ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು ಓದಿಕೊಂಡ ಬುದ್ಧಿವಂತರು ಎಂದು ಬಲವಾಗಿ ನಂಬಿಕೊಂಡಿದ್ದೆ. ಇದರಿಂದಾಗಿ ಸಂಸ್ಕೃತ ಭಾಷೆಯ ಕುರಿತು ಗಂಭೀರವಾದ ವ್ಯಾಮೋಹವೊಂದು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನನ್ನೊಳಗೆ ಜಾಗೃತವಾಗುತ್ತಿತ್ತು. ಮತ್ತು ಸಂಸ್ಕೃತ ಸುಲಭ ಓದಿಗೆ ದಕ್ಕುವ ವಿಷಯವಲ್ಲದೆಯೂ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವುದು ಸಾಧ್ಯ ಎಂಬ ಗೆಳೆಯರ ನಡುವಿನ ವದಂತಿಯನ್ನು ನಿಜವೆಂದು ನಂಬಿ ಎಂಟನೆ ತರಗತಿಗೆ ವಿಷಯ ಆಯ್ಕೆಯ ಸಂದರ್ಭದಲ್ಲಿ ಸಂಸ್ಕೃತವನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡೆ. ಆದರೆ ತರಗತಿಗಳು ಆರಂಭವಾದ ಬಳಿಕ ಸಂಸ್ಕೃತ ವಿಷಯ ಆಯ್ಕೆಯ ನನ್ನ ಒಲವು ತಪ್ಪು ಎಂಬುದರ ಅರಿವಾಗತೊಡಗಿತು. ನಾನು ನನ್ನೆಲ್ಲ ಪಠ್ಯಗಳ ಜೊತೆಯಲ್ಲಿ ಸಂಸ್ಕೃತ ಪಠ್ಯವನ್ನು ಖರೀದಿಸಿ ತರಗತಿಗೆ ಹೋಗಲಾರಂಭಿಸಿದೆ. ಆದರೆ ಅದು ಏಕೋ ಸಂಸ್ಕೃತ ತರಗತಿಯಲ್ಲಿ ನನ್ನ ಉಪಸ್ಥಿತಿ ನಮ್ಮ ತರಗತಿಯ ಸಂಸ್ಕೃತ ಮೇಷ್ಟ್ರಿಗೆ ಹಿತವಾಗಿ ಕಾಣಲಿಲ್ಲ. ಬಹುತೇಕ ಬ್ರಾಹ್ಮಣ, ಗೌಡ, ಸಾರಸ್ವತ ಬ್ರಾಹ್ಮಣ ಇತ್ಯಾದಿ ಮೇಲ್ಜಾತಿಯ ಬೆಳ್ಳುಂಬೆಳಗಿನ ವಿದ್ಯಾರ್ಥಿ ಸಮುದಾಯದ ನಡುವೆ ಕಪ್ಪು ಬಣ್ಣದ ಒಬ್ಬನೇ ಒಬ್ಬ ವಿದ್ಯಾರ್ಥಿ ಇಡಿಯ ತರಗತಿಗೆ ಕಳಂಕದ ‘ಕಪ್ಪು ಚುಕ್ಕೆ’ ಎಂಬಂತೆ ನಮ್ಮ ಗುರುಗಳ ಕಣ್ಣಿಗೆ ಕಂಡಿರಬೇಕು. ಅವರು ತರಗತಿಯಲ್ಲಿ ತುಂಬ ವಿಶಿಷ್ಟವೆನ್ನಿಸುವ ದೃಷ್ಟಿಯಲ್ಲಿ ನನ್ನನ್ನು ನೋಡತೊಡಗಿದರು. ಅವರು ನನ್ನೆಡೆಗೆ ಬೀರುವ ನೋಟದಲ್ಲಿಯೇ “ಎಲಾ ಶೂದ್ರ ಮುಂಡೇದೆ ನೀನೂ ಸಂಸ್ಕೃತವ ಕಲೀತಿಯೇನೋ…?” ಎಂಬ ತಿರಸ್ಕಾರದ ದೃಷ್ಟಿ ಇರುವುದು ನನ್ನ ಅರಿವಿಗೆ ನಿಲುಕಲಿಲ್ಲ. “ಈ ಶೂದ್ರನಿಗೆ ಸಂಸ್ಕೃತವನ್ನು ಹೇಳಿಕೊಟ್ಟು ತಾನು ಪೂಜ್ಯ ಮನು ಮಹರ್ಷಿಯ ಘನ ಶಾಪಕ್ಕೆ ಪಕ್ಕಾದೆನಲ್ಲಾ…” ಎಂಬ ಅವರೊಳಗಿನ ಚಡಪಡಿಕೆಯನ್ನು ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆಯೂ ಅಂದು ನನಗಿರಲಿಲ್ಲ. ಈ ಶ್ರೀಪಾದರೆಂಬ ಸಂಸ್ಕೃತ ಶಿಖಾಮಣಿಗಳು ನಾನು ಸಂಸ್ಕೃತವನ್ನು ಬಿಟ್ಟು ಬಿಡುವಂತೆ ಬಾಯಿಬಿಟ್ಟು ಹೇಳಲಾಗದ ಸಂಕಟಕ್ಕೆ ವಾಮ ಮಾರ್ಗವೊಂದನ್ನು ಹಿಡಿದರು. ಚಡಪಡಿಕೆ ಸಂಕಟಗಳ ನಡುವೆಯೇ ಸಂಸ್ಕೃತ ವಚನ ವಿಭಕ್ತಿಗಳ ಕುರಿತು ಪಾಠ ಆರಂಭಿಸಿ ಸಂಸ್ಕೃತದಲ್ಲಿರುವ ಏಕವಚನ, ದ್ವಿವಚನ, ಬಹುವಚನಗಳನ್ನು ತಿಳಿಸಿ ನಾಮಪದ, ಸರ್ವನಾಮಗಳನ್ನು ಮೂರು ವಚನಗಳಲ್ಲಿ ಮತ್ತು ಸಂಸ್ಕೃತದ ಎಂಟು ವಿಭಕ್ತಿಗಳಲ್ಲಿ ರೂಪಾಂತರಿಸಿ ನಡೆಸಲು ಶ್ರುತಿ ಸ್ಮೃತಿ ಪರಂಪರೆಯ ಮೂಲಕ ಗುರುಕುಲದ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಬಳಸಿದ,“ರಾಮಃ ರಾಮೌ ರಾಮಾಃ…” (ರಾಮ, ಇಬ್ಬರು ರಾಮರು, ಅನೇಕ ರಾಮರು) ಇತ್ಯಾದಿ ಉದಾಹರಣೆಯ ಶ್ಲೋಕ ಮಾದರಿಯೊಂದನ್ನು ಕಂಠಪಾಠ ಮಾಡಲು ತಿಳಿಸಿದರು. ಮತ್ತು ಮರುದಿನವೇ ಪಾಠ ಒಪ್ಪಿಸಲು ತಾಕೀತು ಮಾಡಿದ್ದರು. ವಸತಿ ನಿಲಯದ ನಿರ್ಜನ ಮೂಲೆಯಲ್ಲಿ, ಆಟದ ಬಯಲಿನಲ್ಲಿ, ಸ್ನಾನಕ್ಕೆ ನಿಂತಾಗಲೂ ಈ “ರಾಮಃ ರಾಮೌ…” ಪಠ್ಯ ಹಿಡಿದು ಕಂಠಪಾಠ ಮಾಡಿದೆ. ಆದರೆ ತರಗತಿಯಲ್ಲಿ ಗುರುಗಳು ನನ್ನನ್ನೆ ಎದ್ದು ನಿಲ್ಲಿಸಿ ಪಾಠ ಒಪ್ಪಿಸಲು ತಿಳಿಸಿದಾಗ ಒಂದಕ್ಷರವೂ ನನ್ನ ಬಾಯಿಂದ ಹೊರ ಬಾರದೆ ನಗೆಪಾಟಲಾದೆ. ಗುರುಗಳು ಇದನ್ನೇ ಅಸ್ತçವಾಗಿ ನಿತ್ಯವೂ ಬಳಸತೊಡಗಿದರು. ಅದೇನೋ ಹೇಳುವಂತೆ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸುವಂತೆ ನಿಷ್ಕುರಣೆಯಿಂದ ಅಸ್ತ್ರ ಪ್ರಯೋಗ ಮಾಡಿದರು. ಅಷ್ಟಕ್ಕೆ ನಿಲ್ಲದೆ ವೈಷ್ಣವಾಸ್ತ್ರ,  ನೀಲಕಂಠಾಸ್ತ್ರಗಳನ್ನೂ ನೆರವಿಗೆ ತೆಗೆದುಕೊಂಡವರಂತೆ ಬೇರೆ ಬೇರೆ ದೃಷ್ಟಾಂತಗಳನ್ನು ಹೇಳಿ ನನ್ನನ್ನು ಹಿಂಸೆಗೀಡು ಮಾಡಿದರು. ಗುರುಗಳ ವ್ಯಂಗ್ಯೋಕ್ತಿಗಳು, ಸಹಪಾಠಿಗಳ ಅಪಹಾಸ್ಯದ ನಗುವಿನೊಡನೆ ಹತ್ತೆಂಟು ದಿನಗಳ ಕಾಲ ತೀವೃವಾದ ಹಿಂಸೆಯನ್ನು ಅನುಭವಿಸಿದೆ. ತರಗತಿ ಆರಂಭ ಆಗುತ್ತಿದ್ದಂತೆಯೇ ನನ್ನನ್ನು ಮೊದಲು ಎದ್ದು ನಿಲ್ಲಿಸುವುದು, ಹಲವು ಪ್ರಶ್ನೆಗಳನ್ನು ನನ್ನೊಬ್ಬನಿಗೇ ಕೇಳುವುದು… ಇತ್ಯಾದಿ ಆಕ್ರಮಣಗಳಿಂದ ಭಯ ನಾಚಿಕೆಯಲ್ಲಿ ನಾನು ನಿತ್ಯವೂ ಸಂಸ್ಕೃತ ತರಗತಿಯಲ್ಲಿ ಬೆವರಿಳಿದು ಬಸವಳಿಯುತಿದ್ದೆ. ಇದನ್ನು ನೋಡಿ ನೋಡಿ ಗುರುಗಳು ಹಿಂಸಾರತಿಯ ಆನಂದವನ್ನು ಅನುಭವಿಸುತ್ತಿದ್ದರು. ನನಗೆ ಸಂಸ್ಕೃತದ ಸಹವಾಸ ಸಾಕು ಅನಿಸಿತು. ಕೊಂಡು ತಂದ ಪುಸ್ತಕವನ್ನು ಸಹಪಾಠಿಯೊಬ್ಬನಿಗೆ ಅರ್ಧ ಬೆಲೆಗೆ ಮಾರಿ ಕೈತೊಳೆದುಕೊಂಡೆ. ಸಂಸ್ಕೃತವನ್ನು ಬಿಟ್ಟು ‘ಎಡಿಷನಲ್ ಕನ್ನಡ’ ಆಯ್ದುಕೊಂಡೆ ಗುರುಗಳು ನಿರಾಳವಾದರು. ಆದರೆ ಸಂಸ್ಕೃತದ ಕುರಿತಾದ ನನ್ನ ಪ್ರೀತಿ ನನ್ನೊಳಗೆ ಸುಪ್ತವಾಗಿ ಉಳಿದುಕೊಂಡಿತ್ತು. ಮುಂದೆ ಜಿ.ಸಿ. ಕಾಲೇಜಿನಲ್ಲಿ ಪದವಿ ತರಗತಿಯನ್ನು ಓದುವಾಗ ಪ್ರೊ.ಎಂ.ಪಿ.ಭಟರಲ್ಲಿ ವಿನಂತಿಸಿಕೊಂಡು ಸಂಸ್ಕೃತವನ್ನು ಮೈನರ್ ವಿಷಯವಾಗಿ ಆಯ್ದುಕೊಂಡೆ. ಮತ್ತು ಮೂರು ವರ್ಷಗಳಲ್ಲಿಯೂ ಸಂಸ್ಕೃತದಲ್ಲಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. ಹಾಗೆಂದು ಸಂಸ್ಕೃತದ ವಿಶೇಷ ಪಾಂಡಿತ್ಯವೇನೂ ದಕ್ಕಲಿಲ್ಲ. ಪರೀಕ್ಷೆಯಲ್ಲಿ ಕನ್ನಡದಲ್ಲಿಯೇ ಉತ್ತರಿಸುವ ಅವಕಾಶವಿದ್ದುದರಿಂದ ಹೆಚ್ಚಿನ ಅಂಕ ಗಳಿಕೆಗೆ ಪೂರಕವಾಯಿತು ಅಷ್ಟೆ. ಆದರೂ ಸಂಸ್ಕೃತದ ಒಂದಿಷ್ಟು ಕಾವ್ಯಾಭ್ಯಾಸ, ಅರಿವಿನ ವಿಸ್ತಾರವನ್ನು ಹೆಚ್ಚಿಸಿದ್ದು ನಿಜವೇ. ಯಕ್ಷಗಾನ ಕಲಾವಿದನಾಗಿ ಪಾತ್ರ ನಿರ್ವಹಿಸುವಾಗ ಒಂದಿಷ್ಟು ಶ್ಲೋಕಗಳನ್ನು ನಿರರ್ಗಳವಾಗಿ ಮಾತಿನ ಮಧ್ಯೆ ಪ್ರಯೋಗಿಸಲು ಅನುಕೂಲವಾದದ್ದು ಕೂಡ ಸಂಸ್ಕೃತದ ಕಲಿಕೆಯ ಪ್ರಯೋಜನ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನನ್ನ ಪ್ರೀತಿಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಪಿ.ಭಟ್ ಅವರಿಗೆ ನಾನು ಸದಾ ಋಣಿಯಾಗಿರುವೆ. ********************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಪಾರಿಜಾತ

ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು  ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ತಿರಂಗಾ ಪಾರ್ಕ್, ನಂತರ ಮ್ಯೂಸಿಯಂ ಮತ್ತು ಗವರ್ನಮೆಂಟ್ ಸಾಮಿಲ್. ಇಷ್ಟಾದ ಮೇಲೆ ನಮ್ಮ ಮೊದಲ ಹಡಗಿನ ಪ್ರಯಾಣ. ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್‌ ನ ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ. ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಮಕ್ಕಳೆಲ್ಲಾ ದೊಡ್ಡದಾದ ಆ ಪಾರ್ಕ್ ನ ಮೂಲೆ ಮೂಲೆಗಳಲ್ಲೂ ಫೋಟೊಗಳನ್ನು ಕ್ಲಿಕ್ಕಿಸುತಿದ್ದರು. ಸಮುದ್ರದ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು. ಅಲ್ಲಿಂದ  ಮ್ಯೂಸಿಯಂ ಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್‌ ನಲ್ಲಿ ನೋಡಲು ಸಿಕ್ಕಿದವು. ಸಮುದ್ರಿಕಾ ಮರೈನ್ ಮ್ಯೂಸಿಯಮ್, ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು. ಅಲ್ಲಿಂದ ಗವರ್ನಮೆಂಟ್ ಸಾಮಿಲ್, ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ. ಅವುಗಳನ್ನು ಇಲ್ಲಿ ತರುವುದೂ ಕಷ್ಟ. ಮತ್ತೊಂದು.. ಪ್ರವಾಸಿಗರೆಂದು ಬೆಲೆಯೂ ಕೈಗೆಟಕದಷ್ಟಿತ್ತು. ಈ ಕಾರ್ಖಾನೆಯು 19 ನೆ ಶತಮಾನದಲ್ಲಿ 1883 ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು. ಇದು ಅತ್ಯಂತ ಪುರಾತನವಾಗಿದ್ದು ಹಲವಾರು ಜಾತಿಯ ಮರದ ತೊಲೆಗಳನ್ನು, ಹಲಗೆಗಳನ್ನು ಇಲ್ಲಿ ಯಂತ್ರದ ಸಹಾಯದಿಂದ ಕೊಯ್ಯುವ ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 20000 ತೊಲೆಗಳನ್ನು ಸಂಗ್ರಹಿಸಿ ಪೋರೈಸಲಾಗುತ್ತದೆ. ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್ , ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942 ರಲ್ಲಿ ಜಪಾನಿಯರ  ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು. ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು. ಟ್ರಾಲಿಗಳಲ್ಲಿ ತುಂಬಿಸಿ ತಳ್ಳಿಕೊಂಡು ಒಂದೆರಡು ಫರ್ಲಾಂಗ್ ದೂರ ನಡೆಯುವುದಿತ್ತು. ಸಾಮಾನುಗಳ ಟ್ರಾಲಿ ತಳ್ಳುವ ಕೆಲಸ ಶ್ರೀಪಾದ ಮತ್ತು ಧಾತ್ರಿಯದು. ಅವರೇ ಸ್ವಇಚ್ಛೆಯಿಂದ ಅದನ್ನು ಮಾಡುತಿದ್ದರು. ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು. ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ.ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು. ಪ್ರಯಾಣದಲ್ಲಿನ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವುದು ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತದೆ. ನಮಗೆ ಆ ದಿನ ಮದ್ಯಾಹ್ನದ ಊಟವನ್ನು ಪ್ಯಾಕ್ ಮಾಡಿ ತಂದು ಎಲ್ಲರಿಗೂ ಹಂಚಿದ್ದರು. ಒಬ್ಬೊಬ್ಬರಿಗೂ ಎರಡು ಚಪಾತಿ ಮತ್ತು ಪಲ್ಯ. ಮತ್ತು ವೆಜ್ ಪಲಾವ್ ಮತ್ತು ಸಲಾಡ್, ಜೊತೆಗೆ ಜ್ಯೂಸ್ ಕೊಟ್ಟಿದ್ದರು. ಪ್ರಯಾಣ ಸ್ವಲ್ಪ ಅಭ್ಯಾಸ ಆದ ಮೇಲೆ ಸೇವಿಸಲು ಹೇಳಿದ್ದರಿಂದ ಯಾರಿಗೂ ತಿನ್ನುವ ಅವಸರವಿರಲಿಲ್ಲ. ಅಲ್ಲದೇ ಹೊಟ್ಟೆ ಸಂಕಟವಾಗಿ ವಾಂತಿ ಬಂದರೆ ಎಂದು ಪೇಪರ್ ಬ್ಯಾಗ್ ಗಳನ್ನೂ ಇಟ್ಟಿದ್ದರು. ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ. ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ. ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಲಗ್ಗೇಜ್ ಗಳನ್ನೆಲ್ಲಾ ಅವರೇ ಎತ್ತಿ ಬಸ್ಸಿನ ನಾಲ್ಕು ಸೀಟಿನಲ್ಲಿ ಜೋಡಿಸಿ, ನಮ್ಮನ್ನೂ ಕೂರಿಸಿ ನಮಗಾಗಿ ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು. ಸುಂದರವಾದ ಜಾಗ, ಒಳ್ಳೆಯ ವಾತಾವರಣ, ಪಕ್ಕದಲ್ಲೇ ರೆಸ್ಟೋರೆಂಟ್ ಇತ್ತು. ನಮ್ಮ ಸಾಮಾನುಗಳನ್ನು ನಮ್ಮ ನಮ್ಮ ಕೋಣೆಯ ಒಳಗೆ ತಂದಿಟ್ಟರು. ಪರಸ್ಪರ ಪರಿಚಯಕ್ಕಾಗಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ಕರೆದು ನಿಲ್ಲಿಸಿದಾಗ, ಎಲ್ಲರೂ ಅವರವರ ಕುಟುಂಬವನ್ನು ಪರಿಚಯಿಸಿದರು. ಹದಿನಾರು- ಹದಿನೇಳು ವಯಸ್ಸಿರಬಹುದು, ಒಬ್ಬಳೇ ಹುಡುಗಿಯೊಬ್ಬಳು ನಮ್ಮ ಜೊತೆ ಬಂದಿದ್ದಳು. ಅವಳು ಇದು ಎರಡನೇ ಬಾರಿ ಅಂಡಮಾನ್ ಪ್ರವಾಸಕ್ಕೆ ಬರುವುದಂತೆ. ಯಾರೊಂದಿಗೂ ಮಾತಿಲ್ಲ, ಅವಳಷ್ಟಕ್ಕೆ ಅವಳು ಒಬ್ಬಳೇ ಇರುತಿದ್ದಳು. ಒಂದು ರೀತಿಯ ಖಿನ್ನತೆ ಅವಳನ್ನು ಕಾಡುತ್ತಿದೆಯೇನೋ ಅನಿಸುವಷ್ಟು ನಿರ್ಲಿಪ್ತಳಾಗಿ ಇರುತಿದ್ದಳು. ನಾವು ಉಳಿದುಕೊಂಡ ಆ ರೆಸಾರ್ಟ್ ನ ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು. ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು. (ಮುಂದುವರೆಯುವುದು..) ************************* ಶೀಲಾ ಭಂಡಾರ್ಕರ್.

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಮೌನದ ಮಾತು… ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು.     ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ ..     ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ..           ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬರೇ ಓದಿದರೆ ಸಾಕೆ? ಕೆಲವರು ನುಡಿವುದೇ ವಿಷ ಕಾರಲು ..ನುಡಿದರೆ ವಿಷ ಕಾರಿ ನಂಜಾಗುವಂತಿರಬೇಕು  ಎನ್ನುವುದೇ ಅವರುಗಳ ಜೀವನದ ತತ್ವವಾಗಿರುತ್ತದೇನೋ…         ಎಷ್ಟೇ ವಿಷದ ನಾಲಿಗೆಗಳು ವಿಷವ ಕಕ್ಕಿದರೂ  ಆ ಶಿವನೂ ಅದನ್ನು ಕಂಠದಲ್ಲಿ ಧರಿಸಿ ನೀಲಕಂಠನಾಗಲಿಲ್ಲವೆ ?         ಮಗುವನ್ನು ಮುಂಗುಸಿ ಕೊಂದಿತೆಂದು ತಾಯಿಯೊಬ್ಬಳು ಅಜ್ಞಾನದಲ್ಲಿ ತಾನು ಸಾಲಿದ ನಿಷ್ಠಾವಂತ ಮುಂಗುಸಿಯನ್ನೇ ಹೊಡೆದು ಸಾಯಿಸಿ ಆ ನಂತರ ಆ ಮುಂಗುಸಿ ಹಾವಿನಿಂದ ಮಗುವನ್ನು ರಕ್ಷಿಸಿತೆನ್ನುವ ಸತ್ಯ ತಿಳಿದು ಪಶ್ಚತ್ತಾಪಪಟ್ಟ ಹಾಡು “ ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ” ನೆನಪಾಗುತ್ತಿದೆ.           ಕೇವಲ ಹಣ ಸಂಪಾದನೆ , ಗುಲಾಮಗಿರಿತನ , ಸದಾ ಇನ್ನೊಬ್ಬರ ಮರ್ಜಿ ಕಾಯುವ , ಅಧಿಕಾರಿಗಳ  ಬಾಯಿಯಲ್ಲಿ ತಮ್ಮ ಹೆಸರು ಬರುವುದೇ  ತಮ್ಮಪೂರ್ವ ಜನ್ಮದ ಸುಕೃತ ಎಂದು ಭಾವಿಸುವವರು ಅದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಆದರೆ ಅಧಿಕಾರಿಗಳಿಗೆ ಕೇವಲ ಓಲೈಕೆ ಮಾತ್ರಾ ಬೇಕಾಗಿರುತ್ತದೆ ..ಸಮಯ ಬಂದಾಗ ಯಾವಾಗ ಯಾವ ರೀತಿ ತಿರುಗುತ್ತರೋ ಎನ್ನುವ ಸತ್ಯದ ಅರಿವೂ ಇಂತವರಿಗೆ ಇರುವುದಿಲ್ಲ.               ಖಾಲಿ ತಲೆ ಭೂತದ ಆವಾಸ ಸ್ಥಾನ ಎನ್ನುತ್ತಾರೆ ..ಹಾಗೆ ಮಾಡಲು ಕೆಲಸವಿಲ್ಲದವರಿಗೆ ಸದಾ ಇನ್ನೊಬ್ಬರ ನಡೆ ನುಡಿಗಳನ್ನೇ ಗಮನಿಸುತ್ತಿರುವುದು , ಅದನ್ನು ತಮ್ಮಿಷ್ಟಕ್ಕೆ ತಮ್ಮ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡು ಅಧಿಕಾರಿಗಳ ಕಿವಿ ಚುಚ್ಚುವುದು ..ಇದೇ ಬದುಕಾಗಿಬಿಟ್ಟಿರುತ್ತದೆ. ಇದು ಕೇವಲ ವೃತ್ತಿಯಲ್ಲಿ ಅಲ್ಲ ಮನೆಗಳಲ್ಲಿಯೂ ಕಾಣುವ ಪ್ರವೃತ್ತಿ!!     ಒಂದು ಮನೆಯಲ್ಲಿ ಹತ್ತು ಜನರಿದ್ದರೆ ಅವರಲ್ಲೇ ಹದಿನೈದು ಗುಂಪುಗಳಿರುತ್ತವೆ. ಸದಾ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುತ್ತಾ ಅದರ ಪರಿಣಾಮಗಳನ್ನ ನೋಡಿ ಒಳಗೊಳಗೇ ಖುಷಿ ಪಡುವ ವಿಕೃತ ಮನಸುಗಳಿಗೆ ಆದಾವ ಬೇಲಿಯಿದೆ? ತೂಕವಿಲ್ಲದಾಮಾತುಗಳುಸಾಗರದೆ ತೇಲುವಕಸಕಡ್ಡಿಕೊಳಕಿನಂತೆ ನೋಡಯ್ಯ ತೂಕದಾಮಾತುಗಳುಸಾಗರದಾಳಕಿಳಿದರಷ್ಟೆ ದೊರೆವಮುತ್ತುರತ್ನಹವಳದಂತೆ ಕಾಣಯ್ಯ             ಹಗುರ ಮಾತಿಗೂ ತೂಕದ ಮಾತಿಗೂ ವ್ಯತ್ಯಾಸ ಅರಿಯದವರು ಲೋಕದಲ್ಲಿ ಇರುವವರೆಗೂ  “ಆಚಾರವಿಲ್ಲದ ನಾಲಿಗೆ …ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ …”  ಎಂಬ ದಾಸವಾಣಿ ಮೊಳಗುತ್ತಲೇ ಇರುತ್ತದೆ..ಮತ್ತು ಇದಕ್ಕೆ ಕೊನೆಯೇ ಇಲ್ಲ…            ನಾಲಿಗೆ ಹೊರಳುವ ಮುನ್ನ ಅದಕ್ಕೊಂದಷ್ಟು ಕಡಿವಾಣ ಹಾಕಬೇಕಾದುದು ಮನಸು..ಆದರೆ ಆ ಮನಸು ಯಾವುದೇ ಸಂಸ್ಕಾರಗಳಿಗೆ ಈಡಾಗದೇ ಕಾಡು ಕಾಡಾಗೇ ಬೆಳೆದಿದ್ದರೆ ಅದೂ ನಾಲಿಗೆಯನ್ನು ಮಾತಾಡು ಮಾತಾಡು ಎಂದು ಮುಂದಕ್ಕೆ ಛೂ ಬಿಡುತ್ತಲೇ ಇರುತ್ತದೆ..      ಎದುರಿಗಿರುವ ನಾಲಿಗೆ ಏನಾದರೂ ಹೇಳಲಿ ಅದನ್ನು ಕೇಳುವ ಕಿವಿಯನ್ನೂ ಆ ಕಿವಿ ಹೊತ್ತವರ ಮನಸ್ಸು ತಿವಿದು ಎಚ್ಚರಿಸದಿದ್ದರೆ ಆ ಕಿವಿಗಳು ಹಿತ್ತಾಳೆ ಕಿವಿಗಳಾಗಲು ಬಹಳ ಹೊತ್ತೇನೂ ಬೇಕಾಗಿಲ್ಲ..       ಚಿಕ್ಕಂದಿನಲ್ಲಿ  ಟೇಪ್ ರೆಕಾರ್ಡರ್ ನಲ್ಲಿ     ಕೇಳಿದ  ಶನಿಪ್ರಭಾವ  ಚಿತ್ರಕಥೆ ಕಥೆ ನೆನಪಾಗುತ್ತಿದೆ. ಶನಿಯ ವಕ್ರ ದೃಷ್ಟಿಯ ಪ್ರಭಾವದಿಂದ ಗೋಡೆಯ ಹಂಸೆಗೆ ಜೀವ ಬಂದು ಅಲ್ಲಿದ್ದ ಮುತ್ತಿನ ಹಾರವನ್ನು ಗುಳುಕ್ಕನೇ ನುಂಗಿ ಮತ್ತೆ ನಿರ್ಜೀವ ಹಂಸೆಯಾಗುವುದೂ , ಆ ಮುತ್ತಿನ ಹಾರದ ಕಳ್ಳತನದ ಆಪಾದನೆ ನಿರ್ದೋಷಿಯ ಮೇಲೆ ( ಕಥೆ ಅರೆಬರೆ ಮಾತ್ರಾ ನೆನಪಿದೆ ಬಹುಶಃ ರಾಜಾ ವಿಕ್ರಮಾದಿತ್ಯನಾ ಅಂತ ಅನುಮಾನ ) ಬರುವುದೂ ..ಅದರಿಂದ ಆತ ನಾನಾ  ವಿಧದ ಸಂಕಷ್ಟಗಳಿಗೆ ಈಡಾದರೂ ಸೋಲದೆ ಎಲ್ಲವನ್ನೂ ಎದುರಿಸಿ ಕೊನೆಗೆ ಶನಿಯ ಪ್ರಭಾವ ಇಳಿದ ಮೇಲೆ ಸತ್ಯ ಎಲ್ಲರಿಗೂ ತಿಳಿದ್ದೂ ಆರೋಪ ಹೊರಿಸಿದವರೂ ಅದನ್ನು ನಂಬಿದವರೂ ಪಶ್ಚತ್ತಾಪ ಪಟ್ಟಿದ್ದೂ …       ಎಲ್ಲ ಸನ್ನವೇಶಗಳಲ್ಲಿಯೂ ಪಶ್ಚತ್ತಾಪಕ್ಕೆ ಎಡೆ ಇರುವುದಿಲ್ಲ. ಆರೋಪ ಹೊತ್ತವನು  ಹೇಗೆ ಆರೋಪಿಸಿದವನ ನಂಬಿಕೆ ಕಳೆದುಕೊಂಡಿರುತ್ತಾನೋ ಹಾಗೆಯೇ ಆರೋಪಿಸಿದವನೂ ಸಹಾ ಆರೋಪ ಹೊತ್ತವನ ನಂಬಿಕೆಯನ್ನೂ ಕಳೆದುಕೊಂಡಿರುತ್ತಾನೆ. ನಂಬಿಕೆ ಹೇಗೆ ಪರಸ್ಪರೋ ಅಪನಂಬಿಕೆಯೂ ಸಹಾ ಪರಸ್ಪರ…ಇದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ…              ಬದುಕಲ್ಲೇ ಆಗಲಿ ವೃತ್ತಿಯಲ್ಲೇ ಆಗಲಿ ಒಬ್ಬರು ಇನ್ನೊಬ್ಬರ ವಿರುದ್ಧ ಕಿವಿ ಚುಚ್ಚುವ ಮುನ್ನ ಎಚ್ಚರಿಕೆಯಿರಲಿ..ಅದರಿಂದಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅರಿವಿರಲಿ. ಹಾಗೇ ಕೇಳುವ ಕಿವಿಗಳೂ  ನಂಬುವ ಮನಸುಗಳೂ ಎಚ್ಚರಿಕೆಯಿಂದಿರಲಿ…ಒಡೆದ ಕನ್ನಡಿಯ ಚೂರುಗಳನ್ನು ಹೇಗೆ ಮತ್ತೆ ಜೋಡಿಸಲಾಗದೋ ಒಡೆದ ನಂಬಿಕೆಗಳನೂ ಮತ್ತೆ ಜೋಡಿಸಲಾಗದು .. ಸರ್ವಜ್ಞನ ನುಡಿಯಂತೆ                 ಮಾತಿನಿಂ ನಗೆ  ನುಡಿಯು               ಮಾತಿನಸರ್ವ ಸಂಪದವು              ಮಾತೇ ಮಾಣಿಕ್ಯ ಆಗಬೇಕೆ ವಿನಃ                 ಮಾತಿನಿಂ ಹಗೆ ಕೊಲೆಯು(ಸರ್ವಜ್ಞ) ಆಗಬಾರದು. ಹಾಗಾಗುವುದೇ  ನಿಜವಾದರೆ ಅಂತಹಾ ಮಾತೇ ಬೇಡ…ಅಂತಹಾ ಮಾತಿಗಿಂತ ಮೌನವೇ ಲೇಸು… ಬಹಳಷ್ಟು ಒಡಕು ಮಾತುಗಳಿಗೆ ಮೌನ ಉತ್ತರಿಸುತ್ತದೆ. ಅದನ್ನು ಆಲಿಸುವ ಸಾಮರ್ಥ್ಯ ಇರಬೇಕಷ್ಟೆ…            ಸಂತ ಶರೀಫರು ಹೇಳುವಂತೆ  ಪರಸತಿ ಪರಧನ ಪರ ನಿಂದನೆಗೆ ಈ ಮನಸ್ಸಿಗೆ ಎಡೆ ಮಾಡಿಕೊಡದೆ ಜಾಗರೂಕರಾಗಿರಬೇಕು.ವಾಕ್ ಸ್ವಾತಂತ್ರ್ಯ ಇದೆ, ಹೊರಳುವ ನಾಲಿಗೆಯೂ ಇದೆ ಎಂದು ಮನಸ್ಸಿಗೆ ತೋಚಿದ್ದನ್ನೆಲ್ಲಾ ಆಡುವುದು ಅಪೇಕ್ಷಣೀಯವಲ್ಲ.ಕೆಲವರಿಗೆ ಸದಾ ಹೇಳಿದಗದನ್ನೇ ಹೇಳುವ ಚಟ! ಎದುರಿಗಿರುವವರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಪ್ಪೆಯಂತೆ ವಟವಟಿಸುತ್ತಲೇ ಇರುತ್ತಾರೆ.ಇಂತವರ ಮುಂದೆ ಮಾತಾಡದೆ ಮೌನ ವಹಿಸುವುದೇ ಸರಿಯಾದುದು.ಇಂತಹಾ  ಸಂದರ್ಭಗಳಲ್ಲಿ ಮಾತು ಸೋತು‌ಮೌನ ಗೆಲ್ಲುತ್ತದೆ..   ಪರನಿಂದನೆಗೆ ಸದಾ ಹಾತೊರೆವ ಮನಸುಗಳೂ , ನಾಲಿಗೆಗಳೂ , ಕಿವಿಗಳೂ  ಇದನ್ನ ಅರಿತು ಜಾಗೃತರಾದರೆ ವ್ಯವಸ್ಥೆಯಲ್ಲಿನ ಬಹಳಷ್ಟು ಸಮಸ್ಯೆಗಳನ್ನು ದೂರ ಮಾಡಬಹುದು. ಎಲ್ಲ ಮನಗಳೂ ನೆಮ್ಮದಿಯಿಂದ ಬದುಕಬಹುದು..            ಮೌನ ಮೌ ನ ಎಂದು ಹೇಳಿ ಇಷ್ಟೆಲ್ಲಾ ಮಾತಾಡುವುದಾ ಎಂದು ಮತ್ತೆ ಆರೋಪಿಸದಿರಿ…ಇದು ಒಡಕು ಮಾತಲ್ಲ ..ಮನದ ಮಾತು..ಮೌನದ ಮಾತು…      ಮೌನ ಖಂಡಿತಾ ದೌರ್ಬಲ್ಯದ ಸಂಕೇತವಲ್ಲ… ************************************                   ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಸ್ವಾತಂತ್ರ್ಯದ ಪೂರ್ವಕಾಲದಲ್ಲಿಯೇ ಆರಂಭಗೊಂಡ ‘ಜೈಹಿಂದ್ ಎಜ್ಯುಕೇಶನ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯು ೧೮೯೬ ರಲ್ಲಿ ಸ್ಥಾಪಿಸಿದ ‘ಎಡ್ವರ್ಡ್ ಹೈಸ್ಕೂಲು’ ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ರಂಗ ರಂಗೋಲಿ
ಹೊರಗಡೆ ಕಪ್ಪು ಇರುಳು. ತೆಂಗಿನಪಾತಿ ಕಪ್ಪಾಗಿ ಅದರ ಹಿಂಬದಿ ಚಿತ್ತಾರಗೊಂಡು ಅರಳಿದ ಚಂದಿರನನ್ನು ಆ ಮರದ ಕಿಟಕಿಯ ಸರಳುಗಳ ನಡುವಿನಿಂದ ನೋಡುತ್ತಲೇ ಇದ್ದೆ. ಮಲಗಿದ ಭಂಗಿ ಸಡಿಲಿಸಿ ಅದೇ ಹಳೆಯ ದೊಡ್ಡ ಮಂಚದ ಮೇಲೆ ಕೂತು ಕಣ್ಣಬೊಗಸೆಗೆ ದಕ್ಕುವಷ್ಟು ದೂರ ದೃಷ್ಟಿ ನೆಟ್ಟರೆ, ಎದೆಗಿಳಿಯುತ್ತಿದ್ದ ಚಂದ್ರಿಕೆಯ ಒಡಲ ರಾಗ ತುಂಡಾಗಿ ಬಿಡುವ ಅಂಜಿಕೆ

Read Post »

ಅಂಕಣ ಸಂಗಾತಿ, ದೀಪದ ನುಡಿ

ದೇವಯಾನಿ ಅವರ ಹೊಸ ಅಂಕಣ-ದೀಪದ ನುಡಿ-ಯ ಮೊದಲ ಕಂತು……
ಕಾಲಕ್ಕಾವ ಹಂಗಿದೆ? ಅದು ನಿರ್ಲಿಪ್ತ..ಯಾರ ಹಂಗಿಗೂ ಒಳಗಾಗದೆ ತನ್ನಷ್ಟಕ್ಕೆ ತಾನು ಓಡುತ್ತಲೇ ಇರುತ್ತದೆ. ಆಗಾಗ ತನ್ನ ಜೋಳಿಗೆಯಿಂದ ಇತಿಹಾಸದ ಪುಟಗಳಲ್ಲಿನ ಚಿತ್ರಗಳನ್ನ ತೋರಿಸುತ್ತಲೇ ಎಲ್ಲರನ್ನೂ ಎಚ್ಚರಿಸುತ್ತಾ ಮುಂದೆ ಸಾಗುತ್ತದೆ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆಹಾರ, ಆಚಾರ, ವಿಚಾರ, ಬದುಕಿನ ಕ್ರಮ, ಧರ್ಮ, ತತ್ವ, ಸಿದ್ಧಾಂತ, ಅಭಿರುಚಿ, ಭಾಷೆ ಹೀಗೆ ಒಡೆಯುತ್ತಲೇ ಬದುಕುವ ನಮಗೆ ಬಸವಣ್ಣನವರ ವಚನವು ಮನುಷ್ಯರು ಒಗ್ಗೂಡಲು ಸಾವಿರ ಕಾರಣಗಳಿವೆ, ಅದಕ್ಕೆ ಮೂಲ ಆಂತರ್ಯದಲ್ಲಿ ಸಹಿಸಿಕೊಳ್ಳುವ ಗುಣ ಬೇಕಿದೆ ಎಂಬುದನ್ನು ತಿಳಿಸುತ್ತದೆ.

Read Post »

You cannot copy content of this page

Scroll to Top