ಮಾನಸಿಕ ಸಂಗಾತಿ
ಡಾ.ಸುಮತಿ.ಪಿ
“ದ್ವಂದ್ವ ಮನೋಸ್ಥಿತಿ”

ಮನುಷ್ಯನ ಮನಸ್ಸೆಂಬುವುದು ಬಹಳ ಸೂಕ್ಷ್ಮ. ‘ಮನಸಿದ್ದರೆ ಮಾರ್ಗವಿದೆ’ ‘ಮನಸ್ಸು ಮಾಡಿದರೆ ಸಬಳವನ್ನಾದರೂ ನುಂಗಬಹುದು’ ಎಂಬ ನುಡಿಮುತ್ತುಗಳನ್ನು ವಿಶ್ಲೇಷಿಸಿದರೆ, ಯಾವುದೇ ಒಂದು ಕಾರ್ಯವನ್ನು ಮಾಡುವಲ್ಲಿ ಮನಸ್ಸಿನ ಪಾತ್ರ ಎಷ್ಟೆಂಬುದು ನಮಗೆ ಅರ್ಥವಾಗುತ್ತದೆ. ಮನುಜ ಮಾಡುವ ಪ್ರತಿಯೊಂದು ಕೆಲಸವು ಆತನ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಮನಸ್ಸು ದುರ್ಬಲವಾಗಿದ್ದಾಗ ಅಥವಾ ಮನಸು ಕೆಟ್ಟಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.ಯಾವುದೇ ಒಂದು ಕೆಲಸವನ್ನು ಮಾಡುವಾಗ ಆಗಲಿ ಅಥವಾ ಒಂದು ನಿರ್ಧಾರವನ್ನು ಕೈಗೊಳ್ಳುವಾಗ ಆಗಲಿ ಕೆಲಸವನ್ನು ಮಾಡಬೇಕೇ ಬೇಡವೇ,ನಿರ್ಧಾರವನ್ನು ಕೈಗೊಳ್ಳಬೇಕೆ ಬೇಡವೇ? ಕೈಗೊಂಡರೆ ಏನಾದರೂ ಅನಾಹುತವಾಗಬಹುದೇ? ಅಥವಾ ಕೈಗೊಳ್ಳದೇ ಇದ್ದರೆ, ಅನಾಹುತ ಆಗಬಹುದೇ ?ಈ ರೀತಿಯ ಗೊಂದಲಗಳು ಕಾಡುವುದನ್ನು ದ್ವಂದ್ವ ಮನಸ್ಥಿತಿ ಎನ್ನಬಹುದು.
ದ್ವಂದ್ವ ಮನಸ್ಥಿತಿ ಎಂದರೆ ಮನಸ್ಸಿಗೆ ಧೃಡತೆ ಇಲ್ಲದೆ ಇರುವ ಸ್ಥಿತಿ.ಯಾವುದೇ ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಇಲ್ಲದೆ ದೃಢ ನಿರ್ಧಾರವನ್ನು ಕೈಗೊಳ್ಳಲು ಅಸಾಧ್ಯ. ನಿರ್ಧಾರ ಕೈಗೊಳ್ಳುವಲ್ಲಿ ಆತ್ಮ ವಿಶ್ವಾಸದ ಕೊರತೆ ಇರುವುದನ್ನೇ ದ್ವಂದ್ವತೆ ಎಂದು ಪರಿಗಣಿಸಬಹುದು. ಅಂದರೆ ಏಕಕಾಲದಲ್ಲಿ ಬೇಕು,ಬೇಡ ಎನ್ನುವ ಎರಡು ರೀತಿಯ ತದ್ವಿರುದ್ಧಭಾವಗಳು ಕಾಡಿದಾಗ ಮನಸ್ಸು ದ್ವಂದ್ವತೆಯನ್ನು ಅನುಭವಿಸುತ್ತದೆ. ಈ ರೀತಿಯ ದ್ವಂದ್ವ ಮನಸ್ಥಿತಿ ಉಂಟಾದಾಗ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ.ಕೆಲವೊಮ್ಮೆ ಇಂತಹ ದ್ವಂದ್ವತೆಯಲ್ಲಿ ತೆಗೆದುಕೊಂಡಂತಹ ನಿರ್ಧಾರಗಳಿಂದ ಕೆಟ್ಟ ಪರಿಣಾಮಗಳು ಉಂಟಾಗಬಹುದು. ಕೆಲವೊಂದು ಸಂದರ್ಭದಲ್ಲಿ ದ್ವಂದ್ವತೆಯಲ್ಲಿ ತೆಗೆದುಕೊಂಡ ನಿರ್ಧಾರಗಳೂ ಸಹ ಒಳ್ಳೆಯ ಫಲಿತಾಂಶವನ್ನೇ ತಂದುಕೊಡಬಹುದು.ಇಲ್ಲಿ ದ್ವಂದ್ವತೆ ಒತ್ತಡವನ್ನು ಸೂಚಿಸುತ್ತದೆ. ಮನಸ್ಸಿನ ಒತ್ತಡದ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದು ಸವಾಲೇ ಸರಿ.
ದ್ವಂದ್ವ ಮನಸ್ಥಿತಿಯನ್ನು ಹೋಗಲಾಡಿಸಬೇಕಾದರೆ ಶಾಂತಿ ಸಮಾಧಾನವನ್ನು ಹೊಂದಬೇಕು. ಸಹನೆಯನ್ನು ಮೈಗೂಡಿಸಿಕೊಳ್ಳಬೇಕು. ಮನಸ್ಸನ್ನು ಶಾಂತ ಚಿತ್ತದಲ್ಲಿ ಇರಿಸಬೇಕು.ಎಲ್ಲವೂ ಶಾಂತವಾಗಿದ್ದಾಗ ಮನಸ್ಸಿಗೆ ಏಕ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಮನಸ್ಸು ಗೊಂದಲದ ಗೂಡಾಗುತ್ತದೆ.
ದ್ವಂದ್ವದ ಸಮಯದಲ್ಲಿ ಓಲಾಡುವ ಮನಸ್ಸಿನಲ್ಲಿ ನಿರ್ಧಾರವನ್ನು ಕೈಗೊಂಡರೆ ಒಳ್ಳೆಯ ಪರಿಣಾಮಗಳಿಗಿಂತ ಕೆಡುಕು ಸಂಭವಿಸುವುದೇ ಜಾಸ್ತಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ, ಯೋಜಿಸಿ ನಿರ್ಧಾರವನ್ನು ತೆಗೆದುಕೊಳ್ಳುಬೇಕಾಗುತ್ತದೆ.ಅಂತದ್ದರಲ್ಲಿ ಮನಸ್ಸು ಯೋಚಿಸಲು ಅಶಕ್ತವಾಗಿರುವ ದ್ವಂದ್ವದ ಸಮಯದಲ್ಲಿ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲಾಗದು.ಬೇಕು ಬೇಡ ,ಯಾವುದಾದರೂ ಆಗಲಿ ಎಂದು ಒಂದನ್ನು ಆರಿಸಿದರೆ,ಅದು ತಪ್ಪು ನಿರ್ಧಾರ ಆಗುವುದೂ ಇದೆ.ದ್ವಂದ್ವ ಮನಸ್ಸಿನ ನಿರ್ಧಾರಗಳು ನಮ್ಮ ಬದುಕಿನ ಗತಿಯನ್ನೇ ಬದಲಾಯಿಸಬಹುದು.ಅನೇಕ ಸಂಕಷ್ಟಗಳು ಎದುರಾಗಲೂ ಬಹುದು,ಬದುಕಿನ ಭಾವನೆಗಳು ನೋವು ಅನುಭವಿಸಿ,ಬದುಕಿನಲ್ಲಿ ಕೆಡುಕು ಉಂಟಾಗಬಹುದು.
ಸುಮನ ತಂದೆ ತಾಯಿಗೆ ಒಬ್ಬಳೇ ಮಗಳು. ಹಿರಿಯಳಾದ ಅವಳು ಕಷ್ಟಪಟ್ಟು ಕಲಿತು, ಸರಕಾರಿ ಉದ್ಯೋಗವನ್ನು ತೆಗೆದುಕೊಂಡಿದ್ದಳು. ತಾನು ಉದ್ಯೋಗ ಮಾಡುವ ಕಚೇರಿಯಲ್ಲಿ ಸಹೋದ್ಯೋಗಿ ಒಬ್ಬನನ್ನು ಪ್ರೀತಿಸಿದಳು. ಸಹೋದ್ಯೋಗಿ ಪ್ರೀತಮ್ ನದ್ದು ಸಿರಿವಂತರ ಕುಟುಂಬ. ಸುಮನಳ ಮನೆಯಲ್ಲಿ ಸುಮನಳ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಸುಮನ ತಾನು ಪ್ರೀತಿಸಿದ ವಿಚಾರವನ್ನು ತಂದೆ-ತಾಯಿ ಎದುರು ಹೇಳುತ್ತಾಳೆ. ಸುಮನಳ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡುವುದಿಲ್ಲ. ಬದಲಾಗಿ,”ಈ ಮದುವೆ ಬೇಡ. ನಿನಗೆ ನಾವು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ”ಎಂದಾಗ ಸುಮನ “ಇಲ್ಲ .ಮದುವೆಯಾಗುವುದಾದರೆ ನಾನು ಪ್ರೀತಮ್ನನ್ನೇ” ಎಂದು ಹಠ ಹಿಡಿದಳು. ಆಗ ಸುಮನಳ ಹೆತ್ತವರು “ಒಂದೇ ನೀನು ಅವನ ಹಿಂದೆ ಹೋಗು, ಇಲ್ಲ ನಾವು ಹೇಳಿದ್ದನ್ನು ಕೇಳು. ನೀನು ಅವನ ಹಿಂದೆ ಹೋಗುವುದಾದರೆ ನಮ್ಮ ಸಂಬಂಧವನ್ನು ಕಡಿದು ಹೋದಂತೆ” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಸುಮನಳಿಗೆ ಆಗ ಇಕ್ಕಟ್ಟಿನ ಪರಿಸ್ಥಿತಿ .ಪ್ರೀತಿಸಿದವನ ಹಿಂದೆ ಹೋಗಬೇಕೊ ಅಥವಾ ಹೆತ್ತು,ಹೊತ್ತು ಸಾಕಿ ಸಲಹಿದ ಹೆತ್ತವರ ಮಾತನ್ನು ಕೇಳಬೇಕೊ.ದ್ವಂದ್ವ ಮನಸ್ಥಿತಿಯಲ್ಲಿ ಆಕೆ ಪ್ರೀತಿಸಿದ ಪ್ರೀತಮ್ ನ ಹಿಂದೆ ಹೋಗುವ ದೃಢ ನಿರ್ಧಾರ ಮಾಡಿಬಿಟ್ಟಳು. ಸುಮನಳ ತಂದೆ ತಾಯಿಗಳು ಕಣ್ಣೀರು ಹಾಕಿದರೂ ಏನು ಪ್ರಯೋಜನವಾಗಲಿಲ್ಲ. ಇತ್ತ ಸುಮನ ಹೆತ್ತವರನ್ನು ಬಿಟ್ಟು ಪ್ರೀತಂನ ಕೈಹಿಡಿದು ಗಂಡನ ಮನೆ ಸೇರಿದವಳೆ ಸಂಕಷ್ಟವನ್ನು ಅನುಭವಿಸ ತೊಡಗಿದಳು. ಪ್ರೀತಂನ ಮನೆಯವರು ಶ್ರೀಮಂತರಾದ ಕಾರಣ, ಅವಳಿಗೆ ಇದ್ದ ಸರಕಾರಿ ಕೆಲಸಕ್ಕೂ ರಾಜೀನಾಮೆ ನೀಡಿಸಿದರು. ಮುಂದೆ ಸುಮನಳಿಗೆ ಬದುಕು ಬಹಳ ಕಷ್ಟವಾಗತೊಡಗಿತ್ತು. ಅವಳ ಸುಖ ಕಷ್ಟ ಕೇಳುವವರೇ ಇಲ್ಲವಾದರು.
ಇತ್ತ ಹೆತ್ತವರ ಮುಂದೆಯೂ ತನ್ನ ಅಳಲನ್ನು ತೋಡಿಕೊಳ್ಳುವಂತಿಲ್ಲ. ಕೊನೆಗೆ ತಾನು ಮಾಡಿದ ತಪ್ಪಿನ ಅರಿವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಳು.ದ್ವಂದ್ವ ಮನಸ್ಸಿನಿಂದ ತಾನು ಕೈಗೊಂಡ ನಿರ್ಧಾರ ತನ್ನ ಜೀವಕ್ಕೆ ಮುಳುವಾಯಿತು. ಹೀಗೆ ಮನುಷ್ಯನ ಪ್ರತಿಯೊಂದು ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂತಹ ಮನಸ್ಸಿನಲ್ಲಿ ದ್ವಂದ್ವತೆ ಇದ್ದರೆ ಯಾವುದೇ ಕೆಲಸವು ಸುಸೂತ್ರವಾಗಿ ನಡೆಯಲಾರದು.
ಮನಸ್ಸಿನ ದ್ವಂದ್ವತೆಯನ್ನು ಹೋಗಲಾಡಿಸಲು ದೃಢನಂಬಿಕೆ,ಆತ್ಮವಿಶ್ವಾಸ, ಜೊತೆಗೆ ಮಾಡಿಯೇ ಮಾಡುತ್ತೇನೆ ಎನ್ನುವಂತಹ ಛಲ ಇದ್ದರೆ ದ್ವಂದ್ವ ಮನಸ್ಥಿತಿಯನ್ನು ಹತೋಟಿಗೆ ತರಬಹುದು, ಸರಿಪಡಿಸಬಹುದು.ದ್ವಂದ್ವತೆ ಉಂಟಾದಾಗ ಕುಗ್ಗದೆ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ವಿಷಯದ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಂಡು,ಸಕಾರಾತ್ಮಕ ಚಿಂತನೆಯಿಂದ ಮುಂದುವರೆದರೆ ಒಳ್ಳೆಯ ಪರಿಣಾಮಗಳನ್ನು ಅನುಭವಿಸಲು ಸಾಧ್ಯವಿದೆ.ಅದೇ ಮನಸ್ಸಿನ ದುರ್ಬಲತೆಯಿಂದ ತಪ್ಪು ನಿರ್ಧಾರಗಳನ್ನು ಕೈಗೊಂಡಲ್ಲಿ ನಕರಾತ್ಮಕ ಪರಿಣಾಮಗಳನ್ನು ಅನುಭವಿಸುವಾಗ,ಮನಸ್ಸು ಕುಗ್ಗಿ, ಧೈರ್ಯ ಉಡುಗಿ ಭರವಸೆಯನ್ನು ಕಳೆದುಕೊಂಡು, ಬದುಕಿನಲ್ಲಿ ಚಿಂತೆಯನ್ನು ಅನುಭವಿಸುವ ಪ್ರಸಂಗ ಎದುರಾದೀತು.
ಮನಸಿನ ದ್ವಂದ್ವತೆ ಎನ್ನುವುದು ಎರಡು ದೋಣಿಗಳಲ್ಲಿ ಕಾಲಿಟ್ಟ ಹಾಗೆ. ಬದುಕಿನ ಸುಖ ಪ್ರಯಾಣವನ್ನು ಮಾಡಬೇಕಾದರೆ ಯಾವುದಾದರೂ ಒಂದೇ ದೋಣಿಯಲ್ಲಿ ಕಾಲಿಡಬೇಕಾಗುತ್ತದೆ ಹಾಗೆ ಪ್ರಯಾಣವನ್ನು ಬೆಳೆಸಬೇಕಾಗುತ್ತದೆ.ಆ ದೋಣಿ ನಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ದೋಣಿಯಾಗಿರಬೇಕಾಗುತ್ತದೆ. ದ್ವಂದ್ವ ಮನಸ್ಥಿತಿ ಎನ್ನುವಂತದ್ದು “ಅಡ್ಡ ಗೋಡೆಯಲ್ಲಿ ದೀಪ ಇಟ್ಟ ಹಾಗೆ” ಅದು ಆ ಕಡೆಯನ್ನು ಪೂರ್ತಿ ಬೆಳಗಿಸದು.ಈ ಕಡೆಯನ್ನೂ ಬೆಳಗಿಸದು.ಒಟ್ಟಿನಲ್ಲಿ ನಿಷ್ಫಲವಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ ಕೈಗೊಂಡ ನಿರ್ಧಾರ ಬದುಕಿನಲ್ಲಿ ಸತ್ಪರಿಣಾಮವನ್ನು ಉಂಟುಮಾಡದು.ಹಾಗಾಗಿ ಮನುಜನಿಗೆ ದ್ವಂದ್ವ ಮನಸ್ಥಿತಿಯನ್ನು ನಿಗ್ರಹ ಮಾಡುವಂತಹ ತಾಳ್ಮೆ,ಸಹನಾ ಶಕ್ತಿ ಇರಬೇಕು.
ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನ ಪ್ರತಿಯೊಂದು ಚಟುವಟಿಕೆಯು ಆತನ ಮನಸ್ಸನ್ನು ಅವಲಂಬಿಸಿರುತ್ತದೆ. ನಮ್ಮ ಮನಸ್ಸು ಶಾಂತವಾಗಿ ಪ್ರಫುಲ್ಲವಾಗಿದ್ದಷ್ಟು ಒಳ್ಳೆಯ ನಿರ್ಧಾರಗಳು ಹುಟ್ಟುತ್ತವೆ. ಕೈಗೊಂಡ ನಿರ್ಧಾರದಿಂದ ಮಾಡುವಂತಹ ಕೆಲಸ ಸತ್ ಪರಿಣಾಮವನ್ನು ನೀಡುತ್ತದೆ.
ಮನುಷ್ಯ ಆದಷ್ಟು ದ್ವಂದ್ವ ಮನಸ್ಥಿತಿಯ ಗೊಂದಲದಿಂದ ಹೊರಬಂದು,ಶಾಂತ ರೀತಿಯಿಂದ ಆಲೋಚಿಸಿ, ದೃಢ ನಿರ್ಧಾರವನ್ನು ಕೈಗೊಳ್ಳುವ ಸಹನೆಯನ್ನು, ತಾಳ್ಮೆಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಸುಗಮವಾಗುತ್ತದೆ.
ಡಾ.ಸುಮತಿ ಪಿ
