ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕನಸಾದ ಕಾಶ್ಮೀರ

    ಕಾಶ್ಮೀರ ಈಗ ಬರಿ ಕನಸಷ್ಟೆ
    ಪ್ರೇಮ ಕಣಿವೆಯ ನಡುವೆ
    ಕಂದರದ ಆಳ ಪಾತಾಳಕ್ಕಿಳಿದಿದೆ
    ಎರಡು ದಡಗಳು ದೂರ ದೂರ
    ಗಡಿಗಳಾಚೆ ಈಚೆ ಮುಸುಗುಡುವ ಅಬ್ಬರ
    ಕನಸುಗಳು ನನಸಾಗಿ
    ಪ್ರೇಮಿಗಳದೆಯಲ್ಲಿ ಪ್ರೀತಿಯ ಒರತೆ
    ಪ್ರೇಮಲೋಕದ ತುಂಬೆಲ್ಲ ಒಲವ ಸಿಂಚನ
    ಕ್ಷಣದಲ್ಲೇ…….
    ಬರಸಿಡಿಲೊಂದು ಎದೆ ಸೀಳಿ
    ಕನಸುಗಳೊಡೆದು
    ಸ್ವರ್ಗದಲ್ಲಿ ವಿಹರಿಸುವ ಮನಸುಗಳ
    ಶವಯಾತ್ರೆಯ ಮೆರವಣಿಗೆ……

 ಎಷ್ಟೋ ದಿನಗಳ ಕನಸು
   ಮಕ್ಕಳೊಂದಿಗೆ ಮಂಜಿನಾಟ
   ಹಿಮ ಗುಡ್ಡದ ತುದಿಯಲ್ಲಿ
   ಇದ್ದಕ್ಕಿದ್ದಂತೆ ತುಪಾಕಿಗಳ ಸದ್ದು
   ಗುಂಡಿನ ಸುರಿಮಳೆ
   ವಿಷವುಂಡ ಕ್ರಿಮಿಗಳು
   ಚಟಪಟನೆ ಸತ್ತು ಬಿದ್ದಂತೆ
   ಹುಳಕ್ಕಿಂತ ಕಡೆಯಾಯಿತು ಜೀವ
   ಎಲ್ಲವೂ ಕಣ್ಣ ರೆಪ್ಪೆಯ ಸನ್ನೆಯಂತೆ

  ಭಯ ದುಗುಡ ಆತಂಕ
   ನಿಟ್ಟುಸಿರು ಎಲ್ಲವೂ ಅಡಗಿ ಹೋದವು      
   ಕಣಿವೆಯ ಆಳದಲ್ಲಿ
   ತಣ್ಣಗಿದ್ದ ಭೂತಾಯಿಯ ಸೆರಗೆಳೆದು
   ರಕ್ತದೋಕುಳಿಯಾಟ
   ಕೆಣಕಿದರು ಕುಟುಕಿದರು
   ಎಲ್ಲೋ ಹುಟ್ಟಿದವರು
   ಇಲ್ಲಿಯವರೆಂಬಂತೆ
   ಮುಖವಾಡದ ಮರೆಯಲ್ಲಿ
   ವೇಷ ಮರೆಸಿಕೊಂಡ ಖೂಳರು

  ಮತ್ತೆ ಮುಗಿಲಲ್ಲಿ ಸೂತಕದ ಛಾಯೆ
    ಬದುಕುಳಿದವರ ಉಸಿರು ನಿಂತಂತೆ
    ನಿಟ್ಟುಸಿರು ಗಂಟಲಲ್ಲೇ ಉಳಿದು
    ದನಿ ಕಳೆದುಕೊಂಡರು
    ಬರ್ಫಿನ ಗಡ್ಡೆಯಲ್ಲಿ
    ಹೂತು ಹೋದವು ಮಾತುಗಳು
    ಮತ್ತೆ……
    ಸೂರ್ಯನೊಟ್ಟಿಗೆ ಹುಟ್ಟಿದ
    ಭಯ ಭುಗಿಲುಗಳು ಮುಖಕ್ಕೆರಚಿ
    ರಪ್ಪನೆ  ಹೊಡೆದಂತೆ
    ಮಗು ಅತ್ತಂತೆ ಮಂಜಿನೊಂದಿಗೆ
    ಕರಗಿ ಹೋದವು ಕಂಬನಿ
    ಹನಿ ಹನಿಯಾಗಿ
    ತಮ್ಮ ನೋವಿನ ಕಥೆಯನ್ನು ಹೇಳುತ್ತ……
    ಸೂರ್ಯನೊಟ್ಟಿಗೆ ಹುಟ್ಟಿ
    ಅವನೊಟ್ಟಿಗೆ ಸಾವು
    ಮುಗಿಯಲೇ ಇಲ್ಲ ನೋವುಂಡವರ ಕಥೆ


Leave a Reply

Back To Top