ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನ‌ನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು ಮಾಡಿದವನು ಇವನು ಎಂಬ ಪ್ರತೀತಿಯೂ ಇದೆ. ಕಿನ್ಮರಿ ಬೊಮ್ಮಯ್ಯ ಆಂಧ್ರಪ್ರದಶದ ಪೂದೂರ (ಊಡೂರು) ಎಂಬಲ್ಲಿಯವನು. ಅಕ್ಕಸಾಲಿಗ ವೃತ್ತಿಯನ್ನು ಮಾಡಿ ಬದುಕುತ್ತಿದ್ದವನು. ತನ್ನ ಗುರುವು ವೃತ್ತಿ, ಕಾಯಕ‌ ನಿಷ್ಠೆ, ವೃತ್ತಿಧರ್ಮ ಮತ್ತು ಸತ್ಯಗಳನ್ನು ಅನುಮಾನಿಸಲಾಗಿ ಅಲ್ಲಿಂದ ಹೊರನಡೆದು ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕಾಯಕದಲ್ಲಿ ನಿರತನಾದವನು.೨ ದಿನವೂ ತನ್ನ ಕರಸ್ಥಳದಲ್ಲಿದ್ದ ಲಿಂಗದ ಮುಂದೆ ಕಿನ್ನರಿ ನುಡಿಸಿ, ಒಂದು ಹೊನ್ನು, ಒಂದು ಹಣ, ಒಂದು ಹಾಗವನ್ನು ಕೇಳುಗರಿಂದ ಪಡೆದು ಅದರಿಂದ ಜಂಗಮಾರ್ಚನೆ, ದಾಸೋಹ ಮಾಡುತ್ತಿದ್ದವನು.೩ ಬಹಳ ಮುಖ್ಯವಾಗಿ ಬಸವಣ್ಣನವರ ಸಮಕಾಲೀನ ಇವನು. ಬಸವಣ್ಣನನ್ನೇ ಬದಲಾಯಿಸಿದ, ಬಸವಣ್ಣನಿಗೆ ತಾಳುವಿಕೆಯನ್ನು ಕಲಿಸಿದ ಶಿವಶರಣನೀತ. ಈತ ತನ್ನ ಕೊನೆಯ ಕಾಲವನ್ನು ಯುದ್ಧಮಾಡುತ್ತಲೇ ಕಳೆದು ಯುದ್ಧದಲ್ಲೇ ಸತ್ತವನು.೪ ‌ಯುದ್ಧವನ್ನು ತಡೆಯಲು ಒಂದು ನದಿಯನ್ನೇ ತಿರುಗಿಸಿದನೆಂಬ ಪ್ರತೀತಿಯೂ ಇವನ ಬಗೆಗಿದೆ.೫  ಇವನ ವಚನಗಳ ಅಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”. ಇವನ ಒಂದು ವಚನವನ್ನು ಕವಿಚರಿತಕಾರರು ಹೆಸರಿಸಿದ್ದು, ಉಳಿದಂತೆ ಶೂನ್ಯಸಂಪಾದನೆ, ಬಸವಯುಗದ ವಚನ ಸಂಪುಟಗಳಲ್ಲಿ ಬಹಳಷ್ಟು ವಚನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವನದೊಂದು ವಚನ ಹೀಗಿದೆ ————————— ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ ಸತಿ ಸುತರ ಬಂಧುಗಳ ಸಮೂಹದ ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ? ವಾಮದೇವ ವಶಿಷ್ಠರಿಂದ ಕುಲಜನೆ ? ಅಂತಕನ ದೂತರು ಬಂದು ಕೈಬಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ೬ ಮನುಷ್ಯನ ಸಮಸ್ಯೆ, ಅವಗುಣವೆಂದರೆ ಎಂದರೆ ತನ್ನ ಜನ, ಹುಟ್ಟಿನಿಂದ ಬಂದ ಶ್ರೀಮಂತಿಕೆ ಮತ್ತು ಸುತ್ತಮುತ್ತಲಿನ ಜನ ಸಹಾಯ, ಸಹಕಾರ ಇವುಗಳಿಂದ ಗರ್ವಿತನಾಗುವುದು. ಅದೇ ಹುಟ್ಟಿನಿಂದ ಬೆನ್ನ ಹಿಂದೆಯೇ ಅಂಟಿ ಬಂದಿರುವ ಸಾವಿನ ಬಗೆಗೆ ಯೋಚನೆ ಮಾಡದೆ ಇರುವುದು. ಈ‌ ವಚನವು ಎರಡೂ ಮುಖ್ಯ ನೆಲೆಗಳಾದ ಸಾವು ಮತ್ತು ಬದುಕುಗಳಲ್ಲಿ ಯಾವುದು ದೊಡ್ಡದು ? ಮತ್ತು ಏಕೆ ದೊಡ್ಡದು ? ಎಂಬ ವಿಷಯವಾಗಿ ಮಾತನಾಡುತ್ತದೆ. ಅದರೊಡನೆಯೇ ಎರಡರ ನಡುವೆ ಬದುಕು ಹೇಗಿರಬೇಕೆಂದು ಹೇಳುತ್ತದೆ. ಬಸವಣ್ಣನವರ ಒಂದು ವಚನವೂ ಇದೇ ರೀತಿಯ ಆಯಸ್ಸು ಕಡಿಮೆಯಾಗುವುದರ ಕಡೆಗೆ ಮತ್ತು ಮಾಡಬೇಕಾದ ಕಾರ್ಯದ ಕಡೆಗೆ ಗಮನ ಸೆಳೆಯುತ್ತದೆ.೭ ಆ ವಚನದ ಪ್ರಭಾವವೂ ಬೊಮ್ಮಯ್ಯನ ಪ್ರಕೃತ ವಚನದ ಮೇಲೆ ಆಗಿರಬಹುದು. ಪ್ರಕೃತ ವಚನದ ಬೆಳವಣಿಗೆಯ ಕ್ರಮವನ್ನು ಗಮನಿಸಿ. ದೇಹದ ಹೊರ ರೂಪದಿಂದ ಆರಂಭಗೊಂಡು ಭವವನ್ನು ಮೀರಿ ಗಳಿಸಬೇಕಾದ ಅಮೂರ್ತ ಪದವಿಯ ಆಶಯವನ್ನು ಹೊತ್ತು ಸಾಗುತ್ತಿದೆ. ಆದರೆ ಅದೆಲ್ಲವೂ  ಹೇಳುತ್ತಿರುವುದು ಹರೆಯದ ರೂಪ, ಆ ರೂಪಕ್ಕೆ ಕಾರಣವಾದ ಚೆಲುವು, ಸಿರಿಯಿಂದುಂಟಾಗುವ ಸಂತೋಷ ಕೇಡುಗಳನ್ನೇ ಕುರಿತು ಮೊದಲ ಹಂತದ್ದು. ಅದನ್ನು ಒಪ್ಪಿ ಅಪ್ಪಿದ ನಂತರ ಎರಡನೆಯ ಮೆಟ್ಟಿಲು ಆರಂಭವಾಗುತ್ತದೆ. ಕರಿ, ತುರಗ, ರಥ, ಪದಾತಿಗಳ ಸಮೂಹ ಸೃಷ್ಟಿಸುವ ಪ್ರಭುತ್ವದ ಸ್ಥಿತಿ. ಏಕಕಾಲದಲ್ಲಿ ಹಣ, ಹಣದಿಂದ ಉಂಟಾಗುವ ಅಧಿಕಾರದ‌ ಮದವನ್ನು ಕುರಿತು ನಂತರದ ಸಾಲುಗಳಲ್ಲಿ ಮಾತನಾಡುತ್ತಾನೆ. ಕುಟುಂಬ, ಮಕ್ಕಳು, ಹೆಂಡತಿ, ಕುಲದ ಅಭಿಮಾನ‌ ಇವುಗಳಿಂದ ಮುಕ್ತನಾಗುವುದರ ಕಡೆಗೆ ಗಮನ ಸೆಳೆಯುತ್ತಾನೆ. ಮಾತು ಜಾಣತನದಿಂದ ಕೂಡಿರಬೇಕಾದ ಅಗತ್ಯವಿಲ್ಲ, ವಚನಕಾರರಲ್ಲಿ ಚಮತ್ಕಾರೀ ಮಾತಿಗಿಂತ ಆತ್ಮಸಾಕ್ಷಿಯಿಂದಿದ್ದರೆ ಒಳಿತೆಂಬುದು ಅಭಿಪ್ರಾಯ. ವಚನ ಎಂಬುದೇ ಭಾಷೆಯ ಕೊಡುವುದನ್ನು ತಿಳಿಸುವಾಗ ಅದರ ಮೂಲಕವೇ ಅಮೂರ್ತ ಪದವಿಯ ಆಸೆಯಿಂದ, ಭವದಲ್ಲಿ ಬದುಕುವ ಆಶಯವನ್ನು ಹೊಂದಿದ್ದು ಭವದಿಂದ ಬಿಡುಗಡೆಯಾಗಿಯೂ ಯಶಸ್ಸನ್ನು ಗಳಿಸಬೇಕಾದ ಕಡೆಗೆ ಆಸೆಯನ್ನು ಹೊತ್ತು ಈ ವಚನ ಬಂದಿದೆ. ಮೂರು ವಿಧದ ಸಂಬಂಧಗಳನ್ನು ವಚನದ ರಚನಾ ವಿನ್ಯಾಸದಲ್ಲಿ ಮೆಟ್ಟಿಲುಗಳಾಗಿ ಅನುಕ್ರಮದಲ್ಲಿ ಇಡಲಾಗಿದೆ. ದೇಹದಿಂದ ಮೊದಲ್ಗೊಂಡು ಮತ್ತೆ ದೇಹದ ಕಡೆಗೆ ಬರುವ ಕ್ರಮವದು. ೧. ದೇಹ ಸಂಬಂಧ – ಹರೆಯ, ರೂಪು, ಚೆಲುವು, ನುಡಿ, ಜಾಣತನ, ಸಂತೋಷ ೨. ಸಮೂಹ ಸಂಬಂಧ – ಕರಿ, ತುರಗ, ರಥ, ಪದಾತಿ ಇವುಗಳ ನೆರವಿ ( ಗುಂಪು ) ೩. ಕುಟುಂಬ ಸಂಬಂಧ – ಸತಿ, ಸುತರ, ಬಂಧು, ಸಮೂಹ, ಕುಲದಭಿಮಾನ ಹೀಗೆ ವಚನ ಬೆಳೆಯುತ್ತಾ ಸಾಗುತ್ತದೆ. ನಂತರದಲ್ಲಿ ನೇರವಾಗಿಯೇ ಈ ಮೂರು ಸಂಬಂಧಗಳಿಂದ ಉಂಟಾಗುವ “ಗರ್ವವ ಬಿಡು” ಎನ್ನುತ್ತಾನೆ. ಮೇಲಿನ ಮೂರು ಅನುಕ್ರಮಗಳೊಡನೆ ಸಾಧಿಸುವ ಸಂಬಂಧ ಮತ್ತು ನಂತರದಲ್ಲಿ ಬರುವ ಪುರಾಣಪ್ರತೀಕಗಳ ಜೊತೆಗೆ ಸಾಧಿಸುವ ಸಂಬಂಧವನ್ನೂ ಗಮನಿಸಿ. ಸಾಮಾನ್ಯವಾಗಿಯೇ ಆರಂಭವಾದ ವಚನವು ಕೊನೆಗೆ ಪುರಾಣಪ್ರತೀಕಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಗರ್ವವನ್ನು ಬಿಡುವುದಕ್ಕೆ ಮಾರ್ಗವನ್ನು ಮಾಡುತ್ತದೆ. ರೋಮಜನಿಂದ ಹಿರಿಯನೆ ? (ಹನುಂತನ ರೋಮಗಳಿಂದ ಹುಟ್ಟಿದ ಲಿಂಗಗಳಿಗಿಂತ ದೊಡ್ಡವನೆ ) ಮನ್ಮಥನಿಂತ ಚೆಲುವನಾ ? ಇಂದ್ರನಿಗಿಂತ ಸಂಪತ್ತನ್ನು ಹೊಂದಿರುವವನೇ ? ವಾಮದೇವ ಮತ್ತು ವಶಿಷ್ಠರಿಗಿಂತ ಕುಲದಲ್ಲಿ ದೊಡ್ಡವನಾ ? ಹೀಗೆ ಬೇರೆ ಬೇರೆ ಪುರಾಣ ಕಥೆಗಳನ್ನು ತಂದು ಪ್ರಶ್ನಿಸುತ್ತಾನೆ. ಇಲ್ಲಿಯೂ ಲಿಂಗದಿಂದ/ ದೇವರಿಂದ ಆರಂಭವಾಗಿ ಮನುಷ್ಯರಲ್ಲೇ ಉತ್ತಮರಾದ, ಸಾಧನೆಯಿಂದ ದೊಡ್ಡವರಾದ ಋಷಿಗಳ ಕಡೆಗೆ ಬರುತ್ತದೆ. ಮೇಲೆ ಉನ್ನತವಾಗಿರುವ ದೃಷ್ಟಾಂತಗಳನ್ನೇ ಕೊಡುತ್ತಾನೆ. ಕೊನೆಗೆ ಮೂಲ ಉದ್ದೇಶವಾದ ಪದವಿಯನ್ನು ಗಳಿಸಬೇಕಾದರೆ “ಮಹಾಲಿಂಗ ತ್ರಿಪುರಾಂತಕದೇವರ ಪುಜಿಸಿದರೆ” “ಕೇಡಿಲ್ಲದ ಪದವಿ” ಯ “ಕೊಡುವ” ಎಂಬ ನಂಬಿಕೆಯಲ್ಲಿ,  ಅದೂ “ಕಾಲನ ದೂತರು ಬಂದು ಕೈ ಹಿಡಿದೆಳೆವಾಗ” ಎಂದು “ಪರಮಪದವಿ” ಯ ಕುರಿತು ಮಾತನಾಡಿ “ನುಡಿ ತಡವಲ್ಲ” ಎಂದು ಎಚ್ಚರಿಸುತ್ತಾನೆ. ಈ‌ ವಚನ ರಚನೆಗೆ ಕಾರಣವಾದ ಬಸವಣ್ಣನವರ “ನೆರೆ ಕೆನ್ನೆಗೆ ತೆರೆ ಗಲ್ಲಕೆ” ವಚನವನ್ನು ಇಟ್ಟು ನೋಡಬಹುದು. ಹಾಗೆಯೇ ವಚನ ಚಳಿವಳಿಯ ಅನಂತರದ ದಾಸ ಪರಂಪರೆಯಲ್ಲಿಯೂ ಇದೇ ಅಂಶಗಳು ಸ್ವಲ್ಪ ಮಾರ್ಪಾಟುಗೊಂಡು ಗೇಯತೆಯನ್ನು ಸಾಧಿಸಿಕೊಂಡು ಬಂದಿದೆ. ಪುರಂದರದಾಸರ “ಮಾನವ ಜನ್ಮ ದೊಡ್ಡದು ಇದ / ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಪ್ರಖ್ಯಾತ ಕೀರ್ತನೆಯ ರಚನೆಯ ಮೇಲೆ ಪ್ರಭಾವ ಮತ್ತು ಪ್ರೇರಣೆಯಾಗಿದೆ.೮ ಅಂತಕನ ದೂತರು ಬಂದು ಕೈವಿಡಿದೆಳೆವಾಗ ನುಡಿ ತಡವಲ್ಲ ಕೇಳೋ ನರನೆ ! ಎಂದು ಕಿನ್ನರಿ ಬೊಮ್ಮಯ್ಯ ಹೇಳುವ ಈ ಸಾಲುಗಳ ಪಕ್ಕದಲ್ಲಿ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಎಂಬ ಪುರಂದರದಾಸರ ಸಾಲುಗಳನ್ನಿಟ್ಟು ಒಮ್ಮೆ ನೋಡಿ. ಎರಡರ ನಡೆಯೂ ಒಂದೇ ಇದೆ. ವಚನದಲ್ಲಿ “ಅಂತಕನ ದೂತರು ಕೈವಿಡಿದು” ಎಂದಿದ್ದರೆ, ಪುರಂದರರಲ್ಲಿ  “ಕಾಲನ ದೂತರು ಕಾಲ್ ಪಿಡಿದೆಳೆವಾಗ” ಎಂದು ಬಂದಿದೆ. ದಾಸ ಸಾಹಿತ್ಯದಲ್ಲಿ ಲಯದ ಸಾಧ್ಯತೆಯಲ್ಲಿ ಈ ಮಾತುಗಳು ಬಹಳ ಪರಿಣಾಮಕಾರಿ ಯಶಸ್ಸಯನ್ನು ಸಾಧಿಸಿಬಿಡುತ್ತದೆ. “ಕಾಲ” “ಕಾಲ್ ಪಿಡಿದು” ಈ ಪದಗಳು ಸಾವು ಸಂಭವಿಸಿದ ನಂತರ ದೇಹವನ್ನು ಎಳೆದುಕೊಂಡು ಹೊಗುವ ಚಿತ್ರವನ್ನು ಕಣ್ಣಮುಂದೆ ಕಟ್ಟಿ ಬಿಡುತ್ತವೆ. ಬೊಮ್ಮಯ್ಯನ ವಚನದಲ್ಲಿ ಮೂಲ ಆಶಯವು ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ ಎಂದು ಬಂದಿದ್ದರೆ, ಪುರಂದರರಲ್ಲಿ ಎನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಶ್ರೀ ಪುರಂದರವಿಠಲರಾಯನ ಎಂದು ಬಂದಿದೆ. “ಮರುಳೆ” ಎಂಬ ಬೊಮ್ಮೆಯ್ಯನು ಎದುರಿನವರೊಂದಿಗೆ ಸಾಧಿಸುವ ಸಂಬಂಧದ ವಿಧಾನಕ್ಕೂ, ಪುರಂದರರು “ಹುಚ್ಚಪ್ಪಗಳಿರಾ” ಎನ್ನುವಾಗ ಸಾಧಿಸುವ ಸಂಬಂಧಕ್ಕೂ ಬಹಳ ಹೋಲಿಕೆಯಿದೆ. ಈ ವಿಧಾನಗಳೂ ಇಲ್ಲಿ ಬಹುಮುಖ್ಯವಾದದ್ದು ನೇರವಾಗಿ ಎದುರಿರುವವರನ್ನು “ಮರುಳರು” ಎಂದು ಭಾವಿಸಿರುವುದು ತಿಳಿಯುತ್ತದೆ. ಒಟ್ಟಾರೆಯಾಗಿ ಕಿನ್ನರಿ ಬೊಮ್ಮಯ್ಯನ ವಚನವೊಂದು ಯಾವ ಆಸೆಯನ್ನು ಹೊತ್ತು ಕಾಲವನ್ನು ಕ್ರಮಿಸಿತೋ, ಅನಂತರದ ದಾಸ ಸಾಹಿತ್ಯದ ಕಾಲವೂ ಅದೇ ಆಶಯವನ್ನು ಹೊತ್ತು ನಡೆದಿದೆ. ಈ ಆಶಯಗಳು ಇಂದಿಗೂ ಮನುಷ್ಯ ತನ್ನ ಗರ್ವವನ್ನು ಬಿಟ್ಟು ಸಾಧಿಸಿಕೊಳ್ಳಬೇಕಾದುದರ ಹಂಬಲವನ್ನು ಸಾರುತ್ತಿದೆ. ————————————— ಅಡಿಟಿಪ್ಪಣಿಗಳು ೧. ಶರಣಾರ್ಥಿ ಶರಣಾರ್ಥಿ ಎಲೆ ತಾಯೆ ಎಮ್ಮವ್ವಾ ‌     ಶರಣಾರ್ಥಿ ಶರಣಾರ್ಥಿ ಕರುಣಾಸಾಗರನಿಧಿಯೆ      ದಯಾಮೂರ್ತಿ ಕಾಯೆ ಶರಣಾರ್ಥಿ ಶರಣಾರ್ಥಿ      ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ ನೀವು ಬಿಡಿಸಿದಿರಿ      ನಿಮ್ಮ ದಯದಿಂದ ನಾನು ಹುಲಿನೆಕ್ಕಿ ಬದುಕಿದೆನು      ಶರಣಾರ್ಥಿ ಶರಣಾರ್ಥಿ ತಾಯೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ್ ಮತ್ತು ಪ್ರೊ. ಜಿ.‌ಎಸ್. ಸಿದ್ದಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು. ವ. ಸಂ. ೧೦೨೦. ಪು ೪೪೯ ( ೨೦೦೮ ) ೨. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪುಟ ೮೬ ( ೧೯೬೭ ) ೩. ಪೂರ್ವೋಕ್ತ ೪. ಪೂರ್ವೋಕ್ತ ೫. ಪೂರ್ವೋಕ್ತ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ.‌ ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ವ.ಸಂ – ೧೧. ಪು ೧೨೦೪ ( ೨೦೧೬ ) ೭. .ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ       ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ       ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ       ಮುಪ್ಪಿಂದೊಪ್ಪವಳಿಯದ ಮುನ್ನ       ಮೃತ್ಯುಮುಟ್ಡದ ಮುನ್ನ         ಪೂಜಿಸು ನಮ್ಮ ಕೂಡಲಸಂಗಮದೇವನ ವಚನ ಸಾಹಿತ್ಯ ಸಂಗ್ರಹ. ಸಂ. ಸಂ ಶಿ ಭೂಸನೂರು ಮಠ. ವ. ಸಂ ೮೦. ಪು ೪೯ ( ೧೯೬೫ ) ೮. ಮಾನವಜನ್ಮ ದೊಡ್ಡದು ಇದ      ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ( ಪ )      ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ      ಮಣ್ಣುಮುಕ್ಕಿ ಮರುಳಾಗುವರೆ      ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ      ಉಣ್ಣದೆ ಉಪವಾಸ ಇರುವರೆ ಖೋಡಿ ( ೧ )     ಕಾಲನ ದೂತರು ಕಾಲ್ಪಿಡಿದೆಳೆವಾಗ     ತಾಳುತಾಳೆಂದರೆ ತಾಳುವರೆ     ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ     ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ( ೨ )     ಏನು ಕಾರಣ ಯದುಪತಿಯ ಮರೆತಿರಿ     ಧನಧಾನ್ಯ ಸತಿಸುತರು ಕಾಯುವರೆ     ಇನ್ನಾದರು ಏಕೋಭಾವದಿ ಭಜಿಸಿರೊ     ಚೆನ್ನ ಶ್ರೀ ಪುರಂದರವಿಠಲರಾಯನ ( ೩ ) ಹರಿದಾಸರ ಜನಪ್ರಿಯ ಹಾಡುಗಳು. ಸಂ. ಡಾ. ಟಿ. ಎಸ್. ನಾಗರತ್ನ ಮತ್ತು ಡಾ. ಮಂದಾಕಿನಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಪು ೨೦೯ ***************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಕೇರಿ — ಕೊಪ್ಪಗಳ ನಡುವೆ…. ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡರು.             ನಾಡುಮಾಸ್ಕೇರಿಯ ವಾಸ್ತವ್ಯದ ಈ ಕಾಲಾವಧಿ ನನಗೆ ಕಲಿಸಿದ ಪಾಠ, ನೀಡಿದ ಅನುಭವ ಬಹಳ ಅಮೂಲ್ಯವಾದದ್ದು. ಇಲ್ಲಿ ಬಾಲ್ಯದ ಎಲ್ಲ ಸಂತಸದ ಅನುಭವಗಳೊಡನೆಯೇ ಅನೇಕ ಕಹಿ ಸಂದರ್ಭಗಳಿಗೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂತು. ಜೀವ ವಿಕಾಸದ ಅನೇಕ ನಿಗೂಢತೆಗಳಿಗೆ ಮನಸ್ಸು ತೆರೆದುಕೊಂಡದ್ದೂ ಈ ಮಾಸ್ಕೇರಿಯಲ್ಲಿಯೇ.             ೬೨-೬೩ ರ ನೆರೆ ಹಾವಳಿ ನಮ್ಮ ಊರಿನಲ್ಲೂ ಅನೇಕ ಅವಾಂತರಗಳನ್ನು ಸೃಷ್ಠಿಸಿತ್ತು. ನಮ್ಮ ಜಾತಿಯ ಹಲವಾರು ಕುಟುಂಬಗಳು ತಮ್ಮ ಸ್ವಂತದ್ದಲ್ಲದ ಒಡೆಯರ ತುಂಡು ಭೂಮಿಯಲ್ಲಿ ಅಲ್ಲಿ ಇಲ್ಲಿ ಗುಡಿಸಲು ಹಾಕಿಕೊಂಡು ಬಾಳುವೆ ನಡೆಸುತ್ತಿದ್ದರು. ಅವುಗಳೆಲ್ಲಾ ನೆರೆಹಾವಳಿಯಲ್ಲಿ ನಾಶವಾಗಿ ನೆಲೆ ಕಳೆದುಕೊಂಡಿದ್ದರು. ಪರಿಸ್ಥಿತಿಯನ್ನು ಅರಿತ ನಮ್ಮ ತಂದೆಯವರು ಓದು ಬರಹ ಬಲ್ಲವರಾದ್ದರಿಂದ ಬನವಾಸಿಯಲ್ಲಿ ಇರುವಾಗಲೇ ನಮ್ಮವರ ಕಷ್ಟಗಳು ಸರಕಾರಕ್ಕೆ ಮನವರಿಕೆಯಾಗುವಂತೆ ಅರ್ಜಿ ಬರೆದು ಎಲ್ಲರಿಗೂ ಜಮೀನು ಮತ್ತು ಮನೆ ಮಂಜೂರಿಯಾಗುವಂತೆ ಮಾಡಿದ್ದರು. ನಾವು ಮರಳಿ ನಾಡುಮಾಸ್ಕೇರಿಗೆ ಬಂದು ನೆಲೆಸುವ ಹೊತ್ತಿಗೆ ಎಲ್ಲ ನಿರಾಶ್ರಿತ ಕುಟುಂಬಗಳಿಗೆ ತಲಾ ಐದು ಗುಂಟೆ ಭೂಮಿ ಮತ್ತು ಜನತಾ ಮನೆಗಳು ಮಂಜೂರಿಯಾಗಿ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು.             ನಾಡು ಮಾಸ್ಕೇರಿಯ ನಾಡವರ ಕೊಪ್ಪದಿಂದ ಹಾರು ಮಾಸ್ಕೇರಿಯ ಬ್ರಾಹ್ಮಣರ ಮನೆಯವರೆಗೆ ವಿಶಾಲವಾದ ಬಯಲು ಪ್ರದೇಶವಿತ್ತು. ದನ-ಕರು ಸಾಕಿಕೊಂಡವರಿಗೆಲ್ಲ ಅದು ಗೋಮಾಳ’ದಂತೆ ದನ ಮೇಯಿಸುವ ಸ್ಥಳವಾಗಿತ್ತು. ಅದರ ಒಂದು ಭಾಗದಲ್ಲಿ ಆಗೇರರಿಗೆಲ್ಲಾ ಜಮೀನು ಹಂಚಿಕೆಯಾಗಿತ್ತು. ಉಳಿದ ಭಾಗವನ್ನು ಗೋಮಾಳವೆಂದೂ, ಆಟದ ಬಯಲು ಎಂದೂ ಬಿಟ್ಟಿದ್ದರು. ಹೀಗೆ ಊರಿನಲ್ಲಿ ಅಲ್ಲಿ ಇಲ್ಲಿ ಅನ್ಯರ ನೆಲದಲ್ಲಿ ಆಶ್ರಯ ಪಡೆದ ಆಗೇರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಜನತಾ ಮನೆಗಳನ್ನು ಕಟ್ಟಿಕೊಂಡು ನೆಲೆಸುತ್ತಾ ಆಗೇರಕೇರಿ’ಯೊಂದು ನಿರ್ಮಾಣವಾಯಿತು.             ಗೋಮಾಳದ ಬಯಲು ದಾಟಿದ ಬಳಿಕ ಒತ್ತಾಗಿ ಇರುವ ನಾಡವರ ಮನೆಗಳು ಮತ್ತು ಮನೆಯ ಸುತ್ತ ಸೊಂಪಾಗಿ ಬೆಳೆದು ನಿಂತ ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಮರಗಳ ಕಾರಣದಿಂದ ಬಹುಶಃ ನಾಡವರ ಕೇರಿಯನ್ನು ಕೇರಿ’ ಎನ್ನದೆ ನಾಡವರ ಕೊಪ್ಪ’ ಎಂದು ಕರೆಯುತ್ತಿರಬೇಕು. ಕೇರಿಯ ಬಹುತೇಕ ಎಲ್ಲರೂ ಕೊಪ್ಪದ ಹಂಗಿನಲ್ಲೇ ಬಾಳಬೇಕಾದ ಅನಿವಾರ್ಯತೆ ಇದ್ದವರು. ನಾಡವರ ಕೃಷಿ ಭೂಮಿಯ ಕೆಲಸಗಳು, ಮನೆಯ ಕಸ ಮುಸುರೆ ಇತ್ಯಾದಿ ಕಾಯಕದಿಂದ ಆಗೇರರ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಹಾಗಾಗಿ ಕೇರಿ-ಕೊಪ್ಪಗಳ ನಡುವೆ ಸಹಜವಾಗಿಯೇ ವ್ಯವಹಾರಿಕ ಸಂಬಂಧ ಬೆಸೆದುಕೊಂಡಿತ್ತು. ನಮ್ಮ ಕೇರಿಯ ಬಹಳಷ್ಟು ಜನ ತಮ್ಮ ಮದುವೆಗಾಗಿ ಜಮೀನ್ದಾರರಾಗಿದ್ದ ನಾಡವರಿಂದ ಸಾಲಪಡೆದು ಗಂಡ ಹೆಂಡತಿ ಇಬ್ಬರೂ ಜೀತದ ಆಳುಗಳಾಗಿ ದುಡಿಯುತ್ತಿದ್ದರು. ಮುಂದೆ ಈ ದಂಪತಿಗಳಿಗೆ ಹುಟ್ಟಿದ ಮಕ್ಕಳು ಕೂಡಾ ಇದೇ ಒಡೆಯನ ಮನೆಯ ಆಳಾಗಿ ದುಡಿಯುತ್ತ ಅಗತ್ಯವಾದರೆ ತಮ್ಮ ಮದುವೆಗೂ ಒಡೆಯನಿಂದ ಸಾಲ ಪಡೆಯುತ್ತ ಜೀತ ಪರಂಪರೆಯನ್ನು ಬಹುತೇಕ ಮುಂದುವರಿಸುತ್ತಿದ್ದರು. ಸಾಲ ಪಡೆಯದೆ ಜೀತದಿಂದ ಹೊರಗಿದ್ದವರೂ ಕೂಡ ದೈನಂದಿನ ಅನ್ನ ಸಂಪಾದನೆಗಾಗಿ ಇದೇ ಒಡೆಯರ ಮನೆಗಳಲ್ಲಿ, ಹೊಲಗಳಲ್ಲಿ ಚಾಕರಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಡವರ ಮನೆಗಳ ಕಸ-ಮುಸುರೆ, ತೋಟದ ಕೆಲಸ, ಬೆಸಾಯದ ಭೂಮಿಯಲ್ಲಿ ದುಡಿಮೆ ಇತ್ಯಾದಿಗಳನ್ನು ಮಾಡುತ್ತ ಕೇರಿಯ ಜನ ಕೊಪ್ಪದ ಯಜಮಾನರುಗಳೊಂದಿಗೆ ಅನ್ಯೋನ್ಯವಾಗಿಯೇ ಹೊಂದಿಕೊಂಡಿದ್ದರು. ಹಬ್ಬ-ಹುಣ್ಣಿಮೆ, ಯಜಮಾನರ ಮನೆಯ ಮದುವೆ, ಹರಿದಿನ ಮೊದಲಾದ ಸಮಾರಂಭಗಳಲ್ಲಿ ನಮ್ಮ ಕೇರಿಯ ಜನ ಪಾತ್ರೆಗಳನ್ನೊಯ್ದು ಒಡೆಯರ ಮನೆಗಳಿಂದ ಅನ್ನ, ಪಾಯಸ ಇತ್ಯಾದಿಗಳನ್ನು ಬಡಸಿಕೊಂಡು’ ಬಂದು ಮನೆ ಮಂದಿಯೆಲ್ಲ ಹಂಚಿಕೊಂಡು ಉಣ್ಣುತ್ತಿದ್ದರು. ದೀಪಾವಳಿ, ಯುಗಾದಿ, ಚೌತಿ, ತುಳಸಿ ಹಬ್ಬ ಮುಂತಾದ ವಿಶೇಷ ಹಬ್ಬಗಳ ದಿನ ಸಂಜೆಯ ಹೊತ್ತು ಕೇರಿಯ ಹೆಂಗಸರು ಮಕ್ಕಳೆಲ್ಲ ಒಂದೊಂದು ಹಚ್ಚಿಗೆ’ (ಬಿದಿರಿನ ಬುಟ್ಟಿ) ಅಥವಾ ಕೈಚೀಲ ಹಿಡಿದು ಕೊಪ್ಪದ ಮನೆಮನೆಯ ಮುಂದೆ ನಿಂತು ರೊಟ್ಟಿ ಬೇಡುವ’ ಅನಿಷ್ಟ ಪದ್ಧತಿಯೂ ಆಗ ಚಾಲ್ತಿಯಲ್ಲಿತ್ತು. ಇದು ಅತ್ಯಂತ ದೈನೇಸಿ ಕ್ರಮವೆಂಬ ಅರಿವಿಲ್ಲದೆ, ನನ್ನ ವಯಸ್ಸಿನ ಹುಡುಗರೂ ನಾಡವರ ಮನೆಗಳಿಂದ ಬೇಡಿ ತರುತ್ತಿದ್ದ ಬಿಳಿ ಬಿಳಿಯಾದ ರೊಟ್ಟಿಯ ಹೋಳುಗಳಿಗೆ ಆಸೆಪಟ್ಟು ನಾನೂ ಒಮ್ಮೆ ನಮ್ಮ ಗೆಳೆಯರ ತಂಡದಲ್ಲಿ ಸೇರಿಕೊಂಡು ರೊಟ್ಟಿ ಬೇಡಲು ಹೋಗಿ ಬಂದಿದ್ದೆ. ಕೆಲವು ಮನೆಗಳವರು ನನ್ನನ್ನು ಇಂಥವರ ಮಗ’ ಎಂದು ಗುರುತಿಸಿ ನನ್ನ ಕೈಚೀಲಕ್ಕೆ ಸ್ವಲ್ಪ ಹೆಚ್ಚಿನ ರೊಟ್ಟಿ ಹೋಳುಗಳನ್ನೇ ಅನುಗ್ರಹಿಸಿದ್ದರು! ನನಗೆ ಖುಷಿಯಾಗಿತ್ತು. ಆದರೆ ಮನೆಯಲ್ಲಿ ವಿಷಯ ತಿಳಿದಾಗ ದೊಡ್ಡ ರಂಪವೇ ಆಯಿತು. ಹೇಳಿ ಕೇಳಿ ನಾನೊಬ್ಬ ಸರಕಾರಿ ಸಂಬಳ ಪಡೆಯುವ ಮಾಸ್ತರನ ಮಗ. ನನ್ನಂಥವನು ಬೇಡಲು ನಿಂತದ್ದು ನನಗೂ, ನನ್ನ ತಾಯಿ, ತಂದೆಯರಿಗೂ ಅವಮಾನಕರ ಸಂಗತಿಯೇ. ಅಷ್ಟೆಲ್ಲಾ ಗಂಭೀರವಾಗಿ ಯೋಚಿಸುವ ತಿಳುವಳಿಕೆಯಾದರೂ ಎಲ್ಲಿತ್ತು? ಬರಿಯ ಬಾಯಿ ಚಪಲ ಮತ್ತು ಬೇಡುವುದೂ ಒಂದು ಆಟವೆಂಬಂತೆ ಗೆಳೆಯರೊಡನೆ ಹೊರಟುಬಿಟ್ಟಿದ್ದೆ. ಮನೆಯ ಮಾನ ಕಳೆದನೆಂದು ಅವ್ವ ಅಟ್ಟಾಡಿಸಿ ಹೊಡೆದಳು, ಅಪ್ಪ ಚೆನ್ನಾಗಿ ಬೈದಿದ್ದು, ಅಜ್ಜ ಕಣ್ಣೀರು ಹಾಕಿದ್ದ.             ಆದರೆ ಅಂದು ನಮ್ಮ ಕೇರಿಯ ಜನಕ್ಕೆ ಬೇಡಿಕೆ’ ಎಂಬುದು ಹಸಿವಿನ ಅನಿವಾರ್ಯತೆಯಾಗಿತ್ತು. ಸರಿಯಾಗಿ ಅಕ್ಕಿಯ ಗಂಜಿ ಬೇಯಿಸಿ ತಿಂದರೆ ಅದೇ ಮೃಷ್ಟಾನ್ನ! ಬಹುತೇಕ ಅಕ್ಕಿಯ ನುಚ್ಚಿನ ಗಂಜಿ ಇಲ್ಲವೆ ಅಂಬಲಿ ಕುದಿಸಿ ಕುಡಿದು ದಿನಕಳೆಯುವ ಕೇರಿಯ ಜನಕ್ಕೆ ಮನೆಯಲ್ಲಿ ಒಂದು ದೋಸೆ ಮಾಡಿ ತಿನ್ನುವುದಕ್ಕೂ ಹಬ್ಬದ ದಿನಕ್ಕಾಗಿಯೇ ಕಾಯಬೇಕಿತ್ತು. ಅಂಥವರಿಗೆ ತಾವೇ ದುಡಿಯುತ್ತಿರುವ ಒಡೆಯರ ಮನೆಗಳಲ್ಲಿ ಬೇಡಿ ತಿನ್ನಲು ಯಾವ ಸಂಕೋಚವೂ ಆಗದಿರುವುದು ಸಹಜವೇ ಆಗಿತ್ತು. ಅಲ್ಲದೆ ಊರಿನ ಗ್ರಾಮದೇವತೆ ಮತ್ತು ಮನೆದೇವತೆಗಳ ಪೂಜಾ ದಿನಗಳಲ್ಲಿ ಆಗೇರರು ತಮ್ಮಲ್ಲಿರುವ ಹಲಗೆ ವಾದ್ಯ, ಪಂಚವಾದ್ಯಗಳನ್ನು ಬಾರಿಸುವ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ದೇವರ ಪ್ರಸಾದವಲ್ಲದೆ ಬೇರೆ ಸಂಭಾವನೆ ನೀಡುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಸಂಕ್ರಾಂತಿ, ಯುಗಾದಿ, ಸುಗ್ಗಿ ಹಬ್ಬದ ದಿನಗಳಲ್ಲಿ ಆಗೇರರು ಬೇರೆ ಬೇರೆ ತಂಡಗಳಲ್ಲಿ ಪಂಚವಾದ್ಯ, ಹಲಗೆವಾದ್ಯಗಳನ್ನು ಮನೆ ಮನೆಯ ಮುಂದೆ ಬಾರಿಸಿ ದುಡ್ಡು, ಭತ್ತ ಅಥವಾ ಅಕ್ಕಿಯನ್ನೇ ಬೇಡಿ ಪಡೆದು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನು ಬೇಡಿಕೆ’ ಎಂದು ಕರೆದು ಸಾಂಪ್ರದಾಯಿಕ ಆಚರಣೆಯಂತೆಯೇ ನಡೆಸುತ್ತಿದ್ದರು. ಇದಕ್ಕೆ ಸಾಮಾಜಿಕವಾಗಿ ಗೌರವವೂ ಇತ್ತು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಕಾಲಮಾನದ ತೀವೃ ಬದಲಾವಣೆಗೆ ನನ್ನ ಕೇರಿಯೂ ಹೊರತಾಗಲಿಲ್ಲ. ಅಲ್ಲಿ ಶಿಕ್ಷಣ, ರಾಜಕೀಯ, ಸಾಮಾಜಿಕ ಜೀವನ ಕ್ರಮ ಎಲ್ಲದರಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಕೇರಿಯ ಹಲಗೆವಾದ್ಯ’, ಪಂಚವಾದ್ಯ’ ತಂಡಗಳು ತಮ್ಮ ಅಂದಿನ ಬೇಡಿಕೆ’ಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡೇ ನಡೆದಿವೆ. ************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ  ಮಡಚಿದ ಹತ್ತು, ಐದು, ಎರಡು, ಒಂದರ ‌ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ  ಮತ್ತಷ್ಟು ಜಾಸ್ತಿಯಾಗಲಿ.” ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ. ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ‌ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು,  ಹೂಗಳನ್ನು ನೇವರಿಸುವ ಹುಡುಗಿಯರು. ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ  ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು.  ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ.  ನಮ್ಮೂರು ಅವರಿಗೆ ಸಾಕುತಾಯಿ.  ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿ‌ರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು‌ ನಮ್ಮ‌ಮನೆ. ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು. ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು. ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮ‌ಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ‌ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ.  ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ. ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು.  ಈ ಬಾಗಿಲು ತಟ್ಟುವ ಕಾಯಕ  ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ. ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು  ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ.  ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ.  ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು.  ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ.   ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ. ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ,  ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ  ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು.  ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ.  “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು.  “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ.  ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು. ವಾರ್ಷಿಕೋತ್ಸವದ ದಿನ ನಮಗೆ‌ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು.  ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು.  ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ. ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ.  ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು. ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು.  ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ  ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ. ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ.  ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್‌ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು. ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ.  ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ. ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು.  ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು”  “ಬೇಗ ಬೇಗ ನಡೀ ಕಾಲೇಜಿಗೆ ಎಂದ. ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ. “ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ. ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಒಂದು ಹಾವಿನ ಕಥೆ ಮತ್ತು ನಾವು ಕೆಲವು ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಎಂಥದೋ ಅನಿವಾರ್ಯತೆ ಕಾಡುತ್ತದೆ. ಮಾಡಬೇಕೆಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ, ನೋವು, ಹತಾಶೆ… ಬೇಕಾದವರನ್ನು ಮನಸಿಗೆ ಹತ್ತಿರವಾದವರನ್ನು ನಾವಾಗೇ ಹಚ್ಚಿಕೊಂಡವರನ್ನು ಎದೆಗೆ ತಬ್ಬುವ ಮನಸಿದ್ದಾಗಲೂ ದೂರ ನಿಲ್ಲಬೇಕಾದ ಸಂಯಮದ ಪ೫ರೀಕ್ಷೆಗೆ ತಯಾರಾಗಬೇಕಾಗಿ ಬರುವ ಪರಿಸ್ಥಿತಿಯನ್ನು ಧ್ವನಿ ತೆಗೆಯದೇ ಬಯ್ದುಕೊಳ್ಳುತ್ತಾ ಒಳಗೊಳಗೇ ಹಟಕ್ಕೆ ಬೀಳುತ್ತೇವೆ. ಅದು ನಮ್ಮ ಮೇಲಿನ ನಮ್ಮ ಹಟ. ಚೌಕಟ್ಟನ್ನು ದಾಟಿದರೆ ನಮಗೆ ನಾವು ದಕ್ಕಿಬಿಡುತ್ತೇವೆಂದು ನಮಗೆ ಗೊತ್ತು. ಆದರೆ ನಮಗೆ ಅದಕ್ಕೆ ಬೇಕಾಗುವ ಒಂದು ಸಣ್ಣ ಸಾಹಸ ಮಾಡುವುದು ಬೇಕಿಲ್ಲ. ಯಾಕಿದ್ದಾತು ಸುಖಾಸುಮ್ಮನೆ ಉಸಾಬರಿ! ಇಂಥ ಮನೋಭಾವವೇ ನಮ್ಮನ್ನು ಆಳಿಬಿಡುತ್ತದೆ. ಅದರಲ್ಲೂ ನಮ್ಮನ್ನು ಹೆದರಿಸಿ ನಿಲ್ಲುವವರು ನಮ್ಮವರೇ ಆದಾಗ ಅವರನ್ನು ಎದುರಿಸುವುದು ಮತ್ತೊಂದೇ ಬಗೆಯ ಸಂಕಟ, ಸಂಕಷ್ಟ. ನನಗೊಂದು ಕತೆ ನೆನಪಾಗುತ್ತದೆ. ಒಮ್ಮೆ ಒಬ್ಬ ಸಾಧು ದಾರಿಯಲ್ಲಿ ಹೋಗುತ್ತಿರುತ್ತಾನೆ. ಅವನನ್ನು ಕಂಡ ಸಮೀಪದ ಊರಿನ ವ್ಯಕ್ತಿಯೊಬ್ಬ ಒಂದು ಕತೆ ಹೇಳಲು ಶುರು ಮಾಡುತ್ತಾನೆ. ಇಲ್ಲೊಂದು ಹಾವಿದೆ, ಆ ಹಾವು ಈ ದಾರಿಯಲ್ಲಿ ಓಡಾಡೋ ಜನರನ್ನ ಕಚ್ಚಿ ಸಾಯಿಸ್ತಿದೆ. ಸಾಧುಗಳೇ ನೀವೇ ಏನಾದ್ರು ಮಾಡಿ ಆ ಹಾವಿಗೆ ಬುದ್ಧಿ ಕಲಿಸ್ಬೇಕು ಅಂತ ಕೇಳ್ಕೊತಾನೆ ಕೊನೆಗೆ. ನಂತ್ರ ಅಲ್ಲಿಂದ ಹೊರಟು ಹೋಗ್ತಾನೆ. ಆಮೇಲೆ ಆ ಸಾಧು ಹಾವಿನ ಬಳಿ ಹೋಗ್ತಾನೆ. ಹಾವು ಸಾಧುವನ್ನೂ ನೋಡಿ ಬುಸುಗುಡುತ್ತದೆ. ಆಗ ಸಾಧು ಅಲ್ಲಾ ನಿನಗೇನಾದ್ರು ಬುದ್ಧಿಗಿದ್ದಿ ಇದೆಯಾ ಇಲ್ವಾ… ಯಾಕ್ ನೀನು ಜನರಿಗೆ ತೊಂದ್ರೆ ಕೊಡ್ತಿದೀಯಾ? ಅದೆಲ್ಲ ತಪ್ಪು ತಾನೇ… ಪಾಪ ಕಣೋ ಬಿಟ್ಬಿಡೋ ಅದನ್ನೆಲ್ಲಾ ಅಂತ ಉಪದೇಶ ಮಾಡ್ತಾನೆ. ಇದರಿಂದ ಮನಃಪರಿವರ್ತನೆಗೆ ಒಳಗಾದ ಹಾವು ತಾನೂ ಸಾಧುವಾಗಿಬಿಡ್ತದೆ. ಸಾಧು ತನ್ನ ದಾರಿ ಹಿಡಿದು ಹೊರಟು ಹೋಗ್ತಾನೆ. ಅಂದಿನಿಂದ ಶುರು ಜನರ ಉಪಟಳ! ತನ್ನ ಪಾಡಿಗೆ ತಾನಿರೋ ಪಾಪದ ಸಾಧು ಹಾವನ್ನ ಮನ ಬಂದ ಹಾಗೆ ಹೊಡೀತಾರೆ, ಬಡೀತಾರೆ, ಕಲ್ಲು ಎಸೀತಾರೆ, ಕೋಲಿನಿಂದ ತಿವೀತಾರೆ… ಒಟ್ನಲ್ಲಿ ಹಣ್ಗಾಯಿ ನೀರ್ಗಾಯಿ ಮಾಡ್ತಾರೆ. ಆದ್ರೆ ಸಾಧುವಾಗಿಬಿಟ್ಟಿದ್ದ ಹಾವು ಮಾತ್ರ ಸುಮ್ಮನೇ ಒದೆ ತಿನ್ನುತ್ತಾ ಸಾಯುವ ಹಾಗಾಗಿಬಿಡ್ತದೆ. ಅದೇ ಮಾರ್ಗವಾಗಿ ಮತ್ತೆ ಅದೇ ಸಾಧು ಬರ್ತಾನೆ. ಹಾವಿನ ಸ್ಥಿತಿ ಕಂಡು ಅವನಿಗೆ ಮರುಕ ಹುಟ್ತದೆ. ಅದನ್ನ ಕರುಣೆಯಿಂದ ಎತ್ತಿಕೊಂಡು ಔಷಧೋಪಚಾರ ಮಾಡ್ತಾನೆ. ಆಮೇಲೆ ಕೇಳ್ತಾನೆ ಯಾಕೋ ಈ ಸ್ಥಿತಿ ನಿಂಗೆ ಅಂತ. ಆಗ ಹಾವು ಹೇಳ್ತದೆ ನೀವೇ ತಾನೆ ಹೇಳಿದ್ದು ನಾನು ಯಾರನ್ನೂ ಕಚ್ಬಾರ್ದು ಅಂತ, ಅದಕ್ಕೆ ನಾನು ಕಚ್ಚೋದನ್ನೇ ಬಿಟ್ಬಿಟ್ಟೆ. ಆದರ ಪ್ರತಿಫಲವೇ ಇದು. ನಾನು ಸುಮ್ನಿರೋದನ್ನ ಕಂಡು ಜನ ಹತ್ತಿರ ಬಂದ್ರು. ನನ್ನನ್ನ ವಿನಾಕಾರಣ ಹೊಡೆದುವಹಿಂಸೆ ಮಾಡಿದ್ರು. ಆದ್ರೂ ನಾನವರಿಗೆ ಏನೂ ಮಾಡ್ಲಿಲ್ಲ ಅನ್ನುತ್ತೆ. ಇದನ್ನು ಕೇಳಿದ ಸಾಧುವಿಗೆ ಅಯ್ಯೋ ಪಾಪ ಅನ್ಸತ್ತೆ. ಮತ್ತೆ “ಅಲ್ಲೋ ಹಾವೇ ನಾನು ನಿನಗೆ ಕಚ್ಬೇಡ, ಜನ್ರನ್ನ ಕೊಲ್ಬೇಡ ಅಂತ ಹೇಳಿದ್ನೇ ಹೊರತು, ಬುಸುಗುಟ್ಟಿ ಹೆದರಿಸ್ಬೇಡ ಅಂತ ಹೇಳಿರಲಿಲ್ಲ ತಾನೇ. ನೀನು ನಿನ್ನನ್ನ ರಕ್ಷಿಸಿಕೊಳ್ಳಲಿಕ್ಕೆ ಬುಸುಗುಟ್ಟಿ ಹೆದರಿಸಿದ್ದರೆ ಸಾಕಿತ್ತು ಅಲ್ವ… ಯಾರೂ ಹತ್ರ ಬರ್ತಿರಲಿಲ್ಲ ತಾನೇ…” ಎನ್ನುತ್ತಾರೆ. ಆಗ ಹಾವಿಗೆ ತನ್ನ ತಪ್ಪಿನ ಅರಿವಾಗ್ತದೆ. ತಾನು ಬುಸುಗುಟ್ಟಿ ಜನರಿಂದ ಪಾರಾಗಬೇಕಿತ್ತು ಮತ್ತು ಯಾರನ್ನೂ ಕಚ್ಚದೆ ಒಳ್ಳೆಯವನೂ ಆಗಬೇಕಿತ್ತು ಅಂತ. ಈ ಕತೆ ನನಗೆ ಬಹಳ ಸಾರಿ ನೆನಪಾಗ್ತಿರ್ತದೆ. ಮತ್ತೆ ಬಹಳಷ್ಟು ಪರಿಸ್ಥಿತಿಯಲ್ಲಿ ನನಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ದಾರಿ ತೋರಿಸುತ್ತದೆ. ನಾವು ಯಾರನ್ನೇ ಆಗಲಿ, ಯಾವ ಪರಿಸ್ಥಿತಿಯಲ್ಲೇ ಆಗಲಿ ಎದುರಿಸಲು ಅಂಜಿ ಅವರು ನಮ್ಮ ವಿಷಯದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಯಾಕಾದ್ರು ಬಿಡಬೇಕು… ನಂತರ ಅವರು ಶೋಶಿಸುವಾಗ ಸುಮ್ಮನೇ ಯಾಕೆ ನಲುಗಬೇಕು… ಅದಕ್ಕೆ ಬದಲಾಗಿ ನಮ್ಮ ಅಭಿಮಾನ ಅಸ್ಮಿತೆಗೆ ಪೆಟ್ಟಾಗದಂತೆ ಒಂದು ನಿರುಪದ್ರವಿ ಗಟ್ಟಿ ದನಿಯೊಂದನ್ನು ಹೊರಹಾಕುವುದರಿಂದ ಎದುರಿನವರಿಗೆ ಕನಿಷ್ಟ ನಾವು ನಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂತಾದರೆ ಸುಮ್ಮನಿರಲಾರೆವು ಎನ್ನುವ ಮೆಸೇಜನ್ನು ಅವರಿಗೆ ತಲುಪಿಸುವ ಕೆಲಸವನ್ನಾದರೂ ಮಾಡಲೇ ಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಎದುರಿಗಿರುವವರು ಬೇರೆಯವರಾದರೆ ಕತ್ತಿ ಹಿಡಿಯುವುದು ಸುಲಭ. ಆದರೆ ನಿಂತಿರುವವರು ನಮ್ಮವರೇ ಆದಾಗ?! ಇದು ಕಷ್ಟಾತಿಕಷ್ಟ. ಆದರೆ ಖಂಡಿತಾ ಸಾಧ್ಯ. ಅಸಾಧ್ಯವಂತೂ ಅಲ್ಲ. ನಿರಾಶರಾಗದೆ ಪ್ರಯತ್ನಿಸಿದರೆ ನಮ್ಮನ್ನು ನಾವು ದೃಢಗೊಳಿಸಿಕೊಳ್ಳುವುದೂ ಸಾಧ್ಯವಾಗ್ತದೆ. ಆದರೆ ಸುಮ್ಮನೆ ಇರುವುದನ್ನು ಅದೆಷ್ಟು ವ್ಯವಸ್ಥಿತವಾಗಿ ಹೇಳಿಕೊಟ್ಟುಬಿಡುತ್ತೇವೆ ನಾವು! ನನ್ನ ಗೆಳತಿಯೊಬ್ಬರು ಇದ್ದಾರೆ. ಯಾರು ಏನೇ ಅನ್ನಲಿ ತಿರುಗಿ ಮಾತನಾಡುವುದು ಅವರಿಗೆ ಬಹಳಾ ಕಷ್ಟ. ಅವರೇ ಹೇಳುವ ಹಾಗೆ, ನಾಲ್ಕು ಜನ ಗಂಡುಮಕ್ಕಳಿದ್ದ ದೊಡ್ಡ ಮನೆಗೆ ಸೊಸೆಯಾಗಿ ಬಂದ ಅವರು, ಎಲ್ಲಿ ಒಂದು ಮಾತಾಡಿದರೆ ಬೇರೆಯವರಿಗೆ ನೋವಾಗುತ್ತದೋ ಎಂದು ಯೋಚಿಸುತ್ತಲೇ ಹಲ್ಲುಕಚ್ಚಿ ಸಹಿಸುತ್ತಾ ಬದುಕಿದ್ದು ಎನ್ನುತ್ತಾರೆ. ಎಷ್ಟೆಲ್ಲಾ ಮಾಡಿ ಬಡಿಸಿ ಉಣಿಸಿ ಕೊನೆಗೆ ಒಂದು ಕೆಟ್ಟ ಮಾತಾಡಿಬಿಟ್ಟರೆ ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದಲ್ಲ ಎಂದು ಸಹಿಸುವುದನ್ನು ಕಲಿತೆ ಎನ್ನುತ್ತಾರೆ. ಇಂಥ ಪಾಠಗಳು ನಮಗೆ ತವರಿನಿಂದಲೇ ಸಿಗುತ್ತಿತ್ತು ಎಂತಲೂ ಹೇಳುವುದನ್ನು ಮರೆಯುವುದಿಲ್ಲ. ಇಂತಹ ಅದೆಷ್ಟು ಸಂಪ್ರದಾಯದ ಹೆಸರಿನ ಪಾಠಗಳು! ಈ ಪಾಠಗಳೆಲ್ಲ ಹೆಣ್ಮಕ್ಕಳಿಗೆ ಮಾತ್ರ ಏಕೆ… ಆ ನನ್ನ ಗೆಳತಿ ಇಂತಹ ಪಾಠಗಳಿಂದಾಗಿ ಅದೆಷ್ಟು ಮೃದು ಎಂದರೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೂ ಸಾಕು ಇವರಿಗೆ ಗಂಟಲು ಕಟ್ಟಿ ಅಳುವೇ ಬಂದುಬಿಡುತ್ತದೆ. ಇವರು ಒಂದು ಉದಾಹರಣೆ ಮಾತ್ರ. ಆದರೆ ಇಂತಹ ಅದೆಷ್ಟೋ ಜನ ಹೆಣ್ಮಕ್ಕಳು ನಮಗೆ ಸಿಗುತ್ತಾರೆ. ಮೀಸಲಾತಿ ಇದ್ದರೂ ಹೊರಬರದ, ಸ್ಪರ್ಧಿಸದ, ಸ್ಪರ್ಧಿಸಿ ಗೆದ್ದರೂ ಗಂಡನೇ ಅಧಿಕಾರ ನಡೆಸುವ ಅದೆಷ್ಟೋ ವಾಸ್ತವಗಳು ನಮ್ಮ ಕಣ್ಮುಂದೆಯೇ ಇರುತ್ತವೆ. ಇದೆಲ್ಲ ನೋಡುವಾಗ ನಾವು ನಮ್ಮೊಳಗೇ ಗಟ್ಟಿಯಾಗಿ ಹೊರಬರಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರಿಯಬೇಕಿದೆ ಅನಿಸುತ್ತದೆ. ಇದಕ್ಕೆ ಯಾವ ಭೇದವಿಲ್ಲ. ಹೆಣ್ಣುಮಕ್ಕಳಿಗೆ ಅದರ ಅಗತ್ಯ ಕೊಂಚ ಹೆಚ್ಚಿರಬಹುದು ಅಷ್ಟೇ. ಹೆಂಗರುಳು, ಹೆಣ್ಣಪ್ಪಿ ಅಂತೆಲ್ಲ ಮೂದಲಿಕೆಗೆ ಒಳಗಾಗುವ ಅದೆಷ್ಟೋ ಗಂಡ್ಮಕ್ಕಳ ಪಾಡೂ ಇದಕ್ಕೆ ಭಿನ್ನವಾಗಿಲ್ಲ ಎನ್ನುವುದೂ ನಿಜವೇ. ಇದಕ್ಕೆಲ್ಲ ಮದ್ದೆಂದರೆ ಮಿತಿಗಳನ್ನು ಮೀರುವುದು. ಯಾವುದು ಗೊಡ್ಡು ಎನಿಸುತ್ತದೋ ಅದನ್ನು ದಿಟ್ಟತನದಿಂದ ನಿರಾಕರಿಸುವುದು. ಕಟ್ಟಳೆಗಳು ಒಳಗಿನದ್ದಾದರೂ ಸರಿ ಹೊರಗಿನದ್ದಾದರೂ ಸರಿ, ಸರಿಸಿ ಹೊರ ಬರುವುದು… ಈ ಮದ್ದು ನಮ್ಮ ಮತಿಗೆ ದಕ್ಕಲಿ… **************************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಮುಖಾಮುಖಿ

ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ.  ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ. ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ.‌ ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ.  ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ.  ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು. ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು. ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ. ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ.  ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ. ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು. ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ‌ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ . ಮೈದಾನದ ಪಶ್ಚಿಮಕ್ಕೆ‌ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು.  ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ  ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ  ಉದ್ದದ ಬಾಕ್ಸ್ ಕಾಣಿಸುತ್ತದೆ.  ದಾಟಿ ಹೋದರೆ ಪರೀಕ್ಷಾಕೊಠಡಿ,  ನಂತರ ಲೇಡಿ ಡಾಕ್ಟರ್ ರೂಮ್.  ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ.  ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ. ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು‌‌ ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು. ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು. ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!. ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ‌ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!. ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ. ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ  ಮೋಹಿಸುವ ಮರುಳುತನ. ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು. ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು.  ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು. ************************************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ ವಿನೋದಗಳಲ್ಲಿ ಜೊತೆ ಸೇರುವಾಗ ಜಾತಿಗೀತಿಯ ಯಾವ ಕೀಳರಿಮೆಯೂ ಕಾಡದಂತೆ ನಮ್ಮನ್ನು ನೋಡಿಕೊಂಡರು. ನೋವಿನ ಸಂಗತಿಯೆಂದರೆ ಈ ಯಾವ ಗೆಳೆಯರೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ. ಅವರೆಲ್ಲ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಯಾವ ಸುಳಿವೂ ನನಗಿಲ್ಲ. ಆದರೆ ಅವರೆಲ್ಲ ನನಗಿಂತ ಉತ್ತಮ ಸ್ಥಿತಿವಂತರಾಗಿಯೇ ಇದ್ದಿರಬೇಕು ಎಂದು ನಾನು ಭಾವಿಸಿದ್ದೇನೆ.             ಬನವಾಸಿಯ ಬಾಲ್ಯದ ಸಂತಸದ ದಿನಗಳಲ್ಲಿಯೂ ನನ್ನನ್ನು ನೋವಿನ ನೆನಪಾಗಿ ಕಾಡುವ ಒಂದೆರಡು ಸಂದರ್ಭಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇರುತ್ತದೆ…..             ಬನವಾಸಿಯ ವಾಸ್ತವ್ಯದ ಸಂದರ್ಭದಲ್ಲಿ ಹುಟ್ಟಿದವನು ಎಂಬ ಕಾರಣದಿಂದ ಬಹುಶಃ ನನ್ನ ಎರಡನೆಯ ಸಹೋದರನಿಗೆ ಮಧುಕೇಶ್ವರ ಎಂದು ಹೆಸರನ್ನಿಟ್ಟಿರಬೇಕು. ಆಗ ತಾನೆ ಎದ್ದು ನಿಂತು ಹೆಜ್ಜೆಯಿಕ್ಕಲು ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ಅವನನ್ನು ಎತ್ತಿಕೊಂಡು ಆಡಿಸುವುದೂ, ನಡೆಸುವುದೂ ಮಾಡುತ್ತಿದ್ದೆನಾದ್ದರಿಂದ ನನ್ನೊಡನೆ ವಿಶೇಷ ಸಲುಗೆಯಿಂದ ಇರುತ್ತಿದ್ದ. ನಾನು ಆಟವಾಡಲು ಹೊರಟಾಗ ಹಠಮಾಡಿ ಬೆನ್ನಹಿಂದೆ ಬರುತ್ತಿದ್ದ.             ಒಮ್ಮೆ ಅವ್ವ ಒಂದಿಷ್ಟು ರೇಶನ್ ಸಾಮಾಗ್ರಿಗಾಗಿ ನನ್ನನ್ನು ಅಂಗಡಿಗೆ ಕಳುಹಿಸಿದ್ದಳು. ಅಪ್ಪನ ಸೈಕಲ್ ಮನೆಯಲ್ಲಿತ್ತು. ಅದನ್ನು ಹತ್ತಿ ಕೂರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಪೆಡಲ್ ಮೇಲೆ ಕಾಲಿಟ್ಟು ಹೊಡೆಯುವ ರೂಢಿಮಾಡಿಕೊಂಡಿದ್ದೆ. ನನಗೋ ಇಂಥ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗುತ್ತಿತ್ತು. ಅವಸರದಲ್ಲಿ ಸೈಕಲ್ ಏರಿ ಹೊರಟೆ. ಮಧು ನನ್ನ ಬೆನ್ನ ಹಿಂದೆ ಬರುತ್ತಿದ್ದಾನೆ. ಎಂಬುದನ್ನು ಗಮನಿಸಲೇ ಇಲ್ಲ. ಓಣಿಯ ತಿರುವಿನಲ್ಲಿ ನಾನು ಮರೆಯಾಗುವವರೆಗೆ ನನ್ನ ಹಿಂದೆಯೇ ಓಡಿ ಬರುತ್ತಿದ್ದ ಮಧು, ನಾನು ಮರೆಯಾಗುತ್ತಲೇ ಹಿಂದಿರುಗಿದವನು ಬೇರೆ ದಾರಿ ಹಿಡಿದು ಮುಂದೆ ಸಾಗಿದ್ದಾನೆ. ಆಗ ತಾನೆ ಓಡಾಡಲು ಕಲಿತ ಹುಡುಗ ದಾರಿ ತಪ್ಪಿ ಅಳುತ್ತ ಓಡುವಾಗ ಅವರಿವರು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಷ್ಟು ಅವರಿಂದ ತಪ್ಪಿಸಿಕೊಂಡು ಅಳುತ್ತ ಒಂದು ದಿಕ್ಕು ಹಿಡಿದು ಓಡುತ್ತಲೇ ಇದ್ದಾನೆ. ದಾರಿಯಲ್ಲಿ ನಮಗೆ ಪರಿಚಯವಿದ್ದ ಹೆಂಗಸೊಬ್ಬಳು ಅವನನ್ನು ಗುರುತು ಹಿಡಿದವಳು ಶತಾಯ ಗತಾಯ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಅವಳು ಮೂಕಿ. ಮಾತು ಸ್ಪಷ್ಟವಿಲ್ಲ. ತನ್ನ ಮೂಕ ಭಾಷೆಯಲ್ಲಿ ವಿಕಾರವಾಗಿ ಅರಚುತ್ತ ಮಧುವನ್ನು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಇನ್ನಷ್ಟು ಗಾಬರಿಗೊಂಡು ಚೀರುತ್ತ ಓಡಿದ್ದಾನೆ.             ಇತ್ತ ಮನೆಯಲ್ಲಿ ಮಧುವನ್ನು ನಾನೇ ಕರೆದೊಯ್ದಿರಬೇಕೆಂದು ನಿರುಮ್ಮಳವಾಗಿದ್ದ ತಾಯಿ, ತಂಗಿಯರೆಲ್ಲ ನಾನೊಬ್ಬನೇ ಮರಳಿ ಬಂದಾಗ ಹೌಹಾರಿ ಹೋದರು. ಮನೆಯಲ್ಲಿ, ನೆರೆಮನೆಗಳಲ್ಲಿ, ಬೀದಿಗಳಲ್ಲಿ ಮಧುವನ್ನು ಅರಸಿ ಕಾಣದೆ ಕಂಗಾಲಾದೆವು.             ತಾಸರ್ಧ ತಾಸು ವಾತಾವರಣವೇ ಪ್ರಕ್ಷುಬ್ಧವಾಗಿ ಹೋಯಿತು. ಎಲ್ಲರೂ ನನ್ನ ನಿರ್ಲಕ್ಷ್ಯ ವೇ  ಇದಕ್ಕೆ ಕಾರಣವೆಂದು ಆಡಿಕೊಳ್ಳುವಾಗ ನಾನು ಕುಸಿದು ಹೋಗಿದ್ದೆ. ಸುದೈವವೆಂದರೆ ಮಧುವನ್ನು ಗುರುತಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿ ವಿಫಲಳಾದ ಮೂಕಜ್ಜಿ ಅಷ್ಟಕ್ಕೆ ನಿಲ್ಲದೆ ನಮ್ಮ ಮನೆಯವರೆಗೆ ಓಡೋಡಿ ಬಂದು ಸಂಗತಿಯನ್ನು ತಿಳಿಸಿ ಉಪಕಾರ ಮಾಡಿದಳು. ಅಪ್ಪ ಅವ್ವ ಪೇಟೆಯಲ್ಲಿ ಸಿಕ್ಕುಬಿದ್ದ ಮಧುವನ್ನು ಹುಡುಕಿ ಕರೆತರುವ ಹೊತ್ತಿಗೆ ಸರಿರಾತ್ರಿಯಾಗಿತ್ತು. ಆದರೆ ಈ ಘಟನೆ ನನ್ನ ನಿರ್ಲಕ್ಷ್ಯ ಕ್ಕೆ ಉದಾಹರಣೆಯಾಗಿ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಆದರೆ ಅಂದು ಮರಳಿ ಮನೆ ಸೇರಿದ ಮಧು ಇಂದು ಈ ನೆನಪುಗಳನ್ನು ಬರೆಯುವ ಹೊತ್ತಿಗೆ ನಮ್ಮೊಡನಿಲ್ಲ. ವೃತ್ತಿಯಿಂದ ಕಂಡಕ್ಟರನಾದ. ಮದುವೆಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯಾದ. ತನ್ನ ೫೪ ನೇ ವಯಸ್ಸಿನಲ್ಲಿ ೨೦೧೭ ರ ಮೇ ತಿಂಗಳ ಒಂದು ದಿನ ತೀವೃವಾದ ನಿಮೋನಿಯಾ ಕಾಯಿಲೆಯಿಂದ ಬಳಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ.             ಬನವಾಸಿಯ ನೆನಪುಗಳಲ್ಲಿ ನನ್ನನ್ನು ಈಗಲೂ ಕೀಳರಿಮೆಯಿಂದ ಕಾಡುವ ಇನ್ನೊಂದು ಘಟನೆ ಬಂಕಸಾಣ ಜಾತ್ರೆ. ಅಪ್ಪ ಏಳನೆಯ ತರಗತಿಯ ವಿದ್ಯಾರ್ಥಿಗಳನ್ನು ಬಂಕಸಾಣ ಜಾತ್ರೆಯ ಪ್ರವಾಸಕ್ಕೆ ಕರೆದೊಯ್ದಿದ್ದರು. ಜಾತ್ರೆಯಾದ್ದರಿಂದ ನನ್ನನ್ನು, ನನ್ನ ತಮ್ಮ ನಾಗೇಶನನ್ನು ಜೊತೆಯಲ್ಲಿ ಕರೆದೊಯ್ದರು. ನಮಗಂತೂ ಬಹಳ ಸಂಭ್ರಮವಾಗಿತ್ತು. ಜಾತ್ರೆಯ ಮೋಜು ಮಜಾ ಎಲ್ಲವನ್ನು ಅನುಭವಿಸಿ ತಿರುಗಿ ಹೊರಡುವಾಗ ಅಪ್ಪನ ಕೆಲವು ವಿದ್ಯಾರ್ಥಿಗಳು ಮತ್ತಷ್ಟು ಖರೀದಿಯ ನೆಪದಲ್ಲಿ ಸಂತೆ ಅಂಗಡಿಗಳಲ್ಲಿ ಹೊಕ್ಕು ಚೌಕಾಶಿ ಮಾಡುತ್ತಿದ್ದರು. ಯಾವುದೋ ಹುಡುಗ ಕಾಲಿನ ಸ್ಲಿಪರ್ ಕೊಳ್ಳಲು ಚೌಕಾಶಿ ಮಾಡುತ್ತಿದ್ದಾಗ ಅಪ್ಪ ಮಧ್ಯ ಪ್ರವೇಶಿಸಿ ಒಂದು ರೇಟಿಗೆ ಹೊಂದಿಸಿ ಹುಡುಗನಿಗೆ ಸ್ಲಿಪರ್ ಕೊಡಿಸಿದರು.             ಅವರಿಗೆ ಏನನ್ನಿಸಿತೋ… ನನ್ನ ತಮ್ಮ ನಾಗೇಶನಿಗೂ ಒಂದು ಜೊತೆ ಹವಾಯಿ ಚಪ್ಪಲಿ ಕೊಡಿಸಿದರು. ಅಂಗಡಿಯಿಂದ ಹೊರ ಬಂದ ಬಳಿಕ ನಾನು ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಸಹಿಸಲಾಗದಷ್ಟು ನಾಚಿಕೆ ಮತ್ತು ಅಸಹ್ಯವುಂಟಾಗುತ್ತದೆ. ತಮ್ಮ ತೊಟ್ಟ ಚಪ್ಪಲಿಗಳನ್ನು ನೋಡಿ ನನ್ನ ಕಾಲುಗಳು ಭಾರವಾದವು ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಮುಖ ಊದಿಕೊಂಡಿತು. ಹೆಜ್ಜೆ ಮುಂದಿಡಲಾಗದೆ ತಡವರಿಸುತ್ತಿದ್ದೆ.             ಇದನ್ನು ಗಮನಿಸಿದ ಅಪ್ಪ ತುಂಬಾ ನೊಂದುಕೊಂಡರು. ನನಗೂ ಒಂದು ಜೊತೆ ಚಪ್ಪಲಿ ಕೊಡಿಸುವ ಆಸೆ ಅವರಿಗೂ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಕಿಸೆ ಖಾಲಿಯಾಗಿತ್ತು. ಅಸಹಾಯಕತೆಯಿಂದ ಅವರು ಚಡಪಡಿಸುತ್ತಿದ್ದರೆ ಅದನ್ನು ಗ್ರಹಿಸಲಾಗದ ದಡ್ಡತನ ನನ್ನದಾಗಿತ್ತು. ಬೇರೆ ದಾರಿ ಕಾಣದೆ ವಿದ್ಯಾರ್ಥಿಯೊಬ್ಬನಿಂದ ಒಂದಿಷ್ಟು ಹಣವನ್ನು ಸಾಲವಾಗಿ ಪಡೆದ ಅಪ್ಪ ನನಗೆ ಚಪ್ಪಲಿ ಕೊಡಿಸಿದ ಬಳಿಕವಷ್ಟೇ ನನ್ನ ಕಾಲುಗಳು ಮುಂದುವರಿದವು.             ಆದರೆ ಬನವಾಸಿಗೆ ಬಂದ ಮರುದಿನವೇ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಆಟವಾಡಲು ಹೊರಡುತ್ತ ದೇವಸ್ಥಾನದ ಮೆಟ್ಟಿಲ ಮೇಲೆ ಕಳೆದಿಟ್ಟು ಹೋದ ಇಬ್ಬರ ಚಪ್ಪಲಿಗಳನ್ನು ಯಾರೋ ಅಪಹರಿಸಿ ಬಿಟ್ಟಿದ್ದರು….             ಅಪ್ಪನ ದೊಡ್ಡತನಕ್ಕೆ ನನ್ನ ಸಣ್ಣತನಕ್ಕೆ ಈ ಘಟನೆ ಉದಾಹರಣೆಯಾಗಿ ನನ್ನನ್ನು ಈಗಲೂ ಕಾಡುತ್ತಿದೆ.             ಬನವಾಸಿಯ ಬದುಕಿನ ಅವಧಿಯಲ್ಲಿ ಒಂದು ಅಚ್ಚಳಿಯದ ನೆನಪು ಮಳ್ಳು ಸುಕ್ರಣ್ಣನದು. ಸುಕ್ರಣ್ಣ ಮೊದಲಿಂದ ಮಳ್ಳನೇನಲ್ಲ. ಬನವಾಸಿಯ ವಿದ್ಯಾರ್ಥಿ ನಿಲಯದಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದೂರದ ಊರಿನಲ್ಲಿ ನಮಗೆ ಸ್ವಜಾತಿಯ ಬಂಧು ಎಂದರೆ ಈತನೊಬ್ಬನೇ ಮೂಲತಃ ನಮ್ಮ ನೆರೆಯ ಅಂಕೋಲಾ ತಾಲೂಕಿನ ಮೊಗಟಾ ಎಂಬ ಊರಿನವನು. ಮದುವೆಯಾಗಿದ್ದ. ಮಕ್ಕಳಾಗಿರಲಿಲ್ಲ. ಹೆಂಡತಿ ಶಿವಮ್ಮನೊಡನೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಉಳಿದಕೊಂಡಿದ್ದರು. ಹಬ್ಬ ಹುಣ್ಣಿಮೆಯಂಥ ಅಪರೂಪದ ಸಂದರ್ಭದಲ್ಲಿ ನಮ್ಮ ಮನೆಗೂ ಬಂದು ಹೋಗುತ್ತಿದ್ದರಿಂದ ಸಹಜವಾಗಿಯೇ ನಾವೆಲ್ಲ ಅವರನ್ನು ಹಚ್ಚಿಕೊಂಡಿದ್ದೆವು.             ನಮಗೆಲ್ಲ ಒಂದು ಹಂತದವರೆಗೆ ಆಪ್ತನಾಗಿಯೇ ಇದ್ದ. ಸುಕ್ರಣ್ಣ ಇದ್ದಕ್ಕಿದ್ದಂತೆ ಕೂಗಾಡುವುದು, ಯಾರ ಯಾರನ್ನೋ ಬಯ್ಯುವುದು, ಹೆಂಡತಿಯೊಡನೆ ಜಗಳವಾಡುತ್ತ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆಯುವುದು ಮಾಡ ಹತ್ತಿದ. ವಸತಿ ನಿಲಯದಲ್ಲಿ ಆಗ ಏಳನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ಚಿಗುರು ಮೀಸೆಯ ಹೊಂತಕಾರಿಗಳೂ ಇದ್ದರು. ಅವರಲ್ಲಿ ಯಾರೇ ಆದರೂ ತನ್ನ ಪತ್ನಿಯೆಡೆಗೆ ನೋಡಿದರೆ ಮಾತಾಡಿದರೆ ಅನುಮಾನಗೊಂಡು ಜಗಳ ಕಾಯುತ್ತಿದ್ದನಂತೆ. ಕೆಲವು ಅವಿವಾಹಿತ ಶಿಕ್ಷಕರೂ ಸುಕ್ರಣ್ಣನ ಅನುಮಾನದ ಕಣ್ಣಿಗೆ ಗುರಿಯಾಗಿ ಬೈಸಿಕೊಂಡದ್ದನ್ನೂ, ಅಪ್ಪನೇ ಮುಂದೆ ಹೋಗಿ ಅವನಿಗೆ ಬುದ್ದಿ ಹೇಳಿ ಸಂತೈಸಿದ್ದನ್ನು ಅಪ್ಪ ಮನೆಗೆ ಬಂದಾಗ ಅವ್ವನೊಡನೆ ವಿವರಿಸುವಾಗ ನಾವು ಕೇಳುತ್ತಿದ್ದೆವಾದರೂ ಚಿಕ್ಕವರಾದ ನಮಗೆ ಸಮಸ್ಯೆಯ ಅರಿವಾಗುತ್ತಿರಲಿಲ್ಲ. ಆದರೆ ಮಾತಿನ ಕೊನೆಯಲ್ಲಿ “ಮಳ್ಳ ಸುಕ್ರು … ಜಾತಿ ಮರ್ಯಾದೆನೆಲ್ಲಾ ಕಳೀತಾನೆ…” ಎಂದು ಮುಗಿಸುವುದನ್ನು ಕೇಳುತ್ತಾ ಸುಕ್ರಣ್ಣನಿಗೆ ಮಳ್ಳು ಹಿಡಿದಿದೆ ಎಂದೇ ನಾವು ನಂಬ ತೊಡಗಿದ್ದೆವು .             ಸುಕ್ರಣ್ಣನ ಸಂಸಾರದ ನಡುವೆ ಬಿರುಕು ಬೆಳೆಯುತ್ತಾ ಸಾಗಿತು. ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಪಡುತ್ತಾ ಶಾಲೆಯ ಆವರಣವನ್ನು ಪ್ರವೇಶಿಸಿ ಅವರನ್ನು ಬಯ್ಯ ತೊಡಗಿದಾಗ ಎಲ್ಲರಿಗೂ ಇವನ ಉಪದ್ರವ ಅಧಿಕವಾಯಿತೆಂದೇ ಅಸಹ್ಯಪಡುತ್ತಿದ್ದರು. ಕೆಲವೊಮ್ಮೆ ಯಾರನ್ನೂ ನೇರವಾಗಿ ಗುರಿಯಾಗಿಸದೇ ಎಲ್ಲರನ್ನೂ ದಿನವಿಡೀ ಬಯ್ಯುತ್ತ ಹುಚ್ಚರಂತೆಯೇ ವರ್ತಿಸತೊಡಗಿದ್ದ. ಕೊನೆ ಕೊನೆಗೆ ಸಾರ್ವಜನಿಕರೂ ಅವನನ್ನು ಮಳ್ಳನೆಂದೇ ಗುರುತಿಸುವ ಹಂತವನ್ನೂ ತಲುಪಿದ.             ೧೯೬೨-೬೩ ರ ಅವಧಿ ಎಂದು ನೆನಪು. ಎಲ್ಲೆಡೆ ಭಯಂಕರ ಮಳೆ. ವರದಾ ನದಿ ಉಕ್ಕಿ ಹರಿಯುತ್ತಾ ರಥ ಬೀದಿಯವರೆಗೂ ಪ್ರವಾಹ ಹರಿದು ಬಂದಿತ್ತು. ಶಾಲೆಗಳಿಗೆ ರಜೆ ಘೋಷಣೆಯಾಗಿತ್ತು. ಚಿಕ್ಕವರಾದ ನಾವುಗಳೆಲ್ಲ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಿಲ್ಲದೆ ಗ್ರಹ ಬಂಧನಕ್ಕೊಳಗಾಗಿದ್ದೆವು.             ಅಂಥ ಭಯಾನಕ ಮಳೆಯ ಒಂದು ರಾತ್ರಿ ಸುಕ್ರಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ನಂತರದ ಎರಡು ದಿನ ಶಾಲಾ ಸಿಬ್ಬಂದಿಗಳೂ, ಊರಿನ ಕೆಲವು ಜನರೂ ಸೇರಿ ಊರೆಲ್ಲಾ ಹುಡುಕಾಡಿದರು. ಎಲ್ಲಿಯೂ ಅವನ ಸುಳಿವು ದೊರೆಯಲಿಲ್ಲ. ಭಯಂಕರವಾದ ಬಿರುಗಾಳಿ ಮಳೆಯ ಒಂದು ರಾತ್ರಿ ಮನುಷ್ಯ ಮಾತ್ರರು ಹೊರಬರಲಾಗದ ಕಗ್ಗತ್ತಲೆಯಲ್ಲಿ ಯಾರೋ “ಬೋಲೋ ಭಾರತ್ ಮಾತಾಕೀ….ಜೈ” ಎಂದು ಕೂಗುತ್ತಾ ಹೋದುದನ್ನು ಕೇಳಿದ್ದೇವೆ ಎಂದು ರಸ್ತೆಯಂಚಿನ ಮನೆಗಳ ಕೆಲವರು ಮಾತಾಡಿಕೊಂಡರು. ಅದು ಸುಕ್ರಣ್ಣನೇ ಇರಬಹುದೆಂದೂ ಬಹುತೇಕ ಜನ ಭಾವಿಸಿದರು. ನಾವು ಹಾಗೆಯೇ ಅನುಮಾನ ಪಟ್ಟುಕೊಂಡೆವು.             ಮೂರನೆಯ ದಿನ ಶಾಲೆಯ ಶಿಕ್ಷಕರೂ ವಿದ್ಯಾರ್ಥಿ ಗುಂಪಿನೊಡನೆ ಸುಕ್ರಣ್ಣನನ್ನು ಅರಸಲು ಹೋದ ಅಪ್ಪ ನಿರಾಶೆಯಿಂದಲೇ ರಾತ್ರಿ ತಡವಾಗಿ ಮನೆಗೆ ಬಂದರು. ಅಪ್ಪ ಒಳಗೆ ಬಂದದ್ದೇ ನನ್ನ ತಮ್ಮ ನಾಗೇಶ ತುಂಬ ಮುಗ್ಧತೆಯಿಂದ “ಅಪ್ಪ ಸುಕ್ರಣ್ಣ ಸತ್ತೋದ್ನಂತೆ….” ಎಂದು ಹೇಳಿದ. ಅಪ್ಪ ಇದುವರೆಗೆ ತನ್ನ ದುಗುಡವನ್ನು ಹೊಟ್ಟೆಯೊಳಗೇ ತಡೆದಿಟ್ಟುಕೊಂಡಿದ್ದನೆನೋ.. ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವ್ವ ಮತ್ತು ನಾವೆಲ್ಲ ಅಪ್ಪನನ್ನು ಸಂತೈಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ****************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮೌ..ನದ ನಡುವಿನ ಮೌನ ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಡಿನ ನಟ್ಟ ನಡುವೆ, ಟೆಂಟ್ ನೊಳಗೆ ಮಲಗಿದ್ದೆ. ಚಿಕ್ಕಮಗಳೂರಿನ ಭದ್ರಾ ರಕ್ಷಿತಾರಣ್ಯದಲ್ಲಿ ಸ್ಕೌಟ್ ಕ್ಯಾಂಪ್ ಅದು. ವಿದ್ಯುತ್ ದೀಪಗಳು ಇರಲಿಲ್ಲ, ಕತ್ತಲು ಸುತ್ತಲೂ.  ವರ್ಷಗಳ ಹಿಂದೆ ದೂರ ನಕ್ಷತ್ರ ಗಳಿಂದ ಯಾತ್ರೆ ಹೊರಟು ಯಾತ್ರೆಯ ದಣಿವಿನಿಂದ ಮಂದವಾದ ಕಿರಣಗಳು, ತಂಗದಿರನ ಸೌಮ್ಯ ಬೆಳಕು ಮಾತ್ರ ಆ ಕಾಡನ್ನು ತಬ್ಬಿದ್ದವು. ಟೆಂಟು ಸುತ್ತಲೂ ಗಗನಕ್ಕೆ ಗೆಲ್ಲು ಚಾಚಿದ ಬೃಹತ್ ವೃಕ್ಷಗಳು. ಅವುಗಳಿಂದಾಚೆಗೆ ಕತ್ತಲೆ ಅಂದರೆ ಕತ್ತಲೆಯೇ. ಟೆಂಟ್ ನೊಳಗೆ ಕಣ್ಣೆಷ್ಟು ಅರಳಿಸಿದರೂ ಅರಿವಿಗೇ ಎಟುಕದಟಷ್ಟು ಕತ್ತಲೆ. ಅದಕ್ಕಿಂತ ಗಾಢ ಅನುಭೂತಿ ಮೌನದ್ದು. ಎಲ್ಲೋ ದೂರದ ಪ್ರಾಣಿಗಳ ಕೂಗನ್ನು ಬಿಟ್ಟರೆ ಅಲ್ಲಿ ಶಬ್ಧಶೂನ್ಯತ್ವ. ಆ ಮೌನದ ತಂಪಿನಲ್ಲಿ ಮನಸ್ಸು ತಣಿದು ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತೆ. ನಮ್ಮ ಎದೆಬಡಿತ ನಮಗೇ ಕೇಳ ತೊಡಗುತ್ತೆ. ಸಾಗರದ ಅಲೆಗಳು ಶಾಂತವಾದಾಗ ಆಳದಲ್ಲಿ ಸದ್ದಿಲ್ಲದೆ ನಡೆಯುವ ಹರಿವಿನ ಅನುಭೂತಿ ಆಗುತ್ತೆ. ಆಳದಲ್ಲಿ ಈಜಾಡುವ ಮೀನುಗಳು, ಬೃಹತ್ ತಿಮಿಂಗಿಲಗಳು, ರಕ್ತಕ್ಕಾಗಿ ಹಸಿದು ಅಸಹನೆಯಿಂದ ಸರಸರನೆ ಈಜುವ ಶಾರ್ಕ್ ಗಳು ಮತ್ತು ಇನ್ನಿತರ ಜಲಚರಗಳು ತಮ್ಮ ಚಲನೆಯಿಂದ ನಡೆಯುವ ತಲ್ಲಣಗಳು ಅರಿವಿಗೂ ಬರುತ್ತವೆ. ಹೃಷೀಕೇಶದ ತಪ್ಪಲಿನಿಂದ, ಹಿಮಾಲಯದ ಏರು ಆರಂಭ. ಹತ್ತಾರು ಕಿಲೋಮೀಟರ್ ಹತ್ತಿದರೆ ವಸಿಷ್ಠ ಗುಹೆ. ಅದರೊಳಗೆ ಕುಳಿತರೂ ಅಷ್ಟೇ, ರಾತ್ರೆಯ ಕತ್ತಲು, ಹಿಮಾಲಯದ ತಂಪಿಗೆ, ಮನಸ್ಸು ಸ್ಪಟಿಕೀಕರಿಸಿ ಮೌನ ಸಂಭವಿಸುತ್ತೆ. ಒಂದು ವಿಷಯ ಗಮನಿಸಿ. ಮೌನ ಎಂದರೆ ನಾಲಿಗೆಯನ್ನು ಸುಮ್ಮನಿರಿಸುವುದಲ್ಲ, ಕಿವಿ ಮುಚ್ಚುವುದೂ ಅಲ್ಲ. ನಮ್ಮ ಇಂದ್ರಿಯಗಳು ಹೊರಗಿನ  ಅಲೆಗಳಿಗೆ ಸ್ಪಂದಿಸುತ್ತಲೇ ಇರುತ್ತವೆ. ದೃಶ್ಯ, ಶಬ್ದ, ಸ್ಪರ್ಶ, ರಸಸ್ವಾದ, ವಾಸನೆ ಇವುಗಳನ್ನು ಗ್ರಹಿಸಿ ಪ್ರತಿಕ್ರಿಯೆ ಕೊಡುತ್ತವೆ. ಇವು ದೇಹದ ಚಟುವಟಿಕೆಗಳಿಗೆ ಅಗತ್ಯವೂ ಹೌದು. ಮೌನದ ಮೊದಲನೆಯ ಹಂತದಲ್ಲಿ, ಈ ಇಂದ್ರಿಯಗಳನ್ನು ಸಂಪೂರ್ಣ ಶಾಂತವಾಗಿಸಬೇಕು. ಅದು ಮೌನದ ಮೊದಲ ಹಂತ. ಮೌನದ ಎರಡನೆಯ ಹಂತದಲ್ಲಿ, ಭಾವ ಮತ್ತು ಕಲ್ಪನೆಗಳನ್ನು ಮೌನಕ್ಕೆ ಶರಣಾಗಿಸುವ ಕ್ರಿಯೆ. ಕಣ್ಣು ಮುಚ್ಚಿದರೆ, ಹೊರಗಿನ ದೃಶ್ಯ ಕಾಣದಿರಬಹುದು. ಆದರೆ ಮನಸ್ಸು, ಇಷ್ಟವಾದ, ಹಲವು ದೃಶ್ಯಗಳನ್ನು ಮನ:ಪಟಲದ ಮುಂದೆ ತಂದು ಆನಂದಿಸುತ್ತದೆ. ಹಾಗೆಯೇ ಶಬ್ಧವೂ. ಕಿವಿ ಮುಚ್ಚಿದರೂ, ಮನಸ್ಸಿನೊಳಗೆ ಇಷ್ಟವಾದ ಯಾವುದೋ ಹಾಡು, ಇನಿಯೆಯ ಪ್ರೀತಿಯ ಮಾತುಗಳು, ಮೇಷ್ಟ್ರು ಬೈದ ಮಾತುಗಳು, ಹೀಗೆ ಹತ್ತು ಹಲವು ಶಬ್ಧಗಳು ನಿಃಶಬ್ಧದ ಬಾಗಿಲು ಮುರಿದು ಒಳ ನುಗ್ಗುತ್ತವೆ. ಈ ಕಾನ್ಶಿಯಸ್ ಮೈಂಡ್ ಅನ್ನು ಮೌನವಾಗಿಸುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ಧ್ಯಾನಕ್ಕೆ ಮನಸ್ಸನ್ನು ಸಮರ್ಪಿಸಿದರೆ, ಮೌನದ ತುರೀಯಕ್ಕೆ ಪ್ರಜ್ಞೆ ತಲಪುತ್ತೆ. ಇದರ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ.  “ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ” ಅರಬಿಂದೋ ಅವರ ಧ್ಯಾನ ಯೋಗದಿಂದ ಪ್ರೇರಣೆ ಪಡೆದು ೧೯೪೮ರಲ್ಲಿ, ಬೇಂದ್ರೆ ಮತ್ತು ವಿ.ಕೃ. ಗೋಕಾಕ್ ಅವರು, ಇತರ ಸಮಾನ ಮನಸ್ಕ ಗೆಳೆಯರ ಜತೆಗೆ ಮೌನ ಸಪ್ತಾಹ ಆಚರಿಸುತ್ತಾರೆ. ಆ ಮೌನ ಸಪ್ತಾಹದಲ್ಲಿ, ಮೌನಾಚರಣೆಯ ಗರ್ಭದ ಆಳಚಿಂತನೆಯಿಂದ ಅವರು ಬರೆದ ಕವನ ” ಅಸ್ಮಿತಾ” ಅದರ ಕೊನೆಯ ಸಾಲುಗಳು ಹೀಗಿವೆ. “ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ ಶ್ರುತಿಯನ್ನು ಹಿಡಿದಿರುವೆಯಾ ? ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು ಓಂವೇದ ಪಡೆದಿರುವೆಯಾ ? ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಫೂರ್ತಿಸಿತ್ತು ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ ಸ್ಮಿತವಾಗಿ ಮೂರ್ತಿಸಿತ್ತು.” ಮೌನದಾಚೆಗಿನ ಧ್ಯಾನಸ್ಥ ಸ್ಥಿತಿಯಿಂದ, ” ಸ್ಮಿತವೆ ವಿಸ್ಮಿತವಾಯ್ತು, ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಪೂರ್ತಿಸಿತ್ತು, ” ಶಬ್ದಗಳ ಶಬ್ಧಕ್ಕೆ ಮೀರಿದ ಸಾಲುಗಳಿವು. ಕಳಿಂಗ ಯುದ್ಧದ ನಂತರದ ರಾತ್ರೆ, ಚಕ್ರವರ್ತಿ ಅಶೋಕ ತಾನೇ ಹರಿಸಿದ ರಕ್ತದ ಕೋಡಿಯನ್ನು ನೋಡಿ ಹಲವು ಚಿಂತನೆಗಳಿಗೊಳಗಾಗುತ್ತಾನೆ. ರಾತ್ರೆಯಿಡೀ ಆತನ ಮೌನ, ಮಾರನೆಯ ದಿನ ತನ್ನ ಬದುಕನ್ನೇ ಅಹಿಂಸೆಗೆ ಸಮರ್ಪಣೆ ಮಾಡುವ ನಿರ್ಧಾರದ ಹಿಂದೆ ಯುದ್ಧಾನಂತರದ ಮೌನವಿದೆ. ಧಾರಾಕಾರವಾಗಿ ಸುರಿದ ಮಳೆ, ಸಿಡಿಲು, ಕೋಲ್ಮಿಂಚು, ನಂತರ ಎಲ್ಲವೂ ಮೌನವಾಗುತ್ತೆ. ತಡೆಯಲಾದ ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತ ನಂತರವೂ ಒಂದು ಸುದೀರ್ಘ ಮೌನವಿರುತ್ತದೆ. ಗಂಡ ಹೆಂಡತಿಯರ ಜಗಳದ ನಂತರದ ಮೌನಕ್ಕೆ ಔಷಧೀಯ ಗುಣವಿದೆ. ಮೌನ ಖಾಲಿ ಹಾಳೆಯಂತೆ. ಅದರಲ್ಲಿ ನೀವೇನು ಕಾಣ ಬಯಸುತ್ತೀರೋ,ಅದನ್ನು ಬರೆಯಬಹುದು. ಅದಕ್ಕೇ ಮೌನವನ್ನು ಕವಿಗಳು ಕಾಡಿ ಕಂಡು ಹಾಡಿ, ಬಳಸಿದ್ದಾರೆ. ಬೇಂದ್ರೆಯವರ “ಏಲಾಗೀತ” ದಲ್ಲಿ ಮೌನದ ಅಪೂರ್ವ ಸಾಲು ಹೀಗಿದೆ. “ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು  ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. “ ಮೌನ, ಶಬ್ಧಕ್ಕೆ ಹಾಸಿಗೆ ಅನ್ನುತ್ತಾರೆ,ಬೇಂದ್ರೆಯವರು ಗೋಪಾಲಕೃಷ್ಣ ಅಡಿಗರ ಈ ಕೆಳಗಿನ ಕವನ ಆರಂಭವಾಗುವುದೇ ಮೌನದಿಂದ. “ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು; ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಭೂಮಿಯೇ ಮೌನವನ್ನು ಬೆಚ್ಚಗೆ ಅಪ್ಪಿಕೊಂಡು ಪುಳಕಗೊಳ್ಳುವಾಗ, ಆಕೆ ಧಾರಿಣಿಯಾಗುತ್ತಾಳೆ. ಹಿಂದುಸ್ತಾನಿ ಸಂಗೀತದಲ್ಲಿ, ಒಂದು ಸ್ವರವನ್ನ ಬಿಗಿ ಹಿಡಿದು ಕಡಿಯದ ಧಾರೆಯಂತೆ ಮಾಡುವ ಸುದೀರ್ಘ ಆಲಾಪಕ್ಕೆ, ಧಾರಣೆ ಅನ್ನುವುದಿದೆ. ಧಾರಣೆಯಲ್ಲಿ ಸ್ವರಸಮರ್ಪಣೆಯ ಧ್ಯಾನಸ್ಥ ಮನಸ್ಸಿದೆ. “ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಪ್ರಕೃತಿಯ ಕ್ರಿಯೆಗಳು ಮೌನವನ್ನು ಜತೆ ಜತೆಗೇ ಹೊತ್ತು ತರುತ್ತವೆ. ನಾವು ನಡೆಯುವಾಗ, ಎರಡು ಹೆಜ್ಜೆಗಳ ನಡುವೆ ಮೌನವಿದೆ. ನಾವು ಬರೆಯುವ ವಾಕ್ಯಗಳಲ್ಲಿ ಪದಗಳ ನಡುವೆ ಮೌನವಿದೆ. ಸ್ಫುರಿಸುವ ಭಾವ ವೈವಿಧ್ಯಗಳ ನಡುವೆ ಮೌನವಿದೆ. ನಿತ್ಯಕವಿ ನಿಸಾರ್ ಅಹಮದ್ ಅವರ ಬೇಸರಾಗಿದೆ ಮಾತು ಕವನದ ಕೆಲವು ಸಾಲುಗಳು ಹೀಗಿದೆ ನೋಡಿ. ” ಬೇಸರಾಗಿದೆ ಮಾತು, ಭಾರವಾಗಿದೆ ಮೌನ ನೋವು ಕರಗಿದೆ ಕಣ್ಣಲ್ಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿಯದಂತೆ ಭಾವ ಕುಟುಕಿದೆ ಮನದಲಿ ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ ಹೊಸತು ಬದುಕಿನ ಬಯಕೆಗೆ” ಅಡಿಗೆ ಚುಚ್ಚಿದ ಮುಳ್ಳು, ಒಳಗಡೆಯೆ ಮುರಿದು, ನೋವೇ ಕಣ್ಣೀರಲ್ಲಿ ಕರಗಿದ ದುಃಖದಿಂದ, ಮೌನ ಸಹಜವೂ ಹೌದು, ಆ ಮೌನ ಭಾರವೂ ಹೌದು. ಆದರೆ ಅಂತಹ ಮೌನ ನೋವಿನ ಹಿಂದಿನ ಬಂಧನದ ಅರಿವನ್ನು ತಿಳಿಯಾಗಿಸಲು ದಾರಿಯಾಗುತ್ತೆ. ಎಲ್ಲ ನಂಟನು ತೊರೆದು ನಗ್ನವಾದ ಜೀವ, ಹೊಸ ಬದುಕಿನತ್ತ ಕದ ತೆರೆಯುತ್ತೆ. ಈ ಎಲ್ಲ ನಂಟನು ತೊರೆದು ನಗ್ನವಾಗುವ ಕ್ರಿಯೆಯ ಮೂಲದಲ್ಲಿ ಮೌನ ಸೃಜಿಸಿದ ಮಂಥನವಿದೆ. ಹುಟ್ಟಿದ ನೆಲದಿಂದ ಗಿಡವನ್ನು ಕಿತ್ತು ತೆಗೆದರೆ ಗಿಡಕ್ಕೆಷ್ಟು ನೋವಾಗಬಹುದು. ಹಾಗೆ ಬೇರು ಸಹಿತ ಕಿತ್ತ ಗಿಡವನ್ನು ದೂರದ ಅರಿಯದ ಹೊಲದಲ್ಲಿ ನೆಟ್ಟರೆ?. ಮದುವೆಯಾಗಿ ಪ್ರೀತಿಯ ತನ್ನ ಮನೆ  ತವರುಮನೆಯಾಗುವ ಮಾರ್ಪಾಡಿನಲ್ಲಿ, ತಿಳಿಯದ ಇನ್ನೊಂದು ಮನೆ ಸ್ವಂತದ್ದಾಗಿಸಲೇ ಬೇಕಾದ ಟ್ರಾನ್ಸಿಷನ್ ಹೂಮನಸ್ಸಿನ ಹುಡುಗಿಗೆ ಹೇಗನಿಸಬಹುದು?. ಗಂಡನ ಮನೆಯ ಆ ಮೊದಲ ದಿನದ ಮೌನದ ಬಗ್ಗೆ ಬಹುಷಃ ಕೆ ಎಸ್ ನ ಅವರಿಗಿಂತ ಚಂದ ಯಾರೂ ಬರೆಯಲಾರರು. “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ” ಅಂತಹ ತಳಮಳ, ತನ್ನವರ ಅಗಲಿಕೆಯ ದುಃಖ,  ಭಾವೋದ್ವೇಗ, ಭಯ, ಎಲ್ಲವನ್ನೂ ಈ ಮೊದಲ ದಿನ ಮೌನ, ಮೌನವಾಗಿಯೇ ಹೇಳಿಬಿಡುತ್ತೆ. ಪು ತಿ ನ ಅವರ “ಯದುಗಿರಿಯ ಮೌನ ವಿಕಾಸ” ಎಂಬ ಕವನವೂ ಮೌನ ಪ್ರತಿಮೆಯ ಸುತ್ತ ಹಲವು ರೂಪಗಳ ಕೆತ್ತಿದೆ.. ಈ ಕವಿತೆಯ ಬಗ್ಗೆ ಬರೆಯಲು ಒಂದು ಪೂರ್ತಿ ಲೇಖನವೂ ಸಣ್ಣದಾದೀತು, ಮುಂದೊಂದು ದಿನ ಬರೆಯುವೆ. “ಅಲೆಯೊಳಗಿನ ಮೌನ”  ಎಂಬ ಗಜಲ್ ಸಂಕಲನದಲ್ಲಿ ಶ್ರೀದೇವಿ ಕೆರೆಮನೆ ಅವರ ಕವಿತೆಯೂ ಪ್ರೀತಿ ಸಂವಾದದ ಸಾಲುಗಳಲ್ಲಿ ಮೌನಕ್ಕೆ ಹಲವು ಅರ್ಥಪ್ರಯೋಗ ಮಾಡಿದೆ. “ಯುಗಾಂತರದಿಂದಲೂ ಮೌನಕ್ಕೆ ಜಾರಿದಂತೆ ಮನಸ್ಸು ಹೆಪ್ಪುಗಟ್ಟುತ್ತಿದೆ ನಿನ್ನ ಒಂದು ಮಾತು ನನ್ನ ಬದುಕಿಗೆ ಮರಳುವಂತೆ ಮಾಡುತ್ತಿದೆ ಮೌನದಿಂದ ನನ್ನನ್ನು ಕೊಲ್ಲುವ ಇರಾದೆ ಏಕೆ ನಿನಗೆ ನಿನ್ನ ಮೌನ ನನ್ನನ್ನು ಇರಿದಿರಿದು ಸಾಯಿಸುತ್ತಿದೆ. ಮುಗಿದ ಮಾತುಗಳ ಮೌನದರಮನೆಗೆ ರಾಣಿಯಾಗಲಾರೆ ಅರಮನೆಯ ಸಂಕಲೆ ನನ್ನನ್ನು ದಿಕ್ಬಂಧನಕ್ಕೆ ಒಳಪಡಿಸುತ್ತಿದೆ ಮಾತಿಗೂ ಬರಗಾಲ ತಂದಿಡುವ ಆಶಯವಾದರೂ ನಿನಗೇಕೆ? ಮಾತು ಈಗ ದೂರದಲ್ಲಿ ಸೆಳೆಯುವ ಮೃಗಜಲದಂತೆ ಗೋಚರಿಸುತ್ತಿದೆ. ಸಾಕುಬಿಡು ನಿನ್ನ ಗಾದೆ ಮಾತಿನ ಥಳುಕಿಗಷ್ಟು ಬೆಂಕಿಯಿಡು ಬದುಕಿಸುವ ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ. ಎಂದಾದರೂ ಬದುಕು ಮೌನದ ಕಣಿವೆಯೊಳಗೆ ಜಾರಲೇ ಬೇಕು ‘ಸಿರಿ’ ಒಂದಾಗಿಸುವ ಮೃದು ಮಾತನ್ನಷ್ಟೇ ಬೇಡುತಿದೆ.” ಮೌನ ವಿರಹಸೂಚಕವಾಗಿ, ಮೌನವೇ ಎದೆಗಿರಿಯುವ ಆಯುಧವಾಗಿ, ಮೌನ ಅರಮನೆಯಾಗಿ, ಸಂಕಲೆಗಳಾಗಿ,  ಮಾತಿನ ಬರಗಾಲವಾಗಿ,  ಮೌನ,ಬದುಕಿನ ಅನಿವಾರ್ಯ ಕಣಿವೆಯಾಗಿ ಚಿತ್ರಿಸಲ್ಪಟ್ಟದ್ದು ಕವಯಿತ್ರಿಯ ಸೃಜನಶೀಲತೆಗೆ ಸಾಕ್ಷಿ. ಅಲೆಯೊಳಗಿನ ಮೌನ ಎಂಬ ಸಂಕಲನದ ಶೀರ್ಷಿಕೆಗೂ ವಿಶೇಷ ಅರ್ಥವಿದೆ. ನಾದ ಎಂಬುದು ಒಂದಕ್ಕೊಂದು ಜೋಡಣೆಯಾಗಿ ಕಾಲಗತಿಯಲ್ಲಿ ಸಂಚರಿಸುವ ಅಲೆಯ ಪ್ರವಾಹ. ಆ ನಾದದೊಳಗೆ, ತರಂಗಾವರ್ತನಗಳೊಳಗೆ ಮೌನ ಕಾಣುವ ಅನನ್ಯ ನೋಟ ಕವಯಿತ್ರಿ ಅವರದ್ದು. ಜನವರಿ ಇಪ್ಪತ್ತಾರು, ಕೆ ಎಸ್ ನ ಅವರ ಮತ್ತು ಮೂವತ್ತೊಂದು ಬೇಂದ್ರೆಯವರ ಜನ್ಮ ದಿನ. ಅವರಿಬ್ಬರ ದಿವ್ಯ ಭವ್ಯ ಚೇತನಗಳಿಗೆ ಶಿರಬಾಗಿ ನಮಿಪೆ. ********************************************************** ಮಹಾದೇವ ಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ

ಅಂಕಣ ಬರಹ ಮಕ್ಕಳು ಮಾತ್ರ ಹೀಗಿರಲು ಸಾಧ್ಯ ಅಲ್ಲವಾ.. ಹೆರಿಗೆ ನೋವು ಶುರುವಾಗುವ ಸೂಚನೆಗಳಿದ್ದವು. ಅಂದು ಬೆಳಗ್ಗೆ ಮಗ್ಗಲು ಬದಲಾಯಿಸುವಾಗಲೇ ಎಂಥದೋ ನೋವಿನ ಸಳುಕು ಚುಳ್ ಎನ್ನಲು ಶುರುಮಾಡಿತ್ತು. ನಿಧಾನ ಎದ್ದು ನೆಲಕ್ಕೆ ಕಾಲು ಊರಿದಾಗ ಪಾದಗಳು ನೋಯುತ್ತಿದ್ದವು. ಇನ್ನು ಈ ದೇಹದ ಭಾರ ಹೊರಲಾರೆ ಎನ್ನುವಷ್ಟು  ಊದಿಕೊಂಡಿದ್ದ ಪಾದಗಳು ಇಡಲಾರದೆ ಹೆಜ್ಜೆ ಇಡುತ್ತಿದ್ದವು. ಮೆಲ್ಲಗೆ ಹೋಗಿ ಹಲ್ಲುಜ್ಜಿ, ಮುಖ ತೊಳೆದು ಬಂದೆ. ಹೆರಿಗೆ ನೋವು ಶುರುವಾಗಿಯೇ ಬಿಟ್ಟಿತು… ಸಮುದ್ರದ ಅಲೆಯಂತಹ ನೋವದು. ಬಿಟ್ಟು ಬಿಟ್ಟು ಬರುತ್ತಿತ್ತು. ನಾವು ಆಸ್ಪತ್ರೆಗೆ ಹೊರಡಲು ತಯಾರಾದೆವು. ಆದರೆ ಎಷ್ಟು ಹೊತ್ತಾದರೂ ನೋವು ತೀವ್ರವಾಗಲಿಲ್ಲ. ಒಂಥರಾ ಭಯ ಒಂಥರಾ ಗಾಬರಿ… ಸರಿ ಎಂದು ಆಸ್ಪತ್ರೆಗೆ ಹೊರಟೆವು. ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಂದುಕೊಂಡೆವು. ಆದರೆ ಅವನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವುದಿಲ್ಲ ಎಂದು ಹಟ ಹಿಡಿದ. ಗತ್ಯಂತರವಿಲ್ಲದೆ ಅವನನ್ನೂ ಕರೆದುಕೊಂಡು ಹೊರಟೆವು. ಅವನಿಗೋ ದೊಡ್ಡ ಕುತೂಹಲ. ಅಮ್ಮನ ಹೊಟ್ಟೆಯಿಂದ ಪಾಪು ಹೇಗೆ ಬರುತ್ತದೆ, ಪಾಪು ಹೇಗಿರುತ್ತದೆ ಎಂದು. ಸಾಲದ್ದಕ್ಕೆ ಅವನಿಗೆ ತಮ್ಮ ಬೇಕಾಗಿತ್ತು. ನಿನಗೆ ತಂಗಿ ಬೇಕೋ ತಮ್ಮ ಬೇಕೋ ಅಂತ ಯಾವಾಗ ಕೇಳಿದರೂ ನನಗೆ ತಮ್ಮನೇ ಬೇಕು ಎನ್ನುತ್ತಿದ್ದ. ನಾವೇ ಲ್ಲ ನಗುತ್ತಿದ್ದೆವು. ಆಸ್ಪತ್ರೆಗೆ ಹೋದಾಗ ಹೆಚ್ಚು ಕಡಿಮೆ ಸಂಜೆಯಾಗಿತ್ತು. ಹೋಗಿ ಅಡ್ಮಿಟ್ ಆದೆವು. ರಾತ್ರಿ ಹತ್ತಾದರೂ ಹೆರಿಗೆ ಆಗಲಿಲ್ಲ. ಮಗನಿಗೆ ನೀನು ಮಲಗು ಪುಟ್ಟಾ ಬೆಳಗ್ಗೆ ಹೊತ್ತಿಗೆ ಪಾಪು ಬಂದಿರುತ್ತದೆ, ಆಗ ನೋಡುವಿಯಂತೆ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹಟ ಹಿಡಿದು ಕೂತಿದ್ದ. ತಮ್ಮ ಬಂದ ಮೇಲೆಯೇ ಮಲಗುತ್ತೇನೆ ಎಂದು. ನಂತರ ಡಾಕ್ಟರ್ ಬಂದು ಚೆಕಪ್  ಮಾಡಿ ಹೆರಿಗೆ ನಾರ್ಮಲ್ ಆಗುವುದಿಲ್ಲ ಸಿಸೇರಿಯನ್ ಮಾಡಬೇಕು ಎಂದರು. ಸರಿ ಎಲ್ಲ ಸಿದ್ಧವಾಯಿತು. ನನ್ನನ್ನು ಓಟಿ ಗೆ ಕರೆದೊಯ್ಯುತ್ತಿದ್ದರು, ಪಾಪ ಮಗನ ಮುಖ ಇಷ್ಟಾಗಿತ್ತು. ಆ ಕ್ಷಣ ಅವನ ಮುಖ ನೋಡುವಾಗ ಸಧ್ಯ ಎಲ್ಲ ಸುಗಮವಾಗಿ ಆದರೆ ಸಾಕಪ್ಪಾ ಎಂದು ದೇವರಲ್ಲಿ  ಬೇಡಿಕೊಳ್ಳಬೇಕೆನಿಸಿತು. ಅಂತೂ ಎಲ್ಲ ಸಸೂತ್ರ ಆಯಿತು. ಆದರೆ ಮಗನ ಆಸೆ ಮಾತ್ರ ಈಡೇರಲಿಲ್ಲ. ತಮ್ಮನ ಬದಲಾಗಿ ತಂಗಿ ಬಂದಳು. ಅನೆಸ್ತೀಶಿಯ ನೀಡಿದ್ದರಿಂದ ದೇಹ ಇನ್ನು ಅದರ ಪ್ರಭಾವದಿಂದ ಹೊರಬಂದಿರಲಿಲ್ಲ. ಅಕ್ಷರಶಃ ಹೆಣದ ರೀತಿಯಲ್ಲಿ ಓಟಿಯಿಂದ ವಾರ್ಡಿಗೆ ಶಿಫ್ಟ್ ಮಾಡಿದರು. ಇದನ್ನೆಲ್ಲ ನೋಡುತ್ತಿದ್ದ ಮಗನಿಗೆ ಎಷ್ಟು ಭಯವಾಯಿತೋ… ಪಾಪ ಕಣ್ಣಲ್ಲಿ ನೀರು ತುಂಬಿತ್ತ. ಬಾರೋ ಇಲ್ಲಿ… ಹತ್ರ ಬಾರೋ… ನೋಡಿಲ್ಲಿ ನಂಗೇನು ಆಗಿಲ್ಲ ಅಂತ ಕರೆದೆ. ಪಾಪ ಪೆಚ್ಚು ಪೆಚ್ಚಾಗಿ ಬಂದು ಕುಳಿತುಕೊಂಡ. ಅವನ ಮೈತಡವಿದೆ, ಮುದ್ದು ಮಾಡಿದೆ. ಆಮೇಲೆ ನೋಡೋ ನಿನ್ನಚತಂಗಿ ಬಂದಿದಾಳೆ ಅಂದೆ. ಎಲ್ಲರೂ ನಗಲು ಶುರು ಮಾಡಿದರು. ಅಯ್ಯೋ ಪಾಪ ಸಿದ್ಧಾಂತನಿಗೆ ತಂಗಿ ಬರಲಿಲ್ಲ…. ಎಂದು ಗೇಲಿ ಮಾಡಿದರು. ಅವನಿಗೂ ನಗು ಬಂತು. ಅವನಿಗೆ ಪಾಪುವನ್ನು ನೋಡುವುದೇ ಸಂಭ್ರಮ ಎನಿಸಿಬಿಟ್ಟಿತ್ತು. ಅವನಿಗಿದ್ದಿದ್ದೆಲ್ಲ ಒಂದೇ ತಂಗಿಯಾದರೆ ನನ್ನವಜೊತೆ ಆಡಲು ಬರುವುದಿಲ್ಲ ತಮ್ಮನಾದರೆ ನನ್ನ ಜೊತೆ ಆಡಲು ಬರುತ್ತಾನೆ ಎಂದು. ಆದರೆ ಹೊಸ ಪಾಪುವುನ ಮುಖ ನೋಡಿದಾಕ್ಷಣ ಅದೆಲ್ಲವೂ ಗಾಳಿಗೆ ತೂರಿ ಹೋಯಿತು. ತಂಗಿಯ ಮುಖ ನೋಡಿಯಾದ ಮೇಲೆಯೇ ಅವ ಮಲಗಿದ್ದು. ಮರುದಿನ ಸರಿ ತಂಗಿ ಬಂದಾಯಿತಲ್ಲ ಮನೆಗೆ ಹೋಗೋಣ ನಡಿಯೋ ಎಂದರೆ ಕೇಳುತ್ತಲೇ ಇಲ್ಲ ನಾನೂ ತಂಗಿಯ ಜೊತೆಯೇ ಇರುತ್ತೇನೆ ಎಂದು ಹಟ ಹಿಡಿದ. ಹಂಗೂ ಹಿಂಗೂ ಮಾಡಿ ಮೂರು ದಿನ ಆಸ್ಪತ್ರೆಯಲ್ಲೇ ಕಳೆದ. ನಾಲ್ಕನೇ ದಿನ ಯಾಮಾರಿಸಿ ಅವನನ್ನು ಮನೆಗೆ ಕಳಿಸಿದ್ದೆವು. ಈಗಲೂ ಅದನ್ನೆಲ್ಲ ನೆನೆದರೆ ವಿಪರೀತ ನಗು ಬರುತ್ತದೆ. ಈಗಂತೂ ಮಗಳಿಗೆ ಮೂರು ವರ್ಷ. ಇಬ್ಬರೂ ಒಮ್ಮೊಮ್ಮೆ ಪರಮಾಪ್ತ ಗೆಳೆಯರು ಒಮ್ಮೊಮ್ಮೆ ಹಾವು ಮುಂಗಸಿಗಳು. ಒಂದಂತೂ ಅಚ್ಚರಿ ನನಗೆ ಮಕ್ಕಳ ಮುಗ್ಧತೆ ಕುತೂಹಲ ಯಾಪರಿ ಇರುತ್ತದಲ್ಲಾ ಎಂದು. ಅಂದು ಮನೆಯಲ್ಲಿ ಹಬ್ಬವಿತ್ತು. ಮಗ ಪದೇ ಪದೇ ಕಿತಾಪತಿ ಮಾಡುತ್ತಿದ್ದ. ತಂಟೆ ಮಾಡುತ್ತಾನೆಂದು ಮಗನನ್ನು ಅದು ಮಾಡಬೇಡ ಇದು ಮಾಡಬೇಡ ಅಂತ ಪದೇ ಪದೇ ಅನ್ನುತ್ತಿದ್ದೆವು. ಇದರಿಂದ ಬಹುಶಃ ಅವನಿಗೆ ಬೇಸರವಾಗಿರಬೇಕು. ನಂತರ ಅಲ್ಲಿಂದ ಅವ ಹೊರಟುಹೋದ. ಸುಮಾರು ಹೊತ್ತಾದರೂ ಅವ ಎಲ್ಲೂ ಕಾಣಿಸಲಿಲ್ಲ. ನಮ್ಮದೆಲ್ಲ ಕೆಲಸ ಆದಮೇಲೆ ಎಲ್ಲಿ ಹೋದ ಅಂತ ನೋಡಿದರೆ ಪಕ್ಕದ ಪ್ಯಾಸೇಜಿನಲ್ಲಿ ಇದ್ದಾನೆ! ನೋಡಿದರೆ ತನ್ನ ಯೂನಿಫಾಮ್ ಶೂಗಳನ್ನು ನೀಟಾಗಿ ತೊಳೆದು ಅದಕ್ಕೆ ವಿಭೂತಿ, ಗಂಧ, ಅರಶಿಣ, ಕುಂಕುಮ ಹಚ್ಚಿ ಉದುಕಡ್ಡಿ ಬೆಳಗುತ್ತಿದ್ದಾನೆ! ಯಪ್ಪಾ ಅವತ್ತಿನಷ್ಟು ನಾವೆಲ್ಲ ಎಂದೂ ನಕ್ಕಿರಲಿಲ್ಲ ಕಾಣುತ್ತದೆ. ತನ್ನ ಪಾದುಕೆಯ ಪೂಜೆಯನ್ನು ತಾನೇ ಮಾಡಿಕೊಂಡ ಮಹಾನುಭಾವ ಅವನು…. ಮೊನ್ನೆ ನನ್ನ ಪುಟ್ಟ ಮಗಳು ನಾನೂ ಅಡುಗೆ ಮಾಡ್ತೀನಿ ಅಂತ ಹೇಳಿ ಹಟ ಮಾಡಿ ಕಿಚನ್ ಸೆಟ್ (ಆಟದ ಕಿಚನ್ ಸೆಟ್) ಕೊಡಿಸಿಕೊಂಡು ತಂದುಕೊಂಡಳು. ಮನೆಗೆ ಬಂದು ಅಡುಗೆ ಮಾಡಿದ್ದೇ ಮಾಡಿದ್ದು… ಮರು ದಿನ ತರಕಾರಿ ತೆಗೆದುಕೊಳ್ಳಲಿಕ್ಕೆಂದು ಫ್ರಿಜ್ ತೆಗೆದ ನನಗೆ ಕಂಡದ್ದು ಮಾತ್ರ ಆಶ್ಚರ್ಯ. ಅದ್ಯಾವಾಗಲೋ ಗೊತ್ತಿಲ್ಲ ಮಗಳು ತನ್ನ ಪ್ಲಾಸ್ಟಿಕ್ ತರಕಾರಿಗಳನ್ನು ತನ್ನ ಪುಟ್ಟ ಪ್ಯಾನ್ ಒಂದಕ್ಕೆ ಹಾಕಿ ಫ್ರಿಜ್ಜಿನಲ್ಲಿ ಇಟ್ಟಿದ್ದಳು. ಅವಳ ಪಪ್ಪನನ್ನೂ ಕರೆದು ತೋರಿಸಿದೆ. ಇಬ್ಬರೂ ನಕ್ಕೆವು. ಅವಳ ಮುಗ್ಧತೆ ಮತ್ತು ಜಾಣ್ಮೆಗೆ ಮುದ್ದುಕ್ಕಿ ಬಂತು… ಮಕ್ಕಳಿಗೆ ಹೇಗೆ ಇವೆಲ್ಲ ಹೊಳೆಯುತ್ತವೆ ಎಂದು ಸದಾ ಆಶ್ಚರ್ಯವಾಗುತ್ತಿರುತ್ತದೆ ನನಗೆ. ಅದರಲ್ಲೂ ಸದಾ ಮಕ್ಕಳ ಜೊತೆಯೇ ಕಾಲ ಕಳೆಯುವ ನಮ್ಮಂಥವರಿಗೆ ಇಂತಹ ಅನುಭವಗಳು ನಿತ್ಯವೂ ಆಗುತ್ತಿರುತ್ತವೆ. ನಾವು ಎಷ್ಟೇ ತಿಳಿದವರಾಗಿದ್ದರೂ ಮಕ್ಕಳ ಮುಗ್ಧತೆಯ ಮುಂದೆ ಸೋತುಬಿಡುತ್ತೇವೆ. ನಮ್ಮ ಗತ್ತು, ಅಹಂಕಾರ, ದೊಡ್ಡತನ…. ಎಲ್ಲವೂ ಮಕ್ಕಳ ಮುಂದೆ ಮಂಡಿಯೂರುತ್ತವೆ. ನಾವು ನಮ್ಮನ್ನು ಕಳೆದುಕೊಂಡುಬಿಡುತ್ತೇವೆ ಅವರ ಮುಂದೆ. ಮಕ್ಕಳು ಮಾತ್ರ ಹೀಗಿರಲು ಸಾಧ್ಯವೇನೋ ಅಲ್ಲವಾ… ಕಲ್ಲುಸಕ್ಕರೆಯಂತಹ ಇಂಥ ಅನುಭವಗಳು ಸದಾ ನಮ್ಮ ಬದುಕಿನ ತಿಜೋರಿಯನ್ನು ತುಂಬಿಕೊಳ್ಳುತ್ತಿರಲಿ ಎನ್ನುವ ಆಸೆಯೊಂದು ಮಾತ್ರ ಸದಾ ಜೀವ ಹಿಡಿದು ಕೂರುತ್ತದೆ… ************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

You cannot copy content of this page

Scroll to Top