟಿ (ದನಕರು)ಗಳಿಗೆ ಹುಷಾರಿಲ್ಲದಾಗ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಪೈಕ ನಾಯ್ಕ ಕೊಡುವ ಕಪ್ಪು ದ್ರವವನ್ನು ತಂದು ನೆಳಾಲಿಗೆ ಹಾಕಿ ಕುಡಿಸುತ್ತಿದ್ದರು. ಅವು ಹೆದರಿಕೆಯಲ್ಲಿ ಕುಣಿದಾಡುತ್ತಾ, ಅರ್ಧ ಉಗಿದು ಸೀನುತ್ತಾ ಹೇಗೋ ಸ್ವಲ್ಪ-ಸ್ವಲ್ಪ ನುಂಗಿ ಆರೋಗ್ಯರಕ್ಷಣೆ ಮಾಡಿಕೊಳ್ಳುತ್ತಿದ್ದವು!  ಬೆಕ್ಕುಗಳಾದರೆ ಹೀಗಲ್ಲ ; ತಮ್ಮಆರೋಗ್ಯದ ಬಗ್ಗೆ ತಾವೇ ಆದಷ್ಟು ಜಾಗ್ರತೆ ವಹಿಸುತ್ತಿದ್ದವು!!  ತಿಂಗಳಿಗೆರಡು ಸಲವಾದರೂ ಎಳೆಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತಿದ್ದವು. ಹಾಗೆ ಮಾಡಿದಾಗ ಅವುಗಳ ಹೊಟ್ಟೆಯಲ್ಲಿ ಅಜೀರ್ಣದ ಅಂಶ ಇದ್ದರೆ ಹೋಗಿಬಿಡುತ್ತದಂತೆ. ಬೆಕ್ಕುಗಳನ್ನು ನೋಡಿ ನಾಯಿಗಳೂ ಇದನ್ನು ಕಲಿತು ಅಳವಡಿಸಿಕೊಂಡಿದ್ದವು!  ಹುಲ್ಲು ತಿನ್ನುವುದು; ವಾಂತಿ ಮಾಡುವುದು!  ಇನ್ನು ಬೆಕ್ಕುಗಳು ಇಡೀ ದಿನ ಒಲೆಯ ಹತ್ತಿರ ಅಥವಾ ಅಕ್ಕಿಮುಡಿ, ಅಟ್ಟ ಹೀಗೆ ಮನೆಯ ಬೆಚ್ಚಗಿನ ಜಾಗದಲ್ಲೇ ಮಲಗುತ್ತಿದ್ದುದರಿಂದ ಜ್ವರ ಗಿರ ಬಾಧಿಸುವ ಚಾನ್ಸೇ ಇರಲಿಲ್ಲ !ಅದೇನೇ ಇರಲಿ, ಅಮ್ಮ ಬೆಕ್ಕುಗಳಿಗೆ ಆಗಾಗ ಅನ್ನಕ್ಕೆ ತೆಂಗಿನೆಣ್ಣೆ ಹಾಕುತ್ತಿದ್ದರು. “ಅದಕ್ಕೆ ಅದೇ ಔಷಧ ಯಾವುದೇ ಕಾಯಿಲೆ ಬರುವುದಿಲ್ಲ” ಎನ್ನುತ್ತಿದ್ದರು. ದಿನಾಲೂ ಕಾಯಿ ಹೆರೆಯುವಾಗ ತುರಿಯನ್ನು ಹಾಕುತ್ತಿದ್ದರು. ನಾಯಿಗಳಿಗೆ ಟೀ ಕಣ್ಣ್ (ಟೀ ಡಿಕಾಕ್ಷನ್) ಮಾಡಿ ಹಾಕುತ್ತಿದ್ದರು . ಅದನ್ನು ಕುಡಿದರೆ ಅವುಗಳಿಗೆ ಹುಳದ ಉಪದ್ರ ಇರುವುದಿಲ್ಲ ಎಂಬುದಾಗಿ ಜನರ ಅಭಿಪ್ರಾಯ. ಇನ್ನು ಬೆಕ್ಕು ,ನಾಯಿಗಳು ವಿಷದ ವಸ್ತು ತಿಂದದ್ದು ಗೊತ್ತಾದರೆ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಪ್ರಥಮ ಚಿಕಿತ್ಸೆ ಮಾಡುತ್ತಿದ್ದರು. ಬಿಸಿಲು- ಚಳಿ -ಮಳೆಯೆನ್ನದೆ ಗದ್ದೆಗಳಲ್ಲಿ ಕಷ್ಟದ ಕೆಲಸ ಮಾಡುವ ಹೋರಿಗಳಿಗೆ ವರ್ಷದ ಕೊನೆಯಲ್ಲಿ ಹದ್ನದ ದಿನ ಹಂಗಾರ್ ಕೆತ್ತೆಯ ಗಂಜಿ ಮಾಡಿ ಬಡಿಸುತ್ತಿದ್ದರು. ಅದು ಕಹಿಯಿರುತ್ತದೆಂದು  ಅದಕ್ಕೆ ಬೆಲ್ಲ ಕೂಡ ಹಾಕುತ್ತಿದ್ದರು. ಆ ದಿನ ಅವುಗಳಿಗೆ ಸ್ನಾನ ಮಾಡಿಸಿ ಮೈಗೆಲ್ಲಾ ಎಣ್ಣೆ ಹಚ್ಚುತ್ತಿದ್ದರು. ವರ್ಷವಿಡೀ ದುಡಿದ ಎಲ್ಲರಿಗೂ ಹದ್ನದ ದಿನ ಪಾಯಸದ ಊಟ ಇರುತ್ತಿತ್ತು. ಇದಾದ ನಂತರ ಹೋರಿಗಳಿಗೆ, ಶ್ರಮಿಕರಿಗೆ ಗದ್ದೆಯಲ್ಲಿ ಮಾಡುವ ಕಷ್ಟದ ಕೆಲಸದಿಂದ ಸ್ವಲ್ಪ ಸಮಯ ಬಿಡುವು.  ಹಲ್ಲು ನೋವು, ತಲೆನೋವು ,ಬೆನ್ನುನೋವು, ಕಾಲು ನೋವು, ಹಾವು ಕಚ್ಚಿದ್ದು , ಚೇಳು ಕಚ್ಚಿದ್ದು ಹೀಗೆ ಪ್ರತಿಯೊಂದಕ್ಕೂ ಹಳ್ಳಿಗರಲ್ಲಿ ಏನಾದರೊಂದು ಔಷಧದ ಮಾಹಿತಿ ಇರುತ್ತಿತ್ತು. ಕೆಲವರಂತೂ ಬಾಯಿ ತೆಗೆದರೆ ಆ ಸೊಪ್ಪು, ಈ ಬಳ್ಳಿ ,ಇನ್ಯಾವುದೋ ಬೇರು ಎಂದು ಮದ್ದುಗಳನ್ನು ಸೂಚಿಸುತ್ತಿದ್ದರು. ಇವುಗಳಲ್ಲಿ ಕೆಲವಂತೂ ಒಳ್ಳೇ ಪ್ರಭಾವ ಬೀರುತ್ತಿದ್ದವು. ‘ದಶಮೂಲಾರಿಷ್ಟ’ ಎಂಬ ಗಿಡಮೂಲಿಕೆಗಳ ಔಷಧವೊಂದು ಆಗ ಅಲ್ಲಿನ ಜನರ ಸರ್ವರೋಗ ನಿವಾರಕ ಎಂಬಂತಿತ್ತು!  ಅಜೀರ್ಣ ಅಥವಾ ಥಂಡಿ ಆದಾಗ ಮೊದಲು ಅದನ್ನೇ ಕುಡಿಯಲು ಕೊಡುತ್ತಿದ್ದರು. ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ, ಬೆಕ್ಕು -ನಾಯಿಗೂ ಸುಮಾರು ಕಾಯಿಲೆಗೆ ಇದೇ ಮದ್ದಾಗಿತ್ತು! ಇನ್ನು; ಹುಟ್ಟಿದ ಮಕ್ಕಳ ಎಳೆನಾಲಿಗೆಗೆ ‘ಬಜೆ’ ಹಾಕುತ್ತಿದ್ದರು . ಅಂದರೆ ಬಜೆ, ಹಿಪ್ಪಲಿ, ಜಾಯಿಕಾಯಿ ಎಂಬ ಮೂಲಿಕೆಗಳನ್ನು ತೇಯ್ದು ಚೂರು ಜೇನುತುಪ್ಪದೊಂದಿಗೆ ಸೇರಿಸಿ ನೆಕ್ಕಿಸುತ್ತಿದ್ದರು. ಇದನ್ನು ದಿನವೂ ಸಂಜೆ ಹೊತ್ತಿಗೆ ತಪ್ಪದೇ ಮಾಡುತ್ತಿದ್ದರು. ಮಗುವಿಗೆ ಹೊಟ್ಟೆ ನೋವು ಬಾರದೆ  ಚೆನ್ನಾಗಿ ನಿದ್ದೆ ಮಾಡುತ್ತದೆ ಮತ್ತು ಸ್ಪಷ್ಟವಾಗಿ ಮಾತು ಕಲಿಯುತ್ತದೆ ಎನ್ನುತ್ತಿದ್ದರು. ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಸಂಬಾರ್ ಬಳ್ಳಿ ಸೊಪ್ಪನ್ನು (ದೊಡ್ಡಪತ್ರೆ ) ಬಾಡಿಸಿ ರಸ ತೆಗೆದು ಕುಡಿಸುತ್ತಿದ್ದರು . ಇನ್ನೂ ಕೆಲವು ಸಂಬಾರ ಪದಾರ್ಥಗಳನ್ನು ದಿನನಿತ್ಯದ ಊಟದಲ್ಲಿ ಬಳಕೆ ಮಾಡುತ್ತಾ ಅವುಗಳಿಂದ  ಔಷಧೀಯ ಅಂಶಗಳನ್ನು ಪಡೆಯುತ್ತಿದ್ದರು. ಕೊತ್ತಂಬರಿ, ಜೀರಿಗೆ, ಮೆಂತ್ಯೆ, ಸಾಸಿವೆ, ಅರಿಶಿನ ಹಾಕದೆ ಸಾಂಬಾರು ಆಗುವುದಿಲ್ಲ. ಬೆಳ್ಳುಳ್ಳಿ, ಶುಂಠಿ ಕಾಳುಮೆಣಸು, ಜೀರಿಗೆ, ಓಮ, ಏಲಕ್ಕಿ, ಲವಂಗ ,ಚಕ್ಕೆ ,ಜಾಯಿಕಾಯಿ ಆಗಾಗ ಬಳಸುತ್ತಲೇ ಇರುತ್ತಿದ್ದರು. ತ್ರಾಣಿ ಮೊದಲಾದ ಸೊಪ್ಪಿನ ಕಷಾಯಗಳನ್ನು ಮಾಡಿ ಕುಡಿಯುತ್ತಿದ್ದರು.  ಆಸ್ಪತ್ರೆಗಳಾಗಲಿ, ವೈದ್ಯರ ಸಹಾಯವಾಗಲಿ ಸುಲಭಕ್ಕೆ ದೊರಕದ ಆ ಕಾಲದಲ್ಲಿ ಜನರಿಗೆ ಆದಷ್ಟು ಕಾಯಿಲೆಗಳೇ ಬರದಂತೆ ಆರೋಗ್ಯ ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅನಾರೋಗ್ಯವಾದಾಗ ಆಗುವ ಅನಾಹುತಗಳ ಬಗ್ಗೆ ಭಯವಿತ್ತು. ನಿಸರ್ಗಸಹಜ ಆಹಾರ  ಬಳಸುತ್ತಾ ಹುಷಾರಿಲ್ಲದಾಗ ಹಳ್ಳಿಯ ಮದ್ದು ಮಾಡುತ್ತಾ ಸುಧಾರಿಸಿಕೊಳ್ಳುತ್ತಿದ್ದರು. ಶುದ್ಧ ನೀರು ,ಗಾಳಿ ,ಆಹಾರ ಸೇವಿಸುತ್ತಿದ್ದುದರಿಂದ ಕಾಯಿಲೆ ಕಸಾಲೆಗಳೂ ಕಮ್ಮಿಯಿದ್ದವು . **************************

ಬೆಕ್ಕು -ನಾಯಿಗಳ ಹುಲ್ಲಿನೌಷಧ! Read Post »

ಇತರೆ, ಜೀವನ

ವೃದ್ಧಾಶ್ರಮಗಳ ಸುತ್ತ

ಚಿಂತನೆ ಅರುಣ ರಾವ್ ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು ಹೊರೆ ಎಂದು ಮಕ್ಕಳು ಎಂದೂ ಭಾವಿಸುತ್ತಿರಲ್ಲಿಲ್ಲ‌.   ತಮ್ಮ ತಂದೆ ತಾಯಂದಿರು ಅಜ್ಜ -ಅಜ್ಜಿಯರನ್ನು ನೋಡಿಕೊಳ್ಳುವುದನ್ನು ನೋಡುತ್ತಲೇ ಬೆಳೆದ ಮಕ್ಕಳು, ತಮ್ಮ ತಂದೆ ತಾಯಿಗೆ ವಯಸ್ಸಾದಾಗ ತಾವು ನೋಡಿಕೊಳ್ಳಬೇಕೆಂಬ ಸಹಜ ಭಾವನೆಯಿಂದಲೇ ಬೆಳೆದು ದೊಡ್ಡವರಾಗುತ್ತಿದ್ದರು.  ಅವರನ್ನು ನೋಡಿಕೊಳ್ಳುವುದು  ಮಕ್ಕಳ ಆದ್ಯ ಕರ್ತವ್ಯವಾಗಿ, ಬಲವಂತ ಮತ್ತು ದಾಕ್ಷಿಣ್ಯ ರಹಿತವಾಗಿ ಸರಾಗವಾಗಿ ಸಾಗಿ ಹೋಗುತ್ತಿತ್ತು. ಭಾರತೀಯ   ಸಮಾಜದ ಒಟ್ಟಾರೆ ಚಿತ್ರಣ ಇದೇ ಆಗಿರುವಾಗ ಎಲ್ಲರೂ ಈ ವ್ಯವಸ್ಥೆಯನ್ನು ಯಥಾವಿಧಿ ಒಪ್ಪಿಕೊಂಡು, ಅದರಂತೆ ತಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದ್ದರು.  ನಮ್ಮ ಪುರಾಣಗಳಲ್ಲಿ ಕಂಡು ಬರುವ ‘ಶ್ರವಣನ ಪಿತೃಭಕ್ತಿ’ ಕತೆಯೂ ಸಹ   ಇದನ್ನೇ ಒತ್ತಿಹೇಳುತ್ತದೆ.  ಶ್ರವಣಕುಮಾರನು ಕುರುಡರಾದ ತನ್ನ ತಂದೆ ತಾಯಿಯರ ಮನೋಭಿಲಾಷೆಯನ್ನು  ನೆರವೇರಿಸುವ ಸಲುವಾಗಿ,  ವಯಸ್ಸಾದ ಅವರನ್ನು  ಡೋಲಿಯಲ್ಲಿ ಕುಳ್ಳರಿಸಿಕೊಂಡು ಪುಣ್ಯಕ್ಷೇತ್ರಗಳಿಗೆ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸಿದ್ದು.  ನಂತರ ದಶರಥನ ಶಬ್ದವೇಧಿ ಬಾಣಕ್ಕೆ ಗುರಿಯಾಗಿ, ಸಾವಿನ ಅಂಚಿನಲ್ಲದ್ದಾಗಲೂ ಸಹ‌ ಅವನಿಗೆ ತನ್ನ ತಂದೆ-,ತಾಯಿಯರದೇ ಚಿಂತೆ. ಹಾಗಾಗಿ  ನಮ್ಮ ಇಂದಿನ ಯುವ ಜನಾಂಗ ಈ ಕತೆಯನ್ನು  ಮತ್ತೊಮ್ಮೆ ಕೇಳಬೇಕಿದೆ, ಮನವರಿಕೆ ಮಾಡಿಕೊಳ್ಳಬೇಕಿದೆ. ಏಕೆಂದರೆ  ಶ್ರವಣ ಕುಮಾರನು  ಸರ್ವಕಾಲಕ್ಕೂ, ಸರ್ವರಿಗೂ ಆದರ್ಶಪ್ರಾಯನಾಗಿದ್ದಾನೆ. ಉದಾಹರಣೆಗೆ ಸ್ವತ: ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರೇ ಈ ಕಥೆಯನ್ನು ಓದಿ, ಶ್ರವಣನಿಂದ ಪ್ರಭಾವಿತರಾಗಿ, ಕಾಯಿಲೆ ಪೀಡಿತರಾದ  ತಮ್ಮ ತಂದೆಯ ಸೇವೆಯನ್ನು  ಅವರ ಕೊನೆ ಉಸಿರಿರುವವರೆಗೂ ಮಾಡಿದರು.. ಆದರೆ  ಇಂದು ಎಲ್ಲವೂ ತಿರುಗು ಮರುಗಾಗಿದೆ. ಮಕ್ಕಳಿಗೆ ತಮ್ಮ ತಂದೆ ತಾಯಿ ತಮ್ಮ ಜೊತೆಯಲ್ಲಿದ್ದರೆ ಸರಿ‌ಬೀಳದು.  ಇದಕ್ಕೆ ಹಲವಾರು ಕಾರಣಗಳಿರಬಹುದು. ಅಜ್ಜ, ಅಜ್ಜಿಯರ  ಮುದ್ದಿನಿಂದಾಗಿ ತಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದೋ, ಸಂಜೆಯಾದರೆ ಧಾರಾವಾಹಿಗಳನ್ನು ನೋಡುವುದರಿಂದ ತಮ್ಮ ಮಕ್ಕಳು ಓದುತ್ತಿಲ್ಲವೆಂದೋ, ಅವರಿಂದಾಗಿ‌ ಮನೆಯಲ್ಲಿ ಪದೇಪದೇ ಜಗಳಗಳಾಗುತ್ತಿವೆಯೆಂದೋ  ಹೀಗೆ ಹತ್ತು ಹಲವು ಕಾರಣಗಳನ್ನು ನೀಡಿ,  ಮೊಮ್ಮಕ್ಕಳು ಅಜ್ಜಿ ಅಥವಾ ತಾತ ತಮ್ಮ  ಜೊತೆಯಲ್ಲಿ, ತಮ್ಮ ಮನೆಯಲ್ಲಿಯೇ  ಇರಬೇಕೆಂದು ಹಠ ಮಾಡಿ, ಅತ್ತು ಕರೆದು ಗೋಳಾಡಿದರೂ, ಮಕ್ಕಳ  ಮಾತನ್ನು‌ ಕೇಳದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು, ತಮ್ಮ ಜೊತೆಯಲ್ಲಿಟ್ಟುಕೊಳ್ಳದೆ ಬೇರೆ ಮನೆ ಮಾಡಿ ಇಡುವುದು  ವಿಪರ್ಯಾಸವೇ ಸರಿ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ, ಮೊಮ್ಮಕ್ಕಳನ್ನು ಆಡಿಸುತ್ತಾ, ಕಾಲ ಕಳೆಯುವ ಕನಸನ್ನು ಹೊತ್ತ ವೃದ್ಧ ಜೀವಗಳು ವೃದ್ಧಾಶ್ರಮಕ್ಕೆ ಹೋಗಲು,   ತಾವೇ ಪ್ರತ್ಯೇಕವಾಗಿರಲು ಅದೆಷ್ಟು ನೊಂದುಕೊಂಡೀತೋ?   ಇಂದು ಇದು ಕೇವಲ  ಬಡವ ಹಾಗೂ ಮಧ್ಯಮ ತರಗತಿಯವರ ಸಮಸ್ಯೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳ ಭವ್ಯ ಭವಿಷ್ಯದ ಬಗೆಗೆ ಕನಸು ಹೊತ್ತ ಪೋಷಕರು ಅವರಿಗಾಗಿ ಹಗಲಿರುಳು ಶ್ರಮಿಸಿ ಕಷ್ಟ ಪಡುತ್ತಾರೆ.  ಓದಿದ ಮಕ್ಕಳು  ಉದ್ಯೊಗಗಳನ್ನು ಅರಸುತ್ತಾ, ವಿದೇಶಕ್ಕೆ ಹೋಗುತ್ತಾರೆ. ನಂತರ ಅಲ್ಲಿಯೇ ಶಾಶ್ವತವಾಗಿ  ನೆಲೆನಿಂತು,  ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಪೋಷಕರಿಗೆ ಕಳುಹಿಸಿ ಕೊಡುವುದರಲ್ಲಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಆದರೆ  ಈ ಹಣ ಯಾವತ್ತಿಗೂ ಇವರನ್ನು ಪ್ರೀತಿಯಿಂದ ಮಾತನಾಡಿಸಲು ಸಾಧ್ಯವೇ?   ಇವರು ಅನಾರೋಗ್ಯ ಪೀಡಿತರಾದಾಗ  ಸೇವೆ ಮಾಡಲು ಸಾಧ್ಯವೇ? ಅವರು ಕಾಯಿಲೆ ಬಿದ್ದಾಗ ಅಕ್ಕರೆಯಿಂದ ಆರೈಕೆ ಮಾಡಲು ಸಾಧ್ಯವೇ?  ವಯಸ್ಸಾದಂತೆ ಮುದಿ ಜೀವಗಳು ಇತರರೊಂದಿಗೆ  ಮಾತುಕತೆಗಾಗಿ ಹಂಬಲಿಸುತ್ತಿರುತ್ತದೆ.ಆದರೆ ಮಕ್ಕಳಿಗಾಗಲೀ, ಮೊಮ್ನಕ್ಕಳಿಗಾಗಲೀ ಇವರೊಡನೆ ಮಾತನಾಡಲು‌ ಪುರುಸೊತ್ತೆಲ್ಲಿಯದು?  ಈಗ‌ಂತೂ ಮಗುವನ್ನು‌ ಯಾವ ಶಾಲೆಗೆ ಸೇರಿಸಿದಿರಿ ಎನ್ನುವಷ್ಟು ಸಹಜವಾಗಿ, ‘ ನಿಮ್ಮ ತಂದೇನ ಯಾವ ವೃದ್ಧಾಶ್ರಮಕ್ಕೆ ಸೇರಿಸಿದ್ರಿ? ಎಂದು ಕೇಳಲಾಗುತ್ತಿದೆ.ಪಟ್ಟಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ಥಿತಿ ವಿಭಿನ್ನವಾಗಿದೆ.  ವಯಸ್ಸಾದ ತಂದೆ ತಾಯಂದಿರು ಹಳ್ಳಿ ಗಳಲ್ಲಿ ವಾಸಿಸುತ್ತಿದ್ದರೆ, ಅವರ ಮಕ್ಕಳು ಕೆಲಸದ ಕಾರಣದಿಂದಲೋ ಮತ್ತೊಂದೋ ಆಗಿ ನಗರಗಳಲ್ಲಿ ನೆಲೆಸಿರುತ್ತಾರೆ.  ವರ್ಷದಲ್ಲಿ ಯಾವಾಗಲೋ ಒಮ್ಮೊಮ್ಮೆ ರಜಾ ದೊರೆತಾಗ ಊರಿಗೆ ಹೋದರೆ ಹೋದರು; ಇಲ್ಲದಿದ್ದರೆ ಇಲ್ಲ.  ತಮ್ಮ ಇಡೀ ಜೀವಮಾನ ಅದರಲ್ಲೂ ಯೌವ್ವನದ ಬಹು ಪಾಲು ಕುಟುಂಬದ, ಮಕ್ಕಳ ಏಳಿಗೆಗಾಗಿ ದುಡಿದು ಹಣ್ಣಾದ ಜೀವಗಳು ವೃದ್ಧಾಶ್ರಮದ ಬಾಗಿಲ ಬಳಿ ಕುಳಿತು ತಮ್ಮ ಮಕ್ಕಳು ಎಂದಿಗೆ ಬರುತ್ತಾರೋ?  ಎಂದು ಎದಿರು ನೋಡುವ ದೃಶ್ಯವಂತೂ ಕರುಳಿರಿಯುವಂತಹುದು.   ಹಾಗಿದ್ದರೂ  ವೃದ್ಧಾಶ್ರಮಗಳಲ್ಲಿನ ವಾಸ್ತವ್ಯ ಅಷ್ಟೇನೂ ಕಷ್ಟಕರವಾದುದಲ್ಲ. ಏಕೆಂದರೆ ಅಲ್ಲಿ ಅವರಿಗೆ ಅವರದೇ ವಯೋಮಾನದವರ ಜೊತೆ ಬೆರೆಯುವ, ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಅವಕಾಶ ಇಲ್ಲದಿಲ್ಲ. ಕಾಲಕಾಲಕ್ಕೆ ಊಟ, ನಿದ್ದೆ, ವಿಶ್ರಾಂತಿ, ಔಷಧ ಎಲ್ಲವೂ ದೊರಕುತ್ತದೆ. ಅದರೂ ಈ ಸೌಕರ್ಯಗಳು ಸ್ವಂತ ಮಕ್ಕಳ ಜೊತೆ ಇರುವ ನೆಮ್ಮದಿಯನ್ನು  ಸುಖ-ಸಂತೋಷವನ್ನು  ಎಂದಿಗೂ ಕೊಡಲಾಗದು. ” ದೋಸೆ ಮಗುಚಿ  ಹಾಕಿದಂತೆ”ಎನ್ನುವ ಗಾದೆ ಮಾತಿನಂತೆ   ಅಜ್ಜ,ಅಜ್ಜಿಯರನ್ನು ವೃದ್ಧಾಶ್ರಮದಲ್ಲಿಯೇ ನೋಡಿ ಅಭ್ಯಾಸವಿರುವ ಇವರ ಮಕ್ಕಳು  ತಮ್ಮ ತಂದೆ-ತಾಯಿಯರಿಗೆ ವಯಸ್ಸಾದ ಕಾಲಕ್ಕೆ ಅವರನ್ನೂ ಸಹ ವೃದ್ಧಾಶ್ರಮಕ್ಮೆ ಕಳುಹಿಸುವುದು ನೂರಕ್ಕೆ ನೂರರಷ್ಟು ನಿಜ.  ಏಕೆಂದರೆ ಮಕ್ಕಳು ನಾವು ಹೇಳಿಕೊಟ್ಟು ಕಲಿಯುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ ಅಲ್ಲವೇ? ********************

ವೃದ್ಧಾಶ್ರಮಗಳ ಸುತ್ತ Read Post »

ಇತರೆ

ಯಕ್ಷಿಣಿ ಗಾನ

ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ ಪೂರ್ಣಿಮಾ ಸುರೇಶ್ ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು  ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ.  ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ  ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು.    ರಾತ್ರಿ ನೋಡಿದ ಬಯಲಾಟ,ಸಂಜೆ ಓದಿದ ಚಂದಮಾಮದ ಕಥೆಗಳನ್ನು ಕಣ್ಣೊಳಗೆ ತುಂಬಿ, ಕಲ್ಪನೆಯನ್ನು ಮತ್ತಷ್ಟು ಹಿಗ್ಗಿಸಿ, ಒಬ್ಬ ಸುಂದರ ರಾಜಕುಮಾರಿ,ಒಬ್ಬ ರಾಕ್ಷಸ,ದೂರದಲ್ಲಿ ಒಬ್ಬ ರಾಜಕುಮಾರನನ್ನು ಮನದ ಭಿತ್ತಿಯಲ್ಲಿ ಚಿತ್ರಿಸಿ, ಅದರ ನಶೆಗೆ ದೇಹ,ಮನಸ್ಸಿನ ಹೆಜ್ಜೆಗಳು ಗೆಜ್ಜೆ ಕಟ್ಟಿಕೊಳ್ಳುತ್ತಿದ್ದವು. ಇವುಗಳ ಭಾರ ಇಳಿಸಿಕೊಳ್ಳುವ ಆತುರ. ಸಿಕ್ಕಿಸಿಕ್ಕಿದ ಗೆಳತಿಯರನ್ನು ಎಳತಂದು ಮನೆಯ ಪಕ್ಕದ ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳ್ಳಿರಿಸಿ ಕಲ್ಪನೆಯ ರಾಜಕುಮಾರಿಯಿಂದ ಕಥೆ ಆರಂಭಗೊಂಡು ರಾಕ್ಷಸನ ಎಳತಂದು ರಾಜಕುಮಾರ ಬಂದು. ರಾಕ್ಷಸನ ಕೊಂದು,ಅವಳನ್ನು ಮದುವೆಯಾದ ಎಂಬಲ್ಲಿಗೆ ಕಥೆಗೊಂದು ಚುಕ್ಕಿ ಬಿದ್ದು..ಮೈ ಭಾರ ಇಳಿಸಿಕೊಂಡು ಮನದ ಕೂಸನ್ನು ಅವರ ಮಡಿಲಿಗಿಟ್ಟ ಸಂತೃಪ್ತಿ.    ಒಬ್ಬಳೇ ಕೂತಾಗಲೂ ಮರುದಿನ ರೂಪುಗೊಳ್ಳುವ ರೂಪಸಿ ರಾಜಕುಮಾರಿಗೆ ಅಷ್ಟೇ ಸುಂದರ ಹೆಸರಿಡುವ ತಾಳಲಾಗದ ಚಡಪಡಿಕೆ.   ಈ ಚಕ್ರಬಂಧದಲ್ಲಿ ಇರುವಾಗ ಬಲು ದೊಡ್ಡ ಸಮಸ್ಯೆಯೊಂದು ನನ್ನ ಇರಿಯಲು ಆರಂಭಿಸಿತ್ತು. ನನಗಿಂತ ನಾಲ್ಕು ವರ್ಷ ಕಿರಿಯಳಾದ ತಂಗಿ ಅಮ್ಮನ ಮುದ್ದಿನ ಮಗಳು. ಸಹಜವಾಗಿ ಮೊದಲ ಪ್ರಾಧಾನ್ಯತೆ ಅವಳಿಗೇ ಸಿಗುತ್ತಿತ್ತು. ಜೊತೆಜೊತೆಗೆ ನನ್ನ ಅವಳ ಜಗಳದ ನಡುವೆ ಅವಳ ಗೆಲುವಿಗೆ ಸಿಕ್ಕುವ ಬ್ರಹ್ಮಾಸ್ತೃವೆಂದರೆ ಅಮ್ಮ. ಅಮ್ಮನ ಪ್ರೀತಿಗಾಗಿ  ನಮ್ಮಿಬ್ಬರ ಕಾದಾಟ, ಆಕೆಗೆ ಕೆಲಸದ ನಡುವೆ, ಕಿರಿಕಿರಿ ಉಂಟು ಮಾಡುತ್ತಿತ್ತು. ಇದರಿಂದ ದೊಡ್ಡವಳಾದ ನಾನು ಪೆಟ್ಟು ತಿನ್ನುತ್ತಿದ್ದ ಸಂದರ್ಭಗಳೂ ಕಡಿಮೆಯೇನಿಲ್ಲ. ಈ ಸೋಲಿನ ನೋವು ತಂಗಿಯ ಜೊತೆಜೊತೆಗೆ, ಅಮ್ಮನ ಜೊತೆಗೂ ವಿರಸದಂತಹ ಅನಾಮಿಕ ಭಾವ ಒಂದನ್ನು ನನಗೆ ಪರಿಚಯಿಸಿತು.  ಯಾವುದನ್ನೂ ಬಹಳ ಕಾಲ ನನ್ನ ಜೊತೆ ಅಡಗಿಸಲಾಗದ ನಾನು ಇದರಿಂದ ಮುಕ್ತಿ ಹೊಂದಬೇಕಿತ್ತು. ಇದನ್ನೆಲ್ಲ ಕಥೆಯ ಒಳಗೆ ತುಂಬುವ ಚಾಕ್ಯತೆ ಆಗಿನ್ನೂ ಕಲಿತಿರಲಿಲ್ಲ. ಕಥೆಯೆಂದರೆ ರಾಜಕುಮಾರಿಗೇ ಸೀಮಿತ!. ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಹರಕು ಪರಕು ಫ್ರಾಕು ಧರಿಸಿ,ಕೆದರಿದ,  ನನ್ನ ಪುಟ್ಟ ತಲೆಗೆ ಮೀರಿದ ಕಥಾ ವಸ್ತುವಿದು. ಆದರೆ ತಿಂಡಿ, ನಿದ್ದೆ, ಪ್ರೀತಿ ಎಲ್ಲವೂ ಅಮ್ಮನಿಂದ ಮೊದಲು ಸಿಗಬೇಕಾದದ್ದು ತನಗೇ ಎಂಬ ಹಕ್ಕೊತ್ತಾಯ.  “ದಿನವೂ ಏನು ನಿನ್ನ ರಂಪ. ನೀನು ದೊಡ್ಡವಳು. ಅರ್ಥ ಮಾಡಿಕೊಳ್ಳಬೇಕು” ಎಂಬ ಅಮ್ಮನ ಸಮಾಧಾನದ ಮಾತುಗಳು. ಹೊಸದೊಂದು ಕಿಚ್ಚಿನ ಕಿಡಿ ಮನದೊಳಗೆ ಹಚ್ಚಿತ್ತು . ಅಮ್ಮನ ಮೇಲೆ ಕೋಪ,ತುಂಟಿ ತಂಗಿ ಮೇಲೆ ಹಠ ಎಲ್ಲವನ್ನೂ ಹೊರಹಾಕಿ ಮತ್ತೆ ನನ್ನ ರಾಜಕುಮಾರಿ ಕಥೆ ತಯಾರಿಗೆ ಹೋಗಬೇಕು. ಏನು ಮಾಡುವುದು. ಇಂತಹ ಮಹಾನ್ ದುಃಖ ಯಾರಿಗೂ ತಿಳಿಯುತ್ತಿರಲಿಲ್ಲ. ಏನು ಮಾಡುವುದು? ಆಗಲೇ ಹುಟ್ಟಿತ್ತು ಕವನ. ಅದು ಬಾಲಕಿ ಕುಂತಿಗೆ ಹುಟ್ಟಿದ  ಕರ್ಣ ನಂತಹಾ ಮಗು. ಹಳೇ ಪುಸ್ತಕ ಒಂದರಲ್ಲಿ ಗೀಚಿದ್ದು.”ಅಮ್ಮ ಪ್ರೀತಿಸುವುದಿಲ್ಲ” ಎಂಬ ಭಾವಾರ್ಥದ ನನ್ನ ಮೊದಲ ಕವನ. ಜೊತೆಗೆ ದಿನಾಂಕ ನಮೂದಿಸಿದ್ದೆ. ಅದು ಯಾರಿಗೂ ಕಾಣಲಿಲ್ಲ , ಕಾಣುವ ಪುಟದಲ್ಲಿ ದಾಖಲಾಗಲೂ ಇಲ್ಲ. ಆ ಹಳೆಯ ಪುಸ್ತಕ ಬಹು ಕಾಲ ಇದ್ದು‌ ಕೊನೆಗೆಲ್ಲೋ ಮಾಯವಾಯಿತು. ನಂತರ ಮತ್ತೆ ರಾಜಕುಮಾರಿಯನ್ನು ಪೋಷಿಸಿ ಹೊರತಂದು ಸ್ನೇಹಿತರ ಎದುರು ತಂದು ನಿಲ್ಲಿಸುವ ಕಥನ ಕಾಯಕವೇ ಮುಂದುವರೆದಿತ್ತು.    ಕವನ,ಕವಿತೆ,ಬುದ್ದಿವಂತರಿಗೆ ಮಾತ್ರ ಸರಿ. ಕವಿಗಳೆಂದರೆ ಅದ್ಭುತವೇನೋ ಕಂಡಂತೆ: ಆ ಕವಿತೆ, ನಿಜವಾದ ಕವಿತೆ ಆಗಿತ್ತೇ..ತಿಳಿಯದು.  ಆದರೆ ನಂತರದ ದಿನಗಳಲ್ಲಿ ಅಮ್ಮನಿಗೆ  ಅದನ್ನು ತೋರಿಸಿ ಅವಳು ನಕ್ಕು ನನ್ನ ಪೆದ್ದು ನಡವಳಿಕೆಗಾಗಿ,  ನಗಲು  ಬಹಳ ಕಾಲ ಕಾರಣವಾಗಿತ್ತು. ಮುಂದೆ ಕವಿತೆ ಹೇಗಿರಬೇಕು? ನಾನೂ ಕವಿತೆ ಬರೆಯಲು ಸಾಧ್ಯವೇ ಎಂದು ಯೋಚನೆಗೆ ಒಳಗಾಗಿದ್ದೆ. ಕವಿತೆ ಬರೆಯುವವರೆಲ್ಲ ಮೇಧಾವಿಗಳು. ಅದು ನನ್ನಂತಹ ಸಾಧಾರಣ ಮಂಡೆಯ ಹೆಣ್ಣಿಗೆ ಒಲಿಯುವಂತಹದಲ್ಲ. ಹೆಚ್ಚೆಂದರೆ ಕಥೆ ಬರೆಯಬಹುದು ಎಂದು ನನ್ನ ಕನಸಿಗೆ ಕಥೆಯ ಆಹಾರ ನೀಡಿ ಸಮಾಧಾನ ಮಾಡಿದ್ದೆ.   ಆದರೂ ಹಳೇ ನೋಟ್ ಪುಸ್ತಕಗಳಲ್ಲಿ ನನಗೂ ಸರಿಯಾಗಿ ಅರ್ಥ  ಆಗದ,ಬೇರೆಯವರಿಗೆ ಏನೆಂದೇ ತಿಳಿಯಲಾಗದ ಸಾಲುಗಳನ್ನು ಗೀಚಿ ಖುಷಿ ಪಟ್ಟದ್ದೂ ಇದೆ. ಆದರೆ ಇದಾವುದೂ ಕವಿತೆಯ ದರ್ಜೆಗೆ ಏರದೆ, ಕವಯತ್ರಿ ನಾನು ಆಗಲೇ ಇಲ್ಲ.   ಕಾಲೇಜಿನಲ್ಲಿ ನಮ್ಮ ಕನ್ನಡ ಪ್ರಾಧ್ಯಾಪಕರು ನಿನ್ನ ಭಾಷೆ ಚೆನ್ನಾಗಿದೆ. ಕವನ ಬರೆಯುತ್ತೀಯಾ..ಎಂದಾಗ ಬಾಂಬ್ ಸ್ಪೋಟವಾದಂತೆ ಬೆಚ್ಚಿ,ಅಂಜಿ ಓಡಿದ್ದೆ. “ಅಬ್ಬ! ಕವನ ? ನಾನು ಹೇಗೆ ಬರೆಯೋದು..ಅದು ನನಗಲ್ಲ.”    ಕೊನೆಗೂ ಒಮ್ಮೆ ಕವಿತೆ ನನ್ನಲಿ ಬಂದು ಗುನುಗುನು ಗುನುಗಿ ಲಹರಿಯೊಂದನ್ನು ತೇಲಿಸಿ ಬಿಟ್ಟಳು. ನಮ್ಮ ಮನೆಯ ಬಳಿ ಒಂದು ಮನೆಯಿತ್ತು. ಕೇವಲ ಹೆಂಗಸರಿದ್ದ ಮನೆ. ಸುಂದರ ಮಹಿಳೆಯರು. ನನಗೋ ವಾತ್ಸಲ್ಯದ ಮಹಾಪೂರ ಹರಿಸಿದವರು. ಅವರನ್ನು ಅಜ್ಜಿ,ದೊಡ್ಡಮ್ಮ,ಸಣ್ಣಜ್ಜಿ ಅಂತೆಲ್ಲ ಕರೆಯುತ್ತಿದ್ದೆ. ಬಾಲ್ಯ ಬಸಿದು ಹರೆಯ ಅಪ್ಪಿ ಯೌವನ ಕೂತು ಒಳಗೊಳಗೆ ಸಂಚಲನ ಮೂಡಿಸಿದ ಬಳಿಕ ಅವರು ನನ್ನ ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಕೂತು ವೇದನೆ, ನೋವಿನ, ಪ್ರೇಮದ ಬಿಗಿದ ತಂತಿ ಎಳೆದಂತೆ .ಯಾವುದೋ ತಳಮಳ. ಬರೆಯಬೇಕು..ಹೇಗಾದರೂ..ಯಾರಿಗೂ ತಿಳಿಯಬಾರದು..ಆದರೂ ಆ ಅವರ ನೋವು ದಾಖಲಾಗಬೇಕು. ಆಗ ತಿಳಿವಿನಾಚೆಯಿಂದ ಕೆಲವು ಸಾಲುಗಳು ಹೊಳೆದು ಪುಟಗಳಲ್ಲಿ ದಾಖಲಾಗಿದ್ದವು. ಬರೆದು ನಾನೇ ಓದಿ ಕಣ್ಣೀರಾಗುತ್ತಿದ್ದೆ.    ಪ್ರೇಮ,ಪ್ರೀತಿ ಹರೆಯದ ಕನಸು ನನ್ನ ಕವಿತೆಗೆ ವಸ್ತುವಾಗದೆ, ದೇವದಾಸಿಯರು ಎಂದು ಕರೆಸಿಕೊಳ್ಳುವ ಆ ನಾಲ್ಕು ಅಮ್ಮಂದಿರ ಒಡಲ ಬಿಸುಪು ಕವನವಾಗಿತ್ತು.  ಅಂತರಂಗದ ಬಯಲಾಟ ಮಬ್ಬಾದ ಕಣ್ಣಂಗಳದಲಿ ಹಿತ್ತಲ ಬಯಲಾಟ ಪಾತ್ರಧಾರಿಗಳು ಅದಲು ಬದಲು ಪ್ರಸಂಗ ಮಾತ್ರ ಅದೇ.. ಸುಕ್ಕುಗಟ್ಟಿದ ಕೆನ್ನೆಗಳಲೂ ಮೂಡಲ ಮನೆಯ ರಂಗು ಕರಗುತ್ತಿದ್ದ ಬಣ್ಣಗಳಲಿ ಉಳಿದಿಹುದು ಕೆಂಪೊಂದೇ ಜೋತು ಬಿದ್ದ ಪ್ರಾಯ ಬಾಲ್ಯ ಯೌವನಗಳ ಯುಗಾದಿ ಮರೆತು ಬಿಟ್ಟ ಸಿಹಿಯೂಟ ಅಂಟು ಜಾಡ್ಯ ಕಹಿಯೊಂದೇ ಸಡಿಲಿಸಿದ ತೋಳುಗಳಲಿ ದಂಡ ನಾಯಕರ ಗುರುತು ಕನಸುಗಳ ಅಚ್ಚಿನಲಿ ಬಡ್ಡಿಗಳಿಸುತಿಹ ವೇದನೆ ಕುಸಿಯುತಿಹ ಕಾಲುಗಳು ನವಿಲ ಗೆಜ್ಜೆ  ಕುರುಹು ಗಂಡು ಹೆಜ್ಜೆಯ ಭಾರಕೆ ಧರೆಗಂಟಿದ ದೇಹ ಮೌನವೃತಕೆ ವಾಲುತಿಹ ಮಸ್ತಿಷ್ಕದಲಿ ಕುರುಕ್ಷೇತ್ರದ ಶಂಖನಾದ ಕೈ ಚೆಲ್ಲುತಿಹ ಸಾರಥಿ ವಿಜಯ ದುಂಧುಬಿ ಎಲ್ಲಿಯೋ.. **     **   **  ** ಅದನ್ನು ಓದಿದ ಹಿರಿಯ ಕವಯತ್ರಿಯೊಬ್ಬರು ಕೇಳಿದ್ದರು ” ಇದೇನೇ,ಈ ಹರೆಯದಲ್ಲಿ ಇಂತಹ ಕವನ ಬರೆದಿರುವೆ. ನಿನಗೆ ಹೊಂದುವ,ನಿನ್ನ ವಯಸ್ಸಿನ ಭಾವನೆಗಳನ್ನು ಬರಿ. ಇದೆಲ್ಲಿ ಸಿಕ್ತು.” ನಸುನಕ್ಕಿದ್ದೆ.  ಅಂತರಂಗದಲ್ಲಿ ಪಟ್ಟಾಗಿ ಕೂತ ಅನುಭೂತಿ ಹಾಗೆ ಸಾರ್ವಜನಿಕವಾಗಿ ಬಿಡಿಸಿಡಲಾದೀತೇ.. ಅದು ಅನನ್ಯ. ಅದರ ಸಾರವಷ್ಟೇ ಬಸಿದು ಬೇರೊಂದು ಬಗೆಯಲ್ಲಿ ಅಕ್ಷರದ ಬಸಿರಲ್ಲಿಟ್ಟು ಹಿತದ ನೋವಿನಲ್ಲಿ ಅರಳಿಸುವ ಯತ್ನ ಮಾಡಬಹುದು. ಆ ಕವನ ನೋವಿನ ಜೊತೆಜೊತೆ ಆಪ್ತವಾದ ನೆನಪುಗಳೊಂದಿಗೆ “ನನ್ನ ಮೊದಲ ಕವನ” ಎಂಬ ಮುದ್ದೂ ಜೊತೆ ಸೇರಿಕೊಂಡಿದೆ.    ಮುಂದೆ  ಕವನ ಹೇಗಿರುವುದು..ಇದು ಕವನ ಆಗಿದೆಯೇ..ನಾನು ಬರೆದಿರುವುದು ಕವಿತೆಯೇ ಎಂಬ ಗೊಂದಲಗಳೊಂದಿಗೆ ಕವಿತೆ ಹಾಗೂ ನಾನು ಜೊತೆಜೊತೆಯಾಗಿ ಬದುಕು ಸಾಗಿಸುತ್ತಿದ್ದೇವೆ. ****************************

ಯಕ್ಷಿಣಿ ಗಾನ Read Post »

ಇತರೆ, ಜೀವನ

ಬಸವಣ್ಣನಿಗೊಂದು ಪತ್ರ

ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು. ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ. ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

ಬಸವಣ್ಣನಿಗೊಂದು ಪತ್ರ Read Post »

ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ನಾಗರೇಖಾ ಗಾಂವಕರ್ ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ ಹುಳವಾಗಿದ್ದೆ. ಕಾಲೇಜಿನ ಅಭ್ಯಾಸಗಳ ಜೊತೆ ಕಾಲೇಜಿನ ಗ್ರಂಥಾಲಯಗಳಲ್ಲಿ ಸಿಗುವ ಬಹುತೇಕ ಪ್ರೇಮ ಕಾದಂಬರಿಗಳು, ವಾರಕ್ಕೊಂದಾವರ್ತಿ ಬದಲಾಯಿಸುತ್ತಾ, ಪಾಠ ಪ್ರವಚನದ ಕಾಲದಲ್ಲಿ ಪಠ್ಯದ ಪುಸ್ತಕದ ಒಳಗೆ ಬೆಚ್ಚಗೆ  ಕಾದಂಬರಿಗಳು ಕೂತಿರುತ್ತಿದ್ದ್ದ್ತವು. ತಲೆ ಒಮ್ಮೆ ಪ್ರಾದ್ಯಾಪಕರ ಉಪನ್ಯಾಸದ ಕಡೆ ನೋಡುವಂತೆ ಮೇಲೆತ್ತಿದರೆ, ಇನ್ನೆರಡು ಪಟ್ಟು ಹೆಚ್ಚು ವೇಳೆ ಕೆಳಗೆ ಕೂತಿದ್ದ ಕಾದಂಬರಿಯ ಪಾತ್ರಗಳಲ್ಲಿ ಮುಳುಗಿರುತ್ತಿತ್ತು. ಅಷ್ಟಕ್ಕೂ ಕಲಾ ವಿಭಾಗದ ನಮಗೆ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕಾಲೇಜು ಕ್ಲಾಸುಗಳ ಬಂಕ್ ಮಾಡಿ ಮನೆಯಲ್ಲಿ ಮನೆಗೆಲಸ ಮಾಡಿ, ಓದಿದರೂ ಪ್ರಥಮ ದರ್ಜೆಗೇನೂ ಕೊರತೆ ಆಗುತ್ತಿರಲಿಲ್ಲ. ಇಂತಿಪ್ಪ ದಿನಗಳಲ್ಲಿಯೇ ಅದೆಷ್ಟೋ ಸಾಯಿಸುತೆ, ಉಷಾ ನವರತ್ನರಾವ್, ಯಂಡಮೂರಿ ಇತ್ಯಾದಿ ಇತ್ಯಾದಿ ಲೇಖಕರ ಲೌಕಿಕ ಕಾದಂಬರಿಗಳ ಓದಿ ಮುಗಿಸಿದ್ದೆ. ಇದಕ್ಕೂ ಮುಂಚೆ ಹೈಸ್ಕೂಲು ಕಲಿಯುವಾಗ ಹಳ್ಳಿಯಿಂದ ಹೋಗಿ ಬರುವುದು ಕಷ್ಟವೆಂದು ಬಾಡಿಗೆ ಮನೆಯೊಂದರಲ್ಲಿ ನಾವು ಅಣ್ಣ ಅಕ್ಕ ತಂಗಿ  ಎಲ್ಲರೂ ಸೇರಿ ಒಟ್ಟಿಗೆ  ಬಾಡಿಗೆ ಮನೆಯೊಂದರಲ್ಲಿ  ಇರುತ್ತಿದ್ದೆವು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಳಿದವರ ಪರೀಕ್ಷೆಯೆಲ್ಲ ಮುಗಿದು ಮನೆಗೆ ಹೋಗಿದ್ದರೆ, ನಾನು ಒಬ್ಬಳೇ ಬಾಡಿಗೆ ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಉಣ್ಣುತ್ತಾ  ಪರೀಕ್ಷೆ ಬರೆಯುತ್ತಿದ್ದೆ. ಅದು ಗಣಿತ ಪರೀಕ್ಷೆಯ ಹಿಂದಿನ ದಿನ. ಓದುತ್ತಾ ಕೂತವಳಿಗೆ ಅಕ್ಕ ತಂದಿಟ್ಟಿದ್ದ ಕಾದಂಬರಿಯೊಂದು ಕಣ್ಣಿಗೆ ಬಿದ್ದಿತ್ತು. ಅದು ತ.ರಾ.ಸು ಅವರ ಚಂದವಳ್ಳಿಯ ತೋಟ ಮಾರನೇ ದಿನ ಗಣಿತ ಪರೀಕ್ಷೆ.  ಕಣ್ಣಿಗೆ ಕಂಡ ಕಾದಂಬರಿಯನ್ನು ಬಿಡಲು ಮನಸ್ಸಾಗದೇ ಲೆಕ್ಕ ಬಿಡಿಸುವುದು ಅರ್ಧಮರ್ಧ ಮಾಡಿ ಕಾದಂಬರಿ ಹಿಡಿದವಳು ಹನ್ನೆರಡುವರೆಗೆ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಮಾರನೇ ದಿನ ಮತ್ತೆ ಪರೀಕ್ಷೆ ಬರೆದಿದ್ದೆ. 45 ಅಂಕಗಳಷ್ಟೇ ಗಣಿತಕ್ಕೆ ಪಡೆದಿದ್ದೆ. ಇದೆಲ್ಲ ನೆನಪಾಗುತ್ತಲೂ ಮೊದಲ ಕವಿತೆಯ ಸುಖ ಎಂತದ್ದೆಂದೂ ಹೇಳಲೇ ಬೇಕು. ಅದೆಂತಹುದೋ ಅಳಕು, ಮೊದಮೊದಲು ಬರೆದ ಅರೆಬರೆ ಅರೆಬೆಂದ ಕವಿತೆಗಳ ಮೇಲೆ ಕೆಳಗೆ ನೋಡಿ, ಶಬ್ದಗಳ ಚೌಕಟ್ಟು ಸರಿಯಾಗಿದೆಯೇ?ಎಂಬೆಲ್ಲ ಚಿಂತೆಗಳು. ಈ ಕವಿತೆ ಬರೆಯಲು ಪ್ರೇರಣೆ ಒಂದು ಬೇಕೆ ಬೇಕು. ಆಗ ತಾನೇ ಪದವಿ ಹಂತದಲ್ಲಿದ್ದೆ. ಗೆಳತಿಯೊಬ್ಬಳ ಪ್ರೇಮ ಕವಿತೆ ಕಾಲೇಜಿನ ಲಿಟರೇಚರ್ ಬುಲೆಟಿನ್ನಲ್ಲಿ ರಾರಾಜಿಸುತ್ತಿತ್ತು. ಎಲ್ಲರ ಬಾಯಲ್ಲಿಯೂ ಅದೇ ವಿಷಯ. ಎಷ್ಟು ಚೆನ್ನಾಗಿದೆ? ಹಾಗಿದೆ.., ಹೀಗಿದೆ.. ಮನೆಗೆ ಹೋದವಳೆ ನಾನೂ ಒಂದು ಬರೆದರೆ ಹೇಗೆ ?ಎಂಬ ಹುಕಿ ಹುಟ್ಟಿದ್ದೆ ತಡ, ಬರೆದೆ ಬರೆದೆ. ಅದನ್ನು ಯಾರಾದರೂ  ಓದಿದರೆ ನಕ್ಕಾರು, ಅನ್ನಿಸಿ ಬರೆದಷ್ಟನ್ನು  ಮತ್ತೆ ಮತ್ತೆ ಹರಿದು ಎಸೆದೆ. ನನಗೇ ನಗು ಬಂದಿತ್ತು. ಪ್ರೀತಿ ಪ್ರೇಮ ಇಂತಹ ನಾಜೂಕಿನ ವಿಷಯವನ್ನೆಲ್ಲಾ  ಶಬ್ದಗಳಲ್ಲಿ ಮುದ್ಧಾಗಿ ಮೂಡಿಸುವ ಗಟ್ಟಿತನ ಹೇಗೆ ಬರುವುದು  ಎಂಬ ಅಚ್ಚರಿ. ಬೇಡ ಬಿಡು, ಮನೆಯಲ್ಲಿ ನನ್ನ ಅಣ್ಣಂದಿರೇನಾದರೂ ನನ್ನ ಕವಿತೆ ಓದಿದರೆ ಕಥೆ ಮುಗಿಯಿತು. ಇದರ ಗೋಜು ಬೇಡವೇ ಬೇಡವೆಂದು ನಿರ್ಧರಿಸಿದೆ. ಆದರೆ ಇದು ಒಂದು ಖಯಾಲಿ. ಒಳಗಣ ತುಡಿತ, ನನ್ನೊಳಗಿನ ತೆರೆದುಕೊಳ್ಳುವ ಹಂಬಲ. ಅದೆಷ್ಟೋ ಕನಸುಗಳು ನನಸಾಗದ ನೆಲೆಯಲ್ಲಿ ಮನದ ಮೂಲೆಯಲ್ಲಿ ಮಿಡುಕಿದ ಭಾವಗಳು, ಮತ್ತೆ ಚಿಗುರಿದ ಕನಸುಗಳು, ವ್ಯಾಮೋಹದ ಪರದೆಯಲ್ಲಿ ಕಟ್ಟಿದ ಕಣ್ಣು, ಮತ್ತೆ ಬರೆದೆ. ಆದರೆ ಈಗ ಪ್ರೇಮ ಕವಿತೆ ಬರೆಯುವ ಪ್ರಮಾದ ಮಾಡಲಿಲ್ಲ. ನಾನು ಪ್ರಯತ್ನಿಸಿದ ಪ್ರೇಮ ಕವಿತೆಗಳು ಅಂತಹ ಉದ್ದಿಪನಗೊಳಿಸುವ ಪ್ರಭಾವ ಬೀರುವಂತಹುಗಳಾಗಿರಲಿಲ್ಲ. ಹಾಗಾಗಿ ದೇವರ ಅಸ್ತಿತ್ವದ ಕುರಿತ ಒಂದು ಕವಿತೆ ಬರೆದೆ. ಆಗ ನಾನು ಎಳಸಲ್ಲ. ಬೆಳೆದ ಮನಸ್ಸು. ಭಯದ ನೆರಳಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾದಿನಗಳ ಹಂತದಲ್ಲಿ ನನಗೆ ಕಲಿಸಿದ ಗುರುಗಳಾದ ಕವಿ ಶಾಂತಾರಾಮ ಬಾಳೆಗುಳಿಯವರ ಪ್ರಭಾವವಿತ್ತು. ಹಾಗೆಂದು ನಾನವರ ನೆಚ್ಚಿನ ಶಿಷ್ಯೆಯಾಗಿರಲಿಲ್ಲ. ಎಲ್ಲರಿಂದ ಕೊಂಚದೂರವಾಗಿಯೇ ಉಳಿಯುವ ಜಾಯಮಾನ ನನ್ನದು. ಅವಕಾಶಕ್ಕಾಗಿಯೋ, ಇನ್ನೊಬ್ಬರ ಆದರಕ್ಕಾಗಿ ಹಂಬಲಿಸುವ ಗುಣವೇ ಇಲ್ಲ. ಹಾಗೇ ಗುರುಗಳ ಆತ್ಮೀಯತೆಯನ್ನು ಗಳಿಸಿಕೊಂಡಿರಲಿಲ್ಲ.ನನ್ನ ಬರೆಯುವ ಆಸೆಯನ್ನು ಅವರೆಲ್ಲೆಂದು ತೋಡಿಕೊಂಡಿರಲೇ ಇಲ್ಲ. ಕಾಲೇಜು ದಿನಗಳು ಮುಗಿದು,ನೌಕರಿಯ ಹುಡುಕಾಟದಲ್ಲಿದ್ದ ಕಾಲದಲ್ಲಿ ನಾನು ಬರೆದ ಮೊದಲ ಕವಿತೆ. ವಿಶ್ವಕರ್ತನ ಗುಡಿ ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೇ ಅಲ್ಲಿ ಬಂಧೀ ವಿಶ್ವಕರ್ತನ ತಂದು ಗುಡಿಯ ಬಂಧನವಿಟ್ಟು, ಮೆರೆದ ಮೌಢ್ಯವು ಮನುಜ ಬುದ್ಧಿ. ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೇ ಬೇಕೆ ಒಂದು ಮನೆಯು ಜೀವಜೀವದ ಒಳಗೆ ಹುದುಗಿರುವ ಆತ್ಮನವ ಭಾವಿಸಲು ಸರ್ವರೂ ಅವನ ಕುಡಿಯು.                                     ಹೀಗೇ ಸಾಗಿತ್ತು ಕವಿತೆ. ಇದೇ ಸಮಯಕ್ಕೆ ಕೆಲಸವೂ ದೊರಕಿ ಖುಷಿಯಾಗಿದ್ದೆ. ಸಿನೇಮಾ, ಮಾರ್ಕೆಟ್ಟು ತಿರುಗುವುದು ಕೊಂಚ ಜಾಸ್ತಿಯಾಗಿತ್ತು. ಮನೆಯಲ್ಲಿ ವಿವಾಹದ ತಯಾರಿಯೂ ನಡೆಯುತ್ತಿತ್ತು. ಸುತ್ತ ಸಮಾನ ಮನಸ್ಕ  ಸ್ನೇಹವಲಯವೂ ಇತ್ತು.  ಸ್ನೇಹ ಪ್ರೇಮದ  ಪರಧಿಯಲ್ಲಿ ಆ  ಭಾವವೊಂದು ನನ್ನ ಎದೆಯಲ್ಲಿ ಮೀಟುತಿತ್ತು. ಇನ್ನೊಂದು ಕವಿತೆ ಬರೆದಿದ್ದೆ. ಅದೊಂದು ಸ್ನೇಹ ಮತ್ತು ಪ್ರೇಮದ  ಬಗ್ಗೆ ಬರೆದ ಕವಿತೆ. ಶೀರ್ಷಿಕೆ ಗೆಳತಿ ಅದನ್ನು ಗಂಡುದನಿಯಾಗಿ ಬಳಸಿದ್ದೆ. ಗೆಳೆಯ ಎಂದರೆ ಯಾರಾದರೂ ನನ್ನ ಬಗ್ಗೆ ತಪ್ಪು ತಿಳಿದಾರು ಎಂಬ ಭಯ. ಹಾಗಾಗಿ ಗೆಳೆಯ ಇರಬೇಕಾದಲ್ಲಿ ಗೆಳತಿ ಬಂದಿದ್ದಳು. ಏಕೆ ಗೆಳತಿ, ಮನ ಬಾಗಿಲವರೆಗೂ ಬಂದು ತಟ್ಟಿ ಕರೆಯಲಿಲ್ಲ. ನಿನ್ನ ಭಾವನೆಗಳೇಕೆ ನನ್ನವರೆಗೂ ಮುಟ್ಟಲೇ ಇಲ್ಲ. ನನಗೂ ಇತ್ತಲ್ಲ ಆಸೆ ನಿನ್ನಂತೆ.. ಗೆಳತಿಯಾಗಿ ಬಂದವಳು ಪ್ರೇಮಿಯಾಗಿ ಬರಲೆಂದು ಜೀವನಕೆ ಜೊತೆಯಾಗಲೆಂದು.. ಅದಕ್ಕೇಕೆ ತಣ್ಣಿರನ್ನೆರಚಿದೆ? ಕಡೇತನಕ ಬಗೆಗೂಡು ಹೊಗೆ ಗೂಡಾಗಲೆಂದೇ? ಬಣ್ಣದ ಚಿತ್ತಾರ ಬಿಡಿಸ ಹೊರಟಾಗ ಕಪ್ಪು ಮಸಿ ಚೆಲ್ಲಿ ಕಲೆಯಾಯಿತೇ? ವ್ಯಥೆ ಬೇಡ ಗೆಳತಿ,  ನವ್ಯ ಕಲೆಯ ರೀತಿ ಗೆರೆ ಎಳೆದು ಚಿತ್ರವಾಗಿಸುವೆ. ಹೊಗೆಗೂಡ ಕಿಂಡಿಯನು  ತೆರೆದುಬಿಡು. ಶುದ್ಧವಾತ ಹರಿದು ಬರಲಿ. ಪ್ರೇಮವಿರದಿರೆ ಸ್ನೇಹವಾದರೂ ಇರಲಿ ಈ ಪರಿ.. ಸ್ವಾರ್ಥದ ನೆರಳಿಲ್ಲ ಏಕತಾನತೆಯ ಕೊರಗಿಲ್ಲ ವಿಳಂಬ ಬೇಡ ಗೆಳತಿ ಈಗಲಾದರೂ ಪ್ರೇಮಸೌಧದ ತಳಪಾಯದ ಮೇಲೆ ಕಟ್ಟೋಣ ನಡಿ ಸ್ನೇಹ ಸೌಧ! ಆನಂತರವೇ ತಿಳಿದದ್ದು ಆ ಕವಿತೆ ಓದಿದ ಗೆಳತಿಯೊಬ್ಬಳು ಇಷ್ಟಪಟ್ಟಳು. ಉಳಿದವರಿಗೆ ತೋರಿಸಿ, ಚೆನ್ನಾಗಿದೆಯೆಂಬ ಬಿರುದು. ನನ್ನೊಂದಿಗೆ ಕೆಲಸ ಮಾಡುವ ಸ್ನೇಹಿತ ಸ್ನೇಹಿತೆಯರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಾಹಿತ್ಯ ಸಂವಾದ ಬೇರೆ ಬೇರೆ ಲೇಖಕರ ಪುಸ್ತಕಗಳ ಚರ್ಚೆ ಇವುಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಎಳಸು. ಒಂದೆರಡು ವರ್ಷದಲ್ಲಿ ಕೊಂಚ ಚಿಗುರಿದ್ದೆ. ಹತ್ತಾರು ಕವನಗಳ ಬರೆದೆ. ಆಪ್ತರಿಂದ ಪ್ರೋತ್ಸಾಹವೂ ದೊರೆಯುತ್ತಿತ್ತು. ಆದರೆ ಮತ್ತೆ ವಿವಾಹ ಬಂಧನ ನನ್ನ ಕವಿತಾ ಬರವಣಿಗೆಯನ್ನು ಕುಂಠಿತಗೊಳಿಸಿತು. ಸಾಂಸಾರಿಕ ಸುಖದಲ್ಲಿ ಮುಳುಗಿಹೋದೆ.  ಮನೆ ಗಂಡ ಮಕ್ಕಳು ಕೆಲಸ  ಇದಿಷ್ಟೇ ನನ್ನ ಪ್ರಪಂಚವಾಯ್ತು. ಹಾಗೇ ಕವಿತೆ ಬರೆಯುವುದು ನನ್ನಲ್ಲಿ ಆಗಾಗ ಪ್ರತ್ಯಕ್ಷವಾಗಿ ಮತ್ತೆ ಕೆಲವು ಕಾಲ ಕಾಲಗರ್ಭ ಸೇರಿದಂತೆ ಮರೆಯಾಗಿ ಹೋಗಿತು. ಆದರೆ ಭೂಮಿಯಲ್ಲಿ ಚಿಗುರುವ ಪ್ರತಿಯೊಂದು ಗಿಡ, ಮರ ಬಳ್ಳಿ, ಜೀವ ಸಂಕುಲ ಎಲ್ಲಕ್ಕೂ ಒಂದು ಮೊದಲ ಅನುಭವವಿದ್ದೆ ಇದೆ. ಬೀಜದೊಳಗಿನ ಸತ್ವ ಆಹಾರ ಪೂರೈಕೆ ಆಗುವವರೆಗೆ ಏನೂ ಗೊತ್ತಿಲ್ಲದ ಆಗಷ್ಟೇ ಚಿಗುರಿದ ಸಸಿ, ಆನಂತರ ತಾನೇ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಲೇ ಬೃಹದಾಕಾರವಾಗುತ್ತ ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆಯುವುದು. ಜೀವ ಸಂಕುಲದ ಆದಿಮ ಜೀವಿಗಳಿಂದ ಹಿಡಿದು ಮಾನವನಂತಹ ಪ್ರಚಂಡ ಬುದ್ದಿಶಕ್ತಿಯ ಜೀವಿಯೂ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ತನ್ನದೇ ಆದ ಪ್ರಥಮ ಅನುಭವಕ್ಕೆ ಒಳಗಾಗುತ್ತಲೇ ಗಟ್ಟಿಗೊಳ್ಳುತ್ತಲೇ ಹೋಗುವುದು.ವಿಕಸನದ ಹಾದಿಯೇ ಹಾಗೇ? ಅವಸಾನದ ತುದಿಯಲ್ಲೂ  ಕೆಲವೊಮ್ಮೆ ಮತ್ತೇ ಉತ್ಕರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆಗಳು ಹೇರಳ. ಹಾಗೇ ಭೂಮಿಯೊಳಗಣ ಎಂದೂ ಒಣಗದ ತೇವದಂತೆ ಕವಿತೆ ನನ್ನೊಳಗನ್ನು ತಡಕಾಡಿ, ತಿವಿದು, ಎಬ್ಬಿಸಿ,ಉದ್ದೀಪಿಸುತ್ತಲೇ ಇತ್ತು. ನನ್ನ ಅಪ್ರಬುದ್ಧ ಭಾವನೆಗಳು, ಬಂಡಾಯದ ಗುಣ, ಪ್ರಕೃತಿಯೊಂದಿಗಿನ ಪ್ರೀತಿ ಜೀವಂತವಾಗಿಯೇ ಇದ್ದವು. ಹಾಗಾಗಿ ಇತ್ತೀಚೆಗೆ   ನಡು ವಯಸ್ಸಿನಲ್ಲಿ ಅಕ್ಷರದ ಕೊಳದಲ್ಲಿ ನನ್ನ ಮುಖ ಕಾಣಬಹುದೇ ಎಂಬ ಆಸೆಯಿಂದ ಅದರಲ್ಲಿ ಇಣುಕಿ ಇಣುಕಿ ನೋಡುತ್ತಿದ್ದೇನೆ. ಈಗ ಮತ್ತೆ ವಿಸ್ಮಯವೆನ್ನುವಂತೆ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ. ಹೂ ಹಣ್ಣು ನೀಡುವ ಹೆಮ್ಮರವಾಗುವುದೇ ಕಾದು ನೋಡಬೇಕಿದೆ ನನಗೆ.. ***********************

ಮೊದಲ ಕವಿತೆ Read Post »

You cannot copy content of this page

Scroll to Top