ಇದೆಲ್ಲಾ ನಡೆದದ್ದು ಯಾವಾಗ ಅಂತ ಹೇಳೋದೆ ಮರೆತೇ ಬಿಟ್ಟೆ. 1985 ನವೆಂಬರ್ ನಲ್ಲಿ. ಕಳೆದ ಸಂಚಿಕೆಯಲ್ಲಿ ಬರೆದ ಲಿಖಿತ ಪರೀಕ್ಷೆ ಸಹಾಯಕ ಹುದ್ದೆಗೆ ಸಂಬಂಧಪಟ್ಟದ್ದು ಆದರೆ ನಾನು ಅರ್ಜಿ ಸಲ್ಲಿಸುವಾಗ ಸಹಾಯಕ ಹುದ್ದೆ ಹಾಗೂ ಬೆರಳಚ್ಚುಗಾರರ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಿದ್ದೆ. ನನ್ನ ಗೆಳತಿ ಶಶಿ ಸಹ. ಅದಕ್ಕೆ ಇಂಗ್ಲಿಷ್ ಟೈಪಿಂಗ್ ಸೀನಿಯರ್ ಅರ್ಹತೆ ಕೇಳಿದ್ದರು. ನಮ್ಮಿಬ್ಬರದು ಇಂಗ್ಲಿಷ್ ಟೈಪಿಂಗ್ ಮುಗಿದಿತ್ತು ಹಾಗಾಗಿ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಿದ್ದೆವು. ನನ್ನ ಲಿಖಿತ ಪರೀಕ್ಷೆಯ ಕಥೆ ಹೇಳಿದೆ .ನನ್ನ ಗೆಳತಿ ಅವರ ಅಣ್ಣನ ಜೊತೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆ ಬರೆದು ಬಂದಿದ್ದಳು ಅವಳಿಗೆ ಅಷ್ಟೇನು ಸಮಾಧಾನ ಇರಲಿಲ್ಲ. ನನ್ನ ಮೊದಲ ಸಂಚಿಕೆ ಓದಿ ಹೌದು ಆಗ ಸ್ವಲ್ಪ ಹೆಚ್ಚು ಸೀರಿಯಸ್ಸಾಗಿ ವರ್ಕ್ ಮಾಡಬೇಕಿತ್ತು ಎಂದು ಅವಳು ಕರೆ ಮಾಡಿ ತಿಳಿಸಿದಳು. ಆದರೆ ಆ‌ ರೈಲು ಹೋಗಿ  40 ವರ್ಷಗಳೇ ಕಳೆದು ಹೋಗಿದೆ ಈಗ.

ಮುಂದೆ ಬೆರಳಚ್ಚು ಗಾರರ ಹುದ್ದೆಗಾಗಿ ಲಿಖಿತ ಪರೀಕ್ಷೆ. ಅದು ಬರಿ ಆಂಗ್ಲ ಭಾಷೆಯ ಪರೀಕ್ಷೆ ಮಾತ್ರ .ಅದಕ್ಕೆ ಕರೆ ಬಂದಿತ್ತು. ಇಂಗ್ಲೀಷ್ ಪತ್ರಿಕೆಯ ತಯಾರಿ ಮುಂಚೆಯೇ ನಡೆದಿತ್ತಲ್ಲ ಮತ್ತೆ ಅದನ್ನು ಒಮ್ಮೆ ಪುನರಾವರ್ತನೆ ಮಾಡಿಕೊಂಡು ಬಿಟ್ಟರೆ ಸಾಕಿತ್ತು. ಈ ಬಾರಿ ನನ್ನ ಗೆಳತಿ ಸಹ ನನ್ನೊಂದಿಗೆ ಪರೀಕ್ಷೆ ಬರೆಯಲು ಬರುವ ಪ್ರಸಂಗ ಬಂದಿತು. ಇಬ್ಬರೂ ಗಿರಿನಗರದಲ್ಲಿದ್ದ ನಮ್ಮ ಚಿಕ್ಕಪ್ಪನ ಮನೆಗೆ ಹಿಂದಿನ ದಿನವೇ ಹೊರಟೆವು .ಈ ಬಾರಿ ಬಸ್ ನಲ್ಲಿ ಹೋಗಿದ್ದು ನನಗೆ ವಿಶೇಷ ಖುಷಿ ತಂದಿತ್ತು. ಅಜ್ಜಿಯೊಂದಿಗೆ ಮಾತು,ಚಿಕ್ಕಮ್ಮ ಚಿಕ್ಕಪ್ಪ  ತಮ್ಮಂದಿರೊಂದಿಗೆ ಹರಟೆ ಇವುಗಳಲ್ಲಿ ಮುಳುಗಿ ಅಲ್ಲಿ ಮತ್ತೇನೂ ಓದಲಿಲ್ಲ. ನಾನು ಓದಲಿಲ್ಲವೆಂದು ಶಶಿಯೂ ಪುಸ್ತಕ ಮುಟ್ಟಲಿಲ್ಲ. ಈಗಲೂ ಕಡೆಗಳಿಗೆ ತನಕ ಪುಸ್ತಕ ಹಿಡಿದು ಓದುವ ಅಭ್ಯಾಸ ಯಾಕೋ ನನಗೆ ಬಂದಿಲ್ಲ .ಪರೀಕ್ಷೆಗೆ ಮುಂಚೆ ಏನನ್ನು ಓದದೆ ಹೋಗುವುದು ಹಿಂದೆ ಏನು ಓದಿರುತ್ತೋ ಎಷ್ಟು ನೆನಪಿರುತ್ತೊ ಅಷ್ಟು ಬರೆಯುವುದು ಅಷ್ಟೇ. ಕಡೆ ಗಳಿಗೆಯಲ್ಲಿ ಹಾಗೆ ಪುಸ್ತಕ ಹಿಡಿದು ಓದುತ್ತ ಹೋದರೆ ಎಲ್ಲಾ ಕಲಸು ಮೇಲೋಗರ ಆಗಿಬಿಡುತ್ತದೆ ಎಂಬ ಭಯ. ಇತ್ತೀಚೆಗೆ ಓದುತ್ತಿರುವ ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿಯೂ ಅಷ್ಟೇ ಮುಂಚೆ ಓದಿದ್ದು ಮಾತ್ರ. ನನ್ನ ಈ ಅಭ್ಯಾಸಕ್ಕೆ ಪೂರಕವಾಗಿ  ಏನೋ ಅನ್ನುವಂತೆ ಆ ಪರೀಕ್ಷೆಯ ಹಿಂದೆ ಬೆಳಿಗ್ಗೆ ಎಲ್ಲಾ ನನಗೆ ಬೇರೆ ಬೇರೆ ಸಮಾರಂಭಗಳು ಬಂದು ಬಿಡುತ್ತಿವೆ. ಆದರೆ ಅದರಿಂದ ನನಗೇನೂ ತೊಂದರೆ ಆಗುತ್ತಿಲ್ಲ.‌ಅದೇ  ಸಮಾಧಾನ.

ಮತ್ತೆ ಅದೇ ಸೆಂಟ್ ಜೋಸೆಫ್ ಕಾಲೇಜ್ ಪರೀಕ್ಷಾ ಕೇಂದ್ರ. ಗಿರಿನಗರದಿಂದ ಸಿಟಿ ಬಸ್ ನಲ್ಲಿ ಹೋಗಿ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ಹಾಗೆ ಮೈಸೂರಿಗೆ ವಾಪಸ್ ಆಗಿದ್ದೆವು.ಒಂದೇ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಹತ್ತಿರದ ಹೋಟೆಲ್ ಗೆ ಹೋಗಿ ದೋಸೆ ತಿಂದು ಹೊರಟಿದ್ದೆವು.

ಒಂದು ರೀತಿ ಹಿಂದಿನ ಪರೀಕ್ಷೆ ರಿಹರ್ಸಲ್ ತರಹ ಆಗಿದ್ದರಿಂದ ಈ ಬಾರಿಯ ಪರೀಕ್ಷೆ ಅಷ್ಟೇನೂ ಕಠಿಣ ಎನಿಸಲಿಲ್ಲ. ಪ್ರಬಂಧ ಬರೆಯಲು ನಾನು ಆರಿಸಿಕೊಂಡಿದ್ದು “ಪಂಚ ವಾರ್ಷಿಕ ಯೋಜನೆಗಳು ಮತ್ತು ದೇಶದ ಅಭಿವೃದ್ಧಿ”. ಮತ್ತೆ ನನ್ನ ಬಿಕಾಂ ಸಿಲಬಸ್ ನಲ್ಲಿದ್ದ ಎಕನಾಮಿಕ್ಸ್ ಓದು ಇದಕ್ಕೆ ಬಹಳವೇ ಸಹಾಯ ಮಾಡಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪರೀಕ್ಷೆಗಳು ಮುಗಿದವು ಎಂದು ನಿರಾಳ ಉಸಿರು ಬಿಟ್ಟು ಮಾಮೂಲಿ ದಿನಚರಿಗೆ ಹೊರಳಿಕೊಂಡೆವು. ಅಂದು ಶನಿವಾರ. ಚೆನ್ನಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬಂದಾಗ ಅಮ್ಮ ಖುಷಿಯಾಗಿ “ಯೂನಿಯನ್ ನವರು ಬಂದಿದ್ದರು. ನಿನ್ನದು ಎರಡೂ ಲಿಖಿತ ಪರೀಕ್ಷೆ ಪಾಸಾಗಿದೆಯಂತೆ. ಶಶಿಯದು ಬೆರಳಚ್ಚುಗಾರರ ಹುದ್ದೆಯ ಲಿಖಿತ ಪರೀಕ್ಷೆ ಪಾಸಾಗಿದೆಯಂತೆ” ಅಂದಾಗ ನನಗೂ ಖುಷಿಯಾಯಿತು. ಪ್ರಯತ್ನಿಸಿದ ಮೊದಲ ಸಲವೇ ಯಶಸ್ಸು ಸಿಕ್ಕಿದ್ದು ಇಮ್ಮಡಿ ಷಂತಸ ತಂದಿತ್ತು.

ಇಲ್ಲಿ ಒಂದು ವಿಷಯ ಪ್ರಸ್ತಾಪಿಸಲೇಬೇಕು ಏನಪ್ಪಾ ಅಂದ್ರೆ ಜೀವವಿಮ ನಿಗಮದಲ್ಲಿ ಈ ರೀತಿ ಲಿಖಿತ ಪರೀಕ್ಷೆಗಳ ಸಂದರ್ಶನಗಳ ಪದೋನ್ನತಿಗಳ ಮತ್ತು ವರ್ಗಾವಣೆಗಳ ಪಟ್ಟಿಗಳು ಬಿಡುಗಡೆಯಾಗುವುದು ಶನಿವಾರವೇ ಅದು ಕಚೇರಿಯ ಅಂತ್ಯದ ಸಮಯವಾದ ಎರಡು ಗಂಟೆಗೆನೇ ಏನೋ ಒಂದು ರೀತಿ ಸಂಪ್ರದಾಯದ ಹಾಗೆ. ಅದೇ ರೀತಿ ಬೆಂಗಳೂರಿನ ವಿಭಾಗೀಯ ಕಚೇರಿಯಲ್ಲಿ ಪಟ್ಟಿ ಪ್ರಕಟವಾದ ತಕ್ಷಣ ಅಲ್ಲಿಂದ ಇಲ್ಲಿಗೆ ಫೋನ್ ಮಾಡಿ ಪಟ್ಟಿಯನ್ನು ಬರೆದುಕೊಂಡು ತಕ್ಷಣ ಸಂಬಂಧಿಸಿ ದವರ ಮನೆಗಳಿಗೆ ಬಂದು ವಿಷಯ ತಿಳಿಸುವುದು ಅಂದಿನ ಅಭ್ಯಾಸ ಮೊಬೈಲ್ ಫೋನ್ ಗಳು ಇರದ ಆ ಕಾಲದಲ್ಲಿ ಮಾಮೂಲಿ ಟೆಲಿಫೋನ್ ನಲ್ಲಿ ಟ್ರಂಕ್ ಕಾಲ್ ಬುಕ್ ಮಾಡಿ ಫೋನ್ ಮಾಡಬೇಕಿತ್ತು. ಹಾಗಾಗಿ ಇದೆಲ್ಲ ಪ್ರಕ್ರಿಯೆಗಳು ನಡೆದು ಅವರು ಮನೆಗೆ ಬಂದು ತಿಳಿಸಿದಾಗ ನಾಲ್ಕು ಗಂಟೆ ನಾನು ಐದು ಗಂಟೆ ಮೇಲೆ ಬರುತ್ತೇನೆ ಎಂದಿದ್ದರಿಂದ ನಮ್ಮ ಮನೆಯ ಬಳಿಯೇ ಇದ್ದ ಫೆಡರೇಶನ್ ನ ಮುಖ್ಯಸ್ಥರಾದ ನಾಗರಾಜ ಗುಪ್ತ ಹಾಗೂ ಪುರುಷೋತ್ತಮ್ ಅವರು ಆರು ಗಂಟೆಯ ವೇಳೆ ಮತ್ತೆ ಬಂದು ನನಗೆ ಅಭಿನಂದನೆಗಳನ್ನು ತಿಳಿಸಿ ಹೋದರು.  ಬೆರಳಚ್ಚು ಪರೀಕ್ಷೆಯು ಇರುತ್ತದೆ ಹಾಗಾಗಿ ತಯಾರಿ ಮಾಡಿಕೊಳ್ಳಿ ಎಂದು ಸಹ ಎಚ್ಚರಿಸಿ ಹೋದರು.(ಮುಂದುವರೆಯುವುದು)

———————

15 thoughts on “

  1. ಸುಂದರ ಸೂಕ್ತ ಚಿತ್ರಗಳೊಂದಿಗೆ ಅಂಕಣ ಬರಹವನ್ನು ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

    ಸುಜಾತಾ ರವೀಶ್

  2. ಸುಂದರ ಹಾಗೂ ಉತ್ತಮ ಅನುಭವ ಬರವಣಿಗೆ ಲೇಖನದಲ್ಲಿ ಮೂಡಿ ಬಂದಿದೆ.

    1. ತುಂಬಾ ಧನ್ಯವಾದಗಳು ಸೋದರ. ನಿಮ್ಮ ಪ್ರೋತ್ಸಾಹವೇ ನನ್ನ ಪ್ರೇರಣೆ.

      ಸುಜಾತಾ ರವೀಶ್ .

  3. ನಿಮ್ಮ ಅನುಭವದ ಬರಹ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಮೇಡಂ

    — ಇಂದುಮತಿ ಶ್ರೀನಿವಾಸ, ಮೈಸೂರು

    1. ನಿಮ್ಮ ಸವಿ ಸ್ಪಂದನೆಗೆ ಧನ್ಯವಾದಗಳು ಇಂದುಮತಿ

      ಸುಜಾತಾ ರವೀಶ್

  4. ಹಳೆಯ ಅನುಭವ ಹಾಗು ಜೀವನದ ಸಂತಸ ಕ್ಷಣಗಳು ನೆನಪುಗಳು ನಿಜಕ್ಕೂ ಹಂಚಿಕೊಳ್ಳುವುದೇ ಉತ್ತ್ಸುಕ.

    1. ನಿಮ್ಮ ಸುಂದರ ಪ್ರತಿಕ್ರಿಯೆಗೆ ಹೃದಯಾಂತರಾಳದ ವಂದನೆಗಳು.

      ಸುಜಾತಾ ರವೀಶ್

    1. ನಿಜ. ಸವಿ ನೆನಪುಗಳು ಬೇಕು ಅನ್ನುವುದು ಅದಕ್ಕೇ…..

      ಸುಜಾತಾ ರವೀಶ್

  5. ಅನುಭವಗಳನ್ನು ಸಂವಹನದ ಭಾಷೆ ಮತ್ತು ಭಾವದಿಂದ ಓದುಗರಿಗೆ ಮುಟ್ಟಿಸಬೇಕು. ಇದು ಪ್ರಜ್ಞಾಪೂರ್ವಕ ಎಚ್ಚರದಿಂದ ಆಗುತ್ತದೆ. ಆದರೆ ಇಲ್ಲಿ ಆ ರೀತಿಯ ವ್ರತನಿಷ್ಠ ಹಠ ಮತ್ತು ಎಚ್ಚರಿಕೆಯ ಅನುಸರಣೆ ಇಲ್ಲದೆಯೇ ಸಾಧಿತವಾಗುತ್ತಿರುವುದು ಬಹಳ ಶ್ಲಾಘನೀಯ. ಹಗುರವಾದ ಭಾಷೆ, ಭಾರವಾಗದ ಭಾವ ಒಂದು ರೀತಿಯ ನೆನಪಿನ ಯಾನದ ಸಹಜ ಸಂತೋಷ ಕೊಡುತ್ತದೆ. ಪಾಂಡಿತ್ಯಪೂರ್ಣ ಮತ್ತು ವಿದ್ವತ್ತಿನ ಪರಿಣಾಮವಾಗಿ ಅರಳಿಕೊಂಡಿದಿದ್ದರೆ ಆಗ ಈ ಲೇಖನ ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಾಗಿಬಿಡುತ್ತಿತ್ತು. ಮನಸ್ಸಿಗೆ ತಾಗುವ ಮತ್ತು ಸಂಚಾರಿಲಯದ ಗುಣದ ಲೇಖನ ಸಶೇಷವಾಗಲಿ.

    1. ಬರೆಹವನ್ನು ಆತ್ಮೀಯವಾಗಿಸಿಕೊಳ್ಳುತ್ತಾ ಧನಾತ್ಮಕ ಅಂಶಗಳನ್ನು ಎತ್ತಿ ತೋರಿಸಿ ಲೇಖಕರಿಗೆ ಸಾರ್ಥಕ್ಯ ಭಾವ ತುಂಬುವ ನಿಮ್ಮ ಪ್ರತಿಕ್ರಿಯೆಗಳು ಸಂತಸದ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಅಂಕಣ ಹಂಚಿಕೊಂಡಾಗಿನಿಂದ ನಿಮ್ಮ ಪ್ರತಿಕ್ರಿಯೆಗೇ ಕಾಯುತ್ತಿರುತ್ತೇನೆ ಅಂದರೆ ಅತಿಶಯೋಕ್ತಯಲ್ಲ. ಧನ್ಯವಾದಗಳು ಪದ ತುಂಬಾ ಸಾಲದು ಅನ್ನಿಸಿದರೂ ಅದನ್ನೇ ಹೇಳದೇ ವಿಧಿ ಇಲ್ಲ. ಈ ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ ಎಂಬ ಕೋರಿಕೆ.

      ಸುಜಾತಾ ರವೀಶ್

Leave a Reply

Back To Top